ಕೃಷ್ಣೆ – ತುಂಗೆಯರ ನಾಡಿನಲ್ಲಿ ಹರಿದಾಸಸಾಹಿತ್ಯ – ಕೆಲವು ಅಂಶಗಳು.

****************************

ಸಾಹಿತ್ಯದ ಮೂಲ ಉದ್ದೇಶವೇ ಜೀವನದ ಮೌಲ್ಯಗಳನ್ನು ತಿಳಿಸಿ ಸಾಮಾನ್ಯರ ಬದುಕನ್ನು ಉದಾತ್ತಗೊಳಿಸುವುದು.  ಕನ್ನಡ ಸಾಹಿತ್ಯದಲ್ಲಿ ಈ ಉದ್ದೇಶ ಶಿವಶರಣರಿಂದಲೂ ಹರಿದಾಸರಿಂದಲೂ ಸಾಧಿತವಾಗಿರುವುದನ್ನು ಕಾಣುತ್ತೇವೆ. ಹರಿದಾಸರ ಸಾಧನೆ ಮೂಲವಾಗಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಆದರೂ ಅವರು ಸಾಮಾಜಿಕ ಜೀವನವನ್ನು ಕಡೆಗಣಿಸಿದವರಲ್ಲ. ಕಾವ್ಯ ಸೃಷ್ಟಿ ಮಾಡುವ ಕವಿ ಸಮಾಜದಿಂದಲೇ ಮೂಡಿ ಬಂದಿರುತ್ತಾನೆ, ಆದ್ದರಿಂದ ಸಮಾಜವನ್ನು ಬಿಟ್ಟು ಪ್ರತ್ಯೇಕವಾಗಿ ಉಳಿದ ಸಾಹಿತ್ಯಕ್ಕೆ ಇಲ್ಲಿ ಅಸ್ತಿತ್ವ ಇಲ್ಲ. ಕಾವ್ಯ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಸಮಾಜ ಮತ್ತು ಸಾಹಿತ್ಯಗಳ ಸಂಬಂಧ ಜೀವಂತವಾಗಿ, ಪರಸ್ಪರ ಪೂರಕವಾಗಿ ಇರಬೇಕಾದ ಅಗತ್ಯ ಇದೆ. 

ಕರ್ನಾಟಕದಲ್ಲಿ ಭಕ್ತಿಯ ಹೊನಲನ್ನು ಜನಸಾಮಾನ್ಯರ ಭಾಷೆ ಕನ್ನಡಕ್ಕೆ ತಂದ ಯಶಸ್ಸು ಶರಣರ ವಚನಗಳು ಮತ್ತು ದಾಸರ ಸಾಹಿತ್ಯಕ್ಕೆ ಸಲ್ಲುತ್ತದೆ. ವಚನಕಾರರ ಮೂಲ ಕಾಳಜಿ ಸಾಮಾಜಿಕವಾಗಿದ್ದರೆ, ದಾಸಸಾಹಿತ್ಯದ ಪ್ರಮುಖ ಧ್ಯೇಯ ಭಕ್ತಿಸಿದ್ಧಾಂತವಾಗಿತ್ತು ಅನ್ನುವುದು ಸ್ಪಷ್ಟ.
ಧರ್ಮದ ಮೂಲಕ ಸಮಾಜವನ್ನು ಕಾಣಲು, ತಿದ್ದಲು ಶರಣರು ಮತ್ತು ದಾಸರು ಈ ಅಗತ್ಯವನ್ನು ಮನಗಂಡರು. ಧರ್ಮ ಮುಖ್ಯ ಮಾಧ್ಯಮವಾದರೆ ಸಮಾಜ ಚಿಂತನೆ ಇವರ ಮುಖ್ಯ ಕಾಳಜಿಯಾಗಿದೆ. ಅಂಧಾಚರಣೆಯ ನಿರ್ಮೂಲನ, ವ್ಯಕ್ತಿತ್ವ ನಿರ್ಮಾಣ, ತನ್ಮೂಲಕ ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೆ ಶರಣರು ಮತ್ತು ದಾಸರು ಯತ್ನಿಸಿದರು. ಈ ಯತ್ನದ ಕಾರಣವಾಗಿ ವಚನಗಳು, ಕೀರ್ತನೆಗಳು, ಸುಳಾದಿ ಮತ್ತು ಉಗಾಭೋಗಗಳು ಮೂಡಿಬಂದವು. ಭಕ್ತಿಸಿದ್ಧಾಂತದ ಜೊತೆಗೆ ಸಚ್ಚಾರಿತ್ರ್ಯ, ಸದಾಚಾರ ಹಾಗೂ ಸಾತ್ವಿಕ ಜೀವನದ ಕಡೆಗೂ ಈ ಸಾಹಿತ್ಯದ ಹರಿವಿದೆ. ಲೋಕ ನೀತಿಯ ಮಾತುಗಳಲ್ಲಿ ಸುಖಜೀವನದ ಸಂದೇಶ ನೀಡುವ ಮೂಲಕ ಸಾರ್ಥಕ ಬದುಕಿನ ಕರೆ ನೀಡಿದ್ದಾರೆ ಎನ್ನುವುದೂ ಸತ್ಯ.

ದಾಸ ಸಾಹಿತ್ಯದಲ್ಲಿ ಹಲವಾರು ರೀತಿಯ ರಚನೆಗಳಿವೆ – ಕೀರ್ತನೆಗಳು, ಸುಳಾದಿ, ಉಗಾಭೋಗಗಳು ಮುಖ್ಯವಾದವು. ಇವೆಲ್ಲ ರಚನೆಗಳು ಮೂಲವಾಗಿ ಸಂಗೀತಕ್ಕೆ ಒಳಪಡುವ ರೂಪದಲ್ಲಿವೆ. ಸುಳಾದಿ ಮತ್ತು ಉಗಾಭೋಗಗಳಿಗೆ ವಚನಸಾಹಿತ್ಯ ಪ್ರಕಾರದ ಪ್ರೇರಣೆ ಇರಬಹುದು ಎನ್ನುವ ಮಾತಿದೆ. ಇನ್ನು ಹಲವರ ಪ್ರಕಾರ ಶಿವಶರಣರ ವಚನಗಳು ಉಕ್ತಿಗಳು, ದಾಸಸಾಹಿತ್ಯ ಗೇಯ ಪ್ರಕಾರ - ಹೀಗಾಗಿ ಸಂಗೀತದ ಛಾಯೆರುತ್ತದೆ ಎನ್ನುವುದು. ಸುಳಾದಿ ಮತ್ತು ಉಗಾಭೋಗಗಳಲ್ಲಿ ಧಾರ್ಮಿಕ ವಿಚಾರಗಳು, ಆಧ್ಯಾತ್ಮಿಕ ತತ್ವಗಳು ಮತ್ತು ದೈವ ಸ್ತುತಿಗಳ ನಿರೂಪಣೆ ಇದೆ. ಭಕ್ತನಾದವನ ಆರ್ತಭಾವ ಮತ್ತೂ ಅಂತರಂಗದರ್ಶನವು ಆಗುತ್ತದೆ.

ಕೃಷ್ಣ ತುಂಗೆಯರ ಮಧ್ಯದಲ್ಲಿರುವ ರಾಯಚೂರು ಜಿಲ್ಲೆ ಹಲವು ರೀತಿಯ ಕಲೆ ಸಾಹಿತ್ಯ. ಸಂಸ್ಕೃತಿಗಳ ನೆಲೆಬೀಡಾಗಿದೆ. ಹರಿದಾಸ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಹರಿದಾಸರ ತೊಟ್ಟಿಲು ಎಂದು ಹೆಸರಾಗಿದೆ.

ಹರಿದಾಸ ಸಾಹಿತ್ಯವನ್ನು ವಿದ್ವಾಂಸರು ಹಲವು ರೀತಿಗಳಲ್ಲಿ ವಿಭಾಗಿಸಿದ್ದಾರೆ. ಶ್ರೀ ರಾ. ಸ್ವಾ. ಪಂಚಮುಖಿಯವರ ಪ್ರಕಾರ 4 ಘಟ್ಟಗಳಿವೆ – 1. ಮಧ್ವಾಚಾರ್ಯರ ಶಿಷ್ಯ ನರಹರಿ ತೀರ್ಥರ ಕಾಲ, 2. ಕೃಷ್ಣದೇವರಾಯನ ಕಾಲ, 3. ವಿಜಯದಾಸರ ಮತ್ತು ಅವರ ಶಿಷ್ಯರ ಕಾಲ ಮತ್ತು 4. ನಂತರದ ಕಾಲ.

ಡಾ. ಆರ್ ಜಿ ಗುಡಿಯವರು ಇದನ್ನೇ 1. ಶ್ರೀಪಾದರಾಜಪೂರ್ವ ಯುಗ (ಕ್ರಿಶ 879-1450), 2. ಶ್ರೀಪಾದರಾಜಯುಗ (ಕ್ರಿಶ 1451-1565), 3. ವಿಜಯದಾಸಯುಗ (ಕ್ರಿಶ 1566-1809) ಮತ್ತು 4. ಶಿಷ್ಯ-ಪ್ರಶಿಷ್ಯ ಯುಗ (ಕ್ರಿಶ 1810 ರಿಂದ ಮುಂದೆ) ಎಂದು ವಿಭಾಗಿಸಿದ್ದಾರೆ.

ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕಾಲವನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ನರಹರಿತೀರ್ಥರಿಂದ ಪುರಂದರ-ಕನಕದಾಸರವರೆಗಿನ ಅವಧಿ, ವಿಜಯದಾಸರಿಂದ ಜಗನ್ನಾಥದಾಸರವರೆಗಿನ ಅವಧಿ ಮತ್ತು ಅವರ ಶಿಷ್ಯ-ಪ್ರಶಿಷ್ಯರ ಅವಧಿ.

