ನೀವು ಬೆಂಜಮಿನ್ ರೈಸ್ ನ ಬಗ್ಗೆ ಹೆಚ್ಚಿಗೆ ಕೇಳದಿದ್ದರೆ ಏನೂ ಆಶ್ಚರ್ಯ ಇಲ್ಲವೇನೋ. ಆದರೆ ಈತ ನಮ್ಮ ಹಳೆಯ ಮೈಸೂರ್ ದೇಶದಲ್ಲಿ ಸುಮಾರು ೧೨೦ ವರ್ಷಗಳ ಹಿಂದೆ ಮೊದಲನೆಯ ಬಾರಿಗೆ ಪ್ರಾಥಮಿಕ ಶಿಕ್ಷಣವನ್ನು (Primary Education) ಸ್ಟಾಪಿಸಿದವರು. ಸಾವಿರಾರು ಹಳೆಯ ಕನ್ನಡ ಮತ್ತು ಸಂಸ್ಕೃತ ಗ್ರಂಥಗಳು ಮತ್ತು ಶಾಸನಗಳನ್ನು ಸಂಗ್ರಹಿಸಿ ಮೊದಲ ಬಾರಿಗೆ ಜನಗಳಿಗೆ ಪರಿಚಯ ಮಾಡಿದವರು.
೧೭/೦೭/೧೮೩೭ ನಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಬೆಂಜಮಿನ್ ಹೋಲ್ಟ್ ರೈಸ್ ಅವರು ೧೮೦೦ ನಲ್ಲಿ ಇಂಗ್ಲೆಂಡ್ ನಿಂದ ಬಂದವರು. ಇವರು ಕನ್ನಡದಲ್ಲಿ ಪಾಂಡಿತ್ಯ ಪಡೆದು ನಮ್ಮ ಚರಿತ್ರೆ, ಭೂಗೋಲ ಮತ್ತು ಗಣಿತದ ಪುಸ್ತಕಗಳನ್ನು ಬರೆದರು. ಕನ್ನಡದಲ್ಲಿ ಮೊದಲ ಬೈಬಲ್ ಇವರದ್ದೆ. ಬೆಂಗಳೂರಿನಲ್ಲಿ ಈಗಲೂ Rice Memorial Church ಇದೆ. ಬೆಂಜಮಿನ್ ಲೂಯಿಸ್ ರೈಸ್ ಅವರ ಪ್ರಾಥಮಿಕ ವಿಧ್ಯಾಬ್ಯಾಸ ಬೆಂಗಳೂರಿನಲ್ಲಿ , ೧೮೬೦ ನಲ್ಲಿ ಕೇಂಬ್ರಿಜ್ ನಲ್ಲಿ ಬಿ ಎ ಪದವಿ ಪಡೆದು ಮೈಸೂರಿಗೆ ಹಿಂತಿರಿಗಿ ಬೆಂಗಳೂರು ಸೆಂಟ್ರಲ್ ಹೈಸ್ಕೂಲ (ಈಗಿನ ಸೆಂಟ್ರಲ್ ಕಾಲೇಜ್ )ನ ಪ್ರಿನ್ಸಿಪಾಲ್ ಆಗಿ ಸೇರಿದರು.
ಈತ ಕನ್ನಡ, ಹಿಂದಿ, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ ಪಾಂಡಿತ್ಯ ಪದೆದವರು. ೫ ವರ್ಷದ ನಂತರ Inspector of Schools ಆದರು. ಈ ಹುದ್ದೆಯಲ್ಲಿ ಮೈಸೂರು ಪ್ರಾಂತದ ಎಲ್ಲ ಭಾಗಗಳಿಗೂ ಹೋದಾಗ ನೂರಾರು ಶಿಲಾ ಶಾಸನ ಗಳನ್ನು ಸ್ಥಳೀಯ ಜನರ ಸಹಾಯ ದಿಂದ ಹಳೆ ಕನ್ನಡದಿಂದ ಅಧುನಿಕ ಕನ್ನಡಕ್ಕೆ ಭಾಷಾಂತರಿಸಿದರು. ಇದಲ್ಲದೆ ಅನೇಕ ತಾಳೆಗೆರೆ ಮತ್ತು ತಾಮ್ರ ಶಾಸನಗಳನ್ನು ಸಹ ಸಂಗ್ರಹಿಸಿದರು. ಇವೆಲ್ಲವನ್ನು Epigraphia Carnatica ದಲ್ಲಿ ೧೨ ಸಂಪುಟಗಳಲ್ಲಿ ಪ್ರಕಟಿಸಿದರು. ಅವರ ಸಂಗ್ರಹದಲ್ಲಿ ಸುಮಾರು ೯೦೦೦ ಶಾಸನಗಳ ಪ್ರತಿ ಇವೆ. ಇದರಿಂದ ಮೈಸೂರು ದೇಶದ ಎರಡು ಸಾವಿರ ವರ್ಷ ದ ಸಾಮಾಜಿಕ ಜೀವನದ ಚರಿತ್ರೆ ಪರಿಚಯ ಉಂಟಾಯಿತು.
೧೮೭೩ ರಲ್ಲಿ ಡಿ ಪಿ ಐ (Director of Public Instruction) ಆಗಿ, ಪ್ರಾಥಮಿಕ ಶಿಕ್ಷಣವನ್ನು( Primary Education) ಸ್ಟಾಪಿಸಿದರು.ಪ್ರತಿ ಹೋಬಳಿ ಯಲ್ಲೂ ಒಂದು ಶಾಲೆ ಸ್ಥಾಪಿಸಿದವರು ಇವರೆ. ಆದರೆ ಇವರ ಗುರಿ ಇದ್ದುದು ಪ್ರತಿ ಹಳ್ಳಿಯಲ್ಲಿ ಸಹ ಶಾಲೆ ಇರಬೇಕು ಅಂತ. ಆದರೆ ಸರಿಯಾದ ಉಪಾಧ್ಯಾಯರ ಕೊರತೆ ಇದ್ದದ್ದರಿಂದ ಈ ಯೋಜನೆ ಜಾರಿಗೆ ಬರಲು ಸ್ವಲ್ಪ ಕಷ್ಟ ಆಯಿತು. ಆಗಿನ ಮಹಾರಾಜರ ಆಡಳಿತದಲ್ಲಿ ಇವರನ್ನು ಮೈಸೂರಿನ ಜನಗಣತಿ ಮಾಡಲು ನೇಮಿಸಲಾಯಿತು. ಮುಂದೆ, ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಇಡೀ ಭಾರತದ ಶಿಕ್ಷಣ ನೀತಿಗೆ( Education Policy) ನಾಂದಿ ಹಾಕಿದರು.
೧೮೮೪ ನಲ್ಲಿ Director of Archaeology ಆಗಿ ಕೆಲಸ ಶುರು ಮಾಡಿದರು. ಅಶೋಕನ ಕಾಲದ ಹಲವಾರು ಶಾಸನಗಳು, ರೋಂ ಸಾಮ್ರಾಜ್ಯದ ನಾಣ್ಯ ಮುಂತಾದವು ಸಿಕ್ಕಿದ ಮೇಲೆ ನಮ್ಮ ದೇಶದ ಚರಿತ್ರೆ ಅನೇಕರಿಗೆ ಪರಿಚಯ ವಾಯಿತು. ನೇಪಾಳದ ರಾಜವಂಶವನ್ನು ಪ್ರಾರಂಬಿಸಿದ ನನ್ಯದೇವ, ಕರ್ನಾಟಕದ ಗಂಗ ವಂಶದವನು ಅಂತ ಸಾಧಿಸಿದ್ದು ರೈಸ್ ಅವರ ಹೆಗ್ಗಳಿಕೆ.
