ಪ್ರೀತಿಗೊಂದು ಚಮಚೆ -ಅಮಿತಾ ರವಿಕಿರಣ್

ಪ್ರೀತಿಗೊಂದು ವ್ಯಾಖ್ಯೆ ಬೇಕೆ? ಅದಕ್ಕೊಂದು ಪ್ರತಿಮೆ ಬೇಕೆ?  ಕಬೀರನಿಂದ ಆರಂಭಿಸಿ ಬೀಟಲ್ಸ್ ಬ್ರಿಟಿಷ್ ’ಪಾಪ್ ಬ್ಯಾಂಡ್’ (Beatles) ವರೆಗೆ ಅವರು ಹಾಡಿದ್ದನ್ನು ಗುನುಗುನಿಸುತ್ತ ಬಂದಿದ್ದೇವೆ. ಜಾನ್ ಲೆನನ್ ಮತ್ತು ಪಾಲ್ ಮೆಕ್ಕಾರ್ಟ್ನಿಯವರ All you need is Love ಹಾಡು ಅನಿವಾಸಿಯ ಹಿರಿಯ ಓದುಗರ ತುಟಿಯ ಮೇಲೆ ಸದಾ ಇರುತ್ತಿತ್ತು!ಎರಡೂ ಕೈಗಳನ್ನು ಜೋಡಿಸಿ ಹಾರ್ಟ್ ಲಾಂಛನವನ್ನು ತೋರಿಸದ ಈಗಿನ ಯುವಕರೇ ಇಲ್ಲ. ಅದೇ ತರಹ ಬಹುಕಾಲದಿಂದ ಯುಕೆ ದೇಶದ ವೇಲ್ಸ್ ಪ್ರಾಂತದಲ್ಲಿ ಚಮಚಗಳನ್ನು ಕೆತ್ತಿ ಪ್ರೀತಿಯ ದ್ಯೋತಕವಾಗಿ ಕೊಡುವ ರೋಚಕ ಇತಿಹಾಸವನ್ನು ಈ ವಾರ ಬೆಲ್ ಫ಼ಾಸ್ಟ್ ನಲ್ಲಿ ವಾಸಿಸುತ್ತಿರುವ ಅಮಿತಾ ರವಿಕಿರಣ್ ಅವರು ಬರೆದಿದ್ದಾರೆ. ಅದು ನಿಮಗೆಲ್ಲ ಹಿಡಿಸೀತು ಎನ್ನುವ ನಮ್ಮ ಆಶಯ. (ಸಂ)
'ಪ್ರೀತಿ' ಎಂಬ ಈ ಎರಡೂವರೆ ಅಕ್ಷರದ*  ಪದವನ್ನು ಕೇಳಿದಾಗ ಮನಸ್ಸು ಉಲ್ಲಸಿತವಾಗುತ್ತದೆ.  ಪ್ರೀತಿ ಎಂದರೇನು? ಹಾಗೆಂದು ಯಾರಾದರೂ ಒಂದೇ ವಾಕ್ಯದಲ್ಲಿ ಉತ್ತರಿಸಿ ಎಂಬ ಪ್ರಶ್ನೆ ಹಾಕಿದರೆ,  ಪ್ರೀತಿ ಎಂಬ ಪದ ಒಂದೇ ಆದರೂ ಹಾಗೆಂದರೇನು ಎಂಬ ಪ್ರಶ್ನೆಗೆ  ಸಿಗುವ ಉತ್ತರಗಳು ಲೆಕ್ಕಕ್ಕೆ ಸಿಗದಷ್ಟು.
ಜೊತೆಗೆ ಪ್ರತಿ ಉತ್ತರವೂ ಅನನ್ಯ!

ಪ್ರೀತಿ ಎಂದರೇ ಹಾಗಲ್ಲವೇ? ಭಾಷೆಗೆ ನಿಲುಕದ ಭಾವವದು! ಆದರೂ ಮನುಷ್ಯ ತನ್ನ ಒಲವು ವ್ಯಕ್ತಪಡಿಸಿ ಪ್ರೀತಿಯನ್ನು ಪಡೆಯಲು, ಅದನ್ನು ಬೆಳೆಸಲು, ಒಂದು ಬಹು ಸುಂದರ ಉಪಾಯ ಹುಡುಕಿಕೊಂಡಿದ್ದಾನೆ ಅದೇ ಉಡುಗೊರೆ;

ಅದು ಸಂಗೀತ, ಸಾಹಿತ್ಯ, ಮಾತು, ಚಿತ್ರಕಲೆಯ ಮೂಲವಾದರೂ ಸರಿ. ಅಥವಾ ಒಂದು ವಸ್ತು ರೂಪದಲ್ಲಾದರೂ ಸರಿ. ಉಡುಗೊರೆಯ
ಮೂಲಕ ತನ್ನಲ್ಲಿ ಮೂಡಿದ ಪ್ರೀತಿಯನ್ನು ತಾನು ಪ್ರೀತಿಸುವ ಜೀವಕ್ಕೆ ತಿಳಿಸಲು ಹವಣಿಸುತ್ತಾನೆ.
ಈ ಪ್ರೀತಿ ಅಭಿವ್ಯಕ್ತಿಯಲ್ಲಿ ತನ್ನಿಷ್ಟದ ಜೀವಕ್ಕೆ, ಉಡುಗೊರೆ ಕೊಟ್ಟು, ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳುವ ಬಗೆ ಇಂದು ನಿನ್ನಯದಲ್ಲ.

ಪುರಾಣ ಕಾಲದಲ್ಲಿ ಪಾರ್ವತಿ ಶಿವನ ಕುರಿತು ತಪಸ್ಸು ಮಾಡುವಾಗ ಆತನನ್ನು ಒಲಿಸಿಕೊಂಡು ಅವನ ಪ್ರೀತಿ ಸಾಂಗತ್ಯದ ಅಭಿಲಾಷಿಯಾಗಿ ಅಪರೂಪದ ಫಲ ಪುಷ್ಪಗಳನ್ನು ಆತನಿಗೆ ಉಡುಗೊರೆಯಾಗಿ ಸಮರ್ಪಿಸಿದಳಂತೆ!