ಕನ್ನಡದಲ್ಲಿ ರಚಿತವಾದ ಹರಿದಾಸಸಾಹಿತ್ಯದ ಮೂಲ ಮಧ್ವಾಚಾರ್ಯರ ಶಿಷ್ಯ ನರಹರಿತೀರ್ಥರಿಂದ (ಅಂಕಿತ: ನರಹರಿ / ರಘುಪತಿ) ಆರಂಭವಾದದ್ದು. ಅವರ ರಚನೆಗಳಲ್ಲಿ ನಾಲ್ಕು ಮಾತ್ರ ಈಗ ಲಭ್ಯವಿವೆ (ಎಂತು ಮರುಳಾದೆ, ತಿಳಕೋ ನಿನ್ನೊಳಗೆ ನೀನು, ಹರಿಯೇ ಇದು ಸರಿಯೇ ಮತ್ತು ಎದುರ್ಯಾರೊ ಗುರುವೇ).

ಅದರ ನಂತರದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳಿಂದ ಬತ್ತಿಹೋದಂತೆನಿಸಿದರೂ, ಅರವತ್ತು ಜನ ’ಆದ್ಯ’ರಿಂದ ಮಂದಗಾಮಿಯಾಗಿ ಮುಂದುವರೆಸಲ್ಪಟ್ಟಿತು (ಶ್ರೀ ಗೋರೆಬಾಳು ಹನುಮಂತರಾಯರು / ಕಪಟರಾಳ ಕೃಷ್ಣರಾಯರು). ಸಂಖ್ಯೆಯಲ್ಲಿ ಮಹತ್ವಪೂರ್ಣವಲ್ಲದಿದ್ದರೂ, ಈ ರಚನೆಗಳ ಪ್ರಭಾವ ಪುರಂದರ-ಕನಕರ ಮೇಲೆ ಆಗಿರುವುದಂತೂ ಸತ್ಯ ಎನ್ನುವುದು ವಿದ್ವಾಂಸರ ಅಭಿಪ್ರಾಯ.

ದಾಸಸಾಹಿತ್ಯವಾಹಿನಿ ಅಲ್ಲಿಂದ ಮುಂದೆ ತನ್ನ ಆಳ ವೈಶಾಲ್ಯತೆಗಳನ್ನು ಪಡೆದುಕೊಂಡದ್ದು ಎರಡು ನೂರು ವರ್ಷಗಳ ತರುವಾಯ ಶ್ರೀಪಾದರಾಜರ ಕಾಲದಲ್ಲಿ. ಮುಳುಬಾಗಿಲಿನ ಶ್ರೀಪಾದರಾಜರು ಶ್ರೀರಂಗವಿಟ್ಠಲ ಅನ್ನುವ ಅಂಕಿತದಲ್ಲಿ ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಅವನ್ನು ಪೂಜಾವಿಧಾನಗಳ ಅವಿಭಾಜ್ಯ ಅಂಗವಾಗಿ ಹಾಡಿಸಲೂ ಆರಂಭಿಸಿದರು.

ಶ್ರೀಪಾದರಾಜರ ಶಿಷ್ಯ ವ್ಯಾಸರಾಜರದು ಹರಿದಾಸಸಾಹಿತ್ಯದ ಅಭಿವೃದ್ಧಿಯಲ್ಲಿ ವಿಶೇಷ ಸ್ಥಾನವಿದೆ. ಸಿರಿಕೃಷ್ಣ ಅಂಕಿತದಲ್ಲಿ ಅವರು ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಕೀರ್ತನೆಗಳಿಗೆ ಸಂಗೀತ-ನರ್ತನಗಳ ಸಂಯೋಜನೆ ಇವರ ಕಾಲದಲ್ಲಿ ನಡೆದು, ಕೀರ್ತನೆಗಳು ಜನಪ್ರಿಯವಾದವು. ಮಠಾಧಿಪತಿಗಳೂ, ವಿಜಯನಗರದ ರಾಜಗುರುಗಳೂ ಆಗಿದ್ದ ವ್ಯಾಸರಾಜರು ವ್ಯಾಸಕೂಟ (ಸಂಸ್ಕೃತ ಗ್ರಂಥ-ವ್ಯಾಖ್ಯಾನಕಾರರು) ಮತ್ತು ದಾಸಕೂಟ (ಹರಿದಾಸಸಾಹಿತ್ಯಕಾರರು) ಎರಡಕ್ಕೂ ಸಂರಕ್ಷಕರಾಗಿದ್ದರು.

ವ್ಯಾಸರಾಜರ ಶಿಷ್ಯ ವಾದಿರಾಜರು ಸಂಸ್ಕೃತವಲ್ಲದೇ, ಕನ್ನಡದಲ್ಲೂ ಅನೇಕ ಕೃತಿಗಳನ್ನು ಹಯವದನ ಎಂಬ ಅಂಕಿತದಲ್ಲಿ ರಚಿಸಿದರು. ಜಾನಪದ ಸಾಹಿತ್ಯ ಪ್ರಕಾರಗಳನ್ನೂ ಅಳವಡಿಸಿಕೊಂಡರು ಅಲ್ಲದೇ ತುಳು ಭಾಷೆಯಲ್ಲೂ ರಚನೆಗಳನ್ನು ಮಾಡಿದರು.

ಈ ಹಂತದಲ್ಲಿದ್ದಾಗ, ದಾಸಸಾಹಿತ್ಯವನ್ನು ಶಿಖರಪ್ರಾಯವಾಗಿಸಿದ ಕೀರ್ತಿ ಪುರಂದರದಾಸರು ಮತ್ತು ಕನಕದಾಸರಿಗೆ ಸಲ್ಲಬೇಕು. ಅನೇಕ ಆಯಾಮಗಳಲ್ಲಿ ದಾಸಸಾಹಿತ್ಯದ ಬೆಳವಣಿಗೆ, ಜನಪ್ರಿಯತೆಗೆ ಕಾರಣವಾದ ವಿಜಯನಗರದ ಉಚ್ಛ್ರಾಯದ ಈ ಕಾಲ ’ದಾಸಸಾಹಿತ್ಯದ ಸುವರ್ಣಯುಗ’ ಎನ್ನಿಸಿಕೊಂಡಿತು.

ಅಪಾರ ಕೀರ್ತನೆಗಳನ್ನು, ಸುಳಾದಿಗಳನ್ನು, ಉಗಾಭೋಗ ಮತ್ತಿತರ ಪ್ರಕಾರಗಳನ್ನು ರಚಿಸುವ ಮೂಲಕ ಪುರಂದರದಾಸರು (ಪುರಂದರವಿಟ್ಠಲ) ದಾಸಸಹಿತ್ಯ-ಸಂಗೀತಕ್ಕೆ ಅಪಾರ ಕೊಡುಗೆ ನೀಡಿ ’ಕರ್ನಾಟಕ ಸಂಗೀತದ ಪಿತಾಮಹ’ ಎನ್ನಿಸಿದರು. ತಮ್ಮ ರಚನೆಗಳಲ್ಲಿ ಬುಡುಬುಡುಕೆ ಪದ, ಲಾವಣಿಯಂತಹ ಜಾನಪದ ಮಟ್ಟುಗಳನ್ನು ಧಾರಾಳವಾಗಿ ಬಳಸಿಕೊಂಡರು. ವೇದಾಂತ ಮತ್ತು ಜನಸಾಮಾನ್ಯರನ್ನು ಬೆಸೆದರು.

ಇವರ ಸಮಕಾಲೀನರಾದ ಕನಕದಾಸರು (ಕಾಗಿನೆಲೆಯಾದಿಕೇಶವ) ತಮ್ಮ ವಿಶಿಷ್ಟ ವ್ಯಕ್ತಿತ್ವ, ಕ್ರಾಂತಿಕಾರಿ ಧೋರಣೆ ಹಾಗೂ ಕಾವ್ಯಶಕ್ತಿಗಳಿಂದ ಮಹತ್ವದ ಸ್ಥಾನ ಪಡೆದವರು. ಒಗಟಿನಂತಿರುವ ’ಮುಂಡಿಗೆ’ ಎಂಬ ಹೊಸ ಕಾವ್ಯಪ್ರಕಾರವನ್ನು ದಾಸಸಾಹಿತ್ಯದಲ್ಲಿ ಸೇರಿಸಿದ್ದಲ್ಲದೇ, ಡೊಳ್ಳಿನ ಹಾಡು ಮತ್ತು ಕಣಪದಗಳ ರಚನೆಯಿಂದ ಜಾನಪದದ ಸೊಗಡನ್ನೂ ತಂದರು.

ವಿಜಯನಗರ ಸಾಮ್ರಾಜ್ಯದ ಪತನಾನಂತರ ದಾಸಸಾಹಿತ್ಯವು ತನ್ನ ಅವನತಿಯತ್ತ ಸಾಗಿತು. ಆ ಕಾಲದ ರಾಜಕೀಯ, ಸಾಮಾಜಿಕ ಅಸ್ಥಿರತೆಗಳ ಕಾವು ತಟ್ಟಿದರೂ, ಈ ಸಾಹಿತ್ಯವಾಹಿನಿಯು ಪೂರ್ತಿ ಬತ್ತದೇ ಹರಿಯುತ್ತಿತ್ತು ಅನ್ನುವುದಕ್ಕೆ ಬಿಜಾಪುರ (ಈಗಿನ ವಿಜಯಪುರ) ಪ್ರಾಂತದ ಕಾಖಂಡಕಿ ಮಹಿಪತಿರಾಯರು ಮತ್ತು ಅವರ ಮಗ ಕೃಷ್ಣರಾಯರಿಂದ ರಚಿತವಾದ ಅನೇಕ ಕೃತಿಗಳೇ ಸಾಕ್ಷಿ. ಕೋಲಾಟದ ಪದ, ಕೊರವಂಜಿಯ ಪದ, ಸುಗ್ಗಿಪದಗಳಂತಹ ಜಾನಪದ ಮಟ್ಟುಗಳು ಇವರ ರಚನೆಗಳಲ್ಲಿ ಕಂಡುಬರುತ್ತವೆ.

