ಪ್ಯಾಕೇಜ ಪ್ರವಾಸದ ಮೂಲಪುರುಷ, ಥಾಮಸ್ ಕುಕ್ ಮತ್ತು ವಿಶ್ವ ಸಂಗೀತ ದಿನಾಚರಣೆ

1) ಕಳೆದ ತಿಂಗಳು ನಾನು ಬಹುಸಂಖ್ಯಾತ ಬ್ರಿಟಿಶ್ ಭಾರತೀಯ ಮೂಲದವರು ವಾಸಿಸುತ್ತಿರುವ ಲೆಸ್ಟರ್ ಶಹರಕ್ಕೆ ಹೋದಾಗ ಸ್ಟೇಶನ್ನಿನ ಹೊರಗಡೆಯಲ್ಲಿ ಕಟ್ಟೆಯ ಮೇಲೆ ನಿಂತ ಆರಡಿ ಎತ್ತರದ ಅರ್ಧ ಬೋಳು ತಲೆಯ ಈಗ ತಾನೆ ಪ್ರವಾಸಕ್ಕೆ ಹೊರಟವನಂತೆ ಕಾಣುತ್ತಿದ್ದವನ ಶಿಲ್ಪ ಕಣ್ಣಿಗೆ ಬಿತ್ತು. ಒಂದು ಕೈಯಲ್ಲಿ ಹಳೆಯ ಕಾಲದ (ಗಾಂಧಿ ತಾತನ ಹತ್ತಿರ ಇದ್ದಂಥ) ಪಾಕೆಟ್ ಗಡಿಯಾರ, ಇನ್ನೊಂದು ಕೈಯಲ್ಲಿ ಮಡಿಚಿಟ್ಟ ಕೊಡೆ, ಗ್ಲಾಡ್ಸ್ಟನ್ ಬ್ಯಾಗು, ಅದರಡಿ ಒಂದು ಚಿಕ್ಕ ಟೂರಿಂಗ್ ಸೂಟ್ ಕೇಸ್. ಅಪ್ಪಟ ಹಳೆಯಕಾಲದ ಇಂಗ್ಲಿಷ್ ’ಜಂಟಲ್ ಮನ್ ಟೂರಿಸ್ಟ್.’ ಯಾರೀತ? ಇವನೇ ಸುಮಾರು ಎರಡು ಶತಮಾನಗಳ ಹಿಂದೆ ತಾನು ನಿಂತಿದ್ದ ಜಾಗದ ಪಕ್ಕದಲ್ಲೇ ಇದ್ದ ಸ್ಟೇಶನ್ನಿನಿಂದ ೫೦೦ ಜನ ಯಾತ್ರಿಕರನ್ನು ಪ್ರವಾಸಕ್ಕೆ ಕರೆದೊಯ್ದು ಥಾಮಸ್ ಕುಕ್. ಇದೊಂದು ರೋಚಕ ಪ್ರವಾಸಿ ಕಥನ! ಇಂದು ಊರಿಂದೂರಿಗೆ ಮತ್ತು ದೇಶಾಂತರ ಪ್ರವಾಸಿಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಇಪ್ಪತ್ತನೆಯ ಶತಮಾನದ ಅರವತ್ತರ ಮತ್ತು ಎಪ್ಪತ್ತರ ದಶಕಗಳಲ್ಲಿ ಇಂಗ್ಲೆಂಡಿನಲ್ಲಿ ಸರ್ ಫ್ರೆಡ್ಡಿ ಲೇಕರ್ ಸ್ಲೈ ಟ್ರೇನ್ (Skytrain) ಎನ್ನುವ ಕಂಪನಿ ಶುರು ಮಾಡಿದ ನಂತರ ಪ್ಯಾಕೇಜ್ ಹಾಲಿಡೇಗಳು ಬೆಳೆಯುತ್ತ ಥಾಮಸ್ ಕುಕ್ ಕಂಪನಿ ೧೯೮೦ರ ದಶಕದಲ್ಲಿ ಅದನ್ನು ಉಚ್ಛ್ರಾಯ ಸ್ಥಿತಿಗೆ ಒಯ್ಯಿತು. ಆದರೆ ಅದು ಯಾವಾಗ ಪ್ರಾರಂಭವಾಯಿತು? ಇಲ್ಲಿಂದ ಶುರುವಾಗುತ್ತದೆ ಜರ್ನಿ!

ಕಾಲ್ನಡಿಗೆಯಲ್ಲಿ ಹೊರಟ ಪಾದ್ರಿ
ಥಾಮಸ್ ಕುಕ್ ಹುಟ್ಟಿದ್ದು ಡಾರ್ಬಿಶೈರಿನ ಮೆಲ್ ಬೋರ್ನ್ (ಆಸ್ಟ್ರೇಲಿಯದು ಅಲ್ಲ) ಎನ್ನುವ ಹಳ್ಳಿಯಲ್ಲಿ, ೧೮೦೮ರಲ್ಲಿ. ಹತ್ತು ವರ್ಷಕ್ಕೇ ಶಾಲೆ ಬಿಟ್ಟು ತನ್ನ ಸೋದರಮಾವನ ಕೆಳಗೆ ಬಡಿಗನಾಗಿ ಕೆಲಸಕ್ಕೆ ಸೇರಿಕೊಂಡ. ತಂದೆ ತಾಯಿಗಳ ಕಟ್ಟಾ ಬಾಪ್ಟಿಸ್ಟ್ ಕ್ರಿಶ್ಚಿಯನ್ ವಾತಾವರಣದಲ್ಲಿ ಬೆಳೆದವನು. ೧೮೨೮ರಲ್ಲಿ ಬೈಬಲ್ ರೀಡರ್ ಮತ್ತಿ ಮಿಷನರಿಯಾಗಿ ನೇಮಕಗೊಂಡನು. ಆ ಕೆಲಸಕ್ಕಾಗಿಯೇ ಮರುವರ್ಷ ೨೬೯೨ ಮೈಲಿಗಳ ಸಂಚಾರ; ಅದರಲ್ಲಿ ಎರಡುಸಾವಿರ ಮೈಲು ಬರೀ ಕಾಲ್ನಡಿಗೆಯಲ್ಲೇ ಸುತ್ತಾಡಿದ! ಮದ್ಯಪಾನವಿರೋಧಿ ಚಳುವಳಿಗಾಗಿ  ಮೀಟಿಂಗ್ ಮತ್ತು ಮೆರವಣಿಗೆಗಳನ್ನು ಯೋಜಿಸಿದ. ಇಸವಿ ಸನ್ ೧೮೪ರ ಜೂನ್ ೯ ರಂದು ಥಾಮಸ್ ತನ್ನ ಊರಾದ ಮಾರ್ಕೆಟ್ ಹಾರ್ಬರಾದಿಂದ ಕಾಲ್ನಡಿಗೆಯಲ್ಲಿ ೧೧ ಮೈಲು ದೂರದ ಲೆಸ್ಟರ್ ನಗರಕ್ಕೆ ಟೆಂಪರನ್ಸ್ (ಮದ್ಯಪಾನ ಸಂಯಮ ಸಂಘದ) ಮೀಟಿಂಗಿಗೆ ಹೊರಟಿದ್ದ. ಉದರ ನಿರ್ವಹಣೆಗಾಗಿ ಬಡಿಗನಾಗಿ ಕೆಲಸಮಾಡುತ್ತಿದ್ದರೂ ತನಗೆ ಅತೀವ ಶ್ರದ್ಧೆಯಿದ್ದ ಕ್ರಿಸ್ತಮತದ ಬಾಪ್ಟಿಸ್ಟ್ ಪ್ರವಾಚನಕಾರನೂ ಆಗಿದ್ದ ಆತನ ತಲೆಯಲ್ಲಿ ಫಕ್ಕನೆ ಸುಳಿಯಿತೊಂದು ವಿಚಾರ: ಇತ್ತೀಚಿಗೆ ಬೆಳೆಯುತ್ತಿರುವ ರೇಲ್ವೆಯ ಪ್ರಭಾವವನ್ನು ನಮ್ಮ ಬಡವರನ್ನು ಹೀನ ಸ್ಥಿತಿಗೆಳೆಯುತ್ತಿರುವ ಮದ್ಯಪಾನದಂಥ ದುರ್ವ್ಯಸನಗಳ ಸಂಯಮ ಚಳುವಳಿಗೇಕೆ  (Temperance Movement) ಉಪಯೋಗಿಸಿಕೊಳ್ಳಬಾರದು? ಅಂತ. ಈ ವಿಚಾರವನ್ನು ಅಂದು ಟೆಂಪರನ್ಸ್ ಸೊಸೈಟಿ ಸಭೆಯಲ್ಲಿ ಮಂಡಿಸಿ ಕಮಿಟಿಯಿಂದ ಆನುಮತಿ ಪಡೆದು ಕಾರ್ಯಪ್ರವೃತ್ತನಾದ. ಮುಂದಿನ ಜುಲೈ ೫, ೧೮೪೧ ಮಹತ್ವದ ದಿನ. ಮೊದಲ ಬಾರಿ ಇಂಗ್ಲೆಂಡಿನ ಲೆಸ್ಟರ್ ನಗರದಿಂದ ಲಫ್ ಬರಾ (Loughborough) ಎನ್ನುವ ಊರಿಗೆ ೪೮೫ ಜನರನ್ನು ಹದಿನೊಂದು ಮೈಲು ರೈಲು ಪ್ರವಾಸ ಮಾಡಿಸಿ ಥಾಮಸ್ ಕುಕ್  ಪಪ್ರಥಮ ದಾಖಲೆಯನ್ನೇ ಮಾಡಿದನು. ಆ ದಿನ ಅವರೆಲ್ಲ ಮರಳಿ ಲೆಸ್ಟರಿಗೆ ಬಂದಾಗ ರಾತ್ರಿ ೧೦ ೩೦ ಗಂಟೆ! ಅವರು ತೆತ್ತ ಶುಲ್ಕ ಬರೀ ಒಂದು ಶಿಲ್ಲಿಂಗ್. ಈಗಿನ ಲೆಕ್ಕದಲ್ಲಿ ಮೂರು ಪೌಂಡುಗಳು; ಅಂದು ಸಾಮಾನ್ಯ ಮನುಷ್ಯನ ಆಗಿನ ಕಾಲದ ಒಂದು ತಿಂಗಳ ಆದಾಯಕ್ಕೆ ಸಮವಾಗಿತ್ತು. ಅಂದೇ ಹುಟ್ಟಿತು ಪ್ಯಾಕೇಜ್ ಪ್ರವಾಸ. ಆತನೇ ಅದಕ್ಕೆ ಚಾಲನೆ ಕೊಟ್ಟವರಲ್ಲಿ ಮೊದಲಿಗನು. ಈ ಪ್ರವಾಸದ ಯಶಸ್ಸಿನಿಂದ ಪ್ರೇರಿತನಾಗಿ ೧೮೫೧ರ ಗ್ರೇಟ್ ಎಗ್ಸಿಬಿಷನ್ ಗೆ ಒಂದುಉವರೆ ಲಕ್ಷ ಜನರನ್ನು ಕೊಂಡೊಯ್ದ. ೧೮೫೫ ರ ಪ್ಯಾರಿಸ್ ಎಗ್ಸಿಬಿಷನ್ನಿಗೆ ಹೋಗಿಬಂದ ಲೆಸ್ಟರಿನ ಪ್ರಯಾನಿಕರು ತೆತ್ತ ಶುಲ್ಕ ಬರೀ ಒಂದೂ ವರೆ ಪೌಂಡುಗಳು! ಹೀಗೇ ’ಕುಕ್ ಟೂರಿಸ್ಟ್’ಗಳ ಸಂಖ್ಯೆ ಬೆಳೆದು ಪ್ರವಾಸಗಳು ಯೂರೋಪ್, ಅಮೇರಿಕಾ, ಸಿಂಗಾಪೂರ್, ಪ್ರಾಚ್ಯ ದೇಶಗಳಿಗೂ ವಿಸ್ತರರಿಸಿತು. ಅಲ್ಲಿ ವಾಸಕ್ಕೆಹೋಟೆಲ್ ಕೂಪನ್ನುಗಳು, ಹಣಕಾಸಿನ ವ್ಯವಸ್ಥೆಗೆ ಟ್ರಾವಲರ್ಸ್ ಚೆಕ್ ಹೀಗೇ ಬೆಳೆಯಿತು ಕುಕ್ ಎಂಪಾಯರ್! ಆತನ ನಂತರ ಆತನ ಮಗನು ಥಾಮಸ್ ಕುಕ್ ಕಂಪನಿಯನ್ನು ಮುನ್ನಡೆಸಿ ಇನ್ನಷ್ಟು ಬೆಳೆಸಿದನು. ಮುಂದೆ ಮೊಮ್ಮಕ್ಕಳೂ ಸೇರಿಕೊಂಡರು. ಅವರದೇ ಏರ್ ಲೈನ್ ಸಹ ಪ್ರಾರಂಭವಾಯಿತು
ಲಫ್ ಬರಾ ಸ್ಟೇಶನ್ನಿನಲ್ಲಿ ಆ ಪ್ರವಾಸದ ಸ್ಮಾರಕವಾಗಿ ಹಸಿರು ಫಲಕದ ಅನಾವರಣ (೨೦೨೩)
ಫ್ರೆಡ್ಡಿ ಲೇಕರ್ ಅವರ ಸ್ಕೈ ಟ್ರೇನ್ ಮತ್ತು ವಿದೇಶ ಪ್ರವಾಸದ ಬೆಳವಣಿಗೆ

