ನಾನು ಓದಿದ ಪುಸ್ತಕ, ನನ್ನ ಅನಿಸಿಕೆಗಳು – ವತ್ಸಲಾ ರಾಮಮೂರ್ತಿ

ಸಾಕ್ಷಾತ್ಕಾರ (ಭಾಗ-೨) – ಶಿವಶಂಕರ ಮೇಟಿ

ಈ ವಾರ ಡಬಲ್ ಧಮಾಕಾ. ವತ್ಸಲಾ ಅವರು ತಾವು ಓದಿದ ಪುಸ್ತಕದ ಪರಿಚಯ ಹಾಗೂ ತಮ್ಮ ಅನಿಸಿಕೆಗಳನ್ನು ತಮ್ಮ ಮುಂದಿಟ್ಟಿದ್ದಾರೆ. ಕಳೆದ ವಾರ ಜಿ.ಎಸ್. ಜಯದೇವ ಅವರು ಸೋಲಿಗರ ಜೊತೆ ಕಳೆದ ದಿನಗಳು, ದೀನಬಂಧು ಸಂಸ್ಥೆ ಹುಟ್ಟಿ ಬೆಳೆದ ಕಥೆಯನ್ನು ಹೃದಯಂಗಮವಾಗಿ ಆಹ್ವಾನಿತರೊಂದಿಗೆ ಹಂಚಿಕೊಂಡರು. ಅವರು ದೀನಬಂಧು ಸಂಸ್ಥೆಯನ್ನು ಕಟ್ಟುವ ಮೊದಲು ಸೋಲಿಗರ ಜೀವನವನ್ನು ಅಧ್ಯಯಿಸಿ, ಅವರ ಒಳಿತಿಗಾಗಿ ಡಾ.ಸುದರ್ಶನ್ ಅವರೊಡನೆ ಪಟ್ಟ ಶ್ರಮದ ಅನುಭವವೇ ವತ್ಸಲಾ ಅವರು ಪರಿಚಯಿಸುತ್ತಿರುವ ಪುಸ್ತಕದ ವಸ್ತು. 

ಅನಿವಾಸಿಯ ಓದುಗರೆಲ್ಲ ಕಾತುರದಿಂದ ಕಾಯುತ್ತಿರುವ ಮೇಟಿಯವರ "ಸಾಕ್ಷತ್ಕಾರ" ಕಥೆಯ ಕೊನೆಯ ಕಂತು ನಿಮ್ಮೆದುರು ಅನಾವರಣವಾಗುತ್ತಿದೆ. ರಾಯರು ಎಲ್ಲಿ ಹೋದರು, ಸಿಕ್ಕಿದರೇ, ರಾಯರ ಮಗನ ಪ್ರತಿಕ್ರಿಯೆಯೇನು? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕೀತೆ? 

ಪುಸ್ತಕ: ಸೋಲಿಗರ ಚಿತ್ರಗಳು. 
ಲೇಖಕರು:  ಜಿ. ಎಸ್‌. ಜಯದೇವ.

ಲೇಖಕರ ಪರಿಚಯ ನಾನು ಮಾಡಿಕೊಡಬೇಕಾಗಿಲ್ಲ. ಈಗಾಗಲೆ ಅವರೇ ಬರೆದ ಲೇಖನದಿಂದ ಅನಿವಾಸಿ ಬಳಗಕ್ಕೆ ಪರಿಚಯವಾಗಿದ್ದಾರೆ.  “ಸೋಲಿಗರ ಚಿತ್ರಗಳು” ಪುಸ್ತಕವನ್ನು ದಯವಿಟ್ಟು ಓದಿ. ನಾನು ಓದಿರುವ ಪುಸ್ತಕಗಳಲ್ಲಿ ಒಂದು ಅತ್ಯುತ್ತಮ ಪುಸ್ತಕವೆಂದೇ ಹೇಳುವೆ. ಇತ್ತೀಚೆಗೆ ನಾನು ಈ ಪುಸ್ತಕವನ್ನು  ಆಸಕ್ತಿಯಿಂದ ಓದಿದೆ.  ಸೋಲಿಗರ ಜೀವನವೃತ್ತಾಂತ ಮತ್ತು ಅವರ ಪರಿಸರದೊಂದಿಗೆ ನಿಕಟ ಬಾಂಧವ್ಯ, ಬದುಕನ್ನು ಎದುರುಸುವ ಚಾಣಾಕ್ಷತೆ, ಮನೊಭಾವಗಳು ಅವರನ್ನು ಕಾಡುವ ನಾನಾ ತರಹದ ಜೀವನದ ಘಟನೆಗಳು, ಎಲ್ಲವನ್ನು ನಿಭಾಯಿಸುವ ಅವರ ಜನಾಂಗದ ನಿರಂತರ ಹೋರಾಟ, ಎಲ್ಲವನ್ನು ವ್ಯಕ್ತಿಚಿತ್ರದೊಡನೆ ವಿವರಿಸಿದ್ದಾರೆ.

ಇದರೊಳಗೆ ೧೯ ವ್ಯಕ್ತಿಚಿತ್ರಗಳು ಇವೆ.  ಪ್ರತಿಯೊಂದು ಪ್ರಕರಣದಲ್ಲೂ ಒಬ್ಬ ವ್ಯಕ್ತಿಯ ಜೀವನಚಿತ್ರ. ವಿಶಿಷ್ಟವಾದ ವ್ಯಕ್ತಿಚಿತ್ರವನ್ನು ಕಣ್ಣಮುಂದೆ ಕಟ್ಟಿದಂತೆ ವಿವರಿಸಿದ್ದಾರೆ. ಅದರೊಳಗೆ ನನಗೆ champion in their  own way ಅನ್ನಿಸಿದವರು – ಬೆರೆಸಿ 

೧. ಮಸಣಮ್ಮ ಬಿಚ್ಚಿಟ್ಟ ಮಹಾರಾಜರ ನೆನೆಪುಗಳು.
ಮೈಸೂರು ಮಹಾರಾಜರು ಬೇಟೆಗೆ ಬರುತ್ತಿದ್ದ ಕತೆ. ಮಸಣಮ್ಮನ ಗಂಡ ಮಹಾರಾಜರಿಗೆ ಅಡುಗೆ ಮಾಡಿ ಬಡಿಸುತ್ತಿದ್ದ. ಮಹಾರಾಜರು “ಕಾಡಿಗೆ ಬೇಟೆಗೆ ಪ್ರಾಣಿ ಹಿಂಸೆ ಮಾಡಲು ಬರುತ್ತಿರಲ್ಲಿಲ್ಲ ಸಾರ್‌.  ಅವರು ಕಾಡೆಮ್ಮೆ, ಜಿಂಕೆ , ಆನೆಗಳನ್ನು ನೋಡಲು ಬರುತ್ತಿದ್ದರು. ಪ್ರಕೃತಿ ಸೌಂದರ್ಯ ಆನಂದಿಸಲು ಬರುತ್ತಿದ್ದರು. ಅವರು ಪ್ರಾಣೆಹಿಂಸೆ ಮಾಡಲ್ಲಿಲ್ಲ ಸಾರ್‌”.  ಮಹಾರಾಜರಿಗೆ ಪರಿಸರದ ಬಗ್ಗೆಯಿದ್ದ ಕಳಕಳಿಯನ್ನು ಹೊಗಳಿದ್ದಾಳೆ ಸುಮಾರು ೮೫ರ ಮುದಿಕಿ.  ಅವಳ ಮನಸ್ಸು೧೯೫೦ರಲ್ಲೆ ನಿಂತಿದೆ. ಅವಳಿಗೆ ಮಹಾರಾಜರನ್ನು ಕಂಡರೆ ಇರುವ ಅಪಾರ ಗೌರವ, ವಾತ್ಯಲ್ಯವನ್ನು ಬಹಳ ಲಘು ಹಾಸ್ಯ ಬೆರೆಸಿ ಓದುಗರ ಮನಮುಟ್ಟುವಂತೆ ವರ್ಣಿಸಿದ್ದಾರೆ.  ಮಹಾರಾಜರಿಗಾಗಿ ಸೋಲಿಗರ ರಂಗಣ್ಣ ಮಾಡಿದ ತಿಳಿಸಾರಿನ ಕತೆ ಓದಲೇಬೇಕು.  ಪ್ರೊ. ಜಯದೇವ ಅವರ ಭಾಷೆ ತುಂಬ ಸುಲಲಿತವಾಗಿ, ಸರಳವಾಗಿ, ಅನುಕಂಪದಿಂದ ಕೂಡಿದೆ.

೨. ಸಾರಿ ಮಾದಮ್ಮ
ಅವಳು ಒಬ್ಬ ಅಮಾಯಕ “ಕಾಡು ಸೋಲಿಗ ಹೆಂಗಸು”.  ಅವಳಿಗೆ ಈಗಿನ ವೈದ್ಯರು ಮತ್ತು ಆಧುನಿಕ ಪದ್ಧತಿಯಲ್ಲಿ ನಂಬಿಕೆಯಿಲ್ಲ. ಅವಳು ಎಂತಹ ಅಮಾಯಕಳು ಅಂದ್ರೆ ತನ್ನ ಮನಸ್ಸಿಗೆ ಬಂದದ್ದನ್ನು ಪಟಪಟನೆ ಮುಲಾಜಿಲ್ಲದೆ ಹೇಳಿಬಿಡುತ್ತಿದ್ದಳು.  ಯಾರಿಗೂ ಸೊಪ್ಪು ಹಾಕುವವಳಲ್ಲ.  ಅವಳು ಅಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದು, ಗಂಟೆ ನೋಡಲು ಬರದಿದ್ದರೂ ಕೈಗಡಿಯಾರ ಕೊಂಡಿದ್ದು, ಸಂಬಳವೆಂದರೆ ಏನು ಅಂತ ಗೊತ್ತಿರದವಳು, ಅದೂ ಈ ಕಾಲದಲ್ಲಿ! ಅವಳು ಬಸ್ಸಿನಲ್ಲಿ ಮಾಡಿದ ಮೈಸೂರು ಝೂ ಯಾತ್ರೆ, ಅವಳ ಹಾಸ್ಯಮಯ ಮಾತು, ಜೋರಾದ ವ್ಯಕ್ತಿತ್ವ ಮತ್ತು ಆತ್ಮಸ್ಥೈರ್ಯವನ್ನು ಮನೋಹರವಾಗಿ ವಿವರಿಸಿದ್ದಾರೆ.

೩. ಪುಟ್ಟರಂಗನ ಸಸ್ಯರಂಗ.
ಮೊದಲನೆಯ ಪುಟದಲ್ಲಿ ನಮ್ಮ ಪುಟ್ಟರಂಗನ ಪರಿಚಯ ಹೀಗಿದೆ - “ಕಾಡಿನಲ್ಲಿ ಯಾವ ಮರವನ್ನಾದರೂ ತೋರಿಸಿ, ಅವನು ಆ ಮರದ ಜಾತಕವನ್ನು ಹೇಳಿಬಿಡುತ್ತಾನೆ”.  ಸೋಲಿಗರು ಹೇಳುವ ಹೆಸರು, ನಗರದ ಜನರಿಗೆ ಗೊತ್ತಿರುವ ಹೆಸರು, ಅವುಗಳ ವೈಜ್ಞಾನಿಕ ಹೆಸರು, ಯಾವ ಕುಟುಂಬಕ್ಕೆ ಸೇರಿದೆ ಮತ್ತು ಅದನ್ನೇ ಹೋಲುವ ಮರಗಳು ಎಲ್ಲ ವಿವರವನ್ನೂ ಸಾಂಗೋಪಾಂಗವಾಗಿ ಒಪ್ಪಿಸಿ ಬಿಡುತ್ತಾನೆ.  ಹಾಗೆ ನೋಡಿದರೆ ಅವನಿಗೆ ಯಾವ ಸಸ್ಯಶಾಸ್ತ್ರದ ಪದವಿಯೂ ಇಲ್ಲ. ಸಂಶೋಧಕರು ಮರ, ಗಿಡಗಳನ್ನು ಗುರುತಿಸಲು ಇವನ ಸಹಾಯ ಕೇಳುತ್ತಾರೆ. ಅವನಿಗೆ ಅಗಾಧವಾದ ನೆನಪಿನ ಶಕ್ತಿಯಿದೆ. ಸಸ್ಯಶಾಸ್ತ್ರದ ಪ್ರವೀಣ.  ಅವನಿಗೆ ಪರಿಸರದ ಬಗ್ಗೆ ತುಂಬಾ ಕಳಕಳಿ.  ಇತ್ತೀಚಿಗೆ ಕಾಡು ಕಡಿತದಿಂದ ಕಾಡುಪ್ರಾಣಿಗಳ ಮತ್ತು ಕಾಡಿನ ಸಸ್ಯಗಳ ಮೇಲೆ ಆಗುತ್ತಿರುವ ವ್ಯತಿರಿಕ್ತ ಪ್ರಭಾವದ ಬಗ್ಗೆ ಬೇಸರ ಪಟ್ಟುಕೊಂಡಿದ್ದಾನೆ. ಪುಟ್ಟರಂಗನ ಕಳವಳದ ಮೂಲಕ ಲೇಖಕರು ನಾಗರೀಕರು ಪ್ರಕೃತಿಯನ್ನು ಆರಾಧಿಸುವ ಬದಲು ನಮ್ಮ ಮನಸ್ಸಿಗೆ ಬಂದಹಾಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ ಅನ್ನುವ ಭಾವನೆ ಹೇಳುತ್ತಿದ್ದಾರೆ. (ನನ್ನ ಅನಿಸಿಕೆ)

ಹೀಗೆ ನಾನಾ ಪಾತ್ರಗಳ ಮೂಲಕ ಬುಡಕಟ್ಟಿನ ಜನಾಂಗದ ಮತ್ತು ಪರಿಸರದ ಮೇಲೆ ಆಗುತ್ತಿರುವ ಪರಿಣಾಮ; ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಪರಿಸರಗಳ ನಾಶದ ಬಗೆಗಿನ ನಾಗರೀಕರ ಉದಾಸೀನತೆಗಳನ್ನು ಬಿತ್ತರಿಸಿದ್ದಾರೆ.

