ಎರಡನೇ ಮಹಾಯುದ್ಧದ ಬ್ರಿಟಿಷ್ ಗೂಢಚಾರಿಣಿ ನೂರ್ ಇನಾಯತ್ ಖಾನ್ (1914–1944) The Spy Princess -ರಾಮಮೂರ್ತಿ ಲೇಖನ.

ದೇಶಭಕ್ತಿ ಎಂದರೆ ಗಡಿಯಲ್ಲಿ ಶಸ್ತ್ರ ಹಿಡಿದು ಹೋರಾಡುವುದಕ್ಕೆ ಸೀಮಿತವಿಲ್ಲ; ಅಗತ್ಯ ಬಂದಾಗ ತನ್ನ ವೈಯಕ್ತಿಕ ಸುಖ–ಸೌಕರ್ಯ, ಭಯ, ಭವಿಷ್ಯ ಎಲ್ಲವನ್ನೂ ಬದಿಗಿಟ್ಟು ದೇಶಕ್ಕಾಗಿ ನಿಲ್ಲುವ ಧೈರ್ಯವೇ ನಿಜವಾದ ದೇಶಭಕ್ತಿ. ಇಂತಹ ಮೌನವಾದ, ಆದರೆ ಅಪಾರ ತ್ಯಾಗದಿಂದ ಕೂಡಿದ ದೇಶಭಕ್ತಿಯ ಪ್ರತೀಕವೇ ನೂರ್ ಇನಾಯತ್ ಖಾನ್.ಇತಿಹಾಸದ ಪುಟಗಳಲ್ಲಿ ಬಹಳಷ್ಟು ಬಾರಿ ಮಹಿಳೆಯರ ತ್ಯಾಗಗಳು ಅಂಚಿಗೆ ಸರಿದಿವೆ. ವಿಶೇಷವಾಗಿ ವಸಾಹತುಶಾಹಿಯ ಕಾಲಘಟ್ಟದಲ್ಲಿ ಭಾರತ ಮೂಲದ ಅನೇಕರು ನೀಡಿದ ಕೊಡುಗೆಗಳು ಸೂಕ್ತ ಗೌರವವನ್ನು ಪಡೆಯಲಿಲ್ಲ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಗೂಢಚರ್ಯಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ನೂರ್ ಇನಾಯತ್ ಖಾನ್ ಅವರ ಜೀವನವು, ದೇಶಭಕ್ತಿಯ ಅರ್ಥಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಈ ಲೇಖನವು ನೂರ್ ಇನಾಯತ್ ಖಾನ್ ಅವರ ಜೀವನ ಕಥೆಯನ್ನು ಮಾತ್ರವಲ್ಲ, ದೇಶಭಕ್ತಿ ಎಂಬ ಮೌಲ್ಯವು ಜಾತಿ, ಧರ್ಮ, ಲಿಂಗ, ರಾಷ್ಟ್ರಗಳ ಗಡಿಗಳನ್ನು ಮೀರಿ ಮಾನವೀಯತೆಯೊಂದಿಗೆ ಬೆಸೆಯಲ್ಪಟ್ಟಿರುತ್ತದೆ ಎಂಬ ಸತ್ಯವನ್ನು ನಮ್ಮ ಮುಂದಿಡುತ್ತದೆ. ಇಂತಹ ಮರೆತುಹೋಗಿರುವ ವೀರಗಾಥೆಗಳು ಪುನಃ ಓದಿಗೆ ಬರುವುದೇ ನಮ್ಮ ಇತಿಹಾಸದ ಜವಾಬ್ದಾರಿ.ನೂರ್ ಇನಾಯತ್ ಖಾನ್ ಅವರ ಕಥೆ, ದೇಶಭಕ್ತಿ ಎಂದರೆ ಘೋಷಣೆ ಅಲ್ಲ; ಅದು ಮೌನ ತ್ಯಾಗ, ಅಚಲ ನಿಷ್ಠೆ ಮತ್ತು ಕೊನೆಯ ಉಸಿರಿನವರೆಗಿನ ಧೈರ್ಯ ಎಂಬುದನ್ನು ನಮಗೆ ನೆನಪಿಸುತ್ತದೆ.
ಇಂತಹ ಮೈಜುಮ್ಮೆನ್ನುವ ರೋಚಕ ಜೀವನ ಚರಿತ್ರೆಯನ್ನು ನಮ್ಮೊಂದಿದೆ ಹಂಚಿಕೊಂಡಿದ್ದಕ್ಕೆ ಈಗಾಗಲೇ ‘ಅನಿವಾಸಿ’ಗೆ ಅನೇಕ ಅಮೂಲ್ಯ ಇತಿಹಾಸ ಪ್ರಬಂಧಗಳನ್ನು ಕೊಟ್ಟು ಸುಪರಿಚಿತರಾದ ರಾಮಮೂರ್ತಿಯವರಿಗೆ ಧನ್ಯವಾದಗಳು.
~ ರಾಧಿಕಾ ಜೋಶಿ