ಮೋಡ, ಮಂಜು ಕವಿದ ಬ್ರಿಟಿಶ್ ಆಕಾಶಕ್ಕೆ ಹೊಂದಿಕೊಂಡವರು ಮತ್ತು ಇಡೀ ವರ್ಷ ಸತತವಾಗಿಯಲ್ಲದಿದ್ದರೂ ತಿಂಗಳಲ್ಲೊಂದು ಬಾರಿಯಾದರೂ ಮಳೆಯಾಗುವ ಈ ಚಳಿನಾಡಿನಲ್ಲಿ ವಾಸಿಸುವ ಆಂಗ್ಲರ ಹವ್ಯಾಸಗಳಲ್ಲಿ ಒಂದು ಬಹುತೇಕ ಎಲ್ಲ ಕುಟುಂಬದವರು ’ಬೇಸಗೆಯಲ್ಲಿ’ ಒಂದು ಅಥವಾ ಎರಡು ವಾರಗಳು ಸಮುದ್ರತಟದ ಮೇಲೆ ಕಳೆಯುವ ಬೀಚ್ ಹಾಲಿಡೇ! ಚಿಕ್ಕಂದಿನಲ್ಲಿ ಈ ದೇಶದ ನೈಋತ್ಯದ ಡೆವನ್ ಮತ್ತು ಕಾರ್ನ್ ವಾಲ್ ಪ್ರದೇಶಗಳಿಗೆ ತಂಡೋಪ ತಂಡವಾಗಿ ಹೋಗುವ ರಿಚುಅಲ್ ಅವರದು. ಅದು ತಪ್ಪಿದರೆ ಉತ್ತರದ ಬ್ಲಾಕ್ ಪೂಲ್, ಅಥವಾ ಅಗ್ನೇಯದ ಗ್ರೇಟ್ ಯಾರ್ಮೌತ್ ಅಥವಾ ಸ್ಕಾಟ್ಲಂಡಿಗೆ ಕಾರಿಗೆ ಕಾರವಾನ್ ಲಗತ್ತಿಸಿ ಪಯಣ. ಇದು ತಲೆ ತಲಾಂತರಗಳಿಂದ ಅವರು ಮಾಡುತ್ತಿದ್ದರೆಂದು ವಿಕ್ಟೋರಿಯನ್ ಆಂಗ್ಲ ಸಾಹಿತಿ ಚಾರ್ಲ್ಸ್ ಡಿಕೆನ್ಸ್ನ ಓದುಗರಿಗೂ ವಿದಿತ. ಆಗ ಮಧ್ಯಮ ವರ್ಗದ ಕುಟುಂಬಗಳಿಗೆ ಏರೋಪ್ಲೇನಿನಲ್ಲಿ ಪರದೇಶಗಳಿಗೆ ಹೋಗುವ ಸಾಮರ್ಥ್ಯ ಇರಲಿಲ್ಲ. ಅದನ್ನು ಮುರಿದವನು ೧೯೭೭ರಲ್ಲಿ ಬರೀ ೧೧೮ ಸ್ಟರ್ಲಿಂಗ್ ಪೌಂಡುಗಳಿಗೆ ಅಮೇರಿಕೆಗೆ ಕೊಂಡೊಯ್ಯುವ ಸ್ಕೈಟ್ರೇನ್ ಪ್ರಾರಂಭ ಮಾಡಿದವನೇ ಮುಂದೆ ಸರ್ ಬಿರುದು ಪಡೆದು ಸರ್ ಫ್ರೆಡ್ಡಿ ಲೇಕರ್ ಆದವನು. ಆ ತಿಕೀಟು ಉಳಿದ ದೊಡ್ಡ ಏರ್ಲೈನ್ಗಳಿಗಿಂತ ಶೇಕಡಾ ೬೬ ಕಡಿಮೆ ದರದ್ದು ಎಂದ ಮೇಲೆ ಶ್ರೀಸಾಮಾನ್ಯನ  ಪರದೇಶ ಪ್ರವಾಸದ ಕನಸು ನನಸಾಯಿತು. ಹಲವೇ ವರ್ಷಗಳ ನಂತರ ೧೯೮೦ರ ದಶಕದಲ್ಲಿ ಹಣಕಾಸಿನ ಕುಸಿತ (ರಿಸೆಷನ್) ಮತ್ತು ಆತನ ಪ್ರತಿಸ್ಫರ್ದಿ ಏರ್ಲೈನ್ ಗಳ ಷಡ್ಯಂತ್ರ ಇವೆರಡರ ಕಾರಣದಿಂದ ಆತನ ಕಂಪನಿ ಮುಳುಗಿದರೂ ಜನರಿಗೆ ಯೂರೋಪ್ ಮತ್ತು ದೂರ ದೇಶಗಳಿಗೆ ಬಿಸಿಲನ್ನು ಬೆನ್ನು ಹತ್ತಿ ಪ್ರವಾಸ ಮಾಡುವ ಚಟ ಆಗಲೇ ಹತ್ತಿತ್ತು. ಚಳಿ-ಮಳೆಯಿಂದ ಬೇಸತ್ತು ಯುಕೆಯನ್ನು ಬಿಟ್ಟು ಎರಡೇ ತಾಸುಗಳೊಳಗೆ ದಕ್ಷಿಣ ಫ್ರಾನ್ಸ್ ಅಥವಾ ಅಗ್ಗ ದರದಲ್ಲಿ ಬೇಸಗೆಯಲ್ಲಿ ಬೇಯುವ ಸ್ಪೇನಿನ ಕಾಸ್ಟಾ ಡೆಲ್ ಬೀಚುಗಳಿಗೆ ಹೋಗುವ ಸಾಧ್ಯತೆ ಅವರ ಮಡಿಯಲ್ಲಿ ಬಂದು ಬಿದ್ದಾಗ ಯಾರಿಗೆ ಬೇಡ? ಒಂದು ಅಥವಾ ಎರಡು ವಾರಗಳ ನಂತರ ವಿಮಾನದಲ್ಲಿ ಮರಳುವಾಗ ಬೀಚಿನಲ್ಲಿ ಬೆಂದ ಕಂದು ಬಣ್ಣದ ಸನ್ ಟ್ಯಾನ್ ಮೈ ಬಿಟ್ಟು ಕೊಂಡು ಮೆರೆದವರೇ ಟೀಚರ್-ಲಾಯರ್ನಿಂದ ಹಿಡಿದು ಗಣಿ ಕೆಲಸಗಾರರು ಸಹ. ಇದರ ಲಾಭ ಪಡೆದ ಥಾಮಸ್ ಕುಕ್ ಕಂಪೆನಿ ಒಮ್ಮೆಲೆ ನೂರು ಟ್ರಾವಲ್ ಏಜಂಟ್ ಅಂಗಡಿಗಳನ್ನು ಊರೂರಿಗೆ ಹೋಗಿ ತೆರೆಯಿತು. ಅದರ ಹೆಸರು ಪ್ಯಾಕೇಜ್ ಹಾಲಿಡೇಗೆ ಮನೆಮಾತಾಯಿತು. ಅವುಗಳೂ ಏರಿಳಿತಗಳನ್ನು ಕಂಡ ಕಥೆಯನ್ನು ನಂತರ ನೋಡುವಾ.

