ವಸುಧೇಂದ್ರ ಅಂದ್ರೆ ನಮಗೆಲ್ಲ ಇಷ್ಟ!

ಈ ವಾರದ ಪ್ರಸ್ತುತಿ ಅಪರೂಪದ ವಸುಧೇಂದ್ರ ಬಂಪರ್ ಸಂಚಿಕೆ! ಕಳೆದ ಮಾರ್ಚ್ ೧೫ನೆಯ ತಾರೀಕು (೨೦೨೫) ’ಅನಿವಾಸಿ’ಯ ಓದುಗರು, ಬರಹಗಾರರು ಮತ್ತು ಕನ್ನಡ ಸಾಹಿತ್ಯಾಸಕ್ತರು ಹಲವರು ಇಂಗ್ಲೆಂಡಿನ ಲಿಂಕನ್ ನಗರದ ಸಮೀಪದ ಸ್ಕೆಲ್ಲಿಂಗ್ಥಾರ್ಪ್ದಲ್ಲಿಯ ಸಾಹಿತಿ-ಬರಹಗಾರ್ತಿ ಡಾ ಪ್ರೇಮಲತ ಅವರ ಮನೆಯಲ್ಲಿ ವಸುಧೇಂದ್ರ ಅವರ ಭೇಟಿಗೆ ಉತ್ಸಾಹದಿಂದ ನೆರೆದಿದ್ದರು. ಅವರೊಡನೆ ನಾಲ್ಕು ತಾಸುಗಳಿಗಿಂತ ಹೆಚ್ಚು ಕಾಲ ಕಳೆದ ಸಮಯವನ್ನು ತಮ್ಮ ಜೀವನದ ಅವಿಸ್ಮರಣೀಯ ಘಳಿಗೆಗಳು ಅಂತ ತಿಳಿದುಕೊಂಡರು. ಇನ್ನುಳಿದವರಿಗೆ ಏನು ಮಿಸ್ಸಾಯಿತು ಎನ್ನುವದರ ಒಂದೆರಡು ಝಲಕ್ಕುಗಳನ್ನು ಅಲ್ಲಿ ನೆರೆದಿದ್ದವರಲ್ಲಿ ಕೆಲವರು ಕೆಳಗೆ ಹಂಚಿಕೊಂಡಿದ್ದಾರೆ.
ಮೊದಲನೆಯದಾಗಿ ಶ್ರೀವತ್ಸ ದೇಸಾಯಿಯವರು ಸಭೆಗೂ ಮುಂಚೆಯ ತಮ್ಮ ಅನುಭವದ ಬಗ್ಗೆ ಪೀಠಿಕೆಯ ರೂಪದಲ್ಲಿ ಬರೆದಿದ್ದಾರೆ. ಅದಾದ ಮೇಲೆ ಆ ಸಭೆಯ ಕಾರ್ಯಕಲಾಪಗಳ ಬಗ್ಗೆ ಶ್ರೀಮತಿ ಅನುರಾಧ ಜಗಲೂರು ಅವರ ಅನಿಸಿಕೆಗಳನ್ನು ಸುಂದರವಾಗಿ ಮತ್ತು ಸವಿಸ್ತಾರವಾಗಿ ಬರೆದಿದ್ದಾರೆ. ಡಾ ಪ್ರೇಮಲತಾ ಬಿ ಅವರು ತಮ್ಮ ಫೇಸ್ ಬುಕ್ ಲೇಖನವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಆಮೇಲೆ ವಸುಧೆಂದ್ರ  ಅವರ ಪುಸ್ತಕದ ತಮ್ಮ ಕಾಪಿಯ ಮೇಲೆ ಹಸಹಿ ಗಿಟ್ಟಿಸಿದ ಖುಷಿಯಲ್ಲಿ ಒಂದು  ಚಿಕ್ಕ ಲೇಖನದಲ್ಲಿ ತಮ್ಮ ಅನಿಸಿಕೆಗಳನ್ನು ಮೊದಲ ಬಾರಿ ಬರೆದಿದ್ದಾರೆ ಲೆಮಿಂಗ್ಟನ್  ಸ್ಪಾದ  ಅಮಿತ್ ರಾಮ್. ಅವರ ಲೇಖನದಲ್ಲಿ ಕಟ್ಟ ಕಡೆಯ ವಿಡಿಯೋದ ಉಲ್ಲೇಖವಿದೆ. ಕೊನೆಯ ಲೇಖನ ತಮ್ಮ ಕೆಲಸ ಮುಗಿಸಿ  ಡಾರ್ಬಿಯಿಂದ ತಡವಾದರೂ ಬಂದು ಕೂಡಿದ ರಾಂಶರಣ್ ಅವರದು.. ಎಲ್ಲರ ಲೇಖನದಲ್ಲೂ ವಸುಧೇಂದ್ರ ಅವರ ಅತಿ ಸರಳ ವ್ಯಕ್ತಿತ್ವದ ಪರಿಚಯ, ಆತ್ಮೀಯತೆ ಇವುಗಳ ಉಲ್ಲೇಖವಿದೆ. ಅದು ಸಾಕಾಗದಿದ್ದರೆ ಕೊನೆಯಲ್ಲಿ ಕೊಟ್ಟ ಗ್ಯಾಲರಿ ಫೋಟೋಗಳನ್ನು ನೋಡಿ ಭೇಟಿಯಾಗಲು ಸಾಧ್ಯವಾಗದವರು ಸಮಾಧಾನ ಪಟ್ಟುಕೊಳ್ಳ ಬಹುದು. ಕೊನೆಯದಾಗಿ ನಿಮ್ಮ ಅನಿಸಿಕೆಗಳನ್ನು ಅನಿವಾಸಿಯಲ್ಲಿ ಹಂಚಿಕೊಂಡು ಉಪಕಾರ ಮಾಡಿರಿ!(ಸಂ)

1  ಸಭೆಗೂ ಮೊದಲು — ಶ್ರೀವತ್ಸ ದೇಸಾಯಿ ಬರೆಯುತ್ತಾರೆ:

"ಶನಿವಾರ ೧೨ ಗಂಟೆಗೇ ಬಂದುಬಿಡಿ," ಅಂತ ಪ್ರೇಮಲತಾ ಹೇಳಿದ್ದರಿಂದ ಶನಿವಾರ ೧೫ ನೆಯ ಮಾರ್ಚ್ ಲೆಸ್ಟರಿನಿಂದ ಬೇಗನೆ ಹೊರಟೆ.
ಮಧ್ಯದಲ್ಲಿ ನಿಂತು ಪುಷ್ಪ, ತೀರ್ಥ ( ಪ್ರೊಸೆಕ್ಕೋ) ಧೂಪ ಇಲ್ಲ(ಧೂಮ್ರಪಾನವರ್ಜ್ಯ!) ಚಾಕಲೇಟು ಕಾರಿನಲ್ಲಿ ಹೇರಿದ್ದಕ್ಕೆ ಸ್ವಲ್ಪ ತಡವಾದರೂ ಇನ್ ಟೈಮ್ ಅನ್ಕೋತ ಹೊರಟವನಿಗೆ ಎಚ್ಚರಿಕೆ ಬಂತು ಕಾರಿನಿಂದ: ಡ್ಯಾಶ್ ಬೋರ್ಡ್ ಮೇಲೆ 'ಪಿಂಗ್' ಆತು ಕಾರಿನ ಮೆಸೇಜ್ಜ್: ಚೆಕ್ ಟೈರ್ ಪ್ರೆಶರ್ ಅಂತ. ಬ್ಲಡ್ ಪ್ರೆಶರ್ ಇನ್ನಷ್ಟು ಏರಿದ್ದು ನನಗೇ! ಮೊನ್ನೆ ತಾನೇ ಇನ್ನೊಂದು ಟಯರಿಗೆ ಚುಚ್ಚಿದ್ದ ಮೊಳೆ ಕಿತ್ತಿಸಿ ರಿಪೇರ್ ಮಾಡಿಸಿದ್ದೆ. ಇದೇನಪ್ಪಾ ಮತ್ತೆ ಅಂತ ಫುಸ್ಸೆಂದು ಗಾಳಿ ಹೋದ ಫುಗ್ಗಾದಂತೆ ಇಳಿದುಬಿಟ್ಟೆ- wind out of my sail ತರ. ಕಂಠ(ಸ್ತ)ದಲ್ಲಿ ಪಂಪನಿರದಿದ್ದರೂ ಕಾರಿನಲ್ಲಿ ಇತ್ತೀಚಿಗೆ ಯಾವಾಗಲೂ ಇಟ್ಟಿದ್ದ ಪಂಪನಿಂದ ಟಯರ್ಗೆ ಗಾಳಿ ಹಾಕಿ ಬಚಾವಾದೆ. ಮುಂದೆ ಮತ್ತೆ ಲೀಕ್ ಕಾಣಿಸದೆ ಪ್ರೇಮಲತಾ ಅವರ ಮನೆಯನ್ನು ಸುರಕ್ಷಿತವಾಗಿ ಮುಟ್ಟಿದೆ.
ಒಳೆಗೆ ಪಾರ್ಕ್ ಮಾಡುತ್ತಿದ್ದಾಗ ನನ್ನದು ಬರೀ ಮೂರನೆಯ ಕಾರು ಮಾತ್ರ ಅಂತ ಆಶ್ಚರ್ಯ! ಇನ್ನಾರೂ ಬಂದೇ ಇಲ್ಲವೇ ಅನ್ನುವಷ್ಟರಲ್ಲಿ ಎಂದಿನಂತೆ ರಿಲೈಯಬಲ್ ಸ್ಮಿತಾ ಮತ್ತು ಗೋಪಾಲ್ ಒಳಗೆ ಇದ್ದದ್ದು ಗೊತ್ತಾಯಿತು. ಸೇವರಿ ಡೋ ನಟ್ (ವಡೆ) ತಿನ್ನಲು ಆಮಿಷ ತೋರಿಸಿದರೂ ಸಂಕೋಚದಿಂದ ಬರಿ ಟೀ ಸಾಕೆಂದೆ. ಕಾಲು ಗಂಟೆ ತಡವಾಗಿತ್ತು ಆಗಲೇ ಅಂತ. ಮಲ್ಟಿಟಾಸ್ಕಿಂಗ್ ಪ್ರವೀಣೆಯಾದರೂ ನನಗೇ ಚಹಾ ಮಾಡಿಕೊಳ್ಳಲು ಹಚ್ಚಿದರು ಪ್ರೇಮಲತಾ! ತಾವೆಂದೂ ಟೀ ಕಾಫಿ ಕುಡಿಯದ 'ಟೀ ಟೋಟಲ್ಲರ್ ' ಅನ್ನುವ ರಹಸ್ಯ ಬಿಟ್ಟು ಕೊಟ್ಟ ಮೇಲೆ ಅರ್ಥವಾಯಿತು. ಅತ್ತ ಗೋಪಾಲ್ ಕಾಫಿ ಮಶೀನಿಗೆ ಕೈಹಾಕಿದ್ದರು ಅವರು ಆಗಲೇ ವಡೆ ತಿಂದಿದ್ದರೆಂದು ಹೇಳುತ್ತ. ಸನ್ನತಾ ಸಹ ಡೈನಿಂಗ್ ಟೇಬಲ್ ಮೇಲೆ. ಕೊನೆಗೆ ಕೋಲ್ಡ್ ಕಾಫಿ ಗಿಟ್ಟಿಸಿ ಸಮಾಧಾನ ಪಟ್ಟರು ಅವರು. ಆಮೇಲೆ ಶಶಿಧರ ಅವರ ಅನುಪಸ್ಥಿತಿಯಲ್ಲಿಯೂ ಅವರಿಗೆ ಬಿಸಿ ಪೇಯ ಸಿಕ್ಕಿತು ಅನ್ನಿ. ಅವರು ವಸುಧೇಂದ್ರರನ್ನು ಕರೆದು ಕೊಂಡು ಎಲ್ಲರೂ ಬರುವ ಮೊದಲು ಊರು ತೋರಿಸಲು ಹೋಗಿದ್ದರು. ಆ "ಎಲ್ಲರೂ" ಕೊನೆಗೆ ಆದದ್ದು ಅನುರಾಧ ಮತ್ತು ಹರ್ಷ ದಂಪತಿಗಳಷ್ಟೇ, ಲೇಟ ಅರೈವಲ್ ಲೆಮಿಂಗ್ಟನ್ ತ್ರಿಮೂರ್ತಿಗಳನ್ನು ಬಿಟ್ಟರೆ- ಅಮಿತ್ ರಾವ್, ಸಾಗರ್ ದೇಸಾಯಿ ಮತ್ತು ಸುಬ್ರಹ್ಮಣ್ಯ. (ಕೆಲಸವಿತ್ತೆಂದು ಬರಲಾಗದೆ ಆರರ ನಂತರ ಲೇಟಾಗಿ ಬಂದ ರಾಂ ರಾತ್ರಿ ಹತ್ತರ ವರೆಗೆ ಇದ್ದರೆಂದು ಆಮೇಲೆ ವರದಿ ಬಂತು! ಅವರ ಲೇಖನವೂ ಕೆಳಗೆ ಇದೆ.)
ಅದೆಷ್ಟು ದಿನ ಪರಿಶ್ರಮ ಪಟ್ಟಿದ್ದರೋ, ಪ್ರೇಮಾ ಮತ್ತು ಶಶಿಧರ ಕಿಚನ್ ತುಂಬಾ ತಿಂಡಿ ಊಟ, ಸ್ನಾಕ್ಸ್ ಹರಡಿ ಬಿಟ್ಟಿದ್ದರು. ಬಿಬಿಬಿ (ಬಿಸಿ ಬೇಳೆ ಭಾತ್), ರಸಂ, ಅನ್ನ, ಮೊಸರನ್ನ, ಚಪಾತಿ, ವಡೆ,ಇಡ್ಲಿ, ತರತರದ ಚಟ್ನಿ , ಮಸಾಲೆ ಮಜ್ಜಿಗೆ ಹೀಗೆಯೇ ನನಗೆ ಗೊತ್ತಿರದ ಕೆಲವು, ಎಲ್ಲ ಬರದಂಥ ಅತಿಥಿಗಳಿಗಾಗಿ ಕಾಯುತ್ತ ಬಿಕೋ ಅಂತಿದ್ದವು. ಅನತಿ ಸಮಯದಲ್ಲೇ ಬಂದ ಜಗಳೂರು ದಂಪತಿಗಳು ಕಾಫಿ ವಡೆ ( ನಾನೂ ಸೇರಿಕೊಂಡೆ ಚಪ್ಪರಿಸುತ್ತ ). ಮಾತಾಡುತ್ತ ಅವರು ಚುಕ್ಕ್ಕಿ ಬಾಳೆಹಣ್ಣಿನ ಕಥೆಯನ್ನು ನೆನಪಿಸಿ ಹೇಳಿದರು. ನನಗೂ ಅದು ಮಿಸ್ಸಾಗಿತ್ತು. ( ಕೇಳಿ-ಓದಿರದಿದ್ದರೆ ಕೊನೆಗೆ ಕೊಟ್ಟಿದೆ!). ನಾವ್ಯಾರೂ ಅವರನ್ನು ಈ ಮೊದಲು ಭೇಟಿಯಾಗಿರಲಿಲ್ಲ ಅಂತ ನಾನು ತಿಳಿದಿದ್ದೆ. ಹಿಂದಿನ ದಿನವಷ್ಟೇ ಪ್ರೇಮಲತಾ ಮಾತ್ರ ಅವರೊಡನೆ "The Mouse trap” ನಾಟಕ ನೋಡಿದ್ದು ಬಿಟ್ಟರೆ. ನಮ್ಮೆಲ್ಲರ ಉತ್ಸಾಹ, ನಿರೀಕ್ಷೆ ಮೀರಿ ಯಶಸ್ವಿಯಾಗಲಿದೆ ಅನ್ನುವ ಕಲ್ಪನೆಯೇ ಇರಲಿಲ್ಲ ಆಗ. ನಾಲ್ಕು ತಾಸು ಅವರೊಡನೆ ಮಾತು,(ಅದರಲ್ಲಿ ಅವರದೇ ಸಿಂಹ ಪಾಲು) ಸಾಹಿತ್ಯ, ಚರ್ಚೆ, ಹರಟೆ, ನಗೆಚಾಟಿಕೆಯಲ್ಲಿ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಈ ಭೇಟಿ ನನ್ನ ಊಹೆ ಮೀರಿ ನನಗೆ ತೃಪ್ತಿ ಕೊಟ್ಟಿತು. ಇಂದು ಇದನ್ನು ಬರೆಯುತ್ತಿರುವಾಗಲೂ ಮೂರು ದಿನ ಆದರೂ ಇನ್ನೂ ಅದೇ ಗುಂಗಿನಲ್ಲಿದ್ದೇನೆ. ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಬೇರೆಯಾಗಿ ಬರೆಯಲಿದ್ದಾರೆಂದು ( ಕೆಳಗೆ ನೋಡಿ) ಇದನ್ನು ಪೂರ್ವ ಪೀಠಿಕೆ ಅಂತ ಹಂಚಿಕೊಳ್ಳುತ್ತಿದ್ದೇನೆ.
KSSVV (ಅನಿವಾಸಿಯ ಹಿಂದಿನ ರೂಪದ) ದಶಮಾನೋತ್ಸವ ಮಾಡಿದ ಮೇಲೆಯೇ ಪ್ರಥಮ ಸಲ ಭೇಟಿಯಾಗಲಿದೆ ಅಂತ ಕಾತರದಿಂದ ಎದುರು ನೋಡಿದ್ದೆ. ನನಗೆ ಮೊದಲಿನಿಂದಲೂ ಇತಿಹಾಸ ಇಷ್ಟ. ತೇಜೋ ತುಂಗಭದ್ರಾ ಮತ್ತು ರೇಷ್ಮೆ ಬಟ್ಟೆ ಎರಡನ್ನೂ ಓದಿ ಮೆಚ್ಚಿದ್ದೇನೆ. ಅದರಲ್ಲಿಯ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಅವರು ಹೆಣೆದ ರೀತಿ ನೋಡಿ ಅಚ್ಚರಿ ಪಟ್ಟಿದ್ದೇನೆ. ಎರಡನ್ನೂ ಹೆಚ್ಚು ಸಮಯ ತೊಗೊಳ್ಳದೆ ಬರೆದದ್ದು ಊಹಿಸಲೂ ಕಷ್ಟ. ಅವರ ಓದುವ ಮತ್ತು ಬರೆಯುವ ವಿಧಾನವನ್ನು ತಿಳಿದುಕೊಳ್ಳಲು ಎದುರು ನೋಡುತ್ತಿದ್ದೆ. The Silk Road ಬಗ್ಗೆ ತಿಳಿದದ್ದು ದೊಡ್ಡವರಾದ ಮೇಲೆಯೇ. ಕಾಗದ ಮಾಡಲು ಯಾವಾಗಲೋ ಕಲಿತರು ಚೀನರು ಅಂತ 'ರೇಷ್ಮೆ ಬಟ್ಟೆ’ ಯಲ್ಲಿ ಓದಿದ್ದು ನನಗೆ ವಿಶೇಷವಾಗಿ ಆಕರ್ಷಣೆ. ಯಾಕೆಂದರೆ ಚಿಕ್ಕವನಿದ್ದಾಗಿನಿಂದ ನನ್ನ ಆರ್ಕಿಯಾಲಜಿಸ್ಟ್ ತಂದೆಯವರು ಶಿಲಾ ಶಾಸನಗಳಲ್ಲಿಯೇ ಮುಳುಗಿದ್ದುದನ್ನು ನೋಡಿದೇ ಕಾರಣವಾಗಿರ ಬೇಕು. ಅದರ ಬಗ್ಗೆ ಮತ್ತು ವೃತ್ತಿಯಲ್ಲಿ ಕಣ್ಣಿನ ಡಾಕ್ಟರಾಗಿ ನಾಲ್ಕು ದಶಕ ಕಳೆದದ್ದರಿಂದ ಒಂದೆರಡು ನಾಜೂಕಾದ ವಿಷಯಗಳ ಬಗ್ಗೆಯೂ ಪ್ರಶ್ನೆ ಕೇಳುವ ಉದ್ದೇಶವಿತ್ತು.
ಈ ವಾರ ವಸುಧೇಂದ್ರ ಅವರು ತಮ್ಮ ಮಾತಿನಲ್ಲಿ ಎರಡು ಸಲ "ಭಂಡತನ" ಎನ್ನುವ ಶಬ್ದ ಉಪಯೋಗಿಸಿದರು. ನಾವಿನ್ನೂ ಚಳಿ ಚಳಿ ಅಂತ ಇಂಗ್ಲೆಂಡಿನ ಹವಾಮಾನದ ಬಗ್ಗೆ ಮಾತಾಡುತ್ತಿದ್ದಾಗ ತಮ್ಮtop ಮೇಲೆ ಒಂದು ತೆಳ್ಳಗಿನ ಹೊದಿಕೆಯೊಂದನ್ನಷ್ಟೇ ಧರಿಸಿ ಮಾರ್ಚ ಚಳಿಯಲ್ಲಿ ಕಾರಿನಲ್ಲಿ ತಿರುಗಾಡಲು ಹೋದವರು ಒಳಗೆ ಬಂದರು ಶಶಿಧರ ಅವರ ಜೊತೆಗೆ. ಇಷ್ಟರ ಮೇಲೆಯೇ ಒಬ್ಬರೇ ಕಿಲಿಮಾಂಜಾರೋ ಸಹ ಹತ್ತಿದ್ದರಂತೆ! ನಮಗೆ ಆಶ್ಚರ್ಯ! ಅನೋರಾಕ್ ಇಲ್ಲದೆ ಎಲ್ಲೂ ಹೋಗದ ನಾನು ಅವರದು "ಭಂಡತನ" ಅಂದು ಕೊಂಡೆ! ಮೊದಲು ಗ್ರುಪ್ ಫೋಟೋ ತೆಗೆಸಿಕೊಂಡು ಕಾಫಿ- ಟೀ ಕುಡಿದು ಪರಸ್ಪರ ಪರಿಚಯ ಮಾಡಿಕೊಂಡು “ಸಭೆ” ಪ್ರಾರಂಭ ಮಾಡಿದೆವು.
ಪ್ರೇಮಲತಾ ಅವರ ಕೋರಿಕೆಯ ಮೇಲೆ ಸಭೆಗೆ ಇನ್ವೋಕೇಶನ್ ಹಾಡು ಅನುರಾಧ ಜಗಲೂರು ಅವರ ಕೊರಳಿಗೆ ಬಿತ್ತು.
ಆ ಸಭೆಯ ಕಾರ್ಯಕಲಾಪಗಳ ಬಗ್ಗೆ, ಮತ್ತು ತಮ್ಮ ಅನಿಸಿಕೆಗಳನ್ನು ಅವರು ಸುಂದರವಾಗಿ ಮತ್ತು ಸವಿಸ್ತಾರವಾಗಿ ಬರೆದ ಪ್ರಬುದ್ಧ ಲೇಖನವನ್ನು ಕೆಳಗೆ ಓದಿರಿ.

