ಬೆಂಗಳೂರು ನಾಗರತ್ನಮ್ಮ – ರಾಮಮೂರ್ತಿ

ನಮಸ್ಕಾರ ಅನಿವಾಸಿಯ ಬಂಧುಗಳಿಗೆ.  ಶರಣ-ದಾಸ-ಸಂತರ ಸಾಹಿತ್ಯ ಸಂಗೀತದೊಂದಿಗೆ ಆರಂಭವಾಗಿ, ಇತ್ತೀಚೆಗೆ ನಮ್ಮನ್ನಗಲಿದ ಕವಿ ಎಚ್ಚೆಸ್ವಿ ಅವರಿಗೆ ಅರ್ಪಿಸಿದ ನುಡಿನಮನದ ಪುಷ್ಪಗಳ ಪಕ್ಕದಲ್ಲಿ ಹಾಯ್ದು ಬಂದ ನಮ್ಮನ್ನು ಸಂಗೀತದ ಒಬ್ಬ ಕಲಾವಿದೆಯ ಪರಿಚಯಕ್ಕೆ ಕರೆದೊಯ್ಯುತ್ತಿದ್ದಾರೆ, ನಮ್ಮ ಅನಿವಾಸಿ ಬಳಗದ ಇತಿಹಾಸಕಾರ (resident historian) ಶ್ರೀ ರಾಮಮೂರ್ತಿಯವರು. ಅವರಿದ್ದ ಕಾಲಮಾನದಲ್ಲಿ ಬದಲಾವಣೆ ತರಲು, ಒಬ್ಬ ಸಂಗೀತಗಾರ್ತಿಯಾಗಿ ಹೋರಾಡಿ, ಹಲವಾರು ವಿಷಯಗಳಲ್ಲಿ ಮೊದಲಿಗರಾದ ಬೆಂಗಳೂರು ನಾಗರತ್ನಮ್ಮನವರ ಬಗ್ಗೆ ನೋಡೋಣ ಬನ್ನಿ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ತಿಳಿಸುವುದು. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಸಂ.) 
******************************
******************************
ಬೆಂಗಳೂರು ನಾಗರತ್ನಮ್ಮನ ಹೆಸರು ನಿಮಗೆ ಪರಿಚಯ ಇಲ್ಲದಿರಬಹುದು. ಆದರೆ  ಹತ್ತೊಂಬತ್ತನೇ ಶತಮಾನದಲ್ಲಿ ಒಬ್ಬ ದೇವದಾಸಿಯ ಮಗಳಾಗಿ ಬೆಳದು  ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿ, ತಿರುವಾಯೂರಿನಲ್ಲಿ ನಡೆಯುವ ಪ್ರಸಿದ್ಧ ತ್ಯಾಗರಾಜ ಆರಾಧನೆಯಲ್ಲಿ ಮಹಿಳಾ ಸಂಗೀತಗಾರರು ಮೊಟ್ಟಮೊದಲಿಗೆ ಭಾಗವಹಿಸುವಂತೆ ಹೋರಾಡಿದವಳು ಈ ಕನ್ನಡತಿ. ಕಾವೇರಿ ನದಿ ದಡದಲ್ಲಿ ತ್ಯಾಗರಾಜರ ಸಮಾಧಿಯ ಮಂಟಪವನ್ನು ಸ್ವಂತ ಖರ್ಚಿನಲ್ಲಿ ಕಟ್ಟಿಸಿದ್ದೇ  ಈಕೆ.  ಗ್ರಾಮೋಫೋನ್  ಆಗ ತಾನೇ , ಅಂದರೆ ೧೯೦೦ ರಲ್ಲಿ , ಬಂದಾಗ ತನ್ನ  ಧ್ವನಿಯನ್ನು ರೆಕಾರ್ಡ್ ಮಾಡಿದ ಆರಂಭಿಕರಲ್ಲಿ ಒಬ್ಬಳು.  

