ಬೆಂಗಳೂರಿನ ಕೆಲವು ಇಂಗ್ಲಿಷ್ ಹೆಸರಿನ ರಸ್ತೆ ಮತ್ತು ವಸತಿ ಪ್ರದೇಶಗಳ ಇತಿಹಾಸ : ರಾಮಮೂರ್ತಿ

ಈ ವಾರದ ಸಂಚಿಕೆಯಲ್ಲಿ ರಾಮಮೂರ್ತಿ ಅವರು ಬೆಂಗಳೂರು ನಗರದ ರಸ್ತೆಗಳ ಇತಿಹಾಸವನ್ನು ಕುರಿತು ಲೇಖನ ಬರೆದಿದ್ದಾರೆ. ಕೆಂಪೇಗೌಡರು ಹುಟ್ಟು ಹಾಕಿದ ನಗರವನ್ನು ನಂತರದಲ್ಲಿ ಆಳಿದ ಬ್ರಿಟಿಷರು ನಗರಕ್ಕೆ ತಮ್ಮದೇ ಆದ ಛಾಪನ್ನು ಮೂಡಿಸಿ ಇತಿಹಾಸವನ್ನು ಬದಲಿಸಿದರು. ಅದರ ಕುರುಹಾಗಿ ನಮ್ಮ ಹೆಮ್ಮೆಯ ನಗರದಲ್ಲಿ ಇರುವ ಹಲವಾರು ಪ್ರತಿಷ್ಠಿತ ರಸ್ತೆಗಳು ಬ್ರಿಟಿಷ್ ಅಧಿಕಾರಿ ಮತ್ತು ಗಣ್ಯರ ಹೆಸರನ್ನು ಹೊತ್ತಿದೆ. ಇತ್ತೀಚಿಗೆ ಆ ಹೆಸರುಗಳನ್ನು ಬದಲಿಸಲು ಕೆಲವರು ದೇಶ ಭಕ್ತರು ಒತ್ತಾಯ ಪಡಿಸುತ್ತಿದ್ದಾರೆ. ರಸ್ತೆಗಳ, ನಗರಗಳ ಹೆಸರು ಬದಲಾಯಿಸಿದ ತಕ್ಷಣ ಇತಿಹಾಸ ಸತ್ಯ ಬದಲಾಗುವುದೇ? ಯಾವ ಹೆಸರು ನೂರಾರು ವರ್ಷಗಳಿಂದ ಜನರ ನಾಲಿಗೆಯಲ್ಲಿ ಸ್ಮೃತಿಯಲ್ಲಿ ಜೀವಂತವಾಗಿದೆಯೋ, ಜನಪ್ರೀಯವಾಗಿದೆಯೋ ಅದನ್ನು ಉಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂಬುದು ಕೆಲವರ ಅನಿಸಿಕೆ. ಮುಂದಿನ ಪೀಳಿಗಿಗೆ ಇದರ ಅರಿವು ಬೇಕು. ಈ ವಿಚಾರ ಏನೇ ಇರಲಿ ರಾಮಮೂರ್ತಿ ಅವರು ಬ್ರಿಟಿಷ್ ರಾಜ್ ಆಳ್ವಿಕೆಯ ಕೆಲವು ಹಿನ್ನೆಲೆ ಮಾಹಿತಿಯನ್ನು ಇಲ್ಲಿ ಒದಗಿಸಿದ್ದಾರೆ. ಬೆಂಗಳೂರಿನ ಪರಿಚಯ ಇರುವ ಓದುಗರಿಗೆ ಇದು ಪುಳಕ ನೀಡುವ ಬರಹ 
- ಸಂ.
***************************************
ಆಂಗ್ಲರ ಆಳ್ವಿಕೆ ಕಳೆದು ಸುಮಾರು ಎಂಟು ದಶಕಗಳೇ ಸಂದರೂ ಬೆಂಗಳೂರಿನಲ್ಲಿ ಅನೇಕ ಇಂಗ್ಲಿಷ್ ಹೆಸರಿನ ರಸ್ತೆಗಳು ಮತ್ತು ಪ್ರದೇಶಗಳು ಇನ್ನೂ ಉಳಿದಿವೆ. ಪ್ರತಿಯೊಂದು ಹೆಸರಿನ ಹಿಂದೆ ಹತ್ತೊಂಬತ್ತನೇ ಶತಮಾನದಲ್ಲಿದ್ದ ಒಬ್ಬ ಬ್ರಿಟಿಷ್ ಪುರುಷನ ಹಿನ್ನಲೆ ಅಥವಾ ಸಂಪರ್ಕ ಇರುವುದು ಕಂಡು ಬರುತ್ತೆ. ಸ್ವಾತಂತ್ರ್ಯ ಬಂದ ಮೇಲೆ, ಸ್ವಾಭಿಮಾನದಿಂದ ಕೆಲವು ಹೆಸರುಗಳು ಬದಲಾದವು. ಆದರೆ ಜನರು ಇನ್ನೂ ಹಲವನ್ನು ಹಳೆಯ ಹೆಸರಿಂದ ಕರೆಯುತ್ತಾರೆ. ಉದಾಹರಣೆಗೆ, ಬಸವನಗುಡಿಯ Surveyors Street, ಈಗ ಅಧಿಕೃತವಾಗಿ ಕೃಷ್ಣ ಶಾಸ್ತ್ರೀ ರಸ್ತೆ ಆಗಿದ್ದರೂ ಜನ ಸಾಮಾನ್ಯರ ಬಾಯಲ್ಲಿ ಹಳೇ ಹೆಸರೇ ಉಳಿದಿದೆ! 

೧೮೦೪ ರಲ್ಲಿ ಬ್ರಿಟಿಷರು ಸ್ಥಾಪಿಸಿದ ಬೆಂಗಳೂರಿನ ದಂಡು (Cantonment), ದಕ್ಷಿಣ ಭಾರತದಲ್ಲಿಯೇ ದೊಡ್ಡ ಮಿಲಿಟರಿ  ಪ್ರದೇಶವಾಗಿತ್ತು. ಇದರಲ್ಲಿ ಮುಖ್ಯವಾದ ಜಾಗ ಪರೇಡ್ ಗ್ರೌಂಡ್ಸ್. ಇಲ್ಲಿ  ಬ್ರಿಟಿಷರ ಸೈನ್ಯ ತರಬೇತಿ ಪಡೆಯುತ್ತಿತ್ತು. ಈಗಲೂ ಜನವರಿ ೨೬ ರಂದು ಇಲ್ಲೇ ಗಣರಾಜ್ಯದ ಪರೇಡ್ ನಡೆಯುವುದು.  ಇದರ ಸಮೀಪದಲ್ಲಿ ಕಬ್ಬನ್ ಪಾರ್ಕ್ ನಿರ್ಮಾಣವಾಯಿತು. Cantonment ನ  ಸುತ್ತಮುತ್ತ ಇದ್ದ ಜಾಗದಲ್ಲಿ ಬ್ರಿಟಿಷ್  ಕುಟುಂಬದವರು ವಾಸ್ತವ್ಯ ಹೂಡಿದರು, ಈ ಪ್ರದೇಶಕ್ಕೆ ತಮ್ಮ ಹೆಸರುಗಳನ್ನೂ ಕೊಟ್ಟರು: White Field , Austin  Town, Fraser Town, Cooke Town ಇತ್ಯಾದಿ. ಇದು ಸುಮಾರು ೧೫೦ ವರ್ಷಗಳ ಹಿಂದಿನ ಮಾತು. ಈಗಲೂ ಈ ಹೆಸರುಗಳು ಉಳಿದಿವೆ. ಪೂರ್ವ ದಿಕ್ಕಿನಲ್ಲಿರುವ ಈಗಿನ Whitefield ಪ್ರದೇಶವು, ೧೮೮೨ ರಲ್ಲಿ ಚಾಮರಾಜ ಒಡೆಯರ್ ಮಹಾರಾಜರು Anglo Indian ಜನಾಂಗದವರು ವಾಸ ಮಾಡುವುದಕ್ಕೆ ಡೇವಿಡ್ ಇಮ್ಯಾನುಯಲ್ ವೈಟ್ ಅವರಿಗೆ ಕೊಟ್ಟ ೩೭೫೦ ಎಕರೆ ಜಮೀನು. ಈತ Anglo Indian ಸಂಘದ ಅಧ್ಯಕ್ಷನಾಗಿದ್ದ. ಅನೇಕರು ೫೦ ಕಿ.ಮೀ ದೂರದಲ್ಲಿದ್ದ KGF ಚಿನ್ನದ ಗಣಿ ಯಲ್ಲಿ ಕೆಲಸದಲ್ಲಿದ್ದರು. ಹತ್ತಿರದಲ್ಲೇ ಕಟ್ಟಿದ ರೈಲು ನಿಲ್ದಾಣದಿಂದ ಕೆಲಸಕ್ಕೆ ಹೋಗಬಹುದಾಗಿತ್ತು. ಈಗ ವೈಟ್ ಫೀಲ್ಡ್ ನಲ್ಲಿ ಬಹು ದೊಡ್ಡ IT ಸಂಸ್ಥೆಗಳಲ್ಲಿ  ಸಾವಿರಾರು ಜನರು ಕೆಲಸದಲ್ಲಿದ್ದಾರೆ. ಹೀಗೆ, ಪ್ರತಿಯೊಂದು ಪ್ರದೇಶಕ್ಕೂ ಒಂದು ಇತಿಹಾಸ ಇದೆ.  