ಶ್ರೀ ವಸುಧೇಂದ್ರ ಅವರೊಡನೆ ಶ್ರೀಮತಿ ಅನುರಾಧ ಜಗಲೂರು
2 ಶ್ರೀ ವಸುಧೇಂದ್ರ ಅವರೊಡನೆ ಒಂದು ಅಪೂರ್ವ ಸಂಭಾಷಣೆ - ಶ್ರೀಮತಿ ಅನುರಾಧ ಜಗಲೂರು ಬರೆಯುತ್ತಾರೆ:
‘ಐದು ಪೈಸೆ ವರದಕ್ಷಿಣೆ’ ಎಂಬ ಲಲಿತ ಪ್ರಬಂಧಗಳ ಸಂಕಲನದ ಮೂಲಕ ನನಗೆ ಲೇಖಕ ಶ್ರೀ ವಸುಧೇಂದ್ರ ಅವರ ಪರಿಚಯವಾಯಿತು. ನಂತರ ಸ್ವಲ್ಪ ದಿನಗಳಲ್ಲೇ ‘ತೇಜೋ ತುಂಗಭದ್ರಾ’ ಕಾದಂಬರಿಯನ್ನು ಓದಿ ಬಹಳ ಸಂತೋಷಪಟ್ಟೆ. ಐತಿಹಾಸಿಕ ಕಾದಂಬರಿಗಳನ್ನು ಬರೆಯುವುದೆಂದರೆ ಸುಲಭವೇ? ಅದೆಷ್ಟು ಸಂಶೋಧನೆ ನಡೆಸಬೇಕು! ಒಂದರಲ್ಲೊಂದು ಹೆಣೆದುಕೊಂಡಿರುವ ನಾನಾ ಎಳೆಗಳ ಹಲವಾರು ಕಥೆಗಳನ್ನು ಹುಟ್ಟುಹಾಕಬೇಕು. ಅವುಗಳ ಮಧ್ಯೆ ನಿಜವಾಗಿಯೂ ನಡೆದ ಐತಿಹಾಸಿಕ ಘಟನೆಗಳನ್ನು ಪೋಣಿಸಬೇಕು. ಕಥೆಯಲ್ಲಿ ಬರುವ ಭಾಷೆ, ಹೆಸರುಗಳು, ಸಾಮಾಜಿಕ ನೀತಿ ನಿಯಮಗಳು ಆ ಕಾಲಕ್ಕೆ ಸರಿಹೊಂದುತ್ತವೆಯೆಂದು ಖಚಿತಪಡಿಸಿಕೊಳ್ಳಬೇಕು. ಜೊತೆಗೆ, ಸಾರ್ವಕಾಲಿಕವಾದ ಮಾನವ ಸಹಜ ಭಾವನೆಗಳನ್ನೂ, ನಡುವಳಿಕೆಯನ್ನೂ ಕಥೆಯಲ್ಲಿ ಸೇರಿಸಿ, ಸಮಕಾಲೀನ ಓದುಗರ ಹೃದಯವನ್ನು ಸ್ಪಂದಿಸಬೇಕು. ಉಪಕಥೆಗಳನ್ನು ಅಲ್ಲಲ್ಲಿ ಚಿಮುಕಿಸಿ ಅಲಂಕರಿಸಬೇಕು, ಕಥೆಯನ್ನು ಪುಷ್ಟಿಗೊಳಿಸಬೇಕು. ‘ತೇಜೋ ತುಂಗಭದ್ರಾ’ ದಲ್ಲಿ ವಸುಧೇಂದ್ರ ಅವರು ಇವೆಲ್ಲವನ್ನೂ ಎಷ್ಟು ಯಶಸ್ವಿಯಾಗಿ ಮಾಡಿದ್ದಾರೆಂದರೆ, ನಾನು ಅವರ ಖಾಸಾ ಅಭಿಮಾನಿಯಾದೆ. ಅವರ ಮತ್ತೊಂದು ಐತಿಹಾಸಿಕ ಕಾದಂಬರಿ ‘ರೇಷ್ಮೆ ಬಟ್ಟೆ’ ಹೊರಬಂದಿದೆ ಎಂದು ಕೇಳಿ ಆದಷ್ಟು ಬೇಗ ಅದನ್ನು ತರಿಸಿಕೊಂಡು ಓದಿ ಆನಂದಿಸಿದೆ.

ಓದು ಮುಗಿಸಿದ ಕೆಲವೇ ದಿನಗಳಲ್ಲಿ, ವಸುಧೇಂದ್ರ ಅವರು ಇಂಗ್ಲೆಂಡಿಗೆ ಬರುತ್ತಿದ್ದಾರೆಂದು ತಿಳಿಯಿತು. ಲಂಡನ್ನಿನಲ್ಲಿ ನಾಲ್ಕು ದಿವಸವಿದ್ದು, ತಾವು ಬಂದ ಕೆಲಸವನ್ನು ಮುಗಿಸಿ, ಲಿಂಕನ್ನಿನಲ್ಲಿ ಶ್ರೀಮತಿ ಪ್ರೇಮಲತಾ ಶಶಿಧರ್ ಅವರ ಮನೆಯಲ್ಲಿ ಒಂದು ದಿವಸ ತಂಗುವುದಾಗಿಯೂ, ಅಲ್ಲಿ ಓದುಗರನ್ನು ಭೇಟಿಯಾಗಲು ಒಪ್ಪಿದ್ದಾರೆ ಎಂಬುದೂ ತಿಳಿದು ಬಂತು. ಇತ್ತೀಚೆಗಷ್ಟೇ ಪರಿಚಯವಾಗಿದ್ದ ಶ್ರೀಮತಿ ಪ್ರೇಮಲತಾ ಅವರು ನಮ್ಮನ್ನು ಬಹಳ ವಿಶ್ವಾಸದಿಂದ ಕಾರ್ಯಕ್ರಮಕ್ಕೆ ಆಮಂತ್ರಿಸಿದರು. ಮರುಯೋಚನೆಯಿಲ್ಲದೆ ಮೂರು ಘಂಟೆ ಪ್ರಯಾಣ ಮಾಡಿ ವಸುಧೇಂದ್ರ ಅವರನ್ನು ಭೇಟಿಯಾಗಲು ಮನೆಯವರೊಂದಿಗೆ ಹೊರಟೆ. ಪ್ರೇಮ ಅವರ ಮನೆಯಲ್ಲಿ ಅದೆಂತಹ ರಸದೌತಣ! ಹೊಟ್ಟೆಗೆ ಬಿದ್ದ ಬಿಸಿಬೇಳೆ ಭಾತ್, ಕ್ಯಾರಟ್ ಹಲ್ವಾ, ಇತ್ಯಾದಿ ಊಟದ ವಿಷಯವನ್ನಷ್ಟೇ ಹೇಳುತ್ತಿಲ್ಲ! ಹಲವೇ ಆಸಕ್ತರ ಆತ್ಮೀಯ ಸಭೆಯಲ್ಲಿ ಕುಳಿತು ನಾಲ್ಕು ಘಂಟೆಗಳ ಕಾಲ ವಸುಧೇಂದ್ರ ಅವರ ಮಾತನ್ನು ಕೇಳುತ್ತ, ಅವರೊಡನೆ ಸಂಭಾಷಣೆಯಲ್ಲಿ ತೊಡಗುವ ಅವಕಾಶ ಯಾರಿಗುಂಟು ಯಾರಿಗಿಲ್ಲ!
------------------------
ಎಲ್ಲರೂ ಸೇರಿದ ಮೇಲೆ, ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುವಾಗಲೇ ವಸುಧೇಂದ್ರ ಅವರು ಎಂತಹ ಸರಳ ವ್ಯಕ್ತಿ ಎನ್ನುವ ಸೂಚನೆ ಸಿಕ್ಕಿತು. ಎಲ್ಲರೂ ಕುಳಿತ ಕೂಡಲೇ ಪ್ರಶ್ನೆಗಳ ಸುರಿಮಳೆಯಾಯಿತು. ಬರೆಯುವುದಕ್ಕೆ ಅವರಿಗೆ ಪ್ರೇರಣೆ ಎಲ್ಲಿಂದ ಬಂತು? ಯಾವಾಗಿನಿಂದ ಬರೆಯಲು ಪ್ರಾರಂಭಿಸಿದರು? ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಅವರಿಗೆ ಬರೆಯಲು ಸಮಯ ಹೇಗೆ ಸಿಗುತ್ತಿತ್ತು? ಇತ್ಯಾದಿ.

ಶಾಲೆಯಲ್ಲಿದ್ದಾಗ ವಸುಧೇಂದ್ರ ಅವರು ಒಂದು ಸಣ್ಣ ಕಥೆ ಬರೆದಿದ್ದು, ಅದು ನಿಯತಕಾಲಿಕವೊಂದರಲ್ಲಿ ಬೆಳಕು ಕಂಡಿತ್ತಂತೆ, ಅದರೆ ತಾನು ಲೇಖಕನಾಗಬೇಕೆಂಬ ಆಸೆಯೇನೂ ಅವರಿಗೆ ಹುಟ್ಟಿರಲಿಲ್ಲ. ಇಂಜಿನಿಯರಿಂಗ್ ಓದಿ, ಸುಮಾರು ೨೦ ವರ್ಷಗಳ ಕಾಲ ಕೆಲಸ ಮಾಡಿದ ನಂತರ ಉದ್ಯೋಗ ಸ್ವಲ್ಪ ಬೇಸರ ತರಲು ಪ್ರಾರಂಭವಾದಾಗ, ಹಿಂದೆ ಕಥೆ ಬರೆದದ್ದು, ಮಾಸ್ತರೊಬ್ಬರು ಉತ್ತೇಜನ ನೀಡಿ ಹೊಗಳಿದ್ದು ನೆನಪಿಗೆ ಬಂತು. ಮತ್ತೆ ಏಕೆ ಬರೆಯಬಾರದು ಎಂಬ ಯೋಚನೆ ಹುಟ್ಟಿ, ಬರೆಯಲು ಪ್ರಾರಂಭಿಸಿದರು.

