ಪ್ರೇಮಲತಾಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾಸಂಕಲನ – ಕೆಲವುಅನಿಸಿಕೆಗಳು

ಡಾ.ಜಿ.ಎಸ್.ಶಿವಪ್ರಸಾದ್

ಪ್ರೇಮಲತಾ ಅವರ 'ನಂಬಿಕೆಯೆಂಬ ಗಾಳಿಕೊಡೆ'  ಕಥಾ ಸಂಕಲನವನ್ನು ಇತ್ತೀಚಿಗೆ ಓದಿ ಮುಗಿಸಿ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಈ ಕೃತಿಯನ್ನು ಈಗಾಗಲೇ ಓದಿರುವವರಿಗೆ ಈ ನನ್ನ ಬರಹ ಹೊಸ ದೃಷ್ಟಿ ಕೋನಗಳನ್ನು ನೀಡಬಹುದು. ಇನ್ನು ಓದಬೇಕು ಎಂಬ ಆಕಾಂಕ್ಷೆ ಉಳ್ಳವರಿಗೆ ಈ ಲೇಖನ ಪ್ರವೇಶ ಪರಿಚಯವನ್ನು ಒದಗಿಸಬಹುದು. ಲೇಖಕ/ಲೇಖಕಿಯರಿಗೆ ತಾವು ಬರೆದ ಕೃತಿಯನ್ನು ಇತರರು ಓದಿದರೆ ಅದರಿಂದ ಉಂಟಾಗುವ ಸಂತಸ ತೃಪ್ತಿ ಒಂದು ಕಡೆಯಾದರೆ, ಆ ಕೃತಿಯನ್ನು ಓದಿ ಅದರ ಬಗ್ಗೆ ಚರ್ಚೆ ನಡೆದಲ್ಲಿ ಅವರಿಗೆ ಸಾರ್ಥಕತೆಯ ಭಾವ ಉಂಟಾಗಬಹುದು. ಒಂದು ಕೃತಿಯ ವಿಷಯ ವಸ್ತು, ಆಳ ಮತ್ತು ವಿಸ್ತಾರಗಳು ಈ ಅಂಶಗಳನ್ನು ನಿರ್ಧರಿಸಬಹುದು.  ಬರಹಗಾರರಿಗೆ ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಇರಲಾರದು. ಇನ್ನು ಕೆಲವು ಕರ್ತೃಗಳು "ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ" ಎಂಬ ನಿರ್ಲಿಪ್ತ ನಿಲುವಿನಲ್ಲಿ ತಮ್ಮ ಒಂದು ಆತ್ಮ ತೃಪ್ತಿಗೆ ಬರವಣಿಗೆಯನ್ನು ಮುಂದುವರಿಸಬಹುದು. ಅನಿವಾಸಿ ನೆಲದಲ್ಲಿ ಮೂಡಿ ಬರುವ ಕನ್ನಡ ಕೃತಿಗಳನ್ನು ಇಲ್ಲಿಯ ಓದುಗರು ಓದಿ ಉತ್ತೇಜಿಸುವುದು, ಸಾಧ್ಯವಾದಲ್ಲಿ ಚರ್ಚೆಗೆ ಒಳಪಡಿಸುವುದು ಅಗತ್ಯವಷ್ಟೇ ಅಲ್ಲ, ಅದು ಅನಿವಾಸಿ  ಕನ್ನಡಿಗರ ಜವಾಬ್ದಾರಿಯೂ ಹೌದು. ಇದನ್ನು ನಮ್ಮ ಅನಿವಾಸಿ ದಶಮಾನೋತ್ಸವ ಸಂದರ್ಭದಲ್ಲಿ ಅನುಷ್ಠಾನಕ್ಕೆ ತರಲಾಯಿತು. ಸಮಯೋಚಿತವಾಗಿ ವಾಟ್ಸ್ ಆಪಿನಲ್ಲೂ ಚರ್ಚೆ ಮಾಡುಕೊಳ್ಳುತ್ತ ಬಂದಿದ್ದೇವೆ. ನನ್ನ ಒಂದು ಸಣ್ಣ ಕಾಣಿಕೆ ಈ ಬರಹದ ರೂಪದಲ್ಲಿ ಅಭಿವ್ಯಕ್ತಗೊಂಡಿದೆ. ಇಲ್ಲಿ ಸಣ್ಣಕಥೆಗಳ ಬಗ್ಗೆ ನನ್ನ ಕೆಲವು ಸಾರ್ವತ್ರಿಕ ಅನಿಸಿಕೆಗಳನ್ನು ಬೆಸೆಯಲಾಗಿದೆ. 

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಹೊಸ ವರ್ಷದಲ್ಲಿ ಇನ್ನೂ ಹೆಚ್ಚಿನ ಹೊಸ ಕೃತಿಗಳು ಹೊರಬಂದು ಸೃಜನಶೀಲತೆ ವಿಜೃಂಭಿಸಲಿ

-ಸಂ
ಪ್ರೇಮಲತಾ ಅವರು ದಶಕಗಳಿಂದ ಸಣ್ಣ ಕಥೆಗಳನ್ನು ಬರೆದು ಸುಧಾ, ಮಯೂರ ಮುಂತಾದ ಸಂಚಿಕೆಗಳಲ್ಲಿ ಪ್ರಕಟಿಸಿದ್ದಾರೆ. ಹಾಗೆ ಮೂರು ಕಥಾಸಂಕಲನಗಳನ್ನು ಈಗಾಗಲೇ ಪ್ರಕಟಿಸಿ ಖ್ಯಾತರಾಗಿದ್ದಾರೆ. ಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾ ಸಂಕಲನವು ವೀರಲೋಕ ಪ್ರಕಾಶನದಿಂದ ೨೦೨೩ರಲ್ಲಿ ಲೋಕಾರ್ಪಣೆಗೊಂಡಿದೆ. ಇಲ್ಲಿ ೧೦ ಸಣ್ಣ ಕಥೆಗಳಿವೆ. ಪುಸ್ತಕ ತರಿಸಿಕೊಂಡು ಹಲವಾರು ದಿನಗಳು ಕಳೆದಿದ್ದರೂ ಈಗ ಸಮಯ ಒದಗಿಬಂದು ಇತ್ತೀಚಿಗಷ್ಟೇ ಓದಿ ಮುಗಿಸಿ, ನನ್ನ ಕೆಲವು ಪ್ರಾಮಾಣಿಕ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಇದೊಂದು ವಿಮರ್ಶೆಯಾಗಿ ಮೂಡಿ ಬಂದಿದ್ದರೆ ಹಾಗೂ ಇರಲಿ. 

