ಕನ್ನಡ ಭಾಷೆಯ ಮೇಲೆ ಒಂದಿಷ್ಟು ಆಲೋಚನೆಗಳು – ಕೇಶವ ಕುಲಕರ್ಣಿ

ನಾನು ಇಂಗ್ಲೆಂಡಿಗೆ ಬಂದ ಹೊಸತಿನಲ್ಲಿ ಕನ್ನಡವನ್ನು ಓದಬೇಕೆಂದರೆ ಭಾರತದಿಂದ ತಂದ ಪುಸ್ತಕಗಳು ಮಾತ್ರ ಆಸರೆಯಾಗಿದ್ದವು. ಆಗತಾನೆ ಕನ್ನಡದಲ್ಲಿ ಬ್ಲಾಗುಗಳು ಆರಂಭವಾಗುತ್ತಿದ್ದವು. ದಾಟ್ಸ್ ಕನ್ನಡ ಎನ್ನುವ ಜಾಲದಲ್ಲಿ ಕನ್ನಡದ ವಾರ್ತೆಗಳನ್ನು ಓದಲು ಸಿಗುತ್ತಿತ್ತು. ವರುಷಗಳು ಕಳೆದಂತೆ ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜಾಲದಲ್ಲಿ ಓದಲು ಸಿಗಹತ್ತಿದವು. ಸುಧಾ, ತರಂಗ, ಮಯೂರ, ತುಷಾರ, ರೂಪತಾರಾಗಳೂ ಓದಲು ಸಿಗತೊಡಗಿದವು. ಇತ್ತೀಚೆಗೆ ವಿವಿಡ್‍ಲಿಪಿ, ಮೈಲಾಂಗ್ ಎನ್ನುವ ಆ್ಯಪ್‍ಗಳು ಕನ್ನಡದ ಇ-ಪುಸ್ತಕಗಳನ್ನು ಫೋನಿಗೆ ತಂದು ಹಾಕುತ್ತಿವೆ. ಯುಟ್ಯೂಬಿನಲ್ಲಿ ಕನ್ನಡ ಸಾಹಿತಿಗಳ ಚರ್ಚೆ ಮತ್ತು ಸಂದರ್ಶನಗಳನ್ನು ನೋಡಲು ಸಿಗುತ್ತಿವೆ. ಅವಧಿ ಮತ್ತು ಕೆಂಡಸಂಪಿಗೆ ತರಹದ ಕನ್ನಡ ಸಾಹಿತ್ಯಕ್ಕೇ ಮೀಸಲಾದ ಜಾಲತಾಣಗಳಿವೆ. 

ಕನ್ನಡನಾಡಿನಿಂದ ದೂರ ಬಂದಿದ್ದರೂ ಕನ್ನಡದಲ್ಲಿ ವಾರ್ತೆಗಳನ್ನು, ಕನ್ನಡದ ಕತೆ-ಕಾದಂಬರಿಗಳನ್ನು, ಕವನಗಳನ್ನು ಓದುವುದು ನಿರಂತರವಾಗಿ ನಡೆಯುತ್ತಲೇ ಇದೆ. ನಾನು ಇಂಗ್ಲೆಂಡಿನಲ್ಲಿ ಕಳೆದ ಈ ಹತ್ತು ಹದಿನೈದು ವರ್ಷಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಅಗಾಧವಾದ ಬದಲಾವಣೆಗಳಾಗಿವೆ ಎಂದು ಅನಿಸುತ್ತದೆ. ಅಂಥ ಕೆಲವು ವಿಷಯಗಳನ್ನು ಈ ಅಂಕಣ ಬರಹದಲ್ಲಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ (ನಾನೇ ಮೊದಲನೇಯನಲ್ಲ ಎಂದು ಗೊತ್ತು). ನಾನು ಕನ್ನಡದ ಪಂಡಿತನೂ ಅಲ್ಲ ಮತ್ತು ಕನ್ನಡ ಭಾಷೆಯ ಇತಿಹಾಸವನ್ನು ಓದಿಕೊಂಡವನೂ ಅಲ್ಲ ಎಂದು ಮೊದಲು ತಪ್ಪೊಪ್ಪಿಕೊಂಡೇ (ಡಿಸ್‍ಕ್ಲೇಮರ್) ಇದನ್ನೆಲ್ಲ ನಿಮ್ಮ ಮುಂದಿಡುತ್ತಿದ್ದೇನೆ. 

ಸಾಯುತ್ತಲಿರುವ ಕನ್ನಡಪದಗಳು, ಹೆಚ್ಚುತ್ತಲಿರುವ ಇಂಗ್ಲೀಷ್ ಶಬ್ದಗಳು:

ದೊಡ್ಡಪಟ್ಟಣಗಳಲ್ಲಿ ನೆಲೆಸುವ ಕನ್ನಡಿಗರು ಕನ್ನಡದಲ್ಲಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಒಂದಾದರೂ ಇಂಗ್ಲೀಷ್ ಶಬ್ದವನ್ನು ಉಪಯೋಗಿಸುತ್ತಾರೆ ಎನ್ನುವುದು ನನ್ನ ಅನಿಸಿಕೆ. ಕೇವಲ ಒಂದು ಪೀಳಿಗೆಯ ಹಿಂದೆ ದಿನಬಳಕೆಯಲ್ಲಿದ್ದ ಎಷ್ಟೊಂದು ಕನ್ನಡದ ಶಬ್ದಗಳನ್ನು ಇಂಗ್ಲೀಷ್ ಶಬ್ದಗಳು ಕೊಂದು ಹಾಕಿರುವುದರೆ ನೇರ ಪರಿಣಾಮವಿದು  (ಪ್ರೊಫೇಸರ್ ಕೃಷ್ಣೇಗೌಡರು ‘ಕೋಡಗನ ಕೋಳಿ ನುಂಗಿತ್ತ‘ದ ಮಾದರಿಯಲ್ಲಿ ಇದರ ಬಗ್ಗೆ ಒಂದು ಹಾಡು ಮಾಡಿದ್ದಾರೆ ಕೂಡ). 

ಪಾನಕವನ್ನು ಜ್ಯೂಸ್, ಪಚಡಿಯನ್ನು ಸಲಾಡ್, ಅನ್ನವನ್ನು ರೈಸ್, ಮೊಸರನ್ನವನ್ನು ಕರ್ಡ್‌-ರೈಸ್, ಚಿತ್ರಾನ್ನವನ್ನು ಲೆಮನ್-ರೈಸ್ ಅನ್ನುತ್ತಿದ್ದೇವೆ. ಪಡಸಾಲೆಯನ್ನು ಡ್ರಾಯಿಂಗ್-ರೂಮ್, ಅಡುಗೆಮನೆಯನ್ನು ಕಿಚನ್, ಬಚ್ಚಲುಮನೆಯನ್ನು ಬಾತ್‌-ರೂಮ್ ಅನ್ನುತ್ತಿದ್ದೇವೆ. ಅಪ್ಪ ಡ್ಯಾಡಿಯಾಗಿ, ಅಮ್ಮ ಮಮ್ಮಿಯಾಗಿ ಆಗಲೇ ಒಂದು ಪೀಳಿಗೆಯೇ ಮುಗಿದಿದೆ. ಮಾಮಾ, ಕಾಕಾ, ಸೋದರಮಾವ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲ ಶಬ್ದಗಳೂ ‘ಅಂಕಲ್’ ಆಗಿಬಿಟ್ಟಿವೆ. ಮಾಮಿ, ಕಾಕು, ದೊಡ್ಡಮ್ಮ, ಚಿಕ್ಕಮ್ಮರೆಲ್ಲ ‘ಆಂಟಿ’ಗಳಾಗಿದ್ದಾರೆ. ಮೆಣಸು ಪೆಪ್ಪರ್ ಆಗಿದೆ, ಶುಂಠಿ ಜಿಂಜರ್ ಆಗಿದೆ, ಬೆಳ್ಳುಳ್ಳಿ ಗಾರ್ಲಿಕ್ ಆಗಿದೆ, ಅರಿಶಿಣ ಪುಡಿ ಟರ್ಮರಿಕ್ ಆಗಿದೆ. ವರ್ಷಗಳು ಉರುಳಿದಂತೆ ನಿಧನಿಧಾನವಾಗಿ ದಿನನಿತ್ಯ ಬಳಸುವ ಕನ್ನಡದ ಪದಗಳನ್ನು ಇಂಗ್ಲೀಷ್ ಪದಗಳು ಆಕ್ರಮಿಸುತ್ತಿವೆ.   

ತಂತ್ರಜ್ಙಾನದಿಂದ ಬಂದ ಹೊಸ ಅವಿಷ್ಕಾರಗಳಾದ ಫೋನು, ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಿಗೆ ದೂರವಾಣಿ, ಗಣಕಯಂತ್ರ, ಜಂಗಮವಾಣಿ ಎಂದೆಲ್ಲ ಹೊಸ ಶಬ್ದಗಳನ್ನು ತರುವ ಪ್ರಯತ್ನ ನಡೆಯಿತಾದರೂ ಕೊನೆಗೆ ಕನ್ನಡಿಗರ ಮಾತಿನಲ್ಲಿ ಉಳಿದದ್ದು ಮೂಲ ಇಂಗ್ಲೀಷ್ ಪದಗಳೇ. ಪೋಲೀಸರಿಗೆ ಆರಕ್ಷಕ, ಇಂಜಿನಿಯರನಿಗೆ ಅಭಿಯಂತರ, ಮ್ಯಾನೇಜರನಿಗೆ ವ್ಯವಸ್ಥಾಪಕ (ಕಾರ್ಯನಿರ್ವಾಹಕ) ಎಂದೆಲ್ಲ ಹೊಸ ಶಬ್ದಗಳ ಪ್ರಯೋಗ ಪತ್ರಿಕೆಗಳಿಗೆ ಸೀಮಿತವಾಗಿ, ಕೊನೆಗೆ ಪತ್ರಿಕೆಗಳೂ ಅವುಗಳ ಬಳಕೆಯನ್ನು ಬಿಟ್ಟಿಕೊಟ್ಟವು.

ಕನ್ನಡ ಭಾಷೆಯಲ್ಲಿ ಪಾರಿಭಾಷಿಕ ಪದಗಳನ್ನು ಸೃಷ್ಟಿಸುವ ಕೆಲಸದ ಹಿಂದಿರುವ ಪರಿಶ್ರಮವೆಲ್ಲ ನಷ್ಟವಾಗುತ್ತಲಿದೆ. ಇದೇ ಪ್ರವೃತ್ತಿ ಮುಂದುವರೆದರೆ ಹೊಸ ಕನ್ನಡ ಶಬ್ದಗಳನ್ನು ಹುಟ್ಟುಹಾಕುವ ಪ್ರಯತ್ನವನ್ನೇ ಪಂಡಿತರು ಬಿಟ್ಟುಬಿಡುತ್ತಾರೆ ಅನಿಸುತ್ತದೆ. 

ಮಾತನಾಡುವಾಗ ಇಲ್ಲದ ಮಡಿವಂತಿಕೆ ಬರೆಯುವಾಗ ಇರಬೇಕೇ?:

ಹೀಗೆ ಸಾವಿರಾರು ಇಂಗ್ಲೀಷ್ ಪದಗಳು ದಿನ ಬಳಕೆಯ ಕನ್ನಡದ ಬದುಕಲ್ಲಿ ಹಾಸುಹೊಕ್ಕಾಗಿ, ಕನ್ನಡದ ಪದಗಳೇ ಆಗಿ ಹೋಗಿದ್ದರೂ, ನಾನು ಇಂಗ್ಲೆಂಡಿಗೆ ಬಂದು ಇಷ್ಟು ವರ್ಷಗಳಾದರೂ, ದಿನನಿತ್ಯ ಬಳಸುವ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ನನ್ನ ಕೈ ಓಡುವುದಿಲ್ಲ, ಆ ಶಬ್ದಗಳಿಗೆ ಸರಿಸಮನಾದ ಕನ್ನಡ ಶಬ್ದವನ್ನೋ, ಕನ್ನಡ ಶಬ್ದ ಸಿಗದಿದ್ದಾಗ ಸಂಸ್ಕೃತ ಶಬ್ದವನ್ನೋ ಮೆದುಳು ಹುಡುಕುತ್ತದೆ. ಕನ್ನಡದಲ್ಲಿ ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಅಂತರ್ಧಾನ, ಸ್ವರೂಪ, ವ್ಯಾಧಿಗ್ರಸ್ತ, ಜಾಜ್ವಲ್ಯಮಾನ, ವಾಕ್ಚಾತುರ್ಯ ಇತ್ಯಾದಿ ಸಂಸ್ಕೃತದ ಶಬ್ದಗಳನ್ನು ಬರೆಯುವಾಗ ಇಲ್ಲದ ಮಡಿವಂತಿಕೆ, ದಿನಬಳಕೆಯ ಇಂಗ್ಲೀಷ್ ಶಬ್ದಗಳಾದ ಹಾಸ್ಪಿಟಲ್, ಕೀಬೋರ್ಡ್, ಮಾನಿಟರ್ ಎಂದೆಲ್ಲ ಬರೆಯುವಾಗ ಅಡ್ಡಬರುತ್ತದೆ. ನಾನು ಚಿಕ್ಕನಿದ್ದಾಗ ಆಗಲೇ ಕನ್ನಡೀಕರಣಗೊಂಡ ಬಸ್ಸು, ಕಾರು, ರೈಲು, ರೋಡು ಎಂದು ಬರೆಯುವಾಗ ಇಲ್ಲದ ಮುಜುಗರ, ಇತ್ತೀಚಿನ ವರ್ಷಗಳಲ್ಲಿ ಕನ್ನಡೀಕರಣಗೊಂಡ ಇಂಗ್ಲೀಷ್ ಶಬ್ದಗಳನ್ನು ಬರೆಯುವಾಗ ಆಗುತ್ತದೆ. ಪಾರ್ಸಿಯಿಂದ ಬಂದ `ಅರ್ಜಿ` ಎಂದು ಬರೆದಾಗ ಏನೂ ಅನಿಸುವುದಿಲ್ಲ, ಆದರೆ `ಅಪ್ಲಿಕೇಷನ್` ಎಂದು ಕನ್ನಡದ ಲಿಪಿಯಲ್ಲಿ ಬರೆಯುವಾಗ ಇರಿಸುಮುರುಸಾಗುತ್ತದೆ. ಈ ಗೊಂದಲ ಕನ್ನಡದ ಬೇರೆ ಲೇಖಕರನ್ನು ಎಷ್ಟರಮಟ್ಟಿಗೆ ಕಾಡುವುದೋ ನನಗೆ ಗೊತ್ತಿಲ್ಲ. ಪ್ರಶ್ನೆ ಇರುವುದು ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದಲ್ಲ, ಯಾವುದನ್ನು ಬರೆದರೆ ಕನ್ನಡದ ಓದುಗರನ್ನು ಸುಲಭವಾಗಿ ತಲುಪಬಹುದು ಎನ್ನುವುದು.

ವಿರಾಮಚಿಹ್ನೆಗಳ (ದುರು)ಪಯೋಗ: 

ನಾವು ಬರೆಯುವಾಗ ಬಹಳಷ್ಟು ವಿರಾಮಚಿಹ್ನೆಗಳನ್ನು (punctuation) ಬಳಸುತ್ತೇವೆ, ಪೂರ್ಣವಿರಾಮ, ಅಲ್ಪವಿರಾಮ, ಅರ್ಧವಿರಾಮ, ಪ್ರಶ್ನಾರ್ಥಕ,  ಉದ್ಗಾರವಾಚಕ ಇತ್ಯಾದಿ. ಇಷ್ಟೊಂದು ವಿರಾಮ ಚಿಹ್ನೆಗಳನ್ನು ಭಾರತೀಯ ಭಾಷೆಗಳು ಕಲಿತದ್ದು ಬಹುಷಃ ಇಂಗ್ಲೀಷಿನಿಂದಲೇ ಇರಬೇಕು. 