ಅಂದುಕೊಂಡ ಮಾತ್ರಕ್ಕೆ ಉದ್ಯೋಗವನ್ನು ಕಳಚಿ ಲೇಖಕನಾಗಲು ಸಾಧ್ಯವೇ? ಹೊಟ್ಟೆ ಪಾಡು ನೋಡಬೇಕಲ್ಲ? ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕೆಲಸ, ಜೀವವನ್ನು ಹಿಂಡಿ ತಿನ್ನುವಂತಹದ್ದು. ಸಮಯದ ತೀವ್ರ ಅಭಾವ. ಆದರೆ ಬರೆಯಲೇಬೇಕೆಂಬ ಹಠ. ಹೀಗಾಗಿ, ತಮ್ಮ ಕಾರಿಗೆ ಡ್ರೈವರ್ ಒಬ್ಬನನ್ನು ಗೊತ್ತುಪಡಿಸಿ, ಪ್ರತಿದಿನ ಬನ್ನೇರುಘಟ್ಟದ ತಮ್ಮ ಮನೆಯಿಂದ ವೈಟ್ ಫೀಲ್ಡ್ ಗೆ ಹೋಗುವಾಗ ಒಂದೂವರೆ ಘಂಟೆ, ಮತ್ತೆ ರಾತ್ರೆ ಮನೆಗೆ ಹಿಂದಿರುಗುವಾಗ ಒಂದೂವರೆ ಘಂಟೆ, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಲ್ಯಾಪ್ಟಾಪ್ ಮೇಲೆ ಕಥೆ ಬರೆಯುತ್ತಿದ್ದರು. ಮೊದಲಿಗೆ ಸಣ್ಣ ಕಥೆಗಳನ್ನು ಮತ್ತು ಲಘು ಪ್ರಬಂಧಗಳನ್ನು ಬರೆದರು. ವಿವೇಕ್ ಶಾನಭಾಗ್ ಅವರ ಪ್ರೇರಣೆಯಿಂದ ಮೊದಲ ಕಿರು ಕಾದಂಬರಿ ಹೊರಬಂತು. ತಮ್ಮ ಉದ್ಯೋಗವನ್ನು ಕೈ ಬಿಟ್ಟು ಸಾಹಿತ್ಯ ಕ್ಷೇತ್ರದಲ್ಲಿ ದೃಢವಾಗಿ ನಿಲ್ಲುವ ಧೈರ್ಯ ಬಂದಿತು.

ವಸುಧೇಂದ್ರ ಅವರು ಮೊದಮೊದಲು ಬರೆದದ್ದೆಲ್ಲ ತಮ್ಮ, ಮತ್ತು ತಮ್ಮ ಸುತ್ತಮುತ್ತಲಿನವರ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಬರೆದ ಕಥೆಗಳು. ಅವುಗಳಿಂದ ಈಚೆ ಬಂದು, ಇತರ ವಿಷಯಗಳ ಬಗ್ಗೆ ಬರೆಯುವ ಹಂಬಲ ಹುಟ್ಟಿದಾಗ ಐತಿಹಾಸಿಕ ಕಾದಂಬರಿಯನ್ನು ಬರೆಯುವ ಯೋಚನೆ ಬಂತು. ಹುಟ್ಟಿದ ಊರಿಗೂ, ಅವರ ಹೃದಯಕ್ಕೂ, ಹತ್ತಿರವಾದ ಊರು ಹಂಪೆ. ಆದ್ದರಿಂದ ಸಹಜವಾಗಿಯೇ ವಿಜಯನಗರದ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ಕಾದಂಬರಿಯನ್ನು ಬರೆಯುವ ಯೋಜನೆ ಹಾಕಿಕೊಂಡರು. ಆದರೆ ಅಲ್ಲಿಯ ರಾಜ ರಾಣಿಯರ ಬಗ್ಗೆ ಅಲ್ಲ, ಆ ಸಮಯದ ಜನಸಾಮಾನ್ಯರ ಬಗ್ಗೆ. ನೌಕರಿ ಬಿಟ್ಟಾಗಿತ್ತು. ಈಗ ಸಮಯವೋ ಸಮಯ. ಹಗಲು ರಾತ್ರಿ ಮೂರು ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯದ ಬಗ್ಗೆ ಓದಿದರು. ಆ ಸಮಯದಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರ ಬಗ್ಗೆ ಕುತೂಹಲ ಉಂಟಾಗಿ ಅವರ ಬಗ್ಗೆ ತನಿಖೆ ಮಾಡಿದಾಗ ಅವರು ಬರೆದಿಟ್ಟ ದಾಖಲೆಗಳ ದೊಡ್ಡ ಆಸ್ತಿಯೇ ದೊರಕಿತು. ಅವುಗಳ ಮೂಲಕ, ವಿಜಯನಗರದ ಜನಸಾಮಾನ್ಯರ ದಿನನಿತ್ಯ ಜೀವನದ ಬಗ್ಗೆ ಹೇರಳವಾಗಿ ವಿಷಯ ಸಂಪಾದನೆಯಾಯಿತು. ಸಂಶೋಧನೆ ಎಲ್ಲಿಗೆ ನಿಲ್ಲಿಸಬೇಕು ಎನ್ನುವುದೇ ತೋರಲಿಲ್ಲ. ಆಗ ಅವರ ಮಿತ್ರರೊಬ್ಬರು ‘ನಿನಗೆ ಈಗ ತಿಳಿದಿರುವುದು ಬೇಕಾದಷ್ಟಿದೆ. ಇನ್ನು ಮುಂದೆ ಏನಿದ್ದರೂ ನಿನ್ನ ಕ್ರಿಯಾಶೀಲತೆಯಿಂದ ಹುಟ್ಟಬೇಕಾದದ್ದು.’ ಎಂದು ಹೇಳಿದಾಗ, ‘ತೇಜೋ ತುಂಗಭದ್ರಾ’ ಬರೆಯಲು ಸಾಧ್ಯವಾಯಿತು.

ಓದುಗರಿಗೆ ಚಾರಿತ್ರಿಕ ಕಾದಂಬರಿಗಳ ಹಸಿವು ಎಷ್ಟರಮಟ್ಟಿಗೆ ಇದೆ ಎನ್ನುವುದು ವಸುಧೇಂದ್ರ ಅವರಿಗೆ ‘ತೇಜೋ ತುಂಗಭಧ್ರಾ’ಗೆ ದೊರೆತ ಸ್ವಾಗತ ಮತ್ತು ಮನ್ನಣೆಯಿಂದ ತಿಳಿದುಬಂತು. ಮತ್ತೊಂದು ಅಂತಹುದೇ ಕಾದಂಬರಿಗೆ ಓದುಗರು ಕಾತುರರಾಗಿರುವುದನ್ನು ತಿಳಿದು ಅವರಿಗೆ ಸ್ವಲ್ಪ ಗಾಬರಿಯೇ ಆಯಿತಂತೆ. ಇದನ್ನು ಯಾಕೆ ಬರೆದೆನಪ್ಪಾ, ಎನ್ನಿಸುವಷ್ಟು!

ವಸುಧೇಂದ್ರ ಅವರು ಇತ್ತೀಚಿಗೆ, ತಮ್ಮದೇ ಕಥೆ, ಕಾದಂಬರಿಗಳನ್ನು ಬರೆಯುವುದಲ್ಲದೆ, ಬೇರೆ ಭಾಷೆಗಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ತಮ್ಮದೇ ಪುಸ್ತಕ ಪ್ರಕಾಶನವನ್ನು ಪ್ರಾರಂಭಿಸಿ ಅದರ ಮೂಲಕ ಹೊಸ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ.

ವಸುಧೇಂದ್ರ ಅವರು ನಿಗರ್ವಿ. ತಮ್ಮ ವಿಷಯ ಹೇಳಿಕೊಳ್ಳುತ್ತಿದ್ದಾಗ, ಯಾವುದೇ ಹೆಚ್ಚುಗಾರಿಕೆಯಾಗಲೀ, ಸ್ವಪ್ರಶಂಸೆಯಾಗಲಿ ಕಂಡುಬರುವುದಿಲ್ಲ. ಅಹಂ ಅನ್ನುವುದರ ಸುಳಿವೂ ಹತ್ತಿರ ಬರುವುದಿಲ್ಲ. ಅವರ ಸಾಧನೆಗಳ ಪ್ರಸ್ತಾಪ ನಾವು ತೆಗೆದಾಗ, ಅವರ ಪ್ರತಿಕ್ರಿಯೆಯನ್ನು ನೋಡಿದರೆ, ಅವರು ಅದನ್ನು ಸಾಧಿಸಿದ್ದು ಅವರಿಗೇ ವಿಸ್ಮಯದ ಸಂಗತಿ ಎನ್ನುವ ಭಾವನೆ ಬರುತ್ತದೆ. ಅವರ ಪುಸ್ತಕಗಳು ಈ ವ್ಯಾಪ್ತಿಯಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿರುವುದು ಅವರಿಗೆ ಮಹದಾಶ್ಚರ್ಯ ಎನ್ನುವ ಭಾವನೆ ಉಂಟಾಗುತ್ತದೆ. ಯಶಸ್ವೀ ಲೇಖಕನಾಗಬೇಕಾದರೆ ಪ್ರತಿಭೆಯ ಅಗತ್ಯ ಇಲ್ಲವೆಂದಲ್ಲ, ಆದರೆ ಧೈರ್ಯದಿಂದ ಬರೆಯಲು ಧುಮುಕಬೇಕು, ನಂತರ, ಪಟ್ಟು ಹಿಡಿದು ಬರೆಯಬೇಕು, ಅದು ಮುಖ್ಯ, ಯಶಸ್ಸಿಗೆ ಕಾರಣ ಶೇಖಡ ೯೮ ರಷ್ಟು ಭಾಗ ಪಟ್ಟು ಹಿಡಿದು ಕೆಲಸ ಮಾಡುವುದೇ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕಷ್ಟಪಟ್ಟರೆ ತಾವೂ ಅವರಂತೆಯೇ ಬರೆದುಬಿಡಬಹುದು ಎಂದು ಕೇಳಿದವರಿಗೆ ಅನಿಸಬೇಕು, ಹಾಗೆ!

ವಸುಧೇಂದ್ರ ಅವರ ಸ್ವಾರಸ್ಯಕರವಾದ ಮಾತನ್ನು ಕೇಳುತ್ತ ಕುಳಿತ ನಮಗೆ ನಾಲ್ಕು ಘಂಟೆಗಳು ಕಳೆದದ್ದು ತಿಳಿಯಲೇ ಇಲ್ಲ. ಆ ಸಮಯದಲ್ಲಿ ಅವರ ಜೀವನ ಹಾಗೂ ಬರವಣಿಗೆಯ ಹಾದಿಯ ಬಗ್ಗೆ ನಮಗೆ ತಿಳಿದು ಬಂದದ್ದು ಮೇಲೆ ಹೇಳಿರುವ ಅಂಶಗಳಷ್ಟೇ. ಮುಖ್ಯವಾಗಿ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದು ತಮ್ಮ ಸಂಶೋಧನೆಯಿಂದ ತಿಳಿದುಬಂದ, ಅವರಿಗೆ ಬಹಳ ಕುತೂಹಲಕಾರಿ ಅಥವಾ ಆಕರ್ಷಕವೆನಿಸಿದ ನೂರೊಂದು ವಿಷಯಗಳು. ವಿಷಯಗಳ ವ್ಯಾಪ್ತಿಯ ಕುರುಹು ನೀಡಲು, ಅವುಗಳಲ್ಲಿ ಕೆಲವನ್ನು, ಅವರು ವ್ಯಕ್ತಪಡಿಸಿದ ಭಾವನೆಗಳು ಮತ್ತು ಅಭಿಪ್ರಾಯಗಳೊಡನೆ ಯಾವುದೇ ವಿಶೇಷ ಕ್ರಮವಿಲ್ಲದೆ ಕೆಳಗೆ ಪಟ್ಟಿ ಮಾಡಿದ್ದೇನೆ.

1. ಪೋರ್ಚುಗೀಸರು ವ್ಯಾಪಾರಕ್ಕಾಗಿ ನೌಕಾಪಡೆಯನ್ನು ಕಟ್ಟಿ ಇಡೀ ಪ್ರಪಂಚವನ್ನು ಅನ್ವೇಷಿಸಿದ್ದು. ಮಸಾಲೆ ಪದಾರ್ಥಗಳಿಗಾಗಿ ಯೂರೋಪಿನ ದೇಶಗಳ ಮಧ್ಯೆ ಪೈಪೋಟಿ.

2. ಚೀನೀಯರ ಆವಿಷ್ಕಾರಗಳು, ರೇಷ್ಮೆ ದಾರಿ, ಸರಕುಗಳು ಎಲ್ಲಿಂದೆಲ್ಲಿಗೆ ಪ್ರಯಾಣ ಮಾಡುತ್ತಿದ್ದವು.

3. ವಿಜಯನಗರ ಸಾಮ್ರಾಜ್ಯದ ಬಗ್ಗೆ ನಾವು ಮಾತನಾಡಲಿಚ್ಛಿಸುವುದು ಅದರ ವೈಭವ, ಮತ್ತು ಕೃಷ್ಣದೇವರಾಯನ ಉತ್ತಮ ಆಡಳಿತ. ಆದರೆ ಆಗಿನ ಕಾಲದಲ್ಲಿದ್ದ ಕೆಲವು ಸಾಮಾಜಿಕ ಆಚರಣೆಗಳ ಕ್ರೌರ್ಯ.

4. ಭಾಷೆಗಳು, ಭಾಷೆಗಳ ವಿಕಾಸ.
ಬದಲಾವಣೆ ಎನ್ನುವುದು ಅನಿವಾರ್ಯ, ಯಾವುದೇ ಹೊಸ ಬದಲಾವಣೆಯಾಗಲೀ, ಅವಿಷ್ಕಾರಗಳಾಗಲೀ ಅದನ್ನು ಜನರು ಮೊದಲು ವಿರೋಧಿಸುತ್ತಾರೆ, ಆದರೆ ನಂತರ ಸ್ವೀಕರಿಸುತ್ತಾರೆ.

5. ಪೂರ್ವಜರ ಆರಾಧನೆ ಪ್ರಪಂಚಾದ್ಯಂತ ಎಲ್ಲ ಸಮುದಾಯಗಳಲ್ಲೂ ಕಂಡುಬರುವ ಬಗ್ಗೆ. ಚಾರಿತ್ರಿಕ ಕಾದಂಬರಿಗಳೆಂದರೆ ಓದುಗರಿಗೆ ಪ್ರಿಯವಾಗಿರುವುದು ಈ ಕಾರಣದಿಂದಲೇ?

6. ಹಿಂದೂ ಧರ್ಮ ಬೆಳೆದು ಬಂದ ಹಾದಿ, ಅದರ ಮೇಲೆ ಜೈನ, ಬುದ್ಧ ಧರ್ಮಗಳ ಪ್ರಭಾವ, ಅದರಲ್ಲೂ ಸಸ್ಯಾಹಾರದ ಅಭ್ಯಾಸ ಹರಡಿದ್ದು. ನಮ್ಮ ನಿಲುವು ಏನೇ ಇರಲಿ ಅದನ್ನು ಇತರರ ಮೇಲೆ ಹೇರದಿರುವುದರ ಪ್ರಾಮುಖ್ಯತೆ.

7. ಹಳೆಗನ್ನಡ ಮತ್ತು ನಡುಗನ್ನಡ ಸಾಹಿತ್ಯ, ಕುಮಾರವ್ಯಾಸ, ರಾಘವಾಂಕನ ಹರಿಶ್ಚಂದ್ರ ಕಾವ್ಯವು ಓದಲು ಎಷ್ಟು ಸೊಗಸಾಗಿದೆ ಎಂಬ ವಿಷಯ.

8. ಹಿಂದಿನ ರಾಜರುಗಳಾಗಲೀ, ಇಂದಿನ ಸರ್ಕಾರಗಳಾಗಲೀ ತಮ್ಮ ಅಧಿಪತ್ಯಕ್ಕೆ ಅನುಕೂಲವಾಗುವಂತೆ ಧರ್ಮವನ್ನು ಉಪಯೋಗಿಸಿಕೊಳ್ಳುವ ರೀತಿ. ಬಹುಮತೀಯರನ್ನು ಹಿಡಿದೆತ್ತಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು. ಮನುಷ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಧರ್ಮವನ್ನು ಅರ್ಥೈಸಿಕೊಳ್ಳುವುದು. ಧರ್ಮಗಳು ಸಮಯಕ್ಕೆ ತಕ್ಕಂತೆ ಬದಲಾಯಿಸದಿದ್ದರೆ, ಅವು ಅಳಿವಾಗುವ ಸಾಧ್ಯತೆ.

9. ಲೇಖಕರಾಗಲು ಇಚ್ಛೆಪಡುವವರಿಗೆ ಒಂದು ಕಿವಿಮಾತು. ಬೇರೆಯವರು ಮಾತನಾಡಿದಾಗ ಸೂಕ್ಷ್ಮವಾಗಿ ಕೇಳಿಸಿಕೊಳ್ಳುವುದನ್ನು ಕಲಿಯಬೇಕು. ಇತರರ ಬಗ್ಗೆ ನಿಮಗೆ ನಿಜವಾದ ಆಸಕ್ತಿ ಇಲ್ಲದಿದ್ದರೆ, ನೀವು ನಂಬಿಕಾರ್ಹರಲ್ಲದಿದ್ದರೆ ಅವರು ನಿಮ್ಮಲ್ಲಿ ಏನನ್ನೂ ಹಂಚಿಕೊಳ್ಳುವುದಿಲ್ಲ, ನೀವು ಏನನ್ನೂ ಕಲಿಯಲು ಸಾಧ್ಯವಿಲ್ಲ.

10. ಸಾಹಿತಿಗಳು ಬರೆಯುವ ಎಲ್ಲ ಕೃತಿಗಳೂ ಒಂದೇ ಗುಣಮಟ್ಟದ್ದಾಗಿರುತ್ತದೆ ಎಂದು ನಿರೀಕ್ಷಿಸುವುದು ಅನ್ಯಾಯ. ಬೇಂದ್ರೆ, ಕುವೆಂಪು ಅವರ ಕಾವ್ಯಗಳಲ್ಲಿ ಕೆಲವನ್ನು ಮಾತ್ರ ನಾವು ಈಗಲೂ ನೆನಪಿಸಿಕೊಳ್ಳುತ್ತೇವೆ. ಕುಮಾರವ್ಯಾಸ ಭಾರತದಲ್ಲೂ ಹಾಗೇ, ಪ್ರತಿಯೊಂದು ಪದ್ಯವೂ ಸುಂದರವಾಗಿದೆ ಎನ್ನಲಾಗುವುದೇ? ಆದರೆ ಕೆಲವನ್ನು ಓದಿದಾಗ ಮಾತ್ರ ರೋಮಾಂಚನವಾಗುತ್ತದೆ.
---------------

ಸಂಭಾಷಣೆ ಮುಂದುವರೆಯುತ್ತಲೇ ಇತ್ತು. ಕೊನೆಗೆ ವಸುಧೇಂದ್ರ ಅವರು ‘ನನಗೆ ಯಾರ ಮಾತನ್ನೂ ಮೂರು - ನಾಲ್ಕು ಘಂಟೆಗಳ ಕಾಲ ಕೇಳುವ ಸಹನೆ ಇಲ್ಲಪ್ಪ, ನಿಮ್ಮ ಸಹನೆಯನ್ನು ನಾನು ಮೆಚ್ಚುತ್ತೇನೆ, ಇಲ್ಲಿಗೆ ನನ್ನ ಮಾತನ್ನು ಮುಗಿಸುತ್ತೇನೆ’ ಎಂದು ಖಡಾಖಂಡಿತವಾಗಿ ಹೇಳಿ ಮಾತನ್ನು ಮುಗಿಸಿಬಿಟ್ಟರು. ಆದರೂ ನಾವು ಬಿಡಲಿಲ್ಲ, ‘ಒಂದೇ ಒಂದು ಪ್ರಶ್ನೆ’ ಎಂದು ಒತ್ತಾಯಿಸಿ, ಮತ್ತೊಂದೆರೆಡು ಪ್ರಶ್ನೆಗಳನ್ನು ಕೇಳಿದೆವು. ಪ್ರಪಂಚದ ಈಗಿನ ಪರಿಸ್ಥಿತಿಯ ಬಗ್ಗೆ ನಿಮಗೆ ಏನೆನಿಸುತ್ತದೆ ಎಂದು ಕೇಳಿದಾಗ, ಭಾರತದ ಪ್ರಸ್ತಾಪವನ್ನೆತ್ತಿ, ‘ನಾವೇ ಶ್ರೇಷ್ಟರು ಎಂಬ ಭಾವನೆ ನಮ್ಮಲ್ಲಿ ಹೆಚ್ಚಾಗುತ್ತಿದೆ, ಅದು ಚಿಂತಾಜನಕ’ ಎಂದು ಕಳಕಳಿ ವ್ಯಕ್ತಪಡಿಸಿದರು.

ತಿಂಡಿ, ಕಾಫಿ ಮುಗಿಸಿ ಅವರನ್ನು ಬೀಳ್ಕೊಂಡ ನಾವು ಆ ಮಧ್ಯಾಹ್ನದ ಸುಂದರ ಅನುಭವವನ್ನು ದಾರಿಯುದ್ದಕ್ಕೂ ಮೆಲಕು ಹಾಕುತ್ತ ಮನೆಗೆ ಹಿಂದುರುಗಿದೆವು.
3 ಡಾ ಪ್ರೇಮಲತ ಬಿ ಬರೆಯುತ್ತಾರೆ:
(ಅವರ ಫೇಸ್ ಬುಕ್ ಲೇಖನದಿಂದ, ಅವರ ಸಮ್ಮತಿಯೊಡನೆ)
ವಸುಧೇಂದ್ರ, ಡಾ ಪ್ರೇಮಲತ ಬಿ
"ವಸುಧೇಂದ್ರ ಅಂದ್ರೆ ನನಗೂ ಇಷ್ಟ” -- ಡಾ ಪ್ರೇಮಲತ ಬಿ

ಲಾಕ್ ಡೌನ್ ಸಮಯದಲ್ಲಿ ಅವರ ಸರಳ ಬರಹಗಳನ್ನು ಓದಿದ ನಂತರವೇ ನಾನು ಕಥೆಗಳನ್ನು ಬರೆಯಲು ಶುರುಮಾಡಿದ್ದು. ಕಾಕತಾಳೀಯ ಅಂದರೆ, ಚೊಚ್ಚಲ ಕಥಾಸಂಕಲನ ಛಂದ ಸ್ಪರ್ಧೆ ಯ ಅಂತಿಮ ಆರರ ಹಂತಕ್ಕೆ ತಲುಪಿತು. ಡಾ. ಹೆಚ್. ಗಿರಿಜಮ್ಮ ಪ್ರಶಸ್ತಿಯನ್ನೂ ಗಳಿಸಿತು.

ವಸುಧೇಂದ್ರ ಅವರು ಸಮಕಾಲೀನ ಬರಹಗಾರರು, ವೃತ್ತಿ ಪರರು, ನನ್ನಂತೆ ಅನಿವಾಸಿಯಾಗಿದ್ದವರು, ಯಾವ ಕೃಪಾ ಪೋಷಣೆಗಳೂ ಇಲ್ಲದೆ ತಮ್ಮ ಬರಹದ ಪ್ರತಿಭೆಯಿಂದಲೇ
ಹೆಸರು ಗಳಿಸಿದವರು. ತಾವು ಕ್ರಮಿಸಿದ ಶ್ರಮದ ಹಾದಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಹೇಳಿಕೊಂಡವರು. ಹೊಸ ಪ್ರತಿಭೆಗಳಿಗೆ ಮನ್ನಣೆ ನೀಡುವ ಛಂದ ಪುರಸ್ಕಾರ ಶುರುಮಾಡಿ ಹಲವರು ಹೆಸರು ಗಳಿಸಲು ಸಹಕರಿಸಿದವರು. ಅನುವಾದಗಳಿಗೆ ಪ್ರಾಮುಖ್ಯತೆ ನೀಡಿದವರು, ತಗಾದೆ ಗಳಿಂದ ದೂರವಿದ್ದು ಸಾಹಿತ್ಯದಲ್ಲಿ ಗಾಢವಾಗಿ ತೊಡಗಿಸಿಕೊಂಡವರು ಎಂಬೆಲ್ಲ ಕಾರಣಗಳಿಗಾಗಿ ನನಗೆ ಅವರ ಬಗ್ಗೆ ವೀಶೇಷ ಮೆಚ್ಚುಗೆಯಿತ್ತು.

ಬೆಂಗಳೂರಿಗೆ ಬಂದಾಗ ಹೋಗಿ ಭೇಟಿಯಾಗಿ ಬಂದಿದ್ದೆ. ಅವರು ಲಂಡನ್ನಿಗೆ ಬರುವುದು ತಿಳಿದಾಗ, ಅಲ್ಲಿಗೆ ಹೋಗಿ ಮನೆಗೂ ಕರೆತಂದೆ.

15/03/2025 ರಂದು Reading, Heathrow, Leamington Spa, Derby, Doncaster ನಗರಗಳಿಂದ ಹಲವಾರು ಸ್ನೇಹಿತರು ಅವರನ್ನು ನೋಡಲು ಬಂದರು. ಆಗಲೇ ನನಗೆ ಅವರು ಅದೆಷ್ಟು ಸೊಗಸಾಗಿ ಮಾತನಾಡಬಲ್ಲರು ಎಂದು ತಿಳಿದದ್ದು.
ಅವರು ಸರಳತೆಗೆ ಬೆರಗಾಗದೆ ಇರಲು ಸಾಧ್ಯವೇ ಇಲ್ಲ. ಅಂದು ಅವರನ್ನು ಭೇಟಿಯಾಗಲು ಸಾಧ್ಯವಾಗದೆ ಪರಿತಪಿಸಿದವರು ಬಹಳಷ್ಟು ಜನ.

ವಸುಧೇಂದ್ರರ ಜೊತೆ ಒಂದು ಉತ್ತಮ ಸಾಹಿತ್ಯ ಚರ್ಚೆಯಲ್ಲಿ ತೊಡಗಿದ ಖುಷಿಯಲ್ಲಿ ವಾರಾಂತ್ಯ ಕಳೆದದ್ದೇ ತಿಳಿಯಲಿಲ್ಲ. ಆದರೆ ಅವರಿಂದ ತಿಳಿಯುವುದು ಮತ್ತು ಕಲಿಯಬೇಕಾದ ವಿಚಾರಗಳು ಮುಗಿಯುವಂತವಲ್ಲ ಅನ್ನಿಸಿದ್ದು ಮಾತ್ರ ಸುಳ್ಳಲ್ಲ.
ಲಿಂಕನ್ನಿನಲ್ಲಿ ನೆರೆದ ಉತ್ಸಾಹಿ ಸಾಹಿತ್ಯಾಸಕ್ತರು
4 ಹೀಗೊಂದು ವೀಕೆಂಡ್! -ಅಮಿತ್ ರಾಮ್ ಮಂಡಗದ್ದೆ ವಾಸುದೇವ
ದಿನಾಂಕ ೧೪/೦೩/೨೦೨೫ ಶುಕ್ರವಾರ ಸಂಜೆ ನನ್ನ ಸ್ನೇಹಿತ ಸೂರ್ಯನ ಮಗಳ ೭ನೇ ಹುಟ್ಟುಹಬ್ಬವನ್ನು ಆಚರಿಸಲು ಹೊರುಡುತ್ತಿದ್ದಾಗ ಅನು ಅವರು ಶಾರ್ವರಿಗೆ ಕರೆ ಮಾಡಿ ನಾಳೆ ವಸುಧೇಂದ್ರ ಅವರನ್ನು ಲಿಂಕನ್ನಲ್ಲಿ ಭೇಟಿ ಮಾಡುವ ಅವಕಾಶ ಇದೆ ಬರುತ್ತಿರಾ ಎಂದು ಕೇಳಿದರು. ಅಲ್ಲಿಯ ವರೆಗೆ ಮನೆಗೆ ಬೇಗ ಬಂದು ಮಲಗಿ ಮಾರನೇ ದಿವಸ ಕೊವೆಂಟ್ರಿಯಲ್ಲಿ ನಡೆಯುವ ಅನುಭಂದ ಕ್ರಿಕೆಟ್ ಕಪ್ಗೇ ಹೋಗುವ ತಯಾರಿಯಲ್ಲಿ ಇದ್ದ ಮನಸ್ಸು ಧ್ವಂದ್ವಕ್ಕೆ ಬಿತ್ತು. ನೆಚ್ಚಿನ ಬರಹಗಾರರನ್ನು ಭೇಟಿ ಆಗುವುದೋ ಇಲ್ಲ ಸ್ನೇಹಿತರ ಜೊತೆಗೂಡಿ ಆಟ ಆಡುವುದೋ ಎಂದು. ಕೊನೆಗೂ ಗೆದ್ದಿದು ವಸುಧೇಂದ್ರ ಅವರನ್ನು ಬೇಟಿಯಾಗುವ ಆಸೆ. ಆ ಆಸೆಗೆ ನನಗೇ ಸಾತ್ ಕೊಟ್ಟಿದ್ದು ಸಾಗರ್ ಮತ್ತು ಸುಬ್ರಮಣ್ಯ.
ಶನಿವಾರ ಬೆಳಗ್ಗೆ ಕೊವೆಂಟ್ರಿಯಲ್ಲಿ ಸ್ನೇಹಿತರಿಗೆ ಮುಖ ತೋರಿಸುವ ಶಾಸ್ತ್ರ ಮಾಡಿ ಲಿಂಕನ್ ಕಡೆಗೆ ಹೊರೆಟೆವು ಮೂರು ಜನ. ರಸ್ತೆ ರೀಪೇರಿಯಿಂದ ಆದ ಟ್ರಾಫಿಕ್ ಜ್ಯಾಮ್ ಮತ್ತು ರೌಂಡ್ ಎಬ್ವ್ಟಾಗಳಲ್ಲಿ ಲೇನ್ ತಪ್ಪಿಸಿ ಬೇರೆ ಕಡೆ ಕರೆದು ಕೊಂಡು ಹೋಗುತ್ತಿದ್ದ ಸಾಗರ್ ಗೆ ಗೈಡ್ ಮಾಡಿಕೊಂಡು ಎಲ್ಲ ಅಡಚಣೆ ತಪ್ಪಿಸಿ ತಲುಪುವಾಗ ಮಧ್ಯಾಹ್ನ ಘಂಟೆ ೨:೨೦. ಅನು ಅವರ ಕಳುಹಿಸಿದ ಮೇಸೆಜ್ ಪ್ರಕಾರ ಕಾರ್ಯಕ್ರಮ ೧ ಘಂಟೆಗೇ ಸ್ಟಾರ್ಟ್ ಆಗುವುದಿತ್ತು. ನಾವುಗಳು ತಡವಾಗಿ ತಲುಪಿದೆವಲ್ಲ, ಅವರು ಒಳಗಡೆ ಸೇರಸ್ತಾರೋ ಇಲ್ವ ಎಂಬ ತಳಮಳ ಕಿಕ್ ಇನ್ ಆಯ್ತು. ಅನುಮಾನದಲ್ಲೆ ಬಾಗಿಲು ತಟ್ಟಿದ್ದೆ, ಬಾಗಿಲು ತೆಗೆದವರು ನಗು ಮೊಗದ ಶಶಿಧರ್, ಬನ್ನಿ ಬನ್ನಿ ಈಗ ಶುರುವಾಗಿದೆ, ನೀವು ಏನು ಮಿಸ್ ಮಾಡಿಕೊಂಡಿಲ್ಲ ಎಂದು ಬರಮಾಡಿಕೊಂಡಾಗ ಸ್ವಲ್ಪ ನಿರಮ್ಮಳವಾಯ್ತು. ಒಳಗೆ ಹೋದಾಗ ಪರಿಚಯಸ್ತರಾದ ಅನು, ಹರ್ಷ, ಸ್ಮಿತ ಮತ್ತು ಗೋಪಾಲ್ ರನ್ನು ನೊಡಿದಾಗ ಮನಸ್ಸಿಗೆ ಇನ್ನು ಖುಷಿ ಆಯ್ತು.
ವಸುಧೇಂದ್ರರವರು ಸತಿ ಸಹಗಮನದ ಬಗ್ಗೆ ಮಾತು ಶುರು ಮಾಡಿದ್ರು, ಆಮೇಲೆ ಅವರು ಪುಸ್ತಕಗಳನ್ನು ಹೇಗೆ ಬರಿತಾರೆ, ಹೇಗೆ ರಿಸರ್ಚ್ ಮಾಡ್ತಾರೆ ಅನ್ನುವುದರಿಂದ ಹಿಡಿದು ಚೀನದಲ್ಲಿ ಪೇಪರ್ ತಾಯಾರಿಕೆ ಹೇಗೆ ಶುರುವಾಯ್ತು, ಭಾರತಕ್ಕೆ ಮೆಣಸಿನಕಾಯಿ ಹೇಗೆ ಬಂತು, ಪೊರ್ಚುಗೀಸರು ಭಾರತಕ್ಕೆ ಹೇಗೆ ಬಂದರು ಮತ್ತು ಏನೇನು ಮಾಡಿದರು, ವಾಸ್ಕೋಡಿಗಾಮ, ಕೊಲಂಬಸ್, ಚೀನಿಯರು ಮತ್ತು ಸಂಸ್ಕೃತದಿಂದ ಎರವಲು ಪಡೆದ ೩೫,೦೦೦ ಪದಗಳು, ಮಲೆನಾಡಿನ ಒಕ್ಕಲಿಗರು ಮತ್ತು ಜೈನಧರ್ಮ, ಹೀಗೆ ಹಲವಾರು ವಿಷಯಗಳು ಬಗ್ಗೆ ನಿರರ್ಗಳವಾಗಿ ಮಾತಾನಾಡಿದರು. ಇವತ್ತಿಗೆ ಐದನೇ ದಿನ ಆದರೂ ಕಣ್ಣಿಗೇ ಕಟ್ಟಿದ ಹಾಗೇ ಇದೆ. ಇವರ ಮಾತಿಗೆ ಸರಿಯಾಗಿ ಅನು ಮತ್ತು ಹರ್ಷರವರ ತಾವು ಓದಿಕೊಂಡ ಇತಿಹಾಸದ ಬಗ್ಗೆ ಮಾತಾನಾಡುತ್ತಿದರೆ, ಆಕಡೆ ಗೋಪಾಲ್ ರವರು ಸೈನಿಕರನ್ನು ರಣಕಹಳೆ ಊದಿ ಪ್ರೋತ್ಸಾಹಿಸಿ ಯುದ್ದಕೆ ತಳ್ಳುತ್ತಿದ್ದ ವಿಷಯ ಬಂದಾಗ “ಮದುವೆ ಕೂಡ ಹಾಗೇ ಅಲ್ವ ಗಟ್ಟಿಮೇಳ ಊದಿ ತಾಳಿ ಕಟ್ಟಿಸಿ ಬಿಡ್ತಾರೆ” ಎಂದು ಹಾಸ್ಯ ಚಟಾಕಿ ಹಾರಿಸಿದರು ಶ್ರೀವತ್ಸ! (ವಿಡಿಯೋ ನೋಡಿರಿ - ಲೇಖನದ ಕೊನೆಯಲ್ಲಿ) ಅವರ ಜ್ಞಾನ ಮತ್ತು ಪ್ರೇಮಲತರವರ ಜೊತೆ ಊಟದ ಸಮಯದಲ್ಲಿ ಆದ ಶಶಿ ತರಿಕೆರೆ ಅವರು ಡುಮಿಂಗ ಪುಸ್ತಕದ ಚರ್ಚೆ ಕೂಡ ತುಂಬ ಚೆನ್ನಾಗಿತ್ತು. ಹಾಗು ಹೀಗು ಅನುರವರನ್ನ ಒಪ್ಪಿಸಿ ಅವರ ಪುಸ್ತಕದ ಮೇಲೆ ನನ್ನ ಹೆಸರು ಮತ್ತು ಲೇಖಕರ ಸಹಿ ಗಿಟ್ಟಿಸಿಕೊಂಡೆ.
ಆ ಒಂದು ದಿವಸದ ಬಗ್ಗೆ ಬರೆಯಲಿಕ್ಕೆ ತುಂಬ ಇದೆ. ಆದರೆ ಪದಗಳು ಸಾಕಾಗ್ತ ಇಲ್ಲ.
ನನ್ನ ನೆಚ್ಚಿನ ಲೇಖಕರನ್ನು ಭೇಟಿಯಾಗಲು ಚಾನ್ಸ್ ಕೊಡಿಸಿದ ಅನುರವರಿಗೂ ಮತ್ತು ಹಸಿದುಕೊಂಡಿದ್ದ ನಮಗೆ ಒಳ್ಳೆ ಊಟ ಉಣಬಡಿಸಿದ ಪ್ರೇಮಲತರವರಿಗೂ ನಾನು ಚಿರಋಣಿ.