1914–1918 ಮತ್ತು 1939–1945ರಲ್ಲಿ ನಡೆದ ಈ ಎರಡು ಮಹಾಯುದ್ಧಗಳಲ್ಲಿ ಭಾರತದ ಸುಮಾರು ಇಪ್ಪತ್ತು ಲಕ್ಷ ಸೈನಿಕರು ಭಾಗವಹಿಸಿದ್ದರು. ಆದರೆ ಇವರ ತ್ಯಾಗವನ್ನು ನೆನಪಿಸಿಕೊಂಡು ನವೆಂಬರ್ ತಿಂಗಳಲ್ಲಿ ನಡೆಯುವ Remembrance Day ದಿನದಂದು Poppy Wreath ಇಡುವುದು ಅಪರೂಪವಾಗಿದೆ. ಈ ಯುದ್ಧಗಳಲ್ಲಿ ಅನೇಕ ಮಹಿಳೆಯರೂ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಿದ್ದರು. ಅವರಲ್ಲಿ ನೂರ್ ಇನಾಯತ್ ಖಾನ್ ಒಬ್ಬಳು. ಈ ಹೆಸರನ್ನು ನೀವು ಬಹುಶಃ ಕೇಳಿರಲಿಕ್ಕಿಲ್ಲ. 112 ವರ್ಷಗಳ ಹಿಂದೆ ಜನಿಸಿದ ಭಾರತ ಮೂಲದ ನೂರ್ ಇನಾಯತ್ ಖಾನ್ ಈ ದೇಶಕ್ಕೆ ನೀಡಿದ ಕೊಡುಗೆ ಅಪಾರವಾದುದು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಅಂದಿನ ಪ್ರಧಾನಮಂತ್ರಿ ಸರ್ ವಿಂಸ್ಟನ್ ಚರ್ಚಿಲ್ ಸ್ಥಾಪಿಸಿದ Special Operations Executive (SOE) ವಿಭಾಗಕ್ಕೆ ಸೇರಿ, ಫ್ರಾನ್ಸ್ ದೇಶದಲ್ಲಿದ್ದು ಶತ್ರುಗಳ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಅತ್ಯಂತ ಗುಪ್ತವಾಗಿ ವೈರ್‌ಲೆಸ್ ಮೂಲಕ ಲಂಡನ್ ಕಚೇರಿಗೆ ಕಳುಹಿಸುವುದು ಅವಳ ಕೆಲಸವಾಗಿತ್ತು. ಆ ಸಮಯದಲ್ಲಿ ನಾಜಿ ಜರ್ಮನಿ ಫ್ರಾನ್ಸ್ ದೇಶವನ್ನು ಆಕ್ರಮಿಸಿಕೊಂಡಿತ್ತು. ಆದ್ದರಿಂದ ಬ್ರಿಟಿಷ್ ಗೂಢಚಾರಿಗಳು ಅತ್ಯಂತ ಸೂಕ್ಷ್ಮತೆ ಮತ್ತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿತ್ತು. ಸಿಕ್ಕಿಬಿದ್ದರೆ ಸಾವೇ ಶಿಕ್ಷೆ.

ಪ್ರತಿ ದಿನ ಒಂದು ಸುರಕ್ಷಿತ ಮನೆಯಿಂದ ಇನ್ನೊಂದು ಮನೆಗೆ ಗುಪ್ತವಾಗಿ ಸ್ಥಳಾಂತರಗೊಂಡು, ಅಟ್ಟದಲ್ಲೋ ಅಥವಾ ನೆಲಮಾಳಿಗೆಯಲ್ಲೋ ವೈರ್‌ಲೆಸ್ ಉಪಕರಣಗಳನ್ನು ಜೋಡಿಸಿ ಸಂದೇಶ ಕಳುಹಿಸುವುದು ಸುಲಭದ ಕೆಲಸವಾಗಿರಲಿಲ್ಲ. ಶತ್ರುಗಳಿಗೆ ಸುಳಿವು ಸಿಗದಂತೆ ಅವಳು ಅನೇಕ ಹೆಸರುಗಳನ್ನು ಬಳಸುತ್ತಿದ್ದಳು—ಮ್ಯಾಡಲೀನ್, ನೊರಾ ಇತ್ಯಾದಿ. ಆದರೆ ಕೊನೆಗೆ ಒಬ್ಬ ದ್ರೋಹಿಯ ಕಾರಣದಿಂದ ಶತ್ರುಗಳಿಗೆ ಸಿಕ್ಕಿಬಿದ್ದು, ಹಲವಾರು ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿ ಭೀಕರ ಚಿತ್ರಹಿಂಸೆಯನ್ನು ಸಹಿಸಿದರೂ, ಒಂದು ಚೂರು ರಹಸ್ಯವನ್ನೂ ಬಿಟ್ಟು ಕೊಡದ ಧೈರ್ಯಕ್ಕಾಗಿ Dachau Concentration Camp ನಲ್ಲಿ Gestapo ಗುಂಡಿನಿಂದ ಹತ್ಯೆಗೊಳಗಾದಳು.

ಬಾಲ್ಯ ಜೀವನ ಮತ್ತು ಕುಟುಂಬ ಹಿನ್ನೆಲೆ

ತಂದೆ ಹಜರತ್ ಇನಾಯತ್ ಖಾನ್ ಬರೋಡಾ ನಗರದಲ್ಲಿ ಜನಿಸಿದರು. ತಾಯಿ ಕಡೆಯಿಂದ ಅವರು ಮೈಸೂರಿನ ಟಿಪ್ಪು ಸುಲ್ತಾನನ ವಂಶಸ್ಥರು(ಮರಿಮಗ). ಟಿಪ್ಪು ಸುಲ್ತಾನ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ 1799ರಲ್ಲಿ ಮರಣ ಹೊಂದಿದರು. ಹಜರತ್ ಇನಾಯತ್ ಖಾನ್ ಶಾಂತಿಪ್ರಿಯರಾಗಿದ್ದು, ಇಸ್ಲಾಂ ಧರ್ಮದ ಸೂಫಿ ಪರಂಪರೆಯನ್ನು ಅನುಸರಿಸಿ ಸಂಗೀತವನ್ನು ಕಲಿತವರು. ಈ ಸಂಪ್ರದಾಯವನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ ಅಮೆರಿಕಾ ಮತ್ತು ಯುರೋಪ್‌ನಲ್ಲಿ ಪ್ರವಾಸ ಮಾಡಿದರು.

ತಾಯಿ ಅಮೆರಿಕಾದ ಪ್ರಜೆ ಒರಾ ರೇ ಬೇಕರ್; ನಂತರ ಇಸ್ಲಾಂ ಧರ್ಮ ಸ್ವೀಕರಿಸಿ ಅಮೀನಾ ಬೇಗಂ ಎಂದು ಹೆಸರು ಪಡೆದರು. ಯುರೋಪ್‌ನಲ್ಲಿ ಸಂಚರಿಸಿ ಕೆಲ ವರ್ಷಗಳು ಮಾಸ್ಕೋ ನಗರದಲ್ಲಿ ವಾಸಿಸಿ, 1914ರಲ್ಲಿ ಮೊದಲ ಮಹಾಯುದ್ಧ ಆರಂಭವಾಗುವ ಮೊದಲು ಕುಟುಂಬದೊಂದಿಗೆ ಲಂಡನ್‌ನ ಬ್ಲೂಮ್ಸ್‌ಬರಿ (Bloomsbury)ಯಲ್ಲಿ ನೆಲೆಸಿದರು. ನೂರ್ 01-01-1914ರಂದು ಮಾಸ್ಕೋ ನಗರದಲ್ಲಿ ಜನಿಸಿದರು.