ಈಗ ಕೆಲವು ರಸ್ತೆಗಳ ಇತಿಹಾಸವನ್ನು ನೋಡೋಣ. ಮುಖ್ಯವಾದ ರಸ್ತೆಗಳು, Avenue Road, Brigade Road, Cubbon Road , Cunningham Road, Millers Road, Krumbigal  Road, Lavelle  Road, Sankey Road, St. Marks Road  ಇತ್ಯಾದಿ. ಇದರಲ್ಲಿ ಅವೆನ್ಯೂ ರಸ್ತೆ ಬಹಳ ಹಳೇ ಮತ್ತು ಮುಖ್ಯವಾದ ರಸ್ತೆ. ದೊಡ್ಡ ಪೇಟೆ ಇದರ ಮುಂಚಿನ ಹೆಸರು. ಈಗಿನ Majestic ನಿಂದ  ಕೆಂಪೇಗೌಡರು ಕಟ್ಟಿದ ಕೋಟೆ ದಾಟಿ,  ಟಿಪ್ಪು ಅರಮನೆವರೆಗೆ ಇದ್ದ ರಸ್ತೆ. ಇದಕ್ಕೆ ರಾಜಬೀದಿ ಎಂದೂ ಹೆಸರಿತ್ತು. ೧೮೮೪ ನಲ್ಲಿ ಈ ರಸ್ತೆ Avenue Road ಆಯಿತು ಅನ್ನುವ ದಾಖಲೆ ಇದೆ. ಒಂದು ಕಾಲದಲ್ಲಿ ಸಾಲು ಮರಗಳು, ತೆಂಗಿನ ಮರಗಳು ಇದ್ದವು ಈ ರಸ್ತೆಯ ಉದ್ದಕ್ಕೂ ಇದ್ದವು.  ಈಗ ವ್ಯಾಪಾರದ ರಸ್ತೆ, ಇಲ್ಲಿ ಸಿಗದೇ ಇರುವ ಪದಾರ್ಥವೇ ಇಲ್ಲ ಅಂದರೆ ತಪ್ಪಲಾಗರಾದು.  
ಕನ್ನಿಂಗ್ ಹ್ಯಾಮ್ ನ

ಈಗಿನ ವಸಂತ ನಗರದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಗೆ ಹೆಸರು ಬಂದಿದ್ದು ಸ್ಕಾಟ್ಲೆಂಡ್ ಮೂಲದ ಫ್ರಾಂಸಿಸ್ ಕನ್ನಿಂಗ್ ಹ್ಯಾಮ್ನಿಂದ (೧೮೨೦-೧೮೭೫). ಈಸ್ಟ್ ಇಂಡಿಯಾ ಕಂಪನಿಯ ಸೈನಿಕ ಶಾಲೆಯಲ್ಲಿ ತರಬೇತಿ ಪಡೆದು ಮದ್ರಾಸ್ ರೆಜಿಮೆಂಟ್ ಗೆ ಸೇರಿ, ೧೮೫೦ರಲ್ಲಿ ಮೈಸೂರು ಪ್ರಾಂತ್ಯದ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ನವರ ಸಿಬ್ಬಂದಿಯಾಗಿ ಕೆಲಸ ಮಾಡಿ ಲಾಲ್ ಬಾಗ್ ತೋಟ ಮತ್ತು ಬೆಂಗಳೂರಿನ ಅನೇಕ ಪ್ರಮುಖ ಕಟ್ಟಡಗಳನ್ನು ಕಟ್ಟಿದವನು. ಇದರಲ್ಲಿ ಮುಖ್ಯವಾದದ್ದು, ಸರ್ಕಾರದ ಅತಿಥಿ ಗೃಹ “ಬಾಲಬ್ರೂಯಿ”. ಇವನ ಇಬ್ಬರು ಸಹೋದರರೂ ಸಹ ಭಾರತದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಇವನ ಅಣ್ಣ, ಜನರಲ್ ಅಲೆಕ್ಸಾಂಡರ್ Indian Archaeology ಸಂಸ್ಥೆಯನ್ನು ಸ್ಥಾಪಿಸಿದವನು ಮತ್ತು ತಮ್ಮ ಮೇಜರ್ ಜಾನ್ “History of the Sikhs ” ಬರೆದವನು. ಫ್ರಾನ್ಸಿಸ್ ಕನ್ನಿಂಗ್ ಹ್ಯಾಮ್ ಸಹ ದೊಡ್ಡ ಬರಹಗಾರನು. ನಿವೃತನಾದ ಮೇಲೆ ಮೈಸೂರು ಮಹಾರಾಜರಗೆ ಸಲಹೆಗಾರನಾಗಿ ಸೇರಿ ೧೮೭೧ರಲ್ಲಿ ಇಂಗ್ಲೆಂಡ್ ಗೆ ಮರಳಿದ ಮೇಲೆ ತನ್ನ ಸಾಹಿತ್ಯ ಚಟುವಟಿಕೆಯನ್ನು ಪುನರಾರಂಭಿಸಿದ. ಡಿಸೆಂಬರ್ ೧೮೭೫ ನಿಧನವಾದ. ಒಂದು ವಿಚಿತ್ರ ವಿಷಯ, ಇವನ ಭಾವ ಚಿತ್ರ ಎಲ್ಲೂ ಇಲ್ಲ , ಸ್ಕಾಟ್ ಲ್ಯಾಂಡ್ ನಲ್ಲಿ ಅಮೃತ ಶಿಲೆಯ ಪ್ರತಿಮೆ ಮಾತ್ರ ಇದೆ.

ಸರ್ ರಿಚರ್ಡ್ ಸ್ಯಾಂಕಿ (೧೮೨೯-೧೯೦೮) ಹುಟ್ಟಿದ್ದು ೨೨/೩/೧೮೨೯ ರಂದು ಐರ್ಲೆಂಡ್ನಲ್ಲಿ. ೧೮೪೫ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ ಶಾಲೆಯಲ್ಲಿ ತರಬೇತು ಪಡೆದು, ಮದ್ರಾಸ್ ರೆಜಿಮೆಂಟ್ ಗೆ ಸೇರಿ ಭಾರತದ ಅನೇಕ ಕಡೆ ಇಂಜಿನಿಯರ್ ಆಗಿ ಕೆಲಸ ಮಾಡಿ, ೧೮೬೧ ರಲ್ಲಿ ಮೈಸೂರು ಸಂಸ್ಥಾನದಲ್ಲಿ PWD (Public Works Department ) ಇಲಾಖೆ ಸೇರಿದ. ರಾಜ್ಯದ ನೀರಾವರಿ ಅಭಿವೃದ್ಧಿಯ ಯೋಜನೆ ಸ್ಯಾಂಕಿಯ ಕೊಡುಗೆ. ಬೆಂಗಳೂರಿನ ಕೆರೆ ಸ್ಯಾಂಕಿ ಟ್ಯಾಂಕ್ ಮತ್ತು ಸುತ್ತ ಮುತ್ತಿನ ಕೆರೆಗಳಿಗೆ ಆಣೆಕಟ್ಟು ಹಾಕಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಸುಧಾರಿಸಿದ್ದು ಈತನೇ. ಇದಲ್ಲದೆ, ಬೆಂಗಳೂರಿನ ಮ್ಯೂಸಿಯಂ(೧೮೭೭) ಈಗಿನ ಹೈಕೋರ್ಟ್ (ಅಠಾರ ಕಚೇರಿ – ೧೮೬೪), ಸೈನ್ಟ್ ಆಂಡ್ರೂ ಚರ್ಚ್ (೧೮೬೪), ಮೇಯೋ ಕಟ್ಟಡ (೧೮೭೦) ಇತ್ಯಾದಿ ಕಟ್ಟಡಗಳನ್ನು ಕಟ್ಟಿದ. ನಂತರ ಮದ್ರಾಸ್ ಪ್ರಾಂತ್ಯದಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡು ಮದ್ರಾಸ್ ಅಭಿವೃದ್ಧಿಗೆ ನೇರವಾದ. ಮರೀನಾ ಬೀಚ್ ಮತ್ತು ಅನೇಕ ಉದ್ಯಾನವನಗಳ ನಿರ್ಮಾಣ ಮಾಡಿದ. ಮದ್ರಾಸ್ ವಿಶ್ವವಿದ್ಯಾನಿಲಯದ Fellow ಆಗಿ ಆಯ್ಕೆಯಾಗಿ ಮದ್ರಾಸ್ ವಿಧಾನ ಪರಿಷತ್ತಿನಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸಿದ. ೧೮೮೪ ನಲ್ಲಿ ನಿವೃತನಾದಮೇಲೆ ಐರ್ಲೆಂಡ್ ನಲ್ಲಿ Board of Works ನ ಅಧ್ಯಕ್ಷನಾಗಿ ಅನೇಕ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ. ನವಂಬರ್ ೧೯೦೮ ರಲ್ಲಿ ಲಂಡನ್ Grosvenor Place ನಲ್ಲಿ ನಿಧನವಾದ. ಇವನ ಸಮಾಧಿ Sussex ನಲ್ಲಿರುವ Hove ನಲ್ಲಿದೆ.

ಲಾವೆಲ್ ರಸ್ತೆಯ ಹೆಸರಿನ ಮೂಲ, ಐರ್ಲೆಂಡಿನ ಮೈಕಲ್ ಲಾವೆಲ್. ಸ್ಕಾಟಿಷ್ ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇರಿ ನ್ಯೂಜಿಲ್ಯಾಂಡ್ ನಲ್ಲಿ ಮಾವೋರಿ ಯುದ್ಧದಲ್ಲಿ ಭಾಗವಾಗಿ, ಅಲ್ಲಿನ ಗಣಿಗಳ ಅಧ್ಯನ ಮಾಡಿ ಭಾರತಕ್ಕೆ ಬಂದ. ಇಲ್ಲಿ ಚಿನ್ನದ ಗಣಿಗಳ ಬಗ್ಗೆ ಸಂಶೋಧನೆ ಮಾಡಿ , ಕೊನೆಗೆ ಕೋಲಾರ ಗಣಿಗಳನ್ನು ಅಗೆಯಲು ೧೮೭೩ ರಲ್ಲಿ ಬ್ರಿಟಿಷ್ ಸರ್ಕಾರದಿಂದ ಅನುಮತಿ ಪಡೆದು KGF (Kolar Gold Fields) ಸಂಸ್ಥೆಯನ್ನು ಸ್ಥಾಪಿಸಿದ. ಆದರೆ ಇದನ್ನು ನಡೆಸುವುದಕ್ಕೆ ಬೇಕಾದ ಬಂಡವಾಳ ಇವನಲ್ಲಿ ಇರಲಿಲ್ಲ. ಅನೇಕರ ಸಹಾಯದಿಂದ ಕೆಲವು ವರ್ಷ ನಡೆಸಿ ಕೊನೆಗೆ ತನ್ನ ಪಾಲನ್ನು ಮಾರಿ ಬೆಂಗಳೂರಿನಲ್ಲಿ ಒಂದು ಭವ್ಯವಾದ ಮನೆಯನ್ನು (Oorgaum House) ಕಟ್ಟಿದ. ಈ ರಸ್ತೆ ಈಗ ಲಾವೆಲ್ ರಸ್ತೆ. ಈ ಮನೆಯನ್ನು ಮೈಸೂರ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಪೀಟರ್ ಡಿಸೋಜಾ ಅನ್ನುವರಿಗೆ ಮಾರಿ ೧೯೧೮ ರಲ್ಲಿ ಇಂಗ್ಲೆಂಡಿಗೆ ಮರಳಿದ.