ಲೇಖಕ: ಅಮಿತ್ ರಾಮ್ ಮಂಡಗದ್ದೆ ವಾಸುದೇವ
ಹುಟ್ಟಿದ್ದು ಬೆಳೆದಿದ್ದು: ಶಿವಮ್ಮೊಗ
ಈಗ ಇರುವುದು: ಲೆಮಿಂಗ್ಟನ್ ಸ್ಪಾ

ಹಸ್ತಾಕ್ಷರ ಗಿಟ್ಟಿಸಿದ ಅಮಿತ್ ರಾಮ್ (ಹಳದಿ ಟಾಪ್)

5 ವಸುಧೇಂದ್ರರೊಡನೆ ತಾಸೆರಡು ತಾಸು -ರಾಂಶರಣ್( ಡಾರ್ಬಿ )

ವಸುಧೇಂದ್ರ ಅವರೊಡನೆ ದೇಸಾಯಿ (ಎಡಕ್ಕೆ) ಮತ್ತು ರಾಂಶರಣ್
ಕಥೆ, ಪ್ರಬಂಧ, ಕಾದಂಬರಿಗಳಿಂದ ವಸುಧೇಂದ್ರ ಪರಿಚಯ ನಮಗೆಲ್ಲ. ಅವರು ಮಾರ್ಚ್ ನಲ್ಲಿ ಲಂಡನ್ನಿಗೆ ಬಂದಾಗ ಭೇಟಿಯಾಗುವ ಅವಕಾಶ ಸಿಗಬಹುದೆಂದಾಗ ಆಶೆ ನಮ್ಮಲ್ಲಿ ಮೊಳಕೆಯೊಡೆದಿತ್ತು. ಪ್ರೇಮಲತಾ ತಮ್ಮ ಮನೆಗೆ ಅವರನ್ನು ಆಮಂತ್ರಿಸುವ ಸಾಧ್ಯತೆಯಿದೆ ಎಂದಾಗ ಮೊಳಕೆ ಮೈಮುರಿದು ಎಲೆ ಮೂಡಿತ್ತು. ಇಂಗ್ಲೆಂಡಿನ ಶರದೃತುವಿನಲ್ಲಿ ಆ ಎಲೆಗಳು ಮೈಬಿಚ್ಚಿ  ಸಸಿಯಾಗುವ ಯಾವ ಪ್ರಯತ್ನವನ್ನೂ ಮಾಡಡುವಂತೆ ಕಾಣುತ್ತಿರಲಿಲ್ಲ. ಆಮೇಲೆ ಒಂದು ದಿನ ಅವರು ತಮ್ಮ ಮನೆಗೆ ಮಾರ್ಚ್ ೧೫ರಂದು ಬರುತ್ತಾರೆ ಎಂಬ ಸಂದೇಶ ಅನಿವಾಸಿ ಅಂಗಳಕ್ಕೆ ಹಠಾತ್ತನೆ ಬಂತು ಪ್ರೇಮಲತಾ ಅವರಿಂದ. ಅದಾಗಲೇ ಹೆಚ್ಚಿನ ಕೆಲಸಕ್ಕೆ ಒಪ್ಪಿಕೊಂಡಿದ್ದರಿಂದ ಆ ಸುದ್ದಿ ಸಸಿಗೆ ಬೇಕಾದ ಬಿಸಿಲಿನ ಕೋಲಾಗದೇ, ಪೂರ್ವದಿಂದ ಅಮರಿಕೊಂಡ ಶೀತಲ ಗಾಳಿಯಾಗಿ ಚಿಗುರುಗಳೆಲ್ಲ ಕಮರತೊಡಗಿದವು; ಛೇ, ಬೆರುಳ್ತುದಿಗೆ ತಗಲಿದ್ದು ಕೈಗೆ ಸಿಗಲಿಲ್ಲವಲ್ಲ ಎಂಬ ಹತಾಶ ಭಾವನೆ. ಅವರು ರಾತ್ರೆ ತಮ್ಮ ಮನೆಯಲ್ಲೇ ತಂಗುವುದರಿಂದ, ಕೆಲಸ ಮುಗಿದ ಮೇಲೆಯೂ ಭೇಟಿಯಾಗುವ ಅವಕಾಶವಿದೆ ಎಂದು ಪ್ರೇಮಲತ ಆತ್ಮೀಯ ಆಮಂತ್ರಣವನ್ನು ವಿಸ್ತರಿಸಿದಾಗ ‘ಸಿಕ್ಕಿದಾಗ ಸೀರುಂಡೆ’ ಎಂದು ಗಬಕ್ಕನೆ ಅವಕಾಶವನ್ನು ಕಬಳಿಸಿದೆ. 
ನಾನು ತಲುಪಿದಾಗ ಅದಾಗಲೇ ಸೂರ್ಯ ಪಾಶ್ಚಿಮದಾಚೆಯ ನಾಡು ಸೇರಿದ್ದ. ಆದರೆ, ಮನೆಯೊಳಗೇ ಕಾಲಿಟ್ಟಾಗ ಎದುರಾಗಿದ್ದು ಪ್ರಕಾಶಮಾನವಾದ ವಸುಧೇಂದ್ರರ ನಗುಮುಖ. ಮಧ್ಯಾಹ್ನ ೧ ರಿಂದ ಸತತವಾಗಿ ನೆರೆದವರೆಲ್ಲರೊಂದಿಗೆ ಮಾತಾಡುತ್ತ, ತಮ್ಮ ಜ್ಞಾನದ ಭಂಡಾರವನ್ನೇ ತೆಗೆದು, ಮೊಗೆದು ಕೊಟ್ಟಿದ್ದರೂ, ಒಂದಿನಿತೂ ಪ್ರಯಾಸವನ್ನು ತೋರದೇ, ಆತ್ಮೀಯವಾಗಿ ಬರಮಾಡಿಕೊಂಡರು. ಕನ್ನಡಕದಲ್ಲಿ ಫ್ರೆಮ್ ಹಾಕಿಟ್ಟ ಬೆರಗುಗಣ್ಣುಗಳು, ನುಣ್ಣನೆಯ ಮಸ್ತಕ, ಸದಾ ನಗೆ ಸೂಸುವ ಬಾಯಿ; ಮೈಕ್ರೋಸಾಫ್ಟ್ ನ ಸತ್ಯ ನಾಡೆಲ್ಲನ ಹೋಲುವ ರೂಪ (ನಾಡೆಲ್ಲನ ಆತ್ಮ ಚರಿತ್ರೆ ಬರೆದಾತನೇ ಇದನ್ನು ಉದ್ಗರಿಸಿದ್ದನಂತೆ ಲಂಡನ್ನಿನ ಪುಸ್ತಕ ಜಾತ್ರೆಯಲ್ಲಿ). ಅವರೊಂದಿಗೆ ಕಳೆದ ಕೆಲವು ಗಂಟೆಗಳು ಕ್ಷಣಗಳಾಗಿದ್ದವು ಎಂಬುದು ಕ್ಲೀಷೆಯಾದರೂ ಅದಕ್ಕೆ ಹೊರತಾದ ಶಬ್ದಗಳು ನನ್ನಲ್ಲಿಲ್ಲ ಅನುಭವ ವರ್ಣಿಸಲು. ಆ ಕ್ಷಿಪ್ರ ಅವಧಿಯಲ್ಲೇ ಅವರ ಅಗಾಧ ಜ್ಞಾನದ ಅರಿವು ಮೂಡಿಸಿದರು. ವಿಷಯ ದೇಸಾಯಿಯವರ ತಂದೆ ಡಾ. ಪಿ.ಬಿ ದೇಸಾಯಿಯವರ ಐತಿಹಾಸಿಕ ಸಂಶೋಧನೆಗಳಿಂದ, ಜ್ಞಾನಪೀಠ ಪ್ರಶಸ್ತಿಯ ವಿಚಾರ, ಸಾಹಿತ್ಯ ಕ್ಷೇತ್ರದಲ್ಲಿ ಜಾತಿ-ಪಂಗಡಗಳ ಪ್ರಭಾವ, ಹೊಸ ತಲೆಮಾರಿನ ಕಥೆಗಾರರ ವಿಶಿಷ್ಟ ಕಥಾ ವಿಷಯಗಳು, ಕೃತಕ ಬುದ್ಧಿಮತ್ತೆಯ ವಿಶ್ಲೇಷಣೆ, ತನ್ನ ಇಂಜಿನಿಯರಿಂಗ್ ವೃತ್ತಿಯ ಕೆಲವು ಪ್ರಸಂಗಗಳು, ಬೌದ್ಧ ಧರ್ಮದ ಉನ್ನತಿ-ಅವನತಿ, ಪ್ರಾಚೀನ ಭಾರತದಲ್ಲಿ ಮೂರ್ತಿ ಪೂಜೆಯಿತ್ತೇ? ಗ್ರೀಕರ ಆಗಮನ ಮೂರ್ತಿ ಪೂಜೆಯನ್ನು ಹುಟ್ಟು ಹಾಕಿತೆ? ಆಂಗ್ಲ ಭಾಷೆಯ ನೈಪುಣ್ಯತೆ ಹೇಗೆ ಕನ್ನಡ ಲೇಖಕರ ಪ್ರಭಾವದ ಹರವಿಗೆ ನೆರವಾಗಬಹುದು? ಹೀಗೆ ಬಗೆ ಬಗೆಯ ವಿಷಯಗಳ ಚರ್ಚೆಯ ಬಫೆ, ಅಂದು ಪ್ರೇಮಲತಾ ಸಜ್ಜು ಮಾಡಿದ ಬಗೆ ಬಗೆಯ  ಭಕ್ಷ್ಯಗಳ ಬಫೆಗೆ ಸಡ್ಡು ಹೊಡೆಯುವಂತಿತ್ತು. 
ಮರುದಿನ ಅವರು ನಸುಕಿನಲ್ಲೇ ಹೊರಡುವವರಾಗಿದ್ದರು, ಹಿಂದಿನ ದಿನ ನಾಡು ರಾತ್ರಿಯವರೆಗೂ ಪ್ರಯಾಣ ಮಾಡಿ ಬಂದಿದ್ದರು. ಹಾಗಾಗಿ, ವಿಧಿಯಿಲ್ಲದೇ ಮನಸಿರದ ಮನಸಿನಿಂದ ಬಿಳ್ಕೊಟ್ಟು ಬಂದೆ. ಮೊದಲ ಬಾರಿ ನೋಡಿದ್ದರೂ, ಅವರು ತೋರಿದ ಆತ್ಮೀಯತೆ, ಸ್ನೇಹ ಪರತೆ, ಮಂದಹಾಸ ಮನದಲ್ಲಿ ಅಚ್ಚಾಗಿದೆ. ಯಾವುದೇ ಸಾಹಿತ್ಯಿಕ ಹಿನ್ನಲೆಯಿಲ್ಲದಿದ್ದರೂ, ಮನದಾಳದ ಸೆಳೆತಕ್ಕೆ ಒಳಗಾಗಿ, ವೃತ್ತಿಯನ್ನು ತೊರೆದು ಸಾಹಿತ್ಯ ಕೃಷಿಗೆ, ಸಾಹಿತ್ಯದ ಬೆಳವಣಿಗೆಗೆ ಸದಾ ಮುಡಿಪಾದ ವಸುಧೇಂದ್ರರನ್ನು ಭೇಟಿಯಾದಾಗ ನಾವು ಹತ್ತನೇ ತರಗತಿಯಲ್ಲಿ ಓದಿದ ಶಿಖರಗಾಮಿಗಳು ಪುಸ್ತಕದ ನೆನಪಾಗುತ್ತದೆ. ಅದರಲ್ಲಿ ತಮ್ಮ ವೃತ್ತಿಯನ್ನು ಬಿಟ್ಟು ಅಧ್ಯಾತ್ಮ ಶಿಖರವನ್ನೇರಿದ ಅರಬಿಂದೋ ಅವರಂತೆ ಇವರಲ್ಲವೇ?  

