”ಬ್ರಿಟಿಷ್ ಕನ್ನಡಿಗ” ಬೆಂಜಮಿನ್ ಲೂಯಿಸ್ ರೈಸ್ – ಬೇಸಿಂಗ್ ಸ್ಟೋಕ್ ರಾಮಮೂರ್ತಿ ಬರೆದ ಲೇಖನ

ನೀವು ಬೆಂಜಮಿನ್  ರೈಸ್ ನ ಬಗ್ಗೆ ಹೆಚ್ಚಿಗೆ ಕೇಳದಿದ್ದರೆ ಏನೂ ಆಶ್ಚರ್ಯ ಇಲ್ಲವೇನೋ. ಆದರೆ ಈತ ನಮ್ಮ ಹಳೆಯ ಮೈಸೂರ್ ದೇಶದಲ್ಲಿ ಸುಮಾರು ೧೨೦ ವರ್ಷಗಳ ಹಿಂದೆ ಮೊದಲನೆಯ ಬಾರಿಗೆ ಪ್ರಾಥಮಿಕ ಶಿಕ್ಷಣವನ್ನು (Primary Education)  ಸ್ಟಾಪಿಸಿದವರು. ಸಾವಿರಾರು ಹಳೆಯ ಕನ್ನಡ ಮತ್ತು ಸಂಸ್ಕೃತ ಗ್ರಂಥಗಳು ಮತ್ತು ಶಾಸನಗಳನ್ನು ಸಂಗ್ರಹಿಸಿ ಮೊದಲ ಬಾರಿಗೆ ಜನಗಳಿಗೆ ಪರಿಚಯ ಮಾಡಿದವರು.BL Rice

೧೭/೦೭/೧೮೩೭ ನಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಬೆಂಜಮಿನ್ ಹೋಲ್ಟ್ ರೈಸ್ ಅವರು ೧೮೦೦ ನಲ್ಲಿ ಇಂಗ್ಲೆಂಡ್ ನಿಂದ ಬಂದವರು. ಇವರು ಕನ್ನಡದಲ್ಲಿ ಪಾಂಡಿತ್ಯ ಪಡೆದು ನಮ್ಮ ಚರಿತ್ರೆ, ಭೂಗೋಲ ಮತ್ತು ಗಣಿತದ ಪುಸ್ತಕಗಳನ್ನು ಬರೆದರು. ಕನ್ನಡದಲ್ಲಿ ಮೊದಲ ಬೈಬಲ್ ಇವರದ್ದೆ. ಬೆಂಗಳೂರಿನಲ್ಲಿ ಈಗಲೂ Rice Memorial Church ಇದೆ. ಬೆಂಜಮಿನ್ ಲೂಯಿಸ್  ರೈಸ್ ಅವರ ಪ್ರಾಥಮಿಕ ವಿಧ್ಯಾಬ್ಯಾಸ ಬೆಂಗಳೂರಿನಲ್ಲಿ , ೧೮೬೦ ನಲ್ಲಿ ಕೇಂಬ್ರಿಜ್ ನಲ್ಲಿ  ಬಿ ಎ ಪದವಿ ಪಡೆದು ಮೈಸೂರಿಗೆ ಹಿಂತಿರಿಗಿ ಬೆಂಗಳೂರು ಸೆಂಟ್ರಲ್  ಹೈಸ್ಕೂಲ (ಈಗಿನ ಸೆಂಟ್ರಲ್ ಕಾಲೇಜ್ )ನ ಪ್ರಿನ್ಸಿಪಾಲ್ ಆಗಿ ಸೇರಿದರು.

ಈತ ಕನ್ನಡ, ಹಿಂದಿ, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ ಪಾಂಡಿತ್ಯ ಪದೆದವರು. ೫ ವರ್ಷದ ನಂತರ Inspector of Schools ಆದರು. ಈ ಹುದ್ದೆಯಲ್ಲಿ ಮೈಸೂರು ಪ್ರಾಂತದ ಎಲ್ಲ ಭಾಗಗಳಿಗೂ ಹೋದಾಗ ನೂರಾರು ಶಿಲಾ ಶಾಸನ ಗಳನ್ನು ಸ್ಥಳೀಯ ಜನರ ಸಹಾಯ ದಿಂದ ಹಳೆ ಕನ್ನಡದಿಂದ ಅಧುನಿಕ ಕನ್ನಡಕ್ಕೆ ಭಾಷಾಂತರಿಸಿದರು. ಇದಲ್ಲದೆ  ಅನೇಕ ತಾಳೆಗೆರೆ ಮತ್ತು ತಾಮ್ರ ಶಾಸನಗಳನ್ನು ಸಹ ಸಂಗ್ರಹಿಸಿದರು. Chitradurga_ಇವೆಲ್ಲವನ್ನು Epigraphia Carnatica ದಲ್ಲಿ ೧೨ ಸಂಪುಟಗಳಲ್ಲಿ ಪ್ರಕಟಿಸಿದರು. ಅವರ ಸಂಗ್ರಹದಲ್ಲಿ ಸುಮಾರು ೯೦೦೦  ಶಾಸನಗಳ ಪ್ರತಿ ಇವೆ. ಇದರಿಂದ ಮೈಸೂರು ದೇಶದ ಎರಡು ಸಾವಿರ ವರ್ಷ ದ ಸಾಮಾಜಿಕ  ಜೀವನದ ಚರಿತ್ರೆ ಪರಿಚಯ ಉಂಟಾಯಿತು.

