ಬೆಂಗಳೂರಿನ ಕೆಲವು ಇಂಗ್ಲಿಷ್ ಹೆಸರಿನ ರಸ್ತೆ ಮತ್ತು ವಸತಿ ಪ್ರದೇಶಗಳ ಇತಿಹಾಸ : ರಾಮಮೂರ್ತಿ

ಈ ವಾರದ ಸಂಚಿಕೆಯಲ್ಲಿ ರಾಮಮೂರ್ತಿ ಅವರು ಬೆಂಗಳೂರು ನಗರದ ರಸ್ತೆಗಳ ಇತಿಹಾಸವನ್ನು ಕುರಿತು ಲೇಖನ ಬರೆದಿದ್ದಾರೆ. ಕೆಂಪೇಗೌಡರು ಹುಟ್ಟು ಹಾಕಿದ ನಗರವನ್ನು ನಂತರದಲ್ಲಿ ಆಳಿದ ಬ್ರಿಟಿಷರು ನಗರಕ್ಕೆ ತಮ್ಮದೇ ಆದ ಛಾಪನ್ನು ಮೂಡಿಸಿ ಇತಿಹಾಸವನ್ನು ಬದಲಿಸಿದರು. ಅದರ ಕುರುಹಾಗಿ ನಮ್ಮ ಹೆಮ್ಮೆಯ ನಗರದಲ್ಲಿ ಇರುವ ಹಲವಾರು ಪ್ರತಿಷ್ಠಿತ ರಸ್ತೆಗಳು ಬ್ರಿಟಿಷ್ ಅಧಿಕಾರಿ ಮತ್ತು ಗಣ್ಯರ ಹೆಸರನ್ನು ಹೊತ್ತಿದೆ. ಇತ್ತೀಚಿಗೆ ಆ ಹೆಸರುಗಳನ್ನು ಬದಲಿಸಲು ಕೆಲವರು ದೇಶ ಭಕ್ತರು ಒತ್ತಾಯ ಪಡಿಸುತ್ತಿದ್ದಾರೆ. ರಸ್ತೆಗಳ, ನಗರಗಳ ಹೆಸರು ಬದಲಾಯಿಸಿದ ತಕ್ಷಣ ಇತಿಹಾಸ ಸತ್ಯ ಬದಲಾಗುವುದೇ? ಯಾವ ಹೆಸರು ನೂರಾರು ವರ್ಷಗಳಿಂದ ಜನರ ನಾಲಿಗೆಯಲ್ಲಿ ಸ್ಮೃತಿಯಲ್ಲಿ ಜೀವಂತವಾಗಿದೆಯೋ, ಜನಪ್ರೀಯವಾಗಿದೆಯೋ ಅದನ್ನು ಉಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂಬುದು ಕೆಲವರ ಅನಿಸಿಕೆ. ಮುಂದಿನ ಪೀಳಿಗಿಗೆ ಇದರ ಅರಿವು ಬೇಕು. ಈ ವಿಚಾರ ಏನೇ ಇರಲಿ ರಾಮಮೂರ್ತಿ ಅವರು ಬ್ರಿಟಿಷ್ ರಾಜ್ ಆಳ್ವಿಕೆಯ ಕೆಲವು ಹಿನ್ನೆಲೆ ಮಾಹಿತಿಯನ್ನು ಇಲ್ಲಿ ಒದಗಿಸಿದ್ದಾರೆ. ಬೆಂಗಳೂರಿನ ಪರಿಚಯ ಇರುವ ಓದುಗರಿಗೆ ಇದು ಪುಳಕ ನೀಡುವ ಬರಹ 
- ಸಂ.
***************************************
ಆಂಗ್ಲರ ಆಳ್ವಿಕೆ ಕಳೆದು ಸುಮಾರು ಎಂಟು ದಶಕಗಳೇ ಸಂದರೂ ಬೆಂಗಳೂರಿನಲ್ಲಿ ಅನೇಕ ಇಂಗ್ಲಿಷ್ ಹೆಸರಿನ ರಸ್ತೆಗಳು ಮತ್ತು ಪ್ರದೇಶಗಳು ಇನ್ನೂ ಉಳಿದಿವೆ. ಪ್ರತಿಯೊಂದು ಹೆಸರಿನ ಹಿಂದೆ ಹತ್ತೊಂಬತ್ತನೇ ಶತಮಾನದಲ್ಲಿದ್ದ ಒಬ್ಬ ಬ್ರಿಟಿಷ್ ಪುರುಷನ ಹಿನ್ನಲೆ ಅಥವಾ ಸಂಪರ್ಕ ಇರುವುದು ಕಂಡು ಬರುತ್ತೆ. ಸ್ವಾತಂತ್ರ್ಯ ಬಂದ ಮೇಲೆ, ಸ್ವಾಭಿಮಾನದಿಂದ ಕೆಲವು ಹೆಸರುಗಳು ಬದಲಾದವು. ಆದರೆ ಜನರು ಇನ್ನೂ ಹಲವನ್ನು ಹಳೆಯ ಹೆಸರಿಂದ ಕರೆಯುತ್ತಾರೆ. ಉದಾಹರಣೆಗೆ, ಬಸವನಗುಡಿಯ Surveyors Street, ಈಗ ಅಧಿಕೃತವಾಗಿ ಕೃಷ್ಣ ಶಾಸ್ತ್ರೀ ರಸ್ತೆ ಆಗಿದ್ದರೂ ಜನ ಸಾಮಾನ್ಯರ ಬಾಯಲ್ಲಿ ಹಳೇ ಹೆಸರೇ ಉಳಿದಿದೆ! 

