ದಶಮಾನೋತ್ಸವವನ್ನು ಆಚರಿಸಿದ ಯು ಕೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವಿಚಾರ ವೇದಿಕೆ (KSSVV)

ಅದೊಂದು ಮಹತ್ವದ ಮೈಲಿಗಲ್ಲು. ಆ ನವೆಂಬರ್ ೨೪, ೨೦೨೪ರ ವಾರಾಂತ್ಯದಲ್ಲಿ  ಹವಾಮಾನ ಬಿಗಡಾಯಿಸುವ ಚಂಡಮಾರುತ ಬರುವ ಎಚ್ಚರಿಕೆಯಿತ್ತು! ಅದಕ್ಕೆ ಬರ್ಟ ಎನ್ನುವ ಅಂದದ ನಾಮಧೇಯವನ್ನೂ ಕೊಟ್ಟಿದ್ದರು. ಶೆಫಿಲ್ಡ್ ದಿಂದ, ದೂರದ ‘ಟಿ ಸೈಡ್ ‘ದಿಂದ, ಲಂಡನ್ ಮತ್ತು ಲಿಂಕನ್ ನಗರಗಳ ಆಸುಪಾಸಿನಿಂದ ಹೊರಟ ಜಿಗುಟಿನ ಸಾಹಿತ್ಯಾಸಕ್ತರು ಮಳೆ ಬಿರುಗಾಳಿಯನ್ನು ಲೆಕ್ಕಿಸದೆ, ಮೋಟರ್ವೆದಲ್ಲಿ ಉರುಳಿ ಬಿದ್ದು ಎರಡೆರಡು ರಸ್ತೆಗಳನ್ನು ಬಂದು ಮಾಡಿದ್ದರೂ ಧೃತಿಗೆಡದೆ ತಡಮಾಡದೆ ಯುಕೆದ ಮಧ್ಯವರ್ತಿ ನಗರವಾದ ಲೆಸ್ಟರಿಗೆ ಬಂದದ್ದೂ ಒಂದು ಸಾಹಸದ ಕಥೆಯೇ ಆಗಿತ್ತು. ಆಗಲೇ ಅಲ್ಲಿ ನೆರೆದಿದ್ದ ಮತ್ತಿತರ ಕನ್ನಡಿಗರಲ್ಲಿ ಎಲ್ಲಿಲ್ಲದ ಉತ್ಸಾಹ!  ಅವರೆಲ್ಲ ಕೂಡಿ ಹತ್ತು ವರ್ಷ ಸತತವಾಗಿ ವಾರಂಪ್ರತಿ ಕನ್ನಡದಲ್ಲಿ ಒಂದು ಬ್ಲಾಗ್ ಅಂಕಣ ಪ್ರಕಟಿಸುತ್ತ ಬಂದಿದ್ದಾರೆ. ಈಗ ಅಂಕಣಗಳ ಸಂಖ್ಯೆ ೬೦೦ ನ್ನೂ ಮೀರಿದೆ! ಯುಕೆ ಕನ್ನಡ ಬಳಗದ ಯುಗಾದಿಯು ಮತ್ತು ದೀಪಾವಳಿ ಸಮಾರಂಭಗಳಲ್ಲಿ ಸಿಕ್ಕ ಸ್ವಲ್ಪೇ ಸಮಯದಲ್ಲೂ ಗಂಭೀರ ಸಾಹಿತ್ತ್ಯದ ಚರ್ಚೆ, ಕವಿ ಗೋಷ್ಠಿ, ನಾಟಕ ಇತ್ಯಾದಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದವರು. ಆ ದಿನ ಹಿರಿಯ ಕಿರಿಯ ಸದಸ್ಯರು ನಂತರ ಬಂದವರನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.

ಆ ದಿನ ಅವರು ರಾಜಶ್ರೀ ಮತ್ತು ವೀರೇಶ್ ಅವರ ಮನೆಯಲ್ಲಿ ಸೇರಿ ಬೆಳಿಗ್ಗೆ ೧೧ರಿಂದ ಸಂಜೆ ನಾಲ್ಕು ಗಂಟೆಯವರೆಗಿನ  ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದರು. ಸ್ವಾಗತ ಮತ್ತು  ಉಭಯ ಕುಶಲೋಪರಿ ಆಗುತ್ತಿದ್ದಂತೆಯೇ ಅಪರೂಪದ ಬಿಸಿ ಬಿಸಿ ಮದ್ದೂರು ವಡೆ, ರುಚಿಯಾದ ಚಟ್ನಿ ಮತ್ತು ಕಾಫಿ ಅವರಿಗಾಗಿ ಕಾಯುತ್ತಿದ್ದವು.  ಹಲವಾರು ಹಿರಿಯರು ಯುಕೆಗೆ ಬಂದು ನಾಲ್ಕು ಅಥವಾ ಐದು ದಶಕಗಳೇ ಸಂದಿದ್ದವು. ಕೆಲವರು ಇನ್ನೂ ಎರಡು ದಶಕ ಕಳೆಯದ ಹಸುಳೆಗಳು. ಎಲ್ಲರೂ ಒಂದಿಲ್ಲೊಂದು ರೀತಿಯ ಬರಹಗಾರರು. ಕೆಲವರು ಐದೈದು ಪುಸ್ತಕಗಳನ್ನು ಪ್ರಕಟಿಸಿದ ಸರಸ್ವತಿ ಪುತ್ರರು. ಒಂದಿಬ್ಬರು ಹತ್ತಾರು ಪುಟಗಳ ಲೇಖಕರು, ಆದರೆ ಒಳ್ಳೆಯ ಓದುವ ಆಸ್ಥೆ ಉಳ್ಳವರು. ಎಲ್ಲರೂ ಕುವೆಂಪು ಹೇಳಿದ ‘ಎಲ್ಲಾದರೂ ಇರು, ಎಂತಾದರೂ ಇರು, ಆದರೆ ಕನ್ನಡವಾಗಿರು’ ಎನ್ನುವದನ್ನು ಇವರನ್ನುದ್ದೇಶಿಸಿಯೇ ಹಾಡಿದರೋ ಏನೋ ಅನ್ನುವಂತೆ ಜೀವಿಸುವವರು. ಹೊಟ್ಟೆ ಪಾಡಿಗೆ ವೈದ್ಯರೇ ಆಗಿರಲಿ, ಐಟಿ ಪಟುವೆ ಆಗಿರಲಿ  ಕನ್ನಡವೇ ಉಸಿರು, ಕನ್ನಡವೇ ಜೀವನ ಅನ್ನುವಂತೆ ಬದುಕುವವರು. ತಮ್ಮನ್ನು ಸಲುಹಿದ ಕನ್ನಡ ನುಡಿಯನ್ನು ಮರೆಯದಂತೆ, ಮುಂದಿನ ಪೀಳಿಗೆಗೂ ಸ್ವಲ್ಪವಾದರೂ ಪರಿಚಯಿಸುತ್ತ ಜೀವಂತವಾಗಿಡುತ್ತ  ತಮ್ಮ ಅಳಿಲು ಸೇವೆಯನ್ನು ಮಾಡುತ್ತಿರುವವರು. ಕೆಲವರು ಅನೇಕ ಸಲ ಭೇಟಿಯಾದವರು ಒಂದಿಬ್ಬರು ಎಲ್ಲರನ್ನೂ ಭೇಟಿ ಮಾಡುವದು ಇದೆ ಮೊದಲ ಸಲ. ಅಂದರೆ ಒಂದು ರೀತಿಯಿಂದ ‘ಅನಿವಾಸಿ ಈ-ಪೇಪರಿನ’ ಪ್ರಸ್ತುತಿಗಳಂತೆ ಕಲಸುಮೇಲೋಗರ!  