೧೮೭೩ ರಲ್ಲಿ ಡಿ ಪಿ ಐ (Director of  Public Instruction) ಆಗಿ, ಪ್ರಾಥಮಿಕ ಶಿಕ್ಷಣವನ್ನು( Primary Education)  ಸ್ಟಾಪಿಸಿದರು.ಪ್ರತಿ ಹೋಬಳಿ ಯಲ್ಲೂ ಒಂದು ಶಾಲೆ ಸ್ಥಾಪಿಸಿದವರು ಇವರೆ. ಆದರೆ ಇವರ ಗುರಿ ಇದ್ದುದು ಪ್ರತಿ  ಹಳ್ಳಿಯಲ್ಲಿ  ಸಹ ಶಾಲೆ ಇರಬೇಕು ಅಂತ.  ಆದರೆ ಸರಿಯಾದ ಉಪಾಧ್ಯಾಯರ ಕೊರತೆ ಇದ್ದದ್ದರಿಂದ ಈ ಯೋಜನೆ ಜಾರಿಗೆ ಬರಲು ಸ್ವಲ್ಪ ಕಷ್ಟ ಆಯಿತು. ಆಗಿನ  ಮಹಾರಾಜರ ಆಡಳಿತದಲ್ಲಿ ಇವರನ್ನು ಮೈಸೂರಿನ ಜನಗಣತಿ ಮಾಡಲು ನೇಮಿಸಲಾಯಿತು. ಮುಂದೆ, ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಇಡೀ  ಭಾರತದ ಶಿಕ್ಷಣ ನೀತಿಗೆ ( Education Policy) ನಾಂದಿ ಹಾಕಿದರು.

೧೮೮೪ ನಲ್ಲಿ   Director of Archaeology  ಆಗಿ ಕೆಲಸ ಶುರು ಮಾಡಿದರು. ಅಶೋಕನ ಕಾಲದ ಹಲವಾರು ಶಾಸನಗಳು, ರೋಂ ಸಾಮ್ರಾಜ್ಯದ ನಾಣ್ಯ ಮುಂತಾದವು ಸಿಕ್ಕಿದ ಮೇಲೆ ನಮ್ಮ ದೇಶದ ಚರಿತ್ರೆ ಅನೇಕರಿಗೆ ಪರಿಚಯ ವಾಯಿತು. ನೇಪಾಳದ ರಾಜವಂಶವನ್ನು ಪ್ರಾರಂಬಿಸಿದ ನನ್ಯದೇವ, ಕರ್ನಾಟಕದ ಗಂಗ ವಂಶದವನು ಅಂತ ಸಾಧಿಸಿದ್ದು ರೈಸ್ ಅವರ ಹೆಗ್ಗಳಿಕೆ.

೧೮೭೬ ಮತ್ತು ೧೮೯೭ ರಲ್ಲಿ Mysore Gazetteer ಇವರ ಇನ್ನೊಂದು ಮಹತ್ಸಾಧನೆ. ಇದರಲ್ಲಿ ಇವರು ಬರೆದ ಮೈಸೂರು ಮತ್ತು ಕೂರ್ಗ್ ಪ್ರದೇಶದ ಪಟ್ಟಣ ಮತ್ತು ಕೆಲವು ಹಳ್ಳಿಗಳ ಚರಿತ್ರೆ  ಸಿಗುತ್ತದೆ.Mysore and coorg_

೧೯೦೬  ಇವರು ನಿವೃತ್ತಿ ಆಗುವ ಮುಂಚೆ Bibliotheca Carnatica, a collection of all major literary Texts in Kannada ಎಂಬ ಲೇಖನ ಸಂಗ್ರಹವನ್ನು ೬ ಸಂಪುಟದಲ್ಲಿ ಪ್ರಕಟಿಸದರು ಸುಮಾರು. ಅದರಲ್ಲಿ ೩೦೦ ಕನ್ನಡ ಸಾಹಿತಿಗಳು ಮತ್ತು ಕವಿಗಳ ಬಗ್ಗೆ ವಿವರವಾಗಿ ಪ್ರಸ್ತಾಪನೆ ಮಾಡಿದ್ದಾರೆ. ರೈಸ್ ಅವರಿಗೆ ನಮ್ಮ ಭಾಷೆ, ಚರಿತ್ರೆ ಮತ್ತು ಧಾರ್ಮಿಕ ಸಹಿಷ್ಣುತೆ ಮೇಲೆ ಬಹಳ ಹೆಮ್ಮೆ ಇತ್ತು.