೧೮೦೪ ರಲ್ಲಿ ಬ್ರಿಟಿಷರು ಸ್ಥಾಪಿಸಿದ ಬೆಂಗಳೂರಿನ ದಂಡು (Cantonment), ದಕ್ಷಿಣ ಭಾರತದಲ್ಲಿಯೇ ದೊಡ್ಡ ಮಿಲಿಟರಿ  ಪ್ರದೇಶವಾಗಿತ್ತು. ಇದರಲ್ಲಿ ಮುಖ್ಯವಾದ ಜಾಗ ಪರೇಡ್ ಗ್ರೌಂಡ್ಸ್. ಇಲ್ಲಿ  ಬ್ರಿಟಿಷರ ಸೈನ್ಯ ತರಬೇತಿ ಪಡೆಯುತ್ತಿತ್ತು. ಈಗಲೂ ಜನವರಿ ೨೬ ರಂದು ಇಲ್ಲೇ ಗಣರಾಜ್ಯದ ಪರೇಡ್ ನಡೆಯುವುದು.  ಇದರ ಸಮೀಪದಲ್ಲಿ ಕಬ್ಬನ್ ಪಾರ್ಕ್ ನಿರ್ಮಾಣವಾಯಿತು. Cantonment ನ  ಸುತ್ತಮುತ್ತ ಇದ್ದ ಜಾಗದಲ್ಲಿ ಬ್ರಿಟಿಷ್  ಕುಟುಂಬದವರು ವಾಸ್ತವ್ಯ ಹೂಡಿದರು, ಈ ಪ್ರದೇಶಕ್ಕೆ ತಮ್ಮ ಹೆಸರುಗಳನ್ನೂ ಕೊಟ್ಟರು: White Field , Austin  Town, Fraser Town, Cooke Town ಇತ್ಯಾದಿ. ಇದು ಸುಮಾರು ೧೫೦ ವರ್ಷಗಳ ಹಿಂದಿನ ಮಾತು. ಈಗಲೂ ಈ ಹೆಸರುಗಳು ಉಳಿದಿವೆ. ಪೂರ್ವ ದಿಕ್ಕಿನಲ್ಲಿರುವ ಈಗಿನ Whitefield ಪ್ರದೇಶವು, ೧೮೮೨ ರಲ್ಲಿ ಚಾಮರಾಜ ಒಡೆಯರ್ ಮಹಾರಾಜರು Anglo Indian ಜನಾಂಗದವರು ವಾಸ ಮಾಡುವುದಕ್ಕೆ ಡೇವಿಡ್ ಇಮ್ಯಾನುಯಲ್ ವೈಟ್ ಅವರಿಗೆ ಕೊಟ್ಟ ೩೭೫೦ ಎಕರೆ ಜಮೀನು. ಈತ Anglo Indian ಸಂಘದ ಅಧ್ಯಕ್ಷನಾಗಿದ್ದ. ಅನೇಕರು ೫೦ ಕಿ.ಮೀ ದೂರದಲ್ಲಿದ್ದ KGF ಚಿನ್ನದ ಗಣಿ ಯಲ್ಲಿ ಕೆಲಸದಲ್ಲಿದ್ದರು. ಹತ್ತಿರದಲ್ಲೇ ಕಟ್ಟಿದ ರೈಲು ನಿಲ್ದಾಣದಿಂದ ಕೆಲಸಕ್ಕೆ ಹೋಗಬಹುದಾಗಿತ್ತು. ಈಗ ವೈಟ್ ಫೀಲ್ಡ್ ನಲ್ಲಿ ಬಹು ದೊಡ್ಡ IT ಸಂಸ್ಥೆಗಳಲ್ಲಿ  ಸಾವಿರಾರು ಜನರು ಕೆಲಸದಲ್ಲಿದ್ದಾರೆ. ಹೀಗೆ, ಪ್ರತಿಯೊಂದು ಪ್ರದೇಶಕ್ಕೂ ಒಂದು ಇತಿಹಾಸ ಇದೆ.  

ಈಗ ಕೆಲವು ರಸ್ತೆಗಳ ಇತಿಹಾಸವನ್ನು ನೋಡೋಣ. ಮುಖ್ಯವಾದ ರಸ್ತೆಗಳು, Avenue Road, Brigade Road, Cubbon Road , Cunningham Road, Millers Road, Krumbigal  Road, Lavelle  Road, Sankey Road, St. Marks Road  ಇತ್ಯಾದಿ. ಇದರಲ್ಲಿ ಅವೆನ್ಯೂ ರಸ್ತೆ ಬಹಳ ಹಳೇ ಮತ್ತು ಮುಖ್ಯವಾದ ರಸ್ತೆ. ದೊಡ್ಡ ಪೇಟೆ ಇದರ ಮುಂಚಿನ ಹೆಸರು. ಈಗಿನ Majestic ನಿಂದ  ಕೆಂಪೇಗೌಡರು ಕಟ್ಟಿದ ಕೋಟೆ ದಾಟಿ,  ಟಿಪ್ಪು ಅರಮನೆವರೆಗೆ ಇದ್ದ ರಸ್ತೆ. ಇದಕ್ಕೆ ರಾಜಬೀದಿ ಎಂದೂ ಹೆಸರಿತ್ತು. ೧೮೮೪ ನಲ್ಲಿ ಈ ರಸ್ತೆ Avenue Road ಆಯಿತು ಅನ್ನುವ ದಾಖಲೆ ಇದೆ. ಒಂದು ಕಾಲದಲ್ಲಿ ಸಾಲು ಮರಗಳು, ತೆಂಗಿನ ಮರಗಳು ಇದ್ದವು ಈ ರಸ್ತೆಯ ಉದ್ದಕ್ಕೂ ಇದ್ದವು.  ಈಗ ವ್ಯಾಪಾರದ ರಸ್ತೆ, ಇಲ್ಲಿ ಸಿಗದೇ ಇರುವ ಪದಾರ್ಥವೇ ಇಲ್ಲ ಅಂದರೆ ತಪ್ಪಲಾಗರಾದು.  
ಕನ್ನಿಂಗ್ ಹ್ಯಾಮ್ ನ

ಈಗಿನ ವಸಂತ ನಗರದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಗೆ ಹೆಸರು ಬಂದಿದ್ದು ಸ್ಕಾಟ್ಲೆಂಡ್ ಮೂಲದ ಫ್ರಾಂಸಿಸ್ ಕನ್ನಿಂಗ್ ಹ್ಯಾಮ್ನಿಂದ (೧೮೨೦-೧೮೭೫). ಈಸ್ಟ್ ಇಂಡಿಯಾ ಕಂಪನಿಯ ಸೈನಿಕ ಶಾಲೆಯಲ್ಲಿ ತರಬೇತಿ ಪಡೆದು ಮದ್ರಾಸ್ ರೆಜಿಮೆಂಟ್ ಗೆ ಸೇರಿ, ೧೮೫೦ರಲ್ಲಿ ಮೈಸೂರು ಪ್ರಾಂತ್ಯದ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ನವರ ಸಿಬ್ಬಂದಿಯಾಗಿ ಕೆಲಸ ಮಾಡಿ ಲಾಲ್ ಬಾಗ್ ತೋಟ ಮತ್ತು ಬೆಂಗಳೂರಿನ ಅನೇಕ ಪ್ರಮುಖ ಕಟ್ಟಡಗಳನ್ನು ಕಟ್ಟಿದವನು. ಇದರಲ್ಲಿ ಮುಖ್ಯವಾದದ್ದು, ಸರ್ಕಾರದ ಅತಿಥಿ ಗೃಹ “ಬಾಲಬ್ರೂಯಿ”. ಇವನ ಇಬ್ಬರು ಸಹೋದರರೂ ಸಹ ಭಾರತದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಇವನ ಅಣ್ಣ, ಜನರಲ್ ಅಲೆಕ್ಸಾಂಡರ್ Indian Archaeology ಸಂಸ್ಥೆಯನ್ನು ಸ್ಥಾಪಿಸಿದವನು ಮತ್ತು ತಮ್ಮ ಮೇಜರ್ ಜಾನ್ “History of the Sikhs ” ಬರೆದವನು. ಫ್ರಾನ್ಸಿಸ್ ಕನ್ನಿಂಗ್ ಹ್ಯಾಮ್ ಸಹ ದೊಡ್ಡ ಬರಹಗಾರನು. ನಿವೃತನಾದ ಮೇಲೆ ಮೈಸೂರು ಮಹಾರಾಜರಗೆ ಸಲಹೆಗಾರನಾಗಿ ಸೇರಿ ೧೮೭೧ರಲ್ಲಿ ಇಂಗ್ಲೆಂಡ್ ಗೆ ಮರಳಿದ ಮೇಲೆ ತನ್ನ ಸಾಹಿತ್ಯ ಚಟುವಟಿಕೆಯನ್ನು ಪುನರಾರಂಭಿಸಿದ. ಡಿಸೆಂಬರ್ ೧೮೭೫ ನಿಧನವಾದ. ಒಂದು ವಿಚಿತ್ರ ವಿಷಯ, ಇವನ ಭಾವ ಚಿತ್ರ ಎಲ್ಲೂ ಇಲ್ಲ , ಸ್ಕಾಟ್ ಲ್ಯಾಂಡ್ ನಲ್ಲಿ ಅಮೃತ ಶಿಲೆಯ ಪ್ರತಿಮೆ ಮಾತ್ರ ಇದೆ.

