ನಮಸ್ಕಾರ ಅನಿವಾಸಿಯ ಬಂಧುಗಳಿಗೆ. ಶರಣ-ದಾಸ-ಸಂತರ ಸಾಹಿತ್ಯ ಸಂಗೀತದೊಂದಿಗೆ ಆರಂಭವಾಗಿ, ಇತ್ತೀಚೆಗೆ ನಮ್ಮನ್ನಗಲಿದ ಕವಿ ಎಚ್ಚೆಸ್ವಿ ಅವರಿಗೆ ಅರ್ಪಿಸಿದ ನುಡಿನಮನದ ಪುಷ್ಪಗಳ ಪಕ್ಕದಲ್ಲಿ ಹಾಯ್ದು ಬಂದ ನಮ್ಮನ್ನು ಸಂಗೀತದ ಒಬ್ಬ ಕಲಾವಿದೆಯ ಪರಿಚಯಕ್ಕೆ ಕರೆದೊಯ್ಯುತ್ತಿದ್ದಾರೆ, ನಮ್ಮ ಅನಿವಾಸಿ ಬಳಗದ ಇತಿಹಾಸಕಾರ (resident historian) ಶ್ರೀ ರಾಮಮೂರ್ತಿಯವರು. ಅವರಿದ್ದ ಕಾಲಮಾನದಲ್ಲಿ ಬದಲಾವಣೆ ತರಲು, ಒಬ್ಬ ಸಂಗೀತಗಾರ್ತಿಯಾಗಿ ಹೋರಾಡಿ, ಹಲವಾರು ವಿಷಯಗಳಲ್ಲಿ ಮೊದಲಿಗರಾದ ಬೆಂಗಳೂರು ನಾಗರತ್ನಮ್ಮನವರ ಬಗ್ಗೆ ನೋಡೋಣ ಬನ್ನಿ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ತಿಳಿಸುವುದು. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಸಂ.)
******************************
******************************
ಬೆಂಗಳೂರು ನಾಗರತ್ನಮ್ಮನ ಹೆಸರು ನಿಮಗೆ ಪರಿಚಯ ಇಲ್ಲದಿರಬಹುದು. ಆದರೆ ಹತ್ತೊಂಬತ್ತನೇ ಶತಮಾನದಲ್ಲಿ ಒಬ್ಬ ದೇವದಾಸಿಯ ಮಗಳಾಗಿ ಬೆಳದು ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿ, ತಿರುವಾಯೂರಿನಲ್ಲಿ ನಡೆಯುವ ಪ್ರಸಿದ್ಧ ತ್ಯಾಗರಾಜ ಆರಾಧನೆಯಲ್ಲಿ ಮಹಿಳಾ ಸಂಗೀತಗಾರರು ಮೊಟ್ಟಮೊದಲಿಗೆ ಭಾಗವಹಿಸುವಂತೆ ಹೋರಾಡಿದವಳು ಈ ಕನ್ನಡತಿ. ಕಾವೇರಿ ನದಿ ದಡದಲ್ಲಿ ತ್ಯಾಗರಾಜರ ಸಮಾಧಿಯ ಮಂಟಪವನ್ನು ಸ್ವಂತ ಖರ್ಚಿನಲ್ಲಿ ಕಟ್ಟಿಸಿದ್ದೇ ಈಕೆ. ಗ್ರಾಮೋಫೋನ್ ಆಗ ತಾನೇ , ಅಂದರೆ ೧೯೦೦ ರಲ್ಲಿ , ಬಂದಾಗ ತನ್ನ ಧ್ವನಿಯನ್ನು ರೆಕಾರ್ಡ್ ಮಾಡಿದ ಆರಂಭಿಕರಲ್ಲಿ ಒಬ್ಬಳು.
೧೮೭೮ ರ ನವಂಬರ್ ೩ ರಂದು ನಂಜನಗೂಡಿನಲ್ಲಿ ಜನನ; ತಾಯಿ ಪುಟ್ಟ ಲಕ್ಷ್ಮಿ. ಪ್ರಾರಂಭದಲ್ಲಿ ಇವರ ಪೋಷಕ ವಕೀಲ್ ಸುಬ್ಬರಾಯರು. ಆದರೆ, ಬೆಳಸಿದ್ದು ತಾಯಿ ಪುಟ್ಟ ಲಕ್ಷ್ಮಿ. ನಂತರ ಮೈಸೂರಿನಲ್ಲಿ ನೆಲಸಿ ಮೈಸೂರು ಅರಮನೆಯ ಒಬ್ಬ ವಿದ್ವಾಂಸರಿಂದ ಕನ್ನಡ ಮತ್ತು ಸಂಸ್ಕೃತ ಅಧ್ಯಯನ ಕೆಲವು ವರ್ಷ ನಡೆಯಿತು. ಆದರೆ, ಈತ ದೇವದಾಸಿಯ ಮಗಳನ್ನು ಶಿಷ್ಯೆ ಆಗಿ ಮುಂದುವರಿಸಲು ಹಿಂಜರಿದರು, ಬಹುಶಃ ಸಮಾಜದ ಒತ್ತಡದಿಂದಿರಬಹುದು. ನಂತರ ನಾಗರತ್ನಮ್ಮನ ವಿದ್ಯಾಭ್ಯಾಸ ಅವಳ ಸೋದರ ಮಾವ "ಪಿಟೀಲು" ವೆಂಕಟಸ್ವಾಮಿ ಅವರಿಂದ ಮುಂದುವರೆಯಿತು. ನಂತರ, ತ್ಯಾಗರಾಜರ ಶಿಷ್ಯ ಪರಂಪರೆಯ (ಮೂರನೆಯ ಪೀಳಿಗೆ ) ಮುನಿಸ್ವಾಮಿ ಅವರಿಂದ ಸಂಗೀತ ಮತ್ತು ನೃತ್ಯ ಕಲಿಯಲು ಪ್ರಾರಂಭವಾಯಿತು. ಹೆಸರಾಂತ ಮೈಸೂರು ಆಸ್ಥಾನ ವಿದ್ವಾನ್ ಬಿಡಾರಂ ಕೃಷ್ಣಪ್ಪನವರು ಇವಳ ಪ್ರತಿಭೆಗೆ ಮೆಚ್ಚಿ ನಾಗರತಮ್ಮನನ್ನು ತಮ್ಮ ಶಿಷ್ಯ ವರ್ಗಕ್ಕೆ ಸೇರಿಸಿಕೊಂಡರು. ಇವಳ ಹದಿನೈದನೇ ವಯಸ್ಸಿನಲ್ಲಿ ಮೊದಲ ಕಚೇರಿ (Public Performance ) ಕೊಟ್ಟಾಗ ಮೈಸೂರು ಪ್ರಜೆಗಳಲ್ಲದೆ, ಅಂದಿನ ಮಹಾರಾಜರು ಚಾಮರಾಜ ಒಡೆಯರಿಂದಲೂ ಸಹ ಮೆಚ್ಚುಗೆ ಪಡೆದಳು. ಕೆಲವು ವರ್ಷಗಳ ನಂತರ ಆಸ್ತಾನ ವಿದುಷಿ ಅನ್ನುವ ಮನ್ನಣೆ ಸಹ ಬಂತು. ಈ ಗೌರವ ಪಡೆಯುವುದಕ್ಕೆ ಈಕೆಯೇ ಮೊದಲನೆಯ ಮಹಿಳೆ. ನಂತರ, ಮೈಸೂರಿನಲ್ಲಿ ಆಗ ಸಾಕಷ್ಟು ಅವಕಾಶಗಳು ಇಲ್ಲದಿರುವ ಕಾರಣದಿಂದ ನಾಗರತ್ನಮ್ಮ ಬೆಂಗಳೂರಿನಲ್ಲಿ ಮನೆ ಮಾಡಿದಳು. ಇಲ್ಲಿ ಅವಳ ಪ್ರತಿಭೆ ಬೇಗ ಹರಡಿ ಅನೇಕ ಗಣ್ಯ ವ್ಯಕ್ತಿಗಳ ಪರಿಚಯವಾಯಿತು. ಮುಖ್ಯವಾಗಿ, ಡಿ ವಿ ಗುಂಡಪ್ಪ , ಜಸ್ಟಿಸ್ ಚಂದ್ರಶೇಖರ್ ಐಯ್ಯರ್ ಮುಂತಾದವರು. ಡಿ ವಿ ಜಿ ಅವರ "ಜ್ಞಾಪಕ ಚಿತ್ರಶಾಲೆ"ಯಲ್ಲಿ ಇವಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ೧೯೦೮/೯ ರಲ್ಲಿ ಇವರು ಚಿಕ್ಕಪೇಟೆಯಲ್ಲಿ ಸಹೂಜಿ ಅನ್ನುವರ ಮನೆಯಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗೆ ಹೋಗುತ್ತಿದ್ದರಂತೆ. ಇವರಿಬ್ಬರ ಸ್ನೇಹ ಬಹಳ ವರ್ಷ ಮುಂದುವರೆಯಿತು. ಇನ್ನೊಂದು ಸ್ವಾರಸ್ಯವಾದ ಸಂಗತಿ ಇಲ್ಲಿ ಹೇಳಬೇಕು. ನಾಗರತ್ನಮ್ಮನ ಅಭಿಮಾನಿಗಳಲ್ಲಿ ಹೈಕೋರ್ಟಿನ ಜಸ್ಟಿಸ್ ನರಹರಿ ರಾಯರೂ ಒಬ್ಬರಾಗಿದ್ದರು. ಆಗಾಗ್ಯೆ ಕೋರ್ಟ್ ಮುಗಿದ ಮೇಲೆ ತಮ್ಮ ಅಧಿಕೃತ ಗಾಡಿಯಲ್ಲಿ (Official Vehicle) ಚಿಕ್ಕಪೇಟೆಗೆ ಬಂದು ನಾಗರತ್ನಮ್ಮ ನ ಸಂಗೀತ ವನ್ನು ಕೇಳುತ್ತಿದ್ದರು. ನಂತರ ಸ್ನೇಹವೂ ಹೆಚ್ಚಾಯಿತು. ಈ ಸ್ನೇಹ ಮುಂದುವರೆದಾಗ ನರಹರಿ ರಾಯರು ತಮ್ಮ ಪತ್ನಿಯ ಮುಂದೆ ಇದರ ವಿಚಾರ ಹೇಳಿ ಅವರ ಅನುಮತಿ ಕೇಳಿದರಂತೆ. ಏನಾದರೂ ಆಕ್ಷೇಪಣೆ ಇದ್ದರೆ ನಾಗರತ್ನಮ್ಮನ ಸ್ನೇಹವನ್ನು ಮುಂದೆ ಬೆಳುಸುವುದಿಲ್ಲ ಅಂದರಂತೆ. ಪತ್ನಿಯಿಂದ ಅನುಮತಿ ಪಡೆದ ಮೇಲೆ ಇವರ ಸ್ನೇಹ ಇನ್ನೂ ಮುಂದೆವರಿಯಿತು. ಈ ಸಂಭಾಷಣೆಯ ವಿವರವನ್ನು ಡಿ.ವಿ.ಜಿ.ಬರೆದಿದ್ದಾರೆ.
