ಮರೆಯಲಾಗದ ರಾಜರ್ಷಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್

ಬೇಸಿಂಗ್ ಸ್ಟೋಕ್  ರಾಮಮೂರ್ತಿ ಅವರ ಲೇಖನ 
  • ಅವರನ್ನು ಜನತೆ ”ಕೃಷ್ಣರಾಜ ಭೂಪ, ಮನೆ ಮನೆ ದೀಪ” ಎಂದು ಗೌರವಿಸುತ್ತಿದ್ದರು! ಮೈಸೂರು ಸಂಸ್ಥಾನ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಆಡಳಿತವುಳ್ಳ ರಾಜ್ಯವೆಂದು ೧೯೩೦ ರ ದುಂಡು ಮೇಜು ಪರಿಷತ್ತಿನಲ್ಲಿ ಲಾರ್ಡ್ ಜಾನ್ ಸ್ಯಾಂಕಿಯವರಿಂದ ಶ್ಲಾಘಿಸಲ್ಪಟ್ಟಿತ್ತು. ಆ ಮಟ್ಟಕ್ಕೆ ತಂದ ಶ್ರೇಯಸ್ಸಿನ ಸಿಂಹಪಾಲು ನಮ್ಮ ಹೆಮ್ಮೆಯ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರಿಗೆ ಸಲ್ಲ ಬೇಕು ಅಂದರೆ ಅತಿಶಯೋಕ್ತಿಯಾಗಲಾರದು. ಈ ತಿಂಗಳಿನ ನಾಲ್ಕನೆಯ ತಾರೀಕು ಅವರ ೧೪೦ನೇ ಜಯಂತಿ. ಅದನ್ನು ಸ್ಮರಿಸುತ್ತ ಕರ್ನಾಟಕದ ಇತಿಹಾಸದಲ್ಲಿ ವಿಶೇಷ ಆಸಕ್ತಿಯುಳ್ಳ ಮತ್ತು ’ಅನಿವಾಸಿ’ಯಲ್ಲಿ ಅನೇಕ ಇತಿಹಾಸ ಸಂಬಂಧ ಪಟ್ಟ ಲೇಖನಗಳನ್ನು ಒದಗಿಸಿಕೊಟ್ಟ ಕನ್ನಡ ಬಳಗ ಯು ಕೆ ದ ಹಿರಿಯ ಆಜೀವ ಸದಸ್ಯರಾದ ಶ್ರೀ ರಾಮಮೂರ್ತಿಯವರಿಗೆ ನಾವು ಆಭಾರಿ. ಕಳೆದ ವರ್ಷದ ಬಳಗದ ೪೦ನೆಯ ವಷವನ್ನು ಅದ್ದೂರಿಯಾಗಿ ’ಸಂಭ್ರಮ’ ಅಂತ ಕರೆದು ಲಂಡನ್ನಿನಲ್ಲಿ ಆಚರಿಸಿದಾಗ ಮುಖ್ಯ ಅತಿಥಿಯಾಗಿ ಈಗಿನ ಮೈಸೂರು ಮಹಾರಾಜರು ಬಂದಾಗ ನಾಲ್ವಡಿಯವರು ೧೯೩೬ರಲ್ಲಿ ಲಂಡನ್ನಿಗೆ ಬಂದ ವಿಷಯವನ್ನು ಪ್ರಸ್ತಾಪಿಸಿದ್ದರು. ಆ ಪ್ರವಾಸದ ಬಗ್ಗೆ ಸಹ ರಾಮಮೂರ್ತಿಯವರು ಇನ್ನುಳಿದ ವಿಷಯಗಳೊಂದಿಗೆ ಪ್ರಸ್ತುತ ಪಡಿಸಿದ್ದಾರೆ. ಲೇಖನ ಕೊನೆಗೆ ಒಂದು ಸ್ವಾರಸ್ಯಕರ *ಟಿಪ್ಪಣಿಯಿದೆ. ಓದಲು ಮರೆಯ ಬೇಡಿ! ಎಂದಿನಂತೆ ಎಲ್ಲರೂ ತಪ್ಪದೆ ಓದಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಬೇಕೆಂದು ಕೋರುತ್ತೇನೆ. (ಸಂ)

ನಾವು ಮರೆತೆಂತಿರುವ ’ರಾಜಋಷಿ” ಅಥವ ರಾಜರ್ಷಿ, ಮೈಸೂರು ಸಂಸ್ಥಾನವನ್ನು ಭಾರತದ ಮಾದರಿ ರಾಜ್ಯವನ್ನಾಗಿ ಮಾಡಿದಂತಹ ಮಹಾನುಭಾವ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಮಹಾರಾಜರು.(೧೮೮೪-೧೯೪೦). ಇವರ ೧೪೦ನೇ ಜಯಂತಿ ಇದೇ ವಾರ ೦೪/೦೬/೨೦೨೪ ರಂದು ಇತ್ತು! ಆದರೆ ಈಗಿನ ಕರ್ನಾಟಕದಲ್ಲಿ ಇವರನ್ನು ಸರ್ಕಾರ ಮತ್ತು ಜನತೆ ಸಹ ಮರೆತಂತೆ ಇದೆ. ತಮ್ಮ ಆಡಳಿತಲ್ಲಿ ಇವರು ತಾವು ತಂದ ಸುಧಾರಣೆಗಳನ್ನು ನೋಡಿ, ೧೯೨೫ ರಲ್ಲಿ ಮಹಾತ್ಮ ಗಾಂಧಿ ಇವರನ್ನು ಇವರೊಬ್ಬ ರಾಜರ್ಷಿ ಎಂದು ಪ್ರಶಂಸಿದರು ಮತ್ತು ಲಂಡನ್ ನಲ್ಲಿ ೧೯೩೦ ರಲ್ಲಿ ನಡೆದ ದುಂಡು ಮೇಜು ( Round Table) ಸಭೆಯಲ್ಲಿ “ಮೈಸೂರು ರಾಜ್ಯದ ಆಡಳಿತ ಪ್ರಪಂಚದಲ್ಲೇ ಅತ್ಯುತ್ತಮವಾದದ್ದು” ಅನ್ನುವ ಹೇಳಿಕೆಯನ್ನೂ ಕೊಡಲಾಯಿತು.

ಹನ್ನೊಂದನೆಯ ವಯಸ್ಸಿಗೇ ಪಟ್ಟ
೧೯ನೇ ಶತಮಾನದ ಕೊನೆಯಲ್ಲಿ ಮೈಸೂರು ರಾಜ್ಯದಲ್ಲಿ ತೀವ್ರ ಬರಗಾಲ ಬಂದಿತ್ತು ಮತ್ತು ಚಿಕ್ಕ ವಯಸ್ಸಿನಲ್ಲೇ ಇವರ ತಂದೆ ಚಾಮರಾಜ ಒಡೆಯರ್ ಕಲ್ಕತ್ತ ನಗರದಲ್ಲಿ ತೀರಿದ್ದರಿಂದ ರಾಜ್ಯದಲ್ಲಿ ಗೊಂದಲವೇ ಉಂಟಾಗಿತ್ತು. ಆಗ ಕೃಷ್ಣರಾಜೇಂದ್ರರರಿಗೆ ಕೇವಲ ೧೧ ವರ್ಷವಾದರೂ ಪಟ್ಟಕ್ಕೆ ಏರಬೇಕಾಯಿತು (೧/೦೨/೧೮೯೫). ಆದರೆ ಅವರ ತಾಯಿ ಕೆಂಪರಾಜಮ್ಮಣಿ ರಾಜ್ಯದ ಆಡಳಿತವನ್ನು ಕೃಷ್ಣರಾಜೇಂದ್ರ ಅವರಿಗೆ ೧೮ ವರ್ಷ ತುಂಬುವ ವರೆಗೂ ವಹಿಸಿಕೊಂಡಿದ್ದರು. ಜಗನ್ಮೋಹನ್ ಅರಮನೆಯಲ್ಲಿ ಅಂದಿನ ವೈಸರಾಯ್ ಲಾರ್ಡ್ ಕರ್ಜನ್ ಅವರ ನೇತೃತ್ವದಲ್ಲಿ ೮/೧೨/೧೯೦೨ ರಂದು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಇಪ್ಪತ್ತು ನಾಲ್ಕನೆಯ ಮೈಸೂರ ಮಹಾರಾಜರಾದರು. ಇವರ ವಂಶದಲ್ಲಿ ಇವರು ನಾಲ್ಕನೆಯ ಕೃಷ್ಣರಾಜೇಂದ್ರ ಆದ್ದರಿಂದ ನಾಲ್ವಡಿ ಸೇರಿಸಲ್ಪಟ್ಟಿತು. ಅವ್ರು ೧೯೦೦, ಜೂನ್ ೬ರಂದು ಈಗಿನ ಗುಜರಾತ್ ರಾಜ್ಯದ ಕಾಠಿಯಾವಾಡದ ರಾಜಕುಮಾರಿ ಪ್ರತಾಪಕುಮಾರಿ ಇವರ ಜೊತೆ ವಿವಾಹ ನಡೆಯಿತು

ಅವರ ಆಡಳಿತದ ಸಾಧನೆಗಳು

ಈ ಕಾಲದ  ಮತ್ತು ಸ್ವಲ್ಪ ಹಿಂದೆ ಇದ್ದ ಆಡಳಿತದ ಕೆಲವು ಉಲ್ಲೇಖನೀಯ ಅಂಶಗಳನ್ನು  ಇಲ್ಲಿ ನೋಡೋಣ.