ಟ್ರಾವಲರ್ಸ್ ಚೆಕ್
  ಕುಕ್ ’ಸಾಮ್ರಾಜ್ಯ’  ಅವನತಿ ಮತ್ತು ಹೊಸ ಅವತಾರ 
೧೭೮ ವರ್ಷಗಳ ನಿರಂತರ (ಮಹಾಯುದ್ಧದ ಸಮಯದಲ್ಲಿ ಸ್ವಲ್ಪ ಕಾಲ ರಾಷ್ಟ್ರೀಕರಣವಾದದ್ದನ್ನು ಬಿಟ್ಟು) ಸೂರ್ಯೋದಯ ಸೂರ್ಯಾಸ್ತಗಳನ್ನರಸಿ ಬಂದ ಲಕ್ಷಾಂತರ ಪ್ರಯಾಣಿಕರನ್ನು ದೇಶವಿದೇಶಗಳಿಗೆ ಕರೆದುಕೊಂಡು ಹೋದನಂತರ ಸೆಪ್ಟೆಂಬರ್, ೨೦೧೯ರಲ್ಲಿ ಅದರ ನೇಸರ ಅಸ್ತಂಗತವಾಯಿತು. ಏಕೆ? ಕಾಲ ಬದಲಾದಂತೆ, ಮತ್ತು ಅಗ್ಗದರದ ವಿಮಾನಯಾನದ ಕಂಪನಿಗಳಾದ ಈಸಿ ಜೆಟ್, ರೈಯಾನ್ ಏರ್, ಜೆಟ್-2, Airbnbಗಳ ಪೈಪೋಟಿ, ಕೋವಿಡ್ ಮಹಾ ಮಾರಿ ಜನರ ಓಡಾಟವನ್ನಿ ನಿಲ್ಲಿಸಿದ್ದು ಇವೆಲ್ಲ ಕೂಡಿ ಅದರ ಬೇಡಿಕೆ ಕಡಿಮೆಯಾಗಲಾರಂಭಿಸಿತು. ಜೊತೆಗೆ ೨೦೧೬ರಲ್ಲಿ ಯೂರೋಪಿಯನ್ನರ ಪ್ರಮುಖ ಹಾಲಿಡೇ ದೇಶವಾಗಿದ್ದ ಟರ್ಕಿಯಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ, ೨೦೧೮ ರಲ್ಲಿ ಹೀಟ್ ವೇವ್, ಇಂದಿನ ಯುವ ಪ್ರವಾಸಿಕರು ಇಂಟರ್ನೆಟ್ ನಲ್ಲಿ ತಮ್ಮ ವಿಮಾನ, ಹೋಟೆಲ್ ಹುಡಿಕಿಕೊಳ್ಳುವದು ಇವೆಲ್ಲ ಸೇರಿ ಒಂದು ಪ್ರಸಿದ್ಧ ಆಂಗ್ಲ ಪದಗುಚ್ಛದಂತೆ (To cook one's goose) ಥಾಮಸ್ ಕುಕ್ಕನ ‘ಬಾತನ್ನು ಬೇಯಿಸಿದಂತಾಯಿತು!‘ ೨೩, ಸೆಪ್ಟೆಂಬರ್ ೨೦೧೯ ರಂದು ಕಂಪನಿ ಮುಳುಗಿತು. ಆದರೆ ಫೀನಿಕ್ಸ್ ಪಕ್ಷಿಯಂತೆ ಅದು ಬರೀ ಆನ್ ಲೈನ್ ಟ್ರಾವಲ್ ಏಜಂಟ್ ರೂಪದಲ್ಲಿ ಚೀನದ ಫೋಸನ್ ಟೂರಿಸ್ಮ್ ಗ್ರುಪ್ ಹೆಸರಿನಲ್ಲಿ ಸನ್ನಿ ಹಾರ್ಟ್ ಲಾಂಛನದೊಂದಿಗೆ ಮತ್ತೆ ತಲೆಯಿತ್ತಿದೆ. ವಿಪರ್ಯಾಸವೆಂದರೆ ಅದರ ಧ್ಯೇಯವಾಕ್ಯ:  ಡೋಂಟ್ ಜಸ್ತ್ ಬುಕ್ ಇಟ್, ಥಾಮಸ್ ಕುಕ್ ಇಟ್! (Don't just book it, Thomas Cook it.)

ಶ್ರೀವತ್ಸ ದೇಸಾಯಿ

(ಉದಯವಾಣಿಯಲ್ಲಿ ಅವರೇ ಬರೆದ ಲೇಖನದ ಪರಿಷ್ಕೃತ, ವಿಸ್ತೃತ ಆವೃತ್ತಿ)
2)  ನಮ್ಮ ಮನೆಯಲ್ಲಿ ಆಚರಿಸಿದ ವಿಶ್ವ ಸಂಗೀತ ದಿನಾಚರಣೆ -ಪ್ರಮೋದ ಲಕ್ಕುಂಡಿ

’ಎತ್ತಣ ಥಾಮಸ್ ಕುಕ್, ಎತ್ತಣ ಸಂಗೀತ?’ ಅನ್ನಬಹುದು, ನೀವು. “We carried music with us, and music met us at Loughborough Station … and cheered us all along the line with the heartiest welcome … the whole affair being one which excited extraordinary interest, not only in the county of Leicester but throughout the whole country.” ಆ ದಿನ ಆತ ತನ್ನ ಡೈರಿಯಲ್ಲಿ ಬರೆದ ಮಾತುಗಳಿವು. ಸಂಗೀತಕ್ಕ ಕಾಲ, ದೇಶದ ಪರಿವೆಯಿಲ್ಲ. ೧೯೮೧ ರಲ್ಲಿ ಪ್ಯಾರಿಸ್ ನಲ್ಲಿ ಜಾಕ್ ಲ್ಯಾಂಗ್ ಮತ್ತು ಮೋರಿಸ್ ಫ್ಲೂರೆಟ್ ಎನ್ನುವ ಫ್ರೆಂಚ್ ಸಂಗೀತಗಾರ ಸೇರಿ ‘Fête de la Musique’ (“Make music.”) ಅಂತ ಕರೆ ಕೊಟ್ಟು ಈ ದಿನವನ್ನು ಸಂಗೀತಕ್ಕಾಗಿ ಮುಡುಪಿಡುವ ಯೋಜನೆ ಹಾಕಿ ಮರು ವರ್ಷ ಜೂನ್ ೨೧ರಂದು ಇದನ್ನು ವಿಶ್ವದಾದ್ಯಂತ ಆಚರಿಸುವ ಪ್ರಣಾಲಿ ಶುರುವಾಯಿತು (World Music Day). ಜಗತ್ತಿನಾದ್ಯಂತ ಜನರು ತಮ್ಮ ಮನೆಯಲ್ಲಿ, ಜಗುಲಿಯಲ್ಲೋ, ರಸ್ತೆಯಲ್ಲಿ, ಪಾರ್ಕ್, ಸಭೆಗಳಲ್ಲಿ ಸೇರಿ ಆಚರಿಸುತ್ತ ಈ ದಿನವನ್ನು ಸಂಗೀತಕ್ಕಾಗಿಯೇ ಮೀಸಲಿಟ್ಟಿರುತ್ತಾರೆ. ಅದರ ಪ್ರಕಾರ ತಮ್ಮ ಮನೆಯಲ್ಲಿ ಅದನ್ನು ಆಚರಿಸಿದ್ದನ್ನು ನಿಮ್ಮೊಡನೆ ಪ್ರಮೋದ ಅವರು ಹಂಚಿಕೊಂಡಿದ್ದಾರೆ. ಯುನೆಸ್ಕೋ ಅವರು ಅಕ್ಟೋಬರ್ ೧ ನ್ನು ಜಾಗತಿಕ ಸೌಹಾರ್ದತೆ ಮತ್ತು ಶಾಂತಿಗಾಗಿ ವಿಭಿನ್ನವಾಗಿ “ಇಂಟರ್ನ್ಯಾಷನಲ್ ಮ್ಯೂಸಿಕ್ ಡೇ“ ಅಂತ ಕರೆದರು. ಪ್ರಮೋದ ಅವರ ಮನೆಯಲ್ಲಿ ನಡೆದದ್ದು ಒಂದು ಸಿಂಫನಿಯೇ? ನೀವೇ ತೀರ್ಮಾನಿಸಿರಿ! (ಸಂ)
ಪ್ರಮೋದ ಬರೀತಾರೆ:
ಮುಂಜಾನಿ ದಿನಪತ್ರಿಕೆ ಹಿಡ್ಕೊಂಡು, ಚಹಾ ಕುಡ್ಕೋತ ಇಂದಿನ ಸಮಾಚಾರ ಓದೋಣ ಅಂತ ಆರಾಮ ಕುರ್ಚಿಯಲ್ಲಿ ಮೈ ಊರಿದೆ ... ಆರಾಮ ಕುರ್ಚಿಯಲ್ಲಿ ವಿರಮಿಸೋ ಮಜಾನೇ ಬೇರೆ

ಬಾನುಲಿಯಲ್ಲಿ ಸಣ್ಣಗೆ ಹೆಂಡ್ತಿ ಹಚ್ಚಿದ ಹಾಡು ಕೇಳಿಸ್ತಿತ್ತು...