೧೮೭೮ ರ ನವಂಬರ್ ೩ ರಂದು ನಂಜನಗೂಡಿನಲ್ಲಿ ಜನನ; ತಾಯಿ ಪುಟ್ಟ ಲಕ್ಷ್ಮಿ. ಪ್ರಾರಂಭದಲ್ಲಿ ಇವರ ಪೋಷಕ ವಕೀಲ್ ಸುಬ್ಬರಾಯರು. ಆದರೆ, ಬೆಳಸಿದ್ದು ತಾಯಿ ಪುಟ್ಟ ಲಕ್ಷ್ಮಿ. ನಂತರ ಮೈಸೂರಿನಲ್ಲಿ ನೆಲಸಿ ಮೈಸೂರು ಅರಮನೆಯ ಒಬ್ಬ ವಿದ್ವಾಂಸರಿಂದ ಕನ್ನಡ ಮತ್ತು ಸಂಸ್ಕೃತ ಅಧ್ಯಯನ ಕೆಲವು ವರ್ಷ ನಡೆಯಿತು. ಆದರೆ, ಈತ ದೇವದಾಸಿಯ ಮಗಳನ್ನು ಶಿಷ್ಯೆ ಆಗಿ ಮುಂದುವರಿಸಲು ಹಿಂಜರಿದರು, ಬಹುಶಃ ಸಮಾಜದ ಒತ್ತಡದಿಂದಿರಬಹುದು. ನಂತರ ನಾಗರತ್ನಮ್ಮನ ವಿದ್ಯಾಭ್ಯಾಸ ಅವಳ ಸೋದರ ಮಾವ "ಪಿಟೀಲು" ವೆಂಕಟಸ್ವಾಮಿ ಅವರಿಂದ ಮುಂದುವರೆಯಿತು. ನಂತರ, ತ್ಯಾಗರಾಜರ ಶಿಷ್ಯ ಪರಂಪರೆಯ (ಮೂರನೆಯ ಪೀಳಿಗೆ ) ಮುನಿಸ್ವಾಮಿ ಅವರಿಂದ ಸಂಗೀತ ಮತ್ತು ನೃತ್ಯ ಕಲಿಯಲು ಪ್ರಾರಂಭವಾಯಿತು.
ಹೆಸರಾಂತ ಮೈಸೂರು ಆಸ್ಥಾನ ವಿದ್ವಾನ್ ಬಿಡಾರಂ ಕೃಷ್ಣಪ್ಪನವರು ಇವಳ ಪ್ರತಿಭೆಗೆ ಮೆಚ್ಚಿ ನಾಗರತಮ್ಮನನ್ನು ತಮ್ಮ ಶಿಷ್ಯ ವರ್ಗಕ್ಕೆ ಸೇರಿಸಿಕೊಂಡರು. ಇವಳ ಹದಿನೈದನೇ ವಯಸ್ಸಿನಲ್ಲಿ ಮೊದಲ ಕಚೇರಿ (Public Performance ) ಕೊಟ್ಟಾಗ ಮೈಸೂರು ಪ್ರಜೆಗಳಲ್ಲದೆ, ಅಂದಿನ ಮಹಾರಾಜರು ಚಾಮರಾಜ ಒಡೆಯರಿಂದಲೂ ಸಹ ಮೆಚ್ಚುಗೆ ಪಡೆದಳು. ಕೆಲವು ವರ್ಷಗಳ ನಂತರ ಆಸ್ತಾನ ವಿದುಷಿ ಅನ್ನುವ ಮನ್ನಣೆ ಸಹ ಬಂತು. ಈ ಗೌರವ ಪಡೆಯುವುದಕ್ಕೆ ಈಕೆಯೇ ಮೊದಲನೆಯ ಮಹಿಳೆ.
ನಂತರ, ಮೈಸೂರಿನಲ್ಲಿ ಆಗ ಸಾಕಷ್ಟು ಅವಕಾಶಗಳು ಇಲ್ಲದಿರುವ ಕಾರಣದಿಂದ ನಾಗರತ್ನಮ್ಮ ಬೆಂಗಳೂರಿನಲ್ಲಿ ಮನೆ ಮಾಡಿದಳು. ಇಲ್ಲಿ ಅವಳ ಪ್ರತಿಭೆ ಬೇಗ ಹರಡಿ ಅನೇಕ ಗಣ್ಯ ವ್ಯಕ್ತಿಗಳ ಪರಿಚಯವಾಯಿತು. ಮುಖ್ಯವಾಗಿ, ಡಿ ವಿ ಗುಂಡಪ್ಪ , ಜಸ್ಟಿಸ್ ಚಂದ್ರಶೇಖರ್ ಐಯ್ಯರ್ ಮುಂತಾದವರು. ಡಿ ವಿ ಜಿ ಅವರ "ಜ್ಞಾಪಕ ಚಿತ್ರಶಾಲೆ"ಯಲ್ಲಿ ಇವಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ೧೯೦೮/೯ ರಲ್ಲಿ ಇವರು ಚಿಕ್ಕಪೇಟೆಯಲ್ಲಿ ಸಹೂಜಿ ಅನ್ನುವರ ಮನೆಯಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗೆ ಹೋಗುತ್ತಿದ್ದರಂತೆ. ಇವರಿಬ್ಬರ ಸ್ನೇಹ ಬಹಳ ವರ್ಷ ಮುಂದುವರೆಯಿತು. ಇನ್ನೊಂದು ಸ್ವಾರಸ್ಯವಾದ ಸಂಗತಿ ಇಲ್ಲಿ ಹೇಳಬೇಕು. ನಾಗರತ್ನಮ್ಮನ ಅಭಿಮಾನಿಗಳಲ್ಲಿ ಹೈಕೋರ್ಟಿನ ಜಸ್ಟಿಸ್ ನರಹರಿ ರಾಯರೂ ಒಬ್ಬರಾಗಿದ್ದರು. ಆಗಾಗ್ಯೆ ಕೋರ್ಟ್ ಮುಗಿದ ಮೇಲೆ ತಮ್ಮ ಅಧಿಕೃತ ಗಾಡಿಯಲ್ಲಿ (Official Vehicle) ಚಿಕ್ಕಪೇಟೆಗೆ ಬಂದು ನಾಗರತ್ನಮ್ಮ ನ ಸಂಗೀತ ವನ್ನು ಕೇಳುತ್ತಿದ್ದರು. ನಂತರ ಸ್ನೇಹವೂ ಹೆಚ್ಚಾಯಿತು. ಈ ಸ್ನೇಹ ಮುಂದುವರೆದಾಗ ನರಹರಿ ರಾಯರು ತಮ್ಮ ಪತ್ನಿಯ ಮುಂದೆ ಇದರ ವಿಚಾರ ಹೇಳಿ ಅವರ ಅನುಮತಿ ಕೇಳಿದರಂತೆ. ಏನಾದರೂ ಆಕ್ಷೇಪಣೆ ಇದ್ದರೆ ನಾಗರತ್ನಮ್ಮನ ಸ್ನೇಹವನ್ನು ಮುಂದೆ ಬೆಳುಸುವುದಿಲ್ಲ ಅಂದರಂತೆ. ಪತ್ನಿಯಿಂದ ಅನುಮತಿ ಪಡೆದ ಮೇಲೆ ಇವರ ಸ್ನೇಹ ಇನ್ನೂ ಮುಂದೆವರಿಯಿತು. ಈ ಸಂಭಾಷಣೆಯ ವಿವರವನ್ನು ಡಿ.ವಿ.ಜಿ.ಬರೆದಿದ್ದಾರೆ.