  • ೧೮೭೬ ನಲ್ಲಿ ಮಹಾರಾಜಾ ಸಂಸ್ಕೃತ ಕಾಲೇಜ್ ಪ್ರಾರಂಭ (ಭಾರತದ ಮೊಟ್ಟ ಮೊದಲನೆಯ ಸಂಸ್ಕೃತ ಕಾಲೇಜ್ ಸ್ಥಾಪಿತವಾದದ್ದು ೧೭೯೧ ಕಾಶಿ ನಗರದಲ್ಲಿ ಒಬ್ಬ ಬ್ರಿಟಿಷ್  ಪ್ರಜೆ ಜೋನಾತನ್ ಡಂಕನ್ ಎಂಬಾತನಿಂದ)  
  • ಮೊಟ್ಟಮೊದಲನೆಯ ಹೈಡ್ರೋ ಎಲೆಕ್ಟ್ರಿಕ್ ಉತ್ಪಾದನೆ ೧೯೦೨ ನಲ್ಲಿ ಶಿವನಸಮುದ್ರದಲ್ಲಿ ಪ್ರಾರಂಭವಾಯಿತು. ಇದರ ಬ್ರಿಟಿಷರ ಮುಖ್ಯ ಉದ್ದೇಶ ಬೇರೆ ಅನ್ನಿ, ಕೋಲಾರದ ಚಿನ್ನದ ಗಣಿಗೆ ವಿದ್ಯುಚ್ಛಕ್ತಿಯ ಅವಶ್ಯಕತೆ ಇತ್ತು!
  • ೧೯೦೩ರಲ್ಲಿ ಭಾರತದ ಮೊದಲನೆಯ ಕಣ್ಣಾಸ್ಪತ್ರೆ, ಬೆಂಗಳೂರಿನ ಮಿಂಟೋ ಆಸ್ಪತ್ರೆ (Minto Eye hospital).
  • ಆಗಸ್ಟ್ ಐದನೇ ತಾರೀಕು ೧೯೦೫ ಬೆಂಗಳೂರಿನ ರಸ್ತೆಗಳಿಗೆ ಏಷ್ಯಾದ ಮೊದಲನೆಯ ವಿದ್ಯುತ್ ರಸ್ತೆ ದೀಪಗಳು. ಕೆ ರ್ ಮಾರ್ಕೆಟ್ ನಲ್ಲಿ ಸರ್ ಜಾನ್ ಹ್ಯುಯೆಟ್ ಎಂಬಾತನಿಂದ ಉದ್ಘಾಟನೆ. 
  • ಚಿತ್ರದುರ್ಗದಲ್ಲಿ ವಾಣಿವಿಲಾಸ ಅಣೆಕಟ್ಟು.
  • ಜಮ್ಶೇಟ್ ಜಿ ಟಾಟಾ ಅವರಿಗೆ ೩೭೧ ಎಕರೆ ಮತ್ತು ಐದು ಲಕ್ಷ ರೂಪಾಯಿ ಹಣ ಸಹಾಯದಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರಾರಂಭ.
  • ರಾಜ್ಯದಲ್ಲಿ ರೈಲು ಸಂಪರ್ಕ ಮತ್ತು ಇನ್ನೂ ಅನೇಕ ಸುಧಾರಣೆಗಳು ಪ್ರಾರಂಭವಾದವು
  • ಗ್ರಾಮ ಕೈಗಾರಿಕೆಗಳಾದ ಮರಗೆಲಸ, ನೇಯ್ಗೆ, ರೇಶ್ಮೆ, ಕಬ್ಬಿಣ ಮತ್ತು ಬೆತ್ತದ ಕೆಲಸಗಳು, ಚೆನ್ನಪಟ್ಣದಲ್ಲಿ ಗೊಂಬೆ ಮತ್ತು ಬಣ್ಣದ ಕೆಲಸ. – ಇವುಗಳ ತರಬೇತಿ ಕೇಂದ್ರಗಳನ್ನು ಸಹ ಸ್ಥಾಪಿಸಿಲಾಯಿತು.
  • ೧೯೦೩ ರಲ್ಲಿ ಮೈಸೂರು ನಾಗರಾಭಿವೃದ್ಧಿ ಮಂಡಳಿ ರಚಿತವಾಗಿ, ಅದರ ಫಲವಾಗಿ ಮೈಸೂರು ನಗರ ಭಾರತದಲ್ಲಿ ಅತ್ಯಂತ ಸುಂದರ ನಗರವೆಂದು ಹೆಸರು ಪಡೆಯಿತು. 
  • ೧೯೦೫ರಲ್ಲಿ ಸಹಕಾರಿ ಸಂಘ ಮತ್ತು ಬ್ಯಾಂಕ್ ಗಳು ಸ್ಥಾಪಿತವಾದವು.
  • ೧೮೮೧ ರಲ್ಲಿ ಪ್ರಾರಂಭವಾಗಿದ್ದ ಮೈಸೂರು ಪ್ರತಿನಿಧಿಗಳ ಸಭೆ, ೧೯೦೭ ರಲ್ಲಿ ವಿಸ್ತಾರಗೊಂಡು Mysore Legislative Assembly ಯಾಯಿತು. ರಾಜ್ಯದ ಆಡಳಿತಕ್ಕೆ ನೆರವಾಗುವ  ಕಾನೂನುಗಳು ಮತ್ತು ನಿಬಂಧನೆಗಳನ್ನು ಜಾರಿಗೆ ತರುವುದು ಇದರ ಉದ್ದೇಶ.ವಾಗಿತ್ತು. ಸಮಾಜದ ಹಲವಾರು ಗಣ್ಯ ವ್ಯೆಕ್ತಿ ಗಳು ಇದರಲ್ಲಿ ಭಾಗವಹಿದ್ದರು. 

ತರುಣ ಮಹಾರಾಜರಿಗೆ ಸಾಕಷ್ಟು ತರಬೇತಿಯಾಗಿತ್ತು. ಬಾಲ್ಯದಲ್ಲಿ ಅರಮನೆಯಲ್ಲೇ ಇವರ ಶಿಕ್ಷಣ ಆಯಿತು.  ಶ್ರೀ ರಾಘವೇಂದ್ರ ರಾಯರಿಂದ ಕನ್ನಡ ಮತ್ತು ಸಂಸ್ಕೃತದ ಅಭ್ಯಾಸ,ಮತ್ತು ಆಡಳಿತದ ಕ್ರಮ ಮತ್ತು ಜವಾಬ್ದಾರಿ ಸರ್ ಸ್ಟೋವರ್ಟ್ ಫ್ರೇಸರ್ ಅವರಿಂದ ಪಡೆದರು . (ಬೆಂಗಳೂರಿನ ಈಗಿನ Fraser Town ಇವರ ಜ್ಞಾಪಕವಾಗಿ ). ಕ್ರಮೇಣ, ಕರ್ನಾಟಕ ಮತ್ತು ಪಾಶ್ಚಿಮಾತ್ಯ ಸಂಗೀತದ  ಅಭ್ಯಾಸ ಸಹ ದೊರಕಿತು. ಅರಮನೆಯಲ್ಲೇ ಇದ್ದ ತಮ್ಮ ಕಾರ್ಯಾಲಯಕ್ಕೆ ದಿನವೂ ಇತರ ಸರಕಾರಿ  ನೌಕರರಂತೆ ತಪ್ಪದೆ ಹೋಗುತ್ತಿದ್ದರು. ರಾಜ್ಯದ ಅನೇಕ ಭಾಗಗಳಿಗೆ ಭೇಟಿ ಮಾಡಿ ಪ್ರಜೆಗಳ ಕಷ್ಟ ಸುಖಗಳನ್ನು ತಿಳಿದು ಇದಕ್ಕೆ ಬೇಕಾದ ಪರಿಹಾರಗಳನ್ನು ಜಾರಿಗೆ ತಂದರು. ಶಿಕ್ಷಣದ ಬೆಳವಣಿಗಯ ಬಗ್ಗೆ   ತುಂಬಾ ಗಮನಕೊಟ್ಟು ದೇಶದ ಮೂಲೆ ಮೂಲೆಗಳಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳ ಆರಂಭವಾಯಿತು. ಶಿಕ್ಷಣದ ಕಡ್ಡಾಯ ಹಂತಹಂತವಾಗಿ ಜಾರಿಗೆ ತರಲು ಶಾಸನವನ್ನು ಮಾಡಿದರು. ಹೆಣ್ಣು ಮಕ್ಕಳ ಮತ್ತು ಹಿಂದುಳಿದ ಪಂಗದಗಳಿಗೆ ವಿದ್ಯಾಭ್ಯಾಸ ಹರಡಲು ತಕ್ಕ ಕಾರ್ಯಕ್ರವನ್ನು  ಕೈಕೊಂಡರು.

ಸುಧಾರಣೆಗಳು ಮತ್ತು ದಕ್ಷ ಆಡಳಿತ

ಮಹಾರಾಜರ ಆಡಳಿತದಲ್ಲಿ, ಗ್ರಾಮೀಣ ಜನರ ಬಡತನವನ್ನು ನಿವಾರಿಸುವುದು, ಅರೋಗ್ಯ ಮತ್ತು ಶಿಕ್ಷಣ ಕಡೆ ಗಮನ, ಬಾಲ್ಯವಿವಾಹದ ರದ್ದು  (ಎಂಟು ವರ್ಷದೊಳಗಿನ ಹುಡುಗಿಯರ) ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ  ಇತ್ಯಾದಿ ಸುಧಾರಣೆಗಳು ಇವರ ಗುರಿಯಾಗಿತ್ತು.   

ಪುಣೆಯಲ್ಲಿ ನೀರಾವರಿ ಇಲಾಖೆಯಲ್ಲಿ ಹೆಸರು ಪಡೆದಿದ್ದ  ಎಂ.ವಿಶ್ವೇಶರಯ್ಯನವರು ಕನ್ನಡಿಗರೇ ಆಗಿದ್ದರೂ, ಅವರ ಇಂಜನೀರಿಂಗ್ ಶಿಕ್ಷಣ ಪಡೆದಿದ್ದು ಪೂನಾ ಇಂಜಿನೀರಿಂಗ್ ಕಾಲೇಜ್ ನಲ್ಲಿ. ನಂತರ  ಬಾಂಬೆ ಪ್ರಾಂತ್ಯದಲ್ಲಿ ಕೆಲಸದಲ್ಲಿದ್ದವರು. ಅವರನ್ನು ಮೈಸೂರು ರಾಜ್ಯಕ್ಕೆ ಬರುವಂತೆ ಮಾಡಿದವರು ದಿವಾನ್ ಆನಂದ ರಾಯರು. ಮೊದಲು ನೀರಾವರಿ ಇಲಾಖೆಯ ಮುಖ್ಯಸ್ಥರಾಗಿ ಬಂದು ೧೯೧೨ ರಲ್ಲಿ ಆನಂದರಾಯರು ನಿವೃತವಾದ ನಂತರ ಮಹಾರಾಜರು ಇವರನ್ನು ದಿವಾನರಾಗಿ ಮಾಡಿದರು.  ಇವರ  ಕಾಲದಲ್ಲಿ ರಾಜ್ಯದ ಸರ್ವವಿಧದ ಬೆಳವಣಿಗೆಯ ಯುಗ ಆರಂಭವಾಯಿತು. ಕೈಗಾರಿಕೆಯ ಕ್ಷೇತ್ರ ವಿಶೇಷವಾಗಿ ಬೆಳೆಯಿತು. ಮಂಡ್ಯದ ಸಕ್ಕರೆ ಕಾರ್ಖಾನೆ, ಮೈಸೂರಿನಲ್ಲಿ ಗಂಧದ ಎಣ್ಣೆ ತಯಾರಿಕೆ, ಭದ್ರಾವತಿಯಲ್ಲಿ  ಕಾಗದ, ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ, ಬೆಂಗಳೂರಿನ ಗಾಜು ಮತ್ತು ಪಿಂಗಾಣಿ, ಮೈಸೂರು ಲ್ಯಾಂಪ್ಸ್, ಬೆಂಗಳೂರಿನಲ್ಲಿ ಇಂಜಿನೀರಿಂಗ್ ಕಾಲೇಜ್, ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಮತ್ತು ಮೈಸೂರ ಬ್ಯಾಂಕ್,  ಕನ್ನಡ ಸಾಹಿತ್ಯ ಪರಿಷತ್  ಮತ್ತು ಅನೇಕ ಸಂಸ್ಥೆಗಳು, ಇವೆಲ್ಲ ಸ್ಥಾಪಿತವಾದವು.

ಶಿಕ್ಷಣದ ಪೋಷಕ

ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವವರಿಗೆ ವಿದ್ಯಾರ್ಥಿವೇತನ ನೀಡುವ ಪದ್ದತಿಯನ್ನು ಜಾರಿಗೆ ತಂದುದಲ್ಲದೆ ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವನ್ನು ಸ್ಥಾಪಿಪಿಸದರು. 

ಟಿ. ಪಿ . ಕೈಲಾಸಂ ಅವರು ಗಣಿ ಶಾಸ್ತ್ರವನ್ನು ಓದಲು ಇಂಗ್ಲೆಂಡ್ ಗೆ ಬಂದಿದ್ದು ಮಹಾರಾಜರ ನೆರವಿನಿಂದಲೇ. ಕಾಶಿ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯಾಗಿದ್ದ ಮಹಾರಾಜರು ಆ ಸಂಸ್ಥೆಗೆ ೨ ಲಕ್ಷ ರೂಪಾಯಿಗಳ ದಾನಮಾಡಿದ್ದಲ್ಲದೆ ಪ್ರತಿ ವರ್ಷ ೧೨,೦೦೦ ರೂಪಾಯಿಗಳ ಧನ ಸಹಾಯವನ್ನು ಮಾಡುತ್ತಿದ್ದರು.    ಮೊದಲನೇ ಮಹಾ ಯುದ್ಧ (೧೯೧೪-೧೯೧೮) ಆರಂಭವಾದಾಗಲೇ ಮಹಾರಾಜರು ರೂ ೫೦ ಲಕ್ಷ ಕಾಣಿಕೆಯನ್ನು ಮತ್ತು ೨ ಲಕ್ಷ ಇಂಡಿಯಾ ರಿಲೀಫ್ ಫಂಡ್ ಗೂ  ನೀಡಿದರು. ಮೈಸೂರಿನ ಸೈನಿಕರು ಈಜಿಪ್ಟ್ ಮತ್ತು ಪ್ಯಾಲಸ್ಟೈನ್ ಪ್ರದೇಶದಲ್ಲಿ ಹೋರಾಡಿದರು.

