ಪ್ರೇಮಲತಾಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾಸಂಕಲನ – ಕೆಲವುಅನಿಸಿಕೆಗಳು

ಡಾ.ಜಿ.ಎಸ್.ಶಿವಪ್ರಸಾದ್

ಪ್ರೇಮಲತಾ ಅವರ 'ನಂಬಿಕೆಯೆಂಬ ಗಾಳಿಕೊಡೆ'  ಕಥಾ ಸಂಕಲನವನ್ನು ಇತ್ತೀಚಿಗೆ ಓದಿ ಮುಗಿಸಿ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಈ ಕೃತಿಯನ್ನು ಈಗಾಗಲೇ ಓದಿರುವವರಿಗೆ ಈ ನನ್ನ ಬರಹ ಹೊಸ ದೃಷ್ಟಿ ಕೋನಗಳನ್ನು ನೀಡಬಹುದು. ಇನ್ನು ಓದಬೇಕು ಎಂಬ ಆಕಾಂಕ್ಷೆ ಉಳ್ಳವರಿಗೆ ಈ ಲೇಖನ ಪ್ರವೇಶ ಪರಿಚಯವನ್ನು ಒದಗಿಸಬಹುದು. ಲೇಖಕ/ಲೇಖಕಿಯರಿಗೆ ತಾವು ಬರೆದ ಕೃತಿಯನ್ನು ಇತರರು ಓದಿದರೆ ಅದರಿಂದ ಉಂಟಾಗುವ ಸಂತಸ ತೃಪ್ತಿ ಒಂದು ಕಡೆಯಾದರೆ, ಆ ಕೃತಿಯನ್ನು ಓದಿ ಅದರ ಬಗ್ಗೆ ಚರ್ಚೆ ನಡೆದಲ್ಲಿ ಅವರಿಗೆ ಸಾರ್ಥಕತೆಯ ಭಾವ ಉಂಟಾಗಬಹುದು. ಒಂದು ಕೃತಿಯ ವಿಷಯ ವಸ್ತು, ಆಳ ಮತ್ತು ವಿಸ್ತಾರಗಳು ಈ ಅಂಶಗಳನ್ನು ನಿರ್ಧರಿಸಬಹುದು.  ಬರಹಗಾರರಿಗೆ ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಇರಲಾರದು. ಇನ್ನು ಕೆಲವು ಕರ್ತೃಗಳು "ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ" ಎಂಬ ನಿರ್ಲಿಪ್ತ ನಿಲುವಿನಲ್ಲಿ ತಮ್ಮ ಒಂದು ಆತ್ಮ ತೃಪ್ತಿಗೆ ಬರವಣಿಗೆಯನ್ನು ಮುಂದುವರಿಸಬಹುದು. ಅನಿವಾಸಿ ನೆಲದಲ್ಲಿ ಮೂಡಿ ಬರುವ ಕನ್ನಡ ಕೃತಿಗಳನ್ನು ಇಲ್ಲಿಯ ಓದುಗರು ಓದಿ ಉತ್ತೇಜಿಸುವುದು, ಸಾಧ್ಯವಾದಲ್ಲಿ ಚರ್ಚೆಗೆ ಒಳಪಡಿಸುವುದು ಅಗತ್ಯವಷ್ಟೇ ಅಲ್ಲ, ಅದು ಅನಿವಾಸಿ  ಕನ್ನಡಿಗರ ಜವಾಬ್ದಾರಿಯೂ ಹೌದು. ಇದನ್ನು ನಮ್ಮ ಅನಿವಾಸಿ ದಶಮಾನೋತ್ಸವ ಸಂದರ್ಭದಲ್ಲಿ ಅನುಷ್ಠಾನಕ್ಕೆ ತರಲಾಯಿತು. ಸಮಯೋಚಿತವಾಗಿ ವಾಟ್ಸ್ ಆಪಿನಲ್ಲೂ ಚರ್ಚೆ ಮಾಡುಕೊಳ್ಳುತ್ತ ಬಂದಿದ್ದೇವೆ. ನನ್ನ ಒಂದು ಸಣ್ಣ ಕಾಣಿಕೆ ಈ ಬರಹದ ರೂಪದಲ್ಲಿ ಅಭಿವ್ಯಕ್ತಗೊಂಡಿದೆ. ಇಲ್ಲಿ ಸಣ್ಣಕಥೆಗಳ ಬಗ್ಗೆ ನನ್ನ ಕೆಲವು ಸಾರ್ವತ್ರಿಕ ಅನಿಸಿಕೆಗಳನ್ನು ಬೆಸೆಯಲಾಗಿದೆ. 

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಹೊಸ ವರ್ಷದಲ್ಲಿ ಇನ್ನೂ ಹೆಚ್ಚಿನ ಹೊಸ ಕೃತಿಗಳು ಹೊರಬಂದು ಸೃಜನಶೀಲತೆ ವಿಜೃಂಭಿಸಲಿ

-ಸಂ
ಪ್ರೇಮಲತಾ ಅವರು ದಶಕಗಳಿಂದ ಸಣ್ಣ ಕಥೆಗಳನ್ನು ಬರೆದು ಸುಧಾ, ಮಯೂರ ಮುಂತಾದ ಸಂಚಿಕೆಗಳಲ್ಲಿ ಪ್ರಕಟಿಸಿದ್ದಾರೆ. ಹಾಗೆ ಮೂರು ಕಥಾಸಂಕಲನಗಳನ್ನು ಈಗಾಗಲೇ ಪ್ರಕಟಿಸಿ ಖ್ಯಾತರಾಗಿದ್ದಾರೆ. ಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾ ಸಂಕಲನವು ವೀರಲೋಕ ಪ್ರಕಾಶನದಿಂದ ೨೦೨೩ರಲ್ಲಿ ಲೋಕಾರ್ಪಣೆಗೊಂಡಿದೆ. ಇಲ್ಲಿ ೧೦ ಸಣ್ಣ ಕಥೆಗಳಿವೆ. ಪುಸ್ತಕ ತರಿಸಿಕೊಂಡು ಹಲವಾರು ದಿನಗಳು ಕಳೆದಿದ್ದರೂ ಈಗ ಸಮಯ ಒದಗಿಬಂದು ಇತ್ತೀಚಿಗಷ್ಟೇ ಓದಿ ಮುಗಿಸಿ, ನನ್ನ ಕೆಲವು ಪ್ರಾಮಾಣಿಕ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಇದೊಂದು ವಿಮರ್ಶೆಯಾಗಿ ಮೂಡಿ ಬಂದಿದ್ದರೆ ಹಾಗೂ ಇರಲಿ. 

ಈ ಸಂಕಲನದ ಶೀರ್ಷಿಕೆ ಮತ್ತು ಮುಖಪುಟ ಇಲ್ಲಿಯ ಕಥೆಗಳ ರೂಪಕದಂತೆ ನಿಂತಿದೆ. ಸ್ವತಃ ಲೇಖಕಿ ತಮ್ಮ ಅರಿಕೆಯಲ್ಲಿ ಪ್ರಸ್ತಾಪಿಸಿರುವಂತೆ "ನಂಬಿಕೆಗಳೇ ಜೀವನಕ್ಕೆ ಆಧಾರ, ಬದುಕೇ ಒಂದು ನಂಬಿಕೆ" ಬದುಕಿನ ಹಲವಾರು ಸನ್ನಿವೇಶಗಳಲ್ಲಿ ಈ ನಂಬಿಕೆ ಎನ್ನುವುದು ಚುಕ್ಕಾಣಿಯಾಗಿ ನಮ್ಮ ದಿಕ್ಕು ದೆಸೆಗಳನ್ನು ಬದಲಾಯಿಸುತ್ತದೆ ಎಂಬ ವಿಚಾರ ಸೋಜಿಗವಾದದ್ದು. ಕ್ರಿಸ್ತ್ಮಸ್ ಸಮಯದಲ್ಲಿ ಒಬ್ಬ ಎಳೆ ಬಾಲಕ ರಾತ್ರಿ ತಾನು ಮಲಗಿದ್ದ ಸಮಯದಲ್ಲಿ ಸ್ಯಾಂಟಕ್ಲೌಸ್ ಬಂದು ತನಗೆ ಉಡುಗೊರೆಯನ್ನು ಕೊಡುತ್ತಾನೆ ಎನ್ನುವ ನಿರೀಕ್ಷೆ ಒಂದು ನಂಬಿಕೆಯಾದರೆ, ಬೆನ್ನಿಗೆ ಬಾಂಬು ಕಟ್ಟಿಕೊಂಡಿರುವ ತರುಣ ಭಯೋತ್ಪಾದಕ ತಾನು ಜಿಹಾದಿನಲ್ಲಿ ಮಡಿದರೆ ಪರಲೋಕದಲ್ಲಿ ಅಪ್ಸರೆಯನ್ನು ಕೂಡಬಹುದು ಎಂಬ ಅವನ ನಿರೀಕ್ಷೆಯೂ ನಂಬಿಕೆಯೇ. ಆದರೆ ಈ ರೀತಿಯ ನಂಬಿಕೆಗಳ ಪರಿಣಾಮಗಳೇನು ಎಂಬುದು ಮುಖ್ಯವಾದ ಪ್ರಶ್ನೆ. ನಂಬಿಕೆ ಮತ್ತು ತರ್ಕ, ವೈಚಾರಿಕತೆ, ವಿಜ್ಞಾನ ಇವುಗಳ ಮುಖ ಮುಖಿಯನ್ನು ಈಗಾಗಲೇ ಹಲವಾರು ಕಥೆ, ಕಾದಂಬರಿ ಮತ್ತು ಸಿನಿಮಾಗಳು ಶೋಧಿಸಿವೆ. ಪ್ರೇಮಲತಾ ಅವರೂ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ಸಂಬಂಧಗಳನ್ನು ಬೆಸೆಯುವುದು ಈ ನಂಬಿಕೆಗಳೇ. ಒಬ್ಬ ಬರಹಗಾರನಿಗೂ ತನ್ನ ಬರಹ ಓದುಗರ ಗ್ರಹಿಕೆಗೆ, ನಿರೀಕ್ಷೆಗೆ ನಿಲುಕಬಹುದು ಎನ್ನುವ ಹಂಬಲವೂ ಈ ನಂಬಿಕೆಯನ್ನು ಆಧರಿಸಿರುತ್ತದೆ. ಈ ಸಂಕಲನದ ಹಲವಾರು ಕಥೆಗಳ ಭೂಮಿಕೆ ಒಂದಲ್ಲ ಒಂದು ರೀತಿ ಆ ನಂಬಿಕೆಗೆ ಸಂಬಂಧಿಸಿದ್ದು.

