ತಸ್ಮೈಶ್ರೀಗುರವೇನಮಃ

ಫೋಟೋ ಕೃಪೆ ಗೂಗಲ್ L>R ರಾಧಾ ಕೃಷ್ಣನ್, ಬಿಎಂಶ್ರೀ, ಕುವೆಂಪು, ಹೆಚ್ ಏನ್
ಕಳೆದ ಕೆಲವು ದಿನಗಳ ಹಿಂದೆ ನಾವೆಲ್ಲಾ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ನಮ್ಮ ಬದುಕಿನಲ್ಲಿ ನಮಗೆ ಸ್ಫೂರ್ತಿ ನೀಡಿ, ಜ್ಞಾನ ದೀವಿಗೆಯನ್ನು ಕೈಗಿತ್ತ ಗುರುಗಳನ್ನು ಸ್ಮರಿಸಿಕೊಂಡಿದ್ದೇವೆ.  ಇಂದು ಗೌರಿ ಪ್ರಸನ್ನ ಮತ್ತು ಡಾ. ದೇಸಾಯಿಯವರು ತಮ್ಮ ಗುರುವಿನ ಬಗ್ಗೆ ಆತ್ಮೀಯವಾದ ಬರಹಗಳನ್ನು ಇಲ್ಲಿ ಸಮರ್ಪಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯರ ಪರಂಪರೆಗೆ, ಸಂಬಂಧಗಳಿಗೆ ಉಚ್ಚ ಸ್ಥಾನಮಾನಗಳಿವೆ. 'ಗುರು ಸಾಕ್ಷಾತ್ ಪರಬ್ರಹ್ಮ' ಎಂದು ಪರಿಗಣಿಸುತ್ತೇವೆ. ಇದು ಒಂದು ಪವಿತ್ರವಾದ ನಂಟು. ಗುರುವಿಗೆ ಒಂದು ಜವಾಬ್ದಾರಿಯಿದೆ, ಜ್ಞಾನಾರ್ಜನೆಯ ಕರ್ತವ್ಯ ಮತ್ತು ಕೈಂಕರ್ಯವಿದೆ. ನಿಜವಾದ ಗುರುವಿಗೆ ತನ್ನ ಶಿಷ್ಯರ ಬಗ್ಗೆ ಪಕ್ಷಪಾತವಿರಬಾರದು, ಅಲ್ಲಿ ಜಾತಿ ಮತಗಳ ಭಾವನೆಗಳು ನುಸುಳಿ ಬರಬಾರದು. ಬಹಳ ಹಿಂದೆ ಗುರುಕುಲಗಳಲ್ಲಿ ಕೆಳಜಾತಿ ವರ್ಗದವರಿಗೆ, ಹೆಂಗಸರಿಗೆ  ವಿದ್ಯೆಯನ್ನು ಪಡೆಯುವ ಅರ್ಹತೆ ಇಲ್ಲವೆಂದು ಅವರನ್ನು ದೂರ ಇಡಲಾಗಿತ್ತು. ಏಕಲವ್ಯನಂಥವರು ತಮ್ಮ ಕಲಿಕೆಯನ್ನು ತ್ಯಜಿಸಬೇಕಾಯಿತು. ಅದು ಗುರುಭಕ್ತಿಯ ಪರಾಕಾಷ್ಠೆ  ಹಾಗೂ ಉತ್ತಮ ನಿದರ್ಶನವೂ ಹೌದು. ಸ್ವಾತಂತ್ರ್ಯ ಭಾರತದಲ್ಲಿ ಶಿಕ್ಷಣ ಎಲ್ಲರ ಹಕ್ಕು. ಹಿಂದೆ ಮತ್ತು ಇಂದಿಗೂ ಕೆಲವೆಡೆ ಶಿಕ್ಷಕರು ಶಿಷ್ಯನಿಗೆ ಬಹಳ ಅಸಡ್ಡೆಯಿಂದ, ಕೆಲವೊಮ್ಮೆ ಎಲ್ಲರ ಮುಂದೆ ತೇಜೋವಧೆ ಮಾಡಿ ಹೀನೈಸಿ ವಿದ್ಯೆ ಕಲಿಸುವ ವಿಧಾನ ಸರಿಯೆಂದು ಭಾವಿಸಿದ್ದಾರೆ. (Learning by humiliation) ಇಂತಹ ಗುರುಗಳು ಮತ್ತು ಇಂತಹ ಶಿಕ್ಷಣ ವ್ಯವಸ್ಥೆ ಕಲಿಕೆಗೆ ತದ್ವಿರುದ್ಧ ಪರಿಣಾಮಗಳನ್ನು ತರಬಹುದು.  ನಿಜವಾದ ಗುರು ಶಿಷ್ಯನ ಸರ್ವತೋಮುಖ ಬೆಳವಣಿಗೆಗೆ 
(Holistic Development) ಪೂರಕವಾಗುವ ಶಿಕ್ಷಣವನ್ನು ಆಸ್ಥೆಯಿಂದ, ಪ್ರೀತಿಯಿಂದ ನೀಡಬೇಕಾಗಿದೆ. ಶಿಷ್ಯನನ್ನು ಗೌರವದಿಂದ ಕಂಡು, ಅವನು ತನ್ನ ಪೈಪೋಟಿ ಎಂದೆನಿಸದೆ  ಶಿಷ್ಯನು ತನ್ನಷ್ಟೇ ಅಥವಾ  ತನಗಿಂತ  ಉನ್ನತ ಸ್ಥಾನವನ್ನು ಏರಬೇಕೆಂದು ನೀರೀಕ್ಷೆಯಿಟ್ಟುಕೊಂಡಲ್ಲಿ ಅದು ಶಿಕ್ಷಣದ ಉದ್ದೇಶವನ್ನು ಪೂರೈಸುತ್ತದೆ. ಶಿಷ್ಯರಿಂದ ಶಿಷ್ಯರಿಗೆ ಜ್ಞಾನದ ಬೆಳಕು ಇನ್ನು ಪ್ರಖರವಾಗಿ ಬೆಳಗಬೇಕೆ ಹೊರತು ಅದು ಕುಂದಬಾರದು. ಈ ಜ್ಞಾನದಿಂದ ಒಬ್ಬ ವ್ಯಕ್ತಿಯ ವಿಕಾಸದ ಜೊತೆಗೆ ಒಂದು ಸಮಾಜದ ವಿಕಾಸವೂ  ಆಗಬೇಕು, ಅಲ್ಪ ಮಾನವ ವಿಶ್ವಮಾನವನಾಗಬೇಕು, ಅದೇ ಶಿಕ್ಷಣದ ಗುರಿ. ಕೆಲವು ವಿಶೇಷ ಗುರು-ಶಿಷ್ಯ ಸಂಬಂಧಗಳು, ಶಿಷ್ಯ ಗುರುವಿಗೆ ಸಲ್ಲಿಸಿರುವ ಕಾಣಿಕೆಗಳು ಕಾವ್ಯ ರೂಪದಲ್ಲೂ ಅಭಿವ್ಯಕ್ತಗೊಂಡಿವೆ. ಗೌರಿ  ಅವರು ಕೆಳಗೆ ತಮ್ಮ ಬರಹದ ಕೊನೆಯಲ್ಲಿ ಪ್ರಸ್ತಾಪಿಸಿರುವಂತೆ, ಜಿ ಎಸ್ ಎಸ್  ತಮ್ಮ ಗುರುಗಳಾದ ಕುವೆಂಪು ಅವರನ್ನು ಗೌರವದಿಂದ, ನಿಶ್ಶಬ್ದದಲ್ಲಿ ನಿಂತು ನೆನೆಯುತ್ತಾರೆ. ಗುರುಗಳು ಕೊಟ್ಟ ಹೊಸ ಹುಟ್ಟುಗಳನ್ನು ಹಿಡಿದು, ದೋಣಿಯೇರಿ ಜ್ಞಾನವೆಂಬ ಸಾಗರವನ್ನು ಪ್ರವೇಶಿಸುತ್ತಾರೆ. ಅವರ ಗುರುಗಳಾದ ಕುವೆಂಪುರವರು ತಮ್ಮ ಮೇರುಕೃತಿ ಶ್ರೀ ರಾಮಾಯಣ ದರ್ಶನಂ ಮುಗಿಸಿ ಅದನ್ನು ತಮ್ಮ ಗುರುಗಳಾದ ಶ್ರೀ ವೆಂಕಣ್ಣಯ್ಯನವರಿಗೆ ಅರ್ಪಿಸಿ; 

"ಇದೋ ಮುಗಿಸಿ ತಂದಿಹೆನ್  ಈ ಬೃಹದ್ ಗಾನಮಂ, 
ನಿಮ್ಮ ಸಿರಿಯಡಿಗೆ ಒಪ್ಪಿಸಲ್ಕೆ, ಓ ಪ್ರಿಯ ಗುರುವೇ, ಕರುಣಿಸಿಂ 
ನಿಮ್ಮ ಹರಕೆಯ ಬಲದ ಶಿಷ್ಯನಂ"  

ಎಂದು ವಿನಂತಿಸುತ್ತಾರೆ. ಹೀಗೆ ಗುರು ಶಿಷ್ಯರ ಪ್ರೀತಿ ವಿಶ್ವಾಸಗಳ ಪರಂಪರೆಯನ್ನು ಮತ್ತು ಅದರ ಸಮೃದ್ಧಿಯನ್ನು ಕನ್ನಡ ಸಾಹಿತ್ಯದಲ್ಲಿ ಕಾಣಬಹುದು. ಆದರ್ಶ ಗುರುಗಳು  ನಮಗೆ ಸ್ಫೂರ್ತಿಯನ್ನು ನೀಡಿ ಬದುಕಿನ ದಿಕ್ಕನ್ನೇ ಬದಲಾಯಿಸುತ್ತಾರೆ. ಸಮರ್ಥಗುರುಗಳು ನಮ್ಮ ಸ್ಮೃತಿಯಲ್ಲಿ ಅಮರರಾಗಿರುತ್ತಾರೆ. ಇಂತಹ ಮಹಾನುಭಾವಿ ಮಹನೀಯರನ್ನು ಮಹಿಳೆಯರನ್ನು ಶಿಕ್ಷಕರ ದಿನದಂದು ಸ್ಮರಿಸುವುದು, ನಮನಗಳನ್ನು ಅರ್ಪಿಸುವುದು ನಮ್ಮ ಕರ್ತವ್ಯ. 

***

ನಮ್ಮೆಲ್ಲರ ನೆಚ್ಚಿನ ರಾಣಿ ಎಲಿಝಬೆತ್ ಇಂದು ತೀರಿಕೊಂಡಿದ್ದಾಳೆ. ಅವಳ ಕರ್ತವ್ಯ ನಿಷ್ಠೆ ನಮಗೆಲ್ಲ ಆದರ್ಶಪ್ರಾಯವಾಗಿದೆ. ತನಗೆ ದೊರಕಿದ ಆಯುಷ್ಯದುದ್ದಕ್ಕೂ ಜನರ ಸೇವೆಯನ್ನು ಮಾಡುವುದಾಗಿ ಪಣತೊಟ್ಟಿದ್ದು ಅದನ್ನು ಇಂದು ಪೂರೈಸಿದ್ದಾಳೆ. ಕಳೆದ ಕೆಲವು ತಿಂಗಳ ಹಿಂದೆ ರಾಣಿಯ ೭೦ ವರ್ಷ ಆಳ್ವಿಕೆಯ ಸಂದರ್ಭದಲ್ಲಿ ಅನಿವಾಸಿ ಬಳಗ ವಿಶೇಷ ಸಂಚಿಕೆ ತಂದಿದ್ದನು ಇಲ್ಲಿ ಸ್ಮರಿಸಬಹುದು. ರಾಣಿಯ ಆತ್ಮಕ್ಕೆ ಶಾಂತಿಯನ್ನು ಕೊರೋಣ. 