ಇಲ್ಲಿಂದ ಮುಂದೆ ಹರಿದಾಸಸಾಹಿತ್ಯಕ್ಕೆ ಮತ್ತೆ ಚಾಲನೆ ದೊರೆತದ್ದು ಮಂತ್ರಾಲಯದ ರಾಘವೇಂದ್ರರ (ಕೃಷ್ಣ) ಕಾಲದಲ್ಲಿ. ಹಂಪಿಯಲ್ಲಿ ಕೇಂದ್ರಿತವಾಗಿದ್ದ ಹರಿದಾಸಪಂಥದ ಕೇಂದ್ರ ಮಾನ್ವಿ, ಲಿಂಗಸೂಗೂರು, ಕಾಖಂಡಿಕಿ, ಮಳಖೇಡ ಮೊದಲಾದ ಊರುಗಳಿಗೆ ಹಬ್ಬಿ ಮತ್ತೆ ಬೆಳೆಯತೊಡಗಿತು. ಈ ಸಾಹಿತ್ಯಪ್ರಕಾರವನ್ನು ಮತ್ತೆ ವೈಭವಯುತವಾಗಿಸಿದ್ದು ರಾಯಚೂರು ಜಿಲ್ಲೆಯ ಚೀಕಲಪರವಿ ಗ್ರಾಮದ ವಿಜಯದಾಸರು (ವಿಜಯವಿಟ್ಠಲ). ಭಾವನಾಪ್ರಧಾನವಾಗಿದ್ದ ದಾಸಸಾಹಿತ್ಯ, ಇವರ ಕೃತಿಗಳಲ್ಲಿ ತತ್ವಪ್ರಧಾನವಾಗಿ ಕಂಡುಬರುತ್ತದೆ.

ವಿಜಯದಾಸರ ಸಮಕಾಲೀನರಾದ ಕಾಖಂಡಿಕಿ ಪ್ರಸನ್ನವೆಂಕಟದಾಸರು (ಪ್ರಸನ್ನವೆಂಕಟ), ಶಿಷ್ಯರಾದ ಭಾಗಣ್ಣ (ಗೋಪಾಲವಿಟ್ಠಲ), ತಿಮ್ಮಣ್ಣ (ವೇಣುಗೋಪಾಲ), ಮೋಹನದಾಸರು (ಮೋಹನವಿಠಲ), ಮತ್ತು ಕಲ್ಲೂರು ಸುಬ್ಬಣ್ಣ (ವ್ಯಾಸವಿಠಲ) ಇವರೆಲ್ಲ ತಮ್ಮ ತಮ್ಮ ಕೊಡುಗೆಗಳಿಂದ ದಾಸಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಇವರಲ್ಲಿ ಗೋಪಾಲದಾಸರು (ಭಾಗಣ್ಣ) ವಿಜಯದಾಸರ ತಾತ್ವಿಕವಿಚಾರಧಾರೆಯನ್ನು ಮುಂದುವರಿಸಿದ್ದಲ್ಲದೇ ಸಂಗೀತ, ನರ್ತನ, ಚಿತ್ರಕಲೆಗಳನ್ನೂ ಬಳಸಿಕೊಂಡರು. ಗೋಪಾಲದಾಸರಿಂದ ಪ್ರಭಾವಿತರಾದ ಅವರ ತಮ್ಮಂದಿರಾದ ಸೀನಪ್ಪ (ವರದಗೋಪಾಲವಿಠಲ), ದಾಸಪ್ಪ (ಗುರುಗೋಪಾಲವಿಠಲ), ರಂಗಪ್ಪ (ತಂದೆಗೋಪಾಲವಿಠಲ) ಮತ್ತು ಶಿಷ್ಯ ಐಜಿ ವೆಂಕಟರಾಮಾಚಾರ್ಯ (ವಾಸುದೇವವಿಠಲ) ಅವರೂ ಸಹ ತಮ್ಮನ್ನು ಸಾಹಿತ್ಯಸೇವೆಯಲ್ಲಿ ತೊಡಗಿಸಿಕೊಂಡರು.

ಗೋಪಾಲದಾಸರ ಹೆಸರನ್ನು, ಪರಂಪರೆಯನ್ನು ಉಳಿಸಿದವರಲ್ಲಿ ಜಗನ್ನಾಥದಾಸರು (ಜಗನ್ನಾಥವಿಠಲ) ಪ್ರಮುಖರು. ದಾಸಸಾಹಿತ್ಯ ಪ್ರಕಾರಗಳನ್ನಲ್ಲದೆ ಕನ್ನಡದಲ್ಲಿ ದೊಡ್ಡ ಗ್ರಂಥಗಳನ್ನೂ ರಚಿಸಿದ್ದಾರೆ.

ಅಲ್ಲಿಂದ ಮುಂದೆ, ಹರಿದಾಸಪರಂಪರೆ ಸಾಗಿಬಂದ ದಾಸಪರಂಪರೆಯಲ್ಲಿ ಅನೇಕರು ತಮ್ಮ ಸೇವೆ ಸಲ್ಲಿಸಿದ್ದಾರೆ, ಅವರಲ್ಲಿ ಪ್ರಾಣೇಶದಾಸರು (ಪ್ರಾಣೇಶವಿಠಲ) ಮತ್ತು ಅವರ ಶಿಷ್ಯರ ಪರಂಪರೆಯನ್ನು ಜೀವಂತವಾಗಿಟ್ಟಿರುವ ಅನೇಕ ಹರಿದಾಸರಿದ್ದಾರೆ - ಎಮ್ ಆರ್ ಗೋವಿಂದರಾವ್ (ಗುರುಗವಿಂದವಿಠಲ), ಆರ್ ರಾಮಚಂದ್ರರಾಯರು (ತಂದೆವೆಂಕಟೇಶವಿಠಲ), ಕೋಸಗಿ ಸ್ವಾಮಿರಾಮಾಚಾರ್ಯ (ಶ್ರೀಗುರುಜಗನ್ನಾಥವಿಠಲ), ವಕೀಲ ಸ್ವಾಮಿರಾಯರು (ವರದೇಶವಿಠಲ), ಜೋಳದಹೆಡಗಿ ಶೇಖ್ ಬಡೇಸಾಬ್ (ರಾಮದಾಸ), ವಕೀಲ ಜಿ ಮಧ್ವರಾವ್ (ಮಧ್ವಮುನಿ), ಹೇರೂರು ರಾಮರಾಯರು (ಮೂಲರಾಮ), ಗುರುರಾಜ ಬೆಣಕಲ್ (ನರಹರಿ) ಮತ್ತಿನ್ನೂ ಅನೇಕರನ್ನು ನಾವು ನೆನೆಯಬಹುದು.
ದಾಸಸಾಹಿತ್ಯದಲ್ಲಿ ಮಹಿಳೆಯರು:
ದೈನಂದಿನ ಕಾರ್ಯಕಲಾಪದೊಂದಿಗೆ ದಾಸರ ರಚನೆಗಳನ್ನು ಹಾಡಿಕೊಂಡು ಉಳಿಸಿಕೊಂಡು ಬಂದಿರುವಂತೆಯೇ, ದಾಸಸಾಹಿತ್ಯದ ರಚನೆಯಲ್ಲೂ ಮಹಿಳೆಯರ ಗಮನಾರ್ಹ ಪಾತ್ರವಿದೆ.
ಮೊದಲ ಘಟ್ಟದಲ್ಲಿ ಪುರಂದರ ದಾಸರ ಹೆಂಡತಿ ಸರಸ್ವತೀಬಾಯಿ (ಸಿರಿಪುರಂದರವಿಠಲ) ಮತ್ತು ಮಗಳು ರುಕ್ಮಿಣೀಬಾಯಿ (ತಂದೆಪುರಂದರವಿಠಲ) ಕೃತಿರಚನೆ ಮಾಡಿದ್ದರೆನ್ನಲಾಗಿದ್ದರೂ, ಅವರ ಕೃತಿಗಳು ಈಗ ಉಪಲಬ್ಧವಿಲ್ಲ.

ದ್ವಿತೀಯ ಘಟ್ಟದಲ್ಲಿ ಶ್ರೀರಾಮೇಶ ಅಂಕಿತದೊಂದಿಗೆ ಮುಯ್ಯದ ಪದಗಳು, ಬೀಗರಹಾಡು, ಮೋರೆಗೆ ನೀರು ತಂದ ಹಾಡು ಇತ್ಯಾದಿ ಗಲಗಲಿ ಅವ್ವನವರ ಕೊಡುಗೆ. ಅವರ ಶಿಷ್ಯೆಯಾದ ಭಾಗಮ್ಮ ಅಥವಾ ಪ್ರಯಾಗವ್ವ ಕನ್ನಡದಲ್ಲಿ ಭಾಗವತದ 3ನೆಯ ಸ್ಕಂದ ಬರೆದರು.

ದಾಸಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ಮಹಿಳೆಯರನ್ನು ನೆನೆಯುವಾಗ, ಹೆಳವನಕಟ್ಟೆ ರಂಗ ಅನ್ನುವ ಅಂಕಿತದಲ್ಲಿ ವಿಪುಲವಾಗಿ ಸಾಹಿತ್ಯಸೃಷ್ಟಿ ಮಾಡಿದ ಗೋಪಾಲದಾಸರ ಶಿಷ್ಯೆಯಾದ ಹೆಳವನಕಟ್ಟೆ ಗಿರಿಯಮ್ಮನವರನ್ನು ಮರೆಯುವ ಹಾಗೆಯೇ ಇಲ್ಲ.

ಭೀಮೇಶಕೃಷ್ಣ ಅಂಕಿತದೊಂದಿಗೆ ಅನೇಕ ರಚನೆಗಳನ್ನು ಮಾಡಿದ ಹರಪನಹಳ್ಳಿ ಭೀಮವ್ವನ ಸರಳ ಶೈಲಿಯ ಜನಪ್ರಿಯ. ಅನೇಕ ಪೌರಾಣಿಕ ಕಥೆಗಳನ್ನು ಸರಳಕನ್ನಡದ ಹಾಡುಗಳಾಗಿ ಪರಿವರ್ತಿಸಿದ ಕೀರ್ತಿ ಭೀಮವ್ವನಿಗೆ ಸಲ್ಲುತ್ತದೆ. ಶ್ರಾವಣ ಶುಕ್ರವಾರದ ಹಾಡು, ಶನಿವಾರದ ಹಾಡು ಇತ್ಯಾದಿ ಭೀಮವ್ವನ ಕೃತಿಗಳು ಶ್ರಾವಣಮಾಸದಲ್ಲಿ ಇಂದಿಗೂ ಹಾಡಲ್ಪಡುತ್ತವೆ.