ಕಥೆ ಹುಟ್ಟುವುದೇ ಜೀವನದ ಅನುಭವಗಳ ಮೇಲೆ. ಅದು ಬರಹಗಾರನ ವೈಯುಕ್ತಿಕ ಜೀವನ ಅನುಭವವಾಗಿರಬಹುದು, ಇಲ್ಲವೇ ಬರಹಗಾರ ಕಂಡು ಕೇಳಿದ ಅನುಭವವಾಗಿರಬಹುದು. ಈ ಅನುಭವ ಸಾಮಾನ್ಯನಿಗೆ ಒಂದು ಸಾಧಾರಣ ಘಟನೆ, ಸನ್ನಿವೇಶದಂತೆ ಕಂಡರೂ ಸೃಜನಶೀಲ ಲೇಖಕ, ಲೇಖಕಿಯರು ತಮ್ಮ ಅಪ್ರತಿಮ ಕಲ್ಪನಾ ಶಕ್ತಿಯಿಂದ ಆ ಘಟನೆಯನ್ನು ಗ್ರಹಿಸಿ ಅದಕ್ಕೆ ರೆಕ್ಕೆ, ಪುಕ್ಕ, ಮಾಂಸ, ಎಲಬುಗಳನ್ನು ಜೋಡಿಸಿ ಒಂದು ಸುಂದರ ಕಲಾಕೃತಿಯನ್ನು ಕಡೆದು ನಿಲ್ಲಿಸುತ್ತಾರೆ. ಆ ಪ್ರತಿಭೆ ಪ್ರೇಮಲತಾ ಅವರಿಗೆ ನಿಜವಾಗಿಯೂ ಪ್ರಾಪ್ತವಾಗಿದೆ.

ಬದುಕಿನ ಪ್ರಸಂಗಗಳ ಚಿತ್ರವೇ ಸಣ್ಣ ಕಥೆಯ ಬುನಾದಿ, ಹೀಗಾಗಿ ಸಣ್ಣ ಕಥೆಗಳಲ್ಲಿ, ಕೆಲವೇ ಪುಟಗಳಲ್ಲಿ ಕಥೆಯನ್ನು ಹೇಳಿ ಮುಗಿಸಬೇಕಾದ ಒತ್ತಡ ಇರುವುದರಿಂದ ಇಲ್ಲಿ ಹೆಚ್ಚು ಪಾತ್ರಗಳನ್ನು ತರಲು ಅವಕಾಶವಿಲ್ಲ ಮತ್ತು ಇಲ್ಲಿ ಪಾತ್ರಗಳನ್ನು ಆಳವಾಗಿ ಪೋಷಿಸಲು ಸಾಧ್ಯವಿಲ್ಲ. ಕಾದಂಬರಿಯಲ್ಲಿ ಈ ನಿರ್ಬಂಧೆನೆಗಳು ಇರುವುದಿಲ್ಲ. ಕಾದಂಬರಿಗಳಲ್ಲಿ ಕಾಣುವ ಆಳ, ವಿಸ್ತಾರಗಳನ್ನು ಸಣ್ಣ ಕಥೆಗಳಲ್ಲಿ ತರಲು ಸಾಧ್ಯವಿಲ್ಲವಾದರೂ ಸಣ್ಣ ಕಥೆಗಳ ಅನುಕೂಲವೆಂದರೆ ಇಲ್ಲಿ ವಿವಿಧ ಸಾಮಾಜಿಕ ವಿಷಯಗಳನ್ನು ಕಥಾವಸ್ತುವಾಗಿ ಬಳಸ ಬಹುದು, ಹೆಚ್ಚು ವಿಚಾರಗಳನ್ನು ಚಿಂತನೆಗೆ ಒಳಪಡಿಸಬಹುದು. ಕಾದಂಬರಿ ಹರಿಯುವ ನದಿಯಾದರೆ, ಸಣ್ಣ ಕಥೆಗಳು ಕೆರೆಗಳಂತೆ.

ಸಣ್ಣ ಕಥೆಗಳು ಒಡ್ಡುವ ಎಲ್ಲ ಮಿತಿಯೊಳಗೂ ಕೂಡ ಪ್ರೇಮಲತಾ ಅವರು ಸನ್ನಿವೇಶಗಳ ಜೊತೆ ಜೊತೆಗೆ ತಮ್ಮ ಕಥಾ ನಾಯಕ ನಾಯಕಿಯರನ್ನು ಪೋಷಿಸಿದ್ದಾರೆ. ಈ ಸಂಕಲನದ "ತೆರವು' ಎಂಬ ಕಥೆಯಲ್ಲಿ ಕರ್ನಾಟಕದ ರಿಯಲ್ ಎಸ್ಟೇಟ್ ಅವ್ಯವಹಾರದಲ್ಲಿ ಸಿಕ್ಕಿಕೊಂಡಿರುವ ದಂಪತಿಗಳ ಸನ್ನಿವೇಶದಲ್ಲಿ ಏನನ್ನೂ ಸಾಧಿಸಲಾರದ ನಾಮರ್ದ ಗಂಡ ಮತ್ತು ಮನೆ-ಮಡದಿಯಾದರೂ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡು ದಿಟ್ಟತನದಿಂದ ಲ್ಯಾನ್ಡ್ ಮಾಫಿಯಾ ಗೂಂಡಾಗಳನ್ನು ನಿಭಾಯಿಸುವ ಗೀತಾಳ ಪಾತ್ರ ಇದಕ್ಕೆ ಸಾಕ್ಷಿಯಾಗಿದೆ. ತೇಜೇಸ್ವಿಯವರ 'ಕಿರಿಗೂರಿನ ಗೈಯಾಳಿಗಳು' ಕಥೆಯನ್ನು ನೆನಪಿಗೆ ತಂದಿದೆ.

ಅನಿವಾಸಿ ಲೇಖಕರು ತಮ್ಮ ಪರಿಸರದ ನೆಲೆಯಲ್ಲಿ ಘಟಿಸುವ ಕಥೆಗಳನ್ನು ದೂರದ ಕನ್ನಡ ನಾಡಿಗೆ ತಿಳಿಸ ಬೇಕೇ ಅಥವಾ ಅವರು ಎಲ್ಲಿದ್ದರೂ, ಎಂತಿದ್ದರೂ ಕನ್ನಡ ನೆಲೆದ ಕಥೆಗಳನ್ನಷ್ಟೇ ಬರೆಯ ಬೇಕೇ ಎಂಬ ಪ್ರಶ್ನೆ ಮೂಡುವುದು ಸಹಜವೇ. ಇಂಗ್ಲೆಂಡಿನಲ್ಲಿ ನಡೆದ ಕಥೆ ಕನ್ನಡ ಜನಕ್ಕೆ ಸಲ್ಲಬಹುದೇ ಎಂತೆಂಬ ಪ್ರಶ್ನೆ ಅನಿವಾಸಿ ಬರಹಗಾರರನ್ನು ಕಾಡುವುದು ಸಹಜ. ಒಬ್ಬ ಲೇಖಕ ಯಾವ ದೇಶ ಕಾಲಮಾನಗಳಲ್ಲಿದ್ದರೂ ಅದು ಮನುಷ್ಯ ಸಂಬಂಧ, ಸಹಜ ಸ್ವಭಾವಗಳ ವೈರುಧ್ಯ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿದ್ದಲ್ಲಿ ಅದು ಎಲ್ಲಾ ದೇಶಕ್ಕೂ ಮತ್ತು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುತ್ತವೆ. ಈ ಕಾರಣಗಳಿಂದ ನಮಗೆ ರಷ್ಯಾದ ಟಾಲ್ಸ್ಟಾಯ್ ಮತ್ತು ಬಂಗಾಳದ ಟ್ಯಾಗೋರ್ ಬರೆದ ಕಥೆಗಳು ಹತ್ತಿರವಾಗುತ್ತವೆ. ಪ್ರೇಮಲತಾ ಅವರು ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡತಿ. ಅವರ ಪರಿಸರ ಇಂಗ್ಲೆಂಡಿನ ಆಂಗ್ಲ ಸಂಸ್ಕೃತಿಗೆ ಸಂಬಂಧಿಸಿದ್ದಾದರೂ ಅವರು ಬರೆಯುವ ಕಥೆಗಳು ನಮ್ಮ ಕನ್ನಡ ನೆಲದ ಕಥೆಗಳಾಗಿವೆ. ಇಲ್ಲಿ ಕರ್ನಾಟಕ ನಗರಗಳ, ಮಲೆನಾಡಿನ ದಟ್ಟ ಕಾಡುಗಳ, ಕಾರ್ಪೊರೇಟ್ ಕಂಪನಿಗಳ ಕಥೆ ಇವೆ. ಇದಕ್ಕೆ ಹೊರತಾಗಿ 'ದ್ರೋಹ' ಎಂಬ ಕಥೆ ಲಂಡನ್ ಮತ್ತು ಸಿರಿಯಾದಲ್ಲಿ ಸಂಭವಿಸುತ್ತದೆ.