 - ಸಂಪಾದಕ 

*************
ಫೋಟೋ ಕೃಪೆ ಗೂಗಲ್ L>R ಅನಿ ಬೆಸೆಂಟ್, ರೋಮಿಲಾ ಥಾಪರ್ ಮತ್ತು ಚೀ.ನಾ. ಮಂಗಳ
ಶಿಕ್ಷಕರ ದಿನಾಚರಣೆ –  ಶ್ರೀಮತಿ  ಗೌರಿ ಪ್ರಸನ್ನ 

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಹ 
 ಸುಮಾರು ೩-೫ ವರುಷಗಳ ಹಿಂದಿನ ಮಾತು. ಅದೊಂದು ಸುಂದರ ಶಾಲೆ. ಅಂದು ಶಿಕ್ಷಕರ ದಿನಾಚರಣೆ. ಹತ್ತನೆಯ ತರಗತಿಯ ವಿದ್ಯಾಥಿ೯ನಿಯರೆಲ್ಲ ತಮ್ಮ ನೆಚ್ಚಿನ ಗುರುವೃಂದಕ್ಕಾಗಿ ಒಂದು ಪುಟ್ಟ ಸಮಾರಂಭವನ್ನೇಪ೯ಡಿಸಿದ್ದರು.  ಗುರುಶಿಷ್ಯರ ನಡುವಿನ ಸಂಬಂಧ ಅದೂ ಆ ಹದಿವಯಸ್ಸಿನಲ್ಲಿ ಬಹಳ ಮನೋಹರವೂ, ಆತ್ಮೀಯವೂ ಆಗಿರುತ್ತದೆಯಲ್ಲವೇ? ತಮ್ಮ ಪ್ರೀತಿಯ ಗುರುಗಳಿಗೊಂದು ಕೃತಜ್ಞತೆ ಸಲ್ಲಿಸುವ ಸದಾವಕಾಶ. ಜೀವನದ ವಕ್ರತೆಗಿನ್ನೂ ಅಪರಿಚಿತರಾದ ಆ ಹುಡುಗಿಯರ ಮೊಗದ ತುಂಬ ಮುಗ್ಧತೆಯ ಮುಗುಳ್ನಗು; ಹೃದಯಗಳಲ್ಲಿ ಪ್ರೀತಿ-ಗೌರವಗಳ ಮಹಾಪೂರ. ತಮ್ಮ ಪ್ರೀತ್ಯಾದರಗಳ ದ್ಯೋತಕವಾಗಿ ತಮಗೆ ತಿಳಿದಂತೆ ನಾಲ್ಕಾರು ಮಾತಾಡಿ, ಎಲ್ಲ ಶಿಕ್ಷಕವೃಂದಕ್ಕೂ ಒಂದೊಂದು ಗುಲಾಬಿ ಹೂ ಕೊಟ್ಟರು. ಶಿಕ್ಷಕರೆಲ್ಲ ಅವರ ಖುಷಿಯಲ್ಲಿ ತಾವೂ ಪಾಲ್ಗೊಂಡು ತಮ್ಮ ತಮ್ಮ ಅಂಗಿಯ ಕಿಸೆಗೆ ಸಿಕ್ಕಿಸಿಕೊಂಡರೆ ಶಿಕ್ಷಕಿಯರೆಲ್ಲ ತಮ್ಮ ಮುಡಿಗೆ ಮುಡಿದುಕೊಂಡರು. ಆದರೆ ಯಾವಾಗಲೂ ಬಳೆ-ಕುಂಕುಮವಿಲ್ಲದೇ, ಬರೀ ಸಾಧಾರಣ ಸೀರೆಗಳನ್ನುಟ್ಟು  ಸೈಕಲ್ ಮೇಲೆ ಶಾಲೆಗೆ ಬರುವ ಒಬ್ಬ P.E .ಟೀಚರ್, ದೈಹಿಕ ಶಿಕ್ಷಕಿ ಮಾತ್ರ ಅದನ್ನು ಮುಡಿಯದೇ ಕೈಯಲ್ಲಿ ಹಿಡಿದು ಯಾವುದೋ ಚಿಂತನೆಯಲ್ಲಿ ಮುಳುಗಿದ್ದಾರೆ. 'ಪಾಪ! ಗಂಡ ಇರಲಿಕ್ಕಿಲ್ಲ. ಅದು ಹೇಗೆ ತಾನೇ ಮುಡಿದಾರು?!' ಎನ್ನುವ  ಅನುಕಂಪ ನನಗೆ.  ಆಷ್ಟರಲ್ಲೇ ಮತ್ತೋವ೯ ಹುಡುಗಿ ಜಯಶ್ರೀ ಯಾಳವಾರ  ಅನ್ನುವವಳು ಕೇಳಿಯೇಬಿಟ್ಟಳು.' ಮೇಡಂ,ನಾವಷ್ಟು ಪ್ರೀತಿಯಿಂದ  ಕೊಟ್ಟೇವಿ. ನೀವು ಇಟ್ಟುಕೊಳ್ಳಲೇ  ಇಲ್ಲ?' ನಸುನಕ್ಕ ಅವರು ಉತ್ತರಿಸಿದರು - ' ಇಲ್ಲ ಮರೀ,ಖಂಡಿತ ನಿಮ್ಮ ಪ್ರೀತಿಗೆ ಸರಿಯಾದ  ಸ್ಥಾನವನ್ನೇ ಅದು ಸೇರುತ್ತದೆ'. ಶಾಲೆಯಲ್ಲಿದ್ದ ಅರವಿಂದರ ಫೋಟೋವನ್ನದು ಅಲಂಕರಿಸಿತು. ನಮಗೆಲ್ಲ 'ಅಯ್ಯೋ! ಜಯಶ್ರೀ ಎಂಥ ಅನಾಹುತದ ಪ್ರಶ್ನೆ ಕೇಳಿಬಿಟ್ಟಳಲ್ಲ?' ಎಂಬ ಆತಂಕ.

      ಮರುದಿನ  ೧೧ ಗಂಟೆ. ಕಿಲಕಿಲ ನಗುತ್ತ , ಜೋರುಜೋರಾಗಿ ಹರಟೆ ಹೊಡೆಯುತ್ತ ನಮ್ಮೆಲ್ಲ  ಗೆಳತಿಯ ಸವಾರಿ  ಇಡಿಯ ರೋಡನ್ನೇ  block ಮಾಡಿಕೊಂಡು ಶಾಲೆಗೆ ಹೊರಟಿತ್ತು. 'ಟ್ರಿಣ್..ಟ್ರಿಣ್..' ಹಿಂದೆ ಮ್ಯಾಡಂ ನ ಸೈಕಲ್ ನ ಬೆಲ್ ದನಿ. ಹಿಂತಿರುಗಿ ನೋಡಿ ದಾರಿ ಮಾಡಿಕೊಟ್ಟ ನಮ್ಮ ಪಕ್ಕದಲ್ಲೇ ಸೈಕಲ್ ನಿಂದ ಇಳಿದ ಅವರು ನನ್ನನ್ನೇ ನೋಡುತ್ತ ಗಂಭೀರವಾಗಿ ' ನಿನ್ನೆ ಹೂವು ಯಾಕೆ ಮುಡಿದುಕೊಳ್ಳಲಿಲ್ಲ ಎಂದು ನೀನಲ್ಲವೇ ಕೇಳಿದ್ದ?' ಎಂದರು. ನನಗೋ ಒಮ್ಮೆಲೇ ಎದೆ ಝಲ್ಲೆಂದಿತು, ಖಂಡಿತ  ಬಯ್ಯುತ್ತಾರಿವರು ಎಂದು. ಕೆಲಸಮಯದ ಹಿಂದೆ ಅಮ್ಮ ಅರಿಶಿನ-ಕುಂಕುಮಕ್ಕೆ ಎಲ್ಲರನ್ನೂ ಕರೆದು ಬಾ ಎಂದು ಹೇಳಿಕಳಿಸಿದಾಗ ನಮ್ಮೂರಿನ ಮಡಿಹೆಂಗಸು ಪದ್ದಕ್ಕಜ್ಜಿಯನ್ನೂ 'ಅರಿಶಿನ-ಕುಂಕುಮಕ್ಕ ಬರಬೇಕಂತ್ರಿ' ಎಂದು ಕರೆದು ' ನಿಮ್ಮವ್ವ ಹೇಳಿದ್ಲಾ ನನ್ನ ಕರಿ ಅಂತ. ಹುಚ್ಚು ಮುಂಡೆದೇ..' ಅಂತ ಅವರಿಂದ ಬಯ್ಯಿಸಿಕೊಂಡದ್ದು ನೆನಪಾಗಿ ಕಟ್ಟಾ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಿದ್ದ ನಾನು ಹೆದರಿದ್ದೆ.' ಓಹೋ! ಇವರು ಆ ಪ್ರಶ್ನೆ ಕೇಳಿದವಳು ನಾನೇ ಅಂದುಕೊಂಡಿದ್ದಾರೆ. ನಾನಲ್ಲ; ಜಯಶ್ರೀ ಎಂದು ಅವಳ ಹೆಸರು ಹೇಳಿ ಅವಳಿಗೆ ಬಯ್ಯಿಸಬಾರದು. ಪಾಪಾ! ಅವಳು ಮೊದಲೇ ಮೆತ್ತನೆಯ ಹುಡುಗಿ. ಏನೋ ತಿಳಿಯದೇ ಕೇಳಿದ್ದಾಳೆ' ..ಎಂದೆಲ್ಲ ಅನ್ನಿಸಿ 'ಹೌದ್ರಿ.ನಾನೇ' ಎಂದುಬಿಟ್ಟೆ. ನಾನಂದುಕೊಂಡಂತೆ ಅವರು ಬಯ್ಯಲಿಲ್ಲ;ರೇಗಲೂ ಇಲ್ಲ. ''ನೋಡು ಮರೀ, ನೀನಿನ್ನೂ ಸಣ್ಣವಳು.ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಂದು ವ್ಯಕ್ತಿ , ವಸ್ತುವೂ ತನ್ನ ಆತ್ಯಂತಿಕ ಗುರಿಯನ್ನು ಮುಟ್ಟಲು ಉದ್ಯುಕ್ತವಾಗಿರುತ್ತದೆ; ಸಾಥ೯ಕತೆಯನ್ನು ಪಡೆಯಲು ತುಡಿಯುತ್ತಿರುತ್ತದೆ. ನೀವು ನಿನ್ನೆ ಕೊಟ್ಟ ಹೂ ..ದೇವನ, ಗುರುವಿನ ಶಿರವನ್ನೋ, ಪಾದವನ್ನೋ ಸೇರುವುದೇ ಅದರ ತಪಸ್ಸು. ನಾ ಮುಡಿದುಕೊಂಡರೆ  ಒಂದೆರಡು ಗಂಟೆಯಲ್ಲಿ ಒಣಗಿ ಮುದುರಿ ಹೋಗುತ್ತಿತ್ತು. ಅದಕ್ಕೆಂದೇ ನಿಮ್ಮೆಲ್ಲರ ಯಶಸ್ಸಿಗಾಗಿ, ಶ್ರೇಯಸ್ಸಿಗಾಗಿ  ಪ್ರಾಥಿ೯ಸಿ ಅದನ್ನು ಅರವಿಂದರ ಭಾವಚಿತ್ರಕ್ಕೆ ಸಮಪಿಸಿದ್ದು' ಎಂದರು. ಅವರು ಹೇಳಿದ್ದು ಬಹಳಷ್ಟೇನೂ ಅಥ೯ವಾಗದಿದ್ದರೂ ಅವರ ದನಿಯಲ್ಲಿನ ನೈಜ ಕಳಕಳಿ, ಪ್ರೀತಿ ನೇರವಾಗಿ ನನ್ನ  ಹೃದಯವನ್ನು ಸ್ಪಶಿ೯ಸಿತು. ಅವರ ಆ ರೀತಿಯ ವಿಚಾರ-ಚಿಂತನೆ ನಮ್ಮ ಆಗಿನ ಬೌದ್ಧಿಕ ವಲಯಕ್ಕೊಂದು ಕ್ರಾಂತಿ ಎಂದರೂ ಸರಿಯೇ.  'ಮಗೂ, ಸಸ್ಯಗಳಿಗೆ, ಹೂಗಳಿಗೆ, ಗಿಡಮರಬಳ್ಳಿಗಳಿಗೆ ಎಲ್ಲಕ್ಕೂ ಜೀವವಿರುತ್ತದೆ. ಅವಕ್ಕೂ ನಮ್ಮಂತೆಯೇ ಭಾವನೆಗಳಿರುತ್ತವೆ. ನಿಮ್ಮ ಪಾಠದಲ್ಲಿ ಜಗದೀಶ್ ಚಂದ್ರ  ಬೋಸ್ ರ ವಿಷಯ ಬಂದಿಲ್ಲವೇ? ಇವತ್ತು ಶಾಲೆ ಬಿಟ್ಟ ಮೇಲೆ ನನ್ನನ್ನು ಕಾಣು. ಅವರ ಪುಸ್ತಕ ಕೊಡುತ್ತೇನೆ.'' ಎಂದರು. ಆ ಪುಸ್ತಕ, ಅದರಲ್ಲಿ ಅವರು ನನಗೆಂದು ಬರೆದಿಟ್ಟ ಚಂದದ ಪತ್ರ ನಂತರದ ಕತೆಯೇ ಬೇರೆ.ಆ ಶರಾವತಿ ಹೆಗಡೆ ಮ್ಯಾಡಂ ನನ್ನ ಪ್ರೀತಿಯ ಶತ೯ಕ್ಕನಾಗಿ ಜೀವನದ ಎತ್ತರದ ಸ್ತರಗಳನ್ನು ತೋರಿಸಿಕೊಟ್ಟು, ನೈತಿಕತೆ, ಪ್ರಾಮಾಣಿಕತೆ, ಪ್ರೀತಿ, ಅಧ್ಯಾತ್ಮ, ಸಾಹಿತ್ಯ, ಸಂಗೀತದಂಥ ಧನಾತ್ಮಕ ಚಿಂತನೆಗಳ ಸಹಸ್ರ ಗರಿ ಮೂಡಿಸಿ, ಅಂತ:ಕರಣದ ಹೊಳೆಯಲ್ಲಿ ನನ್ನನ್ನು ಮೀಯಿಸಿ, ತೊಯ್ಯಿಸಿ,  ಮೈ-ಮನ-ಚೇತನಗಳನ್ನೆಲ್ಲ ಸಂತೃಪ್ತಗೊಳಿಸಿ , ಜೀವನದ ಇಂದಿನ ಹಂತದವರೆಗೂ ತನ್ನ ಕೃಪಾ ಶಕ್ತಿಯಿಂದಲೇ ಎಲ್ಲ ಕಷ್ಟಗಳಲ್ಲೂ ಪಾರುಮಾಡಿ ...ಓಹ್! ಅದ್ಭುತ!! ಅದನ್ನೆಲ್ಲ ಬರೆಯಲಾಗದು. ಬರೆದು,ಮಾತಾಡಿ  ಅದರ ಭಾವತೀವ್ರತೆಯ ಸೊಗವನ್ನು ಕಡಿಮೆ ಮಾಡಿಕೊಳ್ಳಲಾಗದು.