೧೯೦೬ ರಲ್ಲಿ  ತಮ್ಮ ೬೯ ನೆಯ ವಯಸ್ಸಿಗೆ ಹುಟ್ಟಿದ ಬೆಂಗಳೂರು ಬಿಟ್ಟು ಇವರು ಕುಟುಂಬ ಸಮೇತ ಇಂಗ್ಲೆಂಡ್ ಗೆ ತೆರಳಿದರು. ಅಲ್ಲೂ  ಕನ್ನಡ ಭಾಷೆ ಮರೆಯಲ್ಲಿಲ್ಲ. ೧೯೨೪ ರಲ್ಲಿ ಲಂಡನ್ ನಲ್ಲಿ ಒಂದು ವಸ್ತುಪ್ರದರ್ಶನ (exhibition) ದಲ್ಲಿ ಕೆಲ ಕನ್ನಡಿಗರನ್ನು ಭೇಟಿಯಾದರು. ಅವರಲ್ಲಿ ಒಬ್ಬಾತ ಇಂಗ್ಲಿಷ್ ನಲ್ಲಿ ಮಾತನಾಡಲು ರೈಸ್ ಅವರು “ಅಯ್ಯಾ ಕನ್ನಡದಲ್ಲಿ ಮಾತನಾಡೋಣ ,  ಮುದ್ದಿನ ಕನ್ನಡ ನನ್ನ ಕಿವಿಗೆ ಬಿದ್ದು ಬಹಳ ದಿನಗಳಾದವು” ಎಂಬ ಉದ್ಗಾರ ತೆಗೆದರಂತೆ!

ತಮ್ಮ ಸ್ನೇಹಿತರಾಗಿದ್ದ ಶ್ರೀ ನರಸಿಂಹಾಚಾರರಿಗೆ ೧೯೨೭ ಏಪ್ರಿಲ್ ನಲ್ಲಿ ಬರೆದ ಸಂದೇಶದಲ್ಲಿ ಹೀಗೆ ಬರೆದಿದ್ದಾರೆ: “remember me to all my love to Mysore is unending”

೧೦-೦೭-೧೯೨೭ ರಲ್ಲಿ ರೈಸ್ ಅವರು ನಿಧನರಾದರು. ಇವರು೪೩ ವರ್ಷಗಳ ಕಾಲ ಕನ್ನಡಕ್ಕೆ ಮಾಡಿದ ಸೇವೆ ಎಂದಿಗೂ ಮರೆಯುವ ಹಾಗಿಲ್ಲ.

ಆದರೆ ಕರ್ನಾಟಕದಲ್ಲಿ ಇವರನ್ನು ಈಗ  ನೆನಸುವವರು ಎಷ್ಟು ಜನ?             

 

ತುಳಿದರೂ ಅಳಿಯದ ಆಕ್ಸ್ ಫರ್ಡಿನ ಕರಾಳ ಇತಿಹಾಸ – ಶ್ರೀವತ್ಸ ದೇಸಾಯಿ ಬರೆದ ಲೇಖನ

Oxford sightseeing
ಟೂರಿಸ್ಟ್ ಆಕ್ಸ್ ಫರ್ಡ್

ಇದೇ ಜುಲೈ ತಿಂಗಳಲ್ಲಿ ನಾನು ಆ ನಗರಕ್ಕೆ ಭೇಟಿಯಿತ್ತಾಗ ವಿದ್ಯಾಕೇಂದ್ರ, ಆಕರ್ಷಕ ಟೂರಿಸ್ಟ್ ಮ್ಯಾಗ್ನೆಟ್ ಎಂದು ಸುಪ್ರಸಿದ್ಧವಾದ ’ಆಕ್ಸಫರ್ಡ್ ” ಬ್ರಿಟಿಷ್ ಸಮ್ಮರ್’ (ಅಲ್ಲಿಯವರಿಗೆ Indian Summer!) ನಲ್ಲಿ ಕಂಗೊಳಿಸುತ್ತಿತ್ತು. ಊರ ಮಧ್ಯದಲ್ಲಿ ಒತ್ತಾಗಿ ಒಂದಕ್ಕೊಂದು ಹತ್ತಿಕೊಂಡಂತಿರುವ, ಹಾಗೂ ಪ್ರಸಿದ್ಧಿಗೆ ಪೈಪೋಟಿ ನಡೆಸುತ್ತಿರುವಂತೆ ಕಾಣುವ ಕಾಲೇಜುಗಳು, ಅವುಗಳ ಸುತ್ತ ನೆರೆದ ಇಂದಿನ, ಮತ್ತು ಮುಂದೆ ಅಲ್ಲಿ ಕಲಿಯಲು ಕನಸು ಕಾಣುತ್ತಿರುವ ವಿವಿಧ ದೇಶಗಳ ಯುವಜನರು, ಪ್ರೇಕ್ಷಣೀಯ ಸ್ಥಳಗಳನ್ನರಸಿ ಹೋಗುವ ಯಾತ್ರಿಕರ ಗುಂಪುಗಳು -ಇವೆಲ್ಲವುಗಳಿಂದ ಲವಲವಿಕೆಯ ವಾತಾವರಣವಿತ್ತು. ಕಾಲೇಜುಗಳ ಹೊರಾಂಗಣಕ್ಕೆ ಪ್ರವಾಸಿಗರಿಗೆ ಮುಕ್ತ ಪ್ರವೇಶವಿತ್ತು. ಗೇಟು ದಾಟಿದ ಕೂಡಲೆ ಒಂದು ಪೋರ್ಟರ್ಸ್ ಲಾಜ್, ಅದರ ಕಮಾನಿನಾಚೆ ಅಚ್ಚುಕಟ್ಟಾದ ಚೌಕಾದ ಹಸಿರು ಹುಲ್ಲಿನ ಲಾನ್; ಅದರಾಚೆ ಉದ್ದನೆಯ ಮೇಲ್ಛಾವಣಿಯಿರುವ ಕಾರಿಡಾರುಗಳು (cloisters), ಅವುಗಳ ಹಿಂದೆ ಪಾಠದ ಕೋಣೆಗಳು; ಹೆಚ್ಚು ಕಡಿಮೆ ಪ್ರತಿಯೊಂದು ಕಾಲೇಜಿನಲ್ಲೂ ಅದೇ ತರಹದ ದೃಶ್ಯ. ಅದನ್ನು ನೋಡಿದರೇನೇ ಒಂದು ತರದ ರೋಮಾಂಚನ!

ಏಳೆಂಟು ಶತಮಾನಗಳಿಂದ ಎಂತೆಂಥ ದಾರ್ಶನಿಕರು, ಲೇಖಕರು, ಚಿಂತಕರು, ರಾಜಕಾರಣಿಗಳು, ವಿಜ್ಞಾನಿಗಳು ಇಲ್ಲಿ ವ್ಯಾಸಂಗ ಮಾಡಿ ಹೋಗಿರಬೇಡ? ಜಗತ್ತಿನ ವಿವಿಧ ದೇಶಗಳ ಭವಿತವ್ಯವನ್ನೇ ಕಟ್ಟಿದ ಪ್ರಧಾನಿಗಳು, ಯೋಧರು ಇವರೆಲ್ಲರನ್ನು ನೆನಸಬಹುದು. ಆ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಇತ್ತೀಚಿನ ಭಾರತೀಯರಲ್ಲಿ ಇಂದಿರಾ ಗಾಂಧಿ (ಸೋಮರ್ವಿಲ್ ಕಾಲೇಜು), ಮನಮೋಹನ ಸಿಂಗ (ನಫ್ಫೀಲ್ಡ್ ಕಾಲೇಜು) ಅಂಧ ಸಾಹಿತಿ, ಬರಹಗಾರ, ಪತ್ರಿಕೋದ್ಯಮಿಯಾದ ವೇದ ಮೆಹತಾ (ಬೇಲಿಯೋಲ್ ಕಾಲೇಜು) ಅವರು ಆಕ್ಸಫರ್ಡಿನ ಬೇರೆ ಬೇರೆ ಕಾಲೇಜುಗಳಲ್ಲಿ ಓದಿ ಮುಂದೆ ಪ್ರಸಿದ್ಧರಾದವರುಇಂದಿರಾ ಅವರಿಗೆ ಕಾರಣಾಂತರಗಳಿಂದ ಡಿಗ್ರೀ ಮುಗಿಸಲಾಗಲಿಲ್ಲವೆಂದು ಪ್ರತೀತಿ. ಇನ್ನು, ಕನ್ನಡಿಗರೇ ಆದ ಗಿರೀಶ ಕಾರ್ನಾಡರು (ಮಾಡಲೀನ್ ಕಾಲೇಜು) ಆಕ್ಸ್ಫರ್ಡಿನಲ್ಲಿ ಓದುವಾಗ ಡಿಬೇಟಿಂಗ್ ಯೂನಿಯನ್ನಿನ ಪ್ರಥಮ ಭಾರತೀಯನೆಂದು ಅಧ್ಯಕ್ಷರಾಗಿ ಚುನಾಯಿತರಾದುದು ಹೆಗ್ಗಳಿಕೆಯ ವಿಷಯ. ನಾನು ಶಾಲೆಯಲ್ಲಿದ್ದಾಗ ಕನ್ನಡಿಗನಿಗೆ ಸಂದ ಆ ಗೌರವದ ಸುದ್ದಿಯನ್ನು ಕೇಳಿ ನಮಗೆಲ್ಲ ಹೆಮ್ಮೆ. ಉಳಿದ ವಿದ್ಯಾರ್ಥಿಗಳಂತೆ ಇಡೀ ದಿನ ಊರೆಲ್ಲ ತಿರುಗಿ ರಾತ್ರಿ ಮರಳುವಾಗ ಕಾಲೇಜಿನ ಗೇಟು ಹಾಕಿತ್ತೆಂದು ಗೋಡೆ ಹತ್ತಿ ಒಳಗೆ ಬಂದೆನೆಂದು ವೇದ ಮೆಹತಾ ಬರೆದಿದ್ದಾನೆ, ಅದು ಹೇಗೆ? ಅಂಧನಾದರೂ ಆತನಿಗೆ ಡೋಮ್ ಮೋರಾಯಿಸ್ ನಂಥ ಮಿತ್ರರಿದ್ದರಲ್ಲವೆ? ಅವರ ಸಹಾಯ ಅವನಿಗೆ ಇತ್ತಂತೆ.