ಮಹಾಯುದ್ಧ ಮುಗಿದ ನಂತರ 1920ರಲ್ಲಿ ಲಂಡನ್‌ನಿಂದ ಪ್ಯಾರಿಸ್‌ಗೆ ಬಂದು ನೆಲೆಸಿದರು. ಇನಾಯತ್ ಖಾನ್ ಸಂಗೀತ ಮತ್ತು ಸೂಫಿ ಧರ್ಮದ ಪ್ರಚಾರ ಆರಂಭಿಸಿದರು. ಆದರೆ 1927ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಅನಾರೋಗ್ಯದಿಂದ ನಿಧನರಾದರು.

13 ವರ್ಷದ ನೂರ್ ಮೇಲೆ ಕುಟುಂಬದ ಹೊಣೆಗಾರಿಕೆ ಬಿದ್ದರೂ, ಅವಳ ವಿದ್ಯಾಭ್ಯಾಸವನ್ನು ಮುಂದುವರೆಸಿ ಪ್ರಸಿದ್ಧ Sorbonne ವಿಶ್ವವಿದ್ಯಾಲಯದಲ್ಲಿ ಮಕ್ಕಳ ಮನೋವಿಜ್ಞಾನ (Child Psychology) ಪದವಿ ಪಡೆದಳು. ಸಂಗೀತದಲ್ಲೂ ಅವಳು ಪ್ರವೀಣಳಾಗಿದ್ದಳು. ನಂತರ ಮಕ್ಕಳ ಪುಸ್ತಕಗಳ ಲೇಖಕಿಯಾಗಿ, 1939ರಲ್ಲಿ ಬೌದ್ಧ ಧರ್ಮದಿಂದ ಪ್ರೇರಿತವಾದ “ಇಪ್ಪತ್ತು ಜಾತಕ ಕಥೆಗಳು” ಸೇರಿದಂತೆ ಹಲವು ಬರಹಗಳು ಫ್ರೆಂಚ್ ಭಾಷೆಯಲ್ಲಿ ಪ್ರಕಟವಾದವು.

ಎರಡನೇ ಮಹಾಯುದ್ಧದಲ್ಲಿ ವೈರ್‌ಲೆಸ್ ಆಪರೇಟರ್

1939ರಲ್ಲಿ ನಾಜಿ ಜರ್ಮನಿ ಯುರೋಪ್ ಖಂಡವನ್ನು ಕಬಳಿಸುವ ಪ್ರಯತ್ನದಿಂದ ಯುದ್ಧ ಆರಂಭವಾಯಿತು. 1940ರಲ್ಲಿ ಫ್ರಾನ್ಸ್ ಜರ್ಮನಿಯ ವಶವಾಯಿತು. ಅಹಿಂಸಾವಾದಿಗಳಾದ ಈ ಕುಟುಂಬ Bordeaux ನಿಂದ ಸರಕು ಸಾಗಿಸುವ ಹಡಗಿನಲ್ಲಿ ಲಂಡನ್‌ಗೆ ಮರಳಿದರು.
ನೂರ್ ಮತ್ತು ಅವಳ ಸಹೋದರ ವಿಲಾಯತ್ ಅವರ ತಂದೆಯಂತೆ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ವಿಮುಕ್ತವಾಗಬೇಕೆಂದು ಕನಸು ಕಂಡಿದ್ದರು. ಆದರೆ ಈಗ ಜರ್ಮನಿ ಯುರೋಪ್ ಖಂಡವನ್ನೇ ಆಕ್ರಮಿಸುವ ಅಪಾಯ ಎದುರಾದ್ದರಿಂದ, ಇದನ್ನು ತಡೆಯಲು ತಮ್ಮ ಕೈಲಾದ ಸೇವೆ ಸಲ್ಲಿಸಲು ನಿರ್ಧರಿಸಿದರು.

ನೂರ್ ಆಗತಾನೆ ಆರಂಭವಾಗಿದ್ದ WAAF (Women’s Auxiliary Air Force) ಗೆ ಸೇರಿ Signals ಮತ್ತು Wireless ವಿಭಾಗದಲ್ಲಿ ತರಬೇತಿ ಪಡೆದು, ಜೂನ್ 1943ರಲ್ಲಿ ಫ್ರಾನ್ಸ್‌ನಲ್ಲಿ ಕೆಲಸ ಆರಂಭಿಸಿದಳು. Gestapo ಪ್ಯಾರಿಸ್‌ನಲ್ಲಿ ಅನೇಕ ಬ್ರಿಟಿಷ್ ಗೂಢಚಾರಿಗಳನ್ನು ಹಿಡಿದು ಕ್ರೂರ ಶಿಕ್ಷೆ ವಿಧಿಸುತ್ತಿತ್ತು. ಇಂತಹ ಅಪಾಯಕರ ಪರಿಸ್ಥಿತಿಯಲ್ಲೂ ನೂರ್ ವೇಷ ಬದಲಿಸಿ ಸುರಕ್ಷಿತ ಮನೆಗಳಿಂದ ಮನೆಗಳಿಗೆ ಸ್ಥಳಾಂತರಗೊಳ್ಳುತ್ತಾ ತನ್ನ ಕೆಲಸ ಮುಂದುವರೆಸಿದಳು.

ಅವಳ ಫ್ರೆಂಚ್ ಭಾಷೆಯ ಉಚ್ಚಾರಣೆ ಸ್ಥಳೀಯರಂತೆಯೇ ಇದ್ದುದರಿಂದ ಅವಳ ಮೇಲೆ ಸಂಶಯ ಬಹಳ ಕಡಿಮೆ ಇತ್ತು. ಅವಳು ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತಿದ್ದ ಕೆಲಸ ಲಂಡನ್‌ನಲ್ಲೂ ಮೆಚ್ಚುಗೆ ಪಡೆದಿತ್ತು. ಆದರೂ ಅವಳ ಸುರಕ್ಷತೆ ಬಗ್ಗೆ ಆತಂಕವಿತ್ತು; ಹಲವು ಬಾರಿ ಅವಳನ್ನು ವಾಪಸ್ಸು ಬರಲು ಕರೆ ಮಾಡಲಾಯಿತು. ಆದರೆ ನೂರ್ ಅದನ್ನು ನಿರಾಕರಿಸಿ ಫ್ರಾನ್ಸ್‌ನಲ್ಲೇ ಕೆಲಸ ಮುಂದುವರೆಸಿದಳು.
ದುರದೃಷ್ಟವಶಾತ್, ಫ್ರಾನ್ಸ್‌ನ ಒಬ್ಬ Double Agent ದ್ರೋಹ ಮಾಡಿದ್ದರಿಂದ Gestapo ನೂರ್ ಅನ್ನು ಸೆರೆಹಿಡಿಯಲು ಸಾಧ್ಯವಾಯಿತು.