ಕಡೆಯದಾಗಿ,  ಸಾಮಾನ್ಯವಾಗಿ  ಸೋಲಿಗರು  ಸ್ವಾತಂತ್ರ್ಯಪ್ರಿಯರು; ಮತ್ತೊಬ್ಬರನ್ನು ಸರಿ-ತಪ್ಪು ತಕ್ಕಡಿಯಲ್ಲಿ ತೂಗುವುದಿಲ್ಲ. ಅವರ ಜೀವನದ ನದಿ ಕೊನೆಯಿಲ್ಲದ ಈ ಕಾಲಪ್ರವಾಹದಲ್ಲಿ ಹರಿಯುತ್ತಿದೆ. ಹರಿಯುವ ನದಿಗೆ ದೋಷವಿಲ್ಲವಂತೆ.

- ವತ್ಸಲಾ ರಾಮಮೂರ್ತಿ 

ಸಾಕ್ಷಾತ್ಕಾರ (ಭಾಗ-೨)

ಛತ್ರಿಯು ಮಾಯವಾಗಿತ್ತು, ಮೂಲೆಯಲ್ಲಿ ಇದ್ದ ಚಪ್ಪಲಿಗಳು ಮಾತ್ರ ಹಾಗೆಯೇ ಬಿದ್ದಿದ್ದವು. ಬರಿಗಾಲಿನಲ್ಲೆಯೇ ಮನೆಯನ್ನು ಬಿಟ್ಟಿದ್ದರು ರಾಯರು. ಫೋನು ಮಾಡಿದರೆ ರಾಯರಿಂದ ಉತ್ತರವೇ ಇಲ್ಲ .

ಎಂದಾದರು ಬೇರೆ ಊರಿಗೆ ಹೋಗಬೇಕಾದರೆ ತನಗೊಂದು ಮಾತು ತಿಳಿಸಿಯೇ ಹೋಗುತ್ತಿದ್ದವರು, ಇಂದೇಕೆ ಹೀಗೆ ಮಾಡಿರಬಹುದು? ಎಂದು ಚಿಂತಿಸತೊಡಗಿದ. ಗುಬ್ಬಿಯ ಗೂಡನ್ನೊಮ್ಮೆ ನೋಡಬೇಕೆನಿಸಿ ತೋಟದೊಳಗೆ ಹೋದ. ಮುದಿ ಗುಬ್ಬಿ ತನ್ನನ್ನೇ ದಿಟ್ಟಿಸಿ ನೋಡುತ್ತಿರುವಂತೆ, ರಾಯರು ಕುಳಿತಿರುತ್ತಿದ್ದ ಕುರ್ಚಿ ಅವರ ಬರುವಿಕೆಗಾಗಿ ಕಾಯುತ್ತಿರುವಂತೆ ಅನಿಸಿತು. ‘ಗುಬ್ಬಿಯು ಹಾರಿಹೋಗುವದಕಿಂತ ಮೊದಲು, ರಾಯರೇ ಹಾರಿಹೋದರಲ್ಲ’ ಎಂದು ಬೇಜಾರಾಯಿತು. ಮನೆಯ ಒಳಗೆ ಬಂದು ಇನ್ನೊಮ್ಮೆ ರಾಯರಿಗೆ  ಫೋನು ಮಾಡಿದ. ಸೂಕ್ಷ್ಮವಾಗಿ ಆಲಿಸಿದಾಗ ಮೊಬೈಲ್ ಫೋನಿನ ಸಪ್ಪಳ ಅವರ ಕೋಣೆಯೊಳಗಿಂದಲೇ ಬರತೊಡಗಿತ್ತು. ‘ಅಯ್ಯೋ ಪಾಪ! ಫೋನನ್ನು ಕೂಡ ಇಲ್ಲೇ ಮರೆತು ಹೋಗಿದ್ದಾರಲ್ಲ, ಮೊದಲು ಸಲ ಫೋನು ಮಾಡಿದಾಗ ನನಗೇಕೆ ಕೇಳಲಿಲ್ಲ?‘ ಎಂದು ಅವರ ಕೋಣೆಯ ಬಾಗಿಲನ್ನು ತೆರೆದ. ರಾಯರು ಓದಲು ಬರೆಯಲು ಉಪಯೋಗಿಸುತ್ತಿದ್ದ ಸಣ್ಣ ಟೇಬಲ್ಲಿನ ಮೇಲೆ ಅವರ ಮೊಬೈಲ್ ಫೋನು ಗುಯ್ಯ್ ಗುಡುತಿತ್ತು. ಪಕ್ಕದಲ್ಲಿಯೇ ಒಂದಿಷ್ಟು ನೋಟಿನ  ಕಂತೆಗಳು ಮತ್ತು ಅವುಗಳ ಕೆಳಗೊಂದು ಸಣ್ಣ ಚೀಟಿ ಕಾಣಿಸಿಕೊಂಡಿತು. ಆತುರದಿಂದ ಚೀಟಿಯನ್ನು ಕೈಗೆತ್ತಿಕೊಂಡ ಸೋಮಣ್ಣ.

‘ ನನ್ನನ್ನು ಹುಡುಕುವ ಪ್ರಯತ್ನ ಬೇಡ. ಮನದ ಇಚ್ಛೆಯಂತೆ ವಾರಣಾಸಿಯ ಮುಕ್ತಿ ಭವನಕ್ಕೆ ಹೊರಟಿದ್ದೇನೆ. ಮರಳಿ ಬರುತ್ತೀನೋ ಇಲ್ಲೋ ಗೊತ್ತಿಲ್ಲ. ನಿನಗೆ ಅವಶ್ಯಕತೆ  ಬೀಳುವಷ್ಟು ಹಣವನ್ನು ಇಟ್ಟಿರುವೆ, ಮುಗಿದಾಗ ರಾಘುನ್ನ ಕೇಳು. ಅವನಂತೂ ಈ ದೇಶಕ್ಕೆ ವಾಪಸ್ಸು ಬರುದಿಲ್ಲ, ಇದ್ದ ಆಸ್ತಿಯನ್ನು ನೀನಿರುವವರೆಗೆ ನೋಡಿಕೊಂಡು ಹೋಗು’ ಎಂದು ಮೂರ್ನಾಲ್ಕು ಸಾಲುಗಳನ್ನು ಚೀಟಿಯಲ್ಲಿ ಗೀಚಿದ್ದರು ರಾಯರು. 

ಚೀಟಿಯನ್ನು ಓದಿ ಸೋಮಣ್ಣನಿಗೆ ಆತಂಕ ಮತ್ತು ದುಃಖವಾಯಿತು.  ಆಗಲೇ ರಾತ್ರಿ ಅವರಿಸತೊಡಗಿತ್ತು. ತನಗೊಬ್ಬನಿಗೇ ಏನು ಮಾಡಲೂ ಧೈರ್ಯವಿಲ್ಲ. ಇನ್ನೊಬ್ಬರ ಜೊತೆ ಬೇಕೆನಿಸಿತು. ಹತ್ತಿರದಲ್ಲಿ ಇದ್ದ ರಾಯರ ರಕ್ತ ಸಂಬಂಧಿಗಳೆಂದರೆ ಅಣ್ಣನ ಮಗ ವೆಂಕಟೇಶ ಮತ್ತು ತಂಗಿ ಸಾವಿತ್ರಮ್ಮ. ಅವರಿಬ್ಬರ ಒಡನಾಟ ರಾಯರ ಜೊತೆಗೆ ಅಷ್ಟಕ್ಕಷ್ಟೆ ಎಂದು ಸೋಮಣ್ಣನಿಗೆ ಅರಿವಿತ್ತು. ಮುಂದೇನಾದರೂ ಮಾಡಲು ತನಗೆ  ಜೊತೆಯಾಗಬಹುದೆಂದು ಅವರಿಬ್ಬರಿಗೂ ಕರೆ ಮಾಡಿದಾಗ, ನಿರೀಕ್ಷೆಯಂತೆ ಕುಂಟು ನೆಪ ಮತ್ತು ಕುಹಕದ ಮಾತುಗಳು ಕೇಳಿಬಂದಿದ್ದವು. ‘ಬರಿ ಸಹಾಯಕ್ಕೆ ಮಾತ್ರ ಸಂಬಂಧಗಳೇ?’ ಎಂದು ಸೋಮಣ್ಣನಿಗೆ ಬೇಜಾರಾಯಿತು. ಅನಿವಾರ್ಯ ಇಲ್ಲದೆ ರಾಘುನಿಗೆ ಕರೆ ಮಾಡಬೇಕೆಂದುಕೊಂಡ. ಎರಡು ಮೂರು ಕರೆಗಳಿಗೂ ಅವನಿಂದ ಉತ್ತರ ಬರದೇ ಇದ್ದಾಗ ಇನ್ನೂ ಬೇಜಾರವಾಯಿತು. ಯಾವಾಗಲೂ  ಜೀವನವನ್ನು ಪ್ರೀತಿಸುತ್ತಿದ್ದ ರಾಯರು ಈ ನಿರ್ಧಾರಕ್ಕೆ ಏಕೆ ಬಂದಿರಬಹುದು? ಜಿಗುಪ್ಸೆಯೇ? ಮಗನ  ಮೇಲಿನ ಸಿಟ್ಟೇ? ಮಾನಸಿಕ ಕಾಯಿಲೆಯ ಪ್ರಭಾವವೇ? ಉತ್ತರ ಸಿಗಲಿಲ್ಲ. ಕಟ್ಟು ನಿಟ್ಟಿನ ಕಟ್ಟಳೆಗಳಲ್ಲಿ ಬರೆದಿದ್ದ ರಾಯರ ಜೀವನದ ಕಾದಂಬರಿಯ ಪುಟಗಳೆಲ್ಲ ಖಾಲಿ ಖಾಲಿ ಎಂದೆನಿಸಿತು. 

ಅಷ್ಟರಲ್ಲಿಯೇ ಅವನ ಫೋನು ಗುಯ್ಯ ಗುಡತೊಡಗಿತು. “ಸೋಮಣ್ಣ, ಆಸ್ಪತ್ರೆಲಿದ್ದೆ ಅದಕ ನಿನ್ನ ಫೋನ್ ಎತ್ತಾಕ್ ಆಗಲಿಲ್ಲ. ಎಲ್ಲಾ ಆರಾಮ್ ಐತಿ ಅಲ್ಲ? ” ಅಂದ ರಾಘಪ್ಪ. ಸೋಮಣ್ಣನಿಗೆ ಇದನ್ನೆಲ್ಲ ಹೇಗೆ ಹೇಳಬೇಕೆಂದು ತಕ್ಷಣವೇ ಹೊಳೆಯಲಿಲ್ಲವಾದರೂ, ” ರಾಘಪ್ಪ , ರಾಯರು ಹೇಳದ ಕೇಳದ ನಾಪತ್ತೆ ಆಗಿ ಬಿಟ್ಟಾರ. ಏನೇನೋ ಚೀಟಿ ಬರೆದಿಟ್ಟ ಹೋಗ್ಯಾರ. ಎಲ್ಲಾ ಓದಿದರ ಅವರು ವಾರಣಾಸಿಗೆ ಹೋಗಿರಬೇಕೆಂದ ಅನಸತೈತಿ, ಅದರಲ್ಲೂ ಅದೇನೋ ಮುಕ್ತಿ ಭವನ ಅಂತ “ ಎಂದು ಒಂದೇ ಉಸುರಿನಲ್ಲಿ ಒದರಿ ಬಿಟ್ಟ. ಸುದ್ದಿಯನ್ನು ಕೇಳಿ ರಾಘುನಿಗೆ ಆಕಾಶವೇ ಕಳಚಿದಂತಾಯಿತು. ಸಾವಿರಾರು ಮೈಲು ದೂರದಲ್ಲಿರುವ ತಾನು ಈಗ ಏನು ಮಾಡಬಹುದೆಂದು ಯೋಚಿಸತೊಡಗಿದ. ಏನೋ ಉಪಾಯ ಹೊಳೆದಂತಾಯಿತು. ” ಸೋಮಣ್ಣ, ಬೆಂಗಳೂರಿನಲ್ಲಿ ನನ್ನೊಬ್ಬ ಖಾಸಾ ಗೆಳೆಯ ಡಾ. ರವಿ ಅದಾನ. ನೀನು ಬೆಂಗಳೂರಿಗೆ ಬಂದು ಬಿಡು, ಅವನು ನಿನ್ನನ್ನ ವಾರಣಾಸಿ ರೈಲಿಗೆ ಹತ್ತಸತಾನ. ನಾನೂ ನಾಳೇನೇ ಇಲ್ಲಿಂದ ಬಿಡತೀನಿ, ನಿನ್ನನ್ನ ವಾರಣಾಸಿ ರೈಲ್ ನಿಲ್ದಾಣದಾಗ ಭೇಟಿ ಆಗ್ತೀನಿ” ಎಂದು ಫೋನು ಇಟ್ಟು ಮುಂದಿನ  ತಯಾರಿ ನಡೆಸಿದ. 

