ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ ಭಾಗ 1

ಡಾ ಜಿ ಎಸ್ ಶಿವಪ್ರಸಾದ್ (ಫೋಟೋ ಕೃಪೆ ಗೂಗಲ್)

ಕೆಲವು ದಿನಗಳ ಹಿಂದೆ ಯು.ಕೆ ಕನ್ನಡ ಬಳಗದ  ಯುಗಾದಿ ಹಬ್ಬದ ಸಂಭ್ರಮದಲ್ಲಿ ಅನಿವಾಸಿ ಸಾಹಿತ್ಯಗೋಷ್ಠಿಯನ್ನು    ಏರ್ಪಡಿಸಲಾಗಿತ್ತು. ಈ ಸಾಹಿತ್ಯ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಶರಣರ, ದಾಸರ ಮತ್ತು ಸಂತರ ಕೊಡುಗೆ’ಯನ್ನು ಕುರಿತು ಅನಿವಾಸಿ ಸದಸ್ಯರು ತಮ್ಮ ಚರ್ಚೆಯನ್ನು ಮಂಡಿಸಿದರು. ಈ ಗೋಷ್ಠಿಯಲ್ಲಿ ಶರಣರ  
ಕೊಡುಗೆಯ ಬಗ್ಗೆ ನಾನು ಮಾತನಾಡಿದೆ, ಶರಣೆಯರ ಬಗ್ಗೆ ದಾಕ್ಷಾಯಿಣಿ ಗೌಡ, ದಾಸ ಸಾಹಿತ್ಯದ ಬಗ್ಗೆ ಲಕ್ಷ್ಮೀ ನಾರಾಯಣ ಗುಡೂರ್, ಕೊನೆಯದಾಗಿ ಸಂತ ಶಿಶುನಾಳ ಶರೀಫರ ಬಗ್ಗೆ ಶ್ರೀವತ್ಸ ದೇಸಾಯಿ ಅವರು ಮಾತನಾಡಿದರು. ಚರ್ಚೆಗಳ ಮಧ್ಯೆ ದಾಸರ ಮತ್ತು ಶರಣರ ಗೀತೆಗಳನ್ನು ಗಾಯಕಿಯರಾದ ರಶ್ಮಿ ಮಂಜುನಾಥ್ ಮತ್ತು ಅನ್ನಪೂರ್ಣ ಆನಂದ್ ಪ್ರಸ್ತುತಪಡಿಸಿದರು. ಸದಸ್ಯರು ಮಂಡಿಸಿದ ಈ ಚರ್ಚೆಗಳನ್ನು ಅನಿವಾಸಿ ತಾಣದಲ್ಲಿ ನಾಲ್ಕು ಹಂತಗಳಲ್ಲಿ ಪ್ರಕಟಿಸುವುದೆಂದು ಗೋಷ್ಠಿಯಲ್ಲಿ ಸಮ್ಮತಿಸಲಾಯಿತು. ಈ ನಾಲ್ಕು ವಿಷಯಗಳಿಗೆ ಪೂರಕವಾದ ಹಿನ್ನೆಲೆಯನ್ನು ಒದಗಿಸಿ ನಾನು ಮಂಡಿಸಿರುವ "ಶರಣ ಸಾಹಿತ್ಯದ ಒಟ್ಟಾರೆ ಆಶಯಗಳು, ಸಾಮಾಜಿಕ ನಿಲುವುಗಳು ಮತ್ತು ಮೌಲ್ಯಗಳು" ಎಂಬ ಬರಹವನ್ನು ಈ ವಾರದ ಅನಿವಾಸಿ ಸಂಚಿಕೆಯಲ್ಲಿ ನಿಮಗೆ ತಲುಪಿಸುತ್ತಿದ್ದೇನೆ.

ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ - ಕೆಲವು ಹಿನ್ನೆಲೆ ವಿಚಾರಗಳು;
ಕನ್ನಡ ಸಾಹಿತ್ಯಕ್ಕೆ 1500 ವರ್ಷಗಳ ಇತಿಹಾಸವಿದೆ. ಇಲ್ಲಿ ಹಳೆಗನ್ನಡ (400 – 1100CE), ನಡುಗನ್ನಡ (1100 -1700 CE) ಮತ್ತು ಹೊಸಗನ್ನಡ (1700 - ಇಲ್ಲಿಯವರೆಗೆ) ಎಂಬ ಮೂರು ಕಾಲಘಟ್ಟಗಳನ್ನು ಗುರುತಿಸಬಹುದು. ಹಳೆಗನ್ನಡ ಕಾಲಘಟ್ಟದಲ್ಲಿ ಜೈನರು ಪ್ರಧಾನವಾಗಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದರು. ಇವರಲ್ಲಿ ಪಂಪ, ರನ್ನ ಮತ್ತು ಪೊನ್ನ ಮುಖ್ಯವಾದ ಕವಿಗಳು. ಅವರು ಜೈನ ತೀರ್ಥಂಕರರನ್ನು ಕುರಿತಾಗಿ ಅಷ್ಟೇ ಅಲ್ಲದೆ ಮಹಾಭಾರತದ ವಿಷಯವನ್ನು ಆಯ್ಕೆಮಾಡಿ ಮಹಾ ಕಾವ್ಯವನ್ನು ರಚಿಸದರು. ಇನ್ನು 12ನೇ ಶತಮಾನದಲ್ಲಿ ಶರಣರು ಅಂದರೆ ಬಸವಣ್ಣನವರ ಅನುಯಾಯಿಗಳಾದ ವೀರಶೈವ ಮತ್ತು ಹೊಸದಾಗಿ ಹುಟ್ಟಿಕೊಂಡ ಲಿಂಗಾಯಿತ ಎಂಬ ಮತದವರು ವಚನಗಳನ್ನು ರಚಿಸಿದರು. ಈ ವಚನಗಳು ಸಾಮಾಜಿಕ ಕ್ರಾಂತಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಸಾಹಿತ್ಯ ಎನ್ನಬಹುದು. ಇನ್ನು 15ನೇ ಶತಮಾನದಲ್ಲಿ ವೈಷ್ಣವರು (ಹರಿದಾಸರು ಎಂದು ಕೂಡ ಗುರುತಿಸ ಬಲ್ಲವರು) ಪ್ರಧಾನವಾಗಿ ಭಕ್ತಿರಸವನ್ನು ಮತ್ತು ಕೆಲವು ಸಾಮಾಜಿಕ ಹಿತೋಪದೇಶಗಳನ್ನು ಒಳಗೊಂಡ ಕೀರ್ತನೆಗಳನ್ನು ರಚಿಸಿದರು. ಇವು ಮುಖ್ಯವಾಗಿ ಮಧ್ವಾಚಾರ್ಯರ ದ್ವೈತ ಅಧ್ಯಾತ್ಮ ಪರಿಕಲ್ಪನೆಯನ್ನು ಆಧರಿಸಿರುವ ಕೀರ್ತನೆಗಳು ಎಂದು ಗುರುತಿಸಬಹುದು. ಇದು ಹುಟ್ಟಿಕೊಂಡದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್ನ ಬಹುದು. ಶರಣ ಮತ್ತು ದಾಸ ಸಾಹಿತ್ಯಕ್ಕೆ ಪರ್ಯಾಯವಾಗಿ, ಸಮಾಜದ ಅನಕ್ಷರಸ್ತ ರೈತಾಪಿ ಮತ್ತು ಜನ ಸಾಮಾನ್ಯರು ನಡುವೆ ಕರ್ನಾಟಕ ಪ್ರಾದೇಶಿಕ ನೆಲೆಗಳಲ್ಲಿ ಹುಟ್ಟಿಕೊಂಡ ಮತ್ತು ಜಾನಪದ ಸಂಪ್ರದಾಯವನ್ನು ಹೋಲುವ ಸಾಹಿತ್ಯವನ್ನು ತತ್ವ ಪದಗಳು ಎಂದು ಗುರುತಿಸಬಹುದು. ಇದರಲ್ಲಿ ಭಕ್ತಿ ಮತ್ತು ಸಾಮಾಜಿಕ ವಿಷಯಗಳನ್ನು ಆಧರಿಸಿದ ಕೃತಿಗಳಿವೆ. ಶಿಶುನಾಳ ಶರೀಫರ ತತ್ವ ಪದಗಳನ್ನು ಈ ಗುಂಪಿಗೆ ಸೇರಿಸಬಹುದು. ಶಿಶುನಾಳ ಶರೀಫರು 19ನೇ ಶತಮಾನದಲ್ಲಿ ಬಾಳಿದವರು. ಶರಣ ದಾಸರ ಸಂತರ ಕೊಡುಗೆ ಅಪಾರವಾದದ್ದು, ಅವರು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎದ್ದು ನಿಲ್ಲುವ ಬರಹಗಾರರು. ದೇವರು, ಧರ್ಮ ಎಂಬ ವಿಷಯಗಳಲ್ಲದೆ ಸಾಮಾಜಿಕ ಬದುಕಿಗೆ ಬೇಕಾದ ಮಾನವೀಯ ಮೌಲ್ಯಗಳನ್ನು ಸದ್ಭಾವನೆಗಳನ್ನು ಎತ್ತಿಹಿಡಿದಿದ್ದಾರೆ. ಅವರ ಬರಹಗಳಲ್ಲಿ ಸಾಹಿತ್ಯಿಕ ಮೌಲ್ಯಗಳು ಇವೆ. ಆದುದರಿಂದಲೇ ಅವು ಕಾಲಾತೀತವಾದ ಉತ್ತಮ ಸಾಹಿತ್ಯಗಳಾಗಿವೆ.

