ವಿಮಾನ ನಿಲ್ದಾಣದಲ್ಲಿ ನಾಟಕ

ರಜಕ್ಕೆ ಹೋಗುವುದೆಂದರೆ ಎಲ್ಲಿಲ್ಲದ ಹುರುಪು ನಮಗೆಲ್ಲ. ಆದರೆ ಆಧುನಿಕ ಜಗದ ಪ್ರಯಾಣ ಪ್ರಯಾಸವೇ ಸರಿ, ಅದರಲ್ಲೂ ವಿಮಾನ ಯಾನದಷ್ಟು ರಗಳೆ ಬೇರೆ ಯಾವುದರಲ್ಲೂ ಇಲ್ಲ. ಹೋರ ದೇಶಗಳಲ್ಲಿರುವ, ಗಗನ ಯಾನ ಮಾಡಿ ಅಭ್ಯಾಸವಿರುವ ನಮಗೇ ಒಮ್ಮೆ ವಿಮಾನ ನಿಲ್ದಾಣದಿಂದ ಹೊರ ಬಂದರೆ ಸಾಕಪ್ಪಾ ಎನ್ನುವಷ್ಟು ಜುಗುಪ್ಸೆ ಬಂದಿದೆ. ಇನ್ನು, ಮೊದಲ ಸಲ ಹೊರ ದೇಶಕ್ಕೆ ಹೊರಟ ಹಳ್ಳಿ ಹೆಣ್ಣು ಸಾವಿತ್ರಿ ಬಾಯಿ  ಪಟ್ಟ ಪಾಡನ್ನು ವತ್ಸಲ ರಾಮಮೂರ್ತಿಯವರು ಹಾಸ್ಯಮಯವಾಗಿ ಹೇಳಿದ್ದಾರೆ. ಇದು ಅನಿವಾಸಿಯಲ್ಲಿ ಅವರ ಚೊಚ್ಚಲ ಪ್ರಯತ್ನ.

ವಿಮಾನ ನಿಲ್ದಾಣದಲ್ಲಿ ನಾಟಕ

ಸೌ .ಸಾವಿತ್ರೀಬಾಯಿ ಹಿಂದಿನಕಾಲದ ಮುಗ್ಧ ಹೆಂಗಸು. ಮರಾಠಿ  ಹೆಂಗಸು, ಮೇಲೆ ಸಂಪ್ರದಾಯಸ್ಥೆ ಬೇರೆ. ಉಸರು ಹಳ್ಳಿಯೆಂಬ  ಹಳ್ಳಿಯಲ್ಲಿ ವಾಸ, ದೊಡ್ದ ಕಟ್ಟೆ ಮನೆಯಂಥಾ ಮನೆ. ಅವಳ ಗಂಡ ಶ್ರೀನಿವಾಸರಾಯರು ಊರಿನ ಶ್ಯಾನುಭೋಗರು. ಈ ದಂಪತಿಗಳ ಒಬ್ಬನೇ ಕಣ್ಮಣಿ ಮಗ ವೆಂಕಟ. ಅವರ ಹಳ್ಳಿಯಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ ಹಾಗೂ ಹೈಸ್ಕೂಲು ಮುಗಿಸಿ ಮುಂದೆ ಓದುವ ಇರಾದೆ ಉಸುರಿದ. “ಓದಿಗೆ ಮುಂಡಾಮೋಚ್ತು, ನನ್ನ ಶ್ಯಾನುಭೋಗಿಕೆಯನ್ನೇ ಮುಂದುವರಿಸೋ”, ಎಂದು ಶ್ರೀನಿವಾಸರಾಯರು ಜಬರದಸ್ತಿ ಮಾಡಿದರು. ಸಾವಿತ್ರಿ ಬಾಯಿ ಕೇಳಬೇಕೆ? ಮಗನ ಆಸೆಯನ್ನು ಇಡೇರಿಸದಿದ್ದರೆ ಹೇಗೆ? ಯಮಧರ್ಮನನ್ನೇ ಹಣ್ಣು ಗಾಯಿ ನೀರುಗಾಯಿ ಮಾಡಿದ ಸಾವಿತ್ರಿ ‘ಬಾಯಿಯ’ ಆಗ್ರಹಕ್ಕೆ ಶ್ರೀನಿವಾಸರಾಯರು ಸಮ್ಮತಿಸಿ ಬೆಂಗಳೂರಿಗೆ ಕಳಿಸಿದರು. ಅವನೂ ಚೆನ್ನಾಗಿಯೇ ಓದಿದ. ಯುಗಾದಿಯ ದಿನ ತನ್ನ ರೇಂಕ್ ಬಂದ ಸಿಹಿಯನ್ನೂ, ತಾನು ಹೆತ್ತವರನ್ನು ತೊರೆದು ಅಮೇರಿಕಾಗೆ ಹಾರುವ ಬೇವಿನ ಕಹಿಯನ್ನೂ  ಒಟ್ಟೊಟ್ಟಿಗೇ ಉಣಬಡಿಸಿದ.

ತಾಯಿಗೆ ಸಿಹಿಯೋ ಕಹಿಯೋ ಎಂದು ಗಲಿಬಿಲಿಯಾಗುವಲ್ಲಿ, ತಂದೆಗೆ  ಬೇವಿನ ಕಹಿಯೇ ಬಲವಾಗಿ ನಾಲಿಗೆಯಲ್ಲಿ ನೆಲೆಯೂರಿತು. ಯುಗಾದಿಯ ಹೋಳಿಗೆ ಕೂಡಾ ಉಪ್ಪುಪ್ಪು ಎಂದೆನಿಸಿ ಹೆಂಡತಿಯ ಮೇಲೆ ಹಾರಾಡಿದರು, ಮಗನ ಕೂಡಾ ಮಾತೂ ಬಿಟ್ಟರು. ‘ಬನ್ನಿ’ ಕೊಟ್ಟು ಹರಸಿ ಎಂದ ಮಗನಿಗೆ ಹೋಗು ಹೋಗೆಲೋ ‘ಕುನ್ನಿ’ ಎಂದು ದೂಶಿಸಿ ಮುಖತಿರುಗುಸಿದರು. ವೆಂಕಟ ತನ್ನ ಸಂಗಾತಿ ಸುಮ್ಮಿಯ ಜೊತೆ ಝುಮ್ಮೆಂದು ಹಾರುವ ಕನಸು ಕಾಣುತ್ತಿದ್ದನಾಗಿ ಹೆಚ್ಚು ಸಂಕಟವನ್ನೇನೂ ಪಡಲಿಲ್ಲ; ಸಾವಿತ್ರಿಯ ಕರುಳು ಯಾವುಯಾವುದೋ ಕಾರಣಕ್ಕಾಗಿ ಚುರ್ರೆನ್ನುವುದು ತಪ್ಪಲಿಲ್ಲ.