''ಸದ್ದುಗದ್ದಲದ  ತುತ್ತೂರಿ ದನಿಗಳಾಚೆಗೆ ನಿಂತು 
ನಿಶ್ಶಬ್ದ ದಲ್ಲಿ  ನೆನೆಯುತ್ತೇನೆ ಗೌರವದಿಂದ.
ನಕ್ಷತ್ರ ಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ ನನ್ನ ಸುತ್ತ.
ಪಟಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ'' 
 ( ಮೂಲ ಡಾ. ಜಿ. ಎಸ್. ಎಸ್ )

***********************************************
ನಾಡಗೀರ ಮಾಸ್ತರ್ (1915-2011)

ನನ್ನಶಾಲೆ ಮತ್ತು ನನ್ನ ಇಂಗ್ಲಿಷ್ ಟೀಚರ್ ನಾಡಗೀರ ಮಾಸ್ತರ್ (1915-2011) ಶ್ರೀವತ್ಸ ದೇಸಾಯಿ

ಪ್ರತಿ ವರ್ಷ ಭಾರತದಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವೆಂದು ಸಾಮೂಹಿಕವಾಗಿ ಆಚರಿಸುತ್ತೇವೆಯಾದರೂ ಪ್ರತಿದಿನದ ಯೋಗಾಭ್ಯಾಸದ ಪ್ರಾರಂಭದಲ್ಲಿ ನಮ್ಮ ಯೋಗಾಮಾ ಹೇಳಿದಂತೆ ನನ್ನ ಶಾಲಾಗುರುಗಳು ನನಗೆ ಪ್ರಾತಃಸ್ಮರಣೀಯರಾಗುತ್ತಾರೆ. ಸುಮಾರು ಎಂಬತ್ತು ವರ್ಷಗಳ ಕೆಳಗೆ ಕರ್ನಾಟಕ ಎಜುಕೇಶನ್  ಸೊಸೈಟಿ ಎನ್ನುವ  ಹೆಸರಿನಿಂದ ಸ್ಥಾಪಿತವಾಗಿ ಮುಂದೆ ಮಹತ್ವದ ಶೈಕ್ಷಣಿಕ ಸಂಸ್ಥೆ ಯ(K E Board) ಧಾರವಾಡದ ಮಾಳಮಡ್ಡಿಯಲ್ಲಿರುವ ಕೆ ಇ ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿ ನಾನು. ಗುರುರಾಜ ಕರಜಗಿಯವರು ಅನೇಕ ಸಲ ಹೇಳಿದಂತೆ ನಿಸ್ವಾರ್ಥ, ಅಪ್ಪಟ ದೇಶಪ್ರೇಮಿ ಆದರ್ಶ ಮಾಸ್ತರರ ಪಡೆಯೇ ಅಲ್ಲಿ ಇತ್ತು. ನಮಗೆ ಪಾಠ ಕಲಿಸಿದ ಮತ್ತು ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಗುರುಗಳೆಲ್ಲರ ಹೆಸರು ತೊಗೊಳ್ಳದೆ ಅವರೆಲ್ಲರಿಗೂ ವಂದಿಸಿ ಈ ಚಿಕ್ಕ ಲೇಖನದಲ್ಲಿ ಇಂಗ್ಲಿಷ್ ಟೀಚರ್ ನಾಡಗೀರವರ ಬಗ್ಗೆಯಷ್ಟೇ ಸ್ವಲ್ಪ ಬರೆಯುತ್ತೇನೆ. ಬರೆಯುತ್ತ ಹೋದರೆ ಪರೀಕ್ಷೆಯ ದಿನ ಕೊಡುತ್ತಿದ್ದ ’ಸಪ್ಲಿಮೆಂಟೆಲ್ಲ’ ತುಂಬಿಸುವಷ್ಟಿದೆ. ನಮ್ಮೆಲ್ಲ ಗೆಳೆಯರಿಗೆ ’ಮಾಸ್ತರ್’ ಅಂದರೆ ಅವರೊಬ್ಬರೇ – ಶಿವರಾವ್ ಜಿ ನಾಡಗೀರ್ ಮಾಸ್ತರರು. ಇನ್ನೂ ಹತ್ತಿರದವರು ಅವರನ್ನು ’ಶಿವಣ್ಣ ಕಾಕಾ’ ಅಂತ ಕರೆಯುತ್ತಿದ್ದರು. ನಮ್ಮ ’ಸಾಲಿ” ಅಂದರೆ ಉತ್ತರ ಕರ್ನಾಟಕ ಭಾಷೆಯಲ್ಲಿ ಶಾಲೆ -ನಾಡಗೀರ್ ಮಾಸ್ತರರ ಸಾಲಿ ಅಂತ ಎಲ್ಲೆಡೆ  ಪ್ರಸಿದ್ಧವಾಗಿತ್ತು. ಕೆ ಇ ಬೋರ್ಡ್ ಹೈಸ್ಕೂಲಿನಲ್ಲಿ ಅವರು ಸೇವೆ ಸಲ್ಲಿಸಿದ ನಾಲ್ಕು ದಶಕಗಳಲ್ಲಿ (1938-1976) ಅದೆಷ್ಟೊಂದು ಕೆಲಸ ಮಾಡಿದ್ದರು! ಅದರಲ್ಲಿ 20 ವರ್ಷ ಹೆಡ್ಮಾಸ್ಟರ್ ಆಗಿದ್ದರು. ಅವರು ಕಲಿಸಿದ ವಿದ್ಯಾರ್ಥಿಗಳು ಸಾವಿರಾರು. ಅವರೆಲ್ಲರ ಮನದಲ್ಲಿ ಅವರು ಸ್ಥಿರವಾಗಿ ನೆಲೆಸಿದ್ದಾರೆಂದರೆ ಅತಿಶಯೋಕ್ತಿಯಲ್ಲ. 1975ರಲ್ಲಿ ರಾಷ್ಟ್ರಪತಿಗಳ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯಿಂದ ಭೂಷಿತರಾದರು. ಅವರ ಪ್ರಯತ್ನ ಮತ್ತು ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಪ್ರತಿವರ್ಷ ಉತ್ತಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದರು. ಹೆಚ್ಚಿನ ಕೋಚಿಂಗಿನಿಂದ ನೂರಕ್ಕೂ ಹೆಚ್ಚು ’ರಾಂಕ್’ ಗಳಿಸಿ Rank Bank ಅಂತ ನಮ್ಮ ಶಾಲೆ ಕರೆಸಿಕೊಳ್ಳಲಾರಂಭಿಸಿತು.

ಕೆ. ಯೀ. ಬೋರ್ಡ್ ಮಹಾವಿದ್ಯಾಲಯ, ಧಾರವಾಡ
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಸ್ವೀಕಾರ – ನಾಡಿಗೇರ್ ಮಾಸ್ತರ್ ಮತ್ತು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್
 ’ನನ್ನ ಮಾಸ್ತರ್-ನನ್ನ ಪೆನ್ ಫ್ರೆಂಡ್ ಸಹ’.
ಆ ಶಾಲೆಯಲ್ಲಿ ನಾನು  ಕಲಿತದ್ದು ಮೂರೇ ವರ್ಷಗಳಾದರೂ ಅವರೊಡನೆ ನನ್ನ ಸಂಬಂಧ, ಮತ್ತು ಪತ್ರ ವ್ಯವಹಾರ ಅವರು ನಿಧನರಾಗುವ ತನಕ ಇತ್ತು. ಅವರು ಅತ್ಯಂತ ಶಿಸ್ತಿನ ಮನುಷ್ಯ. ವ್ಯತಿರಿಕ್ತವಾಗಿ ನಡೆದರೆ ಶಿವನ ಮೂರನೆಯ ಕಣ್ಣಿಗೆ ಆಹುತಿಯೇ ಸೈ. ನಾವೆಲ್ಲ ಅವರೆದುರು ಥರ ಥರ ನಡುಗುತ್ತಿದ್ದೆವು. ನಾನು ಸಾಲಿ ಬಿಟ್ಟ ನಂತರವೇ ಅವರು ನನಗೆ ಇನ್ನೂ ಹತ್ತಿರವಾದರು. ತಮ್ಮ ತೊಂಬತ್ತಾರನೆಯ ವಯಸ್ಸಿನವರೆಗೆ ನನ್ನೂಡನೆ ಪತ್ರವ್ಯವಹಾರ ನಡೆಸುತ್ತಿದ್ದರು: ಅದರಲ್ಲಿ ಹಾಸ್ಯವಿರುತ್ತಿತ್ತು, ಬೋಧನೆಯಿರುತ್ತಿತ್ತು; ಚೇಷ್ಟೆ ಸಹ! ಅದೇ ತರಹ ಇನ್ನುಳಿದ ಅಗಣಿತ ಹಳೆಯ ವಿದ್ಯಾರ್ಥಿಗಳಿಗೂ ಸ್ವಹಸ್ತದಿಂದಲೇ ಪತ್ರಗಳನ್ನು ಬರೆಯುತ್ತಿದ್ದರೆಂದು ನನಗೆ ಆಮೇಲೆ ಗೊತ್ತಾಯಿತು.ಅವರು ನಮಗೆ ಇಂಗ್ಲಿಷ್ ಕಲಿಸುತ್ತಿದ್ದರು. ಅವರ ಸ್ಖಾಲಿತ್ಯವಿರದ ಪತ್ರಗಳ ತುಂಬ ಶೇಕ್ಸ್ಪಿಯರಿನ ನಾಟಕಗಳ,  ಥಾಮಸ್ ಗ್ರೇ, ಕಾರ್ಲೈಲ್, ಟೆನ್ನಿಸನ್ ಮುಂತಾದ ಆಂಗ್ಲ ನಾಡಿನ ಸಾರಸ್ವತ ಪುತ್ರರ ಕೊಟೇಶನ್ ಗಳಿರುತ್ತಿದ್ದವು. ಅವರ ಜನ್ಮಶತಾಬ್ದಿಯ ಸ್ಮರಣಸಂಚಿಕೆಗಾಗಿ ಆ ’ಪತ್ರ ಪರಾಚಿಯ’ ಆಧಾರದ ಮೇಲೆಯೇ ಒಂದು ಲೇಖನ ಬರೆದಿದ್ದೆ. ಅದರ ಶೀಷಿಕೆ: 'Nadgir master -my guru and my pen pal!'  ಅಂತ!  "A good teacher teaches well at school; a great teacher continues to teach even after you've left the school!" ಅಂತ ಉಲ್ಲೇಖಿಸಿದ್ದೆ.
’ಆರಂಕು”ಶಮಿಟ್ಟೊಡಂ ...

ಅವರ ಇಂಗ್ಲಿಷ್ ಪಾಠದಿಂದಲೆ ನನಗೆ ಆ ಭಾಷೆಯ ಮೇಲಿನ ಒಲವು ಶುರುವಾಗಿತ್ತು. ಅವರು ಕನ್ನಡ ಸಹ ಕಲಿಸುತ್ತಿದ್ದರು. ನಾನು ಪರದೇಶಕ್ಕೆ ಬಂದ ಮೇಲೆ ಒಂದು ವರ್ಷ ಇನ್ನೊಬ್ಬ ಸಹಪಾಠಿಯ ಜೊತೆ ಸೇರಿ ನಾವೇ ಹೊಸದಾಗಿ ಕಲಿತ ಕಂಪ್ಯೂಟರಿನಿಂದ ಅವರಿಗೊಂದು ಬರ್ತ್ ಡೇ ಕಾರ್ಡ್ ಮಾಡಿ ಪ್ರಿಂಟ್ ಕಳಿಸಿಕೊಟ್ಟಿದ್ದೆವು. ಅವರ ಸೂಕ್ಷ್ಮ ಕಣ್ಣು ನಾವು ಟೈಪು ಮಾಡುವಾಗ ಒಂದಕ್ಷರ ('r') ಬಿಟ್ಟು ಹೋಗಿ ”ಅದು ’ಬಿಥ ಡೇ’ ಆಗಿತ್ತಲ್ಲೋ,” ಅಂತ ಅವರು ಟೀಕಿಸಿ ತಿದ್ದಿದ್ದನ್ನು ಮರೆಯುವಂತಿಲ್ಲ. ಈಗಲೂ ಪ್ರತಿ ಸಲ ನಾನು 'Happy birthday' ಅಂತ ಬರೆಯುವಾಗಲೆಲ್ಲ ಅಂಕುಶದಿಂದ ತಿವಿದು ಮರೆಯ ಬೇಡ ’’r' ಅಂತ ”ಏಡಿಸಿ ಕಾಡುತ್ತದೆ, ಶಿವನ ಡಂಗುರ!” ಅದಕ್ಕೇ ಎಚ್ಚರಿಕೆಯಿಂದ ತಪ್ಪು ಮಾಡದೆ ಬರೆಯಲು ಪ್ರಯತ್ನಿಸುತ್ತೇನೆ. ಆರಂಕುಶಮಿಟ್ಟೊಡಮ್ ನೆನೆವುದೆನ್ನ ಮನಂ ಧಾರವಾಡ ದೇಶಮಮ್!

ನಾಡಗೀರ್ ಸರ್ ತಮ್ಮನ್ನು ಶಾಲೆಯ ಉನ್ನತಿಗಾಗಿಯೇ ಹಗಲು ರಾತ್ರಿ ತೂಡಗಿಸಿಕೊಂಡಿರುತ್ತಿದ್ದರು. ಉಳಿದವರಿಂದಲೂ ಅದೇ ಶಿಸ್ತನ್ನೇ ಅಪೇಕ್ಷಿಸುತ್ತಿದ್ದರು. ಅವರ ಮೇಜಿನ ಮೇಲಿನ ಮರದ ತುಂಡಿನಮೇಲೆ ಎರಡೂ ಬದಿಯಲ್ಲಿ ಭಾರತದ ಹಿಂದಿನ ಒಬ್ಬ ಪ್ರಧಾನಿ ಹೇಳಿದ ಬರಹವನ್ನು ಬರೆಸಿ ಇಟ್ಟಿದ್ದರು, ಮತ್ತು ಅದರಂತೆ ನಡೆದುಕೊಳ್ಳುತ್ತಿದ್ದರು. ಅದು ಹೀಗೆ ಇತ್ತು: I am interested in getting things done. I am not interested in the cause of delay.
ಉಪದೇಶ ಮಾಡುವದಕ್ಕಿಂತ ಮಾಡಿ ತೋರಿಸುವದು ಅವರ ಮಾದರಿಯಾಗಿತ್ತು. ಎಲ್ಲಿಯೇ ಇದ್ದರೂ ರಾಷ್ಟ್ರಗೀತೆ ಹಾಡುತ್ತಿರುವಾಗ ಇದ್ದಲ್ಲೇ ನಿಂತು ಗೌರವ ತೋರಿಸುವದನ್ನು ಬಿಂಬಿಸಲು ಒಂದಿ ದಿನ ಬೇಕಂತಲೇ ತಡವಾಗಿ ಶಾಲೆಯ ಮೈದಾನದ ಮಧ್ಯ ಬಂದು ತಲುಪಿದಾಗ ಎಂದಿನಂತೆ ಶಾಲೆಯ ಪ್ರಾರ್ಥನೆ ಆರಂಭವಾಯಿತೆಂದು ಎಲ್ಲರಿಗೂ ಕಾಣುತ್ತಿದ್ದಂತೆಯೇ ಅಲ್ಲೇ ನಿಂತುಬಿಟ್ಟರು, ಮುಗಿಯುವ ವರೆಗೆ. ನನಗೆ ಇನ್ನೂ ನೆಪಿನಲ್ಲಿರುವ ಆ ನಿದರ್ಶನ ಎಲ್ಲ ಶಾಲಾ ಮಕ್ಕಳ ಮೇಲೆಯೂ ಪರಿಣಾಮ ಬೀರಿತ್ತು ಮತ್ತು ಆ ಆದರ್ಶವನ್ನು ಪಾಲಿಸಲು ಪ್ರೇರಿಸಿತು. ಶಾಲೆಯಲ್ಲಿ ಅವರು ಎಲ್ಲರಿಗೂ ಕಾಣಿಸುವಂತೆಒಂದು ಬರಹವನ್ನು ಬರೆಸಿ ಹಾಕಿದ್ದರು. ಅದನ್ನು ಚಾಚೂ ತಪ್ಪದೆ ಪಾಲಿಸಿದರು ಸಹ. ಅದು ಹೀಗಿತ್ತು: 
"Henceforth you and the school are one, what you are, the school shall be. Here shall beat the heart of us, the best school of all. Your alma mater expects everyone to do their duty. For her, no contribution is too great and no sacrifice is too small."