ಹಾಡು ಹಳೆಯದಾದರೇನು ಭಾವ ನವನವೀನ

ಎದೆಯ ಭಾವ ಹೊಮ್ಮುಹುದಕೆ ಭಾಷೆ ಒರಟು ಯಾನ ||

ಡಾ. ಜಿ ಎಸ ಶಿವರುದ್ರಪ್ಪ ಅವರ ಸಾಹಿತ್ಯದ ಹಾಡು ಮನಸ್ಸಿಗೆ ಮುದ ಕೊಡುತ್ತದೆ. ಖುಷಿಯಲ್ಲಿ ಮೈಮರೆತಾಗ ಕೇಳಿಸಿತು ಗುಂಡನ ದನಿ. ಬಂದಪ ನಮ್ಮ ಹರಟೆ ಗುಂಡ ಅನ್ಕೋತ ಕರೆದೆ - "ಬಾರೋ ಗುಂಡಣ್ಣ, ಬಹಳ ದಿನ ಆಯಿತು ಭೇಟಿಯಾಗಿ"

ಗುಂಡ ಒಳಗೆ ಬಂದು ಕೂತು, ಸಮಾಚಾರ ಪತ್ರಿಕೆ ಪುರವಣಿ ಪತ್ರಿಕೆ ಓದುತ್ತ "ನನಗೂ ಚಾ ಕೊಡಿ ಅಕ್ಕ" ಅಂತ ಕೂಗಿದ. ಪತ್ರಿಕೆ ಓದುತ್ತ ಕೇಳಿದ "ಸತ್ಯಾ, ಏನೋ ಇದು ವಿಶ್ವ ಸಂಗೀತ ದಿನಾಚರಣೆ? ಸಂಗೀತ ಅಂದರೆ ಏನೂ ಅಂತ ಗೊತ್ತಿಲ್ಲದ ನನಗೆ ಬೇರೆ ಏನೂ ತಿಳಿಯೋದಿಲ್ಲ, ಸಂಗೀತ ಅಂದ್ರೆ ಖುಷಿ ಕೊಡೊ ಹಾಡು ಮಾತ್ರ"

ನನಗೂ ಖರೆ ಅನಿಸ್ತು, ಮನಸ್ನಾಗೆ ಅಂದ್ಕೊಂಡೆ ನನಗೆ ಸಂಗೀತ ಕಲ್ಲಿನ ಕಡಲೆ. ನಮ್ಮ ಅಮ್ಮ, ಅಜ್ಜಿ ಆಗಾಗ ಹಾಡುವದನ್ನು ಕೇಳಿದ್ದೇನೆ, ಅದನ್ನು ಬಿಟ್ಟರೆ ಶಾಲೆ ಸಮಯದಲ್ಲಿ ನಮ್ಮ ಫಿಲಿಪ್ಸ್ ಮ್ಯೂಸಿಕ್ ಸಿಸ್ಟಮ್ ಮತ್ತು ರಾಶಿ ಕ್ಯಾಸ್ಸೆಟ್ಸ್ ನಮ್ಮ ಸಂಗೀತ ಜಗತ್ತಾಗಿತ್ತು. ಹೈಸ್ಕೂಲ್ನಲ್ಲಿ ಇದ್ದಾಗ ಬಿಜಾಪುರ್ ತೀಟೆ ಸರ್ (ಇವರು ಬಿಜಾಪುರಿನ ಪ್ರಸಿದ್ಧ ಸಂಗೀತ ಗುರುಗಳು) ಹತ್ತಿರ ಒಂದು ಪ್ರಯತ್ನ ಸಂಗೀತ ಕಲಿಯೋದು ಆಗಿದೆ. ನಾನು, ನಮ್ಮಣ್ಣ ಮದುವೆಯಾದ ಮೇಲೆ ಹಾಡೋರೂ, ಬರೆಯೋರು ನಮ್ಮ ಮನೆಯ ಭಾಗ ಆದ್ರು.

ಸತ್ಯಾ: (ಸತ್ಯಪ್ರಮೋದ, ಲೇಖಕ) ಗುಂಡಾ... ಹಾಡು ಅಂದಕೂಡಲೇ ನಮ್ಮಣ್ಣನ ಒಂದು ಸಾಹಸ ನೆನಪಾಗ್ತದೆ, ಹೇಳ್ತಿನ್ ಕೇಳು,

ನಾವು ಹೈಸ್ಕೂಲ್ನಲ್ಲಿ ಇದ್ದಾಗ ಪ್ರತಿದಿನ ಸರಿಯಾಗಿ ಮಧ್ಯಾಹ್ನ ಬಿ ಆರ್ ಲಕ್ಷ್ಮಣರಾವ್ ಅವರ ಕೆಳಗಿನ ಹಾಡು ನಮಣ್ಣ ಜೋರಾಗಿ ಕೇಳಿಸ್ತಿದ್ದ

’"ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ

ಮಧುರವಾದ ವೇಣುನಾದ

ನನ್ನ ಪ್ರೇಯಸಿ..."

ನಾನು ಮತ್ತು ಅಮ್ಮ ಪ್ರತಿದಿನ ವಿಚಾರ ಮಾಡುತ್ತಿದ್ದೆವು, ಇದೆ ಹಾಡು ಪ್ರತಿದಿನ ಇದೆ ಸಮಯಕ್ಕೆ ಯಾಕೆ ಕೇಳಿಸ್ತಾನೆ? ಆಮೇಲೆ ಗೊತ್ತಾಯಿತು ನಮ್ಮ ಮನೆಯ ಎದರು ಒಂದು ಸುಂದರ ಕೆಂಗುಲಾಬಿ ಹುಡುಗಿ ಶಾಲೆಯಿಂದ ಮನೆಗೆ ಹೋಗುತ್ತಿದ್ದಳು, ಅವ್ಳು ಈ ಹಾಡು ಕೇಳಿ ಏನಾದ್ರು ಅವನ ಕಡೆ ನೋಡ್ತಾಳೇನು ಎಂದು ಹರಸಾಹಸ ಪ್ರಯತ್ನ ಮಾಡ್ತಿದ್ದ"

ಗುಂಡಾ: ನಗುತ್ತ "ಜಾಲಿ ಬಾರಿನಲ್ಲಿ ಪೋಲಿ ಹುಡುಗರು ಹಾಡನ್ನು ಪ್ರಯತ್ನ ಮಾಡಿಲ್ಲ ತಾನೇ?"

ಚಾ ಕೈಯಲ್ಲಿ ಹಿಡ್ಕೊಂಡು ಬಂದ ನನ್ನ ಹೆಂಡ್ತಿ "ಉಡಾಳ್ತನ ಬಿಟ್ಟು ಬೇರೆ ಯೇನಾದ್ರು ಮಾಡಿರೇನು ನೀವ್ ಅಣ್ಣ, ತಮ್ಮ?"

ಸತ್ಯಾ: "ಹಾಡು ಕಾಡತೈತಿ, ಕಾಡು ಹಾಡಿತೈತಿ (ಇಲ್ಲಿ ಕಾಡು - ಕಾಡುವ ಮನ ಎನ್ನುವದರ ಸಂಕ್ಷಿಪ್ತ).

ಕೆಲವು ಹಾಡು ನಮಗೆ ಬಹಳ ಕಾಡ್ತವಾ, ನನ್ನ ಪ್ರಕಾರ ಎಲ್ಲರಿಗೂ ಕೆಲವು ಅವರದೇ ಪ್ರೀತಿಯ ಹಾಡುಗಳು ಇರ್ತಾವ, ಅವರ ಮನಸ್ಸಿನ ಭಾವದ ಪ್ರಕಾರ ಅವರ ಮನದಲ್ಲಿ ಅವು ಮೂಡ್ತಾವ... ನಂಗಂತ್ತೂ ಇದು ಖರೆ ನೋಡಪ್ಪ"

"ಗುಂಡಣ್ಣ ನಿಮಗೆ ಇವರ ಒಂದು ಗುಟ್ಟು ಹೇಳ್ತಿನಿ ಕೇಳ್ರಿ...

