ಕತೆಯಾಯಿತು  ಮರ

  • ಯೋಗೀಂದ್ರ ಮರವಂತೆ

ನೂರ್ಕಾಲ ಬದುಕಿದರೆ ಮಾನವರಿಗೊಂದು ವಿಶೇಷ ಸಾಧನೆ. ಕೇವಲ ಆಯಸ್ಸು ವಿಶೇಷತೆಯ ಮಾನದಂಡವಾಗದು. ಸ್ಥಳದ ನಾವಿನ್ಯತೆ, ಜನಪ್ರಿಯತೆ ಅಲ್ಲಿನ ವೈಶಿಷ್ಟ್ಯವನ್ನು ಅವಲಂಬಿಸಿರುತ್ತದೆ. ಇಂಗ್ಲೆಂಡ್, ಸ್ಕಾಟ್ಲೆಂಡಿನ ಗಡಿಯುದ್ದಕ್ಕೂ ರೋಮನ್ನರು ಕಟ್ಟಿದ ಹೆಡ್ರಿಯನ್ ಗೋಡೆ (ಪಾಗಾರ) ಐತಿಹಾಸಿಕ ಕುರುಹು. ಆ ಪಾಗಾರ ಮುರಿದು ಬಿದ್ದ, ಎರಡು ಗುಡ್ಡಗಳ ನಡುವೇ ಬಳುಕುವ ಸೊಂಟದಂದದ ಜಾಗೆಯಲ್ಲಿ ಸುಮಾರು ನೂರೈವತ್ತು ವರ್ಷಗಳಿಂದ ಸ್ವತಂತ್ರವಾಗಿ ಹರಡಿ ಸೊಂಪಾಗಿ ಬೆಳೆದಿದ್ದ ಚೆಲುವೆ ಸಿಕಮೋರ್ ಗ್ಯಾಪ್ ಮರ. ಸಿಕಮೋರ್ ಮರಗಳು ಸರಿ ಸುಮಾರು ೩ ೦ ೦ -೪ ೦ ೦ ವರ್ಷಗಳ ಕಾಲ ಬಾಳ ಬಲ್ಲವು. ಮರಗಳ ಜಗತ್ತಿನಲ್ಲಿ ೩ ಶತಮಾನಗಳ ಬಾಳ್ವೆ ಏನೇನೂ ಅಲ್ಲ. ಸಹಸ್ರಾರು ವರ್ಷಗಳ ಕಾಲ ಬದುಕಿ ಮನುಕುಲದ ಉನ್ನತಿ ಅವನತಿಯ ಹಾದಿಯನ್ನೆಲ್ಲ ಅವಲೋಕಿಸುವ ಮರಗಳು ಜಗತ್ತಿನ ತುಂಬೆಲ್ಲ ಕಾಣ ಸಿಗುತ್ತವೆ. ಇಂದಿನ ಲೇಖನ ನೀವು ಊಹಿಸಿದಂತೆ ನಾರ್ಥಂಬಲ್ಯಾನ್ಡ್ ನ ಪ್ರಸಿದ್ಧ ಸಿಕಮೋರ್ ಗ್ಯಾಪ್ ಮರದ ಕಥೆ. ಯೋಗೀಂದ್ರ ಅವರ ಬರಹದಲ್ಲಿ ಹಿಂದೆ ನಾವು ಕಂಡಂತೆ ಅಮೂರ್ತವನ್ನು ಮೂರ್ತವಾಗಿಸುವ, ನಿರ್ಜಿವವನ್ನು ಸಜೀವಗೊಳಿಸುವ ವೈಶಿಷ್ಟ್ಯತೆ ಇದೆ. ಅದೇ ಹೊಳಹಿನಲ್ಲಿ ಮರವನ್ನು ಅವರು ಮಾನವ ರೂಪದಲ್ಲಿ ನಮ್ಮ ಮುಂದೆ ಪ್ರಸ್ತುತಿಸಿದ್ದಾರೆ. ಈ ಲೇಖನವನ್ನು ಓದುವಾಗ ಕರುಣೆ, ಜಿಗುಪ್ಸೆ, ಕ್ರೌರ್ಯ, ಮತ್ಸರ, ಕುಹಕತೆ, ಇನ್ನಿತರ ಭಾವಗಳು ನಿಮ್ಮಲ್ಲಿ ಹೊಮ್ಮುವುದು ಖಚಿತ. ಕೊನೆಯಲ್ಲಿ ಮಾನವನ ಕ್ರೌರ್ಯಕ್ಕೆ ಸರಿ ಸಮನಾಗಿ ಪ್ರಕೃತಿ ಹಾಗೂ ಮಾನವನ ಧನ್ವಂತರಿ ಸ್ಪರ್ಶದ ಪರಿಣಾಮವನ್ನೂ ಕಾಣಬಹುದು.

-ಸಂಪಾದಕ

ಸಿಕಾಮೋರ್ ಗ್ಯಾಪ್ ಮರ ತನ್ನ ಉಚ್ಛ್ಛ್ರಾವಸ್ಥೆಯಲ್ಲಿ (ಚಿತ್ರ ಕೃಪೆ : ಅಂತರ್ಜಾಲ)

ಈಗಷ್ಟೇ ಕಳೆದ,  ಮೇ ತಿಂಗಳ ಒಂಬತ್ತನೆಯ ತಾರೀಕಿನಂದು  ಜಗತ್ತಿನ ಯಾವ ಯಾವ ನ್ಯಾಯಾಲಯದಲ್ಲಿ ಎಷ್ಟೆಷ್ಟು  ವಾದ ಪ್ರತಿವಾದ ನಡೆಯಿತೋ  ಗೊತ್ತಿಲ್ಲ, ಯಾರು ಕೊಲೆಗಾರ ಅಲ್ಲದಿದ್ದರೆ  ವಂಚಕ ಎಂದು ಸಾಬೀತಾಯಿತೋ ತಿಳಿದಿಲ್ಲ . ಎಷ್ಟು ಆಪಾದಿತರಿಗೆ ಶಿಕ್ಷೆಯ  ಘೋಷಣೆ , ಇನ್ನೆಷ್ಟು ನಿರಪರಾಧಿಗಳ ಖುಲಾಸೆ ಎಂದು ಹೇಳುವುದು ಅಸಾಧ್ಯ.
ಆದರೆ ಇಂಗ್ಲೆಂಡ್ ನ ಉತ್ತರ ಗಡಿಯ ನ್ಯೂ ಕಾಸಲ್ ಕ್ರೌನ್  ಕೋರ್ಟಿನ  ನ್ಯಾಯಾಧೀಶರು ಆ ದಿನದ  ಅತ್ಯಂತ ವಿಶಿಷ್ಟ ತೀರ್ಪೊಂದನ್ನು ನೀಡಿದ್ದರು. ಆ ತೀರ್ಪು , ಆ ದಿನದ ಮಾತ್ರವಲ್ಲ ,  ಇಡೀ ವರ್ಷದ, ದಶಕದ, ಶತಮಾನದ,  ಅಲ್ಲದಿದ್ದರೆ ಯಾವ ನ್ಯಾಯ ವ್ಯವಸ್ಥೆಯೂ ಎಂದೂ ಉಚ್ಛರಿಸಿರಲಾರದ  ಅಪೂರ್ವ ತೀರ್ಪೂ  ಆಗಿದ್ದಿರಬೇಕು. ಅಂದು ಕಟಕಟೆಯಲ್ಲಿ ನಿಂತಿದ್ದ ಇಂಗ್ಲೆಂಡ್ ನ ಉತ್ತರ-ಪಶ್ಚಿಮ (ವಾಯುವ್ಯ) ಪ್ರಾಂತ್ಯದ ಇಬ್ಬರು ಸಾಮಾನ್ಯ ವ್ಯಕ್ತಿಗಳ ಕಿಡಿಗೇಡಿತನ ಸಾಬೀತಾಗಿತ್ತು.  ಅವರೇ  ಅಪರಾಧಿಗಳು ಎಂದು ತೀರ್ಪು ಹೊರಬಿದ್ದಿತ್ತು ,  ಅಪರಾಧಕ್ಕೆ ತಕ್ಕುದಾದ ಶಿಕ್ಷೆ ಮುಂದಿನ ತಿಂಗಳು ಜುಲೈಯಲ್ಲಿ ನಿರ್ಧಾರವಾಗಲಿದೆ  ಎಂದೂ ತಿಳಿಸಲಾಗಿತ್ತು.

ಆರೋಪಿಗಳಿಗೆ ಶಿಕ್ಷೆ ಆಗುವುದೇನೂ ಹೊಸತಲ್ಲ ಬಿಡಿ.  ಅಂದು ಆರೋಪಿಯಿಂದ ಅಪರಾಧಿಗಳಾಗಿ ಬದಲಾದವರು ವಾಯುವ್ಯ ಇಂಗ್ಲೆಂಡ್ ನ ಕಂಬ್ರಿಯ  ಅಥವಾ ಅದೇ ಪ್ರಾಂತ್ಯದ ವಿಶ್ವವಿಖ್ಯಾತ ಹೆಸರಾದ  ಲೇಕ್ ಡಿಸ್ಟ್ರಿಕ್ಟ್ ಪ್ರದೇಶದ  ವಾಸಿಗಳು . ಅವರೊಂದು   ಕುಚೋದ್ಯವನ್ನು ಮಾಡಿದ್ದರು. ಸುಮಾರು ಎರಡು ವರ್ಷಗಳ ಹಿಂದಿನ ನಡುರಾತ್ರಿಗೆ, ತುಸು ದೂರ  ಕಾರು ಓಡಿಸಿಕೊಂಡು ಹೋಗಿ  ಆಮೇಲೆ ಇಪ್ಪತ್ತು ನಿಮಿಷ ನಡೆದು  ಗರಗಸ ಹಿಡಿದು ನಾರ್ಥಂಬರಲ್ಯಾಂಡ್ ಎನ್ನುವ ಪ್ರದೇಶಕ್ಕೆ ಬಂದಿದ್ದರು. ಜೋರು ಗಾಳಿ ಬೀಸುವ ತಣ್ಣಗಿನ ಹವೆಯ ಆ ರಾತ್ರಿ  ಅಲ್ಲಿದ್ದ ಒಂದು ಪುರಾತನ ವೃಕ್ಷವನ್ನು ವಿನಾಕಾರಣ ಕಡಿದಿದ್ದರು. ಸಕಾರಣವಾಗಿಯಾದರೂ ಒಂದು ಮರವನ್ನು ಕಡಿಯಬಹುದೇ ಎನ್ನುವುದೇ ಒಂದು ದೊಡ್ಡ ಜಿಜ್ಞಾಸೆ. ಮರಗಳಿಗೆ ವಿವೇಚನೆ ಇದ್ದರೆ , ಅದಕ್ಕೆ ತಕ್ಕುದಾಗಿ ಮಾತೂ  ಬಂದಿದ್ದರೆ ಅವುಗಳ ಅಭಿಪ್ರಾಯ  ಏನಿರುತ್ತಿತ್ತೋ? ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದೇ  ಎನ್ನುವ ಪ್ರಶ್ನೆಗೆ ಮನುಷ್ಯರು ನೀಡಬಹುದಾದ  ಉತ್ತರಕ್ಕಿಂತ ಮರಗಳು  ನೀಡುವ ಉತ್ತರ ಬಹಳ ಭಿನ್ನ ಇರಲಿಕ್ಕಿಲ್ಲ. ಹಾಗಂತ  ಭೂಮಿ ಆಕಾಶಗಳ ಪ್ರತಿ ಅಂಗುಲಕ್ಕೂ  ಅನಭಿಷಕ್ತ ದೊರೆಯಂತೆ ವರ್ತಿಸುವ ಮನುಷ್ಯರಿಗೆ ಮರಗಳನ್ನು ಕಡಿಯಬಹುದೇ ಎನ್ನುವ ಪ್ರಶ್ನೆಯೇ  ಅಪ್ರಸ್ತುತ ವಿಲಕ್ಷಣ ವಿನೋದವಾಗಿ ಕಂಡೀತು.