ಆಗ ಶಾಲೆಗಳಿಗೆ ಸರಕಾರದ ಅನುದಾನದ ವ್ಯವಸ್ಥೆ ಇರುತ್ತಿರಲಿಲ್ಲ. ಮಕ್ಕಳು ಕೊಡುವ ಫೀಸ್ ಹಣದಿಂದಲೇ ಶಾಲೆಯ ಖರ್ಚು, ಸಿಬ್ಬಂದಿಯ ಸಂಬಳ, ಇವೆಲ್ಲವನ್ನು ನೋಡಿಕೊಳ್ಳಬೇಕು, ಹೆಡ್ಮಾಸ್ಟರ್. ಹೆಡ್ ಮಾಸ್ಟರ್ ಆಗಿದ್ದ ಅವರ ಮನೆ ಶಾಲೆಯ ಆವರಣದಲ್ಲಿಯೇ ಇತ್ತು. ಅವರ ಮಗ ಅರುಣನೂ ನನ್ನ ಕ್ಲಾಸಿನಲ್ಲಿಯೇ ಇದ್ದ. ಅವನಲ್ಲದೆ ಇನ್ನೂ ಹದಿನೈದು ಮಾಸ್ತರರ ಮಕ್ಕಳೂ ನನ್ನ ಕ್ಲಾಸಿನಲ್ಲಿದ್ದರು. ಅವರಿಗೆ ಫೀ ಮಾಫಿ ಇತ್ತು. ಅನೇಕ ಬಡ ವಿದ್ಯಾರ್ಥಿಗಳಿಗೂ ಅದೇ ತರಹ ರಿಯಾಯತಿ ಕೊಡುತ್ತಿದ್ದರಿಂದ ಹಲವಾರು ಸಲ ಶಿಕ್ಷಕರಿಗೆ ಪೂರ್ತಿ ಸಂಬಳ ಕೊಡಲು ಕಷ್ಟವಾಗುತ್ತಿತ್ತು. ತಾವು ಮಾತ್ರ ತಮ್ಮ ಅವಧಿಯ ಪೂರ್ತಿ ಅರ್ಧ ಪಗಾರ ಅಷ್ಟೇ ತೆಗೆದುಕೊಂಡು ಪೂರ್ತಿ ಸ್ವೀಕರಿಸಿದೆ ಅಂತ ಸಹಿಮಾಡುತ್ತಿದ್ದರು. ಅದೆಷ್ಟೋ ಸಲ ಬಡಮಕ್ಕಳು ಹಸಿದ ಹೊಟ್ಟೆಯಲ್ಲಿ ಬಂದಿದ್ದನ್ನು ಗಮನಿಸಿ ಆವರಣದಲ್ಲಿದ್ದ ತಮ್ಮ ಮನೆಗೇ ತಿಂಡಿ ತಿಂದು ಬರಲು ಕಳಿಸಿ ಕೊಡುತ್ತಿದ್ದರು. ”ಎಷ್ಟೋ ಸಲ ಇಂತಹ ಮಕ್ಕಳೊಂದಿಗೆ ನಾನು ನನ್ನ ರೊಟ್ಟಿಯನ್ನು ಹಂಚಿಕೊಂಡಿದ್ದೇನೆ”’ ಅಂತ ಸನ್ನ ಸಹಪಾಠಿಯಾಗಿದ್ದ ಅರುಣ ತನ್ನ ಸ್ಮರಣೆಯನ್ನು ಇತ್ತೀಚೆಗೆ ಒಂದು ಪುಸ್ತಕದಲ್ಲಿ ಹಂಚಿಕೊಂಡಿದ್ದಾನೆ. National scholarship ಪರೀಕ್ಷೆಯಲ್ಲಿ ಉತ್ತಮ ತರಗತಿಯಲ್ಲಿ ಪಾಸಾಗಿದ್ದರೂ means tested ಇದ್ದುದರಿಂದ ಸ್ವತಃ ಅರ್ಧ ಸಂಬಳವನ್ನೇ ಮನೆಗೆ ಒಯ್ಯುತ್ತಿದ್ದರೂ ಆ ಶಿಷ್ಯವೇತನದ ಪೂರ್ಣ ಫಲ ತನಗೆ ಲಭ್ಯವಾಗಿರಲಿಲ್ಲ ಅಂತ ಮಾಸ್ತರರ ಎರಡನೆಯ ಮಗನಿಗೆ ಇತ್ತು ಕೊರಗು! 

ಬಡತನ ಕಷ್ಟ ಕಾರ್ಪಣ್ಯಗಳೊಡನೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಅನೇಕ ಗುರುಗಳು ಶಾಲೆಯಲ್ಲಿದ್ದರು. ಬದುಕಿದ್ದಷ್ಟು ದಿನ ಬಡತನ. ಅವರ ಆಸ್ತಿಯೆಂದರೆ ಅವರ ಶಿಷ್ಯವೃಂದ. ಆ ದಿನಗಳ ನೆನಪಿನ ಭಂಡಾರವೇ ನಮ್ಮ ಜೀವನಕ್ಕೆ ಭಂಡವಲು. ಅವರ ಆದರ್ಶ ನಮಗೆ ದಿಕ್ಸೂಚಿ.
'ವಾತ್ಸಲ್ಯ’ ಎನ್ನುವ ಅಭಿನಂದನಾ ಗ್ರಂಥದಲ್ಲಿ ತಮ್ಮ ಆತ್ಮಚರಿತ್ರೆ ಬರೆಯುತ್ತ ತಮ್ಮ ’ಪ್ರಸಿದ್ಧ’ ಸಿಟ್ಟಿನ ಬಗ್ಗೆ ಹೀಗೆ ಬರೆದಿದ್ದಾರೆ (’ವಾತ್ಸಲ್ಯ’; ಪು. 9): ’ನನ್ನದು ಸಿಟ್ಟಿನ ಸ್ವಭಾವ. ಅದು ಅಪ್ಪನಿಂದ ಬಂದ ಆನುವಂಶಿಕ ಗುಣವೂ ಇರಬಹುದು, ಅಥವಾ (ಎಳೆವಯಸ್ಸಿನಲ್ಲೇ ತಾಯಿಯನ್ನೆ ಕಳೆದುಕೊಂಡ) ಮಾತೃವಾತ್ಸಲ್ಯದ ಅಭಾವದಿಂದಲೂ ಇರಬಹುದು. ಏನೇ ಇರಲಿ, ”ಹೊಲೆಸಿಟ್ಟು” ನನ್ನ ಜೀವನದ ಬಹುಭಾಗವನ್ನು ನುಂಗಿ ಹಾಕಿದೆ. ಬರೆದ ಚಿತ್ರವೆಲ್ಲ ಮಸಿ ನುಂಗಿದಂತೆ, ಸ್ವಚ್ಛ ಮನಸ್ಸಿನಿಂದ ಮಾಡಿದ ಒಳ್ಳೇ ಕೆಲಸಗಳು ನಿಷ್ಪ್ರಯೋಜಕವಾಗಿರುವುದರ ಅರಿವೂ ನನಗಾಗಿದೆ. ನನ್ನ ಸಿಟ್ಟಿನ ರುಚಿಯನ್ನು ವಿದ್ಯಾರ್ಥಿಗಳು, ಸಹಶಿಕ್ಷಕರು ಹಾಗೂ ಕುಟುಂಬದವರೂ ಸಾಕಷ್ಟು ಉಂಡಿದ್ದಾರೆ'.

 ಶಿಸ್ತಿನ ಸಾಕಾರ ಸ್ವರೂಪರಾಗಿದ್ದ ಅವರು  ಆಗಾಗ್ಗೆ ಸಿಟ್ಟಿನ ಪ್ರತಿರೂಪ ತಳೆದು ’ದೂರ್ವಾಸ ಮುನ್ನಿ’ ಅನ್ನುವ ಉಪನಾಮ ಗಳಿಸಿದ್ದರೂ ಅವರ ಶಿಷ್ಯ ವಾತ್ಸಲ್ಯ ಅಪಾರ. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಇಂಥ ಒಂದು ಪ್ರಸಂಗದಲ್ಲಿ ತಮಗೆ ಕಪಾಳ ಮೋಕ್ಷ ಕೊಟ್ಟಿದ್ದ ನಾಡಗೀರ್ ಮಾಸ್ತರರೇ ತಾವು ಪ್ರಸಿದ್ಧ ವಾಗ್ಮಿಗಳಾಗಲು ಕಾರಣವೇನೋ ಎಂದು ನನ್ನ ಶಾಲೆಯಲ್ಲೇ ಕಲಿತ ಗುರುರಾಜ ಕರಜಗಿಯವರು ಒಂದು ಲೇಖನದಲ್ಲಿ ಉದ್ಗಾರ ತೆಗೆದಿದ್ದಾರೆ! 

ಕೆಲವು ಸ್ವಾರಸ್ಯಕರ ಘಟನೆಗಳೊಂದಿಗೆ ಈ ಲೇಖನವನ್ನು ಮುಗಿಸುವೆ.

ಮೂರು ವರ್ಷಗಳ ಕೆಳಗೆ 75 ದಾಟಿದ (ಒಬ್ಬರನ್ನು ಬಿಟ್ಟು) ಇಪ್ಪತ್ತೆರಡು ಹಳೆಯ ವಿದ್ಯಾರ್ಥಿಗಳು ಧಾರವಾಡದಲ್ಲಿ ಸೇರಿ ನಮ್ಮ ಶಾಲೆಗೆ ಹೋಗಿ ಹಳೆಯ ನೆನಪುಗಳನ್ನು ತಾಜಾ ಮಾಡಿಕೊಂಡೆವು. ಶಾಲಾ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಮೋಹನನಿಗೆ ’ಟೆನ್ಷನ್.’ ತನಗೆ ಏನೂ ನೆನಪಾಗುವದಿಲ್ಲ ಅಂತ ಬೆವರಿಳಿಯುತ್ತದೆ. ಪ್ರಶ್ನೆಪತ್ರಿಕೆಯನ್ನು ಹಂಚುತ್ತಿದ್ದ ಕುಲಕರ್ಣಿ ಮಾಸ್ತರರು ಆತನ ಬಿನ್ನು ಸವರುತ್ತ, ”ಡೋಂಟ್ ವರ್ರಿ; ಬಂದಷ್ಟು ಬರಿ!” ಅಂತ ಅರಿಪ್ರಾಸವನ್ನು (ಅರಿಸಮಾಸದಂತೆ, ಆಂಗ್ಲ-ಕನ್ನಡ ಭಾಷೆಯ ಕಲಬೆರಕೆ) ಜೋಡಿಸಿ ಹೇಳಿದ್ದನ್ನು ಒಬ್ಬರು ನೆನೆದಾಗ ಕೋಣೆಯ ತುಂಬ ನಗು.
ಶ್ಲೇಷಾಲಂಕಾರ, homonym ಗಳನ್ನು ಮೊದಲ ಬಾರಿ ನಾಡಗೀರ್ ಮಾಸ್ತರ್ ಕಲಿಸಿದ್ದು ನನಗೆ ಇಂದೂ ನೆನಪಿದೆ: The vicar told the sexton (ಚರ್ಚಿನ ಗಂಟೆಯನ್ನು ಬಾರಿಸುವವ) and he tolled the bell (ಬಾರಿಸಿದ). Who is going to bell the cat ಅನ್ನುವ ಪದಗುಚ್ಛದ ಅರ್ಥವನ್ನು ಅವರೇ ಕಲಿಸಿದ್ದು:'to undertake a very dangerous mission.' ಅದರ ಪ್ರಾತ್ಯಕ್ಷಿಕೆಯನ್ನೂ ಮಾಡಬೇಕಾದ ಪ್ರಸಂಗವೂ ಒಮ್ಮೆ ಒದಗಿ ಬಂದಿತ್ತು.

ಕತ್ತಲೆ-ಬೆಳಕು
Epitaph (ಗೋರಿ ಬರಹ) ಅಂದರೇನು ಅಂತ ಕಲಿಸುವಾಗ ಮಾಸ್ತರರು ಹೇಳಿದ’ಕಥೆ.’ ಶೋಕಗ್ರಸ್ತ ಪಾಶ್ಚಿಮಾತ್ಯ ವಿಧವೆಯೊಬ್ಬಳು ಪತಿಯ ಅಗಲುಕೆಯಿಂದ ತನ್ನ ಬದುಕನ್ನು ಆವರಿಸಿದ ಅಂಧಕಾರವನ್ನು ಸೂಚಿಸಲು ಚರ್ಚಿನ ಸೆಮೆಟ್ರಿಯಲ್ಲಿ ಕಲ್ಲಿನ ಮೇಲೆ ಕೆತ್ತಿಸಿದ್ದು: Since the demise of my husband, I'm left in utter darkness ಅಂತ. ಎರಡು ವರ್ಷಗಳ ನಂತರ ಚೇತರಿಸಿಕೊಂಡು ಪುನರ್ವಿವಾಹ ಆದಾಗ ಆ epitaph ಗೆ ಇನ್ನೊಂದು ಸಾಲು ಸೇರಿಸಿದಳಂತೆ: But now I have struck a match!
ಕ್ಷಮಾಪಣೆ ಕೇಳಲು 36 ವರ್ಷಗಳ ಕಾಲ ಕಾಯ್ದ ಪ್ರೀತಿಯ ವಿದ್ಯಾರ್ಥಿ!

