ಕೃಷ್ಣೆ – ತುಂಗೆಯರ ನಾಡಿನಲ್ಲಿ ಹರಿದಾಸಸಾಹಿತ್ಯ – ಕೆಲವು ಅಂಶಗಳು.

****************************

ಸಾಹಿತ್ಯದ ಮೂಲ ಉದ್ದೇಶವೇ ಜೀವನದ ಮೌಲ್ಯಗಳನ್ನು ತಿಳಿಸಿ ಸಾಮಾನ್ಯರ ಬದುಕನ್ನು ಉದಾತ್ತಗೊಳಿಸುವುದು.  ಕನ್ನಡ ಸಾಹಿತ್ಯದಲ್ಲಿ ಈ ಉದ್ದೇಶ ಶಿವಶರಣರಿಂದಲೂ ಹರಿದಾಸರಿಂದಲೂ ಸಾಧಿತವಾಗಿರುವುದನ್ನು ಕಾಣುತ್ತೇವೆ. ಹರಿದಾಸರ ಸಾಧನೆ ಮೂಲವಾಗಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಆದರೂ ಅವರು ಸಾಮಾಜಿಕ ಜೀವನವನ್ನು ಕಡೆಗಣಿಸಿದವರಲ್ಲ. ಕಾವ್ಯ ಸೃಷ್ಟಿ ಮಾಡುವ ಕವಿ ಸಮಾಜದಿಂದಲೇ ಮೂಡಿ ಬಂದಿರುತ್ತಾನೆ, ಆದ್ದರಿಂದ ಸಮಾಜವನ್ನು ಬಿಟ್ಟು ಪ್ರತ್ಯೇಕವಾಗಿ ಉಳಿದ ಸಾಹಿತ್ಯಕ್ಕೆ ಇಲ್ಲಿ ಅಸ್ತಿತ್ವ ಇಲ್ಲ. ಕಾವ್ಯ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಸಮಾಜ ಮತ್ತು ಸಾಹಿತ್ಯಗಳ ಸಂಬಂಧ ಜೀವಂತವಾಗಿ, ಪರಸ್ಪರ ಪೂರಕವಾಗಿ ಇರಬೇಕಾದ ಅಗತ್ಯ ಇದೆ. 

ಕರ್ನಾಟಕದಲ್ಲಿ ಭಕ್ತಿಯ ಹೊನಲನ್ನು ಜನಸಾಮಾನ್ಯರ ಭಾಷೆ ಕನ್ನಡಕ್ಕೆ ತಂದ ಯಶಸ್ಸು ಶರಣರ ವಚನಗಳು ಮತ್ತು ದಾಸರ ಸಾಹಿತ್ಯಕ್ಕೆ ಸಲ್ಲುತ್ತದೆ. ವಚನಕಾರರ ಮೂಲ ಕಾಳಜಿ ಸಾಮಾಜಿಕವಾಗಿದ್ದರೆ, ದಾಸಸಾಹಿತ್ಯದ ಪ್ರಮುಖ ಧ್ಯೇಯ ಭಕ್ತಿಸಿದ್ಧಾಂತವಾಗಿತ್ತು ಅನ್ನುವುದು ಸ್ಪಷ್ಟ.
ಧರ್ಮದ ಮೂಲಕ ಸಮಾಜವನ್ನು ಕಾಣಲು, ತಿದ್ದಲು ಶರಣರು ಮತ್ತು ದಾಸರು ಈ ಅಗತ್ಯವನ್ನು ಮನಗಂಡರು. ಧರ್ಮ ಮುಖ್ಯ ಮಾಧ್ಯಮವಾದರೆ ಸಮಾಜ ಚಿಂತನೆ ಇವರ ಮುಖ್ಯ ಕಾಳಜಿಯಾಗಿದೆ. ಅಂಧಾಚರಣೆಯ ನಿರ್ಮೂಲನ, ವ್ಯಕ್ತಿತ್ವ ನಿರ್ಮಾಣ, ತನ್ಮೂಲಕ ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೆ ಶರಣರು ಮತ್ತು ದಾಸರು ಯತ್ನಿಸಿದರು. ಈ ಯತ್ನದ ಕಾರಣವಾಗಿ ವಚನಗಳು, ಕೀರ್ತನೆಗಳು, ಸುಳಾದಿ ಮತ್ತು ಉಗಾಭೋಗಗಳು ಮೂಡಿಬಂದವು. ಭಕ್ತಿಸಿದ್ಧಾಂತದ ಜೊತೆಗೆ ಸಚ್ಚಾರಿತ್ರ್ಯ, ಸದಾಚಾರ ಹಾಗೂ ಸಾತ್ವಿಕ ಜೀವನದ ಕಡೆಗೂ ಈ ಸಾಹಿತ್ಯದ ಹರಿವಿದೆ. ಲೋಕ ನೀತಿಯ ಮಾತುಗಳಲ್ಲಿ ಸುಖಜೀವನದ ಸಂದೇಶ ನೀಡುವ ಮೂಲಕ ಸಾರ್ಥಕ ಬದುಕಿನ ಕರೆ ನೀಡಿದ್ದಾರೆ ಎನ್ನುವುದೂ ಸತ್ಯ.

ದಾಸ ಸಾಹಿತ್ಯದಲ್ಲಿ ಹಲವಾರು ರೀತಿಯ ರಚನೆಗಳಿವೆ – ಕೀರ್ತನೆಗಳು, ಸುಳಾದಿ, ಉಗಾಭೋಗಗಳು ಮುಖ್ಯವಾದವು. ಇವೆಲ್ಲ ರಚನೆಗಳು ಮೂಲವಾಗಿ ಸಂಗೀತಕ್ಕೆ ಒಳಪಡುವ ರೂಪದಲ್ಲಿವೆ. ಸುಳಾದಿ ಮತ್ತು ಉಗಾಭೋಗಗಳಿಗೆ ವಚನಸಾಹಿತ್ಯ ಪ್ರಕಾರದ ಪ್ರೇರಣೆ ಇರಬಹುದು ಎನ್ನುವ ಮಾತಿದೆ. ಇನ್ನು ಹಲವರ ಪ್ರಕಾರ ಶಿವಶರಣರ ವಚನಗಳು ಉಕ್ತಿಗಳು, ದಾಸಸಾಹಿತ್ಯ ಗೇಯ ಪ್ರಕಾರ - ಹೀಗಾಗಿ ಸಂಗೀತದ ಛಾಯೆರುತ್ತದೆ ಎನ್ನುವುದು. ಸುಳಾದಿ ಮತ್ತು ಉಗಾಭೋಗಗಳಲ್ಲಿ ಧಾರ್ಮಿಕ ವಿಚಾರಗಳು, ಆಧ್ಯಾತ್ಮಿಕ ತತ್ವಗಳು ಮತ್ತು ದೈವ ಸ್ತುತಿಗಳ ನಿರೂಪಣೆ ಇದೆ. ಭಕ್ತನಾದವನ ಆರ್ತಭಾವ ಮತ್ತೂ ಅಂತರಂಗದರ್ಶನವು ಆಗುತ್ತದೆ.

ಕೃಷ್ಣ ತುಂಗೆಯರ ಮಧ್ಯದಲ್ಲಿರುವ ರಾಯಚೂರು ಜಿಲ್ಲೆ ಹಲವು ರೀತಿಯ ಕಲೆ ಸಾಹಿತ್ಯ. ಸಂಸ್ಕೃತಿಗಳ ನೆಲೆಬೀಡಾಗಿದೆ. ಹರಿದಾಸ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಹರಿದಾಸರ ತೊಟ್ಟಿಲು ಎಂದು ಹೆಸರಾಗಿದೆ.