ಅಂತೆಯೇ, ಕೃಷ್ಣ ರಾಧೆಯ ಪ್ರೇಮಕಥೆಯಲ್ಲಿ ಬರುವ ವೈಜಯಂತಿ ಹಾರ ಮತ್ತು ಕೊಳಲು ಕೂಡ ಪರಸ್ಪರ ಕೊಟ್ಟು ಪಡೆದ ಪ್ರೀತಿಯ ಉಡುಗೊರೆಗಳೇ. ಕೃಷ್ಣ-ರುಕ್ಮಿಣಿ- ಸತ್ಯಭಾಮೆಯ ಪಾರಿಜಾತದ ಕಥೆ, ದುಶ್ಯಂತ ಶಾಕುಂತಲೆಯ ಪ್ರೇಮಕಥೆಯಲ್ಲಿ ಬರುವ ಉಂಗುರದ ಉಲ್ಲೇಖಗಳನ್ನು ಕೇಳಿದಾಗ ಪ್ರೇಮ ನಿವೇದನೆಗೆ, ಸಾಮರಸ್ಯ ತುಂಬಿದ ಜೀವನಕ್ಕೆ ಉಡುಗೊರೆ ಎಂಬುದು ಅದೆಷ್ಟು ಮುಖ್ಯ ಎಂಬುದರ ಅರಿವಾಗುತ್ತದೆ.
ಇದೇ ಹಿನ್ನೆಲೆಯಲ್ಲಿ ಹುಟ್ಟಿದ ಒಂದು ಅಪರೂಪದ ಸಂಪ್ರದಾಯ, ಕಲೆ, ರೂಡಿ ವೇಲ್ಸ್ ದೇಶದಲ್ಲಿ ಕಂಡುಬರುತ್ತದೆ.
ಈ ಸಂಪ್ರದಾಯ ಶುರುವಾದದ್ದು ಹದಿನಾರನೇ ಶತಮಾನದ ಅಂತ್ಯದಲ್ಲಿ. ಬೇಸಾಯ, ಹೈನುಗಾರಿಕೆ, ಗಣಿಗಾರಿಕೆ, ಮತ್ತು ನಾವಿಕ ವೃತ್ತಿಯೇ ಮುಖ್ಯವಾಗಿದ್ದ ವೇಲ್ಸ ದೇಶದಲ್ಲಿ, ಅಕ್ಟೋಬರ್ ತಿಂಗಳು ಕಳೆಯುವ ಹೊತ್ತಿಗೆ ಒಂದು ರೀತಿಯ ಬೇಸರದ ಛಾಯೆ ಆವರಿಸುತ್ತಿತ್ತು. ಕಾರಣ ಇಲ್ಲಿ ಆಗ ಚಳಿಗಾಲ ಶುರುವಾಗುತ್ತದೆ. ಮಧ್ಯಾನ್ಹ ಎರಡಕ್ಕೆ ಆವರಿಸುವ ಕತ್ತಲು, ಮತ್ತು ಹವಾಮಾನ ವೈಪರಿತ್ಯ, ಶ್ರಮಜೀವಿಗಳನ್ನು ಏಕತಾನತೆ ಮತ್ತು ಖಿನ್ನತೆಗೆ ನೂಕುತ್ತಿತ್ತು.
Courtesy: Paul Curtis
ಅದೇ ಸಂದರ್ಭದಲ್ಲಿ, ಅಲ್ಲಿಯ ಕ್ರಿಯಾಶೀಲ ಯುವಕನೊಬ್ಬ, ಸುಮ್ಮನೆ ಕೂರಲಾಗದೆ ಮನೆಯ ಮೂಲೆಯಲ್ಲಿ ಬಿದ್ದಿದ್ದ ಪುಟ್ಟ ಮರದ ತುಂಡಿನಲ್ಲಿ, ಕಲಾತ್ಮಕ ಚಮಚೆ/ಸೌಟೊಂದನ್ನು ತಯಾರಿಸಿದ. ಇದು ಬರಿಯ ಚಮಚೆ ಆಗಿರದೆ ಅತ್ಯಂತ ಸೂಕ್ಷ್ಮ ಕುಸುರಿ  ಕೆತ್ತನೆಗಳನ್ನು ಒಳಗೊಂಡ ಸುಂದರ ಕಲಾಕೃತಿಯಂತೆ ತಯಾರಿಸಲ್ಪಟ್ಟಿತ್ತು.

ತಾನು ತಯಾರಿಸಿದ ಈ ಚಮಚೆಯನ್ನು ತನ್ನ ಪ್ರೇಯಸಿಗೆ ಕಾಣಿಕೆಯ ರೂಪದಲ್ಲಿ ನೀಡಿ ಆಕೆ ಅವನ ಮನಸನ್ನು ಬಗೆದಷ್ಟೂ ಸಿಗುವ ಪ್ರೀತಿಯ ಅಗಾಧತೆಯನ್ನು ತಿಳಿಸಿದ. ಆಕೆಯನ್ನು ಮೆಚ್ಚಿಸಲು ರಮಿಸಲು ಮಾಡಿದ ಈ ಪ್ರಯತ್ನ ಯಶಸ್ವಿಯಾಗಿತ್ತು.

ತನಗಾಗಿ ಸಮಯ ಕೊಟ್ಟು ಪ್ರಿಯಕರ ತಯಾರಿಸಿದ ಈ ವಿಶಿಷ್ಟ ವಸ್ತುವನ್ನು ಕಂಡು ಅವನ ಪ್ರೇಯಸಿ ತುಂಬಾ ಖುಶಿಯಾಗಿ, ತನ್ನೆಲ್ಲ ಗೆಳತಿಯರ ಬಳಗಕ್ಕೂ ಇದನ್ನು ಹೆಮ್ಮೆಯಿಂದ ತೋರಿಸಿಕೊಂಡು ಬಂದಳು.