”ಮಾದರಿ ರಾಜ್ಯ’’ದತ್ತ ಮುನ್ನಡೆ
೧೯೨೩ ರಲ್ಲಿ ರಾಜಘೋಷಣೆ ಪ್ರಕಟಣೆಯಾಗಿ ಪ್ರಜಾಪ್ರತಿನಿಧಿ ಸಭೆಯು ಪ್ರಥಮ ಬಾರಿಗೆ ಶಾಸನಬದ್ಧ ಸಂಸ್ಥೆಯಾಯಿತು (ಈಗಿನ ವಿಧಾನ ಸಭೆ). ಇದರ ಸಂಖ್ಯೆ ೨೫೦ -೨೭೫ ಎಂದು ನಿರ್ಧರಿಸಿ, ಬಹು ಮಂದಿಗೆ ಮತದಾನ ಮಾಡುವ ಅವಕಾಶ ದೊರಕಿತು. ಮೊದಲನೇ ಬಾರಿಗೆ ಮಹಿಳೆಯರಿಗೆ ಈ ಹಕ್ಕು ಬಂತು ಎನ್ನುವದು ಗಣನೀಯ.
ಹಿಂದುಳಿದ ವರ್ಗಗಳಿಗೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಜನಾಂಗಗಳಿಗೆ ೩೫ ಸ್ಥಾನಗಳು ಮತ್ತು ಗ್ರಾಮಾಂತರ ಪ್ರದೇಶದಿಂದ ಬಂದವರಿಗೆ ೧೫೦ ಸೀಟುಗಳು ಮೀಸಲಾಗಿತ್ತು.
೧೯೧೯ ರಲ್ಲಿ ಹಿಂದುಳಿದ ಜನಾಂಗಕ್ಕೆ ವಿದ್ಯಾಭ್ಯಾಸ ಮತ್ತು ಕೆಲಸದ ಅವಶ್ಯಕತೆಯ ಅರಿವಾಗಿ, ರಾಜ್ಯದ ಹಿರಿಯ ಅಧಿಕಾರಿಯಾಗಿದ್ದ ಲೆಸ್ಲಿ ಮಿಲ್ಲರ್ ಅವರನ್ನು ಈ ಬಗ್ಗೆ ಸಲಹೆ ಕೊಡುವುದಕ್ಕೆ ನೇಮಿಸಿದರು. ಇವರ ವರದಿಯಲ್ಲಿ ( Millers Report ) ೨೫% ಈ ಜನಾಂಗಕ್ಕೆ ಮೀಸಲಾಗಬೇಕು ಎಂದು ಸಲಹೆ ಕೊಟ್ಟರು ಮತ್ತು ಮಹಾರಾಜರಿಂದ ಒಪ್ಪಿಗೆ ಸಹ ಬಂತು. ಅಂದ ಮೇಲೆ ಇವತ್ತಿನ
Reservation Policy ಹೊಸತೇನಲ್ಲ.
೧೯೨೬ರಲ್ಲಿ ಮಹಾರಾಜರ ಆಪ್ತ ಕಾರ್ಯದರ್ಶಿಯಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ದಿವಾನರಾಗಿ , ಸರ್ ಎಂ ವಿ ಹಾಕಿದ್ದ ತಳಹದಿಯ ಮೇಲೆ ರಾಜ್ಯದ ಬೆಳವಣಿಗೆ ಇನ್ನು ಮುಂದುವರೆಯಿತು.
ಮೈಸೂರಿನ ಉತ್ಪನ್ನಗಳನ್ನು ವಿದೇಶದಲ್ಲಿ ಮಾರಾಟ ಮಾಡಲು ಅನುಕೂಲವಾಗಲೆಂದು ಲಂಡನ್ ನಲ್ಲಿ ರಾಜ್ಯದ ಹಿರಿಯ ಅಧಿಕಾರಿ ಎಮ್ ಏ ಶ್ರೀನಿವಾಸನ್ ಅವರನ್ನು ಟ್ರೇಡ್ ಕಮಿಷನರ್ ನ್ನಾಗಿ ನೇಮಿಸಿದರು. ಮೈಸೂರ್ ಸೇಲ್ಸ್ ಇಂಟರ್ನ್ಯಾಷನಲ್ (MSIL ) ಸ್ಥಾಪನೆಯಾಗಿ ಲಂಡನ್ನಿನ ಪಿಕಾಡಿಲ್ಲಿಯಲ್ಲಿ ( Piccadilly) ಇದರ ಕಚೇರಿ ಇತ್ತು. ಇದನ್ನು ಸುಮಾರು ೨೫-೩೦ ವರ್ಷದ ಹಿಂದೆ ಇಲ್ಲಿ ಮುಚ್ಚಿದರು.
ಮೈಸೂರಿನಲ್ಲಿ ವೈದ್ಯ ಶಿಕ್ಷಣ ಕಾಲೇಜ್ (ಮೈಸೂರ್ ಮೆಡಿಕಲ್ ಕಾಲೇಜ್ ) ೧೯೨೪ ರಲ್ಲಿ ಪ್ರಾರಂಭವಾಯಿತು.

ಕಾವೇರಿಗೊಂದು ಆಣೆಕಟ್ಟು
೧೯ನೇ ಕಾಲದಲ್ಲಿ ತೀವ್ರ ಬರಗಾಲದಿಂದ ಮೈಸೂರು ಮತ್ತು ಮಂಡ್ಯ ಪ್ರದೇಶಗಳಲ್ಲಿ ಕ್ಷಾಮ ಬರುವುದು ಸಾಮಾನ್ಯವಾಗಿತ್ತು ಹತ್ತಿರಲ್ಲೇ ಹರಿಯುವ ಕಾವೇರಿ ನದಿಗೆ ಆಣೆಕಟ್ಟು ಕಟ್ಟುವ ಯೋಜನೆ ಇತ್ತು ಆದರೆ ಅಂದಿನ ಮದ್ರಾಸ್ ಪ್ರೆಸಿಡೆನ್ಸಿ ವಿರೋಧಿಸಿತ್ತು. ದಿವಾನ್ ಆನಂದರಾಯರು ಮಹಾರಾಜರೊಂದಿಗೆ ಚರ್ಚಿಸಿ ಇದಕ್ಕೆ ಬೇಕಾಗಿದ್ದ ೮೧ ಲಕ್ಷ ರೂಪಾಯಿಗಳನ್ನು ಮಂಜೂರ್ ಮಾಡಿಸಿ ೧೧/೧೦/೧೯೧೧ ದಿನ ಈ ಜಲಾಶದ ನಿರ್ಮಾಣದ ಕೆಲಸ ಪ್ರಾರಂಭವಾಗಿ ೧೯೩೧ ರಲ್ಲಿ ಸಂಪೂರ್ಣವಾಯಿತು. ಇದರಿಂದ ಸಾವಿರಾರು ಎಕರೆ ಭೂಮಿ ಫಲವತ್ತಾಯಿತು
ಕೃಷ್ಣರಾಜಸಾಗರದ ಜಲಾಶಯದ ಪ್ರದೇಶದಲ್ಲಿ ದೊಡ್ಡ ಉದ್ಯಾನವನ ಮತ್ತು ಮೈಸೂರು ನಗರದಲ್ಲಿ ವಿಶಾಲವಾದ ರಸ್ತೆಗಳು, ಸಾಲು ಮರಗಳು ಮತ್ತು ಉಪವನ (ಪಾರ್ಕ್ಸ್) ನಿಮಾಣಗೊಂಡವು.
ಒಣ ಪ್ರದೇಶಗಳಾಗಿದ್ದ ಮಂಡ್ಯ, ಟಿ ನರಸೀಪುರ ತಾಲೋಕ್ ಗಳಿಗೆ ನೀರಾವರಿ ಸೌಲಭ್ಯ ಮತ್ತು ಅನೇಕ ಕೈಗಾರಿಕೆಗಳು ಮಹಾರಾಜರ ನೇತೃತ್ಯದಲ್ಲಿ ನಿರ್ಮಾಣವಾಯಿತು.
೧೯೩೦ ರಲ್ಲಿ ಸರ್ ಸಿ ವಿ ರಾಮನ್ ಅವರಿಗೆ ಭೌತಶಾಸ್ತ್ರದ ನೊಬೆಲ್ ಪಾರಿತೋಷಕ ಬಂದಾಗ ಮಹಾರಾಜರು ಅವರಿಗೆ ೧೦ ಎಕರೆ ಜಮೀನನ್ನು ಕೊಟ್ಟು ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಾರಂಭಿಸುವದಕ್ಕೆ ನೆರವು ನೀಡಿದರು. ೧೯೩೮ರಲ್ಲಿ ಮಹಾರಾಣಿ ಕಾಲೇಜ್ ಮತ್ತು ಕೃಷಿ ಮತ್ತು ವ್ಯವಸಾಯ ಅಧ್ಯಯನದ ಕಾಲೇಜ್ ಸಹ ಪ್ರಾರಂಭವಾಯಿತು.

ಲಂಡನ್ನಿನ ವಿಕ್ಟೋರಿಯಾ ನಿಲ್ದಾಣದಲ್ಲಿ ಸ್ವಾಗತ (೧೯೩೬)

ಇಂಗ್ಲೆಂಡಿನಲ್ಲಿ ಮಹಾರಾಜರು
೧೯೩೬ರಲ್ಲಿ ತಮ್ಮ ಖಾಸಕಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ಇಂಗ್ಲೆಂಡ್ ದೇಶಕ್ಕೆ ಪ್ರಯಾಣ ಬೆಳೆಸಿದರು. ಅದು ಅವರ ಪಪ್ರಥಮ ವಿದೇಶಯಾತ್ರೆಯಾಗಿತ್ತು. ೨೫ ದಿನದ ಸಮುದ್ರ ಪ್ರಯಾಣದ ನಂತರ ಲಂಡನ್ ನಲ್ಲಿ ಡಾರ್ಚೆಸ್ಟರ್ ಹೋಟೆಲಿನಲ್ಲಿ ತಂಗಿದ್ದರು. ಸಮುದ್ರಯಾನದಲ್ಲಿ ಇಂಗ್ಲೆಂಡ್ ತಲುಪಿ ನಂತರ ಅವರು ರೈಲು ಮಾರ್ಗವಾಗಿ ಹೊರಟು ಲಂಡನ್ನಿನ ವಿಕ್ಟೋರಿಯಾ ಸ್ಟೇಷನ್ನಿನಲ್ಲಿಳಿದಾಗ ಕೂಡಿತ್ತು ಕಿಕ್ಕಿರಿದ ಜನಸ್ತೋಮ. (ಫೊಟೋ).ದಿವಾನ್ ಮತ್ತು ಮಹಾರಾಜರನ್ನು ಸ್ವಾಗತಿಸಿದವರಲ್ಲಿ ಫ್ರೇಸರ್ ಟೌನ್ ಖ್ಯಾತಿಯ ಸರ್ ಸ್ಟುಅರ್ಟ್ ಫ್ರೇಸರ್ ಸಹ ಇದ್ದರು. ಭಾರತ ಮೂಲದ ೧೫೦ ವಿದ್ಯಾರ್ಥಿಗಳು ಕೂಡಿ ಮೆರವಣಿಗೆಯಲ್ಲಿ ಡಾರ್ಚೆಸ್ಟರ್ ಹೊಟೆಲ್ ಗೆ ಕರೆದೊಯ್ದರು. ಹೋಟೆಲ್ ತಲುಪಲು ಅರ್ಧ ಗಂಟೆಗೂ ಹೆಚ್ಚು ಸಮಯ (ಆಗಿನ ಕಾಲದಲ್ಲಿ) ಬೇಕಾಯಿತಂತ! ಮರುದಿನ ಡೇಲಿ ಸ್ಕೆಚ್ ಪತ್ರಿಕೆ ತನ್ನ ವರದಿಯಲ್ಲಿ ”ವಿಕ್ಟೋರಿಯಾ ಸ್ಟೇಶನ್ ದಲ್ಲಿ ಅರ್ಧ ಗಂಟೆ ಇಂದ್ರಧನುಷ್ಷಿನ ಒಂದು ತುದಿಯೇ ಇಳಿದಿತ್ತು” ಎಂದು ಬಣ್ಣಿಸಿತ್ತು!