ನಿಮಗೆ ಬೆಂಗಳೂರಿನ ಬಸವನಗುಡಿಯ ನರಹರಿ ಗುಡ್ಡ ಮತ್ತು Mount Joy ಹೆಸರು ಪರಿಚಿತ ಇದ್ದರೆ ಅದರ ಹಿನ್ನೆಲೆ ಇಲ್ಲಿದೆ. ನರಹರಿ ರಾಯರ ಗಾಡಿ ಆಗಾಗ್ಯೆ ಚಿಕ್ಕ ಪೇಟೆಯಲ್ಲಿ ಬಂದು ನಿಲ್ಲುತ್ತಿದ್ದುದು ಜನರಿಗೆ ಸಂಶಯ ಬಂದು ಅನೇಕ ವದಂತಿಗಳು ಶುರುವಾದವು. ಈ ವಿಚಾರ ಅಂದಿನ ದಿವಾನ್ ಶೇಷಾದ್ರಿ ಐಯ್ಯರ್ ಅವರ ಕಿವಿಗೆ ಬಿದ್ದಾಗ, ರಾಜ್ಯದ ಉನ್ನತ ಪದವಿಯಲ್ಲಿರುವ ಒಬ್ಬ ಹೈ ಕೋರ್ಟ್ ನ್ಯಾಯಾಧೀಶನಿಗೆ ಕೆಟ್ಟ ಹೆಸರು ಬರಬಾರದು ಅನ್ನುವ ಉದ್ದೇಶದಿಂದ ದಿವಾನರು, ಗುಟ್ಟಾಗಿ ನರಹರಿ ರಾಯರನ್ನು ಭೇಟಿಮಾಡಿ ಈ ವದಂತಿಗಳ ಬಗ್ಗೆ ಪ್ರಸ್ತಾಪಿಸಿದರಂತೆ. ನಂತರ ನರಹರಿರಾಯರು, ನಾಗರತ್ನಮ್ಮನ ಸಂಗೀತವನ್ನು ಖಾಸಗಿಯಾಗಿ (in private ) ಕೇಳುವುದಕ್ಕೆ ಒಂದು ಮನೆಯನ್ನು ಗುಡ್ಡದ ಮೇಲೆ ಕಟ್ಟಿ ಅದನ್ನು Mount Joy ಅಂತ ಹೆಸರಿಟ್ಟರು. ಈಗ ನರಹರಿ ಗುಡ್ಡ ಮತ್ತು ಇಲ್ಲಿಗೆ ಹೋಗುವ ರಸ್ತೆ, ಹಣಮಂತನಗರದಲ್ಲಿ, Mount Joy ರಸ್ತೆ. ಶಾಸ್ತ್ರೀಯ ಸಂಗೀತಕ್ಕೆ ಬಹಳ ವರ್ಷಗಳಿಂದ ಈಗಿನ ಚೆನ್ನೈ (Madras) ನಲ್ಲಿ ಪ್ರಾಮುಖ್ಯತೆ ಇದೆ. ಈ ಕಾರಣದಿಂದ ನಾಗರತ್ನಮ್ಮ, ನರಹರಿರಾಯರ ಸಲಹೆಯ ಮೇಲೆ ಮದ್ರಾಸಿನಲ್ಲಿ ನೆಲಸುವುದಕ್ಕೆ ನಿರ್ಧಾರ ಮಾಡಿದಳು. ಅಲ್ಲಿ ಮೊದಲಿಯಾರ್ ಪಂಗಡದವರಿಂದ ಆಶ್ರಯ ಪಡೆದು ಬಹಳ ಬೇಗ ಒಬ್ಬ ಹೆಸರಾಂತ ಸಂಗೀತಗಾರಳಾದಳು. ೧೯೦೫ ರಿಂದ ಅಲ್ಲಿರುವ ಸಂಗೀತ ಸಭೆಗಳಲ್ಲಿ ಭಾಗವಹಿಸಿ ಯಶಸ್ಸನ್ನು ಕಂಡಳು. ಆ ಕಾಲದಲ್ಲೇ ವರಮಾನ ತೆರಿಗೆ (Income tax) ಕೊಡುವಷ್ಟು ಹಣ ಸಂಪಾದನೆ ಇತ್ತು. ಆಗಿನ ಕಾಲದಲ್ಲಿ , ದೇವದಾಸಿ ಪಂಗಡದಲ್ಲಿ ಇರಲಿ, ಯಾವುದೇ ಮಹಿಳೆಯರಲ್ಲಿ ಈ ತೆರಿಗೆ ಕೊಡುತ್ತಿದ್ದವರು ಬಹಳ ವಿರಳ. ನಾಗರತ್ನಮ್ಮ ಒಂದು ಭವ್ಯವಾದ ಮನೆಯನ್ನು ಕಟ್ಟಿ ಅದರ ಗೃಹ ಪ್ರವೇಶಕ್ಕೆ ಮೈಸೂರು ಬಿಡಾರಂ ಕೃಷ್ಣಪ್ಪನವರವನ್ನು ಆಹ್ವಾನಿಸಿದ್ದಳು. ಪುರಂದರ ದಾಸರ ದೇವರನಾಮಗಳನ್ನು ಮದ್ರಾಸಿನಲ್ಲಿ ಮೊದಲಿಗೆ ಕೇಳಿದ್ದು ಇವರಿಂದ ಎಂದು ಅನೇಕರು ಪ್ರಶಂಸಿದರು.
ತ್ಯಾಗರಾಜರ ಕೃತಿಗಳನ್ನು ಹಾಡುವುದು ಇವಳ ವಿಶೇಷತೆ ಆಗಿತ್ತು. ತ್ಯಾಗರಾಜರ ಸಮಾಧಿ ತಿರುವಾಯೂರಿನಲ್ಲಿ ನಿರ್ಲಕ್ಷ ಸ್ಥಿತಿಯಲ್ಲಿ ಇರುವ ವಿಷಯ ಅವಳ ಗುರು ಬಿಡಾರಂ ಕೃಷ್ಣಪ್ಪ ನವರಿಂದ ತಿಳಿಯುತು. ಅಲ್ಲಿಯವರೆಗೆ ಈ ಸಮಾದ್ಜಿ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಈಗ ಈ ಸಮಾಧಿಯನ್ನು ನವೀಕರಿಸುವುದನ್ನು ತನ್ನ ಜೀವನ ಧ್ಯೇಯವನ್ನಾಗಿಸಿಕೊಂಡಳು. ತಿರುವಾಯೂರಿಗೆ ಬಂದು ಸಮಾಧಿಯನ್ನು ಗುರುತಿಸಿ ಅಲ್ಲಿ ಒಂದು ಮಂದಿರವನ್ನು ಕಟ್ಟುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದಳು. ಮದ್ರಾಸಿನಲ್ಲಿದ್ದ ಮನೆ ಮತ್ತು ಬಳಿ ಇದ್ದ ಒಡವೆಗಳನ್ನು ಮಾರಿ ಬಂದ ಹಣದಿಂದ ಈ ಕಟ್ಟಡದ ನಿರ್ಮಾಣ ೨೭/೧೦/೧೯೨೧ ರಲ್ಲಿ ಪ್ರಾರಂಭವಾಗಿ ೭/೦೧/೧೯೨೫ ರಲ್ಲಿ ಪೂರ್ಣಗೊಂಡಿತು. ನಂತರ, ಅನೇಕರ ಸಹಾಯದಿಂದ, ತಿರುವಾಯೂರಿನಲ್ಲಿ ಮೈಸೂರು ಛತ್ರವನ್ನೂ ಕಟ್ಟಿದಳು.
೧೮೪೭ರಲ್ಲಿ ತ್ಯಾಗರಾಜರು ತೀರಿಹೋದ ಹಲವಾರು ವರ್ಷಗಳ ನಂತರ ಕೆಲವು ಸಂಗೀತಗಾರರು ಅಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ಹಾಡುತ್ತಿದ್ದರು. ಆದರೆ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಸ್ವಂತ ಖರ್ಚಿನಲ್ಲಿ ಮಂದಿರ ನಿರ್ಮಾಣ ಮಾಡಿದ ಮೇಲೂ ಸಹ ನಾಗರತ್ನಮ್ಮನಿಗೆ ಇವರ ಜೊತೆಯಲ್ಲಿ ಹಾಡುವುದಕ್ಕೆ ಅವಕಾಶ ಸಿಗಲಿಲ್ಲ. ನಂತರ ೧೯೨೭ ಜನವರಿ ತಿಂಗಳಲ್ಲಿ ಮಹಿಳೆಯರದ್ದೇ ಒಂದು ಗುಂಪು ಮಾಡಿಕೊಂಡು, ಇದರಲ್ಲಿ ಅನೇಕರು ದೇವದಾಸಿಯರು, ಮಂದಿರದ ಆವರಣದಲ್ಲಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದರು. ನಂತರ ಎರಡೂ ಪಂಗಡಗಳು ಸೇರಿ ಒಪ್ಪಂದಕ್ಕೆ ಬಂದು ಈ ಆರಾಧನೆ ಒಂದಾಗಿ, ಇಂದು ಈ ಆರಾಧನೆ ಉನ್ನತ ಮಟ್ಟಕ್ಕೆ ಏರಿದೆ. ನೂರಾರು ಪ್ರಸಿದ್ಧ ಗಾಯಕರು ಅಲ್ಲಿ ಸೇರಿ ಸಾವಿರಾರು ಪ್ರೇಕ್ಷಕರ ಮುಂದೆ ಪಂಚರತ್ನ ಕೀರ್ತನೆಗಳನ್ನು ಹಾಡುವುದನ್ನ ನೋಡುವುದು ಒಂದು ಅದ್ಭುತ ದೃಶ್ಯ. ತ್ಯಾಗರಾಜರ ಆರಾಧನೆ ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುತ್ತದೆ.