ಈ ಪಟ್ಟಿಗೆ, ಚೆಲ್ಲಮ್ಮ, ಗಣಪಕ್ಕ, ಸುಂದರಾಬಾಯಿ, ಪನ್ನಿ ಲಕ್ಷ್ಮೀಬಾಯಿ, ಲಕ್ಷ್ಮೀದೇವಮ್ಮ ಮುಂತಾದವರೂ ಸೇರುತ್ತಾರೆ. ತಡವಾಗಿಯಾದರೂ ಸ್ವತಃ ಕೃತಿರಚನೆಗೆ ಕೈಹಾಕಿದ ಮಹಿಳೆಯರ ಕೊಡುಗೆಯಿಂದ ದಾಸಸಾಹಿತ್ಯದ ಹರವು, ಆಳ ಹೆಚ್ಚಿದವು ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.

********************************

ಒಟ್ಟಿನಲ್ಲಿ ಕನ್ನಡ ಹರಿದಾಸ ಸಾಹಿತ್ಯವು ವಿಷಯ, ರೂಪ, ಭಾಷೆ, ಪರಿಣಾಮಗಳೆಲ್ಲದರಲ್ಲೂ ವೈಶಿಷ್ಟ್ಯತೆಯನ್ನು ಸಾಧಿಸಿ ಇಂದಿಗೂ ಜೀವಂತವಾಗಿದೆ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ. ಕರ್ನಾಟಕದ ಎಲ್ಲ ಭಾಗಗಳ ಮಹನೀಯರ ಕೊಡುಗೆ ಇದೆಯೆನ್ನುವುದು ಎಷ್ಟು ಸತ್ಯವೋ, ಅದರ ಸಿಂಹಪಾಲು ಕೃಷ್ಣೆ-ತುಂಗೆಯರ ತೀರದ ಪ್ರದೇಶಗಳದ್ದು ಅನ್ನುವುದೂ ಅಷ್ಟೇ ದಿಟ.

ಮೂಲ ಕೃತಿಯ ಲೇಖಕಿ: ಶ್ರೀಮತಿ ಸೀತಾ ಗುಡೂರ್-ಕುಲಕರ್ಣಿ
ಸಾರ ಇಳಿಸಿದವರು: ಲಕ್ಷ್ಮೀನಾರಾಯಣ ಗುಡೂರ್

********************************

ಯುಕೆ ದ ಜಲಮಾರ್ಗಗಳಲ್ಲಿ ಹಾಸ್ಯದ ಹೊನಲು -ಶ್ರೀವತ್ಸ ದೇಸಾಯಿ

ಶೀರ್ಷಿಕೆಯನ್ನೋದಿದಾಗ ನಿಮ್ಮ ತಲೆಯಲ್ಲಿ ಅನೇಕ ಅಲೆಗಳ ತಾಕಲಾಟವಾಗುತ್ತಿರಬೇಕು! ಇದೇನು ಪ್ರವಾಸ ಕಥನವೋ, ಇತಿಹಾಸವೋ, ಹರಟೆಯೋ, ಪುಸ್ತಕ ವಿಮರ್ಶೆಯೋ, ನೋಸ್ಟಾಲ್ಜಿಯಾವೋ - ಅಂತ. ಇವು ಯಾವೂ ಪ್ರತ್ಯೇಕವಾಗಿರದೇ ಅವೆಲ್ಲವುಗಳ ಸಂಗಮವಿದೆ ಇಲ್ಲಿ. ಅಂತೆಯೇ ಅವೆಲ್ಲವನ್ನೂ ಒಂದೇ ಉಸಿರಿನಲ್ಲಿ ಓದುವ, ಅಗಸ್ತ್ಯನಂತೆ ಕುಡಿದು ನುಂಗುವ ಅವಶ್ಯಕತೆಯಿಲ್ಲ. ಕಂತು ಕಂತಾಗಿ ಓದಲೂ ಬಹುದು, ಇಂಗ್ಲೆಂಡಿನಕಾಲುವೆಗಳಲ್ಲಿ ಸಂಚರಿಸುವ ಸಪೂರ ದೋಣಿಗಳು (ನ್ಯಾರೋ ಬೋಟ್) ಜಲಬಂಧಗಳಲ್ಲಿ (locks) ನಿಂತು ನಿಂತು ಏಣಿಯೇರಿ ಮುಂದೆ ಸಾಗಿದಂತೆ!
ಎಲ್ಲಿಂದ ಶುರು ಮಾಡಲಿ? ನದಿಯಂತೆ ಉಗಮದಿಂದಲೇ ಪ್ರಾರಂಭಿಸುವೆ. ಕಳೆದ ವಾರದ ಅನಿವಾಸಿ ಸಂಚಿಕೆಯಲ್ಲಿ ಅಮಿತಾ ಅವರು ವರ್ಣಿಸಿದಂತೆ, ಯುಕೆ ಕನ್ನಡ ಬಳಗದ ಯುಗಾದಿ ೨೦೨೪ರ ಸಂಭ್ರಮ ಲೆಸ್ಟರ್ ನಗರದಲ್ಲಿ ನೆರವೇರಿತು. ಹಿಂದಿನ ದಿನವೇ ನಾವಿಬ್ಬರೂ ಲೆಸ್ಟರ್ ತಲುಪಿದ್ದೆವು. ರಾಜಶ್ರೀ ಮತ್ತು ವೀರೇಶ ಅವರ ಒಲವಿನ ಆಮಂತ್ರಣದ ಮೇರೆಗೆ ಮಧ್ಯಾಹ್ನದ ಸ್ವಾದಿಷ್ಠ ಭೋಜನವನ್ನು ಅವರ ಅತಿಥ್ಯದಲ್ಲಿ ಸವಿದು ಅನತಿ ದೂರದಲ್ಲಿದ್ದ ಹತ್ತು ಲಾಕ್ಸ್(locks) ಗಳ ಏಣಿಗೆ ಪ್ರಸಿದ್ಧವಾದ ಫಾಕ್ಸ್ಟನ್  ಕಾಲುವೆಯನ್ನು ನೋಡಲು ಹೊರಟೆವು. ಅದು ಗ್ರಾಂಡ್ ಯೂನಿಯನ್ ಕೆನಾಲಿನ ಲೆಸ್ಟರ್ ಭಾಗ. ಈ ಮೊದಲು ಇಂಗ್ಲೆಂಡಿನ ಆದ್ಯಂತ ಪಸರಿಸಿರುವ ೭೦೦೦ ಮೈಲುದ್ದದ್ದ ಕಾಲುವೆಗಳ ಜಾಲದ ಪರಿಚವಿರದವರಿಗೆ ಅದೊಂದು ಅವಿಸ್ಮರಣೀಯ ದೃಶ್ಯ ಮತ್ತು ಅನುಭವ. ಈ ಕಾಲುವೆಗಳು ಏಳರಿಂದ ಹತ್ತು ಮೀಟರ್ ಅಗಲವಿರುತ್ತವೆ. ಅದಕ್ಕೇ ಸುಮಾರು ಏಳು ಅಡಿ ಅಗಲ ಮತ್ತು ಎಪ್ಪತ್ತು ಅಡಿಗಳ ಈ ಸಪೂರ ನ್ಯಾರೋ ಬೋಟ್ ಗಳಿಗಷ್ಟೇ ಇಲ್ಲಿ ಸಂಚರಿಸಲು ಅನುಮತಿಯಿದೆ. ಬಣ್ಣ ಬಣ್ಣದ ಸುಂದರ ದೋಣಿಗಳೊಳಗೆ ವಾಸಿಸಲು ಸಹ ಬರುವಂಥ ಅನೇಕ ಸೌಕರ್ಯಗಳನ್ನೊಳಗೊಂಡವವು ಇವು. ಛತ್ತಿನ ಮೇಲೆ ಪುಟ್ಟ ಪುಟ್ಟ ಹೂವಿನ ತೊಟ್ಟಿಗಳನ್ನು ಹೊತ್ತು ಸಾಗುತ್ತ ಮಧ್ಯದಲ್ಲಿ ಸಿಗುವ ಲಾಕ್ ಗಳಲ್ಲಿ ಒಂದರ ನಂತರ ಒಂದಾಗಿ ೭೫ ಅಡಿ ಏರಿ ಮಾರ್ಕೆಟ್ ಹಾರ್ಬರಾದತ್ತ ಸಾಗುವದನ್ನು ನೋಡಿದೆವು. ಇಕ್ಕೆಲಗಳಲ್ಲಿ ಜಲಮಾರ್ಗಗಳನ್ನು ಸುಸ್ಥಿತಿಯಲ್ಲು ಕಾಪಾಡುವ ಲಾಕ್ ಕೀಪರ್‌ಗಳ  ಪುಟ್ಟ ಪುಟ್ಟ ಮನೆಗಳು, ಪಕ್ಕದಲ್ಲೇ ವಿಹಾರಕ್ಕೆ ಬಂದವರ ತೃಷೆ ತಣಿಸುವ ಇನ್ ಅಥವಾ ಪಬ್; ಹಿಂದಿನ ಕಾಲದಲ್ಲಿ ದೋಣಿಗಳನ್ನು ಎಳೆಯುತ್ತಿದ್ದ ಜನರ ಅಥವಾ ಕುದೆರೆಗಳಿಗಾಗಿ ಕಟ್ಟಿದ ಪಥಗಳು (Tow paths) ಇವೆಲ್ಲ ಸಾಯಂಕಾಲದ ಬೆಳಕಿನಲ್ಲಿ ರಮಣೀಯವಾಗಿ ಕಂಡವು. ಅವುಗಳನ್ನು ವಿವಿಧ ಕೋನಗಳಲ್ಲಿ ಅಮಿತಾ ಸೆರೆಹಿಡಿಯುತ್ತಿದ್ದರು. ಎತ್ತರದಿಂದ ವಿಹಂಗಮ ನೋಟ, ಬಗ್ಗಿ ನೆಲಕ್ಕೆ ಕ್ಯಾಮರಾ ತಾಗಿಸಿ ಪಿಪೀಲಿಕಾ ನೋಟ (Ant's eye view) ಎಲ್ಲಾ ಮೂಡಿಸಿದರು! ಅಲ್ಲಿ ವಿಹಾರಕ್ಕೆ ಹೊರಟ ದೋಣಿಗಳನ್ನು ನೋಡಿ ನಾನಗೋ ಶಾಲೆಯಲ್ಲಿದ್ದಾಗ  ”ಥ್ರೀ ಮೆನ್ ಇನ್ ಯ ಬೋಟ್’ ಓದಿ ನನ್ನ ಅಣ್ಣಂದಿರೊಂದಿಗೆ ಹೊಟ್ಟೆ ತುಂಬ ನಕ್ಕ ದಿನಗಳ ನೆನಪಾಯಿತು!
Capturing Ant’s eye view of Foxton Locks, Leicestershire
ಥೇಮ್ಸ್ ನದಿ ವಿಹಾರಕ್ಕೆ ಹೊರಟ ಮೂರು ಗೆಳೆಯರು ಯಾರು?