ಈ ಸಂಕಲನದ ಶೀರ್ಷಿಕೆ ಮತ್ತು ಮುಖಪುಟ ಇಲ್ಲಿಯ ಕಥೆಗಳ ರೂಪಕದಂತೆ ನಿಂತಿದೆ. ಸ್ವತಃ ಲೇಖಕಿ ತಮ್ಮ ಅರಿಕೆಯಲ್ಲಿ ಪ್ರಸ್ತಾಪಿಸಿರುವಂತೆ "ನಂಬಿಕೆಗಳೇ ಜೀವನಕ್ಕೆ ಆಧಾರ, ಬದುಕೇ ಒಂದು ನಂಬಿಕೆ" ಬದುಕಿನ ಹಲವಾರು ಸನ್ನಿವೇಶಗಳಲ್ಲಿ ಈ ನಂಬಿಕೆ ಎನ್ನುವುದು ಚುಕ್ಕಾಣಿಯಾಗಿ ನಮ್ಮ ದಿಕ್ಕು ದೆಸೆಗಳನ್ನು ಬದಲಾಯಿಸುತ್ತದೆ ಎಂಬ ವಿಚಾರ ಸೋಜಿಗವಾದದ್ದು. ಕ್ರಿಸ್ತ್ಮಸ್ ಸಮಯದಲ್ಲಿ ಒಬ್ಬ ಎಳೆ ಬಾಲಕ ರಾತ್ರಿ ತಾನು ಮಲಗಿದ್ದ ಸಮಯದಲ್ಲಿ ಸ್ಯಾಂಟಕ್ಲೌಸ್ ಬಂದು ತನಗೆ ಉಡುಗೊರೆಯನ್ನು ಕೊಡುತ್ತಾನೆ ಎನ್ನುವ ನಿರೀಕ್ಷೆ ಒಂದು ನಂಬಿಕೆಯಾದರೆ, ಬೆನ್ನಿಗೆ ಬಾಂಬು ಕಟ್ಟಿಕೊಂಡಿರುವ ತರುಣ ಭಯೋತ್ಪಾದಕ ತಾನು ಜಿಹಾದಿನಲ್ಲಿ ಮಡಿದರೆ ಪರಲೋಕದಲ್ಲಿ ಅಪ್ಸರೆಯನ್ನು ಕೂಡಬಹುದು ಎಂಬ ಅವನ ನಿರೀಕ್ಷೆಯೂ ನಂಬಿಕೆಯೇ. ಆದರೆ ಈ ರೀತಿಯ ನಂಬಿಕೆಗಳ ಪರಿಣಾಮಗಳೇನು ಎಂಬುದು ಮುಖ್ಯವಾದ ಪ್ರಶ್ನೆ. ನಂಬಿಕೆ ಮತ್ತು ತರ್ಕ, ವೈಚಾರಿಕತೆ, ವಿಜ್ಞಾನ ಇವುಗಳ ಮುಖ ಮುಖಿಯನ್ನು ಈಗಾಗಲೇ ಹಲವಾರು ಕಥೆ, ಕಾದಂಬರಿ ಮತ್ತು ಸಿನಿಮಾಗಳು ಶೋಧಿಸಿವೆ. ಪ್ರೇಮಲತಾ ಅವರೂ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ಸಂಬಂಧಗಳನ್ನು ಬೆಸೆಯುವುದು ಈ ನಂಬಿಕೆಗಳೇ. ಒಬ್ಬ ಬರಹಗಾರನಿಗೂ ತನ್ನ ಬರಹ ಓದುಗರ ಗ್ರಹಿಕೆಗೆ, ನಿರೀಕ್ಷೆಗೆ ನಿಲುಕಬಹುದು ಎನ್ನುವ ಹಂಬಲವೂ ಈ ನಂಬಿಕೆಯನ್ನು ಆಧರಿಸಿರುತ್ತದೆ. ಈ ಸಂಕಲನದ ಹಲವಾರು ಕಥೆಗಳ ಭೂಮಿಕೆ ಒಂದಲ್ಲ ಒಂದು ರೀತಿ ಆ ನಂಬಿಕೆಗೆ ಸಂಬಂಧಿಸಿದ್ದು.

ಕಥೆ ಹುಟ್ಟುವುದೇ ಜೀವನದ ಅನುಭವಗಳ ಮೇಲೆ. ಅದು ಬರಹಗಾರನ ವೈಯುಕ್ತಿಕ ಜೀವನ ಅನುಭವವಾಗಿರಬಹುದು, ಇಲ್ಲವೇ ಬರಹಗಾರ ಕಂಡು ಕೇಳಿದ ಅನುಭವವಾಗಿರಬಹುದು. ಈ ಅನುಭವ ಸಾಮಾನ್ಯನಿಗೆ ಒಂದು ಸಾಧಾರಣ ಘಟನೆ, ಸನ್ನಿವೇಶದಂತೆ ಕಂಡರೂ ಸೃಜನಶೀಲ ಲೇಖಕ, ಲೇಖಕಿಯರು ತಮ್ಮ ಅಪ್ರತಿಮ ಕಲ್ಪನಾ ಶಕ್ತಿಯಿಂದ ಆ ಘಟನೆಯನ್ನು ಗ್ರಹಿಸಿ ಅದಕ್ಕೆ ರೆಕ್ಕೆ, ಪುಕ್ಕ, ಮಾಂಸ, ಎಲಬುಗಳನ್ನು ಜೋಡಿಸಿ ಒಂದು ಸುಂದರ ಕಲಾಕೃತಿಯನ್ನು ಕಡೆದು ನಿಲ್ಲಿಸುತ್ತಾರೆ. ಆ ಪ್ರತಿಭೆ ಪ್ರೇಮಲತಾ ಅವರಿಗೆ ನಿಜವಾಗಿಯೂ ಪ್ರಾಪ್ತವಾಗಿದೆ.

ಬದುಕಿನ ಪ್ರಸಂಗಗಳ ಚಿತ್ರವೇ ಸಣ್ಣ ಕಥೆಯ ಬುನಾದಿ, ಹೀಗಾಗಿ ಸಣ್ಣ ಕಥೆಗಳಲ್ಲಿ, ಕೆಲವೇ ಪುಟಗಳಲ್ಲಿ ಕಥೆಯನ್ನು ಹೇಳಿ ಮುಗಿಸಬೇಕಾದ ಒತ್ತಡ ಇರುವುದರಿಂದ ಇಲ್ಲಿ ಹೆಚ್ಚು ಪಾತ್ರಗಳನ್ನು ತರಲು ಅವಕಾಶವಿಲ್ಲ ಮತ್ತು ಇಲ್ಲಿ ಪಾತ್ರಗಳನ್ನು ಆಳವಾಗಿ ಪೋಷಿಸಲು ಸಾಧ್ಯವಿಲ್ಲ. ಕಾದಂಬರಿಯಲ್ಲಿ ಈ ನಿರ್ಬಂಧೆನೆಗಳು ಇರುವುದಿಲ್ಲ. ಕಾದಂಬರಿಗಳಲ್ಲಿ ಕಾಣುವ ಆಳ, ವಿಸ್ತಾರಗಳನ್ನು ಸಣ್ಣ ಕಥೆಗಳಲ್ಲಿ ತರಲು ಸಾಧ್ಯವಿಲ್ಲವಾದರೂ ಸಣ್ಣ ಕಥೆಗಳ ಅನುಕೂಲವೆಂದರೆ ಇಲ್ಲಿ ವಿವಿಧ ಸಾಮಾಜಿಕ ವಿಷಯಗಳನ್ನು ಕಥಾವಸ್ತುವಾಗಿ ಬಳಸ ಬಹುದು, ಹೆಚ್ಚು ವಿಚಾರಗಳನ್ನು ಚಿಂತನೆಗೆ ಒಳಪಡಿಸಬಹುದು. ಕಾದಂಬರಿ ಹರಿಯುವ ನದಿಯಾದರೆ, ಸಣ್ಣ ಕಥೆಗಳು ಕೆರೆಗಳಂತೆ.

ಸಣ್ಣ ಕಥೆಗಳು ಒಡ್ಡುವ ಎಲ್ಲ ಮಿತಿಯೊಳಗೂ ಕೂಡ ಪ್ರೇಮಲತಾ ಅವರು ಸನ್ನಿವೇಶಗಳ ಜೊತೆ ಜೊತೆಗೆ ತಮ್ಮ ಕಥಾ ನಾಯಕ ನಾಯಕಿಯರನ್ನು ಪೋಷಿಸಿದ್ದಾರೆ. ಈ ಸಂಕಲನದ "ತೆರವು' ಎಂಬ ಕಥೆಯಲ್ಲಿ ಕರ್ನಾಟಕದ ರಿಯಲ್ ಎಸ್ಟೇಟ್ ಅವ್ಯವಹಾರದಲ್ಲಿ ಸಿಕ್ಕಿಕೊಂಡಿರುವ ದಂಪತಿಗಳ ಸನ್ನಿವೇಶದಲ್ಲಿ ಏನನ್ನೂ ಸಾಧಿಸಲಾರದ ನಾಮರ್ದ ಗಂಡ ಮತ್ತು ಮನೆ-ಮಡದಿಯಾದರೂ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡು ದಿಟ್ಟತನದಿಂದ ಲ್ಯಾನ್ಡ್ ಮಾಫಿಯಾ ಗೂಂಡಾಗಳನ್ನು ನಿಭಾಯಿಸುವ ಗೀತಾಳ ಪಾತ್ರ ಇದಕ್ಕೆ ಸಾಕ್ಷಿಯಾಗಿದೆ. ತೇಜೇಸ್ವಿಯವರ 'ಕಿರಿಗೂರಿನ ಗೈಯಾಳಿಗಳು' ಕಥೆಯನ್ನು ನೆನಪಿಗೆ ತಂದಿದೆ.