ಸರ್ ರಿಚರ್ಡ್ ಸ್ಯಾಂಕಿ (೧೮೨೯-೧೯೦೮) ಹುಟ್ಟಿದ್ದು ೨೨/೩/೧೮೨೯ ರಂದು ಐರ್ಲೆಂಡ್ನಲ್ಲಿ. ೧೮೪೫ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ ಶಾಲೆಯಲ್ಲಿ ತರಬೇತು ಪಡೆದು, ಮದ್ರಾಸ್ ರೆಜಿಮೆಂಟ್ ಗೆ ಸೇರಿ ಭಾರತದ ಅನೇಕ ಕಡೆ ಇಂಜಿನಿಯರ್ ಆಗಿ ಕೆಲಸ ಮಾಡಿ, ೧೮೬೧ ರಲ್ಲಿ ಮೈಸೂರು ಸಂಸ್ಥಾನದಲ್ಲಿ PWD (Public Works Department ) ಇಲಾಖೆ ಸೇರಿದ. ರಾಜ್ಯದ ನೀರಾವರಿ ಅಭಿವೃದ್ಧಿಯ ಯೋಜನೆ ಸ್ಯಾಂಕಿಯ ಕೊಡುಗೆ. ಬೆಂಗಳೂರಿನ ಕೆರೆ ಸ್ಯಾಂಕಿ ಟ್ಯಾಂಕ್ ಮತ್ತು ಸುತ್ತ ಮುತ್ತಿನ ಕೆರೆಗಳಿಗೆ ಆಣೆಕಟ್ಟು ಹಾಕಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಸುಧಾರಿಸಿದ್ದು ಈತನೇ. ಇದಲ್ಲದೆ, ಬೆಂಗಳೂರಿನ ಮ್ಯೂಸಿಯಂ(೧೮೭೭) ಈಗಿನ ಹೈಕೋರ್ಟ್ (ಅಠಾರ ಕಚೇರಿ – ೧೮೬೪), ಸೈನ್ಟ್ ಆಂಡ್ರೂ ಚರ್ಚ್ (೧೮೬೪), ಮೇಯೋ ಕಟ್ಟಡ (೧೮೭೦) ಇತ್ಯಾದಿ ಕಟ್ಟಡಗಳನ್ನು ಕಟ್ಟಿದ. ನಂತರ ಮದ್ರಾಸ್ ಪ್ರಾಂತ್ಯದಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡು ಮದ್ರಾಸ್ ಅಭಿವೃದ್ಧಿಗೆ ನೇರವಾದ. ಮರೀನಾ ಬೀಚ್ ಮತ್ತು ಅನೇಕ ಉದ್ಯಾನವನಗಳ ನಿರ್ಮಾಣ ಮಾಡಿದ. ಮದ್ರಾಸ್ ವಿಶ್ವವಿದ್ಯಾನಿಲಯದ Fellow ಆಗಿ ಆಯ್ಕೆಯಾಗಿ ಮದ್ರಾಸ್ ವಿಧಾನ ಪರಿಷತ್ತಿನಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸಿದ. ೧೮೮೪ ನಲ್ಲಿ ನಿವೃತನಾದಮೇಲೆ ಐರ್ಲೆಂಡ್ ನಲ್ಲಿ Board of Works ನ ಅಧ್ಯಕ್ಷನಾಗಿ ಅನೇಕ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ. ನವಂಬರ್ ೧೯೦೮ ರಲ್ಲಿ ಲಂಡನ್ Grosvenor Place ನಲ್ಲಿ ನಿಧನವಾದ. ಇವನ ಸಮಾಧಿ Sussex ನಲ್ಲಿರುವ Hove ನಲ್ಲಿದೆ.

ಲಾವೆಲ್ ರಸ್ತೆಯ ಹೆಸರಿನ ಮೂಲ, ಐರ್ಲೆಂಡಿನ ಮೈಕಲ್ ಲಾವೆಲ್. ಸ್ಕಾಟಿಷ್ ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇರಿ ನ್ಯೂಜಿಲ್ಯಾಂಡ್ ನಲ್ಲಿ ಮಾವೋರಿ ಯುದ್ಧದಲ್ಲಿ ಭಾಗವಾಗಿ, ಅಲ್ಲಿನ ಗಣಿಗಳ ಅಧ್ಯನ ಮಾಡಿ ಭಾರತಕ್ಕೆ ಬಂದ. ಇಲ್ಲಿ ಚಿನ್ನದ ಗಣಿಗಳ ಬಗ್ಗೆ ಸಂಶೋಧನೆ ಮಾಡಿ , ಕೊನೆಗೆ ಕೋಲಾರ ಗಣಿಗಳನ್ನು ಅಗೆಯಲು ೧೮೭೩ ರಲ್ಲಿ ಬ್ರಿಟಿಷ್ ಸರ್ಕಾರದಿಂದ ಅನುಮತಿ ಪಡೆದು KGF (Kolar Gold Fields) ಸಂಸ್ಥೆಯನ್ನು ಸ್ಥಾಪಿಸಿದ. ಆದರೆ ಇದನ್ನು ನಡೆಸುವುದಕ್ಕೆ ಬೇಕಾದ ಬಂಡವಾಳ ಇವನಲ್ಲಿ ಇರಲಿಲ್ಲ. ಅನೇಕರ ಸಹಾಯದಿಂದ ಕೆಲವು ವರ್ಷ ನಡೆಸಿ ಕೊನೆಗೆ ತನ್ನ ಪಾಲನ್ನು ಮಾರಿ ಬೆಂಗಳೂರಿನಲ್ಲಿ ಒಂದು ಭವ್ಯವಾದ ಮನೆಯನ್ನು (Oorgaum House) ಕಟ್ಟಿದ. ಈ ರಸ್ತೆ ಈಗ ಲಾವೆಲ್ ರಸ್ತೆ. ಈ ಮನೆಯನ್ನು ಮೈಸೂರ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಪೀಟರ್ ಡಿಸೋಜಾ ಅನ್ನುವರಿಗೆ ಮಾರಿ ೧೯೧೮ ರಲ್ಲಿ ಇಂಗ್ಲೆಂಡಿಗೆ ಮರಳಿದ.