ವೆಂಕಟನೇನು ಅಮ್ಮನನ್ನು ಮರೆಯಲಿಲ್ಲ. ಹೋಗಿ ತನ್ನ ನೆಲೆ ಕಂಡಮೇಲೆ ಅಮ್ಮನಿಗೆ, ಅಮೇರಿಕಾ ಎಂಬುದು ಭೂಲೋಕದ ಸ್ವರ್ಗವೆಂದೂ , ‘ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲಾ ಸುಳ್ಳು’ ಎಂದು ಹೇಳಿ, ತನ್ನಲ್ಲಿಗೆ ಬರಬೇಕೆಂದೂ,ರಾಮಾಯಣದ ಪುಷ್ಪಕ ವಿಮಾನದ ರೀತಿಯಲ್ಲೇ ಈ ಕಾಲದ ವಿಮಾನಗಳಿರುತ್ತವೆಂದೂ, ಅದರಲ್ಲಿ ಗಂಧರ್ವ ಕನ್ಯೆಯರು ಬಂದು  ಸೇವೆ ಮಾಡುತ್ತಾರೆಂದೂ,ಈ ಅವಕಾಶವನ್ನು ಕಳೆದುಕೊಳ್ಳಬಾರದೆಂದೂ, ಸಾಧ್ಯವಾದರೆ ಅಪ್ಪನನ್ನು ಕರೆದು ತರಬೇಕೆಂದು ತಾಕೀತು ಮಾಡಿ ಅವರ ವೀಸಾ, ಟಿಕೇಟು ಇತ್ಯಾದಿ ಕಳಿಸಿದ.

ಬೇರೆ ಯಾವ ವಿವರಣೆಗಳು ಶ್ಯಾನುಭೋಗರ ಮನಸ್ಸನ್ನು ಆಕರ್ಷಿಸದಿದ್ದರೂ, ಗಂಧರ್ವ ಕನ್ಯೆಯರ ಬಗ್ಗೆ ಕುತೂಹಲ ಅವರನ್ನು ಕೆರಳಿಸದಿರಲಿಲ್ಲ. ಅದರೂ, ತಮ್ಮ ಹಮ್ಮು-ಬಿಮ್ಮು ಬಿಟ್ಟುಕೊಡದೆ, ಮಗ ಹೋದಾಗಿನಿಂದಲೂ ಗುಮ್ಮೆಂದು ಗುರುಗುಡುತ್ತಿದ್ದ ಹೆಂಡತಿಯಿಂದ ಒಂದಷ್ಟು ಬಿಡುಗಡೆ ಸಿಕ್ಕರೆ ಸಾಕೆಂದು, “ನೀನ್ ಬೇಕಾದ್ರೆ ಹೋಗು, ನನ್ನ ಬಲವಂತ ಮಾಡ್ಬೇಡ. ನಾನಿಲ್ಲೇ ನಮ್ಮಕ್ಕನ ಮನೇಲಿ ಊಟ ತಿಂಡಿ ಮಾಡ್ಕೊಂಡಿರ್ತೀನಿ. ಆ ಚಿಂತೆ ನಿಂಗೇನ್ ಬೇಡಾ” ,ಅಂತ ಹೇಳಿ ಒಪ್ಪಿಗೆ ಕೊಟ್ಟು ಬಿಟ್ಟು ನಿರಾಳವಾದರು.

ಸಾವಿತ್ರಿ ಬಾಯಿ ಊರೆಲ್ಲಾ ತಿರುಗಿ, ತಿಳಿದವರ ಮನೆಗೆಲ್ಲಾ ಹೋಗಿ, ವಾರಿಗೆಯವರಲ್ಲಿ ಬೀಗಿ,ಮಗನಿಗೆ ಕೋಡುಬಳೆ, ಚಕ್ಕುಲಿ, ಮೈಸೂರುಪಾಕು, ಇತ್ಯಾದಿ ಮುತುವರ್ಜಿಯಿಂದ ಮಾಡಿಕೊಂಡು ಹೊರಟರು.

ಹಸಿರು ಸೀರೆ, ಮೇಲು ಕಚ್ಚೆ ಹಾಕಿ, ಧಾರವಾಡದ ಸಾಂಪ್ರದಾಯಿಕ ಬಾಳೇ ಕಾಯಿ ನೆರಿಗೆ ಸುತ್ತಿ, ಇಳಕಲ್ಲಿನ ಬ್ಲೌಸ್ ಹಾಕಿಕೊಂಡು, ತುರುಬು ಕಟ್ಟಿ, ಕಾಲುಂಗುರ ಮೂಗುತಿ ದೊಡ್ದ ಕುಂಕುಮ ಹಚ್ಚಿ ಹೊರಟಳು. ಹೆಂಡತಿಯ ಸಡಗರವನ್ನು ವಾರೆಗಣ್ಣಿನಿಂದಲೇ ಗಮನಿಸಿದ ಶ್ಯಾನುಭೋಗರು, “ಲೇ.. ಇವಳೇ, ನೀನೇನು ನೆಂಟರ ಮನೆ ಮದುವೆಗೆ ಹೊರಟೀಯೋ ಇಲ್ಲಾ ಮಂಗನ ಹಾಗೆ ಹಾರ್ಕೊಂಡು ವಿದೇಶಕ್ಕೆ ಹೊರಟೀಯೋ?” ಕೇಳಿದರು

ಸಾವಿತ್ರಮ್ಮನವರ ಸಿಟ್ಟು ಕೆರಳಿ, “ನಾನೂ ಮದುವ್ಯಾದಾಗಿಂದ ನೋಡೀನಿ. ಉಸುರು ಹಳ್ಳಿ ಬಿಟ್ಟು ಬೇರೆ ಊರಿನ್ ಹೆಸರು ಕಂಡಿಲ್ಲ. ಕುಚೋದ್ಯಕ್ಕೇನೂ ಕಮ್ಮಿಯಿಲ್ಲ” ಅಂತ ಝಾಡಿಸಿಬಿಟ್ಟರು. “ಶ್ರೀನಿವಾಸ, ನಿನಗ್ಯಾಕಪ್ಪಾ ಇವಳ ಸವಾಸ?” ಅಂತ ತಮಗೆ ತಾವೇ ಹೇಳ್ಕೊಂಡು, “ಸರಿ ಹುಷಾರಾಗಿ ಹೋಗ್ಬಾರೆ”, ಅಂತ ಬೀಳ್ಕೊಟ್ಟರು.