ಅವುಗಳಲ್ಲಿ ಒಂದು ಚಿಹ್ನೆಯನ್ನು ಕನ್ನಡ ಸಾಹಿತ್ಯದ ಓದುಗರೆಲ್ಲರೂ ಖಂಡಿತ ಓದಿರುತ್ತೀರಿ (ಅಥವಾ ನೋಡಿರುತ್ತೀರಿ), ಅದು ಮೂರು ಡಾಟ್‍ಗಳು (…), ಇಂಗ್ಲೀಷಿನಲ್ಲಿ ಅದಕ್ಕೆ ellipse (ಎಲಿಪ್ಸ್) ಎನ್ನುತ್ತಾರೆ. ಈ ಎಲಿಪ್ಸಿಗೆ ಕನ್ನಡ ವ್ಯಾಕರಣಕಾರರು ಯಾವ ಕನ್ನಡ/ಸಂಸ್ಕೃತ ಶಬ್ದವನ್ನು ಕೊಟ್ಟಿದ್ದಾರೋ ಗೊತಿಲ್ಲ. 

ವಾಕ್ಯದ ಕೊನೆಗೆ ಎಲಿಪ್ಸನ್ನು ಉಪಯೋಗಿಸಿದರೆ, ಇನ್ನೂ ಏನೋ ಮಾತು ಉಳಿದಿದೆ ಎಂದು ಅರ್ಥ. ಸಂಭಾಷಣೆಯ ರೂಪದಲ್ಲಿರುವ ವಾಕ್ಯದ ನಡುವೆ ಎಲಿಪ್ಸ್ ಬರೆದರೆ, ಮಾತನಾಡುವ ವ್ಯಕ್ತಿ ಮಾತನ್ನು ನುಂಗಿದ ಎಂದು ಅರ್ಥ. ಒಟ್ಟಿನಲ್ಲಿ ಎಲಿಪ್ಸನ್ನು ಬಳಸಿದರೆ ಎಲ್ಲೋ ಏನೋ ಬಿಟ್ಟುಹೋಗಿದೆ ಎಂದು ಅರ್ಥ. ಆದ್ದರಿಂದ ಈ ಎಲಿಪ್ಸನ್ನು ಎಷ್ಟು ಕಡಿಮೆಯಾಗುತ್ತೋ ಅಷ್ಟು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತದೆ ಇಂಗ್ಲೀಷ್ ವ್ಯಾಕರಣ. ಎಲಿಪ್ಸ್ ಚಿಹ್ನೆಯನ್ನು ಎಲ್ಲಿ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬಾರದು ಎನ್ನುವುದನ್ನು ತಿಳಿಯಲು ಇಂಗ್ಲೀಷ್ ಭಾಷೆಯಲ್ಲಿ ಸಾಕಷ್ಟು ಲೇಖನಗಳಿವೆ, ವ್ಯಾಕರಣ ಪುಸ್ತಕಗಳಲ್ಲಿ ಅಧ್ಯಾಯಗಳಿವೆ. 

ಈ ಎಲಿಪ್ಸ್ ಚಿಹ್ನೆಯು ಕನ್ನಡದ ಕತೆ ಮತ್ತು ಕವನಗಳಲ್ಲಿ ಲಂಗುಲಗಾಮಿಲ್ಲದೇ ಎಲ್ಲಿಬೇಕೆಂದರಲ್ಲಿ ಒಕ್ಕರಿಸಿಬಿಡುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ‘ಬಿಟ್ಟ ಸ್ಥಳ ತುಂಬಿ‘ ಎಂದು ಇರುತ್ತದಲ್ಲ, ಹಾಗೆ. ಕತೆ ಬರೆಯುವಾಗ ಪ್ಯಾರಾಗ್ರಾಫಿನ ಕೊನೆಯಲ್ಲಿ ‘…‘ ಬಂದುಬಿಡುತ್ತದೆ. ಓದುಗರೇ, ನೀವೇ ಈ ಕತೆಯನು ಮುಂದುವರೆಸಿ ಎನ್ನುವಂತೆ. ಕತೆ ಕಾದಂಬರಿಗಳಲ್ಲಿ ಸಂಭಾಷಣೆಗಳನ್ನು ಬರೆಯುವಾಗ ಕನ್ನಡದ ಪ್ರಸಿದ್ಧ ಲೇಖಕರೂ ಈ ಎಲಿಪ್ಸನ್ನು ಎಲ್ಲಿ ಬೇಕೆಂದರಲ್ಲಿ ಬಳಸುತ್ತಾರೆ. ಇನ್ನು ಕವನಗಳಲ್ಲಿ ಎಲಿಪ್ಸ್ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕವನದ ಶೀರ್ಷಿಕೆಯಲ್ಲೇ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸಾಲಿನ ಕೊನೆಗೆ ಬರುತ್ತದೆ, ಕೆಲವೊಮ್ಮೆ ಕವನದ ಕೊನೆಯಲ್ಲಿ. ಎಲಿಪ್ಸ್ ಬಳಸುವುದರಿಂದ ಆ ಕವನದ ಅರ್ಥಕ್ಕೆ ಯಾವ ಬದಲಾವಣೆಯೂ ಆಗುವುದಿಲ್ಲ. ಓದುವವರಿಗೆ ಮಾತ್ರ ಕವನ ಅಪೂರ್ಣ ಅನ್ನಿಸದೇ ಇರದು. ಹೆಸರಾಂತ ಪತ್ರಿಕೆಗಳೂ ಎಪಿಪ್ಸನ್ನು ತಿದ್ದಿವ ಗೋಜಿಗೆ ಹೋಗುವುದಿಲ್ಲ. ಕನ್ನಡದಲ್ಲಿ ವಿರಾಮಚಿಹ್ನೆಗಳ ಬಗ್ಗೆ, ಅದರಲ್ಲೂ ಎಲಿಪ್ಸ್ ಚಿಹ್ನೆಯ ಬಗ್ಗೆ ಒಂದು ತರಹದ ಅಸಡ್ಡೆ ಇದೆ ಅನಿಸುತ್ತದೆ.  

ಅಷ್ಟೇ ಅಲ್ಲ, ಇನ್ನೂ ಕೆಲವು ವಿರಾಮ ಚಿಹ್ನೆಗಳನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಯುತ್ತಾರೆ, ಅದನ್ನು ಪತ್ರಿಕೆಗಳು ಪ್ರಕಟಿಸುತ್ತಾರೆ ಕೂಡ. ಎರಡು, ಮೂರು ಅಥವಾ ನಾಲ್ಕೆ ಉದ್ಗಾರ ವಾಚಗಳನ್ನು ಒಟ್ಟಿಗೇ ಬಳಸುತ್ತಾರೆ. ಉದ್ಗಾರದ ನಂತರ ಪ್ರಶ್ನಾರ್ಥಕವನ್ನೂ, ಪ್ರಶ್ನಾರ್ಥಕವಾದ ಮೇಲೆ ಉದ್ಗಾರವಾಚಕವನ್ನೂ ವಿನಾಕಾರಣ ಬಳಸುತ್ತಾರೆ (ಇಂಗ್ಲೀಷಿನಲ್ಲಿ ಇದಕ್ಕೆ interrobang ಎನ್ನುತ್ತಾರೆ). ಕೆಲವರಂತೂ ಎಲಿಪ್ಸ್ ಆದ ಮೇಲೆ ಉದ್ಗಾರವಾಚಕವನ್ನು ಬಳಸುತ್ತಾರೆ. ಭಾಷೆಯನ್ನು ಕಲಿಯುವಾಗ ಪದಭಂಡಾರ ಮತ್ತು ಕಾಗುಣಿತ ಎಷ್ಟು ಮುಖ್ಯವೋ ವಿರಾಮ ಚಿಹ್ನೆಗಳನ್ನು ಸರಿಯಾಗಿ ಬಳಸುವುದೂ ತುಂಬ ಮುಖ್ಯವಾಗುತ್ತದೆ. 

ಹೆಸರುಗಳನ್ನು ಬರೆಯುವುದು:

ನಾವು ಚಿಕ್ಕವರಿದ್ದಾಗ ಹೆಂಗಸರ ಹೆಸರನ್ನು ಗೀತಾ, ಸವಿತಾ, ಮಾಲಾ, ಸೀತಾ ಎಂದು, ಗಂಡಸರ ಹೆಸರುಗಳನ್ನು ರಮೇಶ, ಗಣೇಶ, ಸಂತೋಷ, ರಾಜೇಶ ಎಂದು ಎಲ್ಲ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದರು, ನಮ್ಮ ಪೀಳಿಗೆಯವರೂ ಹಾಗೆಯೇ ಬರೆಯುತ್ತಿದ್ದೆವು. ಇತ್ತೀಚಿನ ಒಂದೆರೆಡು ದಶಕಗಳಿಂದ, ಅದರಲ್ಲೂ ಕನ್ನಡ ಟಿವಿ ವಾಹಿನಿಗಳ ಸಂಖ್ಯೆ ಹೆಚ್ಚಾದ ಮೇಲೆ, ಹೆಂಗಸರ ಹೆಸರುಗಳು ಗೀತ, ಸವಿತ, ಮಾಲ, ಸೀತ ಎಂದೂ, ಗಂಡಸರ ಹೆಸರುಗಳನ್ನು ರಮೇಶ್, ಗಣೇಶ್, ಸಂತೋಷ್, ರಾಜೇಶ್ ಎಂದೂ ಬರೆಯುತ್ತಾರೆ. ಅಂದರೆ ಇಂಗ್ಲೀಷ್ ಭಾಷೆಯಲ್ಲಿ ಮೊದಲು ಹೆಸರುಗಳನ್ನು ಬರೆದುಕೊಂಡು, ನಂತರ ಕನ್ನಡಕ್ಕೆ ಭಾಷಾಂತರ ಮಾಡಿದಂತೆ ಕಾಣಿಸುತ್ತವೆ, ಈ ಹೆಸರುಗಳು. ಇದು ಕನ್ನಡ ಭಾಷೆ ಬೆಳೆಯುತ್ತಿರುವ ಸಂಕೇತವೋ ಅಥವಾ ವಿನಾಶದತ್ತ ಹೊರಟಿರುವ ಸಂಕೇತವೋ ಎನ್ನುವುದನ್ನು ಕನ್ನಡ ಪಂಡಿತರೇ ಉತ್ತರಿಸಬೇಕು.  

ಕನ್ನಡದಲ್ಲಿ ಸ್ಪೆಲ್ಲಿಂಗ್:

ಇಂಗ್ಲೀಷಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗುವಂತೆ ಕನ್ನಡದಲ್ಲಿ ಕಾಗುಣಿತ ದೋಷಗಳು ಆಗುತ್ತವೆ. ಅದನ್ನು ಅಮೇರಿಕದಲ್ಲಿ ನೆಲೆಸಿರುವ ಕನ್ನಡದ ಹೆಸರಾಂತ ಅಂಕಣಕಾರರಾದ ಶ್ರೀವತ್ಸ ಜೋಶಿಯವರು ಪ್ರತಿ ವಾರ ತಪ್ಪದೇ ‘ಸ್ವಚ್ಛ ಭಾಷೆ ಅಭಿಯಾನ‘ದಲ್ಲಿ ಬರೆದು ವಾಟ್ಸ್ಯಾಪ್ ಮಾಡುತ್ತಾರೆ, ಫೇಸ್ಬುಕ್ಕಿನಲ್ಲಿ ಬರೆಯುತ್ತಾರೆ. ನಾನು ಈಗ ಬರೆಯುತ್ತಿರುವುದು ಕಾಗುಣಿತ ದೋಷದ ಬಗ್ಗೆ ಅಲ್ಲ. ಕನ್ನಡದಲ್ಲಿ ಪ್ರತಿ ಶಬ್ದಕ್ಕೂ ಇರುವ ನಿಖರವಾದ ಸ್ಪೆಲಿಂಗ್ ಇರುವ ಬಗ್ಗೆ. ಏನು ಎನ್ನುವುದನ್ನು ಸ್ವಲ್ಪ ವಿವರಿಸುತ್ತೇನೆ.

‘ಅಂಚೆ‘ಯನ್ನು ‘ಅಞ್ಚೆ‘ ಎಂದೂ ಬರೆಯಬಹುದು. ನಿಜವಾಗಿ ನೋಡಿದರೆ ನಾನು ‘ಅಂಚೆ‘ಯನ್ನು ಉಚ್ಚಾರ ಮಾಡುವುದು ‘ಅಞ್ಚೆ‘ ಎಂದೇ.  ‘ಮಂಗ‘ನನ್ನು ‘ಮಙ್ಗ‘ ಎಂದು ಉಚ್ಚಾರ ಮಾಡುತ್ತೇವೆ, ಆದರೆ ‘ಮಂಗ‘ ಎಂದು ಬರೆಯುತ್ತೇವೆ. ಆದರೆ ‘ಅಂಚೆ‘, ‘ಮಂಗ‘ ಎಂದು ಬರೆದರೆ ಮಾತ್ರ ಓದುವವರಿಗೆ ಅರ್ಥವಾಗುತ್ತದೆ.  ‘ಅಞ್ಚೆ‘ ಅಥವಾ ‘ಮಙ್ಗ‘ ಎಂದು ಬರೆದರೆ ಎಂಥ ಕನ್ನಡ ಓದುಗನೂ ತಬ್ಬಿಬ್ಬಾಗುವುದು ಸಹಜ. ‘ನಿನ್ನನ್ನು‘ ಎನ್ನುವುದನ್ನು ‘ನಿಂನಂನು‘ ಎಂದು ಕೂಡ ಬರೆಯಬಹುದು, ಓದುವುದರಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ, ಆದರೆ ಅದು ತಪ್ಪು ಸ್ಪೆಲ್ಲಿಂಗ್ ಆಗುತ್ತದೆ. ಏಕೆಂದರೆ ರೂಢಿಯಲ್ಲಿ ಇರುವುದು ‘ನಿನ್ನನ್ನು‘ ಎಂದು. ‘ವಿಪರ್ಯಾಸ‘ವನ್ನು ‘ವಿಪರ‍್ಯಾಸ‘ ಎಂದೂ ಬರೆಯಬಹುದು, ಆದರೆ ಅದು ರೂಢಿಯಲ್ಲಿ ಇಲ್ಲದಿರುವುದರಿಂದ ತಪ್ಪು ಸ್ಪೆಲಿಂಗ್ ಆಗುತ್ತದೆ. ಬೀಚಿಯವರು ‘ತಿಮ್ಮ‘ನನ್ನು ‘ತಿಂಮ‘ ಎಂದು ಬರೆಯುತ್ತಿದ್ದರು, ಈಗ ‘ತಿಮ್ಮ‘ ಅದರ ಸರಿಯಾದ ಸ್ಪೆಲಿಂಗ್ ಆಗಿದೆ. .  

ಒಂದೇ ಶಬ್ದವನ್ನು ಸರಿಯಾಗಿಯೇ ಬೇರೆ ಬೇರೆ ರೀತಿಯಲ್ಲಿ ಬರೆಯಲು ಸಾಧ್ಯವಿದ್ದರೂ, ನಮಗೆ ಗೊತ್ತಿಲ್ಲದಂತೆಯೇ ಕನ್ನಡದಲ್ಲಿ ಕನ್ನಡ ಶಬ್ದಗಳ ಸ್ಪೆಲಿಂಗ್ ಇದೆ. ‘ತಂದೆ‘ಯನ್ನು ‘ತನ್ದೆ‘ ಎಂದು ಬರೆದರೆ ಅದು ‘ತಂದೆ‘ಯ ತಪ್ಪು ಸ್ಪೆಲಿಂಗ್ ಆಗುತ್ತದೆ. 