ಈ ಯುವಕ ಸಮಾಜದ ಇತರ ಯುವಕರಿಗೆ/ಪ್ರೇಮಿಗಳಿಗೆ ಮಾದರಿಯಾದ. ಅವನಂತೆ ಇತರರೂ ತಮ್ಮ ಈ ಚಳಿಗಾಲದ ಏಕತಾನತೆ ಕಳೆಯಲು ಈ love spoons ತಯಾರಿಕೆಯಲ್ಲಿ ನಿರತರಾದರು. ಜೊತೆಗೆ ಈ ಕಲಾಕೃತಿಗಳನ್ನು ತಮ್ಮ ಪ್ರೇಯಸಿಯರಿಗೆ ಕೊಡುವ ಹುಮ್ಮಸ್ಸಿನಲ್ಲಿ, ಹಲವು ಅಪರೂಪದ ವಿನ್ಯಾಸಗಳು, ಮಾದರಿಗಳು ಸೇರಿಕೊಂಡವು. ಅಲ್ಲಿನ ಪ್ರಸಿದ್ಧ ಪ್ರೇಮ ಕಥೆಯ ದ್ಯೋತಕದಂತೆ ಈ ಕೆತ್ತನೆಗಳು ಮೂಡಿಬಂದವು.
ಅಲ್ಲಿಂದ ಈ  'ಲವ್ ಸ್ಪೂನ್'  ಎಂಬ  ಕಾಷ್ಠ ಕಲೆ. ವೇಲ್ಸ್ ದೇಶದ ಜನಪದ ವೈಶಿಷ್ಟಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು.
ಪ್ರೇಯಸಿಗೆ ಕೊಡಲು ಮಾಡಿದ ಈ ಲವ್ ಸ್ಪೂನ್ ಕೆಲ ಸಮಯದ ನಂತರ ಪ್ರೀತಿ ಮತ್ತು ಸಾಮರಸ್ಯ, ಗೌರವ ಆದರ ಇರುವ ಎಲ್ಲ ಬಾಂಧವ್ಯಗಳಲ್ಲೂ. ಶುಭಕಾರ್ಯಗಳಲ್ಲಿ, ಸವಿಗಳಿಗೆಗಳಲ್ಲಿ ಪರಸ್ಪರ ಉಡುಗೊರೆಯಾಗಿ ನೀಡುವ ಕ್ರಮ ಶುರುವಾಯಿತು.

ಪ್ರತಿ ಸೌಟಿನಲ್ಲಿ ಇರುವ ಕೆತ್ತನೆಗೆ ಅದರದೇ ಆದ ಅರ್ಥ ಮತ್ತು ಪ್ರಾಮುಖ್ಯತೆ ಇದೆ.
ಉದಾಹರಣೆಗೆ;
• ಹೃದಯ - ಪ್ರೀತಿಯ ದ್ಯೋತಕ
• ಎರಡು ಬಟ್ಟಲ ವಿನ್ಯಾಸ - ಸಾಂಗತ್ಯ ಮತ್ತು ನಂಬಿಕೆ
• ಸರಪಳಿ ವಿನ್ಯಾಸ - ಪ್ರಾಮಾಣಿಕತೆ ಮತ್ತು ನಂಬಿಕೆ
• ವಜ್ರಾಕೃತಿ - ಸಮೃದ್ಧಿ ಮತ್ತು ಸುಗಮ ಜೀವನದ ಹಾರೈಕೆ
• ಬೀಗ ಮತ್ತು ಬೀಗದ ಕೈ - ಮನೆಯ ಸ್ವಾಸ್ಥ್ಯ, ಶಾಂತಿ ಮತ್ತು ಸಹಬಾಳ್ವೆ.
• ಚಕ್ರ - ಕೆಲಸ ಕಾರ್ಯದಲ್ಲಿ ಶ್ರದ್ಧೆ, ಉನ್ನತಿ

ಹೀಗೆ ಅಸಂಖ್ಯ ಸಾಂಕೇತಿಕ ಅರ್ಥಗಳನ್ನು ಬಿಂಬಿಸುವ ಈ ಕಲಾತ್ಮಕ ಚಮಚೆಗಳ ಜೊತೆಗೆ ವೇಲ್ಸ್ ದೇಶದ ಹಿರಿಮೆ ಬಿಂಬಿಸುವ ರಾಷ್ಟ್ರೀಯ ಚಿಹ್ನೆಗಳನ್ನು ಕೂಡ ಸೇರಿಸಲಾಯಿತು.
ನೀರಸ ಚಳಿಗಾಲ ಕಳೆದು, ವಸಂತಾಗಮನವನ್ನು ಸಾರುವ ಡಾಫುಡಿಲ್ಸ್ ಹೂವು. ಡ್ರಾಗನ್, ಕೆಲ್ಟಿಕ್ ಶೈಲಿಯ ಕೆತ್ತನೆಗಳು ಈ ಕಲೆಯನ್ನು ವೇಲ್ಸ್ ದೇಶದ ಕಲಾಭಿವ್ಯಕ್ತಿಯ ಪ್ರತೀಕವಾಗಿಸಿವೆ.

ಸುಮಾರು ಐದು ಶತಮಾನದ ಇತಿಹಾಸ ಇರುವ ಈ ವಿಶಿಷ್ಟ ಕಲೆಯನ್ನು ಇಲ್ಲಿನ ಆಸಕ್ತ ಕಲಾವಿದರು ಅಷ್ಟೇ ಅಸ್ಥೆಯಿಂದ ತಮ್ಮ ಹಿರಿಯರಿಂದ ಕಲಿತು ಮುಂದುವರಿಸಿಕೊಂಡು ಬಂದಿದ್ದಾರೆ.