ರೆಸಿಡೆನ್ಸಿ ರಸ್ತೆ
ಈಗ ಇದು ಬಹಳ ದೊಡ್ಡ ರಸ್ತೆ. ಒಂದು ತುದಿಯಲ್ಲಿ ಪ್ರತಿಷ್ಠಿತ, ೧೯ನೇ ಶತಮಾನದಲ್ಲಿ ಶುರುವಾದ ಬೆಂಗಳೂರ್ ಕ್ಲಬ್, ಇನ್ನೊಂದು ತುದಿಯಲ್ಲಿ ಬೆಂಗಳೂರ್ ಮಾಲ್ . ಈ ರಸ್ತೆಯ ಹೆಸರು ಹೇಗೆ ಬಂತು ಅನ್ನುವುದನ್ನು ನೋಡೋಣ. ೧೭೯೯ ನ ಮೈಸೂರ್ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಪರಾಜಿತನಾದ ಮೇಲೆ, ಮೂರನೇ ಮುಮ್ಮಡಿ ಕೃಷ್ಣ ರಾಜೇಂದ್ರ ಒಡೆಯರ್ ಅವರನ್ನು ಬ್ರಿಟಿಷರು ಪಟ್ಟಕ್ಕೇರಿಸಿದರು. ಆದರೆ ರಾಜ್ಯದ ಆಡಳಿತ ಮಾತ್ರ ಒಬ್ಬ ಬ್ರಿಟಿಷ್ ರೆಸಿಡೆಂಟ್, ಸರ್ ಬ್ಯಾರಿ ಕ್ಲೋಸ್ ಎಂಬಾತನಲ್ಲಿತ್ತು. ತದನಂತರ ಟಿಪ್ಪುವಿನ ದಿವಾನ್ ಪೂರ್ಣಯ್ಯ ಪುನಃ ದಿವಾನರಾದರು. ಈ ರೆಸಿಡೆಂಟ್ ೧೮೦೪ ರಲ್ಲಿ ಬೆಂಗಳೂರಿಗೆ ಬಂದು ಈಗಿನ SBI ಇರುವ ಜಾಗದಲ್ಲಿ ವಾಸವಾಗಿದ್ದ. ೧೮೩೧ನಲ್ಲಿ ರೆಸಿಡೆಂಟ್ ವಾಸಕ್ಕೆ ಬೇರೆ ಮನೆ ಕಟ್ಟಿದರು. ಆಗ ರೆಸಿಡೆನ್ಸಿ ರಸ್ತೆ ಆಯಿತು. ಕೆಲವು ವರ್ಷದ ನಂತರ ಈಗಿನ ರಾಜ್ ಭವನ್ ಕಟ್ಟಡ ಕಟ್ಟಿ ಲಾರ್ಡ್ ಕಬ್ಬನ್ ಮುಂತಾದವರು ಇಲ್ಲಿ ವಾಸವಾಗಿದ್ದರು. ಈಗ ಇದು ರಾಜ್ಯಪಾಲರ ವಸತಿ ಗೃಹ.

ಕಬ್ಬನ್ ಪಾರ್ಕ್
೧೮೭೦ ರಲ್ಲಿ, ಈಗಿನ ಕಬ್ಬನ್ ಪಾರ್ಕ್ ಸರ್ ರಿಚರ್ಡ್ ಸ್ಯಾಂಕಿಯ ನೇತೃತ್ವದಲ್ಲಿ ಪ್ರಾರಂಭವಾಯಿತು. ಇದನ್ನು ಪೂರೈಸಿದ್ದು ಮೈಸೂರು ಪ್ರಾಂತ್ಯದ ಮುಖ್ಯ ಕಮಿಷನರ್ ಸರ್ ಜಾನ್ ಮೀಡ್. ಆಗ ಇದು ಮೀಡ್ಸ್ ಪಾರ್ಕ್ ಆಗಿತ್ತು. ನಂತರ ೧೮೭೩ರಲ್ಲಿ ಈತ ಬರೋಡಕ್ಕೆ ಹೊಸ ಹುದ್ದೆಗೆ ಹೋದಾಗ ಈ ಉದ್ಯಾನವನಕ್ಕೆ ಬಹಳ ವರ್ಷ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಸರ್ ಮಾರ್ಕ್ ಕಬ್ಬನ್ ನ ಹೆಸರು ಇಡಲಾಯಿತು. ಇಲ್ಲೇ ಅಠಾರ ಕಚೇರಿ, ಪುಸ್ತಕ ಭಂಡಾರ, ಸೆಂಚುರಿ ಕ್ಲಬ್ ಮುಂತಾದ ಕಟ್ಟಡಗಳು ಇರುವುದು. ೧೯೨೭ ನಲ್ಲಿ ಹೆಸರು ಬದಲಾವಣೆ ಆಗಿ ಚಾಮರಾಜ ಒಡೆಯರ್ ಪಾರ್ಕ್ ಆಗಿತ್ತು . ಆದರೆ ಈ ಹೆಸರು ಉಳಿಯಲಿಲ್ಲ.

ಕೊನೆಯದಾಗಿ, ಬೆಂಗಳೂರಿನ ಫ್ರೇಸರ್ ಟೌನ್ ಬಗ್ಗೆ ಎರಡು ಮಾತು. ಆಗಸ್ಟ್ ೧೯೧೦ ರಲ್ಲಿ ಈ ಪ್ರದೇಶದ ಶಂಕು ಸ್ಥಾಪನೆ ನಡೆಯುತು.  ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಬಹಳ ಚಿಕ್ಕ ವಯಸ್ಸಿನಲ್ಲಿ ಪಟ್ಟಕ್ಕೆ ಬಂದಿದ್ದರು. ಅವರ ವಿದ್ಯಾಭ್ಯಾಸ ಮೈಸೂರು ಅರಮನೆಯಲ್ಲಿ ಬ್ರಿಟಿಷ್ ICS ಅಧಿಕಾರಿ ಸರ್ ಸ್ಟೂವರ್ಟ್ ಫ್ರೇಸರ್ (೧೮೬೪-೧೯೬೩) ಅವರ ನೇತೃತ್ವದಲ್ಲಿ ಮುಂದುವರೆಯಿತು. ಇವರ ಹೆಸರನ್ನು ಮಹಾರಾಜರ ಸಲಹೆಯಂತೆ ಇಟ್ಟು ಫ್ರೇಸರ್ ಟೌನ್ ಆಯಿತು. ಈಗ ಇದನ್ನು ಪುಲಕೇಶಿನಗರ ಎಂದು BBMP ನಾಮಕರಣ ಮಾಡಿದೆ ಆದರೆ ಜನಗಳಿಗೆ ಇದು ಈಗಲೂ Fraser  Town! 

ಬೆಂಗಳೂರಿನಲ್ಲಿ ಇಂಗ್ಲಿಷ್ ಹೆಸರಿನ ರಸ್ತೆಗಳು ಅನೇಕ. Infantry Road ,Brigade Road, Cubbon Road, Residency Road, St. Marks Road ಇತ್ಯಾದಿ. ಇನ್ನೂ ಎಷ್ಟು ವರ್ಷಗಳು ಈ ಹೆಸರುಗಳು ಉಳಿಯುತ್ತವೆ ಎನ್ನುವುದು ಬಹುಶಃ ಮುಂದಿನ ಪೀಳಿಗೆಯ ಇತಿಹಾಸದ ಅರಿವಿಲ್ಲದ ರಾಜಕಾರಣಿಗಳು ನಿರ್ಧರಿಸುತ್ತಾರೆ .