- ಸಂ


*

“ಶರಣ ಸಾಹಿತ್ಯದ ಒಟ್ಟಾರೆ ಆಶಯಗಳುಸಾಮಾಜಿಕ ನಿಲುವುಗಳು ಮತ್ತು ಮೌಲ್ಯಗಳು

ಡಾ ಜಿ ಎಸ್ ಶಿವಪ್ರಸಾದ್

ಶರಣ ಸಾಹಿತ್ಯದ ಮುಖ್ಯಾಂಶಗಳು ಎಂದರೆ: ಎಲ್ಲರನ್ನು ಒಳಗೊಳ್ಳುವಿಕೆ, ವೈಚಾರಿಕ ಪ್ರಜ್ಞೆ, ಸಂಪ್ರದಾಯವನ್ನು ಪ್ರಶ್ನಿಸುವ, ಧಿಕ್ಕರಿಸುವ ದಿಟ್ಟ ನಿಲುವು, ಧರ್ಮದ ನಿರಪೇಕ್ಷೆ, ದೇವಸ್ಥಾನದ ನಿರಾಕರಣೆ, ಜಾತಿ ವ್ಯವಸ್ಥೆಯ ನಿರಾಕರಣೆ, ಮೂಢ ನಂಬಿಕೆಗಳ ನಿರಾಕರಣೆ, ಸಮಾಜ ಮತ್ತು ಸಂಸಾರ ಮುಖಿಯಾಗಿರುವ ಚಿಂತನೆಗಳು, ಸ್ತ್ರೀ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಪ್ರಜಾ ಪ್ರಭುತ್ವದ ಪರಿಕಲ್ಪನೆ, ಮಾನವೀಯ ಮೌಲ್ಯಗಳಾದ ದಯೆ, ಅನುಕಂಪೆ, ವಚನ ನಿಷ್ಠೆ, ದಾಸೋಹ, ಕಾಯಕವೇ ಕೈಲಾಸ ಎಂಬ ಧ್ಯೇಯಗಳ ಬೋಧನೆ ಮತ್ತು ಆಚರಣೆ. ಇವೆಲ್ಲವನ್ನೂ ಒಟ್ಟಾರೆ ನೋಡಿದಾಗ ಬಹಳ ಉದಾರವಾದ ನೀತಿ ಎಂದು ಗುರುತಿಸಬಹುದು. 20ನೇ ಶತಮಾನದ ಯುರೋಪಿನಲ್ಲಿ ಹಲವಾರು ಪ್ರೌಢ ಚಿಂತಕರು ಧೀರ್ಘ ಕಾಲ ಚರ್ಚೆ ಮಾಡಿ ಹುಟ್ಟುಹಾಕಿದ ಉದಾರನೀತಿಗೆ (Liberalism) ಹತ್ತಿರವಾದದ್ದು ಎನ್ನಬಹುದು. ಇವರಿಗಿಂತ ೮೦೦ ವರ್ಷಗಳ ಹಿಂದೆಯೇ ಶರಣರು ಪ್ರಗತಿ ಪರರಾಗಿದ್ದರು ಮತ್ತು ಉದಾರನೀತಿಯ ಬಗ್ಗೆ ಆಗಿನ ಶರಣರು ಆಲೋಚಿಸಿದ್ದರು ಅನ್ನುವ ವಿಚಾರ ಅಚ್ಚರಿಯನ್ನು ಉಂಟುಮಾಡುತ್ತದೆ.

12ನೇ ಶತಮಾನದಲ್ಲಿ ಶರಣರು ಜಡ್ಡು ಹಿಡಿದಿದ್ದ ಸಮಾಜಕ್ಕೆ ಒಂದು ಹೊಸ ಬದಲಾವಣೆಯನ್ನು ತಂದುಕೊಟ್ಟು ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಿದರು. ಮುಂದಕ್ಕೆ ಹಿಂದೂ ಧರ್ಮದಲ್ಲಿ /ಸಮಾಜದಲ್ಲಿ/ಸಂಸ್ಕೃತಿಯಲ್ಲಿ ಆಚರಣೆಯೊಳಗಿದ್ದ ಸತಿ ಪದ್ಧತಿ, ಬಾಲ್ಯ ವಿವಾಹ, ವಿಧವೆ ಮರು ವಿವಾಹ, ಜಾತೀಯತೆ ಮತ್ತು ಅಸ್ಪೃಶ್ಯತೆಯ ನಿವಾರಣೆ, ಸ್ತ್ರೀ ಶಿಕ್ಷಣ ಮುಂತಾದ ಸಾಮಾಜಿಕ ಪರಿವರ್ತನೆಗಳನ್ನು ರಾಜಾರಾಂ ಮೋಹನ್ ರಾಯ್, ದಯಾನಂದ ಸರಸ್ವತಿ, ಫುಲೆ, ರಾಮಕೃಷ್ಣ ಪರಮಹಂಸರು, ಗಾಂಧಿ, ಅಂಬೇಡ್ಕರ್ ಮುಂತಾದ ಮಹನೀಯರು ತಂದುಕೊಟ್ಟರು. ಯಾವುದೇ ಒಂದು ಧರ್ಮ ಮತ್ತು ಅದನ್ನು ಆಧರಿಸಿದ ಸಂಸ್ಕೃತಿ ಕಾಲ ಕಾಲಕ್ಕೆ ಪರಿಷ್ಕರಣೆಗೆ ಒಳಗಾಗುವುದು ಆರೋಗ್ಯಕರ. ನಮ್ಮ ಸಾಮಾಜಿಕ ಮೌಲ್ಯಗಳು ತೀವ್ರಗತಿಯಲ್ಲಿ ಬದಲಾಗುತ್ತಿದೆ, ಆದುದರಿಂದ ಅದಕ್ಕೆ ತಕ್ಕಂತೆ ಧರ್ಮಗಳಲ್ಲೂ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಧರ್ಮ ಸೂತ್ರಗಳನ್ನು ದೈವ ಸ್ವರೂಪರು ಬರೆದದ್ದು, ಅದನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದು ಕೆಲವರು ವಾದ ಮಾಡಬಹುದು, ಕಾಲಕ್ಕೆ ಹೊಂದಿಕೊಳ್ಳದ ಧರ್ಮ ಸಂಘರ್ಷಣೆಗಳಿಗೆ ಕಾರಣವಾಗುತ್ತದೆ.


ಇತಿಹಾಸವನ್ನು ಗಮನಿಸಿದಾಗ ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು ಉದಾರ ಮತ್ತು ಸಂಕುಚಿತ ಸಾಂಪ್ರದಾಯಿಕ ನಿಲುವುಗಳ ನಡುವೆ ಗಡಿಯಾರದ ಪೆಂಡ್ಯುಲಮ್ ರೀತಿಯಲ್ಲಿ ತುಯ್ದಾಡುತ್ತಿತು, ಈಗಲೂ ತುಯ್ದಾಡುತ್ತಿದೆ. ಇದನ್ನು ಹಿಂದೂ ಧರ್ಮವಲ್ಲದೆ ಕ್ರೈಸ್ತ ಮತ್ತು ಇಸ್ಲಾಂ ಧರ್ಮದಲ್ಲೂ ಕಾಣಬಹುದು. ಧರ್ಮ, ಸಂಕಟಕ್ಕೆ ಒಳಗಾದಾಗ (ಅಥವಾ ಒಳಗಾಗಿದೆ ಎಂದು ಭಾವಿಸಿದಾಗ) ಧರ್ಮ ರಕ್ಷಕರು ಮುಂದಾಗಿ ತೀವ್ರವಾದ ಧರ್ಮ ಪ್ರಚೋದನೆಯಲ್ಲಿ ತೊಡಗಿರುವುದನ್ನು ಪ್ರಪಂಚದ ಎಲ್ಲ ಸಂಸ್ಕೃತಿಯಲ್ಲಿ ಕಾಣಬಹುದು. ಸೋಷಿಯಲ್ ಮೀಡಿಯಾ ಬಳಸುವ ಈ ಸಮಯದಲ್ಲಿ ತೀವ್ರವಾದ ಧರ್ಮ ಪ್ರಚೋದನೆಯನ್ನು ವಾಟ್ಸ್ ಆಪ್ ಸಂದೇಶಗಳಲ್ಲಿ ಪ್ರತ್ಯಕ್ಷವಾಗಿ ನಾವು ಭಾರತೀಯರು ಅನುಭವಿಸುತ್ತಿದ್ದೇವೆ. ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ ಹಿನ್ನೆಲೆ ಉದ್ದೇಶವೆಂದರೆ ಬಹುಶಃ ಹಿಂದೆ ಧರ್ಮದ ಅತಿಯಾದ ಬಳಕೆಯಾಗಿ ಸಂಪ್ರದಾಯಸ್ಥರ ದಬ್ಬಾಳಿಕೆ ಶೋಷಣೆ ಹೆಚ್ಚಾಗಿದ್ದ ಸಮಯದಲ್ಲಿ ಶರಣರು ಬೇಸತ್ತು ಈ ಒಂದು ಕ್ರಾಂತಿಯನ್ನು ಕೈಗೊಂಡಿರಬಹುದು. 11ನೇ ಶತಮಾನದಲ್ಲಿ ಚಾತುರ್ವಣ ಪದ್ಧತಿ ಜಾರಿಯಲ್ಲಿದ್ದಾಗ, ಜ್ಯಾತಿ ವ್ಯವಸ್ಥೆ ತೀವ್ರವಾಗಿದ್ದಾಗ ಶರಣರು ಅದನ್ನು ಪ್ರತಿಭಟಿಸಿ, ಜಾತಿ ವ್ಯವಸ್ಥೆಯ ತರತಮಗಳನ್ನು ಪ್ರಶ್ನಿಸುತ್ತ ಸಮಾನತೆಯನ್ನು ಎತ್ತಿಹಿಡಿದರು. ಶರಣರ ಆ ಪ್ರತಿಭಟನೆಯ ಭಾವನೆಗಳನ್ನು, ಅಸಮಾಧಾನಗಳನ್ನು ವಚನಗಳಲ್ಲಿ ಕಾಣಬಹುದು. ಈ ಸಾಮಾಜಿಕ ಕ್ರಾಂತಿಯ ಫಲವಾಗಿ ಅನುಭವ ಮಂಟಪ ಮತ್ತು ಮಹಾಮನೆಯ ಸ್ಥಾಪನೆಯಾಯಿತು. ಹಲವಾರು ವಚನಗಳಲ್ಲಿ ಈ ಮಹಾಮನೆಯ ಉಲ್ಲೇಖವಿದೆ. ಈ ಅನುಭವ ಮಂಟಪ ಸಮಾಜದ ಕೆಳವರ್ಗದವರ ಮತ್ತು ಸಾಮಾನ್ಯರ ಸಮ್ಮುಖದಲ್ಲಿ ನಡೆಯಿತು ಎಂಬುದಕ್ಕೆ ವಚನಕಾರರ ವೈಯುಕ್ತಿಕ ಹಿನ್ನೆಲೆಗಳು ಸಾಕ್ಷಿಯಾಗಿವೆ. ಈ ವಿಚಾರಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಡೆದ ಸಂಶೋಧನೆಯಿಂದ ಮತ್ತು ಪ್ರಾಜ್ಞರಿಂದ ಅನುಮೋದಿತವಾಗಿದೆ. ಹೀಗೆ 11ನೇ ಶತಮಾನದ ಕರ್ನಾಟಕದಲ್ಲಿ, ಪ್ರಜಾ ಪ್ರಭುತ್ವದ ಪರಿಕಲ್ಪನೆ ಉಂಟಾಯಿತು. ಈ ಎಲ್ಲ ಮೇಲಿನ ಹಿನ್ನೆಲೆಯಲ್ಲಿ ಶರಣರು ವಚನ ಸಾಹಿತ್ಯದಲ್ಲಿ ತೊಡಗಿ ಕೊಂಡರು.