ಇನ್ನೊಂದು ವಿಚಾರ; ಕಥೆ ಯಾವುದೇ ನೆಲದಲ್ಲಿ ಹುಟ್ಟಿಕೊಂಡರೂ ಆ ಕಥನ ಪ್ರಪಂಚದ ಬೇರೆಡೆ ಇನ್ನೊಬ್ಬರ ಕಥೆಯಾಗಿರಬಹುದು. ಮನುಷ್ಯನ ಮೂಲಭೂತ ಸ್ವಭಾವಗಳಿಗೆ ಬಣ್ಣ, ಸಂಸ್ಕೃತಿ, ಗಡಿ ರೇಖೆಗಳ ಹಂಗುಂಟೆ? ಈ ಸಂಕಲನದ ಶೀರ್ಷಿಕೆ ಕಥೆಯಾಗಿರುವ ‘ನಂಬಿಕೆಯೆಂಬ ಗಾಳಿಕೊಡೆ’ಯಲ್ಲಿ ಬೆಂಗಳೂರಿನ ಒಂದು ಖಾಸಗಿ ಆಫೀಸಿನ ಉದ್ಯೋಗಿಯ ಬೀಳ್ಕೊಡುಗೆ ಪಾರ್ಟಿಯಲ್ಲಿ ಲಕ್ಷ್ಮಿ ಎಂಬ ವಿವಾಹಿತ ಮಹಿಳೆಗೆ ಅವಳ ಪಾನೀಯದಲ್ಲಿ ಒಬ್ಬ ಕುಹಕಿ ಕದ್ದು ಮುಚ್ಚಿ ಮಾದಕವಸ್ತುವನ್ನು ಸೇರ್ಪಡಿಸಿ (ಸ್ಪೈಕ್ ಮಾಡಿ) ಅದರ ಪರಿಣಾಮವಾಗಿ ಲಕ್ಷ್ಮಿ ನಶೆಯಲ್ಲಿದ್ದಾಗ ಅವಳನ್ನು ಅತ್ಯಾಚಾರಕ್ಕೆ ಒಳಪಡಿಸುತ್ತಾನೆ. ಲಕ್ಷ್ಮಿಯ ಅತ್ಯಾಚಾರವನ್ನು ನಮ್ಮ ಸಮಾಜ ಹೇಗೆ ಗ್ರಹಿಸುತ್ತದೆ, ನಮ್ಮ ವ್ಯವಸ್ಥೆ ಹೇಗೆ ತನಿಖೆ ನಡೆಸುತ್ತವೆ ಮತ್ತು ನಂಬಿಕೆ ಆಧಾರದ ಮೇಲೆ ಜನರ ನಿರೀಕ್ಷೆ ಯಾವ ಯಾವ ರೂಪಗಳನ್ನು ತಳೆಯುತ್ತದೆ, ತನಗೆ ಅತ್ಯಾಚಾರವಾಗಿದೆ ಎಂದು ಲಕ್ಷ್ಮಿ ಬಹಿರಂಗವಾಗಿ ಒಪ್ಪಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಆ ವಿಚಾರವನ್ನು ಹಂಚಿಕೊಂಡದ್ದು ಸರಿಯೇ, ತಪ್ಪೇ? ಎಂಬ ವಿಚಾರಗಳ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಆಶ್ಚರ್ಯವೆಂದರೆ ಪ್ರೇಮಲತಾ ಈ ಕಥೆಯನ್ನು ಬರೆದು ನಾಲ್ಕು ವರುಷಗಳಾಗಿವೆ, ಬಹುಶಃ ಅದೇ ಸಮಯದಲ್ಲಿ, ಫ್ರಾನ್ಸ್ ದೇಶದಲ್ಲಿ, ಗೆಜೆಲ್ ಪೆಲಿಕೋ ಎಂಬ ಹಿರಿಯ ಮಹಿಳೆಯ ಸ್ವಂತ ಗಂಡನೇ ಅವಳಿಗೆ ಗೊತ್ತಾಗದಂತೆ ಡ್ರಗ್ಸ್ ಕೊಟ್ಟು ನಶೆಯಲ್ಲಿರುವಾಗ ಅವನು ತನ್ನ ಸ್ನೇಹಿತರನ್ನು ಕರೆದು ಅವಳೊಡನೆ ಸಂಭೋಗಿಸಲು ಉತ್ತೇಜಿಸಿದ. ಅದು ಗೆಜೆಲ್ ಮೇಲೆ ನಡೆದ ಅತ್ಯಾಚಾರವೆನ್ನಬಹುದು. ಅಷ್ಟೇ ಅಲ್ಲ ಈ ಅತ್ಯಾಚಾರವನ್ನು ಅವನು ವಿಡಿಯೋ ಮಾಡಿದ್ದು ಈ ವಿಚಾರ ಇತ್ತೀಚಿಗೆ ಬಹಿರಂಗಗೊಂಡು ಅದರ ತನಿಖೆ ನಡೆಯಿತು, ಈ ಸುದ್ದಿ ಬಿಬಿಸಿ ವಾರ್ತೆಯಲ್ಲಿ ಪ್ರಸಾರಗೊಂಡಿತು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಯಿತು. ನಂಬಿಕೆಯೆಂಬ ಗಾಳಿಕೋಡೆ ಕಥೆಯಲ್ಲೂ ಆಪಾದಿತ, ಲಕ್ಷ್ಮಿ ಮೇಲೆ ನಡೆಸಿದ ಅತ್ಯಾಚಾರವನ್ನು ವಿಡಿಯೋ ಮಾಡಿರುತ್ತಾನೆ. ಇದು ಎಷ್ಟು ಕಾಕತಾಳೀಯವಾಗಿದೆ! ಪ್ರಪಂಚದ ಯಾವುದೋ ಮೂಲೆಯಲ್ಲಿ ಒಬ್ಬ ಕನ್ನಡ ಲೇಖಕಿಯ ಕಲ್ಪನೆಗೆ ದೊರಕಿದ ಕಥೆ, ಇನ್ಯಾವುದೋ ಸಂಸ್ಕೃತಿಯಲ್ಲಿ, ದೇಶದಲ್ಲಿ ಸಂಭವಿಸಿದ ನೈಜ ಘಟನೆಯಾಗಿರುವುದು ಅಚ್ಚರಿಯನ್ನು ಉಂಟುಮಾಡುವಂಥದ್ದು.

ಪ್ರೇಮಲತಾ ಅವರು ಕೈಗೆತ್ತಿಕೊಳ್ಳುವ ಕಥಾವಸ್ತುಗಳು ನಮ್ಮ ನಿಮ್ಮ ಬದುಕಿಗೆ ಬಹಳ ಹತ್ತಿರವಾದದ್ದು. ಅವರ ಕಥೆಗಳಲ್ಲಿ ಪ್ರಾಮಾಣಿಕತೆ ಇದೆ, ಇಲ್ಲಿ ಅಥೆಂಟಿಸಿಟಿ ಇದೆ. ಅವರು ಸಾಮಾಜಿಕ ಸಮಸ್ಯೆಗಳನ್ನು ಅನೇಕ ಸೂಕ್ಷ್ಮ ದೃಷ್ಟಿ ಕೋನಗಳಿಂದ ವಿಶ್ಲೇಷಿಸಿದ್ದಾರೆ, ಇಲ್ಲಿಯ ಕಥೆಗಳು ಹಲವಾರು ಚಿಂತನೆಗಳಿಗೆ ಅನುವು ಮಾಡಿಕೊಡುತ್ತದೆ. ಇಲ್ಲಿ ಅತಿಯಾದ ಭಾವುಕತೆ ಇಲ್ಲ, ಎಲ್ಲ ಸನ್ನಿವೇಶಗಳನ್ನು ಹದವಾಗಿ ನಿರೂಪಿಸಲಾಗಿದೆ. ಇಲ್ಲಿ ಸ್ತ್ರೀ ಭಾವನೆಗಳಷ್ಟೇ ಅಲ್ಲದೆ ಪುರುಷರ ಭಾವನೆಗಳನ್ನು ನಿಭಾಯಿಸಲಾಗಿದೆ. ಇದರ ಉತ್ತಮ ಉದಾಹರಣೆಯನ್ನು 'ಗೊಡ್ಡು' ಎಂಬ ಕಥೆಯಲ್ಲಿ ಕಾಣಬಹುದು. ಸಾಮಾನ್ಯವಾಗಿ ಬಂಜೆತನವೆಂದರೆ ಅದು ಸ್ತ್ರೀಯರಿಗಷ್ಟೇ ಸಂಬಂಧಿಸಿರುವ ವಿಚಾರ ಎಂದು ಸಮಾಜ ನಂಬಿರುತ್ತದೆ. ಮಕ್ಕಳಾಗದ ದಾಂಪತ್ಯದಲ್ಲಿ ಬಹುಪಾಲು ಹೆಂಗಸೇ ಆಪಾದನೆಗೆ ಒಳಗಾಗುವುದನ್ನು ಕಾಣುತ್ತವೆ. ‘ಎಕ್ಸ್ ಎಕ್ಸ್ ವೈ’ (XXY) ಎಂಬ ಗಂಡಸಿನ ಬಂಜೆತನವನ್ನು ಕಥೆಯಲ್ಲಿ ತಂದು ಲೇಖಕಿ ಈ ನಂಬಿಕೆಯನ್ನು ಒಡೆಯುತ್ತಾರೆ. ಕಥಾ ನಾಯಕನಿಗೆ ತನ್ನ ಬಂಜೆ ತನದ ಅರಿವಾದಾಗ ಅವನಿಗೆ ಉಂಟಾಗುವ ಭಾವನೆಗಳ ಏರು ಪೆರುಗಳನ್ನು ಮತ್ತು ತಾನು ನಿಷ್ಪ್ರಯೋಜಕ ಎಂಬ ಮಾನಸಿಕ ತೊಳಲಾಟವನ್ನು ಅತ್ಯಂತ ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಸಮಾಜ ತಾನು ನಂಬಿರುವ ಸಾಮಾಜಿಕ "ಸತ್ಯಗಳನ್ನು" ನಂಬಿಕೆಗಳನ್ನು ಒಡೆದು ತೋರಿಸಿದಾಗ ಉಂಟಾಗುವ ಆಘಾತ ಬಹಳ ಆಳವಾದದ್ದು. ಅದು ಸಮಾಜವನ್ನು ತಿದ್ದುವ ಪ್ರಯತ್ನವೂ ಹೌದು. ಈ ಕಾರಣಕ್ಕಾಗಿ ನಮಗೆ ಪ್ರೇಮಲತಾ ಅವರ ಕಥೆಗಳು ಪ್ರಸ್ತುತವಾಗುತ್ತವೆ.