- ರಾಮಮೂರ್ತಿ.
***************************************

ರಾಜಕುಮಾರ ರಣಜಿತ್ ಸಿಂಹಜಿ – ಬೇಸಿಂಗ್‍ಸ್ಟೋಕ್ ರಾಮಮೂರ್ತಿ

ಪ್ರಿಯರೇ, ಬಹಳಷ್ಟು ಭಾರತೀಯರ ರಕ್ತದಲ್ಲಿ ಕ್ರಿಕೆಟ್ಟಿನ ಪ್ರೀತಿ ಕಬ್ಬಿಣದ ಅಂಶಕ್ಕಿಂತ ಹೆಚ್ಚಿರಬೇಕು ಅಂದರೆ ತಪ್ಪಾಗಲಿಕ್ಕಿಲ್ಲ. ಅಂತರರಾಷ್ಟ್ರೀಯ ಪಂದ್ಯಗಳಂತೂ ಸರಿಯೇ, ದೇಶದೊಳಗಿನ ಐಪಿಎಲ್ ಸಹ ನಮ್ಮ ಕ್ರಿಕೆಟ್ ಹುಚ್ಚಿಗೆ ಸಾಲುವುದಿಲ್ಲ. ಈಗ ಟೀವಿ, ಇಂಟರ್ನೆಟ್ಟು, ಸ್ಟ್ರೀಮಿಂಗು ಇತ್ಯಾದಿಗಳಿಂದಾಗಿ ಪಂದ್ಯಾವಳಿಗಳು ಬಂದವೆಂದರೆ ಸಾಕು, ಎಲ್ಲರ ಮುಖವೂ ಮನವೂ ಅದರಲ್ಲೇ! ಈ ಆಟದ ಮತ್ತು ಈಚೆಗಿನದೇನೂ ಅಲ್ಲವಲ್ಲ, ಇದಕ್ಕೂ ಮೊದಲೇ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಇತ್ಯಾದಿಗಳು ಇದ್ದವಲ್ಲ. ಆದರೆ ಈಗಿನಷ್ಟು ಅಕ್ಸೆಸಿಬಿಲಿಟಿ ಇರಲಿಲ್ಲವೆನ್ನಬಹುದು. ಈಗಿನಂತೆ ಆಗೂ ಸುಪರ್ ಸ್ಟಾರುಗಳು ಇದ್ದರು – ಡಬ್ಲೂ ಜಿ ಗ್ರೇಸ್, ಡಾನ್ ಬ್ರಾಡ್ಮನ್ ಇತ್ಯಾದಿ ಘಟಾನುಘಟಿಗಳು ಆಗಿಹೋಗಿದ್ದಾರೆ. ಅಂಥವರಲ್ಲಿ ಎದ್ದು ಕಾಣುವ ಒಬ್ಬ ಆಟಗಾರ, ಇಂಗ್ಲಿಷ್ ಕೌಂಟಿ ಮತ್ತು ಇಂಗ್ಲಂಡ್ ದೇಶದ ತಂಡದ ಪರವಾಗಿ ಆಡಿದ ’ರಾಜಕುಮಾರ’ ರಣಜಿತ್ ಸಿಂಹಜಿ, ಮೊತ್ತಮೊದಲ ಭಾರತೀಯ ಸಂಜಾತ ಆಟಗಾರ. ರಣಜಿ ಕಪ್ಪಿನಿಂದಾಗಿ ಭಾರತದಲ್ಲಿ ಅಮರನಾಗಿರುವ ಈ ಆಟಗಾರನ ಜೀವ ಇಂಗ್ಲಂಡಿನ ಕ್ರಿಕೆಟ್ಟಿನಲ್ಲಿ ಇತ್ತಂತೆ – ಈ ಬಗ್ಗೆ ಬರೆದಿರುವ ನಮ್ಮ ಅನಿವಾಸಿ ಗುಂಪಿನ ಬೇಸಿಂಗ್‍ಸ್ಟೋಕ್ ರಾಮಮೂರ್ತಿ ಅವರ ಲೇಖನ ಇಲ್ಲಿದೆ. ಈಗ ಅವರು ಬೇಸಿಂಗ್‍ಸ್ಟೋಕ್ ಬಿಟ್ಟು ಬೇರೆಡೆ ಬಂದಿದ್ದರೂ, (ಪುಟ್ಟಪ್ಪನವರ ಕುಪ್ಪಳಿಯಂತೆ) ಬೇಸಿಂಗ್‍ಸ್ಟೋಕ್ ಅವರನ್ನು ಬಿಡಲಿಕ್ಕಿಲ್ಲ. ಎಂದಿನಂತೆ ಓದಿ, ಪ್ರತಿಕ್ರಯಿಸಿ. ಧನ್ಯವಾದಗಳು – ಲಕ್ಷ್ಮೀನಾರಾಯಣ ಗುಡೂರ (ವಾರದ ’non-ಲೇಖಕ’ ಸಂಪಾದಕ).

ಸರ್ ಕೆ. ಎಸ್. ರಣಜಿತ್ ಸಿಂಹಜಿ (ರಣಜಿ)

ಭಾರತದಲ್ಲಿ ಈಗಿನ IPL ಮುಂಚೆ ರಣಜಿ ಟ್ರೋಫಿ ಅತ್ಯಂತ ಪ್ರಮುಖವಾದ ಕ್ರಿಕೆಟ್ ಪಂದ್ಯವಾಗಿತ್ತು. ೧೯ನೇ ಶತಮಾನದಲ್ಲಿ ಈಗಿನ ಮುಂಬೈ ನಗರದಲ್ಲಿ ಪಾರ್ಸಿ ಪಂಗಡದವರು ಮಾತ್ರ ಕ್ರಿಕೆಟ್ ಆಡುತ್ತಿದ್ದರು.  ನಂತರ ಇತರ ಪ್ರಾಂತ್ಯಗಳಲ್ಲೂ ಪ್ರಾರಂಭವಾಗಿ ೧೯೩೪ರಲ್ಲಿ ಅಂದಿನ ಕ್ರಿಕೆಟ್ ಸಂಸ್ಥೆಯ ಮುಖಂಡರಾಗಿದ್ದ ಅಂಥೋನಿ ಡಿ ಮೆಲ್ಲೋ ಅಂತರರಾಜ್ಯ ಸ್ಪರ್ಧೆ  ನಡೆಸುವುದಕ್ಕೆ ಸಲಹೆ ಕೊಟ್ಟರು.  ಅದು Cricket Championship of India ಹೆಸರಿನಿಂದ ಶುರುವಾಗಿ  ಪಟಿಯಾಲಾ ಮಹಾರಾಜರು  ಟ್ರೋಫಿಯನ್ನು ಕಾಣಿಕೆಯಾಗಿ ಕೊಟ್ಟ  ನಂತರ  ಈ ಪಂದ್ಯ “ರಣಜಿ ಟ್ರೋಫಿ” ಪಂದ್ಯ ಎಂದಾಯಿತು.  ಮೊದಲ ಸ್ಪರ್ಧೆ, ೪/೧೧/೧೯೩೪, ಮೈಸೂರ್ ಮತ್ತು ಮದ್ರಾಸ್ ರಾಜ್ಯದ ತಂಡದವರ ಮಧ್ಯೆ ನಡೆಯಿತು; ಅದರಲ್ಲಿ ಮದ್ರಾಸ್ ಗೆ ಜಯ ದೊರೆತಿತ್ತು. 

ಅನೇಕ ವರ್ಷ ಕೇಂಬ್ರಿಡ್ಜ್, ಸಸೆಕ್ಸ್ ಮತ್ತು ಇಂಗ್ಲೆಂಡ್ ದೇಶಕ್ಕೆ ಆಡಿದ ರಣಜಿತ್ ಸಿಂಹ ಭಾರತಕ್ಕೆ ಅಕ್ಟೊಬರ್ ೧೯೦೪ರಲ್ಲಿ ಹಿಂತಿರುಗಿದಾಗ ಕ್ರಿಕೆಟನ್ನು ಜನಪ್ರಿಯಗೊಳಿಸುವ ಪ್ರಯತ್ನ ಮಾಡಲಿಲ್ಲ, ಮತ್ತು ಅವರಿಗೆ ಈ ವಿಷಯದಲ್ಲಿ ಯಾವ ಆಸಕ್ತಿ ಸಹ ಇರಲಿಲ್ಲ. ಕೆಲವರು ಇದರ ವಿಚಾರವನ್ನು ಪ್ರಸ್ತಾಪಿಸಿದಾಗ "ನಾನು ಇಂಗ್ಲೆಂಡ್ ದೇಶಕ್ಕೆ ಆಡಿದವನು ಮಾತ್ರ" ಎಂಬ ಉದಾಸೀನದ ಉತ್ತರ ಕೊಟ್ಟನಂತೆ. ಈ ಕಾರಣದಿಂದ ಅನೇಕರು, ರಣಜಿಯನ್ನು "Father of Indian Cricket " ಅನ್ನುವುದು ಸರಿಯಲ್ಲ ಅನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಕ್ರಿಕೆಟ್‍ನಲ್ಲಿ ಬಹಳ ದೊಡ್ಡ ಹೆಸರು ಗಳಿಸಿದ್ದ. ಇಂಗ್ಲೆಂಡ್ ನಲ್ಲಿ ರಣಜಿಯ ಹೆಸರು ಮನೆಮಾತಾಗಿತ್ತು ಮತ್ತು ಅವನು ಆಡುತ್ತಿದ್ದರೆ ಜನರು ಕಿಕ್ಕಿರಿದು ಸೇರುತ್ತಿದ್ದರು. ಇಂಗ್ಲಂಡ್ ದೇಶದ ತಂಡದಲ್ಲಿ ರಣಜಿ ಮೊಟ್ಟಮೊದಲ ಭಾರತೀಯ ಮೂಲದ ಆಟಗಾರನಾಗಿದ್ದ.

೧೮೮೮ರಲ್ಲಿ ಹದಿನಾರು ವಯಸ್ಸಿನ ಹುಡುಗ, ರಾಜಕೋಟನ ಶಾಲೆಯಲ್ಲಿ ಕ್ರಿಕೆಟ್ ಆಡಿದ ಅನುಭವ ಮಾತ್ರ ಇದ್ದು, ಓದುವುದಕ್ಕೆ ಕೇಂಬ್ರಿಡ್ಜ್ ವಿಶ್ಯವಿದ್ಯಾಲಯಕ್ಕೆ ಬಂದು ಕ್ರಿಕೆಟ್ ನಲ್ಲಿ ದೊಡ್ಡ ಹೆಸರು ಗಳಿಸಿದ್ದು ಆಶ್ಚರ್ಯದ ವಿಚಾರವೇ ಸರಿ. ಇಲ್ಲಿ ಅವನ ವರ್ಣರಂಜಿತ ಜೀವನ ಚರಿತ್ರೆಯ ಸಂಕ್ಷಿಪ್ತ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ.