ವಿಮಾನದಲ್ಲಿ ಕೂತ ಸಾವಿತ್ರಿ ಬಾಯಿ ನವ ಆಭರಣಗಳನ್ನು ಕಿರೀಟ ಸಮೇತ ಧರಿಸಿ, ಹೂ ಮುಡಿದು ವಯ್ಯಾರ ಮಾಡುತ್ತಾ ಬರುವ ಗಂಧರ್ವ ಕನ್ಯೆಯರ ಆಗಮನಕ್ಕೆ ಕಾದಳು. ಎಲ್ಲೆಲ್ಲೂ ಬೋಳು ಹಣೆಯ, ಹರವಿದ ಮುಡಿಯ, ತುಂಡುಡುಗೆ ತೊಟ್ಟ ಬಿಳೀaeroplane ಚರ್ಮದ ಹೆಣ್ಣುಗಳು ಓಡಾಡಿದವೇ ವಿನಃ ರಾಜಕುಮಾರನ ಚಿತ್ರದಲ್ಲಿ ಕಂಡ ರೀತಿಯ ಗಂಧರ್ವರು ಕಾಣಲಿಲ್ಲ. ಇವರೆಲ್ಲಾ ಬೇರೆ ಲೋಕದ ಅಪ್ಸರೆಯರಿರಬೇಕೆಂದು ಬಗೆದು, ಬಿಟ್ಟ ಬಾಯಿ ಹಾಗೇ ತೆಗೆದು ನೋಡುತ್ತಾ ಕುಂತುಬಿಟ್ಟಳು.

ವೆಜ್ಜು, ನಾನ್ ವೆಜ್ಜು ಇತ್ಯಾದಿ ಊಟದ ತಟ್ಟೆಗಳನ್ನು ಒಂದೇ ತಳ್ಳು ಗಾಡಿಯ ಕಪಾಟಿನಿಂದ ತೆಗೆಯುವುದು ಕಂಡು ಮೂಗು ಮುರಿದು ಊಟ ಬೇಡವೇ ಬೇಡ ಎಂದು ನಿರ್ಧರಿಸಿ ನೀರು ಕುಡಿದು ಏಕಾದಶಿಯನ್ನು ಅಂತರಿಕ್ಷದಲ್ಲಿ ಆಚರಿಸಿ ದೇವರಿಗೆ ಇನ್ನೂ ಪ್ರಿಯಳಾದೆ ಎಂದು ಸಮಾಧಾನ ತಂದುಕೊಂಡಳು. ಕೊನೆಗೂ ವಿಮಾನ ತನ್ನ ಅಂತ್ಯವನ್ನು ಮುಟ್ಟಿ ನ್ಯೂಯಾರ್ಕ್ ನಗರದ ನಿಲ್ದಾಣದಲ್ಲಿ ಇಳಿಯಿತು.

ನಿಂಬೆ ಹಣ್ಣಿನಂಥ ಹುಡುಗಿಯ ವಯಸ್ಸು ದಾಟಿ ಕುಂಬಳದಂತಿದ್ದ ಸಾವಿತ್ರಮ್ಮನೂ, ಆಕೆಯ ವೇಷ ಭೂಶಣಗಳನ್ನೂ ಗಮನಿಸಿದ ಸೆಕ್ಯುರಿಟಿ ಭಾಷೆಯ ತೊಂದರೆ ಗಮನಿಸಿ, ಹೆಬ್ಬೆಟ್ಟು ಒತ್ತಿಸಿಕೊಂಡು ,ಮುಗುಳ್ನಕ್ಕು ಕಳಿಸಿದ. ಮುಂದೆ ಇನ್ನೊಬ್ಬಳೂ ಹಾಗೇ ನಕ್ಕಳು. ಕಾರಣವಿಲ್ಲದೆ ನಗುವುದನ್ನು ಕಂಡು ಕೇಳರಿಯದ ಸಾವಿತ್ರಮ್ಮನಿಗೆ ಇವರೆಲ್ಲ ಅರೆ ಹುಚ್ಚರಿರಬೇಕೆಂಬ  ಸಂಶಯದ ಹುಳ ತಲೆಗೆ ಹೊಕ್ಕಿತು!