ಪ್ರಾರಂಭದಲ್ಲಿ ಎಲ್ಲರನ್ನೂ “ನನ್ನ ಊರಿಗೆ, ನನ್ನ ಸೂರಿಗೆ” ಸ್ವಾಗತಿಸುತ್ತಾ ರಾಜಶ್ರೀ ಪಾಟೀಲ್ ಅವರು ಕುವೆಂಪು ಅವರ ‘ಕನ್ನಡಕ್ಕಾಗಿ ಹೋರಾಡು ಕಂದ’ ಎನ್ನುವ ಜೋಗುಳದ ಹರಕೆಯನ್ನು ನೆನಪಿಸಿ ನಾವಿಲ್ಲಿ ಮಾಡುತ್ತಿರುವುದೂ ಅದನ್ನೇ ಎನ್ನುವುದನ್ನು ಒತ್ತಿ ಹೇಳಿದರು. ಈ ದಶಮಾನೋತ್ಸವ ಶತಮಾನೋತ್ಸವದತ್ತ ಧಾಪು ಕಾಲಿಂದ ನಡೆಯಲಿ ಅಂತ ಶುಭ ಹಾರೈಕೆಗಳನ್ನು ಹೇಳಿ ಮುಂದಿನ ಕಾರ್ಯಕಲಾಪಗಳಿಗೆ ಚಾಲನೆ ಕೊಟ್ಟರು.

ಬೆಳಗಿನ ಸಿಂಹಾವಲೋಕನದಲ್ಲಿ ‘ಅನಿವಾಸಿ ನಡೆದು ಬಂದ ದಾರಿ’ಯನ್ನು ಮೂವರು ಪರಿಚಯಿಸಿದರು. ಜಿ ಎಸ ಪ್ರಸಾದ್ ಅವರು ಯುಕೆ ಕನ್ನಡ ಬಳಗದೊಡನೆಯ ಸಂಬಂಧವನ್ನು ತಿಳಿಹೇಳಿ ಮುಂದಿನ ಚರ್ಚೆಗೂ ಪೀಠಿಕೆ ಕೊಟ್ಟದ್ದು ವಿಶೇಷ. (* ಹಿಂದಿನ ಮೈಲಿಗಲ್ಲಿನ ಲೇಖನಗಳಿಗೆ ಇದರ ಕೊನೆಯಲ್ಲಿ ಕೊಟ್ಟ ಕೊಂಡಿ ನೋಡಿರಿ )

ನಂತರ ಫೋಟೋ: ನೆನಪಿಗಾದರೂ ಇರಲೇಬೇಕಲ್ಲವೇ, ಅನಿವಾರ್ಯ ಆದರೂ ಆವಶ್ಯಕವೆನ್ನುವ ‘ದಶಕದ ಕೇಕ್” ತರಲಾಯಿತು. ಇದರ ವಿಶೇಷತೆಯೆಂದರೆ ಅದನ್ನು ‘ಬೇಕ್’ ಮಾಡಿದವಳು ಆತಿಥೇಯ ದಂಪತಿ ರಾಜಶ್ರೀ ಮತ್ತು ವೀರೇಶರ ಹದಿನಾಲ್ಕು ವರ್ಷದ ಮಗಳು ಖುಷಿ. ಅದರ ಮೇಲೆ ಬರೆದ  ಸುಂದರ ಕನ್ನಡ ಅಕ್ಷರಗಳು ಇಲ್ಲಿಯ ಕೇಕುಗಳಲ್ಲಿ ಅಪರೂಪ. ಇದು ‘ಹೇಳಿ ಮಾಡಿಸಿದ’ commissioned cake! ದೀಪ ಬೆಳಗಿ ಉದ್ಘಾಟನೆ ಮಾಡಿ ಕೇಕ್ ಹಂಚಿದ್ದಾಯಿತು. ಕೇಕ್ ರುಚಿಯಾಗಿದೆ ಅಂದರು ಎಲ್ಲರೂ!
ಉಪನ್ಯಾಸಗಳು

ನಂತರದ ಮುಖ್ಯ ಉಪನ್ಯಾಸವನ್ನು ಕೊಟ್ಟವರು ಯೋಗಿಂದ್ರ ಮರವಂತೆ. ಅವರು ಒಬ್ಬ ಗಣನೀಯ ಪ್ರಬಂಧಕಾರರು. ಪ್ರಬಂಧದ ಇತಿಹಾಸವನ್ನು ಫ್ರಾನ್ಸ್ ದೇಶದ ತತ್ವಜ್ಞಾನಿ ಮೈಕೆಲ್ ಮೊಂಟೇನ್ ನಿಂದ ಶುರುಮಾಡಿ ಇಂಗ್ಲೆಂಡಿನ ಜಾರ್ಜ್ ಆರ್ವೆಲ್ ನಂತರ ಕನ್ನಡದ ಪ್ರಬಂಧಬ್ರಹ್ಮ ಎ  ಎನ್ ಮೂರ್ತಿರಾಯರ ಬರವಣಿಗೆಯ ಪರಿಚಯ ಮಾಡಿಕೊಟ್ಟು ನಾನು ಏಕೆ ಮತ್ತು ಹೇಗೆ  ಬರೆಯುತ್ತೇನೆ ಅಂತ ವರ್ಣಿಸಿದರು. ಸುಪ್ರಸಿದ್ಧ ಲೇಖಕ ಎಸ್  ದಿವಾಕರ್ ಅವರ ಪ್ರಬಂಧ ಬರಹಗಳನ್ನೂ ಉಲ್ಲೇಖಿಸಿದರು.