ಇರಲಿ, ಅಂತೂ ಆ ಇಬ್ಬರು ಜೊತೆಯಾಗಿ ಎಲ್ಲ ಅರ್ಥ ಜಿಜ್ಞಾಸೆಗಳನ್ನು ಮೀರಿ ಮರವೊಂದನ್ನು ಕಡಿದಿದ್ದರು. ಹಾಗೆ ತಾವು ಕಡಿದು ಒರಗಿಸಿದ ಮರದ ದಿಮ್ಮಿ ,ತೊಗಟೆ, ಎಲೆ, ಟೊಂಗೆ, ಟಿಸಿಲು, ಬೇರು ನಾರು ಯಾವುದೂ ಆ ಮರಕಟುಕರಿಗೆ ಬೇಕಿರಲಿಲ್ಲ. ಕಟ್ಟಿಗೆಗಾಗಿ ಮಾರಿ ಹಣ ಮಾಡುವ ಉದ್ದೇಶವೂ  ಅವರದಾಗಿರಲಿಲ್ಲ. ಯಾರೋ ನೆಟ್ಟ, ಯಾರದೋ ಇಚ್ಛೆಯಿಂದಾಗಿ ಆ ಸ್ಥಳದಲ್ಲಿ ಬೆಳೆದ, ನಿತ್ಯ ಜೀವನ್ಮುಖಿ  ಪ್ರಕೃತಿಗೆ ಆ ಪ್ರದೇಶದಲ್ಲೊಂದು ಹೊಸ ಆಯಾಮ ನೀಡಿದ, ಭೂಮಿ ಬಾನು ,ನಾಡು ಕಾಡು, ಹುಲ್ಲು ಹಸಿರು, ಕಲ್ಲು ಮಣ್ಣುಗಳು ಒಂದಾಗಿ ನಲಿಯುವ, ಬೆಟ್ಟ ಕಣಿವೆಗಳು ಒಂದಾಗಿ ಕುಣಿಯುವ  ಜಾಗದಲ್ಲಿ  ಬಲಿತ, ಯಾರಿಗೆ ಯಾವ ತೊಂದರೆಯನ್ನೂ ಕೊಡದ, ಸಾಧ್ಯ ಆದರೆ ತಂಪು ನೆರಳು ಶುದ್ಧ ಗಾಳಿ ಮತ್ತೆ ನಯನ ಮನೋಹರ ದೃಶ್ಯವನ್ನು ಸಹಜವಾಗಿ ಬಿಡಿಸುತ್ತ  ಅಸಂಖ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತ ಪ್ರಸಿದ್ಧವಾಗಿದ್ದ ಮರವೊಂದು  ಅಚಾನಕ್ ಇಲ್ಲದಿದ್ದರೆ ಜಗತ್ತು ಹೇಗೆ ಪ್ರತಿಕ್ರಿಯಿಸಬಹುದು  ಎಂದು ಆ ಇಬ್ಬರಿಗೆ ನೋಡಬೇಕಿತ್ತು. ಅಷ್ಟೇ. ಬರೇ ಅಷ್ಟೇ. ಒಂದು ಮರವನ್ನು ಕಡಿಯಲು ಅವರಿಗಿದ್ದದ್ದು ಅದೊಂದೇ  ಕ್ಷುಲ್ಲಕ ಕಾರಣ-ಪ್ರೇರಣೆ. ಕಾಲ, ಭೂಮಿ, ಜೀವಿ, ಜೀವನ  ಸಂದರ್ಭ ಎಲ್ಲವನ್ನು  ಒಂದು ಕ್ಷಣಕ್ಕಾದರೂ ಅಪಹಾಸ್ಯ ಮಾಡಲು ಅವರು ಕಂಡುಕೊಂಡ ದಾರಿ, ಪುರಾತನ ಚಾರಿತ್ರಿಕ ಸಿಕಮೋರ್ ಮರವನ್ನು ಕಡಿಯುವುದು. ಮತ್ತೆ  ಆ ಮರದ ಬಗ್ಗೆ ಕೇಳಿದವರ, ನೋಡಿದವರ, ಫೋಟೋ ತೆಗೆದವರ, ನೆರಳಲ್ಲಿ ಒಂದು ಘಳಿಗೆ ಕುಳಿತವರ, ತಮ್ಮ ಮೃತ ಆಪ್ತರ ಬೂದಿಯನ್ನು ಮರದ ಆಸುಪಾಸಲ್ಲಿ ಚೆಲ್ಲಿ ಆರ್ದ್ರರಾದವರ ಅಸಹಾಯಕತನ ಸಂಕಟವನನ್ನು ನೆನೆದು ಖುಷಿ ಪಡುವುದಿತ್ತು.  ಒಟ್ಟಾರೆ ಆ  ಮರಕಟುಕರಿಂದ ,
ಸುಮಾರು ೧೫೦ ವರ್ಷಗಳ ಹಿಂದೆ ನೆಡಲ್ಪಟ್ಟ ಸಸಿ ಮರ ಹೆಮ್ಮರವಾಗಿ ಬೆಳೆದು ಜಗತ್ತಿನ ಮೂಲೆಮೂಲೆಯ  ಪ್ರವಾಸಿಗಳಿಗೆ ಪರಿಸರ ಪ್ರೇಮಿಗಳಿಗೆ, ಸಿನೆಮಾ ನಿರ್ದೇಶಕರಿಗೆ, ಇವರ್ಯಾರೂ ಅಲ್ಲದ ಜನಸಾಮಾನ್ಯರಿಗೆ,  ಅಷ್ಟೇ ಏಕೆ ಇಡೀ ಈಶಾನ್ಯ ಇಂಗ್ಲೆಂಡಿಗೆ
ಹೆಗ್ಗುರುತೇ  ಆಗಿದ್ದ “ಸಿಕಮೋರ ಗ್ಯಾಪ್ ಮರ ” ಅಂದು ಕಡಿಯಲ್ಪಟ್ಟು ನೆಲದ ಮೇಲೆ ಧೊಫ್ ಎಂದು ಬಿದ್ದಿತ್ತು. ಕಡಿಯಲ್ಪಟ್ಟ ನಡುರಾತ್ರಿಯಿಂದ ಬೆಳಗಿನ ತನಕವೂ ಆ ಮರವನ್ನು ತಿಳಿದವರು ಎಲ್ಲೆಲ್ಲಿ ಹೇಗೇಗೆ ಇದ್ದರೂ ಅವರಿಗೆಲ್ಲ ತಮ್ಮ ಜಗತ್ತು ಏನೂ ಬದಲಾಗದೆ ನಿನ್ನೆಯಂತೆಯೇ ಇದೆ ಎನ್ನುವ ಭ್ರಮೆಯೇ  ಮುಂದುವರಿದಿತ್ತು.  ಹಾಗಂತ ಬೆಳಗಾಗುತ್ತಲೇ, ಒಂದು ಕೆಟ್ಟ ಹಾಸ್ಯಕ್ಕಾಗಿ ಮಾಡಿದ ಕೃತ್ಯ ನೂರೈವತ್ತು  ವರ್ಷಗಳ ಇತಿಹಾಸದ ಹಾದಿ ಬದಲಿಸಿತ್ತು. ೨೦೨೩ರ ಸೆಪ್ಟೆಂಬರ್ ೨೮ ರ ಬೆಳಿಗ್ಗೆ ಆ ಮರವನ್ನು ನೋಡಿ, ಕೇಳಿ, ತಿಳಿದಿದ್ದ ಎಲ್ಲರಿಗೂ ಆಘಾತ, ದುಗುಡ, ಹತಾಶೆ ಕಾದಿತ್ತು.

ನಿತ್ಯವೂ ಜಗತ್ತಿನ ಮೂಲೆಮೂಲೆಗಳಲ್ಲಿ  ಮರಗಳು ಉರುಳುವುದು, ಗಿಡಗಳನ್ನು ಸವರುವುದು, ಕಟ್ಟಡವನ್ನು ಎಬ್ಬಿಸುವುದು, ರಸ್ತೆಯನ್ನು ಹಾಸುವುದು ಅಭಿವೃದ್ಧಿಯ ಸಂಕೇತವಾಗಿರುವಾಗ ಈಶಾನ್ಯ ಇಂಗ್ಲೆಂಡಿನ ಸಣ್ಣ ಊರಿನ ಹಳೆಯ ಮರವನ್ನು ಉರುಳಿಸಿದವರು ಯಾಕೆ
ಬಂಧನಕ್ಕೊಳಗಾದರು?  ಬಂಧಿಸಲ್ಪಟ್ಟವರನ್ನು ನ್ಯಾಯಾಲಯ ಏಕೆ  ಅಪರಾಧಿ ಎಂದು ತೀರ್ಮಾನಿಸಿತು? ಮನುಷ್ಯರಿಗೆ ಹೀಗೊಂದು ಪ್ರಶ್ನೆ ಬರುವ ಸಾಧ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ ನಿತ್ಯವೂ ಕಡಿಯಲ್ಪಡುವ ಅಷ್ಟೇನೂ ಪ್ರಸಿದ್ಧವಲ್ಲದ ಅತಿ ಸಾಮಾನ್ಯ ಮರಗಳ
ಸಂತತಿಗಾದರೂ ಹೀಗೊಂದು ಸಂದೇಹ ಕಾಡೀತು.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ , ಇಂತಹದ್ದೆಂದು ದಾಖಲಾಗದ ದಿನದಂದು ವಕೀಲ, ಅನ್ವೇಷಕ ಮತ್ತೆ ಸದ್ರಿ ಸ್ಥಳದ ಅಂದಿನ ಮಾಲೀಕ ಜಾನ್ ಕ್ಲೇಟನ್ ಅಲ್ಲಿನ ಸುಂದರ ಪರಿಸರಕ್ಕೆ ಪೂರಕವಾಗಲಿ ಎಂದು  ಈ ಆ ಸಿಕಮೊರ್ ಸಸಿಯನ್ನು  ನೆಟ್ಟಿದ್ದ, ಇತಿಹಾಸ
ಪ್ರಸಿದ್ಧ ಹ್ಯಾಡ್ರಿಯನ್ ಗೋಡೆಯ ಪಕ್ಕದಲ್ಲಿ.   ರೋಮನ್ನರು ಇಂಗ್ಲೆಂಡಗೆ ಕಾಲಿಟ್ಟ ಆರಂಭಿಕ ಕಾಲವಾದ  ಒಂದನೆಯ ಶತಮಾನದಷ್ಟು ಹಿಂದೆಯೇ ೧೩೫ ಕಿಲೋಮೀಟರು ಉದ್ದದ ಆ ಗೋಡೆ  ಕಟ್ಟಲ್ಪಟ್ಟಿತ್ತು. ಆಧುನಿಕ ಕಾಲದಲ್ಲಿ  ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡಗಳ
ಗಡಿಯಂತೆಯೂ ಕಾಣುವ ಹ್ಯಾಡ್ರಿಯನ್ ಗೋಡೆಯ ಉತ್ಖತನದಲ್ಲಿ  ಜಾನ್ ಕ್ಲೇಟನ್ ಐವತ್ತು ವರ್ಷ ತೊಡಗಿಸಿಕೊಂಡವನು. ಅನಾದಿ ಕಾಲದ ಗೋಡೆಯ ಸುದೀರ್ಘ ಭವಿಷ್ಯದ ಬಗ್ಗೆ ಕಾಳಜಿ ಇದ್ದವನು. ಆ ಗೋಡೆಯ ಕಲ್ಲುಗಳನ್ನು ಅವರಿವರು ಒಂದೊಂದೇ ಜಾರಿಸಿ ಕೊಂಡುಹೋಗಿ
ಮುಂದೊಂದೊಂದು ದಿನ ಗೋಡೆಯೇ ನಶಿಸಿ ಹೋಗುವ ಬಗ್ಗೆ ಅವನಿಗೆ ಆತಂಕ ಇತ್ತು. ಶ್ರೀಮಂತ ಹಿನ್ನೆಲೆಯ ಆತ  ಕೆಲವು ಕೋಟೆಗಳ ಜೊತೆಗೆ ಹ್ಯಾಡ್ರಿಯನ್  ಗೋಡೆಯ ಇಪ್ಪತ್ತು ಮೈಲಿ ಉದ್ದದ ಭಾಗದ ವಾರೀಸುದಾರನೂ ಆಗಿದ್ದ. ಸಹಜವಾಗಿ ಗುಡ್ಡ ಕಣಿವೆಗಳು ಹತ್ತಿಳಿಯುವ ಆ  ಗೋಡೆಯ ಒಂದು ನೈಸರ್ಗಿಕ ತಗ್ಗಿನಲ್ಲಿ ಸಿಕಮೊರ್  ಸಸಿಯನ್ನು ನೆಟ್ಟಿದ್ದ.  ಸಸಿ ಬೆಳೆದದ್ದು, ಬಲವಾದದ್ದು, ಜಗತ್ತಿನ ದಿಕ್ಕುದೆಸೆಯ ಪ್ರವಾಸಿಗಳಿಗೆ ಆಗಂತುಕರಿಗೆ, ಅಭ್ಯಾಗತರಿಗೆ ನಿರ್ಮಲ ಘಳಿಗೆಯನ್ನು ಹಂಚಿದ್ದು,  ಮತ್ತೆ ಎರಡು ವರ್ಷಗಳ ಹಿಂದೆ ಇಬ್ಬರ ಗರಗಸಕ್ಕೆ ಬಲಿಯಾಗಿ ಹ್ಯಾಡ್ರಿಯನ್ ಗೋಡೆಯ ಮೇಲೆಯೇ  ಉರುಳಿ ಬಿದ್ದದ್ದು  ಎಲ್ಲವೂ ಮರವೊಂದರ ದೀರ್ಘ ಇತಿಹಾಸದ ಅನಿರೀಕ್ಷಿತ ಇತ್ತೀಚಿನ ಮುಂದುವರಿಕೆ.