ಅಲ್ಲಿಂದ ಮುಂದೆ ಎರಡು ಬಾಗಿಲ ಕಟ್ಟು ಮಾತ್ರವಿದ್ದು ಬಾಗಿಲೇ ಇಲ್ಲದ ಜಾಗದ ಮೂಲಕ ತೂರಲು ಹೇಳಿದರು. ಅರೇ ಇದೇನಿದು, ಮನೆಯೇ ಇರದ ಬಯಲಲ್ಲಿ ಬಾಗಿಲು? ದೊಡ್ದ ಹಜಾರದಲ್ಲಿ ಈ ಬಾಗಿಲವಾಡ ನಿಲ್ಲಿಸಿದ್ದಾದರೂ ಏಕಿರಬಹುದು? ‘ಮನೆಯೊಂದು ಮೂರು ಬಾಗಿಲು’ ಎಂಬ ಧಾರವಾಹಿ ನೆನಪಿಗೆ ಬರದೇ ಇರಲಿಲ್ಲ. ಯೋಚಿಸುತ್ತಲೇ ಅದರ ಮೂಲಕ ಹಾದು  ಹೋಗುವಲ್ಲಿ ಅದು ಗುಂಯ್ ಗುಂಯ್ ಶಬ್ದ ಮಾಡಿಬಿಡಬೇಕೆ? ಬೆಚ್ಚಿದ ಸಾವಿತ್ರಿ ಅದು ಯಮನ ಕೋಣದ ಹೂಂಕಾರವೇ ಇರಬೇಕೆಂದು ತೀರ್ಮಾನಿಸಿದಳು. ಯಮ ನರಕದ ನಾಯಕನಲ್ಲವೇ? ಮಗ ಸ್ವರ್ಗಕ್ಕೆ ಕರೆಸುತ್ತೇನೆಂದು ಹೇಳಿ ನರಕ ದರ್ಶನ ಮಾಡಿಸುತ್ತಿದ್ದಾನಲ್ಲ ಎಂದು ಯೋಚಿಸುವಲ್ಲಿ ಧುತ್ತೆಂದು, ಕಪ್ಪುವರ್ಣದ , ಧಡೂತಿ, ದಪ್ಪ ಕುಂಡೆಯ, ಹೆಣ್ಣಾಕೃತಿಯೊಂದು ಪ್ರತ್ಯಕ್ಷವಾಯ್ತು. ಗೊಗ್ಗರು ಕಂಠದಲ್ಲಿ ಇಲ್ಲಿ ಬಾ ಎಂದು ಕರೆದದ್ದಲ್ಲದೆ ಕೈ ಸನ್ನೆ ಮಾಡಿತು. ಓಹೋ ತಾನು ನರಕಕ್ಕಿಳಿದಿರುವುದು ಗ್ಯಾರಂಟಿ. ಗಂಡನನ್ನು ಬಿಟ್ಟು ಹೊರಟಾಗಲೇ ನನ್ನ ಪುಣ್ಯದ ಫಲ ಕಳೆದು, ಪಾಪದ ಕೊಡ ತುಂಬಿ ಸ್ವರ್ಗಾಭಿಮುಖ ವಿಮಾನ ನರಕಕ್ಕೆ ತಂದಿಳಿಸಿರುವುದು ಗ್ಯಾರಂಟಿ ಎಂದು ಖಚಿತ ಮಾಡಿಕೊಳ್ಳುತ್ತಿರುವಲ್ಲಿ, ಆ ರಾಕ್ಷಸಾಕಾರದ ಹೆಣ್ಣು ಕೈ ಚಾಚು, ಕಾಲ್ಚಾಚು ಕೈ ಎತ್ತು, ಆ ಕಾಲೆತ್ತು ,ಈ ಕಾಲೆತ್ತು ಅಂತ ಸಾವಿತ್ರಮ್ಮನಿಂದ ಕಸರತ್ತು ಮಾಡಿಸತೊಡಗಿತು. ಹೇ ಅಚ್ಯುತಾ, ಏನಿಂಥಾ ಸಂದಿಗ್ಧ ತಂದೊಡ್ಡಿದೆ ದೇವಾ ಎನ್ನುತ್ತಾ ಹಪಹಪಿಸುತ್ತಿರುವಲ್ಲಿ, ಆ ಅಶೋಕವನದ ಲಂಕಿಣಿಯಂತಿದ್ದ ಅವಳ ಕಣ್ಣು, ಸಾವಿತ್ರಿ ಬಾಯಿ ಸೀರೆಯಿಂದ ಸೊಂಟದಲ್ಲಿ ಕಟ್ಟಿದ್ದ ಬಾಳೇಕಾಯಿಯ ಮೇಲೆ ಬಿದ್ದುಬಿಡಬೇಕೇ? ಅದೇನದು ಎಂದು ಕೇಳಿದ್ದಲ್ಲದೆ, ಅದನ್ನು ಬಿಚ್ಚು ಎಂದು ತಾಕೀತು ಮಾಡಿದಳು. ಮೂರು ಸೇರು ಉಪ್ಪು ಕೊಡಲಿ, ತಿಂದೇನು; ಎಣ್ಣೆ ಕೊಪ್ಪರಿಗೆಗೆಸೆಯಲಿ, ಕುದ್ದೇನು; ಚಾವಟಿಯಲ್ಲಿ ಹೊಡೆಯಲಿ, ಸಹಿಸಿಯೇನು ಆದರೆ, ಆದರೆ ಈ ಸೀರೆ ಸೆಳೆತವನ್ನು ಮಾತ್ರಾ ಸಹಿಸಲಾರೆ ಎಂಬ ಬಬ್ರುವಾಹನ ಚಿತ್ರದ ಡೈಲಾಗು ರೀತಿಯ ಆಲೋಚನಾ ಲಹರಿ  ಅವಳ ಮನಸ್ಸಿನಲ್ಲಿ ಸುಳಿದು ಹೋಯಿತು. ನಖಶಿಖಾಂತ ಉರಿದು, ಅದನ್ನು ಬಿಚ್ಚಿದರೆ ತಾನು ಮಾನಮುಚ್ಚಿಕೊಳ್ಳಲು ಆಗುವುದಿಲ್ಲವೆಂದೂ, ಅದನ್ನು ಕೇಳುವ ಹಕ್ಕು ಆ ರಾವಣನ ವಂಶಸ್ಥಳಿಗೆ ಇಲ್ಲವೆಂದೂ, ಕಿರುಚಿ, ಅಚ್ಚಕನ್ನಡದ ಭಾಷೆಯ ಬೈಗುಳ ಪದಪ್ರಯೋಗ ಮಾಡಿ, ಝಪ್ಪೆಂದು ಕುಳಿತು ಬಿಟ್ಟಳು.

‘’ My dear madam, you have to open the bundle. I want to see. You may be hiding drugs, gold, we want to confirm ‘’ ಎಂದು ಬಿಟ್ಟಳು

ಅದೇನ್ ಮಾಡ್ಕೋತಿಯೋ ಮಾಡ್ಕೋ. ನಾನು ಸೀರೆ ಬಿಚ್ಚಲ್ಲ ಬಾಳೇಕಾಯಿ ತೆಗೆಯಲ್ಲ, ಅಂತ ಹೇಳಿ ಅಳುತ್ತಾ ಕುಳಿತುಬಿಟ್ಟಳು. ಇವಳ ಅಳು, ಹಠ ಕಂಡು ಅವರಿಗೆ ಅನುಮಾನವೂ, ಅವರು ತನ್ನನ್ನು ಈ ರೀತಿ ನಡೆಸಿಕೊಂಡಿದ್ದು ಇವಳಿಗೆ ಅವಮಾನವೂ ಆಗಿ, ಬಾಳೇ ಕಾಯಿ ಗಂಟಿಗಿಂತಲೂ ಜಟಿಲವಾದ ಕಗ್ಗಂಟು ಎರಡೂ ಪಾರ್ಟಿಗಳ ಮಧ್ಯದಲ್ಲಿ ಉದ್ಭವವಾಯಿತು.!