’ತಪ್ಪು ಮಾಡುವದು ಸಹಜವೇ. ಆದರೆ ಅದನ್ನು ಒಪ್ಪಿಕೊಂಡು ಕ್ಷಮಾಪಣೆ ಬೇಡಲು ಸಿದ್ಧರಿರುವುದು ದೊಡ್ಡ ಗುಣ ಅಂತ ಅವರು ಕಲಿಸಿದರು. 1977ರಲ್ಲಿ ನಡೆದ ಒಂದು ಘಟನೆಯನ್ನು ನೆನೆದು ನನ್ನ ಸಹಪಾಠಿ ಅರುಣ ಬರೆದದ್ದನ್ನು ಇಲ್ಲಿ ಕೊಡುವೆ:
” 1960ರಲ್ಲಿ ಕನ್ನಡ ಹಾಗೂ ಇಂಗ್ಲಿಷ್ ವಿಷಯಗಳನ್ನು (ನಾಡಗೀರ್ ಮಾಸ್ತರರು) ಕಲಿಸುತ್ತಿದ್ದರು.ಆವಾಗ ಒಂದು ಅಹಿತಕರ ಘಟನೆ ನಡೆದು ನಮ್ಮ ಸಹಪಾಠಿಗಳಿಗೆ ಬೇಸರವಾಯಿತು. ಅವರೆಲ್ಲಾ ಸೇರಿ ನಾಡಗೀರ ಮಾಸ್ತರರು ನಮಗೆ ಕಲಿಸುವದು ಬೇಡ ಎಂದು ಅರ್ಜಿ ಬರೆದು ನಾಡಗೀರ ಮಾಸ್ತರರ ಮೇಜಿನ ಮೇಲೆ ಇಟ್ಟು ಬಂದರು. ಮರುದಿನ ವರ್ಗದಲ್ಲಿ ಎಲ್ಲರಿಗೂ ಬಲು ಭಯ. ಯಾಕೆಂದರೆ ಮಾಸ್ತರ ಸಿಟ್ಟಿಗೆ ಎಲ್ಲರೂ ಅಂಜುತ್ತಿದ್ದರು. ಆದರೆ ಮಾಸ್ತರರು ಏನೂ ಆಗಲಿಲ್ಲ ಎಂಬಂತೆ ಆ ದಿನದ ಪಾಠ ಮಾಡಿದರು. ಎಲ್ಲರಿಗೂ ಅಚ್ಚರಿ ಹಾಗೂ ನಿರಾಳ. ಎಲ್ಲರೂ ಈ ಘಟನೆಯನ್ನು ಮರೆತರು. (Who will bell the cat? ಅಂತ ಕೊನೆಗೆ ಆ ಚೀಟಿಯನ್ನು ಇಟ್ಟು ಬಂದಿದ್ದ ವಿದ್ಯಾರ್ಥಿ ಮಾತ್ರ ಆ ಅಪರಾಧವನ್ನು ಎಂದೂ ಮರೆತಿರಲಿಲ್ಲ. ಅದನ್ನು ಬಚ್ಚಿಟ್ಟಿದ್ದ ಆತನ ಎದೆಯಗೂಡಿನ ಭಾರ ಅವನಿಗೇ ಗೊತ್ತು!) ಮುಂದೆ 1997ರಲ್ಲಿ ಮಾಸ್ತರರಿಗೆ 82 ವರ್ಷ ತುಂಬಿದ ಪ್ರಯುಕ್ತ ಅವರಿಗೆ ವಿದ್ಯಾರ್ಥಿಗಳು ಸಹಸ್ರ ಚಂದ್ರ ದರ್ಶನ ಸಮಾರಂಭ ಏರ್ಪಡಿಸಿದ್ದರು. ಆ ಸಮಾರಂಭದಲ್ಲಿ ಭಾಗವಹಿಸಲೆಂದೇ ನಮ್ಮ ಇಬ್ಬರು ಸಹಪಾಠಿಗಳು ಇಂಗ್ಲೆಂಡ್ ನಿಂದ ಬಂದಿದ್ದರು. ಸಮಾರಂಭ ಮುಗಿದ ಮೇಲೆ ಗುರು-ಶಿಷ್ಯಂದಿರ ಸ್ನೇಹಕೂಟ ಒಂದು ಹೋಟೆಲ್ಲಿನಲ್ಲಿ ಏರ್ಪಾಡಾಗಿತ್ತು. ಹೋಟೆಲ್ ಧಾರವಾಡಕ್ಕೆ ಅವರು ಬಂದಾಗ ಇಲಿಯಾಗಿ ’ಬೆಕ್ಕಿಗೆ ಗಂಟೆ ಕಟ್ಟಿದ’ ಆ ಸಹಪಾಠಿ 36 ವರ್ಷಗಳ ಕೆಳಗೆ ತಾನೇ ಆ ಕಾಗದ ಇಟ್ಟಿದ್ದಕ್ಕೆ ಕ್ಷಮೆ ಬೇಡಿ ಎದೆ ಹಗುರು ಮಾಡಿಕೊಂಡ. ಆಗ ಅವರು ಉತ್ತರಿಸಿದ್ದು ಅತ್ಯಂತ ಮಾರ್ಮಿಕವಾಗಿತ್ತು: ”ಹೌದು, ಅದರ ಹಿಂದಿನ ಅಹಿತಕರ ವರ್ತನೆಗೆ ಕಾರಣನಾದ ... ಎಂಬ ಹುಡುಗನ ವರ್ತನೆ ಸಹಿಸದೆ ನಾನು ಅವನ ಕಪಾಳಕ್ಕೆ ಜೋರಾಗಿ ಹೊಡೆದೆ, ಅದರಿಂದ ಅವನ ಶ್ರವಣ ಶಕ್ತಿ ಕ್ಷೀಣಿಸಿತು. ನಿಮಗೆ ಸಿಟ್ಟು ಬಂದು ಅರ್ಜಿ ಬರೆದಿರಿ. ನಾನು ಸಿಟ್ಟಿನಿಂದ ಆ ರೀತಿ ಮಾಡಬಾರದಾಗಿತ್ತು. ಅವನಿಗೆ ನಾನು ಕ್ಷಮೆ ಕೇಳಲುತಯಾರಿದ್ದೇನೆ.” ಎಂದು ಅವರೂ ತಮ್ಮ ವ್ಯಥೆ ವ್ಯಕ್ತಪಡಿಸಿದರು. ಎಂಥ ದೊಡ್ಡ ಗುಣ!”
ಇಂಗ್ಲೆಂಡಿನಿಂದ ಸಮಾರಂಭಕ್ಕೆಂದು ಧಾರವಾಡಕ್ಕೆ ಹೋಗಿ ಕ್ಷಮಾಪಣೆ ಬೇಡಿದ ವಿದ್ಯಾರ್ಥಿಯೇ ಈ ಲೇಖನದ ಲೇಖಕ!
ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯು ಕೆ

ಆಕರ ಪುಸ್ತಕಗಳು: ೧.ವಾತ್ಸಲ್ಯ (1997) :ಎಸ್ ಜಿ ನಾಡಗೀರ ಅವರ ಅಭಿನಂದನಾ ಗ್ರಂಥ ಸಂ: ಡಾ ಕೆ ಹೆಚ್ ಕಟ್ಟಿ
 ೨: ವಿದ್ಯಾ ವಿಕಾಸ (2002)  ಲೇ:  ಪ್ರಿ. ಎಸ್ ಜಿ ಣಾಡಗೀರ
೩: ಅಪ್ಪನು ನನಗಿಷ್ಟ: (2021) ಸಂ: ಡಾ ಶರಣಮ್ಮ ಅ. ಗೋರೇಬಾಳ

*******************


ವಿಶ್ವಭಾರತಿಗೆ ಕನ್ನಡದಾರತಿ..ಚನ್ನವೀರ ಕಣವಿಯವರಿಗೆ ಅನಿವಾಸಿಯ ಭಾವಾಂಜಲಿ

ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ
‘ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯಸಂಸ್ಕಾರಿ’... ಎಲ್ಲಾ ಶಾಲಾ-ಕಾಲೇಜುಗಳ ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಹಾಡು ಸ್ವಾಗತ ಗೀತೆಯಾಗಿಯೋ, ಪ್ರಾರ್ಥನಾ ಗೀತೆಯಾಗಿಯೋ ಅನುರಣಿಸಲೇಬೇಕಿತ್ತು ಆಗ. ಅಂತೆಯೇ ‘ನನ್ನ ದೇಶ ನನ್ನ ಜನ ನನ್ನ ಮಾನಪ್ರಾಣಧನ ತೀರಿಸುವನೇ ಅದರ ಋಣ ಈ ಒಂದೇ ಜನ್ಮದಿ’ ಎನ್ನುವ ಆಕಾಶವಾಣಿಯ ವಂದನಾದ ಕೊನೆಯ ದೇಶಭಕ್ತಿ ಗೀತೆಯೊಂದಿಗೇ ನಮ್ಮ ಹೆಚ್ಚಿನ ಬೆಳಗುಗಳು ಆರಂಭವಾಗುತ್ತಿದ್ದವು. ಕವಿಯ ಬಗ್ಗೆ ಏನೇನೂ ಗೊತ್ತಿಲ್ಲದಾಗಲೂ ಅವರ ಕವನಗಳು ಹೀಗೆ ಹಾಡಾಗಿ ಹರಿದು ಸಾಮಾನ್ಯರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿ ಬಿಡುವುದೇ ಆ ಕಾವ್ಯದ ಗೆಲುವು. 

ಸಾರ್ಥಕ ತುಂಬು ಜೀವನ ನಡೆಸಿದ  ಚೆಂಬೆಳಕಿನ ಕವಿಚೇತನ ಮಹಾಬೆಳಗಿನಲಿ ವಿಲೀನವಾಗಿದೆ. ಆದರೆ ಅರವತ್ತೆಂಟು  ವರುಷ ಜೊತೆಯಾಗಿ ದಾಂಪತ್ಯ ರಥವನ್ನೆಳೆದ ತಮ್ಮ ಪತ್ನೀವಿಯೋಗದ ಸಂದರ್ಭ ದಲ್ಲಿ ಅವರೇ ಹೇಳಿದ ಮಾತಿನಂತೆ ಹೇಳುವುದಾದರೆ –‘ಇಲ್ಲಿದ್ರು..ಇಲ್ಲೇ ಇದ್ರು..ಈಗ – ಎಲ್ಲಾ ಕಡೆ ಅದಾರ. ಇದ್ದಾಗ ಇರುವು ಇಲ್ಲಷ್ಟೇ ಇತ್ತು. ಈಗ ಸರ್ವವ್ಯಾಪಿ ಆದ್ರು. ಥೇಟ್ ಚೆಂಬೆಳಕಿನ್ಹಂಗ..’

ಸಮನ್ವಯ ಕವಿಯೆಂದೇ ಖ್ಯಾತರಾದ ಕಣವಿಯವರು ಕನ್ನಡದಲ್ಲಿ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿದವರು.ಮೃದು ಮಾತಿನ ಆದರೆ ಖಚಿತ ನಿಲುವಿನ ಸಜ್ಜನಿಕೆಯ ಕವಿಯವರು. ಧಾರವಾಡದ ಅನೇಕ ಸಾಹಿತ್ಯಿಕ  ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲಿನ ಅವರ ಉಪಸ್ಥಿತಿ ನನಗೆ ಶಾಂತವಾಗಿ,ಸದ್ದಿಲ್ಲದೇ ಬೆಳಗುವ ನಂದಾದೀಪದಂತೆ ಕಂಡದ್ದಿದೆ.
ಕಣವಿಯವರ ಕಾವ್ಯ ಮುಂಗಾರಿನ ಮಳೆಯ ಆರ್ಭಟದಂತೆಯೋ, ಶ್ರಾವಣದ ಮುಸಲಧಾರೆಯಂತೆಯೋ ಅಬ್ಬರದ್ದಲ್ಲ;ಇದ್ದೂ ಇಲ್ಲದಂತೆ ಶೃತಿ ಹಿಡಿದು ಸುರಿದು ನೆಲವ ಹದಗೊಳಿಸಿ, ಮನವ ಮುದಗೊಳಿಸುವ ಮುಂಜಾವಿನ ಸೋನೆಮಳೆ.. ‘ಬಾನ ಸಾಣಿಗೆ ಹಿಟ್ಟು ಸಣಿಸಿದಂತೆ’ ಜಿನುಗಿದ ಸೋನೆ. 

ಕವಿವರ್ಯರ ಪ್ರಸಿದ್ಧ ಗೀತೆ ‘ಹೂವು ಹೊರಳುವವು ಸೂರ್ಯನ ಕಡೆಗೆ’ ಇದರ ಬಗ್ಗೆ ಅರ್ಥಪೂರ್ಣ ಲೇಖನವನ್ನು ನಮ್ಮ ಆಹ್ವಾನದ ಮೇರೆಗೆ ಅತಿ ಕಡಿಮೆ ವೇಳೆಯಲ್ಲಿ ಸರೋಜಿನಿ ಪಡಸಲಗಿಯವರು ಬರೆದು ಕಳಿಸಿದ್ದು ಅವರ ಕವಿ-ಕಾವ್ಯ ಪ್ರೇಮವನ್ನೂ, ಅನಿವಾಸಿಯ ಬಗೆಗಿನ ಅಭಿಮಾನವನ್ನೂ ಎತ್ತಿ ತೋರಿಸುತ್ತದೆ.

ತಮ್ಮ ಶೃತಿಬದ್ಧವಾದ ಇನಿದನಿಯಲ್ಲಿ ‘ಒಂದು ಮುಂಜಾವಿನಲಿ’ ಹಾಡುವುದರ ಮೂಲಕ ಕವಿಗೆ ಗೀತನಮನ ಸಲ್ಲಿಸಿದ್ದಾರೆ ಸುಮನಾ ಧ್ರುವ್ ಅವರು.

ತಮ್ಮ ವಿದ್ಯಾರ್ಥಿದೆಸೆಯಲ್ಲಾದ ಕವಿವರ್ಯರ ಮುಖಾಮುಖಿ ಭೇಟಿಯ ಕುರಿತಾದ ಮಧುರ ನೆನಪುಗಳನ್ನು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ ಶಿವ್ ಮೇಟಿ ಹಾಗೂ ಅಮಿತಾ ರವಿಕಿರಣ್ ಅವರು.

ಕವಿಯ ಯಶೋಕಾಯಕ್ಕೆ  ಕಾಲದ-ಹಂಗಿಲ್ಲ.ಅನಂತದವರೆಗೂ ವಿಶ್ವಭಾರತಿಗೆ ಕನ್ನಡದಾರತಿ ಬೆಳಗುತ್ತಲೇ ಇರುತ್ತದೆ; ಮಂಗಳ ಜಯಭೇರಿ ಮೊಳಗುತ್ತಲೇ ಇರುತ್ತದೆ. ಮುಟ್ಟಿದರೆ ಮಾಸುತಿಹ ಮಂಜಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯು ಬಿಂಬಿಸುತ್ತಲೇ ಇರುತ್ತದೆ. ಸೋನೆಮಳೆ ಸುರಿಸುರಿದು ನೆಲದೆದೆ ಹದಗೊಳ್ಳುತ್ತಲೇ ಇರುತ್ತದೆ.
ಬನ್ನಿ ಓದುಗರೇ, ಇವತ್ತಿನ ಸಂಚಿಕೆಯನ್ನೋದಿ ಕವಿಗೊಂದು ಭಾವನಮನ ಸಲ್ಲಿಸಿ.