ಉರುಳಿ ಬಿದ್ದ ಮರದ ಭವಿಷ್ಯವನ್ನು ಸಜ್ಜುಗೊಳಿಸುವ ಕಾರ್ಯ

೨೦೨೩ರ ೨೮ ಸೆಪ್ಟೆಂಬರ್ ಬೆಳಿಗ್ಗೆ, ಬಿದ್ದಿದ್ದ ಮರವನ್ನು ನೋಡಿದ ಸ್ಥಳೀಯರು ಆರಕ್ಷಕರಿಗೆ  ದೂರು ಕೊಟ್ಟಿದ್ದರು. ಸಣ್ಣ ಸಣ್ಣ ಇತಿಹಾಸ ಕತೆ ದಂತಕಥೆಗಳನ್ನೂ ಗೌರವಯುತವಾಗಿ ಸ್ಮರಿಸುವ, ಆರೈಕೆ ಮಾಡಿ ಕಾಯ್ದಿಟ್ಟು ಮತ್ತೆ ಪ್ರವಾಸಿಗರಿಗೂ ಆಸ್ಥೆಯಿಂದ ತೋರಿಸಿ ಹೆಮ್ಮೆ ಪಡುವ  ಸಂಸ್ಕೃತಿಯ ಇಂಗ್ಲೆಂಡನಲ್ಲಿ ಜಗತ್ಪ್ರಸಿದ್ಧ ಮರ ಉರುಳಿದ್ದು “ಹೈ ಪ್ರೊಫೈಲ್ ಕೇಸ್” ಆಗಿತ್ತು; ಮತ್ತೆ ಅಪರೂಪದ್ದೂ.  ತನಿಖೆಯಲ್ಲಿ
ಭಾಗವಹಿಸಿದ ವಿಧಿವಿಜ್ಞಾನ ತಂಡದ ಅಧಿಕಾರಿ ಹೇಳುವಂತೆ “ನನ್ನ ಮೂವತ್ತೊಂದು ವರ್ಷದ ಸೇವೆಯಲ್ಲಿ ಅಪರಾಧದ ಕುರುಹಿಗಾಗಿ ಮರವೊಂದರ ಪರೀಕ್ಷೆಯನ್ನು ಹಿಂದೆಂದೂ ಮಾಡಿದ್ದಿಲ್ಲ”. ತನಿಖೆ ಮುಂದುವರಿದು , ಸುಳಿವು ಸಿಕ್ಕಿ ೨೦೨೪ರ ಏಪ್ರಿಲ್ ಅಲ್ಲಿ
ಡೇನಿಯಲ್ ಮತ್ತು ಆಡಮ್ ಎನ್ನುವ ಕಂಬ್ರಿಯದ  ವಾಸಿಗಳನ್ನು   ಐತಿಹಾಸಿಕ ಮರವನ್ನು ಕಡಿದ, ಮರವನ್ನು ಬೀಳಿಸಿ ಚಾರಿತ್ರಿಕ  ಹ್ಯಾಡ್ರಿಯನ್  ಕಲ್ಲುಗೋಡೆಗೆ ಹಾನಿ ಮಾಡಿದ ಕ್ರಿಮಿನಲ್ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಕೋರ್ಟಿನಲ್ಲಿ  ವಾದ-ಪ್ರತಿವಾದಗಳು ಜರುಗಿ ಅವರ ಅಪರಾಧ ಸಾಬೀತಾದದ್ದು ಮೊನ್ನೆಮೊನ್ನೆಯ ಅಂದರೆ ಇದೇ ವರ್ಷದ ಮೇ ತಿಂಗಳಿನಲ್ಲಿ. ವಿಚಾರಣೆಯ ಉದ್ದಕ್ಕೂ ಅಪರಾಧವನ್ನು ಅಲ್ಲಗಳೆಯುತ್ತಿದ್ದ, ಒಬ್ಬರು ಇನ್ನೊಬ್ಬರನ್ನು ದೂಷಿಸುತ್ತಿದ್ದ , ೩೯ ಹಾಗು ೩೨ ವರ್ಷದ ಅಪರಾಧಿ ಜೋಡಿ, ಮರ ಬೀಳುವ  ಸಂದರ್ಭವನ್ನು ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಬಿದ್ದ
ಮರದ ಗೆಲ್ಲೊಂದನ್ನು ಪದಕದಂತೆ ತಮ್ಮೊಡನೆ ಒಯ್ದಿದ್ದರು. ೧೯೯೧ರಲ್ಲಿ ನಿರ್ಮಾಣಗೊಂಡ ರಾಬಿನ್ ಹುಡ್ ಸಿನೆಮಾದ ಒಂದು ಮುಖ್ಯ ಸನ್ನಿವೇಶದಲ್ಲಿ ಹಿನ್ನೆಲೆಯಲ್ಲಿದ್ದ ಮರ, ೨೦೨೩ರ ಸೆಪ್ಟೆಂಬರ್ ೨೭ರ ಜೋರು ಗಾಳಿಯ ನಡುಇರುಳಿನಲ್ಲಿ ಕಿಡಿಗೇಡಿಗಳ ಬ್ಯಾಟರಿ ಚಾಲಿತ ಗರಗಸಕ್ಕೆ ತುತ್ತಾಗಿ ಮುನ್ನಲೆಯಲ್ಲಿ ಅಂತಿಮ ಉಸಿರಳೆದದ್ದು ಎಂತಹ ವಿಪರ್ಯಾಸ! ನಿಮಿಷಗಳಲ್ಲಿ ಆರಂಭವಾಗಿ ಮುಗಿಯುವ ಮರ ಕಡಿಯುವ ಸಂದರ್ಭವನ್ನು ನೋಡಿದವರಲ್ಲಿ ವಿಭಿನ್ನ  ಭಾವನೆಗಳು ಹುಟ್ಟಬಹುದಾದರೂ, ಇನ್ನೇನು ಬೀಳಲಿರುವ ಮರಕ್ಕೆ, ಒಂದು ಕ್ಷಣಕ್ಕೆ ತನ್ನನು ಬದುಕಿಸಲು ಆ ರಾಬಿನ್ ಹುಡ್ ಆದರೂ ಬರಬಾರದಿತ್ತೇ ಎಂದೂ ಅನಿಸಿರಬಹುದು, ತನ್ನನ್ನು ನೆಟ್ಟು ಬೆಳೆಸಿದ  ಜಾನ್ ಕ್ಲೇಟನ್ ಕಣ್ಣೆದುರು ಬಂದಿರಬಹುದು. ತನ್ನ ನೆರಳಲ್ಲಿ ತಂಗಿ ಮುಂದುವರಿದ ಕಾಲ್ನಡಿಗೆಯವರು, ತನ್ನ ಆಸುಪಾಸಿನ ಕ್ಷಣಭಂಗುರದಲ್ಲಿ ಲೀನರಾಗಿ ಮೈಮರೆತ ಲಕ್ಷ ಲಕ್ಷ ಅನಾಮಿಕ ಅಜ್ಞಾತ ಪ್ರವಾಸಿಗರು ಸ್ಮರಣೆಗೆ ಬಂದಿರಬಹುದು. ಬಿಡಿ,  ಫೋನು ತಪಾಸಣೆಯಲ್ಲಿ  ದೊರೆತ ಆ ವಿಡಿಯೋ ತುಣುಕು, ಜನರಲ್ಲಿ
ಎಬ್ಬಿಸುವ ಭಾವಲಹರಿ ಏನೇ ಇದ್ದರೂ ಕಾನೂನು ತನಿಖೆಯ ಮಟ್ಟಿಗೆ ಅತಿ ಅಗತ್ಯವಾದ ಪುರಾವೆಯನ್ನು  ಒದಗಿಸಿತ್ತು. ಮತ್ತೆ ನ್ಯೂ ಕಾಸಲ್ ಕ್ರೌನ್  ಕೋರ್ಟ್ ಆ ಇಬ್ಬರನ್ನು ಅಪರಾಧಿ ಎಂದು ಘೋಷಿಸಲು ಪ್ರಮುಖ ಆಧಾರವಾಗಿ ಒದಗಿತ್ತು.

ಪ್ರಸಿದ್ಧ ಮರದ ಅಕಾಲಿಕ ಸಾವಿನ  ಸುದ್ದಿ ಇಂಗ್ಲೆಂಡಿನ ಒಳಗಿನಿಂದ, ಹೊರಗಿನಿಂದ ತೀವ್ರ ಪ್ರತಿಕ್ರಿಯೆ ಪಡೆದಿತ್ತು. ಸಿಟ್ಟು, ಆಘಾತ, ಆಶ್ಚರ್ಯಗಳು ಸಾಮಾಜಿಕ ಜಾಲತಾಣವನ್ನು ತುಂಬಿದವು. ಸುದ್ದಿ ಪತ್ರಿಕೆಯ ಮುಖಪುಟದಲ್ಲಿ, ವೆಬ್ ಪೇಜ್ ಗಳಲ್ಲಿ ವಸಂತ ವೈಶಾಖದ ಹಸಿರಿನಲ್ಲಿ,  ಶರತ್ ಶಿಶಿರಗಳ  ಹಿಮಹೊದಿಕೆಯಲ್ಲಿ ವಿಭಿನ್ನ ರೂಪದ ಮರದ  ಚಿತ್ರಗಳು ಕಾಣಿಸಿಕೊಂಡವು. ಕೆಲವರು ಭಾವುಕರಾಗಿ ಕವಿತೆಗಳನ್ನು ಕಟ್ಟಿ ಹಾಡಿದ್ದರು. ಕವಿತೆಯ ಸಾಲುಗಳನ್ನು  ಕೇಳಿದ ಕೆಲವರು ಕಣ್ಣೀರು ಹಾಕಿದರು. ಪ್ರಕೃತಿ ಸೃಜಿತ ಗಾಳಿಯ ನಿನಾದ, ಮನುಷ್ಯ ನಿರ್ಮಿತ  ಗರಗಸದ ಕರ್ಕಶ ಸದ್ದುಗಳು ಜೊತೆಯಾದ ಹಿನ್ನೆಲೆ ಸಂಗೀತದಲ್ಲಿ ಶವವಾಗುವ ಮರದ ಚಿತ್ರತುಣುಕು , ಸಾಮಾಜಿಕ ಮಾಧ್ಯಮದಲ್ಲಿ ಅನಾಥ ಅಸಹಾಯಕ ಸಾಕ್ಷಿಗಳಂತೆ ಓಡಾಡಿದವು.