ಹೊರಗೆ, ವೆಂಕನೂ, ಅವನ ಗೆಳತಿ ಸುಮ್ಮಿಯೂ, ಸುಮ್ಮನೆ ಕಾದಿದ್ದೇ ಕಾದಿದ್ದು. ಸಾವಿತ್ರಮ್ಮ ಎಷ್ಟು ಹೊತ್ತಾದರೂ ಬರಲೇ ಇಲ್ಲ. ಸಾವಿತ್ರಮ್ಮನ ಪೆಟ್ಟಿಗೆ ಕನ್ವೇಯರ್ ಬೆಲ್ಟಿನ ಮೇಲೆ ಕಾಲುಸುಟ್ಟ ನಾಯಿಯಂತೆ ಗಸ್ತು ಹೊಡೆಯುತ್ತಲೇ ಇತ್ತು.

ಕಡೆಗೆ ಅಲ್ಲಿ ವಿಚಾರಿಸಲಾಗಿ, extended investigation and security check ಗಾಗಿ ಸಾವಿತ್ರಮ್ಮನನ್ನು ಹಿಡಿದು  ಕೂಡಿಸಿರುವುದಾಗಿಯೂ, ಅಲ್ಲಿ lost in translation ಸಮಸ್ಯೆಯ ಜಟಿಲತೆಯಿಂದಾಗಿ ಎಲ್ಲವೂ ಸ್ತಬ್ಧಸ್ಥಿತಿಗೆ ಬಂದಿರುವುದಾಗಿಯೂ ತಿಳಿದ ಮೇಲೆ ಸುಮ್ಮಿಯು, ಇದು ಬಟ್ಟೆ ತೊಡುವ ಸಂಪ್ರದಾಯ ಎಂದು ಅವರಿಗೆ ಹೇಳಿದರೂ ಕೇಳದಿದ್ದಾಗ, ಸಾವಿತ್ರಮ್ಮನ ಚೀಲದಿಂದ ಹದಿನಾರು ಗಜ ಸೀರೆಯೊಂದನ್ನು ತೆಗೆದು ಸುಮ್ಮಿಯು ಉಟ್ಟು ತೋರಿಸಿದ ಮೇಲೆ ಅವರೆಲ್ಲಾ ಸಾರಿ ಕಣಮ್ಮಿ ಅಂತ ಇಂಗ್ಲೀಷಿನಲ್ಲಿ ಹೇಳಿ ಸುಮ್ಮನಾದರಂತೆ. ಆದರೇನು? damage was done.

ಹೊರಗೆ ಬರುತ್ತಲೇ ಅವರಿಗೆಲ್ಲಾ ನೆಟಿಗೆ ಮುರಿದು, ಶಾಪ ಹಾಕಿ, ಇರುವಷ್ಟು ದಿನ ಇದ್ದು ವಾಪಾಸು ಹೊರತುಬಿಟ್ಟಳಂತೆ. ಮತ್ತೆ ಅಮೇರಿಕಾ ಕಡೆ ತಲೆ ಹಾಕಲಿಲ್ಲವಂತೆ. ವೆಂಕಟನ ಮದುವೆಯಾಗಿ ಸುಮ್ಮಿ ಸೊಸೆಯಾದಮೇಲೆ ಅತ್ತೆ ಸೊಸೆ ಜಗಳವೇ ಆಡಲಿಲ್ಲಂತೆ. ಈ ಘಟಾಣಿ ಹೆಣ್ಣು ಸಾವಿತ್ರಿ, ಸುಮ್ಮಿಯ  ತಾಳಕ್ಕೆ ಕುಣಿಯುವುದನ್ನು ಹಳ್ಳಿ ಮನೆಕಂಡ ಶ್ರೀನಿವಾಸರಾಯರಿಗೆ ಈ ಅನ್ಯೋನ್ಯತೆಯ ರಹಸ್ಯ ಕಗ್ಗಂಟಾಗಿಯೇ ಉಳಿದಿದೆಯಂತೆ!!!!

-ವತ್ಸಲ ರಾಮಮೂರ್ತಿ

ಸಂಕ್ರಾಂತಿಯ ನೆನಪುಗಳು – ಅನ್ನಪೂರ್ಣಾ ಅನಂದ್

ಮಕರ ಸಂಕ್ರಾಂತಿ – ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವುದರಿಂದ ಇದು ಮಕರ ಸಂಕ್ರಮಣವೆಂದೂ , ದೇವತೆಗಳಿಗೆ ಬೆಳಗು ಆರಂಭವಾಗುವುದರಿಂದ ಉತ್ತರಾಯಣ ಪುಣ್ಯಕಾಲವೆಂದೂ ಪ್ರಸಿದ್ದವಾದ ಈ ದಿನದಂದು, ಗಂಗೆಯ ಪೂಜೆ ಮಾಡಿ, ಪಿತೃಗಳಿಗೆ ತರ್ಪಣ ಬಿಟ್ಟು, ಎಳ್ಳು ಬೆಲ್ಲ ದಾನ ಮಾಡಿ, ಸಿಹಿ ಮತ್ತು ಖಾರದ ಪೊಂಗಲ್ ಸೇವಿಸಿ ಹಬ್ಬ ಆಚರಿಸುವುದು ಪ್ರತೀತಿ.

CC- Wiki

ನಮ್ಮ ಹಬ್ಬಗಳ ಸಂಪ್ರದಾಯ ಮತ್ತು ಆಚರಣೆಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇರತ್ತೆ. ಹಾಗಾಗಿ ನಾನು ಅದರ ವಿಷಯವಾಗಿ ಬರೆಯುವುದನ್ನು ಬಿಟ್ಟು ನಾನು ನನ್ನ ಬಾಲ್ಯದಲ್ಲಿ ಹೇಗೆ ಆಚರಿಸುತ್ತಿದ್ದೆ ಮತ್ತು ಈಗ ಹೇಗೆ ಆಚರಿಸುತ್ತೇನೆ ಅಂತ ಬರೆಯಲು ಪ್ರಯತ್ನಿಸಿದ್ದೇನೆ. ಇದು ನಿಮ್ಮ ನೆನಪಿನಂಗಳವನ್ನ ಕೆದಕಿದರೆ ನನ್ನ ಈ ಪ್ರಯತ್ನ ಸಫಲ! ಹಾಗೇ ನೀವೂ ನಿಮ್ಮ ಆಚರಣೆಯನ್ನ ಹಂಚಿಕೊಂಡರೆ ಸಂತೋಷ 🙂