ನಾನು ಒಂದು ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಲು ವೇಲ್ಸ್ ದೇಶದ ಒಂದು ಹಳ್ಳಿಗೆ ಭೇಟಿ ಕೊಟ್ಟಾಗ ಅಲ್ಲಿ ಈ ಕಲೆಯ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇದ್ದವು. ಅಲ್ಲಿದ್ದ 70ರ ಹರೆಯದ ಲವ್ ಸ್ಪೂನ್ ತಯಾರಿಸುವ ಕಲಾವಿದನೊಬ್ಬ ನನಗೆ ಈ ಕಲೆ ಹುಟ್ಟಿ ಬೆಳೆದು ಬಂದ ಕಥೆಯನ್ನು ಹೇಳಿದ. ಕನ್ನಡದಲ್ಲಿ ಸಾಮಾನ್ಯವಾಗಿ ಬಳಸುವ ಗಾದೆ ಮಾತೊಂದು ಆ ನಿಮಿಷದಲ್ಲಿ ನೆನಪಾಯಿತು:

ಕೆಲಸವಿಲ್ಲದ ಬಡಗಿ... ತನ್ನ ಪ್ರಿಯತಮೆಯ ಮುಖದಲ್ಲೊಂದು ನಗು ನೋಡಲು ದೇಶವೇ ಹೆಮ್ಮೆ ಪಡುವ ಅನನ್ಯ ಕಲೆಯೊಂದನ್ನು ತನಗೇ ಗೊತ್ತಿಲ್ಲದೆ ಶುರುಮಾಡಿದ.  ಅದು ಇಂದು ಅದೆಷ್ಟೋ ಜನರಿಗೆ ಕೆಲಸ ಕೊಟ್ಟು ಕಾಪಾಡಿದೆ.

ಅಮಿತಾ ರವಿಕಿರಣ್, ಬೆಲ್ಫಾಸ್ಟ್,ಯುಕೆ

ಚಿತ್ರ ಕೃಪೆ: ಪಾಲ್ ಕರ್ಟಿಸ್ ಅವರ ಜಾಲ ತಾಣ. (ಅವರ ವೈಯಕ್ತಿಕ ಅನುಮತಿಯೊಂದಿಗೆ.)
*ಕಬೀರ್ ದಾಸನ ಒಂದು ದೋಹಾ ಹೀಗಿದೆ:
पोथी पढ़ पढ़ जग मुआ, पंडित भया न कोय
ढाई अक्षर प्रेम का, पढ़े सो पंडित होय
(ಪುಸ್ತಕ ಓದಿ ಯಾರೂ ಪಂಡಿತರಾಗಿಲ್ಲ. ಪ್ರೇಮದ ಎರಡೂವರೆ ಅಕ್ಷರಗಳನ್ನು ಕಲಿತವನೇ ಪಂಡಿತ.)

ಬೆಂಗಳೂರಿನ ಕೆಲವು ಇಂಗ್ಲಿಷ್ ಹೆಸರಿನ ರಸ್ತೆ ಮತ್ತು ವಸತಿ ಪ್ರದೇಶಗಳ ಇತಿಹಾಸ : ರಾಮಮೂರ್ತಿ

ಈ ವಾರದ ಸಂಚಿಕೆಯಲ್ಲಿ ರಾಮಮೂರ್ತಿ ಅವರು ಬೆಂಗಳೂರು ನಗರದ ರಸ್ತೆಗಳ ಇತಿಹಾಸವನ್ನು ಕುರಿತು ಲೇಖನ ಬರೆದಿದ್ದಾರೆ. ಕೆಂಪೇಗೌಡರು ಹುಟ್ಟು ಹಾಕಿದ ನಗರವನ್ನು ನಂತರದಲ್ಲಿ ಆಳಿದ ಬ್ರಿಟಿಷರು ನಗರಕ್ಕೆ ತಮ್ಮದೇ ಆದ ಛಾಪನ್ನು ಮೂಡಿಸಿ ಇತಿಹಾಸವನ್ನು ಬದಲಿಸಿದರು. ಅದರ ಕುರುಹಾಗಿ ನಮ್ಮ ಹೆಮ್ಮೆಯ ನಗರದಲ್ಲಿ ಇರುವ ಹಲವಾರು ಪ್ರತಿಷ್ಠಿತ ರಸ್ತೆಗಳು ಬ್ರಿಟಿಷ್ ಅಧಿಕಾರಿ ಮತ್ತು ಗಣ್ಯರ ಹೆಸರನ್ನು ಹೊತ್ತಿದೆ. ಇತ್ತೀಚಿಗೆ ಆ ಹೆಸರುಗಳನ್ನು ಬದಲಿಸಲು ಕೆಲವರು ದೇಶ ಭಕ್ತರು ಒತ್ತಾಯ ಪಡಿಸುತ್ತಿದ್ದಾರೆ. ರಸ್ತೆಗಳ, ನಗರಗಳ ಹೆಸರು ಬದಲಾಯಿಸಿದ ತಕ್ಷಣ ಇತಿಹಾಸ ಸತ್ಯ ಬದಲಾಗುವುದೇ? ಯಾವ ಹೆಸರು ನೂರಾರು ವರ್ಷಗಳಿಂದ ಜನರ ನಾಲಿಗೆಯಲ್ಲಿ ಸ್ಮೃತಿಯಲ್ಲಿ ಜೀವಂತವಾಗಿದೆಯೋ, ಜನಪ್ರೀಯವಾಗಿದೆಯೋ ಅದನ್ನು ಉಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂಬುದು ಕೆಲವರ ಅನಿಸಿಕೆ. ಮುಂದಿನ ಪೀಳಿಗಿಗೆ ಇದರ ಅರಿವು ಬೇಕು. ಈ ವಿಚಾರ ಏನೇ ಇರಲಿ ರಾಮಮೂರ್ತಿ ಅವರು ಬ್ರಿಟಿಷ್ ರಾಜ್ ಆಳ್ವಿಕೆಯ ಕೆಲವು ಹಿನ್ನೆಲೆ ಮಾಹಿತಿಯನ್ನು ಇಲ್ಲಿ ಒದಗಿಸಿದ್ದಾರೆ. ಬೆಂಗಳೂರಿನ ಪರಿಚಯ ಇರುವ ಓದುಗರಿಗೆ ಇದು ಪುಳಕ ನೀಡುವ ಬರಹ 
- ಸಂ.
***************************************
ಆಂಗ್ಲರ ಆಳ್ವಿಕೆ ಕಳೆದು ಸುಮಾರು ಎಂಟು ದಶಕಗಳೇ ಸಂದರೂ ಬೆಂಗಳೂರಿನಲ್ಲಿ ಅನೇಕ ಇಂಗ್ಲಿಷ್ ಹೆಸರಿನ ರಸ್ತೆಗಳು ಮತ್ತು ಪ್ರದೇಶಗಳು ಇನ್ನೂ ಉಳಿದಿವೆ. ಪ್ರತಿಯೊಂದು ಹೆಸರಿನ ಹಿಂದೆ ಹತ್ತೊಂಬತ್ತನೇ ಶತಮಾನದಲ್ಲಿದ್ದ ಒಬ್ಬ ಬ್ರಿಟಿಷ್ ಪುರುಷನ ಹಿನ್ನಲೆ ಅಥವಾ ಸಂಪರ್ಕ ಇರುವುದು ಕಂಡು ಬರುತ್ತೆ. ಸ್ವಾತಂತ್ರ್ಯ ಬಂದ ಮೇಲೆ, ಸ್ವಾಭಿಮಾನದಿಂದ ಕೆಲವು ಹೆಸರುಗಳು ಬದಲಾದವು. ಆದರೆ ಜನರು ಇನ್ನೂ ಹಲವನ್ನು ಹಳೆಯ ಹೆಸರಿಂದ ಕರೆಯುತ್ತಾರೆ. ಉದಾಹರಣೆಗೆ, ಬಸವನಗುಡಿಯ Surveyors Street, ಈಗ ಅಧಿಕೃತವಾಗಿ ಕೃಷ್ಣ ಶಾಸ್ತ್ರೀ ರಸ್ತೆ ಆಗಿದ್ದರೂ ಜನ ಸಾಮಾನ್ಯರ ಬಾಯಲ್ಲಿ ಹಳೇ ಹೆಸರೇ ಉಳಿದಿದೆ! 