ಇಂಗ್ಲೆಂಡ್ ನಲ್ಲಿ ರಣಜಿ, ರಾಜಕುಮಾರ (Prince) ಎಂದು ಹೇಳಿಕೊಂಡಿದ್ದರೂ, ಈತ ರಾಜಕುಮಾರನಾಗಿರಲಿಲ್ಲ, ಅಥವಾ ಯಾವ ಅರಮನೆಯಲ್ಲೊ ಬೆಳೆಯಲಿಲ್ಲ. ಹುಟ್ಟಿದ್ದು ೧೦/೦೯/೧೮೭೨ರಲ್ಲಿ ಪಶ್ಚಿಮ ಭಾರತದ ನವಾನಗರ ಪ್ರಾಂತ್ಯದ ಸದೋದಾರ್ ಎಂಬ ಸಣ್ಣ ಊರಿನಲ್ಲಿ. ತಂದೆ ಜೀವನ್ ಸಿಂಹಜಿ, ಅಲ್ಲಿನ ರಾಜ ವಿಭಾಜಿಗೆ ದೂರದ ಸಂಬಂಧ. ರಾಜನ ಮಗ ಕಲೋಭ ಈ ರಾಜ್ಯಕ್ಕೆ ಉತ್ತರಾಧಿಕಾರಿಯಾಗಬೇಕಾಗಿತ್ತು ಆದರೆ ಅವನ ನಡವಳಿಕೆ ಮತ್ತು ದುಷ್ಟತನದಿಂದ ಅವನನ್ನು ದೂರ ಮಾಡಿ, ಹತ್ತಿರ ಸಂಬಂಧವರ ಮನೆಯಿಂದ ಒಂದು ಗಂಡು ಮಗುವನ್ನು ಆಯ್ಕೆ ಮಾಡಿದರು. ಆದರೆ, ಅಂದಿನ ವದಂತಿಗಳ ಪ್ರಕಾರ, ಈ ಮಗು ಜ್ವರದಿಂದಲೋ ಅಥವಾ ವಿಷಪ್ರಯೋಗದಿಂದಲೋ ಕೆಲವೇ ತಿಂಗಳಲ್ಲಿ ತೀರಿಹೋಯಿತು. ಎರಡನೇ ಆಯ್ಕೆ ಜೀವನ್ ಸಿಂಹಜಿಯ ಎರಡನೇ ಮಗ ರಂಜಿತ್ ಸಿಂಹಜಿ. ಬ್ರಿಟಿಷ್ ಅಧಿಕಾರಿಗಳ ಒಪ್ಪಿಗೆ ಪಡೆದು ರಾಜಕೋಟೆಯಲ್ಲಿ ಇರುವ ರಾಜಕುಮಾರ್ ಕಾಲೇಜ್ ನಲ್ಲಿ ಇವನ ವಿದ್ಯಾಭ್ಯಾಸ ಮುಂದೆವರೆಯಿತು ಆದರೆ ಜೀವನ್ ಸಿಂಹಜಿ ಮನೆಯವರ ನಡವಳಿಕೆ ಮತ್ತು ದುರಾಸೆಗಳಿಂದ ರಣಜಿಯನ್ನು ಅಧಿಕೃತವಾಗಿ ದತ್ತು ಪುತ್ರನಾಗಿ ಮಾಡಲಿಲ್ಲ. ಆದರೂ ರಾಜನಿಂದ ಆರ್ಥಿಕ ಸಹಾಯ ಮತ್ತು ನೆರವು ಇತ್ತು. ಕೆಲವು ವರ್ಷಗಳ ನಂತರ ರಾಜನ ಪರಿವಾರದಲ್ಲಿದ್ದ ಒಬ್ಬಳಿಗೆ ಒಂದು ಗಂಡು ಮಗು ಹುಟ್ಟಿ ಅವನನ್ನು ಉತ್ತರಾಧಿಕಾರಿ ಎಂದು ಘೋಷಿಸಿದರು. ಈ ವಿಚಾರ ಬಹಳ ವಿವಾದಾತ್ಮಕವಾಗಿತ್ತು, ಕಾರಣ ಈ ಮಗುವಿನ ತಾಯಿ ರಾಜನ ರಾಣಿಯಾಗಿರಲಿಲ್ಲ; ಆಕೆ ವೇಶ್ಯೆ ಮತ್ತು ಮುಸಲ್ಮಾನ ಪಂಗಡಕ್ಕೆ ಸೇರಿದವಳು ಅನ್ನುವ ವದಂತಿಗಳು ಅನೇಕವಾಗಿತ್ತು.

ರಣಜಿ, ರಾಜಕುಮಾರ್ ಕಾಲೇಜ್ ನಲ್ಲಿ ಕ್ರಿಕೆಟ್ ಕಲಿತು ೧೮೮೪ರಲ್ಲಿ ಕಾಲೇಜ್ ನಾಯಕ ಆಗಿಯೂ ಆಯ್ಕೆ ಆದ. ಆ ಶಾಲೆಯ ಹೆಡ್ ಮಾಸ್ಟರ್ ಮಿ. ಮೆಕ್ನಾಟನ್ (Mr Macnaghten) ರಣಜಿ ಮತ್ತು ಇನ್ನಿಬ್ಬರನ್ನು ೧೮೮೮ರಲ್ಲಿ ಇಂಗ್ಲೆಂಡಿಗೆ ಕರೆದುಕೊಂಡು ಹೋಗಿ, ಕೇಂಬ್ರಿಡ್ಜ್ ನಲ್ಲಿ ಓದುವ ಉದ್ದೇಶದಿಂದ ಟ್ರಿನಿಟಿ ಕಾಲೇಜಿನ Chaplin ಅಥವಾ ಪಾದ್ರಿ ಆಗಿದ್ದ ರೆವ್. ಲೂಯಿ ಬೊರಿಸೊ (Rev Louis Borrisow) ಅನ್ನುವವರ ಮನೆಯಲ್ಲಿ ವಾಸವಾಗಿ ಇರುವುದಕ್ಕೆ ಏರ್ಪಾಡು ಮಾಡಿ ರಾಜೆಕೋಟೆಗೆ ಹಿಂತಿರಿಗಿದರು. ಇಂಗ್ಲೆಂಡ್‍ನ ವಾತಾವರಣ ರಣಜಿಗೆ ಹಿಡಿಸಲಿಲ್ಲ. ಆದರೂ ಕ್ರಿಕೆಟ್ ಆಡುವ ಮತ್ತು ಕೇಂಬ್ರಿಡ್ಜ್ ನಲ್ಲಿ ಓದುವ ಆಸೆ ಇತ್ತು. ಆದರೆ, ಕಾಲೇಜ್ ಪ್ರವೇಶಕ್ಕೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಾಗಿತ್ತು. ಇದು ಸಾಧ್ಯವಾಗಲಿಲ್ಲ, ಆದರೂ ಇವನನ್ನು "ಸ್ಥಾನದ ಯುವಕ" ಅಂದರೆ, Youth of Position, ಎಂದು ಪರಿಗಣಿಸಿದ್ದರಿಂದ ಕಾಲೇಜಿಗೆ ಸೇರಲು ಸಾಧ್ಯವಾಯಿತು. ರಣಜಿ ಶಿಕ್ಷಣ ಬಗ್ಗೆ ಸಾಕಷ್ಟು ಗಮನ ಕೊಡಲಿಲ್ಲ, ಕ್ರಿಕೆಟ್ ಆಡುವುದರಲ್ಲಿ ಮಾತ್ರ ತೊಡಗಿಸಿಕೊಂಡ. ೧೮೯೨ರಲ್ಲಿ ಪ್ರತ್ಯೇಕ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು, ಮನೋರಂಜನೆಗೆ ಅದ್ದೂರಿಯಾಗಿ ಖರ್ಚು ಮಾಡಿ ತಾನು ರಾಜಮನೆತದವನು ಅನ್ನುವ ಭಾವನೆ ಕಲ್ಪಿಸಿದ. ಆದರೆ ಹಣ ಮಾತ್ರ ಸಾಲದಿಂದ!

ಇಂಗ್ಲೆಂಡ್ ಬಾರ್ ಪರೀಕ್ಷೆಗೆ ಇನ್ನಷ್ಟು ಹಣಸಹಾಯ ಬೇಕೆಂದು ವಿಭಾಜಿ ರಾಜನಿಗೆ ಮನವಿ ಮಾಡಿದಾಗ, ರಾಜ ಹಣ ಕಳಿಸಲು ಬಾರ್ ಪರೀಕ್ಷೆ ಮುಗಿದಂತೆ ಭಾರತಕ್ಕೆ ಹಿಂತಿರಿಗಬೇಕು ಅನ್ನುವ ಷರತ್ತು ಹಾಕಿದ. ಆದರೆ ರಣಜಿ ಈ ಪರೀಕ್ಷೆಯಲ್ಲಿ ಭಾಗವಹಿಸಲಿಲ್ಲ ಮತ್ತು ಹಣಕಾಸಿನ ಸಮಸ್ಯೆ ಬಗೆಹರಿಯಲಿಲ್ಲ.
೧೮೯೨/೩ ರಲ್ಲಿ ಕೇಂಬ್ರಿಡ್ಜ್ ತಂಡಕ್ಕೆ ಆಯ್ಕೆ ಆಗಿ ಹೆಸರುಮಾಡಿಕೊಂಡ.  ನಂತರ ಕೇಂಬ್ರಿಡ್ಜ್ Blue ಪ್ರಶಸ್ತಿ ಸಹ ದೊರಕಿತು.  ಭಾರತಕ್ಕೆ ಹಿಂತಿರುಗಲಿಲ್ಲವಾದ ಕಾರಣದಿಂದ ವಿಭಾಜಿ ಹಣ ಸಹಾಯವನ್ನು ನಿಲ್ಲಿಸಬೇಕಾಯಿತು.  ರಣಜಿ, ಹಲವಾರು ಬ್ರಿಟಿಷ್ ಅಧಿಕಾರಿಗಳ ಶಿಫಾರಸಿನಿಂದ ಇನ್ನಷ್ಟು ಹಣವನ್ನು ಸಾಲದ ರೂಪದಲ್ಲಿ ವಿಭಾಜಿ ಕೊಟ್ಟದ್ದು ಸ್ವಲ್ಪ ಸಮಾಧಾನವಾಯಿತು. 
    