ಹರಿದಾಸ ಸಾಹಿತ್ಯವನ್ನು ವಿದ್ವಾಂಸರು ಹಲವು ರೀತಿಗಳಲ್ಲಿ ವಿಭಾಗಿಸಿದ್ದಾರೆ. ಶ್ರೀ ರಾ. ಸ್ವಾ. ಪಂಚಮುಖಿಯವರ ಪ್ರಕಾರ 4 ಘಟ್ಟಗಳಿವೆ – 1. ಮಧ್ವಾಚಾರ್ಯರ ಶಿಷ್ಯ ನರಹರಿ ತೀರ್ಥರ ಕಾಲ, 2. ಕೃಷ್ಣದೇವರಾಯನ ಕಾಲ, 3. ವಿಜಯದಾಸರ ಮತ್ತು ಅವರ ಶಿಷ್ಯರ ಕಾಲ ಮತ್ತು 4. ನಂತರದ ಕಾಲ.

ಡಾ. ಆರ್ ಜಿ ಗುಡಿಯವರು ಇದನ್ನೇ 1. ಶ್ರೀಪಾದರಾಜಪೂರ್ವ ಯುಗ (ಕ್ರಿಶ 879-1450), 2. ಶ್ರೀಪಾದರಾಜಯುಗ (ಕ್ರಿಶ 1451-1565), 3. ವಿಜಯದಾಸಯುಗ (ಕ್ರಿಶ 1566-1809) ಮತ್ತು 4. ಶಿಷ್ಯ-ಪ್ರಶಿಷ್ಯ ಯುಗ (ಕ್ರಿಶ 1810 ರಿಂದ ಮುಂದೆ) ಎಂದು ವಿಭಾಗಿಸಿದ್ದಾರೆ.

ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕಾಲವನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ನರಹರಿತೀರ್ಥರಿಂದ ಪುರಂದರ-ಕನಕದಾಸರವರೆಗಿನ ಅವಧಿ, ವಿಜಯದಾಸರಿಂದ ಜಗನ್ನಾಥದಾಸರವರೆಗಿನ ಅವಧಿ ಮತ್ತು ಅವರ ಶಿಷ್ಯ-ಪ್ರಶಿಷ್ಯರ ಅವಧಿ.

ಕನ್ನಡದಲ್ಲಿ ರಚಿತವಾದ ಹರಿದಾಸಸಾಹಿತ್ಯದ ಮೂಲ ಮಧ್ವಾಚಾರ್ಯರ ಶಿಷ್ಯ ನರಹರಿತೀರ್ಥರಿಂದ (ಅಂಕಿತ: ನರಹರಿ / ರಘುಪತಿ) ಆರಂಭವಾದದ್ದು. ಅವರ ರಚನೆಗಳಲ್ಲಿ ನಾಲ್ಕು ಮಾತ್ರ ಈಗ ಲಭ್ಯವಿವೆ (ಎಂತು ಮರುಳಾದೆ, ತಿಳಕೋ ನಿನ್ನೊಳಗೆ ನೀನು, ಹರಿಯೇ ಇದು ಸರಿಯೇ ಮತ್ತು ಎದುರ್ಯಾರೊ ಗುರುವೇ).

ಅದರ ನಂತರದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳಿಂದ ಬತ್ತಿಹೋದಂತೆನಿಸಿದರೂ, ಅರವತ್ತು ಜನ ’ಆದ್ಯ’ರಿಂದ ಮಂದಗಾಮಿಯಾಗಿ ಮುಂದುವರೆಸಲ್ಪಟ್ಟಿತು (ಶ್ರೀ ಗೋರೆಬಾಳು ಹನುಮಂತರಾಯರು / ಕಪಟರಾಳ ಕೃಷ್ಣರಾಯರು). ಸಂಖ್ಯೆಯಲ್ಲಿ ಮಹತ್ವಪೂರ್ಣವಲ್ಲದಿದ್ದರೂ, ಈ ರಚನೆಗಳ ಪ್ರಭಾವ ಪುರಂದರ-ಕನಕರ ಮೇಲೆ ಆಗಿರುವುದಂತೂ ಸತ್ಯ ಎನ್ನುವುದು ವಿದ್ವಾಂಸರ ಅಭಿಪ್ರಾಯ.

ದಾಸಸಾಹಿತ್ಯವಾಹಿನಿ ಅಲ್ಲಿಂದ ಮುಂದೆ ತನ್ನ ಆಳ ವೈಶಾಲ್ಯತೆಗಳನ್ನು ಪಡೆದುಕೊಂಡದ್ದು ಎರಡು ನೂರು ವರ್ಷಗಳ ತರುವಾಯ ಶ್ರೀಪಾದರಾಜರ ಕಾಲದಲ್ಲಿ. ಮುಳುಬಾಗಿಲಿನ ಶ್ರೀಪಾದರಾಜರು ಶ್ರೀರಂಗವಿಟ್ಠಲ ಅನ್ನುವ ಅಂಕಿತದಲ್ಲಿ ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಅವನ್ನು ಪೂಜಾವಿಧಾನಗಳ ಅವಿಭಾಜ್ಯ ಅಂಗವಾಗಿ ಹಾಡಿಸಲೂ ಆರಂಭಿಸಿದರು.

ಶ್ರೀಪಾದರಾಜರ ಶಿಷ್ಯ ವ್ಯಾಸರಾಜರದು ಹರಿದಾಸಸಾಹಿತ್ಯದ ಅಭಿವೃದ್ಧಿಯಲ್ಲಿ ವಿಶೇಷ ಸ್ಥಾನವಿದೆ. ಸಿರಿಕೃಷ್ಣ ಅಂಕಿತದಲ್ಲಿ ಅವರು ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಕೀರ್ತನೆಗಳಿಗೆ ಸಂಗೀತ-ನರ್ತನಗಳ ಸಂಯೋಜನೆ ಇವರ ಕಾಲದಲ್ಲಿ ನಡೆದು, ಕೀರ್ತನೆಗಳು ಜನಪ್ರಿಯವಾದವು. ಮಠಾಧಿಪತಿಗಳೂ, ವಿಜಯನಗರದ ರಾಜಗುರುಗಳೂ ಆಗಿದ್ದ ವ್ಯಾಸರಾಜರು ವ್ಯಾಸಕೂಟ (ಸಂಸ್ಕೃತ ಗ್ರಂಥ-ವ್ಯಾಖ್ಯಾನಕಾರರು) ಮತ್ತು ದಾಸಕೂಟ (ಹರಿದಾಸಸಾಹಿತ್ಯಕಾರರು) ಎರಡಕ್ಕೂ ಸಂರಕ್ಷಕರಾಗಿದ್ದರು.

ವ್ಯಾಸರಾಜರ ಶಿಷ್ಯ ವಾದಿರಾಜರು ಸಂಸ್ಕೃತವಲ್ಲದೇ, ಕನ್ನಡದಲ್ಲೂ ಅನೇಕ ಕೃತಿಗಳನ್ನು ಹಯವದನ ಎಂಬ ಅಂಕಿತದಲ್ಲಿ ರಚಿಸಿದರು. ಜಾನಪದ ಸಾಹಿತ್ಯ ಪ್ರಕಾರಗಳನ್ನೂ ಅಳವಡಿಸಿಕೊಂಡರು ಅಲ್ಲದೇ ತುಳು ಭಾಷೆಯಲ್ಲೂ ರಚನೆಗಳನ್ನು ಮಾಡಿದರು.

ಈ ಹಂತದಲ್ಲಿದ್ದಾಗ, ದಾಸಸಾಹಿತ್ಯವನ್ನು ಶಿಖರಪ್ರಾಯವಾಗಿಸಿದ ಕೀರ್ತಿ ಪುರಂದರದಾಸರು ಮತ್ತು ಕನಕದಾಸರಿಗೆ ಸಲ್ಲಬೇಕು. ಅನೇಕ ಆಯಾಮಗಳಲ್ಲಿ ದಾಸಸಾಹಿತ್ಯದ ಬೆಳವಣಿಗೆ, ಜನಪ್ರಿಯತೆಗೆ ಕಾರಣವಾದ ವಿಜಯನಗರದ ಉಚ್ಛ್ರಾಯದ ಈ ಕಾಲ ’ದಾಸಸಾಹಿತ್ಯದ ಸುವರ್ಣಯುಗ’ ಎನ್ನಿಸಿಕೊಂಡಿತು.