೧೮೭೬ ಮತ್ತು ೧೮೯೭ ರಲ್ಲಿ Mysore Gazetteer ಇವರ ಇನ್ನೊಂದು ಮಹತ್ಸಾಧನೆ. ಇದರಲ್ಲಿ ಇವರು ಬರೆದ ಮೈಸೂರು ಮತ್ತು ಕೂರ್ಗ್ ಪ್ರದೇಶದ ಪಟ್ಟಣ ಮತ್ತು ಕೆಲವು ಹಳ್ಳಿಗಳ ಚರಿತ್ರೆ ಸಿಗುತ್ತದೆ.
೧೯೦೬ ಇವರು ನಿವೃತ್ತಿ ಆಗುವ ಮುಂಚೆ Bibliotheca Carnatica, a collection of all major literary Texts in Kannada ಎಂಬ ಲೇಖನ ಸಂಗ್ರಹವನ್ನು ೬ ಸಂಪುಟದಲ್ಲಿ ಪ್ರಕಟಿಸದರು ಸುಮಾರು. ಅದರಲ್ಲಿ ೩೦೦ ಕನ್ನಡ ಸಾಹಿತಿಗಳು ಮತ್ತು ಕವಿಗಳ ಬಗ್ಗೆ ವಿವರವಾಗಿ ಪ್ರಸ್ತಾಪನೆ ಮಾಡಿದ್ದಾರೆ. ರೈಸ್ ಅವರಿಗೆ ನಮ್ಮ ಭಾಷೆ, ಚರಿತ್ರೆ ಮತ್ತು ಧಾರ್ಮಿಕ ಸಹಿಷ್ಣುತೆ ಮೇಲೆ ಬಹಳ ಹೆಮ್ಮೆ ಇತ್ತು.
೧೯೦೬ ರಲ್ಲಿ ತಮ್ಮ ೬೯ ನೆಯ ವಯಸ್ಸಿಗೆ ಹುಟ್ಟಿದ ಬೆಂಗಳೂರು ಬಿಟ್ಟು ಇವರು ಕುಟುಂಬ ಸಮೇತ ಇಂಗ್ಲೆಂಡ್ ಗೆ ತೆರಳಿದರು. ಅಲ್ಲೂ ಕನ್ನಡ ಭಾಷೆ ಮರೆಯಲ್ಲಿಲ್ಲ. ೧೯೨೪ ರಲ್ಲಿ ಲಂಡನ್ ನಲ್ಲಿ ಒಂದು ವಸ್ತುಪ್ರದರ್ಶನ (exhibition) ದಲ್ಲಿ ಕೆಲ ಕನ್ನಡಿಗರನ್ನು ಭೇಟಿಯಾದರು. ಅವರಲ್ಲಿ ಒಬ್ಬಾತ ಇಂಗ್ಲಿಷ್ ನಲ್ಲಿ ಮಾತನಾಡಲು ರೈಸ್ ಅವರು “ಅಯ್ಯಾ ಕನ್ನಡದಲ್ಲಿ ಮಾತನಾಡೋಣ , ಮುದ್ದಿನ ಕನ್ನಡ ನನ್ನ ಕಿವಿಗೆ ಬಿದ್ದು ಬಹಳ ದಿನಗಳಾದವು” ಎಂಬ ಉದ್ಗಾರ ತೆಗೆದರಂತೆ!
ತಮ್ಮ ಸ್ನೇಹಿತರಾಗಿದ್ದ ಶ್ರೀ ನರಸಿಂಹಾಚಾರರಿಗೆ ೧೯೨೭ ಏಪ್ರಿಲ್ ನಲ್ಲಿ ಬರೆದ ಸಂದೇಶದಲ್ಲಿ ಹೀಗೆ ಬರೆದಿದ್ದಾರೆ: “remember me to all my love to Mysore is unending”
೧೦-೦೭-೧೯೨೭ ರಲ್ಲಿ ರೈಸ್ ಅವರು ನಿಧನರಾದರು. ಇವರು೪೩ ವರ್ಷಗಳ ಕಾಲ ಕನ್ನಡಕ್ಕೆ ಮಾಡಿದ ಸೇವೆ ಎಂದಿಗೂ ಮರೆಯುವ ಹಾಗಿಲ್ಲ.
ಡಾ ರಾಜಾರಾಂ ಕಾವಳೆಯವರು ಈಗಾಗಲೇ ತಮ್ಮ ಲೇಖನಗಳಿಂದ ‘ಅನಿವಾಸಿ’ಗೆ ಚಿರಪರಿಚಿತರು. ಯು ಕೆ ಕನ್ನಡಬಳಗದ ಪ್ರಾರಂಭದಿಂದ ಅದರ ಬೆಂಬಲಿಗರಾಗಿ, ಪೋಷಕರಾಗಿ ಅಲ್ಲದೇ ಈಗಲೂ ಸತತವಾಗಿ ಅದರ ಸಂವಹನದ ಸೂತ್ರಧಾರರಾಗಿ ಅವಿರತ ದುಡಿಯುತ್ತಿದ್ದಾರೆ. ಅವರು ಇಲ್ಲಿಯ ಕನ್ನಡಿಗರ ಹೆಮ್ಮೆ. ಎಂತಲೇ ಕಳೆದ ಬಳಗದ ಕೂಟದಲ್ಲಿ ಅವರಿಗೆ ಸನ್ಮಾನ ಮಾಡಲಾಗಿದೆ. ಈ ಅಪರೂಪದ ಲೇಖನದಲ್ಲಿ ಹೆಚ್ಚಿನ ಜನರಿಗೆ ಪರಿಚಯವಿಲ್ಲದ ಆಧುನಿಕ ಅಂದರೆ ಇಪ್ಪತ್ತನೆಯ ಶತಮಾನದ ಕನ್ನಡ ಯೋಧನ ಬಗ್ಗೆ ಸ್ವಾರಸ್ಯಕರ ಬರವಣಿಗೆಯನ್ನು ಉಣಪದಿಸಿದ್ದಾರೆ. ಇನ್ನು ಓದಿರಿ …
ನಮ್ಮ ಬೆಂಗಳೂರು ಮೆಡಿಕಲ್ಕಾಲೇಜು 2005ನೆಯ ಡಿಸಂಬರಿನಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿತು. ಈ ಮೂರು ದಿನಗಳ ಆಚರಣೆಯಲ್ಲಿ ನಾನು ಪಾಲ್ಗೊಂಡಿದ್ದೆ. ಹಲವುದಿವಸಗಳ ಮೊದಲು ಕಾಲೇಜಿಗೆ ತೆರಳಿ ಆ ಮಹೋತ್ಸವಕ್ಕೆ ನೊಂದಣೆಮಾಡಿ, ಊರಿನ ಬದಲಾವಣೆಗಳನ್ನು ನೋಡಲು ಬಸವನಗುಡಿಯಲ್ಲಿದ್ದ ನನ್ನ ತಮ್ಮನ ಮನೆಗೆ ನಡೆದುಕೊಂಡೇ ಹೋದೆನು. ಪ್ರಸಿದ್ಧವಾದ ಕೆ ಆರ್ ರೋಡಿನಲ್ಲಿಇದ್ದ ಬೃಹತ್ ಸಾಲುಮರಗಳು ಮಾಯವಾಗಿದ್ದವು. ಅವುಗಳ. ಬದಲು ಹಾಕಿದ್ದ ಇತರ ಮರಗಳೂ ದೊಡ್ಡದಾಗಿ ಬೆಳೆದಿದ್ದವು. ಇವುಗಳು ನಾನು ಬೆಂಗಳೂರನ್ನು ಬಿಟ್ಟು ಎಷ್ಟು ವರ್ಷಗಳಾಗಿದ್ದವು ಎಂಬುದನ್ನು ಸೂಚಿಸುತ್ತದೆ. ಆ ರಸ್ತೆಯಲ್ಲಿ ಗುರುತೇ ಸಿಗದಂತಹ ಅನೇಕ ಕಟ್ಟಡಗಳೂ ಗಿಡಗಳು ಉದಯಿಸಿ ನಾನು ಎಲ್ಲಿದ್ದೇನೆಂಬುದೂ ನನಗೆ ಸಂಶಯ ಬಂದಿತ್ತು. ಗಡಿಯಾರದ ಗೋಪುರವಿದ್ದ ನನ್ನ ನೆಚ್ಚಿನ ನ್ಯಾಷನಲ್ ಹೈಸ್ಕೂಲಿನ ಕಟ್ಟಡವು ಅಡ್ಡಲಾಗಿ ಬಂದ ಹೊಸಕಟ್ಟಡದಿಂದ ಮರೆಯಾಗಿದ್ದಿತು. ಹತ್ತಿರವೇ ಇದ್ದ ವಾಣಿವಿಲಾಸ್ ವೃತ್ತವು ಪಾಳುಬಿದ್ದು ಅದರಲ್ಲಿ ಇದ್ದ ’ಐದು ಲಾಂದ್ರದ ಕಂಬ’ ಮುರಿದು ಅಡ್ಡಲಾಗಿ ಬಿದ್ದಿತ್ತು. ಈಗ ಆ ಜಾಗದಲ್ಲಿ ಒಂದು ಮೇಲುಹಾದಿಯನ್ನು ಕಟ್ಟುತ್ತಿದ್ದರು, ಅದಕ್ಕೆ ’ನರಸಿಂಹಯ್ಯಫ್ಲಯ್ಒವರ್’ ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಜಾಗವನ್ನು ದಾಟಿ ಅದೇ ರಸ್ಥೆಯಲ್ಲಿ ಮುಂದುವರೆದು ನನ್ನ ತಮ್ಮನ ಮನೆಗೆ ತೆರಳಿದೆನು. ಅಲ್ಲೇ ಇದ್ದ ಅಡ್ಡರಸ್ಥೆ ಹೆಚ್ ಬಿ ಸಮಾಜ ರಸ್ಥೆಯ ಮೂಲೆಗೆ ಬಂದು ನಿಲ್ಲಲು, ನನ್ನ ಮನಸ್ಸಿನಲ್ಲಿ ಹಳೆಯ ನೆನಪುಗಳು ಹರಿಯತೊಡಗಿದವು. ನನ್ನ ಕಣ್ಣುಗಳು ಮಂಜಾದವು, ನನ್ನ ಕಿವಿಗಳು ಮಂದವಾದವು, ಚಲಿಸುತ್ತಿದ್ದ ವಾಹನಗಳು ನಿಶ್ಶಬ್ದವಾದವು. ನನ್ನ ಮನಸ್ಸು ನನ್ನನ್ನು ನನ್ನ ಬಾಲ್ಯಕ್ಕೆ ಕೊಂಡೊಯ್ಯಿತು.
ಪೊಲೀಸಿನ ಗುಂಡಿಗೆ ಹತನಾದ ಯುವಕ
ದಾಸಪ್ಪನ ಮಗ ಪೊಲೀಸಿನ ಗುಂಡಿಗೆ ಬಲಿಯಾದ ಸ್ಥಳ. ಹೆಚ್ ಬಿ ಸಮಾಜ ರಸ್ಥೆ ಮತ್ತು ಕೆ ಆರ್ ರೋಡು ಸೇರುವ ಜಾಗದಲ್ಲಿ (Photo t by Sundar Raj Cavale taken on 5th October 2015)
ಆ ದಿನ ವರಮಹಾಲಕ್ಷ್ಮಿಯ ಹಬ್ಬದ ದಿನವಾಗಿದ್ದಿತು ನಮಗೆಲ್ಲರಿಗೂ ಸಂಭ್ರಮವೇ ಸಂಭ್ರಮ. ನಮ್ಮ ಮನೆ, ಚಿಕ್ಕಪ್ಪನವರ ಮನೆ ಮತ್ತು ಸೋದರತ್ತೆಯ ಮನೆಗಳು ಒಂದರ ಪಕ್ಕದೊಂದರಲ್ಲಿದ್ದವು. ಒಳ ಕಾಂಪೌಂಡುಗಳಲ್ಲಿದ್ದ ಗೇಟುಗಳ ಮೂಲಕ ನೆಂಟರೆಲ್ಲರೂ ಮಕ್ಕಳ ಸಮೇತ ತೆರಳಿ ನಮ್ಮ ಸೋದರತ್ತೆಯವರ ಮನೆಯಲ್ಲಿ ಊಟಕ್ಕೆ ಕುಳಿತ್ತಿದ್ದೆವು. ರುಚಿಯದ ಊಟವನ್ನು ಎಲ್ಲರೂ ಸವಿಯುತ್ತಿದ್ದೆವು. ನಾವು ಮಕ್ಕಳೂಸೇರಿ ಎಲ್ಲರೂ ನಿಶ್ಯಬ್ಧವಾಗಿ ಊಟಮಾಡುತ್ತಿದ್ದೆವು. ಜನ ಮತ್ತು ವಾಹನಗಳ ಸಂಚಾರವಿಲ್ಲದುದರಿಂದ ಊರೇ ನಿಶ್ಯಬ್ಧವಾಗಿತ್ತು. ಹೀಗಿರುವಲ್ಲಿ ಇದ್ದಕ್ಕಿದ್ದಹಾಗೆ, ’ಠಫಾರ್, ಠಫಾರ್’ ಎಂಬ ಶಬ್ಧವು ಆಕಾಶದಲ್ಲಿನ ಮರುಧ್ವನಿಗಳ ಅಲ್ಲದೆ ಕಾಗೆಗಳ ’ಕಾ-ಕಾ’ ಗಳೊಂದಿಗೆ ಕೇಳಿಸಿದವು. ಹಿರಿಯರು ಅದು ಬಂದೂಕದ ಶಬ್ದವೆಂದರು. ಊಟಮಾಡುತ್ತಿದ್ದವರೆಲ್ಲರೂ ಕೈಗಳನ್ನು ಅರ್ಧಕ್ಕೇ ನಿಲ್ಲಿಸಿ ಹಿರಿಯರೆಲ್ಲರೂ ಮಕ್ಕಳಾದ ನಮ್ಮೆಲ್ಲರ ಕಡೆಗೆ ಕಣ್ಣು ಹಾಯಿಸಿದರು. ಎಲ್ಲಾ ಸಣ್ಣ ಮಕ್ಕಳುಗಳು ಅಲ್ಲಿದ್ದವು, ಆದರೆ ಸ್ವಲ್ಪ ಹಿರಿಯರಾದ ನಮ್ಮ ಅಣ್ಣರಿಬ್ಬರೂ ಮತ್ತು ಸೋದರತ್ತೆಯ ಮಗನೂ ಸೇರಿ ಮೂವರು ಅಲ್ಲಿ ಇರಲಿಲ್ಲ! ನಮ್ಮ ತಂದೆಯವರು, ಚಿಕ್ಕಪ್ಪನವರು ಮತ್ತು ಸೊದರತ್ತೆಯವರು ಊಟವನ್ನು ಅರ್ಧಕ್ಕೇ ನಿಲ್ಲಿಸಿ ಈ ಮೂರು ಮಕ್ಕಳನ್ನು ಹುಡುಕಲು ಹೊರಟರು. ಬಸವನಗುಡಿಯಲ್ಲಿರುವ ಮನೆಗಳಿಗೆಲ್ಲಾ ಕಾಂಪೌಂಡುಗಳಿದ್ದು, ಎಲ್ಲಾ ಮನೆಗಳ ಹಿಂಬದಿಯಲ್ಲಿ ಕನ್ಸರ್ವೆನ್ಸಿ ರಸ್ಥೆಯೆಂಬ ಸಣ್ಣ ರಸ್ಥೆಗಳಿರುವವು. ಈ ರಸ್ಥೆಗಳ ಮೂಲಕ ಈ ಹಿರಿಯರು ಈ ಅಲೆಮಾರಿ ಮಕ್ಕಳನ್ನು ಕೆ ಆರ್ ರಸ್ಥೆಯ ಹಿಂಬದಿಯ ರಸ್ಥೆಯಲ್ಲಿ ಕಂಡು ಅವರನ್ನು ಒದೆಗಳೊಂದಿಗೆ ಎಳೆದುಕೊಂಡು ಮನೆಗೆ ಸೇರಿದರು. ಅಲ್ಲಿ ಪೊಲೀಸಿನ ಗುಂಡಿಗೆ ಹತನಾದ ಯುವಕನು ನಮ್ಮ ಮನೆಯ ಬಳಿ ವಾಸಮಾಡುತ್ತಿದ್ದ ’ದಾಸಿ’ ಎಂಬ ಜಟಕಗಾಡಿಯ ಚಾಲಕನ ಮಗನೆಂದೂ, ಗುಂಡಿನೇಟಿಗೆ ರಸ್ಥೆಯಲ್ಲಿ ಬಿದ್ದಿದ್ದ ಆ ಯುವಕನನ್ನು ಪೊಲೀಸಿನವರು ಎಳೆದು ತಮ್ಮ ವ್ಯಾನಿನೊಳಗೆ ಹೇರಿಸಿದ್ದನ್ನು ತಾನು ಸ್ವತಹ ನೋಡಿದೆನೆಂದು ನಮ್ಮ ದೊಡ್ಡಣ್ಣನಿಂದಲೇ ತಿಳಿಯಿತು. ಪೊಲೀಸಿನವರು ಏತಕೆ ಗುಂಡುಹಾರಿಸಿದರು? ಅಲ್ಲದೇ ಆ ಬಡಪಾಯಿ ಜಟಕ ಗಾಡಿಯ ಚಾಲಕನ ಮಗನನ್ನೇಕೆ ಕೊಂದರು? ಎಂಬ ವಿಚಾರಗಳಿಗೆ ’ದಾಸಿ’ ಎಂಬ ಆ ಚಾಲಕನ ವಿಚಾರ ಮತ್ತು ಅಂದಿನ ಮೈಸೂರು ರಾಜ್ಯದ ಚರಿತ್ರೆಯನ್ನು ಸ್ವಲ್ಪ ಅರಿಯುವುದು ಅವಶ್ಯಕ.
ಮೊದಲನೆಯ ಮಹಾಯುದ್ಧದ ಶತಾಬ್ಧಿ
ಮಧ್ಯದಲ್ಲಿರುವ ಯೋಧ ’ದಾಸಪ್ಪ’ನ ತದ್ರೂಪ! (ಕೃಪೆ : BBC website)
ಈಗ ಯೂರೋಪಿನಾದ್ಯಂತ ಮೊದಲನೆಯ ಮಹಾಯುದ್ಧದ 1914-1918 ಶತಾಬ್ಧಿಯನ್ನು ಆಚರಿಸುತ್ತಿದ್ದಾರೆ. ಆ ಯುದ್ಧದಲ್ಲಿ ಭಾರತದ ಲಕ್ಷಾಂತರ ಸಾಮಾನ್ಯ ಯೋಧರು ಬ್ರಿಟಿಷರ ಸೈನ್ಯಕ್ಕೆ ಸೇವೆ ಸಲ್ಲಿಸಿದ್ದರು. ಅವರಲ್ಲಿ ಅನೇಕ ಕನ್ನಡಿಗರೂ ಇದ್ದರು. ಆದರೂ ಈ ಭಾರತದ ಯೋಧರನ್ನು ಆಗ ಮತ್ತು ಈಗಲೂಕೂಡ ಭಾರತದಲ್ಲಿ ಮನ್ನಿಸಿ ಗಣನೆಗೆ ತೆಗೆದುಕೊಳ್ಳುವವರು ಅತಿವಿರಳ. ಅದೇಕೆಂದರೆ ಬ್ರಿಟಿಷರ ಮತ್ತು ಅವರಿಗೆ ಸಂಭಂಧಪಟ್ಟ ಯಾವುದೇ ವಿಚಾರಗಳನ್ನು ಒಂದೇ ಹೊಡೆತದಲ್ಲಿ ತಿರಸ್ಕರಿಸುವುದು ಅವರಿಗೆ ಒಂದು ಭೂಷಣ. ಈ ತಿರಸ್ಕಾರದಲ್ಲಿ ತ್ಯಾಗಮಾಡಿದ ಭಾರತದ ಈ ಯೋಧರು ಮರೆತು ಹೋಗಿದ್ದಾರೆ. ಮಹಾತ್ಮ ಗಾಂಧಿಯವರೂಕೂಡ ಈ ಯೋಧರನ್ನು ಯುದ್ಧಕ್ಕೆ ಕಳುಹಿಸುವುದಕ್ಕೆ ತಮ್ಮ ಸಮ್ಮತವನ್ನು ನೀಡಿದ್ದರು. ಆದರೂ ಆಗಿನ ಜನತೆಯು ಸ್ವಾತಂತ್ರ್ಯಗಳಿಸಲು ಪ್ರೇರಿತರಾಗಿ, ಬ್ರಿಟಿಷರ ಆಡಳಿತದ ಸರ್ಕಾರ ಮತ್ತು ಸೈನ್ಯದಲ್ಲಿ ಕೆಲಸಮಾಡುವವರನ್ನು ಭಾರತದ ವೈರಿಗಳು ಎಂದು ಪರಿಗಣಿಸುತ್ತಿದ್ದರು. ಆದುದರಿಂದ ಈ ಯೋಧರನ್ನು ಮರೆತಿರುವುದು ಆಶ್ಚರ್ಯವಲ್ಲ. ಒಂದು ಸಮಯ ಭಾರತಕ್ಕೆ ಬ್ರಿಟಿಷರು ಅಥವ ಇತರ ಯೂರೋಪಿಯನ್ನರು ಬರದೇ ಹೋಗಿದ್ದರೆ ಭಾರತವು ಯಾವತರಹದ ವಿವಿಧ ವಿಭಾಗಗಳಾದ ರಾಜ್ಯಗಳಾಗುತ್ತಿತ್ತು ಅಥವ ಯಾವ ರೀತಿಯ ದೇಶವಾಗುತ್ತಿತ್ತು ಎಂಬುದನ್ನು ಯೋಚಿಸುವುದು ಈ ನನ್ನ ಲೇಖನಕ್ಕೆ ಸಂಗತವಾದುದಲ್ಲ.