೨೦೨೩ರ ಅಕ್ಟೋಬರನಲ್ಲಿ , ಕಡಿದುಬಿದ್ದ ಮರವನ್ನು ಖಂಡ ತುಂಡು ಮಾಡಿ ಕ್ರೇನ್ ಮೂಲಕ ಸಾಗಿಸಲಾಯಿತು. ಅಕಾಲಿಕ ಸಾವಿನ ಪುರಾತನ ಮರದ ಕತೆಯ ಮುಂದುವರಿದ ಪುಟವಾಗಿ, ಇಲ್ಲಿನ ಹಲವು ನೈಸರ್ಗಿಕ ತಾಣಗಳ ಉಸ್ತುವಾರಿ ವಹಿಸಿಕೊಂಡಿರುವ ನ್ಯಾಷನಲ್ ಟ್ರಸ್ಟ್ ಸಂಸ್ಥೆ ಆ
ಮರದಿಂದ ನಲವತ್ತೊಂಬತ್ತು ಸಸಿಗಳನ್ನು ಬೆಳೆಸಿ ದೇಶದ ಬೇರೆ ಬೇರೆ ಚ್ಯಾರಿಟಿ ಮತ್ತಿತರ ಸಂಸ್ಥೆಗಳಿಗೆ ನೀಡಿತು. ತನ್ನ ಕೊನೆಯ ಕಾಲದಲ್ಲಿ ನಲವತ್ತೊಂಬತ್ತು ಅಡಿ ಉದ್ದ ಇದ್ದ ಮರದ ನೆನಪಿಗಾಗಿ ಬೆಳೆಸಿದ  ೪೯ ಸಸಿಗಳನ್ನು ಚ್ಯಾರಿಟಿ   ಸಂಸ್ಥೆಗಳಿಂದ ಪಡೆಯಲು ಜನರಿಂದ  ಅರ್ಜಿಗಳನ್ನು ಆಹ್ವಾನಿಸಲಾಯಿತು. ೪೯ ಗಿಡಗಳನ್ನು ಪಡೆಯಲು ಯುನೈಟೆಡ್ ಕಿಂಗ್ಡಮ್ ನ ಬೇರೆಬೇರೆ ಭಾಗಗಳಿಂದ  ೫೦೦ ಅರ್ಜಿಗಳು ಬಂದಿದ್ದವು. ಪ್ರತಿಯೋರ್ವ ಅರ್ಜಿದಾರರೂ ತಮಗ್ಯಾಕೆ ಒಂದು ಸಸಿ ಬೇಕು ಎಂದು ಬರೆದಿದ್ದರು. ಸಸಿ ಹಂಚುವ ಅಭಿಯಾನವನ್ನು “ನಾಳಿನ ಭರವಸೆಗಾಗಿ ಮರಗಳು” ಎಂದೂ ಕರೆಯಲಾಗಿತ್ತು. ನಲವತ್ತೊಂಬತ್ತರಲ್ಲಿ ಒಂದು ಸಸಿ, ಹ್ಯಾಡ್ರಿಯನ್ ಗೋಡೆಯಿಂದ ಬಹಳವೇನೂ ದೂರದಲ್ಲಿರದ ಹೆಕ್ಸ್ಹಮ್ ಪ್ರಾಂತ್ಯದಲ್ಲಿ ಮುಂದಿನ ಚಳಿಗಾಲಕ್ಕೆ ನೆಲ ನೆಲೆ ಕಾಣಲಿದೆ.  ಹೋಲಿ ನ್ಯೂಟನ್ ಎನ್ನುವಾಕೆಯ ಸಮಾಧಿಯ ಬಳಿ. ಹದಿನೈದು ವರ್ಷದವಳಿದ್ದಾಗ ಸಂಬಂಧ ಕೊನೆಗೊಂಡದ್ದನ್ನು ಒಪ್ಪಲಾಗದ ಮಾಜಿ ಪ್ರಿಯಕರ ಆಕೆಯನ್ನು ಕೊಲೆ ಮಾಡಿದ್ದ. ಕೊಲೆಯಾದ
ಮಗಳ ನೆನಪಿನಲ್ಲಿ ಬದುಕುತ್ತಿರುವ ಆಕೆಯ ಹೆತ್ತವರು ತಾವು ಪಡೆಯಲಿರುವ ಸಿಕಮೋರ್ ಸಸಿ ಅಳಿದ  ಮಗಳನ್ನು ಸ್ಮರಿಸುವ ಹೊಸ ದಾರಿಯಾಗಿದೆ ಎಂದು ಖುಷಿ ಪಡುತ್ತಿದ್ದಾರೆ. ಇನ್ನುಳಿದ ನಲವತ್ತೆಂಟು ಸಸಿಗಳೂ ಯು.ಕೆಯ ಬೇರೆ ಬೇರೆ ಭಾಗಗಳನ್ನು ಸೇರಿ ಅಲ್ಲೆಲ್ಲ,
ನಾಶವಾದ ಮರದ ಕತೆಯನ್ನು ಹೇಳಲಿವೆ  ನೆನಪನ್ನು ಹಸಿರಾಗಿಡಲಿವೆ .

ಒಂದು ಸಣ್ಣ ಸಹಜ ಸುಂದರ ಖುಷಿಯನ್ನು  ನಿರಂತರವಾಗಿ  ನೂರೈವತ್ತು ವರ್ಷಗಳ ಕಾಲ ಹಂಚಿದ,  ಪ್ರಾಕೃತಿಕ ದ್ರಶ್ಯಕಾವ್ಯದಲ್ಲಿ ಭೂಮಿ ಆಕಾಶದಷ್ಟೇ ಚಿರಂತನ ಎನಿಸಿದ ಮರ, ಕ್ಷುಲ್ಲಕ ಕಿಡಿಗೇಡಿತನದ ಪರಿಣಾಮವಾಗಿ  ಇಲ್ಲದಾದಾಗ, ನಿತ್ಯವೂ ನಮ್ಮನ್ನು ಕಾಯುವ
ಬದುಕಿನ ಭರವಸೆಯೇ ಕರಗಿ ಹೋಗುವ ಸಾಧ್ಯತೆ ಇದೆ. ಆದರೆ ಅಂತಹ ವಿಷಣ್ಣ ಸಾಧ್ಯತೆಯನ್ನು ಎದುರಿಸುವ ,ಮತ್ತೆ ಚೇತೋಹಾರಿ ಉತ್ಸಾಹವನ್ನು ನಮ್ಮ ಒಳಹೊರಗೆ ತುಂಬಿಸುವ  ಹೋರಾಟವನ್ನು ನಲವತ್ತೊಂಬತ್ತು ಸಸಿಗಳು ಆಗಲೇ ಆರಂಭಿಸಿವೆ. ಇನ್ನು ಈಶಾನ್ಯ ಇಂಗ್ಲೆಂಡಿನ ಹ್ಯಾಡ್ರಿಯನ್ ಗೋಡೆಯ ಪಕ್ಕದ  ಕಡಿದ ಬುಡದಲ್ಲೂ  ಚಿಗುರೆಲೆಗಳು  ಮೊಳೆತು “ಹೊಸತು ಜನ್ಮ”ದ  ಸೂಚನೆ ಕಾಣುತ್ತಿದೆ. ಒಂದು ವೇಳೆ ಆ ಮೊಳಕೆಗಳು ಚಿಗುರೆಲೆಗಳು ಬೆಳೆಯುತ್ತಲೇ ಹೋದರೆ ಮುಂದಿನ ಇನ್ನೂರು ವರ್ಷಗಳಲ್ಲಿ, ಎರಡು ವರ್ಷದ ಹಿಂದೆ ಬೀಳುವ ಮೊದಲಿನ  ಮರದಷ್ಟೇ ದೊಡ್ಡ ಮರವೊಂದು ಆಕಾರ ತಳೆಯಬಹುದು ಎಂದು ವೃಕ್ಷ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬರಡು ಬುಡವನ್ನೋ ಎಳೆಯ ಚಿಗುರನ್ನೋ ಅಥವಾ ಮುಂದೆಂದೋ ಅಲ್ಲೊಂದು ಮರ ಎದ್ದು ನಿಲ್ಲುವುದನ್ನೋ ಕನವರಿಸುತ್ತ  ಬರುತ್ತಿರುವವರಿಗೆ  “ಗೌರವದಿಂದ ನಡೆದುಕೊಳ್ಳಿ”ಎನ್ನುವ ಎಚ್ಚರಿಕೆಯ ಫಲಕ ಅಲ್ಲೇ  ತೂಗುಹಾಕಲ್ಪಟ್ಟಿದೆ. ಬಂದು ಮರಳುವವರಿಗೂ ,ಮರಳಿ ಬರುವವರಿಗೂ ,  ನಾಳಿನ  ಭರವಸೆ ಜೀವಂತವಾಗಿದೆ.

—————————

ಯೋಗೀಂದ್ರ ಮರವಂತೆ

ಭಕ್ತಿಪಂಥ ಮತ್ತು ಹರಿದಾಸರು; ಸಾಹಿತ್ಯ ಮತ್ತು ಸಂಗೀತ – ಲಕ್ಷ್ಮೀನಾರಾಯಣ ಗುಡೂರ್

ಸಂಪಾದಕೀಯ - ರಾಧಿಕಾ ಜೋಶಿ

ಶತಮಾನಗಳ ಹಿಂದೆ ಶರಣರ ದಾಸರ ಸಾಹಿತ್ಯದ ಚಳುವಳಿ ಪ್ರಾರಂಭವಾಗಿ ಸಮಾಜದ ಸಾಹಿತ್ಯದ ಸುಧಾರಣೆಯಾಯಿತು. ಅನಿವಾಸಿಯಲ್ಲಿ ಯುಗಾದಿಯ ಸಂಭ್ರಮದ ಜೊತೆ ಶುರುವಾದ ಸಂತರ ಸಾಹಿತ್ಯದ ಗೋಷ್ಠಿ ಅಲೆಯಾಗಿ ಸೆಲೆಯಾಗಿ ವಾರಾಂತ್ಯವಾರ ನಮ್ಮ ಮನೆಗಳಲ್ಲಿ ಹರಿಯುತ್ತಾ ಕುತೂಹಲದ ಚಳುವಳಿ ಶುರುವಾಗಿದೆ.
ಈ ವಾರ ಡಾ.ಗುಡೂರ್ ಅವರ ಲೇಖನ ದಾಸ ಸಾಹಿತ್ಯದ ಕೇವಲ ಒಂದು ಪರಿಚಯವಲ್ಲ ಒಂದು ಪ್ರಬಂಧ ಅಥವಾ ಸಂಶೋಧನಾ ಬರಹ ಎಂದರೆ ತಪ್ಪಾಗಲಾರದು.
ಓದುಗರಲ್ಲಿ ಕುತೂಹಲ, ಆಶ್ಚರ್ಯ ಎಲ್ಲಾ ನವರಸ ಭಾವನೆಗಳನ್ನು ಮೂಡಿಸುವ ಒಂದು ವಿವರವಾದ ವರದಿ.
ಸಾಹಿತ್ಯಕ್ಕೆ ತಕ್ಕಂತೆ ಸುಂದರ ಚಿತ್ರವನ್ನು ಒದಗಿಸಿದ ಡಾ. ಗುಡೂರ್ ಅವರಿಗೆ ಶರಣು

ತಪ್ಪದೆ ಕೆಳಗಿರುವ ಧ್ವನಿ ಸುರುಳಿಯನ್ನು ಕೇಳಿ. ಸುಶ್ರಾವ್ಯವಾಗಿ ಹಾಡಿರುವ ಶ್ರೀಮತಿ ಅನ್ನಪೂರ್ಣ ಆನಂದ್ ಅವರಿಗೆ ಧನ್ಯವಾದಗಳು.
*********************************************************************************
ಉತ್ಪನ್ನಾ ದ್ರಾವಿಡೇ ಸಾಹಂ ವೃದ್ಧಿಂ ಕರ್ನಾಟಕೇ ಗತಾ |  
ಭಕ್ತಿಪಂಥವು ದ್ರಾವಿಡದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬೆಳೆಯಿತು
(ಪದ್ಮಪುರಾಣ ೧-೧೮)

೧೨ನೆಯ ಶತಮಾನದಲ್ಲಿ ಉಡುಪಿಯ ಹತ್ತಿರದ ಪಾಜಕ ಕ್ಷೇತ್ರದಲ್ಲಿ ಹುಟ್ಟಿ, ಅಖಂಡ ಅಧ್ಯಯನ ಮಾಡಿ, ದೇಶಾದ್ಯಂತ ಪರ್ಯಟನ ಮಾಡಿ ಉಡುಪಿಯಲ್ಲಿ ನೆಲೆಸಿದ ಆಚಾರ್ಯ ಮಧ್ವರು ಪ್ರತಿಪಾದಿಸಿದ ದ್ವೈತ ವೈಷ್ಣವ ತತ್ತ್ವ ಒಂದು ಹೊಸ ಪಂಥಕ್ಕೆ ಕಾರಣವಾಯಿತು. ಭಕ್ತಿಪಂಥ ಹೊಸದೇನಲ್ಲ, ಅದಾಗಲೇ ತಮಿಳುನಾಡು ಕರ್ನಾಟಕಗಳಲ್ಲಿ ಸಾಕಷ್ಟು ಪ್ರಚಲಿತವಾಗಿತ್ತು. ಆ ಸುತ್ತಮುತ್ತಲಿನ ಆರು ಶತಮಾನಗಳು ಭಕ್ತಿಪಂಥದ ಸುವರ್ಣಯುಗವೆಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ, ಸಂಸ್ಕೃತದಲ್ಲಿ ಆಗಲೇ ಬರೆದು ಪ್ರಚಲಿತವಿದ್ದ ಅನೇಕ ಗ್ರಂಥಗಳನ್ನು, ತತ್ತ್ವಗಳನ್ನು ಸಾಮಾನ್ಯ ಮನುಷ್ಯನ ದಿನಬಳಕೆಯ ಭಾಷೆಗೆ ತಂದವರು ಈ ಕಾಲದಲ್ಲಿ ಕಂಡುಬರುತ್ತಾರೆ.