ಅಪಾರ ಕೀರ್ತನೆಗಳನ್ನು, ಸುಳಾದಿಗಳನ್ನು, ಉಗಾಭೋಗ ಮತ್ತಿತರ ಪ್ರಕಾರಗಳನ್ನು ರಚಿಸುವ ಮೂಲಕ ಪುರಂದರದಾಸರು (ಪುರಂದರವಿಟ್ಠಲ) ದಾಸಸಹಿತ್ಯ-ಸಂಗೀತಕ್ಕೆ ಅಪಾರ ಕೊಡುಗೆ ನೀಡಿ ’ಕರ್ನಾಟಕ ಸಂಗೀತದ ಪಿತಾಮಹ’ ಎನ್ನಿಸಿದರು. ತಮ್ಮ ರಚನೆಗಳಲ್ಲಿ ಬುಡುಬುಡುಕೆ ಪದ, ಲಾವಣಿಯಂತಹ ಜಾನಪದ ಮಟ್ಟುಗಳನ್ನು ಧಾರಾಳವಾಗಿ ಬಳಸಿಕೊಂಡರು. ವೇದಾಂತ ಮತ್ತು ಜನಸಾಮಾನ್ಯರನ್ನು ಬೆಸೆದರು.

ಇವರ ಸಮಕಾಲೀನರಾದ ಕನಕದಾಸರು (ಕಾಗಿನೆಲೆಯಾದಿಕೇಶವ) ತಮ್ಮ ವಿಶಿಷ್ಟ ವ್ಯಕ್ತಿತ್ವ, ಕ್ರಾಂತಿಕಾರಿ ಧೋರಣೆ ಹಾಗೂ ಕಾವ್ಯಶಕ್ತಿಗಳಿಂದ ಮಹತ್ವದ ಸ್ಥಾನ ಪಡೆದವರು. ಒಗಟಿನಂತಿರುವ ’ಮುಂಡಿಗೆ’ ಎಂಬ ಹೊಸ ಕಾವ್ಯಪ್ರಕಾರವನ್ನು ದಾಸಸಾಹಿತ್ಯದಲ್ಲಿ ಸೇರಿಸಿದ್ದಲ್ಲದೇ, ಡೊಳ್ಳಿನ ಹಾಡು ಮತ್ತು ಕಣಪದಗಳ ರಚನೆಯಿಂದ ಜಾನಪದದ ಸೊಗಡನ್ನೂ ತಂದರು.

ವಿಜಯನಗರ ಸಾಮ್ರಾಜ್ಯದ ಪತನಾನಂತರ ದಾಸಸಾಹಿತ್ಯವು ತನ್ನ ಅವನತಿಯತ್ತ ಸಾಗಿತು. ಆ ಕಾಲದ ರಾಜಕೀಯ, ಸಾಮಾಜಿಕ ಅಸ್ಥಿರತೆಗಳ ಕಾವು ತಟ್ಟಿದರೂ, ಈ ಸಾಹಿತ್ಯವಾಹಿನಿಯು ಪೂರ್ತಿ ಬತ್ತದೇ ಹರಿಯುತ್ತಿತ್ತು ಅನ್ನುವುದಕ್ಕೆ ಬಿಜಾಪುರ (ಈಗಿನ ವಿಜಯಪುರ) ಪ್ರಾಂತದ ಕಾಖಂಡಕಿ ಮಹಿಪತಿರಾಯರು ಮತ್ತು ಅವರ ಮಗ ಕೃಷ್ಣರಾಯರಿಂದ ರಚಿತವಾದ ಅನೇಕ ಕೃತಿಗಳೇ ಸಾಕ್ಷಿ. ಕೋಲಾಟದ ಪದ, ಕೊರವಂಜಿಯ ಪದ, ಸುಗ್ಗಿಪದಗಳಂತಹ ಜಾನಪದ ಮಟ್ಟುಗಳು ಇವರ ರಚನೆಗಳಲ್ಲಿ ಕಂಡುಬರುತ್ತವೆ.

ಇಲ್ಲಿಂದ ಮುಂದೆ ಹರಿದಾಸಸಾಹಿತ್ಯಕ್ಕೆ ಮತ್ತೆ ಚಾಲನೆ ದೊರೆತದ್ದು ಮಂತ್ರಾಲಯದ ರಾಘವೇಂದ್ರರ (ಕೃಷ್ಣ) ಕಾಲದಲ್ಲಿ. ಹಂಪಿಯಲ್ಲಿ ಕೇಂದ್ರಿತವಾಗಿದ್ದ ಹರಿದಾಸಪಂಥದ ಕೇಂದ್ರ ಮಾನ್ವಿ, ಲಿಂಗಸೂಗೂರು, ಕಾಖಂಡಿಕಿ, ಮಳಖೇಡ ಮೊದಲಾದ ಊರುಗಳಿಗೆ ಹಬ್ಬಿ ಮತ್ತೆ ಬೆಳೆಯತೊಡಗಿತು. ಈ ಸಾಹಿತ್ಯಪ್ರಕಾರವನ್ನು ಮತ್ತೆ ವೈಭವಯುತವಾಗಿಸಿದ್ದು ರಾಯಚೂರು ಜಿಲ್ಲೆಯ ಚೀಕಲಪರವಿ ಗ್ರಾಮದ ವಿಜಯದಾಸರು (ವಿಜಯವಿಟ್ಠಲ). ಭಾವನಾಪ್ರಧಾನವಾಗಿದ್ದ ದಾಸಸಾಹಿತ್ಯ, ಇವರ ಕೃತಿಗಳಲ್ಲಿ ತತ್ವಪ್ರಧಾನವಾಗಿ ಕಂಡುಬರುತ್ತದೆ.

ವಿಜಯದಾಸರ ಸಮಕಾಲೀನರಾದ ಕಾಖಂಡಿಕಿ ಪ್ರಸನ್ನವೆಂಕಟದಾಸರು (ಪ್ರಸನ್ನವೆಂಕಟ), ಶಿಷ್ಯರಾದ ಭಾಗಣ್ಣ (ಗೋಪಾಲವಿಟ್ಠಲ), ತಿಮ್ಮಣ್ಣ (ವೇಣುಗೋಪಾಲ), ಮೋಹನದಾಸರು (ಮೋಹನವಿಠಲ), ಮತ್ತು ಕಲ್ಲೂರು ಸುಬ್ಬಣ್ಣ (ವ್ಯಾಸವಿಠಲ) ಇವರೆಲ್ಲ ತಮ್ಮ ತಮ್ಮ ಕೊಡುಗೆಗಳಿಂದ ದಾಸಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಇವರಲ್ಲಿ ಗೋಪಾಲದಾಸರು (ಭಾಗಣ್ಣ) ವಿಜಯದಾಸರ ತಾತ್ವಿಕವಿಚಾರಧಾರೆಯನ್ನು ಮುಂದುವರಿಸಿದ್ದಲ್ಲದೇ ಸಂಗೀತ, ನರ್ತನ, ಚಿತ್ರಕಲೆಗಳನ್ನೂ ಬಳಸಿಕೊಂಡರು. ಗೋಪಾಲದಾಸರಿಂದ ಪ್ರಭಾವಿತರಾದ ಅವರ ತಮ್ಮಂದಿರಾದ ಸೀನಪ್ಪ (ವರದಗೋಪಾಲವಿಠಲ), ದಾಸಪ್ಪ (ಗುರುಗೋಪಾಲವಿಠಲ), ರಂಗಪ್ಪ (ತಂದೆಗೋಪಾಲವಿಠಲ) ಮತ್ತು ಶಿಷ್ಯ ಐಜಿ ವೆಂಕಟರಾಮಾಚಾರ್ಯ (ವಾಸುದೇವವಿಠಲ) ಅವರೂ ಸಹ ತಮ್ಮನ್ನು ಸಾಹಿತ್ಯಸೇವೆಯಲ್ಲಿ ತೊಡಗಿಸಿಕೊಂಡರು.