ರೆಸಿಡೆನ್ಸಿ ರಸ್ತೆ
ಈಗ ಇದು ಬಹಳ ದೊಡ್ಡ ರಸ್ತೆ. ಒಂದು ತುದಿಯಲ್ಲಿ ಪ್ರತಿಷ್ಠಿತ, ೧೯ನೇ ಶತಮಾನದಲ್ಲಿ ಶುರುವಾದ ಬೆಂಗಳೂರ್ ಕ್ಲಬ್, ಇನ್ನೊಂದು ತುದಿಯಲ್ಲಿ ಬೆಂಗಳೂರ್ ಮಾಲ್ . ಈ ರಸ್ತೆಯ ಹೆಸರು ಹೇಗೆ ಬಂತು ಅನ್ನುವುದನ್ನು ನೋಡೋಣ. ೧೭೯೯ ನ ಮೈಸೂರ್ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಪರಾಜಿತನಾದ ಮೇಲೆ, ಮೂರನೇ ಮುಮ್ಮಡಿ ಕೃಷ್ಣ ರಾಜೇಂದ್ರ ಒಡೆಯರ್ ಅವರನ್ನು ಬ್ರಿಟಿಷರು ಪಟ್ಟಕ್ಕೇರಿಸಿದರು. ಆದರೆ ರಾಜ್ಯದ ಆಡಳಿತ ಮಾತ್ರ ಒಬ್ಬ ಬ್ರಿಟಿಷ್ ರೆಸಿಡೆಂಟ್, ಸರ್ ಬ್ಯಾರಿ ಕ್ಲೋಸ್ ಎಂಬಾತನಲ್ಲಿತ್ತು. ತದನಂತರ ಟಿಪ್ಪುವಿನ ದಿವಾನ್ ಪೂರ್ಣಯ್ಯ ಪುನಃ ದಿವಾನರಾದರು. ಈ ರೆಸಿಡೆಂಟ್ ೧೮೦೪ ರಲ್ಲಿ ಬೆಂಗಳೂರಿಗೆ ಬಂದು ಈಗಿನ SBI ಇರುವ ಜಾಗದಲ್ಲಿ ವಾಸವಾಗಿದ್ದ. ೧೮೩೧ನಲ್ಲಿ ರೆಸಿಡೆಂಟ್ ವಾಸಕ್ಕೆ ಬೇರೆ ಮನೆ ಕಟ್ಟಿದರು. ಆಗ ರೆಸಿಡೆನ್ಸಿ ರಸ್ತೆ ಆಯಿತು. ಕೆಲವು ವರ್ಷದ ನಂತರ ಈಗಿನ ರಾಜ್ ಭವನ್ ಕಟ್ಟಡ ಕಟ್ಟಿ ಲಾರ್ಡ್ ಕಬ್ಬನ್ ಮುಂತಾದವರು ಇಲ್ಲಿ ವಾಸವಾಗಿದ್ದರು. ಈಗ ಇದು ರಾಜ್ಯಪಾಲರ ವಸತಿ ಗೃಹ.

ಕಬ್ಬನ್ ಪಾರ್ಕ್
೧೮೭೦ ರಲ್ಲಿ, ಈಗಿನ ಕಬ್ಬನ್ ಪಾರ್ಕ್ ಸರ್ ರಿಚರ್ಡ್ ಸ್ಯಾಂಕಿಯ ನೇತೃತ್ವದಲ್ಲಿ ಪ್ರಾರಂಭವಾಯಿತು. ಇದನ್ನು ಪೂರೈಸಿದ್ದು ಮೈಸೂರು ಪ್ರಾಂತ್ಯದ ಮುಖ್ಯ ಕಮಿಷನರ್ ಸರ್ ಜಾನ್ ಮೀಡ್. ಆಗ ಇದು ಮೀಡ್ಸ್ ಪಾರ್ಕ್ ಆಗಿತ್ತು. ನಂತರ ೧೮೭೩ರಲ್ಲಿ ಈತ ಬರೋಡಕ್ಕೆ ಹೊಸ ಹುದ್ದೆಗೆ ಹೋದಾಗ ಈ ಉದ್ಯಾನವನಕ್ಕೆ ಬಹಳ ವರ್ಷ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಸರ್ ಮಾರ್ಕ್ ಕಬ್ಬನ್ ನ ಹೆಸರು ಇಡಲಾಯಿತು. ಇಲ್ಲೇ ಅಠಾರ ಕಚೇರಿ, ಪುಸ್ತಕ ಭಂಡಾರ, ಸೆಂಚುರಿ ಕ್ಲಬ್ ಮುಂತಾದ ಕಟ್ಟಡಗಳು ಇರುವುದು. ೧೯೨೭ ನಲ್ಲಿ ಹೆಸರು ಬದಲಾವಣೆ ಆಗಿ ಚಾಮರಾಜ ಒಡೆಯರ್ ಪಾರ್ಕ್ ಆಗಿತ್ತು . ಆದರೆ ಈ ಹೆಸರು ಉಳಿಯಲಿಲ್ಲ.

ಕೊನೆಯದಾಗಿ, ಬೆಂಗಳೂರಿನ ಫ್ರೇಸರ್ ಟೌನ್ ಬಗ್ಗೆ ಎರಡು ಮಾತು. ಆಗಸ್ಟ್ ೧೯೧೦ ರಲ್ಲಿ ಈ ಪ್ರದೇಶದ ಶಂಕು ಸ್ಥಾಪನೆ ನಡೆಯುತು.  ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಬಹಳ ಚಿಕ್ಕ ವಯಸ್ಸಿನಲ್ಲಿ ಪಟ್ಟಕ್ಕೆ ಬಂದಿದ್ದರು. ಅವರ ವಿದ್ಯಾಭ್ಯಾಸ ಮೈಸೂರು ಅರಮನೆಯಲ್ಲಿ ಬ್ರಿಟಿಷ್ ICS ಅಧಿಕಾರಿ ಸರ್ ಸ್ಟೂವರ್ಟ್ ಫ್ರೇಸರ್ (೧೮೬೪-೧೯೬೩) ಅವರ ನೇತೃತ್ವದಲ್ಲಿ ಮುಂದುವರೆಯಿತು. ಇವರ ಹೆಸರನ್ನು ಮಹಾರಾಜರ ಸಲಹೆಯಂತೆ ಇಟ್ಟು ಫ್ರೇಸರ್ ಟೌನ್ ಆಯಿತು. ಈಗ ಇದನ್ನು ಪುಲಕೇಶಿನಗರ ಎಂದು BBMP ನಾಮಕರಣ ಮಾಡಿದೆ ಆದರೆ ಜನಗಳಿಗೆ ಇದು ಈಗಲೂ Fraser  Town! 

ಬೆಂಗಳೂರಿನಲ್ಲಿ ಇಂಗ್ಲಿಷ್ ಹೆಸರಿನ ರಸ್ತೆಗಳು ಅನೇಕ. Infantry Road ,Brigade Road, Cubbon Road, Residency Road, St. Marks Road ಇತ್ಯಾದಿ. ಇನ್ನೂ ಎಷ್ಟು ವರ್ಷಗಳು ಈ ಹೆಸರುಗಳು ಉಳಿಯುತ್ತವೆ ಎನ್ನುವುದು ಬಹುಶಃ ಮುಂದಿನ ಪೀಳಿಗೆಯ ಇತಿಹಾಸದ ಅರಿವಿಲ್ಲದ ರಾಜಕಾರಣಿಗಳು ನಿರ್ಧರಿಸುತ್ತಾರೆ .