ಹದಿನೆಂಟನೇ ಶತಮಾನದ ಒಬ್ಬ ದೇವದಾಸಿ ಪಂಗಡದ ತೆಲಗು ಕವಿ ಮುದ್ದುಪಲನಿ ( ೧೭೩೦-೧೭೯೦) ರಚಿಸಿದ "ರಾಧಿಕಾ ಸಂತ್ವನಂ" ನಾಗರತ್ನಮ್ಮನ ಗಮನಕ್ಕೆ ಬಂತು. ಇದರಲ್ಲಿ ರಾಧೆಯ ದೈಹಿಕ ಬಯಕೆಯ ಪ್ರಸ್ತಾವನೆ ಇತ್ತು. ಆದರೆ ೧೮೮೭ ರಲ್ಲಿ ಪ್ರಕಟಿಸಿದ ಭಾಷಾಂತರದಲ್ಲಿ "ರಸವತ್ತವಾದ" ವರ್ಣನೆಗಳನ್ನು ತೆಗೆದುಹಾಕಿದ್ದಲ್ಲದೇ, ಮುದ್ದುಪಲನಿ ಪ್ರತಾಪಸಿಂಹನ ಆಸ್ಥಾನದಲ್ಲಿ ಕವಿಯಾಗಿದ್ದಳು ಅನ್ನುವ ವಿಚಾರವನ್ನು ಸಹ ಬರೆದಿರಿಲಿಲ್ಲ. ಕಾರಣ ಬ್ರಿಟಿಷರ "Victorian Values" ಮತ್ತು "ಕೀಳು ದರ್ಜೆಯ" ದೇವದಾಸಿ ಬರೆದ ರಸವತ್ತಾದ ಕವಿತೆಗಳನ್ನು ಪ್ರಕಟಿಸುವುದು ಸಮಾಜದ ದೃಷ್ಟಿಯಲ್ಲಿ ಸರಿಯಲ್ಲ ಅನ್ನುವ ಊಹೆ ಕೆಲವರಿಗಿತ್ತು. ಉದಾಹರಣೆಗೆ ಇಂಗ್ಲೆಂಡ್ನಲ್ಲಿ ೧೯೨೮ರಲ್ಲಿ DH Lawrence ಬರೆದ Lady Chatterley's Lover ಪುಸ್ತಕ ನಿಷೇಧಿತವಾಗಿತ್ತು. ಎರಡು ಆವೃತ್ತಿಗಳನ್ನೂ ಓದಿ ನಾಗರತ್ನಮ್ಮನಿಗೆ ಅಸಮಾಧಾನವಾಗಿ ಮುದ್ದುಪಲನಿಯ ಮೂಲ ರಾಧಿಕಾ ಸಂತ್ವನಂ ಅನ್ನು ೧೯೧೦ ರಲ್ಲಿ Ramaswamy & Sons ಎಂಬ ಪ್ರಕಾಶಕರಿಂದ ಪ್ರಕಟಣೆ ಮಾಡಿಸಿದಳು. ಆದರೆ ಅನೇಕ ಸಂಪ್ರದಾಯವಾದಿ ವಿದ್ವಾಂಸರು ಇದನ್ನು ಪ್ರತಿಭಟಿಸಿ, ಮುದ್ದುಪಲನಿ ಒಬ್ಬ ವೈಶ್ಯೆ, ಅಂತಹ ಕೀಳು ದರ್ಜೆಯ ಮಹಿಳೆ ಬರೆದಿರುವುದನ್ನು ಜನರು ಓದಬಾರದು ಎಂದು ಹೇಳಿ ಸರ್ಕಾರ ಇದನ್ನು ಬಹಿಷ್ಕಾರ ಮಾಡಬೇಕು ಅನ್ನುವ ಒತ್ತಡ ತಂದರು. ನಾಗರತ್ನಮ್ಮ ಮತ್ತು ದೇವದಾಸಿ ಪಂಗಡದವರು ಒಬ್ಬ ದೇವದಾಸಿ ಮಹಿಳೆ ಇದನ್ನು ಬರೆದ್ದರಿಂದ ಪ್ರತಿಭಟನೆ ಮಾಡುತ್ತೀರ ಎಂದು ವಾದಿಸಿದರು. ಆದರೆ ಸರ್ಕಾರ ಇದನ್ನು ಒಪ್ಪಲಿಲ್ಲ. ೧೯೧೧ ರಲ್ಲಿ ಪೊಲೀಸ್ ಅಧಿಕಾರಿಗಳು, ಐಪಿಸಿ ೨೯೨ ಕಾನೂನಿನ ಪ್ರಕಾರ ಈ ಪುಸ್ತಕದ ವ್ಯಾಪಾರ ನಿಲ್ಲಿಸುವುದಕ್ಕೆ ಆಜ್ಞೆ ಮಾಡಿ ಮಾರಾಟಕ್ಕಿದ್ದ ಪುಸ್ತಕಗಳನ್ನು ವಶ ಮಾಡಿಕೊಂಡರು. ೧೯೪೭ರ ನಂತರ ಈ ಪುಸ್ತಕ ನಿಷೇಧವನ್ನು ರದ್ದು ಮಾಡಲಾಯಿತು.
ಇಪ್ಪತ್ತನೇ ಶತಮಾನದ ಮೊದಲಿನಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಕೆಲವು ಹಿಂದು ಪಂಗಡದವರಿಂದ ದೇವದಾಸಿಯರು ವೇಶ್ಯೆಯರು, ಇವರಿಂದ ಸಮಾಜಕ್ಕೆ ಹಾನಿ ಎಂದು ಇವರ ಪದ್ದತಿಗಳನ್ನು ನಿಲ್ಲಿಸಬೇಕೆಂದು ಪ್ರಯತ್ನ ಪಟ್ಟರು. ನಾಗರತ್ನಮ್ಮ ಇದನ್ನು ಪ್ರತಿಭಟಿಸಿ ತಮ್ಮದೇ ಸಂಘವನ್ನು (Union )ಕಟ್ಟಿ ಅದರ ಅಧ್ಯಕ್ಸಳಾಗಿ ಅವರ ಹಕ್ಕುಗಳಿಗಾಗಿ ಹೋರಾಡಿದಳು. ೧೯೨೭ರಲ್ಲಿ ತಮ್ಮ ಹಕ್ಕುಗಳನ್ನು ಕಾಪಾಡುವುದಕ್ಕೆ ಇಂಗ್ಲಿಷ್ ನಲ್ಲಿ ಬರೆದ "A Humble Memorandum of Devadasis" ಅನ್ನುವ ಪತ್ರವನ್ನು ಸರ್ಕಾರಕ್ಕೆ ಕೊಟ್ಟು ತನ್ನ ಪಂಗಡದವರ ಮಾನವ ಹಕ್ಕುಗಳನ್ನು ( Human Rights ) ಕಾಪಾಡಿ ಎಂದು ಮನವಿ ಮಾಡಿಕೊಂಡಳು. ಅವಳ ಕೊನೆಕಾಲದಲ್ಲಿ ಡಿ.ವಿ.ಜಿ. ಇವಳನ್ನು ಭೇಟಿಮಾಡಿ ಆರೋಗ್ಯವನ್ನು ವಿಚಾರಿಸಿದರು. ಈ ಸಂಭಾಷಣೆಯನ್ನು ಡಿ.ವಿ.ಜಿ. ಹೀಗೆ ಬರೆದಿದ್ದಾರೆ: "ನಾನು ಹುಟ್ಟಿದಾಗ ನಾಗರತ್ನ, ನಂತರ ಭೋಗರತ್ನ ಆದರೆ ಈಗ ರೋಗರತ್ನ" ಅಂತ ನಾಗರತ್ನಮ್ಮ ಹೇಳಿದ್ದಕ್ಕೆ, ಡಿ.ವಿ.ಜಿ. ಹೇಳಿದರಂತೆ - "ನೀನು ಇನ್ನೆರಡು ರತ್ನಗಳನ್ನು ಮರೆತೆ; ಒಂದು ರಾಗರತ್ನ ಮತ್ತು ತ್ಯಾಗರತ್ನ" ಇದನ್ನು ಯಾರಿಗೂ ಹೇಳಬೇಡಿ ಅಂದಳಂತೆ ನಾಗರತ್ನಮ್ಮ! ಈಕೆ ಒಬ್ಬ ಮಹಿಳೆಯರ ಹಕ್ಕುಗಳಿಗೆ ಹೋರಾಡಿದ ಮತ್ತು ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ ಎಂದನ್ನು ಪ್ರತಿಪಾದಿಸಿದ ಕನ್ನಡತಿ ಮತ್ತು ಕ್ರಾಂತಿಕಾರಿಣಿ. ನಾಗರತ್ನಮ್ಮ ೧೯/೫/೧೯೫೨ ರಂದು ತನ್ನ ೭೩ರನೇ ವಯಸ್ಸಿನಲ್ಲಿ ತಿರುವಾಯೂರಿನಲ್ಲಿ ನಿಧನಳಾದಳು. ತ್ಯಾಗರಾಜರ ಸಮಾಧಿ ಪಕ್ಕದಲ್ಲೇ ಇವಳ ಸ್ಮಾರಕವನ್ನು ನಿರ್ಮಿಸಲಾಗಿದೆ.