ಈಗ ಶರಣರ ಸಾಮಾಜಿಕ ನಿಲುವುಗಳನ್ನು ಗಮನಿಸೋಣ. ಶರಣರು ದೇವಸ್ಥಾನಗಳನ್ನು ಧಿಕ್ಕರಿಸುವ ದಿಟ್ಟತನವನ್ನು ತೋರಿದರು. ಶರಣರು ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಮುಖ್ಯವಾಹಿನಿಯ ಒಳಗೇ ಇದ್ದರೂ ಏಕೆ ದೇವಸ್ಥಾನವನ್ನು ನಿರಾಕರಿಸಿದರು? ಎಂಬ ಪ್ರಶ್ನೆ ಮೂಡುವುದು ಸಹಜ. ಆಗಿನ ಕಾಲಕ್ಕೆ ದೇವಸ್ಥಾನಗಳಿಗೆ ಮೇಲ್ಜಾತಿ ಜನಕಷ್ಟೇ ಪ್ರವೇಶವಿತ್ತು. ದೇವರ ಮತ್ತು ಭಕ್ತರ ನಡುವೆ ಮಧ್ಯವರ್ತಿಗಳು ಹುಟ್ಟಿಕೊಂಡು ಅವರು ದೇವಸ್ಥಾನಗಳನ್ನು ನಿಯಂತ್ರಿಸುತ್ತಿದ್ದರು. ದೇವರ ಹೆಸರಿನಲ್ಲಿ ಮುಗ್ಧರ ಶೋಷಣೆ ನಡೆದಿತ್ತು.

"ಭಕ್ತನಿರ್ದ ತಾಣವೇ ದೇವಲೋಕ
ಭಕ್ತನಂಗಳವೇ ವಾರಣಾಸಿ
ದೇಹವೇ ದೇಗುಲ"

ಎಂದು ಹೇಳುತ್ತಾ ದೇವರ ಮತ್ತು ದೇವಸ್ಥಾನಗಳ ವೈಭವೀಕರಣ ನಡೆಯುತ್ತಿರುವಾಗ ಇಷ್ಟ ಲಿಂಗವೆಂಬ ನಿರಾಕಾರ ದೇವರ ಪರಿಕಲ್ಪನೆಯನ್ನು ಹುಟ್ಟುಹಾಕಿ, ಶರಣರು ದೇವರನ್ನೇ ಜನಸಾಮಾನ್ಯರ ಹತ್ತಿರ ತಂದು ನಿಲ್ಲಿಸಿದರು. ದೇವರು ಒಂದು ವ್ಯಾಪಾರದ, ವಾಣಿಜ್ಯ ಉತ್ಪನ್ನವಾಗಿದ್ದ ಸಮಯದಲ್ಲಿ ಮುಗ್ಧರ ಶೋಷಣೆಯನ್ನುನಿವಾರಿಸಿದರು. 'ಭಕ್ತನಿರುವ ತಾಣವೇ ವಾರಣಾಸಿ' ಎಂಬ ಸಂದೇಶವನ್ನು ಕೊಟ್ಟರು.

ಮನುಷ್ಯನಿಗೆ ನಂಬಿಕೆ ಮುಖ್ಯ; ಆದರೆ ನಂಬಿಕೆಗಳನ್ನು ಕಟ್ಟು ಕಥೆಗಳನ್ನು ಹುಟ್ಟುಹಾಕಿ ಅದರಿಂದ ಲಾಭ ಪಡೆಯುವುದಾದರೆ ಆ ನಂಬಿಕೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಬೇಕಾಗುತ್ತದೆ. ಕೆಲವೊಮ್ಮೆ ಆ ನಂಬಿಕೆ ವೈಯುಕ್ತಿಕ ನೆಲೆಯಿಂದ ಜಿಗಿದು ಸಾಮೂಹಿಕ ನೆಲೆಯಲ್ಲಿ ಕೆಲವರಿಗಷ್ಟೇ ಅನುಕೂಲವಾದಾಗ, ಧಾರ್ಮಿಕ ಪ್ರಚೋದನೆಗೆ ಬಳಸಿದಾಗ, ಅಥವಾ ಒಂದು ರಾಜಕೀಯ ಪಕ್ಷ ಅದನ್ನು ಬಂಡವಾಳ ಮಾಡಿಕೊಂಡಾಗ ಆ ನಂಬಿಕೆಯನ್ನು ಪ್ರಶ್ನಿಸಬೇಕಾಗುತ್ತದೆ. ನಂಬಿಕೆ ವೈಯುಕ್ತಿಕ ನೆಲೆಯಲ್ಲಿ ಸೀಮಿತವಾಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದು, ಅದರಿಂದ ಸಮಾಜಕ್ಕೆ ಹಾನಿ ಉಂಟಾಗುವ ಸಾಧ್ಯತೆ ಕಡಿಮೆ. ನಂಬಿಕೆ ಅವೈಜ್ಞಾನಿಕವಾಗಿ, ಸರಳ ತರ್ಕಗಳಿಗೆ ಸಿಗದೇ ಕೆಲವರ ಲಾಭಕ್ಕಾಗಿ ಅದನ್ನು ಬಳಸಿಕೊಂಡಲ್ಲಿ ಅದನ್ನು ಧಿಕ್ಕರಿಸ ಬೇಕಾಗುತ್ತದೆ. ನಂಬಿಕೆಗಳಿಂದ ಮೌಢ್ಯ ಉಂಟಾಗಿ ಕೆಲವು ಯಾಂತ್ರಿಕ ಆಚರಣೆಗಳು ಹುಟ್ಟಿ ಕೊಂಡಿವೆ. ಈ ಒಂದು ಹಿನ್ನೆಲೆಯಲ್ಲಿ ಬಸವಣ್ಣನವರ ಕೆಳಗಿನ ವಚನ ನೂರಾರು ವರ್ಷಗಳ ನಂತರವೂ ಈ ವೈಜ್ಞಾನಿಕ ಯುಗದಲ್ಲೂ ಪ್ರಸ್ತುತವಾಗಿದೆ ಎನ್ನುವುದು ಶೋಚನೀಯ ಸಂಗತಿ.

"ನೀರ ಕಂಡಲ್ಲಿ ಮುಳುಗುವರಯ್ಯ, ಮರ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ ಒಣಗುವ ಮರವ ನೆಚ್ಚುವರು
ನಿಮ್ಮನೆತ್ತ ಬಲ್ಲರು ಕೂಡಲ ಸಂಗಮ ದೇವಾ"

ಶರಣರು ಸ್ವರ್ಗ ನರಕ, ಪಾಪ, ಪುಣ್ಯ ಸಂಪಾದನೆ ಬಗ್ಗೆ ವೈಚಾರಿಕವಾಗಿ ಆಲೋಚಿಸಿ;
"ದೇವ ಲೋಕ ಮರ್ತ್ಯಲೋಕವೆಂಬುದು ಬೇರೆ ಉಂಟೆ
ಸತ್ಯ ನುಡಿವುದೇ ದೇವಲೋಕ ಮಿತ್ಯನುಡಿವುದೆ ಮರ್ತ್ಯ ಲೋಕ
ಆಚಾರವೇ ಸ್ವರ್ಗ ಅನಾಚಾರವೇ ನರಕ "

ಎಂದು ಹೇಳುತ್ತಾ, ಮುಂದಕ್ಕೆ "ಅಯ್ಯಎಂದರೆ ಸ್ವರ್ಗ ಎಲವೋ ಎಂದರೆ ನರಕ" ಎಂಬ ಉಕ್ತಿಯನ್ನು ನೀಡಿದ್ದಾರೆ. ಶರಣ ಸಾಹಿತ್ಯದಲ್ಲಿ ಬಳಸುವ ಅಯ್ಯ, ಅಕ್ಕ, ಅಣ್ಣ ಸಮಾಜದಲ್ಲಿ ಒಂದು ಭ್ರಾತೃತ್ವವನ್ನು, ಆತ್ಮೀಯ ಭಾವನೆಯನ್ನು ಉಂಟುಮಾಡುತ್ತದೆ. ಜನರ ನಡುವೆ 'ಎಲವೋ' ಎನ್ನದೆ, ದ್ವೇಷ ಅಸೂಯೆಗಳನ್ನು ಬದಿಗಿಟ್ಟು ಎಲ್ಲರು "ಸರ್ವಜನಾಂಗದ ಈ ಶಾಂತಿಯ ತೋಟದಲ್ಲಿ'' ಸೌಹಾರ್ದತೆಯಿಂದ ಬದುಕಿದರೆ ಅದೇ ಸ್ವರ್ಗ! ಇಹ ಮತ್ತು ಪರಲೋಕವೆಂಬ ಕಾಲ್ಪನಿಕ ಲೋಕವನ್ನು ಶರಣು ನಿರಾಕರಿಸಿದರು. ಇಹಲೋಕದಲ್ಲಿ ಬದುಕುತ್ತಾ ಬರಿ ಪರಲೋಕವನ್ನೇ ಕುರಿತು ಚಿಂತಿಸುವವರನ್ನು ಕುರಿತು ಅಲ್ಲಮ ಪ್ರಭುಗಳು ಮಾರ್ಮಿಕವಾಗಿ "ಕೊಟ್ಟ ಕುದುರೆಯನು ಏರಲಾಗದವನು ಧೀರನು ಅಲ್ಲ ಶೂರನೂ ಅಲ್ಲ" ಎನ್ನುತ್ತಾರೆ. ಇಲ್ಲಿ ‘ಕೊಟ್ಟ ಕುದುರೆ’ ಎಂದರೆ ನಮಗೆ ದಕ್ಕಿರುವ ಬದುಕು, ಅದು ಕಾಡು ಕುದುರೆ ಇದ್ದಹಾಗೆ, ಅದನ್ನು ಪಳಗಿಸಿ ಅದರ ಮೇಲೆ ಕುಳಿತು ಬದುಕನ್ನು ಕ್ರಯಿಸಬೇಕು, ಅದನ್ನು ಬಿಟ್ಟು ಬೇರೊಂದು ಪರಲೋಕವೆಂಬ ಕುದುರೆಯನ್ನು ಬಯಸುವುದು ನಿರರ್ಥಕ ಎಂದು ತಿಳಿಸಿದ್ದಾರೆ.