ಇವರು ಅವರ ಅಣ್ಣ ನೌಕ್ರಿಗೆ ಊರ ಬಿಟ್ಟು ಬೇರೆ ಕಡೆ ಹೋದಾಗ ಇವರು ಕೇಳ್ತಿದಿದ್ದು ಹಾಡು ಯಾವ್ದು ಗೊತ್ತಾ?

ನಾಮ್ ಸಿನೆಮಾದ "ತೂ ಕಲ್ ಚಲಜಾಯೆಗಾ ತೋ ಮೈ  ಕ್ಯಾ ಕರೂಂಗ, ತೂ ಯಾದ್ ಬಹುತ್ ಆಯೇಗಾ ತೋ ಮೈ ಕ್ಯಾ ಕರೂಂಗsss"

ಉಡಾಳ್ತನ ಅಷ್ಟೇ ಅಲ್ಲ ಭಾವುಕ ಕೂಡ ಇದ್ರು ಇವರಿಬ್ಬರು"

ನಾನು ಸಣ್ಣಗೆ ಇಬ್ಬರಿಗೂ ಕೇಳಿಸೋ ಹಂಗೆ ಹಾಡಿದೆ (ಒಂದು ಸಾಲು ಹೆಚ್ಚಿಗೆ ಸೇರಿಸಿ)

"ನನ್ನ ಹಾಡು ನನ್ನದು,

ನನ್ನ ಭಾವ ನನ್ನದು,

ನನ್ನ ರಾಗ ನನ್ನದು

ನನ್ನ ತಾಳ ನನ್ನದು

ನನ್ನ ಹಾಡು ನನ್ನದು"

ಗುಂಡ: ಈ ಮಾತಿಗೆ ನನಗೆ ಒಂದ್ ಹಾಡು ನೆನಪಾಯಿತು

"ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ,

ಕರೆಯುವೆ ಕೈ ಬೀಸಿ,

ಬತ್ತಿದೆದೆಯಲ್ಲಿ ಬೆಳಿಯಿರಿ ಹಸಿರನು,

ಪ್ರೀತಿಯ ಮಳೆ ಸುರಿಸಿ"

ಭಟ್ಟರು ಈ ಹಾಡಿನಲ್ಲಿ ಎಷ್ಟು ಚೆನ್ನಾಗಿ ಭಾವನೆಗಳ ಮಳೆ ಸುರಿಸಿದ್ದಾರೆ, ಅರ್ಥಕ್ಕೆ ಒತ್ತು ಕೊಡಬ್ಯಾಡ್ರಿ, ನೀವು ಹಾಡಿನ ಭಾವ ಕೇಳಿ ಆನಂದ್ ಪಡೀರಿ.

ಸತ್ಯಾ: ಹಾಡಿನ ಅರ್ಥ ಅಂದ ಕೂಡ್ಲೇ ಒಂದ್ ಸಾಲು ನೆನಪಾಯ್ತು ನೋಡಪ್ಪ...

"ಮಾತು ಮಾತು ಮಥಿಸಿ ಬಂದ ನಾದದ ನವನೀತಾ

ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ

ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ"

ಬೇಂದ್ರೆ ಅಜ್ಜಾ ಹೇಳುವಂಗೆ ಮಾತು ಮಾತು ಮಥಿಸಿ ಹುಟ್ಟುವ ನಾದದ ನವನೀತವೇ ಕಾವ್ಯ, ಅದರಲ್ಲಿ ಅರ್ಥ ಅನ್ನೂದು ಗೌಣ... ಮತ್ತ ಗೌಣ ಅಂತ ಅದನ್ನ ಕಡೆಗಾಣಿಸೋದಲ್ಲ... ಅದು ಭಾವಕ್ಕೆ ಬಿಟ್ಟದ್ದು

ಮಾತು ಹಿಂಗಾ ಓಡ್ತಿತ್ತು, ಮಗರಾಯ ಒಳಗೆ ಬಂದ

ಮಗ: ಅಪ್ಪಾ... ಬಾಜೂ ಮನೆ ಮಾಳಗಿ ಸೋರಕತ್ತಾದ, ಅದಕ್ಕೆ ನಾವೆಲ್ಲ ಹುಡುಗರು "ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ" ಅಂತ ಕೂಗಿ ಹಾಡಿದೆವು

ಸತ್ಯಾ: ಕೇಳ್ರಪ್ಪ, ಇವ ಹಾಡಿನ ಭಾವನೆ ಬಿಟ್ಟು ಅರ್ಥ ಹುಡುಕ್ಯಾನ...

ಮಗನೆ sss ಕೇಳಪ್ಪ.  "ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ" ಅಂದರೆ ಬಾಜೂಕಿನ ಮನಿಯವರ ಅಜ್ಞಾನದಿಂದ ಮನಿ ಸೋರುದು ಅಲ್ಲ... ಮನಗಂಡ ಮಳಿ ಕಾರಣ ಸೋರಕತ್ತಾದ.

ಗುಂಡಣ್ಣ ಬಾರಪ್ಪ... ನಾವು ಹೋಗಿ ಸಹಾಯ ಮಾಡೋಣ...

ಬಾನುಲಿ ಹಾಡತೊಡಗಿತು

ಬಾ ಮಳೆಯೇ ಬಾ

ಬಾ ಮಳೆಯೇ ಬಾ

ಅಷ್ಟು ಬಿರುಸಾಗಿ ಬಾರದಿರು...

ಸತ್ಯಪ್ರಮೋದ ಲಕ್ಕುಂಡಿ, ಸ್ಲೌ,,  ಯು ಕೆ

 

 

ಕೃಷ್ಣೆ – ತುಂಗೆಯರ ನಾಡಿನಲ್ಲಿ ಹರಿದಾಸಸಾಹಿತ್ಯ – ಕೆಲವು ಅಂಶಗಳು.

****************************

ಸಾಹಿತ್ಯದ ಮೂಲ ಉದ್ದೇಶವೇ ಜೀವನದ ಮೌಲ್ಯಗಳನ್ನು ತಿಳಿಸಿ ಸಾಮಾನ್ಯರ ಬದುಕನ್ನು ಉದಾತ್ತಗೊಳಿಸುವುದು.  ಕನ್ನಡ ಸಾಹಿತ್ಯದಲ್ಲಿ ಈ ಉದ್ದೇಶ ಶಿವಶರಣರಿಂದಲೂ ಹರಿದಾಸರಿಂದಲೂ ಸಾಧಿತವಾಗಿರುವುದನ್ನು ಕಾಣುತ್ತೇವೆ. ಹರಿದಾಸರ ಸಾಧನೆ ಮೂಲವಾಗಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಆದರೂ ಅವರು ಸಾಮಾಜಿಕ ಜೀವನವನ್ನು ಕಡೆಗಣಿಸಿದವರಲ್ಲ. ಕಾವ್ಯ ಸೃಷ್ಟಿ ಮಾಡುವ ಕವಿ ಸಮಾಜದಿಂದಲೇ ಮೂಡಿ ಬಂದಿರುತ್ತಾನೆ, ಆದ್ದರಿಂದ ಸಮಾಜವನ್ನು ಬಿಟ್ಟು ಪ್ರತ್ಯೇಕವಾಗಿ ಉಳಿದ ಸಾಹಿತ್ಯಕ್ಕೆ ಇಲ್ಲಿ ಅಸ್ತಿತ್ವ ಇಲ್ಲ. ಕಾವ್ಯ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಸಮಾಜ ಮತ್ತು ಸಾಹಿತ್ಯಗಳ ಸಂಬಂಧ ಜೀವಂತವಾಗಿ, ಪರಸ್ಪರ ಪೂರಕವಾಗಿ ಇರಬೇಕಾದ ಅಗತ್ಯ ಇದೆ. 

ಕರ್ನಾಟಕದಲ್ಲಿ ಭಕ್ತಿಯ ಹೊನಲನ್ನು ಜನಸಾಮಾನ್ಯರ ಭಾಷೆ ಕನ್ನಡಕ್ಕೆ ತಂದ ಯಶಸ್ಸು ಶರಣರ ವಚನಗಳು ಮತ್ತು ದಾಸರ ಸಾಹಿತ್ಯಕ್ಕೆ ಸಲ್ಲುತ್ತದೆ. ವಚನಕಾರರ ಮೂಲ ಕಾಳಜಿ ಸಾಮಾಜಿಕವಾಗಿದ್ದರೆ, ದಾಸಸಾಹಿತ್ಯದ ಪ್ರಮುಖ ಧ್ಯೇಯ ಭಕ್ತಿಸಿದ್ಧಾಂತವಾಗಿತ್ತು ಅನ್ನುವುದು ಸ್ಪಷ್ಟ.
ಧರ್ಮದ ಮೂಲಕ ಸಮಾಜವನ್ನು ಕಾಣಲು, ತಿದ್ದಲು ಶರಣರು ಮತ್ತು ದಾಸರು ಈ ಅಗತ್ಯವನ್ನು ಮನಗಂಡರು. ಧರ್ಮ ಮುಖ್ಯ ಮಾಧ್ಯಮವಾದರೆ ಸಮಾಜ ಚಿಂತನೆ ಇವರ ಮುಖ್ಯ ಕಾಳಜಿಯಾಗಿದೆ. ಅಂಧಾಚರಣೆಯ ನಿರ್ಮೂಲನ, ವ್ಯಕ್ತಿತ್ವ ನಿರ್ಮಾಣ, ತನ್ಮೂಲಕ ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೆ ಶರಣರು ಮತ್ತು ದಾಸರು ಯತ್ನಿಸಿದರು. ಈ ಯತ್ನದ ಕಾರಣವಾಗಿ ವಚನಗಳು, ಕೀರ್ತನೆಗಳು, ಸುಳಾದಿ ಮತ್ತು ಉಗಾಭೋಗಗಳು ಮೂಡಿಬಂದವು. ಭಕ್ತಿಸಿದ್ಧಾಂತದ ಜೊತೆಗೆ ಸಚ್ಚಾರಿತ್ರ್ಯ, ಸದಾಚಾರ ಹಾಗೂ ಸಾತ್ವಿಕ ಜೀವನದ ಕಡೆಗೂ ಈ ಸಾಹಿತ್ಯದ ಹರಿವಿದೆ. ಲೋಕ ನೀತಿಯ ಮಾತುಗಳಲ್ಲಿ ಸುಖಜೀವನದ ಸಂದೇಶ ನೀಡುವ ಮೂಲಕ ಸಾರ್ಥಕ ಬದುಕಿನ ಕರೆ ನೀಡಿದ್ದಾರೆ ಎನ್ನುವುದೂ ಸತ್ಯ.