ಜನವರಿ ಬಂತೆಂದರೆ ಮನೆಯಲ್ಲಿ ಹಬ್ಬದ ಸಂಭ್ರಮ! ಎಳ್ಳು-ಬೆಲ್ಲದ ತಯಾರಿ ಶುರು.. ಎಲ್ಲರಿಗೂ ತಿಳಿದಂತೆ ಇದಕ್ಕೆ ಬೇಕಿರುವ ಪದಾರ್ಥಗಳು – ಎಳ್ಳು, ಬೆಲ್ಲ, ಕೊಬ್ಬರಿ, ಹುರಿಗಡಲೆ, ಕಡ್ಲೇಬೀಜ. ನಾನು ಚಿಕ್ಕವಳಿದ್ದಾಗ ಬಿಳಿ ಎಳ್ಳು ಅಂಗಡಿಗಳಲ್ಲಿ ಸಿಗುತ್ತಿರಲಿಲ್ಲ. ಹಾಗಾಗಿ ಕರಿ ಎಳ್ಳನ್ನು ತಂದು, ನೆನೆಸಿ, ಕೈಯಲ್ಲಿ ಉಜ್ಜಿ ಅದರ ಕರೀ ಹೊಟ್ಟನ್ನುತೆಗೆದು ಬಿಳಿ ಮಾಡಿ ಒಣಗಸಬೇಕಿತ್ತು. ಕೊಬ್ಬರಿಯ ಹೊರಗಿನ ಕಂದು ಪದರವನ್ನು ನಾಜೂಕಾಗಿ ತುರಿಯುವ ಮಣೆಯಲ್ಲಿ ತುರಿದು ಅದನ್ನೂ ಬಿಳಿ ಮಾಡಬೇಕು. ಆದಷ್ಟೂ ಬೆಳ್ಳಗಿರುವ ಬೆಲ್ಲದ ಅಚ್ಚನ್ನು ಆರಿಸಿ ತರಬೇಕು. ಕೊಬ್ಬರಿ ಮತ್ತು ಬೆಲ್ಲವನ್ನ ಒಂದೇ ಸಮನಾದ ಸಣ್ಣ ಚೌಕಾಕಾರದ ತುಂಡುಗಳಾಗಿ ಅಡಿಕೆ ಕತ್ತರಿಯಲ್ಲಿ ಕತ್ತರಿಸಿಟ್ಟುಕೊಳ್ಳಬೇಕು. ಕಡ್ಲೇಬೀಜವನ್ನ ಹುರಿದು, ಅದರ ಹೊಟ್ಟನ್ನುತೆಗೆದು ಅದನ್ನೂ ಬಿಳಿಯಾಗಿಸಬೇಕು. ಹೀಗೆ ಸಿದ್ಧಪಡಿಸಿಕೊಂಡ ಪದಾರ್ಥಗಳನ್ನ ಸೇರಿಸಿದಾಗ ತಯಾರಾಗುತ್ತಿತ್ತು ಎಳ್ಳು-ಬೆಲ್ಲ! ಹೀಗೆ ಸೇರುಗಟ್ಟಲೆ ಎಳ್ಳು-ಬೆಲ್ಲ ತಯಾರಾಗುತ್ತಿತ್ತು! ಮಕ್ಕಳಾಗಿದ್ದ ನಾವು ಬಹಳ ಆಸ್ಥೆಯಿಂದ ಎಳ್ಳು ಮತ್ತು ಕಡ್ಲೇಬೀಜದ ಹೊಟ್ಟನ್ನು, ಕೊಬ್ಬರಿಯ ಹೊರಪದರವನ್ನು ತೆಗೆಯುವಲ್ಲಿ ನಮ್ಮ ಅಳಿಲುಸೇವೆಯನ್ನು ಮಾಡುತ್ತಿದ್ದೆವು 🙂 ಏನೇ ಸಹಾಯ ಮಾಡಿದರೂ ಒಂದು ಚೂರೂ ರುಚಿಗೆ ಸಿಗುತ್ತಿರಲಿಲ್ಲ! ಹಬ್ಬದ ದಿನ ನೈವೇದ್ಯವಾಗದೆ ಯಾರಿಗೂ ಇಲ್ಲ.. ತಯಾರಾದ ಪದಾರ್ಥ ದೊಡ್ದ ಅಲ್ಯೂಮಿನಿಯಂ ಡಬ್ಬದಲ್ಲಿ ಸುರಕ್ಷಿತವಾಗಿ ಅಟ್ಟಸೇರುತ್ತಿತ್ತು!

ಮಲ್ಲೇಶ್ವರಂ 8th ಕ್ರಾಸ್ ಗೆ ಹೋಗಿ ಹೊಸ ಬಟ್ಟೆ ವ್ಯಾಪಾರ! ಹಬ್ಬಕ್ಕೆ ನಮಗೆ ಇಷ್ಟವಾದ ಝರಿ ಲಂಗವೋ, ಬಣ್ಣದ frock ಮನೆಗೆ ಬರುತ್ತಿತ್ತು. ಅದನ್ನೂ ಹಬ್ಬದ ದಿನದವರೆಗೂ ಮುಟ್ಟುವಂತಿಲ್ಲ 🙂