ಅನಿವಾಸಿ ಲೇಖಕರು ತಮ್ಮ ಪರಿಸರದ ನೆಲೆಯಲ್ಲಿ ಘಟಿಸುವ ಕಥೆಗಳನ್ನು ದೂರದ ಕನ್ನಡ ನಾಡಿಗೆ ತಿಳಿಸ ಬೇಕೇ ಅಥವಾ ಅವರು ಎಲ್ಲಿದ್ದರೂ, ಎಂತಿದ್ದರೂ ಕನ್ನಡ ನೆಲೆದ ಕಥೆಗಳನ್ನಷ್ಟೇ ಬರೆಯ ಬೇಕೇ ಎಂಬ ಪ್ರಶ್ನೆ ಮೂಡುವುದು ಸಹಜವೇ. ಇಂಗ್ಲೆಂಡಿನಲ್ಲಿ ನಡೆದ ಕಥೆ ಕನ್ನಡ ಜನಕ್ಕೆ ಸಲ್ಲಬಹುದೇ ಎಂತೆಂಬ ಪ್ರಶ್ನೆ ಅನಿವಾಸಿ ಬರಹಗಾರರನ್ನು ಕಾಡುವುದು ಸಹಜ. ಒಬ್ಬ ಲೇಖಕ ಯಾವ ದೇಶ ಕಾಲಮಾನಗಳಲ್ಲಿದ್ದರೂ ಅದು ಮನುಷ್ಯ ಸಂಬಂಧ, ಸಹಜ ಸ್ವಭಾವಗಳ ವೈರುಧ್ಯ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿದ್ದಲ್ಲಿ ಅದು ಎಲ್ಲಾ ದೇಶಕ್ಕೂ ಮತ್ತು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುತ್ತವೆ. ಈ ಕಾರಣಗಳಿಂದ ನಮಗೆ ರಷ್ಯಾದ ಟಾಲ್ಸ್ಟಾಯ್ ಮತ್ತು ಬಂಗಾಳದ ಟ್ಯಾಗೋರ್ ಬರೆದ ಕಥೆಗಳು ಹತ್ತಿರವಾಗುತ್ತವೆ. ಪ್ರೇಮಲತಾ ಅವರು ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡತಿ. ಅವರ ಪರಿಸರ ಇಂಗ್ಲೆಂಡಿನ ಆಂಗ್ಲ ಸಂಸ್ಕೃತಿಗೆ ಸಂಬಂಧಿಸಿದ್ದಾದರೂ ಅವರು ಬರೆಯುವ ಕಥೆಗಳು ನಮ್ಮ ಕನ್ನಡ ನೆಲದ ಕಥೆಗಳಾಗಿವೆ. ಇಲ್ಲಿ ಕರ್ನಾಟಕ ನಗರಗಳ, ಮಲೆನಾಡಿನ ದಟ್ಟ ಕಾಡುಗಳ, ಕಾರ್ಪೊರೇಟ್ ಕಂಪನಿಗಳ ಕಥೆ ಇವೆ. ಇದಕ್ಕೆ ಹೊರತಾಗಿ 'ದ್ರೋಹ' ಎಂಬ ಕಥೆ ಲಂಡನ್ ಮತ್ತು ಸಿರಿಯಾದಲ್ಲಿ ಸಂಭವಿಸುತ್ತದೆ.

ಇನ್ನೊಂದು ವಿಚಾರ; ಕಥೆ ಯಾವುದೇ ನೆಲದಲ್ಲಿ ಹುಟ್ಟಿಕೊಂಡರೂ ಆ ಕಥನ ಪ್ರಪಂಚದ ಬೇರೆಡೆ ಇನ್ನೊಬ್ಬರ ಕಥೆಯಾಗಿರಬಹುದು. ಮನುಷ್ಯನ ಮೂಲಭೂತ ಸ್ವಭಾವಗಳಿಗೆ ಬಣ್ಣ, ಸಂಸ್ಕೃತಿ, ಗಡಿ ರೇಖೆಗಳ ಹಂಗುಂಟೆ? ಈ ಸಂಕಲನದ ಶೀರ್ಷಿಕೆ ಕಥೆಯಾಗಿರುವ ‘ನಂಬಿಕೆಯೆಂಬ ಗಾಳಿಕೊಡೆ’ಯಲ್ಲಿ ಬೆಂಗಳೂರಿನ ಒಂದು ಖಾಸಗಿ ಆಫೀಸಿನ ಉದ್ಯೋಗಿಯ ಬೀಳ್ಕೊಡುಗೆ ಪಾರ್ಟಿಯಲ್ಲಿ ಲಕ್ಷ್ಮಿ ಎಂಬ ವಿವಾಹಿತ ಮಹಿಳೆಗೆ ಅವಳ ಪಾನೀಯದಲ್ಲಿ ಒಬ್ಬ ಕುಹಕಿ ಕದ್ದು ಮುಚ್ಚಿ ಮಾದಕವಸ್ತುವನ್ನು ಸೇರ್ಪಡಿಸಿ (ಸ್ಪೈಕ್ ಮಾಡಿ) ಅದರ ಪರಿಣಾಮವಾಗಿ ಲಕ್ಷ್ಮಿ ನಶೆಯಲ್ಲಿದ್ದಾಗ ಅವಳನ್ನು ಅತ್ಯಾಚಾರಕ್ಕೆ ಒಳಪಡಿಸುತ್ತಾನೆ. ಲಕ್ಷ್ಮಿಯ ಅತ್ಯಾಚಾರವನ್ನು ನಮ್ಮ ಸಮಾಜ ಹೇಗೆ ಗ್ರಹಿಸುತ್ತದೆ, ನಮ್ಮ ವ್ಯವಸ್ಥೆ ಹೇಗೆ ತನಿಖೆ ನಡೆಸುತ್ತವೆ ಮತ್ತು ನಂಬಿಕೆ ಆಧಾರದ ಮೇಲೆ ಜನರ ನಿರೀಕ್ಷೆ ಯಾವ ಯಾವ ರೂಪಗಳನ್ನು ತಳೆಯುತ್ತದೆ, ತನಗೆ ಅತ್ಯಾಚಾರವಾಗಿದೆ ಎಂದು ಲಕ್ಷ್ಮಿ ಬಹಿರಂಗವಾಗಿ ಒಪ್ಪಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಆ ವಿಚಾರವನ್ನು ಹಂಚಿಕೊಂಡದ್ದು ಸರಿಯೇ, ತಪ್ಪೇ? ಎಂಬ ವಿಚಾರಗಳ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಆಶ್ಚರ್ಯವೆಂದರೆ ಪ್ರೇಮಲತಾ ಈ ಕಥೆಯನ್ನು ಬರೆದು ನಾಲ್ಕು ವರುಷಗಳಾಗಿವೆ, ಬಹುಶಃ ಅದೇ ಸಮಯದಲ್ಲಿ, ಫ್ರಾನ್ಸ್ ದೇಶದಲ್ಲಿ, ಗೆಜೆಲ್ ಪೆಲಿಕೋ ಎಂಬ ಹಿರಿಯ ಮಹಿಳೆಯ ಸ್ವಂತ ಗಂಡನೇ ಅವಳಿಗೆ ಗೊತ್ತಾಗದಂತೆ ಡ್ರಗ್ಸ್ ಕೊಟ್ಟು ನಶೆಯಲ್ಲಿರುವಾಗ ಅವನು ತನ್ನ ಸ್ನೇಹಿತರನ್ನು ಕರೆದು ಅವಳೊಡನೆ ಸಂಭೋಗಿಸಲು ಉತ್ತೇಜಿಸಿದ. ಅದು ಗೆಜೆಲ್ ಮೇಲೆ ನಡೆದ ಅತ್ಯಾಚಾರವೆನ್ನಬಹುದು. ಅಷ್ಟೇ ಅಲ್ಲ ಈ ಅತ್ಯಾಚಾರವನ್ನು ಅವನು ವಿಡಿಯೋ ಮಾಡಿದ್ದು ಈ ವಿಚಾರ ಇತ್ತೀಚಿಗೆ ಬಹಿರಂಗಗೊಂಡು ಅದರ ತನಿಖೆ ನಡೆಯಿತು, ಈ ಸುದ್ದಿ ಬಿಬಿಸಿ ವಾರ್ತೆಯಲ್ಲಿ ಪ್ರಸಾರಗೊಂಡಿತು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಯಿತು. ನಂಬಿಕೆಯೆಂಬ ಗಾಳಿಕೋಡೆ ಕಥೆಯಲ್ಲೂ ಆಪಾದಿತ, ಲಕ್ಷ್ಮಿ ಮೇಲೆ ನಡೆಸಿದ ಅತ್ಯಾಚಾರವನ್ನು ವಿಡಿಯೋ ಮಾಡಿರುತ್ತಾನೆ. ಇದು ಎಷ್ಟು ಕಾಕತಾಳೀಯವಾಗಿದೆ! ಪ್ರಪಂಚದ ಯಾವುದೋ ಮೂಲೆಯಲ್ಲಿ ಒಬ್ಬ ಕನ್ನಡ ಲೇಖಕಿಯ ಕಲ್ಪನೆಗೆ ದೊರಕಿದ ಕಥೆ, ಇನ್ಯಾವುದೋ ಸಂಸ್ಕೃತಿಯಲ್ಲಿ, ದೇಶದಲ್ಲಿ ಸಂಭವಿಸಿದ ನೈಜ ಘಟನೆಯಾಗಿರುವುದು ಅಚ್ಚರಿಯನ್ನು ಉಂಟುಮಾಡುವಂಥದ್ದು.