ಕೇಂಬ್ರಿಡ್ಜ್  ತಂಡಕ್ಕೆ (೧೮೯೦-೧೮೯೩) ಆಡಿದ ನಂತರ ರಣಜಿ ಸಸೆಕ್ಸ್ (Sussex) ಕೌಂಟಿಗೆ ೧೮೯೫-೧೯೧೨ ವರೆಗೆ ಆಡಿ, ೧೮೯೯-೧೯೦೩ರಲ್ಲಿ ಕಾಪ್ಟನ್ ಸಹ ಆಗಿದ್ದ.  ಒಟ್ಟು ೩೦೦೦ ರನ್ನುಗಳನ್ನು ೧೮೯೯ ಮತ್ತು ೧೯೦೦ರ ಅವಧಿಯಲ್ಲಿ ಹೊಡದಿದ್ದ. 

ಆಸ್ಟ್ರೇಲಿಯಾ  ತಂಡ ೧೮೯೬ ನಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿತು (Ashes Series).  ಅನೇಕರು, ಲಾರ್ಡ್ಸ ಮೈದಾನದಲ್ಲಿ ನಡೆದ ಮೊದಲನೆಯ ಟೆಸ್ಟ್ ತಂಡದಲ್ಲಿ ರಣಜಿ ಅಡುತ್ತಾನೆ ಎಂದು ಊಹಿಸಿದ್ದರು.  ಆದರೆ MCC ಯ ಅಧ್ಯಕ್ಷ ಲಾರ್ಡ್ ಹ್ಯಾರಿಸ್ ಇದಕ್ಕೆ ಒಪ್ಪಲಿಲ್ಲ; ಕಾರಣ, ಜನಾಂಗೀಯ ತಾರತಮ್ಯ (Racial discrimination).  ಆದರೆ ಓಲ್ಡ್ ಟ್ರಾಫರ್ಡ್ (Old Trafford) ನಲ್ಲಿ ನಡೆದ ಎರಡನೆಯ ಟೆಸ್ಟ್ ನಲ್ಲಿ  ರಣಜಿ ತಂಡದಲ್ಲಿ ಸೇರಿದ್ದ.  ಇದಕ್ಕೆ ಮುಂಚೆ ರಣಜಿ ಆಡುವುದಕ್ಕೆ ಆಸ್ಟ್ರೇಲಿಯದ ಕ್ಯಾಪ್ಟನ್ ತನ್ನ ಅಭ್ಯಂತರ ಇಲ್ಲ ಎಂದ ಮೇಲೆ ರಣಜಿಯ ಆಯ್ಕೆ ಆಯಿತಂತೆ!  ಮೊಟ್ಟಮೊದಲನೆಯ ಬಾರಿಗೆ ಒಬ್ಬ ಭಾರತೀಯ ಪ್ರಜೆ ೧೬/೦೭/೧೮೯೬ ರಂದು ಇಂಗ್ಲೆಂಡ್ ದೇಶದ ತಂಡದಲ್ಲಿ ಭಾಗವಹಿಸಿದ್ದು.
 
ರಣಜಿ, ಮೊದಲನೆಯ ಇನ್ನಿಂಗ್ಸ್ ನಲ್ಲಿ ೬೨ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ೧೫೪ ಅಜೇಯ (not  out) ರನ್ನುಗಳನ್ನು ಮಾಡಿ ಇಂಗ್ಲೆಂಡ್ ತಂಡಕ್ಕೆ ಶಾಶ್ವತ ಆಟಗಾರನಾಗಿ ಸೇರಿದ.
  
೧೮೯೬ರಲ್ಲಿ ರಣಜಿ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು. ಈ ಸಮಯದಲ್ಲಿ, ಕ್ರಿಕೆಟ್ ಆಟದ ತನ್ನ ಅನುಭವ ಮತ್ತು ಆಡುವ ರೀತಿ ಬಗ್ಗೆ ಬರೆಯುವ ಯೋಚನೆ ಬಂತು.  ಅವನ ಸ್ನೇಹಿತರಾಗಿದ್ದ ಚಾರ್ಲ್ಸ್ ಫ್ರೈ ಮತ್ತು ಡಾಕ್ಟರ್ ಬಟ್ಲರ್ ನೆರವಿನಿಂದ ತನ್ನ Jubilee Book of Cricket ಪುಸ್ತಕ ಪ್ರಕಟಿಸಿದ.  ಇದೇ ವರ್ಷ ವಿಕ್ಟೋರಿಯಾ ರಾಣಿಯ ರಾಜ್ಯಭಾರದ ೨೫ನೇ ವರ್ಷದ (ರಜತ ಮಹೋತ್ಸವ, silver jubilee) ಮಹೋತ್ಸವ ಆದ್ದರಿಂದ ರಣಜಿಯ ಪುಸ್ತಕಕ್ಕೆ Jubilee ಹೆಸರು ಬಂದಿದ್ದು.
   
೧೮೯೭-೯೮ ನಲ್ಲಿ  ಆಸ್ಟ್ರೇಲಿಯ ಪ್ರವಾಸಕ್ಕೆ ಹೋದ ಇಂಗ್ಲೆಂಡ್ ಪಂಗಡದಲ್ಲಿ ರಣಜಿ ಸಹ ಸೇರಿದ್ದ.  ಮೊದಲನೆಯ ಟೆಸ್ಟ್ ನಲ್ಲಿ ಮಾಡಿದ ೧೭೫ ರನ್ನುಗಳು ಸೇರಿ ಒಟ್ಟು ೧೧೫೭ ರನ್ನುಗಳನ್ನು ಹೊಡೆದು ಆ ದೇಶದಲೂ ಜನಪ್ರಿಯನಾದ.  ರಣಜಿಯ ನೆಚ್ಚಿನ "leg glance" ವಿಧಾನ (technique) ಎಲ್ಲರ  ಮೆಚ್ಚಿಗೆಯನ್ನು ಪಡೆಯಿತು.
 
ಆಸ್ಟ್ರೇಲಿಯಾ ಪ್ರವಾಸ ಮುಗಿದಮೇಲೆ, ಇಂಗ್ಲೆಂಡ್ ತಂಡ ಕೊಲಂಬೊ ಮೂಲಕ ಬಂದಾಗ ರಣಜಿ ಅಲ್ಲೇ ಇಳಿದು ಭಾರತಕ್ಕೆ ಬಂದ.  ೧೮೯೬ ರಲ್ಲಿ ರಾಜ ವಿಭಾಜಿಯ ನಿಧನವಾದ ಮೇಲೆ ಉತ್ತರಾಧಿಕಾರಿಯಾಗಿದ್ದ ಹನ್ನೆರಡು ವರ್ಷದ ಜಸವಂತ್ ಸಿಂಹಜಿ ನವಾನಗರದ ಪಟ್ಟಕ್ಕೆ ಬಂದ.  ರಣಜಿಗೆ ತಾನು ರಾಜ್ಯವನ್ನು ಆಳುವ ಅವಕಾಶ ಕಳೆಯಿತು ಎನ್ನಿಸಿ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ನಲ್ಲಿಯೇ ಇನ್ನೂ  ಹೆಸರು ಮಾಡುವ ನಿರ್ಧಾರಕ್ಕೆ ಬಂದಿದ್ದರೂ, ಜಸವಂತ್  ಸಿಂಹಜಿಯ ಉತ್ತರಾಧಿಕಾರದ ಮೇಲೆ ಸವಾಲನ್ನು ಹಾಕಿದ.  ಆದರೆ ಇದು ಯಶಸ್ವಿಯಾಗಲಿಲ್ಲ. ಅಷ್ಟೇ ಅಲ್ಲದೆ ವಿಭಾಜಿ ಇದ್ದಾಗ ಹಣ ಸಹಾಯವಿತ್ತು, ಈಗ ಅದೂ ನಿಲ್ಲುವಂತಿತ್ತು. 

ಅಧೃಷ್ಟಕ್ಕೆ ಪಾಟಿಯಾಲಾದ ಮಹಾರಾಜ ಮತ್ತು ಕ್ರಿಕೆಟ್ ಪ್ರೇಮಿ ರಾಜಿಂದರ್ ಸಿಂಗ್ ಅವರು ರಣಜಿಯ ನೆರವಿಗೆ ನಿಂತು ಹಣ ಸಹಾಯ ಮಾಡಿದ ನಂತರ ರಣಜಿ ಇಂಗ್ಲೆಂಡ್ ಗೆ ಹಿಂತಿರುಗಿ ಸಸೆಕ್ಸ್‌ನ ಕ್ಯಾಪ್ಟನ್ ಆದ ಮತ್ತು ಇಂಗ್ಲೆಂಡ್ ತಂಡಕ್ಕೂ ಸೇರಿದ.   ಆದರೆ ೧೯೦೦ ರಲ್ಲಿ ರಾಜಿಂದರ್ ಸಿಂಗರ ನಿಧನವಾದನಂತರ ರಣಜಿಯ ಆದಾಯ ಕುಸಿದು ದಿವಾಳಿತನವನ್ನು ಎದುರಿಸಬೇಕಾಯಿತು (bankruptcy).  ಇದನ್ನು ಪರಿಹರಿಸಲು ೧೯೦೧ ಡಿಸೆಂಬರ್ ನಲ್ಲಿ ಭಾರತಕ್ಕೆ ಹಿಂತಿರುಗಿ ಅನೇಕರನ್ನು ಭೇಟಿಮಾಡಿದ ಮೇಲೆ ಸ್ವಲ್ಪ ಮಟ್ಟಿಗೆ ರಣಜಿಯ ಆರ್ಥಿಕ ಸ್ಥಿತಿ ಕುದುರಿತು.  ೧೯೦೨ರಲ್ಲಿ ಇಂಗ್ಲೆಂಡ್ ನಲ್ಲಿ ಪುನಃ ಸಸೆಕ್ಸ್ ತಂಡದ ಕ್ಯಾಪ್ಟನ್ ಆದರೂ ಇವನ ಆಡುವ ರೀತಿ ಬದಲಾಗಿ  ಆಟದ ಶೈಲಿಯಿಂದ ಅನೇಕರಿಗೆ ನಿರಾಶೆಯಾಯಿತು.  ರಣಜಿಯ ಜೀವನಚರಿತ್ರಗಾರ (biographer) ಸೈಮನ್ ವೈಲ್ಡನ ಊಹೆಯ ಪ್ರಕಾರ ಇದಕ್ಕೆ ಮುಖ್ಯ ಕಾರಣ ರಣಜಿತ್ ಸಿಂಹನ ಕಠಿಣ ಆರ್ಥಿಕ ಪರಿಸ್ಥಿತಿ. 