ಸೋಮಣ್ಣನನ್ನು ಹೊತ್ತ ರೈಲು ವಾರಣಾಸಿಯನ್ನು ತಲುಪಿದಾಗ ಬೆಳಗಿನ ಎಂಟು ಗಂಟೆಯಾಗಿತ್ತು. ಬೋಗಿಯ ಎದುರೇ ನಿಂತಿದ್ದ ರಾಘುನನ್ನು ಕಂಡು ಸೋಮಣ್ಣನ ಮನಸಿಗೆ ಹಗುರು ಎನಿಸಿತು. ರೈಲು ನಿಲ್ದಾಣದಲ್ಲಿ ಏರಿದ ಟ್ಯಾಕ್ಸಿಯು, ಸುಮಾರು ಹದಿನೈದು ನಿಮಿಷಗಳಲ್ಲಿ ಅವರಿಬ್ಬರನ್ನು ಎರಡು ಅಂತಸ್ತಿನ ಹಳೆಯ ಮನೆಯ ಮುಂದೆ ಬಂದು ತಲುಪಿಸಿತ್ತು. ಟ್ಯಾಕ್ಸಿಯವನಿಗೆ ದುಡ್ಡು ಕೊಟ್ಟು ರಾಘು ಹೇಳಿದ ” ಸೋಮಣ್ಣ! ಇದೇ ಮುಕ್ತಿ ಭವನ ” ಎಂದು. ಒಳಗಡೆ ಹೋದಾಗ ಟೇಬಲ್ಲಿನ ಮುಂದೆ ಕುಳಿತಿದ್ದ ಇಳಿ ವಯಸ್ಸಿನ ಮನುಷ್ಯ ಹಿಂದಿ ಭಾಷೆಯಲ್ಲಿ ಮಾತನಾಡತೊಡಗಿದ 

” ನನ್ನ ಹೆಸರು ಶುಕ್ಲಾ, ಈ ಭವನದ ಮ್ಯಾನೇಜರು. ತಮಗೇನು ಆಗ ಬೇಕಾಗಿದೆ ?”

ರಾಯರ ಫೋಟೋ ತೋರಿಸಿ ರಾಘು ಹೇಳಿದ, ” ಇವರು ನಮ್ಮ ತಂದೆ. ಹೆಸರು ರಘೋತ್ತಮ ರಾವ್ ಅಂತ , ವಯಸು ಎಪ್ಪತ್ತು. ಈ ಭವನವನ್ನು ಸೇರಬೇಕೆಂಬ ಇಚ್ಛೆಯಿಂದ ಬೆಂಗಳೂರಿನಿಂದ ಬಂದಿದ್ದಾರೆ. ಅವರನ್ನು ಭೇಟಿಯಾಗಬೇಕಿತ್ತು ” ಎಂದು ಮಾತು ಮುಗಿಸಿದ. 

” ನಮ್ಮಲ್ಲಿ ಇರುವುದು ಕೇವಲ ಹನ್ನೆರಡು ಕೋಣೆಗಳು ಆದರೆ ಈ ಹೆಸರಿನವರು ಯಾರೂ ಅವುಗಳಲ್ಲಿ ಇಲ್ಲ. ಆದರೆ ನಿನ್ನೆ ಬೆಳಿಗ್ಗೆ ಇದೇ  ತರಹದ  ವ್ಯಕ್ತಿಯೊಬ್ಬರು ಬಂದಿದ್ದರು, ನಮ್ಮ ಭವನದ ನಿಯಮಗಳಿಗೆ ಅರ್ಹರಿರಲಿಲ್ಲವಾದ್ದರಿಂದ ಅವರಿಗೆ ಕೋಣೆಯನ್ನು ಕೊಡಲಾಗಲಿಲ್ಲ. ಪಕ್ಕದಲ್ಲಿ ಇರುವ ಮುಮುಕ್ಷು ಭವನಕ್ಕೆ ಹೋಗಿ ಎಂದು ಹೇಳಿದೆ ” ಎಂತಂದ. 

ಭವನದ ನಿಯಮಗಳು ಏನಿರಬಹುದೆಂದು ರಾಘು ಯೋಚಿಸುತ್ತಿರುವಾಗಲೇ ಶುಕ್ಲಾ ಮಾತು ಮುಂದುವರೆಸಿದ್ದ. ” ಭವನದಲ್ಲಿ ಇರಲು ಕೇವಲ ಎರಡೇ ವಾರ ಅವಕಾಶ. ಅಷ್ಟರಲ್ಲಿಯೇ ಅವರು ಜೀವ ತೊರೆದು ಮುಕ್ತಿ ಹೊಂದಬೇಕು, ಇಲ್ಲವಾದರೆ ಮರಳಿ ಮನೆಗೆ ಹೋಗಬೇಕು. ಪ್ರತಿ ದಿನದ ಬಾಡಿಗೆ ಇಪ್ಪತ್ತು ರೂಪಾಯಿ ಮಾತ್ರ  —–” ಎಂದು ಇನ್ನೂ ಮಾತನ್ನು  ಮುಂದುವರೆಸಿದ್ದ. ಕೌತುಕದಿಂದ ಅವನ ಮಾತುಗಳನ್ನೇ ಆಲಿಸುತ್ತಿದ್ದ ಸೋಮಣ್ಣನಿಗೆ ಭವನದ ಒಳಗಡೆ ನೋಡಬೇಕು ಎಂಬ ಕುತೂಹಲ ಉಂಟಾಗಿ ಅವನನ್ನು ಕೇಳಿದ, ” ನಾವು ಭವನದ ಒಳಗಡೆ ಒಮ್ಮೆ ಸುತ್ತಾಡಬಹುದೆ ?” ” ಏನೂ ತೊಂದರೆಯಿಲ್ಲ ” ಎಂದು ಶುಕ್ಲಾ ಅವರನ್ನು ಒಳಗಡೆ ಕರೆದುಕೊಂಡು ಹೋದ. ಭವನದ ಮಧ್ಯದಲ್ಲಿ ಒಂದು ಸಣ್ಣ ದೇವಸ್ಥಾನವಿತ್ತು. ಬೆಳಗುತ್ತಿದ್ದ ಆರತಿಯ ಜೊತೆಗೆ ಜೋರಾಗಿ ಘಂಟೆ ಬಾರಿಸುತಲಿತ್ತು. ಅಷ್ಟೇ ಜೋರಾಗಿ ಅರ್ಚಕನು ಮಂತ್ರವನ್ನು ಪಠಿಸುತ್ತಿದ್ದನು. ತೆರೆದಿದ್ದ ಬಾಗಿಲಿನ ಕೋಣೆಗಳಿಂದ, ಕೊನೆಯ ಉಸುರಿನಲ್ಲಿ ಮುಕ್ತಿಯನ್ನು ಕಾಣುವ  ಸಲುವಾಗಿ ಕಾಯುತಲಿದ್ದ ಜೀವಿಗಳು, ಸಣಕಲು ಕಣ್ಣುಗಳಿಂದ ಪೂಜೆಯನ್ನು ವೀಕ್ಷಿಸುತಲಿದ್ದವು. ಇನ್ನೊಬ್ಬ ಅರ್ಚಕನು ಆ ಜೀವಿಗಳ ಬಾಯಲ್ಲಿ ಗಂಗಾ ಜಲವನ್ನು ಸುರಿದು ಬಿಲಪತ್ರಿಯನ್ನು ತಿನ್ನುಸಿತಲಿದ್ದನು. ಕೆಳಗಿನ  ಕೋಣೆಯಲ್ಲಿ ಇಹಲೋಕ ತೊರೆದಿದ್ದ ದೇಹವೊಂದಕ್ಕೆ ಅಂತಿಮ ಸಂಸ್ಕಾರದ ಸಿದ್ಧತೆಗಳು ನಡೆದಿದ್ದವು. ಮೃತ ದೇಹದ ಜೊತೆಗಿದ್ದ ಸಂಬಂಧಿಯೊಬ್ಬ, ಹೊರಬರಲು ಹಾತೊರೆಯುತ್ತಿದ್ದ ಕಣ್ಣೀರನ್ನು ತಡೆದು, ಕೊನೆಗೂ ದೇಹಕ್ಕೆ ಮುಕ್ತಿ ಸಿಕ್ಕಿತಲ್ಲ ಎಂಬ ನೆಮ್ಮದಿಯ ಉಸಿರನ್ನು ಹಾಕಲು ಪ್ರಯತ್ನಿಸುತ್ತಿದ್ದನು. ಶುಕ್ಲಾ ಇನ್ನೂ ಏನನ್ನೋ ಹೇಳುತ್ತಲೇ ಇದ್ದನು ಆದರೆ, ಬಾಯಿ ತೆರೆದು ವಿಚಿತ್ರ ದೃಷ್ಟಿಯಿಂದ ಇದನ್ನೆಲ್ಲಾ ನೋಡುತ್ತಿದ್ದ ಸೋಮಣ್ಣ ಮತ್ತು ರಾಘುವಿಗೆ ಅವನ ಮಾತಿನ ಕಡೆಗೆ ಲಕ್ಷ್ಯ ಇರಲಿಲ್ಲ. ಕೊನೆಗೂ ಮೌನ ಮುರಿದು ಸೋಮಣ್ಣ ಕೇಳಿದ, ” ರಾಘಪ್ಪ ಇವರಿಗೆಲ್ಲ ಮುಕ್ತಿ ಸಿಗತೈತಾ ?” ” ನನಗೇನು ಗೊತ್ತು? ಅವರವರ ನಂಬಿಕೆ, ಅದರ ವಿರುದ್ಧವಾಗಿ ಮಾತಾಡೋಕೆ ನಾವ್ಯಾರು?” ಎಂದ ರಾಘು. ಶುಕ್ಲಾನಿಗೆ ಧನ್ಯವಾದವನ್ನು ಹೇಳಿ ಇಬ್ಬರೂ ಮುಮುಕ್ಷು ಭವನದತ್ತ ನಡೆದರು. 

ಇಕ್ಕಟ್ಟಾದ ಬೀದಿಗಳೆಲ್ಲ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು. ಅಲ್ಲಲ್ಲಿ ಹೂವಿನ ಅಂಗಡಿಗಳು, ಶಿವನಾಮ ಜಪಿಸುತ್ತ ಸಾಗುತ್ತಿದ್ದ ಸಾಧುಗಳು, ಶಿವ ಸ್ತೋತ್ರ ಹಾಡುತ್ತಿದ್ದ ಧ್ವನಿವರ್ಧಕಗಳು ಮತ್ತು ಇದನ್ನೆಲ್ಲಾ ತುಂಬು ಕಣ್ಣುಗಳಿಂದ ಸವಿಯುತ್ತಿದ್ದ ಸಾವಿರಾರು ಯಾತ್ರಿಕರು. ಮುಕ್ತಿ ಭವನದಿಂದ  ಹೊರ ಬಂದ ಸೋಮಣ್ಣನಿಗೆ ಇದೊಂದು ಬೇರೆ ಲೋಕವೆ ಅನಿಸಿತು. ಈ ಜನ ಜಂಗುಳಿಯಲ್ಲಿ ರಾಯರೂ ಕೂಡ ಒಬ್ಬರಿರಬಹುದೆ ? ಎಂದು ಇಬ್ಬರ ಕಣ್ಣುಗಳು ಹದ್ದಿನಂತೆ ವೀಕ್ಷಿಸುತ್ತಿದ್ದವು. ಅರ್ಧ ಗಂಟೆಯ ನಡುಗೆಯ ನಂತರ ಮುಮುಕ್ಷು ಭವನಕ್ಕೆ ಬಂದು ಸೇರಿದ್ದರು. 

ಅದೊಂದು ವಿಶಾಲವಾದ ಕಟ್ಟಡ, ಬಾಗಿಲ ಬಳಿಯಲ್ಲಿಯೇ ಸ್ವಾಗತಕಾರನೊಬ್ಬ ಕುಳಿತ್ತಿದ್ದನು. ರಾಘು ರಾಯರ ಫೋಟೋ ತೋರಿಸಿ ವಿವರಗಳನ್ನು ಕೊಟ್ಟಾಗ ಅವನು ರಜಿಸ್ಟ್ರಿ ಪುಸ್ತಕವನ್ನು ಹುಡುಕಿ, ” ಹೌದು ನಿನ್ನೆ ಮಧ್ಯಾಹ್ನ ೨೦೦ ನಂಬರಿನ ಕೋಣೆಯನ್ನು ತೆಗೆದುಕೊಂಡಿದ್ದಾರೆ. ಆದರೆ ಬೆಳಿಗ್ಗೆ ಬೀಗವನ್ನು ಕೊಟ್ಟು ಎಲ್ಲೋ ಹೋಗಿದ್ದಾರೆ ಆಮೇಲೆ ಬರಬಹುದು” ಎಂದ. ಅವರಿಬ್ಬರಿಗೂ ಅತೀವ ಸಂತೋಷವಾಯಿತು ಆದರೆ ಹೋದವರು ಮರಳಿ ಬರದಿದ್ದರೆ ಏನು ಗತಿ ? ಎಂಬ ಭಯದಲ್ಲಿ, ತಮ್ಮ ಶೋಧನೆಯನ್ನು ಮುಂದುವರೆಸುವದೇ ಒಳ್ಳೆಯದೆನಿಸಿ, ಗಂಗೆಯ ತಟದೆಡೆ ಸಾಗಿದರು. 