ಇದನ್ನೆಲ್ಲ ಏಕೆ ಬರೆಯುತ್ತಿದ್ದೇನೆ ಎಂದರೆ, ನಾವು ಇತ್ತೀಚೆಗೆ ಬಹಳಷ್ಟು ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೇವಷ್ಟೇ. ಆದರೆ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ  ಎರಡು ಅಥವಾ ಮೂರು ಒತ್ತಕ್ಷರಗಳು ಬರುತ್ತವೆ, ಅದನ್ನು ಹಾಗೆಯೇ ಬರೆದರೆ ಓದುವವರಿಗೆ ಕಷ್ಟವಾಗುತ್ತದೆ, ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಏಕರೂಪವನ್ನು ತರುವ ಅವಶ್ಯಕತೆ ಇದೆ, ಇಲ್ಲದಿದ್ದರೆ ಒಬ್ಬಬ್ಬರೂ ಒಂದೊಂದು ರೀತಿ ಬರೆಯುತ್ತಾರೆ. 

ಉದಾಹರಣೆಗೆ, ‘ಸಾಫ್ಟ್ವೇರ್‘ ಎಂದು ಬರೆಯುವ ಬದಲು ‘ಸಾಫ್ಟ್‌ವೇರ್‘ ಎಂದು ಬರೆದರೆ ಓದುವುದು ಸುಲಭ.“ಹಾರ್ಡ್ವೇರ್‘ ಎಂದು ಬರೆಯುವ ಬದಲು ‘ಹಾರ್ಡ್‌ವೇರ್‘ ಎಂದು ಬರೆದರೆ ಆರ್ಥಮಾಡಿಕೊಳ್ಳುವುದು ಸುಲಭ. ನಾನು ಈಗ ನೆಲೆಸಿರುವ ‘ಬರ್ಮಿಂಗ್ಹ್ಯಾಮ್‘ ನಗರವನ್ನು ‘ಬರ್ಮಿಂಗ್‍ಹ್ಯಾಮ್‘ ಎಂದು ಬರೆದರೆ ಓದುವವರಿಗೆ ಸುಲಭ. ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಸ್ಟ್ಯಾಂಡರ್ಡಾಜೇಶನ್ (ಸ್ಟ್ಯಾಂಡರ್ಡೈಜೇಷನ್) ಮಾಡುವ ಅವಶ್ಯಕತೆ ಇದೆ. 

ಕನ್ನಡದ ಅಕ್ಷರಗಳು:

ನಾನು ಶಾಲೆಯಲ್ಲಿ ಓದುವಾಗ ಕನ್ನಡದ ಅಕ್ಷರಮಾಲೆಯಲ್ಲಿ ಒಂದು ಅಕ್ಷರವಿತ್ತು (ಈಗಲೂ ಇದೆಯೋ ಇಲ್ಲವೋ ಗೊತ್ತಿಲ್ಲ), ಆದರೆ ಅದನ್ನು ಇದುವರೆಗೂ ಉಪಯೋಗಿಸಿದ ನೆನಪೇ ಇಲ್ಲ. ಆ ಅಕ್ಷರವೇ ‘ೠ‘. ಅನುನಾಸಿಕಗಳಾದ ಙ ಮತ್ತು ಞ ಗಳ ಉಪಯೋಗಗಳೂ ವಿರಳವೇ ಆದರೂ ‘ಅಂಚೆ‘, ‘ಮಂಗ‘ ಶಬ್ದಗಳ ಉಚ್ಚಾರವನ್ನು ಹೇಳಿಕೊಡಲು ಉಪಯುಕ್ತವಾಗಿವೆ. ಕೆಲವು ಅಕ್ಷರಗಳು ಕನ್ನಡದಲ್ಲಿ ಇದ್ದವು, ಅವು ಪೂರ್ತಿ ಮರೆಯಾಗಿವೆ. ಉದಾಹರಣೆಗೆ: ಱ ಮತ್ತು ೞ. ಈ ಅಕ್ಷರಗಳನ್ನು ಉಪಯೋಗಿಸಿ ಕನ್ನಡದಲ್ಲಿ ಈಗ ಯಾವ ಶಬ್ದಗಳೂ ಉಳಿದಿಲ್ಲ, ಅವುಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಕೂಡ ಕನ್ನಡಿಗರು ಮರೆತಾಗಿದೆ. ಹೀಗೆ ಕೆಲವು ಅಕ್ಷರಗಳು ಮರೆಯಾಗಿವೆ, ಕೆಲವು ಅನುಪಯುಕ್ತವಾಗಿವೆ. 

ಈಗಿರುವ ಕನ್ನಡದ ಅಕ್ಷರಗಳಿಂದ ದಿನ ನಿತ್ಯ ಉಪಯೋಗಿಸುವ ಕೆಲವು ಶಬ್ದಗಳ ಉಚ್ಚಾರಗಳನ್ನು ತರುವುದು ಕಷ್ಟವಾಗುತ್ತದೆ. ಅದರಲ್ಲೂ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬಳಸುವಾಗ, ಕನ್ನಡದ ಅಕ್ಷರಗಳನ್ನು ಬಳಸಿ ಆ ಉಚ್ಚಾರಗಳನ್ನು ತರುವುದು ಸಾಧ್ಯವಾಗುವುವಿಲ್ಲ.

ಉದಾಹರಣೆಗೆ: ‘loss‘ ಶಬ್ದವನ್ನು ‘ಲಾಸ್‘ ಎಂದು ಬರೆದರೆ ಅದರ ಮೂಲ ಉಚ್ಚಾರ ಅದರಲ್ಲಿ ಬರುವುದಿಲ್ಲ. ನಾನು ಚಿಕ್ಕವನಿದ್ದಾಗ ‘ಲಾ‘ ದ ಮೇಲೆ ‘ಅರ್ಧ ಚಂದ್ರಾಕಾರ (U)‘ ಹಾಕಿ ‘loss’ನಲ್ಲಿರುವ ‘ಆ‘ ಉಚ್ಚಾರವನ್ನು ತರುತ್ತಿದ್ದೆವು. ಆದರೆ ಈ ಅರ್ಧಚಂದ್ರಾಕರಾದ ಪ್ರಯೋಗವನ್ನು ನಾನು ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ನೋಡಿದ ನೆನಪಿಲ್ಲ. 

ಹಾಗೆಯೇ ‘Apple‘ ಶಬ್ದವನ್ನು“ಆ್ಯಪಲ್‘ ಎಂದು ಬರೆದರೆ ಓದಲು ಸುಲಭ, ‘ಆಪಲ್‘ ಎಂದೋ ‘ಯಾಪಲ್‘ ಎಂದೋ ಬರೆದರೆ ‘Apple’ ಎಂದು ಉಚ್ಚಾರ ಮಾಡುವುದು ಕಷ್ಟ. ಆದರೆ ಈ ‘ಆ್ಯ‘ ಎನ್ನುವ ಶಬ್ದ ಕನ್ನಡದ ವ್ಯಾಕರಣದ ಮಟ್ಟಿಗೆ ನಿಷಿದ್ಧ. 

‘ಫ‘ ಮತ್ತು ‘ಜ‘ ಅಕ್ಷರಗಳನ್ನು ಸ್ವಲ್ಪ ಬದಲಾಯಿಸಿ ‘ಫ಼‘ ಮತ್ತು ‘ಜ಼‘ ಎಂದಾಗಿಸಿ ‘fool‘ ಮತ್ತು ‘zoom‘ ಗಳನ್ನು ಸರಿಯಾಗಿ ಕನ್ನಡದಲ್ಲಿ ಬರೆಯಬಹುದು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರುವ ವಿಚಾರವೇ. ಆದರೆ ಈ ಅಕ್ಷರಗಳ ಬಳಕೆಯನ್ನು ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ ನಾನು ನೋಡಿಲ್ಲ. 

ಱ ಮತ್ತು ೞ ಅಕ್ಷರಗಳನ್ನು ಕನ್ನಡದ ಅಕ್ಷರಮಾಲೆಯಿಂದ ಅಧೀಕೃತವಾಗಿ ಕೈಬಿಟ್ಟಂತೆ, ಫ಼ ಮತ್ತು ಜ಼ ಅಕ್ಷರಗಳನ್ನು ಅಧೀಕೃತವಾಗಿ ಸೇರಿಸಬೇಕಾದ ಅವಶ್ಯಕತೆ ಇದೆಯೇ ಅನ್ನುವುದನ್ನು ತಜ್ಞರು ನೋಡಬೇಕು. ಹಾಗೆಯೇ ‘ಆ್ಯ‘ ಉಪಯೋಗಕ್ಕೆ ಮನ್ನಣೆ ಕೊಡಬೇಕು. ಅಕ್ಷರಗಳ ಮೇಲೆ ಅರ್ಧ ಚಂದ್ರಾಕಾರ(U)ವನ್ನು ಅರೆಸ್ವರವಾಗಿ ಕನ್ನಡದಲ್ಲಿ ಸೇರಿಸಬೇಕು ಎನ್ನುವುದು ನನ್ನ ಅನಿಸಿಕೆ. . 

ಕನ್ನಡದ ಅಂಕಿಗಳು:

ಕನ್ನಡದ ಯಾವುದೇ ಪತ್ರಿಕೆ ತೆಗೆದುಕೊಂಡರೂ, ಯಾವುದೇ ಟಿವಿ ಚಾನೆಲ್ ತೆರೆದರೂ ಅಂಕಿಗಳನ್ನು ಕನ್ನಡದಲ್ಲಿ ಬರೆಯದೇ ಹಿಂದೂ-ಅರೇಬಿಕ್‍ನಲ್ಲಿ ಬರೆಯುತ್ತಾರೆ. ನಾನು ಚಿಕ್ಕವನಿದ್ದಾಗ ಎಲ್ಲ ಪತ್ರಿಕೆಗಳೂ ಕನ್ನಡದಲ್ಲೇ ಅಂಕಿಗಳನ್ನು ಪ್ರಕಟಿಸುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಈ ಬದಲಾವಣೆಯಾಗಿದೆ. ಬರೆಯುವಾಗ ಕನ್ನಡದ ಶಬ್ದಗಳಂತೆ ಚಂದವಾಗಿ ಕಾಣುತ್ತಿದ್ದ ಕನ್ನಡದ ಅಂಕಿಗಳು ಶಾಶ್ವತವಾಗಿ ಸತ್ತು ಹೋಗಿರುವುದನ್ನು ನೋಡಿದರೆ ನನ್ನ ಪೀಳಿಗೆಯವರಿಗಾದರೂ ನೋವಾಗದೇ ಇರದು. 

ಲ್ಯಾಟಿನ್ (ರೋಮನ್) ಲಿಪಿಯಲ್ಲಿ ಕನ್ನಡ:

ಕನ್ನಡದ ಅಂಕಿಗಳನ್ನು ಹಿಂದೂ-ಅರೇಬಿಕ್ ಅಂಕಿಗಳು ನಿರ್ನಾಮ ಮಾಡಿದಂತೆ, ಕನ್ನಡದ ಲಿಪಿಯನ್ನು ಲ್ಯಾಟಿನ್/ರೋಮನ್ ಲಿಪಿ ನಿರ್ನಾಮ ಮಾಡುವ ನಿಟ್ಟಿನಲ್ಲಿ ಅಂಬೆಗಾಲಿಡುತ್ತಿದೆ.   

ಇತ್ತೀಚಿನ ವರ್ಷಗಳಲ್ಲಿ ಯುಟ್ಯೂಬಿನಲ್ಲಿ ಹಾಡುಗಳ ‘ಲಿರಿಕಲ್ ವಿಡಿಯೋ‘ಗಳನ್ನು ಬಿಡುತ್ತಾರೆ. ಹೆಚ್ಚು ಕಡಿಮೆ ಎಲ್ಲ ಕನ್ನಡ ಹಾಡುಗಳ ಬರವಣಿಗೆ ಲ್ಯಾಟಿನ್ ಲಿಪಿಯಲ್ಲಿಯೇ ಇರುತ್ತವೆ. ಇದು ಬರೀ ಕನ್ನಡದಲ್ಲಿ ಆಗಿರುವ ಬದಲಾವಣೆಯಲ್ಲ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಹಾಡಿನ ಸಾಹಿತ್ಯವನ್ನು ಲ್ಯಾಟಿನ್ನಿನಲ್ಲೇ ಬರೆಯುತ್ತಾರೆ. ಹಾಗೆಯೇ ಬಹಳಷ್ಟು ಕನ್ನಡಿಗರು ವಾಟ್ಸ್ಯಾಪ್ ಮಾಡುವಾಗ, ಮೆಸೇಜುಗಳನ್ನು ಕಳಿಸುವಾಗ ಕನ್ನಡವನ್ನು ಕನ್ನಡದಲ್ಲಿ ಬರೆಯದೇ ಲ್ಯಾಟಿನ್ ಲಿಪಿಯಲ್ಲಿ ಬರೆಯುವುದೇ ಹೆಚ್ಚು. ಕನ್ನಡ ಭಾಷೆಯನ್ನು ಲ್ಯಾಟಿನ್ ಲಿಪಿಯಲ್ಲಿ ಬರೆದರೆ ಮಾತ್ರ ಓದಬಲ್ಲ ಕನ್ನಡಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರೆದರೆ ಕನ್ನಡದ ಲಿಪಿಯನ್ನು ಓದುವ ಮತ್ತು ಬರೆಯುವ ಜನರು ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುತ್ತಾರೆ ಅನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ.   

ಚುನಾವಣೆ ಮತ್ತು ಪ್ರಜಾಪ್ರಭುತ್ವ; ಕೆಲವು ಅನಿಸಿಕೆಗಳು

ಡಾ ಜಿ .ಎಸ್. ಶಿವಪ್ರಸಾದ್

ಬ್ರಿಟನ್ ದೇಶವನ್ನು ಒಳಗೊಂಡು ಪ್ರಪಂಚದ ಹಲವಾರು ರಾಷ್ಟ್ರಗಳಲ್ಲಿ ಈ ವರ್ಷ ಚುನಾವಣೆ ನಡೆಯುತ್ತಿದೆ. ಚುನಾವಣೆಯ ಬಗ್ಗೆ ಎಂದಿಗಿಂತ ಇಂದು ಎಲ್ಲರಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂದು ತೋರುತ್ತದೆ. ಸುದ್ದಿ ಮಾಧ್ಯಮ, ಸೋಶಿಯಲ್ ಮೀಡಿಯಾಗಳಲ್ಲಿ ನಿರಂತರವಾಗಿ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂಗ್ಲೆಂಡಿನ ಡಿಸೆಂಬರ್ ತಿಂಗಳಲ್ಲಿ ಹೇಗೆ  ಕ್ರಿಸ್ಮಸ್ ಹಬ್ಬದ ಸಡಗರ  ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೆ ಈಗ ಚುನಾವಣೆ ಬಿಸಿಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಅನಿವಾಸಿ ತಾಣದಲ್ಲೂ ಅದರ ಬಿಸಿ ನಿಮಗೆ ನನ್ನ ಈ ಲೇಖನದ ಮೂಲಕ ತಾಗುತ್ತಿರಬಹುದು. ಚುನಾವಣೆ ಮತ್ತು ಪ್ರಜಾಪ್ರಭುತ್ವ ಈ ಎರಡೂ ವಿಷಯಗಳ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇಲ್ಲಿ ಬ್ರಿಟನ್ ಚುನಾವಣೆಯಲ್ಲದೆ ಒಂದು ಗ್ಲೋಬಲ್ ಪೆರ್ಸ್ಪೆಕ್ಟಿವ್ ಒದಗಿಸುವ ಪ್ರಯತ್ನ ಮಾಡಲಾಗಿದೆ. ಸ್ವಲ್ಪ ದೀರ್ಘವಾದ ಲೇಖನ, ಬಿಡುವಿನಲ್ಲಿ ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. 
-ಸಂ
2024, ಚುನಾವಣೆಗಳ ಹಿನ್ನೆಲೆಯಲ್ಲಿ ನೆನಪಿಡಬೇಕಾದ ಸಂವತ್ಸರ. ಈ ವರುಷ 64 ರಾಷ್ಟ್ರಗಳಲ್ಲಿ ಚುನಾವಣೆ
ನಡೆಯುತ್ತಿದೆ. ಒಟ್ಟಾರೆ ಪ್ರಪಂಚದ ಅರ್ಧ ಜನಸಂಖ್ಯೆ (49%) ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರೆ ಈ ಕಾಲಘಟ್ಟ ರಾಜಕೀಯವಾಗಿ ಮಹತ್ವವಾದದ್ದು. ರಷ್ಯಾ, ದಕ್ಷಿಣ ಆಫ್ರಿಕಾ, ಮೆಕ್ಸಿಕೋ, ಇಂಡಿಯಾ, ಬಾಂಗ್ಲಾದೇಶ, ಮತ್ತು ಪಾಕಿಸ್ತಾನದಲ್ಲಿ ಚುನಾವಣೆ ಮುಗಿದಿದೆ. ಬ್ರಿಟನ್ನಿನಲ್ಲಿ ಜುಲೈ ನಾಲ್ಕನೇ ತಾರೀಕು ಜನ ಮತ ನೀಡಲಿದ್ದಾರೆ. ಅಮೇರಿಕದಲ್ಲಿ ನವೆಂಬರ್ ಐದನೇ ತಾರೀಕು ಚುನಾವಣಾ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡೆ ಇನ್ನು ಕೆಲವೇ ವಾರಗಳಲ್ಲಿ ಶುರುವಾಗಬೇಕು ಈ ಮಧ್ಯೆ ಅಲ್ಲಿಯ ಅಧ್ಯಕ್ಷರಾದ ಮಕರೂನ್ ಅವರು ಹಠಾತ್ತನೆ ಎಲೆಕ್ಷನ್ ಘೋಷಿಸಿ ಜೂನ್ ಕೊನೆ ಮತ್ತು ಜುಲೈ ಶುರುವಿನಲ್ಲಿ ಚುನಾವಣೆಗೆ ಕರೆ ನೀಡಿದ್ದಾರೆ. 2024ರಲ್ಲಿ ಇಲ್ಲಿ ಪಟ್ಟಿಮಾಡಲಾಗದಷ್ಟು ರಾಷ್ಟ್ರಗಳು ಚುನಾವಣೆಯಲ್ಲಿ ಭಾಗವಹಿಸುತ್ತಿದೆ.