ಜೆರೋಮ್ ಕೆ ಜೆರೋಮ್ (ಪುಸ್ತಕದಲ್ಲಿ ಆತನ ಹೆಸರು ’ಜೆ’) ಬರೆದ ೧೮೮೯ರಲ್ಲಿ ಮೊದಲ ಬಾರಿಗೆ ಪ್ರಕಟವಾದ Three Men in a Boat (To say nothing of the Dog)ಎನ್ನುವ ಈ ಕಿರುಪುಸ್ತಕ ಎರಡೂವರೆ ಶತಮಾನದಲ್ಲಿ ಭಾರತವನ್ನೊಳಗೊಂಡು ಇಂಗ್ಲಿಷ್ ಬಲ್ಲ ಜಗತ್ತಿನ ಎಲ್ಲ ದೇಶಗಳಲ್ಲಿ ಜನಪ್ರಿಯವಾಗಿದೆ. ಅವರ ವಿಶಿಷ್ಠ ಶೈಲಿ ಮತ್ತು ಹೊಸತರದ ದೃಷ್ಟಿಕೋನದ ಹಾಸ್ಯ ಪಿ ಜಿ ವುಡ್ ಹೌಸ್ ಪೂರ್ವದ್ದು. ಇಂಗ್ಲೆಂಡಿನ ವಾಲ್ಸಾಲ್ ದಲ್ಲಿ ಹುಟ್ಟಿದ ಆತನ ಕಾಲ: (2 May 1959 – 14 June 1927). ಈ ಪುಸ್ತಕ ಮೊದಲು ಸರಣಿರೂಪದಲ್ಲಿ ಪ್ರಕಟವಾದಾಗ ಕೆಲವು ವಿಮರ್ಶಕರಿಂದ ಕಟುವಾಗಿ ಟೀಕಿಸಲ್ಪಟ್ಟರೂ ( ‘that the British Empire was in danger,’ ಆತನನ್ನು ಕೆಳ ದರ್ಜೆಯವನು ಅಂತ ಕರೆದು ‘ಹ’ಕಾರ ತೊರೆದು ‘Arry K. ‘Arry ಅಂತ ಹೀಯಾಳಿಸಿದರು! ಹಕಾರ- ಅಕಾರ ಅದಲುಬದಲು ಆಂಗ್ಲರಲ್ಲೂ ಪ್ರಚಲಿತ ದುಃಶ್ಚಟ!)  ಸಾಮಾನ್ಯ ಓದುಗರು ಮಾತ್ರ ಬಹಳ ಮೆಚ್ಚಿಕೊಂಡು ಒಂದು ಸಾವಿರ ಪ್ರತಿಗಳು ಖರ್ಚಾಗಳು ಸಮಯ ಹಿಡಿಯಲಿಲ್ಲ. ಅದರಿಂದಾಗಿ ಅಮೇರಿಕೆಯಲ್ಲಿ ಅದರ ಅನಧಿಕೃತ ಕಾಪಿಗಳು ಮಾರಾಟವಾಗಿ ಆತನಿಗೆ ಸಿಗಬೇಕಾದ ಸಂಭಾವನೆ ಸಿಗದಿದ್ದು ದುರ್ದೈವ ಏಕೆಂದರೆ ಅದು ಕಾಪಿರೈಟ್ ನಿಯಮಗಳು ಜಾರಿ ಬರುವ ಪೂರ್ವ ಕಾಲದ್ದು ಮತ್ತು ಆತನೇನೂ ಆಗ ಅಷ್ಟು ಅನುಕೂಲಸ್ಥನಾಗಿರಲಿಲ್ಲ. ಮೊದಲು ಅದೊಂದು ಪ್ರವಾಸಕಥನ ಎಂದು ಬರೆಯಲು ಶುರುಮಾಡಿದ್ದ, ಆಮೇಲೆ ವಿಡಂಬನೆಯುಕ್ತ ಅಡ್ಡಕತೆಗಳು ಸೇರಿ ಕಥೆಯನ್ನು ಸಮೃದ್ಧಗೊಳಿಸಿತು.

ಜೆರೋಮನ ಸಂಗಡಿಗರು ಜಾರ್ಜ್ ಮತ್ತು ಹ್ಯಾರಿಸ್. ಜೊತೆಗೆ ಅವರ್ ನಾಯಿ - ಮಾನ್ಟ್ ಮೊರೆನ್ಸಿ ಅವರು ಆತನ ನಿಜ ಜೀವನದ ಗೆಳೆಯರೆಂದು ಗುರುತಿಸಲಾಗಿದೆಯಾದರೂ ಎಲ್ಲ ಕಥೆಗಳು ನಿಜವಾಗಿ ನಡೆದ ಘಟನೆಗಳನ್ನಾಧರಿಸಿವೆಯಾದರೂ ಕಾಲಕ್ರಮವನ್ನು ಬದಲಾಯಿಸಲಾಗಿದೆ ಮತ್ತು ಹಾಸ್ಯಕ್ಕಾಗಿ ಅಲ್ಲಲಿಇ ಉತ್ಪ್ರೇಕ್ಷೆ ಇಣುಕಿರಬಹುದು. ಅತಿಯಾದ ಕೆಲಸದಿಂದ ಬಳಲಿದ್ದೇವೆಂದು ಅಂದುಕೊಂಡು (ಬ್ರಿಟಿಶ್ ಮ್ಯೂಸಿಯಮ್ ಲೈಬ್ರರಿಯಲ್ಲಿ ಓದಿ ರೋಗಿಷ್ಟನಾದದ್ದು ಖಾತ್ರಿಯಾಗಿ) ವಿಹಾರಕ್ಕಾಗಿ ಲಂಡನ್ ಹತ್ತಿರದ ಕಿಂಗ್ಸ್ಟನ್ನಿನಿಂದ ಹೊರಟು ಥೇಮ್ಸ್ ನದಿಯ ಪ್ರವಾಹದ ವಿರುದ್ಧ ಆಕ್ಸ್ಫರ್ಡ್ ವರೆಗೆ ಬಾಡಿಗೆಗೆ ತೊಗೊಂಡ ನ್ಯಾರೋ ಬೋಟ್ ಅಲ್ಲದಿದ್ದರೂ ಸ್ಕಿಫ್ (skiff) ಎನ್ನುವ ಹುಟ್ಟು ದೋಣಿಯಲ್ಲಿ ಎರಡು ವಾರ ಕಳೆದ ಕಥೆಯಿದು. ಕಾಲಕ್ಷೇಪದಂತೆ ಮುಖ್ಯ ಪ್ರವಾಸದ ವಿವರಣೆಗಿಂತ ಎರಡು ಪಟ್ಟು ಉಪಕಥೆಗಳೇ ಹೆಚ್ಚು. ದಿನದ, ಶುಷ್ಕ ಜೀವನದ ಘಟನೆಗಳನ್ನು ನೋಡುವ ದೃಷ್ಟಿ, ನಿತ್ಯ ಸತ್ಯಗಳನ್ನು ಅಲ್ಲಲ್ಲಿ ಚೆಲ್ಲಿದ ರೀತಿ ಮತ್ತು ಹಾಸ್ಯ ಇವನ್ನು ಕೇಂಬ್ರಿಜ್ಜಿನಲ್ಲಿದ್ದಾಗ ಓದಿ ಮೆಚ್ಚಿದ ಆಗಿನ ಪ್ರಧಾನ ಮಂತ್ರಿ ”ಜೆರೋಮ್ ಕೆ ಜೆರೋಮ್ ನ ಬರವಣಿಗೆ ನನ್ನ ಮಟ್ಟಿಗೆ ವಿನೋದದ ಪರಾಕಾಷ್ಠೆ!” ಎಂದು ಉದ್ಗರಿಸಿದ್ದು ಈಗಲೂ ನೆನಪಿದೆ. ತಾನು ಬರೆದ ೧೫೦ ಪುಟಗಳಲ್ಲಿ ಅವರು ’ದಾರಿ’ಯಲ್ಲಿ ಕಂಡ, ತಂಗಿದ ಸ್ಥಳಗಳ ಬಗ್ಗೆ, ಮತ್ತು ಬರೀ ಈ ದೇಶದ ಇತಿಹಾಸವನ್ನಷ್ಟೇ ಅಲ್ಲ ಬೇರೆ ಜಗತ್ತನ್ನೇ ತೆರೆದಿಡುತ್ತಾನೆ ಲೇಖಕ. ಅದು ಗಾರ್ಡಿಯನ್ ಪತ್ರಿಕೆಯ ನೂರು ಬೆಸ್ಟ್ ನಾವೆಲ್ಸ್ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ, ಒಂದು ವರ್ಷ.
’ಥ್ರೀ ಮೆನ್’ ಹಿಂದಿನ ನಿಜವಾದ ಮೂವರು: ಕಾರ್ಲ್ ಹೆನ್ಚೆಲ್ (ಹ್ಯಾರಿಸ್), ಜಾರ್ಜ್ ವಿನ್ಗ್ರೇವ್ (ಜಾರ್ಜ್) ಮತ್ತು ಕಾರ್ಲ್ ಹೆನ್ಚೆಲ್ (ಹ್ಯಾರಿಸ್)Picture Courtesy: Jerome K Jerome Society