ಗಂಗಾ ಮಾತೆಯು ಶಾಂತವಾಗಿ ಹರಿಯುತ್ತಿದ್ದಳು. ಆದರೆ ದಡದ ತುಂಬೆಲ್ಲ ಜನರೇ ಜನರು. ರಾಯರು ಇಲ್ಲೇ ಎಲ್ಲಾದರೂ ಸಿಗಬಹುದೆಂಬ ಆಸೆಯಿಂದ ಸಾಗುತ್ತಿದ್ದ ಅವರು ಕೆಲವೇ ನಿಮಿಷಗಳಲ್ಲಿ ಮಣಿಕರ್ಣಿಕಾ ಮಹಾ ಸ್ಮಶಾನವನ್ನು ತಲುಪಿದ್ದರು. ಅದೊಂದು ಸಾವಿನ ಸಂತೆ ಎನಿಸಿತು. ಸಾಲು ಸಾಲುಗಳಲ್ಲಿ ಮೃತದೇಹಗಳು ಉರಿಯುತ್ತಿದ್ದವು. ಚಿತೆಗಳಿಂದ ಉಕ್ಕುತ್ತಿದ್ದ ಅಗ್ನಿಯು ಆಕಾಶವನ್ನೇ ನುಂಗಲು ಹೊರಟಿದೆ ಎಂದು ಭಾಸವಾಗುತ್ತಿತ್ತು.  ತಲೆಬುರುಡೆಗಳನ್ನೇ ಹಾರವನ್ನಾಗಿ ಕೊರಳಲ್ಲಿ ಹಾಕಿಕೊಂಡು, ತುಂಡು ಬಟ್ಟೆಯ ಲಂಗೋಟಿಯನ್ನು ಸುತ್ತಿಕೊಂಡು, ಸುಟ್ಟು ಹೋದ ಹೆಣದ ಬೂದಿಯನ್ನು ಮೈ ತುಂಬಾ ಭಸ್ಮದಂತೆ ಬಡಿದುಕೊಂಡು, ಸಾವಿನಲ್ಲೂ ಸಂತೋಷದ ಕೇಕೆಯನ್ನು ಹಾಕುತಲಿದ್ದರು ಅಘೋರಿಗಳು. ಇಂಥ ಕಂಡರಿಯದ ದೃಶ್ಯವನ್ನು ನೋಡಲು ಜನರು ಗುಂಪು ಗುಂಪಾಗಿ ಸೇರಿದ್ದರು ತಾವೂ ಒಂದು ದಿನ ಈ ಅಘೋರಿಗಳ ಮೈಮೇಲಿನ ಭಸ್ಮವಾಗಬಹುದು ಎಂಬುವದನ್ನು ಮರೆತು. ಸೋಮಣ್ಣನಂತೂ ಮೂಕ ಶಿಲೆಯಾಗಿ ನಿಂತು ಬಿಟ್ಟಿದ್ದನು. ರಾಘು ವಾಸ್ತವಕ್ಕೆ ಬಂದು ಸೋಮಣ್ಣನನ್ನು ಎಚ್ಚರಿಸಿದ “ಸೋಮಣ್ಣ! ಗುಂಪಿನಲ್ಲಿ ಅಪ್ಪಾ ಏನಾದರು  ಕಂಡ್ರ ?” ಮಾತು ಬರದೆ ಸೋಮಣ್ಣ ಇಲ್ಲವೆಂದು ತಲೆಯಾಡಿಸಿದನು. ಇಷ್ಟು ವಿಶಾಲವಾದ ಜನ ಸಾಗರದಲ್ಲಿ ರಾಯರನ್ನು ಹೇಗೆ ಹುಡುಕುವದು ಎಂಬ ಪ್ರಶ್ನೆ ಇದ್ದರೂ, ಎದೆಗುಂದದೆ ಮತ್ತೆ ಮುಂದೆ ಸಾಗಿದರು. ಅನತಿ ದೂರದಲ್ಲಿ ಛತ್ರಿ ಹಿಡಿದು ಕುಳಿತಿದ್ದ ವ್ಯಕ್ತಿಯೊಬ್ಬ ಕಾಣಿಸಿದ. ಸೋಮಣ್ಣ  ಹಿಗ್ಗಿನ ಬುಗ್ಗೆಯಲ್ಲಿ ಚೀರತೊಡಗಿದ ” ಸಿಕ್ಕರು , ರಾಯರು ಸಿಕ್ಕರು ” ಎಂದು. 

ಶಾಂತವಾಗಿ ಗಂಗಾ ಮಾತೆಯ ಮಡಿಲನ್ನು ವೀಕ್ಷಿಸುತ್ತ ಕುಳಿತಿದ್ದರು ರಾಯರು. ಇವರನ್ನು ಕಂಡು ” ಅರೆ! ನೀವು ಯಾವಾಗ ಬಂದ್ರಿ? ನೀವೂ ಬರುವಂಗ ಇದ್ದಿದ್ದರ ಎಲ್ಲಾರೂ ಒಟ್ಟಿಗೇನೇ ಬರಬಹುದಾಗಿತ್ತಲ್ಲಾ” ಅಂತ ಅಂದರು. ಇವರಿಗೇನು ಹೇಳುವುದು ಎಂಬುವದು ಅರಿಯದೆ ಸೋಮಣ್ಣನೆಂದ “ರಾಯರೇ, ನೀವು ಇಲ್ಲಿಗೆ ಬರೂದನ್ನ  ನಮಗ ಹೇಳಿದರ ತಾನೇ?” ಬರೆದಿಟ್ಟ ಚೀಟಿಯ ಅರಿವಿಲ್ಲದೆ ರಾಯರೆಂದರು, “ಹಾಂಗೇನು! ನನಗ ಗೊತ್ತ ಆಗಿಲ್ಲ ನೋಡ. ರೈಲಿನಾಗ ಕುಳತ ಮ್ಯಾಲ ಫೋನು ಮಾಡಬೇಕಂದರ ಫೋನ ಸಿಗಲಿಲ್ಲ ” 

” ರಾಯರೇ, ಫೋನನ್ನ ಮನ್ಯಾಗ ಬಿಟ್ಟ ಬಂದ ಮ್ಯಾಲ ರೈಲಿನಾಗ ಹ್ಯಾಂಗ ಸಿಗತೈತಿ ?” ಅಂತ ಅಂದ ಸೋಮಣ್ಣ. ಏನೂ ಆಗಿಲ್ಲ ಅನ್ನುವಂತೆ ರಾಯರು ಅಂದರು, “ಇರಲಿ ಬಿಡ, ಊಟ ಮಾಡೀರಿಲ್ಲೋ? ಆ ಮುಮುಕ್ಷು ಭವನದಾಗ ಸಾತ್ವಿಕ ಊಟ ಭಾಳ ಚಲೋ ಐತಿ.” ಇವರ ನಡೆಗೆ ನಗಬೇಕೋ ಅಥವಾ ಅಳಬೇಕೊ ಎಂದು ತೋರಲಿಲ್ಲ ರಾಘುನಿಗೆ. ” ಅಪ್ಪಾ! ಎಲ್ಲ ಆಗೈತಿ ಬಿಡು. ನೀ ಹ್ಯಾಂಗದಿ?” ನದಿಯಲ್ಲಿ ಏನೋ ನೋಡುತ್ತಿದ್ದ ರಾಯರೆಂದರು, ” ನನಗೇನ ಆಗೈತಿ ಎಲ್ಲಾ ಆರಾಮನ ಅದಿನಲ್ಲಾ” ಎಂದು ಹೇಳಿ ಮಾತನ್ನು ಬದಲಿ ಮಾಡಿದರು. “ಸೋಮಣ್ಣ ಅಲ್ಲಿ ನೋಡಿದ್ಯೇನ?” ಎಂದರು. ಸೋಮಣ್ಣನಿಗೆ ರಾಯರು ಏನು ನೋಡುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ. ಕೆಲವರು ನದಿಯಲ್ಲಿ ಭಸ್ಮದ ಕುಂಡಿಯನ್ನು ಬಿಡುತ್ತಿದ್ದರು, ಕೆಲವರು ಚಿತೆಗೆ ಅರ್ಪಿಸುವ ಮುನ್ನ ಹೆಣದ ಮೈಯನ್ನು ತೊಳೆಯುತ್ತಿದ್ದರು, ಇನ್ನೂ ಕೆಲವರು ನದಿಯಲ್ಲಿ ಮುಳುಗಿ ಏಳುತ್ತಿದ್ದರು. ” ಏನೂ ನೋಡಿಲ್ಲ ರಾಯರೇ” ಅಂತ ಮಾತು ಮುಗಿಸಿದ. “ಮಾಡಿದ ಪಾಪ ಎಲ್ಲಾ ಹೋಗಲಿ ಅಂತ ನೀರಾಗ ಹ್ಯಾಂಗ ಮುಳಗಿ ಎಳತಾರು ನೋಡು. ಗಂಗಮ್ಮನ ಮಡಿಲು ಇವರ ಪಾಪದಿಂದ ತುಂಬಿ ಹೋಗಿರಬಹುದು. ಅದಕ ನಾನು ಸ್ನಾನ ಮಾಡಿಲ್ಲ. ಇಲ್ಲಿಯವೆರೆಗೂ ಏನು ಮಾಡೀನಿ ಅಂತ ಗೊತ್ತಿಲ್ಲ. ಆದರ ಇನ್ನ ಮ್ಯಾಲಾದರೂ ಒಳ್ಳೆಯ ಕೆಲಸಾ ಮಾಡಿ ಮರಳಿ ಬಂದು, ಸ್ವಲ್ಪ ಪುಣ್ಯವನ್ನು ಗಂಗಮ್ಮನ ಮಡಿಲಾಗ ಹಾಕಬೇಕು ಅಂತ ನಿರ್ಧಾರ ಮಾಡಿದೀನಿ. ನೀವು ಹೇಳಿದಾಂಗ ನನಗ ಮರುವಿನ ಖಾಯಿಲೆ ಇದ್ದರೂ ಇರಬಹುದು ಆದರ ಇನ್ನೂ ಮನಸು ದೇಹ ಗಟ್ಟಿ ಐತಿ. ನಡೀರಿ ಊರಿಗೆ ಮರಳಿ ಹೋಗುನು ” ಅಂತ ಅಂದರು. ರಾಯರು ಅಷ್ಟು ಸುಲಭವಾಗಿ ಮರಳಿ ಬರುವ ವಿಚಾರವನ್ನು ಕೇಳಿ ಅವರಿಬ್ಬರಿಗೂ ವಿಪರೀತ ಖುಷಿ ಆಯಿತು. ಅಪ್ಪನಿಗೇನೋ ಜ್ನಾನೋದಯ ಆದ ಹಾಗೆ ಇದೆ, ಅದಕ್ಕೂ ಒಂದು ಕಾರಣವಿರಬಹುದೆಂದು ರಾಘು ಅಂದುಕೊಂಡನು. ಕಳಿಂಗ ಯುದ್ಧದಲ್ಲಿ ಅಸ್ತ್ರ ತ್ಯಾಗವನ್ನು ಮಾಡಲು ಸಾಮ್ರಾಟ ಅಶೋಕನಿಗೂ ಒಂದು ಕಾರಣವಿತ್ತು. ಸಿದ್ಧಾರ್ಥ ನಡು ರಾತ್ರಿಯಲ್ಲಿ ಅರಮನೆಯನ್ನು ಬಿಟ್ಟು ಕಾಡನ್ನು ಸೇರಿ ಬುದ್ಧನಾಗಲೂ  ಒಂದು ಕಾರಣವಿತ್ತಲ್ಲವೇ? ಎಂದು ಸಮಾಧಾನಮಾಡಿಕೊಂಡನು. 