ನಿಮಗೆ ಬೆಂಗಳೂರಿನ ಬಸವನಗುಡಿಯ ನರಹರಿ ಗುಡ್ಡ ಮತ್ತು Mount Joy ಹೆಸರು ಪರಿಚಿತ ಇದ್ದರೆ ಅದರ ಹಿನ್ನೆಲೆ ಇಲ್ಲಿದೆ. ನರಹರಿ ರಾಯರ ಗಾಡಿ ಆಗಾಗ್ಯೆ ಚಿಕ್ಕ ಪೇಟೆಯಲ್ಲಿ ಬಂದು ನಿಲ್ಲುತ್ತಿದ್ದುದು ಜನರಿಗೆ ಸಂಶಯ ಬಂದು ಅನೇಕ ವದಂತಿಗಳು ಶುರುವಾದವು. ಈ ವಿಚಾರ ಅಂದಿನ ದಿವಾನ್ ಶೇಷಾದ್ರಿ ಐಯ್ಯರ್ ಅವರ ಕಿವಿಗೆ ಬಿದ್ದಾಗ, ರಾಜ್ಯದ ಉನ್ನತ ಪದವಿಯಲ್ಲಿರುವ ಒಬ್ಬ ಹೈ ಕೋರ್ಟ್ ನ್ಯಾಯಾಧೀಶನಿಗೆ ಕೆಟ್ಟ ಹೆಸರು ಬರಬಾರದು ಅನ್ನುವ ಉದ್ದೇಶದಿಂದ ದಿವಾನರು, ಗುಟ್ಟಾಗಿ ನರಹರಿ ರಾಯರನ್ನು ಭೇಟಿಮಾಡಿ ಈ ವದಂತಿಗಳ ಬಗ್ಗೆ ಪ್ರಸ್ತಾಪಿಸಿದರಂತೆ. ನಂತರ ನರಹರಿರಾಯರು, ನಾಗರತ್ನಮ್ಮನ ಸಂಗೀತವನ್ನು ಖಾಸಗಿಯಾಗಿ (in private ) ಕೇಳುವುದಕ್ಕೆ ಒಂದು ಮನೆಯನ್ನು ಗುಡ್ಡದ ಮೇಲೆ ಕಟ್ಟಿ ಅದನ್ನು Mount Joy ಅಂತ ಹೆಸರಿಟ್ಟರು. ಈಗ ನರಹರಿ ಗುಡ್ಡ ಮತ್ತು ಇಲ್ಲಿಗೆ ಹೋಗುವ ರಸ್ತೆ, ಹಣಮಂತನಗರದಲ್ಲಿ, Mount Joy ರಸ್ತೆ.
ಶಾಸ್ತ್ರೀಯ ಸಂಗೀತಕ್ಕೆ ಬಹಳ ವರ್ಷಗಳಿಂದ ಈಗಿನ ಚೆನ್ನೈ (Madras) ನಲ್ಲಿ ಪ್ರಾಮುಖ್ಯತೆ ಇದೆ. ಈ ಕಾರಣದಿಂದ ನಾಗರತ್ನಮ್ಮ, ನರಹರಿರಾಯರ ಸಲಹೆಯ ಮೇಲೆ ಮದ್ರಾಸಿನಲ್ಲಿ ನೆಲಸುವುದಕ್ಕೆ ನಿರ್ಧಾರ ಮಾಡಿದಳು. ಅಲ್ಲಿ ಮೊದಲಿಯಾರ್ ಪಂಗಡದವರಿಂದ ಆಶ್ರಯ ಪಡೆದು ಬಹಳ ಬೇಗ ಒಬ್ಬ ಹೆಸರಾಂತ ಸಂಗೀತಗಾರಳಾದಳು. ೧೯೦೫ ರಿಂದ ಅಲ್ಲಿರುವ ಸಂಗೀತ ಸಭೆಗಳಲ್ಲಿ ಭಾಗವಹಿಸಿ ಯಶಸ್ಸನ್ನು ಕಂಡಳು. ಆ ಕಾಲದಲ್ಲೇ ವರಮಾನ ತೆರಿಗೆ (Income tax) ಕೊಡುವಷ್ಟು ಹಣ ಸಂಪಾದನೆ ಇತ್ತು. ಆಗಿನ ಕಾಲದಲ್ಲಿ , ದೇವದಾಸಿ ಪಂಗಡದಲ್ಲಿ ಇರಲಿ, ಯಾವುದೇ ಮಹಿಳೆಯರಲ್ಲಿ ಈ ತೆರಿಗೆ ಕೊಡುತ್ತಿದ್ದವರು ಬಹಳ ವಿರಳ. ನಾಗರತ್ನಮ್ಮ ಒಂದು ಭವ್ಯವಾದ ಮನೆಯನ್ನು ಕಟ್ಟಿ ಅದರ ಗೃಹ ಪ್ರವೇಶಕ್ಕೆ ಮೈಸೂರು ಬಿಡಾರಂ ಕೃಷ್ಣಪ್ಪನವರವನ್ನು ಆಹ್ವಾನಿಸಿದ್ದಳು. ಪುರಂದರ ದಾಸರ ದೇವರನಾಮಗಳನ್ನು ಮದ್ರಾಸಿನಲ್ಲಿ ಮೊದಲಿಗೆ ಕೇಳಿದ್ದು ಇವರಿಂದ ಎಂದು ಅನೇಕರು ಪ್ರಶಂಸಿದರು.

ತ್ಯಾಗರಾಜರ ಕೃತಿಗಳನ್ನು ಹಾಡುವುದು ಇವಳ ವಿಶೇಷತೆ ಆಗಿತ್ತು. ತ್ಯಾಗರಾಜರ ಸಮಾಧಿ ತಿರುವಾಯೂರಿನಲ್ಲಿ ನಿರ್ಲಕ್ಷ ಸ್ಥಿತಿಯಲ್ಲಿ ಇರುವ ವಿಷಯ ಅವಳ ಗುರು ಬಿಡಾರಂ ಕೃಷ್ಣಪ್ಪ ನವರಿಂದ ತಿಳಿಯುತು. ಅಲ್ಲಿಯವರೆಗೆ ಈ ಸಮಾದ್ಜಿ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಈಗ ಈ ಸಮಾಧಿಯನ್ನು ನವೀಕರಿಸುವುದನ್ನು ತನ್ನ ಜೀವನ ಧ್ಯೇಯವನ್ನಾಗಿಸಿಕೊಂಡಳು. ತಿರುವಾಯೂರಿಗೆ ಬಂದು ಸಮಾಧಿಯನ್ನು ಗುರುತಿಸಿ ಅಲ್ಲಿ ಒಂದು ಮಂದಿರವನ್ನು ಕಟ್ಟುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದಳು. ಮದ್ರಾಸಿನಲ್ಲಿದ್ದ ಮನೆ ಮತ್ತು ಬಳಿ ಇದ್ದ ಒಡವೆಗಳನ್ನು ಮಾರಿ ಬಂದ ಹಣದಿಂದ ಈ ಕಟ್ಟಡದ ನಿರ್ಮಾಣ ೨೭/೧೦/೧೯೨೧ ರಲ್ಲಿ ಪ್ರಾರಂಭವಾಗಿ ೭/೦೧/೧೯೨೫ ರಲ್ಲಿ ಪೂರ್ಣಗೊಂಡಿತು. ನಂತರ, ಅನೇಕರ ಸಹಾಯದಿಂದ, ತಿರುವಾಯೂರಿನಲ್ಲಿ ಮೈಸೂರು ಛತ್ರವನ್ನೂ ಕಟ್ಟಿದಳು.