- ರಾಮಮೂರ್ತಿ.
***************************************

ಕನ್ನಡ ನಾಡು, ಭಾಷೆ, ಉತ್ಸವ, ಮತ್ತು ಹೊಸವರ್ಷ …..

ಅನಿವಾಸಿಯ ಬಳಗಕ್ಕೆ ನಮಸ್ಕಾರ. 2025ರ ಹೊಸವರ್ಷದಲ್ಲಿಯ ನನ್ನ ಮೊದಲ ಸಂಚಿಕೆಗೆ ನಿಮ್ಮೆಲ್ಲರ ಸ್ವಾಗತ.  ಅನಿವಾಸಿ ಬಳಗದ ಉತ್ಸಾಹ ಹೆಚ್ಚುತ್ತಿರುವುದಕ್ಕೆ ಇತ್ತೀಚೆಗೆ ನಡೆದ ದಶಮಾನೋತ್ಸವ, ಹೊಸ ಸದಸ್ಯರುಗಳ ಆಗಮನ, ಬರವಣಿಗೆ ಇತ್ತ್ಯಾದಿಗಳೇ ಸಾಕ್ಷಿ.  ಇದರ ಜೊತೆಯಲ್ಲೇ, ಕೆಲವೇ ವಾರಗಳ ಹಿಂದೆ (ಕಳೆದ ವರ್ಷ ಅನ್ನಬಹುದಿತ್ತೇನೋ, ಆದರೆ ಎಷ್ಟೋ ದಿನ ಆದಂತೆ ಅನ್ನಿಸುವುದರಿಂದ ಬೇಡ ಅಂದುಕೊಂಡೆ) ಸಕ್ಕರೆಯ ನಾಡು, ಮಂಡ್ಯದಲ್ಲಿ ಹಿರಿಯ ಸಾಹಿತಿ ಶ್ರೀ ಗೋ ರು ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಡೆದ 87ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲೆಂದೇ ನಮ್ಮ ಅನಿವಾಸಿ ಬಳಗದ ಪ್ರತಿನಿಧಿಯಾಗಿ ತೆರಳಿದ್ದರು ನಮ್ಮ ನವೀನ್.  ಅವರು ಬರೆದ ವರದಿ ಇಲ್ಲಿ ಕೆಳಗಿದೆ.  ಅವರೇ ತೆಗೆದ ಹಲವು ಚಿತ್ರಗಳೂ ಜೊತೆಯಲ್ಲಿವೆ - ಅದರಲ್ಲಿ ಪರಿಚಿತ ಮುಖಗಳಿವೆ, ನೋಡಿ.

ಜೊತೆಯಲ್ಲಿ ನಮ್ಮ ಗೋಪಾಲಕೃಷ್ಣ ಹೆಗಡೆಯವರ ಒಂದು ಕವನವಿದೆ, ಹೊಸವರ್ಷದ ಆಶಯಗಳೊಂದಿಗೆ. ಅವರದ್ದೇ ಮಾತಿನಲ್ಲಿ ಕವನದ ಹುಟ್ಟಿನ ಪರಿಚಯವೂ ಇದೆ.

ಕೊನೆಯ ಕೊಸರಿನಂತೆ, ಹೆಗ್ಡೆಯವರದೊಂದು ಚಿತ್ರಕ್ಕೆ ನನ್ನದೊಂದು ಕಿರು ಕವನವನ್ನೂ ಹಾಕಿಬಿಟ್ಟಿದ್ದೇನೆ, ತಡೆಯಲಾರದೆ. ಕ್ಷಮೆಯಿರಲಿ.

ಎಂದಿನಂತೆ ಓದಿ, ತಮ್ಮೆಲ್ಲರ ಮನೋಭಿಪ್ರಾಯವನ್ನು ತಿಳಿಸುವುದನ್ನು ಮುಂದುವರೆಸಿ. ಹೊಸವರ್ಷದ ಶುಭಾಶಯಗಳು.
- ಲಕ್ಷ್ಮೀನಾರಾಯಣ ಗುಡೂರ
*******************************************
೮೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೨೪, ಮಂಡ್ಯ