ನವಾನಗರವನ್ನು ಆಳುವ ಇನ್ನೂ ಆಸೆ ಇಟ್ಟಿಕೊಂಡು ೧೯೦೪ರಲ್ಲಿ ಸ್ನೇಹಿತ ಆರ್ಚಿ ಮೆಕ್‍ಲಾರೆನ್ ಜೊತೆ ಭಾರತಕ್ಕೆ ಬಂದು, ಬ್ರಿಟಿಷ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೂ ರಣಜಿಗೆ ಹೆಚ್ಚು ಬೆಂಬಲ ಸಿಗಲಿಲ್ಲ.  ಅದೂ ಅಲ್ಲದೆ ಮನ್ಸೂರ್ ಕುಚರ್ ಅನ್ನುವವನು ಕೊಟ್ಟ ಸಾಲ ಹಿಂತಿರುಗಿ ಪಡೆಯಲು ಬಾಂಬೆ ಹೈಕೋರ್ಟ್ ನಲ್ಲಿ ಮೊಕದ್ದಮೆ ಸಹ ಹಾಕಿದ್ದರಿಂದ ೧೯೦೬ರ ವರೆಗೆ ಇಂಗ್ಲೆಂಡ್ ಗೆ ಹಿಂತಿರುಗುವುದು ಸಾಧ್ಯವಾಗಲಿಲ್ಲ.
 
೧೪/೦೮/೧೯೦೬ ರಂದು ನವಾನಗರದ ರಾಜನಾಗಿದ್ದ ಜಸವಂತ್  ಸಿಂಹಜಿ ಜ್ವರ ಬಂದ ಕಾರಣದಿಂದ ನಿಧನನಾದ ಸುದ್ದಿ ಬಂತು.  ಜಸವಂತ್ ಸಿಂಹಜಿಯ ಆರೋಗ್ಯಕ್ಕೆ ಯಾವ ಸಮಸ್ಯೆ ಇರಲಿಲ್ಲ; ಅಂದಿನ ವದಂತಿಗಳ ಪ್ರಕಾರ ಈ ಸಾವು ವಿಷಪ್ರಯೋಗದಿಂದ ಉಂಟಾಯಿತು ಅನ್ನುವುದು ಅನೇಕರ ನಂಬಿಕೆ.  ಅದಾಗಿ ಆರು ತಿಂಗಳವರೆಗೆ ಬ್ರಿಟಿಷ್ ಅಧಿಕಾರಿಗಳು ಈ ರಾಜ್ಯದ ಹೊಸ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಿಲ್ಲ.  ನಾಲ್ಕು ಪ್ರಾತಿನಿಧ್ಯರು - ರಣಜಿ, ವಿಭಾಜಿಯ ಮೊಮ್ಮಗ ಲಕೋಭ ಮತ್ತು ಜಸವಂತ್ ಸಿಂಹಜಿಯ ತಾಯಿ, ಸರ್ಕಾರಕ್ಕೆ ಮನವಿ ಮಾಡಿದರು.  ಕೊನೆಗೆ ಬ್ರಿಟಿಷ್ ಅಧಿಕಾರಿಗಳು, ರಣಜಿಯ ಹಿನ್ನಲೆ  ನೋಡಿ ಅವನನ್ನು ಆಯ್ಕೆ ಮಾಡಿದರು.  ಹಲವಾರು ತಿಂಗಳ ನಂತರ, ೧೧/೦೩/೧೯೦೭ ರಂದು ರಣಜಿ Colonel His Highness Sir Ranjitsinhaji Vibhaji, Jam Sahib of Nawanagar ಆಗಿ  ಪಟ್ಟಕ್ಕೆ ಬಂದ. ಈ ಸ್ಥಾನಕ್ಕೆ ಬಂದಮೇಲೆ ಬಾಂಬೆ ಹೈ ಕೋರ್ಟ ನಲ್ಲಿದ್ದ ಮೊಕದ್ದಮೆಯನ್ನು ವಾಪಸ್ಸು ಪಡೆಯುವುದು ಸಾಧ್ಯವಾಯಿತು.
 
ಇವನ ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲದಿಂದ ಜನರ ಪರಿಸ್ಥಿತಿ ಗಂಭೀರವಾಗಿತ್ತು, ಪರಿಹಾರ ಕೊಡುವುದಕ್ಕೆ ರಾಜ್ಯದ ಒಡವೆಗಳನ್ನು ಮಾರಬೇಕಾಯಿತು.  ಮತ್ತು ಇತರ ರಾಜ್ಯಗಳಿಂದ ಸಹಾಯ ಪಡೆದು ರಾಜ್ಯಕ್ಕೆ ಸೇರಿದ ಸಲಾಯ ಎಂಬ ಸಮುದ್ರ ತೀರದಲ್ಲಿ ಬಂದರು ಕಟ್ಟಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ಮಾಡುವುದು ಮತ್ತು ಇತರ ಕಾಮಗಾರಿಕೆ ಕೆಲಸಗಳು ಪ್ರಾರಂಭ ವಾಯಿತು.  ಆದರೆ ರಣಜಿಗೆ ಆಡಳಿತದ ಅನುಭವ ಇರಲಿಲ್ಲವಾದ್ದರಿಂದ ಈ ಸುಧಾರಣೆಗಳನ್ನು ಜಾರಿಗೆ ತರುವುದು ಕಷ್ಟ ವಾಯಿತು.  ಇವನ ಆರೋಗ್ಯ ಬೇರೆ ಹದಗೆಟ್ಟಿತು ಮತ್ತು ಟೈಫಾಯಿಡ್  ಜ್ವರದಿಂದ ಕೆಲವು ತಿಂಗಳು ಹಾಸಿಗೆ ಹಿಡಿದಿದ್ದ.  ವೈದ್ಯರ ಸಲಹೆ ಮೇಲೆ ವಿಶ್ರಾಂತಿಗೆ ಇಂಗ್ಲೆಂಡ್ ನಲ್ಲಿ  ಕೆಲವು ತಿಂಗಳು ಕಳೆಯಲು ಹಿಂತಿರಿಗಿ  ಗ್ರಾಮಾಂತರದಲ್ಲಿ ದೊಡ್ಡ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು  ಹಲವಾರು ತಿಂಗಳು ಕಳೆದ.  ಆದರೆ ಸಾಲಗಾಲರ  ಕಾಟ ಮಾತ್ರ ತಪ್ಪಲಿಲ್ಲ, ಅನೇಕ ತಿಂಗಳು ಈ ಮನೆ ಬಾಡಿಗೆ ಕೊಡದೆ ಇದ್ದರಿಂದ, ಮಾಲೀಕ ಇಂಡಿಯಾ ಕಚೇರಿಗೆ ದೂರು ಸಹ ಕೊಟ್ಟ.  ತನ್ನ ರಾಜ್ಯದಿಂದ ದುಡ್ಡು ಬರುವ ಸಾದ್ಯೆತೆ ಇರಲಿಲ್ಲ, ಅಲ್ಲಿಯ ಬೊಕ್ಕಸ ಖಾಲಿಯಾಗಿತ್ತಲ್ಲ!  ೧೯೦೮ರಲ್ಲಿ ಪುನಃ ಕ್ರಿಕೆಟ್ ಆಡುವುದಕ್ಕೆ ಪ್ರಾರಂಭಿಸಿದ. ಸಮಯ ಸಿಕ್ಕಾಗ ರೆವ್. ಬೊರಿಸೊ ಅವರ ಮನೆಯಲ್ಲಿ ಇದ್ದು ಅವರ ಮಗಳು ಈಡಿತ್ ಅನ್ನು ಮದುವೆಯಾಗುವ ಪ್ರಯತ್ನ ಪಟ್ಟ.  ಆದರೆ ಅಂದಿನ ಸಮಾಜದ ನಿರ್ಬಂಧನೆಗಳಿಂದ ಇದು ಸಾಧ್ಯವಾಗಲಿಲ್ಲ ಮತ್ತು ಅವಳ ತಂದೆ ಈ ಸಂಬಂಧವನ್ನು ನಿರಾಕರಿಸಿದರಂತೆ.  ಕೊನೆಗೆ ೧೯೦೮ರಲ್ಲಿ ಭಾರತಕ್ಕೆ ಹಿಂತಿರುಗಿ ತನ್ನ ರಾಜ್ಯವನ್ನು ಆಳುವ ಪ್ರಯತ್ನ ಮಾಡಿದ.  ರಾಜ್ಯದ ಪರಿಸ್ಥಿತಿ ಇನ್ನೂ ಸುಧಾರಿಸಿರಲಿಲ್ಲ, ಬರಗಾಲ ಮತ್ತು ಕ್ಷಾಮ ಜನರನ್ನು ಕಾಡುತಿತ್ತು.  ತನ್ನ ಆದಾಯವನ್ನು ಹೆಚ್ಚುಮಾಡುವ ಸಮಯ ಅಲ್ಲದಿದ್ದರೂ, ಹೊಸ ತೆರಿಗೆಯನ್ನು ವಿಧಿಸಲು ಪ್ರಯತ್ನ ಪಟ್ಟ.  ಆದರೆ ಅಂದಿನ ಬ್ರಿಟಿಷ್ ಅಧಿಕಾರಿಗಳು ಇದನ್ನು ತಡೆದು ರಣಜಿ ಜೊತೆ ಚರ್ಚೆ ನಡಿಸಿ, ೩-೪ ವರ್ಷ ನವಾನಗರದಲ್ಲೇ ಇದ್ದು ರಾಜ್ಯವನ್ನು ಆಳುವುದಕ್ಕೆ ಸಲಹೆ ಕೊಟ್ಟರು, ಆದರೆ  ೧೯೧೨ರಲ್ಲಿ ರಣಜಿ ಪುನಃ ಇಂಗ್ಲೆಂಡ್ ಗೆ  ಹಿಂತಿರುಗಿ ಸಸೆಕ್ಸ್ ಕ್ರಿಕೆಟ್ ತಂಡಕ್ಕೆ  ಸೇರಿದ.  ಅನೇಕರಲ್ಲಿ ಮಾಡಿದ ಸಾಲದಿಂದ ತಪ್ಪಿಸಿಕೊಳ್ಳುವುದಕ್ಕೆ ಕಷ್ಟವಾಯಿತು.  ಕೆಲವರು ಇವನ ಮೇಲೆ ಮೊಕದ್ದಮೆ ಹಾಕಿದ್ದರೂ, ರಣಜಿ ಭಾರತದ ಒಬ್ಬ ರಾಜಮನೆತನದವನು ಆದ್ದರಿಂದ ಇಂಗ್ಲೆಂಡ್ ನ್ಯಾಯಾಲಯಕ್ಕೆ ಇವನ ಮೇಲೆ ಯಾವ ಹಿಡಿತ ಇಲ್ಲ ಎಂದು ಅವನ ವಕೀಲರು ವಾದ ಮಂಡಿಸಿದರು!  ಕೊನೆಗೆ ಹಾಗೂ ಹೀಗೂ ಮಾಡಿ ಕೆಲವರಿಗೆ ಸಾಲವನ್ನು ಹಿಂತಿರುಗಿಸಿ ೧೯೧೩ರಲ್ಲಿ ನವಾನಗರಕ್ಕೆ ಬಂದು ಆಳುವ ಪ್ರಯತ್ನ ಮಾಡಿದ.  ರಣಜಿ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡುವುದರಲ್ಲಿ ಕಾಲ ಕಳೆಯುತ್ತಿದ್ದಾಗ ನವಾನಗರದ ಅಭಿವೃದ್ಧಿಯನ್ನು ಬ್ರಿಟಿಷ್ ಅಧಿಕಾರಿಗಳು ಕೈಗೆತ್ತಿಕೊಂಡು ರಾಜ್ಯದಲ್ಲಿ  ಬೇಕಾಗಿದ್ದ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು. 