೧೮೪೭ರಲ್ಲಿ ತ್ಯಾಗರಾಜರು ತೀರಿಹೋದ ಹಲವಾರು ವರ್ಷಗಳ ನಂತರ ಕೆಲವು ಸಂಗೀತಗಾರರು ಅಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ಹಾಡುತ್ತಿದ್ದರು. ಆದರೆ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಸ್ವಂತ ಖರ್ಚಿನಲ್ಲಿ ಮಂದಿರ ನಿರ್ಮಾಣ ಮಾಡಿದ ಮೇಲೂ ಸಹ ನಾಗರತ್ನಮ್ಮನಿಗೆ ಇವರ ಜೊತೆಯಲ್ಲಿ ಹಾಡುವುದಕ್ಕೆ ಅವಕಾಶ ಸಿಗಲಿಲ್ಲ. ನಂತರ ೧೯೨೭ ಜನವರಿ ತಿಂಗಳಲ್ಲಿ ಮಹಿಳೆಯರದ್ದೇ ಒಂದು ಗುಂಪು ಮಾಡಿಕೊಂಡು, ಇದರಲ್ಲಿ ಅನೇಕರು ದೇವದಾಸಿಯರು, ಮಂದಿರದ ಆವರಣದಲ್ಲಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದರು. ನಂತರ ಎರಡೂ ಪಂಗಡಗಳು ಸೇರಿ ಒಪ್ಪಂದಕ್ಕೆ ಬಂದು ಈ ಆರಾಧನೆ ಒಂದಾಗಿ, ಇಂದು ಈ ಆರಾಧನೆ ಉನ್ನತ ಮಟ್ಟಕ್ಕೆ ಏರಿದೆ. ನೂರಾರು ಪ್ರಸಿದ್ಧ ಗಾಯಕರು ಅಲ್ಲಿ ಸೇರಿ ಸಾವಿರಾರು ಪ್ರೇಕ್ಷಕರ ಮುಂದೆ ಪಂಚರತ್ನ ಕೀರ್ತನೆಗಳನ್ನು ಹಾಡುವುದನ್ನ ನೋಡುವುದು ಒಂದು ಅದ್ಭುತ ದೃಶ್ಯ. ತ್ಯಾಗರಾಜರ ಆರಾಧನೆ ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುತ್ತದೆ.

ಹದಿನೆಂಟನೇ ಶತಮಾನದ ಒಬ್ಬ ದೇವದಾಸಿ ಪಂಗಡದ ತೆಲಗು ಕವಿ ಮುದ್ದುಪಲನಿ ( ೧೭೩೦-೧೭೯೦) ರಚಿಸಿದ "ರಾಧಿಕಾ ಸಂತ್ವನಂ" ನಾಗರತ್ನಮ್ಮನ ಗಮನಕ್ಕೆ ಬಂತು. ಇದರಲ್ಲಿ ರಾಧೆಯ ದೈಹಿಕ ಬಯಕೆಯ ಪ್ರಸ್ತಾವನೆ ಇತ್ತು. ಆದರೆ ೧೮೮೭ ರಲ್ಲಿ ಪ್ರಕಟಿಸಿದ ಭಾಷಾಂತರದಲ್ಲಿ "ರಸವತ್ತವಾದ" ವರ್ಣನೆಗಳನ್ನು ತೆಗೆದುಹಾಕಿದ್ದಲ್ಲದೇ, ಮುದ್ದುಪಲನಿ ಪ್ರತಾಪಸಿಂಹನ ಆಸ್ಥಾನದಲ್ಲಿ ಕವಿಯಾಗಿದ್ದಳು ಅನ್ನುವ ವಿಚಾರವನ್ನು ಸಹ ಬರೆದಿರಿಲಿಲ್ಲ. ಕಾರಣ ಬ್ರಿಟಿಷರ "Victorian Values" ಮತ್ತು "ಕೀಳು ದರ್ಜೆಯ" ದೇವದಾಸಿ ಬರೆದ ರಸವತ್ತಾದ ಕವಿತೆಗಳನ್ನು ಪ್ರಕಟಿಸುವುದು ಸಮಾಜದ ದೃಷ್ಟಿಯಲ್ಲಿ ಸರಿಯಲ್ಲ ಅನ್ನುವ ಊಹೆ ಕೆಲವರಿಗಿತ್ತು. ಉದಾಹರಣೆಗೆ ಇಂಗ್ಲೆಂಡ್ನಲ್ಲಿ ೧೯೨೮ರಲ್ಲಿ DH Lawrence ಬರೆದ Lady Chatterley's Lover ಪುಸ್ತಕ ನಿಷೇಧಿತವಾಗಿತ್ತು. ಎರಡು ಆವೃತ್ತಿಗಳನ್ನೂ ಓದಿ ನಾಗರತ್ನಮ್ಮನಿಗೆ ಅಸಮಾಧಾನವಾಗಿ ಮುದ್ದುಪಲನಿಯ ಮೂಲ ರಾಧಿಕಾ ಸಂತ್ವನಂ ಅನ್ನು ೧೯೧೦ ರಲ್ಲಿ Ramaswamy & Sons ಎಂಬ ಪ್ರಕಾಶಕರಿಂದ ಪ್ರಕಟಣೆ ಮಾಡಿಸಿದಳು. ಆದರೆ ಅನೇಕ ಸಂಪ್ರದಾಯವಾದಿ ವಿದ್ವಾಂಸರು ಇದನ್ನು ಪ್ರತಿಭಟಿಸಿ, ಮುದ್ದುಪಲನಿ ಒಬ್ಬ ವೈಶ್ಯೆ, ಅಂತಹ ಕೀಳು ದರ್ಜೆಯ ಮಹಿಳೆ ಬರೆದಿರುವುದನ್ನು ಜನರು ಓದಬಾರದು ಎಂದು ಹೇಳಿ ಸರ್ಕಾರ ಇದನ್ನು ಬಹಿಷ್ಕಾರ ಮಾಡಬೇಕು ಅನ್ನುವ ಒತ್ತಡ ತಂದರು. ನಾಗರತ್ನಮ್ಮ ಮತ್ತು ದೇವದಾಸಿ ಪಂಗಡದವರು ಒಬ್ಬ ದೇವದಾಸಿ ಮಹಿಳೆ ಇದನ್ನು ಬರೆದ್ದರಿಂದ ಪ್ರತಿಭಟನೆ ಮಾಡುತ್ತೀರ ಎಂದು ವಾದಿಸಿದರು. ಆದರೆ ಸರ್ಕಾರ ಇದನ್ನು ಒಪ್ಪಲಿಲ್ಲ. ೧೯೧೧ ರಲ್ಲಿ ಪೊಲೀಸ್ ಅಧಿಕಾರಿಗಳು, ಐಪಿಸಿ ೨೯೨ ಕಾನೂನಿನ ಪ್ರಕಾರ ಈ ಪುಸ್ತಕದ ವ್ಯಾಪಾರ ನಿಲ್ಲಿಸುವುದಕ್ಕೆ ಆಜ್ಞೆ ಮಾಡಿ ಮಾರಾಟಕ್ಕಿದ್ದ ಪುಸ್ತಕಗಳನ್ನು ವಶ ಮಾಡಿಕೊಂಡರು. ೧೯೪೭ರ ನಂತರ ಈ ಪುಸ್ತಕ ನಿಷೇಧವನ್ನು ರದ್ದು ಮಾಡಲಾಯಿತು.