ಪಾದದಡಿಯಲ್ಲೇ ಇತಿಹಾಸ

ಬ್ರಾಡ್ ಸ್ಟ್ರೀಟ್ ಮಧ್ಯದಲ್ಲಿ ಗುರುತು ಚಿತ್ರ : ಲೇಖಕರದು
ಬ್ರಾಡ್ ಸ್ಟ್ರೀಟ್ ಮಧ್ಯದಲ್ಲಿ ಗುರುತು                          ಚಿತ್ರ : ಲೇಖಕರದು

ಕಾಲ್ನಡಿಗೆಯಲ್ಲೇ ಈ ಊರನ್ನು ಸುತ್ತುವ ಜನರಲ್ಲಿ ಅದೆಷ್ಟು ಜನರಿಗೆ ಊರ ಮಧ್ಯದಲ್ಲಿಯ ಬ್ರಾಡ್ ಸ್ಟ್ರೀಟ್ ನ ಒಂದು ತುದಿಯಲ್ಲಿ ರಸ್ತೆಯ ಮಧ್ಯದಲ್ಲೇ ದುಂಡು ಹಾಸುಗಲ್ಲುಗಳಿಂದ ರಚಿಸಿದ ಕತ್ತರಿ, ಯಾ ಶಿಲುಬೆಯ ಗುರುತು ಕಂಡೀತೋ? ಅದರ ಬದಿಯಲ್ಲಿ, ಸೈಕಲ್ಲ ಮೇಲೆ ಹಾದು ಹೋಗಿ, ಅಥವಾ ನಡೆಯುವಾಗ ಗೊತ್ತಾಗದೆ ಅದನ್ನು ಕಾಲಲ್ಲಿ ತುಳಿದೇ ಹೋಗುವ ಜನರನ್ನು ನೋಡಿದ್ದೇನೆ. ಅದು 1555 ಮತ್ತು 1556ರಲ್ಲಿ ಧರ್ಮಬಲಿಗೆ ತುತ್ತಾದ ಮೂವರು ಕ್ರೈಸ್ತ ಧರ್ಮ ಗುರುಗಳು ಜೀವ ತೆತ್ತ ಸ್ಥಳವನ್ನು ಸೂಚಿಸುತ್ತದೆ. 1555 ರಲ್ಲಿ ಹುತಾತ್ಮರಾದ ನಿಕೋಲಸ್ ರಿಡ್ಲಿ, ಮತ್ತು ಹ್ಯೂ ಲಾಟಿಮರ್ ಕ್ರೈಸ್ತ ಬಿಷಪ್ ಆಗಿದ್ದರೆ, 1556ರಲ್ಲಿ ಅಗ್ನಿಗಾಹುತಿಯಾದವನು ಆರ್ಚ್ ಬಿಷಪ್ ಥಾಮಸ್ ಕ್ರಾನ್ಮರ್. ಈ ಮೂವರ ಹೆಸರುಗಳನ್ನು ರಸ್ತೆಗೆ ತಾಗಿದ ಬೇಲಿಯೋಲ್ ಕಾಲೇಜಿನ ಗೋಡೆಯ ಮೇಲಿನ ಸ್ಮಾರಕ ಫಲಕದಲ್ಲಿ ಕೆತ್ತಿದ್ದಾರೆ ಮತ್ತು ಆ ದಾರುಣ ದೃಶ್ಯವನ್ನು ನೆನಪಿಸಿ ಕೊಡುತ್ತದೆ. ಆಗಿನ ಐತಿಹಾಸಿಕ ಘಟನೆಗಳಗೆ ಸಂಬಂಧಿಸಿದ ಪಳೆಯುಳಿಕೆಗಳನ್ನು ಪಕ್ಕದಲ್ಲೇ ಇರುವ ಸೇಂಟ್ ಮೈಕಲ್ ಚರ್ಚಿನಲ್ಲಿಯ ವಸ್ತು-ಸಂಗ್ರಹಾಲಯದಲ್ಲಿಟ್ಟಿದ್ದಾರೆ. ಅವುಗಳನ್ನು ನೋಡಿದವರಿಗೆ ಮೈನವಿರೇಳುವುದರಲ್ಲಿ ಸಂದೇಹವಿಲ್ಲ. ಆದರೆ ಪಕ್ಕದಲ್ಲೇ ಸೇಂಟ್ ಜೈಲ್ಸದಲ್ಲಿ, ಆ ಮೂವರ ಸ್ಮಾರಕ ಶೃಂಗದ ಮೆಟ್ಟಲುಗಳ ಮೇಲೆ ಕುಳಿತು ಸಾಂಡ್ವಿಚ್, ಮತ್ತು ಐಸ್ಕ್ರೀಮ್ ತಿನ್ನುವ ಟೂರಿಸ್ಟ್ ಜನರಿಗೆ, ಯುವಕರಿಗೆ ಆ ನರಬಲಿಯ ಅರಿವು ಇದ್ದಂತೆ ಕಾಣುವದಿಲ್ಲ!