೧೮೦೪ ರಲ್ಲಿ ಬ್ರಿಟಿಷರು ಸ್ಥಾಪಿಸಿದ ಬೆಂಗಳೂರಿನ ದಂಡು (Cantonment), ದಕ್ಷಿಣ ಭಾರತದಲ್ಲಿಯೇ ದೊಡ್ಡ ಮಿಲಿಟರಿ  ಪ್ರದೇಶವಾಗಿತ್ತು. ಇದರಲ್ಲಿ ಮುಖ್ಯವಾದ ಜಾಗ ಪರೇಡ್ ಗ್ರೌಂಡ್ಸ್. ಇಲ್ಲಿ  ಬ್ರಿಟಿಷರ ಸೈನ್ಯ ತರಬೇತಿ ಪಡೆಯುತ್ತಿತ್ತು. ಈಗಲೂ ಜನವರಿ ೨೬ ರಂದು ಇಲ್ಲೇ ಗಣರಾಜ್ಯದ ಪರೇಡ್ ನಡೆಯುವುದು.  ಇದರ ಸಮೀಪದಲ್ಲಿ ಕಬ್ಬನ್ ಪಾರ್ಕ್ ನಿರ್ಮಾಣವಾಯಿತು. Cantonment ನ  ಸುತ್ತಮುತ್ತ ಇದ್ದ ಜಾಗದಲ್ಲಿ ಬ್ರಿಟಿಷ್  ಕುಟುಂಬದವರು ವಾಸ್ತವ್ಯ ಹೂಡಿದರು, ಈ ಪ್ರದೇಶಕ್ಕೆ ತಮ್ಮ ಹೆಸರುಗಳನ್ನೂ ಕೊಟ್ಟರು: White Field , Austin  Town, Fraser Town, Cooke Town ಇತ್ಯಾದಿ. ಇದು ಸುಮಾರು ೧೫೦ ವರ್ಷಗಳ ಹಿಂದಿನ ಮಾತು. ಈಗಲೂ ಈ ಹೆಸರುಗಳು ಉಳಿದಿವೆ. ಪೂರ್ವ ದಿಕ್ಕಿನಲ್ಲಿರುವ ಈಗಿನ Whitefield ಪ್ರದೇಶವು, ೧೮೮೨ ರಲ್ಲಿ ಚಾಮರಾಜ ಒಡೆಯರ್ ಮಹಾರಾಜರು Anglo Indian ಜನಾಂಗದವರು ವಾಸ ಮಾಡುವುದಕ್ಕೆ ಡೇವಿಡ್ ಇಮ್ಯಾನುಯಲ್ ವೈಟ್ ಅವರಿಗೆ ಕೊಟ್ಟ ೩೭೫೦ ಎಕರೆ ಜಮೀನು. ಈತ Anglo Indian ಸಂಘದ ಅಧ್ಯಕ್ಷನಾಗಿದ್ದ. ಅನೇಕರು ೫೦ ಕಿ.ಮೀ ದೂರದಲ್ಲಿದ್ದ KGF ಚಿನ್ನದ ಗಣಿ ಯಲ್ಲಿ ಕೆಲಸದಲ್ಲಿದ್ದರು. ಹತ್ತಿರದಲ್ಲೇ ಕಟ್ಟಿದ ರೈಲು ನಿಲ್ದಾಣದಿಂದ ಕೆಲಸಕ್ಕೆ ಹೋಗಬಹುದಾಗಿತ್ತು. ಈಗ ವೈಟ್ ಫೀಲ್ಡ್ ನಲ್ಲಿ ಬಹು ದೊಡ್ಡ IT ಸಂಸ್ಥೆಗಳಲ್ಲಿ  ಸಾವಿರಾರು ಜನರು ಕೆಲಸದಲ್ಲಿದ್ದಾರೆ. ಹೀಗೆ, ಪ್ರತಿಯೊಂದು ಪ್ರದೇಶಕ್ಕೂ ಒಂದು ಇತಿಹಾಸ ಇದೆ.  