ಇತ್ತೀಚಿಗಷ್ಟೆ ೮೭ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಿತು. ಅದಕ್ಕಂತಲೇ ನಾನು ಭಾರತಕ್ಕೆ ಹೋಗಿದ್ದೆ. ಬಹಳ ವರ್ಷಗಳಿಂದಲೂ ಸಮ್ಮೇಳನದಲ್ಲಿ ಭಾಗಿಯಾಗುವ ತವಕವಿತ್ತು. ಆದರೆ ಆ ಸುಸಂದರ್ಭ ಈಗ ದೊರಕಿತು. ಬಹಳ ನಿರೀಕ್ಷಣೆಯಿಂದ ಸಿದ್ಧತೆ ಮಾಡಿಕೊಂಡಿದ್ದೆ. ಸಾಹಿತ್ಯ ಸಮಾರೋಪದಲ್ಲಿ ಸಾಕಷ್ಟು ಸಾಹಿತ್ಯದಬಗ್ಗೆ, ಕನ್ನಡ ಭಾಷೆ ಬಗ್ಗೆ ಕೇಳಿಬರುತ್ತದೆ, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವಸಾಹಿತಿ, ಕವಿ, ಬರಹಗಾರರ ನಡುವೆ ನಡೆದಾಡಿ, ಅವರನ್ನು ಆಲಿಸಿ ಅವರಿಂದ ಪ್ರೇರಣೆ ಪಡೆಯುವುದಲ್ಲದೆ, ಕನ್ನಡ ಭಾಷಾಕ್ಷೇತ್ರದಲ್ಲಿ ಎಂಥಹ ಬೆಳವಣಿಗೆ ರೂಪಗೊಂಡಿದೆ ಎಂದು ಕಾಣುವ ಹಂಬಲ ಬೆಳಸಿಕೊಂಡಿದ್ದೆ. ಇದಕ್ಕನುಗುಣವಾಗಿ ಲೀಡ್ಸ್ನಲ್ಲಿ ಮಾಡುತಿದ್ದ ಕೆಲಸವನ್ನು ಮೊಟಕುಗೊಳಿಸಿ ಹತ್ತಿದೆ, ಯುನೈಟೆಡ್ ಕಿಂಗ್ಡಮ್ನ ರಾಯಭಾರಿಯಂತೆ ಭಾವಿಸಿ. ಯಾಕಂದರೆ ನನಗೆ ತಿಳಿದಿರಲಿಲ್ಲ ಬೆರ್ಯಾರಾದರು ಇಲ್ಲಿಂದ ಹೋಗುವರೇನೋ ಅಂತ. ಆದರೆ ಅಲ್ಲಿಗೆ ಹೋದಮೇಲೆ ಲಂಡನಿನಿಂದ ಬಂದಿದ್ದ ಇನ್ನಿಬ್ಬರನ್ನು ಭೇಟಿಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿಯವರು ಕೆಲವೇ ದಿನಗಳ ಹಿಂದೆ ಬಂದು ನಮ್ಮೆಲ್ಲರಿಗೂ ಆಮಂತ್ರಣ ಕೊಟ್ಟಿದ್ದರು. ನಮ್ಮ ದೇಶವಲ್ಲದೆ ಕನ್ನಡಿಗರಿರುವ ಹತ್ತಾರು ರಾಷ್ಟ್ರಗಳಿಗೂ ಹೋಗಿ ವೈಯಕ್ತಿಕವಾಗಿ ಅಭಿಮಾನಿಗಳು ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸಾಹಿತ್ಯ ಸಮ್ಮೇಳನ ಬರೇ ಕರ್ನಾಟಕದ ಕನ್ನಡ ಜನರ ತಾಣವಲ್ಲ, ಅವು ಪ್ರಪಂಚದ ಎಲ್ಲೆಡೆ ನೆಲಸಿ ತಮ್ಮ ತಾಯ್ನಾಡನ್ನ ಮರೆಯದ ಜನಸಮುದಾಯದ ಸಂಸ್ಥೆಗಳು ಎಂದು ಸಾರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಾನು ಗುರುವಾರ ೧೯ನೆ ತಾರೀಖಿನಂದೇ ಮಂಡ್ಯಕ್ಕೆ ಹೊರಟೆ. ವಿದೇಶದಿಂದ ಬರುವ ಎಲ್ಲ ಪ್ರತಿನಿಧಿಗಳಿಗೆಂದೇ ವಿಶೇಷ ವ್ಯವಸ್ಥೆ ಬಹಳ ದಿನಗಳಿಂದಲೇ ರೂಪಗೊಂಡಿತ್ತು. ಮೈಸೂರಿನ ಸಂದೇಶ್ ಪ್ರಿನ್ಸ್ನಲ್ಲಿ ನಮಗೆ ಉಳಿದುಕೊಳ್ಳುವ, ಅಲ್ಲಿಂದ ಪ್ರತಿದಿನ ಸಮ್ಮೇಳನ ನಡೆಯುವ ಮಂಡ್ಯಕ್ಕೆ ಹೋಗಿಬರುವ ಸಾರಿಗೆ ಏರ್ಪಾಟು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ನಿವೇದಿತಾ ಹೊನ್ನತ್ತಿಯವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ಯೋಜಿಸಿ ಕಾರ್ಯಗತ ಮಾಡಲಾಗಿತ್ತು. ನನ್ನ ಭಾಷೆಯ ಸಮ್ಮೇಳನಕ್ಕೆ ನಾನೇ ಎಲ್ಲ ಖರ್ಚುಗಳನ್ನ ವಹಿಸಿಕೊಂಡು ಸರ್ಕಾರಕ್ಕಾಗಲಿ ಪರಿಷತ್ತಿಗಾಗಲಿ, ಸಮ್ಮೇಳನ ಸಂಚಾಲಕ ಇಲಾಖೆಗಾಗಲಿ ಋಣಿಯಾಗಬಾರದೆಂದಿದ್ದೆ. ಆದರೆ ನಮಗ್ಯಾವ ಕುಂದುಕೊರತೆಯಾಗದೆ, ಶುಲ್ಕವೂಯಿಲ್ಲದೆ ವಸತಿ, ಊಟ, ಜೊತೆಗೆ ಮನರಂಜನೆ, ಸಾಹಿತ್ಯ ರಸದೌತಣ ಉಣಿಸಿದ ಎಲ್ಲರಿಗೂ ನಾವು ಚಿರಋಣಿಯಾಗಿರಬೇಕು.

ಮಂಡ್ಯದಲ್ಲಿ ಅದೊಂದು ದೊಡ್ಡ ‘ಕುಂಭಮೇಳ’ ಅನ್ನಬೇಕು. ವಿಶಾಲ ಜಾಗ, ಲಕ್ಷಾಂತರ ಜನರು ಕೂರುವಂಥ ಸಭಾಂಗಣ, ಅದಕ್ಕೆ ತಕ್ಕಂಥ ಅದ್ದೂರಿ ಪ್ರವೇಶದ್ವಾರ, ದೃಷ್ಟಿಯಗಲಕ್ಕೂ ಮೀರಿದ ವೇದಿಕೆ, ಮಹಾಮಂಟಪ, ಅಲ್ಲಲ್ಲೇ ನೋಡಲನುಕೂಲವಾಗುವಂಥ ಕ್ಲೋಸ್ಡ್-ಸರ್ಕ್ಯೂಟ್ ಟಿವಿ, ಹೊರಗಿದ್ದರೂ ಕೇಳಿಸಿಕೊಳ್ಳುವಂಥ ಧ್ವನಿ ವ್ಯವಸ್ಥೆ, ಇವೆಲ್ಲ ದೊಡ್ಡ ಪ್ರಮಾಣದ ವಿನ್ಯಾಸವೆಂತಲೇ ಭಾವಿಸಬೇಕು.

ಸಮ್ಮೇಳನದ ವಿಶೇಷತೆ ಅದರ ಸಭಾಧ್ಯಕ್ಷರಾದ ನಾಡೋಜ ಗೊ ರು ಚನ್ನಬಸಪ್ಪನವರು. ೯೪ ವರ್ಷಗಳಾಗಿದ್ದರೂ ಅವರ ಮಾತಿನಲ್ಲಿದ್ದ ಸ್ಪಷ್ಟತೆ, ಶಬ್ದಭಂಡಾರ, ನಿರರ್ಗಳತೆ ಎಂತಹವರನ್ನೂ ಮೋಡಿ ಮಾಡುವಂಥದು. ನೇರವಾಗಿ ಸರ್ಕಾರಕ್ಕೆ ಮತ್ತು ವಾಣಿಜ್ಯ ಉದ್ಯಮಿಗಳಿಗೆ ಕರೆ ಕೊಟ್ಟರು. ಕನ್ನಡ ಭಾಷೆ ಉಳಿಯಲು ಬೆಳೆಸಲು ಅವರಿಂದ ಯಾವ ತರಹದ ಉತ್ತೇಜನ ದೊರಕಬೇಕು, ಅದರಲ್ಲೂ ಆರ್ಥಿಕ ಹೊಣೆ ವಹಿಸಿಕೊಳ್ಳಬೇಕೆಂದು. ಕನ್ನಡ ವಿಶ್ವವಿದ್ಯಾನಿಲಯ, ಕನ್ನಡ ಶಾಲೆಗಳು ಮುಚ್ಚುವಂಥ ಸ್ಥಿತಿಯನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಮೇಲಿದ್ದ ರಾಜಕೀಯ ಮುಖಂಡರಿಗೆ ಮನದಟ್ಟು ಮಾಡಿದರು. ಕನ್ನಡ ಪ್ರಾಚೀನ ಭಾಷೆಯಾಗಿದ್ದರೂ ಇಂದಿನ ತಂತ್ರಜ್ಞಾನ ಅಳವಡಿಸಿಕೊಂಡು, ಎಲ್ಲರಿಗೂ, ಅದರಲ್ಲೂ ಪ್ರಚಲಿತ ಯುವಪೀಳಿಗೆಗೆ ತಟ್ಟುವಂಥ ಮಾರ್ಪಾಟು ಮಾಡಿಕೊಳ್ಳಬೇಕು ಎಂದು ಕರೆಯಿತ್ತರು. ಇದರ ಜೊತೆಗೆ ಅವರು ಮತ್ತಿತರ ಮಹತ್ತರ ವಿಷಯಗಳನ್ನೂ ಚರ್ಚಿಸಿದರು. ಶಿಕ್ಷಣ ಮಾಧ್ಯಮ, ಅಂತರ-ರಾಜ್ಯ ಭಾಷಾವಿನಿಮಯ, ಕನ್ನಡ ಕಲಿಕಾ ಕೇಂದ್ರಗಳು, ಪರಿಸರ ಸಂರಕ್ಷಣೆ, ಧರ್ಮದ ದುರುಪಯೋಗ, ಮಹಿಳಾ ಸಮಾನತೆ ಹಾಗು ಸ್ವಾಯತ್ತತೆ, ಕನ್ನಡಿಗರ ಉದ್ಯೋಗ ಬದುಕು, ಪ್ರವಾಸೋದ್ಯಮ, ಮುಂತಾದ ವಿಚಾರಗಳನ್ನು ಎತ್ತಿ ತೋರಿಸಿ ಆ ದಿಕ್ಕಿನಲ್ಲಿ ಏನೆಲ್ಲಾ ಕೆಲಸಕಾರ್ಯಗಳು ನಡೆಯಬೇಕಾಗಿದೆ ಎಂದು ವಿವರಿಸಿದರು.