ಜಲಪ್ರಯಾಣ ಸಿದ್ಧತೆಗೆಂದು ಪ್ಯಾಕ್ಕಿಂಗ್ ಮಾಡಲು ಪ್ರಾರಂಭ.
ಆತನ ಇಬ್ಬರು ಸಹಪ್ರಯಾಣಿಕರೆಂದರೆ ಜಾರ್ಜ್ ಮತ್ತು ಹ್ಯಾರಿಸ್. (ಹುಟ್ಟು ಹಾಕಲು ಬೇಕಲ್ಲ, ಕೂಲಿಗಳು!)”ಜೆ’ ಜಂಬದಿಂದ ಹೇಳುತ್ತಾನೆ. ”ನನಗೆ ಪ್ಯಾಕಿಂಗ್ ಎಂದರೆ ಗರ್ವ.ಅದರ ಬಗ್ಗೆ ನನಗೆ ಗೊತ್ತಿದ್ದಷ್ಟು ಯಾರೂ ಇಲ್ಲ. ಇಂಥ ಅನೇಕ ಕಲೆಗಳುಂಟು ಅಂತ ನನಗೇ ಅಚ್ಚರಿ. ಎಲ್ಲವನ್ನೂ ನನಗೇ ಬಿಟ್ಟು ಬಿಡಿ ಅಂತ ಅವರಿಬ್ಬರಿಗೆ ಹೇಳಿದ ಕ್ಷಣ ಗ್ಜಾರ್ಜ್ ಪೈಪ್ ಹೊತ್ತಿಸಿ ಈಸಿ ಚೇರ್ ಮೇಲೆ ವ್ಯಾಪಿಸಿಬಿಟ್ಟ; ಹ್ಯಾರಿಸ್ ಟೇಬಲ್ ಮೇಲೆ ಕಾಲು ಇಳಿಬಿಟ್ಟು ಸಿಗಾರ್ ಸೇದಲಾರಂಭಿಸಿದ. ನಾನಂದುಕೊಂಡಿದ್ದರ ವಿರುದ್ಧವಾಯಿತು ಇದು. ನಾನು ಬಾಸ್ ಅವರು ನನ್ನ ಆರ್ಡರ್ ಪ್ರಕಾರ ಓಡಾಡಬೇಕೆಂದು ನಾನು ತಿಳಿದಿದ್ದೆ. ನನಗೆ ಇದು ಬೇಸರ ತಂದಿತು. ನಾನು ಕೆಲಸ ಮಾಡುವಾಗ ಉಳಿದವರು ಕುಳಿತು ನೋಡುವದಕ್ಕಿಂತ ಹೀನ ಕೆಲಸ ಜಗತ್ತಿನಲ್ಲಿಲ್ಲ ...!” ಇದು ಸಾರ್ವಕಾಲಿಕ ಸತ್ಯವಲ್ಲವೆ? ಆದರೂ ಆತ ಹೇಳೋದು: ”ನನಗೆ ಪರಿಶ್ರಮ ಇಷ್ಟ. ಅದು ನನ್ನನ್ನು ಬಹಳ ಅಕರ್ಷಿಸುತ್ತದೆ.(it fascinates me.) ನಾನದನ್ನು ಇಡೀ ದಿನ ಕುಳಿತು ನೋಡ ಬಲ್ಲೆ!”
ಹ್ಯಾಂಪ್ಟನ್ ಕೋಟ್ ಪ್ಯಾಲೆಸ್, ನೀರಿನಲ್ಲಿ ಪ್ರತಿಬಿಂಬ ಮತ್ತು ಎಡಗಡೆ Maze : photo by author
ನಿರರ್ಗಳವಾಗಿ ಹರಿವ ಇತಿಹಾಸ
ಲಂಡನ್ ಗೊತ್ತಿದ್ದವರಿಗೆ ಕಿನ್ಗ್ ಸ್ಟನ್ (Kingston upon Thames) ಅಂದಕೂಡಲೇ ನೆನಪಾಗುವುದು ಆರು ರಾಣಿಯರನ್ನು ಮದುವೆಯ ಖ್ಯಾತಿಯ ಎಂಟನೆಯ ಹೆನ್ರಿ ಮತ್ತು ಅವನ ಭವ್ಯ ಪ್ಯಾಲೆಸ್ ಮತ್ತು ಹನ್ನೆರಡು ಮೀಟರ್ ಸುತ್ತಳತೆಯ ಹಳೆಯ ’ವೈನ್’’ ದ್ರಾಕ್ಷೆ ಬಳ್ಳಿ ಇದ್ದ ಹ್ಯಾಂಪ್ಟನ್ ಕೋರ್ಟ್. ಅದು ಥೇಮ್ಸ್ ದಂಡೆಯ ಮೇಲೆಯೇ ಇದೆ. ಆಗಿನಂತೆ ಈಗಲೂ ಪ್ರೇಕ್ಷಕರು ಮುಗಿ ಬೀಳುತ್ತಾರೆ. ಆತನ ಆಳಿಕೆಯ ನಂತರ ಕೊನೆಯ ಟ್ಯೂಡರ್ ರಾಣಿ ಒಂದನೆಯ ಎಲಿಝಬೆತ್ ಸಹ ಅಲ್ಲಿ ಕೆಲಕಾಲ ಸೆರೆಯಾಳಾಗಿದ್ದಳು. ಮಾರ್ಲೋ ಊರು, ಕಿಂಗ್ ಜಾನ್ ಮತ್ತು ಆತ ಸಹಿ ಮಾಡಿದ ಮ್ಯಾಗ್ನಾ ಕಾರ್ಟಾ ಐಲಂಡ್ ಇವುಗಳ ವರ್ಣನೆ ಸಹ ಬರುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಊಟಿಯಲ್ಲಿದ್ದಾಗ ನಾವು ಮೂವರು ಅಣ್ಣತಮ್ಮಂದಿರನ್ನು ಆಕರ್ಷಿಸಿದ್ದು ಆ ಪುಸ್ತಕದಲ್ಲಿ ಬರುವ ಹ್ಯಾಂಪ್ಟನ್ ಕೋರ್ಟ್ ಮೇಝ್ (Maze of hedges) -ಹೂದೋಟದಲ್ಲಿ ಪೊದೆಗಳಿಂದ ರಚಿಸಿದ ಸಿಕ್ಕು ದಾರಿ. ಅದನ್ನು ಹಿಂದಿಯಲ್ಲಿ ಭೂಲ್ ಭುಲಯ್ಯ ಎನ್ನುವರು. ಅದರಲ್ಲಿ ಹೊಕ್ಕರೆ ದಾರಿ ತಪ್ಪಿಸಿಕೊಂಡು ಹೊರಬರುವದೇ ಕಷ್ಟ. ಒಂದು ರೀತಿಯ ಪದ್ಮವ್ಯೂಹ ಎನ್ನ ಬಹುದು. ನಾನು ಇತ್ತೀಚೆಗೆ ಹ್ಯಾಂಪ್ಟನ್ ಕೋರ್ಟ್ ಗೆ ಭೆಟ್ಟಿ ಕೊಟ್ಟಾಗ ಆ ಮೇಝಿಗೂ ಹೋಗಿ ಬಂದೆ. ಮೊದಲ ಸಲ ಹ್ಯಾರಿಸ್ ಹೇಳಿದ ಕಥೆಯನ್ನು ಮೆಲಕು ಹಾಕಿದೆ. ಮನೆಗೆ ಬಂದು ಅದನ್ನು ಓದಿದೆ. ಅದರ ಝಲಕ್ ಇಲ್ಲಿದೆ:
ಉಪಕಥೆಗಳಲ್ಲದೆ ನೇರವಾಗಿ ನೀರಿನ ಪ್ರವಾಸದ ಬಗೆಗಿನ ತಮಾಷೆಯ ವಿಷಯಗಳೂ ಅನೇಕ.  ನೀರಿನ ಪಾತಳು ಸಮ ಪಡಿಸಲು ಒಮ್ಮೆ ಲಾಕ್ ಒಳಗೆ ಹೊಕ್ಕ ಅವರ ಬೋಟಿನ ಕಿರಿಮೂಲೆಯ ಮುಂಬದಿ (nose of the boat) ದ್ವಾರದ ಸಂದಿಯಲ್ಲಿ ಸಿಕ್ಕಿಕೊಂದು ದೋಣಿಯ ತುದಿ ಏರುತ್ತಿರುವಾಗ ಅದರ ಪರಿವೆಯಿಲ್ಲದೆ ಫೋಟೊಗ್ರಾಫರನ ಮೇಲೆ ಪೂರ್ತಿ ಲಕ್ಷ್ಯವಿಟ್ಟು ''Nose! Nose!'' ಅಂತ ಜನ ಎಚ್ಚರಿಸಿದಾಗಲೂ ಮೂಗು ಮುಟ್ಟಿಕೊಂಡು ಎಲ್ಲ ಸರಿಯಾಗಿದೆ ಅಂತ ಗಂಡಾಂತರದಿಂಅ ಸ್ವಲ್ಪದರಲ್ಲೇ ಪಾರಾದದ್ದು, ಮತ್ತು ಟಿನ್ ಓಪನರ್ ಇಲ್ಲದೆ ಅನಾನಸ್ ಹಣ್ಣಿನ ಟಿನ್ನನ್ನು ಭೇದಿಸಲು ಪಟ್ಟ ಕಷ್ಟ, ಜಜ್ಜಿ ಪಚ್ಚೆ ಮಾಡಿದ ಕಥೆ ...ಅದರ ತುಂಬ ಹರಿಯುವದು ಥೇಮ್ಸ್ ಅಲ್ಲ, ಹಾಸ್ಯ.
ಅಂದರೆ ಪುಸ್ತಕದಲ್ಲಿ ಋಣಾತ್ಮಕ ಗುಣಗಳೇ ಇಲ್ಲವೆ? ನೆನ್ನೆಗೆ (ಮೇ ೨) ಜೆರೋಮ್ ಹುಟ್ಟಿ ೧೬೫ ವರ್ಷಗಳು ತುಂಬುತ್ತವೆಯೆಂದ ಮೇಲೆ, ಆಗಿನ ಭಾಷೆ ಮತ್ತು ಕಥನ ಶೈಲಿ ಸುಲಲಿತ ಎಂದು ಎಲ್ಲರೂ ಒಪ್ಪುವದಿಲ್ಲ. ಆ ಕಾರನಕ್ಕೇ ಈ ಮೊದಲೇ ಉಲ್ಲೇಖಿಸಿದಂತೆ ’ಅಪ್ಪಿಟಿ’ ವಿಮರ್ಶಕರು ಕೊಟ್ಟಿದ್ದು ಆ ತರದ ಅಭಿಪ್ರಾಯ. ಕಥೆಯ ಓಘಕ್ಕೆ ಅಲ್ಲಲ್ಲಿ ತಡೆಯಿದೆ. ಮತ್ತು ಭಾಷೆ ಪೆಡಸು (clunky ಎನ್ನಬಹುದು). ಆಶ್ಚರ್ಯವೆಂದರೆ ಅದರಲ್ಲಿ ಉಲ್ಲೇಖಿತವಾದ ಐತಿಹಾಸಿಕ ಸ್ಥಳಗಳು, ಪಬ್ ಮತ್ತು ಇನ್ ಗಳು (ಒಂದೆರಡನ್ನು ಬಿಟ್ಟರೆ) ಇನ್ನೂ ಹಾಗೆಯೇ ಇವೆ. ಅವುಗಳ ವ್ಯಾಪಾರಕ್ಕೆ ಈ ಪುಸ್ತಕದ್ದೂ ಸ್ವಲ್ಪ ಪ್ರಭಾವವಿರಲು ಸಾಕು. ಅದಲ್ಲದೆ. ಅನೇಕ ಜನರು ತಾವು ಸಹ ಆ ಪ್ರವಾಸವನ್ನು ಮಾಡಿ ತೋರಿಸಿದ್ದಾರೆ, ಬರೆದಿದ್ದಾರೆ, ಟೆಲಿವಿಜನ್ನಿನಲ್ಲಿ ಸಹ ಅದರ ಒಂದು ಸರಣಿಯನ್ನು ನೋಡಿದ ನೆನಪು.
ಕೊನೆಯಲ್ಲಿ, ಅಂಕಲ್ ಪಾಡ್ಜರನು ಹೊಸದಾಗಿ ಕಟ್ಟು ಹಾಲಿಸಿದ ಚಿತ್ರವೊದನ್ನುನೇತು ಹಾಕುವ ಕಥೆಯನ್ನು ಉಲ್ಲೇಖಿಸದೆ ಯಾವ ’ಥ್ರೀ ಮೆನ್ ’ ಕಥೆಯೂ ಮುಕ್ತಾಯವಾಗೋದಿಲ್ಲಂತ ಅದರ ವರ್ಣನೆಯ ಕೆಲವು ಸಾಲುಗಳೊಂದಿಗೆ ಲೇಖನ ಮುಗಿಸುವೆ. ಅದು ಎಷ್ಟೋ ಶಾಲೆಗಳ ಪಠ್ಯಪುಸ್ತಕದಲ್ಲಿ ಸಹ ಸೇರ್ಪಡೆಯಾಗಿತ್ತಂತೆ. ನಿಮ್ಮಲ್ಲನೇಕರು ತಮ್ಮ ಅವಿಭಕ್ತ ಕುಟುಂಬದಲ್ಲಿ ಇಂತಹ ಒಬ್ಬ ’ದೊಡ್ಡ’ ಅರ್ಭಟ ವ್ಯಕ್ತಿಯನ್ನು ಕಂಡಿರಲಿಕ್ಕೆ ಸಾಕು!