ಬ್ರಿಟನ್ನಿನ ಪ್ರಜಾಪ್ರಭುತ್ವ ಮತ್ತು ಪಾರ್ಲಿಮೆಂಟ್ ವ್ಯವಸ್ಥೆಯನ್ನು "ಮದರ್ ಆಫ್ ಪಾರ್ಲಿಮೆಂಟ್ಸ್” ಎಂದು ಭಾವಿಸಲಾಗಿದೆ. ಇದಕ್ಕೆ ಇಲ್ಲಿಯ ಕೆಲವು ಐತಿಹಾಸಿಕ ಹಿನ್ನೆಲೆಗಳು ಕಾರಣವಾಗಿದೆ. 1215ರಲ್ಲಿ ಮ್ಯಾಗ್ನಕಾರ್ಟ ಎಂಬ ದಾಖಲೆಯನ್ನು ಲಂಡನ್ ಸಮೀಪದ ರನ್ನಿಮೀಡ್ ಎಂಬ ಪ್ರದೇಶದಲ್ಲಿ ಮೊದಲು ಬರೆಯಲಾಯಿತು. ಎಲ್ಲರಿಗು ತಿಳಿದ ಮಟ್ಟಿಗೆ ಇದು ಪಾರ್ಲಿಮೆಂಟ್ ಮತ್ತು ಪ್ರಜಾಪ್ರಭುತ್ವದ ಮೊದಲ ಕಲ್ಪನೆ. ಅಂದಹಾಗೆ ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಹುಟ್ಟುಹಾಕಿದ ಅನುಭವ ಮಂಟಪ ಕೂಡ ಒಂದು ರೀತಿ ಪ್ರಜಾಪ್ರಭುತ್ವದ ಪರಿಕಲ್ಪನೆ ಎಂದು ಭಾವಿಸಲಾಗಿದೆ. ಇಂಗ್ಲೆಂಡಿನಲ್ಲಿ ಆಗಿನ ಕಾಲಕ್ಕೆ ರಾಜರು ಕೂಡ ನ್ಯಾಯಕ್ಕೆ ಬದ್ಧರಾಗಿರಬೇಕು, ಅದನ್ನು ಗೌರವಿಸಿ ಆಡಳಿತ ನಡೆಸಬೇಕು ಎಂಬ ವಿಚಾರವನ್ನು ಮ್ಯಾಗ್ನ ಕಾರ್ಟದಲ್ಲಿ ಪ್ರಸ್ತಾಪಿಸಲಾಗಿದೆ. 1264ರಲ್ಲಿ ಸೈಮನ್ ಡಿ ಮೊಂಟ್ಫಾರ್ಡ್ ಎಂಬ ರಾಜ ತನ್ನ ಆಳ್ವಿಕೆಯಲ್ಲಿ ಸರಿ-ತಪ್ಪುಗಳನ್ನು ಚರ್ಚಿಸಲು ಜನರ ಪ್ರತಿನಿಧಿಗಳನ್ನು ಆಹ್ವಾನಿಸಿದ್ದು ಈ ಮ್ಯಾಗ್ನ ಕಾರ್ಟ ಹಿನ್ನೆಲೆಯಲ್ಲೇ ಎಂದು ಇತಿಹಾಸ ಹೇಳುತ್ತದೆ. 18ನೇ ಶತಮಾನದಲ್ಲಿ ಬ್ರಿಟನ್ನಿನ ಪಾರ್ಲಿಮೆಂಟ್ ಸಾಕಷ್ಟು ಪರಿಶೀಲನೆಗೊಂಡಿತು. 1605ರಲ್ಲಿ ಮೊದಲನೇ ಜೇಮ್ಸ್ ದೊರೆ ಕ್ಯಾಥೋಲಿಕ್ ಕ್ರಿಶ್ಚಿಯನ್ ಗಳಿಗೆ ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ವೆಸ್ಟ್ ಮಿನಿಸ್ಟರ್ ಅರಮನೆಯಲ್ಲಿ ನಡೆಯಬೇಕಾಗಿದ್ದ ಪಾರ್ಲಿಮೆಂಟ್ ಸಭೆಯನ್ನು ಗನ್ ಪೌಡರ್ ಬಳಸಿ ಸ್ಫೋಟ ಗೊಳಿಸಿ ಕೊಲೆ ಮತ್ತು ಹಿಂಸೆಯ ಸಂಚನ್ನು ಕೆಲವು ಕ್ರಾಂತಿಕಾರರು ಹೂಡಿದ್ದರು. ಅದೃಷ್ಟವಶತ್ ಈ ಸುದ್ದಿ ಬಹಿರಂಗಗೊಂಡು ಈ ಭಯೋತ್ಪಾದಕರನ್ನು ಗುರುತಿಸಿ ಅದರ ನಾಯಕನಾದ ಗೈ ಫ್ಯಾಕ್ಸ್ ಎಂಬ ವ್ಯಕ್ತಿಗೆ ಗಲ್ಲು ಶಿಕ್ಷೆಯಾಯಿತು. ಪಾರ್ಲಿಮೆಂಟ್ ವ್ಯವಸ್ಥೆಯ ಉಳಿವನ್ನು ನವೆಂಬರ್ 5ನೇ ತಾರೀಕು ರಾಷ್ಟ್ರೀಯ ದಿನಾಚರಣೆಯಾಗಿ ಅಂದಿನಿಂದ ಇಂದಿನವರೆಗೂ ಆಚರಿಸಲಾಗುತ್ತದೆ.

ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯುತ್ತಿರುವ ಬ್ರಿಟನ್ನಿನಲ್ಲಿ ಸಡಗರ, ಸಂಭ್ರಮ, ಕಾತರತೆ ಹೆಚ್ಚಾಗಿದೆ. ಸುದ್ದಿಮಾಧ್ಯಮಗಳು ಎಲೆಕ್ಷನ್ ವಿಚಾರವನ್ನು ವಿಶ್ಲೇಷಿಸುವುದರಲ್ಲಿ ನಿರತವಾಗಿದೆ. 650 ಎಂಪಿಗಳ ಸ್ಥಾನಕ್ಕೆ ಸ್ಪರ್ಧೆ ನಡೆಯುತ್ತಿದೆ. ಕಳೆದ 2019 ಚುನಾವಣೆಯಲ್ಲಿ 47.5 ಮಿಲಿಯನ್ ಜನರು ಭಾಗವಹಿಸಿದ್ದರು. ಅದೇ ಭಾರತದಲ್ಲಿ 543 ಸ್ಥಾನಕ್ಕೆ ಸ್ಪರ್ಧೆ ನಡೆದು 968 ಮಿಲಿಯನ್ ಜನರು ಮತ ನೀಡಿದ್ದಾರೆ ಎಂಬುದನ್ನು ಇಲ್ಲಿ ಹೋಲಿಕೆಗಾಗಿ ಪ್ರಸ್ತಾಪಿಸಲಾಗಿದೆ. ಬ್ರಿಟನ್ನಿನಲ್ಲಿ ಕಳೆದ 14 ವರ್ಷಗಳಿಂದ ಕನ್ಸರ್ವೇಟಿವ್ ಪಕ್ಷ ಮೂರು ಚುನಾವಣೆಗಳನ್ನು ಗೆದ್ದು ಅಧಿಕಾರದಲ್ಲಿದೆ. ಈ ಒಂದು ಅವಧಿಯಲ್ಲಿ ಐದು ಪ್ರಧಾನಿಗಳನ್ನು ಕಂಡಿದೆ. ಇವರ ಆಡಳಿತದಲ್ಲಿ ಬ್ರೆಕ್ಸಿಟ್ ಸಂಭವಿಸಿದ್ದು ಇಲ್ಲಿಯ ಬಲಪಂಥ ರಾಷ್ಟ್ರವಾದಿಗಳಿಗೆ ಹೆಮ್ಮೆಯ ವಿಷಯವಾದರೂ ಬ್ರೆಕ್ಸಿಟ್ ತಂದಿಟ್ಟಿರುವ ಸಮಸ್ಯೆಗಳನ್ನು ಈಗ ಎದುರಿಸುತ್ತಿದ್ದೇವೆ. ಬ್ರೆಕ್ಸಿಟ್ ನಂತರದ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷ ಬಹುಮತದಿಂದ ಆಯ್ಕೆಯಾಗಿ ಬೋರಿಸ್ ಜಾನ್ಸನ್ ಪ್ರಬಲವಾದ ಪ್ರಧಾನಿಯಂತೆ ಕಂಡುಬಂದರು. 2020 ಸಂವತ್ಸರದ ಹೊತ್ತಿಗೆ ವಿಶ್ವವನ್ನೇ ವ್ಯಾಪಿಸಿದ ಕೋವಿಡ್ ಪಿಡುಗು ಬರಿಯ ಅರೋಗ್ಯ ಸಮಸ್ಯೆಯಾಗದೆ ಅದು ರಾಜಕೀಯ ಸಮಸ್ಯೆಯಾಗಿಯೂ ಪರಿಣಮಿಸಿತು. ಬೋರಿಸ್ ಜಾನ್ಸನ್ ಅವರೇ ಕೋವಿಡ್ ಖಾಯಿಲೆಯಿಂದ ಸಾವಿನ ಅಂಚಿಗೆ ಹೋಗಿ ಬರಬೇಕಾಯಿತು. ಕೋವಿಡ್ ಪಿಡುಗಿನ ಮಧ್ಯದಲ್ಲಿ ಬೋರಿಸ್ ತಮ್ಮ ಕಚೇರಿಯಲ್ಲಿ ಒಂದು ಸಣ್ಣ ಪಾರ್ಟಿ ಇಟ್ಟುಕೊಂಡು ವೈನ್ ಮತ್ತು ಚೀಸ್ ಸೇವಿಸಿದ್ದು ಅದು ಕೋವಿಡ್ ನಿರ್ಬಂಧದ ಉಲ್ಲಂಘನೆಯಾಗಿ ಈ "ಪಾರ್ಟಿಗೇಟ್" ಹಗರಣ ಒಂದು ದೊಡ್ಡ ಅಪರಾಧವಾಗಿ ಬೋರಿಸ್ ರಾಜೀನಾಮೆ ನೀಡಬೇಕಾಯಿತು. ಈ ಘಟನೆಯನ್ನು ಗಮನಿಸಿದಾಗ ಬೇರೆ ದೇಶಗಳಲ್ಲಿ ಸರ್ಕಾರ ಕೋವಿಡ್ ನಿರ್ಬಂಧನೆಗಳನ್ನು ಗಾಳಿಗೆ ತೂರಿರುವ ಪ್ರಸಂಗಗಳಿವೆ; ಭಾರತದಲ್ಲಿ ಕೋವಿಡ್ ಅತಿಯಾಗಿರುವ ಸಮಯದಲ್ಲಿ ಪ್ರಧಾನಿಯವರು ಸಹಸ್ರಾರು ಜನರು ಕುಂಭಮೇಳವನ್ನು ಆಚರಿಸಲು ಅನುಮತಿ ಕೊಟ್ಟರಲ್ಲವೇ? ಆ ಹಿನ್ನೆಲೆಯಲ್ಲಿ ಅವರು ರಾಜಿನಾಮೆ ನೀಡಬೇಕಾಗಿತ್ತಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಅಮೇರಿಕ ಅಧ್ಯಕ್ಷ ಟ್ರಂಪ್ ಕೂಡ ಕೋವಿಡ್ ನಿರ್ಬಂಧನೆಗಳನ್ನು ಉಲ್ಲಂಘಿಸಿರುವ ಸನ್ನಿವೇಶಗಳಿವೆ. ಒಂದೊಂದು ದೇಶದಲ್ಲಿ ಈ ನೈತಿಕ ಹೊಣೆಗಾರಿಕೆ ಮತ್ತು ರಾಜಕೀಯ ಮೌಲ್ಯಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಓದುಗರು ಗಮನಿಸಬಹುದು. ಬ್ರಿಟನ್ ಕೆಲವು ಆದರ್ಶಗಳನ್ನು ತಾನು ಅನುಸರಿಸುತ್ತಿದ್ದು ಇತರ ದೇಶಗಳಿಗೆ ಮಾದರಿಯಾಗಿದೆ. ಇದು ಶ್ಲಾಘನೀಯವಾದ ವಿಷಯ. ಕೋವಿಡ್ ತಂದ ಆರ್ಥಿಕ ತೊಂದರೆಗಳು ಮತ್ತು ರಷ್ಯಾ-ಯುಕ್ರೈನ್ ಯುದ್ಧ ಅನೇಕ ತೊಡಕುಗಳನ್ನು ತಂದು ಕನ್ಸರ್ವೇಟಿವ್ ಪಕ್ಷ ಬಲಹೀನವಾಯಿತು. ಇದರ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಕ್ಷದೊಳಗೆ ಬಿರುಕುಗಳು, ಒಳಜಗಳಗಳು ಶುರುವಾದವು. ಬ್ರಿಟನ್ನಿನಲ್ಲಿ ಹಣದುಬ್ಬರ 11% ವರೆಗೂ ಹೆಚ್ಚಿ ದಿನನಿತ್ಯ ಬದುಕು (ಕಾಸ್ಟ್ ಆಫ್ ಲಿವಿಂಗ್) ತೊಂದರೆಗಳು ಉಂಟಾದವು. ಅದನ್ನು ರಿಷಿ ಸುನಾಕ್ ಅವರು ಯಶಸ್ವಿಯಾಗಿ ನಿಭಾಯಿಸಿದರೂ ಬರಲಿರುವ ಚುನಾವಣೆಯಲ್ಲಿ ಅವರು ಗೆದ್ದು ಬರುವ ಸಾಧ್ಯತೆ ಕಡಿಮೆ ಎಂದು ಜನಾಭಿಪ್ರಾಯ ಸಮೀಕ್ಷೆ ವರದಿಮಾಡಿವೆ.