ಇಪ್ಪತ್ತನೇ ಶತಮಾನದ ಮೊದಲಿನಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಕೆಲವು ಹಿಂದು ಪಂಗಡದವರಿಂದ ದೇವದಾಸಿಯರು ವೇಶ್ಯೆಯರು, ಇವರಿಂದ ಸಮಾಜಕ್ಕೆ ಹಾನಿ ಎಂದು ಇವರ ಪದ್ದತಿಗಳನ್ನು ನಿಲ್ಲಿಸಬೇಕೆಂದು ಪ್ರಯತ್ನ ಪಟ್ಟರು. ನಾಗರತ್ನಮ್ಮ ಇದನ್ನು ಪ್ರತಿಭಟಿಸಿ ತಮ್ಮದೇ ಸಂಘವನ್ನು (Union )ಕಟ್ಟಿ ಅದರ ಅಧ್ಯಕ್ಸಳಾಗಿ ಅವರ ಹಕ್ಕುಗಳಿಗಾಗಿ ಹೋರಾಡಿದಳು.
೧೯೨೭ರಲ್ಲಿ ತಮ್ಮ ಹಕ್ಕುಗಳನ್ನು ಕಾಪಾಡುವುದಕ್ಕೆ ಇಂಗ್ಲಿಷ್ ನಲ್ಲಿ ಬರೆದ "A Humble Memorandum of Devadasis" ಅನ್ನುವ ಪತ್ರವನ್ನು ಸರ್ಕಾರಕ್ಕೆ ಕೊಟ್ಟು ತನ್ನ ಪಂಗಡದವರ ಮಾನವ ಹಕ್ಕುಗಳನ್ನು ( Human Rights ) ಕಾಪಾಡಿ ಎಂದು ಮನವಿ ಮಾಡಿಕೊಂಡಳು.
ಅವಳ ಕೊನೆಕಾಲದಲ್ಲಿ ಡಿ.ವಿ.ಜಿ. ಇವಳನ್ನು ಭೇಟಿಮಾಡಿ ಆರೋಗ್ಯವನ್ನು ವಿಚಾರಿಸಿದರು. ಈ ಸಂಭಾಷಣೆಯನ್ನು ಡಿ.ವಿ.ಜಿ. ಹೀಗೆ ಬರೆದಿದ್ದಾರೆ:
"ನಾನು ಹುಟ್ಟಿದಾಗ ನಾಗರತ್ನ, ನಂತರ ಭೋಗರತ್ನ ಆದರೆ ಈಗ ರೋಗರತ್ನ" ಅಂತ ನಾಗರತ್ನಮ್ಮ ಹೇಳಿದ್ದಕ್ಕೆ, ಡಿ.ವಿ.ಜಿ. ಹೇಳಿದರಂತೆ - "ನೀನು ಇನ್ನೆರಡು ರತ್ನಗಳನ್ನು ಮರೆತೆ; ಒಂದು ರಾಗರತ್ನ ಮತ್ತು ತ್ಯಾಗರತ್ನ"
ಇದನ್ನು ಯಾರಿಗೂ ಹೇಳಬೇಡಿ ಅಂದಳಂತೆ ನಾಗರತ್ನಮ್ಮ!
ಈಕೆ ಒಬ್ಬ ಮಹಿಳೆಯರ ಹಕ್ಕುಗಳಿಗೆ ಹೋರಾಡಿದ ಮತ್ತು ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ ಎಂದನ್ನು ಪ್ರತಿಪಾದಿಸಿದ ಕನ್ನಡತಿ ಮತ್ತು ಕ್ರಾಂತಿಕಾರಿಣಿ.
ನಾಗರತ್ನಮ್ಮ ೧೯/೫/೧೯೫೨ ರಂದು ತನ್ನ ೭೩ರನೇ ವಯಸ್ಸಿನಲ್ಲಿ ತಿರುವಾಯೂರಿನಲ್ಲಿ ನಿಧನಳಾದಳು. ತ್ಯಾಗರಾಜರ ಸಮಾಧಿ ಪಕ್ಕದಲ್ಲೇ ಇವಳ ಸ್ಮಾರಕವನ್ನು ನಿರ್ಮಿಸಲಾಗಿದೆ.

ಈಕೆಯ ಜೀವನ ಚರಿತ್ರೆ ಬಗ್ಗೆ ಬೆಂಗಳೂರಿನ ರಂಗಶಂಕರದಲ್ಲಿ ನಾಗಾಭರಣರ ನಿರ್ದೇಶದಲ್ಲಿ ಒಂದು ನಾಟಕ ಪ್ರದರ್ಶನ ನಡೆಯಿಲಿದೆ.
ರಾಮಮೂರ್ತಿ
ಕಾಂಗಲ್ಟನ್ , ಚೆಶೈರ್
******************************
******************************