(ವಿಡಿಯೋ ಕೃಪೆ:ಶ್ರೀವತ್ಸ ದೇಸಾಯಿ)

ಫೋಟೋ ಕೃಪೆ : ಪ್ರೇಮಲತಾ ಬಿ, ಶಶಿಧರ, ಸ್ಮಿತಾ ಕದಡಿ, ಶ್ರೀವತ್ಸ ದೇಸಾಯಿ

ಬ್ರಿಟನಿನ್ನ ಇತಿಹಾಸಕ್ಕೂ ಮೀರಿದ ಪ್ರಧಾನ ಮಂತ್ರಿಯ ನಿವಾಸ

ಬ್ರಿಟನ್ ಒಂದು ಸಾಂಸ್ಕೃತಿಕ ದೇಶ ಎಂದರೆ ತಪ್ಪಾಗಲಾರದು. ಇಲ್ಲಿ ನೂರಾರು ವರ್ಷಗಳ ಇತಿಹಾಸವುಳ್ಳ ಬಹಳಷ್ಟು ಸ್ಮಾರಕಗಳು ಕಟ್ಟಡಗಳು ಇವೆ. ರಾಜ ಮಹಾರಾಜರು ಹಾಗು ಸಾಮ್ರಾಜ್ಞಿಯರು ವಾಸಿಸಿದ ಕೋಟೆ ಅರಮನೆಗೂ ಈ ದೇಶವನ್ನು ಅಲಂಕರಿಸಿವೆ. ಇಂತಹ ಒಂದು ವಿಕ್ಟೋರಿಯನ್ ಕಾಲದ ಭವ್ಯ ನಿವಾಸಕ್ಕೆ ಭೇಟಿ ಕೊಟ್ಟ ಪ್ರತಿಭಾ ರಾಮಚಂದ್ರ ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಇತಿಹಾಸ ಹಾಗು ಮಾಹಿತಿಯುಳ್ಳ ಲೇಖನ ಎರಡು ಕಂತಿನಲ್ಲಿ ನಿಮ್ಮೆಲ್ಲರಿಗಾಗಿ.

~ಸಂ

ನಮ್ಮ ಪಟ್ಟಣದ ಒಂದು ಐತಿಹಾಸಿಕ ಮನೆ: ಹುಹೆಂಡೆನ್ ಮ್ಯಾನರ್ – ಭಾಗ 1

ನಾವು ವಾಸವಿರಿವುದು ಬಕಿಂಗ್ಹ್ಯಾಮ್‌ಶೈರ್‌ ಕೌಂಟಿಯ ಹೈ ವಿಕಂಬ್ ಎಂಬ ಸಣ್ಣ ಪಟ್ಟಣದಲ್ಲಿ. ಕಳದೆ ವರ್ಷ ನನ್ನ ಮಗನ ಶಾಲೆಯಿಂದ ಒಂದು ಸ್ಪರ್ಧೆಯ ಬಗೆಗೆ ಈಮೇಲ್ ಬಂದಿತ್ತು. ನಮ್ಮ ಪಟ್ಟಣದಲ್ಲಿರುವ ಹುಹೆಂಡೆನ್ ಮ್ಯಾನರ್ ಎಂಬ ಐತಿಹಾಸಿಕ ಮನೆಯ ಟ್ರಸ್ಟ್ನವರು ಈಸ್ಟರ್ ಹಬ್ಬದ ಪ್ರಯುಕ್ತ ತಮ್ಮ ಸುತ್ತಮುತ್ತಲಿನಲ್ಲಿರುವ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಆಯೋಜಿಸಿದ ಸ್ಪರ್ಧೆ ಇದು. ಈ ಸ್ಪರ್ಧೆಯ ವಿಷಯ ಬಹಳ ವಿಭಿನ್ನ ಹಾಗು ವಿಶೇಷವಾಗಿತ್ತು — ಒಂದು ಕಾಲ್ಪನಿಕ ಜೀವಿಯನ್ನು (Mythical Creature) ವಿನ್ಯಾಸ ಮಾಡಿ ಆದರ ಬಗೆಗೆ ಸಂಕ್ಷಿಪ್ತ ವಿವರಣೆ ಕೊಡಬೇಕು ಎಂದು. ಪ್ರತಿ ಶಾಲೆಗೂ ನಿರ್ದಿಷ್ಟ ಬಗೆಯ Mythical Creature ವಿನ್ಯಾಸ ಮಾಡಲು ವಿಷಯ ಕೊಟ್ಟಿದ್ದರು. ನನ್ನ ಮಗನ ಶಾಲೆಯವರಿಗೆ ಒಂದು ಕಾಲ್ಪನಿಕ ಹಿಮ ಜೀವಿಯನ್ನು (Mythical Ice Creature) ವಿನ್ಯಾಸ ಮಾಡುವದಕ್ಕೆ ಹೇಳಿದ್ದರು. ಈ ಸ್ಪರ್ಧೆಯ ಬಹುಮಾನ ಕೂಡ ವಿಶೇಷವಾಗಿತ್ತು — ಪ್ರತಿ ಶಾಲೆಗೆ ಒಂದು ಚಿತ್ರವನ್ನು ಆಯ್ಕೆ ಮಾಡಲಾಗುವುದು ಹಾಗೂ ಆಯ್ಕೆಯಾದ ಚಿತ್ರವನ್ನು ಹೈ ವಿಕಂಬ್ ನ ನುರಿತ ಕಲಾವಿದರೊಬ್ಬರು ಲೈಫ್ ಸೈಜ್ ಆಕಾರದಲ್ಲಿ ಪುನರ್ ನಿರ್ಮಿಸುತ್ತಾರೆ ಮತ್ತು ಅದನ್ನು ಹುಹೆಂಡೆನ್ ಮ್ಯಾನರ್ ಗಾರ್ಡನ್ಸ್ ನಲ್ಲಿ ಈಸ್ಟರ್ ರಜೆ ವೇಳೆ 1 ತಿಂಗಳು  ಪ್ರದರ್ಶಿಸಲಾಗುವುದು, ಜೊತೆಗೆ ಸ್ಪರ್ಧೆಯಲ್ಲಿ ವಿಜೇತಾರಾದ ಮಕ್ಕಳ ಕುಟುಂಬದವರಿಗೆ ಹುಹೆಂಡೆನ್ ಮ್ಯಾನರ್ ಮತ್ತು ಗಾರ್ಡನ್ಸ್ ನ್ನು ನೋಡಲು complimentary ಟಿಕೆಟ್ ಕೊಡಲಾಗುವುದು ಎಂದು ಸಹ ತಿಳಿಸಿದ್ದರು. ನನ್ನ ಮಗನಿಗೆ ಡ್ರಾಯಿಂಗ್ ನಲ್ಲಿ ತುಂಬಾ ಆಸಕ್ತಿ, ಹಾಗಾಗಿ ಅತ್ಯಂತ ಉತ್ಸುಕತೆಯಿಂದ “Frozen Claw” ಅಂತ ಒಂದು ಕಾಲ್ಪನಿಕ ಹಿಮ ಜೀವಿಯನ್ನು ವಿನ್ಯಾಸ ಮಾಡಿ, ಅದರ ಚಿತ್ರ ಬಿಡಿಸಿ ಶಾಲೆಯವರಿಗೆ ಕೊಟ್ಟ. ಅವನ ಚಿತ್ರ ಚೆಂದವಿತ್ತು ಹಾಗು ಅನನ್ಯವಾಗಿಯೂ ಇತ್ತು, ಆದರೆ ಅವನು ಅದಕ್ಕೆ ತಕ್ಕ ವಿವರಣೆ ಕೊಟ್ಟಿರಲಿಲ್ಲ, ಬಹುಶಃ ಅದೇ ಕಾರಣಕ್ಕೆ ಅದು ಬಹುಮಾನಕ್ಕೆ ಆಯ್ಕೆಯಾಗಲಿಲ್ಲ, ಆದ್ದರಿಂದ ಅವನಿಗೆ ಸ್ವಲ್ಪ ನಿರಾಶೆಯಾಯಿತು. ಹೋಗಲಿ ಬಿಡು ಪುಟ್ಟ, ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ಬಹುಮಾನ ಸಿಗುವುದಲ್ಲ ಎಂದು ಅವನಿಗೆ ಸಮಜಾಯಿಷಿ ಹೇಳಿ ಸುಮ್ಮನಾದೆ. ಅನಂತರ ಅವನು teacher ಇದನ್ನು ಕೊಟ್ಟರು ಎಂದು ಒಂದು envelope ಕೊಟ್ಟ, ಅದರಲ್ಲಿ  ಹುಹೆಂಡೆನ್ ಮ್ಯಾನರ್ ನ್ನು ನೋಡಲು complimentary ಫ್ಯಾಮಿಲಿ ಎಂಟ್ರಿ ಟಿಕೆಟ್ voucher ನ್ನು ಕೊಟ್ಟಿದ್ದರು. ಇದನ್ನು ನಾವು ನಿರೀಕ್ಷಿಸಿರಲಿಲ್ಲ, ಬಹುಶಃ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆಲ್ಲರಿಗೂ ಹುಹೆಂಡೆನ್ ಮ್ಯಾನರ್  ಹಾಗೂ ಆದರ ಗಾರ್ಡನ್ಸ್ ನಲ್ಲಿ ಪ್ರದರ್ಶನಕ್ಕೆ ಇಡಲಿರುವ ಈಸ್ಟರ್ special mythical ಜೀವಿಗಳ cut-out ಗಳನ್ನು ನೋಡಲು ಅವಕಾಶ ಸಿಗಲಿ ಎಂದು ಕೊಟ್ಟಿರಬೇಕು, ಅದಾದರೂ ಸಿಕ್ಕಿದೆಯಲ್ಲ ಎಂದು ಖುಷಿಯಾಯಿತು. ಆದರೆ ಆ voucher ಮುಂಬರುವ 2 ವಾರದ ಈಸ್ಟರ್ ಸ್ಕೂಲ್ ರಜೆಯಲ್ಲಿ ಕೇವಲ 3 ನಿರ್ದಿಷ್ಟ ದಿನಗಳಲ್ಲಿ ಮಾತ್ರ ಮಾನ್ಯವಾಗಿತ್ತು!! ಬ್ರಿಟನಿನ ಮಳೆ ಬಗ್ಗೆ ನಮಗೆಲ್ಲಾ ಗೊತ್ತೇ ಇದೇ, ಒಮ್ಮೊಮ್ಮೆ storm ಬಂದರೆ ಎಡೆಬಿಡದೆ 3 ದಿನಗಳ ಕಾಲ ಗಾಳಿ-ಮಳೆ ಇರುತ್ತೆ. ಆ ತರಹ ಏನಾದರೂ ಆದರೆ ಗಾರ್ಡನ್ಸ್ ನೋಡಲು ಹೋಗುವದಕ್ಕೆ ಆಗೋದಿಲ್ಲ, ಹಾಗೆ ಆಗದಿರಲಿ ಎಂದು ಆಶಿಸೋಣ ಅಂತ ಮಗನಿಗೆ ಹೇಳಿದೆ. ಇದಾದ 1 ವಾರದ ಬಳಿಕ ಶಾಲೆಯ ಈಸ್ಟರ್ ರಜೆ ಶುರುವಾಯಿತು. ಮಾನ್ಯವಿದ್ದ 3 ನಿರ್ದಿಷ್ಟ ದಿನಗಳು ಸಮೀಪಿಸಿದಾಗ ಹವಾಮಾನ ಮುನ್ಸೂಚನೆ ನೋಡಿಕೊಂಡೆವು, 2 ದಿನ ಮಳೆಯ ಮುನ್ಸೂಚನೆ ಇತ್ತು, ಸದ್ಯ 3 ನೆ ದಿನಕ್ಕೆ ಮಳೆಯ ಮುನ್ಸೂಚನೆ ಇರಲಿಲ್ಲ , ಹಾಗಾದ್ರೆ ಆ ದಿನ ಹೋಗೋಣವೆಂದು ನಿರ್ಧರಿಸಿದೆವು.