ಪ್ರೇಮಲತಾ ಅವರು ಕೈಗೆತ್ತಿಕೊಳ್ಳುವ ಕಥಾವಸ್ತುಗಳು ನಮ್ಮ ನಿಮ್ಮ ಬದುಕಿಗೆ ಬಹಳ ಹತ್ತಿರವಾದದ್ದು. ಅವರ ಕಥೆಗಳಲ್ಲಿ ಪ್ರಾಮಾಣಿಕತೆ ಇದೆ, ಇಲ್ಲಿ ಅಥೆಂಟಿಸಿಟಿ ಇದೆ. ಅವರು ಸಾಮಾಜಿಕ ಸಮಸ್ಯೆಗಳನ್ನು ಅನೇಕ ಸೂಕ್ಷ್ಮ ದೃಷ್ಟಿ ಕೋನಗಳಿಂದ ವಿಶ್ಲೇಷಿಸಿದ್ದಾರೆ, ಇಲ್ಲಿಯ ಕಥೆಗಳು ಹಲವಾರು ಚಿಂತನೆಗಳಿಗೆ ಅನುವು ಮಾಡಿಕೊಡುತ್ತದೆ. ಇಲ್ಲಿ ಅತಿಯಾದ ಭಾವುಕತೆ ಇಲ್ಲ, ಎಲ್ಲ ಸನ್ನಿವೇಶಗಳನ್ನು ಹದವಾಗಿ ನಿರೂಪಿಸಲಾಗಿದೆ. ಇಲ್ಲಿ ಸ್ತ್ರೀ ಭಾವನೆಗಳಷ್ಟೇ ಅಲ್ಲದೆ ಪುರುಷರ ಭಾವನೆಗಳನ್ನು ನಿಭಾಯಿಸಲಾಗಿದೆ. ಇದರ ಉತ್ತಮ ಉದಾಹರಣೆಯನ್ನು 'ಗೊಡ್ಡು' ಎಂಬ ಕಥೆಯಲ್ಲಿ ಕಾಣಬಹುದು. ಸಾಮಾನ್ಯವಾಗಿ ಬಂಜೆತನವೆಂದರೆ ಅದು ಸ್ತ್ರೀಯರಿಗಷ್ಟೇ ಸಂಬಂಧಿಸಿರುವ ವಿಚಾರ ಎಂದು ಸಮಾಜ ನಂಬಿರುತ್ತದೆ. ಮಕ್ಕಳಾಗದ ದಾಂಪತ್ಯದಲ್ಲಿ ಬಹುಪಾಲು ಹೆಂಗಸೇ ಆಪಾದನೆಗೆ ಒಳಗಾಗುವುದನ್ನು ಕಾಣುತ್ತವೆ. ‘ಎಕ್ಸ್ ಎಕ್ಸ್ ವೈ’ (XXY) ಎಂಬ ಗಂಡಸಿನ ಬಂಜೆತನವನ್ನು ಕಥೆಯಲ್ಲಿ ತಂದು ಲೇಖಕಿ ಈ ನಂಬಿಕೆಯನ್ನು ಒಡೆಯುತ್ತಾರೆ. ಕಥಾ ನಾಯಕನಿಗೆ ತನ್ನ ಬಂಜೆ ತನದ ಅರಿವಾದಾಗ ಅವನಿಗೆ ಉಂಟಾಗುವ ಭಾವನೆಗಳ ಏರು ಪೆರುಗಳನ್ನು ಮತ್ತು ತಾನು ನಿಷ್ಪ್ರಯೋಜಕ ಎಂಬ ಮಾನಸಿಕ ತೊಳಲಾಟವನ್ನು ಅತ್ಯಂತ ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಸಮಾಜ ತಾನು ನಂಬಿರುವ ಸಾಮಾಜಿಕ "ಸತ್ಯಗಳನ್ನು" ನಂಬಿಕೆಗಳನ್ನು ಒಡೆದು ತೋರಿಸಿದಾಗ ಉಂಟಾಗುವ ಆಘಾತ ಬಹಳ ಆಳವಾದದ್ದು. ಅದು ಸಮಾಜವನ್ನು ತಿದ್ದುವ ಪ್ರಯತ್ನವೂ ಹೌದು. ಈ ಕಾರಣಕ್ಕಾಗಿ ನಮಗೆ ಪ್ರೇಮಲತಾ ಅವರ ಕಥೆಗಳು ಪ್ರಸ್ತುತವಾಗುತ್ತವೆ.

ಸಣ್ಣ ಕಥೆಗಳು ಎಷ್ಟು ಉದ್ದವಾಗಿರಬೇಕು ಎಂಬುದಕ್ಕೆ ಯಾವುದೇ ಅಳತೆಗೋಲುಗಳಿಲ್ಲ. ಹೇಳಿದಷ್ಟೂ ಕಥೆಯೇ. ಪ್ರೇಮಲತಾ ಅವರ ಕಥೆಗಳು ಕೊಂಚ ದೀರ್ಘವೆನಿಸುತ್ತದೆ. ಇವುಗಳ ನಡುವೆ ‘ನಿರ್ವಾತ’ ಎಂಬ ಕಥೆ ನಿಜವಾಗಿಯೂ ಸಣ್ಣ ಕಥೆ ಎನ್ನಬಹುದು. ಕೆಲವೇ ಪುಟಗಳ ಈ ಕಥೆ 'ಇನ್ಸೆಸ್ಟ್' ಕುರಿತಾಗಿದೆ. ಕಥಾನಾಯಕಿಯ ತಂದೆಯೇ ತನ್ನ ಚಿಕ್ಕ ತಾತನಾಗಿರುವ ಕಥೆ ಪರಿಣಾಮಕಾರಿಯಾಗಿದೆ. ಕನ್ನಡದ ಹಿಂದಿನ ಲೇಖಕರು ಸಲಿಂಗಕಾಮ, ವಿಕೃತ ಕಾಮ, ಅತ್ಯಾಚಾರ ಈ ವಿಚಾರಗಳನ್ನು ಮಡಿವಂತಿಕೆಯಿಂದ ಆಯ್ಕೆ ಮಾಡುತ್ತಿರಲಿಲ್ಲ. ಇದು ಸಾಮಾಜಿಕವಾಗಿ ನಿಷಿದ್ಧವಾದ ವಿಷಯವಾಗಿತ್ತು. ಪ್ರೇಮಲತಾ ಅವರು ಈ ರೀತಿಯ ಬಾಹಿರವಾದ ವಿಚಾರಗಳನ್ನು ಮುನ್ನೆಲೆಗೆ ತಂದಿರುವುದು ಶ್ಲಾಘನೀಯ. ಈ ಪ್ರಯತ್ನವನ್ನು ಇತ್ತೀಚಿನ ಇತರ ಲೇಖಕರೂ ಮಾಡುತ್ತಿದ್ದಾರೆ. ಕಥೆ, ಕಾದಂಬರಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಈ ರೀತಿ ವಿಷಯಗಳನ್ನು ತರುವುದರಿಂದ ಅದು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸಹಾಯವಾಗುತ್ತದೆ. ಇದರಿಂದ ಸಮಾಜದಲ್ಲಿ ಪರಿವರ್ತನೆ ಆಗಬಹುದು, ಆಗದಿರಬಹುದು, ಆದರೆ ಅರಿವನ್ನು ಹೆಚ್ಚಿಸುವುದು ಲೇಖಕರ ಮತ್ತು ಸಿನಿಮಾ ನಿರ್ದೇಶಕರ ಜವಾಬ್ದಾರಿ.