ಗೋಪಾಲದಾಸರ ಹೆಸರನ್ನು, ಪರಂಪರೆಯನ್ನು ಉಳಿಸಿದವರಲ್ಲಿ ಜಗನ್ನಾಥದಾಸರು (ಜಗನ್ನಾಥವಿಠಲ) ಪ್ರಮುಖರು. ದಾಸಸಾಹಿತ್ಯ ಪ್ರಕಾರಗಳನ್ನಲ್ಲದೆ ಕನ್ನಡದಲ್ಲಿ ದೊಡ್ಡ ಗ್ರಂಥಗಳನ್ನೂ ರಚಿಸಿದ್ದಾರೆ.

ಅಲ್ಲಿಂದ ಮುಂದೆ, ಹರಿದಾಸಪರಂಪರೆ ಸಾಗಿಬಂದ ದಾಸಪರಂಪರೆಯಲ್ಲಿ ಅನೇಕರು ತಮ್ಮ ಸೇವೆ ಸಲ್ಲಿಸಿದ್ದಾರೆ, ಅವರಲ್ಲಿ ಪ್ರಾಣೇಶದಾಸರು (ಪ್ರಾಣೇಶವಿಠಲ) ಮತ್ತು ಅವರ ಶಿಷ್ಯರ ಪರಂಪರೆಯನ್ನು ಜೀವಂತವಾಗಿಟ್ಟಿರುವ ಅನೇಕ ಹರಿದಾಸರಿದ್ದಾರೆ - ಎಮ್ ಆರ್ ಗೋವಿಂದರಾವ್ (ಗುರುಗವಿಂದವಿಠಲ), ಆರ್ ರಾಮಚಂದ್ರರಾಯರು (ತಂದೆವೆಂಕಟೇಶವಿಠಲ), ಕೋಸಗಿ ಸ್ವಾಮಿರಾಮಾಚಾರ್ಯ (ಶ್ರೀಗುರುಜಗನ್ನಾಥವಿಠಲ), ವಕೀಲ ಸ್ವಾಮಿರಾಯರು (ವರದೇಶವಿಠಲ), ಜೋಳದಹೆಡಗಿ ಶೇಖ್ ಬಡೇಸಾಬ್ (ರಾಮದಾಸ), ವಕೀಲ ಜಿ ಮಧ್ವರಾವ್ (ಮಧ್ವಮುನಿ), ಹೇರೂರು ರಾಮರಾಯರು (ಮೂಲರಾಮ), ಗುರುರಾಜ ಬೆಣಕಲ್ (ನರಹರಿ) ಮತ್ತಿನ್ನೂ ಅನೇಕರನ್ನು ನಾವು ನೆನೆಯಬಹುದು.
ದಾಸಸಾಹಿತ್ಯದಲ್ಲಿ ಮಹಿಳೆಯರು:
ದೈನಂದಿನ ಕಾರ್ಯಕಲಾಪದೊಂದಿಗೆ ದಾಸರ ರಚನೆಗಳನ್ನು ಹಾಡಿಕೊಂಡು ಉಳಿಸಿಕೊಂಡು ಬಂದಿರುವಂತೆಯೇ, ದಾಸಸಾಹಿತ್ಯದ ರಚನೆಯಲ್ಲೂ ಮಹಿಳೆಯರ ಗಮನಾರ್ಹ ಪಾತ್ರವಿದೆ.
ಮೊದಲ ಘಟ್ಟದಲ್ಲಿ ಪುರಂದರ ದಾಸರ ಹೆಂಡತಿ ಸರಸ್ವತೀಬಾಯಿ (ಸಿರಿಪುರಂದರವಿಠಲ) ಮತ್ತು ಮಗಳು ರುಕ್ಮಿಣೀಬಾಯಿ (ತಂದೆಪುರಂದರವಿಠಲ) ಕೃತಿರಚನೆ ಮಾಡಿದ್ದರೆನ್ನಲಾಗಿದ್ದರೂ, ಅವರ ಕೃತಿಗಳು ಈಗ ಉಪಲಬ್ಧವಿಲ್ಲ.

ದ್ವಿತೀಯ ಘಟ್ಟದಲ್ಲಿ ಶ್ರೀರಾಮೇಶ ಅಂಕಿತದೊಂದಿಗೆ ಮುಯ್ಯದ ಪದಗಳು, ಬೀಗರಹಾಡು, ಮೋರೆಗೆ ನೀರು ತಂದ ಹಾಡು ಇತ್ಯಾದಿ ಗಲಗಲಿ ಅವ್ವನವರ ಕೊಡುಗೆ. ಅವರ ಶಿಷ್ಯೆಯಾದ ಭಾಗಮ್ಮ ಅಥವಾ ಪ್ರಯಾಗವ್ವ ಕನ್ನಡದಲ್ಲಿ ಭಾಗವತದ 3ನೆಯ ಸ್ಕಂದ ಬರೆದರು.

ದಾಸಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ಮಹಿಳೆಯರನ್ನು ನೆನೆಯುವಾಗ, ಹೆಳವನಕಟ್ಟೆ ರಂಗ ಅನ್ನುವ ಅಂಕಿತದಲ್ಲಿ ವಿಪುಲವಾಗಿ ಸಾಹಿತ್ಯಸೃಷ್ಟಿ ಮಾಡಿದ ಗೋಪಾಲದಾಸರ ಶಿಷ್ಯೆಯಾದ ಹೆಳವನಕಟ್ಟೆ ಗಿರಿಯಮ್ಮನವರನ್ನು ಮರೆಯುವ ಹಾಗೆಯೇ ಇಲ್ಲ.

ಭೀಮೇಶಕೃಷ್ಣ ಅಂಕಿತದೊಂದಿಗೆ ಅನೇಕ ರಚನೆಗಳನ್ನು ಮಾಡಿದ ಹರಪನಹಳ್ಳಿ ಭೀಮವ್ವನ ಸರಳ ಶೈಲಿಯ ಜನಪ್ರಿಯ. ಅನೇಕ ಪೌರಾಣಿಕ ಕಥೆಗಳನ್ನು ಸರಳಕನ್ನಡದ ಹಾಡುಗಳಾಗಿ ಪರಿವರ್ತಿಸಿದ ಕೀರ್ತಿ ಭೀಮವ್ವನಿಗೆ ಸಲ್ಲುತ್ತದೆ. ಶ್ರಾವಣ ಶುಕ್ರವಾರದ ಹಾಡು, ಶನಿವಾರದ ಹಾಡು ಇತ್ಯಾದಿ ಭೀಮವ್ವನ ಕೃತಿಗಳು ಶ್ರಾವಣಮಾಸದಲ್ಲಿ ಇಂದಿಗೂ ಹಾಡಲ್ಪಡುತ್ತವೆ.

ಈ ಪಟ್ಟಿಗೆ, ಚೆಲ್ಲಮ್ಮ, ಗಣಪಕ್ಕ, ಸುಂದರಾಬಾಯಿ, ಪನ್ನಿ ಲಕ್ಷ್ಮೀಬಾಯಿ, ಲಕ್ಷ್ಮೀದೇವಮ್ಮ ಮುಂತಾದವರೂ ಸೇರುತ್ತಾರೆ. ತಡವಾಗಿಯಾದರೂ ಸ್ವತಃ ಕೃತಿರಚನೆಗೆ ಕೈಹಾಕಿದ ಮಹಿಳೆಯರ ಕೊಡುಗೆಯಿಂದ ದಾಸಸಾಹಿತ್ಯದ ಹರವು, ಆಳ ಹೆಚ್ಚಿದವು ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.

********************************

ಒಟ್ಟಿನಲ್ಲಿ ಕನ್ನಡ ಹರಿದಾಸ ಸಾಹಿತ್ಯವು ವಿಷಯ, ರೂಪ, ಭಾಷೆ, ಪರಿಣಾಮಗಳೆಲ್ಲದರಲ್ಲೂ ವೈಶಿಷ್ಟ್ಯತೆಯನ್ನು ಸಾಧಿಸಿ ಇಂದಿಗೂ ಜೀವಂತವಾಗಿದೆ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ. ಕರ್ನಾಟಕದ ಎಲ್ಲ ಭಾಗಗಳ ಮಹನೀಯರ ಕೊಡುಗೆ ಇದೆಯೆನ್ನುವುದು ಎಷ್ಟು ಸತ್ಯವೋ, ಅದರ ಸಿಂಹಪಾಲು ಕೃಷ್ಣೆ-ತುಂಗೆಯರ ತೀರದ ಪ್ರದೇಶಗಳದ್ದು ಅನ್ನುವುದೂ ಅಷ್ಟೇ ದಿಟ.