ಶರಣರು ತೀಕ್ಷ್ಣ ವಿಮರ್ಶಕರು, ಅವರು ತಮ್ಮ ಬದುಕನ್ನು, ತಮ್ಮ ಆಚಾರ ವಿಚಾರಗಳನ್ನು ವಿಮರ್ಶೆಗೆ ಒಳಪಡಿಸಿಕೊಂಡವರು, ಆತ್ಮ ಶೋಧನೆಯಲ್ಲಿ ತೊಡಗಿಕೊಂಡವರು. ಇದಕ್ಕೆ ನಿದರ್ಶನವಾಗಿ ಕೆಳಗಿನ ವಚನವನ್ನು ಇಲ್ಲಿ ಪ್ರಸ್ತಾಪಮಾಡುವುದು ಸೂಕ್ತ;

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು
ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದೆಡೆ ನಡೆ ಎಂಬರು
ಉಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ

ನಮ್ಮ ಆಚರಣೆಗಳಲ್ಲಿ ಇರುವ ವೈರುಧ್ಯವನ್ನು ಸ್ವಾರ್ಥತೆಯನ್ನು ಮತ್ತು ಅರ್ಥಹೀನತೆಯನ್ನು ಶರಣರು ಖಂಡಿಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಮನುಷ್ಯನಿಗೆ ಮಾರಕವಾಗಿರುವ ಹಾವು, ಆನೆ, ಸಿಂಹ ಎಂಬ ಕಂಡ ಕಂಡ ಪ್ರಾಣಿಗಳನೆಲ್ಲಾ ಪೂಜಿಸುವ ಬಗ್ಗೆ ಶರಣರಿಗೆ ಅಸಮಾಧಾನವಿದ್ದಿರಬಹುದು.

ಶರಣರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದವರು. ಹಿಂದೆ ಈ ಜಾತಿ ವ್ಯವಸ್ಥೆ ಅವರವರ ವೃತ್ತಿಗೂ ಸಂಬಂಧಪಟ್ಟಿದ್ದು, ಇದನ್ನು ಚಾತುರ್ವರ್ಣ ಪದ್ಧತಿ ಎಂದು ಗುರುತಿಸಲಾಗಿತ್ತು. ಈ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವಿಂಗಡಣೆಗಳು ಇದ್ದವು. ಶರಣರು 'ಕಾಯಕವೇ ಕೈಲಾಸ' ಎಂಬ ಪರಿಕಲ್ಪನೆಯನ್ನು ತಂದು ತಮ್ಮ ವೃತ್ತಿಯನ್ನು ಮೇಲು-ಕೀಳು ಎಂದು ಪರಿಗಣಿಸದೆ ಅವರವರ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಆಗ ಅವರವರ ಕಾಯಕ ಅವರಿಗೆ ಶ್ರೇಷ್ಠ, ಆಗ ಎಲ್ಲರೂ ಸಮಾನರೇ ಎಂಬ ಸಂದೇಶವನ್ನು ಬಿತ್ತಿದರು. ಇಂದು ನಾವು ಅನಿವಾಸಿಗಳು ಪಾಶ್ಚ್ಯಾತ್ಯ ದೇಶಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಕೆಲಸ ಮಾಡುವವರು ವೈದ್ಯರೇ ಆಗಿರಬಹುದು, ಅಥವಾ ವಾರ್ಡ್ ಬಾಯ್ ಆಗಿರಬಹುದು ಆದರೂ ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆ ಘನತೆ ನಮಗಿದೆ. ಇದೇ ವಿಚಾರವನ್ನು 900 ವರ್ಷಗಳ ಹಿಂದೆ ಶರಣರು ಕಾಯಕದಲ್ಲಿರುವ ಘನತೆ (Dignity of labour) ಮತ್ತು ಸಮಾನತೆಯನ್ನು ತೋರಿಸಿಕೊಟ್ಟರು. ಈ ಜಾತಿ ಪದ್ದತಿಯನ್ನು ಪ್ರಶ್ನಿಸುತ್ತ ಶರಣರು;

ನೆಲೆ ಒಂದೇ: ಹೊಲಗೇರಿ, ಶಿವಾಲಯಕ್ಕೆ
ಜಲ ಒಂದೇ: ಶೌಚ, ಚಮನಕ್ಕೆ
ಕುಲವೊಂದೇ: ತನ್ನ ತಾನ್ ಅರಿದವಂಗೆ

ಎನ್ನುತ್ತಾ ಹೊಲಗೇರಿಗೂ, ಶಿವಾಲಯಕ್ಕೂ ನೆಲ ಒಂದೇ ಆಗಿದ್ದಲ್ಲಿ, ಶೌಚಕ್ಕೂ, ತೀರ್ಥಕ್ಕೂ, ಶುದ್ಧಿಗೂ ಜಲ ಒಂದೇ ಆಗಿದ್ದಲ್ಲಿ, ಮನುಷ್ಯ ಮನುಷ್ಯರ ನಡುವೆ ಕುಲವೊಂದೇ ಏಕೆ ಆಗಬಾರದು ಎಂದು ಪ್ರಶ್ನಿಸುತ್ತಾರೆ. ಸದರಿ ಪ್ರಪಂಚದಲ್ಲಿ, ಧರ್ಮದ ಹೆಸರಿನಲ್ಲಿ, ಪ್ರಪಂಚದ ನಾನಾ ಭಾಗಗಳಲ್ಲಿ ಧರ್ಮ ಯುದ್ಧ ನಡೆದಿದೆ. "ನಾವು-ಅವರು" ಎಂಬ ಪ್ರತ್ಯೇಕತೆ ಪ್ರಜ್ಞೆ ಹೆಚ್ಚಾಗಿದೆ. ದೇಶಗಳು, ಸಮಾಜ ಧ್ರುವೀಕರಣಗೊಂಡಿದೆ. ಇಂತಹ ಒಂದು ಸನ್ನಿವೇಶದಲ್ಲಿ ಬಸವಣ್ಣನವರ ಈ ವಚನ ಬಹಳ ಪ್ರಸ್ತುತವಾಗಿದೆ;

ಇವನಾರವ ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ
ಕೂಡಲ ಸಂಗಮ ದೇವಾ ನಿಮ್ಮ ಮನೆಯ
ಮಗನೆನಿಸಯ್ಯ

‘ಸರ್ವೇ ಜನಃ ಸುಖಿನೋ ಭವಂತು’ ಎನ್ನುತ್ತಲೇ, ಸಮಾನತೆಯ ಸಂದೇಶವನ್ನು ಸಾರುತ್ತಲೇ "ನಾವು - ಅವರು" ಎಂಬ ಈ ಪ್ರತ್ಯೇಕತೆಯ ಪ್ರಜ್ಞೆಯನ್ನು (Tribalism) ಹುಟ್ಟುಹಾಕಿದ್ದೇವೆ. ಈ ಧ್ರುವೀಕರಣಕ್ಕೆ(Polarization) ಕಾರಣಗಳೇನು ಎಂಬುದನ್ನು ಡಾರ್ವಿನ್ ನೀಡಿರುವ ಜೈವಿಕ ತತ್ವಗಳ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ. "ಯಾವುದು ಪ್ರಬಲವಾಗಿದೆಯೋ ಅದ್ಕಕಷ್ಟೇ ಉಳಿಗಾಲ" (Survival of the fittest) ಎನ್ನುವ ಸೈಧಾಂತಿಕ ಹಿನ್ನೆಲೆಯಲ್ಲಿ ಮನುಷ್ಯ ತನ್ನ ಒಂದು ಸಂರಕ್ಷಣೆಗೆ ಅನಾದಿ ಕಾಲದಿಂದ ಬುಡಕಟ್ಟು, ವರ್ಣ, ಧರ್ಮ, ರಾಷ್ಟ್ರ, ಜಾತಿ
ಎಂಬ ಗುಂಪುಗಾರಿಕೆ ಮಾಡಿಕೊಂಡು ಬಂದಿದ್ದಾನೆ. ತನ್ನ ಒಂದು ಬದುಕಿನ ರೀತಿನೀತಿಗಳಿಗೆ ಒಗ್ಗಲಾರದವರನ್ನು ಅನ್ಯರೆಂದು ಪರಿಗಣಿಸಿ ಈ ಅನ್ಯರಿಗೆ ಅಸಹ್ಯ ಪಡುತ್ತಾ ಬಂದಿದ್ದಾನೆ. ತನನ್ನು ಬಣ್ಣಿಸಿಕೊಂಡು, ಇತರರನ್ನು ಹಳಿಯುತ್ತ, ಗಂಗಾ ನದಿಯಲ್ಲಿ ಸ್ನಾನ ಮಾಡಿ ಬಹಿರಂಗ ಶುದ್ಧಿಯನ್ನು ಪಡೆದು ಕೊಂಡನೇ ಹೊರೆತು ಅಂತರಂಗ ಶುದ್ಧಿಯನ್ನು ಪಡೆದುಕೊಳ್ಳಲಿಲ್ಲ! ಈ ಒಂದು ಹಿನ್ನೆಲೆಯಲ್ಲಿ ಬಸವಣ್ಣನವರ ವಚನವನ್ನು ಗಮನಿಸಿ;

"ಕಳ ಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಹಿ, ಇದೇ ಬಹಿರಂಗ ಶುದ್ಧಿ"

‘ಸರ್ವೇ ಜನಃ ಸುಖಿನೋ ಭವಂತು’ ಎಂದಾಗಬೇಕಾದರೆ, ನಮ್ಮ-ನಿಮ್ಮ ನಡುವಿನ ಗೋಡೆಗಳನು ಕೆಡವಬೇಕು.

ಸ್ತ್ರೀ ಸ್ವಾತಂತ್ರ್ಯವನ್ನು ಮೊಟ್ಟ ಮೊದಲಿಗೆ ಗುರುತಿಸಿ, ಗೌರವಿಸಿ, ಅನುಷ್ಠಾನಕ್ಕೆ ತಂದವರು ಶರಣರು, "ಸ್ತ್ರೀ ಬಾಲ್ಯದಲ್ಲಿ ತಂದೆಯ, ಯೌವನದಲ್ಲಿ ಗಂಡನ, ಮುಪ್ಪಿನಲ್ಲಿ ಮಗನ ಅಧೀನಳು, ಹೆಣ್ಣು ಮಾಯೆ, ಎಂದು ಹೇಳುತ್ತಿದ್ದ ಕಾಲದಲ್ಲಿ ಅಲ್ಲಮರು; "ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ' ಎಂದು, ಹೆಣ್ಣಿಗೆ ಸಮಾಜದಲ್ಲಿ ಸಮಾನ ಸ್ಥಾನ-ಮಾನಗಳನ್ನು, ಹಕ್ಕುಗಳನ್ನು ಕಲ್ಪಿಸಿಕೊಟ್ಟರು. ಬಸವಣ್ಣನವರು ಅಕ್ಕ ಮಹಾದೇವಿ ಮತ್ತು ಇತರ ಶರಣೆಯರನ್ನು ಅನುಭವಮಂಟಪದಲ್ಲಿ ಆಹ್ವಾನಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟರು. ಶರಣೆಯರೂ ಹಲವಾರು ವಚನಗಳನ್ನು ರಚಿಸಿದರು. ಇಷ್ಟಾಗಿಯೂ ಹೆಣ್ಣು-ಗಂಡಿನ ನಡುವೆ ಏನು ವ್ಯತ್ಯಾಸ, ಅವರನ್ನೇಕೆ ಸಾಮಾಜಿಕ ಆಚರಣೆಯಿಂದ ಹೊರಗಿಡಬೇಕು? ಎಂದು ಪ್ರಶ್ನಿಸಬಹುದು. ಅದಕ್ಕೆ ಉತ್ತರವಾಗಿ ಜೇಡರ ದಾಸಿಮಯ್ಯ ಹೀಗೆ ಹೇಳುತ್ತಾನೆ; "ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಮೂಡಿಬಂದರೆ ಗಂಡೆಂಬರು, ಇವೆರಡರ ನಡುವೆ ಸುಳಿವಾತ್ಮ ಹೆಣ್ಣು ಅಲ್ಲ ಗಂಡು ಅಲ್ಲ!”

ಶರಣರ ಚಿಂತನೆಗಳು ಸಮಾಜಮುಖಿ ಅಷ್ಟೇ ಅಲ್ಲದೆ ಅದು ಸಂಸಾರ ಮುಖಿ ಕೂಡ ಎನ್ನುವುದಕ್ಕೆ ಕೆಳಗಿನ ಸಾಲುಗಳು ಸಾಕ್ಷಿಯಾಗಿವೆ;

ಮಠವೇಕೋ, ಪರ್ವತವೇಕೋ,
ಜನವೇಕೊ, ನಿರ್ಜನವೇಕೊ,
ಚಿತ್ತ ಸಮಾಧಾನ ಉಳ್ಳ ಶರಣಂಗೆ?

ಬಹಳಷ್ಟು ಶರಣರು ಕಾವಿ ತೊಡಲಿಲ್ಲ (ಇದಕ್ಕೆ ಕೆಲವು ಹೊರತುಗಳಿರಬಹುದು) ಸನ್ಯಾಸಿಗಳಾಗಿ ಕಾಡಿಗೆ, ಪರ್ವತಗಳಿಗೆ ಹೋಗಿ, ದೇಹವನ್ನು ದಂಡಿಸಿ ಘೋರ ತಪಸ್ಸನ್ನು ಮಾಡಲಿಲ್ಲ. ಬದಲಾಗಿ "ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎನ್ನುತ್ತಾ ಸಂಸಾರದೊಳಗೇ ಇದ್ದುಕೊಂಡು ಸತ್ಯಶೋಧನೆಯನ್ನು ನಡೆಸಿ, ಅನುಭವ ಮತ್ತು ಅನುಭಾವವನ್ನು ಪಡೆದುಕೊಂಡರು. ದೇಹ ದಂಡನೆಯ ಕ್ರಮವನ್ನು ಅವರು ಅನುಮೋದಿಸಲಿಲ್ಲ. ದೇಹದಂಡನೆಯನ್ನು ಕುರಿತು ಬಸವಣ್ಣನವರು; 'ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೆ'? ಎಂದು ಪ್ರಶ್ನಿಸುತ್ತಾರೆ. ಮನದೊಳಗೆ ಹಾವೆಂಬ ವಿಷವನ್ನು ಇಟ್ಟುಕೊಂಡು, ದೇಹವೆಂಬ ಹುತ್ತವನ್ನು ಬಡಿದರೆ ಪ್ರಯೋಜನವೇನು ಎನ್ನುತ್ತಾರೆ.

ಶರಣರು ರಚಿಸಿರುವ ವಚನಗಳಲ್ಲಿ ಸಾಹಿತ್ಯ ಮೌಲ್ಯಗಳೂ ಇವೆ. 11ನೇ ಶತಮಾನದ ಶುರುವಿನಲ್ಲಿ ಸಾಹಿತ್ಯ, ಹೆಚ್ಚಾಗಿ ಹಳೆಗನ್ನಡ ಸಂಸ್ಕೃತಮಯವಾಗಿದ್ದ ಸಮಯದಲ್ಲಿ ಕನ್ನಡ ಆಡು ಭಾಷೆಯನ್ನು ವಚನಕಾರರು ಬಳಸಿಕೊಂಡರು. ಅವರ ಬರಹದಲ್ಲಿ ಸರಳತೆ ಮತ್ತು ಸ್ಪಷ್ಟತೆ ಕಾಣುತ್ತದೆ. ಎಲ್ಲರ ಗ್ರಹಿಕೆಗೆ ನಿಲುಕುವಂತೆ ನಾಲ್ಕಾರು ಸಾಲುಗಳ ವಚನಗಳನ್ನು ರಚಿಸಿದ್ದಾರೆ. ಅಲ್ಲಮ ಪ್ರಭುಗಳ ರಚನೆಯು ಹಲವಾರು ರೂಪಕಗಳನ್ನು ಒಳಗೊಂಡು ಸಂಕೀರ್ಣವಾಗಿ ಮತ್ತು ಒಗಟಿನ ರೀತಿಯಲ್ಲಿದ್ದು ಸಾಹಿತ್ಯ ಪ್ರೌಢವಾಗಿದೆ.

ಒಟ್ಟಾರೆ ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಮಹತ್ವವಾದದ್ದು. ಅವರು ರಚಿಸಿದ ವಚನ ಸಾಹಿತ್ಯದಲ್ಲಿ ಮಾನವೀಯತೆ, ಅನುಕಂಪೆ, ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆ, ಸಮಾನತೆ, ಪ್ರಜಾಪ್ರಭುತ್ವ ಪರಿಕಲ್ಪನೆಗಳನ್ನು ಒಳಗೊಂಡು, ಎಲ್ಲರೂ ಸಮಾನರೇ ಎಂಬ ಸಮಾಜ ಮುಖಿ ಚಿಂತನೆಗಳಿವೆ. ಕಾಯಕವೇ ಕೈಲಾಸ ಎಂದು ದುಡಿಯುತ್ತಾ, ದುಡಿದದ್ದನ್ನು ದಾಸೋಹ ಅನ್ನುವ ಭಾವನೆಯಲ್ಲಿ ಇತರೊಡನೆ ಹಂಚಿಕೊಳ್ಳುತ್ತಾ ಪ್ರಾಮಾಣಿಕವಾಗಿ ಬದುಕಿ, ಸಮಾಜಕ್ಕೆ ಆದರ್ಶಪ್ರಾಯರಾಗಿ ಬೆಳಕನ್ನು ನೀಡಿದವರು. ಈ ಕಾರಣಗಳಿಂದಲೇ ಅವರು ಕೊಟ್ಟಿರುವ ಸಾಹಿತ್ಯ ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಪ್ರಸ್ತುತವಾಗಿದೆ.

ಕಿವಿನೋವು ಮತ್ತು ಕೆಲವು ಕವನಗಳು

ಈ ವಾರದ ಅನಿವಾಸಿಯಲ್ಲಿ ಹೊಸ ಬರಹಗಾರರು, ವಿಜಯ್ ಖುರ್ಸಾಪೂರರ ಕವಂಗಳಿವೆ, ಓದಿ ಹರಸಿ. ಉಮೇಶ ನಾಗಲೋಟಿಮಠ ಈ ಮೊದಲು ಒಂದು ಸಲ ಅನಿವಾಸಿಗೆ ಬರೆದಿದ್ದಾರೆ, ಅವರಿಗೆ ಮತ್ತೊಮ್ಮೆ ಸ್ವಾಗತ. ಇಬ್ಬಾರೂ ಇನ್ನಷ್ಟು ಕನ್ನಡದಲ್ಲಿ ಬರೆಯಲಿ ಎಂದು ಆಶಿಸುತ್ತೇನೆ. – ಸಂ.

ಕಿವಿನೋವು: ಡಾ ಉಮೇಶ ನಾಗಲೋಟಿಮಠ ಬರೆದ ಲೇಖನ

ಲೇಖಕರ ಪರಿಚಯ: ಕಿವಿ ಮೂಗು ಗಂಟಲು ವೈದ್ಯರು, ಹುಬ್ಬಳ್ಳಿಯಲ್ಲಿ ಜನನ, ಬೆಳಗಾವಿಯಲ್ಲಿ ವಿದ್ಯಾಭ್ಯಾಸ . ಭಾರತದಲ್ಲಿ ಸುಮಾರು ೧೭ ವರ್ಷ ಸೇವೆ, ಕಳೆದ ಸುಮಾರು ೯ ವರ್ಷಗಳಿಂದ ಇಂಗ್ಲೆಂಡಿನ ವಿವಿಧ ಆಸ್ಪತ್ರೆಗಳಲ್ಲಿ ಸೇವೆ. MBBS ಮಾಡುವಾಗಿನಿಂದ ಕನ್ನಡ ಬರೆಯುವ ಚಟ. ಹಲವಾರು ಲೇಖನಗಳು/ಪದ್ಯಗಳು ಪತ್ರಿಕೆಯಲ್ಲಿ, ಪುಸ್ತಕಗಳಲ್ಲಿ ಪ್ರಕಟವಾಗಿವೆ , ಆಕಾಶವಾಣಿಯಲ್ಲಿ ಹಲವು ಭಾಷಣ /ಸಂದರ್ಶನ. ವೃತ್ತಿಯಲ್ಲಿ ಇಂಗ್ಲೆಂಡಿನ ರೊವಿನಾ ರೇಯನ್ ಪ್ರಶಸ್ತಿ