ಭಾರತದ ವಿವಿಧ ಭಾಗಗಳ ಭಕ್ತಿಪಂಥದ ಪ್ರಮುಖರು:
ತಮಿಳುನಾಡಿನ – ನಾಯನಾರರು ಮತ್ತು ಆಳ್ವಾರರು
ಕರ್ನಾಟಕದಲ್ಲಿ – ಶರಣರು ಮತ್ತು ಹರಿದಾಸರು
ಆಂಧ್ರಪ್ರದೇಶ – ತ್ಯಾಗರಾಜರು, ಅಣ್ಣಮಾಚಾರ್ಯ, ಭದ್ರಗಿರಿ ರಾಮದಾಸರು, ಪೋತನ,
ಮಹಾರಾಷ್ಟ್ರದಲ್ಲಿ – ಜ್ಞಾನದೇವ, ಮುಕ್ತಾಬಾಯಿ, ನಾಮದೇವ ಇತರ ಅಭಂಗ ಕೀರ್ತನಕಾರರು
ಗುಜರಾತಿನಲ್ಲಿ – ನರಸಿಂಹ ಮೆಹತಾ ಮತ್ತಿತರರು
ರಾಜಸ್ಥಾನ – ಮೀರಾಬಾಯಿ
ಉತ್ತರ ಪ್ರದೇಶ – ಕಬೀರ, ಸೂರದಾಸ, ತುಲಸಿದಾಸ
ಬಂಗಾಲದಲ್ಲಿ – ಕೃಷ್ಣ ಚೈತನ್ಯ, ಚಂಡೀದಾಸ, ಜಯದೇವಕವಿ

ಕರ್ನಾಟಕದ ಹರಿದಾಸ ಪಂಥ:
ಈ ಪಂಥದಲ್ಲಿ ಎರಡು ಮುಖ್ಯ ಬಣಗಳಿವೆ –
೧) ವ್ಯಾಸಕೂಟ: ಇದರಲ್ಲಿ ಇರುವವರು ಸನ್ಯಾಸಿಗಳು, ಸಂಸ್ಕೃತ ಪಾಂಡಿತ್ಯವುಳ್ಳವರು. ಕನ್ನಡದಲ್ಲಿ ದಾಸಸಾಹಿತ್ಯದ ರಚನೆಗೆ ಮೊದಲ ಹೆಜ್ಜೆಯಿಟ್ಟವರು.
೨) ದಾಸಕೂಟ: ಇವರು ಸಂಸಾರಿಗಳು; ಈ ಜಗತ್ತಿನಲ್ಲಿ ಇದ್ದುಕೊಂಡೇ ದಾಸಪಂಥದ ಜೀವನಕ್ಕೆ ಒಪ್ಪಿಸಿಕೊಂಡವರು.
ಹರಿದಾಸ ಎಂದರೆ ಮೊದಲು ಮನಸ್ಸಿಗೆ ಬರುವವರು ಎರಡನೆಯ ಗುಂಪಿಗೆ ಸೇರಿದವರು. ಪ್ರತಿದಿನ ಬೆಳಗ್ಗೆ ಶುಚಿರ್ಭೂತರಾಗಿ, ಸರಳ ಉಡುಗೆಯನ್ನುಟ್ಟು, ತಾಳ-ತಂಬೂರಿಗಳನ್ನು ಹಿಡಿದು ಹೊರಟು, ದೇವರ ನಾಮ ಸಂಕೀರ್ತನೆಗಳನ್ನು ಹಾಡಿ-ಕುಣಿದು ಬಂದರೆಂದರೆ ಆಯಿತು.

ಹರಿದಾಸರೆಲ್ಲರಲ್ಲೂ ಕಂಡುಬರುವ ಸಾಮಾನ್ಯ ಅಂಶಗಳು (common factors):
೧) ಭಕ್ತ ಮತ್ತು ದೇವರುಗಳ ಮಧ್ಯದ ಸಂಬಂಧ – ನಿರ್ವ್ಯಾಜ ಪ್ರೀತಿ / ಭಕ್ತಿ / ಸಮರ್ಪಣಗಳ ಮಿಶ್ರಣ
೨) ವೈಷ್ಣವ ಅದರಲ್ಲೂ ಮಾಧ್ವ ಸಂಪ್ರದಾಯ – ದ್ವೈತ ಪದ್ಧತಿ ಮುಖ್ಯ (ಬೇರೆಯವರೂ ಇದ್ದರು)
೩) ಹರಿದಾಸ ವೃತ್ತಿ / ಜೀವನ ಶೈಲಿ – ಮಧುಕರ ವೃತ್ತಿಯಿಂದ ಬಂದದ್ದು ಅಂದಿನದು ಅಂದಿಗೆ; ನಾಳೆಗಿಡದೆ, ಸಾಲ ಮಾಡದೆ, ಆಸೆಯಿಲ್ಲದೆ ಇರುವ ಬದುಕು. (ಮಧುಕರ ವೃತ್ತಿ ಎನ್ನದು ಬಲು ಚೆನ್ನದು.)
೪) ಜೀವನ ತತ್ತ್ವಗಳು, ವೈರಾಗ್ಯ, ವಿಷ್ಣುವಿನ ಅವತಾರಗಳು, ಮೋಕ್ಷದ ಗುರಿ – ಈ ವಿಷಯಗಳ ಕುರಿತು ರಚಿಸಿದ ಪದಗಳನ್ನು ಕನ್ನಡದಲ್ಲಿ ಹಾಡಿ ಹಂಚುವುದು.
೫) ಹರಿದಾಸ ದೀಕ್ಷೆ, ಅಂಕಿತಗಳ ಬಳಕೆ: ಉದಾಹರಣೆಗೆ – ಪುರಂದರವಿಟ್ಠಲ (ಪುರಂದರ ದಾಸರು), ವಿಜಯವಿಟ್ಠಲ (ವಿಜಯದಾಸರು) ಇತ್ಯಾದಿ ವಿಟ್ಠಲ ನಾಮಾಂಕಿತಗಳು; ಕಾಗಿನೆಲೆಯಾದಿಕೇಶವ (ಕನಕ ದಾಸರು), ಕೃಷ್ಣ (ವ್ಯಾಸರಾಜರು), ಹಯವದನ (ವಾದಿರಾಜರು), ವೇಣುಗೋಪಾಲ (ರಾಘವೇಂದ್ರರು).
೬) ಹೆಚ್ಚನವರು ಬ್ರಾಹ್ಮಣರು, ಆದರೆ ಎಲ್ಲರೂ ಅಲ್ಲ.
ಧನಿಕರು (ಪುರಂದರ ದಾಸರು), ಕಡು ಬಡವರು (ವಿಜಯ / ಗೋಪಾಲ ದಾಸರು)
ಉದ್ದಾಮ ಪಂಡಿತರು (ಜಗನ್ನಾಥ ದಾಸರು) ಅಥವಾ ವಿದ್ಯೆಯಿಲ್ಲದವರು (ಪ್ರಸನ್ನ ವೇಂಕಟ ದಾಸರು) ರೋಗಿ (ಮೋಹನ ದಾಸರು),

ಕಾಲಮಾನ:
ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕಾಲವನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ನರಹರಿತೀರ್ಥರಿಂದ ಪುರಂದರ-ಕನಕದಾಸರವರೆಗಿನ ಅವಧಿ, ವಿಜಯದಾಸರಿಂದ ಜಗನ್ನಾಥದಾಸರವರೆಗಿನ ಅವಧಿ ಮತ್ತು ಅವರ ಶಿಷ್ಯ-ಪ್ರಶಿಷ್ಯರ ಅವಧಿ ಮುಖ್ಯವಾದುವು.

೧೩ ರಿಂದ ೧೫ನೆಯ ಶತಮಾನ:
ಅಚಲಾನಂದ ದಾಸರು ಮತ್ತು ನರಹರಿ ತೀರ್ಥರು ಮೊದಲ ಕನ್ನಡ ದಾಸಸಾಹಿತ್ಯದ ಹೆಸರುಗಳು.
ಶ್ರೀಪಾದರಾಜರು (ರಂಗವಿಠಲ) – ಕನ್ನಡ ಹಾಡುಗಳು ರಚನೆ ಮತ್ತು ದಿನನಿತ್ಯದ ಪೂಜೆಯಲ್ಲಿ ನೃತ್ಯ - ಸಂಗೀತ ಸಹಿತ ಹಾಡುಗಳ ಬಳಕೆಯನ್ನು ಆರಂಭಿಸಿದವರು.
ವ್ಯಾಸರಾಜರು (ಶ್ರೀಕೃಷ್ಣ): ವಿಜಯನಗರದ ಅರಸ ಕೃಷ್ಣದೇವರಾಯನ ಸಮಕಾಲೀನರು.
ವಾದಿರಾಜರು (ಹಯವದನ), ಪುರಂದರ ದಾಸರು, ಕನಕ ದಾಸರು (ಕಾಗಿನೆಲೆ ಆದಿಕೇಶವ), ವೈಕುಂಠ ದಾಸರು ಮುಂತಾದವರು.
೧೬ - ೧೭ನೆಯ ಶತಮಾನ:
ರಾಘವೇಂದ್ರ ತೀರ್ಥರು (ಧೀರವೇಣುಗೋಪಾಲ): ಪುರಂದರದಾಸರ ಕಾಲದ ನಂತರ ಸ್ವಲ್ಪ ಕಡಿಮೆಯಾಗಿದ್ದ ದಾಸಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದವರು.
ವಿಜಯ ದಾಸರು (ವಿಜಯವಿಟ್ಠಲ), ಪ್ರಸನ್ನವೇಂಕಟ ದಾಸರು, ಹೆಳವನಕಟ್ಟೆ ಗಿರಿಯಮ್ಮ, ನರಸಿಂಹ ದಾಸರು, ಜಗನ್ನಾಥ ದಾಸರು, ಪಂಗನಾಮದ ತಿಮ್ಮಣ್ಣದಾಸರು, ಗೋಪಾಲದಾಸರು, ಮೋಹನದಾಸರು, ಮುಂತಾದವರು.
೧೮ ನೆಯ ಶತಮಾನದಿಂದ ಮುಂದೆ:
ಹಲವಾರು ದಾಸರುಗಳು – ಲಿಂಗಸೂಗೂರು ಯೋಗೇಂದ್ರ (ಪ್ರಾಣೇಶವಿಟ್ಠಲ), ಕರ್ಜಗಿ ದಾಸಪ್ಪ (ಶ್ರೀದವಿಟ್ಠಲ), ಗದ್ವಾಲ ಸುಬ್ಬಣ್ಣದಾಸರು (ಕೇಶವವಿಟ್ಠಲ), ಹುಂಡೇಕಾರದಾಸರು (ಶ್ರೀಶವಿಟ್ಠಲ), ಸುರಪುರದ ಭೀಮದಾಸರು (ಶ್ರೀಶಕೇಶವವಿಟ್ಠಲ), ಸಂತೆಬೆನ್ನೂರು ರಾಮಾಚಾರ್ಯರು (ಕಮಲಾಪತಿವಿಠಲ), ಗರ್ಗೆಶ್ವರಿ ಕೇಶವರಾಯರು (ಮಧ್ವೇಶವಿಠಲ), ಇನ್ನೂ ಹಲವಾರು ದಾಸರುಗಳು ಈ ಪರಂಪರೆಯನ್ನು ಮುಂದುವರೆಸಿದರು.

ಹರಿದಾಸ ಸಾಹಿತ್ಯ:
ಸಾಹಿತ್ಯ ರೂಪಗಳು – ವಚನ, ರಗಳೆ, ಚಂಪೂ, ಷಟ್ಪದಿ ಇತ್ಯಾದಿ ಛಂದೋಬದ್ಧ ರಚನೆಗಳು ಇದ್ದರೂ, ಸಂಗೀತವನ್ನು ಮುಖ್ಯವಾಗಿ ಇಟ್ಟುಕೊಂಡು ರಚಿಸಿದ ಸಾಹಿತ್ಯ ಕನ್ನಡದಲ್ಲಿ ಹರಿದಾಸ ಸಾಹಿತ್ಯ ಮೊದಲು.
ಕರ್ನಾಟಕದಲ್ಲಿ ಭಕ್ತಿಯ ಹೊನಲನ್ನು ಜನಸಾಮಾನ್ಯರ ಭಾಷೆ ಕನ್ನಡಕ್ಕೆ ತಂದ ಯಶಸ್ಸು ಶರಣರ ವಚನಗಳು ಮತ್ತು ದಾಸರ ಸಾಹಿತ್ಯಕ್ಕೆ ಸಲ್ಲುತ್ತದೆ. ಭಕ್ತಿಸಾಹಿತ್ಯದ ಮೂಲ ಉದ್ದೇಶವೇ ಜೀವನದ ಮೌಲ್ಯಗಳನ್ನು ತಿಳಿಸಿ ಸಾಮಾನ್ಯರ ಬದುಕನ್ನು ಉದಾತಗೊಳಿಸುವುದು. ಕನ್ನಡ ಸಾಹಿತ್ಯದಲ್ಲಿ ಈ ಉದ್ದೇಶ ಶಿವಶರಣರಿಂದಲೂ ಹರಿದಾಸರಿಂದಲೂ ಸಾಧಿತವಾಗಿರುವುದನ್ನು ಕಾಣುತ್ತೇವೆ. ವಚನಕಾರರ ಮೂಲ ಕಾಳಜಿ ಸಾಮಾಜಿಕವಾಗಿದ್ದರೆ, ದಾಸಸಾಹಿತ್ಯದ ಪ್ರಮುಖ ಧ್ಯೇಯ ಭಕ್ತಿಸಿದ್ಧಾಂತವಾಗಿತ್ತು ಅನ್ನುವುದು ಸ್ಪಷ್ಟ.