 ನೆರೆದವರಲ್ಲಿ ಐದೈದು ಪುಸ್ತಕಗಳನ್ನು ಪ್ರಕಟಿಸಿದ ಮೂವರು ಲೇಖಕರು ತಂತಮ್ಮ ಕೃತಿಗಳನ್ನು ತಂದು ಪ್ರದರ್ಶಿಸಿದ್ದಲ್ಲದೆ, ಈಗ ವಿದೇಶದಲ್ಲಿ ವಾಸಿಸುತ್ತಿರುವ ಇಬ್ಬವು ಮಹಿಳಾ ಲೇಖಕರು ಈ ವೇದಿಕೆಯ ಭಾಗವಾಗಿರುವದರಿಂದ ಅವರ ಮೂರರಲ್ಲಿ ಎರಡು ಕೃತಿಗಳೂ ಲಭ್ಯವಿದ್ದವು ಮಧ್ಯಂತರದಲ್ಲಿ.

 ಮಧ್ಯಾಹ್ನದ ಭೋಜನ ನಂತರ ಕವಿತೆಗಳ ಬಗೆಗಿನ ಭಾಷಣ ಮತ್ತು ಸ್ಥಳೀಯ ಬರಹಗಾರರ ಎರಡು ಹೊಸ ಕವನ ಸಂಕಲನಗಳ ವಿಮರ್ಶೆ ಕೇಶವ ಅವರು ನಡೆಸಿ ಕೊಟ್ಟರು. ಸ್ವತಃ ಹೊಸತಲೆಮಾರಿನ ಕವಿಯಾಗಿ ವಿವಿಧ ಪ್ರಕಾರದ ಕವಿತೆಗಳ ಛಂದಸ್ಸು ಮತ್ತು ಅಲಂಕಾರಗಳನ್ನು ಚರ್ಚಿಸಿದರು.

ಕವಿಗೋಷ್ಠಿ
ಅದರ ನಂತರ ಚಿಕ್ಕ ಕವಿಗೋಷ್ಠಿಯಲ್ಲಿ. ನೆರೆದ ‘ಅನಿವಾಸಿ’ಯ ೮  ಕವಿಗಳು ತಮ್ಮ (ತಾವು ಬರೆದ) ವಿವಿಧ ಅಭಿರುಚಿಯ ಕವಿತೆಗಳನ್ನೋದಿದರು. ಕೆಲವು ಚುಟುಕಪಟಾಕಿಗಳಾಗಿದ್ದರೆ ಇನ್ನು ಕೆಲವು ‘ಮನ್ ಕಿ ಬಾತ್’ ಹೇಳುವ ಅನಿವಾಸಿ ದೇವಿಗರ್ಪಿಸಿದ ಹೃದಯಾಳದ ಸ್ಪಂದನಗಳ ಪದ್ಯಮಾಲೆಗಳು! ನೆರೆದವರಲ್ಲಿ ಯಾರೂ ಅರಸಿಕರಾಗಿರಲಿಲ್ಲವಾದ್ದರಿಂದ ಈ ಕವಿತ್ವ ನಿವೇದನಕ್ಕೆ  ಯಾರೂ ‘ಮಾ ಲಿಖ x3 ಸಲ’ ಅನ್ನಲಿಲ್ಲ! (ಅರಸಿಕೇಷು ಕಾವ್ಯ ನಿವೇದನಂ ಶಿರಸಿ ಮಾ ಲಿಖ, ಮಾ ಲಿಖ, ಮಾ ಲಿಖ ಎನ್ನುವ ಸಂಸ್ಕೃತ ಬೇಡಿಕೆ!)   
ಕೊನೆಗೆ ಈ ವೇದಿಕೆಯ ಭವಿಷ್ಯತ್ತಿನ ಬಗ್ಗೆ ಮುಕ್ತ ಚರ್ಚೆಯಾಗಿ ಉಪಯುಕ್ತ ನಿರ್ಣಯಗಳ ಅನುಮೋದನೆಯೊಂದಿಗೆ ದಶಮಾನೋತ್ಸಮದ ಸಂಭ್ರಮ ಅಪ್ರತಿಮ ಆತಿಥೇಯ ರಾಜಶ್ರೀ ಮತ್ತು ವೀರೇಶ, ಮತ್ತಿತರಿಗೆ ವಂದನಾರ್ಪಣೆಯೊಂದಿಗೆ ಮುಕ್ತಾಯವಾಗಿ ಎಲ್ಲರೂ ಗೂಡಿಗೆ ಮರಳಿದರು! ಈಗ ಪ್ರಕೃತಿಯ ಅಬ್ಬರ ಕಡಿಮೆಯಾಗಿತ್ತು. ಮನಸ್ಸಿನಲ್ಲೊಂದು ಉಲ್ಲಾಸವಿತ್ತು.

ಲೇಖನ: ಶ್ರೀವತ್ಸ ದೇಸಾಯಿ      ಛಾಯಾಚಿತ್ರ ಕೃಪೆ : ಅನೇಕ ಸದಸ್ಯರಿಂದ;      ರೇಖಾಚಿತ್ರ: ಲಕ್ಷ್ಮಿನಾರಾಯಣ ಗುಡೂರ

ಕವಿಗೋಷ್ಠಿಯಲ್ಲಿ ಓದಿದ ಕವನಗಳು 

1 ರಾಧಿಕಾ ಜೋಶಿ
ಅಕ್ಷರಗಳನ್ನು ವಾರಾಂತ್ಯವಾರ ಪೋಣಿಸಿ
ಎಂದೆಂದೂ ಬಾಡದ ಒಂದು ಸುಂದರ
ಮುತ್ತಿನ ಮಾಲೆಯನ್ನಾಗಿಸಿ
ಗದ್ಯ ಪದ್ಯ ಕಾಲ್ಪನಿಕ ನೈಜ
ಎಲ್ಲವಾಯಿತು ಇಲ್ಲಿ ನಿಜ
ಪರೀಕ್ಷೆ ನಿರೀಕ್ಷೆಗಳ ಲೆಕ್ಕಿಸದ ಹುಲಿ
ಅವಕಾಶಗಳ ಪ್ರೋತ್ಸಾಹದ ಜಗುಲಿ
ಹೇಳಹೊರಟ ಹೊಸ ಹಳೆಯ ಸಂಗತಿ
ಸದಾ ಮೀಟುತ್ತಿರುವ ಅನಿವಾಸಿ ಎಂಬ ೪ ತಂತಿ