ಒಂದು ಚುನಾವಣೆಯಲ್ಲಿ ಜನರಿಗೆ ಯಾವ ಅಂಶಗಳು ಮುಖ್ಯವಾಗುತ್ತವೆ ಎನ್ನುವುದು ಸ್ವಾರಸ್ಯಕರವಾಗಿದೆ. ಜನರಿಗೆ ಒಂದು ಪಕ್ಷದ ಸಾಮಾಜಿಕ ಧೋರಣೆಗಳು ಮುಖ್ಯವೋ? ಪಕ್ಷದ ಮಹಾನ್ ನಾಯಕನ ವರ್ಚಸ್ಸು ಮುಖ್ಯವೋ? ಪ್ರಜಾ ಪ್ರಭುತ್ವ ಮೌಲ್ಯಗಳು ಮತ್ತು ಸಂವಿಧಾನ ರಕ್ಷಣೆ ಮುಖ್ಯವೋ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಇವೆಲ್ಲವನ್ನೂ ಮೀರಿ ಜನರು ತಮ್ಮ ದಿನ ನಿತ್ಯ ಬದುಕಿನ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬಲ್ಲ ರಾಜಕೀಯ ಪಕ್ಷಕ್ಕೆ ಮತ ನೀಡುವುದು ಸಹಜ. ಸಮಸ್ಯೆ ಎನ್ನುವುದು ವೈಯುಕ್ತಿಕ ಗ್ರಹಿಕೆ. ಬಡವರಿಗೆ ಹಸಿವು, ಮಾಳಿಗೆ, ಉದ್ಯೋಗ ಮತ್ತು ದಿನ ನಿತ್ಯ ಬದುಕೇ ಒಂದು ಸಮಸ್ಯೆಯಾದರೆ, ಹೊಟ್ಟೆ ತುಂಬಿದ ಮಧ್ಯಮ ವರ್ಗದವರ ಸಮಸ್ಯೆಯೇ ಬೇರೆ. ಶ್ರೀಮಂತರ ಸಮಸ್ಯೆ ಬೇರೆಯೇ ಆಗಿರುತ್ತದೆ. ಅದು ತೆರಿಗೆಗೆ ಸಂಬಂಧಿಸಿರುವ ವಿಷಯ ವಾಗಿರಬಹುದು. ವೈಯುಕ್ತಿಕ ನೆಲೆಯಲ್ಲಿ ಸಮಸ್ಯೆಗಳು ಒಂದು ರೀತಿಯದಾಗಿದ್ದರೆ ಸಾಮೂಹಿಕ ನೆಲೆಯಲ್ಲಿ; ಅಂತರಾಷ್ಟ್ರೀಯ ಘಟನೆಗಳು, ವಲಸೆ, ದೇಶದ ಗಡಿಗಳ ರಕ್ಷಣೆ, ಜಾಗತಿಕ ತಾಪಮಾನ ಸಮಸ್ಯೆಗಳಾಗಬಹುದು. ಜನರ ನಿರೀಕ್ಷೆ ಅಪೇಕ್ಷೆಗಳನ್ನು ಗುರುತಿಸಿ ಒಂದು ರಾಜಕೀಯ ಪಕ್ಷ ತನ್ನ ಆದ್ಯತೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಸೂಚಿಸಬೇಕು. ತಮ್ಮ ಪಕ್ಷ ಹೇಗೆ ಅದನ್ನು ನಿಭಾಯಿಸಲು ಅರ್ಹ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಬೇಕು. ಅಭ್ಯರ್ಥಿಗಳು ತಾವು ಹೇಗೆ ಇದಕ್ಕೆ ಪರಿಹಾರ ಕೊಡಬಹುದು ಎಂಬುದನ್ನು ಅವರು ಸಾಬೀತುಪಡಿಸಬೇಕು. ಇದಕ್ಕೆ ಪೂರಕವಾಗಿ ಚುನಾವಣಾ ಪ್ರಚಾರಕ್ಕೆ ಬೇಕಾದ ಸಮಯ ಮತ್ತು ಅವಕಾಶವನ್ನು ಆಡಳಿತವು ವ್ಯವಸ್ಥೆ ಮಾಡಿರುತ್ತದೆ. ಬ್ರಿಟನ್ ದೇಶವನ್ನು ಒಳಗೊಂಡು ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಟಿವಿ ಚುನಾವಣಾ ಚರ್ಚೆ ವ್ಯವಸ್ಥಿತವಾಗಿ ನಡೆಯುತ್ತದೆ. ಬ್ರಿಟನ್ನಿನಲ್ಲಿ ಈಗ ನಡೆಯುತ್ತಿರುವ ಟಿವಿ ಚರ್ಚೆ ಉತ್ತಮ ಗುಣಮಟ್ಟದ್ದಾಗಿದೆ. ಕನ್ಸರ್ವೇಟಿವ್ ಪಕ್ಷದ ಪ್ರಧಾನಿ ರಿಷಿ ಸುನಾಕ್ ಮತ್ತು ಲೇಬರ್ ಪಕ್ಷದ ಕಿಯರ್ ಸ್ಟಾರ್ಮರ್ ಅವರ ನಡುವಿನ ಚರ್ಚೆ ಸ್ವಾರಸ್ಯಕರವಾಗಿತ್ತು, ಬಹಳ ಸಭ್ಯವಾಗಿ ಘನವಾಗಿತ್ತು. ಈ ಚರ್ಚೆಗಳಲ್ಲಿ ಕೆಲವೊಮ್ಮೆ ಮಾತುಗಳ ಅತಿಕ್ರಮಣವಾದಾಗ, ಉದ್ವೇಗ ಹೆಚ್ಚಿದಾಗ ಅದನ್ನು ನಿಯಂತ್ರಿಸುವ ಹಿರಿಯ ಪತ್ರಕರ್ತರು ಅಭ್ಯರ್ಥಿಗಳಗೆ (ದೇಶದ ಪ್ರಧಾನಿಯಾದರೂ) ಎಚ್ಚರಿಕೆ ನೀಡುವಷ್ಟು ಪ್ರಬಲರಾಗಿರುತ್ತಾರೆ. ಅದೇ ಭಾರತದಲ್ಲಿ ಪ್ರಧಾನಿ ಎಂದಕೂಡಲೇ ಅವರನ್ನು ದೇವರಂತೆ ಕಾಣುತ್ತೇವೆ. ಅವರು ಪ್ರಶ್ನಾತೀತರು ಎಂಬ ಭಾವನೆಯಲ್ಲಿ ಸಂದರ್ಶನಗಳು ನಡೆಯುತ್ತವೆ. ಭಾರತದಲ್ಲಿ ಆಳುವ ಪಕ್ಷ, ವಿರೋಧ ಪಕ್ಷ ಮುಖಾ-ಮುಖಿ ಸಂವಾದದಲ್ಲಿ ತೊಡಗುವುದು ಬಹಳ ಕಷ್ಟ. ಅಲ್ಲಿ ಸ್ವಾಭಿಮಾನ ಮತ್ತು ಪ್ರತಿಷ್ಠೆಗಳ ಸಂಘರ್ಷಣೆಯಾಗಿ, ರಣ-ರಂಗವಾಗಿ ಮಾರ್ಪಾಡಾಗಬಹುದು. ಪರಸ್ಪರ ವಿಶ್ವಾಸ ಮತ್ತು ಗೌರವವನ್ನು ರಾಜಕಾರಣಿಗಳು ಉಳಿಸಿಕೊಂಡರೆ ಅಲ್ಲಿ ಒಂದು ಘನತೆ ಇರುತ್ತದೆ. ಭಾರತದಲ್ಲಿ ಎನ್ಡಿಟಿವಿ ನಡೆಸುವ ಚರ್ಚೆಗಳಲ್ಲಿ ಎರಡು ಪಕ್ಷಗಳ ವಕ್ತಾರರು ಭಾಗವಹಿಸಿದಾಗ ಅವರ ನಡುವಿನ ಕೂಗಾಟ, ಅಸಹನೆ, ಒಬ್ಬರು ಮಾತನಾಡುತ್ತಿದ್ದಾಗ ತಮ್ಮ ಸರದಿಗೆ ಕಾಯದೆ ಇನ್ನೊಬ್ಬರ ಮಾತಿನ ಮಧ್ಯೆ ಬಾಯಿಹಾಕುವುದು ನೋಡುಗರಿಗೆ ಮುಜುಗರವನ್ನು ನೀಡುವಂಥದ್ದು. ಬ್ರಿಟನ್ನಿನಲ್ಲಿ ಬಿಬಿಸಿ, ಸ್ಕೈ ಮತ್ತು ಐಟಿವಿ ನಡೆಸುವ ಚರ್ಚೆಗಳಲ್ಲಿ ಕೆಲವೊಮ್ಮೆ ಪಕ್ಷದ ಇತರ ಪ್ರತಿನಿಧಿಗಳು, ಮಂತ್ರಿಗಳು ಭಾಗವಹಿಸುತ್ತಾರೆ. ಇಲ್ಲಿ ನಡೆವ ಚರ್ಚೆಯಲ್ಲಿ ಹೆಚ್ಚು ಉದ್ವೇಗವಿಲ್ಲದೆ, ಒಬ್ಬರು ಇನ್ನೊಬ್ಬರನ್ನು ಹೀಯಾಳಿಸುವುದು ಒಂದು ಮಿತಿಯಲ್ಲಿ ನಡೆಯುತ್ತದೆ. ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಗೌರವ ವಿಶ್ವಾಸಗಳಿರುತ್ತವೆ. ಮುಖ್ಯವಾಗಿ ಆಹ್ವಾನಿತ ಜನ ಸಾಮಾನ್ಯರು ಪ್ರಧಾನಿಯನ್ನು ಒಳಗೊಂಡಂತೆ ಎಲ್ಲ ಹಿರಿಯ. ರಾಜಕಾರಣಿಗಳ ಜೊತೆ ಸಂವಾದಕ್ಕೆ ತೊಡಗಬಹುದು. ಪ್ರಶ್ನೆಗಳನ್ನು ಮುಂದಾಗಿ ಆಯ್ಕೆಮಾಡಿರುತ್ತಾರೆ. ಯು.ಕೆ ಯ ಚುನಾವಣೆ ಪ್ರಚಾರ ಕಾರ್ಯವು ಪಕ್ಷಪಾತ, ಹೆದರಿಕೆ, ಬೆದರಿಕೆ, ಗೂಂಡಾಗಿರಿ ಇವುಗಳಿಂದ ಮುಕ್ತವಾಗಿದೆ. ಯು.ಕೆಯಲ್ಲಿ ಧರ್ಮ ಮತ್ತು ರಾಜಕೀಯ ಇವು ಎರಡು ಬೇರೆ ವಿಚಾರವಾಗಿದ್ದಾರೂ ಇಲ್ಲಿಯ ಕೆಲವು ಪ್ರದೇಶದಲ್ಲಿ ಇಸ್ಲಾಮ್ ಧರ್ಮದವರು ದೂರದ ಪ್ಯಾಲೆಸ್ಟೈನ್ ಇಸ್ರೇಲ್ ಘರ್ಷಣೆಯನ್ನು ಬ್ರಿಟನ್ನಿನ ರಾಜಕಾರಣದೊಳಗೆ ಮತ್ತು ಚುನಾವಣೆಯ ಒಳಗೆ ತರುವ ಪ್ರಯತ್ನವನ್ನು ಮಾಡುತ್ತಿರುವುದು ಮತ್ತು ಕೆಲವು ಸಂಘಟನೆಗಳು ‘ಹಿಂದೂಸ್ ಫಾರ್ ಲೇಬರ್’ ಎಂದು ಪ್ರಚಾರ ಕೈಗೊಂಡಿರುವುದು ವಿಷಾದದ ಸಂಗತಿ. ಧರ್ಮವನ್ನು ರಾಜಕೀಯ ಮತ್ತು ಚುನಾವಣೆಯೊಂದಿಗೆ ತಳುಕು ಹಾಕುವುದು ಸರಿಯಲ್ಲ.


ಈ ಬಾರಿ ಬ್ರಿಟನ್ನಿನ ಚುನಾವಣೆಯಲ್ಲಿ ಯಾವ ರೀತಿಯ ವಿಷಯಗಳು ಜನರಿಗೆ ಪ್ರಸ್ತುತವಾಗಿದೆ ಎಂಬುದರ ಬಗ್ಗೆ ಗಮನ ಹರಿಸೋಣ. ಮೇಲೆ ಪ್ರಸ್ತಾಪಿಸಿದ ಹಾಗೆ ಕೋವಿಡ್ ಪಿಡುಗು ನಂತರದ ಸಮಯದಲ್ಲಿ ಹಣದ ಉಬ್ಬರ ಅತಿಯಾಗಿ ಯುಕ್ರೈನ್-ರಷ್ಯಾ ಯುದ್ಧವೂ ಈ ಹಣದುಬ್ಬರಕ್ಕೆ ಕಾರಣವಾಗಿದೆ. ಅನಿಲ ಮತ್ತು ತೈಲಗಳ ಬೆಲೆ ವಿಪರೀತ ಹೆಚ್ಚಾಗಿ ಸಾರಿಗೆ ವ್ಯವಸ್ಥೆ ದುಬಾರಿಯಾಗಿ ದಿನನಿತ್ಯ ಆಹಾರ ಮತ್ತು ಬಳಕೆ ವಸ್ತುಗಳ ಬೆಲೆ ಏರಿದೆ. ಈ ಹಣದ ಉಬ್ಬರಗಳ ನಡುವೆ ಮುಂದಕ್ಕೆ ಬರುವ ಪಕ್ಷ ತೆರಿಗೆಗಳನ್ನು ಜಾಸ್ತಿ ಮಾಡ ಬಹುದೇ ಎಂಬ ಆತಂಕವಿದೆ. ನಮ್ಮ ರಾಷ್ಟ್ರೀಯ ಅರೋಗ್ಯ ಸಂಸ್ಥೆಯಲ್ಲಿ ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳ ಕೊರತೆಯಿಂದ ರೋಗಿಗಳಿಗೆ ಹೆಚ್ಚಿನ ಅನಾನುಕೂಲಗಳ ಮತ್ತು ಕಷ್ಟ ನಷ್ಟಗಳು ಸಂಭವಿಸಿವೆ. ಹೀಗಾಗಿ ಇದು ಈಗಿನ ಚುನಾವಣೆಯಲ್ಲಿ ಬಹುದೊಡ್ಡದಾದ ವಿಷಯ. ಇದನ್ನು ಪುನರುತ್ಥಾನ ಗೊಳಿಸುವ ಆಶ್ವಾಸನೆಯನ್ನು ಎಲ್ಲ ಪಕ್ಷಗಳು ನೀಡುತ್ತಿವೆ. ಬ್ರೆಕ್ಸಿಟ್ ನಂತರದ ಸಮಯದಲ್ಲಿ ವೈದ್ಯರ ಮತ್ತು ನರ್ಸ್ ಗಳ ಕೊರತೆ ಉಂಟಾಗಿದೆ, ವೈದ್ಯರು ಹೆಚ್ಚಿನ ಸಂಬಳವನ್ನು ಬೇಡಿದ್ದಾರೆ. ಬ್ರಿಟನ್ ರಾಷ್ಟ್ರವನ್ನು ಕಾಡುತ್ತಿರುವ ಇನ್ನೊಂದು ಬೃಹತ್ ಸಮಸ್ಯೆ ಎಂದರೆ ವಲಸೆ. ಬಡ ದೇಶಗಳಿಂದ ದಂಡಿಯಾಗಿ ನಿರಾಶ್ರಿತರು ಬರುತ್ತಿದ್ದಾರೆ. ಅವರಲ್ಲಿ ಯಾರು ಪ್ರಾಮಾಣಿಕವಾಗಿ ನಿರಾಶ್ರಿತರು ಯಾರು ಅವಕಾಶ ಆಕಾಂಕ್ಷಿಗಳು ಎಂಬುದನ್ನು ನಿರ್ಧರಿಸವುದು ಸರ್ಕಾರಕ್ಕೆ ಕಷ್ಟದ ಕೆಲಸವಾಗಿದೆ. ಕ್ರಿಶ್ಚಿಯನ್ ಹಿನ್ನೆಲೆ ಇರುವ ಬ್ರಿಟನ್ನಿನಲ್ಲಿ ಧರ್ಮ ಎಂದೂ ರಾಜಕೀಯ ವಿಷಯದಲ್ಲಿ ತಲೆಹಾಕುವುದಿಲ್ಲ. ಆದರೆ ಇಲ್ಲಿ ಮೈನಾರಿಟಿ ವಿರುದ್ಧ ಜನಾಂಗ ಬೇಧ (ರೇಸಿಸಮ್) ವನ್ನು ಪ್ರಚೋದಿಸುವ, ಮತ್ತು ರೇಸಿಸ್ಟ್ ಹಿನ್ನೆಲೆಯಿರುವ ಬಲಪಂಥ ಪಕ್ಷವೊಂದು ರಿಫಾರ್ಮ್ ಯು.ಕೆ ಎನ್ನುವ ಶೀರ್ಷಿಕೆಯಲ್ಲಿ ಬ್ರೆಕ್ಸಿಟ್ಟಿಗೆ ಕಾರಣವಾದ ಮತ್ತು ಕೆಲವು ಮತೀಯರ ಬಗ್ಗೆ ಉಗ್ರವಾದ ನಿಲುವನ್ನು ಹೊಂದಿರುವ ನೈಜಲ್ ಫರಾಜ್ ಎಂಬ ರಾಜಕಾರಣಿ ಚುನಾವಣೆಯಲ್ಲಿ ನಿಂತಿರುವುದು ಉದಾರ ನಿಲುವುಗಳನ್ನು ಪ್ರತಿಪಾದಿಸುವ ಇತರ ಪಕ್ಷಗಳಿಗೆ ಆತಂಕವನ್ನು ತಂದಿದೆ. ಬ್ರಿಟನ್ನಿನ ಗ್ರೀನ್ ಪಾರ್ಟಿ ಪರಿಸರದ ಬಗ್ಗೆ ಜಾಗತಿಕ ತಾಪಮಾನದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರಿರುವ ರಾಜಕೀಯ ಪಕ್ಷವಾದ. ಯು.ಕೆಯ ಒಕ್ಕೂಟದ ಒಳಗಿನ ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡಿನಲ್ಲಿ ಅಲ್ಲಿಯ ಸ್ಥಳೀಯ ಸಮಸ್ಯೆಗಳು ಪ್ರಸ್ತುತವಾಗಿ ಅವು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುತ್ತವೆ.