ದಾಸ ಸಾಹಿತ್ಯದಲ್ಲಿ ಹಲವಾರು ರೀತಿಯ ರಚನೆಗಳಿವೆ – ಕೀರ್ತನೆಗಳು, ಸುಳಾದಿ, ಉಗಾಭೋಗಗಳು ಮುಖ್ಯವಾದವು. ಇವೆಲ್ಲ ರಚನೆಗಳು ಮೂಲವಾಗಿ ಸಂಗೀತಕ್ಕೆ ಒಳಪಡುವ ರೂಪದಲ್ಲಿವೆ. ಸುಳಾದಿ ಮತ್ತು ಉಗಾಭೋಗಗಳಿಗೆ ವಚನಸಾಹಿತ್ಯ ಪ್ರಕಾರದ ಪ್ರೇರಣೆ ಇರಬಹುದು ಎನ್ನುವ ಮಾತಿದೆ. ಇನ್ನು ಹಲವರ ಪ್ರಕಾರ ಶಿವಶರಣರ ವಚನಗಳು ಉಕ್ತಿಗಳು, ದಾಸಸಾಹಿತ್ಯ ಗೇಯ ಪ್ರಕಾರ - ಹೀಗಾಗಿ ಸಂಗೀತದ ಛಾಯೆರುತ್ತದೆ ಎನ್ನುವುದು. ಸುಳಾದಿ ಮತ್ತು ಉಗಾಭೋಗಗಳಲ್ಲಿ ಧಾರ್ಮಿಕ ವಿಚಾರಗಳು, ಆಧ್ಯಾತ್ಮಿಕ ತತ್ವಗಳು ಮತ್ತು ದೈವ ಸ್ತುತಿಗಳ ನಿರೂಪಣೆ ಇದೆ. ಭಕ್ತನಾದವನ ಆರ್ತಭಾವ ಮತ್ತೂ ಅಂತರಂಗದರ್ಶನವು ಆಗುತ್ತದೆ.

ಕೃಷ್ಣ ತುಂಗೆಯರ ಮಧ್ಯದಲ್ಲಿರುವ ರಾಯಚೂರು ಜಿಲ್ಲೆ ಹಲವು ರೀತಿಯ ಕಲೆ ಸಾಹಿತ್ಯ. ಸಂಸ್ಕೃತಿಗಳ ನೆಲೆಬೀಡಾಗಿದೆ. ಹರಿದಾಸ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಹರಿದಾಸರ ತೊಟ್ಟಿಲು ಎಂದು ಹೆಸರಾಗಿದೆ.

ಹರಿದಾಸ ಸಾಹಿತ್ಯವನ್ನು ವಿದ್ವಾಂಸರು ಹಲವು ರೀತಿಗಳಲ್ಲಿ ವಿಭಾಗಿಸಿದ್ದಾರೆ. ಶ್ರೀ ರಾ. ಸ್ವಾ. ಪಂಚಮುಖಿಯವರ ಪ್ರಕಾರ 4 ಘಟ್ಟಗಳಿವೆ – 1. ಮಧ್ವಾಚಾರ್ಯರ ಶಿಷ್ಯ ನರಹರಿ ತೀರ್ಥರ ಕಾಲ, 2. ಕೃಷ್ಣದೇವರಾಯನ ಕಾಲ, 3. ವಿಜಯದಾಸರ ಮತ್ತು ಅವರ ಶಿಷ್ಯರ ಕಾಲ ಮತ್ತು 4. ನಂತರದ ಕಾಲ.

ಡಾ. ಆರ್ ಜಿ ಗುಡಿಯವರು ಇದನ್ನೇ 1. ಶ್ರೀಪಾದರಾಜಪೂರ್ವ ಯುಗ (ಕ್ರಿಶ 879-1450), 2. ಶ್ರೀಪಾದರಾಜಯುಗ (ಕ್ರಿಶ 1451-1565), 3. ವಿಜಯದಾಸಯುಗ (ಕ್ರಿಶ 1566-1809) ಮತ್ತು 4. ಶಿಷ್ಯ-ಪ್ರಶಿಷ್ಯ ಯುಗ (ಕ್ರಿಶ 1810 ರಿಂದ ಮುಂದೆ) ಎಂದು ವಿಭಾಗಿಸಿದ್ದಾರೆ.

ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕಾಲವನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ನರಹರಿತೀರ್ಥರಿಂದ ಪುರಂದರ-ಕನಕದಾಸರವರೆಗಿನ ಅವಧಿ, ವಿಜಯದಾಸರಿಂದ ಜಗನ್ನಾಥದಾಸರವರೆಗಿನ ಅವಧಿ ಮತ್ತು ಅವರ ಶಿಷ್ಯ-ಪ್ರಶಿಷ್ಯರ ಅವಧಿ.

ಕನ್ನಡದಲ್ಲಿ ರಚಿತವಾದ ಹರಿದಾಸಸಾಹಿತ್ಯದ ಮೂಲ ಮಧ್ವಾಚಾರ್ಯರ ಶಿಷ್ಯ ನರಹರಿತೀರ್ಥರಿಂದ (ಅಂಕಿತ: ನರಹರಿ / ರಘುಪತಿ) ಆರಂಭವಾದದ್ದು. ಅವರ ರಚನೆಗಳಲ್ಲಿ ನಾಲ್ಕು ಮಾತ್ರ ಈಗ ಲಭ್ಯವಿವೆ (ಎಂತು ಮರುಳಾದೆ, ತಿಳಕೋ ನಿನ್ನೊಳಗೆ ನೀನು, ಹರಿಯೇ ಇದು ಸರಿಯೇ ಮತ್ತು ಎದುರ್ಯಾರೊ ಗುರುವೇ).

ಅದರ ನಂತರದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳಿಂದ ಬತ್ತಿಹೋದಂತೆನಿಸಿದರೂ, ಅರವತ್ತು ಜನ ’ಆದ್ಯ’ರಿಂದ ಮಂದಗಾಮಿಯಾಗಿ ಮುಂದುವರೆಸಲ್ಪಟ್ಟಿತು (ಶ್ರೀ ಗೋರೆಬಾಳು ಹನುಮಂತರಾಯರು / ಕಪಟರಾಳ ಕೃಷ್ಣರಾಯರು). ಸಂಖ್ಯೆಯಲ್ಲಿ ಮಹತ್ವಪೂರ್ಣವಲ್ಲದಿದ್ದರೂ, ಈ ರಚನೆಗಳ ಪ್ರಭಾವ ಪುರಂದರ-ಕನಕರ ಮೇಲೆ ಆಗಿರುವುದಂತೂ ಸತ್ಯ ಎನ್ನುವುದು ವಿದ್ವಾಂಸರ ಅಭಿಪ್ರಾಯ.

ದಾಸಸಾಹಿತ್ಯವಾಹಿನಿ ಅಲ್ಲಿಂದ ಮುಂದೆ ತನ್ನ ಆಳ ವೈಶಾಲ್ಯತೆಗಳನ್ನು ಪಡೆದುಕೊಂಡದ್ದು ಎರಡು ನೂರು ವರ್ಷಗಳ ತರುವಾಯ ಶ್ರೀಪಾದರಾಜರ ಕಾಲದಲ್ಲಿ. ಮುಳುಬಾಗಿಲಿನ ಶ್ರೀಪಾದರಾಜರು ಶ್ರೀರಂಗವಿಟ್ಠಲ ಅನ್ನುವ ಅಂಕಿತದಲ್ಲಿ ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಅವನ್ನು ಪೂಜಾವಿಧಾನಗಳ ಅವಿಭಾಜ್ಯ ಅಂಗವಾಗಿ ಹಾಡಿಸಲೂ ಆರಂಭಿಸಿದರು.

ಶ್ರೀಪಾದರಾಜರ ಶಿಷ್ಯ ವ್ಯಾಸರಾಜರದು ಹರಿದಾಸಸಾಹಿತ್ಯದ ಅಭಿವೃದ್ಧಿಯಲ್ಲಿ ವಿಶೇಷ ಸ್ಥಾನವಿದೆ. ಸಿರಿಕೃಷ್ಣ ಅಂಕಿತದಲ್ಲಿ ಅವರು ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಕೀರ್ತನೆಗಳಿಗೆ ಸಂಗೀತ-ನರ್ತನಗಳ ಸಂಯೋಜನೆ ಇವರ ಕಾಲದಲ್ಲಿ ನಡೆದು, ಕೀರ್ತನೆಗಳು ಜನಪ್ರಿಯವಾದವು. ಮಠಾಧಿಪತಿಗಳೂ, ವಿಜಯನಗರದ ರಾಜಗುರುಗಳೂ ಆಗಿದ್ದ ವ್ಯಾಸರಾಜರು ವ್ಯಾಸಕೂಟ (ಸಂಸ್ಕೃತ ಗ್ರಂಥ-ವ್ಯಾಖ್ಯಾನಕಾರರು) ಮತ್ತು ದಾಸಕೂಟ (ಹರಿದಾಸಸಾಹಿತ್ಯಕಾರರು) ಎರಡಕ್ಕೂ ಸಂರಕ್ಷಕರಾಗಿದ್ದರು.