ರಾಯರು ಇನ್ನೂ ಏನನ್ನೋ ಹೇಳುತಲಿದ್ದರು “ಮುಕ್ತಿ ಭವನದಲ್ಲಿ ಇರುವ ಆ ಶುಕ್ಲಾನಿಗೆ ಬುದ್ದಿ ಕಡಿಮೆ ಅಂತ ಅಣಿಸತೈತಿ. ಅವನು ಹೇಳಿದಾಂಗ ಎರಡು ವಾರದಲ್ಲಿ ಜೀವ ಬಿಡಾಕ ಹ್ಯಾಂಗ ಸಾಧ್ಯ ಐತಿ ? ಸಾವು ನಮ್ಮ ಕೈಯ್ಯಾಗ ಐತೇನು? ಭವನದ ಬಗ್ಗೆ ಭಾಳ ಓದಿದ್ದೆ, ಒಂದೆರಡು ದಿನ ಅಲ್ಲಿ ಇರಬೇಕಂದರ ಆ ಮನುಷ್ಯ ಇರಾಕ  ಬಿಡಲಿಲ್ಲ”. “ಇರಲಿ ಬಿಡಪ್ಪಾ, ಅವನು ತನ್ನ ಭವನದ ನಿಯಮವನ್ನು ಪಾಲಿಸಿದಾನ, ಅವನದೇನು ತಪ್ಪು?” ಎಂದು ರಾಘು ರಾಯರನ್ನು ಸರಿಪಡಿಸಲು ಪ್ರಯತ್ನಿಸಿದ. ವಾರಣಾಸಿಯಿಂದ ಬೆಂಗಳೂರಿಗೆ ಬರುವ ರೈಲು ನಿಧಾನವಾಗಿ ಚಲಿಸತೊಡಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ನಿದ್ದೆಯೇ ಇರದ ಸೋಮಣ್ಣನು ಮಲಗಲು ಯತ್ನಿಸುತ್ತಿದ್ದ. ಆದರೆ ಅವನ ಕಣ್ಣುಗಳ ಮುಂದೆ ಪದೇ ಪದೇ ಅದೇ ಮುಕ್ತಿ ಭವನ, ವಾರಣಾಸಿಯ ಇಕ್ಕಟ್ಟಾದ ಬೀದಿಗಳು, ಮಣಿಕರ್ಣಿಕಾ ಸ್ಮಶಾನದ ಚಿತ್ರಣಗಳು ಮತ್ತು ಗಂಗಾ ನದಿಯಲ್ಲಿ ನಡೆಯುತ್ತಿದ್ದ ವಿವಿಧ ಕಾರ್ಯಗಳು ಸುತ್ತತೊಡಗಿದ್ದವು. ಜೀವನದ ಎಲ್ಲ ಮುಖಗಳನ್ನು ಒಂದೇ ದಿವಸದಲ್ಲಿ ಕಂಡುಕೊಂಡಿದ್ದ ಸೋಮಣ್ಣ, ಮನಸ್ಸಿನಲ್ಲಿಯೇ ಅಂದು ಕೊಂಡ ‘ಇದೆಂತ ಅದ್ಭುತ ನಗರ’ ಎಂದು. ಮೇಲಿನ ಬರ್ತಿನಲ್ಲಿದ್ದ ರಾಘು ರಾಯರಿಗೇನೋ ಹೇಳುತಲಿದ್ದ 

” ಅಪ್ಪಾ, ನೀನು ತಂದೆಯಾಗಿ ನನಗೆ ಏನು ಮಾಡಬೇಕಾಗಿತ್ತೋ ಅದನ್ನೆಲ್ಲಾ ಮಾಡಿಬಿಟ್ಟಿದಿ. ಈಗ ಮಗನಾಗಿ ನಾನು ನಿನಗ ಏನು ಮಾಡಬೇಕು ಎಂಬುದಕ್ಕ ಅವಕಾಶ ಕೊಡು. ನನ್ನ ಆಸೆಗೆ ನೀನು ಎಂದೂ ಅಡ್ಡ ಬಂದಿಲ್ಲ. ಹಾಂಗ ನಾನೂ ನೀನು ಮಾಡಬೇಕಿಂದಿರುವ ಕೆಲಸಗಳಿಗೆ ಅಡ್ಡ ಬರುದಿಲ್ಲ. ಮುಂದಿನ ತಿಂಗಳು ಊರಿಗೆ ಬರಾಕತಿನಿ, ನಿನ್ನ ಮೊಮ್ಮಗ ಕ್ರಿಷ್ ( ಕ್ರಿಷ್ಣ ) ನ ಮುಂಜವಿ ಮಾಡಾಕ. ನೀನೂ ನಮ್ಮ ಕೂಡ ಇಂಗ್ಲೆಂಡಿಗೆ ಬಂದು ಬಿಡು. ನಿನ್ನ ಸೊಸಿ ಬಿಳಿಯವಳಾದರೂ ನಮ್ಮ ಸಂಸ್ಕೃತಿ ಎಲ್ಲ ಕಲತಾಳು. ದಿನಾಲೂ ಪೂಜಾ ಮಾಡತಾಳು. ಬೇಜಾರಾದಾಗ ಒಂದಷ್ಟು ದಿನ ಊರಿಗೆ ಬಂದು ಸೋಮಣ್ಣನ ಕೂಡ ಇರು —–“

ಇನ್ನೂ ಏನನ್ನೋ ಹೇಳುತ್ತಲೇ ಇದ್ದನು. ಅವನ ಮಾತುಗಳಿಗೆ  ತಿರಿಗುತ್ತರಿಸದೆ ಸುಮ್ಮನೆ ಹೂಂ ಗುಡುತ್ತಿದ್ದ ರಾಯರು ಹಾಗೆಯೇ ನಿದ್ದೆ ಹೋಗಿ, ಜೋರಾಗಿ ಏನನ್ನೋ ಬಡ ಬಡಿಸುತ್ತಿದ್ದರು “ದಾನ ಧರ್ಮ…ಪುಣ್ಯ ಪಾಪ…ಮುಕ್ತಿ ಮೋಕ್ಷ…” ನಗರವನ್ನು ದಾಟಿದ್ದ ರೈಲು, ಆವರಿಸಿದ ಕತ್ತಲೆಯನ್ನು ಸೀಳಿಕೊಂಡು ಜೋರಾಗಿ ಓಡತೊಡಗಿತು, ತನ್ನ ಕೊನೆಯ ನಿಲ್ದಾಣವನ್ನು ಮುಟ್ಟಲು. 

–   ಶಿವಶಂಕರ ಮೇಟಿ 

ಪುಸ್ತಕ ವಿಮರ್ಶೆ ಎಂಬ ತಕ್ಕಡಿ: ಡಾ ಜಿ.ಎಸ್. ಶಿವಪ್ರಸಾದ್

ಮತ್ತು ಒಂದು ಪುಸ್ತಕ ವಿಮರ್ಶೆ – ಟಿ. ಆರ್. ನಾರಾಯಣ್

ಈ ವಾರದ ಸಂಚಿಕೆಯಲ್ಲಿ ಒಂದಕ್ಕೊಂದು ಪೂರಕವಾಗುವ ಎರಡು ಬರಹಗಳಿವೆ. ನಾನು ‘ಪುಸ್ತಕ ವಿಮರ್ಶೆ ಎಂಬ ತಕ್ಕಡಿ’ ಎನ್ನುವ ಶೀರ್ಷಿಕೆಯಲ್ಲಿ ವಿಮರ್ಶೆಯ ಕುರಿತಾದ ನನ್ನ ಕೆಲವು ಅನಿಸಿಕೆಗಳನ್ನು ದಾಖಲಿಸಿದ್ದೇನೆ. ಪುಸ್ತಕ ವಿಮರ್ಶೆಯ ಕೆಲವು ಆಯಾಮಗಳನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ನನ್ನದಾಗಿದೆ. ನನ್ನ “ಅಪ್ಪ ನೆಟ್ಟ ಆಲದ ಮರ” ಬಿಡಿ ಬರಹಗಳ ಕೃತಿಯನ್ನು ಶ್ರೀಯುತ ನಾರಾಯಣ್ ಅವರು ವಿಶ್ಲೇಷಿಸಿ ಒಂದು ವಿಮರ್ಶೆಯನ್ನು ಒದಗಿಸಿದ್ದಾರೆ. ನಾರಾಯಣ್ ಅವರು ನಮ್ಮ ಕನ್ನಡ ಬಳಗದ ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿ ಮತ್ತು ಹೆಸರಾಂತ ನಾಟ್ಯ ಕಲಾವಿದೆ ಸುಮನಾ ನಾರಾಯಣ್ ಅವರ ತಂದೆ. ಅವರ ಈ ಒಂದು ಬರಹಕ್ಕೆ ನಾನು ಆಭಾರಿಯಾಗಿದ್ದೇನೆ. ಆ ವಿಮರ್ಶೆಯನ್ನು ಕೆಳಗೆ ಹಂಚಿಕೊಳ್ಳಲಾಗಿದೆ.
ದಯವಿಟ್ಟು ಓದಿ, ನಿಮ್ಮ ಅನಿಸಿಕೆಗಳನ್ನು (ಕಿರು ವಿಮರ್ಶೆಯನ್ನು !) ಒದಗಿಸಿ

  • ಸಂಪಾದಕ

ಫೋಟೋ ಗೂಗಲ್ ಕೃಪೆ

 ಪುಸ್ತಕ ವಿಮರ್ಶೆ ಎಂಬ ತಕ್ಕಡಿ: ಡಾ ಜಿ.ಎಸ್. ಶಿವಪ್ರಸಾದ್

ಒಂದು ಪುಸ್ತಕವನ್ನು ಓದಿದಾಗ ನಮ್ಮ ಗ್ರಹಿಕೆಗೆ ನಿಲುಕುವ ವಸ್ತು ವಿಷಯಗಳನ್ನು, ವಿಚಾರಗಳನ್ನು ಮೆಲುಕು ಹಾಕಿ ಅದನ್ನು ನಮ್ಮ ಬದುಕಿನ ಅನುಭವಗಳ ಜೊತೆ ನಿಲ್ಲಿಸಿ ಒಂದು ತುಲನಾತ್ಮಕ ಮತ್ತು ವಿಮರ್ಶಾತ್ಮಕ ಒಳನೋಟವನ್ನು ಕಂಡುಕೊಂಡು ಅದನ್ನು ಕ್ರಮಬದ್ಧವಾಗಿ ದಾಖಾಲಾಯಿಸುವುದೇ ವಿಮರ್ಶೆ ಎನ್ನ ಬಹುದು. ಒಂದು ಪುಸ್ತಕದ ಸಾರಾಂಶವನ್ನು ಗ್ರಹಿಸಿ ಆಳಕ್ಕೆ ಇಳಿಯದೆ, ವೈಯುಕ್ತಿಕ ದೃಷ್ಟಿಕೋನವನ್ನು ಹೊರಗಿಟ್ಟು, ಲೇಖಕರ ಆಶಯಗಳ್ನು ಯಥಾವತ್ತಾಗಿ ಬಿತ್ತರಿಸಿದರೆ ಅದು ಪುಸ್ತಕ ಪರಿಚಯವಾಗುತ್ತದೆ, ಒಂದು ವರದಿಯಾಗುತ್ತದೆ. ಒಬ್ಬ ಉತ್ತಮ ವಿಮರ್ಶಕನಿಗೆ ಸಾಹಿತ್ಯದ ಪರಿಚಯವಿರಬೇಕು, ಸಾಹಿತ್ಯ ಸಂವೇದನೆ ಇರಬೇಕು, ಪುಸ್ತಕದಲ್ಲಿನ ಸತ್ವ, ನಿಸ್ಸತ್ತ್ವಗಳನ್ನು ಗುರುತಿಸುವ ಸಾಮರ್ಥ್ಯವಿರಬೇಕು, ಅಲ್ಲೊಂದು ನಿಷ್ಪಕ್ಷಪಾತ ನಿಲುವಿರಬೇಕು ಮತ್ತು ಮುಖ್ಯವಾಗಿ ಪ್ರಾಮಾಣಿಕತೆ ಇರಬೇಕು. 

ಒಂದು ಪುಸ್ತಕವನ್ನು ವಿಮರ್ಶಿಸಲು ಹೊರಟ ವಿಮರ್ಶಕನ (ಓದುಗನ) ಸಾಮಾಜಿಕ -ರಾಜಕೀಯ ನಿಲುವುಗಳು, ಬದುಕಿನ ಅನುಭವ, ತಾನು ಕಂಡುಕೊಂಡ ಬದುಕಿನ ಮೌಲ್ಯಗಳು ಅವನು ಪುಸ್ತಕಕ್ಕೆ ಹೇಗೆ ಸ್ಪಂದಿಸುತ್ತಾನೆ ಎನ್ನುವುದನ್ನು ನಿರ್ಧರಿಸುತ್ತವೆ. ಒಬ್ಬ ಸಾಹಿತ್ಯ ವಿಮರ್ಶಕನಾಗಲು ವಿಶೇಷ ಸಾಹಿತ್ಯ ತರಬೇತು ಬೇಕಾಗಿಲ್ಲ ಮತ್ತು ಸಾಹಿತ್ಯ ವಿದ್ಯಾರ್ಥಿಯಾಗಿ ಅಕ್ಯಾಡೆಮಿಕ್ ಆಗಿರಲೇಬೇಕಿಲ್ಲ, ಒಂದು ವೇಳೆ ಆಗಿದ್ದರೆ ಅದು ಸಹಾಯಕವಾಗಬಹುದು.