ಶ್ರದ್ಧಾಂಜಲಿ

ಕೇವಲ ಸಪ್ತಸ್ವರಗಳಿಂದ ಅದೆಂಥ ಅಲೌಕಿಕ  ಲೋಕವನ್ನು ಕಟ್ಟಿಕೊಡುತ್ತದೆ ಸಂಗೀತ!!  ಮಾನವ ಭಾವನೆಗಳಿಗೆಲ್ಲ ಬಣ್ಣತುಂಬುತ್ತದೆ. ನಿಮಿಷಾರ್ಧದಲ್ಲಿ ನವರಸಗಳ ಪ್ರಪಂಚ ಮೈತಳೆಯುತ್ತದೆ. ನಿಮಗಿದು ಅರ್ಥವಾಗಬೇಕೆಂದರೆ ಒಮ್ಮೆ ಟಿ.ವಿ. ವ್ಯಾಲ್ಯೂಮ್ ಪೂರ್ತಿ ಬಂದ್ ಮಾಡಿ ಬರೀ ದೃಶ್ಯವನ್ನು ನೋಡಿ. ಅಲ್ಲಿ ದೆವ್ವದ ಸೀನ್ ಇದ್ದರೂ ನಿಮಗೆ ಹೆದರಿಕೆ ಎನಿಸುವುದಿಲ್ಲ.  ನಾಯಕ -ನಾಯಕಿ ಅಪ್ಪಿ ಮುತ್ತಿಟ್ಟರೂ ನಿಮ್ಮ ಹೃದಯದಲ್ಲಿ ಶೃಂಗಾರ ರಸ ಜಿನುಗುವುದಿಲ್ಲ.  ನಾಯಕ ಫೈಟಿಂಗ್ ಮಾಡುತ್ತ ಏಕಕಾಲಕ್ಕೆ ನೂರು ಜನರನ್ನು ಕೆಡವಿದರೂ  ನೀವು ರೋಮಾಂಚಿತರಾಗುವುದಿಲ್ಲ. ಅಂತೂ  ಸಂಗೀತವಿಲ್ಲದೇ ರಸವಿಲ್ಲ..ಬಣ್ಣವಿಲ್ಲ. ಅಂಥ ಸಂಗೀತ ಲೋಕದ ಮಾಂತ್ರಿಕ ತಬಲಾಪಟು , ಹಲವಾರು ಪ್ರಶಸ್ತಿಗಳ ಗೌರವ ಹೆಚ್ಚಿಸಿದ ಉಸ್ತಾದ್ ಝಾಕೀರ್ ಹುಸೇನ್ ಅವರ ಶೃದ್ಧಾಂಜಲಿಗೆ ಮುಡಿಪು ಇಂದಿನ ಅನಿವಾಸಿ ಸಂಚಿಕೆ.  ಸಂಪಾದಕರು ಗತಕಾಲದ ಕಲಾವಿದರೊದಿಗಿನ ಸಾಕ್ಷಾತ್ ಪ್ರಸಂಗವನ್ನು ನೆನೆಸಿಕೊಂಡಿದ್ದಾರೆ. ರಾಧಿಕಾ ಜೋಶಿಯವರು ತಮ್ಮದೇ ಆದ ಅನನ್ಯ ಶೈಲಿಯ ಇಂಗ್ಲೀಷ್ ಕವನವೊಂದರ ಮೂಲಕ ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ. ಬನ್ನಿ.. ನೀವೂ ಓದಿ ನಿಮ್ಮ ಪಾಲಿನ ಅಂಜಲಿಯನ್ನು ಸಲ್ಲಿಸಿ.                           

~ ಸಂಪಾದಕಿ

ವಾಹ್! ಉಸ್ತಾದ್ ವಾಹ್!!

ಕೆಲವು ಚೇತನಗಳೇ ಹಾಗೆ. ಸುಮ್ಮನೇ ಅವರ ಹೆಸರು ಕೇಳಿದರೇನೇ  ಮನಕ್ಕೆಂಥದೋ ಹಾಯೆನ್ನಿಸುವ ಭಾವ, ಅದೇನೋ ನಿರಾಳ. ಎಲ್ಲಿಂದಲೂ, ಏನೂ ನೇರ ಸಂಬಂಧವಿರದೆಯೂ ಅದೇನೋ ಆತ್ಮೀಯ – ಆಪ್ತ ಅನುಭೂತಿ.  ಉಸ್ತಾದ್ ಝಾಕೀರ ಹುಸೇನ್ ಅಂಥದೇಒಂದು ಚೆಂದದ ಚೇತನ. ‘ ಚೆಲುವಯ್ಯಾ ಚೆಲುವೋ ತಾನಿತಂದಾನಾ’ ಅಂದಂತೆ ಅದೆಷ್ಟು ಚೆಲ್ವಿಕೆಗಳ  ಸಂಗಮ?! ಸುಂದರ ಶರೀರ- ಶಾರೀರ– ಅಂತ:ಕರಣಗಳು, ತಬಲಾವನ್ನು ನಾದದ ನದಿಯಾಗಿಸುವ ಅವರ ಶೈಲಿ, ನೆರೆದವರ ಮನ ತಿಳಿಯಾಗಿಸುವ ಲಘು ಹಾಸ್ಯದ  ಎಲ್ಲೆ ಮೀರದ ತೂಕದ ಮಾತುಗಳು. ಒಂದೊಂದೂ ನ ಭೂತೋ ನ ಭವಿಷ್ಯತಿ.

   ಎಲ್ಲಿಂದ, ಯಾವಾಗಿಂದ ಶುರುವಾದದ್ದು ಅವರ ನಂಟು ಎಂದು ಯೋಚಿಸಿ ನೋಡಿದರೆ – ‘ ವಾಹ್ !,ತಾಜ್ ಬೋಲಿಯೆ’ ದಿನಗಳಿಂದ ಅನ್ನಬಹುದು  ಸದಾ ಹಸನ್ಮುಖದ ಈ ಚೆಲುವ ಚೆನ್ನಿಗರಾಯನ ತಬಲಾದ ಮೇಲಿನ ಬೆರಳುಗಳ  ಆ ಸುರಳೀತ, ಸುಲಲಿತ ನಾಧಿನ್ ಧಿನ್ನಾ ನರ್ತನ, ಅಲೆಅಲೆಗುಂಗುರುಗೂದಲಿನ ತೋಂತನನ ನೋಡುತ್ತಿದ್ದರೆ ನಮ್ಮ ಹೃದಯವೂ ‘ ಧಕ್ ಧಕ್ ಕರನೇ ಲಗಾ’  ಆಗಿ ಅಮೃತವಾಹಿನಿಯೊಂದು ಹರಿಯುತ್ತಿದ್ದುದು ಸುಳ್ಳಲ್ಲ. ಸಂಗೀತದ ಬಗ್ಗೆ ಒಂದು ಕೈ ಒಲವು ಹೆಚ್ಚಾದದ್ದೇ ಇವರಿಂದ ಎನ್ನಬಹುದು. ನಮ್ಮ ಅಡುಗೆಮನೆಯಲ್ಲಿ red label   ಹೋಗಿ Taj ಚಹಾ ಬರಲೂ ಇವರೇ ಕಾರಣ.