ಧರ್ಮದ ಮೂಲಕ ಸಮಾಜವನ್ನು ಕಾಣಲು, ತಿದ್ದಲು ಶರಣರು ಮತ್ತು ದಾಸರು ಈ ಅಗತ್ಯವನ್ನು ಮನಗಂಡರು. ಧರ್ಮ ಮುಖ್ಯ ಮಾಧ್ಯಮವಾದರೆ ಸಮಾಜ ಚಿಂತನೆ ಇವರ ಮುಖ್ಯ ಕಾಳಜಿಯಾಗಿದೆ. ಅಂಧಾಚರಣೆಯ ನಿರ್ಮೂಲನ, ವ್ಯಕ್ತಿತ್ವ ನಿರ್ಮಾಣ, ತನ್ಮೂಲಕ ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೆ ಶರಣರು ಮತ್ತು ದಾಸರು ಯತ್ನಿಸಿದರು. ಈ ಯತ್ನದ ಕಾರಣವಾಗಿ ವಚನಗಳು, ಕೀರ್ತನೆಗಳು, ಸುಳಾದಿ ಮತ್ತು ಉಗಾಭೋಗಗಳು ಮೂಡಿಬಂದವು. ಭಕ್ತಿಸಿದ್ಧಾಂತದ ಜೊತೆಗೆ ಸಚ್ಚಾರಿತ್ರ್ಯ, ಸದಾಚಾರ ಹಾಗೂ ಸಾತ್ವಿಕ ಜೀವನದ ಕಡೆಗೂ ಈ ಸಾಹಿತ್ಯದ ಹರಿವಿದೆ. ಲೋಕ ನೀತಿಯ ಮಾತುಗಳಲ್ಲಿ ಸುಖಜೀವನದ ಸಂದೇಶ ನೀಡುವ ಮೂಲಕ ಸಾರ್ಥಕ ಬದುಕಿನ ಕರೆ ನೀಡಿದ್ದಾರೆ ಎನ್ನುವುದೂ ಸತ್ಯ.

ಹರಿದಾಸರ ಸಾಧನೆ ಮೂಲವಾಗಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಆದರೂ ಅವರು ಸಾಮಾಜಿಕ ಜೀವನವನ್ನು ಕಡೆಗಣಿಸಿದವರಲ್ಲ. ಕಾವ್ಯ ಸೃಷ್ಟಿ ಮಾಡುವ ಕವಿ ಸಮಾಜದಿಂದಲೇ ಮೂಡಿ ಬಂದಿರುತ್ತಾನೆ, ಆದ್ದರಿಂದ ಸಮಾಜವನ್ನು ಬಿಟ್ಟು ಪ್ರತ್ಯೇಕವಾಗಿ ಉಳಿದ ಸಾಹಿತ್ಯಕ್ಕೆ ಇಲ್ಲಿ ಅಸ್ತಿತ್ವ ಇಲ್ಲ. ಕಾವ್ಯ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಸಮಾಜ ಮತ್ತು ಸಾಹಿತ್ಯಗಳ ಸಂಬಂಧ ಜೀವಂತವಾಗಿ, ಪರಸ್ಪರ ಪೂರಕವಾಗಿ ಇರಬೇಕಾದ ಅಗತ್ಯ ಇದೆ.

ದಾಸ ಸಾಹಿತ್ಯದ ಮೂಲ ತತ್ವ – ಧರ್ಮ – ಮೋಕ್ಷಗಳ ಪ್ರಚಾರ ನೆಲದ ಭಾಷೆಯಲ್ಲಿ ತಂದ ಕೆಲಸದಲ್ಲಿ ದಾಸರು ಮೊದಲಿನವರಲ್ಲ – ಬೌದ್ಧರು ಪಾಲಿಯಲ್ಲೂ, ಜೈನರು ಪ್ರಾಕೃತದಲ್ಲೂ, ಶರಣರು ಕನ್ನಡದಲ್ಲೂ ಆಗಲೇ ಶುರು ಮಾಡಿದ್ದ ಕಾರ್ಯವನ್ನೇ ಮುಂದುವರೆಸಿದವರು ಹರಿದಾಸರು. ಇವರಲ್ಲಿ ಅನೇಕರು ಸಂಸ್ಕೃತ ಪಂಡಿತರಾಗಿದ್ದೂ, ಗ್ರಂಥಗಳನ್ನು ರಚಿಸಿದ್ದೂ ಜನಸಾಮಾನ್ಯರಿಗೆ ತಲುಪಿಸುವುದಕ್ಕೋಸ್ಕರ ಕನ್ನಡವನ್ನು ಮಾಧ್ಯಮವಾಗಿಸಿಕೊಂಡು ರಚನೆಗಳನ್ನು ಮಾಡಿದರು.

ಈ ಮುಂಚೆ ಹೇಳಿದಂತೆ, ದಾಸ ಸಾಹಿತ್ಯದಲ್ಲಿ ಹಲವಾರು ರೀತಿಯ ರಚನೆಗಳಿವೆ – ಕೀರ್ತನೆಗಳು, ಸುಳಾದಿ, ಉಗಾಭೋಗಗಳು ಮುಖ್ಯವಾದವು. ಇವೆಲ್ಲ ರಚನೆಗಳು ಮೂಲವಾಗಿ ಸಂಗೀತಕ್ಕೆ ಒಳಪಡುವ ರೂಪದಲ್ಲಿವೆ. ಸುಳಾದಿ ಮತ್ತು ಉಗಾಭೋಗಗಳಿಗೆ ವಚನಸಾಹಿತ್ಯ ಪ್ರಕಾರದ ಪ್ರೇರಣೆ ಇರಬಹುದು ಎನ್ನುವ ಮಾತಿದೆ. ಇನ್ನು ಹಲವರ ಪ್ರಕಾರ ಶಿವಶರಣರ ವಚನಗಳು ಉಕ್ತಿಗಳು, ದಾಸಸಾಹಿತ್ಯ ಗೇಯ ಪ್ರಕಾರ - ಹೀಗಾಗಿ ಸಂಗೀತದ ಛಾಯೆ ಇರುತ್ತದೆ ಎನ್ನುವುದು. ಸುಳಾದಿ ಮತ್ತು ಉಗಾಭೋಗಗಳಲ್ಲಿ ಧಾರ್ಮಿಕ ವಿಚಾರಗಳು, ಆಧ್ಯಾತ್ಮಿಕ ತತ್ವಗಳು ಮತ್ತು ದೈವ ಸ್ತುತಿಗಳ ನಿರೂಪಣೆ ಇದೆ. ಭಕ್ತನಾದವನ ಆರ್ತಭಾವ ಮತ್ತೂ ಅಂತರಂಗದರ್ಶನವು ಆಗುತ್ತದೆ. ಇದಲ್ಲದೇ ಕನಕದಾಸರ ಹರಿಭಕ್ತಿಸಾರ, ಮೋಹನತರಂಗಿಣಿ ಮತ್ತು ಜಗನ್ನಾಥದಾಸರ ಹರಿಕಥಾಮೃತಸಾರದಂತಹ ದೊಡ್ಡ ಕೃತಿಗಳೂ ಇವೆ. ಸುವ್ವಿಪದ, ಕೋಲಾಟದ ಪದ, ಜೋ ಜೋ ಕೊರವಂಜಿ ಪದಗಳಂತಹ ಜಾನಪದ ಸಾಹಿತ್ಯಿಕ ರಚನೆಗಳೂ ಇವೆ.

ಹರಿದಾಸ ಸಾಹಿತ್ಯ ಮತ್ತು ಕನ್ನಡ: (ಆರ್ ರಾಮಕೃಷ್ಣ – ದಾಸಸಾಹಿತ್ಯ ದರ್ಶನ – ed. ಎಚ್ಚೆಸ್ಕೆ)
ಹರಿದಾಸರ ಸಾಹಿತ್ಯದ ಮಾಧ್ಯಮ ಕನ್ನಡವಾಯಿತು, ಅದರಲ್ಲೂ ನಡುಗನ್ನಡವೇ ಮುಖ್ಯವಾದರೂ, ಹೊಸಗನ್ನಡದ ಬಳಕೆಯಿದೆ.

ಸಂಸ್ಕೃತವಿದಲ್ಲೆಂದು ಕುಹಕ ತಿ-
ರಸ್ಕರಿಸಲೇನಹುದು ಭಕ್ತಿಪು-
ರಸ್ಕರದಿ ಕೇಳ್ವರಿಗೆ ಒಲಿವನು ಪುಷ್ಕರಾಕ್ಷ ಸದಾ ||
ಅಂದಿದ್ದಾರೆ ಜಗನ್ನಾಥ ದಾಸರು.

ಶರಣರಂತೆ ದಾಸರೂ ಕನ್ನಡವನ್ನು ಬಳಸಿ ಬೆಳೆಸಿದರು. ಹಲವಾರು ತರಹದ ಪ್ರಯೋಗಗಳನ್ನು ದಾಸ ಸಾಹಿತ್ಯದಲ್ಲಿ ಕಾಣಬಹುದು:
೧) ಕನ್ನಡದ ಕುರುಹಾದ ವ್ಯಂಜನಾಂತ ಪದಗಳಿಗೆ ಸ್ವರಾಂತ್ಯದ ಬಳಕೆ – ನಾನ್ – ನಾನು, ಪೆಣ್ – ಹೆಣ್ಣು, ಪಾಲ್ – ಪಾಲು, ಕೇಳ್ – ಕೇಳು,

೨) ಪಕಾರ ಶಬ್ದಗಳು ಹಕಾರಗಳಾಗಿ ಬದಲಾವಣೆ: ಪಕ್ಕಿ – ಹಕ್ಕಿ, ಪೆಣ್ಣು – ಹೆಣ್ಣು

೩) ಹೆಚ್ಚಿನವರು ಉತ್ತರ ಕರ್ನಾಟಕದವರಾಗಿದ್ದರಿಂದ, ಉತ್ತರ ಕರ್ನಾಟಕದ ಭಾಷಾವೈಶಿಷ್ಟ್ಯ (dialect) ದಾಸರ ರಚನೆಗಳಲ್ಲಿ ಬಳಕೆಯಾಗುತ್ತದೆ. ಉದಾ. ಕಂಡೀರ್ಯಾ, ತಂದೀರ್ಯಾ ಇತ್ಯಾದಿ

೪) ಛಂದಸ್ಸಿಗನುಗುಣವಾಗಿ ಪದಗಳ ಬದಲಾವಣೆ – ಘನ್ನ, ವಿಟ್ಠಲನ್ನ ಇತ್ಯಾದಿ ಸಜಾತೀಯ ಒತ್ತಕ್ಷರಗಳ ಬಳಕೆ.

೫) ಇನ್ನು ಮುದ್ದುಕೃಷ್ಣನ ಬಾಲಲೀಲೆಗಳನ್ನು ಹೇಳುವಾಗ ಮುದ್ದು ಮಾತಿನ ಬಳಕೆ ಬೇಕೇಬೇಕಲ್ಲ? ಗುಮ್ಮ, ಬೂಚಿ, ಮಮ್ಮು, ಅಮ್ಮಿ, ತಾಚಿ, ಪಾಚಿಕೊ ಇತ್ಯಾದಿ ಪದಗಳ ಬಳಕೆ ಹೇರಳವಾಗಿ ಕಾಣುತ್ತವೆ.

೬) ಸಂಸ್ಕೃತ ಪದಗಳ ಬಳಕೆ ಹರಿದಾಸರ ಸಂಸ್ಕೃತ ಪಾಂಡಿತ್ಯವನ್ನು ತೋರುತ್ತವೆ. ಅಲ್ಲದೇ ಸಾಕಷ್ಟು ಪದಗಳ ತದ್ಭವಗಳ ಉಪಯೋಗವನ್ನೂ ಕಾಣುತ್ತೇವೆ: ಉದಾ – ಬ್ರಹ್ಮ – ಬೊಮ್ಮ, ಸರಸ್ವತಿ – ಸರಸತಿ, ಮುಖ – ಮೊಗ, ವಿನಾಯಕ – ಬೆನಕ ಇತ್ಯಾದಿ.

೭) ಗಡಿಪ್ರದೇಶದಲ್ಲಿ ಸಹಜವಾಗಿಯೇ ಕಂಡುಬರುವ ಬೇರೆ ಭಾಷೆಯ ಪದಗಳ ಬಳಕೆ: ಮರಾಠಿ – ಛಪ್ಪನ್ನ ದೇಶಗಳು, ಬತ್ತೀಸು ರಾಗಗಳು ಮತ್ತು ಉರ್ದು – ಫಕೀರ, ಭಂಗಿ (ಭಾಂಗ್), ಲುಂಗಿ ಇತ್ಯಾದಿ.