ಮೂಲ ಕೃತಿಯ ಲೇಖಕಿ: ಶ್ರೀಮತಿ ಸೀತಾ ಗುಡೂರ್-ಕುಲಕರ್ಣಿ
ಸಾರ ಇಳಿಸಿದವರು: ಲಕ್ಷ್ಮೀನಾರಾಯಣ ಗುಡೂರ್

********************************

ಹೀಗೊಂದು (ಹಾಳು) ಹರಟೆ

ನಮಸ್ಕಾರ ಅನಿವಾಸಿ ಬಂಧುಗಳಿಗೆ. ತಮಗೆಲ್ಲ  ಅಕ್ಷಯತೃತೀಯಾ ಹಾಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.
‘ಭಕ್ತಿ ಇಲ್ಲದ ಬಡವನು ನಾನಯ್ಯ
ಕಕ್ಕಯ್ಯನ ಮನೆಯಲೂ ಬೇಡಿದೆ,
ದಾಸಯ್ಯನ ಮನೆಯಲೂ ಬೇಡಿದೆ,
ಚೆನ್ನಯ್ಯನ ಮನೆಯಲೂ ಬೇಡಿದೆ,
ಎಲ್ಲ ಪುರಾತನರು ನೆರೆದು
ಭಕ್ತಿ ಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು
ಕೂಡಲ ಸಂಗಮದೇವಾ’.
ವಚನದಲ್ಲಿ ನಾಮಾಮೃತ ತುಂಬಿದ ಬಸವಣ್ಣನವರನ್ನು ತುಂಬು ಮನದಿಂದ ನೆನೆಯೋಣ. ಲೋಕದ ಡೊಂಕ ತಿದ್ದುವ ಉಸಾಬರಿ ಬಿಟ್ಟು ನಮ್ಮ ನಮ್ಮ ತನುವ- ಮನವ ಸಂತೈಸಿಕೊಂಡು , ಇವನಾರವ ಎನ್ನದೇ ಇವ ನಮ್ಮವ ಎಂದು ಜಗವನಪ್ಪಿಕೊಂಡು ಜಗದೀಶನಿಗೆ ಪ್ರಿಯರಾಗೋಣ. ಏನಂತೀರಿ?
ಇಂದಿನ ಓದಿಗಾಗಿ ಹಳೆಯ ಹರಟೆಯೊಂದನ್ನು ನಾನು ಹಂಚಿಕೊಳ್ಳುತ್ತಿರುವೆ. ಓದಿ ನಿಮ್ಮ ಅನಿಸಿಕೆಗಳನ್ನು ನೀವು ಹಂಚಿಕೊಳ್ಳಿ.