ಸಣ್ಣ ಕಥೆಗಳು ಎಷ್ಟು ಉದ್ದವಾಗಿರಬೇಕು ಎಂಬುದಕ್ಕೆ ಯಾವುದೇ ಅಳತೆಗೋಲುಗಳಿಲ್ಲ. ಹೇಳಿದಷ್ಟೂ ಕಥೆಯೇ. ಪ್ರೇಮಲತಾ ಅವರ ಕಥೆಗಳು ಕೊಂಚ ದೀರ್ಘವೆನಿಸುತ್ತದೆ. ಇವುಗಳ ನಡುವೆ ‘ನಿರ್ವಾತ’ ಎಂಬ ಕಥೆ ನಿಜವಾಗಿಯೂ ಸಣ್ಣ ಕಥೆ ಎನ್ನಬಹುದು. ಕೆಲವೇ ಪುಟಗಳ ಈ ಕಥೆ 'ಇನ್ಸೆಸ್ಟ್' ಕುರಿತಾಗಿದೆ. ಕಥಾನಾಯಕಿಯ ತಂದೆಯೇ ತನ್ನ ಚಿಕ್ಕ ತಾತನಾಗಿರುವ ಕಥೆ ಪರಿಣಾಮಕಾರಿಯಾಗಿದೆ. ಕನ್ನಡದ ಹಿಂದಿನ ಲೇಖಕರು ಸಲಿಂಗಕಾಮ, ವಿಕೃತ ಕಾಮ, ಅತ್ಯಾಚಾರ ಈ ವಿಚಾರಗಳನ್ನು ಮಡಿವಂತಿಕೆಯಿಂದ ಆಯ್ಕೆ ಮಾಡುತ್ತಿರಲಿಲ್ಲ. ಇದು ಸಾಮಾಜಿಕವಾಗಿ ನಿಷಿದ್ಧವಾದ ವಿಷಯವಾಗಿತ್ತು. ಪ್ರೇಮಲತಾ ಅವರು ಈ ರೀತಿಯ ಬಾಹಿರವಾದ ವಿಚಾರಗಳನ್ನು ಮುನ್ನೆಲೆಗೆ ತಂದಿರುವುದು ಶ್ಲಾಘನೀಯ. ಈ ಪ್ರಯತ್ನವನ್ನು ಇತ್ತೀಚಿನ ಇತರ ಲೇಖಕರೂ ಮಾಡುತ್ತಿದ್ದಾರೆ. ಕಥೆ, ಕಾದಂಬರಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಈ ರೀತಿ ವಿಷಯಗಳನ್ನು ತರುವುದರಿಂದ ಅದು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸಹಾಯವಾಗುತ್ತದೆ. ಇದರಿಂದ ಸಮಾಜದಲ್ಲಿ ಪರಿವರ್ತನೆ ಆಗಬಹುದು, ಆಗದಿರಬಹುದು, ಆದರೆ ಅರಿವನ್ನು ಹೆಚ್ಚಿಸುವುದು ಲೇಖಕರ ಮತ್ತು ಸಿನಿಮಾ ನಿರ್ದೇಶಕರ ಜವಾಬ್ದಾರಿ.

ಪ್ರೇಮಲತಾ, ತಮ್ಮ ಕಥೆಯಲ್ಲಿ ತಂದಿರುವ ಅನೇಕ ಸ್ತ್ರೀ ಪಾತ್ರಗಳನ್ನು ಸಹಜವಾಗಿ ನಿರೂಪಿಸಿದ್ದಾರೆ. ಇಲ್ಲಿಯ ಬಹುತೇಕ ಕಥೆಗಳಲ್ಲಿ ಸ್ತ್ರೀ ಪಾತ್ರ ಪ್ರಧಾನವಾಗಿರುವಂತೆ ತೋರುತ್ತದೆ. ಇಲ್ಲಿ ಅವಳು ಸತ್ಯಕ್ಕಾಗಿ, ನ್ಯಾಯಕ್ಕಾಗಿ, ಪ್ರೀತಿಗಾಗಿ ಎದ್ದು ನಿಲ್ಲುತ್ತಾಳೆ. ಅತ್ಯಾಚಾರಕ್ಕೆ ಒಳಗಾಗಿ ಹಿಂಸೆಯನ್ನು ಅನುಭವಿಸಿ ತನ್ನ ಹೆಸರಿಗೆ ಒದಗಿದ ಕಳಂಕವನ್ನು ಮುಚ್ಚಿಡದೆ, ಇತರ ಸ್ತ್ರೀಯರ ರಕ್ಷಣೆಗಾಗಿ ತನ್ನ ಅತ್ಯಾಚಾರವನ್ನು ಬಹಿರಂಗಗೊಳಿಸುವ ಧೀಮಂತ ಹೆಣ್ಣಾಗಿ ನಿಲ್ಲುತ್ತಾಳೆ. ಗಂಡು ಮತ್ತು ಹೆಣ್ಣು ಉದ್ಯೋಗಿಗಳಿಗೆ ನೀಡುವ ವೇತನದಲ್ಲಿ ಉಂಟಾಗಿರುವ ತರತಮಗಳಿಗಾಗಿ ಹೋರಾಡಲು ನಿಲ್ಲುತ್ತಾಳೆ. ವಿಚ್ಛೇದನ ಪಡೆದ ಹೆಂಗಸಾದರೂ ತನ್ನ ಭಾವಿ ಪತಿಗೆ ಕ್ಯಾನ್ಸರ್ ರೋಗ ತಟ್ಟಿದ್ದಾಗ ಅವನನ್ನು ಬೆಂಬಲಿಸಿ ನಿಂತು ಸಾಂತ್ವನ ನೀಡುವಷ್ಟು ಉದಾರಿಯಾಗಿರುತ್ತಾಳೆ. ಸಾಂಪ್ರದಾಯ ದೃಷ್ಟಿಕೋನಗಳಲ್ಲಿ ಸ್ತ್ರೀ ಪುರುಷನ ಅಧೀನಳು, ಅಬಲೆ, ಗಂಡನ ನೆರಳಲ್ಲಿ ಜೀವಿಸುವವಳು ಎಂತೆಲ್ಲಾ ನಮ್ಮ ಹಿಂದಿನ ಕಥೆ, ಪುರಾಣ, ಕಾದಂಬರಿ ಮತ್ತು ಸಿನಿಮಾಗಳಲ್ಲಿ ಚಿತ್ರಿಸಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಸ್ತ್ರೀಗೆ ತನ್ನದೇ ಅಸ್ತಿತ್ವವಿದೆ, ಅವಳು ತನ್ನ ಸಮಾನ ಹಕ್ಕುಗಳಿಗೆ ನಿಲ್ಲಬಲ್ಲಳು ಎಂಬ ವಿಚಾರವನ್ನು ಇಲ್ಲಿಯ ಕಥೆಗಳಲ್ಲಿ ಕಾಣಬಹುದು. ಜೊತೆಗೆ ಸ್ತ್ರೀ ಒಂದು ಶಕ್ತಿ ಅಷ್ಟೇ ಅಲ್ಲ, ಸ್ನೇಹ, ಪ್ರೀತಿ, ಕರುಣೆ, ಸಹನೆ ಮತ್ತು ಅನುಕಂಪೆಯ ಪ್ರತಿಮೆಯಾಗಿಯೂ ನಿಲ್ಲುತ್ತಾಳೆ.