ಕನ್ನಡವು ಎಳೆದಂತೆ ಬೆಳೆವ, ಸುಲಲಿತ ಭಾಷೆಯೆಂಬುದನ್ನು ದಾಸ ಸಾಹಿತ್ಯ ಸಾಧಿಸಿ ತೋರಿಸಿಕೊಟ್ಟಿದೆ. ಛಂದೋಬದ್ಧವಾದ, ಮಧುರ ಶಬ್ದಗಳ ಜೋಡಣೆಯಿಂದ, ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ.

ಹರಿದಾಸ ಸಾಹಿತ್ಯದ ಶೈಲಿ:
ಭಾಷೆ – ಭಾವಗಳ ಸಮರಸ ಸಂಯೋಜನೆಯೇ ಶೈಲಿ, ಕಾವ್ಯಕ್ಕೆ ರಸವನ್ನು ತುಂಬುತ್ತದೆ. ಚಲುವಾದ ಭಾವನೆಗೆ ಚಲುವಾದ ಭಾಷೆಯೇ ಜೊತೆಯಾಗಬೇಕು. ಬರೆಯುವವರಿಗೆ ಭಾಷೆಯ ಮೇಲೆ ಸಮರ್ಪಕ ಹಿಡಿತ ಬೇಕು, ಇಲ್ಲದಿದ್ದರೆ ಮನದ ಆಲೋಚನೆಯನ್ನು ಅಂದುಕೊಂಡಂತೆ ಹಂಚಲಾಗದು. ಎಲ್ಲ ದಾಸರೂ ಈ ವಿಷಯದಲ್ಲಿ ಪಾಂಡಿತ್ಯ ಇದ್ದವರೆಂದೇ ಹೇಳಬಹುದು. ಆದಿಪ್ರಾಸ (ಎರಡನೆಯ ಅಕ್ಷರ ಪ್ರಾಸ), ಅಂತ್ಯಪ್ರಾಸ, ಮತ್ತೂ ಮಧ್ಯಪ್ರಾಸಗಳು ರಚನೆಯ ಅಂದವನ್ನು ಹೆಚ್ಚಿಸುತ್ತವೆ. ಸಂಗೀತದ ಸಹಕಾರವೂ ಸೇರಿ ರಸಮಯವಾಗುತ್ತವೆ.

ಈಶ ನಿನ್ನ ಚರಣಭಜನೆ ಆಶೆಯಿಂದ ಮಾಡುವೇನು
ದೋಷರಾಶಿ ನಾಶ ಮಾಡೊ ಶ್ರೀಶ ಕೇಶವ ||

ಇನ್ನು ಭಾವಗಳು:
ಈಶ್ವರನನ್ನು ಬರಿಯ ಬುದ್ಧಿಗಮ್ಯನೆಂದು ದಾಸರು ತಿಳಿಯದೇ, ಅನುಭಾವದ ಮಾರ್ಗವನ್ನು ಹಿಡಿದರು. ಹೃದಯದಲ್ಲಿ ಉಕ್ಕಿಬಂದ ಭಾವನೆಗಳನ್ನು ನಿಸ್ಸಂಕೋಚವಾಗಿ ಹಾಡಿದರು. ಇದು ದಾಸರ ಹಾಡುಗಳ ವಿಶಿಷ್ಟವಾದ ಲಕ್ಷಣ. ಇಲ್ಲಿ ಭಕ್ತ - ಭಗವಂತನ ಅನಿರ್ವಚನೀಯ ಸಂಬಂಧ ವ್ಯಕ್ತವಾಗುತ್ತದೆ. ದೇವರು ದಾಸರಿಗೆ ತಾಯಿ-ತಂದೆಯೂ ಹೌದು, ಮಿತ್ರನೂ ಹೌದು, ಒಂದು ರೀತಿಯಲ್ಲಿ ಒಡೆಯನೂ ಹೌದು. ಅವನನ್ನು ಗೌರವಿಸಲು, ಮುದ್ದು ಮಾಡಲು, ಹೊಗಳಲು ಅಷ್ಟೇ ಅಲ್ಲ ಬೈಯಲೂ ಹಿಂಜರಿಯಲಾರರು.

ಕೃಷ್ಣನ ಬಾಲಲೀಲೆಗಳು, ಜೀವನ, ಉಪದೇಶ, ತಾಯಿಯ ಮಮತೆ, ಮಗುವಿನ ಆಟ (ಸ್ವಭಾವೋಕ್ತಿ) – ತಾನೇ ತಾಯಾಗಿ, ಮಗುವಾಗಿ, ಪ್ರಿಯೆಯಾಗಿ, ಕಾಡಿಸಿಕೊಂಡ ಗೋಪಿಯಾಗಿ, ದಾಸನಾಗಿ ನಿಂತು ಬರೆದ ಪದ್ಯಗಳು.
ಶೃಂಗಾರ – ಕೃಷ್ಣನ ರಾಸಲೀಲೆಗಳ ವಿವರವುಳ್ಳ ಗೀತೆಗಳಲ್ಲಿ ಇದು ಮುಖ್ಯ. ಮೆಲ್ಲ ಮೆಲ್ಲನೇ ಬಂದನೇ ಗೋಪೆಮ್ಮ ಕೇಳೇ.. ಗಲ್ಲಕೆ ಮುದ್ದು ಕೊಟ್ಟು ನಿಲ್ಲದೆ ಓಡಿಪೋದ
ದೇವರ ಅವತಾರ ಕ್ರಿಯೆಗಳು- ಬಾರೆ ಗೋಪಿ ಬಾಲಯ್ಯ ಅಳುತಾನೆ ಅನ್ನುವ ಅನೇಕ ಕೃತಿಗಳಲ್ಲಿ ದಶಾವತಾರದ ವರ್ಣನೆ ಕಂಡುಬರುತ್ತದೆ.
ಆಶ್ಚರ್ಯ, ಪ್ರಶ್ನೆ: ಏಕೆ ಮನವಿತ್ತೆ ಲಲಿತಾಂಗಿ ಎಂದು ಲಕ್ಷ್ಮಿಯನ್ನು ಕಾರಣ ಕೇಳುತ್ತಾರೆ.
ದೈನ್ಯತೆ, ಸಮರ್ಪಣಾ ಭಾವಗಳು – ದಾಸ ಎಂದರೇ ಸಂಪೂರ್ಣ ಸಮರ್ಪಣೆಯನ್ನು ನಂಬಿದವನು, ಶರಣಾಗತ ಅನ್ನುವುದನ್ನು ಪ್ರತಿಬಿಂಬಿಸುವ ಪದಗಳು. ಉದಾ: ನಿನ್ನನ್ನೆ ನಂಬಿದೆ ಕೃಷ್ಣಾ, ಕಂಡು ಕಂಡು ನೀ ಎನ್ನ ಕೈಬಿಡುವರೇ ಕೃಷ್ಣಾ (ವಾದಿರಾಜರು); ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವೈರಾಗ್ಯ – ನೀರೊಳಗಿನ ಕಮಲದೆಲೆಯಂತೆ ಬದುಕಬೇಕೆಂಬುವ ಆಶಯ ಕಾಣುತ್ತದೆ. ಉದಾ: ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ (ಪುರಂದರ ದಾಸರು); ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ
ಸಾಮಾಜಿಕ ಅನ್ಯಾಯಗಳ / ಕಂದಾಚಾರಗಳ ವಿರುದ್ಧ ಎತ್ತಿದ ಧ್ವನಿ; ಇದರಲ್ಲಿ ಸುತ್ತಲೂ ಸಮಾಜದಲ್ಲಿ ಕಂಡುಬಂದ ಢಂಬಾಚಾರಗಳ ಬಗ್ಗೆ ದಾಸರಿಗಿದ್ದ ದೃಷ್ಟಿಯನ್ನು ಕಾಣಬಹುದು – ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ …; ಉದರ ವೈರಾಗ್ಯವಿದು; ನಿಂದಕರಿರಬೇಕು ಊರೊಳಗೆ
ನಿಂದಾ ಸ್ತುತಿ – ದಾಸರು ತಮ್ಮ frustration ಅನ್ನು ದೇವರಿಗೆ ಬೈದು ತೀರಿಸಿಕೊಂಡರು ಅನ್ನುವಂತೆ ಮೇಲುನೋಟಕ್ಕೆ ಕಂಡರೂ, ಈ ಪದಗಳು ಸ್ತುತಿಗಳೇ. ಉದಾ: ಆರು ಬದುಕಿದರಯ್ಯ ಹರಿ ನಿನ್ನ ನಂಬಿ, ಕರುಣಾಕರ ನೀನೆಂಬುವದ್ಯಾತಕೋ ಭರವಸೆಯಿಲ್ಲೆನಗೆ
ಹಾಸ್ಯ / ವಿಡಂಬನೆ: ಹಾಸ್ಯದ ಮೂಲಕ ದೇವರ ಸ್ತುತಿ ಮಾಡುವ ಪದಗಳು. ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ, ಶೃಂಗಾರ ಪುರುಷರು ಬಹು ಮಂದಿಯಿರಲು; ಒಲಿದೆಯಾತಕಮ್ಮ ಲಕುಮಿ ವಾಸುದೇವಗೆ
ಚಿತ್ರಕವಿತೆ – descriptive poetry – ಆಗಿಹೋದ ಘಟನೆಗಳನ್ನು ಕಣ್ಣಮುಂದೆ ಕಟ್ಟುವಂತೆ ಬಣ್ಣಿಸುವುದು ಅದು ದಾಸರ ಪದಗಳ ಒಂದು ಸ್ಟ್ರಾಂಗ್ ಪಾಯಿಂಟ್ ಅನ್ನುವುದರಲ್ಲಿ ಅನುಮಾನವೇ ಇಲ್ಲ.
ಗ್ರಾಮ್ಯ, ಬಳಕೆಯ ಭಾಷೆಯ ಬಳಕೆ – ಕನಕ ದಾಸರ ದೇವಿ ನಮ್ಮ ದ್ಯಾವರು ಬಂದಾನ ಬನ್ನೀರೆ ನೋಡ ಬನ್ನೀರೆ (ಡೊಳ್ಳಿನ ಪದದ ಧಾಟಿಯಲ್ಲಿ)
ಗಾದೆಮಾತು / ನುಡಿಗಟ್ಟುಗಳ ಬಳಕೆ: ರೊಕ್ಕ ಎರಡಕ್ಕೂ ದುಃಖ ಕಾಣಕ್ಕ; ಕುನ್ನಿ ಕಚ್ಚಿದರಾನೆ ಅಳುಕುವುದೇ
ತತ್ತ್ವಪದಗಳು – ಮುಖ್ಯವಾಗಿ ಕನಕದಾಸರ ಮುಂಡಿಗೆಗಳು ಮತ್ತು ಕೃತಿಗಳು ಜಟಿಲವಾದುವು – ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಇತ್ಯಾದಿ.

ಈಗಲೂ ಖಂಡಿತ ಒಪ್ಪುವ ಮಾತುಗಳನ್ನು ಹೇಳಿದ್ದಾರೆ –
ಪಿತ ಮಾತೆ ಸತಿಸುತರ ಅಗಲಿ ಇರಬೇಡ
ಯತಿಯಾಗಿ ಆ..ರಣ್ಯ ಚರಿಸಲು ಬೇಡ
ವ್ರತನೇಮವ.. ಮಾಡಿ ದಣಿಯಲೂ ಬೇಡ
ಸತಿಯಿಲ್ಲದವಗೆ ಸದ್ಗತಿಯಿಲ್ಲವೋ ಮೂಢ (ಪುರಂದರ ದಾಸರು)

ಒಳ್ಳೆಯ ಕೆಲಸಕ್ಕೆ ಕಾರಣವಾದದ್ದಕ್ಕೆ “ಹೆಂಡತಿ ಸಂತತಿ ಸಾವಿರವಾಗಲಿ” ಎಂದು ಹೊಗಳಿದ್ದಾರೆ.

ಹರಿದಾಸ ಸಾಹಿತ್ಯ ಮತ್ತು ಸಂಗೀತ:
ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ,
ಕುಳಿತು ಪಾಡಲು ನಿಲುವ, ನಿಂತರೆ ನಲಿವ,
ನಲಿದರೆ ಒಲಿವೆ ನಾ ನಿಮಗೆಂಬ | (ಹರಿಕಥಾಮೃತಸಾರ - ಜಗನ್ನಾಥ ದಾಸರು)

ಕೀರ್ತನೆಗಳು ಸಂಗೀತಪ್ರಧಾನವಾದ ರಚನೆಗಳು, ದೇವರು ಸಂಗೀತ – ನೃತ್ಯಗಳಿಗೆ ಒಲಿಯುವನೆಂಬ ನಂಬುಗೆಯಿಂದ ಬೆಳೆದು ಬಂದ ಸಾಹಿತ್ಯ. ಹರಿದಾಸರ ಜೀವನಶೈಲಿಯೂ ಇದಕ್ಕೆ ಅನುಗುಣವಾಗಿಯೇ ಇತ್ತು (ಮಧುಕರ ವೃತ್ತಿ ಎನ್ನದು – ಪುರಂದರ ದಾಸರು).