~ ಸಂಪಾದಕಿ

ಆಕಳಿಕೆ – ತೂಕಡಿಕೆ

‘ಸಮಯಾ ಸಮಯವುಂಟೇ ಭಕ್ತವತ್ಸಲ ನಿನಗೆ’ಅಂತ ಕನಕದಾಸರು ಹಾಡಿದ್ಹಂಗ ಈ ಆಕಳಿಕಿಗೆ ಸಮಯಾಸಮಯ ಅಂತ ಏನೂ ಇಲ್ಲ...ಕಾರ್ಯಕಾರಣ ಸಂಬಂಧವೂ ಇಲ್ಲ.ಎಲ್ಲೆ ಬೇಕಾದರೂ ಯಾವಾಗ ಬೇಕಾದ್ರೂ ಬಂದಬಿಡತಾವ;ಮಾನ ಕಳೆದುಬಿಡತಾವ.ಯಾವುದರೇ ಕಾರ್ಯಕ್ರಮದಾಗ ಭಾಷಣಕಾರರು ಗಂಭೀರವಾಗಿ ವಿಷಯ ಮಂಡಸೂ ಮುಂದ ಮುಂದಿನ ಸೀಟಿನಾಗ ವಕ್ಕರಿಸಿದ ನೀವು  ‘ಆsss’ಅಂತ ಆಕಳಿಸಿ ಬಾಯಾಗs ವಿಶ್ವರೂಪ ತೋರಿಸಿದ್ರ ಎದುರಿಗಿನವರು ಕಕ್ಕಾಬಿಕ್ಕಿ ಆಗಿಬಿಡತಾರರೀ..ಕ್ಲಾಸ್ ರೂಮ್ ನಾಗ ಟೀಚರ್ ಏನೋ ಗಹನವಾದ ವಿಷಯವನ್ನು ನಿಮ್ಮ ತಲೆಬುರುಡಿನಾಗ ತುಂಬಲಿಕ್ಕೆ ಅಂತ ಹರಸಾಹಸ ಮಾಡಕೋತ ಹೆಣಗಾಡತಿರಬೇಕಾದ್ರ ನೀವು’ಆsss’ ಅಂತ ಆಕಳಿಸಿದ್ರ ಅವರ ಸಿಟ್ಟು ನೆತ್ತಿಗೇರಿ ನಿಮ್ಮನ್ನು ಸ್ಟ್ಯಾಂಡ್ ಅಪ್ ಆನ್ ದ ಬೆಂಚೋ ಇಲ್ಲ ಗೆಟ್ ಔಟ್‌ ಫ್ರಾಮ್ ಮೈಕ್ಲಾಸೋ ಖಂಡಿತ ಮಾಡಿಬಿಡತಾರರೀ. ಇನ್ನ ಕೆಲವೊಮ್ಮೆ ವಯಸ್ಸಾದ ಹಿರಿಯರು ನೀವು ಮಾತಿಗೆ ಸಿಕ್ಕದ್ದೇ ತಡ ತಮ್ಮ ಪುರಾನಾ ಜಮಾನಾದ ಪುರಾಣದ ಕಂತಿ ಬಿಚ್ಚಿದ್ರು ಅಂದ್ರ...ನಿಮ್ಮೂ ಶುರುವಾಗತಾವ ಆಕಳಿಕಿ ಸಾಲಾಗಿ.ಆದ್ರ ಪಾಪ! ಕೆಲವೊಬ್ಬರಂತೂ ಅವನ್ನ ಸಂಪೂಣ೯ ದಿವ್ಯನಿಲ೯ಕ್ಷ್ಯ ಮಾಡಿ ತಮ್ಮ ಕಥಿ ಹಂಗೇ ಮುಂದುವರೆಸಿರತಾರ ಅನ್ರಿ..ನೀವೋ ಆಕಳಿಸಿ ಆಕಳಿಸಿ ಬಾಯಿನೋವು ಬಂದು ಕಣ್ಣೀರು ಕಪಾಳಕ್ಕ ಹರಿಸಿ ದಣಿಯುತ್ತೀರಿ.ಮತ್ತ ಯಾವಾಗರೇ ಯಾರದರೇ  ಪರಿಚಿತರ ಮನಿಗೆ ಹೋಗಿರತೀರಿ ಅಂತಿಟ್ಟುಕೋರಿ.ಅವರ ಮನ್ಯಾಗ ಆಗಷ್ಟೇ  ಮಗಂದೋ ,ಮಗಳದೋ ಮದುವಿ ಆಗಿರತದ..ಮದುವಿ ಫರಾಳ ತಿನ್ನಲಿಕ್ಕೆ ಕೊಡದಿದ್ದರೂ ಸರಿ ಮದುವಿ ಆಲ್ಬಂ- ವಿಡಿಯೋ ತಪ್ಪಲಾರದ ತೋರಸತಾರ.ಆ ಹುಡುಗನೋ ಹುಡುಗಿನೋ ಬಿಟ್ರ ನಿಮಗ ಯಾರೂ ಗೊತ್ತಿರಂಗಿಲ್ಲ..ಆದ್ರೂ ಮೂರಮೂರ ತಾಸು ಕೂತ ಅದನ್ನ ನೋಡ ಅಂದ್ರ ಆಕಳಿಕಿ ಬರದ s ಬಿಟ್ಟಾವ?!
ಹೀಂಗ ಆಕಳಿಸೋದು ಸಭ್ಯತೆ ಅಲ್ಲ ಅಂತ ನಾನೂ ಒಪ್ಪಗೋತಿನಿ.ಆದ್ರ ಅವುಗಳ ನಿಯಂತ್ರಣ ನಮ್ಮಕೈಯಾಗ ಇಲ್ಲ ಅಲ್ರೀ.ತಮ್ಮ ಮನಸ ಬಂದಾಗ ಹಿಂದಮುಂದ ಏನೂ ಸೂಚನೆ ಕೊಡದ ಧಬಕ್ ಅಂತ ಬಂದಿಳಿಯೋ ಅತಿಥಿಗಳಗತೆ ನುಗ್ಗಿ ಬಂದ್ರ ಅದರಾಗ ನಮ್ಮ ತಪ್ಪೇನದ ಅಲ್ಲೇನ್ರಿ? ಇದೆಲ್ಲ ಎಲ್ಲಾರಿಗೂ ಗೊತ್ತಿದ್ರೂ ನಾವು ಮಾತಾಡೂಮುಂದ ಎದುರಿಗಿನವರು ಆಕಳಿಸಿದ್ರ ನಮ್ಮ ಕಣ್ಣು ಕೆಂಪಾಗೋದಂತೂ ಗ್ಯಾರಂಟಿ .ಎಷ್ಟೋ ಸಲ ನಾನೇ ನನ್ನ ಮಕ್ಕಳಿಗೆ ಬಯ್ಯತಿರತೀನಿ...’ನಾನಿಲ್ಲೆ ಗಂಟಲ ಒಣಗಿಸಿಕೊಂಡು ,ತಲಿ ಕೆಡಿಸಿಕೊಂಡು ಇಷ್ಟ ಸೀರಿಯಸ್ಸಾಗಿ ಏನೋ ಹೇಳಲಿಕ್ಹತ್ತೀನಿ..ನೀವು ಆಕಳಿಸಕೋತ ಹೆಂಗ ಕೂತೀರಿ ನೋಡ್ರಿ ನಿಲ೯ಜ್ಜರ ಹಂಗ ‘ಅಂತ.
ಕಳೆದ ಸಲ ವಲ್ಡ್೯ ಕಪ್ ಮ್ಯಾಚ್ ನಡದಾಗ ಪಾಕಿಸ್ತಾನದ ಕ್ರಿಕೆಟ್ ಟೀಮಿನ ಕಪ್ತಾನ್ ಸರಫರಾಜ್ ಆಕಳಿಸಕೋತ ಕೂತಿದ್ದು ಒಂದು ಬ್ರೇಕಿಂಗ್ ನ್ಯೂಸೇ ಆಗಿಬಿಟ್ಟಿತ್ತಲಾ....ಪಾಪ! ಅವರೂ ಮನಷಾರೇ.ಇಷ್ಟೆಲ್ಲಾ ಹಗಲೂ ರಾತ್ರಿ ಪ್ರಾಕ್ಟೀಸ್ ಮಾಡಿ ಆಡೂಮುಂದಾಗ ಸೋಲೂ ಹಂತದಾಗ ಬ್ಯಾಸರಕೀಲೇ ಒಂದು ಆಕಳಿಸೋ ಸ್ವಾತಂತ್ರ್ಯನೂ ಅವರಿಗಿಲ್ಲ ಅಂದ್ರ ಹೆಂಗರೀ?