~ ಸಂಪಾದಕಿ

ಪರಿಚಯ 

ಧಾರವಾಡದವಳಾದ ನಾನೀಗ ಸಧ್ಯ ಬೆಂಗಳೂರು ವಾಸಿ. ಸಾಮಾನ್ಯ ಗೃಹಿಣಿ. ಚಿಕ್ಕಂದಿನಿಂದಲೂ ಹಾಡಿನ ಹುಚ್ಚು; ಸಂಯೋಜಿಸುವ, ಹಾಡುವ ಗುಂಗು.ಇದೇ ಕವಿತೆಗಳನ್ನು ಬರೆಯುವತ್ತ ಕೊಂಡೊಯ್ತು. ಓದುವ ಹವ್ಯಾಸವೂ ಹಾಗೇ.

ಈಗ ಎರಡು ಕವನಸಂಕಲನ ಹೊರ ಬಂದಿವೆ. ವೈದ್ಯ ಪತ್ನಿಯ ಅನುಭವ ಕಥನ; ಸ್ವರಚಿತ ಸಂಪ್ರದಾಯದ ಹಾಡುಗಳು ತಾಯಿ-ಮಗು ಇವೆರಡೂ ಅಚ್ಚಿನಲ್ಲಿವೆ. ನಾನು ಅನಿವಾಸಿ ಅಲ್ಲದಿದ್ದರೂ ಅನಿವಾಸಿ ಮಗನ ತಾಯಿ ನಾನು. ಅದಕ್ಕೇ ಏನೋ ಈ ಅನಿವಾಸಿ ಬಳಗ ನನ್ನದೇ ಎಂಬ ಆತ್ಮೀಯ, ಆಪ್ತ ಭಾವ.

ಚೆಂಬೆಳಕಿನ ಕವಿ - ಚೆಂಬೆಳಕಿನ ಕವಿತೆ- ನಾಲ್ಕು ಮಾತು
     "ನಾಡೋಜ, ಚೆಂಬೆಳಕಿನ ಕವಿ  ಚೆನ್ನವೀರ ಕಣವಿಯವರು ಇನ್ನಿಲ್ಲ" . ಟಿವಿ ಯಲ್ಲಿ  ಬಿತ್ತರವಾಗುತ್ತಿದ್ದ  ಸುದ್ದಿ  ಕೇಳುತ್ತಿದ್ದಂತೆಯೇ ನನಗೇ ಗೊತ್ತಿಲ್ಲದಂತೆ  ಒಂದು ಗಳಿಗೆ  ಹಾಗೇ ಸ್ತಬ್ಧವಾಗಿ  ಬಿಟ್ಟೆ. ಈ ೯೩ ರ, ಜೀವನದ  ಸಂಧ್ಯಾ ಕಾಲದಲ್ಲಿ  ಕೋರೋನಾದ  ಕರಾಳ  ಬಂಧನದಲ್ಲಿ ಸಿಲುಕಿ ,  ನಲುಗುತ್ತಿರುವ  ಆ ಜೀವ  ಸೋತು ಹೋಗಿದ್ದರೂ , ಮತ್ತೆ ಚಿಗುರೀತೇನೋ ಮಾಗಿದ ಚೇತನ  ಎಂಬ  ಅರ್ಥವಿಲ್ಲದ  ಆಸೆ  ದೂರದಲ್ಲಿತ್ತು. ಈಗ ' ದೀಪ  ಹೊತ್ತಿಸಿದ  ದೀಪವೇ  ನಂದಿ  ಹೋಯ್ತಲ್ಲ' ಎಂಬ  ದಿಗ್ಭ್ರಮೆ !
ಈಗಿದ್ದು  ಮುಂದಿನ  ಗಳಿಗೆಗೇ ಇಲ್ಲದಂತಾಗುವುದು  ಜೀವವೊಂದೇ ಏನೋ ಎಂಬ ಹತಾಶೆ ಭರಿತ  ವಿಷಾದದಲೆ  ಸುಳಿದು ಹೋಗಿ , ಕಣ್ತುಂಬಿ ತುಳುಕಿ ಅದರಲ್ಲೇ  ಆ ಮಗುವಿನ ಮನದ, ಮುಗ್ಧ ನಗೆಯ ಮೃದು ವ್ಯಕ್ತಿತ್ವ ಅದೇ ಶುಭ್ರ ನಗೆಯೊಡನೆ ತೇಲಿದ ಭಾಸ.
ಒಣ ಕಠೋರತೆ, ಅಣುಕು ಮಾತುಗಳಿಂದ ಬಲು ದೂರ  ಇದ್ದ ಆ ಭಾವಜೀವಿಯ ಎದೆ ತುಂಬಿದ ಕನಸುಗಳು ಅರಳಿ ಕವಿತೆಯಾಗಿ  ಹರಿದ  ಆ ಕೋಮಲ ಧಾರೆಯಲಿ ಮುಳುಗಿ ಹೋದೆ ನಾ, ಅವರ  ಭೇಟಿಯಾದ ಗಳಿಗೆಯ ನೆನಪಿನೊಡನೆ!
        ಧಾರವಾಡದ  ಕಲ್ಯಾಣ ನಗರದ  ಅವರ ಮನೆಯ ಹೊಸ್ತಿಲನ್ನು  ಅಳುಕುತ್ತಲೇ ತುಳಿದಾಗ ಅವರ  ಆ ತುಟಿತುಂಬ  ಹರಡಿದ  ಮೃದು ಹಾಸ, ನೀಡಿದ  ಮನದುಂಬಿದ ಸ್ವಾಗತ ," ಬಾ ಯವ್ವಾ ಬಾ  ತಂಗಿ  ಬಾ  ಒಳಗ" ಅಂದ  ಆ ಮೆತ್ತಗಿನ  ಧ್ವನಿ  ಇನ್ನೂ ಕಿವಿಯಲ್ಲಿ  ಗುಂಜಿಸುತ್ತಿದೆ. ಆ ಒಂದು  ಗಂಟೆಯಲ್ಲಿ  ಎಷ್ಟೊಂದು ಮಾತಾಡಿದೆವು! ಆದರೆ  ಅದರಲ್ಲಿ ನನ್ನ ತಲೆಗೆ ಎಷ್ಟು ಹೋಯ್ತೋ ಗೊತ್ತಿಲ್ಲ. ಅವರ  ಕವಿತೆಯಂತೆ ಇರುವ  ಆ  ವ್ಯಕ್ತಿತ್ವದಲ್ಲಿ  ಕರಗಿ  ಹೋಗಿದ್ದೆ  ನಾ! ಅಂತಹ  ಧೀಮಂತ  ಚೇತನ  ಇನ್ನು ನಮ್ಮೊಡನಿಲ್ಲ. ಆದರೆ ಅವರ  ಒಂದೊಂದು ಕವಿತೆ ಒಂದೊಂದು ಮಾತು ಹೇಳುತ್ತ ಚಿರಸ್ಥಾಯಿಯಾಗಿ ಉಳಿಯುವಂಥವೇ. ಆ ಕಾವ್ಯ- ಕವನಗಳೊಂದಿಗೆ ಅವರೂ ನಮ್ಮೊಡನೆಯೇ  ಇದ್ದಾರೆ ಎಂಬ ಹುಚ್ಚು ಸಮಾಧಾನ." ಹೂವು ಹೊರಳುವವು ಸೂರ್ಯನ ಕಡೆಗೆ....." ಎಂದು  ಅವರು  ಹಾಡಿದಂತೆ ಆ ಸ್ವಚ್ಛ ಮನದ  ಕವಿ ಆ ಶುಭ್ರತೆಯಲ್ಲೇ, ಆ ಬೆಳಕಿನಲ್ಲೇ ಒಂದಾಗಿ  ಹೋಗಿದ್ದಾರೆ. ಅವರ ಈ  ಕವಿತೆ ನನಗೆ ಅತ್ಯಂತ ಪ್ರಿಯವಾದ  ಕವಿತೆ. ಅವರಿನ್ನಿಲ್ಲದ  ಸುದ್ದಿ  ಕೇಳಿದಾಗಿನಿಂದ  ಎಷ್ಟು ಸಲ  ಆ ಹಾಡು ರತ್ನಮಾಲಾ ಪ್ರಕಾಶ ಅವರ  ಧ್ವನಿಯಲ್ಲಿ ಕೇಳಿದೀನೋ  ನನಗೇ ಗೊತ್ತಿಲ್ಲ!  ಮತ್ತೊಮ್ಮೆ ಹುಟ್ಟಿ ಬಾ ಅನ್ನುವುದು ಅದೆಷ್ಟು ವಾಸ್ತವಿಕ ಗೊತ್ತಿಲ್ಲ. ಈಗ ನಮ್ಮ ಕೈಲಿರುವುದು ಅವರ ನೆನಪಲ್ಲಿ ನಾಲ್ಕು ಹನಿ ಕಣ್ಣೀರು ಸುರಿಸುವ ಅಸಹಾಯಕತೆ ಒಂದೇ.  ನಾನೀಗ ಅವರ ಈ ಕವಿತೆಯ ಕುರಿತು ನನಗೆ ತಿಳಿದ  ಹಾಗೆ ಬರೆದ ನಾಲ್ಕು ಮಾತುಗಳೇ   ಚೆಂಬೆಳಕಿನ ಕವಿಗೆ  ನನ್ನ ಶ್ರದ್ಧಾಂಜಲಿ !  

ಹೂವು ಹೊರಳುವವು ಸೂರ್ಯನ ಕಡೆಗೆ..

ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನ ವರೆಗೆ
ಇರುಳಿನ ಒಡಲಿಗೆ  ದೂರದ ಕಡಲಿಗೆ
ಮುಳುಗಿದಂತೆ, ದಿನ  ಬೆಳಗಿದಂತೆ
ಹೊರ ಬರುವನು  ಕೂಸಿನ ಹಾಗೆ

ಜಗದ  ಮೂಸೆಯಲಿ  ಕರಗಿಸಿ  ಬಿಡುವನು
ಎಲ್ಲ  ಬಗೆಯ  ಸರಕು
ಅದಕೆ  ಅದರ ಗುಣ ದೋಷಗಳಂಟಿಸಿ
ಬಿಡಿಸಿ  ಬಿಟ್ಟ ತೊಡಕು

ಗಿಡದಿಂದುರುವ  ಎಲೆಗಳಿಗೂ ಮುದ 
ಚಿಗುರುವಾಗಲೂ  ಒಂದೆ ಹದ
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ  ಕುಳಿತಿಹನೋ ಕಲಾವಿದ

ಬಿಸಿಲ ಧಗೆಯ  ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ  ಸಂಕಟವನು ಸೋಸಲು
ಬಂದೇ ಬರುವುದು ಗಳಿಗೆ

ಸಹಜ ನಡೆದರೂ  ಭೂಮಿಯ ಲಯದಲಿ
ಪದಗಳನಿರಿಸಿದ  ಹಾಗೆ
ವಿಶ್ವದ  ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ

ನಾಲ್ಕು ಮಾತುಗಳು ಕವಿತೆ ನನಗನಿಸಿದಂತೆ -

       ನಾಡೋಜ ಕವಿ ಚೆನ್ನವೀರ ಕಣವಿಯವರ ಈ ಕವಿತೆ " ಹೂವು ಹೊರಳುವವು ಸೂರ್ಯನ ಕಡೆಗೆ....."  ಹಾಗೇ ಓದಿ, ಆಲಿಸಿದ್ರೆ ಒಂದು ಸರಳ , ಸುಂದರ ಭಾವಗೀತೆ  ಅನ್ನಿಸಿದ್ರೂ ಬಗೆದಷ್ಟು  ಗೂಢಾರ್ಥ  ಅದರೊಡಲಲ್ಲಿ ಅಂತ ನನಗನ್ನಿಸ್ತು.
 ಹೂವು  ಇಲ್ಲಿ ಸುಂದರ, ಸರಳ, ಸ್ವಚ್ಛ ಮನದ ಪ್ರತೀಕ. ಅಂತೆಯೇ  ಸಹಜವಾಗಿಯೇ ಅವು  ಸೂರ್ಯನ  ಅಂದರೆ ತಮದ ಲವಲೇಶವೂ ಇಲ್ಲದ, ಶುಭ್ರ, ಸ್ವಚ್ಛ ಪ್ರಕಾಶದ, ಅರಿವಿನ ದ್ಯೋತಕ; ಅತ್ತ ಹೊರಳಬಲ್ಲವು , ಆ ಬೆಳಕು ಪ್ರಖರವಾಗಿದ್ದರೂ. ಆದರೆ ನಾವು ಮನುಷ್ಯರು ; ಮಾನವ ಸಹಜ  ದುರ್ಬಲತೆ  ನಮ್ಮಲ್ಲಿ. ಮಾಯಾ, ಮೋಹ, ಅಹಂ ದ ಗಾಢ ಕತ್ತಲು, ತುಮುಲದಲ್ಲಿ  ಮುಳುಗಿರುವ ನಾವು ಅದನ್ನು ಜೀರ್ಣಿಸಿಕೊಳ್ಳುವ ತಾಕತ್ತೂ ಇಲ್ಲದವರು. ನಮ್ಮ ದಾರಿ ಬರಿ ಚಂದ್ರನ ವರೆಗಷ್ಟೇ; ಸೂರ್ಯನ ಪ್ರತಿಫಲಿತ ಬೆಳಕಿನ ಚಂದ್ರನ ವರೆಗಷ್ಟೇ . ಆ ಜ್ವಾಜ್ವಲ್ಯಮಾನ  ಬೆಳಕಿನೆಡೆ  ಕಣ್ಣೆತ್ತಿ ನೋಡಲೂ ಆಗದಷ್ಟು ಆಳವಾಗಿ  ಹುದುಲಿನಲ್ಲಿ  ಸಿಲುಕಿದವರು. ಆ ಇರುಳಿನ ಒಡಲಿಂದ ಸಾಗಿ  ಬೆಳಕಿನೆಡೆ ಸಾಗಲು ಸೇತುವೆಯಂತಿರುವ  ಈ ಜೀವನದ  ಕಡಲಿನಲ್ಲೇ ಮುಳುಗಿ ಅಲ್ಲೇ ಎಲ್ಲಾ ದುರ್ಬಲತೆ, ಜಂಜಾಟಗಳನ್ನೆಲ್ಲ ಕಳಚಿ ಎದ್ದು ನಿಷ್ಕಲ್ಮಶ ಮನಸಿನ ಕೂಸಿನಂತೆ  ಹೊರಬಂದರೆ ಸೂರ್ಯನತ್ತ ಹೊರಳುವ ಯೋಗ್ಯತೆ ಬಂದೀತೋ ಏನೋ ಅಂತ. ಸೂರ್ಯನು ದಿನವೂ ಇರುಳಿನೊಡಲಲ್ಲಿ ಮುಳುಗಿ, ಕಡಲಿನಿಂದ  ಬೆಳಗುತ್ತ ಕೂಸಿನ ಹಾಗೆ ಶುಭ್ರವಾಗಿ ಹೊರಬಂದು ಇದನ್ನೇ ಹೇಳ್ತಾ ಇದಾನೆ ಅಂತ ಕವಿ ಸೂಚ್ಯವಾಗಿ ಹೇಳಿದ್ದಾರೆ ಇಲ್ಲಿ. ನಿಜಕ್ಕೂ ಇದೊಂದು ಅನುಪಮ ಪ್ರತಿಮೆ.ಮಾನವನೂ ಸೂರ್ಯ ದಿನ ಬೆಳಗಿದ ಹಾಗೆ ಬೆಳಗುತ್ತ ಅಂದರೆ ತುಸು ತುಸುವಾಗಿ ತಿಳಿವು ವಿಕಸಿಸಿ, ಸ್ವಚ್ಛ ಮನದ ಬೆಳಕಲಿ ಹೊಳೆಯುತ್ತ  ಕೂಸಿನ ಹಾಗೆ ಶುಭ್ರವಾಗಿ ಹೊರಬರಲಿ ಕಡಲ ಮಡಿಲಿಂದ  ಥೇಟ್  ಆ ನೇಸರ  ಬಂದ ಹಾಗೆ  ಎಂಬುದು ಕವಿಯ ಆಶಯ. 
         ಎರಡನೇ ಚರಣದಲ್ಲಿ  ಇದನ್ನೇ ಮುಂದುವರಿಸುತ್ತ  ಕವಿ ಹೇಳ್ತಾರೆ - ಯಾರು ಹೇಗೇ ಬಂದರೂ, ಅವರ ಯಾವ ಗುಣಾವ ಗುಣಗಳನ್ನು ಗಣನೆಗೆ ತಾರದೇ ಅವರವರ ಯೋಗ್ಯತೆಗೆ ತಕ್ಕಂತೆ ಈ ಜಗದ ದಿನ ನಿತ್ಯದ ಬದುಕಿನಲ್ಲಿ ಮುಳುಗಿಸಿ ಬಿಡ್ತಾನೆ ಆತ. ಹಾಗೇ ಆ ಒಂದೇ ಮೂಸೆಯಲ್ಲಿಯೇ ಅಕ್ಕಸಾಲಿಗನಂತೆ ಕರಗಿಸಿ ಮಸೆಸಿ ಬಿಟ್ಟು, ಒರೆಗ್ಹಚ್ಚಿ ಶುದ್ಧೀಕರಿಸುವದೊಂದೇ ಆತನ ಕೆಲಸ. ಆದರೆ ಒಂದೇ ಬಾರಿಗೆ ಆಗುವುದಲ್ಲ ಅದು. ಅವರವರ ಒಳಿತು ಕೆಡುಕುಗಳ ಕರ್ಮದ ಗಂಟು ಅವರ ಬೆನ್ನಿಗೇ. ಅಲ್ಲಿ ಯಾವ ಏಚು ಪೇಚಿಲ್ಲ; ತೊಡಕು ತೊಡರಿಲ್ಲ. ಬಲು ಸ್ಪಷ್ಟ ಆ ಲೆಕ್ಕ.
        ಇನ್ನು ಈ  ಕರಗಿಸಿ ಶುದ್ಧೀಕರಿಸಿದ್ದು ಎಷ್ಟರ ಮಟ್ಟಿಗೆ ಫಲ ಕೊಟ್ಟಿದೆ  ಎಂಬುದನ್ನು ಮೂರನೇ ಚರಣದಲ್ಲಿ ಹೇಳ್ತಾರೆ ಕವಿ. ಗಿಡದಿಂದ ಉದುರುವ ಎಲೆಗೂ ಒಂದು ಮುದ ಇದೆ ಅಂತ. ನಿಜ; ಮಾಗಿದ  ಮನದ  ಪ್ರತೀಕ ಅದು. ಮನ  ಮಾಗಿ ಪಕ್ವವಾಗಿ  ತೊಟ್ಟು ಕಳಚಿ ಗಿಡದಿಂದ ಉದುರುವ ಎಲೆಯಂತಾಗಿದ್ರೂ ಆ ಹಣ್ಣಾದ ಮನದಲ್ಲಿ  ಏನೋ ಒಂದು ನಿರಾಳ, ನಿವಾಂತ ಭಾವ. ಯಾವ
ಗೊಂದಲದ  ಗೋಜಿಲ್ಲದೇ, ತಿಳಿವು ಅರಿವಿನ  ಹುಡುಕಾಟದಿ ನಲುಗದ ಸ್ಥಿತಿ ಅದು; ಸ್ಥಿತಪ್ರಜ್ಞನ ಹಾಗೆ. ತಾ ಏನು, ತನ್ನ ದಾರಿ ಎತ್ತ ಎಂಬುದರ  ಕಲ್ಪನೆ  ನಿಚ್ಚಳವಾಗಿದೆ ಈಗ ಆ‌ ಜೀವಕೆ. ಅದಕ್ಕೇ ಹೊಸ ಚಿಗುರಿನ ಹದದಂತೆಯೇ ಆ ಮನವೀಗ. ಷೇಕ್ಸ್ ಪಿಯರ್ ನ  ಕವಿತೆಯ  ನೆನಪು ಬಾರದಿರದೀಗ; ಶಿಶುವಾಗಿ ಆಗಮಿಸಿ ಶಿಶುವಿನಂತೆ ನಿರ್ಗಮನ. ನಿರ್ಗಮನ ಆದ ಹಣ್ಣೆಲೆ ಭೂಮಿ ಒಡಲು ಸೇರಿ ಮತ್ತೆ ಚಿಗುರೊಡೆಯುವುದೂ ಅಲ್ಲಿಂದಲೇ. ಆ ಹಂತದಲ್ಲಿ ಅಲ್ಲಿ ಏನು ನಡೀತದೋ ಗೊತ್ತಿಲ್ಲ, ಆಗುವುದೂ ಇಲ್ಲ. ಇದು ಜನನ- ಮರಣ - ಜನನ ಈ ಚಕ್ರದ ಸೂಚಕ. ಆ ಕಲಾವಿದ ಮತ್ತೆ ಅವುಗಳ ಗುಣದೋಷಗಳನು  ಅಂಟಿಸಿ ಕಳಿಸಬೇಕಲ್ಲ ರೂಪಿಸಿ! ಒಂದು ಹದದ ಲೆಕ್ಕ, ಅಳತೆಗೋಲು ಇಟ್ಟುಕೊಂಡೇ ಇರ್ತಾನೆ ಆ ಕಲಾವಿದ- ಅದೇ ಸೃಷ್ಟಿಕರ್ತ, ಯಾರ ಅಳಿವಿಗೂ ನಿಲುಕದವನಾತ ಎಂದು ಹೇಳ್ತಿದ್ದಾರೆ ಕವಿ.
         ಈಗ  ನಾಲ್ಕನೇ ಚರಣದಲ್ಲಿ ಕವಿ ಸಂತೈಸ್ತಿದಾರೆ ಆ ಜೀವಗಳನ, ಗುಣದೋಷಗಳ ಮೂಟೆ ಹೊತ್ತು ತಿರುಗುವ ಜೀವಗಳನ. ಈ ಹೆಣಗಾಟದ ಮಧ್ಯೆಯೂ  ಒಂದು ಸುಂದರ ಗಳಿಗೆ ಬಂದೇ ಬರತದೆ.ಸಾಗಿ ಬಂದ ದಾರಿಯ ಹಿಂದಿರುಗಿ ನೋಡಿ , ತನ್ನನ್ನೇ ತಾ ಮಥಿಸಿ ಸೋಸಿ ನೋಡಿದಾಗ  ವಿಷಯ ನಿಚ್ಚಳವಾಗಿ ಗೋಚರಿಸಿ ಒಂದು ನಿರಾಳತೆ  ಮನದಲ್ಲಿ. ಇದೇ ಆ ಹೆಣಗಾಟದ  ಗರ್ಭದಲ್ಲಿಯೇ ಇರುವ ತಂಪೆರೆವ ಹಾಯಿಯ ನೆರಳಿನೆಳೆ. ಇದನ್ನು ಗುರುತಿಸುವ ಗಳಿಗೆ ಬಂದೇ ಬರುತ್ತದೆ ಎಂಬುದು ಕವಿಯ ಧೃಡ ನಂಬಿಕೆ. ಇಲ್ಲಿ ಬಿಸಿಲಿನ ಧಗೆ ಜೀವನ ಪರ್ಯಂತದ
 ಜಂಜಾಟ, ಗುದ್ದಾಟವೇ;  ಮಾಗುವಿಕೆ ಬರೋ ತನಕ. ನಂತರ ಬರುವುದು ಮೆಲು ತಂಗಾಳಿಯ ಅಲೆ. ನಿಧಾನವಾಗಿ ಬರೋದದು. ಆ ಹಣ್ಣೆಲೆಗೆ ಮುದ ನೀಡುವುದೂ ಇದೇ.
ಇದನ್ನೆಲ್ಲ  ನೋಡಿ  ಕವಿಗೆ  ಎಲ್ಲ  ಅಂಶಗಳ ನಡೆ, ಚಲನೆಯಲ್ಲೂ ಒಂದು ಲಯಬದ್ಧತೆ, ಕ್ರಮ ಬದ್ಧತೆ ಎದ್ದು ಕಾಣುತ್ತದೆ. ಸೃಷ್ಟಿಯ ಪ್ರತಿ ಅಣು , ಪ್ರತಿ ಕಣವನ್ನೂ ವ್ಯವಸ್ಥಿತವಾಗಿ, ಸರಿಯುತ್ತಿರುವ ಸಮಯದ ಚಲನೆಯಲ್ಲೂ, ಭೂಮಿಯು ಸಾಗುವ ಗತಿಯಲ್ಲೂ ಆಚೀಚೆ ಅಲುಗಾಡದಂತೆ , ಅದರದರದೇ ಸ್ಥಳದಲ್ಲೇ ಜೋಡಿಸಿರುವುದರಲ್ಲೂ ಒಂದು ಸೌಂದರ್ಯ ಕಾಣ್ತಿದೆ , ಕವಿತೆಯ  ಲಯಬದ್ಧ ಪದ ಜೋಡಣೆಯಲ್ಲಿರುವ ಹಾಗೆ. ಅದಕ್ಕೇ ಕವಿಗೆ  ಈ ಜೀವನವೇ ಒಂದು ಕವಿತೆ ಅನಿಸಿ ಬಿಟ್ಟು, ಅದು ಈ ಜಗದ ಮೊಳಹಿನಲ್ಲಿಯೇ ಅಂದರೆ ಜೀವನದ ಉಗಮದಲ್ಲಿಯೇ ರೂಪ ತಾಳಿ ಬಿಟ್ತು ಅಂತ ಹೇಳ್ತಾರೆ. ಹೀಗೆ ಜೀವನದ ಸಾರವನ್ನು ಪೂರ್ತಿಯಾಗಿ ಹೇಳಿ ಅದನ್ನು ಕವಿತೆ ಎನ್ನುವುದು ಅನುಪಮ  ಹೇಳಿಕೆ.ಜೀವನವೇ ಕವಿತೆ ಎನ್ನುವುದು ನಿಜಕ್ಕೂ ಅಪ್ರತಿಮ ಪ್ರತಿಮೆ.

ಒಟ್ಟಿನಲ್ಲಿ ಈ ಛಂದದ ಕವಿತೆ ಮನದ ತುಂಬಾ ಯೋಚನಾ ಭಾವ ತರಂಗಗಳನೆಬ್ಬಿಸುವದಂತೂ ನಿರಂತರ ಸತ್ಯ! ಈಗ ಅವರನ್ನು ಕಳೆದುಕೊಂಡು ಮಂಕು ಕವಿದು, ಮಬ್ಬುಗತ್ತಲೆ ಆವರಿಸಿದ್ದರೂ, ಇಂತಹ ಅಪರೂಪದ ಕವಿತೆಗಳಿಂದ ಚೆಂಬೆಳಕನ್ನು ಹರಡುತ್ತಾ, ಆ ಮಬ್ಬುಗತ್ತಲೆಯ ಮಂಕನ್ನು ಸರಿಸುತ್ತಾ  ನಮ್ಮ ಜೊತೆಯಲ್ಲೇ ಇರುತ್ತಾರೆಂಬುದೂ ಅಷ್ಟೇ ಸತ್ಯ!

~ ಸರೋಜಿನಿ ಪಡಸಲಗಿ
ಬೆಂಗಳೂರು

ಒಂದು ಮುಂಜಾವಿನಲಿ..ಸುಮನಾ ಧ್ರುವ್

ವಿಶ್ವ ವಿನೂತನ ವಿದ್ಯಾ ಚೇತನ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯ ಭಾರತಿ	
ಈ ಹಾಡನ್ನು ಅದೆಷ್ಟು ಬಾರಿ ಆ ಮೊದಲು ಹಾಡಿದ್ದೆ ಆದರೆ , ಆ ದಿನ ಒಂಥರಾ ಭಯಮಿಶ್ರಿತ ಖುಷಿ ಯಾಕೆಂದರೆ ಕವಿಯ ಎದುರೆ ಅವರ ಹಾಡು ಹಾಡುವ ಸೌಭಾಗ್ಯ ಎಲ್ಲ ಗಾಯಕರಿಗೂ ಸಿಗುವಂತದ್ದಲ್ಲ, ಆ ಒಂದು ವಿಷಯದಲ್ಲಿ ನಾನು ನಿಜಕ್ಕೂ ನಶೀಬವಾನ,ಈ ಅವಕಾಶ ನನಗೆ ಹಲವುಬಾರಿ ಸಿಕ್ಕಿದೆ. 