ಬರೆಯುವ ಕೌತುಕತೆ ಓದುವ ಆತುರತೆ
ಹೊರತರಲು ಪ್ರತಿಯೊಬ್ಬರಲ್ಲಿವು ಉತ್ತಮತೆ

ಹತ್ತು ಅಧ್ಯಾಯಗಳನ್ನು ಪ್ರತಿಬಿಂಬಿಸುವ
ಈ ದಿನ ಮುಂಬರುವ ಹತ್ತು
ಅಧ್ಯಾಯಗಳಿಗೆ ನಾಂದಿಯಾಗಲಿ
-Radhika Joshi

2 ಲಕ್ಷ್ಮೀನಾರಾಯಣ ಗುಡೂರ್
(1)
ಭಾವಗಳ ಹೂರಣವ ಪದಗಳಲಿ ಸುತ್ತಿಟ್ಟು
ಹದನಾದ ಛಂದಗಳ ಬಿಸಿಹಂಚಲಿಟ್ಟು
ಬೇಯಿಸುತ ಹೋಳಿಗೆಯ, ಹಾಕಿ ರಾಗದ ತುಪ್ಪ
ಸಂಗೀತದೊಡೆ ಬಡಿಸೆ ಅದುವೇ ಬಲು ಒಪ್ಪ!

(2)
ಹಾಡು ನವ ರಾಗವನು ಕೇಳುವೆನು ನಿಂದು
ಬರೆಯೆ ಕವನವನೊಂದ ಓದುವೆನು ಬಂದು
ಹೇಳು ಹೊಸ ಕಥೆಯನ್ನು ಆಲಿಸುವೆನಿಂದು
ಸಾಹಿತ್ಯಸಿಹಿಯೆರೆಯೆ ಚಪ್ಪರಿಸುವೆನು ತಿಂದು
- Lakshminarayana Gudur

* * * *
3. C ನವೀನ್
ಹಿಂದಿನ ಸಾಲಿನ ಹುಡುಗರು...

ಹಿಂದಿನ ಸಾಲಿನ ಹುಡುಗರಲ್ಲಿ ನಾನೂ ಒಬ್ಬನಾಗಿದ್ದೆ;
ಮರೆಯಾಗಿ ಕುಂತು ಚೆಸ್ ಆಡಿದ್ದೆ!
ಪುಸ್ತಕದ ಹಾಳೆಗಳೆಲ್ಲ ವಿಮಾನಕ್ಕೆ ಮೀಸಲು;
ಅದೆಷ್ಟು ಮೋಜು ಎಸೆದು ಅವಿತುಕೊಳಲು!

ಥಿಯಟರ್ ನಂಥ ಕ್ಲಾಸ್ ರೂಮು;
ಭಯವಿರಲಿಲ್ಲ ನಮಗೆ ಪ್ರೊಫೆಸರ್ ಹಾಕುವ ಲಗಾಮು!
ಕಾಣುತಿರಲಿಲ್ಲ ಅವರಿಗೆ ನಾವು ಮಾಡುವ ಚೇಷ್ಟೆ;
ಅವರ ದೃಷ್ಟಿಗೆ ಮುಂದಿನ ಸಾಲಿನ ಹುಡುಗಿಯರಷ್ಟೆ!!
-C Navin

4. ಶ್ರೀವತ್ಸ ದೇಸಾಯಿ
ವ್ಯತ್ಯಾಸ

ಒಂದು ದಿನ ಕೇಳಿದಳು ನೀಲು
ನಿನ್ನ ಉತ್ತರ ಕರ್ನಾಟಕದ ಭಾಷೆ ಬಲು ಕಷ್ಟ
ಈ ಮುಸಿರಿ ಎಂಜಲು
ವ್ಯತ್ಯಾಸ ಏನು ಹೇಳು?
ಆತ ಹೇಳಿದ --
ಜಳಕ ಮಾಡು ಮೊದಲು
ತೊಳೆದು ಹೋಗುತ್ತೆ ಎಲ್ಲ
ಮೊದಲು ಇಟ್ಟು ಬಿಡು ಒಂದು ಮುತ್ತು
ಅದು ಮುಸಿರೆಯೂ ಅಲ್ಲ
ಎಂಜಲು ಅಂತೂ ಮೊದಲೇ ಅಲ್ಲ!
-Shrivatsa Desai

5) ರಾಜಶ್ರೀ ಪಾಟೀಲ್
ಮುಗಿದರೆನಂತೆ ದಶಕೋತ್ಸವ …

ಮುಂಜಾನೆ ರವಿಗಿರೋ ತಾಳ್ಮೆ
ಸಂಜೆ ರವಿಗುಂಟೆ ?
ಇರು ಎಂದರೂ ಇಳಿದೋಡುವ
ಮರೆಯಾಗದಿರೆಂದರೂ ಮತ್ತೆ ಮುಗಿಲೇರಬೇಕೆಂದು
ಮುಚ್ಚಿಟ್ಟುಕೊಳ್ಳುವ
ಮುಗಿಯದಿರೆಂದರೂ ಮುಗಿದೋಹಿತು, ಅರಿವಾಗೋ ಮುನ್ನ ಅನಿವಾಸಿ ಸಂಭ್ರಮ
ಮುಗಿದರೇನಂತೆ ದಶಕೋತ್ಸವ ಬರಲೇಬೇಕಲ್ಲವೇ ರಜತೋತ್ಸವ,
ಅದಕಾಗಿ ಕಾಯದೆ ನಡು ನಡುವೆ ಮಾಡುತ್ತಿರೋಣ ಸಿಕ್ಕಾಗಲೆಲ್ಲ ಸಭಾಮಹೋತ್ಸವ
- Rajashree Patil