ನಮ್ಮ ಹುಹೆಂಡೆನ್ ಮ್ಯಾನರ್ ಭೇಟಿಯ ಬಗೆಗೆ ಹೇಳುವ ಮುನ್ನ ಹೈ ವಿಕಂಬ್ ಮತ್ತು ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಕೊಡುತ್ತೇನೆ. ಇದನ್ನು ಸಾಮಾನ್ಯವಾಗಿ ವಿಕಂಬ್ ಎಂದು ಕರೆಯಲಾಗುತ್ತದೆ, ಇಲ್ಲಿಯ ಸಂಸದ್ ಸಭಾ ಕ್ಷೇತ್ರದ ಹೆಸರು ಕೂಡ ವಿಕಂಬ್ ಎಂದೇ ಇರೋದು. ಇದು ಇಂಗ್ಲೆಂಡ್‌ನ ಬಕಿಂಗ್ಹ್ಯಾಮ್‌ಶೈರ್‌ ಕೌಂಟಿಯಲ್ಲಿರುವ ಒಂದು ಮಾರುಕಟ್ಟೆ ಪಟ್ಟಣವಾಗಿದೆ. ಇದರ ದಕ್ಷಿಣದ ಕಡೆಗೆ ಸೆಂಟ್ರಲ್ ಲಂಡನ್ ಸುಮಾರು 29 ಮೈಲಿ ದೂರದಲ್ಲಿದೆ, ಹಾಗು 15 ಮೈಲಿ ಉತ್ತರಕ್ಕೆ ಪ್ರತಿಷ್ಟಿತ ವಿಶ್ವವಿದ್ಯಾನಿಲಯ ವಿರುವ ಆಕ್ಸ್‌ಫರ್ಡ್‌ ನಗರವಿದೆ. ಚಿಲ್ಟರ್ನ್ ಬೆಟ್ಟಗಳಿಂದ ಆವೃತಗೊಂಡ, ವೈ ನದಿಯ ಕಣಿವೆಯಲ್ಲಿರುವ ಈ ಪಟ್ಟಣವು ರಮಣೀಯ ಪ್ರಕೃತಿ ಸೌಂದರ್ಯಕ್ಕೂ ಹೆಸರುವಾಸಿಯಾಗಿದೆ, ಜೊತೆಗೆ ಶ್ರೀಮಂತ ಮತ್ತು ವೈವಿಧ್ಯಮಯ ಇತಿಹಾಸವನ್ನು ಕೂಡ ಹೊಂದಿದೆ. ಇಲ್ಲಿ ಪ್ರತಿ ವಾರ ಕಟ್ಟುವ ಮಾರುಕಟ್ಟೆಯು ಯುಕೆಯ ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದು, ಸುಮಾರು 700 ವರ್ಷಗಳಿಂದ ಚಾಲನೆಯಲ್ಲಿ ಇದೆ ಎಂದು ಕೇಳಿದ್ದೇನೆ. ಪ್ರಸ್ತುತ, ವಾರದಲ್ಲಿ 3 ದಿನಗಳು (ಮಂಗಳವಾರ, ಶುಕ್ರವಾರ ಮತ್ತು ಶನಿವಾರ) ಮಾರುಕಟ್ಟೆ ನಡೆಯುತ್ತದೆ. 1800 ರ ದಶಕದಲ್ಲಿ ಈ ಊರು ಕುರ್ಚಿ ತಯಾರಿಕೆಗೆ ಅತ್ಯಂತ ಪ್ರಸಿದ್ಧಿವಾಗಿತ್ತು. ಸುತ್ತಮುತ್ತಲು ಚಿಲ್ಟರ್ನ್ ಬೆಟ್ಟಗಳಿರುವುದರಿಂದ ವಿಧ ವಿಧಾವಾದ ಮರದ ಪ್ರಕಾರಗಳು ಹೇರಳವಾಗಿದ್ದೆವು. ಹಾಗಾಗಿ ಆ ಮರವನ್ನು ಕುರ್ಚಿ ತಯಾರಿಕೆಗೆ ಬಳಸಲಾಗುತಿತ್ತು. ಇದೇ ಚಿಲ್ಟರ್ನ್ ಬೆಟ್ಟದ ಒಂದು ಭಾಗದಲ್ಲಿ ವಿಶಾಲವಾದ ಹುಹೆಂಡೆನ್ ಎಸ್ಟೇಟ್ ಇರೋದು. ಸುಮಾರು 135 ಎಕರೆಗಳಷ್ಟು ಇರುವ ಈ ಎಸ್ಟೇಟ್, ಯುರೋಪಿನ ಅತಿದೊಡ್ಡ ಸಂರಕ್ಷಣಾ ಚಾರಿಟಿ ಸಂಸ್ಥೆಯಾದ ನ್ಯಾಷನಲ್ ಟ್ರಸ್ಟ್ ನ ಸ್ವತ್ತಾಗಿದೆ. ಹುಹೆಂಡೆನ್ ಮ್ಯಾನರ್ ಮತ್ತು ಗಾರ್ಡನ್ಸ್ ಈ ಎಸ್ಟೇಟ್ನ ನೆತ್ತಿಯ ಮೇಲೆ ನಿಂತಿವೆ. ನ್ಯಾಷನಲ್ ಟ್ರಸ್ಟ್ ಸದಸ್ಯರಿಗೆ ಮ್ಯಾನರ್ ಮತ್ತು ಗಾರ್ಡನ್ಸ್ ನೋಡಲು ಉಚಿತ ಪ್ರವೇಶ ಸಿಗುತ್ತದೆ. ಹೈವಿಕಂಬ್ ನ ಬಗ್ಗೆ ಹೇಳುವ ಉತ್ಸುಕತೆಯಲ್ಲಿ ನನ್ನ ಬರಹದ ಮೂಲ ವಿಷಯದಿಂದ divert ಆಗೋದು ಬೇಡ, ಮತ್ತೊಮ್ಮೆ ನಮ್ಮ ಹುಹೆಂಡೆನ್ ಮ್ಯಾನರ್ ಭೇಟಿಯ ದಿನಕ್ಕೆ ಬರೋಣ. ನಾನು ಮೊದಲೇ ಹೇಳಿದಂತೆ ಮಳೆಯ ಮುನ್ಸೂಚನೆ ಇಲ್ಲದಿರುವ ದಿನದಂದು ಮಧ್ಯಾಹ್ನ ಊಟ ಮುಗಿಸಿ, ಹುಹೆಂಡೆನ್ ಮ್ಯಾನರ್ ನೋಡಲು ಹೊರಟೆವು. ನಮ್ಮ ಮನೆಯಿಂದ ಅಲ್ಲಿಗೆ ಕಾಲನಡಿಗೆಯಲ್ಲಿ ಕೂಡ ಹೊಗಬಹುದು, ಹುಹೆಂಡೆನ್ ಎಸ್ಟೇಟ್ ನ ಗಡಿರೇಖೆಯ ಒಂದು ತುದಿ ನಮಗೆ ಸುಮಾರು 1 ಮೈಲಿ ದೂರವಿದೆಯಷ್ಟೇ, ಹಾಗಾಗಿ ಎಸ್ಟೇಟ್ ನ ಸುತ್ತ-ಮುತ್ತ ಸ್ಪ್ರಿಂಗ್ ಮತ್ತು ಬೇಸಿಗೆ ಕಾಲದಲ್ಲಿ ಕೆಲವು ಬಾರಿ ವಾಕಿಂಗ್ ಹೋಗಿದ್ದೇವೆ, ಆಗ ಎಸ್ಟೇಟ್ ನ ಮತ್ತೊಂದು ತುದಿಯಲ್ಲಿರುವ ಮ್ಯಾನರನ್ನು ದೂರದಿಂದ ನೋಡಿದ್ದೇವೆ, ಆದರೆ ಎಂದೂ ಅದರರೊಳಗೆ ಹೋಗಿ ನೋಡುವ ವಿಶೇಷ ಆಸಕ್ತಿ ಬಂದಿರಲಿಲ್ಲ. ಕಡೆಗೂ ಇಂದು ಅದರೊಳಕ್ಕೆ ಹೋಗುವದಕ್ಕೆ ಕಾಲ ಕೂಡಿ ಬಂದಿತು! ಹವಾಮಾನ ಯಾವಾಗ ಬೇಕಾದರೂ ಬದಲಾಗುವ ಸಾಧ್ಯತೆ ಇರುವ ಕಾರಣ ಮಳೆ ಬಂದರೆ ಕಷ್ಟವಾಗುತ್ತದೆ ಎಂದು ಈ ಬಾರಿ ಕಾರಿನಲ್ಲಿಯೇ ಹೊರಟೆವು, 6-7 ನಿಮಿಷಗಳಲ್ಲೇ ಅಲ್ಲಿಗೆ ತಲುಪಿದೆವು, ಕಾರ್ ಪಾರ್ಕ್ ಮಾಡಿ ಟಿಕೆಟ್ ಕೌಂಟರ್ ಬಳಿ ಹೋಗಿ ನಮ್ಮ complimentary voucher ತೋರಿಸಿ ಮ್ಯಾನರ್ ಪ್ರವೇಶದ 3 ಟಿಕೆಟ್ಗಳನ್ನು ಪಡೆದವು. ನಂತರ ಅಲ್ಲೇ ಟಿಕೆಟ್ ಕೌಂಟರ್ ನಿಂದ ಸ್ವಲ್ಪ ದೂರ ನಡೆದು ಹೋಗುವಷ್ಟರಲ್ಲೇ ಏನೋ ಕಣ್ಣಿಗೆ ಬಿತ್ತು, ಒಂದು ಉದ್ದನೆಯ ಹಗ್ಗದ ಬೇಲಿಯ ಮೇಲೆ ಚಿತ್ರಗಳನ್ನು ನೇತಿ ಹಾಕಿದ್ದ ಹಾಗೆ ಕಂಡಿತು, ಹತ್ತಿರ ಹೋಗಿ ನೋಡಿದಾಗ ತುಂಬಾ ಆಶ್ಚರ್ಯ ಆಯ್ತು!! ಆ ಚಿತ್ರಗಳು ಏನು ಗೊತ್ತೇ? ಅವು Mythical Creature Designing ಸ್ಪರ್ಧೆಯಲ್ಲಿ ಭಾಗವಿಸಿದ ಮಕ್ಕಳೆಲ್ಲರ ಡ್ರಾಯಿಂಗ್ಗಳು, ಅವರಿಗೆ ಬಂದಿದ್ದ ಪ್ರತಿಯೊಂದು ಡ್ರಾಯಿಂಗ್ ನ್ನು ಪ್ರತ್ಯೇಕವಾಗಿ laminate ಮಾಡಿ ಗಾರ್ಡನಿನ ಆವರಣದ ಸುತ್ತ ನೇತುಹಾಕಿದ್ದರು. ಡ್ರಾಯಿಂಗ್ಗಳನ್ನು  ಒಂದೊಂದಾಗಿ ನೋಡುತ್ತಾ ಹೋದೆವು, ಸ್ವಲ್ಪ ಮುಂದೆ ಹೋಗುತ್ತಿದಂತೆಯೇ ನಮ್ಮ ಮಗನ ಡ್ರಾಯಿಂಗ್ ಸಿಕ್ಕಿತ್ತು, ಅದನ್ನು ನೋಡಿ ನಮ್ಮೆಲರಿಗೂ ಬಹಳ ಸಂತೋಷ ಆಯ್ತು. ಆದರ ಪಕ್ಕದಲ್ಲಿ ನಿಂತು ಫೋಟೋ ತೆಗೆದು ಕೊಂಡೆವು. ಅದೇ ಆವರಣದಲ್ಲಿ ಮೊದಲ Mythical Creature ನ cut out ಕೂಡ ಪ್ರದರ್ಶಿಸಲಾಗಿತ್ತು, ಅದು ಗ್ರೀಕ್ ಪುರಾಣದಲ್ಲಿರುವ Medusa (The Snake-haired Gorgon) ಎಂಬ ಕಾಲ್ಪನಿಕ ಜೀವಿ. ಅದನ್ನು ಮಕ್ಕಳು ಯಾರು ವಿನ್ಯಾಸ ಮಾಡಿದಲ್ಲಾ ಅನ್ನಿಸಿತು, ಏಕೆಂದರೆ ಆದರ ವಿವರಣೆಯಲ್ಲಿ ಅದನ್ನು ವಿನ್ಯಾಸ ಮಾಡಿದದವರ ಹೆಸರು ಹಾಕಿರಲಿಲ್ಲ. ಇದನ್ನು ನೋಡಿದ ನಂತರ ನೇರವಾಗಿ ಹುಹೆಂಡೆನ್ ಮ್ಯಾನರ್ ಕಡೆಗೆ ಹೊರಟ್ವಿ. ಮ್ಯಾನರ್ ನ ಆವರಣದಲ್ಲಿ ಮತ್ತಷ್ಟು Mythical Creature ಗಳ cut out ಗಳನ್ನು ಪ್ರದರ್ಶಿಸಿದ್ದರು. ನನ್ನ ಯಜಮಾನರಿಗೆ ಆವತ್ತು ರಾಜಾ ದಿನವಾಗಿರಲಿಲ್ಲ, ಇದನ್ನು ನೋಡೋ ಸಲುವಾಗಿ ಕೆಲಸದಿಂದ ಕೇವಲ 2 ಘಂಟೆ ಕಾಲದ ವಿರಾಮ ತಗೊಂಡು ಬಂದಿದದ್ದರು. ಆದ್ದರಿಂದ ಅವರು ನಾನು ಬರಿ ಆವರಣದಲ್ಲೇ ಇಷ್ಟು ಹೊತ್ತು ನೋಡ್ತಾ ನಿಂತರೆ, ಮ್ಯಾನರ್ ಮತ್ತು ಗಾರ್ಡನ್ ನೋಡಲು ಸಮಯ ಇರುವುದಿಲ್ಲ ಎಂದು ನನಗೆ ಜೋರು ಮಾಡಿ, ಮೊದಲು ಮ್ಯಾನರ್ ಒಳಗೆ ಹೋಗೋಣ ಅಂತ ಎಳೆದುಕೊಂಡು ಹೋದರು! 

ಮ್ಯಾನರ್ ನ ಪ್ರವೇಶದ್ವಾರದಲ್ಲಿ National Trust ನವರ ಒಂದು ಫಲಕ ಇತ್ತು. ಅದರಲ್ಲಿ ಈ ಕೆಳಗಿರುವ ಸ್ವಾಗತ ಸಂದೇಶವಿತ್ತು:-
Welcome to Hughenden Manor
Hughenden was the home of Victorian Prime Minister Benjamin Disraeli, and later a Second World-War map making operation, codenamed ‘Hillside’.

ಹುಹೆಂಡೆನ್ ಮ್ಯಾನರ್‌ಗೆ ಸುಸ್ವಾಗತ
ಹುಹೆಂಡೆನ್ ಮ್ಯಾನರ್ ವಿಕ್ಟೋರಿಯನ್ ಪ್ರಧಾನಿ ಬೆಂಜಮಿನ್ ಡಿಸ್ರೇಲಿ ಅವರು ವಾಸವಿದ್ದ ಮನೆ ಮತ್ತು ನಂತರ ಎರಡನೇ ವಿಶ್ವ-ಯುದ್ಧದ ವೇಳೆ “ಹಿಲ್ಸೈಡ್” ಎಂಬ ಸಂಕೇತನಾಮವಿದ್ದ ಗೌಪ್ಯ ನಕ್ಷೆ ತಯಾರಿಕೆ ಕಾರ್ಯಾಚರಣೆ ನಡೆದ ಸ್ಥಳ.

ಈ ಸಂದೇಶದ ಮೊದಲನೇ ಭಾಗದ ಬಗ್ಗೆ ನನಗೆ ಮಾಹಿತಿಯಿತ್ತು, ಆದರೆ ಎರಡನೇ ಭಾಗದ ಮಾಹಿತಿ ಇರಲಿಲ್ಲ, ಹಾಗಾಗಿ ಅದು ನನ್ನ ಕುತೂಹಲ ಕೆರಳಿಸಿತು! ನಾವು ಒಳಗೆ ಪ್ರವೇಶ ಮಾಡಿದ ತಕ್ಷಣ ಮ್ಯಾನರ್ ನ ಮೇಲ್ವಿಚಾರಕ ರೊಬ್ಬರು ನಮ್ಮನ್ನು ಸ್ವಾಗತಿಸಿದರು. ಹುಹೆಂಡೆನ್ ಮ್ಯಾನರ್ ಗೆ ಇದು ನಿಮ್ಮ ಮೊದಲ ಭೇಟಿಯೇ ಎಂದು ಕೇಳಿದರು, ಹೌದು ಎಂದೆವು. ಹಾಗಾದರೆ ಬನ್ನಿ ನಿಮಗೆ ಕೆಲವು ಕೊಠಡಿಗಳನ್ನು
ತೋರಿಸಿ ಅದರ ವಿವರಣೆ ಕೊಡುತ್ತೇನೆ ಎಂದು ನಮ್ಮನ್ನು ಅವರೊಟ್ಟಿಗೆ ಕರೆದೊಯ್ಯದರು. ಮೊದಲು ಸಿಕ್ಕಿದ್ದು ಬೆಂಜಮಿನ್ ಡಿಸ್ರೇಲಿ ಅವರ ದೊಡ್ಡ ಲೈಬ್ರರಿ – ಇದು ಮುಂಚೆ ಅವರ ಡ್ರಾಯಿಂಗ್ ರೂಮ್ ಆಗಿತ್ತು, ಅವರ ಸೋದರಳಿಯ Coningsby ಯವರು ಇದನ್ನು 1890 ರ ದಶಕದಲ್ಲಿ ಗ್ರಂಥಾಲಯವಾಗಿ ಪರಿವರ್ತಿಸಿದರು ಎಂದು ತಿಳಿಯಿತು. ಡಿಸ್ರೇಲಿಯವರು ಪುಸ್ತಕ ಪ್ರಿಯರಾಗಿದ್ದ ಕಾರಣ ಹೆಚ್ಚು ಸಮಯ ಲೈಬ್ರರಿಯಲ್ಲಿ ಕಳೆಯುತ್ತಿದ್ದರಂತೆ. ಲೈಬ್ರರಿಯ 4 ಗೋಡೆಗಳ ಸುತ್ತಲೂ ಪುಸ್ತಕಗಳಿಂದ ತುಂಬಿದ ಕಪಾಟುಗಳು, ಎಲ್ಲಾ ಸೇರಿ ಸುಮಾರು 3000 ಪುಸ್ತಕಗಳಿವೆಯಂತೆ. ಮಧ್ಯದ ಗೋಡೆಯಲ್ಲಿ ಒಂದು Fire place ಇತ್ತು, ಅದರ ಮೇಲೆ ಬೆಂಜಮಿನ್ ಡಿಸ್ರೇಲಿ ಅವರ ಒಂದು ದೊಡ್ಡ ಚಿತ್ರವಿತ್ತು. ಲೈಬ್ರರಿಯ ಒಂದು ತುದಿಯಲ್ಲಿ ಅವರ ವರ್ಕಿಂಗ್ ಡೆಸ್ಕ್ ಇತ್ತು, ಅದರ ಮೇಲೆ ಒಂದು ವಿಚಿತ್ರ ವಸ್ತು ಕಂಡಿತು, ಅದು ಮಾರ್ಬಲ್ನಲ್ಲಿ ಮಾಡಿದ್ದ ಒಂದು ಪಾದದ ಶಿಲ್ಪ, ಇದೇನು ಅಂತ ಮೇಲ್ವಿಚಾರಕನ್ನು ಕೇಳಿದೆ, ಅದು ಡಿಸ್ರೇಲಿಯವರ ಹೆಂಡತಿ Mary-Anne ರವರ ಪಾದದ ಶಿಲ್ಪ, ಅವರು ಅದನ್ನು Paperweight (ಕಾಗದದ ತೂಕವಾಗಿ) ಬಳಸತಿದ್ದರು ಎಂದರು – ಇದನ್ನು ಕೇಳಿ ಇದೆಂಥ ವಿಚಿತ್ರ ಅಂತ ಅನ್ಕೊಂಡು ಮುಂದಿನ ಕೊಠಡಿಯ ಕಡೆಗೆ ನಡೆದವು. ಈ ಕೊಠಡಿಯಲ್ಲಿ ಡ್ರಾಯಿಂಗ್ ರೂಮ್ ಅನ್ನು recreate ಮಾಡಿದ್ದರು, ಈ ರೂಮಿನ ಬಣ್ಣಗಳು ಮತ್ತು ಪೀಠೋಪಕರಣಗಳು ನನಗೆ ತುಂಬಾ ಇಷ್ಟವಾದವು. Fire place ಮೇಲೆ Mary-Anne ರವರ ಒಂದು ಸುಂದರವಾದ ಭಾವಚಿತ್ರ ಇತ್ತು. 1872 ರಲ್ಲಿ Mary-Anne ರವರ ದೇಹಾಂತವಾದ ನಂತರ ಡಿಸ್ರೇಲಿಯವರು ಈ ಭಾವಚಿತ್ರವನ್ನು ಮಾಡಿಸಿದ್ದರೆಂದು ಹಾಗು ಈ ಕೋಠಡಿಯು Mary-Anne ರವರ ರುಚಿಗೆ ತಕ್ಕ ಹಾಗೆ ವಿನ್ಯಾಸ ಮಾಡಲಾಗಿತ್ತು ಎಂದು ಅಲ್ಲಿ ಬರೆದಿದ್ದರು. ಮುಂದಿನ ಕೊಠಡಿ ಗಾರ್ಡನ್ Hall, ಇಲ್ಲಿಂದ ಗಾರ್ಡನ್ನಿನ terrace ಗೆ ತೆರೆದುಕೊಳ್ಳುವ ದ್ವಾರಗಳಿವೆ.