ವ್ಯಾಸರಾಜರ ಶಿಷ್ಯ ವಾದಿರಾಜರು ಸಂಸ್ಕೃತವಲ್ಲದೇ, ಕನ್ನಡದಲ್ಲೂ ಅನೇಕ ಕೃತಿಗಳನ್ನು ಹಯವದನ ಎಂಬ ಅಂಕಿತದಲ್ಲಿ ರಚಿಸಿದರು. ಜಾನಪದ ಸಾಹಿತ್ಯ ಪ್ರಕಾರಗಳನ್ನೂ ಅಳವಡಿಸಿಕೊಂಡರು ಅಲ್ಲದೇ ತುಳು ಭಾಷೆಯಲ್ಲೂ ರಚನೆಗಳನ್ನು ಮಾಡಿದರು.

ಈ ಹಂತದಲ್ಲಿದ್ದಾಗ, ದಾಸಸಾಹಿತ್ಯವನ್ನು ಶಿಖರಪ್ರಾಯವಾಗಿಸಿದ ಕೀರ್ತಿ ಪುರಂದರದಾಸರು ಮತ್ತು ಕನಕದಾಸರಿಗೆ ಸಲ್ಲಬೇಕು. ಅನೇಕ ಆಯಾಮಗಳಲ್ಲಿ ದಾಸಸಾಹಿತ್ಯದ ಬೆಳವಣಿಗೆ, ಜನಪ್ರಿಯತೆಗೆ ಕಾರಣವಾದ ವಿಜಯನಗರದ ಉಚ್ಛ್ರಾಯದ ಈ ಕಾಲ ’ದಾಸಸಾಹಿತ್ಯದ ಸುವರ್ಣಯುಗ’ ಎನ್ನಿಸಿಕೊಂಡಿತು.

ಅಪಾರ ಕೀರ್ತನೆಗಳನ್ನು, ಸುಳಾದಿಗಳನ್ನು, ಉಗಾಭೋಗ ಮತ್ತಿತರ ಪ್ರಕಾರಗಳನ್ನು ರಚಿಸುವ ಮೂಲಕ ಪುರಂದರದಾಸರು (ಪುರಂದರವಿಟ್ಠಲ) ದಾಸಸಹಿತ್ಯ-ಸಂಗೀತಕ್ಕೆ ಅಪಾರ ಕೊಡುಗೆ ನೀಡಿ ’ಕರ್ನಾಟಕ ಸಂಗೀತದ ಪಿತಾಮಹ’ ಎನ್ನಿಸಿದರು. ತಮ್ಮ ರಚನೆಗಳಲ್ಲಿ ಬುಡುಬುಡುಕೆ ಪದ, ಲಾವಣಿಯಂತಹ ಜಾನಪದ ಮಟ್ಟುಗಳನ್ನು ಧಾರಾಳವಾಗಿ ಬಳಸಿಕೊಂಡರು. ವೇದಾಂತ ಮತ್ತು ಜನಸಾಮಾನ್ಯರನ್ನು ಬೆಸೆದರು.

ಇವರ ಸಮಕಾಲೀನರಾದ ಕನಕದಾಸರು (ಕಾಗಿನೆಲೆಯಾದಿಕೇಶವ) ತಮ್ಮ ವಿಶಿಷ್ಟ ವ್ಯಕ್ತಿತ್ವ, ಕ್ರಾಂತಿಕಾರಿ ಧೋರಣೆ ಹಾಗೂ ಕಾವ್ಯಶಕ್ತಿಗಳಿಂದ ಮಹತ್ವದ ಸ್ಥಾನ ಪಡೆದವರು. ಒಗಟಿನಂತಿರುವ ’ಮುಂಡಿಗೆ’ ಎಂಬ ಹೊಸ ಕಾವ್ಯಪ್ರಕಾರವನ್ನು ದಾಸಸಾಹಿತ್ಯದಲ್ಲಿ ಸೇರಿಸಿದ್ದಲ್ಲದೇ, ಡೊಳ್ಳಿನ ಹಾಡು ಮತ್ತು ಕಣಪದಗಳ ರಚನೆಯಿಂದ ಜಾನಪದದ ಸೊಗಡನ್ನೂ ತಂದರು.

ವಿಜಯನಗರ ಸಾಮ್ರಾಜ್ಯದ ಪತನಾನಂತರ ದಾಸಸಾಹಿತ್ಯವು ತನ್ನ ಅವನತಿಯತ್ತ ಸಾಗಿತು. ಆ ಕಾಲದ ರಾಜಕೀಯ, ಸಾಮಾಜಿಕ ಅಸ್ಥಿರತೆಗಳ ಕಾವು ತಟ್ಟಿದರೂ, ಈ ಸಾಹಿತ್ಯವಾಹಿನಿಯು ಪೂರ್ತಿ ಬತ್ತದೇ ಹರಿಯುತ್ತಿತ್ತು ಅನ್ನುವುದಕ್ಕೆ ಬಿಜಾಪುರ (ಈಗಿನ ವಿಜಯಪುರ) ಪ್ರಾಂತದ ಕಾಖಂಡಕಿ ಮಹಿಪತಿರಾಯರು ಮತ್ತು ಅವರ ಮಗ ಕೃಷ್ಣರಾಯರಿಂದ ರಚಿತವಾದ ಅನೇಕ ಕೃತಿಗಳೇ ಸಾಕ್ಷಿ. ಕೋಲಾಟದ ಪದ, ಕೊರವಂಜಿಯ ಪದ, ಸುಗ್ಗಿಪದಗಳಂತಹ ಜಾನಪದ ಮಟ್ಟುಗಳು ಇವರ ರಚನೆಗಳಲ್ಲಿ ಕಂಡುಬರುತ್ತವೆ.

ಇಲ್ಲಿಂದ ಮುಂದೆ ಹರಿದಾಸಸಾಹಿತ್ಯಕ್ಕೆ ಮತ್ತೆ ಚಾಲನೆ ದೊರೆತದ್ದು ಮಂತ್ರಾಲಯದ ರಾಘವೇಂದ್ರರ (ಕೃಷ್ಣ) ಕಾಲದಲ್ಲಿ. ಹಂಪಿಯಲ್ಲಿ ಕೇಂದ್ರಿತವಾಗಿದ್ದ ಹರಿದಾಸಪಂಥದ ಕೇಂದ್ರ ಮಾನ್ವಿ, ಲಿಂಗಸೂಗೂರು, ಕಾಖಂಡಿಕಿ, ಮಳಖೇಡ ಮೊದಲಾದ ಊರುಗಳಿಗೆ ಹಬ್ಬಿ ಮತ್ತೆ ಬೆಳೆಯತೊಡಗಿತು. ಈ ಸಾಹಿತ್ಯಪ್ರಕಾರವನ್ನು ಮತ್ತೆ ವೈಭವಯುತವಾಗಿಸಿದ್ದು ರಾಯಚೂರು ಜಿಲ್ಲೆಯ ಚೀಕಲಪರವಿ ಗ್ರಾಮದ ವಿಜಯದಾಸರು (ವಿಜಯವಿಟ್ಠಲ). ಭಾವನಾಪ್ರಧಾನವಾಗಿದ್ದ ದಾಸಸಾಹಿತ್ಯ, ಇವರ ಕೃತಿಗಳಲ್ಲಿ ತತ್ವಪ್ರಧಾನವಾಗಿ ಕಂಡುಬರುತ್ತದೆ.

ವಿಜಯದಾಸರ ಸಮಕಾಲೀನರಾದ ಕಾಖಂಡಿಕಿ ಪ್ರಸನ್ನವೆಂಕಟದಾಸರು (ಪ್ರಸನ್ನವೆಂಕಟ), ಶಿಷ್ಯರಾದ ಭಾಗಣ್ಣ (ಗೋಪಾಲವಿಟ್ಠಲ), ತಿಮ್ಮಣ್ಣ (ವೇಣುಗೋಪಾಲ), ಮೋಹನದಾಸರು (ಮೋಹನವಿಠಲ), ಮತ್ತು ಕಲ್ಲೂರು ಸುಬ್ಬಣ್ಣ (ವ್ಯಾಸವಿಠಲ) ಇವರೆಲ್ಲ ತಮ್ಮ ತಮ್ಮ ಕೊಡುಗೆಗಳಿಂದ ದಾಸಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಇವರಲ್ಲಿ ಗೋಪಾಲದಾಸರು (ಭಾಗಣ್ಣ) ವಿಜಯದಾಸರ ತಾತ್ವಿಕವಿಚಾರಧಾರೆಯನ್ನು ಮುಂದುವರಿಸಿದ್ದಲ್ಲದೇ ಸಂಗೀತ, ನರ್ತನ, ಚಿತ್ರಕಲೆಗಳನ್ನೂ ಬಳಸಿಕೊಂಡರು. ಗೋಪಾಲದಾಸರಿಂದ ಪ್ರಭಾವಿತರಾದ ಅವರ ತಮ್ಮಂದಿರಾದ ಸೀನಪ್ಪ (ವರದಗೋಪಾಲವಿಠಲ), ದಾಸಪ್ಪ (ಗುರುಗೋಪಾಲವಿಠಲ), ರಂಗಪ್ಪ (ತಂದೆಗೋಪಾಲವಿಠಲ) ಮತ್ತು ಶಿಷ್ಯ ಐಜಿ ವೆಂಕಟರಾಮಾಚಾರ್ಯ (ವಾಸುದೇವವಿಠಲ) ಅವರೂ ಸಹ ತಮ್ಮನ್ನು ಸಾಹಿತ್ಯಸೇವೆಯಲ್ಲಿ ತೊಡಗಿಸಿಕೊಂಡರು.