ಕ್ರಾಯ್ಡನ್ ವಿಮಾನ ನಿಲ್ದಾಣದಿಂದ ಬರ್ಲಿನ್ನಿಗೆ ಹೊರಟು ನಿಂತ ಮಹಾರಾಜರು

ಹೋಟೆಲ್ಲಿನಲ್ಲಿ ಆಚಾರ್ಯವಂತ ಮಹಾರಾಜರಿಗೆ ತಕ್ಕ ಸಿದ್ದತೆಗಳನ್ನು ಮಾಡಲಾಗಿತ್ತು. ಸರ್ ಮಿರ್ಜಾ ಇಸ್ಮಾಯಿಲ್ ಅವರ ನೇತೃತ್ವದಲ್ಲಿ ಹಲವಾರು ಸೇವಕರು ಅಧಿಕಾರಿಗಳು ಮತ್ತು ದಿನನಿತ್ಯದ ಪೂಜೆಗಾಗಿ ಇಬ್ಬರು ಪುರೋಹಿತರು ಸಹ ಇವರ ತಂಡದಲ್ಲಿದ್ದರು! ಒಂದು ಪ್ರತ್ಯೇಕ ಕೋಣೆಯಲ್ಲಿ ದಿನಾಲು ಚಾಮುಂಡೇಶ್ವರಿಯ ಪೂಜೆ ನಡೆಯುತಿತ್ತು. ಅವರ ಅಂದಿನ ಇಂಗ್ಲೆಂಡ್ ವಾಸ್ತವ್ಯದಲ್ಲಿ ಮಹರಾಜರು ಥೇಮ್ಸ್ ದಂಡೆಯ ಮೇಲೆ ಉಪಾಕರ್ಮ ಸಹ ಮಾಡಿದರು ಎನ್ನುವ ದಾಖಲೆಯಿದೆ. (ಈಗಿನ ಮೈಸೂರು ಮಹಾರಾಜರಾದ ಶ್ರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಳೆದ ೨೦೨೩ ಸೆಪ್ಟೆಂಬರ್ ೩೦ರಂದು ಕನ್ನಡ ಬಳಗ ಯು ಕೆ ದ ”ಸಂಭ್ರಮ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ತಮ್ಮ ಭಾಷಣದಲ್ಲಿ ಈ ಘಟನೆಯನ್ನು ನೆನೆದರು.-ಸಂ).
ಆ ನಂತರ ಅವರು ಬರ್ಲಿನ್ ಗೆ ವಿಮಾನದಲ್ಲಿ ಲಂಡನ್ ಹತ್ತಿರದ ಕ್ರಾಯ್ಡನ್ ವಿಮಾನ ನಿಲ್ದಾಣದಿಂದ ತೆರಳಿದರು.  ಆಗ ಅವರೊಡನೆ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಸಹ ಇದ್ದರು. ನಂತರ ಭಾರತಕ್ಮರಳಿದರು.

ಕೊನೆಯ ದಿನಗಳು
ಇಷ್ಟರಲ್ಲಿ, ಮಹಾರಾಜರ ಅರೋಗ್ಯ ದಿನೇ ದಿನೇ ಹದಗೆಡುತ್ತಿತ್ತು,. ಕೊನೆಗೆ ಹೃದಯಾಘಾತದಿಂದ ೩/೦೮/೧೯೪೦ ರಂದು ನಿಧನರಾದರು . ಲಂಡನ್ ಟೈಮ್ಸ್ ಪತ್ರಿಕೆ ಯಲ್ಲಿ ಇವರ ಮರಣ ಈ ರೀತಿ ಪ್ರಕಟವಾಯಿತು.

ಇವರಿಗೆ ಮಕ್ಕಳಿರಲಿಲ್ಲ. ಆದುದರಿಂದ ಕಂಠೀರವ ನರಸಿಂಹರಾಜ ಒಡೆಯರ್ ಅವರ ಪುತ್ರ ಜಯಜಾಮರಾಜೇಂದ್ರ ಒಡೆಯರ್ ೮/೯/೧೯೪೦ ದಿನ ರಾಜ್ಯದ ೨೫ನೇ ಹಾಗು ಕೊನೆಯ ಮಹಾರಾಜರಾದರು. ಮಹಾರಾಜರಾಗಿ ಇವರ ಆಡಳಿತ ಮುಗಿದ ನಂತರ (೨೫/೦೧/೧೯೫೦) ರಾಜಪ್ರಮುಖ ಮತ್ತು ರಾಜ್ಯಪಾಲರಾಗಿ ನೇಮಕವಾದರು. ಅವರು ೨೩/೦೯/೧೯೭೪ ರಂದು ನಿಧನರಾದರು.

ನಾಲ್ವಡಿಯವರ ಕೊಡುಗೆಯನ್ನು ನೆನೆಯೋಣ ಇಂದು.
ನಾಲ್ವಡಿ ಕೃಷ್ಣರಾಜೇಂದ್ರ ಮಹಾರಾಜರು ಮೈಸೂರು ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು. ಕನ್ನಡಿಗರಾದ ನಾವು ಇವರನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಇಂದು ಕರ್ನಾಟಕ ಸರ್ಕಾರಕ್ಕೆ ಮತ್ತು ಜನತೆಗೆ ಇದರ ಬಗ್ಗೆ ಯಾವ ರೀತಿಯಲ್ಲೂ ಆಸಕ್ತಿ ಇಲ್ಲವೇನೋ ಅನ್ನಿಸುತ್ತದೆ. ಟಿಪ್ಪು ಸುಲ್ತಾನರ ಜಯಂತಿ ಮಾಡಬೇಕೆಂದು ಸರ್ಕಾರದ ಅಸೆ ಇತ್ತು, ಮಾಡಲಿ, ಏನೂ ಅಭ್ಯಂತರ ಇಲ್ಲ, ಆದರೆ ಕನ್ನಡ ನಾಡನ್ನು ಮಾದರಿ ರಾಜ್ಯವನ್ನಾಗಿ ಮಾಡಿದವರು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು. ಈ ವರ್ಷ ಜೂನ್ ತಿಂಗಳಲ್ಲಿ ಇವರ ೧೪೦ ವರ್ಷದ ಜನ್ಮ ದಿನ, ಕನ್ನಡ ಜನತೆ ಆ ದಿನವನ್ನಾದರೂ ಜ್ಞಾಪಿಸಿಕೊಂಡು ನಮ್ಮ ಕೃತಜ್ಞತೆಯನ್ನು ಅರ್ಪಿಸೋಣ. ಆ ನಿಟ್ಟಿನಲ್ಲಿ ಇದೊಂದು ನನ್ನ ಚಿಕ್ಕ ಪ್ರಯತ್ನ.
(ಈ ಲೇಖನನಕ್ಕೆ ಅನೇಕ ಸಲಹೆಗಳನ್ನು ಕೊಟ್ಟು ಸಹಾಯ ಮಾಡಿದ ಶ್ರೀವತ್ಸ ದೇಸಾಯಿ ಅವರಿಗೆ ನನ್ನ ಕೃತಜ್ಞತೆಗಳು.)
ರಾಮಮೂರ್ತಿ
ಬೇಸಿಂಗ್ ಸ್ಟೋಕ್



* ಟಿಪ್ಪಣಿ -ಶ್ರೀವತ್ಸ ದೇಸಾಯಿ

ಆಚಾರವಂತ ಮಹಾರಾಜರು.

ರಾಮಮೂರ್ತಿಯವರು ಮೇಲಿನ ಲೇಖನದಲ್ಲಿ ಉಲ್ಲೇಖಿಸಿದಂತೆ ನಾಲ್ವಡಿಯವರು ಆಚಾರವಂತರು ಅಂದಾಯ್ತು. *ದಿನಕರ್ ಕೆ ಆರ್ ಅವರು ತಮ್ಮ ‘ಮ್ಯೂಸಿಂಗ್ಸ್ ಆಫ್ ಎ ಮೈಸೂರಿಯನ್‘ ಬ್ಲಾಗ್ ನಲ್ಲಿ ಮಹಾರಾಜರು ಓಕ್ಲಿ ಕೋರ್ಟ್ ನಲ್ಲಿ ಉಪಾಕರ್ಮ ಮಾಡಿದರು ಎಂದು ಬರೆದಿದ್ದಾರೆ. ಮೇಲೆ ಹೇಳಿದಂತೆ ತಮ್ಮ ಭಾಷಣದಲ್ಲಿ ಈಗಿನ ಮಹಾರಾಜರು ಶ್ರೀಕೃಷ್ಣದತ್ತ ಒಡೆಯರ್ ಅವರು ಟೇಮ್ಸ್ ದಂಡೆಯಲ್ಲಿ ಅಂತ ಖಚಿತ ಪಡಿಸಿದರು. ಎಲ್ಲಿದೆ ಆ ಸ್ಥಳ ಅಂತ ಅನ್ವೇಷಣೆ ಮಾಡುತ್ತ ಹೊರಟ ನನಗೆ ವಿಂಡ್ಸರ್ನಲ್ಲಿ ಟೇಮ್ಸ್ ನದಿತೀರದಲ್ಲಿಯ ಒಂದು ಭವ್ಯ ಮಹಲಿನ ಪತ್ತೆಯಾಯಿತು. ಹಿಂದೊಮ್ಮೆ ಶಿಪ್ ಓನರ್ ಅರ್ನೆಸ್ಟ್ ಒಲೀವಿಯರ್ ಅದರಲ್ಲಿ ವಾಸವಾಗಿದ್ದ ಅಂತ ೧೯೩೬ರ ೨೧, ಜೂಲೈ ಡೇಲಿ ಮಿರ್ರರ್ ಪತ್ರಿಕಾವರದಿಯಿಂದ (ಕೆಳಗಿನ ಚಿತ್ರ ನೋಡಿರಿ) ಗೊತ್ತಾಗುತ್ತದೆ. ಆಗ ಅರಮನೆಯವರು ವಾರ್ಷಿಕ ಉಪಾಕರ್ಮಕ್ಕೆ ಇನ್ನೂ ಜಾಗ ಹುಡುಕುತ್ತಿರಬೇಕು ಎಂದಾಯಿತು. ಆ ವರ್ಷ ಉಪಾಕರ್ಮದ ತಿಥಿ ಸೆಪ್ಟೆಂಬರ್ ೨ ರಂದು ಅಂತ ತಿಳಿಯಿತು. ಆ ಮಹಲಿನ ಮಾಲಕರ ಅವಸಾನದ ನಂತರ ಹಲವಾರು ವರ್ಷಗಳು ಓಕ್ಲಿ ಕೋರ್ಟ್ ಪಾಳು ಬಿದ್ದರೂ ಅನೇಕ ಹ್ಯಾಮರ್ ಹೌಸ್ ಹಾರರ್ ಫಿಲ್ಮ್ಗಳು, ಡ್ರಾಕುಲಾ ಚಿತ್ರಗಳ ಶೂಟಿಂಗ್ ಗೆ ಅವಕಾಶ ಕೊಟ್ಟ ದಾಖಲೆಯಿದೆ. ಈಗ ಅದನ್ನು ಪುನರುತ್ಥಾನಗೊಳಿಸಿ ಒಂದು ಲಗ್ಶುರಿ ರಿವರ್ ವ್ಯೂ ಹೋಟೆಲ್ಲಾಗಿ ಪರಿವರ್ತನೆ ಮಾಡಿದ್ದಾರಂತೆ. ಆಗ ೧೪ ಬೆಡ್ ರೂಂ ಗಳು, ಹದಿನಾರು ಸೇವಕರ ಮನೆಗಳಿದ್ದು ಈಗ ತಂಗಲು ೧೧೮ ಮಲಗುವ ಕೋಣೆಗಳಿವೆಯಂತೆ. ೨೫೦ ಪೌಂಡುಗಳಿಗೆ ಒಂದು ರಾಯಲ್ ಸ್ವೀಟ್ ಸಿಗಬಹುದೇನೋ! (ಪೇಪರ್ ಕಟ್ಟಿಂಗ್ ದೊರಕಿಸಿದ ಜೇಕ್ ರೋಚ್ ಅವರಿಗೆ ಧನ್ಯವಾದಗಳು).
* http://mysoreanmusings.blogspot.com/2014/04/first-flight-of-our-mysore-king-nalwadi.html

ಕೈ ಹಿಡಿದು ನಡೆಸಿದ ಗುರುವಿನ ಕುರಿತು..

ಎಲ್ಲರಿಗೂ ನಮಸ್ಕಾರ,
ನಾನು ಇಂದು ಬರೆಯುತ್ತಿರುವುದು, ನನ್ನ ಪ್ರೀತಿಯ ಗುರುಗಳಾದ ಡಾ. ಶಾಲಿನಿ ರಘುನಾಥ್ ಅವರ ಕುರಿತು. ಡಾ. ಶಾಲಿನಿ ರಘುನಾಥ್ ಅವರು
ನಮ್ಮ ಕನ್ನಡ ನಾಡಿನ ಹೆಸರಾಂತ ಜಾನಪದ ವಿದ್ವಾಂಸರು. ಭಾಷಾ ವಿಜ್ಞಾನದಲ್ಲಿ ಹಲವು ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ.
ಜಾನಪದ ಸಂಶೋಧನೆ ಮತ್ತು ಸಂಗ್ರಹಕಾರ್ಯದಲ್ಲೂ ಅವರು ತಮ್ಮ ವಿಶೇಷ ಛಾಪು ಮೂಡಿಸಿದ್ದಾರೆ. ತಮ್ಮ ಉದ್ಯೋಗವನ್ನು ತಪಸ್ಸಿನಂತೆ
ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಧ್ಯಯನದ ರುಚಿ ಹತ್ತಿಸಿದವರು. ಕಲಿತ ವಿದ್ಯೆಯನ್ನು ಬದುಕಿಗೆ ಅಳವಡಿಸಿಕೊಂಡು ನಿರಂತರವಾಗಿ ಚಿಂತನೆ ಮಾಡುವ ಹಾದಿಯಲ್ಲಿ ನನ್ನನು ಕೈಹಿಡಿದು ನಡೆಸಿದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ ವಿದ್ಯಾರ್ಥಿಯಾಗಿ ನಾನು
ಕಳೆದ ಎರಡು ವರ್ಷಗಳು ಆ ನಂತರದ ಈ 14 ವರ್ಷಗಳೂ ನನ್ನನು ಅದೇ ಕಲಿಕೆಯ ಹಾದಿಯಲ್ಲಿಟ್ಟಿವೆ. ಅಂತಹ ಗುರುವಿನ ಜೊತೆಗೆ ನನ್ನ ಒಡನಾಟದ ಕುರಿತು ನನ್ನ ಈ ಲೇಖನ.
- ಅಮಿತಾ ರವಿಕಿರಣ್
ಚಿತ್ರಕೃಪೆ; ಗೂಗಲ್
ಪದವಿಯು ಮುಗಿದು ನಾಲ್ಕು ವರ್ಷಗಳ ಧೀರ್ಘ ಅಂತರದ ನಂತರ ಮತ್ತೆ ಕಾಲೇಜ್ ಸೇರಿಕೊಳ್ಳುವ ಸುಯೋಗ ಬಂದಿತ್ತು ಕಲಿಯಬೇಕೆಂಬ ಆಸೆ
ಇತ್ತಾದರೂ ಅದನ್ನು ಆಚರಣೆಗೆ ಹೇಗೆ ತರುವುದು ಎಂಬುದು ತಿಳಿದಿರಲಿಲ್ಲ. ಪದವಿ ಪಡೆದಿದ್ದು ಸಂಗೀತದಲ್ಲಿ ಆದರೆ ಸ್ನಾತಕೋತ್ತರ
ಅಧ್ಯಯನವನ್ನು ಸಂಗೀತದಲ್ಲೇ ಮುಂದುವರಿಸುವ ಮನಸ್ಸಿರಲಿಲ್ಲ ಸಂಗೀತ ಬಿಡುವ ಮನಸ್ಸು ಇರಲಿಲ್ಲ. ಈ ನಡುವೆ ಅತಿಯಾಗಿ ನನ್ನ ಮನಸನ್ನ
ಆವರಿಸಿದ್ದ ವಿಷಯ ಜಾನಪದ. ಆಗ ನನಗೆ ಜನಪದ ಜಾನಪದ ದ ನಡುವಿನ ವ್ಯತ್ಯಾಸವು ತಿಳಿದಿರಲಿಲ್ಲ.
ನನ್ನ ದನಿ ಕೇಳಿದ ಹಲವು ಮಂದಿ ಜನಪದ ಸಂಗೀತವನ್ನು ಮುಂದುವರಿಸಿಕೊಂಡು ಹೋಗು ಎಂದು ಹೇಳುತ್ತಿದ್ದರು ಮತ್ತು ಯಾವ
ಕಾರ್ಯಕ್ರಮಕ್ಕೆ ಹೋದರೂ ಜಾನಪದ ಗೀತೆಗಳನ್ನು ಹಾಡು ಎಂಬ ಅಪೇಕ್ಷೆ ಮುಂದಿಡುತ್ತಿದ್ದರು. ಆ ಒಂದು ಹಿನ್ನೆಲೆಯಲ್ಲಿ ಜನಪದ ಸಂಗೀತದ
ಬಗೆಗೆ ಏನಾದರು ಹೆಚ್ಚಿನದ್ದು ಕಲಿಯಬೇಕು ಎಂಬ ಸ್ಪಷ್ಟ ಉದ್ದೇಶದೊಂದಿಗೆ ನಾನು ಜಾನಪದ ಅಧ್ಯಯನ ಪೀಠದ ಹೊಸ್ತಿಲನ್ನು ತುಳಿದಿದ್ದೆ.

ಆ ದಿನ ನಮ್ಮ ಪ್ರವೇಶ ಪ್ರಕ್ರಿಯೆ ಆರಂಭವಾದ ದಿನ. ನಾನು ಮೊದಲ ಬಾರಿ ಶಾಲಿನಿ ಮೇಡಂ ಅವರನ್ನು ನೋಡಿದ್ದು ಹಸಿರು ಕೆಂಪಂಚಿನ
ಧಾರವಾಡ ಸೀರೆಯಲ್ಲಿ ನಗು ಮೊಗದಿಂದ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಿದ್ದರು. ಅದೆಷ್ಟು ಸರಳತೆಯಿಂದ ಅವರು ನಮ್ಮೊಂದಿಗೆ
ಮಾತನಾಡಿದ್ದರೆಂದರೆ, ಅವರು ಅಧ್ಯಯನ ಪೀಠದ ಅಧ್ಯಕ್ಷೆ ಎಂಬುದು ನನಗೆ ತಿಳಿಯಲೇ ಇಲ್ಲ.
ಅಡ್ಮಿಷನ್ ಆಗಿ ಮನೆಗೆ ಹೋದಾಗ ಅದೇ ತಿಂಗಳ ಕಸ್ತೂರಿ ಮಾಸಪತ್ರಿಕೆಯಲಿ ಭಾಷಾ ಶಾಸ್ತ್ರ ಕುರಿತಾದ ಒಂದು ಲೇಖನದಲ್ಲಿ ಅವರ ಹೆಸರು
ಉಲ್ಲೇಖಿಸಲಾಗಿತ್ತು. ಅವರಲ್ಲಿರುವ ಅಪರೂಪದ ಪುಸ್ತಕ ಸಂಗ್ರಹದ ಬಗ್ಗೆ ಲೇಖಕ ತುಂಬಾ ಚನ್ನಾಗಿ ಬರೆದಿದ್ದರು. ಅವರೇ ಇವರು ಎಂದು
ತಿಳಿದಾಗ ಮನಸ್ಸು ಸಂಭ್ರಮಿಸಿತ್ತು.

ಕಾಲೇಜ್ ಶುರುವಾದ ನಂತರ ನಾವು ಅವರನ್ನು ಭೇಟಿ ಮಾಡಲು ಅವರ ಚೇಂಬರ್ ಗೆ ಹೋದಾಗ ಅವರು ಮಾತನಾಡಿದ ಶೈಲಿ, ಅವರ
ಆತ್ಮೀಯತೆ ನನ್ನ ಶಿಕ್ಷಣ ಮುಂದುವರಿಸುವ ಕುರಿತು ಇದ್ದ ಹಲವು ದುಗುಡ ಕಡಿಮೆ ಮಾಡಿದ್ದವು. ಜೊತೆಗೆ ಅಷ್ಟೇ ಕಳಕಳಿಯಲ್ಲಿ ಹೇಳಿದ್ದರು.
ಜಾನಪದವನ್ನು ಸುಲಭ , ಡಿಗ್ರಿ ಮುಗಿಸಲು ಒಂದು ಸರಳ ವಿಷಯ ಎಂಬ ಭಾವನೆ ಸಾಮಾನ್ಯ. ಮತ್ತು ಅಧ್ಯಯನ ಪೀಠಕ್ಕೆ ಬರುವ ಹಲವರಲ್ಲಿ
ಈ ಆಲೋಚನೆಯೇ ಇರುತ್ತದೆ ಆದರೆ ನೀವು ಅದನ್ನು ನಿಜಕ್ಕೂ ಇಷ್ಟಪಟ್ಟು ಅಭ್ಯ್ಯಸಿಸಿ ಏನಾದರು ಹೊಸ ದಿಶೆಯಲ್ಲಿ ಆಲೋಚಿಸಬೇಕು. ಬರೀ
ಜಾಬ್ ಗಿಟ್ಟಿಸಲು ಒಂದು ಡಿಗ್ರಿ ಅಂದುಕೊಳ್ಳದೆ ಪ್ರೀತಿಯಿಂದ ಅಧ್ಯಯನ ಶುರು ಮಾಡಿ, ಎಲ್ಲಿ ನೋಡಿದರೂ ನಿಮಗೆ ಜನಪದವೇ ಕಾಣಬೇಕು. ಈ
ವಿಷಯವನ್ನು ಮನದಟ್ಟು ಮಾಡಿಕೊಂಡೆ ಕ್ಲಾಸಿಗೆ ಬನ್ನಿ ಮತ್ತು ತರಗತಿಗಳನ್ನು ತಪ್ಪಿಸಬೇಡಿ ಅಂದರು.

ಮೊದಲ ಸೆಮಿಸ್ಟರ್ ನಲ್ಲಿ ಜಗತ್ತಿನ ಜಾನಪದ ಇತಿಹಾಸ ಎಂಬ ವಿಷದೊಂದಿಗೆ ಮೇಡಂ ಮೊದಲಬಾರಿ ನಮ್ಮ ಮುಂದಿದ್ದರು , ಯುರೋಪ್
ಅಮೇರಿಕ ಮತ್ತು ರಷ್ಯ ಭಾರತದ ಜನಪದ ಇತಿಹಾಸವನ್ನು ಹೇಳುವುದರೊಂದಿಗೆ ಇತಿಹಾಸ ಓದುವುದು ನಮ್ಮ ವರ್ತಮಾನಕ್ಕೆ ಹೇಗೆ
ಉಪಯೋಗಕಾರಿ ? ಅನ್ನುವ ವಿಷಯವನ್ನು ಅದೆಷ್ಟೋ ಉದಾಹರಣೆಗಳೊಂದಿಗೆ ವಿವರಿಸಿದ್ದರು ಅದರಲ್ಲೂ ಎಂದೋ ಕಳೆದು ಹೋದ ಫಿನ್ಲ್ಯಾಂಡ್
ನ ಕಲೆವಾಲ್ ಎಂಬುವ ಕಥನಗೀತೆಯನ್ನು ಸಂಪಾದಿಸಿದ ರೀತಿ ಅದು ಅಲ್ಲಿನ ಜನಮಾನಸದ ಮೇಲೆ ಬೀರಿದ ಪರಿಣಾಮ. ಮತ್ತು ಅದೇ
ಕ್ರಮವನ್ನು ಬಳಸಿ ತುಳುನಾಡಿನ ಸಿರಿ ಪಾಡ್ದನಗಳನ್ನು ಸಂಗ್ರಹಿಸಿದ ಕ್ರಮವನ್ನು ಅದರ ಸುತ್ತಲಿನ ವಿಷಯವನ್ನು ಮನಮುಟ್ಟುವಂತೆ
ಅರ್ಥಮಾಡಿಸಿದ್ದರು.

ನಾನು ಎಂ ಎ ಸೇರಿಕೊಂಡ ವರುಷವೇ ಮೊದಲಬಾರಿ ವಿಶ್ವವಿದ್ಯಾಲಯ ಮುಕ್ತ ವಿಷಯೊಂದನ್ನು ಆಯ್ಕೆಮಾಡಿಕೊಳ್ಳುವ ಹೊಸ ವಿಧಾನವನ್ನು
ಪರಿಚಯಿಸಿತ್ತು. ಅದನ್ನು open elective subject ಎಂದು ಕರೆದಿದ್ದರು ನಾವು ಆಯ್ದುಕೊಂಡ ವಿಷಯದ ಜೊತೆಗೆ open elective ವಿಷಯದ
ತರಗತಿಯ ಹಾಜರಿ ಮತ್ತು ಅದರ ಅಂಕಗಳು ಮುಖ್ಯವಾಗಿದ್ದವು. ಆ ಹೊತ್ತಿನಲ್ಲಿ ನನ್ನ ಕರೆದು ಮೇಡಂ ಹೇಳಿದ್ದರು 'ಯಾವ ವಿಷಯ ತಗೋಬೇಕು ಅನ್ನುವುದರ ಬಗ್ಗೆ ನಿಮಗೆ ಪೂರ್ಣ ಸ್ವಾತಂತ್ರವಿದೆ ಆದರೆ ನಿಮಗೊಂದು ಸಲಹೆ ಕೊಡುತ್ತೇನೆ. ಯಾವುದಾದರು ವಿದೇಶಿ
ಭಾಷೆಯನ್ನು ಆಯ್ಕೆಮಾಡಿ. ಅದರಿಂದ ನಿಮ್ಮ ಕಲಿಕೆ ಇನ್ನು ಉತ್ತಮಗೊಳ್ಳುತ್ತದೆ, ಮತ್ತು ಜಾನಪದ ವಿಧ್ಯಾರ್ಥಿಗಳು ಆಂಗ್ಲ ಭಾಷೆ ಮತ್ತು ಇತರ
ಭಾಷೆಗಳನ್ನು ಕಲಿಯಬೇಕು ಅದರಿಂದ ಅಧ್ಯಯನದಲ್ಲಿ ಹೊಸತನ ಕಾಣ ಸಿಗುತ್ತದೆ ಎಂದರು. ಅವರ ಮಾತಿನ ಅರ್ಥ,ದೂರದರ್ಶಿತ್ವ ಆಗ ನನಗೆ ನಿಜಕ್ಕೂ ಅರ್ಥವಾಗಿರಲಿಲ್ಲ. ಆದರೆ ಅವರ ಮಾತನ್ನು ಮೀರದೆ ಅವರ ಸಲಹೆಯಂತೆ ನಾನು ಕ್ರಮವಾಗಿ ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಆಯ್ಕೆ ಮಾಡಿಕೊಂಡು ಆ ಭಾಷೆಗಳ ಪ್ರಾರಂಭಿಕ ಕಲಿಕೆ ಮಾಡಲು ಸಾಧ್ಯವಾಯಿತು ,

`The dream begins with a teacher who believes in you ,who tugs and pushes and leads you to the next plateau sometimes poking you with a sharp stick' ಅನ್ನುವ ಮಾತು ಅದೆಷ್ಟು ಸತ್ಯ ನನ್ನಲ್ಲಿ ಅವರು ಕನಸುಗಳನ್ನು ಬಿತ್ತುತ್ತಿದ್ದರು ಸ್ನಾತಕೋತ್ತರ ಜಾನಪದ ಪದವಿ ಪಡೆದವರಿಗೆ ಲೆಕ್ಚರರಿಕೆ ಒಂದೇ ಆಯ್ಕೆ ಅಲ್ಲ! ಅದಲ್ಲದೆ ಹಲವಾರು ಕ್ರಿಯಾಶೀಲ ಕ್ಷೇತ್ರಗಳು ಕಾಯುತ್ತಿವೆ. ಆದರೆ ನಾವು ಅದರ ಬಗ್ಗೆ ಧೇನಿಸುತ್ತಿರಬೇಕು. ಸದಾಕಾಲ ಒಂದು ಎಚ್ಚರಿಕೆ ನಮ್ಮಲ್ಲಿರಬೇಕು. ಆ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ? ಯಾಕೆ ಹೀಗಲ್ಲದಿದ್ದರೆ ಹೇಗೆ ಆಗಬಹುದಿತ್ತು? ಅನ್ನುವ ಪ್ರಶ್ನೆಗಳನ್ನು ಪ್ರತಿ ವಿಷಯಕ್ಕೂ ನಮ್ಮನ್ನು ನಾವು ಕೇಳಿಕೊಳ್ಳಬೇಕು ಅದು ನಮ್ಮ ಆಲೋಚನೆಯನ್ನು ಮೊನಚು ಮಾಡುತ್ತದೆ ಎಂಬುದು ವಿದ್ಯಾರ್ಥಿಗಳಿಗೆಲ್ಲರಿಗೂ ಅವರು ಹೇಳುತ್ತಿದ್ದ ಕಿವಿಮಾತು.

ವಿರಾಮವಿರದ ಅವರ ದಿನಚರಿಯಲ್ಲೂ ಕ್ಲಾಸ್ ಗೆ ಒಮ್ಮೆಲೇ ಬಂದು ಯಾವುದಾದರೂ ವಿಷಯಗಳನ್ನು ಕೊಟ್ಟು ಅದರ ಬಗ್ಗೆ ಬರೆದು ತರಲು
ಹೇಳುತ್ತಿದ್ದರು ಮತ್ತು ಪ್ರತಿ ಬರಹವನ್ನು ಕೂಲಂಕಷವಾಗಿ ಪರಿಶಿಲಿಸಿ ತಿದ್ದುಪಡಿ ಹೇಳುತಿದ್ದರು.
ಆ ನಿಟ್ಟಿನಲ್ಲಿ ನಾನು ಹಲವು ಚಿಕ್ಕಪುಟ್ಟ ಲೇಖನ ಬರೆಯುತ್ತಿದ್ದೆ. ಅದರಲ್ಲಿ ಮುಖ್ಯವಾದದ್ದು ಚಿತ್ರರಂಗ ಮತ್ತು ಜಾನಪದ ಎಂಬ ವಿಷಯದ ಬಗ್ಗೆ
ವಿವರವಾಗಿ ಬರೆದ ನಿಬಂಧ. ಅದನ್ನು ನೆನೆಸಿಕೊಂಡರೆ ಈಗಲೂ ನನಗೆ ನಗು ಬರುತ್ತದೆ. ಸಾಕಷ್ಟು ವಿಷಯಗಳನ್ನು ಇಂಟರ್ನೆಟ್ ನಿಂದ
ಸಂಗ್ರಹಿಸಿದ್ದೆ. ಮೇಡಂ ಅವರಿಂದ ಸಾಕಷ್ಟು ಮೆಚ್ಚುಗೆಯನ್ನೂ ನಿರೀಕ್ಷಿಸಿದ್ದೆ. ಆದರೆ ಅವರು ಮಾತ್ರ 'ಸಂಗ್ರಹ ಚನ್ನಾಗಿದೆ ತುಂಬಾ ವಿಷಯ ಹುಡುಕಿದೀರಿ ಅನ್ನೋದನ್ನು ಬಿಟ್ಟು ಬೇರೇನೂ ಹೇಳಲೇ ಇಲ್ಲ. ನನಗೆ ನಿಜಕ್ಕೂ ಬೇಜಾರಾಗಿತ್ತು.
ಕೆಲವು ವಾರಗಳ ನಂತರ ನನ್ನ ಕರೆದು ಹೇಳಿದರು ‘ನೀವು ತುಂಬಾ ಶ್ರಮ ಪಡ್ತೀರಿ,ವಿಷಯ ಸಂಗ್ರಹಿಸ್ತೀರಿ ಬರೀತೀರಿ ಕೂಡ ಆದರೆ ಅದನ್ನು
ವ್ಯವಸ್ತಿತವಾಗಿ ಜೋಡಿಸುವುದರಲ್ಲಿ ಮುಗ್ಗರಿಸುತ್ತೀರಿ ಇದೊಂಥರ ಇಟ್ಟಿಗೆ ಸಿಮೆಂಟ್ ಕಲ್ಲು ಎಲ್ಲ ವನ್ನು ತಂದು ರಾಶಿ ಹಾಕಿ ಒಮ್ಮೆಲೇ ಮನೆ
ಕಟ್ಟುವ ಹುರುಪಿನಂತೆ. ಆದರೆ ಮನೆ ಕಟ್ಟಲು ಒಂದು ಕ್ರಮವಿದೆ ಅದನ್ನು ನೀವು ಕಲಿಬೇಕು ಅದಕ್ಕೆ ನೀವು ಬಹಳ ಓದಬೇಕು ಅಂದು ತಮ್ಮಲ್ಲಿದ್ದ
ಹಲವಾರು ಪುಸ್ತಕಗಳನ್ನು ನನಗೆ ಓದಲು ಕೊಟ್ಟಿದ್ದರು. ಬರವಣಿಗೆಯ ಮುನ್ನ ಸಂಗ್ರಹಿಸಿದ ವಿಷಯವನ್ನು ಹೇಗೆ ವಿಂಗಡಿಸುವುದು. ಕ್ರಮವಾಗಿ
ಜೋಡಿಸುವುದು ಮತ್ತು ನಿರೂಪಿಸುವುದು ಹೇಗೆ ಅನ್ನುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದರು.

'A teacher is who gives you something to take home to Think about ,besides homework'
ಅವರು ಕಲಿಸುತ್ತಿದ್ದುದೆ ಹಾಗೆ, ಪಾಠಗಳು ನಿಮಿತ್ಯ ಮಾತ್ರ ಆದರೆ ನಿಜವಾದ ಪಾಠಶಾಲೆ ಸಮಾಜ, ಜನಪದವನ್ನು ನಾಲ್ಕು ಗೋಡೆಗಳ ಮಧ್ಯೆ
ಕುಳಿತು ಕಲಿಯಾಲಾಗದು, ನಿಮಗೆ ಅದರ ಗುಂಗು ಹಿಡಿಯಬೇಕು ಅನ್ನುತ್ತಿದ್ದರು ಮತ್ತು ಅದು ನನಗೆ ಹಿಡಿದೇ ಬಿಟ್ಟಿತು. ಕಾಲೇಜಿಗೆ ಹೋಗಲು
ನಾನು ದಿನ ಮುಂಡಗೊಡಿನಿಂದ ಧಾರವಾಡಕ್ಕೆ, ಮತ್ತೆ ವಾಪಸ್ ಮನೆಗೆ ಬರಲು ಬಸ್ನಲ್ಲಿ 150ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ಆ
ಪಯಣದಲ್ಲಿ ದಿನದ ನಾಲ್ಕು ಘಂಟೆಗಳು ವ್ಯಯವಾಗುತಿದ್ದವು, ಅಷ್ಟು ಸಮಯ ನನ್ನ ಆಲೋಚನೆ ಓದು ಬರೀ ಜನಪದವೇ. ಕುರಿಮಂದೆಯ
ಹೆಣ್ಣುಮಗಳ ಕಿವಿಯಲ್ಲಿಯುವ ಬುಗುಡಿ ಯಿಂದ ಅದ್ಯಾರೊ ಹಿಡಿದು ಬಂದ ಕಸೂತಿ ಚೀಲದವರೆಗೆ. ಆಟೋ ರಿಕ್ಷಾ ಹಿಂಬದಿಯ ತಮಾಷೆ
ಬರಹಗಳಿಂದ ಹಿಡಿದು, ಜಗಳದಲ್ಲಿ ಬಳಸಲ್ಪಡುವ ಬೈಗುಳದಲ್ಲಿಯೂ, ಎಲ್ಲಿ ನೋಡಿದರಲ್ಲಿ ಜನಪದವೇ ಕಾಣುತಿತ್ತು.