ಒಂದು ಕೃತಿ ವಿಮರ್ಶೆಯ ಅಂತಿಮ ಗುರಿ ಎಂದರೆ ಒಂದು ಪುಸ್ತಕದ ಪರಿಚಯದ ಜೊತೆ ಉತ್ತಮ ಸಾಹಿತ್ಯವನ್ನು, ಲೇಖಕರ ವಿಚಾರ ಧಾರೆಯನ್ನು ಸಾಮೂಹಿಕ ಚರ್ಚೆಗೆ ಒಳಪಡಿಸುವುದು. ಕೆಲವು ಕೃತಿಗಳಲ್ಲಿ ಪ್ರಖರವಾದ ವಿಚಾರ ಚಿಂತನೆಗಳು ಇಲ್ಲದಿದ್ದರೂ ಆ ಬರಹಗಳಲ್ಲಿನ ಕಲಾತ್ಮಕತೆ, ಸೃಜನ ಶೀಲತೆ, ಕಥನ ಶೈಲಿ ಮತ್ತು ತಾಂತ್ರಿಕ ವಿಚಾರಗಳ ಬಗ್ಗೆ ವಿಶ್ಲೇಷಣೆ ಮಾಡಬಹುದು. ಸಾಮಾಜಿಕ ವಿಚಾರಗಳನ್ನು ಒಳಗೊಂಡ ಕಥೆ, ಕಾದಂಬರಿ ಕವಿತೆ, ಪ್ರಬಂಧಗಳು ಕೆಲವೊಮ್ಮೆ ಉಗ್ರ ಟೀಕೆಗಳಿಗೆ ಒಳಗಾಗಬಹುದು. ಒಬ್ಬ ಲೇಖಕ ತನ್ನ ಒಂದು ಸಾರ್ವತ್ರಿಕವಲ್ಲದ, ಸಂಕುಚಿತವಾದ, ಆಲೋಚನೆಗಳನ್ನು ಕೃತಿಯಲ್ಲಿ ತರಲು ಪ್ರಯತ್ನಿಸಿದಾಗ ನಮ್ಮ ಐಡಿಯಾಲಜಿಗಳ ಸಂಘರ್ಷಣೆ ಸಾಮಾನ್ಯ. ಚರಿತ್ರೆಯನ್ನು ಆಧರಿಸಿ ಬರೆದಂತಹ ಕೃತಿಗಳು ತೀಕ್ಷ್ಣ ವಿವಾದಕ್ಕೆ ಒಳಪಟ್ಟಿರುವುದನ್ನು ಕಂಡಿದ್ದೇವೆ.  ಚರಿತ್ರೆಯಲ್ಲಿ ದಾಖಲಿಸಿರುವ ವಿಚಾರಗಳು ಎಷ್ಟರ ಮಟ್ಟಿಗೆ ಸತ್ಯ ಎನ್ನುವ ಸಂದೇಹ ಮೂಡಿಬರುವುದು ಸಹಜ. ಹಳೆಯ ಅಪ್ರತಸ್ತುತ ವಿಚಾರಗಳನ್ನು ಆಧರಿಸಿ ಲೇಖಕ ತನ್ನ ಒಂದು ಉದ್ದೇಶಿತ ಆಲೋಚನೆಗಳನ್ನು ಹೇರಲು ಹೊರಟಾಗ ಅದನ್ನು ಓದುಗರು ಮತ್ತು ವಿಮರ್ಶಕರು ಪ್ರಶ್ನಿಸುವುದೂ ಸಹಜವೇ. ವೈಚಾರಿಕ ನಿಲುವಿರುವ, ನಮಗೆ ಪ್ರಸ್ತುತವಾಗುವ, ಸಮಾಜದ ವರ್ತಮಾನ ಸಮಸ್ಯೆಗಳ ಬಗ್ಗೆ ಉಲ್ಲೇಖವಿರುವ,  ಜನರ ನೋವು, ದುಃಖಗಳನ್ನು ಅನುಕಂಪೆಯಿಂದ ಕಾಣುವ, ಸಮಾನತೆ ಮತ್ತು ಇತರ ಮಾನವೀಯ ಮೌಲ್ಯಗಳನ್ನು ಒಳಗೊಳ್ಳುವ ಕೃತಿಗಳು ಸಾಮಾನ್ಯವಾಗಿ ವಿವಾದದಿಂದ ದೂರ ಉಳಿಯುತ್ತವೆ ಮತ್ತು ಹೆಚ್ಚು ಹೆಚ್ಚು ಓದುಗರಿಂದ ಸ್ವೀಕೃತವಾಗುತ್ತವೆ ಎನ್ನಬಹುದು. ವಿಮರ್ಶಕರು ಅದೆಷ್ಟೋ ಕೃತಿಗಳನ್ನು ನೈತ್ಯಾತ್ಮಕವಾಗಿ ವಿಮರ್ಶಿಸಿದ್ದರೂ ಒಂದು ಕೃತಿಗೆ ಪರ -ವಿರೋಧ ಅಭಿಪ್ರಾಯಗಳು ಉಂಟಾಗುವುದು ಸಹಜ. ಲೇಖಕನ ಮತ್ತು ಓದುಗರ ಸಾಮಾಜಿಕ-ರಾಜಕೀಯ, ಎಡಪಂಥ, ಬಲಪಂಥ ನಿಲುವುಗಳೇ ಇದಕ್ಕೆ ಕಾರಣವಾಗಿರುತ್ತದೆ. 

ಓದುಗರು ಕೃತಿಯನ್ನು ಓದಿದ ಮೇಲೆ ವಿಮರ್ಶೆಯನ್ನು ಗಮನಿಸುವುದು ಒಳಿತು. ಇಲ್ಲದಿದ್ದಲ್ಲಿ ನಮ್ಮ ಸ್ವಂತ ಚಿಂತನೆಗಳು ಮೊಳಕೆಯೊಡೆಯುವ ಮೊದಲೇ ವಿಮರ್ಶಕನ ಚಿಂತನೆಗಳು ನಮ್ಮ ಮೇಲೆ ಪರಿಣಾಮಗಳನ್ನು ಬೀರಿ ನಾವು ನಮ್ಮ ಸ್ವತಂತ್ರ ಆಲೋಚನೆಗಳನ್ನು ಕಳೆದುಕೊಳ್ಳಬಹುದು. ವಿಮರ್ಶಕ ಒಂದು ಕೃತಿಯನ್ನು ತನ್ನ ಅಳತೆ ಮಾಪನದಲ್ಲಿ ತೂಗಿ ಇದು ಸರಿ ಇದು ತಪ್ಪು ಎಂದು ಹೇಳಬಹುದು ಆದರೆ ಅದನ್ನು ಒಪ್ಪಿಕೊಳ್ಳಲೇ ಬೇಕಿಲ್ಲ. ಏಕೆಂದರೆ ಅದು ಅವನ ದೃಷ್ಟಿಕೋನ, ಅವನ ಗ್ರಹಿಕೆ.  ಆದರೂ ಒಬ್ಬ ಸೃಜನ ಶೀಲ ಲೇಖಕನಿಗೆ ಒಬ್ಬ ಉತ್ತಮ ವಿಮರ್ಶಕನ ಅಭಿಪ್ರಾಯವನ್ನು ಸ್ವೀಕರಿಸುವ  ಔದಾರ್ಯ ಮತ್ತು ಹೃದಯ ವೈಶಾಲ್ಯವಿರಬೇಕು. ವಿಮರ್ಶಕರು ಗುರುತಿಸಿದ ದೋಷಗಳನ್ನು ತನ್ನ ಮುಂದಿನ ಕೃತಿಯಲ್ಲಿ ಸರಿಪಡಿಸುವ ಮುಕ್ತ ಮನಸ್ಸಿರಬೇಕು. ಒಂದು ಕೃತಿ ಬರೆದ ಕೂಡಲೇ ಅದರ ವಿಮರ್ಶೆ ಕೆಲವೇ ದಿನಗಳಲ್ಲಿ ನಡೆಯಬೇಕು ಎಂಬ ನಿರೀಕ್ಷೆ ಇದ್ದರೂ ಅದಕ್ಕೆ ಕಾಲದ ಮಿತಿಯಿಲ್ಲ. ಶೇಕ್ಸ್ಪಿಯರ್, ಕುವೆಂಪು ಬರೆದ ಕಾವ್ಯ ನಾಟಕಗಳನ್ನು ಇಂದು ವಿಮರ್ಶಿಸಿ ಹೊಸ ಹೊಳಹುಗಳನ್ನು ಕಂಡುಕೊಳ್ಳ ಬಹುದು. ಉದಾಹರಣೆಗೆ ‘ತಬ್ಬಲಿಯು ನೀನಾದೆ ಮಗನೆ’ ಎಂಬ ಭೈರಪ್ಪನವರ ೫೦ ವರ್ಷಗಳ ಹಿಂದಿನ ಕೃತಿಯನ್ನು ನಾನು ಕಳೆದ ಕೆಲವು ವರ್ಷಗಳಲ್ಲಿ ಪುನರವಲೋಕಿಸುವ ಪ್ರಯತ್ನ ಮಾಡಿದೆ. (ಇದು ಅನಿವಾಸಿ ಜಾಲತಾಣದಲ್ಲಿ ಹಿಂದೆ ಪ್ರಕಟಗೊಂಡಿತ್ತು) ಕೆಲವು ಕಾಲಾತೀತವಾದ ಬರಹಗಳು ಬದಲಾಗುತ್ತಿರುವ ಸಮಾಜದ ಹಿನ್ನೆಲೆಯಲ್ಲಿ ಮತ್ತೆ ಪುನರ್ವಿಮರ್ಶೆಗೆ ದಕ್ಕುತ್ತವೆ. ಒಂದು ಕಾಲ ಘಟ್ಟದ ಕೃತಿ ಇನ್ನೊಂದು ಕಾಲಘಟ್ಟದಲ್ಲಿ, ಬೇರೆ ಹಿನ್ನೆಲೆಯಲ್ಲಿ ವಿಮರ್ಶೆಗೆ ಗುರಿಯಾಗಬಹುದು.

ಒಬ್ಬ ವಿಮರ್ಶಕ ಬರೆದ ವಿಮರ್ಶೆಯನ್ನು ಬಹಿರಂಗವಾಗಿ ಹಂಚಿಕೊಳ್ಳಬೇಕು. ಕೆಲವು ಗಮನಾರ್ಹ ಕೃತಿಗಳ ವಿಮರ್ಶೆಗಳು ದಿನ ಪತ್ರಿಕೆಗಳಲ್ಲಿ, ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗುತ್ತವೆ.  ಕೆಲವು ಪ್ರಬುದ್ಧ ಪಾಂಡಿತ್ಯಪೂರ್ಣ ವಿಮರ್ಶೆ/ ಚರ್ಚೆಗಳು ಸಾಹಿತ್ಯಕ್ಕೆ ಮೀಸಲಾದ ಸಾಹಿತ್ಯ ಪತ್ರಿಕೆಗಳಲ್ಲಿ ಸಂಭವಿಸುತ್ತವೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದ ವಾಟ್ಸ್ ಆಪ್ ಮತ್ತು ಫೇಸ್ಬುಕ್ ತಾಣಗಳಲ್ಲಿ ಕಿರು ವಿಮರ್ಶೆಗಳನ್ನು ಯಥೇಚ್ಛವಾಗಿ ಕಾಣಬಹುದು. ಒಂದು ಕೃತಿ ವಿಮರ್ಶೆಗೆ ಒಳಗಾದರೆ ಅದು ಒಂದು ಪ್ರಚಾರವಾಗಿ ಪರಿಣಮಿಸಿ ಲೇಖಕ ನಿರೀಕ್ಷಿಸದಿದ್ದರೂ ತನಗೆ ತಾನೇ ಸಲ್ಲುವ ಒಂದು ಲಾಭ ಎನ್ನಬಹುದು.

ಒಂದು ರೀತಿ ನಾವೆಲ್ಲರೂ ವಿಮರ್ಶಕರೆಂದು ಭಾವಿಸಬಹುದು. ನಮ್ಮ ದಿನ ನಿತ್ಯ ಬದುಕಿನ ಆಗುಹೋಗುಗಳಲ್ಲಿ ಸಂಭವಿಸುವ ಸಂಗತಿಗಳನ್ನು ನಮ್ಮ ಮನಸ್ಸು ವಿಮರ್ಶಿಸುತ್ತಿರುತ್ತದೆ. ಒಂದು ಒಳ್ಳೆಯ ಟಿವಿ ಸೀರಿಯಲ್ ನೋಡಿದಾಗ, ಒಂದು ಸಿನಮಾಗೆ ಹೋಗಿ ಬಂದಾಗ ನಾವು ಅದರ ವಿಮರ್ಶೆಗೆ ತೊಡಗುವುದು ಸಾಮಾನ್ಯ. 
ನನಗೆ ತಿಳಿದಂತೆ ನನ್ನ ಪತ್ನಿ ಮತ್ತು ಅವಳ ಕೆಲವು ಗೆಳತಿಯರು ಒಂದು ಲೇಡಿಸ್ ಬುಕ್ ಕ್ಲಬ್ ಮಾಡಿಕೊಂಡು ಬುಕರ್ ಪ್ರೈಜ್ ಪಡೆದ ಮತ್ತು ಇತರ ಜನಪ್ರಿಯ ಇಂಗ್ಲಿಷ್ ಕೃತಿಗಳನ್ನು ತಿಂಗಳಿಗೊಮ್ಮೆ ಚರ್ಚಿಸುತ್ತಾರೆ. ಅದೂ ಕೂಡ ಒಂದು ವಿಮರ್ಶೆಯ ಅಂಗವೇ ಎನ್ನ ಬಹುದು. ನಮ್ಮ ಅನಿವಾಸಿ ಬ್ಲಾಗಿನಲ್ಲಿ ಪ್ರಕಟಗೊಳ್ಳುವ ಬರಹಕ್ಕೆ ಬರುವ ಕಾಮೆಂಟುಗಳು ಒಂದು ರೀತಿ ವಿಮರ್ಶೆ ಎನ್ನಬಹುದು. ಒಂದು ಪುಸ್ತಕಕ್ಕೆ ಬರೆದು ಕೊಟ್ಟ ಮುನ್ನುಡಿ ಪ್ರವೇಶ ಪರಿಚಯದ ಜೊತೆಗೆ ಒಂದು ವಿಮರ್ಶೆಕೂಡ ಎನ್ನಬಹುದು. 