ಪ್ರೇಮಲತಾ, ತಮ್ಮ ಕಥೆಯಲ್ಲಿ ತಂದಿರುವ ಅನೇಕ ಸ್ತ್ರೀ ಪಾತ್ರಗಳನ್ನು ಸಹಜವಾಗಿ ನಿರೂಪಿಸಿದ್ದಾರೆ. ಇಲ್ಲಿಯ ಬಹುತೇಕ ಕಥೆಗಳಲ್ಲಿ ಸ್ತ್ರೀ ಪಾತ್ರ ಪ್ರಧಾನವಾಗಿರುವಂತೆ ತೋರುತ್ತದೆ. ಇಲ್ಲಿ ಅವಳು ಸತ್ಯಕ್ಕಾಗಿ, ನ್ಯಾಯಕ್ಕಾಗಿ, ಪ್ರೀತಿಗಾಗಿ ಎದ್ದು ನಿಲ್ಲುತ್ತಾಳೆ. ಅತ್ಯಾಚಾರಕ್ಕೆ ಒಳಗಾಗಿ ಹಿಂಸೆಯನ್ನು ಅನುಭವಿಸಿ ತನ್ನ ಹೆಸರಿಗೆ ಒದಗಿದ ಕಳಂಕವನ್ನು ಮುಚ್ಚಿಡದೆ, ಇತರ ಸ್ತ್ರೀಯರ ರಕ್ಷಣೆಗಾಗಿ ತನ್ನ ಅತ್ಯಾಚಾರವನ್ನು ಬಹಿರಂಗಗೊಳಿಸುವ ಧೀಮಂತ ಹೆಣ್ಣಾಗಿ ನಿಲ್ಲುತ್ತಾಳೆ. ಗಂಡು ಮತ್ತು ಹೆಣ್ಣು ಉದ್ಯೋಗಿಗಳಿಗೆ ನೀಡುವ ವೇತನದಲ್ಲಿ ಉಂಟಾಗಿರುವ ತರತಮಗಳಿಗಾಗಿ ಹೋರಾಡಲು ನಿಲ್ಲುತ್ತಾಳೆ. ವಿಚ್ಛೇದನ ಪಡೆದ ಹೆಂಗಸಾದರೂ ತನ್ನ ಭಾವಿ ಪತಿಗೆ ಕ್ಯಾನ್ಸರ್ ರೋಗ ತಟ್ಟಿದ್ದಾಗ ಅವನನ್ನು ಬೆಂಬಲಿಸಿ ನಿಂತು ಸಾಂತ್ವನ ನೀಡುವಷ್ಟು ಉದಾರಿಯಾಗಿರುತ್ತಾಳೆ. ಸಾಂಪ್ರದಾಯ ದೃಷ್ಟಿಕೋನಗಳಲ್ಲಿ ಸ್ತ್ರೀ ಪುರುಷನ ಅಧೀನಳು, ಅಬಲೆ, ಗಂಡನ ನೆರಳಲ್ಲಿ ಜೀವಿಸುವವಳು ಎಂತೆಲ್ಲಾ ನಮ್ಮ ಹಿಂದಿನ ಕಥೆ, ಪುರಾಣ, ಕಾದಂಬರಿ ಮತ್ತು ಸಿನಿಮಾಗಳಲ್ಲಿ ಚಿತ್ರಿಸಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಸ್ತ್ರೀಗೆ ತನ್ನದೇ ಅಸ್ತಿತ್ವವಿದೆ, ಅವಳು ತನ್ನ ಸಮಾನ ಹಕ್ಕುಗಳಿಗೆ ನಿಲ್ಲಬಲ್ಲಳು ಎಂಬ ವಿಚಾರವನ್ನು ಇಲ್ಲಿಯ ಕಥೆಗಳಲ್ಲಿ ಕಾಣಬಹುದು. ಜೊತೆಗೆ ಸ್ತ್ರೀ ಒಂದು ಶಕ್ತಿ ಅಷ್ಟೇ ಅಲ್ಲ, ಸ್ನೇಹ, ಪ್ರೀತಿ, ಕರುಣೆ, ಸಹನೆ ಮತ್ತು ಅನುಕಂಪೆಯ ಪ್ರತಿಮೆಯಾಗಿಯೂ ನಿಲ್ಲುತ್ತಾಳೆ.

'ವರ್ತುಲ' ಎಂಬ ಕಥೆ ಬೇರೆ ಕಥೆಗಳಿಗಿಂತ ಭಿನ್ನವಾಗಿ ಎದ್ದು ನಿಲ್ಲುತ್ತದೆ. ಬದುಕೆಂಬ ಸ್ಪರ್ಧೆಯಲ್ಲಿ ನಾವು ಯಶಸ್ಸಿನ ಸಾಧನೆಯಲ್ಲಿ ಸಿಕ್ಕಿಕೊಂಡಿ "ಇರುವುದೆಲ್ಲವ ಬಿಟ್ಟು ಇರದುದರ ಕಡೆ ತುಡಿಯುವ" ನಾಗರೀಕತೆ ಎಂಬ ಖಾಯಿಲೆಯಲ್ಲಿ ನರಳುವವವರ ಚಿತ್ರ ಈ ಕಥೆಯಲ್ಲಿದೆ. ಇಲ್ಲಿ ಪರಿಸರ ನಾಶದ ಬಗ್ಗೆ ಕಾಳಜಿ ಇದೆ. ತೀವ್ರ ಗತಿಯಲ್ಲಿ ಬದಲಾಗಿ ನಿಬಿಡವಾಗಿರುವ ನಗರಗಳ ನಡುವೆ ನಿಡುಸುಯ್ಯುವ ಸ್ವರಗಳ ದನಿಯಿದೆ. "ಹೊಸತಿಗೆ -ಹಳತಿಗೂ, ಒಳ್ಳೆಯದಕ್ಕೂ-ಕೆಟ್ಟದಕ್ಕೂ, ವಿವೇಕಕ್ಕೂ-ಅವಿವೆಕ್ಕಕ್ಕೂ, ಭೂತ-ಭವಿಷ್ಯತ್ತಿಗೂ ಇರುವ ಪರದೆ ಅತಿ ತೆಳುವಾದದ್ದು" ಎಂಬ ಮಾತನ್ನು ಲೇಖಕಿ ಇಲ್ಲಿ ಪ್ರಸ್ತಾಪಿಸುತ್ತಾರೆ. ಈ ಮಾತುಗಳು ಎಲ್ಲರನ್ನು ಕಾಡುವ ವಿಚಾರ. ಹಿಂದೊಮ್ಮೆ ಹಳೆಯದೆಂದು ನಾವೇ ತಿರಸ್ಕರಿಸಿದ ಬದುಕಿನ ರೀತಿಗಳು, ದಿನ ನಿತ್ಯ ಬಳಕೆಯ ವಸ್ತುಗಳು, ಮಣ್ಣಿನ ವಾಸನೆ, ನಿಸರ್ಗದ ತಾಜಾತನ ಕಾಲದ ವರ್ತುಲದಲ್ಲಿ ಕಳೆದು ಹೋಗಿ ಮತ್ತೆ ನಮಗೆ ಅದೇ ಹಳೆತಿನ ಬಗ್ಗೆ ಹೊಸ ವ್ಯಾಮೋಹ ಹುಟ್ಟಿಕೊಳ್ಳುವ ಪರಿ ಸೋಜಿಗವಾದದ್ದು. ಈ ವರ್ತುಲದಲ್ಲಿ ಮೊದಲಾವುದು, ಕೊನೆಯಾವುದು ಎಂಬ ಪ್ರಶ್ನೆ ಕಾಡುತ್ತದೆ. ಪ್ರಗತಿಯ ನೆಪದಲ್ಲಿ ಎಲ್ಲವನ್ನೂ ಕಬಳಿಸುವ ನಮ್ಮ ದುರಾಸೆಯನ್ನು ಪ್ರೇಮಲತಾ ಅವರು "ಹಾವೊಂದು ತನ್ನ ಬಾಲದಿಂದ ಶುರು ಮಾಡಿ ತನ್ನನ್ನು ತಾನೇ ಕಬಳಿಸುವ" ದುರಂತ ಪ್ರಯತ್ನದ ರೂಪಕವನ್ನು ಇಲ್ಲಿ ಇಟ್ಟಿದ್ದು ಅದು ಬಹಳ ಅರ್ಥಪೂರ್ಣವಾಗಿದೆ.