ದಾಸಪ್ಪ
ಮೊದಲನೆಯ ಮಹಾಯುದ್ಧದ ಒಬ್ಬ ಭಾರತದ ನಿವೃತ್ತ ಯೋಧನನ್ನು ನಾನು ಕಂಡಿದ್ದೆ ಅಲ್ಲದೆ ಆತನು ನಮ್ಮ ಮನೆತನ ಮತ್ತು ಸಮುದಾಯಕ್ಕೆ ಬಹಳ ಬೇಕಾದವನಾಗಿದ್ದ. ಆತನ ಹೆಸರು ದಾಸಪ್ಪ ಎಂದು. ಆತನು ಈಜಿಪ್ಟಿನ ಕದನದಲ್ಲಿ ಎಡಗಾಲಿಗೆ ಗಾಸಿಗೊಂಡು ಊನನಾಗಿ ಕುಂಟುತ್ತಿದ್ದನು. ನಡೆಯುವಾಗ ಅವನು ಬಗ್ಗಿ ಎಡಗಾಲಿನ ಮಂಡಿಯಮೇಲೆ ತನ್ನ ಕೈಯನ್ನು ಊರಿ ನಡೆಯುತ್ತಿದ್ದನು. ಅವನು ಖಾಕಿಬಟ್ಟೆಯ ರುಮಾಲನ್ನು ಕಟ್ಟಿದ್ದನು. ಅದರ ಮುಂಭಾಗದಲ್ಲಿ ಬಟ್ಟೆಯ ಒಂದು ಕೊನೆ ಕಿರೀಟದ ಗರಿಯಂತೆ ನಿಂತಿರುತಿತ್ತು ಮತ್ತು ಬಟ್ಟೆಯ ಹಿಂಭಾಗವು ಬಾಲದಂತೆ ಇಳಿಬಿಟ್ಟಿತ್ತು. ಆತನು ಬಹು ದಟ್ಟವಾದ ಕಪ್ಪಾದ ಹುರಿಮೀಸೆಯನ್ನು ಬಿಟ್ಟಿದ್ದನು. ಅವನ ಖಾಕಿ ಅಂಗಿ ಮತ್ತು ಶರಾಯಿಗಳಿಗೆ ಹೊಳೆಯುವ ಹಿತ್ತಾಳೆ ಗುಂಡಿಗಳಿದ್ದವು. ಒಂದು ಸಣ್ಣ ಪದಕವನ್ನೂ ತನ್ನ ಅಂಗಿಗೆ ಸಿಗಿಸಿದ್ದನು. ಅವನು ನಿವೃತ್ತನಾಗಿದ್ದರೂ ಸೈನ್ಯದ ಸಮವಸ್ತ್ರವನ್ನು ಧರಿಸುತ್ತಿದ್ದನು. ಈ ಸುಯೋಗಕ್ಕೆ ಬ್ರಿಟಿಷಿನ ಮಿಲಿಟರಿಯು ವಿಶೇಷ ಸವಲತ್ತನ್ನು ಅವನಿಗೆ ಕೊಟ್ಟಿದ್ದರು. ಆತನು ಮಾಗಡಿ ಕೇಂಪೇಗೌಡನ(2) ಸಂತತಿಯವನೆಂದೂ ಮತ್ತು ಆತನ ಮನೆತನದಲ್ಲಿ ಎಲ್ಲರೂ ಸೈನಿಕರೆಂತಲೂ ಹೇಳುತ್ತಿದ್ದನು. ಆತನನ್ನು ನಾನು ಮೊದಲು ನೋಡಿದ್ದು ಯಾವಾಗ ಎಂಬುದು ನನಗೆ ಜ್ಞಾಪಕವಿಲ್ಲ, ಏಕೆಂದರೆ ನನಗೆ ಆಗಿನ್ನೂ ಎರಡು ಅಥವ ಮೂರು ವರ್ಷಗಳ ವಯಸ್ಸು. ನನಗೆ ಅರಿವು ಮತ್ತು ತಿಳುವಳಿಕೆಗಳು ಬಂದಾಗಿನಿಂದಲೂ ದಾಸಪ್ಪನನ್ನು ನೋಡಿದ್ದೆನು. ಆದುದರೀಂದಲೇ ಆತನ ಲಕ್ಷಣದ ವಿವರಣೆಯು ನನಗೆ ಇನ್ನೂ ಸ್ಪಷ್ಟವಾಗಿ ಜ್ಞಾಪಕವಿದೆ. ಆತನು ಯಾವ ಬಿರುದು ಸನ್ಮಾನಗಳನ್ನು ಗಳಿಸಿದ ಸೇನಾಧಿಕಾರಿಯಲ್ಲ, ಯುದ್ಧದ ಯೋಧರಿಗೆ ಆಸರೆ ನೀಡುತ್ತಿದ್ದ ಸೈನ್ಯದ ಕಾಲಾಳು, ಬ್ರಿಟಿಷ್ ಸೈನ್ಯದ ’ಅಶ್ವಪಡೆ’ (Cavalry)ಯಲ್ಲಿ ಕುದುರೆಗಳನ್ನು ನೋಡಿಕೊಳ್ಳುವ ಪ್ಯಾದೆಯಾಗಿದ್ದನು.
’ದಾಸಿ’
ದಾಸಪ್ಪನ ಕುದುರೆಗಾಡಿ ಈ ತರದ್ದು CC Wiki
ದಾಸಪ್ಪನನ್ನು ಎಲ್ಲರೂ ’ದಾಸಿ’ ಎಂದು ಕರೆಯುತ್ತಿದ್ದರು. ಅದು ಅವನ ಬ್ರಿಟಿಷ್ ಅಧಿಕಾರಿಗಳು ಇಟ್ಟ ಅಡ್ಡನಾಮವಿದ್ದಿರಬಹುದು. ನಾವೆಲ್ಲರೂ ಅವನನ್ನು ಯಾವಾಗಲೂ ’ದಾಸಿ’ಎಂದೇ ಕರೆಯುತ್ತಿದ್ದೆವು. ಯುದ್ಧದಲ್ಲಿ ಊನನಾಗಿದ್ದುದರಿಂದ ಆತನನ್ನು ಬ್ರಿಟಿಷ್ ಮಿಲಿಟರಿಯು ನಿವೃತ್ತಗೊಳಿಸಿ ಆತನಿಗೆ ಮೈಸೂರು ಟಾಂಗತಹದ ಒಂದು ದೊಡ್ಡ ಜಟಕಾ ಬಂಡಿಯನ್ನು ಕುದುರೆಯ ಸಹಿತ ಪಿಂಚಿಣಿಯೊಂದಿಗೆ ಕೊಟ್ಟಿದ್ದರು. ಅದರ ಜೊತೆಗೆ ಗಾಡಿಯ ದುರಸ್ತಿಗೆ, ಕುದುರೆಯ ಸಂರಕ್ಷಣೆಗೆ ಮತ್ತು ಆತನ ಮೀಸೆಯನ್ನು ಆಗಿನ ಮಿಲಿಟರಿಯ ನಿಯಮದಂತೆ ಬೆಳೆಸಿ ಅದಕ್ಕೆ ಕಪ್ಪುರಂಗನ್ನು ಲೇಪಿಸಲು ’ಮೀಸೆಯ ಭತ್ಯ’ವನ್ನೂ ಅವನಿಗೆ ಜೀವನಾಂಶದೊಂದಿಗೆ ಕೊಡುತ್ತಿದ್ದರು. ಬ್ರಿಟಿಷಿನ ದಂಡು ನೇರವಾಗಿ ಇಂಗ್ಲೆಂಡಿನ ಸರ್ಕಾರದ ಆಳ್ವಿಕೆಯಲ್ಲಿದ್ದುದರಿಂದ ಈ ಪಿಂಚಿಣಿಗಳು ದಾಸಪ್ಪನಿಗೆ ನೇರವಾಗಿ ಲಂಡನ್ನಿನಿಂದ ಬರುತ್ತಿದ್ದವು. ಬಸವನಗುಡಿಯಲ್ಲಿದ್ದ ನಮ್ಮ ಮನೆಯ ಹತ್ತಿರವೇ ಇದ್ದ ಪಕ್ಕದ ರಸ್ಥೆಯ ಒಳಭಾಗದ ಓಣಿಯಲ್ಲಿದ್ದ ಒಬ್ಬರ ಮನೆಯ ಗಾಡೀಖಾನೆಯಲ್ಲಿ ಆತನು ತನ್ನ ಹೆಂಡತಿ ಮತ್ತು ಮಗನೊಂದಿಗೆ ವಾಸವಾಗಿದ್ದನು. ಬೆಂಗಳೂರಿನ ಬಸವನಗುಡಿಯಲ್ಲಿ ಅನೇಕ ನಿವೃತ್ತ ಉನ್ನತ ಸರ್ಕಾರಾಧಿಕಾರಿಗಳೂ ಅಲ್ಲದೆ ನಮ್ಮ ಮನೆತನದಹಾಗೆ ಅನೇಕ ಮಧ್ಯಮ ವರ್ಗದವರು ನೆಲೆಸಿದ್ದರು. ಹಲವಾರು ಗಣ್ಯರು ಮೋಟಾರುವಾಹನಗಳನ್ನು ಮತ್ತು ಕುದುರೆಯ ಕೋಚ್ಗಾಡಿಗಳನ್ನು ಹೊಂದಿದ್ದರು. ಆದರೆ ನಮ್ಮ ಮನೆತನದವರ ಹಾಗೆ ಇದ್ದ ಅನೇಕ ಸಂಸಾರಗಳಿಗೆ ’ದಾಸಿ’ಯ ಗಾಡಿ ಮತ್ತು ಇತರ ಜಟಕಾಗಾಡಿಗಳೇ ಮುಖ್ಯ ಸಾರಿಗೆಗಳಾಗಿದ್ದವು. ದಾಸಿಯು ನಮಗೆ ಎಷ್ಟು ಪರಿಚಿತನಾಗಿದ್ದನೆಂದರೆ ಅನೇಕಸಲ ನಾನು ನನ್ನ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ದಾಸಿಯೂ ತನ್ನಗಾಡಿಯಲ್ಲಿ ತನ್ನ ಮನೆಗೆ ಹಿಂತಿರುಗುತ್ತಿದ್ದನು. ಅವನು ನನ್ನನ್ನು ನೋಡಿ, ’ಏಯ್ ರಾಜಪ್ಪಾ, ಬಾಪ್ಪ, ನನ್ಗಾಡಿಯಾಕ್ಕೆ ಕೂಂಡ್ರಪ್ಪ’ ಎಂದು ಕರೆಯುತ್ತಿದ್ದನು. ಅದ್ದಕ್ಕೆ ನಾನು, ’ಪರವಾಗಿಲ್ಲ ದಾಸೀ ನಾನು ನಡಕೊಂಡೇ ಮನೆಗೆ ಹೋಗುತ್ತೀನಿ’ ಅಂದ್ರೆ ಅವನು, ’ಅದ್ಯಾಕ್ಕ? ನೀನು ಕುಂಡ್ರೂನೂ ನನ್ ಕುದ್ರೆ ಮನೀಕಡೆ ಓಯ್ತದೆ, ಕುಂಡ್ರ್ದೇ ಇದ್ರೂನು ಓಯ್ತದೆ, ಬಾ ಇತ್ಲಾಗ್ ಬಂದ್ ಕುಂಡ್ರು’ ಎಂದು ನನಗೆ ಒತ್ತಾಯಿಸುತ್ತಿದ್ದನು.
ಬೆಂಗಳೂರಿನ ಕರಗ
ಬೆಂಗಳೂರು ಕರಗ
ನಾನು ಮತ್ತು ನನ್ನ ಸಹೋದರ ಸಹೋದರಿಯರೆಲ್ಲರೂ ಬಹಳ ಚಿಕ್ಕ ವಯಸ್ಸಿನವರಾಗಿದ್ದುದರಿಂದ ನಾವೆಲ್ಲ ಎಂಟುಮಕ್ಕಳೂ ದಾಸಿಗಾಡಿಯಲ್ಲಿ ಒಟ್ಟಾಗಿ ನಮ್ಮ ಅಮ್ಮಳೊಂದಿಗೆ ಕೂಡುತ್ತಿದ್ದೆವು. ನನ್ನ ಇಬ್ಬರು ಅಣ್ಣಂದಿರು ದಾಸಿಯ ಪಕ್ಕದಲ್ಲಿ ಜಟಕಾದ ಮುಂಭಾಗದಲ್ಲಿ ಮುಮ್ಮುಖವಾಗಿ ಕೂರುತ್ತಿದ್ದರು. ನಮ್ಮ ತಂದೆ ಮತ್ತು ಸೋದರಮಾವ ತಮ್ಮ ಸೈಕಲ್ಲುಗಳಮೇಲೆ ನಮ್ಮನ್ನು ಹಿಂಬಾಲಿಸುತ್ತಿದ್ದರು. ಹೀಗಿತ್ತು ನಮ್ಮ ಮೆರವಣಿಗೆ. ಮಿನರ್ವ ಟಾಕಿಸ್, ಶಿವಾಜಿ ಟಾಕಿಸ್, ಸಿಟಿಟಾಕಿಸ್, ಪ್ರಭಾತ್ ಟಾಕಿಸ್ಗಳಂತಹ ಸಿನಿಮಾಗಳಿಗೆ ಪ್ರತಿ ತಿಂಗಳೂ ಹೊಸದಾಗಿ ಬರುತ್ತಿದ್ದ ಸಿನಿಮಾಗಳಿಗೆ ನಮ್ಮ ಮೆರವಣಿಗೆ ಸಾಗುತ್ತಿತ್ತು. ಸಿಟಿ ಮಾರ್ಕೆಟ್ಟಿನ ಪಕ್ಕದಲ್ಲೇ ಇದ್ದ ಡಾಕ್ಟರಾಗಿದ್ದ ನಮ್ಮ ತಂದೆಯವರ ಶಾಪಿಗೆ ಹೋಗುವುದೆಂದರೆ ನಮಗೆ ಬಹಳ ಸಂಭ್ರಮ. ಇದನ್ನು ಯಾವಾಗಲೂ ಎದುರು ನೋಡುತ್ತಿದ್ದೆವು. ಏಕೆಂದರೆ ನಮ್ಮ ತಂದೆಯವರ ಶಾಪಿನ ಪಕ್ಕದಲ್ಲೇ ಒಂದು ’ಹೊಟೆಲ್’ ಇದ್ದಿತು. ಶಾಪಿನ ಒಳ ಕೊಠಡಿಯ ಹಿಂಭಾಗದಲ್ಲಿ ಒಂದು ಬಾಗಿಲಿತ್ತು. ಅದನ್ನು ತೆರೆದರೆ ಹೊಟೆಲ್ಲಿನ ಅಡುಗೆಮನೆಗೆ ಒಯ್ಯುತ್ತಿತ್ತು. ಅಲ್ಲಿಂದ ನೇರವಾಗಿ ನಮ್ಮೆಲ್ಲರಿಗೂ ಸರಾಗವಾಗಿ ದೋಸೆಗಳು ಒದಗುತ್ತಿದ್ದವು. ಆ ದೋಸೆಗಳಂಥಹ ರುಚಿಯನ್ನು ಯಾವ ಸ್ಥಳದಲ್ಲೂ ಇನ್ನೂ ಕಂಡಿಲ್ಲ. ದೋಸೆಯ ರುಚಿಯೊಂದೇ ಅಲ್ಲ ನಮಗೆ ಆಕರ್ಷಕ, ಬೆಂಗಳೂರಿನ ಕರಗದ ರಥಗಳ ಮೆರವಣಿಗೆಯನ್ನು ನೋಡುವುದೂ ನಮಗೆ ವಿಶೇಷ. ಪ್ರಸಿದ್ಧವಾದ ಬೆಂಗಳೂರಿನ ಕರಗ ದೊಡ್ಡಪೇಟೆಯ ಧರ್ಮರಾಯನ ದೇವಸ್ಥಾನದಿಂದ ಹೊರಟು ಸಿಟಿಮಾರ್ಕೆಟ್ಟಿನ ಮುಂದೆ ಸಾಗಿ ನಮ್ಮ ತಂದೆಯವರ ಶಾಪಿನ ಮುಂದೆ ಬಂದು, ಅರಳೇ ಪೇಟೆ, ಚಿಕ್ಕಪೇಟೆ, ಬಳೇಪೇಟೆ ಮತ್ತು ಬೆಂಗಳೂರಿನ ಇತರ ಹಳೆಯಪೇಟೆಗಳನ್ನು ಸುತ್ತಿ ವಾಪಸ್ಸು ಧರ್ಮರಾಯನ ದೇವಸ್ಥಾನಕ್ಕೆ ಹಿಂತಿರುಗುತ್ತಿತ್ತು. ’ಕರಗವು’ ಸಾಮಾನ್ಯವಾಗಿ ಮಧ್ಯರಾತ್ರಿ ಹೊರಟು ಸೂರ್ಯೋದಯಕ್ಕೆ ಮುಂಚೆ ತನ್ನ ಚಾಲನೆಯನ್ನು ಮುಗಿಸುವುದು. ನಾವುಗಳೆಲ್ಲರೂ ಬಹು ಚಿಕ್ಕವರಾಗಿದ್ದುದರಿಂದ ನಮ್ಮನ್ನು ಕರಗ ನೋಡಲು ನಮ್ಮ ತಂದೆಯವರು ಕರೆದೊಯ್ಯುತ್ತಿರಲಿಲ್ಲ. ಪ್ರತಿ ವರ್ಷವೂ ಬೆಳಗ್ಗೆ ಎಂಟು ಗಂಟೆಯಮೇಲೆ ಹೊರಡುತ್ತಿದ್ದ ವಿವಿಧ ಅಲಂಕೃತ ರಥಗಳ ಮೆರವಣಿಗೆಯನ್ನು ನೋಡುತ್ತಿದ್ದೆವು ಜೊತೆಗೆ ದೋಸೆಯ ಸ್ವಾದವೂ ಲಭಿಸುತ್ತಿತ್ತು.
ಕರಗದ ಹುಣ್ಣಿಮೆಗೆ ಹಿಡಿದ ‘ಗ್ರಹಣ’!
ಒಂದು ಸಲ ಕರಗದ ಹುಣ್ಣಿಮೆಯ ರಾತ್ರಿ ಚಂದ್ರ ಗ್ರಹಣವೂ ಆಗಿತ್ತು. ಆದುದರಿಂದ ’ಕರಗ’ವು ಗ್ರಹಣ ಮುಗಿದಮೇಲೆ ಬೆಳಗ್ಗೆ ಐದುವರೆಗೆ ಹೊರಡುವುದಾಗಿತ್ತು. ಇದರಿಂದ ನಮ್ಮಂತಹ ಸಣ್ಣ ಮಕ್ಕಳಿಗೆ ನಿಜವಾದ ’ಕರಗ’ವನ್ನು ನೋಡುವ ಅವಕಾಶ ಒದಗಲು ನಮ್ಮ ತಂದೆಯವರು ’ದಾಸಿ’ಗೆ ನಮ್ಮನ್ನೊಯ್ಯಲು ಬೆಳಗ್ಗೆ ಐದು ಗಂಟೆಗೇ ನಮ್ಮ ಮನೆಗೆ ಬರಲು ಹೇಳಿದ್ದರು. ನಿಷ್ಠಾವಂತ ದಾಸಿಯು ಬಳಗ್ಗೆ ನಾಲ್ಕು ಗಂಟೆಯ ಕತ್ತಲೆಯಲ್ಲೇ ತನ್ನ ಗಾಡಿಯೊಂದಿಗೆ ನಮ್ಮ ಮನೆಯಮುಂದೆ ಬಂದು ತೂಕಡಿಸುತ್ತಾ ಕಾಯುತ್ತಿದ್ದನು. ನಾವೆಲ್ಲರೂ ಐದುಗಂಟೆಗೆ ಗಾಡಿಯನ್ನೇರಿ ಹೊರಟು ವಿಶ್ವೇಶ್ವರಪುರದ ಬಳಿಬಂದಾಗ ಇನ್ನೇನೂ ಬೆಳಕು ಹರಿಯತೊಡಗಿತು ಎನ್ನುವಾಗ ಅದೇವೇಳೆಗೆ ಒಬ್ಬಪೊಲೀಸಿನವನು ನಾವಿದ್ದಗಾಡಿಯನ್ನು ನಿಲ್ಲಿಸಿ, ಗಾಡಿಗೆ ಲೈಟಿಲ್ಲದೆ ಓಡಿಸುತ್ತಿರುವುದರಿಂದ ಜುಲ್ಮಾನೆಯನ್ನು ಕೋಡಬೇಕೆಂದು ದಾಸಿಗೆ, ಒತ್ತಾಯಿಸಿದನು. ಹಿಂದಿನ ವರ್ಷದಲ್ಲಿ ಆಗತಾನೇ ಭಾರತಕ್ಕೆ ಸ್ವಾತಂತ್ರ್ಯ ಬಂದು ಸರ್ಕಾರವು ಬದಲಾಗಿತ್ತು. ಈ ಬದಲಾವಣೆಯ ಅಲ್ಲೋಲ ಕಲ್ಲೋಲದಲ್ಲಿ ದಾಸಿಯ ಪಿಂಚಿಣಿಗಳೆಲ್ಲವೂ ಮಾಯವಾಗಿದ್ದವು. ದಾಸಿಗೆ ದಾರಿದ್ರ್ಯವು ಎದುರುನೋಡುತ್ತಿತ್ತು. ಈ ಪೊಲೀಸಿನ ಕಿರುಕುಳಕ್ಕೆ ರೋಸಿಹೋಗಿ ದಾಸಿಯು ಅವನಿಗೆ ಬಯ್ಯತೊಡಗಿದನು, ’ಈ ಸರ್ಕಾರ ಬಂದು ನನ್ನ ಪಿಂಚಿಣಿಗಳನ್ನೆಲಾ ಕಸಿದು ನನ್ನನ್ನು ದರಿದ್ರನನ್ನಾಗಿ ಮಾಡಿದ್ದಲ್ಲದೇ ಈಗ ನನ್ನ ಬಳಿಯಿರುವ ಪುಡಿಕಾಸಿನ ಮೇಲೂ ನಿನ್ನ ಕಣ್ಣು’ ಎಂದು ಹೇಳಿ, ಬರಿಯುವುದಕ್ಕಾಗದ ವಾಕ್ಯಗಳಿಂದ ಅವನನ್ನು ಬಯ್ಯತೊಡಗಿದನು. ಅಷ್ಟು ಹೊತ್ತಿಗೆ ಸ್ವಲ್ಪ ಬೆಳಕು ಹರಿಯಲು ಹಲವು ಜನ ಸೇರಲು ಪೊಲೀಸಿನವನು ಅಲ್ಲಿಂದ ಕಾಲ್ತೆಗೆದನು. ಆದರೂ ನಾವುಗಳೆಲ್ಲಾ ಕರಗವನ್ನು ಮೊಟ್ಟಮೊದಲು ನೋಡಿದೆವು.