ಕಲೆಯ ಬಗೆಗಿನ ಅವರ ಪ್ರೀತಿ, ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತಿರುವ ನಯವಿನಯ, ಸಾದಾತನಗಳು, ಮಾನವೀಯತೆಗೆ ಮಿಡಿವ ಅವರ ಮಾತು – ವರ್ತನೆಗಳು ಅವರನ್ನು ಬೇರೆಯದೇ ನೆಲೆಯಲ್ಲಿ ನಿಲ್ಲಿಸುತ್ತವೆ. ಅವರೇ ಹೇಳುವಂತೆ ಸಂಗೀತಕ್ಕಿರುವ ಶಕ್ತಿ ಅಪರಿಮಿತ. ಅದು ಯಾವಾಗಲೂ ಎಲ್ಲ ದೇಶ, ಕಾಲ, ಜನಾಂಗದಲ್ಲೂ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತದೆ. ಯಾವ ಧರ್ಮಕ್ಕೂ, ಪ್ರಭುತ್ವಕ್ಕೂ ಇರದ ಅಸಾಧಾರಣ ಶಕ್ತಿಯದು. 

   ಅದು ಸುಮಾರು 88 – 89 ರ ಇಸ್ವಿ. ‘ ಸುರ್ – ಸಂಗಮ್’ ಎನ್ನುವ ಕಾರ್ಯಕ್ರಮಕ್ಕೆ ಝಾಕೀರ್ ಹುಸೇನ್ ಬರುತ್ತಿದ್ದಾರೆನ್ನುವ ಸುದ್ದಿ ಗೊತ್ತಾಯಿತು. ಆದರೆ ಟಿಕೆಟ್ ದರ  500 ರೂಪಾಯಿಗಳು. ಆಗಿನ ಕಾಲಕ್ಕೆ 500 ರ ಮುಖವನ್ನೂ ನಾವು ನೋಡಿರಲಿಲ್ಲ. ಸಿನೆಮಾ  ನೋಡಲು ಹೋದರೆ  ಮೂರು ರೂಪಾಯಿ ಇಪ್ಪತ್ತು ಪೈಸೆಯ ಬಾಲ್ಕನಿ ಟಿಕೆಟ್ ತೆಗೆಸಲೂ ಹಿಂದು ಮುಂದೆ ನೋಡುವ ಕಾಲವದು. ಕಾಲೇಜಿನ ಲೆಕ್ಚರರ್ ಆಗಿದ್ದ ನಮ್ಮ ಮುದ್ದಣ್ಣ ಮಾಮಾಗೆ ಎರಡು ಪಾಸ್ ಸಿಕ್ಕಿತ್ತು. ನಮ್ಮದು 5 ಜನರ ಗ್ಯಾಂಗ್. ( ನಾನು ಹಾಗೂ  4 ಜನ ಮಾಮಾನ ಮಕ್ಕಳು) ನಾವೆಲ್ಲರೂ ನಮಗೂ ಹೋಗಲೇಬೇಕು ಎಂಬ ಒಕ್ಕೊರಲಿನ ಗಾಯನವನ್ನೂ, ಝಾಕೀರ್ ಹುಸೇನ್ ರನ್ನು ನೋಡಲೇಬೇಕೆಂದು ಧಿಮಿಧಿಮಿ ನೃತ್ಯವನ್ನೂ ಶುರುಮಾಡಿದೆವೆನ್ನಿ. “ಅಲ್ರೇ , ನಿಮಗೇನು ಮಹಾ ರಾಗತಾಳ ಜ್ಞಾನ ಅದ? 2-3 ತಾಸಿನ ಕಛೇರಿ ಅದು. ಬ್ಯಾಸರ ಆಗಿ ಬಿಡತದ ನಿಮಗ.” ಅಂದ ಮಾಮನಿಗೆ “ ನಮಗೆಲ್ಲಿ ತಬಲಾ ಕೇಳೂದದ? ಝಾಕೀರ ಹುಸೇನ್ ರನ್ನು ಹತ್ತಿರದಿಂದ ನೋಡಿ ಖುಷಿ ಪಡೂದದ” ಎನ್ನುವ ನಮ್ಮ ಉತ್ತರ ಸಿದ್ಧವಾಗಿತ್ತು  “ ದಿನಾ ಬೆಳಗಾದ್ರ ಟಿವ್ಯಾಗ ನೋಡತಿರಲಾ?” “ ಹೂಂ. ದಿನಾ ಟಿವ್ಯಾಗ ನೋಡಿ ನೋಡೇ ಅವರನ್ನ ನೋಡಲೇಬೇಕು ಅನ್ನಿನಿಸಿದ್ದು. ಇಲ್ಲೀತನಾ, ನಮ್ಮ ಬಿಜಾಪೂರಿಗೆ ಅದರಲ್ಲೂ ನಮ್ಮ ಮನೆ ಹತ್ತಿರದGovt.high school ಗೆ ಬರುತ್ತಿದ್ದಾರೆ. ನಾವು ಹೋಗಲಿಲ್ಲ ಅಂದರೆ ಅದ್ಹೇಗೆ ?” ಎನ್ನುವುದು ನಮ್ಮ ವಾದ. ಬೆಳಗ್ಗೆಯಿಂದ ಸಂಜೆಯವರೆಗೆ ಮಾಮನ ಮುಖ ಕಂಡೊಡನೆ ‘ ಝಾಕೀರ್, ತಬಲಾ. ಝಾಕೀರ, ತಬಲಾ’  ಅಂತ ಸ್ಲೋಗನ್ ಕೂಗುತ್ತ ದೊಡ್ಡ ಹರತಾಳವನ್ನೇ ಮಾಡಿ ಅಂತೂ ಯಶಸ್ವಿಯಾದೆವೆನ್ನಿ.ನಮ್ಮ ಬಡಬಡಿಸುವಿಕೆಗೆ, ಹಟಕ್ಕೆ ಸೋತ ನಮ್ಮ ಸೋದರಮಾವ 1,500 ರೂಪಾಯಿಗಳನ್ನು (ಆಗಿನ ಕಾಲಕ್ಕೆ) ಕೊಟ್ಟು ಇನ್ನೂ ಮೂರು ಟಿಕೆಟ್ ಖರೀದಿಸಿ ನಮ್ಮನ್ನು ಆ ಕಾರ್ಯಕ್ರಮಕ್ಕೆ ಕಳಿಸಿದ್ದರು. ಅವರು ಸ್ವಲ್ಪ  ಜೋರು ಮಾಡಿ ನಮ್ಮನ್ನು ಸುಮ್ಮನಾಗಿಸಬಹುದಿತ್ತು. ‘ ರೊಕ್ಕದ ಗಿಡಾ ಅದ ಎನು ಹಿಂದ?’ ಎನ್ನಬಹುದಿತ್ತು. ಆದರೆ ಹಾಗೆ ಮಾಡದೇ ನಮ್ಮ ಬಾಲಿಶ ಹುಚ್ಚುತನವನ್ನು ಅಪರೋಕ್ಷವಾಗಿ ಬೆಂಬಲಿಸಿದ ಆ ತಾಯಂಥಕರಣದ ಜೀವಕ್ಕೆ ಎಷ್ಟು ಮಣಿದರೂ ಕಡಿಮೆ ಎನಿಸುತ್ತದೀಗ.