ಅಂಕಲ್ ಪಾಡ್ಜರ್ ನೇತು ಹಾಕಿದ ಚಿತ್ರ

ಒಂದು ಸಾಯಂಕಾಲದ ಮಬ್ಬುಗತ್ತಲೆಯಲ್ಲಿ ಆಂಟಿ ಪಾಡ್ಜರ್ ಫ್ರೇಮ್ ಹಾಕಿಸಿ ತಂದ ಚಿತ್ರವನ್ನು ನೇತು ಹಾಕೋರು ಯಾರು ಅಂತ ಕೇಳಿದಳು. ”ನನಗೆ ಬಿಟ್ಟು ಬಿಡಿರಿ, ಚಿಂತೆ ಬೇಡ. ನಾನು ಮಾಡುತ್ತೇನೆ,” ಅನ್ನುತ್ತ ತನ್ನ ಕೋಟು ಬಿಚ್ಚುತ್ತ ಆರಂಭ ಮಾಡಿದ ಅಂಕಲ್ ಪಾಡ್ಜರ್. ಹಿರಿಯ ಮಗಳನ್ನು ಮೊಳೆಗಳನ್ನು ತರಲು ಕಳಿಸಿದ.ಆಕೆಯೇ ಹಿಂದೆಯೆ ಒಬ್ಬ ಹುಡುಗನ ರವಾನಿ - ಉದ್ದಳತೆ ತಿಳಿಸಲು. ಅವು ಬರೀ ಪ್ರಾರಂಭದ ಆರ್ಡರ್ಗಳು, ಇಡೀ ಮನೆ ತುಂಬ ಕೋಲಾಹಲ. ”ನನ್ನ ಸುತ್ತಿಗೆ ತೊಗೊಂಡು ಬಾ, ವಿಲಿಯಮ್,” ಅಂತ ಕೂಗಿದ. ”ನನ್ನ ರೂಲರ್ ಎಲ್ಲಿ, ಟಾಮ್, ಮತ್ತು ನನ್ನ ಏಣಿಯನ್ನು ತರಲು ಮರೆಯ ಬೇಡ. ಕುರ್ಚಿ ಸಹ ಇರಲಿ, ಬೇಕಾದೀತು. ಹ್ಞಾ, ಜಿಮ್, ಸ್ವಲ್ಪ ನಯವಾಗಿ ಮಾತಾಡಿಸಿ, ಅವರ ಕಾಲೂತದ ಬಗ್ಗೆ ವಿಚಾರಿಸಿ ಪಕ್ಕದ ಮನೆಯವರಿಂದ ಸ್ಪಿರಿಟ್ ಲೆವಲ್ ಕಡ ತಾರಪ್ಪ! ... ಮರಿಯಾ, ನೀನು ತೊಲಗ ಬೇಡ, ನನಗೆ ದೀಪ ತೋರಿಸ ಬೇಕು.” ಹಿರಿಯ ಮಗಳು ಬಂದ ಮೇಲೆ ಮತ್ತೆ ಓಡಿ ಹೋಗ ಬೇಕು. ಹಗ್ಗ ತರಲು. ಟಾಮ್, ಓ ಟಾಮ್, ಎಲ್ಲಿ ಅವನು? ಟಾಮ್, ಇಲ್ಲಿ ಬಂದು ನಿಲ್ಲು, ನನಗೆ ಆ ಚಿತ್ರವನ್ನು ಎತ್ತಿ ಕೊಡ ಬೇಕು, ಸ್ವಲ್ಪ ವಜ್ಜ ಐತಿ. ಆನಂತರ ಅಂಕಲ್ ಚಿತ್ರವನ್ನು ಕೈಯಲ್ಲಿ ಎತ್ತಿ ಹಿಡಿಯುವಷ್ಟರಲ್ಲಿ ಆತನ ಕೈಯಿಂದ ಜಾರಿ ಬಿತ್ತು. ಫ್ರೇಮು ಸಹ ಬಿಚ್ಚಿದ್ದರಿಂದ ಗಾಜನ್ನು ಉಳಿಸಲು ಹೋಗಿ ಅದು ಕೈ ಕತ್ತರಿಸಿತು. ಕುಣಿಯುತ್ತ, ತತ್ತಿರಿಸುತ್ತ ಕೋಣೆ ತುಂಬ ಪರ್ಯಟನ, ತನ್ನ ಕರವಸ್ತ್ರ ಹುಡುಕುತ್ತ. ಅದು ಸಿಗಲಿಲ್ಲ ಯಾಕಂದರೆ ಅದು ಕೋಟಿನ ಕಿಸೆಯಲ್ಲಿದೆ, ಕೋಟು ಎಲ್ಲಿ ಹಾಕಿದ್ದ ಅಂತ ನೆನಪಿಲ್ಲ. ಮನೆಯವರೆಲ್ಲ ಆತನ ಉಪಕರಣಗಳ ಅನ್ವೇಷಣೆಯಲ್ಲಿ ಎಲ್ಲೆಡೆ ಚೆಲ್ಲಾಪಿಲ್ಲಿಯಾದರು. ಕೆಲವರು ಆತನ ಕೋಟನ್ನು ಹುಡುಕುತ್ತ ಹೊರಟಾಗ ಆತನೋ ಅತ್ತಿತ್ತ ಕುಣಿಯುತ್ತ ಎಲ್ಲರ ಕಾಲಲ್ಲಿ ಸಿಗುತ್ತ ತಿರುಗುತ್ತಿದ್ದ .
”ಇಷ್ಟು ಜನರಲ್ಲಿ, ಯಾರಿಗೂ ನನ್ನ ಕೋಟೆಲ್ಲಿದೆ ಗೊತ್ತಿಲ್ವಾ? ಇಂಥ ನಾಲಾಯಕರನ್ನು ಜನ್ಮದಲ್ಲಿ ಕಂಡಿಲ್ಲ. ನಿಜವಾಗಿಯೂ ನೀವು ಆರು ಜನರಿಗೂ ಐದು ನಿಮಿಷದ ಹಿಂದೆ ಇಟ್ಟ ಕೋಟನ್ನು ಹುಡುಕಲಾಗಲಿಲ್ಲವಲ್ಲ ...” ಅನ್ನುತ್ತ ಕುರ್ಚಿಯಿಂದ ಎದ್ದಾಗ ಅದರ ಮೇಲೆಯೇ ತಾನು ಇಷ್ಟು ಹೊತ್ತು ಕೂತಿದ್ದು ಗೊತ್ತಾಗಿ, ”ಈಗ ಬಿಡ್ರೆಪ್ಪ, ಅಂತೂ ಇದೀಗ ನಾನೇ ಹುಡುಕಿದೆ, ನಮ್ಮ ಸಾಕು ಬೆಕ್ಕು ನಿಮಗಿಂತ ಬೇಗ ಹುಡುಕುತ್ತಿತ್ತೇನೋ.”
ಅರ್ಧ ಗಂಟೆಯೇ ಬೇಕಾಯಿತು, ಆತನ ಬೊಟ್ಟಿಗೆ ಬ್ಯಾಂಡೇಜ್ ಮಾಡಿ, ಹೊಸ ಗಾಜನ್ನು ತರಿಸಿ, ಸಾಧನಗಳು, ಏಣಿ, ಕುರ್ಚಿ, ಮೋಂಬತ್ತಿ, ಎಲ್ಲ ತಂದ ಮೇಲೆ ಮನೆಯವರು, ಕೆಲಸದಾಕೆ, ಆಕೆಯ ಮಗಳು ಇವರೆಲ್ಲ ಕೈಕೊಡಲು ಅರ್ಧ ವರ್ತುಲಾಕಾರದಲ್ಲಿ ನಿಂತಿರಲು ಆತನ ಮತ್ತೊಂದು ಪ್ರಯತ್ನ ಶುರು... ಇಬ್ಬರು ಕುರ್ಚಿಯನ್ನು ಭದ್ರವಾಗಿ ಹಿಡಿಯಲು,ಮೂರನೆಯವ ಅಂಕಲನ್ನು ಮೇಲೆ ಹತ್ತಿಸಿ ಬಿಗಿಯಾಗಿ ಹಿಡಿದಿರಲು, ನಾಲ್ಕನೆಯವರು ಮೊಳೆಯನ್ನು ಆತನ ಕೈಗಿಡಲು, ಐದನೆಯವನು ಸುತ್ತಿಗೆಯನ್ನು ಆತನಿಗೆ ಕೊಡಲು ತುದಿಗಾಲ ಮೇಲೆ ನಿಂತಿರುವ. ಸರಿ, ಅಂಕಲ್ಲೋ ಕೈಯಲ್ಲಿ ಮೊಳೆಯನ್ನು ಹಿಡಿದ ಮರುಕ್ಷಣದಲ್ಲಿ ಕೆಳಗೆ ಬೀಳಿಸಿ ಬಿಟ್ಟ.