ಇನ್ನು ಭಾರತದಲ್ಲಿ ನಡೆದ ಚುನಾವಣೆಯ ಬಗ್ಗೆ ಗಮನ ಹರಿಸೋಣ. ಪ್ರಪಂಚದಲ್ಲೇ ಅತ್ಯಂತ ಹಿರಿದಾದ ಪ್ರಜಾಪ್ರಭುತ್ವವೆಂದು ಹೆಸರಾದ ಭಾರತ ಈ ವರ್ಷ ಜೂನ್ ತಿಂಗಳಲ್ಲಿ ಚುನಾವಣೆ ನಡೆಸಿದೆ. ಸುಮಾರು 940 ಮಿಲಿಯನ್ ಜನರು ಮತ ನೀಡಿದ್ದು ಏಳು ಹಂತಗಳಲ್ಲಿ ಚುನಾವಣೆ ನಡಿಸಿದ ಭಾರತದ ಎಲೆಕ್ಷನ್ ಕಮಿಷನ್ ಮಾಡಿರುವ ಕಾರ್ಯ ಶ್ಲಾಘನೀಯವಾದದ್ದು. ಭಾರತದಲ್ಲಿ ಎಲೆಕ್ಷನ್ ವಿಷಯ ಬಂದಾಗ ಎಂದಿಗಿಂತ ಇಂದು ಧರ್ಮ, ಜಾತಿ ಮತ್ತು ದೇವಸ್ಥಾನ ಇತರ ಸಾಮಾಜಿಕ ಸಮಸ್ಯೆಗಳಷ್ಟೇ ಪ್ರಸ್ತುತವಾಗಿದೆ. ಒಂದು ಪಕ್ಷ ತನ್ನ ಆಡಳಿತದಲ್ಲಿ ದೇಶದ ರಸ್ತೆ, ರೈಲು, ವಿಮಾನ ನಿಲ್ದಾಣ, ನಗರಗಳ ಅಭಿವೃದ್ಧಿ, ಹೊಸ ಕಟ್ಟಡಗಳ ನಿರ್ಮಾಣ ಮುಂತಾದ ಸಾರ್ವಜನಿಕ ಸೌಕರ್ಯವನ್ನು ಮಾಡಿ ತಾವು ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಚುನಾವಣೆ ಪ್ರಚಾರ ಮಾಡಿದರೆ ಸಾಲದು. ಆ ಸರ್ಕಾರದ ಧೋರಣೆಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಇವೆಯೇ? ಸಂವಿಧಾನಕ್ಕೆ ಬದ್ಧವಾಗಿದೆಯೇ? ಎಂಬುದು ಮುಖ್ಯ. ಆರ್ಥಿಕ ಪ್ರಗತಿ ಬರಿಯ ಕೆಲವು ಬಿಲಿಯನೇರ್ ಗಳ ಜೇಬುಗಳನ್ನು ತುಂಬಿದರಷ್ಟೇ ಸಾಲದು. ಅದು ತಳ ಸಮುದಾಯದ ಸಮಾಜ ಕಲ್ಯಾಣ ಆಯೋಜನೆಯನ್ನು ತಲುಪುತ್ತಿದೆಯೇ ಅನ್ನುವುದು ಮುಖ್ಯ. ಅಂತಾರಾಷ್ಟ್ರೀಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಬಡತನ, ಹಸಿವು, ನಿರುದ್ಯೋಗ ಸಮಸ್ಯೆಗಳು ವ್ಯಾಪಕವಾಗಿವೆ. ಭಾರತದಲ್ಲಿ ಒಂದು ಹಿನ್ನೋಟದಲ್ಲಿ ಗಮನಿಸಿದಾಗ ಅಲ್ಲಿ ಎಲ್ಲಕಾಲಕ್ಕೂ ಜನ ನಾಯಕರ ವರ್ಚಸ್ಸು ಮುಖ್ಯವಾಗಿ ವ್ಯಕ್ತಿಪೂಜೆ ನಡೆಯುತ್ತಾ ಬಂದಿದೆ. ರಾಷ್ಟ ಮಟ್ಟದಲ್ಲಿ ಇಂದಿರಾಗಾಂಧಿ, ಮುಂದಕ್ಕೆ ಮೋದಿ, ರಾಜ್ಯಮಟ್ಟದಲ್ಲಿ ಎಂಜಿಆರ್, ಏನ್ ಟಿ ರಾಮರಾವ್, ಜಯಲಲಿತಾ ನೆನಪಿಗೆಬರುತ್ತಾರೆ. ವ್ಯಕ್ತಿಯ ವರ್ಚಸ್ಸಿಗಿಂತ ಪಕ್ಷದ ಧೋರಣೆಗಳು ಪ್ರಸ್ತುತವಾಗಿರಬೇಕು. ಇನ್ನೊಂದು ವಿಚಾರವೆಂದರೆ ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ ಸೋಷಿಯಲ್ ಮೀಡಿಯಾಗಳನ್ನು ಪಕ್ಷದ ಪ್ರಚಾರಕ್ಕೆ ಬಳಸಿ ವಿರೋಧಪಕ್ಷದವರನ್ನು ಇಲ್ಲ ಸಲ್ಲದ ನೆಪದಲ್ಲಿ ಅಪ್ರಾಮಾಣಿಕವಾಗಿ ಹೀಯಾಳಿಸಿ, ಮೂದಲಿಸಿ ಗೌಣ ಗೊಳಿಸಲಾಗಿದೆ. ವಿರೋಧಪಕ್ಷವನ್ನು ಬಲಹೀನ ಗೊಳಿಸುವ ಪ್ರಯತ್ನ ನಡೆದಿದೆ. ವಿರೋಧಪಕ್ಷವು ಬಲಹೀನಗೊಳ್ಳಲು ಆ ಪಕ್ಷದಲ್ಲಿ ಒಗ್ಗಟ್ಟು ಇಲ್ಲದಿರುವುದೂ ಕಾರಣವಾಗಿದೆ. ವಿರೋಧ ಪಕ್ಷದಲ್ಲಿ ಮುಂದಾಳುತ್ವವನ್ನು ವಹಿಸಿರುವ ಪಕ್ಷ ರಾಜಕಾರಣವನ್ನು ತನ್ನ ಮನತನದ ಸ್ವತ್ತಾಗಿ ಗುತ್ತಿಗೆ ಹಿಡಿದಂತಿದೆ. ಇಲ್ಲಿ ಹೊರಗಿನ ಪ್ರತಿಭೆಗಳಿಗೆ ಅವಕಾಶ ಇಲ್ಲದಂತಾಗಿದೆ. ಒಂದು ಪ್ರಜಾಪ್ರಭುತ್ವದಲ್ಲಿ ಬಲವಾದ ವಿರೋಧಪಕ್ಷ ಇಲ್ಲದಿದ್ದಲ್ಲಿ ಆ ಪ್ರಜಾಪ್ರಭುತ್ವ ಆರೋಗ್ಯವಾಗಿ ಮತ್ತು ಸಮತೋಲನದಲ್ಲಿ ಇರಲು ಸಾಧ್ಯವಿಲ್ಲ. ಇದು ಅಪಾಯಕಾರಿ ಬೆಳವಣಿಗೆ. ವಿರೋಧಪಕ್ಷವನ್ನು ಅತಿಯಾಗಿ ದುರ್ಬಲಗೊಳಿಸಿದಲ್ಲಿ ಅದು ಸರ್ವಾಧಿಕಾರಕ್ಕೆ ಪೂರಕವಾಗುವುದರಲ್ಲಿ ಸಂದೇಹವಿಲ್ಲ. 2024ರ ಚುನಾವಣೆಯಲ್ಲಿ ವಿರೋಧ ಪಕ್ಷವು ಸ್ವಲ್ಪಮಟ್ಟಿಗೆ ಚೇತರಿಸಿ ಕೊಂಡಿದೆ ಎನ್ನಬಹುದು. ಒಂದು ಪಕ್ಷ ಎಲೆಕ್ಟೊರಲ್ ಬಾಂಡ್ ಗಳ ಮುಖಾಂತರ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಸಾಮೂಹಿಕ ಸುದ್ದಿ ಮಾಧ್ಯಮಗಳು ಒಂದು ರಾಜಕೀಯ ಪಕ್ಷದ ಪರವಹಿಸಿದಾಗ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತದೆ. ಚುನಾವಣೆ ಎಂಬ ಸ್ಪರ್ಧೆಯ ಮೈದಾನದಲ್ಲಿ ಎಲ್ಲ ಸಮತಟ್ಟಾಗಿರಬೇಕು. ಇಲ್ಲದಿದ್ದಲ್ಲಿ ಅದು ನ್ಯಾಯ ಸಮ್ಮತವಾದ ಸ್ಪರ್ಧೆ ಅಲ್ಲ. ಅನಕ್ಷರತೆ, ಆರ್ಥಿಕ ಅಸಮತೆ ಮತ್ತು ಬಡತನ ಹೆಚ್ಚಾಗಿರುವ ದೇಶಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ಕಾಪಾಡ ಬಹುದು ಎಂಬುದರ ಬಗ್ಗೆ ಸಂದೇಹವಿದೆ. ಭಾರತದ ಮಧ್ಯಮವರ್ಗ ಕಳೆದ ಕೆಲವು ವರ್ಷಗಳಲ್ಲಿ ಹಿಗ್ಗಿದೆ. ಈ ‘ಹೊಸ ಮಧ್ಯಮ ವರ್ಗ’ ಅನುಕೂಲವಾಗಿ ಜೀವನ ನಡೆಸುತ್ತಿವೆ ಮತ್ತು ಈ ವರ್ಗ ಚುನಾವಣೆಯ ಫಲಿತಾಂಶವನ್ನು ಪರೋಕ್ಷವಾಗಿಯಾದರೂ ನಿರ್ಧರಿಸುತ್ತವೆ ಎನ್ನಬಹುದು. ಈ ವರ್ಗವು ಒಂದು ರಾಜಕೀಯ ಪಕ್ಷಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು, ನಿಷ್ಠೆಯನ್ನು ತೋರುತ್ತಾ ಬಂದಿರುವುದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಬಹುದು. ಹೀಗಾಗಿ ರಾಜಕೀಯ ಪಕ್ಷಗಳು ಈ ಮಧ್ಯಮವರ್ಗವನ್ನು ಓಲೈಸಲು ಹವಣಿಸುತ್ತವೆ. ಈ ಮಧ್ಯಮ ವರ್ಗದವರು ಬಹುಪಾಲು ಸುಶಿಕ್ಷಿತರು, ಮೇಲ್ಜಾತಿಯವರು, ಧರ್ಮ ಅಪೇಕ್ಷಿಗಳು, ಸಂಪ್ರದಾಯ ವಾದಿಗಳು ಮತ್ತು ನಗರ ನಿವಾಸಿಗಳು. ಈ ವರ್ಗದವರಿಗೆ ಗ್ರಾಮೀಣ ಪ್ರದೇಶದ ಮತ್ತು ಮೈನಾರಿಟಿ, ತಳ ಸಮುದಾಯದವರ ಸಮಸ್ಯೆಗಳ ಬಗ್ಗೆ ಅರಿವು ಕಡಿಮೆ ಮತ್ತು ಸಹಾನುಭೂತಿಯೂ ಕಡಿಮೆ ಎನ್ನಬಹುದು. ಕೆಲವರನ್ನು ಹೊರತು ಪಡಿಸಿ ಈ ವರ್ಗದಲ್ಲಿ ಅನೇಕರಿಗೆ ಅನ್ಯ ಧರ್ಮದವರ ಬಗ್ಗೆ ಅನುಮಾನ, ಸಂದೇಹ ಮತ್ತು ತಿರಸ್ಕಾರ ಭಾವನೆಗಳಿವೆ. ಒಂದು ವಾಟ್ಸ್ ಆಪಿನ ಗುಂಪಿನಲ್ಲಿ ಇವರು ಹಂಚಿಕೊಳ್ಳುವ ಸಂದೇಶಗಳು ಇದಕ್ಕೆ ಸಾಕ್ಷಿಯಾಗಿವೆ.