ಇಲ್ಲಿ ನೆನಪಿಸಿಕೊಳ್ಳಬೇಕಾದ ಹೆಸರು ಶ್ರೀಪಾದರಾಜರದ್ದು. ಇವರು ಕನ್ನಡದಲ್ಲಿ ಸರಳ ರಚನೆಗಳನ್ನು ಮಾಡಿದ್ದಲ್ಲದೇ, ಅವನ್ನು ಸಂಗೀತಕ್ಕೆ ಅಳವಡಿಸಿ ದಿನನಿತ್ಯದ ಪೂಜೆಯ ವೇಳೆಯಲ್ಲಿ ಬಳಕೆಯಲ್ಲಿ ತಂದರು ಸಹ.

ತತ್ತ್ವೋಪದೇಶ, ನೈತಿಕ ಉಪದೇಶಗಳಿಗೆ ಮಾಧ್ಯಮವಾಗಿ ಸಂಗೀತವನ್ನು ಹೊರತಂದ ಶ್ರೇಯ ಪುರಂದರ ದಾಸರದ್ದು. ಕಾವ್ಯವಾದರೆ ಪಂಡಿತರಲ್ಲಿ ಮಾತ್ರ ಉಳಿದು ಹೋಗಬಹುದು ಅನ್ನುವ ಯೋಚನೆಯಿಂದ ಸಂಗೀತವನ್ನು ಆರಿಸಿಕೊಂಡರು ಅನ್ನವುದು ಸರಿಯೇ. ಹಾಡುಗಳು ಬಾಯಿಂದ ಬಾಯಿಗೆ ಕಲಿತು ಬೆಳೆಯುತ್ತವೆ, ಉಳಿಯುತ್ತವೆ ಅನ್ನುವುದೇ ಅವರ ವಿಚಾರವಾಗಿತ್ತು. ದಾಸರ ಗೆಜ್ಜೆಕಟ್ಟಿಕೊಂಡು ಕುಣಿಯುವ ಜೀವನ ಶೈಲಿಗೆ, ಪ್ರಾಸಬದ್ಧ ಸಂಗೀತಮಯ ಹಾಡುಗಳು ಸಮರ್ಪಕ ಜೊತೆಯಾದವು.

ತಾಳ ಬೇಕು ತಕ್ಕ ಮೇಳ ಬೇಕು…
ಯತಿಪ್ರಾಸವಿರಬೇಕು, ಗತಿಗೆ ನಿಲ್ಲಿಸಬೇಕು,
ರತಿಪತಿಯ ಪಿತನೊಳು ಅತಿಪ್ರೇಮವಿರಬೇಕು.. (ಗುರುಮಧ್ವಪತಿ)

ಸಂಗೀತಕ್ಕೆ ಅಳವಡಿಸಬೇಕೆಂದರೆ, ಛಂದಸ್ಸುಗಳ ಬದ್ಧತೆ ಬೇಕು. ಆದಿ, ಅಂತ್ಯ ಅಥವಾ ಮಧ್ಯ ಪ್ರಾಸಗಳ ಬಳಕೆಯಿರಬೇಕು. ದ್ವಿಪದಿ, ಚೌಪದಿಗಳ, ಷಟ್ಪದಿಯ ಬಳಕೆ ಕಾವ್ಯದ ಅಂದವನ್ನು ಹೆಚ್ಚಿಸುತ್ತವೆ. ದಾಸರ ರಚನೆಗಳು ಪಲ್ಲವಿ, ಅನುಪಲ್ಲವಿ ಹಾಗೂ ಚರಣಗಳು ಈ ಕ್ರಮದಲ್ಲಿದ್ದು, ಪಲ್ಲವಿ ತತ್ತ್ವವನ್ನೂ, ಅನುಪಲ್ಲವಿ ವಿವರಣೆಯನ್ನೂ ಕೊಟ್ಟರೆ, ಚರಣಗಳು ಉದಾಹರಣೆಗಳೊಂದಿಗೆ ಮೇಲಿನದನ್ನು ಸಮರ್ಥಿಸುತ್ತವೆ ಅನ್ನಬಹುದು.

ಸಂಗೀತಾಭ್ಯಾಸಿಗಳಿಗೆ ಅನುಕೂಲವಾಗುವಂತೆ ಗೀತೆಗಳನ್ನು ರೂಢಿಗೆ ತಂದ ಶ್ರೇಯಸ್ಸು ಪುರಂದರ ದಾಸರಿಗೆ ಸಲ್ಲುತ್ತದೆ. ಲಂಬೋದರ ಲಕುಮಿಕರ ಅನ್ನುವ ರಚನೆಯಿಂದಲೇ ಅಲ್ಲವೆ ಪ್ರತಿಯೊಬ್ಬ ಸಂಗೀತಾಭ್ಯಾಸಿ ಆರಂಭಿಸುವುದು?
ಜೊತೆಯಲ್ಲಿ ಪುರಂದರ ದಾಸರು ಆಗ ಬಳಕೆಯಲ್ಲಿದ್ದ ತಾಳಗಳನ್ನು ಸರಳೀಕರಿಸಿ, ಸಪ್ತತಾಳಗಳನ್ನು ಬಳಕೆಗೆ ತಂದರು. ಖಂಡಛಾಪು, ಮಿಶ್ರಛಾಪು ಈ ಎರಡು ಛಾಪುತಾಳದ ವಿಧಗಳಲ್ಲಿ ಅನೇಕ ಕೀರ್ತನೆಗಳು ಇವೆ. ಮಾಯಾಮಾಳವ ಗೌಳ ರಾಗವನ್ನು ಆಧರಿಸಿ ಸರಳೀ ಸ್ವರಗಳು ಮತ್ತು ಜಂಟಿ ಸ್ವರಗಳನ್ನು ಹಾಕಿಕೊಟ್ಟು, ಹೊಸತಾಗಿ ಕಲಿಯುವವರಿಗೆ ಸುಲಭವಾಗಿಸಿದ ಶ್ರೇಯವೂ ಪುರಂದರ ದಾಸರದ್ದೇ ಅನ್ನಲಾಗಿದೆ. ಪುರಂದರ ದಾಸರ ಈ ಕಾರ್ಯದಿಂದಲೇ, ಅವರನ್ನು "ಕರ್ನಾಟಕ ಸಂಗೀತದ ಪಿತಾಮಹ" ಅನ್ನುವುದು ಸಹಜವೇ.

ಅನೇಕ ರಾಗಗಳು ಆಗ ಪ್ರಚಲಿತವಾಗಿ ಇದ್ದಿರಬಹುದಾದರೂ, ದಾಸರು ಜಾನಪದ ಮೂಲವಾದ ರಾಗಗಳನ್ನು ತಮ್ಮ ಕೀರ್ತನೆಗಳಿಗೆ ಬಳಸಿಕೊಂಡರು. ಅಲ್ಲಿ ಹೆಸರಿಸಿದ ಈ ರಾಗಗಳ ಸಂಖ್ಯೆ ೧೦೦ನ್ನು ಮೀರಲಿಕ್ಕಿಲ್ಲ; ಇದಕ್ಕೆ ಕಾರಣ ರಾಗ ಕ್ಲಿಷ್ಟವಾದರೆ ಜನಸಾಮಾನ್ಯರ ಬಾಯಲ್ಲಿ ಹಾಡು ಉಳಿಯಲಿಕ್ಕಿಲ್ಲ ಅನ್ನುವುದಿರಬಹುದು. ಈಗೀಗ ವಿದ್ವಾಂಸರು ಹತ್ತು ರಾಗಗಳಲ್ಲಿ ಒಂದೇ ಕೃತಿಯನ್ನು ಹಾಡುವುದು ಕಂಡುಬರುತ್ತದೆ. ಅವು ಮೆಚ್ಚುಗೆಯನ್ನೂ ಗಳಿಸುತ್ತವೆ.

ಗೀತ – ವಾದ್ಯಗಳೊಂದಿಗೆ, ನೃತ್ಯವೂ ಸಂಗೀತದ ಒಂದು ಅಂಗವಾಗಿಯೇ ಬೆಳೆದುಬಂದಿತ್ತಾದರೂ, ಮುಂದೆ ನೃತ್ಯ – ಸಂಗೀತಗಳು ಬೇರೆಯಾದವು ಅನ್ನುವುದು ವಿದ್ವಾಂಸರ ಅಭಿಪ್ರಾಯ. ದಾಸರ ರಚನೆಗಳಲ್ಲಿ ಇರುವ ಬಾಲಕೃಷ್ಣನ ಲೀಲೆಗಳು ಮುಖ್ಯವಾಗಿ ನೃತ್ಯಕ್ಕೆ ತಕ್ಕ ಸಾಮಗ್ರಿಯನ್ನು ಒದಗಿಸುತ್ತವೆ. ದಾಸರುಗಳೇ ಗೆಜ್ಜೆಕಟ್ಟಿಕೊಂಡು, ಕುಣಿದು ಹಾಡಿ ಹಂಚಿದರು. ಹಾಗಾಗಿ ನೃತ್ಯ ಆ ಕೀರ್ತನೆಗಳ ಮೂಲ ಉದ್ದೇಶವಲ್ಲದಿದ್ದರೂ, ಗೀತ – ವಾದ್ಯಗಳ ಜೊತೆಗೂಡಿದಾಗ ಕೀರ್ತನೆಗಳ ಭಾವ ಸಶಕ್ತವಾಗಿ ತೋರಿ, ಪರಿಣಾಮಕಾರಿಯಾಯಿತು.

ತಪ್ಪದೆ ಕೆಳಗಿರುವ ಧ್ವನಿ ಸುರುಳಿಯನ್ನು ಕೇಳಿ . ಸುಶ್ರಾವ್ಯವಾಗಿ ಹಾಡಿರುವ ಶ್ರೀಮತಿ ಅನ್ನಪೂರ್ಣ ಆನಂದ್ ಅವರಿಗೆ ಧನ್ಯವಾದಗಳು

- ಲಕ್ಷ್ಮೀನಾರಾಯಣ ಗುಡೂರ್

***************

(ಈ ಲೇಖನ ಸ್ವಲ್ಪ ಉದ್ದವಾಯಿತೇನೊ ಅನ್ನಿಸಿದರೆ, ಕ್ಷಮೆಯಿರಲಿ. ವಿಷಯದ ಕಾರಣದಿಂದ ಅಷ್ಟು ಸಾಲುಗಳು ಬೇಕಾದವು; ಅದರಲ್ಲೂ ನಾನು ಬರಿಯ ಸಾಹಿತ್ಯ-ಸಂಗೀತಗಳ ಬಗ್ಗೆ ಮಾತ್ರ ಬರೆದಿರುವುದು – ಲಕ್ಷ್ಮೀನಾರಾಯಣ)

ಹೆಚ್ಚಿನ ಓದಿಗೆ:
ಈ ಕೆಳಗಿನ ಗ್ರಂಥಗಳೆಲ್ಲವೂ ಉಚಿತವಾಗಿ archive.org ಯಲ್ಲಿ ಲಭ್ಯವಿವೆ.
೧. ದಾಸ ಸಾಹಿತ್ಯ - ಸಂ: ದಿ. ವಿ ಸೀತಾರಾಮಯ್ಯ ಮತ್ತು ಪ್ರೊ. ಜಿ ವೆಂಕಟಸುಬ್ಬಯ್ಯ
೨. ದಾಸ ಸಾಹಿತ್ಯ ದರ್ಶನ - ಸಂ: ಎಚ್ಚೆಸ್ಕೆ
೩. ದಾಸ ಸಾಹಿತ್ಯದಲ್ಲಿ ಜಾನಪದ ಅಂಶಗಳು - ಡಾ. ಆರ್ ಸುನಂದಮ್ಮ
೪. ದಾಸ ಸಾಹಿತ್ಯ ಸೌರಭ - ಸಂ: ಶ್ರೀನಿವಾಸ ಸು ಮಠದ
೫. ದಾಸ ಸಾಹಿತ್ಯ ಸುಧೆ - ಸಂ: ಟಿ ಎನ್ ನಾಗರತ್ನ
೬. ಕರ್ನಾಟಕದ ಹರಿದಾಸರು - ಡಾ. ಹೆಚ್ ಕೆ ವೇದವ್ಯಾಸಾಚಾರ್ಯ
*********************************************************************************