ಈಕೆಯ ಜೀವನ ಚರಿತ್ರೆ ಬಗ್ಗೆ ಬೆಂಗಳೂರಿನ ರಂಗಶಂಕರದಲ್ಲಿ ನಾಗಾಭರಣರ ನಿರ್ದೇಶದಲ್ಲಿ ಒಂದು ನಾಟಕ ಪ್ರದರ್ಶನ ನಡೆಯಿಲಿದೆ. ರಾಮಮೂರ್ತಿ ಕಾಂಗಲ್ಟನ್ , ಚೆಶೈರ್
ಈ ವಾರದ ದುಪ್ಪಟ್ಟು ಪ್ರಸ್ತುತಿಗಳಿವು. ಮೊದಲನೆಯದು ಶ್ರೀವತ್ಸ ದೇಸಾಯಿ ಬರೆದದ್ದು, ಎರಡನೆಯದು ಪ್ರಮೋದ ಲಕ್ಕುಂಡಿ ಅವರದು. ಈಗ ಕಳೆದ ತಿಂಗಳು ಎರಡು ವರ್ಷಾಬ್ದಿಗಳನ್ನು ಕಂಡಿತು. ಜೂನ್ ೨೧ ರಂದು ಯೋಗ ದಿನಾಚರಣೆಯಷ್ಟೇ ಅಲ್ಲ, ಜಾಗತಿಕ ಮ್ಯೂಸಿಕ್ ದಿನಾಚರಣೆ ಸಹ. ಅದರ ಪೀಠಿಕೆ ಕೆಳಗೆ, ಆ ಲೇಖನದ ಪೂರ್ವದಲ್ಲಿದೆ. ಪ್ಯಾಕೇಜ್ ಟೂರಿಸಂ ಹುಟ್ಟಿದ ಜಾಗ ಇಂಗ್ಲೆಂಡಿನ ಲೆಸ್ಟರ್ ಎನ್ನುವ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಕಳೆದ ವಾರದ ಜುಲೈ ೫ನೆಯ ತಾರೀಕಿಗೆ ಸರಿಯಾಗಿ ೧೮೩ ವರ್ಷಗಳ ಹಿಂದೆ ಒಂದು ಚಿಕ್ಕ ಆದರೆ ಮಹತ್ವದ ೧೧ ಮೈಲಿ ರೈಲು ಪ್ರಯಾಣ ಸಂಭವಿಸಿತು. ಮುಂದೆ ಎರಡು ಶತಮಾನ ಜಗತ್ತಿನಲ್ಲೆಲ್ಲ ಪ್ಯಾಕೇಜ್ ಪ್ರಯಾಣದ ಪರ್ಯಾಯ ಪದದಂತೆ ಜನರ ಮಸ್ಸಿನಲ್ಲಿ ಉಳಿದ ಹೆಸರು ಥಾಮಸ್ ಕುಕ್. ಆತನನ್ನು ಪರಿಚಯಿಸುತ್ತ ಹಾಲಿಡೆ ಪ್ರವಾಸದತ್ತ ಒಂದು ಇಣುಕು ನೋಟ ಕೊಡುವ ಪ್ರಯತ್ನವೇ ನನ್ನ ಈ ಲೇಖನ. (ವಾರದ ಸಂಪಾದಕ)
1) ಕಳೆದ ತಿಂಗಳು ನಾನು ಬಹುಸಂಖ್ಯಾತ ಬ್ರಿಟಿಶ್ ಭಾರತೀಯ ಮೂಲದವರು ವಾಸಿಸುತ್ತಿರುವ ಲೆಸ್ಟರ್ ಶಹರಕ್ಕೆ ಹೋದಾಗ ಸ್ಟೇಶನ್ನಿನ ಹೊರಗಡೆಯಲ್ಲಿ ಕಟ್ಟೆಯ ಮೇಲೆ ನಿಂತ ಆರಡಿ ಎತ್ತರದ ಅರ್ಧ ಬೋಳು ತಲೆಯ ಈಗ ತಾನೆ ಪ್ರವಾಸಕ್ಕೆ ಹೊರಟವನಂತೆ ಕಾಣುತ್ತಿದ್ದವನ ಶಿಲ್ಪ ಕಣ್ಣಿಗೆ ಬಿತ್ತು. ಒಂದು ಕೈಯಲ್ಲಿ ಹಳೆಯ ಕಾಲದ (ಗಾಂಧಿ ತಾತನ ಹತ್ತಿರ ಇದ್ದಂಥ) ಪಾಕೆಟ್ ಗಡಿಯಾರ, ಇನ್ನೊಂದು ಕೈಯಲ್ಲಿ ಮಡಿಚಿಟ್ಟ ಕೊಡೆ, ಗ್ಲಾಡ್ಸ್ಟನ್ ಬ್ಯಾಗು, ಅದರಡಿ ಒಂದು ಚಿಕ್ಕ ಟೂರಿಂಗ್ ಸೂಟ್ ಕೇಸ್. ಅಪ್ಪಟ ಹಳೆಯಕಾಲದ ಇಂಗ್ಲಿಷ್ ’ಜಂಟಲ್ ಮನ್ ಟೂರಿಸ್ಟ್.’ ಯಾರೀತ? ಇವನೇ ಸುಮಾರು ಎರಡು ಶತಮಾನಗಳ ಹಿಂದೆ ತಾನು ನಿಂತಿದ್ದ ಜಾಗದ ಪಕ್ಕದಲ್ಲೇ ಇದ್ದ ಸ್ಟೇಶನ್ನಿನಿಂದ ೫೦೦ ಜನ ಯಾತ್ರಿಕರನ್ನು ಪ್ರವಾಸಕ್ಕೆ ಕರೆದೊಯ್ದು ಥಾಮಸ್ ಕುಕ್. ಇದೊಂದು ರೋಚಕ ಪ್ರವಾಸಿ ಕಥನ! ಇಂದು ಊರಿಂದೂರಿಗೆ ಮತ್ತು ದೇಶಾಂತರ ಪ್ರವಾಸಿಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಇಪ್ಪತ್ತನೆಯ ಶತಮಾನದ ಅರವತ್ತರ ಮತ್ತು ಎಪ್ಪತ್ತರ ದಶಕಗಳಲ್ಲಿ ಇಂಗ್ಲೆಂಡಿನಲ್ಲಿ ಸರ್ ಫ್ರೆಡ್ಡಿ ಲೇಕರ್ ಸ್ಲೈ ಟ್ರೇನ್ (Skytrain) ಎನ್ನುವ ಕಂಪನಿ ಶುರು ಮಾಡಿದ ನಂತರ ಪ್ಯಾಕೇಜ್ ಹಾಲಿಡೇಗಳು ಬೆಳೆಯುತ್ತ ಥಾಮಸ್ ಕುಕ್ ಕಂಪನಿ ೧೯೮೦ರ ದಶಕದಲ್ಲಿ ಅದನ್ನು ಉಚ್ಛ್ರಾಯ ಸ್ಥಿತಿಗೆ ಒಯ್ಯಿತು. ಆದರೆ ಅದು ಯಾವಾಗ ಪ್ರಾರಂಭವಾಯಿತು? ಇಲ್ಲಿಂದ ಶುರುವಾಗುತ್ತದೆ ಜರ್ನಿ!