ಇನ್ನು ರಷ್ಯಾದ ರಾಜಕಾರಣ ಮತ್ತು ಚುನಾವಣೆಯನ್ನು ಗಮನಿಸಿದರೆ ಅಲ್ಲಿ ಪ್ಯೂಟಿನ್ ಸರ್ವಾಧಿಕಾರಿಯಾಗಿ ತನ್ನ ವಿರೋಧ ಪಕ್ಷದ ರಾಜಕಾರಣಿಗಳನ್ನು ಕ್ಷುಲ್ಲಕ ಕಾರಣಗಳಿಂದ ಜೈಲಿಗೆ ತಳ್ಳಿ, ಕೆಲವರನ್ನು ಮುಗಿಸಿ, ವಿರೋಧಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ಮಾಧ್ಯಮಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ಖಾಯಂ ಅಧ್ಯಕ್ಷನಾಗಿದ್ದಾನೆ. 1999ರಲ್ಲಿ ಪ್ಯೂಟಿನ್ ರಷ್ಯಾ ಅಧ್ಯಕ್ಷನಾಗಿ ಎರಡು ಟರ್ಮ್ ಅವಧಿಯನ್ನು 2008ರಲ್ಲಿ ಮುಗಿಸಿದ. ರಷ್ಯಾದ ಸಂವಿಧಾನದ ಪ್ರಕಾರ ಯಾವುದೇ ವ್ಯಕ್ತಿ ಎರಡು ಟರ್ಮ್ ಗಿಂತ ಹೆಚ್ಚಾಗಿ ಅಧ್ಯಕ್ಷನಾಗಿರಲು ಸಾಧ್ಯವಿಲ್ಲ. ಹೀಗಾಗಿ ಪ್ಯೂಟಿನ್ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಪ್ರಧಾನಿಯಾಗಿ ಒಂದು ಅವಧಿಯನ್ನು ಮುಗಿಸಿ ಮತ್ತೆ ಚುನಾಯಿತನಾಗಿ ಅಧ್ಯಕ್ಷನಾದ. ಅಷ್ಟೇ ಅಲ್ಲ ಅವನು ಈ ಬಾರಿ ಸಂವಿಧಾನವನ್ನೇ ಬದಲಿಸಿ ಖಾಯಂ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾನೆ. ಇಂತಹ ಸರ್ವಾಧಿಕಾರಿ ಚುನಾವಣೆಯಲ್ಲಿ ಭಾಗವಹಿಸಿ ಗೆದ್ದು ಬಂದಿದ್ದೇನೆ ಎಂದು ಹೇಳಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಹಾಸ್ಯಾಸ್ಪದವಾಗಿ ತೋರುತ್ತದೆ. ಕೆಲವು ದೇಶದ ರಾಜಕಾರಣದಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ಪ್ರಬಲವಾದ ಜನನಾಯಕರು ತಮ್ಮ ಬಲಾಢ್ಯವನ್ನು ಪ್ರದರ್ಶಿಸಲು ತಮ್ಮ ವೈಯುಕ್ತಿಕ ವರ್ಚಸ್ಸು ಮತ್ತು ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಪಕ್ಕದ ಚಿಕ್ಕ ಬಲಹೀನ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡಿ ತಾವು ಹೀರೋಗಳಾಗಿ ಮೇಲೇರುವುದ ಒಂದು ರೀತಿಯ ರಾಜಕೀಯ ಯುಕ್ತಿ ಎಂದು ಭಾವಿಸಬಹುದು. ರಷ್ಯಾ, ಯುಕ್ರೈನ್ ದೇಶದ ಮೇಲೆ ಮಾಡುತ್ತಿರುವ ಯುದ್ಧಕ್ಕ ಬೇರೆ ಕಾರಣಗಳು ಇರಬಹುದಾದರೂ ಅದನ್ನು ಚನಾವಣೆಯ ಪ್ರಚಾರವಾಗಿ ಕೂಡ ಬಳಸಲಾಯಿತು.


ಅಮೇರಿಕದಲ್ಲಿ ಈ ವರ್ಷ ನವೆಂಬರ್ ತಿಂಗಳಲ್ಲಿ ನಡೆಯುತ್ತಿರುವ ಚುನಾವಣೆಯನ್ನು ಇಡೀ ಪ್ರಪಂಚವೇ ಕುತೂಹಲ ಮತ್ತು ಕಾಳಜಿಯಿಂದ ನೋಡುತ್ತಿದೆ. ಇದಕ್ಕೆ ಹಿಂದೆ ಟ್ರಂಪ್ ನ ಆಡಳಿತ ವೈಖರಿ ಮತ್ತು ಅವನ ವರ್ತನೆಯೂ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ತಾನು ಸೋತಾಗ ಆ ಚುನಾವಣೆ ಫಲಿತಾಂಶವನ್ನು ಯಾವ ಪುರಾವೆ ಸಾಕ್ಷಿಗಳಿಲ್ಲದಿದ್ದರೂ ಎಲೆಕ್ಷನ್ ಕಾರ್ಯದಲ್ಲಿ ವಂಚನೆ ನಡೆದಿದೆ ಎಂಬ ಸುಳ್ಳು ಆಪಾದನೆ ಮಾಡಿ ರಾದ್ಧಾಂತ ಎಬ್ಬಿಸಿದ. ಇವನ ಮೊಂಡಾಟ ಅಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದ ಜನರ ನಂಬಿಕೆಯನ್ನು ನಿರಾಸೆಗೊಳಿಸಿತು. ಅಷ್ಟೇ ಏಕೆ ಎಲೆಕ್ಷನ್ ನಂತರದ ಸಮಯದಲ್ಲಿ ತನ್ನ ಅನುಯಾಯಿಗಳನ್ನು ಪ್ರಚೋದಿಸಿ ಅವರು ಗುಂಡಾಗಳಂತೆ ಅಸ್ತ್ರಗಳನ್ನು ಹಿಡಿದು ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ಹಿಂಸೆ ಆಕ್ರೋಶಕ್ಕೆ ತೊಡಗಿದಾಗ ಡೆಮೋಕ್ರೆಟ್ ಸದಸ್ಯರು ಪ್ರಾಣ ಭಯದಿಂದ ಕುರ್ಚಿ ಬೆಂಚುಗಳಡಿಯಲ್ಲಿ ಅವಿತುಕೊಳ್ಳಬೇಕಾಯಿತು. ಪ್ರಪಂಚದ ಇತರ ಸಭ್ಯ ಜನತೆ ಅಮೇರಿಕ ಪ್ರಜಾಪ್ರಭುತ್ವದಲ್ಲಿ ಹೀಗೂ ಉಂಟೆ ಎಂದು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಾಯಿತು. ಟ್ರಂಪ್ ತನ್ನ ಬಲಪಂಥ ಧೋರಣೆಗಳಿಂದ ಅಲ್ಲಿಯವರೆಗೆ ನಾಗರೀಕರಾಗಿದ್ದ ಜನರನ್ನು ಧ್ರುವೀಕರಣಗೊಳಿಸಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಡೆಗಾಣಿಸಿದ ಎಂಬ ಅಪವಾದವಿದೆ. ಟ್ರಂಪ್ ಎಷ್ಟೇ ಒಳ್ಳೆ ಕೆಲಸಗಳನ್ನು ಮಾಡಿದ್ದರೂ ಈ ವಿಚಾರಗಳನ್ನು ಕಡೆಗಾಣಿಸಲು ಸಾಧ್ಯವಿಲ್ಲ.

ಟ್ರಂಪ್ ಅಮೇರಿಕಗೆ ವಲಸೆ ಬರುತ್ತಿರುವ ಜನರ ಬಗ್ಗೆ, ಇಸ್ಲಾಂ ಧರ್ಮದವರ ಬಗ್ಗೆ ಎರ್ರಾ ಬಿರ್ರಿ ಮಾತನಾಡಿ ಎಲ್ಲರನ್ನು ಚಕಿತಗೊಳಿಸಿದ. ಹಿಂದಿನ ಚುನಾವಣೆಯ ಪ್ರಚಾರದಲ್ಲಿ ತನ್ನ ವಿರೋಧಿ ಹಿಲರಿ ಕ್ಲಿಂಟನ್ ಕುರಿತು ಕೀಳಾಗಿ ವರ್ತಿಸಿ ಅವಳನ್ನು ಜೈಲಿನಲ್ಲಿ ಲಾಕ್ ಅಪ್ ಮಾಡಬೇಕೆಂದು ಭಾಷಣದಲ್ಲಿ ಕೂಗಾಡಿದ. ಫ್ಲೋರಿಡಾ ರಾಜ್ಯದ ನಿಕ್ಕಿ ಹೇಲಿ ಎಂಬ ಭಾರತೀಯ ಮೂಲದ ಅಭ್ಯರ್ಥಿ ರಿಪಬ್ಲಿಕ್ ಪಾರ್ಟಿ ಪ್ರತಿನಿಧಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಾರೆ ಎಂಬ ಸುದ್ದಿ ಮಧ್ಯದಲ್ಲಿ ಈ ಟ್ರಂಪ್ ಮಹಾಶಯ ಮತ್ತೆ ನುಸುಳಿಕೊಂಡು ಬಂದು ಈಗ ಅಧ್ಯಕ್ಷಸ್ಥಾನಕ್ಕೆ ಮತ್ತೆ ನಿಲ್ಲುತ್ತಿದ್ದಾನೆ. ಟ್ರಂಪ್ ಹಿಂದೆ ಪೋರ್ನ್ ಸ್ಟಾರ್ ಜೊತೆ ಸಂಬಂಧ ಇಟ್ಟುಕೊಂಡ್ಡಿದ್ದು ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಈ ಸಂಗತಿಯನ್ನು ಮುಚ್ಚಿಡಲು ಅವಳಿಗೆ ಹಣವನ್ನು ವಿತರಣೆ ಮಾಡುವಾಗ ಉಂಟಾದ ಅವ್ಯವಹಾರದಲ್ಲಿ ಸಿಕ್ಕಿಕೊಂಡು ಅವನನ್ನು ಕೋರ್ಟಿಗೆ ಎಳೆಯಲಾಯಿತು. ಟ್ರಂಪ್ ತಪ್ಪಿತಸ್ಥನೆಂದು ತೀರ್ಮಾನಿಸಲಾಗಿದೆ. ಜೈಲು ಶಿಕ್ಷೆಯ ಬದಲು ಅವನು ದಂಡವನ್ನು ತೆರಬೇಕಾಗುತ್ತದೆ. ಇಷ್ಟೆಲ್ಲ ಅಪಚಾರಗಳ ಹಿನ್ನೆಲೆಯಲ್ಲಿ ಮತ್ತೆ ಟ್ರಂಪ್ ಅಧ್ಯಕ್ಷಸ್ಥಾನಕ್ಕೆ ನಿಂತಿದ್ದಾನೆ. ಹಿಂದೆ ಒಬಾಮ, ಕ್ಲಿಂಟನ್ ಮುಂತಾದ ಹಿರಿಯ ವ್ಯಕ್ತಿತ್ವಗಳನ್ನು ಕಂಡ ಅಮೇರಿಕ ಈಗ ಮತ್ತೆ ಟ್ರಂಪ್ ಮೇಲೇರಿಬರಲು ಒಪ್ಪಿದೆ, ಅವನು ಆಯ್ಕೆಯಾಗಿ ಬರುವ ಸಾಧ್ಯತೆಗಳಿವೆ. ಅಮೇರಿಕದಂತಹ ಮುಂದುವರಿದ ಶ್ರೀಮಂತ ದೇಶದಲ್ಲಿ ಟ್ರಂಪ್ ತರಹದ ರಾಜಕಾರಣಿಗೆ ಮಿಲಿಯನ್ ಗಟ್ಟಲೆ ಜನ ಬೆಂಬಲ ನೀಡುತ್ತಿದ್ದಾರೆ ಎಂದರೆ ಜನರ ವಿವೇಚನಾ ಶಕ್ತಿಗೆ ಏನಾಗಿದೆ ಎಂಬ ಆತಂಕ ಮೂಡುತ್ತದೆ. 'ಅಮೇರಿಕ ಫಸ್ಟ್' ಎನ್ನುವ ರಾಷ್ಟ್ರವಾದ ಮತ್ತು ಸ್ವಾರ್ಥ ನಿಲುವನ್ನು ಟ್ರಂಪ್ ಎತ್ತಿಹಿಡಿದಿರುವುದು ಅವನ ಜನಪ್ರಿಯತೆಗೆ ಕಾರಣವಾಗಿರಬಹುದು. ಇಡೀ ಪ್ರಪಂಚವೇ ಬಲಪಂಥದ ಕಡೆ ವಾಲುತ್ತಿದೆ. ಎಲ್ಲೆಡೆ ಸಂಶಯಗಳು ಹುಟ್ಟಿಕೊಂಡು ಪರಕೀಯ ಪ್ರಜ್ಞೆ (Tribalism) ಜಾಗೃತವಾಗಿದೆ. ಇಲ್ಲ ಸಲ್ಲದ ಕಾಲ್ಪನಿಕ ಶತ್ರುಗಳನ್ನು ರಾಜಕಾರಣಿಗಳು ಹುಟ್ಟು ಹಾಕುತ್ತಿದ್ದಾರೆ. ಒಂದು ದೇಶದ ಜನರಲ್ಲಿ ಒಗ್ಗಟ್ಟನ್ನು, ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಮೂಡಿಸಲು ಇದು ಸುಲಭದ ತಂತ್ರ! ಇದರಿಂದಾಗಿ 'ನಾವು ಮತ್ತು ಅವರು' ಎಂಬ ಧ್ರುವೀಕರಣ ಉಂಟುಮಾಡುತ್ತಿದ್ದರೆ. ಟ್ರಂಪ್ ಶ್ರೀಮಂತ ಉದ್ಯಮಿಗಳ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಅವನಿಗೆ ವ್ಯಾಪಾರಿ ವರ್ಗದವರು ಬೆಂಬಲ ನೀಡಲು ತಯಾರಿದ್ದರೆ. ನನಗೆ ತಿಳಿದ ಅನೇಕ ಅಮೇರಿಕ ಶ್ರೀಮಂತ ಅನಿವಾಸಿ ಮಿತ್ರರು ಟ್ರಂಪ್ ಗೆ ಬೆಂಬಲ ನೀಡಲು ತಯಾರಿದ್ದಾರೆ. ಸ್ವಾರ್ಥ ಹೆಚ್ಚಾದಂತೆ ಬಹುಶಃ ನಾವು ನಮ್ಮ ವಿವೇಚನಾಶಕ್ತಿಯನ್ನು ಕಳೆದುಕೊಳ್ಳುತೇವೆ. ರಷ್ಯಾ ದೇಶವು ಟ್ರಂಪ್ ಹಿಂದೆ ಗೆದ್ದು ಬಂದ ಚುನಾವಣೆಯಲ್ಲಿ ಹಸ್ತಾಕ್ಷೇಪಮಾಡಿದೆ ಎನ್ನುವ ವದಂತಿ ಇದೆ, ಇದಕ್ಕೆ ಕೆಲವು ಸಾಕ್ಷಿಗಳಿವೆ ಎಂದು ತಿಳಿದುಬಂದಿದೆ. ಎಲೆಕ್ಟ್ರಾನಿಕ್ ವೋಟಿಂಗ್ ವ್ಯವಸ್ಥೆಯಲ್ಲಿ ಸೈಬರ್ ಸೆಕ್ಯೂರಿಟಿ ಒಡೆದು ವಂಚನೆ ಉಂಟುಮಾಡುವ ಸಾಧ್ಯತೆಗಳು ಇವೆ. ನಕಲಿ ಅಸ್ತಿತ್ವವನ್ನು ಸೃಷ್ಟಿಸಿ ಹೆಚ್ಚು ಮತಗಳನ್ನು ಪಡೆಯಬಹುದು. ಹೀಗೆ ತಾಂತ್ರಿಕತೆಯನ್ನು ಒಂದು ರಾಜಕೀಯ ಪಕ್ಷ ದುರುಪಯೋಗ ಪಡೆದುಕೊಳ್ಳಬಹುದು. ಚುನಾವಣೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕ ವ್ಯವಹಾರಗಳು ಮುಖ್ಯ.

ಕ್ರಿಕೆಟ್, ಫುಟ್ಬಾಲ್ ಪಂದ್ಯಗಳಂತೆ ಚುನಾವಣೆಯಲ್ಲಿ ಅನಿರೀಕ್ಷಿತ ತಿರುವುಗಳು ಸಾಧ್ಯ. ಸದರಿ ಅಧ್ಯಕ್ಷ ಬೈಡೆನ್ ಅವರ ಪುತ್ರ ಹಿಂದೆ ಮಾದಕವಸ್ತುಗಳನ್ನು ಬಳಸುತ್ತಿರುವಾಗ ಬಂದೂಕದ ಪರವಾನಗಿಯನ್ನು ಪಡೆದಿದ್ದ ಎನ್ನುವ ವಿಚಾರ ಬಹಿರಂಗಕ್ಕೆ ಬಂದು ಅದು ಚುನಾವಣೆ ಪ್ರಚಾರದಲ್ಲಿ ಒಂದು ವಿಷಯವಾಗಿದೆ. ಅಮೇರಿಕ ಸರ್ಕಾರವು ಇಸ್ರೇಲ್-ಪ್ಯಾಲೆಸ್ಟೈನ್ ಘರ್ಷಣೆಯಲ್ಲಿ ಇಸ್ರೇಲ್ ಪರ ವಹಿಸಿದ್ದು, ಅಮೇರಿಕದ ಹಲವಾರು ವಿಶ್ವ ವಿದ್ಯಾಲಯಗಳಲ್ಲಿ ಪ್ರತಿಭಟನೆಗಳಾಗಿ ಅದೂ ಈಗ ಚುನಾವಣೆಯ ಒಂದು ಮುಖ್ಯ ವಿಷಯವಾಗಿದೆ. ಅಂದಹಾಗೆ ಬ್ರಿಟನ್ನಿನ ಪ್ರಧಾನಿ ರಿಷಿ ಸುನಾಕ್ ಇತ್ತೀಚಿಗೆ ಯೂರೋಪಿನಲ್ಲಿ ನಡೆದ ಎರಡನೇ ಮಹಾಯುದ್ಧ ಶ್ರದ್ಧಾಂಜಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಸುನಾಕ್ ಅವರ ರೇಟಿಂಗ್ ಕುಸಿದಿದೆ.