ಕೆಲವರ ಭಾಷಣಗಳು ತೀರ್ವವಾಗಿದ್ದವು. ಮುಖ್ಯಮಂತ್ರಿ ಚಂದ್ರುರವರು ಸಭಾಧ್ಯಕ್ಷರು ಉಲ್ಲೇಖಿಸಿದ ವಿಷಯಗಳಲ್ಲಿ ಸರ್ಕಾರ ವರ್ಷದಿಂದ ವರ್ಷಕ್ಕೆ ಅನುಸರಿಸುತ್ತಿರುವ ನಿರ್ಲಕ್ಷರೀತ್ಯಕ್ರಮವನ್ನು ಕಟುವಾಗಿ ರಾಜಕೀಯ ಮುಖಂಡರ ಮುಂದೆಯೇ ಟೀಕಿಸಿದರು. ಪ್ರತಿ ಸಮ್ಮೇಳನದಲ್ಲೂ ದೊಡ್ಡ ದೊಡ್ಡ ಭಾಷಣಗಳು ಆಗುತ್ತವೆ, ಮುಂದೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ನಿರ್ಣಯವೂ ಆಗುತ್ತೆ, ಆದರೆ ಸಮ್ಮೇಳನ ತದನಂತರ ಅವೆಲ್ಲ ಒಣಆಶ್ವಾಸನೆಗಳಾಗೆ ಉಳಿಯುತ್ತವೆ ಎಂದು ಆಕ್ಷೇಪಿಸಿದರು.

ಅನೇಕ ಕವಿಗೋಷ್ಠಿಗಳು, ಉಪನ್ಯಾಸಗಳು, ಸಮಾಲೋಚನೆಗಳು ಮೂರು ದಿನಗಳಲ್ಲೂ ಹಬ್ಬಿಕೊಂಡು ಕಿಕ್ಕಿರಿದು ತುಂಬಿದ ಮಂಡ್ಯ ಜನಸಮೂಹಕ್ಕೆ ಒಂದು ರೀತಿಯ ಜ್ಞಾನೋದಯ ಉಂಟುಮಾಡಿತು. ಬೆಳಿಗ್ಗೆಯಿಂದ ಸಂಜೆವರೆಗೂ ಈ ಕಾರ್ಯಕ್ರಮಗಳಾದ ಮೇಲೆ ಮನರಂಜನೆ ಸಾಗುತಿತ್ತು. ಒಂದು ದಿನ ಸಾಧು ಕೋಕಿಲ, ಮತ್ತೊಂದು ಸಂಜೆ ಅರ್ಜುನ ಜನ್ಯ ನೆರೆದಿದ್ದ ಯುವಕ ಯುವತಿಯರನ್ನು ಕುರ್ಚಿ ಮೇಲೆಯೇ ನಿಂತು ಕುಣಿದಾಡುವಂತೆ ಮಾಡಿದರು.

ಪುಸ್ತಕ ಮಳಿಗೆಗಳು ಮತ್ತೊಂದು ವೈಶಿಷ್ಟತೆ. ಕೊಂಡುಕೊಳ್ಳುವರಿಗಂತೂ ಅದೊಂದುಹಬ್ಬವೇ. ಬಹುಷಃ ಇಲ್ಲಿವರೆಗೆ ಪ್ರಕಟವಾಗಿರುವ ಎಲ್ಲ ಕಾದಂಬರಿಗಳು ನಾಟಕಗಳುಕಾವ್ಯಗಳು, ಇತರೆ ಅನೇಕ ಬರವಣಿಗಗಳು ಮಳಿಗೆಗಳಲ್ಲಿ ರಾರಾಜಿಸುತ್ತಿದ್ದವು. ಪ್ರಕಾಶಕರುಅಲ್ಲಿ ತಮ್ಮ ತಮ್ಮ ಪ್ರಕಟಣೆಗಳನ್ನು ಸಾಲು ಸಾಲು ಅಂಗಡಿಗಳಲ್ಲಿ ಬಿತ್ತರಿಸಿ ೫೦%ಗೂ ಮಿಗಿಲಾಗಿ ರಿಯಾಯಿತಿ ಕೊಟ್ಟು ಓದುಗರನ್ನು ಪ್ರೇರೇಪಿಸುತ್ತಿದ್ದರು. ಅಷ್ಟೊಂದು ಪುಸ್ತಕಗಳು ಒಂದೇ ಜಾಗದಲ್ಲಿ ಪ್ರದರ್ಶನವಾದದನ್ನು ಬಹುಷಃ ನಾನು ನೋಡಿರಲಿಲ್ಲ.

ವಿದೇಶಿ ಕನ್ನಡಿಗರ ಸಂಘಟನೆ ಈ ಸಮ್ಮೇಳನದ ಮತ್ತೊಂದು ವೈಶಿಷ್ಟ್ಯಪೂರ್ಣಕಾರ್ಯಕ್ರಮ. ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ದೇಶಗಳ ಜೊತೆಗೆ ಅನೇಕ ಏಷ್ಯಾರಾಷ್ಟ್ರಗಳ ಕನ್ನಡಿಗರು ನೆರೆದಿದ್ದರು. ಅವರೊಡನಾದ ಸ್ನೇಹ-ಪರಿಚಯ ಪರಸ್ಪರಕ್ರಿಯೆ ಬಹಳ ಕಾಲ ಉಳಿಯುವಂಥದು. ನಾನು ಬಹಳಷ್ಟು ವಿದೇಶಿ ಕನ್ನಡಿಗರನ್ನು ಪರಿಚಯಿಸಿಕೊಂಡು ಅವರ ದೇಶಗಳಲ್ಲಿ ಜರುಗುತ್ತಿರುವ ಕನ್ನಡ ಕಲಿಸುವಂಥ ಶಾಲೆಗಳ ಬಗ್ಗೆ, ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡೆ. ನಾವು ರಾಜ್ಯ ದೇಶ ಬಿಟ್ಟುಹೋಗಿದ್ದರೂ, ನಮ್ಮ ಕನ್ನಡ ನಮ್ಮೆಲ್ಲರನ್ನೂ ಒಂದುಗೂಡಿಸುತ್ತಿರುವ ಪರಿ ಎಲ್ಲರಿಗೂ ಅಗಾಧ ಸಂತಸ ತಂದಿರುವುದನ್ನ ಎಲ್ಲರಲ್ಲೂ ಕಂಡೆ. ಮುಂದೆ ನಾವೆಲ್ಲ ಸೇರಿ ಯಾವ ರೀತಿಯ ಕೊಡುಗೆ ಕೊಡಲು ಸಾಧ್ಯ ಅನ್ನುವುದನ್ನು ಕೂಲಂಕಶವಾಗಿ ಚರ್ಚಿಸಿ ಕಾರ್ಯಗತ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ ಕನ್ನಡ ಸಾಹಿತ್ಯ ಸಮ್ಮೇಳನ.