ಈಗ ಕೆಲವು ರಸ್ತೆಗಳ ಇತಿಹಾಸವನ್ನು ನೋಡೋಣ. ಮುಖ್ಯವಾದ ರಸ್ತೆಗಳು, Avenue Road, Brigade Road, Cubbon Road , Cunningham Road, Millers Road, Krumbigal  Road, Lavelle  Road, Sankey Road, St. Marks Road  ಇತ್ಯಾದಿ. ಇದರಲ್ಲಿ ಅವೆನ್ಯೂ ರಸ್ತೆ ಬಹಳ ಹಳೇ ಮತ್ತು ಮುಖ್ಯವಾದ ರಸ್ತೆ. ದೊಡ್ಡ ಪೇಟೆ ಇದರ ಮುಂಚಿನ ಹೆಸರು. ಈಗಿನ Majestic ನಿಂದ  ಕೆಂಪೇಗೌಡರು ಕಟ್ಟಿದ ಕೋಟೆ ದಾಟಿ,  ಟಿಪ್ಪು ಅರಮನೆವರೆಗೆ ಇದ್ದ ರಸ್ತೆ. ಇದಕ್ಕೆ ರಾಜಬೀದಿ ಎಂದೂ ಹೆಸರಿತ್ತು. ೧೮೮೪ ನಲ್ಲಿ ಈ ರಸ್ತೆ Avenue Road ಆಯಿತು ಅನ್ನುವ ದಾಖಲೆ ಇದೆ. ಒಂದು ಕಾಲದಲ್ಲಿ ಸಾಲು ಮರಗಳು, ತೆಂಗಿನ ಮರಗಳು ಇದ್ದವು ಈ ರಸ್ತೆಯ ಉದ್ದಕ್ಕೂ ಇದ್ದವು.  ಈಗ ವ್ಯಾಪಾರದ ರಸ್ತೆ, ಇಲ್ಲಿ ಸಿಗದೇ ಇರುವ ಪದಾರ್ಥವೇ ಇಲ್ಲ ಅಂದರೆ ತಪ್ಪಲಾಗರಾದು.  
ಕನ್ನಿಂಗ್ ಹ್ಯಾಮ್ ನ

ಈಗಿನ ವಸಂತ ನಗರದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಗೆ ಹೆಸರು ಬಂದಿದ್ದು ಸ್ಕಾಟ್ಲೆಂಡ್ ಮೂಲದ ಫ್ರಾಂಸಿಸ್ ಕನ್ನಿಂಗ್ ಹ್ಯಾಮ್ನಿಂದ (೧೮೨೦-೧೮೭೫). ಈಸ್ಟ್ ಇಂಡಿಯಾ ಕಂಪನಿಯ ಸೈನಿಕ ಶಾಲೆಯಲ್ಲಿ ತರಬೇತಿ ಪಡೆದು ಮದ್ರಾಸ್ ರೆಜಿಮೆಂಟ್ ಗೆ ಸೇರಿ, ೧೮೫೦ರಲ್ಲಿ ಮೈಸೂರು ಪ್ರಾಂತ್ಯದ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ನವರ ಸಿಬ್ಬಂದಿಯಾಗಿ ಕೆಲಸ ಮಾಡಿ ಲಾಲ್ ಬಾಗ್ ತೋಟ ಮತ್ತು ಬೆಂಗಳೂರಿನ ಅನೇಕ ಪ್ರಮುಖ ಕಟ್ಟಡಗಳನ್ನು ಕಟ್ಟಿದವನು. ಇದರಲ್ಲಿ ಮುಖ್ಯವಾದದ್ದು, ಸರ್ಕಾರದ ಅತಿಥಿ ಗೃಹ “ಬಾಲಬ್ರೂಯಿ”. ಇವನ ಇಬ್ಬರು ಸಹೋದರರೂ ಸಹ ಭಾರತದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಇವನ ಅಣ್ಣ, ಜನರಲ್ ಅಲೆಕ್ಸಾಂಡರ್ Indian Archaeology ಸಂಸ್ಥೆಯನ್ನು ಸ್ಥಾಪಿಸಿದವನು ಮತ್ತು ತಮ್ಮ ಮೇಜರ್ ಜಾನ್ “History of the Sikhs ” ಬರೆದವನು. ಫ್ರಾನ್ಸಿಸ್ ಕನ್ನಿಂಗ್ ಹ್ಯಾಮ್ ಸಹ ದೊಡ್ಡ ಬರಹಗಾರನು. ನಿವೃತನಾದ ಮೇಲೆ ಮೈಸೂರು ಮಹಾರಾಜರಗೆ ಸಲಹೆಗಾರನಾಗಿ ಸೇರಿ ೧೮೭೧ರಲ್ಲಿ ಇಂಗ್ಲೆಂಡ್ ಗೆ ಮರಳಿದ ಮೇಲೆ ತನ್ನ ಸಾಹಿತ್ಯ ಚಟುವಟಿಕೆಯನ್ನು ಪುನರಾರಂಭಿಸಿದ. ಡಿಸೆಂಬರ್ ೧೮೭೫ ನಿಧನವಾದ. ಒಂದು ವಿಚಿತ್ರ ವಿಷಯ, ಇವನ ಭಾವ ಚಿತ್ರ ಎಲ್ಲೂ ಇಲ್ಲ , ಸ್ಕಾಟ್ ಲ್ಯಾಂಡ್ ನಲ್ಲಿ ಅಮೃತ ಶಿಲೆಯ ಪ್ರತಿಮೆ ಮಾತ್ರ ಇದೆ.