ಕೊನೆಯ ದಿನಗಳು

Gestapo ಕಾರಾಗೃಹದಲ್ಲಿ ಇಟ್ಟ ಮೊದಲ ದಿನವೇ ಕಿಟಕಿಯ ಮೂಲಕ ತಪ್ಪಿಸಿಕೊಳ್ಳಲು ಅವಳು ಪ್ರಯತ್ನಿಸಿದಳು. Gestapo ಎಷ್ಟೇ ಹಿಂಸೆ ನೀಡಿದರೂ ನೂರ್ ತನ್ನ Code Word ಸೇರಿದಂತೆ ಯಾವುದೇ ರಹಸ್ಯವನ್ನೂ ಬಿಟ್ಟು ಕೊಡಲಿಲ್ಲ. ಇತರ ಬಂಧಿಗಳೊಂದಿಗೆ ಸೆರೆಯ ಕಂಬಿಗಳನ್ನು ಮುರಿದು ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಯಿತು.

ನಂತರ ಅವಳನ್ನು ಏಕಾಂತ ಬಂಧನದಲ್ಲಿ ಇಟ್ಟರೂ ಯಾವುದೂ ಹೊರಬರಲಿಲ್ಲ. ಕೊನೆಗೆ ಅವಳನ್ನು ಸರಪಳಿಗಳಿಂದ ಕಟ್ಟಿ ಜರ್ಮನಿಯ ಕಠಿಣ Pforzheim ಕಾರಾಗೃಹಕ್ಕೆ ಕರೆದೊಯ್ದು ಅಮಾನವೀಯವಾಗಿ ಹಿಂಸೆ ನೀಡಿದರು. ಇದು ನವೆಂಬರ್ 1943. ಹತ್ತು ತಿಂಗಳುಗಳ ಕಾಲ ನಡೆದ ಹಿಂಸೆಯಲ್ಲಿಯೂ ಅವಳಿಂದ ಯಾವುದೇ ರಹಸ್ಯ ಬಯಲಾಗಲಿಲ್ಲ.
ಕೊನೆಗೆ ನೂರ್ ಮತ್ತು ಇನ್ನೂ ನಾಲ್ಕು ಬಂಧಿಗಳನ್ನು Dachau Concentration Camp ಗೆ ಕಳುಹಿಸಿ 13 ಸೆಪ್ಟೆಂಬರ್ 1944ರಂದು ಗುಂಡಿಟ್ಟು ಹತ್ಯೆಗೊಳಗಾದರು (ಇಲ್ಲಿ ಲಕ್ಷಾಂತರ ಯಹೂದಿಗಳನ್ನು ಗ್ಯಾಸ್ಚೇಂಬರ್‌ಗಳಲ್ಲಿ ಹತ್ಯೆ ಮಾಡಲಾಗಿತ್ತು).

ನೂರ್‌ನ ಕೊನೆಯ ಮಾತು ಅವಳ ತುಟಿಗಳಿಂದ ಹೊರಬಂದದ್ದು—“LIBERTÉ”, ಅಂದರೆ ಸ್ವಾತಂತ್ರ್ಯ. ಕೇವಲ 30 ವರ್ಷದ ಈ ಧೈರ್ಯಶಾಲಿ ಮಹಿಳೆ ತನ್ನ ಪ್ರಾಣವನ್ನು ಈ ದೇಶಕ್ಕೆ ಅರ್ಪಿಸಿದಳು.
ಮಹಾಯುದ್ಧ ಮುಗಿದ ನಂತರ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಹೊರಡುವ ಯೋಚನೆ ಅವಳಿಗಿತ್ತು. WAAF ಸೇರಿದ್ದಾಗ ನೂರ್ ಇದನ್ನು ಕೆಲವರ ಮುಂದೆ ಹೇಳಿದ್ದಾಳೆ ಎಂಬುದು ತಿಳಿದುಬರುತ್ತದೆ.

Dachau ನಲ್ಲಿ ಕೊಲೆಯಾದವರ ಅಂತ್ಯಕ್ರಿಯೆ ಯಥೋಚಿತ ಗೌರವದಿಂದ ನಡೆಯುತ್ತಿರಲಿಲ್ಲ; ಇದು Gestapo ಯ ಅಮಾನವೀಯ ವರ್ತನೆಯ ಮತ್ತೊಂದು ಉದಾಹರಣೆ. ಹೀಗೆ ಮೃತರಾದವರ ಸಂಖ್ಯೆ ಅನೇಕ. ಬಹಳ ವರ್ಷಗಳ ನಂತರ ನೂರ್‌ನ ಕೊನೆಯ ದಿನಗಳ ವಿವರಗಳು National Archives ನಲ್ಲಿರುವ ಐತಿಹಾಸಿಕ ದಾಖಲೆಗಳಿಂದ ಬೆಳಕಿಗೆ ಬಂದವು.

ಭಾರತದ ಪತ್ರಕರ್ತೆಯಾದ ಶ್ರೀಮತಿ ಶ್ರಭಾನಿ ಬಸು ಅವರ ಸಂಶೋಧನೆಯಿಂದ ನೂರ್ ಕುರಿತ ಹೆಚ್ಚಿನ ವಿಷಯಗಳು ಬಹಿರಂಗವಾದವು. ನಂತರ “Spy Princess: The Life of Noor Khan” ಎಂಬ ಪುಸ್ತಕ ಪ್ರಕಟವಾಯಿತು.