'ವರ್ತುಲ' ಎಂಬ ಕಥೆ ಬೇರೆ ಕಥೆಗಳಿಗಿಂತ ಭಿನ್ನವಾಗಿ ಎದ್ದು ನಿಲ್ಲುತ್ತದೆ. ಬದುಕೆಂಬ ಸ್ಪರ್ಧೆಯಲ್ಲಿ ನಾವು ಯಶಸ್ಸಿನ ಸಾಧನೆಯಲ್ಲಿ ಸಿಕ್ಕಿಕೊಂಡಿ "ಇರುವುದೆಲ್ಲವ ಬಿಟ್ಟು ಇರದುದರ ಕಡೆ ತುಡಿಯುವ" ನಾಗರೀಕತೆ ಎಂಬ ಖಾಯಿಲೆಯಲ್ಲಿ ನರಳುವವವರ ಚಿತ್ರ ಈ ಕಥೆಯಲ್ಲಿದೆ. ಇಲ್ಲಿ ಪರಿಸರ ನಾಶದ ಬಗ್ಗೆ ಕಾಳಜಿ ಇದೆ. ತೀವ್ರ ಗತಿಯಲ್ಲಿ ಬದಲಾಗಿ ನಿಬಿಡವಾಗಿರುವ ನಗರಗಳ ನಡುವೆ ನಿಡುಸುಯ್ಯುವ ಸ್ವರಗಳ ದನಿಯಿದೆ. "ಹೊಸತಿಗೆ -ಹಳತಿಗೂ, ಒಳ್ಳೆಯದಕ್ಕೂ-ಕೆಟ್ಟದಕ್ಕೂ, ವಿವೇಕಕ್ಕೂ-ಅವಿವೆಕ್ಕಕ್ಕೂ, ಭೂತ-ಭವಿಷ್ಯತ್ತಿಗೂ ಇರುವ ಪರದೆ ಅತಿ ತೆಳುವಾದದ್ದು" ಎಂಬ ಮಾತನ್ನು ಲೇಖಕಿ ಇಲ್ಲಿ ಪ್ರಸ್ತಾಪಿಸುತ್ತಾರೆ. ಈ ಮಾತುಗಳು ಎಲ್ಲರನ್ನು ಕಾಡುವ ವಿಚಾರ. ಹಿಂದೊಮ್ಮೆ ಹಳೆಯದೆಂದು ನಾವೇ ತಿರಸ್ಕರಿಸಿದ ಬದುಕಿನ ರೀತಿಗಳು, ದಿನ ನಿತ್ಯ ಬಳಕೆಯ ವಸ್ತುಗಳು, ಮಣ್ಣಿನ ವಾಸನೆ, ನಿಸರ್ಗದ ತಾಜಾತನ ಕಾಲದ ವರ್ತುಲದಲ್ಲಿ ಕಳೆದು ಹೋಗಿ ಮತ್ತೆ ನಮಗೆ ಅದೇ ಹಳೆತಿನ ಬಗ್ಗೆ ಹೊಸ ವ್ಯಾಮೋಹ ಹುಟ್ಟಿಕೊಳ್ಳುವ ಪರಿ ಸೋಜಿಗವಾದದ್ದು. ಈ ವರ್ತುಲದಲ್ಲಿ ಮೊದಲಾವುದು, ಕೊನೆಯಾವುದು ಎಂಬ ಪ್ರಶ್ನೆ ಕಾಡುತ್ತದೆ. ಪ್ರಗತಿಯ ನೆಪದಲ್ಲಿ ಎಲ್ಲವನ್ನೂ ಕಬಳಿಸುವ ನಮ್ಮ ದುರಾಸೆಯನ್ನು ಪ್ರೇಮಲತಾ ಅವರು "ಹಾವೊಂದು ತನ್ನ ಬಾಲದಿಂದ ಶುರು ಮಾಡಿ ತನ್ನನ್ನು ತಾನೇ ಕಬಳಿಸುವ" ದುರಂತ ಪ್ರಯತ್ನದ ರೂಪಕವನ್ನು ಇಲ್ಲಿ ಇಟ್ಟಿದ್ದು ಅದು ಬಹಳ ಅರ್ಥಪೂರ್ಣವಾಗಿದೆ.

ಈ ಕಥಾ ಸಂಕಲನದ ಕಥಾ ನಿರೂಪಣೆ ಕೆಲವೆಡೆ ಸರಳವಾಗಿರಬಹುದಿತ್ತು. ಹಿಂದು-ಮುಂದಿಲ್ಲದೆ ಏಕಾಏಕಿ ಇಬ್ಬರ ನಡುವಿನ ಸಂಭಾಷಣೆಯೊಂದಿಗೆ ಶುರುವಾಗುವ ಕಥೆ ಓದುಗನಲ್ಲಿ ಗೊಂದಲ ಉಂಟುಮಾಡಬಹುದು. ಸಾರ್ವತ್ರಿಕವಾಗಿ ಹೇಳುವುದಾದರೆ ಓದುಗನನ್ನು ಕಥೆಯ ಆವರಣದೊಳಗೆ ಬರಮಾಡಿಕೊಳ್ಳುವ ಬಗ್ಗೆ ಲೇಖಕರು ಎಚ್ಚರಿಕೆ ವಹಿಸಬೇಕು. ಹೀಗಾಗಿ ಕಥೆಯ ಪ್ರವೇಶ ಸರಾಗವಾಗಿದ್ದಾರೆ ಒಳಿತು. ಕಥೆಯ ನಿರೂಪಕರೇ ಕಥೆಗೆ ಒಂದಿಷ್ಟು ಹಿನ್ನೆಲೆಯನ್ನು ಕೊಟ್ಟು ಪಾತ್ರಗಳನ್ನು ಸಾವಧಾನವಾಗಿ ಪರಿಚಯಿಸಿದರೆ ನಂತರ ಸಂಭಾಷಣೆಯನ್ನು ಗ್ರಹಿಸುವುದಕ್ಕೆ ಸರಾಗವಾಗುತ್ತದೆ ಎಂಬುದು ನನ್ನ ಅನಿಸಿಕೆ. ನಾವೆಲ್ಲಾ ಹಿಂದೆ ಓದಿರುವ ಜನಪ್ರಿಯ ಕಥೆ ಕಾದಂಬರಿಯಲ್ಲಿ ಕಥಾ ವಸ್ತುವನ್ನು ಫ್ಲಾಶ್ ಬ್ಯಾಕ್ ಮಾದರಿಯಲ್ಲಿ ಹಿಂದು ಮುಂದೆ ಮಾಡುವ ತಂತ್ರವನ್ನು ನೋಡಿದ್ದೇವೆ. ಇದು ದೃಶ್ಯ ಮಾಧ್ಯಮಗಳಲ್ಲಿ ಗ್ರಹಿಸುವುದು ಸುಲಭ ಆದರೆ ಬರಹದಲ್ಲಿ ಬಳಸಿದಾಗ ಕಥೆಯನ್ನು ಗ್ರಹಿಸುವುದು ಕಷ್ಟದ ಕೆಲಸ. ಈ ತಂತ್ರ ಸಣ್ಣ ಕಥೆಗಳಲ್ಲಿ ಅಷ್ಟು ಪ್ರಯೋಜನಕ್ಕೆ ಬರದಿದ್ದರೂ ಅದನ್ನು ಕಾದಂಬರಿಗಳಲ್ಲಿ ಅಗತ್ಯವಿದ್ದಾಗ ತರಬಹುದು. ಅಂದಹಾಗೆ ಈ ಕೃತಿಯಲ್ಲಿ ಆ ಫ್ಲಾಶ್ ಬ್ಯಾಕ್ ಗಳಿಲ್ಲ.

ಪ್ರೇಮಲತಾ ಬಳೆಸಿರುವ ಭಾಷೆ ಬಹಳ ಉತ್ಕೃಷ್ಟವಾಗಿದೆ. ಅವರಿಗೆ ಕನ್ನಡ ಭಾಷೆಯ ಮೇಲಿರುವ ಹತೋಟಿ ಇಲ್ಲಿ ಎದ್ದು ತೋರುತ್ತದೆ. ಸಂಕೀರ್ಣವಾಗಿರುವ ವೈದ್ಯಕೀಯ ವಿಷಯಗಳನ್ನು ಸರಳಗೊಳಿಸಿ ಕಥೆ ಹೇಳುವ ಸಾಮರ್ಥ್ಯ ಅವರಿಗಿದೆ. ಸಂಬಂಧಗಳು ಎಂಬ ಕೊನೆ ಕಥೆಯಲ್ಲಿ ಮನುಷ್ಯ-ಮನುಷ್ಯ ಸಂಬಂಧಗಳನ್ನು ಕುರಿತಾದ ಕಥಾವಸ್ತು ಇದೆ. ಯಾರು ಯಾರಿಗೆ? ಹೇಗೆ? ಎಲ್ಲಿಯವರೆಗೆ? ಯಾವ ರೀತಿ? ಸಂಬಂಧಿ ಎನ್ನುವ ವಿಚಾರವನ್ನು ಆಳವಾಗಿ ಚಿಂತಿಸಲಾಗಿದೆ. ಸಾವು ಎಂಬ ವಿಷಯವನ್ನು ಅಂತ್ಯಂತ ಸೂಕ್ಷ್ಮವಾಗಿ ನಿಭಾಯಿಸಲಾಗಿದೆ. ಕ್ಯಾನ್ಸರ್ ಪೀಡಿತ ಕಥಾನಾಯಕ ಸಾವನ್ನು ಬರಮಾಡಿಕೊಳ್ಳುವ ಸನ್ನಿವೇಶವನ್ನು ನವುರಾದ ರೂಪಕದೊಂದಿಗೆ ಬಿತ್ತರಿಸಲಾಗಿದ್ದು ಈ ಹಂತದಲ್ಲಿ ಕಥೆ ಮತ್ತು ಕಥಾ ಸಂಕಲನ ಕೊನೆಗೊಳ್ಳುತ್ತದೆ. ಈ ರೀತಿಯ ಉಪಮೆಗಳ ಬಳಕೆ ಇಲ್ಲಿಯ ಕಥೆಗಳಿಗೆ ವಿಶೇಷ ಆಯಾಮಗಳನ್ನು ದೊರಕಿಸಿಕೊಟ್ಟಿದೆ.