ನಾನು ಇಂಗ್ಲೆಂಡಿನ ಚೆಸ್ಟರ್ ಎಂಬ ಊರಿನಲ್ಲಿ ಕಿವಿ, ಮೂಗು ಮತ್ತು ಗಂಟಲು ತಜ್ಞನಾಗಿ ಒಂದು ರವಿವಾರ ಕರ್ತವ್ಯದ ಮೇಲಿದ್ದೆ. ಸಂಜೆ ಸುಮಾರು ೧೦ ವರ್ಷದ ಹುಡುಗ ಕಿವಿನೋವು ಮತ್ತು ಜ್ವರದಿಂದ ದಾಖಲಾಗಿದ್ದ. ಆತನಿಗೆ ಬೇಕಾದ ರೋಗನಿರೋಧಕ ಔಷಧಿ (ಆಂಟಿಬಯೋಟಿಕ್) ಕೊಡುತ್ತಿದ್ದೆವು. ಸಿ.ಟಿ ಸ್ಕ್ಯಾನ್ ಮಾಡಿಸಿದಾಗ ಕಿವಿಯಲ್ಲಿ ಕೀವು ತುಂಬಿಕೊಂಡದ್ದು ಗೊತ್ತಾಗಿ ಆತನಿಗೆ ಶಸ್ತ್ರಕ್ರಿಯೆ (ಆಪೆರೇಷನ್) ಮಾಡುವುದೋ ಅಥವಾ ಇನ್ನೊಂದಿಷ್ಟು ಔಷಧಿ ಕೊಟ್ಟು ಸ್ವಲ್ಪ ಕಾಯ್ದು ನೋಡೋವುದೋ ಎಂಬ ವಿಚಾರದಲ್ಲಿದ್ದೆವು . ರಾತ್ರಿ ಆದರೂ ಆ ಹುಡುಗನ ಕಿವಿನೋವು ಹೆಚ್ಚಾಯಿತೇ ವಿನಹ ಕಡಿಮೆಯಾಗಲಿಲ್ಲ . ಆಗ ನನ್ನ ಬಾಸ್ ನನಗೆ ಆಪೆರೇಷನ್ ಮಾಡಲು ಹೇಳಿದರು. ನಾನು ರಾತ್ರಿ ಸುಮಾರು ೩ ಗಂಟೆಗೆ ಆಪೆರೇಷನ್ ಕೊಠಡಿಗೆ ಹೋಗಿ ಬಾಲಕನಿಗೆ ಅರಿವಳಿಕೆ (anesthesia) ನೀಡಿ ಕಿವಿಯ ಪರದೆಯಲ್ಲಿ ಸಣ್ಣ ಛೇದವನ್ನು ಮಾಡಿದಾಗ ಬಹಳ ಕೀವು ಹೊರಗಡೆ ಬಂದಿತು. ಅಲ್ಲಿಯವರೆಗೆ ಹಾಸಿಗೆ ಹಿಡಿದು ಮಲಗಿದ ಆ ಬಾಲಕ ಮರುದಿನ ಮುಂಜಾನೆ ವಾರ್ಡಿನಲ್ಲಿ ಓಡಾಡತೊಡಗಿದ್ದ. ಆತನ ತಂದೆ ತಾಯಿ ನನಗೆ “ಒಹೋ, ಏನು ಮ್ಯಾಜಿಕ್ ಮಾಡಿದಿರಿ ಡಾಕ್ಟ್ರೇ ?” ಎಂದು ತುಂಬಾ ಖುಷಿಯಿಂದ ಕೇಳಿದರು.

ನಾನು ಮಾಡಿದ ಆ ಚಿಕ್ಕ ಶಸ್ತ್ರಕ್ರಿಯೆಗೆ ಮೈರಿಂಗೋಟೋಮಿ (Myringotomy) ಎನ್ನುತ್ತಾರೆ. ಕಿವಿಯಲ್ಲಿ ಕೀವು ತುಂಬಿ ಒತ್ತಡಲ್ಲಿದ್ದಾಗ ರೋಗಿ ಅತೀವ ಕಿವಿನೋವಿನಿಂದ ಬಳಲುತ್ತಾನೆ. ಔಷಧಿಗಳಿಂದ ಆ ಕೀವು ಕಡಿಮೆಯಾಗದಿದ್ದರೆ ಈ ಆಪೆರೇಷನ್ ಮಾಡಬೇಕಾಗುತ್ತದೆ. ಇಲ್ಲಿ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡುತ್ತ ಕಿವಿಯ ಪರದೆಯಲ್ಲಿ ಒಂದು ಸಣ್ಣ ಛೇದವನ್ನು ಮಾಡುತ್ತಾರೆ, ಇದರಿಂದ ಆ ಕೀವು ಹೊರಗಡೆ ಬಂದು ನೋವು, ಜ್ವರ ಕಡಿಮೆಯಾಗುತ್ತದೆ. ಈ ಆಪೆರೇಷನ್ ಮಾಡದಿದ್ದರೆ ಹಲವು ಬಾರಿ ಕಿವಿ ಪರದೆ ಕೊಳೆತು ಅದರಲ್ಲಿ ದೊಡ್ಡ ತೂತಾಗುತ್ತದೆ. ನಂತರದಲ್ಲಿ ಈ ತೂತಿನಿಂದ ಕಿವುಡುತನ, ಮೇಲಿಂದ ಮೇಲೆ ಕಿವಿಯ ಸೋಂಕು ಇತ್ಯಾದಿ ತೊಂದರೆಗಳು ಬರುತ್ತವೆ. ಇದರ ಒಟ್ಟು ಸಾರಾಂಶ ಎಂದರೆ ಕಿವಿಯಲ್ಲಿ ಸೋಂಕಾಗಿ ಕೀವು ತುಂಬಿ ಅದು ಔಷಧಿಗೆ ಕಡಿಮೆಯಾಗದಿದ್ದರೆ ಕಿವಿಪರದೆಯಲ್ಲಿ ಛೇದ ಮಾಡಿ ಆ ಕೀವನ್ನು ಹೊರತೆಗೆಯಬೇಕು. ಇದನ್ನು ಯಾಕೆ ಹೇಳುತ್ತಿರುವೆ ಎಂದು ನಿಮಗೆ ಮುಂದೆ ಗೊತ್ತಾಗುತ್ತದೆ.

ನಾನು ಈಗ ಹಲವು ವರ್ಷಗಳ ಹಿಂದೆ ಹೋಗುವೆ. ನಾನು ಬೆಳಗಾವಿಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಇದ್ದಾಗಿನಿಂದ ಹಿಡಿದು ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕನಾಗಿರುವವರೆಗೆ ನಾನು ನೋಡಿದ್ದೇನೆಂದರೆ ಹಲವಾರು ರೋಗಿಗಳು ಕಿವಿ ನೋವಾದಾಗ ಕಿವಿಯಲ್ಲಿ ಬಿಸಿ ಎಣ್ಣೆ, ಬಿಸಿ ಎಣ್ಣೆಯಲ್ಲಿ ಬಳ್ಳೊಳ್ಳಿ, ಇಲ್ಲವೇ ಬಳ್ಳೊಳ್ಳಿ ಜಜ್ಜಿ ಅದರ ರಸ ಕಿವಿಯಲ್ಲಿ ಹಾಕುವುದು, ಎಣ್ಣೆಗೆ ಜೊತೆಗೆ ಸ್ವಲ್ಪ ಅರಿಶಿಣ – ಹೀಗೆ ಹಲವು ಮನೆ ಮದ್ದು ಮಾಡುತ್ತಿದ್ದರು. ನಮಗೋ ಇದು ಬಲು ವಿಚಿತ್ರವಾಗಿತ್ತು. ಯಾಕೆಂದು ಅವರಿಗೆ ಕೇಳಿದಾಗ ಅವರು ನಮ್ಮ ಅಜ್ಜ, ಅಜ್ಜಿ, ತಾಯಿ ಹೀಗೆ ಮಾಡಿರೆಂದು ಹೇಳಿದಕ್ಕೆ ನಾವು ಮಾಡಿದೆವು ಎನ್ನುತ್ತಿದ್ದರು. ಅವರಾರಿಗೂ ಯಾಕೆ ಎಂದು ಗೊತ್ತಿರಲಿಲ್ಲ, ಆದರೆ ಹಿರಿಯರು ಹೇಳಿದಂತೆ ಮಾಡುತ್ತಿದ್ದರು. ಆ ಹಿರಿಯರನ್ನು ಕೇಳಿದಾಗ ಅವರಿಗೂ ಇದು ಯಾಕೆ ಎಂದು ಗೊತ್ತಿರಲಿಲ್ಲ ಆದರೆ ಇದನ್ನು ಮುಂದುವರೆಸುತ್ತಿದ್ದರು.

ಇದರ ಬಗ್ಗೆ ನಾವು ಸ್ವಲ್ಪ ಅಧ್ಯಯನ/ ಹುಡುಕಾಟ ನಡೆಸಿದೆವು. ನಮಗೆ ಸಿಕ್ಕ ಮಾಹಿತಿ ಬಹಳಷ್ಟು ಕುತೂಹಲಕಾರಿಯಾಗಿತ್ತು. ಆಯುರ್ವೇದದಲ್ಲಿ ಕಿವಿ ನೋವಿನ ಮೂಲವನ್ನು ಹೇಗೆ ಕಂಡು ಹಿಡಿಯುವುದು ಎಂಬ ಬಗ್ಗೆ ಸವಿಸ್ತಾರವಾದ ವಿವರಣೆ ಇದೆ. ಕಿವಿ ನೋವು ಹಲವಾರು ಕಾರಣಗಳಿಂದ ಬರಬಹುದು. ಕೆಲವು ರೋಗಗಳಲ್ಲಿ ಜ್ವರ ಇದ್ದರೆ, ಇನ್ನು ಕೆಲವು ಕಡೆ ನಾಡಿಮಿಡಿತ ಹೆಚ್ಚಾಗಿರುತ್ತದೆ. ಇನ್ನು ಹಲವೆಡೆ ಕಿವಿ ಸ್ವಲ್ಪ ಮಂದವಾಗಿರುತ್ತದೆ. ಇನ್ನು ಹಲವು ಕಡೆ ಕಿವಿ ಹೊರಗೆ ಬಾವು ಕಾಣಿಸುತ್ತದೆ. ಇವುಗಳ ಮೇಲೆ ನಾವು ರೋಗಿಗೆ ಏನಾಗಿದೆ ಎಂದು ಸುಮಾರು ೯೦% ವರೆಗೂ ಸರಿಯಾಗಿ ನಿದಾನಿಸಬಹುದು (ಈ ಕೋವಿಡ್ ಮಹಾಮಾರಿ ನಂತರ ಇಡೀ ಜಗತ್ತಿನಲ್ಲೆಲ್ಲ ವೈದ್ಯರು ಫೋನ್ ಅಥವಾ ಇಂಟರನೆಟ್ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಈ ತರಹದ ವ್ಯವಸ್ಥೆಯಲ್ಲಿ ಅವರು ಬಹಳಷ್ಟು ಬಾರಿ ಪ್ರಶ್ನೋತ್ತರಗಳ ಮೇಲೆಯೇ ರೋಗವನ್ನು ಗುರುತಿಸುತ್ತಾರೆ.)