6) ವೀರೇಶ್ ಪಾಟೀಲ್
ನಿನ್ನ ಕಣ್ಣಂಚಿನಿಂದ ಬಂದ ಮಿಂಚಿನ ಬಾಣ

ನಿನ್ನ ಕಣ್ಣಂಚಿನಿಂದ ಬಂದ ಮಿಂಚಿನ ಬಾಣ
ಬರಿ ನನ್ನ ಕಣ್ಣಂಚನೇನು ಹೃದಯದ ಇಂಚು ಇಂಚನ್ನು ಹೊಕ್ಕಿತು.
ಹೃದಯಕ್ಕೇ ನಾಟಿದಮೇಲೆ ಮನಸ್ಸಿನದಿನ್ನೇನು
ಅದುವೋ ಏನೂ ಹೇಳದೆ, ಏನೂ ಕೇಳದೆ
ನಿನ್ನ ಒಪ್ಪಿತು.
-Veeresh Patil

8. ಕೇಶವ ಕುಲಕರ್ಣಿಯವರು ತಾವು ಭಾವಾನುವಾದ ಮಾಡಿ, ಹಿಂದೆ ಪ್ರಕಟಿಸಿದ ಕವನ 'ನೋಡೂಣಂತ' ವನ್ನು ಓದಿದರು.
https://anivaasi.com/2024/05/17/2poems1article/
* KSSVV-Anivaasi ನಡೆದು ಬಂದ ದಾರಿ (ಎರಡು ಭಾಗಗಳು) ಓದಲು ಕೆಳಗಿನ ಎರಡು ಲಿಂಕ್ (Copy & Paste)
https://anivaasi.com/2019/10/25/
https://anivaasi.com/2019/11/01/

ಇಂಗ್ಲೆಂಡಿನಲ್ಲಿ ಯುಗಾದಿ: ವಸಂತನಾಗಮನದ ನಾಂದಿ

ಸಪ್ಟೆಂಬರ್ ತಿಂಗಳಿನಿಂದ ನಿರಂತರ ಮಳೆಯ ಆಘಾತಕ್ಕೆ ತುತ್ತಾಗಿರುವ ಇಂಗ್ಲೆಂಡಿನಲ್ಲಿ ಕಳೆದ ಕೆಲವು ದಿನಗಳಿಂದ ಸೂರ್ಯ ಮಹಾಶಯ ಮೋಡಗಳ ಚಾದರದ ಮರೆಯಿಂದ ಹಣಕಿ ಹಾಕುತ್ತ ಕವಿದಿರುವ ಛಳಿಯ ಬಲೆಯನ್ನು ಹರಿದು ಬದಿಗೊಡ್ಡಲು ಪ್ರಯತ್ನಿಸುತ್ತಿದ್ದಾನೆ. ಅವನ ಕ್ಷೀಣ ಪ್ರಯತ್ನವನ್ನು ಹುರಿದುಂಬಿಸಲು ಒಣಗಿ ನಿಂತ ಗಿಡ ಮರಗಳು ಟಿಸಿಲೊಡೆಯುತ್ತ, ಮೈತುಂಬ ಬಣ್ಣ ಬಣ್ಣದ ಹೂಗಳನ್ನು ಹೊತ್ತು ಚಿಯರ್ ಚಿಣ್ಣರಂತೆ ಉತ್ಸಾಹದಿಂದ ತಲೆದೂಗುವುದ ಕಂಡಾಗ ವಸಂತ ಬಂದ ಎಂಬ ಉತ್ಸಾಹ ನಮ್ಮಲ್ಲೂ. ವಾತಾವರಣದಲ್ಲಿ ಕಾವು ಕೂಡುತ್ತಿದ್ದಂತೇ ಗೂಡುಗಳಿಂದ ಹೊರಬಿದ್ದು ಹೊಂಬಿಸಿಲ ಹೊಲದಲ್ಲಿ ಹೊರಳಾಡುವ ಹಂಬಲ ಹೊಮ್ಮುವುದು ಸಹಜ. ಇಂತಹ ಹಂಬಲಕ್ಕೆ ಇಂಬಾಗುವುದು ಯುಗಾದಿ. ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ಬಳಗ ಯು.ಕೆ ಯುಗಾದಿ ಹಬ್ಬದ ಸಂಭ್ರಮದ ಕಾರ್ಯಕ್ರಮವನ್ನು ಏಪ್ರಿಲ್ ೧೩ರಂದು ಲೆಸ್ಟರ್ ನಗರದಲ್ಲಿ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀ ಭೂತರಲ್ಲಿ ಒಬ್ಬರಾದ, ಅನಿವಾಸಿ ಬಳಗದ ಸದಸ್ಯರೂ ಆದ ಡಾ. ರಾಜಶ್ರೀ ಪಾಟೀಲರು ತಮ್ಮ ಅನಿಸಿಕೆಗಳನ್ನು ಚಿತ್ರ ಸಮೇತ ಇಲ್ಲಿ ಉಣಬಡಿಸಿದ್ದಾರೆ. ಕಾರಣಾಂತರಗಳಿಂದ ಅಂದು ಬರಲಾಗದವರಿಗೆ, ವಿದೇಶಗಳಲ್ಲಿರುವ ನಮ್ಮ ಓದುಗರಿಗೆ ಈ ವರದಿ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿದ ಅನುಭವ ಕೊಡುವುದರಲ್ಲಿ ಸಂದೇಹವಿಲ್ಲ. ಪ್ರತೀ ಕನ್ನಡ ಬಳಗದ ದೀಪಾವಳಿ-ಯುಗಾದಿ ಕಾರ್ಯಕ್ರಮದಲ್ಲಿ ನಮ್ಮ ಅನಿವಾಸಿ ಬಳಗ ಸಮಾನಾಂತರವಾಗಿ ಸಾಹಿತ್ಯಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಬಾರಿ ರಂಗಕರ್ಮಿ ಶ್ರೀ. ಶ್ರೀನಿವಾಸ ಪ್ರಭು ಅವರೊಂದಿಗೆ ನಡೆಸಿದ ಸಂವಾದದ ಅನುಭವವನ್ನು ಉತ್ತರ ಐರ್ಲ್ಯಾನ್ಡ್ ನಿಂದ ಮೊದಲ ಬಾರಿಗೆ ಭಾಗವಹಿಸಿದ ಶ್ರೀಮತಿ ಅಮಿತ ರವಿಕಿರಣ್ ಮುಂದಿನ ವಾರ ವಿಶದವಾಗಿ ಹಂಚಿಕೊಳ್ಳಲಿದ್ದಾರೆ. (ಸಂ)