ಐತಿಹಾಸಿಕ ಹಿನ್ನೆಲೆ:

_Henry_VIII_of_England_
Henry VIII (CC)

ಸ್ಥೂಲಕಾಯದ, ಆರು ಜನರನ್ನು ರಾಣಿಯರ ಪತಿದೇವನೆಂದು ಕುಪ್ರಸಿದ್ಧನಾದ ಇಂಗ್ಲಂಡಿನ ಎಂಟನೆಯ ಹೆನ್ರಿ ಮಹಾರಾಜನಿಗೆ ಮೊದಲ ಹೆಂಡತಿ ಕ್ಯಾಥರಿನ್ ರಾಣಿಯನ್ನು ತ್ಯಜಿಸಿ, ಆನ್ ಬೊಲಿನ್ನನ್ನು ಮದುವೆಯಾಗಿ ರಾಣಿಯನ್ನಾಗಿ ಮಾಡಬೇಕಾಗಿತ್ತು. ಆಗ ಭಿನ್ನಮತದ ರೋಮನ್ ಕಾಥಲಿಕ್ ಪೋಪನೊಂದಿಗೆ ಈ ವಿಷಯದಲ್ಲಿ ವೈಷಮ್ಯವುಂಟಾಗಿ ಕ್ಯಾಥಲಿಕ್ ಚರ್ಚಿನಿಂದ ಹೊರಬಿದ್ದದ್ದಷ್ಟೇ ಅಲ್ಲ, ಆಂಗ್ಲ ಚರ್ಚನ್ನು ಸಹ ರೋಮಿನ ಆಧಿಪತ್ಯದಿಂದ ಬಿಡಿಸಿದ. ಆಗಿಂದ ಪ್ರಾರಂಭವಾಗಿತ್ತು ಇಂಗ್ಲಿಷ್ ಪ್ರೋಟೆಸ್ಟಂಟ್ ಧರ್ಮಸುಧಾರಣೆ (Reformation) ಯುಗ. ಈ ಧರ್ಮ-ಸುಧಾರಣೆಯ ಮುಂಚೂಣಿಯಲ್ಲಿದ್ದವರೇ ಆ ಮೂರು ಜನ ಹುತಾತ್ಮರು. ಹೆನ್ರಿಗೆ ಬೇಕಾದವರು. ಆದರೆ ಹೆನ್ರಿಯ ನಂತರ ಪಟ್ಟಕ್ಕೇರಿದ ಇಂಗ್ಲಡಿನ ರಾಣಿ ”ರಕ್ತಸಿಕ್ತ’  ಮೇರಿ I (”Bloody Mary”) ಕ್ಯಾಥಲಿಕ್ ಧರ್ಮದ

Mary I (CC)
Mary I (CC)

ಅನುಯಾಯಿಯಾಗಿದ್ದಳು. ತನ್ನ ಧರ್ಮದಲ್ಲಿ ನಂಬಿಕೆಯಿಲ್ಲದವರನ್ನು ಹಿಂದು ಮುಂದು ನೋಡದೆ ಗಲ್ಲಿಗೇರಿಸುವದರಲ್ಲಿ ಹಿಂಜರಿಯದವಳು, ಮತ್ತು (ಬ್ಲಡಿ ಮೇರಿ) ಎಂಬ ಖ್ಯಾತಿ ಪಡೆದಿದ್ದಳು. ನಿಜವಾಗಿಯೂ ಒಂದು ವರ್ಷದಲ್ಲಿ, ಅವಳ ಕ್ರೂರ ತಂದೆಗಿಂತ ಕಡಿಮೆ ಜನರನ್ನೇ ಅವಳು ಕೊಲ್ಲಿಸುತ್ತಿದ್ದಳು! ಈ ಮೂವರು ಅವಳ ವಾಮದೃಷ್ಟಿಗೆ ಬಿದ್ದುದು ಅವರ ದುರ್ದೈವ. ಅವರನ್ನು ಬಂಧಿಸಿ ಲಂಡನ್ ಟಾವರಿನಲ್ಲಿಟ್ಟು, ನಂತರ ಆಕ್ಸ್ ಫರ್ಡಿನಲ್ಲಿ ವಿಚಾರಣೆಗೆ ಗುರಿಮಾಡಿ, ಪಾಷಂಡಿಗಳೆಂದು ಸಾಬೀತು ಮಾಡಿ ಸೆಪ್ಟೆಂಬರ್ 1555ರಲ್ಲಿ ಮರಣ ಶಿಕ್ಷೆ ಕೊಡಲಾಯಿತು.