ಸರ್ ರಿಚರ್ಡ್ ಸ್ಯಾಂಕಿ (೧೮೨೯-೧೯೦೮) ಹುಟ್ಟಿದ್ದು ೨೨/೩/೧೮೨೯ ರಂದು ಐರ್ಲೆಂಡ್ನಲ್ಲಿ. ೧೮೪೫ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ ಶಾಲೆಯಲ್ಲಿ ತರಬೇತು ಪಡೆದು, ಮದ್ರಾಸ್ ರೆಜಿಮೆಂಟ್ ಗೆ ಸೇರಿ ಭಾರತದ ಅನೇಕ ಕಡೆ ಇಂಜಿನಿಯರ್ ಆಗಿ ಕೆಲಸ ಮಾಡಿ, ೧೮೬೧ ರಲ್ಲಿ ಮೈಸೂರು ಸಂಸ್ಥಾನದಲ್ಲಿ PWD (Public Works Department ) ಇಲಾಖೆ ಸೇರಿದ. ರಾಜ್ಯದ ನೀರಾವರಿ ಅಭಿವೃದ್ಧಿಯ ಯೋಜನೆ ಸ್ಯಾಂಕಿಯ ಕೊಡುಗೆ. ಬೆಂಗಳೂರಿನ ಕೆರೆ ಸ್ಯಾಂಕಿ ಟ್ಯಾಂಕ್ ಮತ್ತು ಸುತ್ತ ಮುತ್ತಿನ ಕೆರೆಗಳಿಗೆ ಆಣೆಕಟ್ಟು ಹಾಕಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಸುಧಾರಿಸಿದ್ದು ಈತನೇ. ಇದಲ್ಲದೆ, ಬೆಂಗಳೂರಿನ ಮ್ಯೂಸಿಯಂ(೧೮೭೭) ಈಗಿನ ಹೈಕೋರ್ಟ್ (ಅಠಾರ ಕಚೇರಿ – ೧೮೬೪), ಸೈನ್ಟ್ ಆಂಡ್ರೂ ಚರ್ಚ್ (೧೮೬೪), ಮೇಯೋ ಕಟ್ಟಡ (೧೮೭೦) ಇತ್ಯಾದಿ ಕಟ್ಟಡಗಳನ್ನು ಕಟ್ಟಿದ. ನಂತರ ಮದ್ರಾಸ್ ಪ್ರಾಂತ್ಯದಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡು ಮದ್ರಾಸ್ ಅಭಿವೃದ್ಧಿಗೆ ನೇರವಾದ. ಮರೀನಾ ಬೀಚ್ ಮತ್ತು ಅನೇಕ ಉದ್ಯಾನವನಗಳ ನಿರ್ಮಾಣ ಮಾಡಿದ. ಮದ್ರಾಸ್ ವಿಶ್ವವಿದ್ಯಾನಿಲಯದ Fellow ಆಗಿ ಆಯ್ಕೆಯಾಗಿ ಮದ್ರಾಸ್ ವಿಧಾನ ಪರಿಷತ್ತಿನಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸಿದ. ೧೮೮೪ ನಲ್ಲಿ ನಿವೃತನಾದಮೇಲೆ ಐರ್ಲೆಂಡ್ ನಲ್ಲಿ Board of Works ನ ಅಧ್ಯಕ್ಷನಾಗಿ ಅನೇಕ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ. ನವಂಬರ್ ೧೯೦೮ ರಲ್ಲಿ ಲಂಡನ್ Grosvenor Place ನಲ್ಲಿ ನಿಧನವಾದ. ಇವನ ಸಮಾಧಿ Sussex ನಲ್ಲಿರುವ Hove ನಲ್ಲಿದೆ.

ಲಾವೆಲ್ ರಸ್ತೆಯ ಹೆಸರಿನ ಮೂಲ, ಐರ್ಲೆಂಡಿನ ಮೈಕಲ್ ಲಾವೆಲ್. ಸ್ಕಾಟಿಷ್ ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇರಿ ನ್ಯೂಜಿಲ್ಯಾಂಡ್ ನಲ್ಲಿ ಮಾವೋರಿ ಯುದ್ಧದಲ್ಲಿ ಭಾಗವಾಗಿ, ಅಲ್ಲಿನ ಗಣಿಗಳ ಅಧ್ಯನ ಮಾಡಿ ಭಾರತಕ್ಕೆ ಬಂದ. ಇಲ್ಲಿ ಚಿನ್ನದ ಗಣಿಗಳ ಬಗ್ಗೆ ಸಂಶೋಧನೆ ಮಾಡಿ , ಕೊನೆಗೆ ಕೋಲಾರ ಗಣಿಗಳನ್ನು ಅಗೆಯಲು ೧೮೭೩ ರಲ್ಲಿ ಬ್ರಿಟಿಷ್ ಸರ್ಕಾರದಿಂದ ಅನುಮತಿ ಪಡೆದು KGF (Kolar Gold Fields) ಸಂಸ್ಥೆಯನ್ನು ಸ್ಥಾಪಿಸಿದ. ಆದರೆ ಇದನ್ನು ನಡೆಸುವುದಕ್ಕೆ ಬೇಕಾದ ಬಂಡವಾಳ ಇವನಲ್ಲಿ ಇರಲಿಲ್ಲ. ಅನೇಕರ ಸಹಾಯದಿಂದ ಕೆಲವು ವರ್ಷ ನಡೆಸಿ ಕೊನೆಗೆ ತನ್ನ ಪಾಲನ್ನು ಮಾರಿ ಬೆಂಗಳೂರಿನಲ್ಲಿ ಒಂದು ಭವ್ಯವಾದ ಮನೆಯನ್ನು (Oorgaum House) ಕಟ್ಟಿದ. ಈ ರಸ್ತೆ ಈಗ ಲಾವೆಲ್ ರಸ್ತೆ. ಈ ಮನೆಯನ್ನು ಮೈಸೂರ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಪೀಟರ್ ಡಿಸೋಜಾ ಅನ್ನುವರಿಗೆ ಮಾರಿ ೧೯೧೮ ರಲ್ಲಿ ಇಂಗ್ಲೆಂಡಿಗೆ ಮರಳಿದ.