‘ಬೇವಿನಕಹಿ ಬಾಳಿನಲಿ, ಹೂವಿನ ನಸುಗಂಪ ಸೂಸಿ ಜೀವಕಳೆಯ ತರುತಿದೆ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.’
ನಮ್ಮೆಲ್ಲರ ಜೀವನ ಜಂಜಾಟಗಳ ನಡುವೆ ಸಂಭ್ರಮದ ಕಳೆ ತರಲು ಯುಗಾದಿ ಸಂಭ್ರಮ ಮತ್ತೆ ಬಂದಿತ್ತು ೧೩/೦೪/೨೪ ಲೆಸ್ಟರ್ ಗೆ. ಲೆಸ್ಟರ್ ಕನ್ನಡಿಗರು ೨೦೧೬ ನಿಂದ ಸಾಂಪ್ರದಾಯಿಕವಾಗಿ ಯುಗಾದಿಯನ್ನ ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ  ಆದರೆ ಈ ಬಾರಿ ಕನ್ನಡ ಬಳಗದ ಸಹಯೋಗ ಅದರ ಮೆರಗನ್ನ ಇನ್ನೂ ಹೆಚ್ಚಿಸಿತ್ತು. ದೇಶದ ಹಲವಾರು ಮೂಲೆಗಳಿಂದ  ೬೦೦ಕ್ಕೂ ಹೆಚ್ಚು ಜನರು ಯುಗಾದಿ ಸಂಭ್ರಮವನ್ನು  ಆಚರಿಸಲು ನೆರೆದಿದ್ದರು. ಅದೇ ದಿನದಂದು ಹಲವಾರು ಕಡೆ ಯುಗಾದಿ ಸಂಭ್ರಮಾಚರಣೆ ಇದ್ದರೂ ಲೆಸ್ಟರನಲ್ಲಿ ಇಷ್ಟೊಂದು ಜನ ಸೇರಿದ್ದು ಇನ್ನೂ ವಿಶೇಷವಾಗಿತ್ತು.

ಕಾರ್ಯಕ್ರಮಕ್ಕೆ ವಿಧಿವತ್ತಾಗಿ  ವಿಘ್ನ ನಿವಾರಕ ವಿಘ್ನೇಶ್ವರನ ಪೂಜೆಯೊಂದಿಗೆ ಮತ್ತು ಸ್ತುತಿಹಾಡಿನೊಂದಿಗೆ ಓಂಕಾರ ದೊರಕಿತು. ಲೆಸ್ಟರ್ ಕನ್ನಡಿಗರು ಮತ್ತು ಕನ್ನಡ ಬಳಗ ಯುಕೆ ತಂಡಗಳು ಭಾರತದಿಂದ ಆಗಮಿಸಿದ ಜನಪ್ರಿಯ ಗಣ್ಯ ಅತಿಥಿಗಳಾದ ಶ್ರೀಯುತ ಸಿಹಿ ಕಹಿ ಚಂದ್ರು, ಶ್ರೀನಿವಾಸ ಪ್ರಭು, ವಿಶ್ವೇಶ್ ಭಟ್ ಅವರನ್ನ ಮತ್ತೂ ದೇಶದ ಮೂಲೆ ಮೂಲೆಯಿಂದ ಬಂದ ಕನ್ನಡಿಗರನ್ನ ಹೃದಯ ಪೂರ್ವಕವಾಗಿ ಬೇವು ಬೆಲ್ಲವನ್ನ ಹಂಚುವದರೊಂದಿಗೆ ಸ್ವಾಗತಿಸಿದರು. ಗಣ್ಯರು ದೀಪ ಬೆಳಗಿಸುವದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶುಭಕೋರಿದರು.

ಸಾಂಪ್ರದಾಯಿಕ ಭರತನಾಟ್ಯ ನೃತ್ಯಗಳಿಂದ ಕಲಾಪ್ರದರ್ಶನ ಪ್ರಾರಂಭವಾಯಿತು. ಬಿಡುವಿಲ್ಲದೆ ಸತತ ೫ ಘಂಟೆಗಳ ಕಾಲ ಕಲಾಪ್ರದರ್ಶನ ಯುಕೆಯ ವಿವಿಧ ಪ್ರದೇಶಗಳಿಂದ ಬಂದ ಕಲಾವಿದರಿಂದ ನಡೆಯಿತು .  ಚಿಕ್ಕ ಪುಟಾಣಿಗಳು ‘ಸಿಂಡರೆಲ್ಲ’ ನೃತ್ಯರೂಪಕ , ಧಾರ್ಮಿಕ ಭಾವನೆಯನ್ನು ಪುಟಿಸಿದ, ನಾಟಕೀಯ ಕನ್ನಡ ಭಾಷೆಯಲ್ಲಿ ಮೂಡಿ ಬಂದ ‘ಸೀತಾ ಅಗ್ನಿಪ್ರವೇಶ’ ದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕರ್ನಾಟಕದ ಶ್ರೀಮಂತ ನೃತ್ಯ ವೈವಿದ್ಯತೆಯನ್ನ ಪ್ರದರ್ಶಿಸುವ ಕೋಲಾಟ , ಕಂಸಾಳೆ, ಡೊಳ್ಳು ಕುಣಿತ, ಕೊಡವ ನೃತ್ಯ ಮತ್ತು ಹುಲಿಕುಣಿತವನ್ನೊಳಗೊಂಡ ‘ಕರ್ನಾಟಕ ನೃತ್ಯದರ್ಶನ’, ಭಾರತದ ವಿವಿಧ ರಾಜ್ಯಗಳ ಮದುವೆ ಶೃಂಗಾರವನ್ನ ಬಿಂಬಿಸುವ ‘ಲಗ್ನ ಶೃಂಗಾರ’, ‘ಹಚ್ಚೇವು ಕನ್ನಡದ ದೀಪ’ ನೃತ್ಯ ರೂಪಕ, ಜನಪ್ರಿಯ ಗೀತೆಗಳನ್ನಾಧರಿಸಿದ ನೃತ್ಯಗಳು, ಹಾಡು, ವೀಣೆ ಹಾಗು ಗಿಟಾರ್ ವಾದನ ಕಾರ್ಯಕ್ರಮಗಳು ನೆರೆದವರ ಮನಸೆಳೆದವು.