ಇನ್ನ ಆಫೀಸಿನಾಗ ಬಾಸ್ ಏನರೇ ಲೆಕ್ಚರ್ ಕೊಡೂಮುಂದ ಆಕಳಿಸಿದ್ರೋ ಮುಗೀತು.ನಿಮ್ಮ ಭತ್ಯೆ ಕಟ್ ಅಂತನೇ ಲೆಖ್ಖ.ಮುಂದ ನಿಮಗ್ಯಾವ ಸಿ.ಎಲ್.ಸ್ಯಾಂಕ್ಷನ್ ಆಗಂಗಿಲ್ರಿ.ನಿಮ್ಮ ಆಕಳಿಕೆ ಸೀದಾ ಅವನ ಅಹಂನ್ನೇ ನುಂಗಿಬಿಟ್ಟಿರತದ.ಅದಕ್ಕಽ ಎಚ್ಚರಿಕೆಲೆ ಇರಬೇಕು.ಆದ್ರ ಮಜಾ ಅಂದ್ರ ಯಾವಾಗ ನೀವು ಎಚ್ಚರಕಿಲೇ ಇರಬೇಕು ಅನಕೋತಿರೋ ಅವಾಗೇ ಇವುಗಳ ಹಾವಳಿ ಭಾಳ ಇರತದ.ಬೆಳತನಕಾ ದೋಸ್ತ್ ರ ಜೋಡಿ ಹರಟಿ ಹೊಡಿಯೂಮುಂದ ,ರಾತ್ರೆಲ್ಲ ನಿದ್ದಿಗೆಟ್ಟು ಓಣ್ಯೋಣಿ ತಿರಗೂಮುಂದ,ಟಿವಿ ಮುಂದ ಕೂತು ಸುಟ್ಟು ಸುಡುಗಾಡು ಸಿನೆಮಾ ನೋಡೂಮುಂದ,ಮೊಬೈಲ್ ನಾಗ ಕ್ಯಾಂಡಿಕ್ರಷ್ ,ಪಬ್ಜಿ ಆಡೂಮುಂದ ತಪ್ಪಿನೂ ಒಂದರೇಽ ಆಕಳಿಕಿ ಬಂದ್ರ ಕೇಳ್ರಿ.
ಸೂರ್ಯೋದಯಕ್ಕ ಮುಂಚೆ ಅರುಣನ ಆಗಮನ ಆಗೂಹಂಗ ನಿದ್ದಿ ಬರೂದರ ಮುನ್ಸೂಚನೆ ಈ ಆಕಳಿಕೆಗಳು ಅನ್ನಬಹುದು.ಆದ್ರ ಇದಕ್ಕ ತೀರ ವಿರುದ್ಧವಾಗಿ ಒಂದೊಂದುಸಲ ಮಧ್ಯಾಹ್ನಮೂರಮೂರು ತಾಸು ಮಲಕೊಂಡು ಎದ್ದಮ್ಯಾಲೂ ಒಂದರಹಿಂದ ಒಂದು ಹಂಗೇ ಸಾಲುಹಿಡದು ಬರತಿರತಾವ.ಕೆಲವೊಮ್ಮೆ ಬ್ಯಾಸರ ಆಗಿದ್ರನೂ ಬರತಾವ.ಕೆಲವೊಮ್ಮೆ ವಿಪರೀತ ದಣಿದಾಗ,ದೇಹ ಬಳಲಿದಾಗ ಬಂದ್ರ ಕೆಲವೊಮ್ಮೆ ಏನೂ ಕೆಲಸ ಇಲ್ಲದಽ ಸೋಮಾರಿಗಳಾಗಿ ಸೋಫಾದ ಮ್ಯಾಲೆ ಮೈ ಚೆಲ್ಲಿದಾಗನೂ ಬರತಾವ...ಅತೀ ಬ್ಯಾಸಗ್ಯಾಗ..ಅತೀ ಥಂಡ್ಯಾಗ....ಹೀಂಗs ಅಂತ ಹೇಳಲಿಕ್ಕೆ ಬರಂಗಿಲ್ರಿ .
ಯಾರರೇ ಪ್ರೀತಿಪಾತ್ರರು ಭೆಟ್ಟಿ ಆಗಿ ವಾಪಸ್ ಹೋದಾಗನೂ ಹೀಂಗಽ ಆಕಳಿಕಿ ಬರತಾವ.ಮೈತುಂಬ ,ಮನಿತುಂಬ ಕೆಲಸ ನೋಡಿ ತಲಿ ದಿಮ್ ಅಂದನೂ ಆಕಳಿಕಿ ಬರತಾವ.ಕೆಲವೊಮ್ಮೆ ಸುಮ್ಮೇ ನಮ್ಮ ಬಾಜೂಕಿನವರು ಆಕಳಿಸತಾರ ಅಂತ ನಮಗೂ ಆಕಳಿಕಿ ಬರತಾವ.ಇನ್ನ ಕೆಲವೊಮ್ಮೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಾಗ ,ಹರಿದಾಸರ ಹರಿಕಥಿಯೊಳಗ,ಸತ್ಯನಾರಾಯಣ ಕಥಿ ಅಂತಹ ದೀರ್ಘ ಪೂಜಾಕಥಿಗಳನ್ನು ಕೇಳೂಮುಂದ ಎಲ್ಲಿರತಾವೋ ಏನೋ ಓಡೋಡಿ ಬರತಾವ.ಅದಕ್ಕಽ ಅಂಥಾ ಕಾರ್ಯಕ್ರಮದಾಗೆಲ್ಲ ನಾ ಆದಷ್ಟು ಹಿಂದಿನ ಸೀಟೇ ಪ್ರಿಫರ್ ಮಾಡತೀನ್ರಿ.ನಂಗ ಈ ಪೂಜಾವಿಧಿಗಳೆಲ್ಲ ಝಟ್ ಪಟ್ ಅಂತ ಮುಗದ್ರ ಭಾಳ ಭಕ್ತಿ,ಏಕಾಗ್ರತೆ ಎಲ್ಲಾ ಇರತದರಿ.ಅದೇನರೆ ಅಧ೯ತಾಸಕಿಂತ ಜಾಸ್ತಿ ಇತ್ತೋ ....ಆಕಳಿಕಿ ಶುರುನೇ.ಸತ್ಯನಾರಾಯಣ ಪೂಜಾದ ಆ ಕಲಾವತಿ – ಲೀಲಾವತಿ ಕಥಿ ಕೇಳಕೋತ ಆಕಳಿಕಿ ಬಂದ್ರ ಒಳಗೊಳಗೇ ಪುಕಪುಕ ಆಗತಿರತದ್ರಿ.’ನನ್ನ ಕಥಿ ಕೇಳೂಮುಂದ ಆಕಳಿಸಿ ನನಗ ಅಪಮಾನ ಮಾಡಿದಿ’ ಅಂತ ಸತ್ಯನಾರಾಯಣ ಎಲ್ಲರೇಽ ಸಿಟ್ಟಿಗೆದ್ದು ಹಡಗಿನಲ್ಲಿದ್ದ ಧನಕನಕಗಳನ್ನು ಎಲಿ-ತೊಪ್ಪಲು-ಕಲ್ಲುಗಳನ್ನಾಗಿ ಪರಿವತ೯ನೆ ಮಾಡಿದ್ಹಂಗ ಇರೋ ಒಂದೆರಡು ನನ್ನ ಬಂಗಾರದೊಡವೆಗಳನ್ನುಹಿತ್ತಾಳೆಯನ್ನಾಗಿ,ಇರೋ ಒಂದೆರಡು ರೇಶ್ಮೆಸೀರೆಗಳನ್ನು ಹಳೆಯ ಹರಿದ ಸೀರೆಗಳನ್ನಾಗಿ ಮಾಡಿಬಿಟ್ಟ್ರ.....ಅಂತ ಗಾಭರಿ ಆಗತಿರತದ.ಆದ್ರ ಆ ಗಾಭರಿಗೆ ಇನ್ನೊಂದೆರಡು ಆಕಳಿಕೆ ಹೆಚ್ಚಿಗೆ ಬರತಾವು ನೋಡ್ರಿ...