ಭಾರತದ ಉಪ ಖಂಡ ದೇಶಗಳಲ್ಲಿ ಪ್ರಜಾಪ್ರಭುತ್ವ ನರಳಿದೆ. ಪಾಕಿಸ್ತಾನ ಮತ್ತು ಮಿಯಾನ್ಮಾರ್ ದೇಶಗಳಲ್ಲಿ ಮಿಲಿಟರಿಯ ಜನರಲ್ ಗಳು ಹಸ್ತಕ್ಷೇಪಮಾಡಿ ಸರ್ಕಾರವನ್ನು ಉರುಳಿಸಿರುವ ಅನೇಕ ಪ್ರಸಂಗಗಳಿವೆ. ಈ ವರ್ಷ ಫೆಬ್ರುವರಿಯಲ್ಲಿ ಪಾಕಿಸ್ತಾನ ಚುನಾವಣೆ ನಡೆಸಿತು. ಪ್ರಧಾನಿ ಇಮ್ರಾನ್ ಖಾನನ್ನು ಅವಿಶ್ವಾಸ ನಿರ್ಣಯದ ಮೇಲೆ ಕೆಳಗಿಳಿಸಿ ಭ್ರಷ್ಟಾಚಾರದ ಅಪಾದನೆಯನ್ನು ಹೊರಿಸಿ ಜೈಲಿಗೆ ತಳ್ಳಿದ್ದರೂ ಅವನ ಪಿಟಿಐ ಪಕ್ಷವು ಈ ಬಾರಿ ಗಮನಾರ್ಹ ಮತವನ್ನು ಗಳಿಸಿತು. ಆದರೆ ಸರ್ಕಾರವನ್ನು ರಚಿಸುವಷ್ಟು ಬಹುಮತ ಪಡೆಯಲಿಲ್ಲ. ಕೊನೆಗೆ ಪಾಕಿಸ್ತಾನದ ಮುಸ್ಲಿಂ ಲೀಗ್ ಮತ್ತು ಪೀಪಲ್ ಪಾರ್ಟಿ ಎರಡು ಸಹಮತದಿಂದ ಸರ್ಕಾರ ರಚಿಸಿ ಶಿಬಾಸ್ ಶರೀಫ್ ಪ್ರಧಾನಿಯಾಗಿದ್ದಾನೆ. ಇನ್ನು ಮೀಯನ್ಮಾರದಲ್ಲಿ ನೋಬಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಚಿ ಹಲವಾರು ದಶಕಗಳಿಂದ ಬಹುಮತ ಗಳಿಸಿ ನಾಯಕಿಯಾಗಿದ್ದರೂ ಅವಳ ಗಂಡ ಹೊರದೇಶದವನಾಗಿದ್ದರಿಂದ ಅವರ ಸಂವಿಧಾನದ ಪ್ರಕಾರ ಅವಳು ಅಲ್ಲಿಯ ಪ್ರಧಾನಿಯಾಗಲು ಸಾಧ್ಯವಿಲ್ಲ. ಆದರೂ ಸ್ಟೇಟ್ ಕೌನ್ಸಿಲ್ಲರ್ ಎಂಬ ಉನ್ನತ ಪಟ್ಟದಲ್ಲಿ ಅವಳು ಅತ್ಯಂತ ಜನಪ್ರೀಯ ಜನನಾಯಕಿಯಾಗಿ ಹಲವಾರು ಬಾರಿ ಬಹುಮತದಿಂದ ಗೆದ್ದು ಬಂದರೂ ಅಲ್ಲಿಯ ಮಿಲಿಟರಿ ಜನರಲ್ ಗಳು ಅವಳ ಮೇಲೆ ಕೆಲವು ಆರೋಪಗಳನ್ನು ಹೊರಿಸಿ ಅಪರಾಧಿ ಎಂದು ಅವಳನ್ನು 27 ವರ್ಷ ಜೈಲ್ ಶಿಕ್ಷೆಗೆ ಗುರಿಪಡಿಸಿದೆ! ಅವಳಿಗೆ ಈಗ 79 ವರ್ಷಗಳಾಗಿರುವುದರಿಂದ ಇದು ಒಂದು ರೀತಿ ಜೀವಾವಧಿ ಶಿಕ್ಷೆಯಾಗಿ ಪರಿಣಮಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈ ವಿಚಾರದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಅಂಗ್ ಸಾನ್ ಸೂಚಿಗೆ ಬೆಂಬಲ ನೀಡಿವೆ.

ಒಟ್ಟಾರೆ ನೋಡಿದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ದೇಶದಲ್ಲಿ ಆಡಳಿತ ನಡೆಸಲು ಆದರ್ಶವಾದ ಮಾದರಿ. ಪ್ರಜಾಪ್ರಭುತ್ವ ಮತ್ತು ಚುನಾವಣೆ ಎಂಬ ಈ ಎರಡು ವಿಚಾರಗಳು ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ, ಅದು ಸಂಕೀರ್ಣವಾದದ್ದು. 'ಜನರಿಂದ ಜನರಿಗಾಗಿ' ಎಂಬ ಸಿದ್ಧಾಂತವನ್ನು ಆಧರಿಸಿದ್ದರೂ ಈ ವ್ಯವಸ್ಥೆಯಲ್ಲಿ ಹಲವಾರು ತೊಡಕುಗಳಿರುವುದನ್ನು ಮೇಲೆ ಪ್ರಸ್ತಾಪಮಾಡಿರುವ ನಿದರ್ಶನಗಳಲ್ಲಿ ಕಾಣಬಹುದು. ನಾವು ಯಾವುದೇ ದೇಶದವರಾಗಿದ್ದರೂ ನಮ್ಮ ಮಹತ್ವಾಕಾಂಶೆಗಳಲ್ಲಿ ವ್ಯತಾಸವಿದ್ದರೂ ಜನಸಾಮಾನ್ಯರ ಬದುಕಿನ ಮೂಲಭೂತ ಸಮಸ್ಯೆಗಳು ಒಂದೇ ಆಗಿರುತ್ತವೆ. ಈಗ ಜಾಗತೀಕರಣದ ಪರಿಣಾಮದಿಂದ ಇಡೀ ವಿಶ್ವವೇ ಒಂದು ಸಣ್ಣ ಕುಟುಂಬವಾಗಿದೆ. ಒಂದು ರಾಷ್ಟ್ರದ ಸಮಸ್ಯೆ ಬರಿ ಸ್ಥಳೀಯ ಸಮಸ್ಯೆಯಾಗದೆ ಅದು ವಿಶ್ವದ ಇನ್ನೊಂದು ಮೂಲೆಯಲ್ಲಿ ವಾಸಿಸುವರ ಸಮಸ್ಯೆಯೂ ಆಗಬಹುದು. ಕರೋನ ಪಿಡುಗು, ಗ್ಲೋಬಲ್ ವಾರ್ಮಿಂಗ್, ಯೂಕ್ರೈನ್ ಯುದ್ಧ, ಸಮುದಾಯದ ವಲಸೆ, ಸ್ಥಳಾಂತರ ಇವು ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಸಮಸ್ಯೆಕೂಡ. ಈ ಸಮಸ್ಯೆಗಳನ್ನು ಎದುರಿಸಲು ದೇಶಗಳ ನಡುವೆ ಸಹಕಾರ ಒಪ್ಪಂದ ಬೇಕಾಗುತ್ತದೆ. ಸರ್ವಾಧಿಕಾರಿಗಳಿಗೆ ಮತ್ತು ರಾಷ್ಟ್ರವಾದಿಗಳಿಗೆ ತಮ್ಮ ದೇಶದ ಹಿತಾಸಕ್ತಿ ಅಷ್ಟೇ ಅವರಿಗೆ ಮುಖ್ಯವಾಗುತ್ತದೆ. ಅಲ್ಲಿ ಒಂದು ಸ್ವಾರ್ಥ ನಿಲುವು ಇರುತ್ತದೆ. ಆದುದರಿಂದ ಅವರ ಸಹಕಾರ ಮತ್ತು ಸಮ್ಮತವನ್ನು ನಿರೀಕ್ಷಿಸಲು ಸಾಧ್ಯವಾಗದಿರಬಹುದು. ಈ ಒಂದು ಹಿನ್ನೆಲೆಯಲ್ಲಿ ಉದಾರವಾದ ಮತ್ತು ಪ್ರಜಾಪ್ರಭುತ್ವ ವಿಶೇಷ ಅಗತ್ಯವಾಗಿ ಎದ್ದು ನಿಲ್ಲುತ್ತದೆ. ಬಹುಮುಖಿ ಸಂಸ್ಕೃತಿ ಇರುವ ಒಂದು ದೇಶದ ಒಳಗೆ ಮತ್ತು ಹೊರಗೆ ಜನರನ್ನು ಒಂದು ಗೂಡಿಸಲು ಪ್ರಜಾಪ್ರಭುತ್ವ ಮೌಲ್ಯಗಳು ಬೇಕಾಗಿವೆ. ಒಂದು ಸರ್ಕಾರ ತನ್ನ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿದಾಗ ಆ ರಾಜಕೀಯ ಪಕ್ಷವನ್ನು ಹತೋಟಿಯಲ್ಲಿಡಲು ಮತದಾರರಿಗೆ ಶಕ್ತಿಯಿದೆ. ಚುನಾವಣೆ ಮುಗಿದಮೇಲೆ ಗೊಣಗಾಡಿ ಕೈ ಹಿಸುಕಿಕೊಳ್ಳುವ ಬದಲು ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದರಲ್ಲಿ ಹಿತವಿದೆ. ಪಟ್ಟಭದ್ರ ಹಿತಾಸಕ್ತರ ಸ್ವಾರ್ಥ, ಧರ್ಮದ ನೆಪದಲ್ಲಿ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರನ್ನು ಮತ್ತು ಬಹುಸಂಖ್ಯಾತರನ್ನು ಓಲೈಸುವುದು, ವ್ಯಕ್ತಿ ಪೂಜೆ ಮತ್ತು ಒಂದು ಐಡಿಯಾಲಜಿಯನ್ನು ಆರಾಧಿಸುವುದು, ಮತದಾರರಿಗೆ ಹಣ ಮತ್ತು ಇತರ ಆಮಿಷಗಳನ್ನು ನೀಡಿ ಮತ ಪಡೆಯುವುದು, ಸೋಷಿಯಲ್ ಮೀಡಿಯಾ ಮತ್ತು ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸುವುದು ಪ್ರಜಾಪ್ರಭುತ್ವದ ಮೂಲ ಉದ್ದೇಶಕ್ಕೆ ಧಕ್ಕೆಯನ್ನು ಉಂಟುಮಾಡುತ್ತದೆ.

ಪ್ರಜಾಪ್ರಭುತ್ವ ಮತ್ತು ಚುನಾವಣೆ ಹಿಂದೆ ಅಂತಾರಾಷ್ಟ್ರೀಯ, ಪಾಶ್ಚಿಮಾತ್ಯ ದೇಶಗಳ ಅಭಿಪ್ರಾಯಕ್ಕೆ, ನೈತಿಕ ಮಟ್ಟ ಎಂಬ ಅಳತೆಗೋಲಿಗೆ ಬದ್ದವಾಗಿ ಸ್ವವಿಮರ್ಶೆ ಮಾಡಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದವು. ಆದರೆ ಈಗ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದೇವೆ, ವಿಶ್ವ ಗುರುವಾಗಲು ನಾವು ಲಾಯಕ್ಕು, ನಾವು ಬಲಾಢ್ಯ ರಾಷ್ಟ್ರ ಆದುದರಿಂದ ನಾವೇಕೆ ಪಾಶ್ಚಿಮಾತ್ಯ ದೇಶಗಳಿಗೆ ಲೆಕ್ಕಿಸಬೇಕು ಎಂಬ ಗರ್ವ ಉಂಟಾಗಿದೆ. ಪಾಶ್ಚಿಮಾತ್ಯ ಸುದ್ದಿ ಮಾಧ್ಯಮ ಮತ್ತು ಮೀಡಿಯಾಗಳು, ಟೈಮ್ಸ್ ಮುಂತಾದ ಪತ್ರಿಕೆಗಳು ನಮ್ಮ ಹುಳುಕುಗಳನ್ನು ಎತ್ತಿ ತೋರಿಸಿದಾಗ ಇದು ನಮ್ಮ ಆಂತರಿಕ ವಿಷಯ, ನಮಗೆ ಬಿಟ್ಟಿದ್ದು, ಹೊರಗಿನವರು ಏಕೆ ಹಸ್ತಾಕ್ಷೇಪ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಸರ್ವಾಧಿಕಾರದ ಸರ್ಕಾರಗಳು ಯುನೈಟೆಡ್ ನೇಶನ್ಸ್ ಮತ್ತು ಇತರ ವಿಶ್ವ ಶಾಂತಿ ಸಂಸ್ಥೆಗೆ ಬದ್ಧರಾಗುತ್ತಿಲ್ಲ ಎಂಬುದು ಆತಂಕದ ವಿಷಯವಾಗಿದೆ. ಪ್ರಜಾ ಪ್ರಭುತ್ವದ ಪರಿಕಲ್ಪನೆ ಎಲ್ಲ ರಾಷ್ಟ್ರಗಳಿಗೆ ಹೊಂದುವಂತಹ, ಅನ್ವಯವಾಗುವಂತಹ ವ್ಯವಸ್ಥೆಯಲ್ಲ! ಮಯನ್ಮಾರ್, ರಷ್ಯಾ ಚೈನಾ, ಮಧ್ಯಪೂರ್ವ ಇಸ್ಲಾಂ ದೇಶಗಳನ್ನು, ಆಫ್ರಿಕಾದ ಕೆಲವು ರಾಷ್ಟ್ರಗಳನ್ನು ಗಮನಿಸಿದಾಗ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಅಗತ್ಯವಾಗಿ ಕಾಣದಿರುವುದು ಆಶ್ಚರ್ಯವೇನಲ್ಲ. ಪ್ರಜಾಪ್ರಭುತ್ವ ಅಂತಿಮ ಸ್ವಾತಂತ್ರ್ಯವನ್ನು ನೀಡುವುದಾದರೂ ಆ ಸ್ವಾತಂತ್ರ್ಯ ಕೆಲವರಿಗೆ ಬೇಕಿಲ್ಲ. ಈ ದೇಶಗಳಲ್ಲಿ ಇರುವ ಪರ್ಯಾಯ ಆಡಳಿತ ವ್ಯವಸ್ಥೆ ಅಲ್ಲಿನ ಪ್ರಜೆಗಳ ಬೌದ್ಧಿಕ ಮತ್ತು ಜೀವನ ಮಟ್ಟಕೆ ಸರಿಯಾಗಿರಬಹುದು. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ಒಂದು ಆದರ್ಶ ಮಾದರಿ ಅದನ್ನು ಎಲ್ಲರೂ ಸ್ವೀಕರಿಸಬೇಕು ಎಂದು ಭಾವಿಸಿ ಪ್ರಪಂಚದ ಎಲ್ಲ ಮೂಲೆ, ಮೂಲೆಗೆ ಅದನ್ನು ತಲುಪಿಸಲು ಹವಣಿಸುತ್ತಿರುವ ಅಮೇರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಮತ್ತೊಮ್ಮೆ ಆಲೋಚಿಸಬೇಕಾಗಿದೆ.
*