ಮರಣೋತ್ತರ ಗೌರವಗಳು

ಯುದ್ಧದಲ್ಲಿ ಮೃತರಾದವರ ಸ್ಮಾರಕ Runnymede ನಲ್ಲಿ ಇದೆ; ಅಲ್ಲಿ ನೂರ್ ಹೆಸರನ್ನು ಕಾಣಬಹುದು. ಲಂಡನ್‌ನ ಅನೇಕ ಸ್ಥಳಗಳಲ್ಲಿ ನೂರ್ ಸ್ಮಾರಕಗಳಿವೆ ಮತ್ತು ಅವಳಿಗೆ ಹಲವಾರು ಮರಣೋತ್ತರ ಪ್ರಶಸ್ತಿಗಳು ದೊರೆತಿವೆ. ಮುಖ್ಯವಾದವುಗಳು George Cross ಹಾಗೂ ಫ್ರಾನ್ಸ್ ದೇಶದ Croix de Guerre.
08-11-2012ರಂದು ಅವಳ ಕಂಚಿನ ಪ್ರತಿಮೆಯನ್ನು Bloomsbury ಯ Gordon Square ನಲ್ಲಿ ಅನಾವರಣ ಮಾಡಲಾಯಿತು. ನೂರ್ ವಾಸವಾಗಿದ್ದ Taviton Street ಮನೆಯ ಮುಂದೆ 2020ರಲ್ಲಿ
English Heritage ಸಂಸ್ಥೆ Blue Plaque ಅನ್ನು ಅನಾವರಣ ಮಾಡಿತು. 25-03-2014ರಂದು ನೂರ್ ಭಾವಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು.

2019ರ ಚಲನಚಿತ್ರ A Call to Spy ಯಲ್ಲಿ ರಾಧಿಕಾ ಆಪ್ಟೆ ನೂರ್ ಪಾತ್ರದಲ್ಲಿ ನಟಿಸಿದ್ದಾರೆ.
The Independent ಪತ್ರಿಕೆಯಲ್ಲಿ ನೂರ್ ಬಗ್ಗೆ ಹೀಗೆ ಬರೆಯಲಾಗಿದೆ:
She died with “freedom” on her lips. It was hers. And it was ours as well.

— ರಾಮಮೂರ್ತಿ
ಕಾಂಗಲ್ ಟನ್, ಚೆಶೈರ್

Acknowledgements

Images from Google

The Princess who became a Spy: Independent Fed 2016  National Archives National Archives

ರಾಜಕುಮಾರಿ ಸೋಫಿಯಾ ದುಲೀಪ್ ಸಿಂಗ್ (೧೮೭೬-೧೯೪೮) – ರಾಮಮೂರ್ತಿ ಎಚ್ ಎನ್.

ನಮಸ್ಕಾರ.  ನಮ್ಮ ಅನಿವಾಸಿ ಬಳಗದ ಉತ್ಸಾಹಿ ಬರಹಗಾರ, ಇತಿಹಾಸದ ಅಧ್ಯೇತೃ (ಬೇಸಿಂಗ್‍ಸ್ಟೋಕ್) ರಾಮಮೂರ್ತಿ ಅವರು ಬರೆದಿರುವ ಇನ್ನೊಂದು ಲೇಖನ. ಪಂಜಾಬಿನ ಕೊನೆಯ ರಾಜ ದುಲೀಪ್ ಸಿಂಹರ ಮಗಳು ರಾಜಕುಮಾರಿ ಸೋಫಿಯಾ ಅವರ ಜೀವನ ಚಿತ್ರಣ ಇಲ್ಲಿದೆ.  ಬರಿಯ ರಾಜಕುಮಾರಿಯಾಗಿ ಉಳಿಯದೇ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ, ಮೊದಲ ಮಹಾಯುದ್ಧದ ವೇಳೆಯಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ, ಆ ಕಾರಣಕ್ಕಾಗಿ ಬ್ರಿಟಿಷ್ ಸರಕಾರದಿಂದ ಗೌರವಿಸಲ್ಪಟ್ಟ ಮಹಿಳೆ.  
ಎಂದಿನಂತೆ ಓದಿ, ಪ್ರತಿಕ್ರಯಿಸಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗಿನಲ್ಲಿ ಹಂಚಿಕೊಳ್ಳಿ. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಈ ವಾರದ ಸಂಪಾದಕಿ ಅಮಿತಾ ರವಿಕಿರಣ ಅವರ ಪರವಾಗಿ).

********************

ದುಲೀಪ್ ಸಿಂಹ ಮತ್ತು ರಾಜಕುಮಾರಿ ಸೋಫಿಯಾ (ಚಿತ್ರಕೃಪೆ: ವಿವಿಧ ಅಂತರ್ಜಾಲತಾಣಗಳು)
೨೦ನೇ ಶತಮಾನದ ಆದಿಯಲ್ಲಿ ಇಂಗ್ಲೆಂಡ್ ದೇಶದ ಮಹಿಳೆಯರು ಮೂಲಭೂತ ಮತ್ತು ಮತದಾನದ ಹಕ್ಕು ಪಡೆಯಲು ನಡೆಸಿದ ಚಳುವಳಿಗಳಿಗೆ (Suffragette Movement) ಹೋರಾಡಿದ ಭಾರತ ಮೂಲದ ರಾಜಕುಮಾರಿ ಸೋಫಿಯಾ.  ಈಕೆ, ಭಾರತದ ಮತ್ತು ಇಂಗ್ಲೆಂಡಿನ ಶ್ರೀಮಂತ ಕುಟುಂಬದ ಆಶ್ರಯದಲ್ಲಿ ಬೆಳೆದರೂ ಅವಳ ಹೋರಾಟ ರಾಜಕೀಯ ಚಟುವಟಿಕೆಯಲ್ಲೇ ಇತ್ತು.