ಧರ್ಮಬಲಿ

ಮೂವರೂ ಹುತಾತ್ಮರಿಗೆ ಬೈಬಲ್ಲಿನ ನಿಜವಾದ ಬೋಧನೆಯಲ್ಲಿ ಅಚಲ ಶ್ರದ್ಧೆಯಿತ್ತು. ಅವರನ್ನು ಬಂಧಿಸಿಟ್ಟ ಬೊಕಾರ್ಡೊ ಕಾರಾಗ್ರಹ, ಊರಿನ ಉತ್ತರದ ಸೆಂಟ್ ಮೈಕೆಲ್ ಇಗರ್ಜಿಗೆ ಹೊಂದಿದ್ದ ನಾರ್ಥ್ ಗೇಟಿನಲ್ಲಿತ್ತು. ಈಗ ಅಲ್ಲಿಯ ಮ್ಯೂಜಿಯಂನಲ್ಲಿ, ಅಂದು ಅವರು ಹೊರಬಿದ್ದ ಬಾಗಿಲನ್ನು ಇಂದಿಗೂ ನೋಡಬಹುದು. ಕ್ರಾನ್ಮರ್ ಸುಧಾರಿಸಿ, ಸಂಪಾದಿಸಿದ ಕ್ರಿಸ್ತ ಮತದ ಚರ್ಚುಗಳಲ್ಲಿ ಇಂದಿಗೂ ಉಪಯೋಗಿಸುವ Book of Book_of_common_prayer_1549Common Prayer ಸ್ತೋತ್ರಪುಸ್ತಕ, ಗಂಟೆ, ಅವರು ಜೇಲಿನ ಕಿಡಕಿಗಳ ಮೂಲಕ, ಹಗ್ಗದಿಂದ ಹೊರಗೆ ಇಳಿ ಬಿಟ್ಟು ಜನರಿಂದ ಭಿಕ್ಷೆ ಬೇಡುತ್ತಿದ್ದ ಮರದ ಪೆಟ್ಟಿಗೆ, ಮತ್ತು ಶೀಲಾ-ನ-ಗಿಗ್ (Sheela-na-gig) ಎಂಬ ಬೀಭತ್ಸ ಕಲ್ಲಿನ ಕೆತ್ತನೆ, ಇವೆಲ್ಲ ಅಲ್ಲಿಯೇ ಇವೆ. ಊರಿನ ಉತ್ತರದ ಗೇಟಿನ ಹೊರಗಿನ ಕಂದರದಲ್ಲಿ ಸುಡುಗಂಬದ ವ್ಯವಸ್ಥೆ. 1555ನೇ ಇಸವಿಯ ಅಕ್ಟೋಬರ್ 16 ರಂದು ಜೀವಂತ ದಹನ. ಜನಸಮುದ್ದಯ ನೋಡುತ್ತಿದೆ. ಅಷ್ಟೇ ಅಲ್ಲ, ಇನ್ನೆರಡು ತಿಂಗಳಲ್ಲಿ ಅದೇ ಗತಿಯನ್ನು ಅನುಭವಿಸಲಿರವ ಕ್ರಾನ್ಮರ್ ಮೇಲಿಂದ ಅದನ್ನು ನೋಡಲು ನಿಲ್ಲಿಸಿದ್ದರೆಂದು ಹೇಳುತ್ತಾರೆ! ವಯೋವೃದ್ಧ ಲ್ಯಾಟಿಮರ್ಗೆ ಮರಣ ಬೇಗ ಬಂತು. ಆದರೆ ರಿಡ್ಲಿಯ ತಮ್ಮ, ಅಣ್ಣನ ಕತ್ತಿನ ಸುತ್ತ ಸಿಡಿಮದ್ದನ್ನು ಕಟ್ಟಿದ್ದರೂ ಆತನ ಸುತ್ತ ಒಟ್ಟಿದ ಕಟ್ಟಿಗೆಗಳು ಹಸಿಯಾಗಿದ್ದರಿಂದ, ಕೆಳಭಾಗವಷ್ಟೇ ಮೊದಲು ಸುಟ್ಟಿದ್ದರಿಂದ ಆತನ ಪ್ರಾಣ ಬೇಗ ಹೋಗಲಿಲ್ಲ. ದೇವರೇ ನನ್ನ ಮೇಲೆ ಕರುಣೆಯಿರಲಿ ಎಂದು ಬೇಡಿಕೊಂಡ. ಪಕ್ಕದಲ್ಲಿದ್ದ ಲ್ಯಾಟಿಮರ್, ”ಧೈರ್ಯಗೆಡಬೇಡ, ತಮ್ಮಾ. ನಾವಿಂದು ದೇವರ ದಯೆಯಿಂದ ಎಂಥ ಮೋಂಬತ್ತಿ ಹಚ್ಚೇವೆಂದರೆ ಇಂಗ್ಲೇಂಡಿನಲ್ಲಿ ಅದು ಎಂದೂ ನಂದುವದಿಲ್ಲ!” ಎಂದು ಧೈರ್ಯ ತುಂಬಿದ. ಕೊನೆಗೆ ಯಾರೋ ಮತ್ತೆ ಬೆಂಕಿ ತಂದು ಚಿತೆಯ ಮೇಲ್ಭಾಗಕ್ಕೆ ಅಗ್ನಿಸ್ಪರ್ಷವಾದನಂತರವೇ ಅವನೂ ಅಸುನೀಗಿದನು.