ಈ ಎಲ್ಲ ಕಾರ್ಯಕ್ರಗಳು ಒಂದು ಕಡೆಯಾದರೆ, ಇನ್ನೊಂದೆಡೆ ಬಹು ಪ್ರಸಿದ್ದಿ ಪಡೆದಿರುವ ಲೆಸ್ಟರ್ ಬಾಳೆ ಎಲೆ ಭೋಜನ ಯುಗಾದಿ ಸಂಭ್ರಮಕ್ಕೆ ಸಾಂಪ್ರದಾಯಿಕ ಹೊಳಪನ್ನು ಕೊಟ್ಟಿತ್ತು. ಹೋಳಿಗೆ, ಪಾಯಸ, ಭಜಿ, ಪಲ್ಯಗಳು, ಪೂರಿ, ಚಿತ್ರಾನ್ನ, ಅನ್ನ, ಸಾರು, ಸಾಂಬಾರ್, ಉಪ್ಪಿನಕಾಯಿ, ಕೋಸಂಬ್ರಿ ಹೀಗೆ ಭಕ್ಷ್ಯಗಳ ಪಟ್ಟಿ ಎಷ್ಟು ದೊಡ್ಡದಿತ್ತೋ, ಊಟಮಾಡಿದವರಿಂದ ಊಟದ ಬಗೆಗಿನ ಹೊಗಳಿಕೆ ಪಟ್ಟಿನೂ ಅಷ್ಟೇ ದೊಡ್ಡದಾಗಿತ್ತು! ಲೆಸ್ಟರ್ ಆಯೋಜಕರೇ ಟೊಂಕಕಟ್ಟಿ ಈ ಭೂರಿ ಭೋಜನದ ಅಡುಗೆಯನ್ನು ಮಾಡಿ, ಬಡಿಸಿದ್ದು ಇನ್ನೂ ವಿಶೇಷವಾಗಿತ್ತು! ಊಟದ ವ್ಯವಸ್ಥೆ ಯಶಸ್ವಿಯಾಗಲು ಲೆಸ್ಟರ್ ಕನ್ನಡ ಕುಟುಂಬದೊಟ್ಟಿಗೆ ಹಲವಾರು ಸ್ವಯಂಸೇವಕರು ಕೆಲಸಮಾಡಿದ್ದರು. ಕರ್ನಾಟಕದಿಂದ ಬಂದ ಲೆಸ್ಟರ್ ಮತ್ತು ಡಿ ಮೊಂಟೊಫೋರ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳು , ಶಿವಾಲಯ ಲೆಸ್ಟರ್ ಗುಂಪು ಮತ್ತು ಹೆಚ್ ಎಸ್ ಎಸ್ ಸ್ವಯಂಸೇವಕರು ನಗುಮುಖದಿಂದ ತಮ್ಮ ನಿಸ್ವಾರ್ಥ ಸಹಾಯ ಒದಗಿಸಿದರು.

ಸಭಾಂಗಣದ ಪಕ್ಕದಲ್ಲಿ ಆಯೋಜಿಸಿದ ಕೆಲ ಜಾಹಿರಾತುದಾರರ ಅಂಗಡಿಗಗಳು ಜನರ ಆಕರ್ಷಣೆಗೆ ಒಳಗಾದವು . ಇವುಗಳ ಜೊತೆ ಮ್ಯಾಕ್ ಮಿಲನ್ ಚಾರಿಟಿಗೋಸ್ಕರ ೧೩ ವರ್ಷದ ಹುಡುಗಿ ಖುಷಿ ಪಾಟೀಲ್ ತನ್ನ ಕೈಯಾರೆ ಬೇಕ್ ಮಾಡಿದ ವಿವಿಧ ರೀತಿಯ ಕೇಕುಗಳು ಮತ್ತು ಬಿಸ್ಕತ್ಗಳನ್ನೊಳಗೊಂಡ ಅಂಗಡಿ ಚಿಕ್ಕ ಮಕ್ಕಳು ತಮ್ಮ ತಂದೆ ತಾಯಂದಿರನ್ನ ಅಲ್ಲಿಗೆ ಕರೆದೊಯ್ಯುವಂತೆ ಮಾಡಿತ್ತು. ನೆರೆದವರ ಧಾರಾಳ ಕಾಣಿಕೆ ಜಾಹಿರಾತಿನ ನೆರವಿಲ್ಲದೆ ಅವಳ ನೀರಿಕ್ಷೆಗೂ ಮೀರಿ ಹಣಕೂಡಿಸುವಲ್ಲಿ ಯಶಸ್ವಿಯಾಯಿತು. ಅನನ್ಯ ಪ್ರಸಾದ್ (ಡಾ ಜಿ ಎಸ್ ಶಿವಪ್ರಸಾದರವರ ಮಗಳು) ಈ ವರ್ಷಾಂತ್ಯದಲ್ಲಿ ತಾವು ಒಂಟಿಯಾಗಿ ದತ್ತಿ ಕಾರ್ಯಕ್ಕಾಗಿ ಅಟ್ಲಾಂಟಿಕ್ ಸಾಗರವನ್ನು ಹುಟ್ಟು ದೋಣಿಯಲ್ಲಿ ದಾಟುವ ಸಾಹಸದ ಮಾಹಿತಿಯನ್ನು ಹಂಚಿಕೊಂಡರು. ಸಂಗ್ರಹಿಸಲಿರುವ ಹಣವನ್ನು ಯು.ಕೆ ಯ ಮಾನಸಿಕ ಆರೋಗ್ಯ ದತ್ತಿ ಮತ್ತು ಭಾರತದ ದೀನಬಂಧು ಟ್ರಸ್ಟ್ ಗಳೊಂದಿಗೆ ಹಂಚುವ ಆಕಾಂಕ್ಷೆ ಅವರದ್ದು. ಅವರ ಈ ಪ್ರಯತ್ನ ಯಶಸ್ವಿಯಾದರೆ, ಅಟ್ಲಾಂಟಿಕ್ ಸಾಗರವನ್ನು ಒಬ್ಬಂಟಿಯಾಗಿ ಹುಟ್ಟು ದೋಣಿಯಲ್ಲಿ ಕ್ರಮಿಸಿದ ಪ್ರಥಮ ಬಣ್ಣದ ಮಹಿಳೆಯಾಗಲಿದ್ದಾರೆ ಎಂಬುದು ಕನ್ನಡಿಗರಿಗೆ/ಭಾರತೀಯರಿಗೆ ಹೆಮ್ಮೆಯ ವಿಷಯ. ಅವರ ಈ ಪ್ರಯತ್ನ ಯಶಸ್ವಿಯಾಗಲೆಂದು ಎಲ್ಲರೂ ಹಾರೈಸಿದರು.  ಇದರೊಟ್ಟಿಗೆ ಕನ್ನಡ ಬಳಗ ಯುಕೆ ತಂಡದ ವಾರ್ಷಿಕ ಸಾಮಾನ್ಯ ಸಭೆ (ಎಜಿಮ್) ಮತ್ತು ಅನಿವಾಸಿ ಬಳಗದ ಕಾರ್ಯಕ್ರಮ (ಇದರ ವಿಶೇಷ ವಿವರ ಮುಂದಿನ ವಾರ) ಸಮಾನಾಂತರವಾಗಿ ನಡೆದವು.