ಇವಳ ತಂದೆ ಪಂಜಾಬಿನ ಕೊನೆಯ ಮಹಾರಾಜ ದುಲೀಪ್ ಸಿಂಗ್. ಪಂಜಾಬಿನ “ಸಿಂಹ” ಮಹಾರಾಜ ರಂಜಿತ್ ಸಿಂಗ್‍ರ (೧೭೮೦-೧೮೩೯) ನಿಧನವಾದಮೇಲೆ ಆ ಪಟ್ಟಕ್ಕೇರಲು ಅನೇಕರು ಹೋರಾಡಿ, ಕೊನೆಗೆ ಐದು ವರ್ಷದ ದುಲೀಪ್ ಸಿಂಗ್‍ನನ್ನು ರಾಜನನ್ನಾಗಿ ಮಾಡಿದರು. ಆದರೆ ರಾಜ್ಯದಲ್ಲಿ ಅಸ್ಥಿರತೆ ಇರುವುದನ್ನು ಕಂಡು ೧೮೪೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಎರಡನೆಯ ಆಂಗ್ಲೋ-ಸಿಖ್ ಯುದ್ಧದ ನಂತರ ಪಂಜಾಬ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡು ಹತ್ತು ವರ್ಷದ ದುಲೀಪ್ ಸಿಂಗ್‍ನಿಂದ ಅವನ ಜಮೀನು ಮತ್ತು ಕೊಹಿನೂರ್ ವಜ್ರವನ್ನು ಕಸಿದುಕೊಂಡರು. ನಂತರ ದುಲೀಪ್ ಸಿಂಗನಿಗೆ ಪಿಂಚಿಣಿ ಕೊಟ್ಟು ಇಂಗ್ಲೆಂಡ್‍ನಲ್ಲಿ ವಾಸಮಾಡುವುದಕ್ಕೆ ಏರ್ಪಾಡು ಮಾಡಿದರು, ಇದಲ್ಲದೆ ಸಿಖ್ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ, ಬಹುಶಃ ಬಲವಂತದಿಂದ, ಮಾಡಿದರು.

ಸೋಫಿಯಾ ೮/೦೮/೧೮೭೬ ರಂದು ಲಂಡನ್ ನಗರದ ಬೆಲ್‍ಗ್ರೇವಿಯದಲ್ಲಿ ಜನಿಸಿದಳು. ತಾಯಿ, ಬಾಂಬ ಮುಲ್ಲರ್ (ಜರ್ಮನ್ ಮತ್ತು ಇಥಿಯೋಪಿಯಾ ಮೂಲದವಳು). ದುಲೀಪ್ ಸಿಂಗ್ ೧೮೬೩ರಲ್ಲಿ Suffolk ನಲ್ಲಿ ಇರುವ ೧೭,೦೦೦ ಎಕರೆ Elvedon Hall ಕೊಂಡಿದ್ದ (ಲಂಡನ್‍ನಲ್ಲಿದ್ದ India Office ನ ಸಹಾಯದಿಂದ). ಅವನ ಕುಟುಂಬ ಲಂಡನ್‍ನಿಂದ ಇಲ್ಲಿಗೆ ಬಂದು ನೆಲೆಸಿದರು. ರಾಣಿ ವಿಕ್ಟೊರಿಯಾ ದುಲೀಪ್ ಸಿಂಗನ ಮಕ್ಕಳನ್ನು, ಅದರಲ್ಲೂ ಸೋಫಿಯಾಳನ್ನು, ಸಾಕುಮಕ್ಕಳಂತೆ ಪರಿಗಣಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಳು.

೧೮೮೭ ರಲ್ಲಿ ಬಾಂಬ ಮುಲ್ಲರ್ ಜ್ವರದಿಂದ ನಿಧನಳಾದ ಮೇಲೆ, ದುಲೀಪ್ ಸಿಂಗ್ ೧೮೮೯ರಲ್ಲಿ ಪುನಃ ಮದುವೆಯಾದ. ಆದರೆ ಇವನ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಹದಗೆಟ್ಟು ೧೮೮೦ ರಲ್ಲಿ Elvendon Hall ಬಿಡಬೇಕಾಯಿತು. ಸೋಫಿಯಾ ಹತ್ತು ವರ್ಷವಾಗಿದ್ದಾಗ, ದುಲೀಪ್ ಸಿಂಗ್ ತನ್ನ ಸಂಸಾರದ ಜೊತೆಯಲ್ಲಿ ಪಂಜಾಬಿಗೆ ಹಿಂತಿರುಗಲು ಮಾಡಿದ ಪ್ರಯತ್ನ ವಿಫಲವಾಯಿತು. ಹಡಗು ಏಡನ್ ತಲಪಿದಾಗ ಇವರ ಬಂಧನಕ್ಕೆ ಬ್ರಿಟಿಷ್ ಸರ್ಕಾರದ ವಾರಂಟ್ ಕಾದಿತ್ತು. ನಂತರ ದುಲೀಪ್ ಸಿಂಗ್ ಪ್ಯಾರಿಸ್ ನಗರದಲ್ಲಿ ಹಲವು ವರ್ಷಗಳನ್ನು ಕಳೆದು ೫೫ ನೇ ವಯಸ್ಸಿನಲ್ಲಿ ೧೮೯೩ರಲ್ಲಿ ನಿಧನನಾದ.

ರಾಣಿ ವಿಕ್ಟೋರಿಯಾ ಈ ಮಕ್ಕಳ ಯೋಗಕ್ಷೇಮವನ್ನು ಆಲಿಫಂಟ್ ಕುಟುಂಬಕ್ಕೆ ವಹಿಸಿ, ಬ್ರೈಟನ್ ನಗರದಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ ಮತ್ತು ವಾಸಕ್ಕೆ ರಾಜ ಮನೆತನದ ಹ್ಯಾಂಪ್ಟನ್ ಕೋರ್ಟ್ ಆವರಣದಲ್ಲಿ ಏರ್ಪಾಡು ಮಾಡಲಾಯಿತು.

ಸೋಫಿಯಾ ಮೊದಲ ಕೆಲವು ವರ್ಷಗಳು ಅತ್ಯಂತ ಆರಾಮದ ಜೀವನವನ್ನು ಕಳೆದಳು. ಆದರೆ ೧೯೦೭ ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಜನರ ಬಡತನ ಮತ್ತು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿ ಅವಳ ಮನಸ್ಸು ಪರಿವರ್ತನೆ ಆಯಿತು.
೧೯೧೦ ರವರೆಗೂ ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಯಾವ ರೀತಿಯ ಹಕ್ಕುಗಳೂ ಇರಲಿಲ್ಲ. ಇದನ್ನು ಪ್ರತಿಭಟಿಸಿ "Women's Social and Political Union" (WSPU) ಅನ್ನುವ ಸಂಸ್ಥೆ ಎಮೆಲೀನ್ ಪ್ಯಾಂಕ್‍ಹರ್ಸ್ಟ್ (Emmeline Pankhurst) ಳ ನೇತೃತ್ವದಲ್ಲಿ ಪ್ರಾರಂಭವಾಗಿತ್ತು. ಸೋಫಿಯಾ ಈ ಚಳುವಳಿಯಲ್ಲಿ ಭಾಗವಹಿಸಿವುದಕ್ಕೆ ನಿರ್ಧರಿಸಿ, ಈ ಸಂಸ್ಥೆಯ ಸದಸ್ಯೆ ಆಗಿ ಅನೇಕ ರೀತಿಯಲ್ಲಿ ಸಹಾಯ ಮಾಡಿದಳು. ಸೋಫಿಯಾ ತಾನು ವಾಸವಾಗಿದ್ದ ಹ್ಯಾಂಪ್ಟನ್ ಕೋರ್ಟ್ ಹೆಬ್ಬಾಗಿಲಿನ ಮುಂದೆ ನಿಂತು The Suffragette ಪತ್ರಿಕೆಯ ಮಾರಾಟವನ್ನು ಸಹ ಮಾಡುತಿದ್ದಳು.