ಈ ಕಥಾ ಸಂಕಲನದ ಕಥಾ ನಿರೂಪಣೆ ಕೆಲವೆಡೆ ಸರಳವಾಗಿರಬಹುದಿತ್ತು. ಹಿಂದು-ಮುಂದಿಲ್ಲದೆ ಏಕಾಏಕಿ ಇಬ್ಬರ ನಡುವಿನ ಸಂಭಾಷಣೆಯೊಂದಿಗೆ ಶುರುವಾಗುವ ಕಥೆ ಓದುಗನಲ್ಲಿ ಗೊಂದಲ ಉಂಟುಮಾಡಬಹುದು. ಸಾರ್ವತ್ರಿಕವಾಗಿ ಹೇಳುವುದಾದರೆ ಓದುಗನನ್ನು ಕಥೆಯ ಆವರಣದೊಳಗೆ ಬರಮಾಡಿಕೊಳ್ಳುವ ಬಗ್ಗೆ ಲೇಖಕರು ಎಚ್ಚರಿಕೆ ವಹಿಸಬೇಕು. ಹೀಗಾಗಿ ಕಥೆಯ ಪ್ರವೇಶ ಸರಾಗವಾಗಿದ್ದಾರೆ ಒಳಿತು. ಕಥೆಯ ನಿರೂಪಕರೇ ಕಥೆಗೆ ಒಂದಿಷ್ಟು ಹಿನ್ನೆಲೆಯನ್ನು ಕೊಟ್ಟು ಪಾತ್ರಗಳನ್ನು ಸಾವಧಾನವಾಗಿ ಪರಿಚಯಿಸಿದರೆ ನಂತರ ಸಂಭಾಷಣೆಯನ್ನು ಗ್ರಹಿಸುವುದಕ್ಕೆ ಸರಾಗವಾಗುತ್ತದೆ ಎಂಬುದು ನನ್ನ ಅನಿಸಿಕೆ. ನಾವೆಲ್ಲಾ ಹಿಂದೆ ಓದಿರುವ ಜನಪ್ರಿಯ ಕಥೆ ಕಾದಂಬರಿಯಲ್ಲಿ ಕಥಾ ವಸ್ತುವನ್ನು ಫ್ಲಾಶ್ ಬ್ಯಾಕ್ ಮಾದರಿಯಲ್ಲಿ ಹಿಂದು ಮುಂದೆ ಮಾಡುವ ತಂತ್ರವನ್ನು ನೋಡಿದ್ದೇವೆ. ಇದು ದೃಶ್ಯ ಮಾಧ್ಯಮಗಳಲ್ಲಿ ಗ್ರಹಿಸುವುದು ಸುಲಭ ಆದರೆ ಬರಹದಲ್ಲಿ ಬಳಸಿದಾಗ ಕಥೆಯನ್ನು ಗ್ರಹಿಸುವುದು ಕಷ್ಟದ ಕೆಲಸ. ಈ ತಂತ್ರ ಸಣ್ಣ ಕಥೆಗಳಲ್ಲಿ ಅಷ್ಟು ಪ್ರಯೋಜನಕ್ಕೆ ಬರದಿದ್ದರೂ ಅದನ್ನು ಕಾದಂಬರಿಗಳಲ್ಲಿ ಅಗತ್ಯವಿದ್ದಾಗ ತರಬಹುದು. ಅಂದಹಾಗೆ ಈ ಕೃತಿಯಲ್ಲಿ ಆ ಫ್ಲಾಶ್ ಬ್ಯಾಕ್ ಗಳಿಲ್ಲ.

ಪ್ರೇಮಲತಾ ಬಳೆಸಿರುವ ಭಾಷೆ ಬಹಳ ಉತ್ಕೃಷ್ಟವಾಗಿದೆ. ಅವರಿಗೆ ಕನ್ನಡ ಭಾಷೆಯ ಮೇಲಿರುವ ಹತೋಟಿ ಇಲ್ಲಿ ಎದ್ದು ತೋರುತ್ತದೆ. ಸಂಕೀರ್ಣವಾಗಿರುವ ವೈದ್ಯಕೀಯ ವಿಷಯಗಳನ್ನು ಸರಳಗೊಳಿಸಿ ಕಥೆ ಹೇಳುವ ಸಾಮರ್ಥ್ಯ ಅವರಿಗಿದೆ. ಸಂಬಂಧಗಳು ಎಂಬ ಕೊನೆ ಕಥೆಯಲ್ಲಿ ಮನುಷ್ಯ-ಮನುಷ್ಯ ಸಂಬಂಧಗಳನ್ನು ಕುರಿತಾದ ಕಥಾವಸ್ತು ಇದೆ. ಯಾರು ಯಾರಿಗೆ? ಹೇಗೆ? ಎಲ್ಲಿಯವರೆಗೆ? ಯಾವ ರೀತಿ? ಸಂಬಂಧಿ ಎನ್ನುವ ವಿಚಾರವನ್ನು ಆಳವಾಗಿ ಚಿಂತಿಸಲಾಗಿದೆ. ಸಾವು ಎಂಬ ವಿಷಯವನ್ನು ಅಂತ್ಯಂತ ಸೂಕ್ಷ್ಮವಾಗಿ ನಿಭಾಯಿಸಲಾಗಿದೆ. ಕ್ಯಾನ್ಸರ್ ಪೀಡಿತ ಕಥಾನಾಯಕ ಸಾವನ್ನು ಬರಮಾಡಿಕೊಳ್ಳುವ ಸನ್ನಿವೇಶವನ್ನು ನವುರಾದ ರೂಪಕದೊಂದಿಗೆ ಬಿತ್ತರಿಸಲಾಗಿದ್ದು ಈ ಹಂತದಲ್ಲಿ ಕಥೆ ಮತ್ತು ಕಥಾ ಸಂಕಲನ ಕೊನೆಗೊಳ್ಳುತ್ತದೆ. ಈ ರೀತಿಯ ಉಪಮೆಗಳ ಬಳಕೆ ಇಲ್ಲಿಯ ಕಥೆಗಳಿಗೆ ವಿಶೇಷ ಆಯಾಮಗಳನ್ನು ದೊರಕಿಸಿಕೊಟ್ಟಿದೆ.

ಕಥೆ, ಕಾದಂಬರಿಯನ್ನು ಓದುತ್ತಿರುವಾಗ ಕಥೆಯ ಓಘ, ದಿಕ್ಕು, ಬೆಳವಣಿಗೆ, ಕುತೂಹಲ ಇವುಗಳಲ್ಲಿ ಮಗ್ನರಾಗಿ ಮುಳುಗಿ ಮೇಲೇಳುತ್ತೇವೆ. ಓದು ಮುಗಿದ ನಂತರ ಕೆಲವು ಕಥೆಗಳು ಸರಳ ಕಥೆಗಳಾಗಿ ನೆನಪಿನಿಂದ ಉದುರುತ್ತವೆ. ಇನ್ನು ಕೆಲವು ಕಥೆಗಳು ಹಿನ್ನೋಟದಲ್ಲಿ ಹಲವಾರು ಚಿಂತನೆಗಳಿಗೆ ಅನುವುಮಾಡಿಕೊಡುತ್ತವೆ, ಹೊಸ ಹೊಳಹುಗಳನ್ನು ನೀಡುತ್ತವೆ ಮತ್ತು ನಮ್ಮ ಸ್ಮೃತಿಯಲ್ಲಿ ಧೀರ್ಘ ಕಾಲ ಉಳಿಯುತ್ತವೆ, ಅದರಲ್ಲಿ ಪ್ರೇಮಲತಾ ಅವರ ಈ ಕೃತಿಯೂ ಸೇರಿದೆ.

ಕೃಷ್ಣೆ – ತುಂಗೆಯರ ನಾಡಿನಲ್ಲಿ ಹರಿದಾಸಸಾಹಿತ್ಯ – ಕೆಲವು ಅಂಶಗಳು.