ಕಥೆ, ಕಾದಂಬರಿಯನ್ನು ಓದುತ್ತಿರುವಾಗ ಕಥೆಯ ಓಘ, ದಿಕ್ಕು, ಬೆಳವಣಿಗೆ, ಕುತೂಹಲ ಇವುಗಳಲ್ಲಿ ಮಗ್ನರಾಗಿ ಮುಳುಗಿ ಮೇಲೇಳುತ್ತೇವೆ. ಓದು ಮುಗಿದ ನಂತರ ಕೆಲವು ಕಥೆಗಳು ಸರಳ ಕಥೆಗಳಾಗಿ ನೆನಪಿನಿಂದ ಉದುರುತ್ತವೆ. ಇನ್ನು ಕೆಲವು ಕಥೆಗಳು ಹಿನ್ನೋಟದಲ್ಲಿ ಹಲವಾರು ಚಿಂತನೆಗಳಿಗೆ ಅನುವುಮಾಡಿಕೊಡುತ್ತವೆ, ಹೊಸ ಹೊಳಹುಗಳನ್ನು ನೀಡುತ್ತವೆ ಮತ್ತು ನಮ್ಮ ಸ್ಮೃತಿಯಲ್ಲಿ ಧೀರ್ಘ ಕಾಲ ಉಳಿಯುತ್ತವೆ, ಅದರಲ್ಲಿ ಪ್ರೇಮಲತಾ ಅವರ ಈ ಕೃತಿಯೂ ಸೇರಿದೆ.

ಇಬ್ಬರು ವ್ಯಕ್ತಿಗಳು ಭೇಟಿಯಾಗುವ ಕತೆಗಳು – ಕೇಶವ ಕುಲಕರ್ಣಿ

ಬಹಳ ವರ್ಷಗಳಾದ ಮೇಲೆ ಅಥವಾ ದಶಕಗಳು ಗತಿಸಿದ ಮೇಲೆ ಬೇರ್ಪಟ್ಟ ಪ್ರೇಮಿಗಳು ಮತ್ತೆ ಭೇಟಿಯಾದರೆ ಏನಾಗಬಹುದು ಎನ್ನುವ ಪ್ರಶ್ನೆ ಕತೆ ಬರೆಯುವವರಿಗೆ ಮತ್ತು ಸಿನೆಮಾ ಮಾಡುವವರಿಗೆ ತುಂಬ ಇಷ್ಟದ ವಿಷಯ. ಕತೆಯಲ್ಲಿ ಇಬ್ಬರದೂ ಈಗಾಗಲೇ ಮದುವೆಯಾಗಿರಬಹುದು, ಆಗದೆಯೂ ಇರಬಹುದು. ಒಬ್ಬರದು ಮಾತ್ರ ಆಗಿ, ಇನ್ನೊಬ್ಬರು ಭಗ್ನಪ್ರೇಮಿಯಾಗಿರಬಹುದು. ಒಬ್ಬರ ವಿಚ್ಚೇದನವಾಗಿರಬಹುದು. ಒಬ್ಬರಿಗೆ ಕೊನೆಗಾಲದ ಕ್ಯಾನ್ಸರ್ ಆಗಿರಬಹುದು. ಅವರಿಬ್ಬರು ಅಚಾನಕ್ಕಾಗಿ ಭೇಟಿಯಾಗಲು ಒಂದು ಕಾರಣ ಅಥವಾ ಘಟನೆ ಬೇಕು ಆಷ್ಟೇ,  ಕತೆ ಅಲ್ಲಿಂದ ಹಿಂದೆ ಮತ್ತು ಮುಂದೆ ಸಾಗುತ್ತ, ಓದುಗರನ್ನು/ನೋಡುಗರನ್ನು ತಮ್ಮ ಟೀನೇಜ್ ಮತ್ತು ಹದಿಕರೆಯದ ದಿನಗಳಿಗೆ ಕರೆದೊಯ್ಯುತ್ತ, ಯಾರದೋ ನೆನಪನ್ನು ತರುತ್ತ, ಮನಸ್ಸಿನಲ್ಲೊಂದು ಪ್ರೀತಿಯ ಸಂವೇದನೆಯನ್ನು ಹುಟ್ಟಿಸುತ್ತವೆ. ಇಂಥ ಬಹುತೇಕ ಸಿನೆಮಾಗಳು ವಾಸ್ತವದ ತಳಹದಿಯಲ್ಲಿ ಇದ್ದರೂ ರೋಮ್ಯಾಂಟಿಸಿಸಂನ ಭಾಷೆಯನ್ನು ಉಪಯೋಗಿಸುತ್ತವೆ. 

ಇಂಥ ನೂರಾರು ಪರ್-ಮ್ಯುಟೇಶನ್ ಮತ್ತು ಕಾಂಬಿನೇಶನ್-ನಿಂದ ಇಂಗ್ಲೀಷ್ ಭಾಷೆಯಲ್ಲಿ ನೂರಾರು ಕಾದಂಬರಿಗಳು ಮತ್ತು ಸಿನೆಮಾಗಳು ಬಂದಿವೆ. ಹಿಂದಿ ಭಾಷೆಯಲ್ಲಿ ಗುಲ್ಜಾರ್ ಬರೆದು ನಿರ್ದೇಶಿಸಿದ `ಇಜಾಜತ್` ಸಿನೆಮಾ ಆಗಿನ ದಿನಗಳಲ್ಲಿ ತುಂಬ ಕಾಡಿದ ಸಿನೆಮಾ. ಆ ಚಿತ್ರದಲ್ಲಿ ವಿಚ್ಛೇದನಗೊಂಡ ದಂಪತಿಗಳು ರೈಲುನಿಲ್ದಾಣದ ವೇಟಿಂಗ್-ರೂಮಿನಲ್ಲಿ ಭೇಟಿಯಾಗುವ ಕತೆ –  ಆ ಸಿನೆಮಾದ ಅಂತ್ಯ ಬಹಳ ಇಷ್ಟವಾಗಿತ್ತು. ಓ ಹೆನ್ರಿ ಕಥೆಯನ್ನು ಆಧರಿಸಿದ ಋತುಪರ್ಣ ಘೋಷ್ ನಿರ್ದೇಶನದ `ರೇನ್-ಕೋಟ್` ಸಿನೆಮಾ (ಅಜಯ್ ದೇವಗಣ್ ಮತ್ತು ಐಶ್ವರ್ಯಾ ರೈ) ಕೂಡ ಇಂಥದೇ ಕತೆ. `೯೬` ಎನ್ನುವ ತಮಿಳು ಸಿನೆಮಾ (ಕನ್ನಡದಲ್ಲಿ ಅದನ್ನೇ ೯೯ ಎಂದು ರಿಮೇಕ್ ಮಾಡಿದರು)ದಲ್ಲಿ ಪ್ರೇಮಿಗಳು ದಶಕಗಳಾದ ಮೇಲೆ ರಿ-ಯುನಿಯನ್ನಿನ ನೆಪದಲ್ಲಿ ಭೇಟಿಯಾಗುತ್ತಾರೆ. ಅವಳ ಮದುವೆಯಾಗುತ್ತದೆ, ಮಕ್ಕಳಾಗಿವೆ. ಆದರೆ ಈತ ಭಗ್ನಪ್ರೇಮಿ. ರೀ-ಯುನಿಯನ್ ಮುಗಿದ ಮೇಲೆ ಒಂದು ರಾತ್ರಿಯನ್ನು ಅವರು ಒಟ್ಟಿಗೇ ಕಳೆಯುತ್ತಾರೆ. ಕತೆ ಪದರು ಪದರಾಗಿ ತೆರೆದುಕೊಳ್ಳುತ್ತ ಆಪ್ತವಾಗುತ್ತ ಸಾಗುತ್ತದೆ. 

ಆದರೆ ಪ್ರೇಮಿಗಳಲ್ಲದ ಇಬ್ಬರು ವ್ಯಕ್ತಿಗಳ ನಡುವಿನ ಕತೆಗಳು ಮತ್ತು ಸಿನೆಮಾಗಳು ವಿರಳವೆಂದೇ ಹೇಳಬಹುದು. ಅಂಥ ಕತೆಗಳನ್ನು ಬರೆಯುವುದು, ಅದರಲ್ಲೂ ಸಿನೆಮಾ ಮಾಡುವುದು ತುಂಬ ಕಷ್ಟದ ಕೆಲಸ. ಎರಡೂ ವ್ಯಕ್ತಿಗಳು ಒಂದೇ ಲಿಂಗದವರಾಗಿರಬೇಕು (ಸಹೋದರ/ಪಿತೃ ಬಾಂಧವ್ಯವಿಲ್ಲದಿದ್ದರೆ). ಅವರು ಅಪರಿಚಿತರಿರಬಹುದು. ತುಂಬ ವರ್ಷಗಳಾದ ಮೇಲೆ ಭೇಟಿಯಾದ ಗೆಳೆಯರಿರಬಹುದು. ದಶಕಗಟ್ಟಲೇ ಭೇಟಿಯಾಗದ ಅಪ್ಪ-ಮಗನಿರಬಹುದು, ದಾಯಾದಿಗಳಿರಬಹುದು, ಸಹೋದರ-ಸಹೋದರಿಯರಿರಬಹುದು. ಇಂಥ ಕತೆಗಳ ವ್ಯಾಪ್ತಿ ಮತ್ತು ಆಳ ಎರಡೂ ಆಯಾ ಕತೆಗಾರನ ಅನುಭವ, ಓದು  ಮತ್ತು ಏನನ್ನು ಹೇಳಬೇಕು ಎನ್ನುವ ತುಡಿತದ ಮೇಲೆ ಅವಲಂಬಿಸಿಸಿರುತ್ತದೆ. 