ವಿಮರ್ಶೆಯು ಒಂದು ಕಲೆ ಮತ್ತು ಅದು ಪ್ರತಿಭೆಯನ್ನು ಬೇಡುತ್ತದೆ. ವಿಮರ್ಶಕರು ಸಾಹಿತ್ಯವನ್ನು ಸೃಷ್ಠಿಸುವ ಲೇಖಕರಷ್ಟೇ ಮುಖ್ಯ. ಅವರಿಗೂ ಮಾನ್ಯತೆ ಮತ್ತು ಪುರಸ್ಕಾರಗಳ ಅವಶ್ಯಕತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಡಾ.ಜಿ.ಎಸ್.ಎಸ್ ಅವರು ವಿಶ್ವಸ್ಥಮಂಡಳಿ ಎಂಬ ಒಂದು ದತ್ತಿ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದ ಹತ್ತಾರು ವರ್ಷಗಳಲ್ಲಿ ಪ್ರತಿ ವರ್ಷ ಉತ್ತಮ ವಿಮರ್ಶಕರಿಗೆ ಜಿ. ಎಸ್. ಎಸ್ ಪುರಸ್ಕಾರ ನೀಡಲಾಗುತ್ತಿದೆ. ಈ ಪುರಸ್ಕಾರ ಉತ್ತಮ ಕವಿತೆ ಅಥವಾ ಕಾದಂಬರಿಗಲ್ಲ! ಬದಲಾಗಿ ವಿಮರ್ಶಕರಿಗೆ ಮಾತ್ರ ಮೀಸಲಾಗಿದೆ ಎಂಬ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ.

ಒಂದು ಭಾಷೆಯ, ಸಂಸ್ಕೃತಿಯ ಮತ್ತು ಸಾಹಿತ್ಯದ ಆರೋಗ್ಯಕರ ಬೆಳವಣಿಗೆಗೆ ವಿಮರ್ಶೆ ಅತ್ಯಗತ್ಯ. ಓದುಗರ ಮೆಚ್ಚುಗೆ ಮತ್ತು ಉಪಯುಕ್ತ ಸಲಹೆಗಳು ಸಾಹಿತ್ಯದ ಬೆಳವಣಿಗೆಯನ್ನು ರೂಪಿಸುತ್ತವೆ.  ಯಾರೇ ಒಬ್ಬ ಲೇಖಕನಿಗೆ ಓದುಗರ ಅನಿಸಿಕಗಳು ಮೌಲಿಕವಾಗುತ್ತವೆ ಮತ್ತು ಮಾರ್ಗದರ್ಶನ ನೀಡುತ್ತವೆ.  ಒಂದು ಸಮುದಾಯದಲ್ಲಿ ಉತ್ತಮ ಸಾಹಿತ್ಯ ಅಭಿರುಚಿಯನ್ನು ಬೆಳೆಸುವುದರಲ್ಲಿ ವಿಮರ್ಶೆ ಮಹತ್ವವಾದ ಜವಾಬ್ದಾರಿಯನ್ನು ವಹಿಸಿರುತ್ತದೆ.

ಡಾ ಜಿ ಎಸ್ ಶಿವಪ್ರಸಾದ್


* * *   

ಒಂದು ಪುಸ್ತಕ ವಿಮರ್ಶೆ – ಟಿ.ಆರ್. ನಾರಾಯಣ್

(ಅಪ್ಪ ನೆಟ್ಟ ಆಲದ ಮರ ಕೃತಿಯ ವಿಮರ್ಶೆ)  

ಶ್ರೀ  ಟಿ. ಆರ್. ನಾರಾಯಣ್ ರವರ ಕಿರು ಪರಿಚಯ:

ಶ್ರೀ ಟಿ. ಆರ್. ನಾರಾಯಣ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ( ಈಗ ರಾಮನಗರ ಜಿಲ್ಲೆ)ಯ ಮಾಗಡಿ ತಾಲ್ಲೋಕಿನ ತಿಪ್ಪಸಂದ್ರ ಎಂಬ ಗ್ರಾಮದವರು. ಇವರ ಬಾಲ್ಯ ಮತ್ತು ವಿದ್ಯಾಭ್ಯಾಸಗಳನ್ನು ಹೆಚ್ಚಿನಂಶ ಬೆಂಗಳೂರಿನ ಬಸವನಗುಡಿಯ (ಬುಲ್ ಟೆಂಪಲ್ ರಸ್ತೆ) ಪರಿಸರದಲ್ಲಿ ಕಳೆದು ಬಿ. ಎಂ. ಎಸ್. ಇಂಜನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಇಂಜನಿಯರಿಂಗ್ ಪದವಿಯನ್ನು ಗಳಿಸಿದರು. ನಂತರ ಕರ್ನಾಟಕ ವಿದ್ಯುತ್ಛಕ್ತಿ ಮಂಡಲಿಯಲ್ಲಿ (K E B) ಇಂಜನಿಯರ್ ಆಗಿ ಸುಮರು 26 ವರ್ಷಗಳ ಕಾಲ ಅನುಭವಗಳಿಸಿ (Electrical Systems Planning, Maintenance and Development of Application Software), ಸ್ವಯಂ ನಿವೃತ್ತಿ ಪಡೆದು, ನಂತರ ಟಾಟ ಎನರ್ಜಿ ರಿಸರ್ಚ ಇನ್ಸ್ಟಿಟ್ಯೂಟ್ (Tata Enegy Research Institute) ನಲ್ಲಿ ಸಿನಿಯರ್ ಕನ್ಸಲಟಿಂಗ್ ಇಂಜನಿಯರ್/ಫೆಲೊ ಅಗಿ ಅನುಭವ ಗಳಿಸಿದರು (Energy Systems, Design, Planning and Conservation).

ಹೈಸ್ಕೂಲಿನ ವಿಧ್ಯಾರ್ಥಿ ಜೀವನದಿಂದ ಪ್ರಾರಂಭಿಸಿದ ಸಾಹಿತ್ಯ ಕೃತಿಗಳನ್ನು ಓದುವ ಅಭ್ಯಾಸವನ್ನು   ಸಮಾಯಾವಕಾಶವಾದಾಗ ಮುಂದುವರೆಸಿ ಹೊಸ ಪುಸ್ತಕಗಳನ್ನು ಓದಿ ಸಾಹಿತ್ಯ ಲೋಕಕ್ಕೆ ಪ್ರವೇಶಾನುಭವ ಗಳಿಸಿದರು. ಪ್ರಸಕ್ತ ಬೆಂಗಳೂರು ಹನುಮಂತನಗರದ ನಿವಾಸಿಯಾಗಿ ವಿಶ್ರಾಂತ ಜೀವನದಲ್ಲಿ ಸಾಹಿತ್ಯಾಸಕ್ತರಾಗಿ ಗ್ರಂಥಗಳ ಅಧ್ಯಯನ, ಸಾಹಿತ್ಯ ಚಿಂತನ ಮತ್ತು ಕನ್ನಡದಲ್ಲಿ ಕವನ/ಚುಟುಕ ಗಳ ರಚನೆ ಇತ್ಯಾದಿ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವರ್ಷಕ್ಕೊಮ್ಮೆ ಇಂಗ್ಲೆಂಡಿನ ನಾಟಿಂಗ್ ಹ್ಯಾಮ್ ನಲ್ಲಿರುವ ತಮ್ಮ ಮಗಳ ಮನೆಯಲ್ಲಿ ಕೆಲವು ಕಾಲ ವಾಸಿಸುತ್ತಾರೆ.

* * *

ಡಾ. ಶಿವ ಪ್ರಸಾದ್ ರವರ ಪ್ರಬಂಧ ಸಂಕಲನ, 'ಅಪ್ಪ ನೆಟ್ಟ ಆಲದ ಮರ' ವೈವಿಧ್ಯಮಯ ವಸ್ತುನಿಷ್ಠ ಬರಹಗಳೊಂದಿಗೆ ಮನೋಜ್ಞವಾಗಿ ಮೂಡಿಬಂದಿದೆ, ಜೊತೆಗೆ ಭಾವನಾತ್ಮಕ ಹಾಗೂ ತುಲನಾತ್ಮಕ ವಿಶ್ಲೇಷಣೆಗಳು ಸಹೃದಯ ಓದುಗರನ್ನು ಸಕಾರಾತ್ಮಕ ಚಿಂತನೆಗಳಿಗೀಡು ಮಾಡುವುದರಲ್ಲಿ ಸಫಲವಾಗಿವೆ.

ಈ ಸಂಕಲನದಲ್ಲಿ ಒಟ್ಟು 31 ಪ್ರಬಂಧಗಳಿದ್ದು, ಪ್ರತಿಯೊಂದೂ ತನ್ನ ವಿಶಿಷ್ಟ ಛಾಪಿನಿಂದ ಮುಖ್ಯವೆನಿಸಿ ಮನಸೆಳೆಯುತ್ತದೆ. ಕೆಲವು ಪ್ರಬಂಧಗಳಂತೂ ಓದುಗರ ಮನಸ್ಸಿನಲ್ಲಿ ಗಾಢವಾಗಿ ನೆಲೆಯೂರಿ ವಿಚಾರಾತ್ಮಕ ಪ್ರಜ್ಞೆಯನ್ನು ಪ್ರಚೋದಿಸುವಲ್ಲಿ ಸಫಲವಾಗಿವೆ. ಇಲ್ಲಿನ ಕೆಲವು ಪ್ರಬಂಧಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. 

ಹಿರಿಯರೂ, ಪೂಜ್ಯರೂ ಆದ ಕವಿ ನಾಡೋಜ ಶ್ರೀ ಜಿ. ಎಸ್. ಶಿವರುದ್ರಪ್ಪನವರ ನೆನಪಿನ ಕೆಲವು ಪ್ರಬಂಧಗಳು ಅವರ ವಿಶಾಲ ದೃಷ್ಟಿ, ಸಮನ್ವಯ ಭಾವ, ಮತ್ತು ಅವರ ಕವನ/ಕಾವ್ಯಗಳಲ್ಲಿನ ಪ್ರಬುದ್ಧ ಪರಿಪಕ್ವತೆ ಎಲ್ಲವೂ ಮನೋಜ್ಞವಾಗಿ, ಹಾಸುಹೊಕ್ಕಾಗಿ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುತ್ತವೆ. ಈ ವಿಚಾರಗಳನ್ನು ಲೇಖಕರು ಪೂರ್ವಾಗ್ರಹರಹಿತ ಪ್ರಬುದ್ಧತೆಯಿಂದ ಮಂಡಿಸಿದ್ದಾರೆ. 

ಕವಿ ಕವಿತೆ ಮತ್ತು ಭಾವಗೀತೆ ಎನ್ನುವ ಪ್ರಬಂಧದಲ್ಲಿ, ಕವಿತೆ ಎಂದರೇನು? ಎಂಬ ಪ್ರಶ್ನೆಗೆ ಉತ್ತರವನ್ನು ಸ್ಪಷ್ಟ ವಾಗಿಯೂ, ನಿರ್ದಿಷ್ಟವಾಗಿಯೂ, ಮನದಟ್ಟಾಗುವಂತೆ, ಅಕರ ಗ್ರಂಥ, ಕವನ/ಕಾವ್ಯಗಳಿಂದ ಪ್ರಬುದ್ಧ ಸಾಲುಗಳನ್ನುದ್ಧರಿಸಿ ವಿಶ್ಲೇಷಿಸಲಾಗಿದೆ. ಡಾ. ಜಿ. ಎಸ್. ಶಿವರುದ್ರಪ್ಪನವರ ಪ್ರೌಢ  ಗ್ರಂಥ ' ಕಾವ್ಯರ್ಥ ಚಿಂತನ' ದಿಂದ ಪ್ರಾರಂಭಿಸಿ ಇಂಗ್ಲೀಷ್ ಕವಿ ಕೋಲ್ರಿಡ್ಜ್, ಶೇಕ್ಸಪಿಯರ್, ಕನ್ನಡದ ರಸಕವಿ ಕುವೆಂಪು, ಮುಂತಾದವರ ಅನುಭವದ ಮೂಸೆಯಲ್ಲಿ ಪಕ್ವಗೊಂಡ ಭಾವ ಸಮ್ಮಿಳನ, ಕವಿ ಮನಸ್ಸಿನ ಒಳತೋಟಿ, ಕಾವ್ಯರಚನೆಗೊದಗುವ ಪ್ರಕೃತಿ ಸೌಂದರ್ಯೋಪಾಸನೆ, ವಸ್ತು ವಿಶೇಷ, ಕಾವ್ಯದಲ್ಲಿ ಅಲಂಕಾರ, ರೂಪಕಗಳ/ಪ್ರತಿಮೆಗಳ ಉಪಯೋಗ ಮುಂತಾದವುಗಳನ್ನು ವಿಸ್ತಾರವಾಗಿ ಚರ್ಚಿಸಲಾಗಿದೆ. ಇವೆಲ್ಲವುಗಳ ಜೊತೆಗೆ ಅಧುನಿಕ ಭಾವಗೀತೆಗಳುದಯ, ಅವುಗಳು ಹಂತ ಹಂತವಾಗಿ ಮಹಾಕಾವ್ಯವಾದ ವಿಸ್ತಾರವನ್ನು ಪಡೆಯಬಹುದಾದ ಸಾಧ್ಯತೆ ಇತ್ಯಾದಿ ವಿವರಗಳನ್ನು ಡಾ. ಪ್ರಭುಶಂಕರ ರವರ ಉದ್ಗ್ರಂಥ 'ಕನ್ನಡದಲ್ಲಿ ಭಾವಗೀತೆ' ಯಿಂದ ಆಯ್ದ ಸಾಲುಗಳ ಸಹಾಯದಿಂದ ವಿಶದೀಕರಿಸಲಾಗಿದೆ.