೧೯೧೦ ರಲ್ಲಿ ಲಂಡನ್ ನಗರದಲ್ಲಿ ನಡೆದ Black Friday ಪ್ರತಿಭಟನೆಯಲ್ಲಿ ೩೦೦ ಮಹಿಳೆಯರ ತಂಡದೊಂದಿಗೆ ಸೋಫಿಯಾ ಭಾಗವಹಿಸಿ ಕ್ಯಾಸ್ಟನ್ ಹಾಲ್‍ನಿಂದ ಪಾರ್ಲಿಮೆಂಟಿನವರೆಗೆ ನಡೆದು, ಅಲ್ಲಿ ಪ್ರಧಾನ ಮಂತ್ರಿಗಳನ್ನು ಭೆಟ್ಟಿಯಾಗಲು ಪ್ರಯತ್ನಿಸಿದರು. ಆದರೆ ಅವರು ನಿರಾಕರಿಸಿದ್ದರಿಂದ ಈ ತಂಡ ಅಲ್ಲೇ ಕುಳಿತು ಘೋಷಣೆಗಳನ್ನು ಕೂಗುವುದಕ್ಕೆ ಪ್ರಾರಂಭಿಸಿದಾಗ ಪೊಲೀಸರು ಇವರ ಮೇಲೆ ಅತ್ಯಂತ ದೌರ್ಜನ್ಯದಿಂದ ವರ್ತಿಸಿದರು. ಈ ತಂಡದ ಅನೇಕರು ಗಾಯಗೊಂಡು ಇಬ್ಬರ ಮರಣಕ್ಕೂ ಪೋಲೀಸರ ದೌರ್ಜನ್ಯ ಕಾರಣವಾಯಿತು. ಅಂದಿನ ಗೃಹಮಂತ್ರಿ ಸರ್ ವಿನ್ಸ್ಟನ್ ಚರ್ಚಿಲ್ ಪೊಲೀಸರಿಗೆ ಉತ್ತೇಜನ ಕೊಟ್ಟರು ಅನ್ನುವ ಆರೋಪ ಸಹ ಬಂದಿತ್ತು.

೧೯೧೧ ರಲ್ಲಿ ನಡೆದ ಜನಗಣತಿಯಲ್ಲಿ (Census) ಭಾಗವಹಿಸುವುದಕ್ಕೆ ಸೋಫಿಯಾ ಮತ್ತು ಸಂಸ್ಥೆಯವರು ನಿರಾಕರಿಸಿದರು. ಸೋಫಿಯಾ ಜನಗಣತಿಯ ಚೀಟಿಯ ಮೇಲೆ ಈ ರೀತಿ ಬರೆದು ಚೀಟಿಯನ್ನು ಹಿಂತಿರಿಗಿಸಿದಳು (ಕೆಳಗೆ ಚಿತ್ರ ನೋಡಿ) - No Vote, No Census. As women do not count, they refuse to be counted; I have a conscientious objection to filling up this form.
No Vote, No Tax.

ಮತದಾನದ ಹಕ್ಕು ಇಲ್ಲದೆ ವರಮಾನ ತೆರಿಗೆ ಕೊಡುವುದಕ್ಕೂ ಸೋಫಿಯಾ ನಿರಾಕರಿಸಿದ್ದರಿಂದ ನ್ಯಾಯಾಲಯ £೧೨ ದಂಡ ಹಾಕಿತು. ಆದರೆ ಇದನ್ನು ಪ್ರತಿಭಟಿಸಿ ದಂಡವನ್ನು ಕಟ್ಟಲಿಲ್ಲವಾದ ಕಾರಣದಿಂದಿಂದ ಅವಳ ಕೆಲವು ಆಭರಣಗಳನ್ನು ವಶಪಡಿಸಿಕೊಂಡು ಹರಾಜು ಮಾಡಲಾಯಿತು. ಆದರೆ WSPUನ ಕಾರ್ಯದರ್ಶಿ ಈ ಹರಾಜಿನಲ್ಲಿ ಭಾಗವಹಿಸಿ ಆಭರಣಗಳನ್ನು ಕೊಂಡುಕೊಂಡು ಸೋಫಿಯಾಗೆ ವಾಪಸ್ಸು ಕೊಟ್ಟರು.