”ಅಯ್ಯೊ, ಈಗ ಮೊಳೆ ಬಿತ್ತಲ್ಲ” ಅಂತ ಗಾಯ ಪಟ್ಟವನ ಆರ್ತನಾದ. ಈಗ ಎಲ್ಲರೂ ಮೊಣಕಾಲ ಮೇಲೆ ಸರಿದು ಅದರ ಹುಡುಕಾಟದಲ್ಲಿ ಮಗ್ನರಾಗಿರುವಾಗ ಆತ ಕುರ್ಚಿಯ ಮೇಲೆ ಗೊಣಗುತ್ತ ನಿಂತು, ’ನನ್ನನ್ನು ಇಡೀ ರಾತ್ರಿ ಹಿಂಗ ಕಳೀ ಬೇಕಂತ ಮಾಡೀರೇನು?’ ಅಂತ ಹಂಗಿಸುತ್ತ ಕೂಡುವ. ಕೊನೆಗೆ ಮೊಳೆ ಸಿಕ್ಕಿತು ಆದರೆ ಆತ ಸುತ್ತಿಗೆಯನ್ನು ಅಷ್ಟರಲ್ಲಿ ಎಲ್ಲೋ ಕಳಕೊಂಡಿದ್ದ. “ಎಲ್ಲಿ ಆ ಸುತ್ತಿಗೆ, ಏಳು ಮಂದಿ ಮೂರ್ಖರು ಬಾಯಿ ಕಳಕೊಂಡು ಏನು ಮಾಡುತ್ತಿದ್ರಿ?”
ನಾವು ಸುತ್ತಿಗೆ ಹುಡುಕಿದೆವೇನೋ ಸರಿ, ಆತ ಮೊಳೆ ಹೊಡೆಯಲು ಮಾಡಿದ ಗುರುತು ಸಿಗವಲ್ತು. ಒಬ್ಬೊಬ್ಬರಾಗಿ ನಾವೆಲ್ಲ ಕುರ್ಚಿ ಹತ್ತಿ ಹುಡುಕುತ್ತ ಹೋದಂತೆ ಒಬ್ಬರು ಕಂಡು ಹಿಡಿದ ಜಾಗ ಇನ್ನೊಬ್ಬರೊಂದಿಗೆ ಹೊಂದದೆ ಎಲ್ಲರೂ ಮತ್ತೆ ಮೂರ್ಖರಾದೆವು. ಎಲ್ಲರನ್ನೂ ಸ್ವಸ್ಥಾನಕ್ಕೆ ಕಳಿಸಿ ತಾನೆ ಅಳೆದು ಲೆಕ್ಕ ಹಾಕಿ, ದೂರ ಗೋಡೆಯ ತುದಿಯಿಂದ ಮೂವತ್ತೊಂದು ಮತ್ತು ಮೂರೆಂಟಾಂಶ ಇಂಚು, ಅಂತ ಮನಸ್ಸಿನಲ್ಲೆ ಲೆಕ್ಕ ಹಾಕುತ್ತ ತಲೆ ಬಿಸಿಮಾಡಿಕೊಳ್ಳುವ. ಎಲ್ಲರೂ ತಮ್ಮ ತಲೆಯಲ್ಲೇ ಲೆಕ್ಕ ಹಾಕಿ ಬೇರೆ ಬೇರೆ ಉತ್ತರ ಕೊಟ್ಟರು. ಒಂದೇ ಉಪಾಯ ಅಂದರೆ ಮತ್ತೆ ಅಳೆಯ ಬೇಕೆಂದು ಈ ಸಲ ದಾರ ಹಿಡಿದು ಅಳೆಯಲು ಹೋದಾಗ ಮೂರಿಂಚು ಕೂಡಿಸಿ ಹಿಡಿದ ಗುರುತನ್ನು ಬರೆಯಲು ಇನ್ನಷ್ಟು ಮೈ ಚಾಚಬೇಕಾಗಿ ನಲವತ್ತೈದು ಡಿಗ್ರಿಗಿಂತ ಹೆಚ್ಚಾಗಿ ವಾಲಿದ್ದರಿಂದ ದಾರ ಕೈಯಿಂದ ಜಾರಿ ಬಿತ್ತು, ಜೊತೆಗೆ ತಾನೂ ಸಹ ಕೆಳಗಿದ್ದ ಪಿಯಾನೋ ಮೇಲೆ ಬಿದ್ದಿದ್ದರಿಂದ, ಅಚಾನಕ್ಕಾಗಿ ಆತನ ತಲೆ ಮತ್ತು ಶರೀರ ಕೂಡಿಯೇ ಏಕ ಕಾಲಕ್ಕೆ ಪಿಯಾನೋದ ಅಷ್ಟೂ ಕೀಗಳ ಮೇಲೆ ಒತ್ತಿದ್ದರಿಂದ ಒಂದು ತರದ ಸುಂದರ ಸ್ವರಸಂಗಮ ಉತ್ಪನ್ನವಾಯಿತು.
ಎದ್ದು, ಅಂತೂ ಕೊನೆಗೆ ಗುರುತು ಮಾಡಿದಲ್ಲಿ ಮೊಳೆಯ ಮೊನೆಯನ್ನು ಎಡಗೈಯಿಂದ ಗೋಡೆಯ ಮೇಲಿರಿಸಿ ಬಲಗೈಯಲ್ಲಿ ಸುತ್ತಿಗೆ ಹಿಡಿದ. ಮೊದಲ ಪೆಟ್ಟುಬಿದ್ದಿದ್ದು ಸರಿಯಾಗಿ ಹೆಬ್ಬೊಟ್ಟಿನ ಮೇಲೆ. ಆತ ಚೀರುತ್ತ ಕೆಡವಿದ ಸುತ್ತಿಗೆ ಬಿದ್ದದ್ದು ಯಾರದೋ ಕಾಲ್ಬೆರಳುಗಳ ಮೇಲೆ. ಆಂಟಿ ಮರಿಯಾ ಆಗ ಮೆಲುದನಿಯಲ್ಲಿ ಪಣ ತೊಟ್ಟಿದ್ದು ಮುಂದಿನ ಸಲ ಆತನ ಕೈಯಲ್ಲಿ ಮೊಳೆ-ಸುತ್ತಿಗೆ ಏರುದ ಸಮಯ ಯಾರಾದರೂ ಅವಳಿಗೆ ಮುನ್ಸೂಚನೆ ಕೊಟ್ಟರೆ ತಾನು ಒಂದು ವಾರ ತವರಿಗೆ ಹೋಗಿ ಇರುವ ವ್ಯವಸ್ಥೆ ಮಾಡುತ್ತೇನೆ ಎಂದು.
ಕೊನೆಗೆ, ಮಧ್ಯರಾತ್ರಿಗೆ ಸರಿಯಾಗಿ ಆ ಚಿತ್ರ ಗೋಡೆಯಮೇಲೆ ನೇತು ಹಾಕಲ್ಪಟ್ಟಿತ್ತು - ಸ್ವಲ್ಪ ಸೊಟ್ಟಗೆ ಮತ್ತು ಯಾವ ಕ್ಷಣದಲ್ಲೂ ಕೆಳಗೆ ಸರಿಯುವದೇನೋ ಅನ್ನುವ ಭಂಗಿಯಲ್ಲಿ, ಸುತ್ತಲಿನ ಗೋಡೆ ಮಾತ್ರ ಸುತ್ತಿಗೆ ಪೆಟ್ಟಿನಿಂದ ನುಗ್ಗು ಮುಗ್ಗಾಗಿತ್ತು. ಆ ಹೊತ್ತಿನಲ್ಲಿ ಎಲ್ಲರಿಗೂ ಸುಸ್ತು-ಅಂಕಲ್ ಒಬ್ಬರನ್ನು ಬಿಟ್ಟು!

ಶ್ರೀವತ್ಸ ದೇಸಾಯಿ
Uncle Podger hangs a picture.
(Now out of copyright, Three Men in a Boat is available from many sources including Punguin, Wordworth classics etc.)