ವೃತ್ತಿಯಲ್ಲಿ ವೈದ್ಯರಾದ (ಮಕ್ಕಳ ತಜ್ಞರು) ಲೇಖಕರು, ತಮ್ಮ ವಿಶೇಷ ಪರಿಣಿತಿ ಮತ್ತು ಅನುಭವದಿಂದ ಮಕ್ಕಳ ನಟ್ಸ್ ಅಲರ್ಜಿ ಬಗ್ಗೆ ಬರೆದ ಪ್ರಬಂಧ ('ಹಲ್ಲಿದ್ದವರಿಗೆ ಕಡಲೆ ಇಲ್ಲ...') ವೈದ್ಯಕೀಯ ವಿಷಯಗಳನ್ನು ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾಗುವರೀತಿ ವಿವರಿಸಿದ್ದಾರೆ. 

'ನಾಗರಿಕ ಸಮಾಜದ ಕರಾಳ ಚಹರೆ' ಎಂಬ ಪ್ರಬಂಧದಲ್ಲಿ ಮಕ್ಕಳ ಶೋಷಣೆ (ಚೈಲ್ಡ್ ಅಬ್ಯುಸ್) ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ವಿಷಯ ಪರಿಣಿತರಿಗೆ ಮಾಹಿತಿ ಮತ್ತು ನಿರೂಪಣೆ ಸುಲಭ. ಪರಿಣತರಲ್ಲದವರಿಗೆ ವಿಷಯ ಸಂಗ್ರಹಣೆ ಮತ್ತು ನಿರೂಪಣೆ ಕಷ್ಟ ಸಾಧ್ಯವೆನಿಸಬಹುದು. ಈ ರೀತಿಯ ವಿಷಯ ಪರಿಣಿತ ಲೇಖಕರು ನಮ್ಮಲ್ಲಿ ವಿರಳ. ಇಂಥಹ ಲೇಖಕರ ಸಂಖ್ಯೆ ಬೆಳೆಯಬೇಕು.

ಧರ್ಮ ನಿರಪೇಕ್ಷತೆಯ (Secularism) ಬಗೆಗಿನ ಪ್ರಬಂಧಗಳಾದ 'ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆ', 'ಇಂಗ್ಲೆಂಡ್ ಜನತೆಯ ಧರ್ಮ ನಿರಾಸಕ್ತಿ...' ಮುಂತಾದವುಗಳಲ್ಲಿ ಮತ/ಧರ್ಮಗಳಾಚರಣೆ ನಂಬಿಕೆಗಳು ವೈಯುಕ್ತಿಕ ವಾಗಿರಬೇಕೆಂದೂ,  ನಿತ್ಯದ ವ್ಯವಹಾರಗಳಲ್ಲಿ ಬೆರಸಿ ಪಕ್ಷಪಾತ ಭಾವನೆ ಸಲ್ಲದೆಂಬ ವಾದವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಲಾಗಿದೆ.  'ನಮ್ಮ ನಿಮ್ಮ ಪ್ರೊಫೆಸರ್ ನಿಸಾರ್ ಅಹಮದ್' ಎಂಬ ಲೇಖನದಲ್ಲಿ ಪ್ರತಿಭಾವಂತ ಕವಿಯೊಬ್ಬರ ಪರಕೀಯ ಭಾವ ಹಾಗೂ ಅನಾಥ ಪ್ರಜ್ಞೆಯ ಲಕ್ಷಣಗಳನ್ನು ಗುರುತಿಸಿ, ವಲಸಿಗರೂ ಕೂಡ ಇಂತಹಾ ಮನಸ್ಥಿತಿ/ಭಾವನೆಗಳಿಂದ ತೊಳಲಾಡುವ ಪರಿಸ್ಥಿತಿಯನ್ನು ಮನೋಜ್ಞವಾಗಿ ವರ್ಣಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಹಾರೋಪಾಯವಾಗಿ ಬಸವತತ್ವಗಳನುಷ್ಠಾನ ಸಮಯೋಚಿತವಾಗಿರುವುದನ್ನು ಅವರ ಕೆಲವು ವಚನಗಳ ಆಧಾರದಿಂದ ಸ್ಪಷ್ಟವಾಗಿ ಮೂಡಿಸಲಾಗಿದೆ ('ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ' ಎಂಬ ಪ್ರಬಂಧ).

'ವಲಸೆ ಎಂಬ ಕನಸಿನಲ್ಲಿನ ನೋವು ನಲಿವುಗಳು' - ಈ ಪ್ರಬಂಧದಲ್ಲಿ ವಲಸೆಗಾರರ ಒಳತೋಟಿ, ಆಳವಾಗಿ ಬೇರೂರಿದ ಸ್ವದೇಶಪ್ರೇಮ, ಹೊಸ ಪರಿಸರದಲ್ಲಿ ಹೊಂದಾಣಿಕೆಯ ಕಷ್ಟ, ಅನಿವಾಸಿಗಳ ದ್ವಂದ್ವ ಮನೋವಿನ್ಯಾಸದ ಹೊಳಹು ಇತ್ಯಾದಿ ವಿಷಯಗಳನ್ನು ಕೂಲಂಕುಶವಾಗಿ ಚರ್ಚಿಸಿ, ದೇಶ ವಿದೇಶಗಳ ಗಡಿತೊಡೆದು 'ವಿಶ್ವಮಾನವ ಸಂಸ್ಕೃತಿ' ಮತ್ತು ಭಾವನೆಗಳನ್ನು ಬೆಳಸಿಕೊಳ್ಳಬೇಕಾಗಿರುವುದನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.

ಪ್ರವಾಸ ಕಥನ ಮತ್ತದರ ಮೇಲಿನ ಸೃಜನಾತ್ಮಕ ವಿಮರ್ಶೆಗಳ ಬಗ್ಗೆ ಬರೆದಿರುವ ಲೇಖನಗಳು, ' ಲೇಕ್ ಡಿಸ್ಟ್ರಿಕ್ಟಿನ ಶಿಖರಗಳಲ್ಲಿ ' ಮತ್ತು ' ನೋಟಗಳ ನಡುವಿನ ನಿರ್ದಿಷ್ಟ ನಿಲುವುಗಳು '. ಮೊದಲ ಪ್ರಬಂಧದಲ್ಲಿ ಲೇಖಕ ದಂಪತಿಗಳ ಪ್ರಕೃತಿ ಸೌಂದರ್ಯೋಪಸನಾ ಪ್ರಜ್ಞೆ  ಮತ್ತು  ಪ್ರವಾಸಪ್ರಿಯತೆಗಳಿಗೆ ಕೈಗನ್ನಡಿಯಂತಿದೆ. ಇಂಗ್ಲೆಂಡ್ ನಲ್ಲಿಯ ಲೇಕ್ ಡಿಸ್ಟ್ರಿಕ್ಟ್ ನ ಸುಂದರ ಪರಿಸರ, ಮೇರು ಪರ್ವತ ಶ್ರೇಣಿ ಲ್ಯಾಂಗ್ ಡೇಲ್ ಪೈಕ್, ಸ್ಕೆಲ್ವಿಥ್ ಫೋರ್ಸ್ (ಜಲಪಾತ), ಚೇತೋಹಾರಿ ವಿಂಡರ್ ಮಿಯರ್  ಬಟರ್ ಮಿಯರ್ ಮತ್ತು ಮನೋಹರ ತಾಣ ಎಲ್ಟರ್ ವಾಟರ್ ಸರೋವರಗಳು, ಮತ್ತಿತರ ಸ್ಥಳಗಳ ವರ್ಣನೆ ಕಣ್ಣಿಗೆ ಕಟ್ಟಿದಂತಿದೆ. ಎರಡನೆಯ ಪ್ರಬಂಧದಲ್ಲಿ ಡಾ॥ ಕೆ. ಮರುಳ ಸಿದ್ದಪ್ಪ (ಕೆ. ಎಂ. ಎಸ್.) ಅವರ ಪ್ರವಾಸ ಕಥನದ ಪುಸ್ತಕದ ಬಗೆಗಿನ ಲೇಖರ ಅನಿಸಿಕೆಗಳನ್ನು ದಾಖಲಿಸುತ್ತಾ, ಶ್ರೀ ಜಿ. ಎಸ್. ಎಸ್. ಅವರ 'ಇಂಗ್ಲೆಂಡಿನಲ್ಲಿ ಚತುರ್ಮಾಸ' ಎಂಬ ಪ್ರವಾಸ ಕಥನದ ಪುಸ್ತಕದ ಬಗ್ಗೆ ಹೇಳುತ್ತಾ, ಇಳಿ ವಯಸ್ಸಿನಲ್ಲೂ ಪ್ರವಾಸ ಪ್ರಿಯರಾಗಿದ್ದುದು ಮತ್ತವರ ಪ್ರವಾಸ ಪ್ರಿಯರಲ್ಲದವರ ನಿರುತ್ಸಾಹ ' ವಿನಾಯಕ ಪ್ರಜ್ಞೆ ' ಎಂಬ ಉಲ್ಲೇಖ  ನೆನಪಿಸಿಕೊಂಡು ಹೊಸ ಭಾಷಾವೈಶಿಷ್ಟ ವೊಂದನ್ನು ಛಾಪಿಸಿದ್ದಾರೆ.

ವ್ಯಕ್ತಿ ಚಿತ್ರ (ಪರಿಚಯಾತ್ಮಕ) ಲೇಖನಗಳಾದ  'ನನ್ನ ನೆನಪಿನಲ್ಲಿ ಮಾಸ್ಟರ್ ಹಿರಣ್ಣಯ್ಯ' ಮತ್ತು ' ಪ್ರಧಾನಿ ರಿಷಿ ಸುನಾಕ್ - ಬ್ರಿಟನ್ ಕಂಡ ಅಪೂರ್ವ ಪ್ರತಿಭೆ', ಸುಂದರವಾಗಿ ಮೂಡಿ ಬಂದಿವೆ. ಮೊದಲ ಪ್ರಬಂಧದಲ್ಲಿ ಕೊನೆಯಲ್ಲಿ ಉದ್ಧರಿತ ಮಾಸ್ಟರ್ ಹಿರಣ್ಣಯ್ಯನವರ ಉಲ್ಲೇಖ ಅವರ ಸರಳ ವ್ಯಕ್ತಿತ್ವಕ್ಕೆ ಸಂದರ್ಭೋಚಿತವಾಗಿ ಹೊಂದಿಕೊಂಡಿದೆ. ಎರಡನೆಯ ಪ್ರಬಂಧದಲ್ಲಿ ಆಂಗ್ಲ ಜನಾಂಗದ ಹೊರಗಿನ ಭಾರತೀಯ ಮೂಲದ ಒಬ್ಬ ವ್ಯಕ್ತಿ ಬ್ರಿಟನ್ನಿನ ಪ್ರಧಾನಿ ಪಟ್ಟಕ್ಕೇರಿರುವುದು, ಆ ದೇಶದಲ್ಲಿನ ಜನರ ವಿಶಾಲ ಮನೋಭಾವ, ಅಲ್ಲಿ ವ್ಯಕ್ತಿಗತ  ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಸಿಗುವ ಮಹತ್ವಗಳನ್ನು ಬಿಂಬಿಸುತ್ತವೆ. ಲೇಖಕರು ಜಗತ್ತಿನ ಇಂತಹ ಇನ್ನಿತರ ರಾಜಕೀಯ ನಾಯಕರ ಉದಾಹರಣೆ ನೀಡುತ್ತಾ ಮತ್ತೊಮ್ಮೆ  'ವಿಶ್ವ ಮಾನವ ಸಂಸ್ಕೃತಿ'ಯನ್ನು ವಿಶ್ಲೇಷಿಸುತ್ತಾರೆ.

 ವಿಮರ್ಶಾತ್ಮಕ ಲೇಖನಗಳಾದ 'ಬಳ್ಳಿಗೆ ಕಾಯಿ ಭಾರವೆ' ಮತ್ತು 'ಬಾಂಬೆ ಬೇಗಂ' ಕ್ರಮವಾಗಿ ಚಲನಚಿತ್ರ ಹಾಗೂ ದೂರದರ್ಶನದ ಧಾರಾವಾಹಿಗಳ ಸೃಜನಶೀಲವಾದ ಬರಹಗಳಾಗಿವೆ. ಲೇಖಕರ ಮಾನವೀಯ ಕಾಳಜಿಗಳ ಅನಾವರಣವಾಗಿವೆ.

ಇನ್ನಳಿದ ಪ್ರಬಂಧಗಳೆಲ್ಲವೂ ಆಸಕ್ತಿದಾಯಕವಾಗಿದ್ದು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಈ ಪ್ರಬಂಧಗಳಲ್ಲಿ ಎಲ್ಲೆಲ್ಲೂ ಲೇಖಕರ ಕನ್ನಡ ಪ್ರೇಮ ಹಾಸುಹೊಕ್ಕಾಗಿ ಸೇರಿದೆ.

ವಿವಿಧ ವಸ್ತು ವಿಷಯಗಳನ್ನೊಳಗೊಂಡಿರುವ ಈ ಪ್ರಬಂಧಗಳು ಲೇಖಕರ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಸಫಲವಾಗಿವೆ.

***