ಇದನ್ನೆಲ್ಲ ಬರೆಯಲು ಕಾರಣ, ಇತ್ತೀಚೆಗೆ ಅಂಥ ಎರಡು ಸಿನೆಮಾಗಳನ್ನು ನೋಡಿದೆ. 

ಅಡಿಯೋಸ್ ಅಮಿಗೋ

ಸ್ಪ್ಯಾನಿಷ್ ಭಾಷೆಯಲ್ಲಿ ‘ಅಡಿಯೋಸ್ ಅಮಿಗೋ’ ಎಂದರೆ ‘ವಿದಾಯ ಗೆಳಯನೇ`’ ಎಂದು. ಆದರೆ ಇದು ಸ್ಪ್ಯಾನಿಷ್ ಚಿತ್ರವಲ್ಲ, ಕೇರಳದಲ್ಲಿ ಜರಗುವ ಶುದ್ಧ ಮಲಯಾಳಂ ಚಿತ್ರ! 

ಸಂಪೂರ್ಣವಾಗಿ ವಿಭಿನ್ನ ಹಿನ್ನೆಲೆಯ ಇಬ್ಬರು ಅಪರಿಚಿತರು ಆಕಸ್ಮಿಕವಾಗಿ ಭೇಟಿಯಾದರೆ ಏನಾಗಬಹುದು?  

ಒಬ್ಬ ಶ್ರೀಮಂತ ಮತ್ತು ಇನ್ನೊಬ್ಬ ಬಡವ. 

ಒಬ್ಬ ತುಂಬ ತೊಂದರೆಯಲ್ಲಿದ್ದಾನೆ, ಇನ್ನೊಬ್ಬ ಬೇಕಾಬಿಟ್ಟಿ ಬದುಕುತ್ತಿದ್ದಾನೆ. 

ಒಬ್ಬ ನಿರಾತಂಕದಲ್ಲಿರುವಂತೆ ತೋರುತ್ತಾನೆ, ಇನ್ನೊಬ್ಬ ಆತಂಕದಲ್ಲೇ ಕಾಯುತ್ತಿದ್ದಾನೆ. 

ಒಬ್ಬ ಹಣವನ್ನು ಹೇಗೆ ಬೇಕೆಂದ ಹಾಗೆ ಖರ್ಚು ಮಾಡುತ್ತಾನೆ,,ನ್ನೊಬ್ಬ ತನ್ನ ತಾಯಿಯ ಆಸ್ಪತ್ರೆಯ ಬಿಲ್‌ಗಳಿಗಾಗಿ ಹತಾಶರಾಗಿದ್ದಾನೆ. 

ಇಂಥ ವ್ಯತಿರಿಕ್ತ ಅಪರಿಚಿತರು ಬಸ್-ಸ್ಟ್ಯಾಂಡಿನಲ್ಲಿ ಭೇಟಿಯಾಗುತ್ತಾರೆ. ಕೇರಳದಾದ್ಯಂತ ಬಸ್, ಕಾರು ಮತ್ತು ದೋಣಿಯಲ್ಲಿ ೨೪ ಗಂಟೆಗಳ ಕಾಲ ಸುಮಾರಾಗಿ ಗೊತ್ತುಗುರಿಯಿಲ್ಲದ ಅರ್ಥಹೀನ ಪ್ರವಾಸಕ್ಕೆ ಹೋಗುತ್ತಾರೆ. ಇಡೀ ಸಿನೆಮಾ ನಮ್ಮನ್ನು ಉದ್ದೇಶರಹಿತ ಪ್ರಯಾಣಕ್ಕೆ ಕರೆದೊಯ್ಯುತ್ತದೆ.

ಇಂಥ ಸಂಪೂರ್ಣ ವಿರುದ್ಧದ ಇಬ್ಬರ ಯಾತ್ರೆ, ಕಪ್ಪುಬಿಳಿಪಾಗಿ ಸಾಗುವುದಿಲ್ಲ. ಶ್ರೀಮಂತ ಮತ್ತು ಬಡವರ ನಡುವಿನ ವ್ಯತ್ಯಾಸವನ್ನು ಅನ್ವೇಷಿಸುವುದಿಲ್ಲ. ಯಾವುದೇ ಪಾತ್ರವನ್ನು ನಿರ್ಣಯಿಸುವುದಿಲ್ಲ. ಬೋಧನೆ ಇಲ್ಲ. ನೈತಿಕತೆಯ ಪಾಠಗಳಿಲ್ಲ.  ನಾನ್-ಜಡ್ಜ್-ಮೆಂಟಲ್ ಆಗಿ ದೈನಂದಿನ ಜೀವನದ ಸಾಮಾನ್ಯ ದೃಶ್ಯಗಳಲ್ಲಿ ವೈಭವೀಕರಣವಿಲ್ಲದೇ ತೋರಿಸುತ್ತ ಮನುಷ್ಯನ ಒಳಪದರುಗಳನ್ನು ಬಿಡಿಸುತ್ತ ಹೋಗುತ್ತದೆ. 

ಮೇಯಗನ್

ಮೇಯೞಗನ್, ಹೆಸರೇ ಹೇಳುವಂತೆ, ತಮಿಳು ಸಿನೆಮಾ. ಕನ್ನಡದಲ್ಲಿ ತಿಲಾಂಜಲಿ ಕೊಟ್ಟಿರುವ `ೞ` (ಳ) ಇರುವ ಅಚ್ಚ ತಮಿಳು ಹೆಸರಿನ ಸಿನೆಮಾ. 

ಈ ಸಿನೆಮಾದಲ್ಲೂ ಇಬ್ಬರು ಭೇಟಿಯಾಗುತ್ತಾರೆ. ಆದರೆ ಸಂಪೂರ್ಣ ಅಪರಿಚಿತರಲ್ಲ. ಆದರೆ ಕೆಲವು ದಶಕಗಳ ಮೇಲೆ ಭೇಟಿಯಾಗುತ್ತಾರೆ. 

ಒಬ್ಬ ನಗರ ನಿವಾಸಿಯ ಪ್ರತಿರೂಪ, ಇನ್ನೊಬ್ಬ ಹಳ್ಳಿಯ ಭೂಪ. 

ಒಬ್ಬ ತುಂಬ ಮಿತಭಾಷಿ, ಇನ್ನೊಬ್ಬ ಅರಳು ಹುರಿದಂತೆ ಮಾತಾಡುವ.

ಒಬ್ಬ ರಿಸರ್ವ್ಡ್, ಇನ್ನೊಬ್ಬ ಓಪನ್. 

ಒಬ್ಬನದು ಯಾರನ್ನೂ ಹೆಚ್ಚಾಗಿ ನಂಬದ ಬದುಕು, ಇನ್ನೊಬ್ಬನ ಬದುಕೇ ನಂಬುಗೆಯ ಮೇಲೆ ನಿಂತಿರುವುದು. 

ಒಬ್ಬನದು ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದ ನಡೆ,  ಇನ್ನೊಬ್ಬನದು ಎಲ್ಲರೂ ನಮ್ಮವರೇ ಎನ್ನುವ ಬಾಳು. 

ಒಬ್ಬನದು ಇತರರೊಂದಿಗೆ ಸಂಪರ್ಕ ಸಾಧಿಸಲು ಹೆಣಗಾಡುವ ಸ್ವಭಾವ, ಇನ್ನೊಬ್ಬ ಪ್ರಾಣಿಗಳನ್ನೂ ಮಾತನಾಡಿಸಬಲ್ಲ. 

ದಶಕಗಳಾದ ಮೇಲೆ ಈ ನಗರವಾಸಿ ತಾನು ಹುಟ್ಟಿಬೆಳೆದ ಹಳ್ಳಿಗೆ ಹೋಗಬೇಕಾಗುವ ಪ್ರಸಂಗ ಬರುತ್ತದೆ, ಒಂದು ಮದುವೆಯ ಕಾರಣಕ್ಕಾಗಿ. ಅಲ್ಲಿ ನಗರವಾಸಿಯ ಉಪಚಾರವನ್ನು ನೋಡಿಕೊಳ್ಳಲು ಈ ಹಳ್ಳಿಯ ಭೂಪ. ಹಳ್ಳಿಯ ಭೂಪನಿಗೆ ನಗರವಾಸಿಯನ್ನು ನೋಡುತ್ತಿದ್ದಂತೆ ತನ್ನ ಅತ್ಯಂತ ಆಪ್ತಬಂಧು ಬಂದಂತೆ ವ್ಯವಹರಿಸುತ್ತಾನೆ.  ಆದರೆ ನಗರವಾಸಿಗೆ ಈ ಹಳ್ಳಿಯ ಭೂಪ ಯಾರೆಂದು ಏನು ಮಾಡಿದರೂ ಗೊತ್ತಾಗುತ್ತಿಲ್ಲ, ಅವನನ್ನೇ ನೀನಾರೆಂದು ಕೇಳಲು ಸಂಕೋಚ. ಮದುವೆಯ ಮಂಟಪದಲ್ಲಿ ಏನೆಲ್ಲ ಸಾಹಸ ಮಾಡಿದರೂ ಈ ಹಳ್ಳಿಯ ಭೂಪ ತನಗೆ ಹೇಗೆ ಸಂಬಂಧವಾಗಬೇಕು, ಅವನ ಹೆಸರೇನು ಎಂದು ಹರಸಾಹಸ ಮಾಡಿದರೂ ಗೊತ್ತಾಗುವುದೇ ಇಲ್ಲ!