ಗೋಪಾಲದಾಸರ ಹೆಸರನ್ನು, ಪರಂಪರೆಯನ್ನು ಉಳಿಸಿದವರಲ್ಲಿ ಜಗನ್ನಾಥದಾಸರು (ಜಗನ್ನಾಥವಿಠಲ) ಪ್ರಮುಖರು. ದಾಸಸಾಹಿತ್ಯ ಪ್ರಕಾರಗಳನ್ನಲ್ಲದೆ ಕನ್ನಡದಲ್ಲಿ ದೊಡ್ಡ ಗ್ರಂಥಗಳನ್ನೂ ರಚಿಸಿದ್ದಾರೆ.

ಅಲ್ಲಿಂದ ಮುಂದೆ, ಹರಿದಾಸಪರಂಪರೆ ಸಾಗಿಬಂದ ದಾಸಪರಂಪರೆಯಲ್ಲಿ ಅನೇಕರು ತಮ್ಮ ಸೇವೆ ಸಲ್ಲಿಸಿದ್ದಾರೆ, ಅವರಲ್ಲಿ ಪ್ರಾಣೇಶದಾಸರು (ಪ್ರಾಣೇಶವಿಠಲ) ಮತ್ತು ಅವರ ಶಿಷ್ಯರ ಪರಂಪರೆಯನ್ನು ಜೀವಂತವಾಗಿಟ್ಟಿರುವ ಅನೇಕ ಹರಿದಾಸರಿದ್ದಾರೆ - ಎಮ್ ಆರ್ ಗೋವಿಂದರಾವ್ (ಗುರುಗವಿಂದವಿಠಲ), ಆರ್ ರಾಮಚಂದ್ರರಾಯರು (ತಂದೆವೆಂಕಟೇಶವಿಠಲ), ಕೋಸಗಿ ಸ್ವಾಮಿರಾಮಾಚಾರ್ಯ (ಶ್ರೀಗುರುಜಗನ್ನಾಥವಿಠಲ), ವಕೀಲ ಸ್ವಾಮಿರಾಯರು (ವರದೇಶವಿಠಲ), ಜೋಳದಹೆಡಗಿ ಶೇಖ್ ಬಡೇಸಾಬ್ (ರಾಮದಾಸ), ವಕೀಲ ಜಿ ಮಧ್ವರಾವ್ (ಮಧ್ವಮುನಿ), ಹೇರೂರು ರಾಮರಾಯರು (ಮೂಲರಾಮ), ಗುರುರಾಜ ಬೆಣಕಲ್ (ನರಹರಿ) ಮತ್ತಿನ್ನೂ ಅನೇಕರನ್ನು ನಾವು ನೆನೆಯಬಹುದು.
ದಾಸಸಾಹಿತ್ಯದಲ್ಲಿ ಮಹಿಳೆಯರು:
ದೈನಂದಿನ ಕಾರ್ಯಕಲಾಪದೊಂದಿಗೆ ದಾಸರ ರಚನೆಗಳನ್ನು ಹಾಡಿಕೊಂಡು ಉಳಿಸಿಕೊಂಡು ಬಂದಿರುವಂತೆಯೇ, ದಾಸಸಾಹಿತ್ಯದ ರಚನೆಯಲ್ಲೂ ಮಹಿಳೆಯರ ಗಮನಾರ್ಹ ಪಾತ್ರವಿದೆ.
ಮೊದಲ ಘಟ್ಟದಲ್ಲಿ ಪುರಂದರ ದಾಸರ ಹೆಂಡತಿ ಸರಸ್ವತೀಬಾಯಿ (ಸಿರಿಪುರಂದರವಿಠಲ) ಮತ್ತು ಮಗಳು ರುಕ್ಮಿಣೀಬಾಯಿ (ತಂದೆಪುರಂದರವಿಠಲ) ಕೃತಿರಚನೆ ಮಾಡಿದ್ದರೆನ್ನಲಾಗಿದ್ದರೂ, ಅವರ ಕೃತಿಗಳು ಈಗ ಉಪಲಬ್ಧವಿಲ್ಲ.

ದ್ವಿತೀಯ ಘಟ್ಟದಲ್ಲಿ ಶ್ರೀರಾಮೇಶ ಅಂಕಿತದೊಂದಿಗೆ ಮುಯ್ಯದ ಪದಗಳು, ಬೀಗರಹಾಡು, ಮೋರೆಗೆ ನೀರು ತಂದ ಹಾಡು ಇತ್ಯಾದಿ ಗಲಗಲಿ ಅವ್ವನವರ ಕೊಡುಗೆ. ಅವರ ಶಿಷ್ಯೆಯಾದ ಭಾಗಮ್ಮ ಅಥವಾ ಪ್ರಯಾಗವ್ವ ಕನ್ನಡದಲ್ಲಿ ಭಾಗವತದ 3ನೆಯ ಸ್ಕಂದ ಬರೆದರು.

ದಾಸಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ಮಹಿಳೆಯರನ್ನು ನೆನೆಯುವಾಗ, ಹೆಳವನಕಟ್ಟೆ ರಂಗ ಅನ್ನುವ ಅಂಕಿತದಲ್ಲಿ ವಿಪುಲವಾಗಿ ಸಾಹಿತ್ಯಸೃಷ್ಟಿ ಮಾಡಿದ ಗೋಪಾಲದಾಸರ ಶಿಷ್ಯೆಯಾದ ಹೆಳವನಕಟ್ಟೆ ಗಿರಿಯಮ್ಮನವರನ್ನು ಮರೆಯುವ ಹಾಗೆಯೇ ಇಲ್ಲ.

ಭೀಮೇಶಕೃಷ್ಣ ಅಂಕಿತದೊಂದಿಗೆ ಅನೇಕ ರಚನೆಗಳನ್ನು ಮಾಡಿದ ಹರಪನಹಳ್ಳಿ ಭೀಮವ್ವನ ಸರಳ ಶೈಲಿಯ ಜನಪ್ರಿಯ. ಅನೇಕ ಪೌರಾಣಿಕ ಕಥೆಗಳನ್ನು ಸರಳಕನ್ನಡದ ಹಾಡುಗಳಾಗಿ ಪರಿವರ್ತಿಸಿದ ಕೀರ್ತಿ ಭೀಮವ್ವನಿಗೆ ಸಲ್ಲುತ್ತದೆ. ಶ್ರಾವಣ ಶುಕ್ರವಾರದ ಹಾಡು, ಶನಿವಾರದ ಹಾಡು ಇತ್ಯಾದಿ ಭೀಮವ್ವನ ಕೃತಿಗಳು ಶ್ರಾವಣಮಾಸದಲ್ಲಿ ಇಂದಿಗೂ ಹಾಡಲ್ಪಡುತ್ತವೆ.

ಈ ಪಟ್ಟಿಗೆ, ಚೆಲ್ಲಮ್ಮ, ಗಣಪಕ್ಕ, ಸುಂದರಾಬಾಯಿ, ಪನ್ನಿ ಲಕ್ಷ್ಮೀಬಾಯಿ, ಲಕ್ಷ್ಮೀದೇವಮ್ಮ ಮುಂತಾದವರೂ ಸೇರುತ್ತಾರೆ. ತಡವಾಗಿಯಾದರೂ ಸ್ವತಃ ಕೃತಿರಚನೆಗೆ ಕೈಹಾಕಿದ ಮಹಿಳೆಯರ ಕೊಡುಗೆಯಿಂದ ದಾಸಸಾಹಿತ್ಯದ ಹರವು, ಆಳ ಹೆಚ್ಚಿದವು ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.

********************************

ಒಟ್ಟಿನಲ್ಲಿ ಕನ್ನಡ ಹರಿದಾಸ ಸಾಹಿತ್ಯವು ವಿಷಯ, ರೂಪ, ಭಾಷೆ, ಪರಿಣಾಮಗಳೆಲ್ಲದರಲ್ಲೂ ವೈಶಿಷ್ಟ್ಯತೆಯನ್ನು ಸಾಧಿಸಿ ಇಂದಿಗೂ ಜೀವಂತವಾಗಿದೆ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ. ಕರ್ನಾಟಕದ ಎಲ್ಲ ಭಾಗಗಳ ಮಹನೀಯರ ಕೊಡುಗೆ ಇದೆಯೆನ್ನುವುದು ಎಷ್ಟು ಸತ್ಯವೋ, ಅದರ ಸಿಂಹಪಾಲು ಕೃಷ್ಣೆ-ತುಂಗೆಯರ ತೀರದ ಪ್ರದೇಶಗಳದ್ದು ಅನ್ನುವುದೂ ಅಷ್ಟೇ ದಿಟ.

ಮೂಲ ಕೃತಿಯ ಲೇಖಕಿ: ಶ್ರೀಮತಿ ಸೀತಾ ಗುಡೂರ್-ಕುಲಕರ್ಣಿ
ಸಾರ ಇಳಿಸಿದವರು: ಲಕ್ಷ್ಮೀನಾರಾಯಣ ಗುಡೂರ್

********************************