ಬೆಳ್ಳೊಳ್ಳಿ ರಸ ಒಂದು ಕೆರೆಟೊಲೈಟಿಕ್ (kerolytic), ಅಂದರೆ ಅದು ಚರ್ಮದ ಹೊರಪದರನ್ನು ಕರಗಿಸುವ ಶಕ್ತಿ ಹೊಂದಿದೆ. ಅರಿಶಿಣ ಒಂದು ಆಂಟಿಸೆಪ್ಟಿಕ್ (antiseptic ), ಅಂದರೆ ರೋಗಾಣುಗಳನ್ನು ನಾಶ ಮಾಡುವ ಶಕ್ತಿ ಹೊಂದಿದೆ. ಈಗ ಆಯುರ್ವೇದದಲ್ಲಿ ಈ ರೀತಿಯ ಕಿವಿಯ ಸೋಂಕಿಗೆ (acute otitis media , not responding to antibiotics ) ಯಾವ ಚಿಕಿತ್ಸೆ ಹೇಳಿದ್ದಾರೆ ಎಂದು ನೋಡೋಣ. ಒಂದು ಪಾತ್ರೆಯಲ್ಲಿ ಎಣ್ಣೆ , ಬಳ್ಳೊಳ್ಳಿ ರಸ/ಬಳ್ಳೊಳ್ಳಿ ,ಅರಿಶಿನ ಹಾಕಿ ಕಾಯಿಸಿ ಆ ಕಾಯ್ದ ಒಂದು ಹನಿ ಎಣ್ಣೆಯನ್ನು ಕಿವಿಯ ಪರದೆಯ ಮೇಲೆ ಹಾಕಬೇಕು. ಇಲ್ಲಿ ರೋಗಿ ಹೇಗೆ ಮಲಗಬೇಕು, ಕಿವಿಯಲ್ಲಿ ಎಣ್ಣೆ ಯಾವ ರೀತಿ ಹಾಕಬೇಕು , ಯಾವ ಸಲಕರಣೆ ಹೇಗೆ ಉಪಯೋಗಿಸಬೇಕೆಂದು ಎಂದು ಸವಿಸ್ತಾರವಾಗಿ ತಿಳಿಸಿದ್ದಾರೆ. ಆ ಕಾಯ್ದ ಎಣ್ಣೆ ಹನಿ ಕಿವಿ ಪರದೆಯ ಮೇಲೆ ಬಿದ್ದ ತಕ್ಷಣ ಹೊರಗಿನ ಪದರು (ಕಿವಿ ಪರದೆಗೆ ೩ ಪದರುಗಳು ಇರುತ್ತವೆ ) ಬೆಳ್ಳೊಳ್ಳಿ ರಸದಿಂದ ಕರಗಿ ಹೋಗಿ ಉಳಿದ ಪದರುಗಳು ಬಿಸಿ ಎಣ್ಣೆಯಿಂದ ಕರಗಿ ಕಿವಿ ಪರದೆಯಲ್ಲಿ ಅತಿ ಸಣ್ಣ ಛೇದವಾಗಿ ಕಿವಿಯ ಒಳಗಿನ ಕೀವು ಹೊರಗೆ ಬರುತ್ತದೆ ಹಾಗು ರೋಗಿಗೆ ನೋವು ತಕ್ಷಣ ಶಮನವಾಗುತ್ತದೆ. ಅದರಲ್ಲಿನ ಅರಿಶಿನ ಕಿವಿಯಲ್ಲಿ ಸೋಂಕು ಮಾಡಿದ ರೋಗಾಣುಗಳ ವಿರುದ್ಧ ಹೋರಾಡುತ್ತದೆ ಹಾಗು ಈ ಎಲ್ಲ ಚಟುವಟಿಕೆ ಹೊರಗಿನ ಸೋಂಕುರಹಿತವಾಗಿ (in sterile condition) ನಡೆಯಲು ಸಹಾಯ ಮಾಡುತ್ತದೆ. ಈಗ ಇದನ್ನು ಮೈರಿಂಗೋಟೋಮಿ (myringotomy ) ಶಸ್ತ್ರ ಕ್ರಿಯೆಗೆ ಹೋಲಿಸಿದಾಗ ಎಲ್ಲವು ಒಂದೇ ಆಗಿದೆ ಅನ್ನಿಸುವುದು. ನಾವು ಇಂದು ಮೈಕ್ರೋಸ್ಕೋಪ್, ಅನಾಸ್ಥೆಸಿಯಾ , ಸ್ಟೆರಿಲೈಸಷನ್ , ಆಂಟಿಸೆಪ್ಟಿಕ್ ಇತ್ಯಾದಿ ಪಾಶ್ಚಿಮಾತ್ಯ ಪದಗಳನ್ನು ಮತ್ತು ವಿಧಾನಗಳನ್ನು ಬಳಸಿ ಆಪೆರೇಶನ್ ಮಾಡುತ್ತೇವೆ. ಆದರೆ ಎರೆಡೂ ಚಿಕಿತ್ಸಾ ಪದ್ಧತಿಗಳಲ್ಲಿ ಇದನ್ನು ಮಾಡುವ ವಿಧಾನ ಬೇರೆ ಇದ್ದರೂ ಚಿಕಿತ್ಸಾ ತತ್ವ ಒಂದೇ ಇದೆ.

ಈ ಚಿಕಿತ್ಸಾ ಪದ್ಧತಿ ಅಪಭ್ರಮಶವಾಗಿ ಜನರು ತಮಗೆ ತೋಚಿದ್ದನ್ನು ಮಾಡುತ್ತಾ ಆಯುರ್ವೇದವನ್ನು ಮೂರಾಬಟ್ಟೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಯುರ್ವೇದ ಆಧುನಿಕ ಚಿಕಿತ್ಸಾ ಪದ್ದತಿಯ ಅಂಶಗಳನ್ನು ತನ್ನೊಳಗೆ ಕೂಡಿಸಿಕೊಳ್ಳದೆ ಹಳೆಯ ಮುದುಕನಂತೆ ಆಗಿದೆ. ಇನ್ನು ಭಾರತದಲ್ಲಿ ಅಲೋಪಥಿ ಮತ್ತು ಆಯುರ್ವೇದ ವೈದ್ಯರು ಹೊಡೆದಾಡುತ್ತ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಆಯುರ್ವೇದಕ್ಕೆ ಸರಕಾರದ ಪ್ರೋತ್ಸಾಹ, ಸಂಶೋಧನೆಗೆ ಧನ ಸಹಾಯ, ಜನರ ಪ್ರೋತ್ಸಾಹ ಇದಾವುದೂ ಸಿಗದೇ ಅದು ಮುರುಕುಲು ಮನೆಯಲ್ಲಿನ, ಹರಕಲು ಉಟ್ಟ ಮುದಿ ಜಾಣನಂತೆ ಆಗಿದೆ.

ನಾನು ಅಂದು ನನ್ನ ಬಾಸ್ ಅವರಿಗೆ ಈ ಸುಮಾರು ೩-೪ ಸಾವಿರ ವರ್ಷ ಹಳೆಯದಾದ ಆಯುರ್ವೇದ ಚಿಕಿತ್ಸಾ ಪದ್ಧತಿ ಬಗ್ಗೆ ಹೇಳಿ ಕಿವಿಯ ಸೋಂಕಿಗೆ ಯಾವ ರೀತಿ ಚಿಕಿತ್ಸಾ ಪದ್ಧತಿ ಹೇಳಿದ್ದಾರೆ ಎಂದು ವಿವರಿಸಿದೆ. ಆಗ ಅವರು ನನ್ನನ್ನು ಕುರಿತು , “ಹೌದಾ? ‘ಎಂದು ಸಂಶಯದಲ್ಲಿ ಹೇಳಿದರು. ಆಗ ನನಗೆ ಯಾವ ದುಃಖವಾಗಲಿಲ್ಲ. ಏಕೆಂದರೆ ಇದನ್ನು ಮೊದಲು ಅನೇಕ ಭಾರತೀಯರೇ ನಂಬುತ್ತಿಲ್ಲ, ಇನ್ನು ಬಹಳಷ್ಟು ವಿದೇಶಿಜನರ ಬಗ್ಗೆ ಏನು ಹೇಳಬೇಕು? ಇದು ಅವರ ತಪ್ಪು ಅಲ್ಲ. ಏಕೆಂದರೆ ಇದರ ಬಗ್ಗೆ ಬಹಳ ಜನ ತಿಳಿದುಕೊಂಡಿಲ್ಲ. ಭಾರತದಲ್ಲಿ ನಕಲಿ ಆಯುರ್ವೇದ ಪಂಡಿತರು ಬಹಳವಾಗಿದ್ದು ಜನರಿಗೆ ಬಾರಿ ಮೋಸ ಮಾಡುತ್ತಾರೆ. ಇದರಿಂದ ಜನ ಆಯುರ್ವೇದದಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ. ಇದನ್ನು ಸುಧಾರಿಸುವುದೆಂದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಕೆಲಸ.