ಕಣವಿ ಅವರನ್ನ ಅದೇ ಮೊದಲ ಬಾರಿ ನೋಡಿದ್ದು , ಧಾರವಾಡದ ವಿದ್ಯಾವರ್ಧಕ ಸಂಘದ ಯಾವುದೋ ಕಾರ್ಯಕ್ರಮಕ್ಕೆ ವಿಶ್ವ ವಿನೂತನ ಹಾಡಲಿಕ್ಕೆಂದು ನಾವು ಕೆಲವು ಸಂಗೀತ ವಿದ್ಯಾರ್ಥಿಗಳು ಹೋಗಿದ್ದೆವು. ವಿಶ್ವವಿನೂತನ ಹಾಡಿನ ಹೊಸದೊಂದು ಸಂಯೋಜನೆಯನ್ನು ನಮ್ಮ ಉಪನ್ಯಾಸಕರಾದ ಡಾ ನಂದಾ ಪಾಟೀಲ್ ಅವರು ನಮಗೆ ಕಲಿಸಿದ್ದರು. ಹಾಡಿನ ನಂತರ "ಚಲೋ ಹಾಡಿದ್ರು ಹುಡುಗೂರು". ಅಂದು ಮುಗುಳುನಕ್ಕರು ಅವರ ಕವಿತೆಗಳಂತೆ ಅವರ ನಗುವೂ ಚಂದ ಚಂದ, ಪುಟ್ಟ ಮಗುವಿನ ನಗುವಿನಂತೆ.

ಧಾರವಾಡದಲ್ಲಿ ಇದ್ದಷ್ಟು ದಿನ ಆಗೊಮ್ಮೆ ಈಗೊಮ್ಮೆ ಸಾಹಿತ್ಯ ಸಂಗೀತ ಕಾರ್ಯಕ್ರಮದಲ್ಲಿ ಅವರ ಭೇಟಿ ಆಗುತ್ತಲೇ ಇರುತ್ತಿತ್ತು. ಈಗಿನಂತೆ selfi ಕಾಲವಾಗಿದ್ದ್ರೆ ಅದೆಷ್ಟು ಫೋಟೋಗಳ ಸಂಗ್ರಹವಾಗುತ್ತಿತ್ತೋ. ಮನಸ್ಸಲ್ಲಿ ಅಚ್ಚಾದ ಆ ನೆನಪಿನ ಚಿತ್ರಗಳನ್ನು ಅಕ್ಷರದಲ್ಲಿ ಬಿಂಬಿಸಲು ಸೋಲುತ್ತಿದ್ದೇನೆ.

ಕನ್ನಡ ಭಾವಗೀತೆಗಳ ಗುಂಗಿಗೆ ಬಿದ್ದವರು, ತಮ್ಮ ಜೀವನದ ಎಲ್ಲ ಸಂದರ್ಭಕ್ಕೂ ಒಂದು ಹಾಡನ್ನು ತಮ್ಮ ಅರಿವಿಲ್ಲದಂತೆ ಗುನುಗಿಕೊಂಡು ಬಿಡುತ್ತೇವೆ. ಹಾಗೆ ಎಂದೋ ಕೇಳಿದ ಮುಂಜಾವಾದಲಿ ಹಸಿರುಹುಲ್ಲ ಮಖಮಲ್ಲಿನಲಿ ಪಾರಿಜಾತವೂ ಹೂವು ಸುರಿಸಿದಂತೆ ಹಾಡು ಪಾರಿಜಾತ ಸಿಗದ ನಾಡಿಗೆ ಬಂದರೂ ಇಬ್ಬನಿ ತುಂಬಿದ ಹಸಿರು ಹೊದ್ದ ನೆಲವನ್ನು ಕಂಡರೆ ಪಕ್ಕನೆ ಗುನುಗಿಬಿಡುತ್ತೇನೆ. ಏಳುತ್ತಲೇ ಮಳೆ ನಾದ ಕೇಳಿದರೆ ತುಂತುರಿನ ಸೋನೆಮಳೆ ಎಂದು ಮನಸು ಹಾಡತೊಡಗುತ್ತದೆ. ಎಲ್ಲಕ್ಕಿಂತ ಹೆಚ್ಚು ಆಪ್ಯಾಯಮಾನ ಹಾಡು ಎಂದರೆ ಹೂವು ಹೊರಳುವವು ಸೂರ್ಯನ ಕಡೆಗೆ ಎನ್ನುವ ಗೀತೆ, ಈಗಲೂ ಸೂರ್ಯನತ್ತ ಮುಖಮಾಡಿದ ಹೂಗಳನ್ನು ನೋಡಿದಾಗ, ಆ ಸಾಲು ನೆನಪಾಗುತ್ತದೆ. 

~ ಅಮಿತಾ ರವಿಕಿರಣ್
ಕಣವಿಯವರ ಜೊತೆಗೆ ನನ್ನದೊಂದು ಭೇಟಿ 
ನಾವಿದ್ದ ಸಮಯದಲ್ಲಿ ಕೆಎಂಸಿಯ ಕನ್ನಡ ಸಂಘ ತುಂಬಾ ಚುರುಕಾಗಿತ್ತು . ಪ್ರತಿ ವರ್ಷ ' ಬೇಂದ್ರೆಯವರ ' ದಿನಾಚರಣೆಯನ್ನು ಆಚರಿಸುವುದು ವಾಡಿಕೆಯಾಗಿತ್ತು . ಯಾರಾದರೂ ಸಾಹಿತಿಗಳನ್ನು ಮುಖ್ಯ ಅತಿಥಿಗಳನ್ನಾಗಿ ಕರೆತರುವದು ವರ್ಷಗಳಿಂದ ನಡೆದುಬಂದ ರೂಢಿಯಾಗಿತ್ತು .
ಅದು ೧೯೯೦ ರ ಬೇಂದ್ರೆ ದಿನಾಚರಣೆ  . ನಮ್ಮ ಸಂಘದ  ಮುಖ್ಯಸ್ಥರಾಗಿದ್ದ ಡಾ . ಪಾರ್ಶ್ವನಾಥ ಸಾರರ ಮೇರೆಗೆ ಆ  ಸಲ ನಾಡೋಜ ಕವಿ ಚೆನ್ನವೀರ ಕಣವಿಯವರನ್ನು ಮುಖ್ಯ ಅತಿಥಿಯಾಗಿ ಕರೆಯಬೇಕೆಂದು ನಿರ್ಧಾರವಾಗಿತ್ತು .
ನನ್ನ ಸೌಭಾಗ್ಯವೋ ಏನೊ ನನಗೆ ಆ ಜವಾಬ್ಧಾರಿಯನ್ನು ಒಪ್ಪಿಸಲಾಗಿತ್ತು . ನಾನು ಅವರನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ . ಅವರ ಪದ್ಯಗಳನ್ನು ಪಠ್ಯ ಪುಸ್ತಕದಲ್ಲಿ ಓದಿದ್ದೆ. ಧಾರವಾಡದಲ್ಲಿ  ಇದ್ದಾಗ ಬೇಂದ್ರೆಯವರ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತಾದರೂ ಕಣವಿಯವರನ್ನು ಕಾಣುವ ಸಂದರ್ಭ ಒದಗಿ ಬಂದಿರಲಿಲ್ಲ.
ಒಂದು ಸಂಜೆ ನಾನು ಮತ್ತು ನನ್ನ ಗೆಳೆಯ ಸೇರಿ ಧಾರವಾಡಕ್ಕೆ ಪಯಣ ಬೆಳೆಸಿದೆವು. ಆಗಿನ ಸಮಯದಲ್ಲಿ ಈಗಿನಂತೆ ಮೊಬೈಲ್ ಫೋನಗಳು ಮತ್ತು ಅಂತರ್ಜಾಲದ ಅನುಕೂಲತೆಯೂ ಇರಲಿಲ್ಲ . ಅವರು ಧಾರವಾಡ ವಿಶ್ವ ವಿದ್ಯಾಲಯದ ನೌಕರರ ಕ್ವಾರ್ಟರ್ಸ್ ನಲ್ಲಿ ಇರುತ್ತಾರೆಂದು ಗೊತ್ತಿತ್ತು . ಮನೆಯ ನಂಬರನ್ನು ನಮ್ಮ ಸಾರರಿಂದ ಪಡೆದುಕೊಂಡಿದ್ದೆವು . ಸಂಜೆ ೭ ಘಂಟೆಯ ಸುಮಾರಿಗೆ ಸಿಟಿ ಬಸ್ಸ ಹಿಡಿದು ವಿಶ್ವವಿದ್ಯಾಲಯವನ್ನು ತಲುಪಿದ್ದೆವು . ಬಸ್ಸಿನಿಂದ ಕೆಳಗಿಳಿದ ಮೇಲೆ ಎಲ್ಲಿಹೋಗಬೇಕೆಂದು ಗೊತ್ತಾಗದೆ ಯಾರನ್ನಾದರೂ ಕೇಳಿದರಾಯಿತು ಎಂದು ಕಾಯುತ್ತಿದ್ದೆವು. ಅಷ್ಟರಲ್ಲಿಯೇ ನಮ್ಮ  ಹಿಂದೆಯೇ ಇನ್ನೊಬ್ಬರು ಬಸ್ಸಿನಿಂದ  ಇಳಿದರು  . ನೆಹರು ಶರ್ಟ್ ಮತ್ತು ಪಾಯಜಾಮ್ ಹಾಕಿದ್ದರು ತಲೆಯ ಮೇಲೆ ಒಂದು ಟೋಪಿ ಇತ್ತು ಮತ್ತು ಕೈಯಲ್ಲಿ  ಒಂದು ಕಾಯಿಪಲ್ಲೆ ತುಂಬಿದ ಚೀಲವಿತ್ತು . ನಾವು ಹೋಗಿ ಅವರನ್ನು ಕೇಳಿದೆವು - 'ಕಣವಿ ಸರ್ರರ್ ಮನೆಗೆ ಹೋಗಬೇಕು , ದಾರಿಯನ್ನು ಹುಡುಕುತ್ತಿದ್ದೇವೆ ನಿಮಗೇನಾದರೂ ಗೊತ್ತೇನು' ಎಂದು . ನಮ್ಮನ್ನೊಮ್ಮೆ ನೋಡಿ ಅವರೆಂದರು   ' ನಾನು ಅಲ್ಲಿಯೇ ಹೊರಟಿದ್ದೇನೆ ನೀವೂ ನನ್ನ ಜೊತೆಗೆ ಬರಬಹುದು ಎಂದು. ಅವರನ್ನೇ ಹಿಂಬಾಲಿಸಿದೆವು 
ಅವರ ಮನೆಯನ್ನು ಮುಟ್ಟಿದ್ದಾಗ ನಮಗೆ  ಗೊತ್ತಾಯಿತು ಅವರೇ ಕಣವಿಯವರೆಂದು . ನಾವೇನೋ ತಪ್ಪು ಮಾಡಿದೆವು ಎಂದು ಅನಿಸಿತ್ತು. 'ನಿಮ್ಮನ್ನು ಗೊತ್ತು ಹಿಡಿಯಲು  ಆಗಲಿಲ್ಲವೆಂದು ' ಕ್ಷಮೆಯಾಚಿಸಿದ್ದೆವು .ನಾವು ಬೆಪ್ಪಾಗಿರುವದನ್ನು ಕಂಡು ಅವರೇ ಮಾತನಾಡಿದರು . 'ಪರವಾಗಿಲ್ಲ ಬಿಡ್ರಪ್ಪಾ ! ಎಲ್ಲರೂ ಗೊತ್ತು ಹಿಡಿಯುವದಕ್ಕೆ ನಾನೇನು ಫಿಲ್ಮ್ ನಟನೇನೂ ' ಅಂತ ಎಂದಿದ್ದರು . ಬಂದ ವಿಷಯವನ್ನು ಹೇಳಿದೆವು . ಅವರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದರು. ಅಷ್ಟರಲ್ಲಿಯೇ ಅವರ ಪತ್ನಿಯವರು ಗರಂ ಚಹಾ ತಂದು ಇಟ್ಟಿದ್ದರು. ಚಹಾ  ಕುಡಿದು ಮನೆಯನ್ನು ಬಿಟ್ಟಿದ್ದೆವು . ಅವರ ಸರಳ ಜೀವನದ ಶೈಲಿಯನ್ನು ಕಂಡು ನಾನು ದಂಗಾಗಿದ್ದೆ.
೧೫ ದಿನಗಳ ನಂತರ ಅವರನ್ನು ಕಾರ್ಯಕ್ರಮಕ್ಕೆ ಕರೆ ತರಲು ಕಾರು ತೆಗೆದುಕೊಂಡು ಹೋಗಿದ್ದೆವು. ಕಾರನ್ನು  ಕಂಡು ಅವರೆಂದಿದ್ದರು ' ಇದಕ್ಕ್ಯಾಕ ಇಷ್ಟು ಖರ್ಚು  ಮಾಡಿದ್ರಿ , ಅರ್ಧ ಘಂಟೆಗೊಂದ  ಸಿಟಿ ಬಸ್ಸ ಅದಾವ ಬಸ್ಸಿನಾಗ ಹೋಗಬಹುದಿತ್ತಲ್ಲ?' ಎಂದು . ಆ ಮಾತುಗಳು ಅವರ ಸರಳ ಜೀವನಕ್ಕೆ ಇನ್ನೊಂದು ಸಾಕ್ಷಿಯಾಗಿದ್ದವು . ಅರ್ಧ ಘಂಟೆಯ ಕಾರು ಪಯಣದಲ್ಲಿ ನಮ್ಮ ಜೊತೆಗೆ ಎಷ್ಟೊಂದು ಸಲೀಸಾಗಿ  ಮಾತನಾಡಿದ್ದರು . ಅವರಿಗೆ  ತಾವೊಬ್ಬ ದೊಡ್ಡ ಕವಿ ಎಂಬ ಅಹಂಕಾರ ಸ್ವಲ್ಪವೂ ಇರಲಿಲ್ಲ . 
ಕೆಎಂಸಿ ಯ ಕನ್ನಡ ಸಂಘದ ಬಗ್ಗೆ ಮತ್ತು ಬೇಂದ್ರೆಯವರ ದಿನಾಚರಣೆ ಬಗ್ಗೆ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದರು. ಬೇಂದ್ರೆಯವರ ಬಗ್ಗೆ ಅವರಿಗೆ ತುಂಬಾ ಗೌರವವಿತ್ತು . ಅವರ  ಬಗ್ಗೆ  ಮನಸು ಬಿಚ್ಚಿ ಮಾತನಾಡಿದ್ದರು ಕಾರ್ಯಕ್ರಮದಲ್ಲಿ . 
ಅಂಥ ಸರಳ ಮತ್ತು ಶಿಸ್ತಿನ ಕವಿ ಜೀವಿಯ ಜೊತೆಗಿನ ನನ್ನ ಸಣ್ಣ ಭೇಟಿ ಮತ್ತು ಅರ್ಧಘಂಟೆಯ ಕಾರು ಪಯಣ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯೊಲ್ಲೊಂದು . ಇಲ್ಲಿ ಅದನ್ನು ನೆನಪಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ.

~ ಶಿವ ಮೇಟಿ