ಮೇಡಂ ಅವರು ನನ್ನ ಮೇಲೆ ಅಷ್ಟು ಪರಿಣಾಮ ಬೀರಿದ್ದರು ಮಾತಿನಲ್ಲಿ, ಹಾಡಿನಲ್ಲಿ,ಕುಣಿತದಲ್ಲಿ ,ನಡೆಯಲ್ಲಿ ,ಹಿತ್ತಲ ಕಸದಲ್ಲೂ ಜನಪದೀಯ
ಅಂಶಗಳು ಕುಣಿದಾಡುತ್ತಿದ್ದವು. ಆಗ ನನ್ನ ಮನಸು ಬುದ್ದಿ ಅನುಭವಿಸಿದ ಆ ಖುಷಿ, ಆತ್ಮ ಸಂತೃಪ್ತಿಯನ್ನು ಬರಹದಲ್ಲಿ ಹಿಡಿದಿದಲಾಗದು. ಇಷ್ಟು
ವರ್ಷ ನಾನು ಹುಡುಕುತ್ತಿದ್ದುದು ಇದೆ ಏನೋ ಅನ್ನ್ನಿಸುವುದಕ್ಕೆ ಶುರುವಾಗಿದ್ದು ನನ್ನ ಎಲ್ಲ ಚಡಪಡಿಕೆಗಳಿಗೆ ಉತ್ತರ ಜಾನಪದ ಮಾತ್ರವೇ
ನೀಡಬಲ್ಲದು ಎಂಬ ಸತ್ಯ ಅರಿವಾಗಿತ್ತು.

ಇದೆ ಸಮಯದಲ್ಲಿ ಮೇಡಂ ಅವರ ಮತ್ತೊಂದು ಯೋಜನೆಯಿಂದ ನಾನು ಜಾನಪದದ ಮತ್ತೂಂದು ಮಗ್ಗಲು ನೋಡುವಂತಾಯಿತು. ಪ್ರವಾಸೋದ್ಯಮ ಮತ್ತು ಜಾನಪದ ಎಂಬ ವಿಷಯದ ಮೇಲೆ ಮೂರು ದಿನಗಳ ಕಾರ್ಯಾಗಾರ, ನನ್ನ ಸ್ನಾತಕೋತ್ತರ ಅಧ್ಯಯನದ ಇನ್ನೊಂದು ತಿರುವು ಅದು.
ಅಲ್ಲಿ ನಾ ತಿಳಿದ ,ನೋಡಿದ ,ಕಲಿತ ವಿಷಯ ಹಲವು ಅಲ್ಲಿಯ ತನಕ ಸಂಗೀತ ಮತ್ತು ಜಾನಪದವನ್ನು ಜೊತೆಮಾಡಿ ಅದನ್ನೇ ನನ್ನ ಮುಖ್ಯ
ಅಧ್ಯಯನದ ವಿಷಯವನ್ನಾಗಿ ಮಾಡಿಕೊಳ್ಳಬೇಕು, ಸಂಶೋಧನೆಗೆ ಅಣಿಯಾಗಬೇಕು ಅಂದುಕೊಂಡ ನನಗೆ ಜನಪದ ವೈದ್ಯದ ಮೇಲೆ ಪ್ರೀತಿ
ಹುಟ್ಟಿತು. ಅದಕ್ಕೆ ಕಾರಣವಾಗಿದ್ದು ಹೊನ್ನಾವರದ ಜನಪದ ತಜ್ಞೆ ಶ್ರೀಮತಿ ಶಾಂತಿ ನಾಯಕ್ .

ಸೆಮಿನಾರ್ ಮುಗಿಸಿ ಬಂದ ದಿನದಿಂದಲೇ ನಾನು ಮೇಡಂ ಅವರ ಬೆನ್ನು ಬಿದ್ದೆ. ಜನಪದ ವೈದ್ಯದ ಕುರಿತು ಅವರಲ್ಲಿದ್ದ ಅಪರೂಪದ ಪುಸ್ತಕಗಳು
,ಲೇಖನಗಳು, ಅವರಿಗೆ ತಿಳಿದಿದ್ದ ಹಲವಾರು ವಿಷಯಗಳನ್ನು ಸಮಯ ಸಿಕ್ಕಾಗಲೆಲ್ಲ ಚರ್ಚಿಸುತ್ತಿದ್ದರು.ಮತ್ತು ಜನಪದ ವೈದ್ಯದ ಕುರಿತು
ಸಂಶೋಧನೆ ಅಥವಾ ಅಧ್ಯಯನ ಮಾಡುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಮೊದಲೇ ಅವರು ನನಗೆ ಎಚ್ಚರಿಸಲು ಮರೆಯಲಿಲ್ಲ.
ಅವರ ಕಾರಣದಿಂದಲೇ ನಾನು ಶಾಂತಿ ನಾಯಕ್ ,ಏನ್ ಆರ್ ನಾಯಕ್, ಅರವಿಂದ್ ನಾವಡ, ಅಂಬಳಿಕೆ ಹಿರಿಯಣ್ಣ ,ಮತ್ತು ಜಾನಪದ ಲೋಕದ ಹಲವು ದಿಗ್ಗಜರನ್ನು ಭೇಟಿ ಮಾಡಿದೆ.
ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ ಎಂಬ ವಿಷಯದ ಬಗ್ಗೆ ವಿಚಾರ ಕಮ್ಮಟ ಏರ್ಪಡಿಸಿದಾಗ ಅಲ್ಲಿ ಚರ್ಚಿಸಬೇಕಾದ
ವಿಷಯಗಳನ್ನು ಮೇಡಂ ಅದೆಷ್ಟು ಚನ್ನಾಗಿ ಆಯ್ಕೆ ಮಾಡಿದ್ದಾರೆ ವಾಹ್ ಅನ್ನಿಸುತ್ತಿತ್ತು. ಪ್ರತಿಯೊಂದು ವಿಷಯವು ಅನನ್ಯ. ಟಿ ಎಸ ನಾಗಭರಣ
ಅವರನ್ನು ನೇರ ಸಂವಾದಕ್ಕೆ ಕರೆದು ಅದೆಷ್ಟು ಚಂದದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳ ಮುಂದೆ ಇಟ್ಟಿದ್ದರು ಮತ್ತು ಅದು ಅಷ್ಟೇ
ಉಪಯುಕ್ತವಾಗಿತ್ತು.
ಅಂಥದೇ ಇನ್ನೊಂದು ಅನನ್ಯ ಕಾರ್ಯಕ್ರಮ ಶಿರಸಿಯ ಅಜ್ಜಿಮನೆಯಲ್ಲಿ ನಡೆದ ಸ್ಥಳೀಯ ಪರಂಪರಾಗತ ಜ್ಞಾನ ಮತ್ತು ಆರೋಗ್ಯ. ಇಲ್ಲಿ
ಚರ್ಚಿತವಾದ ವಿಷಯಗಳೂ ಅಷ್ಟೇ ಈಗಲೂ ಹಸಿರು ಹಸಿರು ಕೆಲವೊಮ್ಮೆ ಶಿಬಿರದ ನಡುವೆ ಮೇಡಂ ನಮಗೆ ವಿಷಯ ಸಂಬಂಧಿ ಪ್ರಶ್ನೆ
ಕೇಳುತ್ತಿದ್ದರು, ಮತ್ತು ಸಂಪನ್ಮೂಲ ವ್ಯಕ್ತಿ ಮಾತನಾಡುತ್ತಿರುವ ವಿಷಯಕ್ಕೆ ನಾವು ಎಷ್ಟರ ಮಟ್ಟಿಗೆ ಕನೆಕ್ಟ್ ಆಗಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ
ಪರಿಶೀಲಿಸುತ್ತಿದ್ದರು , ಈ ದಿಸೆಯಲ್ಲಿ ನಾವು ಭೇಟಿಯಾದದ್ದು ಅಪರೂಪದ ವಿಜ್ಞಾನಿ ಪಲ್ಲತಡ್ಕ ಕೇಶವ ಭಟ್ಟ್ ಅವರನ್ನ , ಈ ರೀತಿಯ ಅನನ್ಯ
ವಿಚಾರ ಮತ್ತು ದೃಷ್ಟಿಕೋನ ಮತ್ತು ಸರಳತೆ ಮೇಡಂ ಅವರನ್ನು ಮತ್ತೂ ಹೆಚ್ಚು ಗೌರವಿಸುವಂತೆ ಮಾಡುತ್ತಿದ್ದವು ,

ಆ ವರೆಗೆ ಮೇಡಂ ಅಂದರೆ ನನಗೆ ನನ್ನ ದೊಡ್ಡಮ್ಮ ಚಿಕ್ಕಮ್ಮ ಸೋದರತ್ತೆ ರೂಪದಲ್ಲೇ ಕಂಡಿದ್ದರು. ಅವರು ಯಾವತ್ತು ಸಿಟ್ಟು ಮಾಡಿದ್ದು,
ಜೋರಾಗಿ ಮಾತಾಡಿದ್ದು,ತಾಳ್ಮೆ ಕಳೆದುಕೊಂಡಿದ್ದು ನಾನು ನೋಡೇ ಇಲ್ಲ. ಎಂಥ ಕಠಿಣ ಪರಿಸ್ಥಿತಿಯಲ್ಲೂ ಅವರೊಂದು ಹೊಸ ವಿಚಾರ ಹುಡುಕಿ
ಅದನ್ನು ಹಿಂಬಾಲಿಸಲು ಹೊರಡುತ್ತಿರುವಂತೆ ನನಗೆ ಭಾಸವಾಗುತಿತ್ತು.
ಅದು ನನ್ನ ಕೊನೆ ಸೆಮಿಸ್ಟರ್. ನಾವು ಕ್ಷೇತ್ರ ಕಾರ್ಯ ಮಾಡಿ ನಿಬಂಧವಿ ಬರೆದು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಬೇಕಿತ್ತು. ನಾನು ಆಯ್ದು
ಕೊಂಡಿದ್ದು ಬಾಣಂತಿ, ನವಜಾತ ಶಿಶುವಿನ ಆರೈಕೆ ಮತ್ತು ಜನಪದ ವೈದ್ಯ ಪದ್ಧತಿ. ಆಗ ಮಾತ್ರ ಮೇಡಂ ಅವರ ಇನ್ನೊಂದು ರೂಪ ನೋಡಿದ್ದು.
ನಾನು ಅತಿ ಭಾವುಕಿ, ಸಿನಿಮ ಕಾದಂಬರಿ ಭಾವಗೀತೆ,ಗಝಲ್ ಹುಚ್ಚು ಇದ್ದಿದ್ದಕ್ಕೋ ಏನೋ ನನ್ನ ಬರವಣಿಗೆ ಒಂದು ವಿಚಿತ್ರ ಧಾಟಿಯಲ್ಲಿ
ಇರುತಿತ್ತು.

ರಜಾ ಅರ್ಜಿಯನ್ನೂ ಕವಿತೆಯಂತೆ ಬರೆಯುತ್ತಿದ್ದೆ. ನಿಬಂದ ಬರೆಯುವಾಗ ನನ್ನ ಅದೇ ಬರವಣಿಗೆ ಮುಂದುವರಿಯಿತು , ಮೇಡಂ ನಾಲ್ಕು ಬಾರಿ
ನನ್ನ ಕರಡು ಪ್ರತಿಯನ್ನು ಸರಿ ಇಲ್ಲ ಎಂದು ಮರಳಿಸಿ ಬಿಟ್ಟರು. ಅದು ಕೊನೆ ಹಂತ ನನ್ನಲ್ಲಿ ಸಾಕಷ್ಟು ಮಾಹಿತಿ ಇತ್ತು ಬರವಣಿಗೆ ಸಂಪೂರ್ಣ
ಗೊಂಡಿತ್ತು. ಯಾಕೆ ?ಏನು ತಪ್ಪು ಎಂಬುದು ಅರಿವಿಗೆ ಬರಲಿಲ್ಲ ,ಮತ್ತೆ ಕೊಟ್ಟೆ ಆಗ ಅಂದರು; ನಿಮ್ಮ ತಪ್ಪು ನಿಮಗೆ ಗೊತ್ತಾಗುತ್ತೆ ಅಂದುಕೊಂಡೆ.
ನೀವು ಅದನ್ನು ಗಮನಿಸಿಯೇ ಇಲ್ಲ ಆದಷ್ಟು ಸರಳ ವಾಕ್ಯಗಳನ್ನು ಬಳಸಿ. ನೇರ ವಿಷಯಗಳನ್ನು ಹೇಳುವಾಗ ಅಷ್ಟೇ ದೃಡವಾಗಿ ನೇರವಾಗಿ
ಹೇಳಬೇಕು ಮತ್ತು ಅದಕ್ಕೊಂದು ಚೌಕಟ್ಟಿರಬೇಕು ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಬರೆಯೋದಲ್ಲ ಅಂದು ಮತ್ತೆ ವಾಪಸ್ ಮಾಡಿದ್ದರು.
ಬಸ್ಸಿನಲ್ಲಿ ಕುಳಿತು ಮತ್ತೆ ಹಾಳೆಗಳನ್ನು ತಿರುವಿದೆ ಪ್ರತಿ ಪುಟದಲ್ಲೂ ಅವರ ಅಕ್ಷರಗಳು. ಅಷ್ಟೂ ಪುಟಗಳನ್ನು ಓದಿ ಮಾರ್ಕ್ ಮಾಡಿ ಕೊಟ್ಟಿದ್ದರು.
ಅದನ್ನು ಹೇಗೆ ಬರೆಯಬಹುದು ಅನ್ನುವುದನ್ನು ಸೂಚ್ಯವಾಗಿ ಹೇಳಿದ್ದರು ಆಗಲೇ ಅನ್ನಿಸಿದ್ದು, ಕಾವ್ಯಾತ್ಮಕ ಬರವಣಿಗೆ ಮತ್ತು ನೇರ ಬರವಣಿಗೆ
ಅದೆಷ್ಟು ದೂರ ದೂರ. ಸ್ವಲ್ಪ ಆಯ ತಪ್ಪಿದರು ಅರ್ಥ ಅಪಾರ್ಥ ಆಗುವ ಸಂಭವ ಇರುತ್ತದೆ ಅಧ್ಯಯನ ಪ್ರಬಂಧ ಲಲಿತ ಪ್ರಬಂಧವಾಗುವ
ಸಾಧ್ಯತೆ ಇರುತ್ತದೆ. ಅದನ್ನು ಮೇಡಂ ನನಗೆ ಅದೆಷ್ಟು ಚನ್ನಾಗಿ ಅರ್ಥ ಮಾಡಿಸಿದ್ದರು.