ಇನ್ನು ಅನೇಕರಿಗೆ ಪ್ಲಾಸ್ಟಿಕ್ ಸರ್ಜರಿ ಜಗತ್ತಿಗೆ ಯಾವ ದೇಶದಿಂದ ಬಂತು ಎಂದು ಕೇಳಿದರೆ ಗೊತ್ತಿಲ್ಲ ಎಂಬ ಉತ್ತರವೇ ಬರುತ್ತದೆ. ಇನ್ನು ಹಲವು ಭೂಪರು ಇಂಗ್ಲೆಂಡ್, ಅಮೇರಿಕಾ, ಯುರೋಪ್ ದೇಶಗಳು ಎಂದೆಲ್ಲ ಹೇಳಬಹುದು. ಇದು ಭಾರತದಿಂದ ಜಗತ್ತಿಗೆ ಕಲಿಸಲ್ಪಟ್ಟಿತು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮೂಗಿನ ಪ್ಲಾಸ್ಟಿಕ್ ಸರ್ಜರಿ (rhinoplasty ) ಭಾರತದ ಕರ್ನಾಟಕದಿಂದ (ಮೊದಲಿನ ಮೈಸೂರು) ಇಂಗ್ಲೆಂಡಿಗೆ ಹೋಯಿತು. ಈ ಶಸ್ತ್ರಕ್ರಿಯೆಯನ್ನು ಭಾರತದ ಅನೇಕ ಪ್ರದೇಶಗಳಲ್ಲಿ ಮಾಡುತ್ತಿದ್ದರು. ಇದಲ್ಲದೆ ಇನ್ನು ಅನೇಕ ಶಸ್ತ್ರಕ್ರಿಯೆ ನಡೆಯುತ್ತಿದ್ದವು. ೧೭೯೪ರಲ್ಲಿ ಲಂಡನ್ನಿನ ಜಂಟಲ್ಮನಾಸ್ ಮ್ಯಾಗಜಿನ್ ದಲ್ಲಿ ಪ್ರಕಾಶನವಾದ ಒಂದು ಲೇಖನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಒಬ್ಬ ನೌಕರನ ಕತ್ತರಿಸಲ್ಪಟ್ಟ ಮೂಗನ್ನು ಕರ್ನಾಟಕದಲ್ಲಿ ಈ ಪ್ಲಾಸ್ಟಿಕ್ ಸರ್ಜರಿ ಮೂಲಕ ಪೂರ್ತಿ ಸರಿ ಮಾಡಲಾದ ಬಗ್ಗೆ ವಿವರಿಸಿದ್ದಾರೆ . ಈ ಶಸ್ತ್ರ ಚಿಕಿತ್ಸೆ ನೋಡಿದ ಬ್ರಿಟಿಷ್ ಸ್ವಾಸ್ಥ್ಯ ಅಧಿಕಾರಿಗಳು ತಮ್ಮ ಸರಕಾರಕ್ಕೆ ಇದನ್ನು ತಿಳಿಸಿದಾಗ ಆಗಿನ ಬ್ರಿಟಿಷ್ ಸರಕಾರ ಒಂದು ವೈದ್ಯರ ತಂಡವನ್ನು ಭಾರತಕ್ಕೆ ಕಳುಹಿಸಿ ಈ ಶಸ್ತ್ರಕ್ರಿಯೆ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ಬರಲು ಹೇಳಿದರು. ತದನಂತರ ಪ್ಲಾಸ್ಟಿಕ್ ಸರ್ಜರಿ ಯೂರೋಪಿನಲ್ಲಿ ಬೆಳೆಯಿತು ಹಾಗು ದುರದೃಷ್ಟದಿಂದ ಭಾರತದಲ್ಲಿ ಅಳಿಯಿತು. ಇದರ ಬಗ್ಗೆ ನಾನು ಕೇಳಿದ್ದೆ, ಅದರ ಬಗ್ಗೆ ನೋಡುವ ಭಾಗ್ಯ ನನಗೆ ಲಂಡನ್ನಿನ ವೆಲ್ ಕಮ್ ವಸ್ತುಸಂಗ್ರಹಾಲಯದಲ್ಲಿ ಲಭಿಸಿತು. ನಾನು ಆ ಮ್ಯೂಸಿಯಂಗೆ ಭೆಟ್ಟಿ ಕೊಟ್ಟಾಗ ಅಲ್ಲಿ ಆಯುರ್ವೇದದ ಬಗ್ಗೆ ಪ್ರದರ್ಶನವೊಂದು ನಡೆಯುತ್ತಿದ್ದದ್ದು ಕಾಕತಾಳೀಯ. ಅಲ್ಲಿ ಈ ಪ್ಲಾಸ್ಟಿಕ್ ಸರ್ಜರಿ ಹೇಗೆ ಇಂಗ್ಲೆಂಡಿಗೆ ಬಂದಿತು ಎಂದು ವಿವರಿಸಿದ್ದಾರೆ. ಅಲ್ಲಿ ಹಾಕಿರುವ ಭಾರತೀಯ ಆಯುರ್ವೇದ ಬಗ್ಗೆ ಮಾಹಿತಿ ಮತ್ತು ಫೋಟೋಗಳನ್ನೂ ನೋಡಿದಾಗ ನನ್ನ ಮನಸ್ಸು ಹೊಯ್ದಾಡಿತು. ಒಂದಡೆ ಖುಷಿ, ಒಂದೆಡೆ ದುಃಖ ಆಗುತ್ತಿತ್ತು. ಜಗತ್ತಿಗೆ ಜ್ಞಾನ ದೀಪ ಹಚ್ಚಿ ತನ್ನ ಮನೆಯನ್ನೇ ಕತ್ತಲಾಗಿಸಿಕೊಂಡಿತು ನನ್ನ ಭಾರತ. ಅದಕ್ಕೆ ಅನೇಕ ಕಾರಣಗಳಿವೆ, ಅವುಗಳನ್ನು ಇಲ್ಲಿ ಚರ್ಚಿಸುವುದು ಈ ಲೇಖನದ ಚೌಕಟ್ಟನ್ನು ದಾಟುತ್ತದೆ.

ವಿಜಯ್ ಖುರ್ಸಾಪೂರ ಬರೆದ ಕೆಲವು ಕವಿತೆಗಳು

ಕವಿಯ ಪರಿಚಯ: ವೃತ್ತಿಯಿಂದ ಏರೋಸ್ಪೇಸ್ ಇಂಜಿನಿಯರ್, ಕಳೆದ ೧೦ ವರ್ಷಗಳಿಂದ ಇಂಗ್ಲೆಂಡ್ ನೆಲೆ, ಹುಟ್ಟಿದ ಊರು ಶಿಗ್ಗಾವಿ (ಹಾವೇರಿ ಜಿಲ್ಲೆ), ಓದಿದ್ದು ಧಾರವಾಡ, ಗದಗ, ಇಲ್ಲಿವವರೆಗೆ ಬೆಂಗಳೂರು, ಹೈದರಾಬಾದ ಮತ್ತು ಕೆನಡಾದಲ್ಲಿ ನೆಲೆಸಿ, ೪ -೫ ಏರೋಸ್ಪೇಸ್ ಕಂಪನಿಗಳಲ್ಲಿ ಕೆಲಸ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯನ್ನ ಓದುವದರಲ್ಲಿ ಆಸಕ್ತಿ ಮತ್ತು ಕೆಲವು ಚಿಕ್ಕ ಕವನಗಳನ್ನ ಬೆರೆಯುವ ಪ್ರಯತ್ನ.

ಹೊಸ ಗಾಳಿ

ಬಿಸಿಗಾಳಿಯ ಉಸಿರ ಈ ಜೀವಕೆ
ತಂಗಾಳಿಯಾಗಿ ನೀ ಬಾ
ಹೊಸ ಬಯಕೆಯ ಹೊಸ ಕನಸನ ನೀ ಹೊತ್ತು ತಾ

ಕಾಮೋ೯ಡ ಕವಿದ ಈ ಮನಕೆ
ಬೆಳಕಾಗಿ ನೀ ಬಾ
ಹೊಸ ಗುರಿಯ ಹೊಸ ಹುರುಪನ ನೀ ಹೊತ್ತು ತಾ

ಭಾರವಾದ ಹೃದಯದ ಈ ಗೂಡಿಗೆ
ಹರುಷವಾಗಿ ನೀ ಬಾ
ಹೊಸ ದಾರಿಯ ಹೊಸ ತಿರುವನ ನೀ ಹೊತ್ತು ತಾ

ಜಡವಾದ ಈ ದೇಹಕೆ
ಚೆೃತನ್ಯ ವಾಗಿ ನೀ ಬಾ
ಹೊಸ ಶೋಧನೆಯ ಹೊಸ ವಿವೇಚನೆಯನ ನೀ ಹೊತ್ತು ತಾ

ಸದಾ ಅರಸುತಿದೆ ಈ ಮನ ಹೊಸ ತನಕ್ಕಾಗಿ ಹೊಸ ಗಾಳಿಗಾಗಿ

ಹೊದಿಕೆ

ಆಳುವವನಿಗೊಂದು ಹೊದಿಕೆ
ಅಳುವವನಿಗೊಂದು ಹೊದಿಕೆ
ಬದುಕಿಗೆ ಏನೆಲ್ಲ ಹೊದಿಕೆ

ಕಾಯುವನಿಗೊಂದು ಹೊದಿಕೆ
ಕದೀಮನಿಗೊಂದು ಹೊದಿಕೆ
ಈ ಬದುಕಿಗೆ ಏನೆಲ್ಲ ಹೊದಿಕೆ

ಮನಸ್ಸಿಗೊಂದು ಹೊದಿಕೆ
ಮಾನಕೊಂದು ಹೊದಿಕೆ
ಬದುಕಿಗೆ ಏನೆಲ್ಲ ಹೊದಿಕೆ

ಧನಿಕನಿಗೊಂದು ಹೊದಿಕೆ
ದಾನಿಗೊಂದು ಹೊದಿಕೆ
ಈ ಬದುಕಿಗೆ ಏನೆನಿಲ್ಲ ಹೊದಿಕೆ

ಹೊದಿಕೆ ಇಂದ ಹೊರಬಂದಾಗ
ಸಿಗುವುದೇ ಆ ಹೊದಿಕೆಗಿದ್ದ
ಆಲಿಕೆ?

ಹೊದಿಕೆಯ ಮೇಲೆದ್ದ ಹೊದಿಕೆಗಳ
ಬಿಚ್ಚಲೊಲ್ಲೆಯಾ ನಿಜವಾಗಿ ನಿನ್ನ
ತಿಳಿಯೋದಕೆ

ಮಜಾ

ಮೊದಲ ಮಳೆ ಸುರಿಯುವಾಗ
ಬೆಚ್ಚಗೆ ಮನೆಯಲ್ಲಿ ಕೂರುವದಕ್ಕಿಂತ
ಹೊರಗಡೆ ಮಳೆಯಲಿ ನೆನೆಯುವುದೇ ಮಜಾ
ಆ ಮಣ್ಣಿನ ಸುವಾಸನೆಯಲಿ ಮನವು
ವಿಲೀನವಾಗುವಾಗ

ಬೆಳಿಗ್ಗೆ ಮೊಬೈಲ್ನಲ್ಲಿ ಅಲರಾಮು ಆಗುವಾಗ
ತಟ್ಟನೇ ಎದ್ದೇಳುವುದಕ್ಕಿಂತ
ಸ್ನೂಜ್ ಮಾಡಿ ಮತ್ತೆ ಮತ್ತೆ ನಿದ್ದೆಗೆ ಜಾರುವುದೇ ಮಜಾ
ಕನಸಿನಲ್ಲಿ ಹೊಸ ಕನಸೊಂದು ಶುರುವಾಗುವಾಗ

ಸಿನೆಮಾ ನೋಡೋಕೆ ಹೋದಾಗ
ಸಬ್ಯರ ಜೊತೆ ಬಾಲ್ಕನಿಯಲ್ಲಿ ಕೂರೋದಕ್ಕಿಂತ
ಗಾಂಧಿ ಕ್ಲಾಸ್ ನಲ್ಲಿ ಕೂರೋದೇ ಮಜಾ
ಹರುಷದ ಶಿಳ್ಳೆಗಳಲ್ಲಿ ಮನಸ್ಸು ಯವ್ವನಕ್ಕೆ ಜಾರುವಾಗ

ಭರವಸೆ

ಬಿಸಿಲಿಗೆ ಬಸವಳಿದ ತಾವರೆ
ಮುದುಡುತಿದೆ, ಜಲವನರಿಸಿ,
ಕೈ ಚಲ್ಲಿದೆ ಮೆಲ್ಲಗೆ
ಸುರಿಯಬಾರದೇ, ಮಲ್ಲಿಗೆಯ ಮಳೆ
ಅರಳಬಾರದೇ ಮೆಲ್ಲಗೆ, ಭರವಸೆಯ ಕಳೆ

ಬೆಳಕಿನೆಡೆಗೆ

ಮರುಕಳಿಸಿದ ಬೆಳಕಿನ ಬಾನ,
ಹರಡಿದೆ ಕಲರವಗಳ ಗಾನ.
ಮೌನದಲಿ ಅರಿಯುವ ಧ್ಯಾನ,
ಸವಿದಂತೆ ಹಾಲು ಜೇನ.
ಹರಿಯುವ ತಿಳಿನೀರಿನ ಸ್ನಾನ,
ಈ ಜಗದ ಮಧುರ ದಾನ.
ಇತಿ ಮಿತಿಯ ಬದುಕುವ ತನ
ಇರಿಸುವದೇ ಕೇಳಲು? ಇನ್ನೇನ