ಕಾಲ್ನಡಿಗೆಯಲ್ಲಿ ಹೊರಟ ಪಾದ್ರಿ
ಥಾಮಸ್ ಕುಕ್ ಹುಟ್ಟಿದ್ದು ಡಾರ್ಬಿಶೈರಿನ ಮೆಲ್ ಬೋರ್ನ್ (ಆಸ್ಟ್ರೇಲಿಯದು ಅಲ್ಲ) ಎನ್ನುವ ಹಳ್ಳಿಯಲ್ಲಿ, ೧೮೦೮ರಲ್ಲಿ. ಹತ್ತು ವರ್ಷಕ್ಕೇ ಶಾಲೆ ಬಿಟ್ಟು ತನ್ನ ಸೋದರಮಾವನ ಕೆಳಗೆ ಬಡಿಗನಾಗಿ ಕೆಲಸಕ್ಕೆ ಸೇರಿಕೊಂಡ. ತಂದೆ ತಾಯಿಗಳ ಕಟ್ಟಾ ಬಾಪ್ಟಿಸ್ಟ್ ಕ್ರಿಶ್ಚಿಯನ್ ವಾತಾವರಣದಲ್ಲಿ ಬೆಳೆದವನು. ೧೮೨೮ರಲ್ಲಿ ಬೈಬಲ್ ರೀಡರ್ ಮತ್ತಿ ಮಿಷನರಿಯಾಗಿ ನೇಮಕಗೊಂಡನು. ಆ ಕೆಲಸಕ್ಕಾಗಿಯೇ ಮರುವರ್ಷ ೨೬೯೨ ಮೈಲಿಗಳ ಸಂಚಾರ; ಅದರಲ್ಲಿ ಎರಡುಸಾವಿರ ಮೈಲು ಬರೀ ಕಾಲ್ನಡಿಗೆಯಲ್ಲೇ ಸುತ್ತಾಡಿದ! ಮದ್ಯಪಾನವಿರೋಧಿ ಚಳುವಳಿಗಾಗಿ ಮೀಟಿಂಗ್ ಮತ್ತು ಮೆರವಣಿಗೆಗಳನ್ನು ಯೋಜಿಸಿದ. ಇಸವಿ ಸನ್ ೧೮೪ರ ಜೂನ್ ೯ ರಂದು ಥಾಮಸ್ ತನ್ನ ಊರಾದ ಮಾರ್ಕೆಟ್ ಹಾರ್ಬರಾದಿಂದ ಕಾಲ್ನಡಿಗೆಯಲ್ಲಿ ೧೧ ಮೈಲು ದೂರದ ಲೆಸ್ಟರ್ ನಗರಕ್ಕೆ ಟೆಂಪರನ್ಸ್ (ಮದ್ಯಪಾನ ಸಂಯಮ ಸಂಘದ) ಮೀಟಿಂಗಿಗೆ ಹೊರಟಿದ್ದ. ಉದರ ನಿರ್ವಹಣೆಗಾಗಿ ಬಡಿಗನಾಗಿ ಕೆಲಸಮಾಡುತ್ತಿದ್ದರೂ ತನಗೆ ಅತೀವ ಶ್ರದ್ಧೆಯಿದ್ದ ಕ್ರಿಸ್ತಮತದ ಬಾಪ್ಟಿಸ್ಟ್ ಪ್ರವಾಚನಕಾರನೂ ಆಗಿದ್ದ ಆತನ ತಲೆಯಲ್ಲಿ ಫಕ್ಕನೆ ಸುಳಿಯಿತೊಂದು ವಿಚಾರ: ಇತ್ತೀಚಿಗೆ ಬೆಳೆಯುತ್ತಿರುವ ರೇಲ್ವೆಯ ಪ್ರಭಾವವನ್ನು ನಮ್ಮ ಬಡವರನ್ನು ಹೀನ ಸ್ಥಿತಿಗೆಳೆಯುತ್ತಿರುವ ಮದ್ಯಪಾನದಂಥ ದುರ್ವ್ಯಸನಗಳ ಸಂಯಮ ಚಳುವಳಿಗೇಕೆ (Temperance Movement) ಉಪಯೋಗಿಸಿಕೊಳ್ಳಬಾರದು? ಅಂತ. ಈ ವಿಚಾರವನ್ನು ಅಂದು ಟೆಂಪರನ್ಸ್ ಸೊಸೈಟಿ ಸಭೆಯಲ್ಲಿ ಮಂಡಿಸಿ ಕಮಿಟಿಯಿಂದ ಆನುಮತಿ ಪಡೆದು ಕಾರ್ಯಪ್ರವೃತ್ತನಾದ. ಮುಂದಿನ ಜುಲೈ ೫, ೧೮೪೧ ಮಹತ್ವದ ದಿನ. ಮೊದಲ ಬಾರಿ ಇಂಗ್ಲೆಂಡಿನ ಲೆಸ್ಟರ್ ನಗರದಿಂದ ಲಫ್ ಬರಾ (Loughborough) ಎನ್ನುವ ಊರಿಗೆ ೪೮೫ ಜನರನ್ನು ಹದಿನೊಂದು ಮೈಲು ರೈಲು ಪ್ರವಾಸ ಮಾಡಿಸಿ ಥಾಮಸ್ ಕುಕ್ ಪಪ್ರಥಮ ದಾಖಲೆಯನ್ನೇ ಮಾಡಿದನು. ಆ ದಿನ ಅವರೆಲ್ಲ ಮರಳಿ ಲೆಸ್ಟರಿಗೆ ಬಂದಾಗ ರಾತ್ರಿ ೧೦ ೩೦ ಗಂಟೆ! ಅವರು ತೆತ್ತ ಶುಲ್ಕ ಬರೀ ಒಂದು ಶಿಲ್ಲಿಂಗ್. ಈಗಿನ ಲೆಕ್ಕದಲ್ಲಿ ಮೂರು ಪೌಂಡುಗಳು; ಅಂದು ಸಾಮಾನ್ಯ ಮನುಷ್ಯನ ಆಗಿನ ಕಾಲದ ಒಂದು ತಿಂಗಳ ಆದಾಯಕ್ಕೆ ಸಮವಾಗಿತ್ತು. ಅಂದೇ ಹುಟ್ಟಿತು ಪ್ಯಾಕೇಜ್ ಪ್ರವಾಸ. ಆತನೇ ಅದಕ್ಕೆ ಚಾಲನೆ ಕೊಟ್ಟವರಲ್ಲಿ ಮೊದಲಿಗನು. ಈ ಪ್ರವಾಸದ ಯಶಸ್ಸಿನಿಂದ ಪ್ರೇರಿತನಾಗಿ ೧೮೫೧ರ ಗ್ರೇಟ್ ಎಗ್ಸಿಬಿಷನ್ ಗೆ ಒಂದುಉವರೆ ಲಕ್ಷ ಜನರನ್ನು ಕೊಂಡೊಯ್ದ. ೧೮೫೫ ರ ಪ್ಯಾರಿಸ್ ಎಗ್ಸಿಬಿಷನ್ನಿಗೆ ಹೋಗಿಬಂದ ಲೆಸ್ಟರಿನ ಪ್ರಯಾನಿಕರು ತೆತ್ತ ಶುಲ್ಕ ಬರೀ ಒಂದೂ ವರೆ ಪೌಂಡುಗಳು! ಹೀಗೇ ’ಕುಕ್ ಟೂರಿಸ್ಟ್’ಗಳ ಸಂಖ್ಯೆ ಬೆಳೆದು ಪ್ರವಾಸಗಳು ಯೂರೋಪ್, ಅಮೇರಿಕಾ, ಸಿಂಗಾಪೂರ್, ಪ್ರಾಚ್ಯ ದೇಶಗಳಿಗೂ ವಿಸ್ತರರಿಸಿತು. ಅಲ್ಲಿ ವಾಸಕ್ಕೆಹೋಟೆಲ್ ಕೂಪನ್ನುಗಳು, ಹಣಕಾಸಿನ ವ್ಯವಸ್ಥೆಗೆ ಟ್ರಾವಲರ್ಸ್ ಚೆಕ್ ಹೀಗೇ ಬೆಳೆಯಿತು ಕುಕ್ ಎಂಪಾಯರ್! ಆತನ ನಂತರ ಆತನ ಮಗನು ಥಾಮಸ್ ಕುಕ್ ಕಂಪನಿಯನ್ನು ಮುನ್ನಡೆಸಿ ಇನ್ನಷ್ಟು ಬೆಳೆಸಿದನು. ಮುಂದೆ ಮೊಮ್ಮಕ್ಕಳೂ ಸೇರಿಕೊಂಡರು. ಅವರದೇ ಏರ್ ಲೈನ್ ಸಹ ಪ್ರಾರಂಭವಾಯಿತು
ಲಫ್ ಬರಾ ಸ್ಟೇಶನ್ನಿನಲ್ಲಿ ಆ ಪ್ರವಾಸದ ಸ್ಮಾರಕವಾಗಿ ಹಸಿರು ಫಲಕದ ಅನಾವರಣ (೨೦೨೩)
ಫ್ರೆಡ್ಡಿ ಲೇಕರ್ ಅವರ ಸ್ಕೈ ಟ್ರೇನ್ ಮತ್ತು ವಿದೇಶ ಪ್ರವಾಸದ ಬೆಳವಣಿಗೆ
ಮೋಡ, ಮಂಜು ಕವಿದ ಬ್ರಿಟಿಶ್ ಆಕಾಶಕ್ಕೆ ಹೊಂದಿಕೊಂಡವರು ಮತ್ತು ಇಡೀ ವರ್ಷ ಸತತವಾಗಿಯಲ್ಲದಿದ್ದರೂ ತಿಂಗಳಲ್ಲೊಂದು ಬಾರಿಯಾದರೂ ಮಳೆಯಾಗುವ ಈ ಚಳಿನಾಡಿನಲ್ಲಿ ವಾಸಿಸುವ ಆಂಗ್ಲರ ಹವ್ಯಾಸಗಳಲ್ಲಿ ಒಂದು ಬಹುತೇಕ ಎಲ್ಲ ಕುಟುಂಬದವರು ’ಬೇಸಗೆಯಲ್ಲಿ’ ಒಂದು ಅಥವಾ ಎರಡು ವಾರಗಳು ಸಮುದ್ರತಟದ ಮೇಲೆ ಕಳೆಯುವ ಬೀಚ್ ಹಾಲಿಡೇ! ಚಿಕ್ಕಂದಿನಲ್ಲಿ ಈ ದೇಶದ ನೈಋತ್ಯದ ಡೆವನ್ ಮತ್ತು ಕಾರ್ನ್ ವಾಲ್ ಪ್ರದೇಶಗಳಿಗೆ ತಂಡೋಪ ತಂಡವಾಗಿ ಹೋಗುವ ರಿಚುಅಲ್ ಅವರದು. ಅದು ತಪ್ಪಿದರೆ ಉತ್ತರದ ಬ್ಲಾಕ್ ಪೂಲ್, ಅಥವಾ ಅಗ್ನೇಯದ ಗ್ರೇಟ್ ಯಾರ್ಮೌತ್ ಅಥವಾ ಸ್ಕಾಟ್ಲಂಡಿಗೆ ಕಾರಿಗೆ ಕಾರವಾನ್ ಲಗತ್ತಿಸಿ ಪಯಣ. ಇದು ತಲೆ ತಲಾಂತರಗಳಿಂದ ಅವರು ಮಾಡುತ್ತಿದ್ದರೆಂದು ವಿಕ್ಟೋರಿಯನ್ ಆಂಗ್ಲ ಸಾಹಿತಿ ಚಾರ್ಲ್ಸ್ ಡಿಕೆನ್ಸ್ನ ಓದುಗರಿಗೂ ವಿದಿತ. ಆಗ ಮಧ್ಯಮ ವರ್ಗದ ಕುಟುಂಬಗಳಿಗೆ ಏರೋಪ್ಲೇನಿನಲ್ಲಿ ಪರದೇಶಗಳಿಗೆ ಹೋಗುವ ಸಾಮರ್ಥ್ಯ ಇರಲಿಲ್ಲ. ಅದನ್ನು ಮುರಿದವನು ೧೯೭೭ರಲ್ಲಿ ಬರೀ ೧೧೮ ಸ್ಟರ್ಲಿಂಗ್ ಪೌಂಡುಗಳಿಗೆ ಅಮೇರಿಕೆಗೆ ಕೊಂಡೊಯ್ಯುವ ಸ್ಕೈಟ್ರೇನ್ ಪ್ರಾರಂಭ ಮಾಡಿದವನೇ ಮುಂದೆ ಸರ್ ಬಿರುದು ಪಡೆದು ಸರ್ ಫ್ರೆಡ್ಡಿ ಲೇಕರ್ ಆದವನು. ಆ ತಿಕೀಟು ಉಳಿದ ದೊಡ್ಡ ಏರ್ಲೈನ್ಗಳಿಗಿಂತ ಶೇಕಡಾ ೬೬ ಕಡಿಮೆ ದರದ್ದು ಎಂದ ಮೇಲೆ ಶ್ರೀಸಾಮಾನ್ಯನ ಪರದೇಶ ಪ್ರವಾಸದ ಕನಸು ನನಸಾಯಿತು. ಹಲವೇ ವರ್ಷಗಳ ನಂತರ ೧೯೮೦ರ ದಶಕದಲ್ಲಿ ಹಣಕಾಸಿನ ಕುಸಿತ (ರಿಸೆಷನ್) ಮತ್ತು ಆತನ ಪ್ರತಿಸ್ಫರ್ದಿ ಏರ್ಲೈನ್ ಗಳ ಷಡ್ಯಂತ್ರ ಇವೆರಡರ ಕಾರಣದಿಂದ ಆತನ ಕಂಪನಿ ಮುಳುಗಿದರೂ ಜನರಿಗೆ ಯೂರೋಪ್ ಮತ್ತು ದೂರ ದೇಶಗಳಿಗೆ ಬಿಸಿಲನ್ನು ಬೆನ್ನು ಹತ್ತಿ ಪ್ರವಾಸ ಮಾಡುವ ಚಟ ಆಗಲೇ ಹತ್ತಿತ್ತು. ಚಳಿ-ಮಳೆಯಿಂದ ಬೇಸತ್ತು ಯುಕೆಯನ್ನು ಬಿಟ್ಟು ಎರಡೇ ತಾಸುಗಳೊಳಗೆ ದಕ್ಷಿಣ ಫ್ರಾನ್ಸ್ ಅಥವಾ ಅಗ್ಗ ದರದಲ್ಲಿ ಬೇಸಗೆಯಲ್ಲಿ ಬೇಯುವ ಸ್ಪೇನಿನ ಕಾಸ್ಟಾ ಡೆಲ್ ಬೀಚುಗಳಿಗೆ ಹೋಗುವ ಸಾಧ್ಯತೆ ಅವರ ಮಡಿಯಲ್ಲಿ ಬಂದು ಬಿದ್ದಾಗ ಯಾರಿಗೆ ಬೇಡ? ಒಂದು ಅಥವಾ ಎರಡು ವಾರಗಳ ನಂತರ ವಿಮಾನದಲ್ಲಿ ಮರಳುವಾಗ ಬೀಚಿನಲ್ಲಿ ಬೆಂದ ಕಂದು ಬಣ್ಣದ ಸನ್ ಟ್ಯಾನ್ ಮೈ ಬಿಟ್ಟು ಕೊಂಡು ಮೆರೆದವರೇ ಟೀಚರ್-ಲಾಯರ್ನಿಂದ ಹಿಡಿದು ಗಣಿ ಕೆಲಸಗಾರರು ಸಹ. ಇದರ ಲಾಭ ಪಡೆದ ಥಾಮಸ್ ಕುಕ್ ಕಂಪೆನಿ ಒಮ್ಮೆಲೆ ನೂರು ಟ್ರಾವಲ್ ಏಜಂಟ್ ಅಂಗಡಿಗಳನ್ನು ಊರೂರಿಗೆ ಹೋಗಿ ತೆರೆಯಿತು. ಅದರ ಹೆಸರು ಪ್ಯಾಕೇಜ್ ಹಾಲಿಡೇಗೆ ಮನೆಮಾತಾಯಿತು. ಅವುಗಳೂ ಏರಿಳಿತಗಳನ್ನು ಕಂಡ ಕಥೆಯನ್ನು ನಂತರ ನೋಡುವಾ.
ಟ್ರಾವಲರ್ಸ್ ಚೆಕ್
ಫುಲ್ ಪ್ಯಾಕೇಜ್ ಅಂದರೆ ವಿಮಾನ ಪಯಣವಲ್ಲದೆ ಹೋಟೆಲ್ ವಾಸ ಮತ್ತು ದೈನಂದಿನ ಖರ್ಚಿಗಾಗಿ ಟ್ರಾವಲ್ ಚೆಕ್ಕುಗಳ ಪುಡಿಕೆ. ನಾನು ಮೊದಲ ಬಾರಿ ಇಂಗ್ಲೆಂಡಿಗೆ ಬಂದದ್ದು ಐವತ್ತು ವರ್ಷಗಳ ಹಿಂದೆ. ಆರೇ ತಿಂಗಳ ನಂತರ ಭಾರತಕ್ಕೆ ಭೆಟ್ಟಿ ಕೊಟ್ಟಾಗ ಹಣ ಕಳುವಾಗುವಗದಂತೆ ಒಯ್ಯಲು ಅನುಕೂಲ ಎಂದು ಹೇಳಿ ಇನ್ನೂ ಬಡವನಾಗಿದ್ದ ನನಗೂ (ಬೇಂದ್ರೆ ಅವರ ಮಾತಿನಲ್ಲಿ) ಆತ ’ಹಿಡಿ ಹಿಡಿಯಂತ” ಮಿತ್ರ ಕೊಡಿಸಿದ್ದು ಒಂದು ”ಹಿಡಿ” ಥಾಮಸ್ ಕುಕ್ ಟ್ರಾವಲರ್ಸ್ ಚೆಕ್ ಗಳು. ಇತ್ತೀಚಿನ ವರೆಗೆ ಈ ಹೆಸರಿನಲ್ಲೆ ಅವುಗಳು ಜಗತ್ತಿನ ಎಲ್ಲ ಕಡೆ ನಗದು ಹಣದಂತೆಯೇ ಚಾಲ್ತಿಯಲ್ಲಿವೆ. ’ಸರ್ಕ್ಯುಲರ್ ನೋಟ್ಸ್’ ಎನ್ನುವ ಹೆಸರಿನಲ್ಲಿ ಅವುಗಳನ್ನು ಥಾಮಸ್ ಕುಕ್ ೧೮೭೪ರಲ್ಲೇ ಪ್ರಾರಂಭ ಮಾಡಿದ್ದರು. ಆಮೇಲೆ ಅಮೆರಿಕನ್ ಎಕ್ಸ್ ಪ್ರೆಸ್ ಮತ್ತು ಅಮೆರಿಕನ್ ಬ್ಯಾಂಕುಗಳ ಚೆಕ್ಕುಗಳೂ ಪ್ರಚಲಿತವಾಗಿದ್ದವು. ವಿದೇಶದಲ್ಲಿ ಗ್ರಾಹಕ ಚೆಕ್ ನೋಟಿನ ಮೇಲೆ ಅಂಗಡಿ ಅಥವಾ ಹೋಟೆಲ್ನಲ್ಲಿ ಪ್ರತ್ಯಕ್ಷ ಸಹಿ ಮಾಡಿ ಕ್ಯಾಶ್ ಮಾಡಬಹುದಿತ್ತು. ೧೯೭೫ರಲ್ಲಿ ನಾನು ಮುಂಬಯಿಯಲ್ಲಿ ಬಂದಿಳಿದಾಗ ಅದನ್ನು ಕ್ಯಾಶ್ ಮಾಡಲು ಹೆಚ್ಚಿನ ಎಕ್ಸ್ಚೇಂಜ್ ಮಾರುಕಟ್ಟೆಗಳು ಆಗ ಇರಲಿಲ್ಲ. ಫೋರ್ಟ್ ಪ್ರದೇಶಕ್ಕೇ ಹೋಗ ಬೇಕಾಗಿ ಬಂತು. ಪಾಸ್ ಪೋರ್ಟ್ ತೋರಿಸಿ ಚೆಕ್ ಬುಡದಲ್ಲಿ ಸಹಿಮಾಡಿ ರೂಪಾಯಿಗಳನ್ನು ಪಡಕೊಂಡೆ. ಮುಂದೆರಡು ವಾರಗಳ ನಂತರ ಹುಬ್ಬಳ್ಳಿ ಧಾರವಾಡದ ಪ್ರತಿಷ್ಠಿತ ಬ್ಯಾಂಕಿಗೆ ಹೋದಾಗ ಯಾರೂ ಅದನ್ನು ನೋಡಿಯೇ ಇರಲಿಲ್ಲ ಅಂತ ರೂಪಾಯಿ ಕೊಳ್ಳಲು ತ್ರಾಸವಾಯಿತು! ಈಗ ಜಗತ್ತು ಮುಂದುವರೆದಿದೆ. ಕ್ರೆಡಿಟ್ ಕಾರ್ಡು ಮತ್ತು ಪ್ರಿಪೇಡ್ ಕಾರ್ಡುಗಳ ಈಗಿನ ಬದಲಾದ ವಾತಾವರಣದಲ್ಲಿ ಅವುಗಳು ಅಪರೂಪವಾಗಿ ಮತ್ತೆ ಮಾಯವಾಗುತ್ತಿವೆ
ಕುಕ್ ’ಸಾಮ್ರಾಜ್ಯ’ ಅವನತಿ ಮತ್ತು ಹೊಸ ಅವತಾರ
೧೭೮ ವರ್ಷಗಳ ನಿರಂತರ (ಮಹಾಯುದ್ಧದ ಸಮಯದಲ್ಲಿ ಸ್ವಲ್ಪ ಕಾಲ ರಾಷ್ಟ್ರೀಕರಣವಾದದ್ದನ್ನು ಬಿಟ್ಟು) ಸೂರ್ಯೋದಯ ಸೂರ್ಯಾಸ್ತಗಳನ್ನರಸಿ ಬಂದ ಲಕ್ಷಾಂತರ ಪ್ರಯಾಣಿಕರನ್ನು ದೇಶವಿದೇಶಗಳಿಗೆ ಕರೆದುಕೊಂಡು ಹೋದನಂತರ ಸೆಪ್ಟೆಂಬರ್, ೨೦೧೯ರಲ್ಲಿ ಅದರ ನೇಸರ ಅಸ್ತಂಗತವಾಯಿತು. ಏಕೆ? ಕಾಲ ಬದಲಾದಂತೆ, ಮತ್ತು ಅಗ್ಗದರದ ವಿಮಾನಯಾನದ ಕಂಪನಿಗಳಾದ ಈಸಿ ಜೆಟ್, ರೈಯಾನ್ ಏರ್, ಜೆಟ್-2, Airbnbಗಳ ಪೈಪೋಟಿ, ಕೋವಿಡ್ ಮಹಾ ಮಾರಿ ಜನರ ಓಡಾಟವನ್ನಿ ನಿಲ್ಲಿಸಿದ್ದು ಇವೆಲ್ಲ ಕೂಡಿ ಅದರ ಬೇಡಿಕೆ ಕಡಿಮೆಯಾಗಲಾರಂಭಿಸಿತು. ಜೊತೆಗೆ ೨೦೧೬ರಲ್ಲಿ ಯೂರೋಪಿಯನ್ನರ ಪ್ರಮುಖ ಹಾಲಿಡೇ ದೇಶವಾಗಿದ್ದ ಟರ್ಕಿಯಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ, ೨೦೧೮ ರಲ್ಲಿ ಹೀಟ್ ವೇವ್, ಇಂದಿನ ಯುವ ಪ್ರವಾಸಿಕರು ಇಂಟರ್ನೆಟ್ ನಲ್ಲಿ ತಮ್ಮ ವಿಮಾನ, ಹೋಟೆಲ್ ಹುಡಿಕಿಕೊಳ್ಳುವದು ಇವೆಲ್ಲ ಸೇರಿ ಒಂದು ಪ್ರಸಿದ್ಧ ಆಂಗ್ಲ ಪದಗುಚ್ಛದಂತೆ (To cook one's goose) ಥಾಮಸ್ ಕುಕ್ಕನ ‘ಬಾತನ್ನು ಬೇಯಿಸಿದಂತಾಯಿತು!‘ ೨೩, ಸೆಪ್ಟೆಂಬರ್ ೨೦೧೯ ರಂದು ಕಂಪನಿ ಮುಳುಗಿತು. ಆದರೆ ಫೀನಿಕ್ಸ್ ಪಕ್ಷಿಯಂತೆ ಅದು ಬರೀ ಆನ್ ಲೈನ್ ಟ್ರಾವಲ್ ಏಜಂಟ್ ರೂಪದಲ್ಲಿ ಚೀನದ ಫೋಸನ್ ಟೂರಿಸ್ಮ್ ಗ್ರುಪ್ ಹೆಸರಿನಲ್ಲಿ ಸನ್ನಿ ಹಾರ್ಟ್ ಲಾಂಛನದೊಂದಿಗೆ ಮತ್ತೆ ತಲೆಯಿತ್ತಿದೆ. ವಿಪರ್ಯಾಸವೆಂದರೆ ಅದರ ಧ್ಯೇಯವಾಕ್ಯ: ಡೋಂಟ್ ಜಸ್ತ್ ಬುಕ್ ಇಟ್, ಥಾಮಸ್ ಕುಕ್ ಇಟ್! (Don't just book it, Thomas Cook it.)