ರಿಡ್ಲಿಮತ್ತು ಲಾಟಿಮರ್ ಅವರ ದಹನ (CC)
ರಿಡ್ಲಿ ಮತ್ತು ಲಾಟಿಮರ್ ಅವರ ದಹನ (CC)

ಮರು ವರ್ಷ ಆರ್ಚ್ ಬಿಷಪ್ ಕ್ರಾನ್ಮರ್ ಪರರ ಒತ್ತಾಯಕ್ಕೊಳಗಾಗಿ ತನ್ನ ಪ್ರೊಟೆಸ್ಟಂಟ್ ನಂಬಿಕೆಗಳನ್ನು ಬಹಿರಂಗವಾಗಿ ಹಿಂದೆಗೆಯಲು (Recantation) ಸಿದ್ಧವಾದ. ಮೊದಲೇ ಪ್ರಕಟನೆಯಾದ ಆ ಕಾಗದಕ್ಕೆ ಸಹಿಯೂ ಹಾಕಿದ್ದ. ಆ ದಿನ ಅದನ್ನು ಚರ್ಚಿನ ಪಲ್ಪಿಟ್ ಮೇಲೆ ನಿಂತು ಅದನ್ನು ಬಹಿರಂಗವಾಗಿ ಓದಬೇಕು. ಕೊನೆಯ ಘಳಿಗೆಯಲ್ಲಿ ಮನಸ್ಸು ಬದಲಾಯಿಸಿ, ಅದಕ್ಕೆ ತಾನು ಒಪ್ಪುವದಿಲ್ಲ ಎಂದ ಕೂಡಲೆ ಹಾಹಾಕಾರದ ಮಧ್ಯೆ ಅವನನ್ನು ಎಳೆದು ಅದೇ ಸ್ಥಳಕ್ಕೆ ಎಳೆ ತಂದು ಅವನನ್ನೂ ಬಲಿ ಕೊಟ್ಟರು. ತಾನು ಸಹಿ ಮಾಡಿದ ಬಲಗೈಯನ್ನು ಮೊದಲೇ ಬೆಂಕಿಯಲ್ಲಿಟ್ಟು, ”ದೇವರೇ, ನನ್ನ ಆತ್ಮವನ್ನು ಸ್ವೀಕರಿಸು. ಅಕೋ, ನನ್ನ ಆಗಮನಕ್ಕೆ ದೇವನ ಬಲಗಡೆ ನಿಂತ ಕ್ರೈಸ್ತ ನನ್ನನ್ನು ಬರಮಾಡಿಕೊಳ್ಳುತ್ತಿದ್ದಾನೆ” ಎಂದು ಅನ್ನುತ್ತ ಅವನೂ ಅಗ್ನಿಗಾಹುತಿಯಾದ.

ಹುತಾತ್ಮರಿಗೊಂದು ಸ್ಮಾರಕ
ಹುತಾತ್ಮರಿಗೊಂದು ಸ್ಮಾರಕ  (Photo by Author)

ಧರ್ಮ, ಮತ್ತು ರಾಜಕಾರಣಗಳು ಕೂಡಿದರೆ ಆಗುವದೇ ಸ್ಫೋಟಕ ಮಿಶ್ರಣ. ಅಂದಿಗೂ ಸರಿ, ಇಂದಿಗೂ ಸಹ, ಧರ್ಮದ ಹೆಸರಿನಲ್ಲಿ ಅತ್ಯಾಚಾರ, ನರಹತ್ಯೆ ನಡೆಯುತ್ತಿತ್ತು, ನಡೆಯುತ್ತಿದೆ!

ಶ್ರೀವತ್ಸ ದೇಸಾಯಿ.