ಅದೇ ವರ್ಷ ಅಂದರೆ ೧೯೪೮ರ ಸೆಪ್ಟೆಂಬರ್ ಇರಬಹುದು ಮೈಸೂರು ಮಹಾರಾಜರು ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದರೂ ತಮ್ಮ ರಾಜ್ಯಭಾರವನ್ನು ಭಾರತ ಸರ್ಕಾರಕ್ಕೆ ಅಧೀನವಾಗಿ ಒಪ್ಪಿಸಲು ತಡಮಾಡಿದ್ದರು. ಬ್ರಿಟಿಷರ ಆಳ್ವಿಕೆಯಲ್ಲಿದ ಇಂಡಿಯಾದ ಅನೇಕ ರಾಜರುಗಳಾಳುತ್ತಿದ್ದ ರಾಜ್ಯಗಳನ್ನು, ಯೂರೋಪಿನಲ್ಲಿದ್ದಂತಹ ಸ್ವತಂತ್ರ ರಾಜ್ಯಗಳಹಾಗೆ ಮಾರ್ಪಡಿಸಲು ಅಂದಿನ ಮಹಾರಾಜರುಗಳು ಭಾರತ ಸರ್ಕಾರದೊಂದಿಗೆ ಸಂಧಾನಮಾಡಲು ವ್ಯವಹರಿಸುತ್ತಿದ್ದರು. ಆದರೆ ಆ ಮಹಾರಾಜರುಗಳಲ್ಲೇ ಒಪ್ಪಿಗೆಗಳಿಲ್ಲದಿರಲು ಆ ಸಂಧಾನ ಕುಸಿದುಬಿದ್ದಿತು. ಇದೇ ಕಾರಣದಿಂದ ಮೈಸೂರು ಮಹಾರಾಜರು ತಡಮಾಡಿದ್ದರು ಎಂಬುದು ಒಂದು ಮಾತು. ಆದುದರಿಂದ ಮೈಸೂರು ಪ್ರಾಂತ್ಯದ ಬೆಂಗಳೂರು, ಮೈಸೂರು ಮತ್ತು ಇತರ ನಗರಗಳಲ್ಲಿ ಮಹಾರಾಜರ ಸರ್ಕಾರದ ವಿರುದ್ಧ ತೀವ್ರವಾದ ಚಳುವಳಿಗಳು ಆರಂಭವಾದವು. ಬೆಂಗಳೂರಿನಾದ್ಯಂತ ಕರ್ಫ್ಯೂ ಆರ್ಡರನ್ನು ಹಾಕಿದ್ದರು. ಬೆಂಗಳೂರಿನ ಬಸವನಗುಡಿಯ ನ್ಯಾಶನಲ್ ಹೈಸ್ಕೂಲಿನ ಬಳಿ ಮತ್ತು ಫೋರ್ಟ್ ಹೈಸ್ಕೂಲಿನ ಬಳಿ ಈ ಚಳುವಳಿಯು ವೈಪರಿತ್ಯವಾಗಿ ಏರಿದ್ದು ಪೊಲೀಸಿನವರ ಹತೋಟಿಗೆ ಮೀರಿ ಜನಗಳ ಪ್ರಾಣ ಮತ್ತು ಸ್ವತ್ತುಗಳಿಗೆ ಹಾನಿಯ ಸಂಭವವು ತೀವ್ರವಾಗಿರಲು, ಪೊಲೀಸಿನವರು ಚಳುವಳಿಗಾರರನ್ನು ’ವೀಕ್ಷಿದಾಕ್ಷಣ ಗುಂಡೇರಿಸಿ ಕೊಲ್ಲುವ’ ಆಜ್ಞೆಯನ್ನು ಜಾರಿಗೆ ತಂದಿದ್ದರು.
ದಾಸಪ್ಪನು ವಾಸವಾಗಿದ್ದ ನವೀಕರಿಸಿದ ಗಾಡೀಖಾನೆ (Photo by Sundar Raj Cavale taken on 5th October 2015
Old soldiers never die, they just fade away!
ಆ ವರಮಹಾಲಕ್ಷ್ಮಿಯ ಹಬ್ಬದ ಪ್ರಯುಕ್ತ ದಾಸಿಯು ಸ್ನಾನ ಮಾಡಲು ಸಿದ್ಧನಾದನು. ಸ್ನಾನ ಮಾಡಲು ಸೋಪಿಲ್ಲದುದರಿಂದ ಆತನು ತನ್ನ ಮಗನನ್ನು ಸೋಪನ್ನು ತರಲು ಅಂಗಡಿಗೆ ಕಳುಹಿಸಿದ್ದನು. ಹತ್ತಿರವೇ ಇದ್ದ ಸಣ್ಣ ಅಂಗಡಿಯು ಮುಚ್ಚಿದ್ದುದರಿಂದ ಆ ಮಗನು ಗಾಂಧಿಬಜಾರಿಗೆ ತೆರಳಿದನು. ಹೋಗುವ ದಾರಿಯಲ್ಲಿ ಹೆಚ್ ಬಿ ಸಮಾಜ ರಸ್ಥೆ ಮತ್ತು ಕೆ ಆರ್ ರೋಡು ಸೇರುವ ಜಾಗದಲ್ಲಿ ವೀಕ್ಷಿದಾಕ್ಷಣ ಗುಂಡಿಟ್ಟು ಕೊಲ್ಲುವ ಆಜ್ಞೆಯು ಜಾರಿಯಲ್ಲಿದ್ದುದರಿಂದ ಅವನು ಪೊಲೀಸಿನ ಗುಂಡಿಗೆ ಬಲಿಯಾಗಿದ್ದನು. ಆ ದಿನ ಸಾಯಂಕಾಲ ಹತ್ತಿರದಲ್ಲೇ ಇದ್ದ ಕನಕನ ಪಾಳ್ಯದಲ್ಲಿದ್ದ ತನ್ನ ತಾಯಿಯ ಮನೆಯಿಂದ, ಹೊಸದಾಗಿ ಮದುವೆಯಾಗಿದ್ದ ಆ ಯುವಕನ ಹೊಸ ಪತ್ನಿಯು ಅತಿ ರೋಧನದಿಂದ ತನ್ನ ಸಂಭಂದಿಗಳೋಂದಿಗೆ ದಾಸಿಯ ಮನೆಗೆ ತೆರಳುತ್ತಿದ್ದ ದೃಷ್ಯಯು ನನಗೆ ಇನ್ನೂ ಮನದಲ್ಲಿ ಸ್ಥಿರವಾಗಿ ನಿಂತಿದೆ. ಅದೇ ವರ್ಷದ ಕೊನೆಯಲ್ಲಿ ದಾಸಿಯ ಹೆಂಡತಿಯು ಮೃತಪಟ್ಟಳು. ದಾಸಿಯು ಯಾವ ಪಿಂಚಿಣಿಗಳಿಲ್ಲದೆ ಬದುಕಲು ತನ್ನ ಕುದುರೆ ಮತ್ತು ಗಾಡಿಯನ್ನು ಮಾರಿ ತನ್ನ ಊರಾದ ಮಾಗಡಿಗೆ ತೆರಳಿದನು. ಯಾವುದೋ ಒಂದು ಹಳೆಯ ಗುಡುಸಿಲಿನಲ್ಲಿ ವಾಸವಾಗಿದ್ದು ಮಾಗಡಿಯ ದೇವಸ್ಥಾನಗಳ ಬಳಿ ಭಿಕ್ಷೆಬೇಡಿ ಹಲವು ವರ್ಷಗಳನಂತರ ದಾಸಿಯು ಒಬ್ಬೊಂಟಿಗನಾಗಿ ಅತಿದಾರಿದ್ರ್ಯದಲ್ಲಿ ಮೃಪಟ್ಟನೆಂದು ತಿಳಿಯಿತು