ಶ್ರೀವತ್ಸ ದೇಸಾಯಿ
(ಉದಯವಾಣಿಯಲ್ಲಿ ಅವರೇ ಬರೆದ ಲೇಖನದ ಪರಿಷ್ಕೃತ, ವಿಸ್ತೃತ ಆವೃತ್ತಿ)
2) ನಮ್ಮ ಮನೆಯಲ್ಲಿ ಆಚರಿಸಿದ ವಿಶ್ವ ಸಂಗೀತ ದಿನಾಚರಣೆ -ಪ್ರಮೋದ ಲಕ್ಕುಂಡಿ
’ಎತ್ತಣ ಥಾಮಸ್ ಕುಕ್, ಎತ್ತಣ ಸಂಗೀತ?’ ಅನ್ನಬಹುದು, ನೀವು. “We carried music with us, and music met us at Loughborough Station … and cheered us all along the line with the heartiest welcome … the whole affair being one which excited extraordinary interest, not only in the county of Leicester but throughout the whole country.” ಆ ದಿನ ಆತ ತನ್ನ ಡೈರಿಯಲ್ಲಿ ಬರೆದ ಮಾತುಗಳಿವು. ಸಂಗೀತಕ್ಕ ಕಾಲ, ದೇಶದ ಪರಿವೆಯಿಲ್ಲ. ೧೯೮೧ ರಲ್ಲಿ ಪ್ಯಾರಿಸ್ ನಲ್ಲಿ ಜಾಕ್ ಲ್ಯಾಂಗ್ ಮತ್ತು ಮೋರಿಸ್ ಫ್ಲೂರೆಟ್ ಎನ್ನುವ ಫ್ರೆಂಚ್ ಸಂಗೀತಗಾರ ಸೇರಿ ‘Fête de la Musique’ (“Make music.”) ಅಂತ ಕರೆ ಕೊಟ್ಟು ಈ ದಿನವನ್ನು ಸಂಗೀತಕ್ಕಾಗಿ ಮುಡುಪಿಡುವ ಯೋಜನೆ ಹಾಕಿ ಮರು ವರ್ಷ ಜೂನ್ ೨೧ರಂದು ಇದನ್ನು ವಿಶ್ವದಾದ್ಯಂತ ಆಚರಿಸುವ ಪ್ರಣಾಲಿ ಶುರುವಾಯಿತು (World Music Day). ಜಗತ್ತಿನಾದ್ಯಂತ ಜನರು ತಮ್ಮ ಮನೆಯಲ್ಲಿ, ಜಗುಲಿಯಲ್ಲೋ, ರಸ್ತೆಯಲ್ಲಿ, ಪಾರ್ಕ್, ಸಭೆಗಳಲ್ಲಿ ಸೇರಿ ಆಚರಿಸುತ್ತ ಈ ದಿನವನ್ನು ಸಂಗೀತಕ್ಕಾಗಿಯೇ ಮೀಸಲಿಟ್ಟಿರುತ್ತಾರೆ. ಅದರ ಪ್ರಕಾರ ತಮ್ಮ ಮನೆಯಲ್ಲಿ ಅದನ್ನು ಆಚರಿಸಿದ್ದನ್ನು ನಿಮ್ಮೊಡನೆ ಪ್ರಮೋದ ಅವರು ಹಂಚಿಕೊಂಡಿದ್ದಾರೆ. ಯುನೆಸ್ಕೋ ಅವರು ಅಕ್ಟೋಬರ್ ೧ ನ್ನು ಜಾಗತಿಕ ಸೌಹಾರ್ದತೆ ಮತ್ತು ಶಾಂತಿಗಾಗಿ ವಿಭಿನ್ನವಾಗಿ “ಇಂಟರ್ನ್ಯಾಷನಲ್ ಮ್ಯೂಸಿಕ್ ಡೇ“ ಅಂತ ಕರೆದರು. ಪ್ರಮೋದ ಅವರ ಮನೆಯಲ್ಲಿ ನಡೆದದ್ದು ಒಂದು ಸಿಂಫನಿಯೇ? ನೀವೇ ತೀರ್ಮಾನಿಸಿರಿ! (ಸಂ)
ಪ್ರಮೋದ ಬರೀತಾರೆ: ಮುಂಜಾನಿ ದಿನಪತ್ರಿಕೆ ಹಿಡ್ಕೊಂಡು, ಚಹಾ ಕುಡ್ಕೋತ ಇಂದಿನ ಸಮಾಚಾರ ಓದೋಣ ಅಂತ ಆರಾಮ ಕುರ್ಚಿಯಲ್ಲಿ ಮೈ ಊರಿದೆ ... ಆರಾಮ ಕುರ್ಚಿಯಲ್ಲಿ ವಿರಮಿಸೋ ಮಜಾನೇ ಬೇರೆ
ಬಾನುಲಿಯಲ್ಲಿ ಸಣ್ಣಗೆ ಹೆಂಡ್ತಿ ಹಚ್ಚಿದ ಹಾಡು ಕೇಳಿಸ್ತಿತ್ತು...
ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುಹುದಕೆ ಭಾಷೆ ಒರಟು ಯಾನ ||
ಡಾ. ಜಿ ಎಸ ಶಿವರುದ್ರಪ್ಪ ಅವರ ಸಾಹಿತ್ಯದ ಹಾಡು ಮನಸ್ಸಿಗೆ ಮುದ ಕೊಡುತ್ತದೆ. ಖುಷಿಯಲ್ಲಿ ಮೈಮರೆತಾಗ ಕೇಳಿಸಿತು ಗುಂಡನ ದನಿ. ಬಂದಪ ನಮ್ಮ ಹರಟೆ ಗುಂಡ ಅನ್ಕೋತ ಕರೆದೆ - "ಬಾರೋ ಗುಂಡಣ್ಣ, ಬಹಳ ದಿನ ಆಯಿತು ಭೇಟಿಯಾಗಿ"
ಗುಂಡ ಒಳಗೆ ಬಂದು ಕೂತು, ಸಮಾಚಾರ ಪತ್ರಿಕೆ ಪುರವಣಿ ಪತ್ರಿಕೆ ಓದುತ್ತ "ನನಗೂ ಚಾ ಕೊಡಿ ಅಕ್ಕ" ಅಂತ ಕೂಗಿದ. ಪತ್ರಿಕೆ ಓದುತ್ತ ಕೇಳಿದ "ಸತ್ಯಾ, ಏನೋ ಇದು ವಿಶ್ವ ಸಂಗೀತ ದಿನಾಚರಣೆ? ಸಂಗೀತ ಅಂದರೆ ಏನೂ ಅಂತ ಗೊತ್ತಿಲ್ಲದ ನನಗೆ ಬೇರೆ ಏನೂ ತಿಳಿಯೋದಿಲ್ಲ, ಸಂಗೀತ ಅಂದ್ರೆ ಖುಷಿ ಕೊಡೊ ಹಾಡು ಮಾತ್ರ"
ನನಗೂ ಖರೆ ಅನಿಸ್ತು, ಮನಸ್ನಾಗೆ ಅಂದ್ಕೊಂಡೆ ನನಗೆ ಸಂಗೀತ ಕಲ್ಲಿನ ಕಡಲೆ. ನಮ್ಮ ಅಮ್ಮ, ಅಜ್ಜಿ ಆಗಾಗ ಹಾಡುವದನ್ನು ಕೇಳಿದ್ದೇನೆ, ಅದನ್ನು ಬಿಟ್ಟರೆ ಶಾಲೆ ಸಮಯದಲ್ಲಿ ನಮ್ಮ ಫಿಲಿಪ್ಸ್ ಮ್ಯೂಸಿಕ್ ಸಿಸ್ಟಮ್ ಮತ್ತು ರಾಶಿ ಕ್ಯಾಸ್ಸೆಟ್ಸ್ ನಮ್ಮ ಸಂಗೀತ ಜಗತ್ತಾಗಿತ್ತು. ಹೈಸ್ಕೂಲ್ನಲ್ಲಿ ಇದ್ದಾಗ ಬಿಜಾಪುರ್ ತೀಟೆ ಸರ್ (ಇವರು ಬಿಜಾಪುರಿನ ಪ್ರಸಿದ್ಧ ಸಂಗೀತ ಗುರುಗಳು) ಹತ್ತಿರ ಒಂದು ಪ್ರಯತ್ನ ಸಂಗೀತ ಕಲಿಯೋದು ಆಗಿದೆ. ನಾನು, ನಮ್ಮಣ್ಣ ಮದುವೆಯಾದ ಮೇಲೆ ಹಾಡೋರೂ, ಬರೆಯೋರು ನಮ್ಮ ಮನೆಯ ಭಾಗ ಆದ್ರು.