ರೆಸಿಡೆನ್ಸಿ ರಸ್ತೆ
ಈಗ ಇದು ಬಹಳ ದೊಡ್ಡ ರಸ್ತೆ. ಒಂದು ತುದಿಯಲ್ಲಿ ಪ್ರತಿಷ್ಠಿತ, ೧೯ನೇ ಶತಮಾನದಲ್ಲಿ ಶುರುವಾದ ಬೆಂಗಳೂರ್ ಕ್ಲಬ್, ಇನ್ನೊಂದು ತುದಿಯಲ್ಲಿ ಬೆಂಗಳೂರ್ ಮಾಲ್ . ಈ ರಸ್ತೆಯ ಹೆಸರು ಹೇಗೆ ಬಂತು ಅನ್ನುವುದನ್ನು ನೋಡೋಣ. ೧೭೯೯ ನ ಮೈಸೂರ್ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಪರಾಜಿತನಾದ ಮೇಲೆ, ಮೂರನೇ ಮುಮ್ಮಡಿ ಕೃಷ್ಣ ರಾಜೇಂದ್ರ ಒಡೆಯರ್ ಅವರನ್ನು ಬ್ರಿಟಿಷರು ಪಟ್ಟಕ್ಕೇರಿಸಿದರು. ಆದರೆ ರಾಜ್ಯದ ಆಡಳಿತ ಮಾತ್ರ ಒಬ್ಬ ಬ್ರಿಟಿಷ್ ರೆಸಿಡೆಂಟ್, ಸರ್ ಬ್ಯಾರಿ ಕ್ಲೋಸ್ ಎಂಬಾತನಲ್ಲಿತ್ತು. ತದನಂತರ ಟಿಪ್ಪುವಿನ ದಿವಾನ್ ಪೂರ್ಣಯ್ಯ ಪುನಃ ದಿವಾನರಾದರು. ಈ ರೆಸಿಡೆಂಟ್ ೧೮೦೪ ರಲ್ಲಿ ಬೆಂಗಳೂರಿಗೆ ಬಂದು ಈಗಿನ SBI ಇರುವ ಜಾಗದಲ್ಲಿ ವಾಸವಾಗಿದ್ದ. ೧೮೩೧ನಲ್ಲಿ ರೆಸಿಡೆಂಟ್ ವಾಸಕ್ಕೆ ಬೇರೆ ಮನೆ ಕಟ್ಟಿದರು. ಆಗ ರೆಸಿಡೆನ್ಸಿ ರಸ್ತೆ ಆಯಿತು. ಕೆಲವು ವರ್ಷದ ನಂತರ ಈಗಿನ ರಾಜ್ ಭವನ್ ಕಟ್ಟಡ ಕಟ್ಟಿ ಲಾರ್ಡ್ ಕಬ್ಬನ್ ಮುಂತಾದವರು ಇಲ್ಲಿ ವಾಸವಾಗಿದ್ದರು. ಈಗ ಇದು ರಾಜ್ಯಪಾಲರ ವಸತಿ ಗೃಹ.

ಕಬ್ಬನ್ ಪಾರ್ಕ್
೧೮೭೦ ರಲ್ಲಿ, ಈಗಿನ ಕಬ್ಬನ್ ಪಾರ್ಕ್ ಸರ್ ರಿಚರ್ಡ್ ಸ್ಯಾಂಕಿಯ ನೇತೃತ್ವದಲ್ಲಿ ಪ್ರಾರಂಭವಾಯಿತು. ಇದನ್ನು ಪೂರೈಸಿದ್ದು ಮೈಸೂರು ಪ್ರಾಂತ್ಯದ ಮುಖ್ಯ ಕಮಿಷನರ್ ಸರ್ ಜಾನ್ ಮೀಡ್. ಆಗ ಇದು ಮೀಡ್ಸ್ ಪಾರ್ಕ್ ಆಗಿತ್ತು. ನಂತರ ೧೮೭೩ರಲ್ಲಿ ಈತ ಬರೋಡಕ್ಕೆ ಹೊಸ ಹುದ್ದೆಗೆ ಹೋದಾಗ ಈ ಉದ್ಯಾನವನಕ್ಕೆ ಬಹಳ ವರ್ಷ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಸರ್ ಮಾರ್ಕ್ ಕಬ್ಬನ್ ನ ಹೆಸರು ಇಡಲಾಯಿತು. ಇಲ್ಲೇ ಅಠಾರ ಕಚೇರಿ, ಪುಸ್ತಕ ಭಂಡಾರ, ಸೆಂಚುರಿ ಕ್ಲಬ್ ಮುಂತಾದ ಕಟ್ಟಡಗಳು ಇರುವುದು. ೧೯೨೭ ನಲ್ಲಿ ಹೆಸರು ಬದಲಾವಣೆ ಆಗಿ ಚಾಮರಾಜ ಒಡೆಯರ್ ಪಾರ್ಕ್ ಆಗಿತ್ತು . ಆದರೆ ಈ ಹೆಸರು ಉಳಿಯಲಿಲ್ಲ.

ಕೊನೆಯದಾಗಿ, ಬೆಂಗಳೂರಿನ ಫ್ರೇಸರ್ ಟೌನ್ ಬಗ್ಗೆ ಎರಡು ಮಾತು. ಆಗಸ್ಟ್ ೧೯೧೦ ರಲ್ಲಿ ಈ ಪ್ರದೇಶದ ಶಂಕು ಸ್ಥಾಪನೆ ನಡೆಯುತು.  ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಬಹಳ ಚಿಕ್ಕ ವಯಸ್ಸಿನಲ್ಲಿ ಪಟ್ಟಕ್ಕೆ ಬಂದಿದ್ದರು. ಅವರ ವಿದ್ಯಾಭ್ಯಾಸ ಮೈಸೂರು ಅರಮನೆಯಲ್ಲಿ ಬ್ರಿಟಿಷ್ ICS ಅಧಿಕಾರಿ ಸರ್ ಸ್ಟೂವರ್ಟ್ ಫ್ರೇಸರ್ (೧೮೬೪-೧೯೬೩) ಅವರ ನೇತೃತ್ವದಲ್ಲಿ ಮುಂದುವರೆಯಿತು. ಇವರ ಹೆಸರನ್ನು ಮಹಾರಾಜರ ಸಲಹೆಯಂತೆ ಇಟ್ಟು ಫ್ರೇಸರ್ ಟೌನ್ ಆಯಿತು. ಈಗ ಇದನ್ನು ಪುಲಕೇಶಿನಗರ ಎಂದು BBMP ನಾಮಕರಣ ಮಾಡಿದೆ ಆದರೆ ಜನಗಳಿಗೆ ಇದು ಈಗಲೂ Fraser  Town! 

ಬೆಂಗಳೂರಿನಲ್ಲಿ ಇಂಗ್ಲಿಷ್ ಹೆಸರಿನ ರಸ್ತೆಗಳು ಅನೇಕ. Infantry Road ,Brigade Road, Cubbon Road, Residency Road, St. Marks Road ಇತ್ಯಾದಿ. ಇನ್ನೂ ಎಷ್ಟು ವರ್ಷಗಳು ಈ ಹೆಸರುಗಳು ಉಳಿಯುತ್ತವೆ ಎನ್ನುವುದು ಬಹುಶಃ ಮುಂದಿನ ಪೀಳಿಗೆಯ ಇತಿಹಾಸದ ಅರಿವಿಲ್ಲದ ರಾಜಕಾರಣಿಗಳು ನಿರ್ಧರಿಸುತ್ತಾರೆ .

- ರಾಮಮೂರ್ತಿ.
***************************************