ಮತ್ತೆ ಸಾಯಂಕಾಲ ಸಭಿಕರೆಲ್ಲ ಕಾತುರದಿಂದ ಕಾಯುತ್ತಿದ್ದ ಗಣ್ಯರ ಕಾರ್ಯಕ್ರಮಗಳು ಶುರುವಾದವು. ಶ್ರೀಯುತ ಶ್ರೀನಿವಾಸ ಪ್ರಭು ತಮ್ಮ ವೃತ್ತಿ ಬದುಕಿನ ಅನುಭವಗಳನ್ನ ಹಂಚಿಕೊಂಡು ಜನರನ್ನ ರಂಜಿಸಿದರು. ಸಭಿಕರ ಕೋರಿಕೆಗೆ ಮಣಿದು, ರಣಧೀರ ಚಿತ್ರದಲ್ಲಿ ಅವರು ನಟ ರವಿಚಂದ್ರನ್ ಅವರಿಗೆ ಧ್ವನಿ ದಾನ ಮಾಡಿದ ಸಂಭಾಷಣೆಗಳನ್ನು ಸಾದರ ಪಡಿಸಿದರು. ಆದರೆ ಅವರು ತಮ್ಮ ಕಂಚಿನ ಕಂಠದಲ್ಲಿ ಪಠಿಸಿದ ಹ್ಯಾಮ್ಲೆಟ್ ನಾಟಕದ ನಾಯಕನ ಕೊನೆಯ ಸಂಭಾಷಣೆ ಅವರ ಭಾಷಣದ ಪ್ರಮುಖ ಆಕರ್ಷಣೆಯಾಗಿತ್ತು. ಶ್ರೀಯುತ  ಸಿಹಿಕಹಿ ಚಂದ್ರು ಅವರಂತೂ ತಮ್ಮ ಮಾತಿನ ಚಾಕಚಕ್ಯತೆಯಿಂದ ಸಭಿಕರನ್ನ ನಗೆಗಡಲಲ್ಲಿ ಮುಳುಗಿಸಿದರು. ಅವರು ಕಲಾಸಾಮ್ರಾಟ್ ರಾಜಕುಮಾರ ಅವರೊಂದಿಗೆ ಕಳೆದ ಕ್ಷಣಗಳು ಎಲ್ಲರ ಮನದಲ್ಲಿ ಮರೆಯದೆ  ಉಳಿಯುವಂತವು. ಅವರು ನಡೆಸಿ ಕೊಡುವ  ಅಡುಗೆ ಕಾರ್ಯಕ್ರಮಗಳು ಕರ್ನಾಟಕದ ಮನೆಮನೆಗಳಲ್ಲಿ ಮಾತಾಗಿವೆ. ಅವರ ಸಲಹೆಯಂತೆ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧಿಗಳು ಮನೆಯಲ್ಲಿ ಮಾಡಿದ ಅಡುಗೆಗಳ ರುಚಿ ನೋಡಿ ಚಂದ್ರು ಅವರು ವಿಜೇತರನ್ನ ಆಯ್ಕೆಮಾಡಿದರು ಮತ್ತು ಅವರ ಹೆಸರಾಂತ ಜನುಮದ ಜೋಡಿ ಸ್ಪರ್ಧೆಯನ್ನೂ ನಡೆಸಿಕೊಟ್ಟರು.

ಸಾಯಂಕಾಲದ ಲಘು ಉಪಾಹಾರ ಮತ್ತು ಚಹಾ ಜನರನ್ನ ಕೊನೆಯ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿತು. ಶ್ರೀಯುತ ವಿಶ್ವೇಶ್ ಭಟ್ ರವರು ಬಹುಮುಖ ಪ್ರತಿಭೆಯ ಅಭಿಯಂತರು. ಇವರು ವ್ಯಂಗಚಿತ್ರ ಮತ್ತು ಸಂಗೀತ ಲೋಕಗಳಲ್ಲಿ ತಮ್ಮ ಛಾಪನ್ನ ಮೂಡಿಸಿದ್ದಾರೆ. ಇವರ ತಮ್ಮ ವಿಭಿನ್ನ ರೀತಿಯ ಹಲವಾರು ಸಂಗೀತ ಪ್ರಕಾರಗಳನ್ನೊಳಗೊಂಡ ಪ್ರದರ್ಶನದಿಂದ  ಜನರನ್ನ ಮಂತ್ರ ಮುಗ್ಧರನ್ನಾಗಿಸಿದರು. ಇವರ ಹಾಡಿಗೆ ಜನ ಹೆಜ್ಜೆ ಹಾಕಿ ಸಂತೋಷ ವ್ಯಕ್ತ ಪಡಿಸಿದರು. ಕಾರ್ಯಕ್ರಮ ರಾತ್ರಿಯ ಭೋಜನ ಮತ್ತು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

ಒಟ್ಟಾರೆ ಇದು ಒಂದು ಪರಿಪೂರ್ಣವಾದ , ಪಕ್ವವಾದ, ಯುಗಾದಿ ಹಬ್ಬದ ಸಂಭ್ರಮವನ್ನೊಳಗೊಂಡ ಮತ್ತು  ಕರ್ನಾಟಕದ ಸಂಸ್ಕೃತಿಯ ವೈವಿಧ್ಯತೆಯನ್ನ ಎತ್ತಿಹಿಡಿಯುವ ಆಚರಣೆಯಾಗಿತ್ತು. ಹೀಗೆ ಹಲವಾರು ಕಾರ್ಯಕ್ರಮಗಳು ಮುಂಬರುವ ದಿನಗಳಲ್ಲಿ ನಡೆದು ಅನಿವಾಸಿ ಕನ್ನಡಿಗರ ಮನದಲ್ಲಿ ಸದಾ ತಾಯ್ನುಡಿ ಮತ್ತು ತಾಯ್ನೆಲದ ವಾಸನೆಯನ್ನು ತುಡಿಯುತ್ತಿರಲಿ ಎಂದು ಹಾರೈಸೋಣ.

ಡಾ. ರಾಜಶ್ರೀ ಪಾಟೀಲ್