CC- Wiki

ಹಬ್ಬ ಇನ್ನೆರಡು ದಿನವಿದೆಯೆಂದಾಗ ಅಟ್ಟದಿಂದ ಮರದ ಸಕ್ಕರೆ ಅಚ್ಚುಗಳು ಕೆಳಗಿಳಿಯುತ್ತಿದ್ದವು. ಕೆಲಸದವಳು ಅವನ್ನೆಲ್ಲ ತೊಳೆದು ಒಣಗಿಸಿ ಶುಚಿಯಾಗಿಸುತ್ತಿದ್ದಳು. ನನ್ನ ಅಮ್ಮಾಮಿ (ಸೋದರಮಾವನ ಹೆಂಡತಿ) ನಮ್ಮ ಮನೆಗೆ ಸಕ್ಕರೆ ಅಚ್ಚು ಮಾಡಲು ಬರುತ್ತಿದ್ದರು. ಮಧ್ಯಾಹ್ನ ಸುಮಾರು ೨ ಘಂಟೆಯಿಂದ ೬ ಘಂಟೆಯವರೆಗೂ ನಡೆಯುತ್ತಿತ್ತು ಅಚ್ಚು ಮಾಡುವ ಕಾರ್ಯಕ್ರಮ. ತುಳಸಿ ಕಟ್ಟೆ, ಗೋಪುರ, ಗಂಡಭೇರುಂಡ, ಬಾಳೆಚಿಪ್ಪು, ಹೂಜಿ, ಆನೆ, ಕುದುರೆ, ಬಾತು, ಚಿಟ್ಟಚ್ಚು ಹೀಗೆ ನಾನಾ ವಿಧದ ಅಚ್ಚುಗಳಲ್ಲಿ ಸಕ್ಕರೆಪಾಕ ಇಳಿದು ಆ ಆ ಆಕಾರದ ಸಕ್ಕರೆ ಅಚ್ಚು ಸೃಷ್ಟಿ ಆಗುತ್ತಿತ್ತು! ಅಚ್ಚುಗಳನ್ನ ತೊಳೆಯೋದು, ಅದನ್ನ ಸರಿಯಾಗಿ ಜೋಡಿಸಿ ದಾರ/rubber band ಕಟ್ಟೋದು, ಸಕ್ಕರೆ ಪಾಕ ವನ್ನ ಅಚ್ಚೊಳಗೆ ಸುರಿಯುವಾಗ ಅಚ್ಚನ್ನ ಹಿಡಿದು ನೆಲದಮೇಲೆ ಕುಟ್ಟೋದು (ಹೀಗೆ ಮಾಡದಿದ್ದರೆ ಪಾಕ ಅಚ್ಚಿನೋಳಕ್ಕೆ ಸರಿಯಾಗಿ ಹೋಗದೆ ಸಕ್ಕರೆ ಅಚ್ಚಿನ ಆಕಾರ ವಿಕಾರವಾಗುತ್ತಿತ್ತು!), ಪಾಕ ಘಟ್ಟಿಯಾದ ಮೇಲೆ ಅಚ್ಚನ್ನ ಜೋಪಾನವಾಗಿ ಬಿಡಿಸಿ, ಸಕ್ಕರೆ ಅಚ್ಚನ್ನ ತೆಗೆದಿಡುವ ಕೆಲಸಗಳೆಲ್ಲ ಮಕ್ಕಳಾದ ನಮ್ಮದು! ಅದೆಂಥ ಆಸಕ್ತಿ ಮಾತು ಹುಮ್ಮಸ್ಸಿನಿಂದ ಮಡುತ್ತಿದ್ದೆವೆಂಬುದನ್ನ ಬಣ್ಣಿಸಲಸಾಧ್ಯ!

ಹಬ್ಬದ ಹಿಂದಿನ ದಿನ, ಎಳ್ಳು ಬೀರಲು ಬೇಕಾದ ಪದಾರ್ಥಗಳನ್ನು ತರಲು ಮತ್ತೆ 8th ಕ್ರಾಸ್ ಗೆ ಪ್ರಯಾಣ 🙂 ಕುಸರಿ ಕಾಳು, ಜೀರಿಗೆ ಪೆಪ್ಪೆರ್ಮೆಂಟ್ ಇಡಲು ಬಣ್ಣ ಬಣ್ಣದ ಸಣ್ಣ ಡಬ್ಬಗಳು, ಹಲವಾರು ಕಬ್ಬಿನ ಜಲ್ಲೆಗಳು, ಸೇಬು, ಕಿತ್ತಳೆ ಹಣ್ಣುಗಳು, ಎಳ್ಳು-ಬೆಲ್ಲ ಹಾಕಿಡಲು cover ಗಳು, ಅರಿಶಿನ/ಕುಂಕುಮದ ಪೊಟ್ಟಣಗಳು, ವಿಳ್ಳೆದೆಲೆ, ಅಡಿಕೆ ಎಲ್ಲ ಮನೆಗೆ ಬರುತ್ತಿದ್ದವು. ಈ ಸಾಮಗ್ರೀಗಳನ್ನ ಓರಣ ಮಾಡುವ ಕೆಲಸ ನಮ್ಮದು. ಬಹಳ ಸಂಭ್ರಮದಿಂದ ನಡೆಯುತ್ತಿತ್ತು 🙂

ಹಬ್ಬದ ದಿನ ಬೆಳಿಗ್ಗೆ ತಲೆಗೆ ಅಭ್ಯಂಜನ ಮಾಡಿ ಹೊಸ ಬಟ್ಟೆತೊಟ್ಟು ready ಆಗುತ್ತಿದ್ದೆವು. ದೇವರ ಪೂಜೆ, ಗಂಗೆ ಪೂಜೆ ಮತ್ತು ತರ್ಪಣಗಳು ಸಾಂಗವಾಗಿ ನಡೆದು ಎಳ್ಳು-ಬೆಲ್ಲ, ಸಿಹಿ ಮತ್ತು ಖಾರ ಪೊಂಗಲ್ ಗಳ ನೈವೇದ್ಯ ಮುಗಿದಮೇಲೆ , ಬೀದಿಯ ಎಲ್ಲ ಮನೆಗಳಿಗೂ ಎಳ್ಳು ಬೀರಲು ನಾನು ನನ್ನ ತಂಗಿ ಹೋಗುತ್ತಿದ್ದೆವು. ಹಾಗೆ ಮನೆಗೆ ಬಂದವರಿಗೆ ಅರಿಶಿನ ಕುಂಕುಮ ಎಲೆಅಡಿಕೆ ಕೊಡುವ ಸಂಭ್ರಮ ಬೇರೆ!

ಮಧ್ಯಾಹ್ನದ ಹಬ್ಬದ ಊಟದ ನಂತರ ಎಳ್ಳು ಬೀರಲು ಆಟೋ ಹತ್ತಿ ಶಂಕರಪುರ, ವಿಶ್ವೇಶ್ವರಪುರಗಳಿಗೆ ಅಮ್ಮ ಮತ್ತು ದೊಡ್ಡಮ್ಮನ ಜೊತೆ ನಮ್ಮ ಸವಾರಿ ಹೊರಟರೆ ಮನೆ ಸೇರುತ್ತಿದ್ದಿದ್ದು ರಾತ್ರಿಗೇ! ಬಂದನಂತರ, ಮಕ್ಕಳಾದ ನಮ್ಮನ್ನು ಹಸೆಮಣೆಯ ಮೇಲೆ ಕೂರಿಸಿ ಆರತಿ ಎತ್ತಿ, ಎಳ್ಳು ಬೆಲ್ಲ ಕಬ್ಬು ಎಲಚಿಹಣ್ಣು ಒಣ ಖರ್ಜೂರ ಮತ್ತು ಚಿಲ್ಲರೆ ಕಾಸಿ ನ ಮಿಶ್ರಣವನ್ನ ಸೇರಿನಲ್ಲಿ ಹಾಕಿ ನಮ್ಮ ತಲೆಯ ಮೇಲೆ ಹಾಕುತ್ತಿದ್ದರು. ಚಿಲ್ಲರೆ ಕಾಸನ್ನು ಆರಿಸಿಕೊಳ್ಳಲು ನಾವು ಮುಂದಾಗುತ್ತಿದ್ದೆವು 🙂

ಹೀಗೆ ನಡೆಯುತ್ತಿತ್ತು ನಮ್ಮ ಸಂಕ್ರಾಂತಿ!