ಈ ಸಿನೆಮಾದ ನಿರೂಪಣೆ ಮಾಸ್ತಿಯವರ ಅವರ ಸಣ್ಣ ಕಥೆಗಳಂತಿದೆ –  ಸರಳ, ಅಷ್ಟೇ ಆಳ. ಈ ಚಿತ್ರವೂ `ಅಡಿಯೋಸ್ ಅಮಿಗೋ` ಚಿತ್ರದಂತೆ ಬಹುತೇಕಕ ೨೪ ಗಂಟೆಗಳಲ್ಲಿ ನಡೆಯುತ್ತದೆ. ಪದರು ಪದರಾಗಿ ಮನುಷ್ಯನ ದೊಡ್ಡತನ ಮತ್ತು ಸಣ್ಣತನಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ಸಾಗುತ್ತದೆ. ನಗರಪ್ರಜ್ಞೆ ಮತ್ತು ಗ್ರಾಮೀಣ ನಂಬುಗೆಗಳು ರೋಮ್ಯಾಂಟಿಕ್ ಪದರುಗಳಲ್ಲಿ ಬಿಡಿಸಿಕೊಳ್ಳುತ್ತ ಹೋಗುತ್ತದೆ (ಕೆಲವೊಮ್ಮೆ ವ್ಯಾಚ್ಯವೂ ಆಗುತ್ತದೆ). 

(ಅಂದ ಹಾಗೆ  `ಮೇಯೞಗನ್` ಸಿನೆಮಾದ ನಿರ್ದೇಶಕನ ಮೊದಲ ಸಿನೆಮಾ ನಾನು ಮೇಲೆ ಹೇಳಿದ ೯೬). 

ಇಂಥ ಕೆಲವು ಕತೆಗಳು

ಆರ್ ಕೆ ನಾರಾಯಣರು ಬರೆದ `ಜ್ಯೋತಿಷಿಯ ದಿನ` ಕತೆಯೊಂದಿದೆ. ಅದರಲ್ಲಿ ವಿದ್ಯುಚ್ಛಕ್ತಿ ಇಲ್ಲದ ಆಗಿನ ಕಾಲದಲ್ಲಿ ಕತ್ತಲಾಗುವ ಹೊತ್ತಿನಲ್ಲಿ ಜ್ಯೋತಿಷಿಯ ಬಳಿ ವ್ಯಕ್ತಿಯೊಬ್ಬ ಬಂದು ತನ್ನನ್ನು ತುಂಬ ವರ್ಷಗಳ ಹಿಂದೆ ಹೆಚ್ಚು-ಕಡಿಮೆ ಕೊಂದೇ ಹಾಕಿದ ವ್ಯಕ್ತಿ ಎಲ್ಲಿರಬಹುದೆಂದು ಕೇಳುತ್ತಾನೆ. ಜ್ಯೋತಿಷಿಗೆ ಭವಿಷ್ಯ ಕೇಳಲು ಬಂದ ವ್ಯಕ್ತಿ ಯಾರು ಎನ್ನುವುದು ಗೊತ್ತು, ಆದರೆ ಆ ವ್ಯಕ್ತಿಗೆ ಜ್ಯೋತಿಷಿ ಯಾರೆಂದು ಗೊತ್ತಿಲ್ಲ, `ಮೇಯೞಗನ್` ಸಿನೆಮಾದಲ್ಲಿ ಆಗುವಂತೆ. ಆ ಕತೆಯ ವಸ್ತು, ಅದನ್ನು ಬರೆದ ಶೈಲಿ ಮತ್ತು ಕೊನೆಯವರೆಗೂ ಕಾದಿಡುವ ರಹಸ್ಯ ಈಗಲೂ ಕತೆ ಬರೆಯುವವರಿಗೆ ಹೇಳಿ ಮಾಡಿಸಿದ ಪಾಠದಂತಿದೆ.  

ವಿವೇಕ ಶಾನಭಾಗರು ಬರೆದ `ನಿರ್ವಾಣ` ಎನ್ನುವ ಕತೆಯೊಂದಿದೆ (ಘಾಚರ್ ಘೋಚರ್ ಸಂಕಲನ). ನಗರ ಜೀವನದ, ಕಾರ್ಪೋರೇಟ್ ಬದುಕಿನ ಪುಳ್ಳುತನವನ್ನು ಎಲ್ಲಿಯೂ ವ್ಯಾಚ್ಯವಾಗಿಸದೇ ಸಶಕ್ತವಾಗಿ ಬರೆದ ಕತೆ.  ಈ ಕತೆಯಲ್ಲೂ ಇಬ್ಬರು ವ್ಯಕ್ತಿಗಳು ಭೇಟಿಯಾಗುತ್ತಾರೆ, `’ಅಡಿಯೋಸ್ ಅಮಿಗೋ’ ತರಹ. `ಮೇಯೞಗನ್` ತರಹ. ಕಾರ್ಪೋರೇಟ್ ಜಗತ್ತಿನಲ್ಲಿ ಮ್ಯಾನೇಜರ್ ಜಾಗದಲ್ಲಿ ಇರುವ ಇಬ್ಬರು ಪರದೇಶದ ಹೊಟೇಲೊಂದರಲ್ಲಿ ಭೇಟಿಯಾಗುತ್ತಾರೆ. ಇಬ್ಬರೂ ಬಹಳ ವರ್ಷಗಳಾದ ಮೇಲೆ ಸಿಕ್ಕವರು. ಕಥಾನಾಯಕನಿಗೆ ಅವನನ್ನು ಮುಂಚೆ ನೋಡಿದ ಮಾತನಾಡಿಸಿದ ನೆನಪಿದೆ, ಆದರೆ ಪೂರ್ತಿ ನೆನಪಾಗುತ್ತಿಲ್ಲ. ಇರಲಿ, ಏನಂತೆ, ಇದೆಲ್ಲ ಕಾರ್ಪೋರೇಟ್ ಜಗತ್ತಿನಲ್ಲಿ ಸಾಮಾನ್ಯವಲ್ಲವೇ? ಇಬ್ಬರೂ ಸೇರಿ ಆತನ ರೂಮಿನಲ್ಲಿ ಗುಂಡು ಹಾಕುತ್ತಾ ಪರಸ್ಪರ ಉಭಯ ಕುಶಲೋಪರಿಯನ್ನು ಮಾತನಾಡುತ್ತಾರೆ. ಮಾತನಾಡುತ್ತ ಕಥಾನಾಯಕನಿಗೆ ಆತ ತಾನು ಅಂದುಕೊಂಡ ಆತನಲ್ಲ ಎಂದು ಗೊತ್ತಾಗುತ್ತದೆ! ಮುಂದೆ ಇನ್ನೂ ಏನೇನೋ ಆಗುತ್ತೆ, ಸಸ್ಪೆನ್ಸ್ ಹಾಗೇ ಇರಲಿ. 

ಇನ್ನೂ ಕೆಲವು ಕತೆಗಳಿರುತ್ತವೆ. ಆ ಕತೆಗಳಲ್ಲಿ ಒಂದೇ ವ್ಯಕ್ತಿ ಎರಡು ಹೋಳಾಗಿ ಎರಡು ವಿರುದ್ಧ ವ್ಯಕ್ತಿತ್ವದ ಮನುಷ್ಯರಾಗಿ, ಬೇರೆ ಬೇರೆಯಾಗಿ, ಮತ್ತೆ ಎದುರಾಗುತ್ತಾರೆ. ಹಾಗೆ ಎದುರಾದಾಗ ಎಂಥ ತೀವ್ರ ಸಂಘರ್ಷವಾಗುತ್ತದೆ ಅಲ್ಲವೇ!  ಕಾರ್ನಾಡರ `ನಾಗಮಂಡಲ` ಮತ್ತು ಕಂಬಾರರ `ಸಿರಿಸಂಪಿಗೆ` ಇದಕ್ಕೆ ಉದಾಹರಣೆಗಳು. ಅಮೋಲ್ ಪಾಲೇಕರ್ ನಿರ್ದೇಶಿಸಿದ `ಪಹೇಲಿ` (ಶಾರೂಕ್ ಖಾನ್ ನಟನೆ)ಯದೂ ಇಂಥದೇ ಕತೆ. ಎ ಕೆ ರಾಮಾನುಜನ್ ಬರೆದ `ಮತ್ತೊಬ್ಬನ ಆತ್ಮ ಚರಿತ್ರೆ`ಯನ್ನೂ ಇಂಥ ಕತೆಗಳ ಸಾಲಿಗೆ ಸೇರಿಸಬಹುದೇನೋ. 

ನಿಮಗೂ ಇಂಥ ಕಥೆಗಳು ಮತ್ತು ಸಿನೆಮಾಗಳು ಗೊತ್ತಿದ್ದರೆ, ಅವು ನಿಮ್ಮನ್ನು ಸ್ವಲ್ಪವಾದರೂ ಕಾಡಿದ್ದರೆ ನಿಮ್ಮ ಪ್ರತ್ರಿಕ್ರಿಯೆಯಲ್ಲಿ ಬರೆಯಲು ಮರೆಯಬೇಡಿ.