೧೯೧೪ ನಲ್ಲಿ ಮೊದಲನೇ ಮಹಾಯುದ್ಧ ಪ್ರಾರಂಭವಾದ್ದರಿಂದ ಮಹಿಳೆಯರು ತಮ್ಮ ಹೋರಾಟವನ್ನು ನಿಲ್ಲಿಸಿ, ದೇಶದ ಮತ್ತು ಸರಕಾರದ ಪರವಾಗಿ ನಿಂತು ಸಹಾಯ ಮಾಡುವುದಕ್ಕೆ ಸಿದ್ದರಾದರು. ಲಕ್ಷಾಂತರ ಭಾರತೀಯ ಸೈನಿಕರು ಈ ಯುದ್ಧದಲ್ಲಿ ಭಾಗವಹಿಸಿದ್ದರು, ಇವರ ಯೋಗಕ್ಷೇಮ ಕಾಯಲು ಸೋಫಿಯಾ ನೆರವಾಗಿ Red Cross ಸಂಸ್ಥೆಯ ಪರವಾಗಿ ಹಣ ಸಂಗ್ರಹಣೆ ಮಾಡಿದಳು. ಸ್ವತಃ ೧೯೧೫ರಲ್ಲಿ ಮಿಲಿಟರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ರೆಡ್‍ಕ್ರಾಸ್ ನರ್ಸ್ ಆಗಿ ಸೇರಿ ಸೇವೆ ಮಾಡಿದಳು. ೧೯೧೮ ರಲ್ಲಿ YMCA War Emergency Committee ಯ ಕಾರ್ಯದರ್ಶಿಯಾಗಿ, ಲಂಡನ್‍ನಲ್ಲಿ “ಧ್ವಜ ದಿವಸ” (Flag Day) ನಡೆದ ನಂತರ “ಭಾರತೀಯ ದಿವಸ” (India day)ದ ಆಚರಣೆಯನ್ನು ಮಾಡಿ, ೫೦೦೦೦ ವಸತಿಗೃಹಗಳನ್ನು ಗಾಯಗೊಂಡ ಭಾರತೀಯ ಸೈನಿಕರು ವಾಸಕ್ಕೆ ಒದಗಿಸಲು ಕಾರಣಳಾದಳು.
ಯುದ್ಧ ಮುಗಿದ ಮೇಲೆ (೧೯೧೮) ಆಂಗ್ಲ ಸರ್ಕಾರ "The Representation of the People Act" ಕಾನೂನು ಜಾರಿಯಾದಾಗ ೩೦ ವರ್ಷ ಮೀರಿದ ಮಹಿಳೆಯರಿಗೂ, ೧೯೨೮ ರ “Franchise Act” ಕಾನೂನು ಹೊರಬಂದಾಗ ೨೧ ವರ್ಷ ಮೀರಿದ ಮಹಿಳೆಯರಿಗೂ ಮತದಾನದ ಹಕ್ಕು ಬಂತು.

ಈ ದೇಶದಲ್ಲಿ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಇರುವ ಹಕ್ಕು ಮತ್ತು ಸ್ವಾತಂತ್ರಕ್ಕೆ ಕಾರಣ ಸೋಫಿಯಾ ಮತ್ತು ಅವಳ ಸಂಗಡಿಗರ ಹೋರಾಟವೇ ಕಾರಣ ಅನ್ನುವುದರಲ್ಲಿ ಸಂದೇಹವೇ ಇಲ್ಲ.
೨೨/೦೮/೧೯೪೮ ರಲ್ಲಿ ಸೋಫಿಯಾ ಬಕಿಂಗ್‍ಹ್ಯಾಮ್‍ಶೈರ್ನಲ್ಲಿರುವ ಪೆನ್ನ್ ಊರಿನಲ್ಲಿ ಅವಳ ತಂಗಿಯ ಮನೆಯಲ್ಲಿ ತನ್ನ ೭೨ನೇ ವಯಸ್ಸಿನಲ್ಲಿ ನಿಧನಾದಳು.  ರಾಜಕುಮಾರಿ ಸೋಫಿಯಾಳ ಅಂತ್ಯಕ್ರಿಯೆ Golders Green crematorium ನಲ್ಲಿ ೨೬/೦೮/೧೯೪೮ ರಂದು ನಡೆಯಿತು. ಅವಳ ಕೊನೆ ಇಚ್ಛೆ ತನ್ನ ಅಂತಕ್ರಿಯೆಯು ಸಿಖ್ ಪದ್ಧತಿಯಲ್ಲಿ ನಡೆಯಬೇಕೆಂದು ಇತ್ತು. 

ಸೋಫಿಯಾಗೆ ದೊರೆತ ಮರಣೋತ್ತರ ಮಾನ್ಯತೆಗಳು ಅನೇಕ; ರಾಯಲ್ ಮೇಲ್‍ನವರ "Votes for Women" ದಿನಾಚರಣೆಯಲ್ಲಿ ೧೫/೦೨/೨೦೧೮ ಸೋಫಿಯಾ The Suffragette ಪತ್ರಿಕೆಯನ್ನು ಮಾರುತ್ತಿರುವ ಚಿತ್ರವುಳ್ಳ ಅಂಚೆಚೀಟಿ (postage stamp) ಬಿಡುಗಡೆ ಆಯಿತು.

ಏಪ್ರಿಲ್ ೨೦೧೮ ರಲ್ಲಿ ಪಾರ್ಲಿಮೆಂಟ್ ಮುಂದಿರುವ ಕಂಬದ ಮೇಲೆ ಸೋಫಿಯಾಳ ಚಿತ್ರ ಮತ್ತು ಹೆಸರನ್ನು ಕೆತ್ತಲಾಗಿದೆ.
A Princess' Guide to Burning Issue ಅನ್ನುವ ಮಕ್ಕಳಿಗಾಗಿ ಮಾಡಿದ ನಾಟಕ ಅನೇಕ ಶಾಲೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.
English Heritage ನವರು ಹ್ಯಾಂಪ್ಟನ್ ಕೋರ್ಟ್‍ನ ಹತ್ತಿರದ ಮನೆಯ ಮೇಲೆ ನೀಲಿ ಫಲಕದ (Blue Plaque) ಅನಾವರಣೆಯನ್ನು ೨೦೨೩ರಲ್ಲಿ ಮಾಡಿದರು.

ಸೋಫಿಯಾ ಜೀವನ ಚರಿತ್ರೆಯ ಬಗ್ಗೆ ಅನೇಕ ಲೇಖನಗಳು ಮತ್ತು ಪುಸ್ತಕಗಳು ಪ್ರಕಟವಾಗಿವೆ. ಉದಾಹರಣೆಗೆ, ಅನಿತಾ ಆನಂದ್ ಅವರ Suffragette Revolutionary (೨೦೧೫, ISBN ೯೭೮೧೪೦೮೮೩೫೪೫೬).

ಕೊನೆಯ ಮಾತು: ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ೧೯೨೮ರಲ್ಲಿ, ಅದೂ ೨೧ ವರ್ಷಕ್ಕೆ ಮೀರಿದವರಿಗೆ ಮಾತ್ರ ದೊರೆತಿತ್ತು; ದಕ್ಷಿಣ ಭಾರತದಲ್ಲಿ, ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ೧೯೨೩ ರಲ್ಲಿಯೇ ಮಹಿಳೆಯರಿಗೆ ಈ ಹಕ್ಕನ್ನು ಕೊಟ್ಟಿದ್ದರ ಮಹತ್ವವನ್ನು ಇಲ್ಲಿ ಮರೆಯಬಾರದು.

- ರಾಮಮೂರ್ತಿ ಎಚ್ ಎನ್.
ಕಾಂಗಲ್‍ಟನ್, ಚೆಶೈರ್.

********************