ಒಟ್ಟಿನಲ್ಲಿ ಈ ಸಮ್ಮೇಳನ ನನಗೊಂದು ಅಪೂರ್ವ ಅನುಭವ!

- ನವೀನ
*******************************************
ಆಕಾಶದ  ಆಶೆ -ಹೊಸ ವರುಷಕೆ!

(ಮುನ್ನುಡಿ: ಹೊಸವರ್ಷವೆಂದರೆ ನನಗೆ ಅದರಲ್ಲಿ ಕಂಡಿದ್ದು ಬರೇ ಅಂದಿನ ಮೈಮರೆತಂತ ಗಳಿಗೆಗಳಲ್ಲ; ಆದರೆ ಹಿಂದಿನ ದಿನಗಳ ನೋವು, ಮುಂದಿರುವ ಅನಿರ್ದಿಷ್ಟದ ಚಿಂತೆ. ಹಾಗೆಯೇ ಸಮತೋಲನದಲ್ಲಿ ಅವಲೋಕಿಸಿದಾಗ, ನನ್ನ ಮನಸ್ಸಿನಲ್ಲಿ ಆನಂದದಕ್ಕಾಗಿ ಆಕಾಶ ಬಯಸಿದ್ದೇನಿರಬಹುದೆಂಬ ಆ ಅವಲೋಕನದ ಚಿತ್ರಣ ಇಲ್ಲಿರಬಹುದು, ನೋಡಿ ತಿಳಿಸಿ; ಆದಿ-ಅಂತ್ಯಗಳ ನಡುವೆ ತುಂಬಿ ಸಂಬಂಧ ಕಲ್ಪಿಸಿದ್ದು ಅಂತರಂಗದ ಗಂಗೆ ಹರಿದು ಮಂದಹಾಸದಲ್ಲಿ ಮನೆಮಾಡಿದಂತಿತ್ತು, ಎನ್ನುವ ಭಾವವನ್ನು ಹಿಡಿಯಲು ಮಾಡಿದ ನನ್ನ ಕಿರು ಪ್ರಯತ್ನ, ನಿಮಗೆ ಹೇಗನ್ನಿಸಿತೋ ಕೇಳುವ ಕುತೂಹಲ! ಸಹನೆಯಿಂದ ಓದಿ ಪ್ರತಿಕ್ರಿಯಿಸುವಿರೆಂದು ನಂಬಿದ್ದೇನೆ – ಗೋಪಾಲಕೃಷ್ಣ ಹೆಗ್ಡೆ)

*****************************

ನೋವಿನಲ್ಲಿ ಕೂಡಿತ್ತೆ ೨೪ರ ಇತಿಹಾಸ?
ಮತ್ತೆ
ನಾಡೆಲ್ಲ ನೋಡಲಿಕ್ಕಿದೆ ೨೫ರ ಪರದೆ-
೨೬ಕ್ಕೆ ಮೊದಲು ಪರದಾಟ,
ನಂಬಲಾರದ ಸತ್ಯ
ಗೊತ್ತಿದ್ದರೂ
ಮೊದಲ ದಿವಸವೇ ಹೊಸವರುಷವನ್ನೆಲ್ಲ
ಬೊಗಸೆಯಲ್ಲಿ ಬಿಗಿದಿಟ್ಟ- ಒಂದನೇ ( ಒಂದೇ)
ದಿನದ ಇದು ಎಂಥಾ ವಿಪರ್ಯಾಸ-ಆಭಾಸ
ಸುಗ್ಗಿ ಕೋಲಾಟ !

ಯಾಕೋ ಈ ಮೌನದಲಿ
ಮೂಡಿದೆ ಮಂದಹಾಸ
- ಹಾರಿರುವೆ ಗರಿಬಿಚ್ಚಿ ಅರಳಿದ
ನೀ,
ನನ್ನ ನೀಲಿ ಆಕಾಶದ ಆಶೆ
ತೋರಿಸಿದೆ ದಿಗಂತ- ಅವಕಾಶ
ಮತ್ತೆ- ಮತ್ತೆ
ಹೀಗೆ
ಆಶಿಸಿಸಿದೆ ನೀಲಿತುಂಬಿರಲಿ - ಶುಭ್ರ
ಅಂತರಂಗ ಅದು
ನಿತ್ಯಾನಂದ, ಕಾವ್ಯಾನಂದದಂತಿರಲಿ
ಸದಾ ಈ ಬ್ರಹ್ಮಾಂಡ ಗುಂಡಿ
ಬಂಡಿ -
ಉಕ್ಕುತ್ತಿರಲಿ
ಸದಾ ಚೆಂದ ತಂದ ಅದು
ಬ್ರಹ್ಮಾನಂದ ಆಗಲಿ,
ಆದಿ - ಅಂತ್ಯಗಳ
ನಡುವೆ
ತುಂಬಿ ಈ,
ಅಂತರಂಗ - ಗಂಗೆ
ಹರಿಯಲಿ ಹರಿದ್ವಾರ
ವರ್ಷತುಂಬ 🙏💐🎊

- ಗೋಪಾಲಕೃಷ್ಣ ಹೆಗ್ಡೆ
*******************************************
ದೇವ - ದಾನವರಿಲ್ಲ, ಸಮುದ್ರಮಥನವೂ ಇಲ್ಲ;
ಹಾಲಾಹಲವಂತೂ ಮೊದಲೇ ಇಲ್ಲ.
ಲಕ್ಷ್ಮೀ ಚಂದ್ರರು ಇಲ್ಲ,
ಧನ್ವಂತರಿಯ ಸುಳಿವಿಲ್ಲ;
ಅಮೃತ ಕಲಶವದೊಂದೇ ಇರುವುದಲ್ಲ!
ಕೇಳು ಜನಮೇಜಯ, ಒಳ್ಳೆಯದ ಹೊರತರಲು ಉಳಿದೆಲ್ಲ ಬೇಕಿಲ್ಲ,
ಮನವದೊಂದಿದ್ದರೆ ಸಾಕಲ್ಲ!

- ಲಕ್ಷ್ಮೀನಾರಾಯಣ ಗುಡೂರ.
*******************************************