ವರುಷಗಳು ಕಳೆದಂತೆ ಮತ್ತು ನಾವು ಬೆಳೆದಂತೆ ನಮ್ಮ ಸಂಭ್ರಮ ಸಡಗರ ಸ್ವಲ್ಪ ಕಮ್ಮಿ ಆಯಿತೇವಿನಹ ಹಬ್ಬದ ಆಚರಣೆಯಲ್ಲಿ ಯಾವ ಬದಲಾವಣೆಯೂ ಇರಲಿಲ್ಲ… ನಾನು ಮದುವೆಯಾಗಿ ಅಮ್ಮನ ಮನೆ ಬಿಡುವವರೆಗೂ ಎಳ್ಳು ಬೀರುತ್ತಿದ್ದೆ. ಬೀರುವ ಮನೆಗಳು ಸ್ವಲ್ಪ ಕಮ್ಮಿಯಾಗಿದ್ದವು ಅಷ್ಟೇ! ನಂತರ ನನ್ನ ತಂಗಿ ಅವಳ ಮದುವೆವರೆಗೂ ಈ ಸಂಪ್ರದಾಯವನ್ನ ಮುಂದುವರೆಸಿದಳು. ಆಮೇಲೆ ಅಮ್ಮ ದೊಡ್ದಮ್ಮನಿಗೂ ವಯಸ್ಸಾಗಿದ್ದರಿಂದ ಮನೆಗೆ ಬಂದವರಿಗೆ ಎಳ್ಳು ಕೊಡೋದಕ್ಕೆ ಶುರು ಮಾಡಿದರು…

ಮದುವೆಯಾದ ಮೊದಲ ವರ್ಷ ಎಲ್ಲ ಹಬ್ಬಗಳ ಆಚರಣೆಯಲ್ಲೂ ವಿಶೇಷ! ನಾನು ಆನಂದ್ ನಮ್ಮಹೀರೋ ಹೋಂಡಾ ದಲ್ಲಿ ಹೋಗಿ ಎಳ್ಳುಬೀರಿದ ಜ್ಞಾಪಕ ಇನ್ನೂ ಇದೆ 🙂 ಮುಂದೆ ಮನೆಗೆ ಬಂದವರಿಗೆ ಎಳ್ಳು ಕೊಡುತ್ತಿದ್ದೆವೇ ಹೊರತು, ಮನೆ ಮನೆಗೆ ಹೋಗಿ ಬೀರಲಿಲ್ಲ..

ನನ್ನ ಅತ್ತೆಯವರು (ಆನಂದ್ ತಾಯಿ) ಖಾರದ ಎಳ್ಳು ಮಾಡೋವ್ರು, ಸಕ್ಕತ್ತಾಗಿರೋದು! 🙂 december-january ಟೈಮ್ನಲ್ಲಿ ಬೆಂಗಳೂರಿನಲ್ಲಿ ಹಿಲಕವರೆ ಸಿಗೋ ಕಾಲ. ಅದನ್ನ ತಂದು, ಅದರೊಂದಿಗೆ ಎಳ್ಳು, ಕಡಲೆಬೀಜ, ಹುರಿಗಡಲೆ, ಕೊಬ್ಬರಿ ಎಲ್ಲವನ್ನೂ ಎಣ್ಣೆಯಲ್ಲಿ ಕರಿದು ಉಪ್ಪು-ಖಾರ ಹಾಕೊವ್ರು! ಆಹಾ! ಅದೇನು ರುಚಿ! ಸ್ವರ್ಗ ಎರಡೇ ಗೇಣು 🙂 ನೆನೆಸ್ಕೊಂಡ್ರೆ ಬಾಯಲ್ಲಿ ಈಗ್ಲೂ ನೀರೂರತ್ತೆ!

ಇಂಗ್ಲೆಂಡ್ ಗೆ ಬಂದ ಮೊದಲೆರಡು ವರುಷ ನಾವು lincoln ನಲ್ಲಿದ್ದೆವು. ಅಲ್ಲಿ ಬಹಳಷ್ಟು ಜನ ಭಾರತೀಯರ ಪರಿಚಯವಿದ್ದಿದ್ದರಿಂದ ಮತ್ತು ಮಕ್ಕಳಿಗೂ ನಮ್ಮ ಸಂಪ್ರದಾಯ ಆಚರಣೆಗಳ ಅರಿವು ಮೂಡಿಸುವ ಆಸೆ ಇದ್ದಿದ್ದರಿಂದ ಎಳ್ಳನ್ನು ಮನೆಯಲ್ಲಿ ಮಾಡಿ, leicester ನಿಂದ ಕಬ್ಬು ತಂದು ಎಳ್ಳು ಬೀರಿಸಿದೆ… cheltenham ಗೆ ಬಂದ ನಂತರ ಇಲ್ಲಿ ಅಷ್ಟು ಭಾರತೀಯರ ಪರಿಚಯ ಆಗಲಿಲ್ಲ 😦 ಹಾಗಾಗಿ ಈಗ ಮನೆಯಮಟ್ಟಿಗಿದೆ ಹಬ್ಬದ ಆಚರಣೆ. ಎಳ್ಳು, ಪೊಂಗಲು ಮಾಡಿ, ಹಬ್ಬದ ವಿಶೇಷತೆಯನ್ನ ಮಕ್ಕಳಿಗೆ ನೆನಪಿಸಿ, ಹಬ್ಬದ ದಿನವನ್ನ ಕಳೀತೀವಿ

ಇನ್ನೇನು ಸಂಕ್ರಾಂತಿ ಹತ್ತಿರ ಬರುತ್ತಿದೆ! ನಿಮಗೆಲ್ಲ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.. ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡೋಣ…

ಎಳ್ಳು ಬೆಲ್ಲ
ಎಳ್ಳು ಬೆಲ್ಲ

ಇಗೋ ಇಲ್ಲಿದೆ ಇ-ಎಳ್ಳು ಬೆಲ್ಲ 🙂