 ಬಂಗಾರದ ಗುಂಡಿ, ಚೈನು ಪೋಣಿಸಿದ, ತಿಳಿನೀಲಿ ಬಣ್ಣದ ಉದ್ದನೆಯ ಕುರ್ತಾ, ಬಿಳಿ ಶುಭ್ರ ಪಾಯಿಜಾಮಾ ಧರಿಸಿದ ಅವರು ಸ್ಟೇಜ್ ಮೇಲೆ ಬಂದರೆ ನನಗೆ ಯಾರೋ ದೇವ ಮಾನವ ನಡೆದು ಬಂದಂಥ ಭಾವ. ತಬಲಾದ ರಠಈಕ ಅರ್ಥವಾಗದಿದ್ದರೂ ಆ ನಾದದ ಲಹರಿ ತಾನಾಗೇ ನಮ್ಭನ್ನು ತನ್ನ ಸೆಳವಿನಲ್ಲಿ ಎಳೆದೊಯ್ದು ನಮ್ಮನ್ನು ತೇಲಿಸಿ, ತೊಯ್ಯಿಸಿದ್ದು, ಆ ತಬಲಾ – ಡಗ್ಗಾಗಳ ಮೇಲೆ ಅವರು ಹರಿಸಿದ ಆ ದೈವೀಕ ನಾದದ ಹೊಳೆ, ಗುಡುಗಿನ ಆರ್ಭಟ, ಮಳೆಯ ಟಪಟಪ  ಹನಿಗಳ ಸದ್ದು, ಬೀಸುವ ರೊಯ್ ರೊಯ್ ಗಾಳಿ, ಶಿವನ ಡಮರುಗ, ಕೃಷ್ಣನ ಪಾಂಚಜನ್ಯ, ಕುದುರೆಯ ಹೇಷಾರವ, ಖುರಪುಟ.. ಕೇಳುತ್ತಿದ್ದ ಶ್ರೋತೃಗಳೆಲ್ಲ ದಂಗಾಗಿದ್ದರು; ಗುಂಗಿನಲ್ಲಿದ್ದರು.

ಆಗ ಸೆಲ್ಫಿಯ ಕಾಲವಲ್ಲ, ಆಟೋಗ್ರಾಫ್ ದ ಸ್ಪೆಲ್ಲಿಂಗೂ ಗೊತ್ತಿರಲಿಲ್ಲ. ಆದರೆ ಆ ಸುನೆಹರೆ ಕ್ಷಣಗಳು ಎದೆಯ ಗೂಡಲ್ಲಿ ನಿತ್ಯನಿರಂತರ ಹಸಿರು.ಇಷ್ಟು ಬೇಗ ಹೊರಡಬಾರದಿತ್ತು ಉಸ್ತಾದ್ ನೀವು. ಇನ್ನೂ ಇರಬೇಕಿತ್ತು.’ ಸುರ್ ಕಿ ಸಾಧನಾ ಪರಮೇಶ್ವರ್ ಕಿ’ ಎಂಬ ಆ ನಿಮ್ಮ ‘ ಸೋಚ್’ ಇನ್ನಷ್ಟು ಹರಡಬೇಕಿತ್ತು. “ ಕಲಾವಿದ ಹೋದರೇನಂತೆ? ಕಲೆ ಎಲ್ಲಿಗೂ ಹೋಗುವುದಿಲ್ಲ..ಯಾವೂದೂ ಖಾಲಿಯಾಗುವುದಿಲ್ಲ” ಎಂದು ನೀವೇ ಹಲವಾರು ಬಾರಿ ಸಂದರ್ಶನಗಳಲ್ಲಿ ಹೇಳುತ್ತಿದ್ದಿರಾದರೂ ನೀವು ತೆರವು ಮಾಡಿದ ಜಾಗ ಸದಾ ಖಾಲಿಯೇ. ಅದಕ್ಕ್ಯಾವ ಪರ್ಯಾಯವೂ ಇಲ್ಲ. ಹೋಗಿ ಬನ್ನಿ; ಭಾವಪೂರ್ಣ ಶೃದ್ಧಾಂಜಲಿಗಳು.

~ಗೌರಿ ಪ್ರಸನ್ನ

No photos, no videos to mark my tale,
Yet his magic fills my spirit’s sail.
Ustad Zakir Hussain, the tabla’s very name,
A legend whose glory ignites music’s flame.

As a child, through palace halls and Dasara nights,
I witnessed his art beneath Mysuru’s lights.
The memory is faint, yet vivid and clear,
A childlike smile—so pure, so near.

Oh, that smile! A symphony of untold lore,
A joy that sprang from his music’s core.
Each beat of the tabla, each rhythmic embrace,
Lit up his eyes, adorned his face.

Did he ever feel nerves, or pressures vast?
If so, that smile—steadfast, unsurpassed—
Taught us all, in life’s demanding race,
To wear our joy as a saving grace.

I’ve watched his videos, a hundred, no less,
Never a frown, never distress.
Eyes that sparkled, fingers that flew,
Creating celestial rhythms anew.

Even the tea ad, with his father in frame,
Hair aflutter, rhythm the same,
Added a cadence, a timeless beat,
Turning the mundane into something sweet.

My memories now soar beyond the clouds,
Among the stars, where his spirit resounds.
For Zakir Hussain, a maestro so bright,
Plays on forever, in music’s eternal light.

~ ರಾಧಿಕಾ ಜೋಶಿ