ಜಾನಪದ ದ ಬಗ್ಗೆ ಮಾತಾಡುವ ಹಲವರು ಜನಪದ ಕಲಾವಿದರನ್ನು ನಡೆಸಿಕೊಳ್ಳುವ ರೀತಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಜನಪದ
ಉಳಿಸಿ ಬೆಳೆಸಿ ಅನ್ನುತ್ತಾ ಭಾಷಣ ಮಾಡಿ ಹಾರ ತುರಾಯಿ ಹಾಕಿಸಿಕೊಂಡು, ಕಾರಿಡಾರಿನಲ್ಲಿ ನಡೆಯುವಾಗ ಅದೇ ಮಗ್ಗುಲಲ್ಲಿ ಕುಳಿತ ಜನಪದ
ಕಲಾವಿದರಿಗೆ ನಕ್ಕು ನಮಸ್ಕರಿಸಿದ ದೊಡ್ಡ ವಿದ್ವಾಂಸರೂ ಈ ಕ್ಷೇತ್ರದಲ್ಲಿ ಇದ್ದಾರೆ.
ಅಂಥಹ ಸಂದರ್ಭದಲ್ಲಿ ನಮ್ಮ ವಿಶ್ವವಿದ್ಯಾಲಯಕ್ಕೆ ಜನಪದ ಕಲೆಗಳು ಪ್ರಾಯೋಗಿಕ ಪರೀಕ್ಷೆಗಳಿಗೆಂದು ಹಾಲಕ್ಕಿ ಸುಗ್ಗಿ, ಕೋಲಾಟ ಕಲಿಸಲು ಬಂದ ಕಲಾವಿದರನ್ನು ಅದೆಷ್ಟು ಆತ್ಮೀಯವಾಗಿ ಮಾತನಾಡಿಸಿ, ಅವರ ಯೋಗಕ್ಷೇಮ ವಿಚಾರಿಸಿ ,ಅವರೊಂದಿಗೆ ಅದೆಷ್ಟು ಸರಳತೆಯಿಂದ
ಸಜ್ಜನಿಕೆಯಿಂದ ವರ್ತಿಸುವ ಮೇಡಂ.ಅವರ ಊಟ ತಿಂಡಿ ವಸತಿ ಬಗೆಗೆ ಮನೆ ಮಂದಿಯ ಬಗ್ಗೆ ವಹಿಸುವ ಕಾಳಜಿಯನ್ನೇ ತೋರಿಸುವುದು
ನೋಡಿದಾಗ ಅವರು ತುಂಬಿದ ಕೊಡ ಅನಿಸಿದ್ದು ಅದೆಷ್ಟು ಸಲವೂ.

ಹಾಗೆ ಒಂದು ದಿನ ಅವರ ಆಫೀಸ್ ನಲ್ಲಿ ನಾನು ಯಾವುದೊ ವಿಷಯ ಅವರೊಂದಿಗೆ ಚರ್ಚಿಸುತ್ತಿದ್ದಾಗ ,ಆಗಷ್ಟೇ ಪಿ ಹೆಚ್ ಡಿ ಸೇರಿಕೊಂಡ ನನ್ನ
ಸಿನಿಯರ್ ಒಬ್ಬರಿಗೆ ಲಕೊಟೆ ಒಂದನ್ನು ಕೊಟ್ಟರು. ನಿಮ್ಮ ಸ್ಕಾಲರ್ಷಿಪ್ ಬರೋತನಕ ಸುಮಾರು ಕೆಲಸ ಮಾಡಲಿಕ್ಕೆ ಇರುತ್ತದೆ, ಮತ್ತು ಖರ್ಚು
ಆಗುತ್ತೆ ಇದು ನನ್ನ ಪುಟ್ಟ ಸಹಾಯ ನಿಮಗೆ.ಅಧ್ಯಯನ ಚೆನ್ನಾಗಿ ನಡೀಲಿ ಎಂದು ಆಶೀರ್ವದಿಸಿದರು. ಆ ವಿದ್ಯಾರ್ಥಿ ಹೊರಗೆ ಹೋದ ನಂತರ
ಪ್ರತಿ ವರ್ಷ ಯೋಗ್ಯ ಅನಿಸಿದ ಒಬ್ಬ ವಿದ್ಯಾರ್ಥಿಗೆ ನನ್ನ ಪತಿಯ ಸ್ಮರಣಾರ್ಥ ಒಂದಷ್ಟು ಸಹಾಯ ಮಾಡ್ತೇನೆ ನನ್ನ ಮನಸಿನ ನೆಮ್ಮದಿಗೆ ಅಂದರು ಆ ದಿನ ಅವರ ಮತ್ತೊಂದು ಅನನ್ಯತೆ ನನಗೆ ಕಾಣಿಸಿತ್ತು.

ನನಗನಿಸಿದ ಪ್ರಕಾರ ಅವರ ಸೃಜನ ಶೀಲತೆ ,ಮತ್ತು ನವೀನ ಆಲೋಚನೆಗಳು ಅವುಗಳನ್ನು ಕಾರ್ಯಗತ ಮಾಡುವಲ್ಲಿ ಹಲವಾರು ಬಾರಿ
ಪೂರಕ ವಾತಾವರಣ ಇರುತ್ತಿರಲಿಲ್ಲ ಸಿಬ್ಬಂದಿ ಸಹಕಾರ ,ಕೆಲವೊಮ್ಮೆ ವಿದ್ಯಾರ್ಥಿಗಳ ನಿರಾಸಕ್ತಿ ಅವರಿಗೆ ಬೇಸರ ತರುತ್ತಿತ್ತು, ಆದರೆ ಎಂದು ಆ
ಕಾರಣ ಕೊಟ್ಟು ಯಾವುದೇ ಯೋಜನೆಯನ್ನು ಅವರು ಕೈಬಿಟ್ಟಿಲ್ಲ. ಜನಪದ ಸಂಗ್ರಹಾಲಯ ಮತ್ತು ಅದಕ್ಕೆ ವಸ್ತುಗಳನ್ನು ಪೇರಿಸುವ ಕೆಲಸದಲ್ಲಿ
ಅವರು ತೋರಿಸುತ್ತಿದ್ದ ಆಸಕ್ತಿ ಪುಟ್ಟ ಮಗು ಹೊಸ ವಿಷಯಕ್ಕೆ ತೋರುವ ಉತ್ಸಾಹದಂಥದ್ದು.

ಒಮ್ಮೆ ನನಗೆ ರಂಗಗೀತೆ ಗಳ ಬಗ್ಗೆ ಸ್ವಲ್ಪ ವಿವರಣೆಗಳು ಬೇಕಿದ್ದವು. ನಾನು ಅವರನ್ನು ಆ ಬಗ್ಗೆ ಕೇಳಿದ್ದೆ ಮತ್ತು ಅದನ್ನು ಮರೆತು ಬಿಟ್ಟಿದ್ದೆ. ಆದರೆ
ಅವರು ತಮ್ಮ ಸಂಗ್ರಹದಲ್ಲಿನ ಪುಸ್ತಕ ಹುಡುಕಿ ಮತ್ತೆ ಸಂಜೆ ನನಗೆ ಫೋನ್ ಮಾಡಿದ್ದರು ನಾಳೆ ಪುಸ್ತಕ ತಗೊಂಡ್ ಹೋಗು ಅದು ಸಿಕ್ಕಿದೆ ಎಂದಾಗ ಅವರು ಆಸಕ್ತ ವಿದ್ಯಾರ್ಥಿಗಳಿಗಾಗಿ ಕೊಡುತ್ತಿದ್ದ ಸಮಯ ಮತ್ತು ಪ್ರಾಮುಖ್ಯತೆ ಅರಿವಿಗೆ ಬಂದಿತ್ತು.
ಕಲಿಯುವ ಮನಸ್ಸಿರುವ ವಿದ್ಯಾರ್ಥಿಗೆ ಇಂಥ ಒಬ್ಬ ಗುರು ದಕ್ಕಿದರೆ ಆ ವಿದ್ಯಾರ್ಥಿಯ ಭವಿಷ್ಯ ಉಜ್ವಲ ವಾದಂತೆಯೇ. ಕಲಿಯುವ ಪಾಠ
ಪಾಠವಾಗಿರದೆ ಅದು ಬದುಕಿಗೆ ಇಂಬುಕೊಡುವ ವಿದ್ಯೆಯಾಗಿತ್ತದೆ.

ನನ್ನ ನೆರವೇರದ ಆಸೆ ಎಂದರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಬೇಕು ಎಂಬುದು. ಸ್ನಾತಕೋತ್ತರ ಅಧ್ಯಯನ ಮುಗಿದ ನಂತರ ನಾನು ಬೆಲ್ಫಾಸ್ಟ್ ಬಂದು ಸೇರಿದೆ. ವಿಶ್ವವಿದ್ಯಾಲಯದ ಕೆಲವು ನಿಯಮಗಳು ಕಲಿಯುವ ತುಡಿತವಿರುವ ವಿದ್ಯಾರ್ಥಿಗಳಿಗೆ ಬೇಲಿ ಹಾಕಿಬಿಡುತ್ತವೆ.
ಆದರೂ ಇಂದಿಗೂ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವೆ. ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ಜನಪದ ನನ್ನ ಕೈಹಿಡಿದು
ಮುನ್ನಡೆಸಿದೆ ಈಗಲೂ ನಾ ಅವರಿಗೆ ಫೋನ್ ಮೂಲಕ ಸಂಪರ್ಕಿಸಿದರೆ ಅದೇ ಆತ್ಮೀಯತೆ ಅಷ್ಟೇ ಆಪ್ಯಾಯತೆ ಅಕ್ಕರೆ. “ಶಾನಭಾಗ್ ಊರಿಗೆ
ಬಂದೀರ?” ಎನ್ನುತ್ತಲೇ ಮಾತು ಶುರುಮಾಡಿ ಅದೆಷ್ಟು ವಿಷಯ, ಉಲ್ಲೇಖ, ನೆನಪು ಹಂಚಿಕೊಳ್ತಾರೆ. ನನ್ನ ಬಾಲಿಶ ಪ್ರಶ್ನೆಗಳಿಗೆ ತಾಳ್ಮೆಯಿಂದ
ಉತ್ತರಿಸುತ್ತಾರೆ , ಅವರ ಶಿಷ್ಯೆ ಅವರ ವಿದ್ಯಾರ್ಥಿನಿ ಅನ್ನಲು ನನಗೆ ಯಾವತ್ತಿಗೂ ಹೆಮ್ಮೆ.