೧೯೧೪ರಲ್ಲಿ ಮೊದಲನೆಯ ಮಹಾ ಯುದ್ಧ ಪ್ರಾರಂಭವಾದಾಗ ರಣಜಿ ತನ್ನ ರಾಜ್ಯದ ಸಂಪೂರ್ಣ ಬೆಂಬಲ ನೀಡಿ, ಇಂಗ್ಲೆಂಡಿನ ತನ್ನ ಮನೆಯನ್ನು ಆಸ್ಪತ್ರೆಯಾಗಿ ಉಪಯೋಗಿಸುವುದಕ್ಕೆ ಅನುಮತಿ ನೀಡಿದ.  ಇದಲ್ಲದೆ ೧೯೧೪ರಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸೇರಿ ಗೌರವಾನ್ವಿತ ಮೇಜರ್ ಹುದ್ದೆಗೆ ಅರ್ಹನಾದ.  ಆದರೆ ಭಾರತೀಯ ರಾಜಮನೆತವರು  ಯುದ್ಧದಲ್ಲಿ ಭಾಗವಹಿವುದಕ್ಕೆ ಅನುಮತಿ ಇರಲಿಲ್ಲ.  ಅಲ್ಲದೇ  ಫ್ರಾನ್ಸ್ ದೇಶದ ಚಳಿ ತಡೆಯಲಾರದೆ ಇಂಗ್ಲೆಂಡ್ ನಲ್ಲಿ ಹಲವಾರು ತಿಂಗಳು ಕಳೆದು ೧೯೧೫ರಲ್ಲಿ ಭಾರತಕ್ಕೆ ಹಿಂತಿರುಗಿದ.  

ರಣಜಿ ೧೯೨೦ರಲ್ಲಿ ಕ್ರಿಕೆಟ್‍ನಿಂದ ನಿವೃತ್ತನಾದ.  ಸ್ನೇಹಿತರ ಜೊತೆಯಲ್ಲಿ ಬೇಟೆಗೆ ಹೋದಾಗ ಆದ ಅಪಘಾತದಿಂದ ಒಂದು ಕಣ್ಣು ಕಳೆದುಕೊಡಿದ್ದೂ ಒಂದು ಕಾರಣ.  ರಣಜಿ  ಕ್ರಿಕೆಟ್ ಆಡಿದ ಅವಧಿಯಲ್ಲಿ  ಒಟ್ಟು ೨೪೬೯೨ ರನ್ನುಗಳನ್ನು ಗಳಿಸಿದ, ಸರಾವರಿ ಮೊತ್ತ (batting  average) ೫೬.೩೭ರೊಂದಿಗೆ.  ಬಹಳ ವರ್ಷದ ನಂತರ ಸರ್ ಜೆಫ್ರಿ ಬಾಯ್ಕಾಟ್ ಈ ದಾಖಲೆಯನ್ನು ಮುರಿದರು (ಸರಾಸರಿ ೫೬.೮೩!)
 
ರಣಜಿಗೆ ತನ್ನಂತೆ ಇರುವ ಇತರ ರಾಜಮನೆತನದವರ ಹಿತಾಸಕ್ತಿಗಳನ್ನು ಬೆಂಬಲಿವುದು ಮಾತ್ರ ಗುರಿಯಾಗಿತ್ತು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಏನೂ ಆಸಕ್ತಿ ಇರಲಿಲ್ಲ.  ದೇಶದಲ್ಲಿ ಕ್ರಿಕೆಟ್ ಆಡುವುದಕ್ಕೆ ಇವನಿಂದ ಯಾರಿಗೂ ಉತ್ತೇಜನ ಸಿಗಲಿಲ್ಲ.  ಇವನ ಜೀವನ ಚರಿತ್ರೆ ಬರೆದ ಸೈಮನ್ ವಾಲ್ಡ್ ಅಭಿಪ್ರಾಯದಲ್ಲಿ ರಣಜಿಯ ಮನಸ್ಸು ನವಾನಗರದ  ಬದಲು ಇಂಗ್ಲೆಂಡ್ ಮೇಲಿತ್ತು,  (.. "he was more at home in England with his friends").  ಮಾಹೀರ್ ಬೋಸ್  ಬರೆದಿರುವ History of Indian cricket ಪುಸ್ತಕದಲ್ಲಿ, ರಣಜಿ ಭಾರತದ ಕ್ರಿಕೆಟ್ ಪಿತಾಮಹ ಅನ್ನುವುದು ಮೂರ್ಖತನ ಎಂದು ಟೀಕಿಸಿದ್ದಾರೆ. 

ರಣಜಿ ಜೀವನದಲ್ಲಿ ಬಹು ಭಾಗ,  ಕ್ರಿಕೆಟ್ ಆಡುವುದು ಮತ್ತು ಸಾಲಗಾರರಿಂದ ತಪ್ಪಿಸಿಕೊಳ್ಳುವುದು ಇದರಲ್ಲೇ ಕಳೆಯಿತು ಅಂದರೆ ತಪ್ಪಲಾಗರದು.  ಕೊನೆ ಕೊನೆಗೆ ಇವನಿಗೂ ಮತ್ತು ಬ್ರಿಟಿಷ್ ಅಧಿಕಾರಿಗಳಿಗೂ ಅನೇಕ ಭಿನ್ನಾಭಿಪ್ರಾಯಗಳಿದ್ದವು. 
ಇವನಿಗೆ ಮದುವೆ ಆದ ಯಾವ ದಾಖಲೆಗಳಿಲ್ಲ; ಆದರೆ ಇವನ ಹತ್ತಿರ ಸಂಬಂಧದವರ ಮಕ್ಕಳು ಇವನ ಆಶ್ರಯದಲ್ಲೇ ಬೆಳದರು.  ಅವರಲ್ಲೊಬ್ಬ ದುಲೀಪ್ ಸಿಂಹಜಿ ರಣಜಿಯ ಹಾಗೆ ಇಂಗ್ಲೆಂಡ್ ದೇಶದ ತಂಡದೊಂದಿಗೆ ಕ್ರಿಕೆಟ್ ಆಡಿದ.
 
0೨/೦೪/೧೯೩೩ ರಂದು ರಣಜಿ ಹೃದಯಾಘಾತದಿಂದ ನಿಧನನಾದ.  ರಣಜಿ ಟ್ರೋಫಿಯಿಂದ ಇವನ ಹೆಸರು ಇನ್ನೂ ಉಳಿದಿದೆಯಾದರೂ, ರಣಜಿತ್ ಸಿಂಹನಿಂದ ಆ ಕಾಲದಲ್ಲಿ ಭಾರತದಲ್ಲಿ ಕ್ರಿಕೆಟ್ ಅಭಿವೃದ್ಧಿಯೇನೂ ಆಗಲಿಲ್ಲ. 

- ರಾಮಮೂರ್ತಿ 
ಕಾಂಗಲ್ಟನ್, ಚೆಶೈರ್ 

Further reading:
•	Simon Wilde: Ranji, The strange Genius 
•	Mohir Bose: History of Indian cricket 
•	Wisden Cricketer's Almanack 

Photos: Wikimedia Commons

***********************************************************************************