ಇದಾದ ನಂತರದ ಕೊಠಡಿಗಳು ಮಹಡಿ ಮೇಲೆ ಇರುವವು, ಮೊದಲಿಗಿರುವ ಕೊಠಡಿಯ ಹೆಸರು Boudoir ಎಂದು. ಈ ತರಹದ ಸಾಂಪ್ರದಾಯಿಕವಾದ ಮನೆಗಳಲ್ಲಿ, ಮಹಿಳೆಯರು ಕುಳಿತುಕೊಳ್ಳುವ ಖಾಸಗಿ ಕೋಣೆಗೆ Boudoir ಎಂದು ಕರೆಯುತ್ತಿದ್ದರಂತೆ. ಈ ಕೋಣೆಯ ಕಿಟಕಿಗಳಿಂದ ಇಡೀ ಗಾರ್ಡನ್ ಕಾಣುತ್ತದೆ, ಹಾಗಾಗಿ Mary-Anne ರವರು ಇಲ್ಲಿ ಕುಳಿತು ಗಾರ್ಡನಿನ ರೂಪಾಂತರವನ್ನು ಯೋಜಿಸುತ್ತಿದ್ದರಂತೆ ಹಾಗು ತಮ್ಮ ಮನೆಯ ಖಾತೆಗಳನ್ನು ಮಾಡಲು ಕೂಡ ಇದೇ ಕೋಣೆಯಲ್ಲಿ ಕೂರುತ್ತಿದ್ದರಂತೆ. ಅಲ್ಲೇ ಹತ್ತಿರದ ಮತ್ತೊಂದು ಕೋಣೆಯಲ್ಲಿ ಡಿಸ್ರೇಲಿಯವರು ಎಕ್ಸ್‌ಚೀಕರ್‌ನ ಕುಲಪತಿಯಾಗಿರುವಾಗ (Chancellor to the Exchequer) ಧರಿಸಿರುತ್ತಿದ್ದ ಕಪ್ಪು ರೇಷ್ಮೆ ನಿಲುವಂಗಿಯನ್ನು ಪ್ರದರ್ಶಿಸಿದ್ದಾರೆ, ಎಕ್ಸ್‌ಚೀಕರ್‌ನ ಕುಲಪತಿಯಾಗಿ ಅವರ ಅವಧಿ ಮುಗಿದ ಮೇಲೆಯೂ ಅವರು ಆ ನಿಲುವಂಗಿಯನ್ನು ಬಿಟ್ಟುಕೊಡಲು ನಿರಾಕರಿಸಿದ ಕಾರಣ, ಅದು ಅವರಲ್ಲಿಯೇ ಉಳಿಯಿತಂತೆ.

ಮುಂದಿನ ಕೊಠಡಿ ಬೆಡ್ರೂಮ್, ಈ ಕೋಣೆಯಲ್ಲಿ ಸುಂದರವಾದ ಮಂಚ ಮತ್ತು ಇತರೆ ಪೀಠೋಪಕರಣಗಳನ್ನು ಬಿಟ್ಟು ಗಮನ ಸೆಳೆಯುವ ವಸ್ತುಗಳೆಂದರೆ ಡಿಸ್ರೇಲಿಯವರ ಕಮೋಡ್ (ನಿಜವಾದ ವಿಕ್ಟೋರಿಯನ್ ಶೌಚಾಲಯ!) ಮತ್ತು Fire Place ನ ಗೋಡೆಯ ಮೇಲೆ ನೇತಾಡುತ್ತಿದ್ದ ಮಹಾರಾಣಿ ವಿಕ್ಟೋರಿಯಾ ಮತ್ತು ಅವರ ಪತಿ ಪ್ರಿನ್ಸ್ ಆಲ್ಬರ್ಟ್ ರವರ ಚಿತ್ರಗಳು. ಆ ಎರಡೂ ಚಿತ್ರಗಳನ್ನು ರಾಣಿ ವಿಕ್ಟೋರಿಯ ರವರೇ ಡಿಸ್ರೇಲಿಯವರಿಗೆ ಉಡುಗರೆಯಾಗಿ ಕೊಟ್ಟಿದ್ದಂತೆ, ಚಿತ್ರಗಳ ಕೆಳಗೆ ರಾಣಿ ಮತ್ತು ಪ್ರಿನ್ಸ್ ರ ಸಹಿಗಳಿವೆ. ಮುಂದಿನ ಕೊಠಡಿ ಸ್ಟಡಿ  ರೂಮ್, ಇದು ಡಿಸ್ರೇಲಿಯವರು ಕೆಲಸ ಮಾಡುತ್ತಿದ್ದ ಕೋಣೆಯಾಗಿತ್ತಂತೆ. ಈ ಕೋಣೆಯಲ್ಲಿ ಅವರ ಸ್ಟಡಿ ಟೇಬಲ್ ಮತ್ತು ಕುರ್ಚಿ ಅಲ್ಲದೆ ಪಕ್ಕದಲ್ಲಿ ಒಂದು ಪುಟ್ಟ ಟೇಬಲ್ ಮೇಲೆ ಒಂದು ಕೆಂಪು ಬಣ್ಣದ Parliamentary Dispatch box ಅನ್ನು ಕೂಡ ನೋಡಬಹುದು. ಇದನ್ನು ಡಿಸ್ರೇಲಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಸರ್ಕಾರದ sensitive documents (ಸೂಕ್ಷ್ಮ ದಾಖಲೆಗಳನ್ನು) ಸಂಸದ್ ಸಧನಕ್ಕೆ ಸಾಗಿಸಲು  ಬಳಸುತ್ತಿದ್ದರಂತೆ.

ಮತ್ತೆ ಮಹಡಿ ಇಳಿದು ಕೆಳಗೆ ಬಂದಾಗ ಡೈನಿಂಗ್ ರೂಮ್ ಸಿಕ್ಕಿತು. ಈ ಕೊಠಡಿಗೆ ಪ್ರವೇಶವಾಗುತ್ತಿದಂತೆ ಎದ್ದು ಕಾಣುವ ವಸ್ತು ಎಂದರೆ ಎದುರಿನ ಗೋಡೆಯ ಮೇಲಿರುವ ಡಿಸ್ರೇಲಿಯವರ ದೊಡ್ಡ ಭಾವಚಿತ್ರ, ಇದು ಡಿಸ್ರೇಲಿಯವರು ಪ್ರಧಾನಿಯಾಗಿದ್ದ ಸಮಯದ ಚಿತ್ರವಂತೆ. ಕೋಣೆಯ ಬಲಭಾಗದಲ್ಲಿ ಮನೋಹರವಾದ fully laid ಡೈನಿಂಗ್ ಟೇಬಲ್ ಇದೆ. ಡಿಸ್ರೇಲಿಯವರು ಮಹಾರಾಣಿ ವಿಕ್ಟೋರಿಯರ ನೆಚ್ಚಿನ ಪ್ರಧಾನ ಮಂತ್ರಿಯಾಗಿದ್ದರಂತೆ, ಹಾಗಾಗಿ ಅವರು 1877 ರಲ್ಲಿ ಒಮ್ಮೆ ಹ್ಯೂಹೆಂಡೆನ್‌ಗೆ ಭೇಟಿ ನೀಡಿ ಇಲ್ಲಿ lunch ಕೂಡ ಮಾಡಿದ್ದರಂತೆ. ಆ ಸಂದರ್ಭದಲ್ಲಿ, ಮಹಾರಾಣಿ ವಿಕ್ಟೋರಿಯಾ ರವರು ಆರಾಮವಾಗಿ ಕುಳಿತುಕೊಳ್ಳಲು ಮತ್ತು ಅವರ ಪಾದಗಳು ಸುಲಭವಾಗಿ ನೆಲವನ್ನು ತಲುಪಲು ಅನುವಾಗುವಂತೆ ಡಿಸ್ರೇಲಿಯವರು ರಾಣಿಯ ಕುರ್ಚಿಯ ಪಾದವನ್ನು ಕತ್ತರಿಸಿ ಇಟ್ಟಿದ್ದರಂತೆ!! ಆ ಕುರ್ಚಿಯನ್ನು ಈಗಲೂ ಹಾಗೆ ಇಟ್ಟಿದ್ದಾರೆ. Dining ಟೇಬಲ್ ನ ಎದುರಿನ ಗೋಡೆಯ ಮೇಲೆ ಮಹಾರಾಣಿ ವಿಕ್ಟೋರಿಯ ರವರ ಭವ್ಯವಾದ ಭಾವಚಿತ್ರವೊಂದನ್ನು ನೋಡಬಹುದು, ಇದನ್ನು ಸ್ವತಃ ರಾಣಿ ವಿಕ್ಟೋರಿಯ ರವರೇ ಡಿಸ್ರೇಲಿಯವರಿಗೆ ಕೊಟ್ಟಿದ್ದಂತೆ. ಮತ್ತು ಈ ಕೋಣೆಯಲ್ಲಿ ಎರಡು ರಹಸ್ಯ ಬಾಗಿಲುಗಳು ಕಂಡವು, ಅವು ಅಡುಗೆಮನೆಗೆ ತೆರೆಯುತ್ತವೆ ಹಾಗು ಅವನ್ನು ಮನೆ ಕೆಲಸದವರು ಬಳಸುತ್ತಿದ್ದರು ಎಂದು ತಿಳಿಯಿತು. ಕೋಣೆಯ ಎಡ ಭಾಗದಲ್ಲಿ ಬೆಂಜಮಿನ್ ರ ತಂದೆ ಇಸಾಕ್ ಡಿಸ್ರೇಲಿಯವರ ಒಂದು ಭಾವಚಿತ್ರ ಕೂಡ ಇದೆ. ಕೆಳಗಿನ ಮಹಡಿಯಲ್ಲಿಯೇ Disraeli Room ಎಂಬ ಮತ್ತೊಂದು ಕೊಠಡಿಯಿದೆ, ಇಲ್ಲಿ ಗಮನ ಸೆಳೆಯುವ ವಸ್ತು – ಎತ್ತರದ ವೇದಿಕೆಯ ಮೇಲಿರುವ ಪಲ್ಲಕ್ಕಿ ಮಾದರಿಯ ಉದ್ದನೆಯ ಕೈಹಿಡಿಗಳುಳ್ಳ ಒಂದು ಕುರ್ಚಿ. ಈ ಕುರ್ಚಿಯನ್ನು ಡಿಸ್ರೇಲಿಯವರು ಮೊದಲ ಬಾರಿಗೆ ಸಂಸದ್ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ವಿಕಂಬಿನ ಪ್ರಖ್ಯಾತ furniture ಕಂಪನಿಯಾದ Ercol ನಿಂದ ಮಾಡಿಸಿದ್ದರಂತೆ. ಆ ಕಾಲದಲ್ಲಿ ಸಂಸದ್ ಚುನಾವಣೆಯಲ್ಲಿ ಯಾರಾದರೂ ವಿಜೇತಾರಾದಾಗ, ಅವರನ್ನು ಇಂತಹ ಪಲ್ಲಕ್ಕಿ ಮಾದರಿಯ ಕುರ್ಚಿಯ ಮೇಲೆ ಕೂರಿಸಿ, ಅವರ ಬೆಂಬಲಿಗರು ಅದನ್ನು ಹೊತ್ತುಕೊಂಡು ಊರಿನ ಮುಖ್ಯ ಬೀದಿಯಲ್ಲಿ ಮೆರವಣಿಗೆ ಹೋಗುವ ಪ್ರತೀತಿಯಿತ್ತಂತೆ, ಇದಕ್ಕೆ “Chairing” ಎಂದು ಕರೆಯುತ್ತಿದ್ದರಂತೆ. ಆದರೆ ಡಿಸ್ರೇಲಿಯವರು 3 ಬಾರಿ ಸಂಸದ್ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಒಮ್ಮೆಯೂ ವಿಜೇತಾರಾಗಲಿಲ್ಲವಾದ ಕಾರಣ ಅವರಿಗೆ “Chairing” ನ ಸೌಭಾಗ್ಯ ದೊರೆಯಲಿಲ್ಲ, ಹಾಗಾಗಿ ಈ ಖುರ್ಚಿಯನ್ನು ಉಪಯೋಗಿಸಲೇ ಇಲ್ಲವಂತೆ!! ಅದಕ್ಕೆ ಈ ಕುರ್ಚಿಗೆ “Spare Chair” ಎಂಬ ಹೆಸರು ಬಂದಿತು. ಈ ಕುರ್ಚಿಯನ್ನು ಬಿಟ್ಟು ಇಡೀ ಮ್ಯಾನರ್ ನ ಎಲ್ಲಾ ಕೊಠಡಿಗಳಲ್ಲಿಯೂ ವಿಕಂಬಿನಲ್ಲಿ ತಯಾರಾದ ವಿವಿಧ ಬಗೆಯ ಕುರ್ಚಿಗಳನ್ನು ಕೂಡ ನೋಡಬಹುದು. 

ಇದಿಷ್ಟು ಬ್ರಿಟನ್ನಿನ ಪೂರ್ವ ಪ್ರಧಾನ ಮಂತ್ರಿ ಬೆಂಜಮಿನ್ ಡಿಸ್ರೇಲಿ ಹಾಗು ಅವರ ಉತ್ತರಾಧಿಕಾರಿಯ ಕಾಲದಲ್ಲಿ ಹುಹೆಂಡೆನ್ ಮ್ಯಾನರ್ ಹೇಗಿತ್ತು ಅನ್ನೋ ಚಿತ್ರಣವನ್ನು ಕೊಡವ ಒಂದು ಸಣ್ಣ ಪ್ರಯತ್ನ. ಇಲ್ಲಿಗೆ ಈ ಭಾಗವನ್ನು ಮುಗಿಸಿ, ಮುಂದಿನ ಭಾಗದಲ್ಲಿ ಹುಹೆಂಡೆನ್ ಮ್ಯಾನರ್ ನ ಮತ್ತೊಂದು ಸ್ವಾರಸ್ಯಕರ ಕಥೆಯ ಬಗೆಗೆ ತಿಳಿಸುತ್ತೇನೆ, ನಿರೀಕ್ಷಿಸಿ

ಮತ್ತಷ್ಟು ರೋಚಕ ಮಾಹಿತಿಯೊಂದಿಗೆ ಭಾಗ -೨ ಸಧ್ಯದಲ್ಲೇ ನಿರೀಕ್ಷಿಸಿ

ಲೇಖನ- ಶ್ರೀಮತಿ ಪ್ರತಿಭಾ ರಾಮಚಂದ್ರ