ಸತ್ಯಾ: (ಸತ್ಯಪ್ರಮೋದ, ಲೇಖಕ) ಗುಂಡಾ... ಹಾಡು ಅಂದಕೂಡಲೇ ನಮ್ಮಣ್ಣನ ಒಂದು ಸಾಹಸ ನೆನಪಾಗ್ತದೆ, ಹೇಳ್ತಿನ್ ಕೇಳು,
ನಾವು ಹೈಸ್ಕೂಲ್ನಲ್ಲಿ ಇದ್ದಾಗ ಪ್ರತಿದಿನ ಸರಿಯಾಗಿ ಮಧ್ಯಾಹ್ನ ಬಿ ಆರ್ ಲಕ್ಷ್ಮಣರಾವ್ ಅವರ ಕೆಳಗಿನ ಹಾಡು ನಮಣ್ಣ ಜೋರಾಗಿ ಕೇಳಿಸ್ತಿದ್ದ
’"ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ
ಮಧುರವಾದ ವೇಣುನಾದ
ನನ್ನ ಪ್ರೇಯಸಿ..."
ನಾನು ಮತ್ತು ಅಮ್ಮ ಪ್ರತಿದಿನ ವಿಚಾರ ಮಾಡುತ್ತಿದ್ದೆವು, ಇದೆ ಹಾಡು ಪ್ರತಿದಿನ ಇದೆ ಸಮಯಕ್ಕೆ ಯಾಕೆ ಕೇಳಿಸ್ತಾನೆ? ಆಮೇಲೆ ಗೊತ್ತಾಯಿತು ನಮ್ಮ ಮನೆಯ ಎದರು ಒಂದು ಸುಂದರ ಕೆಂಗುಲಾಬಿ ಹುಡುಗಿ ಶಾಲೆಯಿಂದ ಮನೆಗೆ ಹೋಗುತ್ತಿದ್ದಳು, ಅವ್ಳು ಈ ಹಾಡು ಕೇಳಿ ಏನಾದ್ರು ಅವನ ಕಡೆ ನೋಡ್ತಾಳೇನು ಎಂದು ಹರಸಾಹಸ ಪ್ರಯತ್ನ ಮಾಡ್ತಿದ್ದ"
ಗುಂಡಾ: ನಗುತ್ತ "ಜಾಲಿ ಬಾರಿನಲ್ಲಿ ಪೋಲಿ ಹುಡುಗರು ಹಾಡನ್ನು ಪ್ರಯತ್ನ ಮಾಡಿಲ್ಲ ತಾನೇ?"
ಚಾ ಕೈಯಲ್ಲಿ ಹಿಡ್ಕೊಂಡು ಬಂದ ನನ್ನ ಹೆಂಡ್ತಿ "ಉಡಾಳ್ತನ ಬಿಟ್ಟು ಬೇರೆ ಯೇನಾದ್ರು ಮಾಡಿರೇನು ನೀವ್ ಅಣ್ಣ, ತಮ್ಮ?"
ಸತ್ಯಾ: "ಹಾಡು ಕಾಡತೈತಿ, ಕಾಡು ಹಾಡಿತೈತಿ (ಇಲ್ಲಿ ಕಾಡು - ಕಾಡುವ ಮನ ಎನ್ನುವದರ ಸಂಕ್ಷಿಪ್ತ).
ಕೆಲವು ಹಾಡು ನಮಗೆ ಬಹಳ ಕಾಡ್ತವಾ, ನನ್ನ ಪ್ರಕಾರ ಎಲ್ಲರಿಗೂ ಕೆಲವು ಅವರದೇ ಪ್ರೀತಿಯ ಹಾಡುಗಳು ಇರ್ತಾವ, ಅವರ ಮನಸ್ಸಿನ ಭಾವದ ಪ್ರಕಾರ ಅವರ ಮನದಲ್ಲಿ ಅವು ಮೂಡ್ತಾವ... ನಂಗಂತ್ತೂ ಇದು ಖರೆ ನೋಡಪ್ಪ"
"ಗುಂಡಣ್ಣ ನಿಮಗೆ ಇವರ ಒಂದು ಗುಟ್ಟು ಹೇಳ್ತಿನಿ ಕೇಳ್ರಿ...
ಇವರು ಅವರ ಅಣ್ಣ ನೌಕ್ರಿಗೆ ಊರ ಬಿಟ್ಟು ಬೇರೆ ಕಡೆ ಹೋದಾಗ ಇವರು ಕೇಳ್ತಿದಿದ್ದು ಹಾಡು ಯಾವ್ದು ಗೊತ್ತಾ?
ನಾಮ್ ಸಿನೆಮಾದ "ತೂ ಕಲ್ ಚಲಜಾಯೆಗಾ ತೋ ಮೈ ಕ್ಯಾ ಕರೂಂಗ, ತೂ ಯಾದ್ ಬಹುತ್ ಆಯೇಗಾ ತೋ ಮೈ ಕ್ಯಾ ಕರೂಂಗsss"
ಉಡಾಳ್ತನ ಅಷ್ಟೇ ಅಲ್ಲ ಭಾವುಕ ಕೂಡ ಇದ್ರು ಇವರಿಬ್ಬರು"
ನಾನು ಸಣ್ಣಗೆ ಇಬ್ಬರಿಗೂ ಕೇಳಿಸೋ ಹಂಗೆ ಹಾಡಿದೆ (ಒಂದು ಸಾಲು ಹೆಚ್ಚಿಗೆ ಸೇರಿಸಿ)
"ನನ್ನ ಹಾಡು ನನ್ನದು,
ನನ್ನ ಭಾವ ನನ್ನದು,
ನನ್ನ ರಾಗ ನನ್ನದು
ನನ್ನ ತಾಳ ನನ್ನದು
ನನ್ನ ಹಾಡು ನನ್ನದು"
ಗುಂಡ: ಈ ಮಾತಿಗೆ ನನಗೆ ಒಂದ್ ಹಾಡು ನೆನಪಾಯಿತು
"ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ,
ಕರೆಯುವೆ ಕೈ ಬೀಸಿ,
ಬತ್ತಿದೆದೆಯಲ್ಲಿ ಬೆಳಿಯಿರಿ ಹಸಿರನು,
ಪ್ರೀತಿಯ ಮಳೆ ಸುರಿಸಿ"
ಭಟ್ಟರು ಈ ಹಾಡಿನಲ್ಲಿ ಎಷ್ಟು ಚೆನ್ನಾಗಿ ಭಾವನೆಗಳ ಮಳೆ ಸುರಿಸಿದ್ದಾರೆ, ಅರ್ಥಕ್ಕೆ ಒತ್ತು ಕೊಡಬ್ಯಾಡ್ರಿ, ನೀವು ಹಾಡಿನ ಭಾವ ಕೇಳಿ ಆನಂದ್ ಪಡೀರಿ.
ಸತ್ಯಾ: ಹಾಡಿನ ಅರ್ಥ ಅಂದ ಕೂಡ್ಲೇ ಒಂದ್ ಸಾಲು ನೆನಪಾಯ್ತು ನೋಡಪ್ಪ...
"ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ"
ಬೇಂದ್ರೆ ಅಜ್ಜಾ ಹೇಳುವಂಗೆ ಮಾತು ಮಾತು ಮಥಿಸಿ ಹುಟ್ಟುವ ನಾದದ ನವನೀತವೇ ಕಾವ್ಯ, ಅದರಲ್ಲಿ ಅರ್ಥ ಅನ್ನೂದು ಗೌಣ... ಮತ್ತ ಗೌಣ ಅಂತ ಅದನ್ನ ಕಡೆಗಾಣಿಸೋದಲ್ಲ... ಅದು ಭಾವಕ್ಕೆ ಬಿಟ್ಟದ್ದು
ಮಾತು ಹಿಂಗಾ ಓಡ್ತಿತ್ತು, ಮಗರಾಯ ಒಳಗೆ ಬಂದ
ಮಗ: ಅಪ್ಪಾ... ಬಾಜೂ ಮನೆ ಮಾಳಗಿ ಸೋರಕತ್ತಾದ, ಅದಕ್ಕೆ ನಾವೆಲ್ಲ ಹುಡುಗರು "ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ" ಅಂತ ಕೂಗಿ ಹಾಡಿದೆವು
ಸತ್ಯಾ: ಕೇಳ್ರಪ್ಪ, ಇವ ಹಾಡಿನ ಭಾವನೆ ಬಿಟ್ಟು ಅರ್ಥ ಹುಡುಕ್ಯಾನ...
ಮಗನೆ sss ಕೇಳಪ್ಪ. "ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ" ಅಂದರೆ ಬಾಜೂಕಿನ ಮನಿಯವರ ಅಜ್ಞಾನದಿಂದ ಮನಿ ಸೋರುದು ಅಲ್ಲ... ಮನಗಂಡ ಮಳಿ ಕಾರಣ ಸೋರಕತ್ತಾದ.