ನಿಮಗೊಂದು ಮಜಾ ಸುದ್ದಿ ಗೊತ್ತೇನ್ರಿ? ತಾಯಿ ಗಭ೯ದಾಗಿರೋ ಮಗು ಸಹಿತ ಆಕಳಸತದಂತ.ವೈದ್ಯಕೀಯ ಶಾಸ್ತ್ರದ ಪ್ರಕಾರ ಅದು ಮೆದುಳಿನ ಒಳ್ಳೆಯ ಬೆಳವಣಿಗೆಯ ಲಕ್ಷಣ ಅಂತ.ಈ ಆಕಳಿಸೋ ಪ್ರಕ್ರಿಯೆ ಬರೇ ನಮ್ಮ ಮನುಷ್ಯ ಜಾತಿಯೊಳಗ ಅಲ್ರೀ...ಭಾಳಷ್ಟು ಪ್ರಾಣಿಗಳೊಳಗೂ ಅದ ಅಂತ.
ಇನ್ನ ಈ ಆಕಳಿಕೆಗಳಿಗೂ ಮತ್ತ ಪರೀಕ್ಷಾಗೂ ನೇರಾನೇರ ಸಂಬಂಧ ಅದನೋಡ್ರಿ.ಪರೀಕ್ಷಾ ಟೈಮದಾಗ ಕೈಯಾಗ ಪುಸ್ತಕ ಹಿಡದ್ರ ಸಾಕು ಆಕಳಿಕಿ ಶುರು..ನಂಗಂತೂ ಗಣಿತದ ಪ್ರಶ್ನೆಪತ್ರಿಕೆ ನೋಡಿದರ ಸಾಕು..ಅದರಾಗ ಎಷ್ಟು ಲೆಖ್ಖ ಮಾಡಲಿಕ್ಕೆ ಕೊಟ್ಟಾರೋ ಅದರ ದುಪ್ಪಟ್ಟು ಆಕಳಿಕೆ ಬರೂವರೀ.
ನಿಮಗೆಲ್ಲ ರಾಮಾಯಣದ ಕಥಿ ಗೊತ್ತೇ ಇರತದ.ಅದರಾಗ ನಮ್ಮಹನುಮಂತ ಲಂಕಾಪ್ರವೇಶ ಮಾಡೂಮುಂದ ಸುರಸಾ ಎಂಬ ರಕ್ಕಸಿಯ ಕಥಿ ಬರತದ.ನನ್ನ ಬಾಯಲ್ಲಿ ಪ್ರವೇಶಿಸಿ ಹೊರಬಂದರೆ ಮಾತ್ರ ನಿನಗೆ ಲಂಕಾಪ್ರವೇಶ ಅಂತ ಹೇಳಿದ ಅಕಿ ಆ ಅಂತ ಆಕಳಿಸತಾಳ.ಹನುಮ ತನ್ನ ಗಾತ್ರವನ್ನುಬೃಹದಾಕಾರವಾಗಿ ಬೆಳೆಸತಾನ.ಅದಕ್ಕ ತಕ್ಕಂಗ ‘ಆ’ಅಂತ ಬಾಯಿ ಅಗಲಿಸಿದ ಅಕಿನ ಬಾಯೊಳಗೆ ಹೋದ ಹನುಮ ತಕ್ಷಣವೇ ಪೂತಿ೯ ಸಣ್ಣವನಾಗಿ ಅಕಿ ಬಾಯಿ ಮುಚ್ಚುವುದರೊಳಗಾಗಿ ಹೊರಬಂದುಬಿಡುವ ಕಥಿ ಭಾಳ ಸ್ವಾರಸ್ಯಕರವಾಗೇದ.ಅಂದ್ರ ಜೀವನ-ಮೃತ್ಯುಗಳೆರಡೂ ಒಂದು ಆಕಳಕಿ ಅಳತೀ ಒಳಗಽ ಅವ ಅನ್ನೂ ತತ್ವ ನಮಗ ಅಥ೯ ಆಗತದ.
ಆಕಳಿಕಿ ಸುದ್ದಿ ಆತು..ಇನ್ನ ತೂಕಡಿಕಿ ಸುದ್ದಿನೂ ಒಂಚೂರು ಮಾತಾಡೇ ಬಿಡೂಣು.ಇವೆರಡೂ ಒಂಥರಾ ಅವಳಿ ಸೋದರರು ಇದ್ಹಂಗ. ಈ ತೂಕಡಿಕಿನೂ ಅಷ್ಟೇ ...ಯಾವ ಮಾಯದಾಗ ಬರತದೋ ಗೊತ್ತೇ ಆಗಂಗಿಲ್ಲರೀ.ಒಂಥರಾ ಗಾಢನಿದ್ದೆನೂ ಅಲ್ಲದ,ಎಚ್ಚರಿಕೆನೂ ಅಲ್ಲದ ಈ ತೂಕಡಿಕಿ ಮಜಾ ಅನುಭವಿಸಿದವರಿಗೇ ಗೊತ್ತು..ಎಷ್ಟೋ ಸಲ ಸಂತ್ಯಾಗ ತೂಕಡಿಸೋ ಮಂದಿನೂ ಇರತಾರ.ಕೆಲವು ಸಲ ನಮ್ಮ ಮನ್ಯಾಗ ಟಿವಿ ಜೋರ್ ದನಿ ತಗದು ಒದರತಿರತದ್ರಿ.ಅಡಿಗಿ ಮನ್ಯಾಗ ನನ್ನ ಮಿಕ್ಸಿ,ಕುಕ್ಕರ್ ಸೀಟಿ ಧಾಂಧಲೆ ನಡದಿರತದ.ನನ್ನ ಅವಳಿ ಮಕ್ಕಳದು ಯಾವುದೋ ಸಣ್ಣ ವಿಷಯಕ್ಕೆ ಜೋರ ಜಗಳ ನಡದಿರತದ.ಆದ್ರ ನಮ್ಮ ಮನಿಯವರು ಹಂಗಽ ಸೋಫಾಕ್ಕೊರಗಿ ತೂಕಡಿಸತಿರತಾರ. ಕೆಲವೊಬ್ಬರಿಗೆ ಈ ಗದ್ದಲದ ಬ್ಯಾಗ್ರೌಂಡ್ ನಾಗ ಭಾಳ ಛಂದ ನಿದ್ದಿ ಬರತದರಿ....ಪುಷ್ಪಕ ವಿಮಾನದ ಕಮಲಹಾಸನಗತೆ.ಈ ಬಸ್ಸು-ಟ್ರೇನುಗಳ ಪ್ರವಾಸ ಅಂತೂ ತೂಕಡಿಕೆಯ ತವರು ಎನ್ನಬಹುದು.ನಾ ಅಂತೂ ಎಷ್ಟೋ ಸಲ ಸಿಟಿ ಬಸ್ ನಾಗೂ ತೂಕಡಿಸಕೋತ ಓಡಾಡಿ ಎರಡೆರಡು ಸ್ಟಾಪ್ ದಾಟಿ ಇಳಿದ ಪ್ರಸಂಗಗಳೂ ಭಾಳ ಅವರೀ.ಎಷ್ಟೋ ಸಲ ನಮ್ಮ ಬಾಜೂಕ ಕೂತವರು ತೂಕಡಿಸಕೋತ ನಮ್ಮ ಮೈಮ್ಯಾಲ ತಮ್ಮ ಭಾರ ಹಾಕಿ ,ಎಷ್ಟೋ ಸಲ ನಾವು ತೂಕಡಿಸಕೋತ ಅವರ ಮ್ಯಾಲೆ ಜೋಲಿ ಹೊಡೆದು ಭಯಂಕರ ಮುಜುಗರದ ಪ್ರಸಂಗಗಳನ್ನೂ ಅನುಭವಿಸುವುದಾಗತದ.ಇನ್ನಽ ಎಷ್ಟೋ ಬಾಲಿವುಡ್ ಮೂವಿಗಳೊಳಗ ಹೀಂಗಽ ಬಸ್ ನಾಗ ತೂಕಡಿಸಿ ಹಿರೋನ ಹೆಗಲ ಮೇಲೆ ತಲೆಯಿಡೋ ಹಿರೋಯಿನ್ ,ಅವಳ ಹಾರಾಡುತ್ತಿರೋ ಮುಂಗುರುಳನ್ನು ನೇವರಿಸೋ ಹಿರೋ ..ಹಿನ್ನೆಲೆಯಲ್ಲಿ ಒಂದು ಹಾಡು...ಲವ್ ಸ್ಟೋರಿಗೆ ನಾಂದಿ ಆಗಿಬಿಡತದ್ರಿ ಈ ತೂಕಡಿಕಿ.
ಆದ್ರ ಎಷ್ಟೋ ಸಲ ಈ ತೂಕಡಿಕಿಯಿಂದ ಅವಘಡಗಳೂ ಆಗತಾವ.ರಾತ್ರಿ ಬಸ್ ಡ್ರೈವ್ ಮಾಡುತ್ತಿರುವ ಡ್ರೈವರ್ ತೂಕಡಿಸಿದರ ಮುಗೀತು..ಲಕ್ಷ್ಮಿ ರಮಣ ಗೋವಿಂದ..ನೈಟ್ ಡ್ಯೂಟಿ ಮಾಡುವ ನಸ್೯ ಡಾಕ್ಟರ್ ತೂಕಡಿಸಿದ್ರ ಪೇಶಂಟ್ ಗಳ ಗತಿ ಅಧೋಗತಿ.ತೂಕಡಿಸುತ್ತ ಮಗುವಿಗೆ ಹಾಲೂಡಿಸಿದ ತಾಯಿ...ಉಸಿರುಗಟ್ಟಿದ ಮಗು ಇಂಥವೆಲ್ಲ ಸುದ್ದಿಗಳನ್ನು ಆಗಾಗ ಕೇಳಕೋತನ ಇರತೀವಿ.ತೂಕಡಿಸಿಕೋತ ಕೂತ ಸೆಕ್ಯೂರಿಟಿ ಗಾಡ್೯ಗಳ ಮುಂದೆನೇ ಮನೆ ,ATM ಗಳ ಕಳ್ಳತನಗಳೂ ನಡೆಯುವುದುಂಟು.
ತೂಕಡಿಕಿ ಮಾತು ಬಂದಾಗ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮರೆಯುವ ಹಾಗೆಯೇ ಇಲ್ಲ.ಸಭೆ -ಸಮಾರಂಭಗಳಲ್ಲಿ ,ಸದನದ ಕಲಾಪಗಳಲ್ಲಿ ಅವರು ತೂಕಡಿಸಿ ಸುದ್ದಿಯಾಗುವುದು ಸವೇ೯ಸಾಮಾನ್ಯವಾಗಿತ್ತು.ಅದಕ್ಕಽ ಬಲ್ಲವರು ‘ತೂಕಡಿಸಿ ತೂಕಡಿಸಿ ಬೀಳದಿರೋ ತಮ್ಮಾ ...ಓ ಮಂಕುತಿಮ್ಮಾ ‘ಅಂತ ಹಾಡಿರಬೇಕು.
ಏನ ಇರಲಿ ,ಮನಷಾ ಅಂದಮ್ಯಾಲೆ ದಿನಕ್ಕ ಒಮ್ಮೆರೆ ಆಕಳಿಸಲಾರದ,ತೂಕಡಿಸಲಾರದ ಇರಲಿಕ್ಕೆ ಆದೀತ?ಈಗ ಈ ಬರಹವನ್ನು ಓದಕೋತ ನೀವೆಲ್ಲಾರೂ ಅದೆಷ್ಟು ಸಲ ಆಕಳಿಸಿ..ತೂಕಡಿಸಿರತೀರೋ ಭಗವಂತಗಽ ಗೊತ್ತು.
ಇತಿ ಶ್ರೀ ಮಾನವೇತಿಹಾಸ ವತ೯ಮಾನ ಪುರಾಣೇ ಆಕಳಿಕಿ-ತೂಕಡಿಕಿ ಅಧ್ಯಾಯಂ ಸಂಪೂರ್ಣಂ..


~ ಗೌರಿಪ್ರಸನ್ನ