****************************

ಸಾಹಿತ್ಯದ ಮೂಲ ಉದ್ದೇಶವೇ ಜೀವನದ ಮೌಲ್ಯಗಳನ್ನು ತಿಳಿಸಿ ಸಾಮಾನ್ಯರ ಬದುಕನ್ನು ಉದಾತ್ತಗೊಳಿಸುವುದು.  ಕನ್ನಡ ಸಾಹಿತ್ಯದಲ್ಲಿ ಈ ಉದ್ದೇಶ ಶಿವಶರಣರಿಂದಲೂ ಹರಿದಾಸರಿಂದಲೂ ಸಾಧಿತವಾಗಿರುವುದನ್ನು ಕಾಣುತ್ತೇವೆ. ಹರಿದಾಸರ ಸಾಧನೆ ಮೂಲವಾಗಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಆದರೂ ಅವರು ಸಾಮಾಜಿಕ ಜೀವನವನ್ನು ಕಡೆಗಣಿಸಿದವರಲ್ಲ. ಕಾವ್ಯ ಸೃಷ್ಟಿ ಮಾಡುವ ಕವಿ ಸಮಾಜದಿಂದಲೇ ಮೂಡಿ ಬಂದಿರುತ್ತಾನೆ, ಆದ್ದರಿಂದ ಸಮಾಜವನ್ನು ಬಿಟ್ಟು ಪ್ರತ್ಯೇಕವಾಗಿ ಉಳಿದ ಸಾಹಿತ್ಯಕ್ಕೆ ಇಲ್ಲಿ ಅಸ್ತಿತ್ವ ಇಲ್ಲ. ಕಾವ್ಯ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಸಮಾಜ ಮತ್ತು ಸಾಹಿತ್ಯಗಳ ಸಂಬಂಧ ಜೀವಂತವಾಗಿ, ಪರಸ್ಪರ ಪೂರಕವಾಗಿ ಇರಬೇಕಾದ ಅಗತ್ಯ ಇದೆ. 

ಕರ್ನಾಟಕದಲ್ಲಿ ಭಕ್ತಿಯ ಹೊನಲನ್ನು ಜನಸಾಮಾನ್ಯರ ಭಾಷೆ ಕನ್ನಡಕ್ಕೆ ತಂದ ಯಶಸ್ಸು ಶರಣರ ವಚನಗಳು ಮತ್ತು ದಾಸರ ಸಾಹಿತ್ಯಕ್ಕೆ ಸಲ್ಲುತ್ತದೆ. ವಚನಕಾರರ ಮೂಲ ಕಾಳಜಿ ಸಾಮಾಜಿಕವಾಗಿದ್ದರೆ, ದಾಸಸಾಹಿತ್ಯದ ಪ್ರಮುಖ ಧ್ಯೇಯ ಭಕ್ತಿಸಿದ್ಧಾಂತವಾಗಿತ್ತು ಅನ್ನುವುದು ಸ್ಪಷ್ಟ.
ಧರ್ಮದ ಮೂಲಕ ಸಮಾಜವನ್ನು ಕಾಣಲು, ತಿದ್ದಲು ಶರಣರು ಮತ್ತು ದಾಸರು ಈ ಅಗತ್ಯವನ್ನು ಮನಗಂಡರು. ಧರ್ಮ ಮುಖ್ಯ ಮಾಧ್ಯಮವಾದರೆ ಸಮಾಜ ಚಿಂತನೆ ಇವರ ಮುಖ್ಯ ಕಾಳಜಿಯಾಗಿದೆ. ಅಂಧಾಚರಣೆಯ ನಿರ್ಮೂಲನ, ವ್ಯಕ್ತಿತ್ವ ನಿರ್ಮಾಣ, ತನ್ಮೂಲಕ ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೆ ಶರಣರು ಮತ್ತು ದಾಸರು ಯತ್ನಿಸಿದರು. ಈ ಯತ್ನದ ಕಾರಣವಾಗಿ ವಚನಗಳು, ಕೀರ್ತನೆಗಳು, ಸುಳಾದಿ ಮತ್ತು ಉಗಾಭೋಗಗಳು ಮೂಡಿಬಂದವು. ಭಕ್ತಿಸಿದ್ಧಾಂತದ ಜೊತೆಗೆ ಸಚ್ಚಾರಿತ್ರ್ಯ, ಸದಾಚಾರ ಹಾಗೂ ಸಾತ್ವಿಕ ಜೀವನದ ಕಡೆಗೂ ಈ ಸಾಹಿತ್ಯದ ಹರಿವಿದೆ. ಲೋಕ ನೀತಿಯ ಮಾತುಗಳಲ್ಲಿ ಸುಖಜೀವನದ ಸಂದೇಶ ನೀಡುವ ಮೂಲಕ ಸಾರ್ಥಕ ಬದುಕಿನ ಕರೆ ನೀಡಿದ್ದಾರೆ ಎನ್ನುವುದೂ ಸತ್ಯ.

ದಾಸ ಸಾಹಿತ್ಯದಲ್ಲಿ ಹಲವಾರು ರೀತಿಯ ರಚನೆಗಳಿವೆ – ಕೀರ್ತನೆಗಳು, ಸುಳಾದಿ, ಉಗಾಭೋಗಗಳು ಮುಖ್ಯವಾದವು. ಇವೆಲ್ಲ ರಚನೆಗಳು ಮೂಲವಾಗಿ ಸಂಗೀತಕ್ಕೆ ಒಳಪಡುವ ರೂಪದಲ್ಲಿವೆ. ಸುಳಾದಿ ಮತ್ತು ಉಗಾಭೋಗಗಳಿಗೆ ವಚನಸಾಹಿತ್ಯ ಪ್ರಕಾರದ ಪ್ರೇರಣೆ ಇರಬಹುದು ಎನ್ನುವ ಮಾತಿದೆ. ಇನ್ನು ಹಲವರ ಪ್ರಕಾರ ಶಿವಶರಣರ ವಚನಗಳು ಉಕ್ತಿಗಳು, ದಾಸಸಾಹಿತ್ಯ ಗೇಯ ಪ್ರಕಾರ - ಹೀಗಾಗಿ ಸಂಗೀತದ ಛಾಯೆರುತ್ತದೆ ಎನ್ನುವುದು. ಸುಳಾದಿ ಮತ್ತು ಉಗಾಭೋಗಗಳಲ್ಲಿ ಧಾರ್ಮಿಕ ವಿಚಾರಗಳು, ಆಧ್ಯಾತ್ಮಿಕ ತತ್ವಗಳು ಮತ್ತು ದೈವ ಸ್ತುತಿಗಳ ನಿರೂಪಣೆ ಇದೆ. ಭಕ್ತನಾದವನ ಆರ್ತಭಾವ ಮತ್ತೂ ಅಂತರಂಗದರ್ಶನವು ಆಗುತ್ತದೆ.

ಕೃಷ್ಣ ತುಂಗೆಯರ ಮಧ್ಯದಲ್ಲಿರುವ ರಾಯಚೂರು ಜಿಲ್ಲೆ ಹಲವು ರೀತಿಯ ಕಲೆ ಸಾಹಿತ್ಯ. ಸಂಸ್ಕೃತಿಗಳ ನೆಲೆಬೀಡಾಗಿದೆ. ಹರಿದಾಸ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಹರಿದಾಸರ ತೊಟ್ಟಿಲು ಎಂದು ಹೆಸರಾಗಿದೆ.

ಹರಿದಾಸ ಸಾಹಿತ್ಯವನ್ನು ವಿದ್ವಾಂಸರು ಹಲವು ರೀತಿಗಳಲ್ಲಿ ವಿಭಾಗಿಸಿದ್ದಾರೆ. ಶ್ರೀ ರಾ. ಸ್ವಾ. ಪಂಚಮುಖಿಯವರ ಪ್ರಕಾರ 4 ಘಟ್ಟಗಳಿವೆ – 1. ಮಧ್ವಾಚಾರ್ಯರ ಶಿಷ್ಯ ನರಹರಿ ತೀರ್ಥರ ಕಾಲ, 2. ಕೃಷ್ಣದೇವರಾಯನ ಕಾಲ, 3. ವಿಜಯದಾಸರ ಮತ್ತು ಅವರ ಶಿಷ್ಯರ ಕಾಲ ಮತ್ತು 4. ನಂತರದ ಕಾಲ.

ಡಾ. ಆರ್ ಜಿ ಗುಡಿಯವರು ಇದನ್ನೇ 1. ಶ್ರೀಪಾದರಾಜಪೂರ್ವ ಯುಗ (ಕ್ರಿಶ 879-1450), 2. ಶ್ರೀಪಾದರಾಜಯುಗ (ಕ್ರಿಶ 1451-1565), 3. ವಿಜಯದಾಸಯುಗ (ಕ್ರಿಶ 1566-1809) ಮತ್ತು 4. ಶಿಷ್ಯ-ಪ್ರಶಿಷ್ಯ ಯುಗ (ಕ್ರಿಶ 1810 ರಿಂದ ಮುಂದೆ) ಎಂದು ವಿಭಾಗಿಸಿದ್ದಾರೆ.

ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕಾಲವನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ನರಹರಿತೀರ್ಥರಿಂದ ಪುರಂದರ-ಕನಕದಾಸರವರೆಗಿನ ಅವಧಿ, ವಿಜಯದಾಸರಿಂದ ಜಗನ್ನಾಥದಾಸರವರೆಗಿನ ಅವಧಿ ಮತ್ತು ಅವರ ಶಿಷ್ಯ-ಪ್ರಶಿಷ್ಯರ ಅವಧಿ.

ಕನ್ನಡದಲ್ಲಿ ರಚಿತವಾದ ಹರಿದಾಸಸಾಹಿತ್ಯದ ಮೂಲ ಮಧ್ವಾಚಾರ್ಯರ ಶಿಷ್ಯ ನರಹರಿತೀರ್ಥರಿಂದ (ಅಂಕಿತ: ನರಹರಿ / ರಘುಪತಿ) ಆರಂಭವಾದದ್ದು. ಅವರ ರಚನೆಗಳಲ್ಲಿ ನಾಲ್ಕು ಮಾತ್ರ ಈಗ ಲಭ್ಯವಿವೆ (ಎಂತು ಮರುಳಾದೆ, ತಿಳಕೋ ನಿನ್ನೊಳಗೆ ನೀನು, ಹರಿಯೇ ಇದು ಸರಿಯೇ ಮತ್ತು ಎದುರ್ಯಾರೊ ಗುರುವೇ).

ಅದರ ನಂತರದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳಿಂದ ಬತ್ತಿಹೋದಂತೆನಿಸಿದರೂ, ಅರವತ್ತು ಜನ ’ಆದ್ಯ’ರಿಂದ ಮಂದಗಾಮಿಯಾಗಿ ಮುಂದುವರೆಸಲ್ಪಟ್ಟಿತು (ಶ್ರೀ ಗೋರೆಬಾಳು ಹನುಮಂತರಾಯರು / ಕಪಟರಾಳ ಕೃಷ್ಣರಾಯರು). ಸಂಖ್ಯೆಯಲ್ಲಿ ಮಹತ್ವಪೂರ್ಣವಲ್ಲದಿದ್ದರೂ, ಈ ರಚನೆಗಳ ಪ್ರಭಾವ ಪುರಂದರ-ಕನಕರ ಮೇಲೆ ಆಗಿರುವುದಂತೂ ಸತ್ಯ ಎನ್ನುವುದು ವಿದ್ವಾಂಸರ ಅಭಿಪ್ರಾಯ.

ದಾಸಸಾಹಿತ್ಯವಾಹಿನಿ ಅಲ್ಲಿಂದ ಮುಂದೆ ತನ್ನ ಆಳ ವೈಶಾಲ್ಯತೆಗಳನ್ನು ಪಡೆದುಕೊಂಡದ್ದು ಎರಡು ನೂರು ವರ್ಷಗಳ ತರುವಾಯ ಶ್ರೀಪಾದರಾಜರ ಕಾಲದಲ್ಲಿ. ಮುಳುಬಾಗಿಲಿನ ಶ್ರೀಪಾದರಾಜರು ಶ್ರೀರಂಗವಿಟ್ಠಲ ಅನ್ನುವ ಅಂಕಿತದಲ್ಲಿ ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಅವನ್ನು ಪೂಜಾವಿಧಾನಗಳ ಅವಿಭಾಜ್ಯ ಅಂಗವಾಗಿ ಹಾಡಿಸಲೂ ಆರಂಭಿಸಿದರು.

ಶ್ರೀಪಾದರಾಜರ ಶಿಷ್ಯ ವ್ಯಾಸರಾಜರದು ಹರಿದಾಸಸಾಹಿತ್ಯದ ಅಭಿವೃದ್ಧಿಯಲ್ಲಿ ವಿಶೇಷ ಸ್ಥಾನವಿದೆ. ಸಿರಿಕೃಷ್ಣ ಅಂಕಿತದಲ್ಲಿ ಅವರು ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಕೀರ್ತನೆಗಳಿಗೆ ಸಂಗೀತ-ನರ್ತನಗಳ ಸಂಯೋಜನೆ ಇವರ ಕಾಲದಲ್ಲಿ ನಡೆದು, ಕೀರ್ತನೆಗಳು ಜನಪ್ರಿಯವಾದವು. ಮಠಾಧಿಪತಿಗಳೂ, ವಿಜಯನಗರದ ರಾಜಗುರುಗಳೂ ಆಗಿದ್ದ ವ್ಯಾಸರಾಜರು ವ್ಯಾಸಕೂಟ (ಸಂಸ್ಕೃತ ಗ್ರಂಥ-ವ್ಯಾಖ್ಯಾನಕಾರರು) ಮತ್ತು ದಾಸಕೂಟ (ಹರಿದಾಸಸಾಹಿತ್ಯಕಾರರು) ಎರಡಕ್ಕೂ ಸಂರಕ್ಷಕರಾಗಿದ್ದರು.

ವ್ಯಾಸರಾಜರ ಶಿಷ್ಯ ವಾದಿರಾಜರು ಸಂಸ್ಕೃತವಲ್ಲದೇ, ಕನ್ನಡದಲ್ಲೂ ಅನೇಕ ಕೃತಿಗಳನ್ನು ಹಯವದನ ಎಂಬ ಅಂಕಿತದಲ್ಲಿ ರಚಿಸಿದರು. ಜಾನಪದ ಸಾಹಿತ್ಯ ಪ್ರಕಾರಗಳನ್ನೂ ಅಳವಡಿಸಿಕೊಂಡರು ಅಲ್ಲದೇ ತುಳು ಭಾಷೆಯಲ್ಲೂ ರಚನೆಗಳನ್ನು ಮಾಡಿದರು.

ಈ ಹಂತದಲ್ಲಿದ್ದಾಗ, ದಾಸಸಾಹಿತ್ಯವನ್ನು ಶಿಖರಪ್ರಾಯವಾಗಿಸಿದ ಕೀರ್ತಿ ಪುರಂದರದಾಸರು ಮತ್ತು ಕನಕದಾಸರಿಗೆ ಸಲ್ಲಬೇಕು. ಅನೇಕ ಆಯಾಮಗಳಲ್ಲಿ ದಾಸಸಾಹಿತ್ಯದ ಬೆಳವಣಿಗೆ, ಜನಪ್ರಿಯತೆಗೆ ಕಾರಣವಾದ ವಿಜಯನಗರದ ಉಚ್ಛ್ರಾಯದ ಈ ಕಾಲ ’ದಾಸಸಾಹಿತ್ಯದ ಸುವರ್ಣಯುಗ’ ಎನ್ನಿಸಿಕೊಂಡಿತು.

ಅಪಾರ ಕೀರ್ತನೆಗಳನ್ನು, ಸುಳಾದಿಗಳನ್ನು, ಉಗಾಭೋಗ ಮತ್ತಿತರ ಪ್ರಕಾರಗಳನ್ನು ರಚಿಸುವ ಮೂಲಕ ಪುರಂದರದಾಸರು (ಪುರಂದರವಿಟ್ಠಲ) ದಾಸಸಹಿತ್ಯ-ಸಂಗೀತಕ್ಕೆ ಅಪಾರ ಕೊಡುಗೆ ನೀಡಿ ’ಕರ್ನಾಟಕ ಸಂಗೀತದ ಪಿತಾಮಹ’ ಎನ್ನಿಸಿದರು. ತಮ್ಮ ರಚನೆಗಳಲ್ಲಿ ಬುಡುಬುಡುಕೆ ಪದ, ಲಾವಣಿಯಂತಹ ಜಾನಪದ ಮಟ್ಟುಗಳನ್ನು ಧಾರಾಳವಾಗಿ ಬಳಸಿಕೊಂಡರು. ವೇದಾಂತ ಮತ್ತು ಜನಸಾಮಾನ್ಯರನ್ನು ಬೆಸೆದರು.

ಇವರ ಸಮಕಾಲೀನರಾದ ಕನಕದಾಸರು (ಕಾಗಿನೆಲೆಯಾದಿಕೇಶವ) ತಮ್ಮ ವಿಶಿಷ್ಟ ವ್ಯಕ್ತಿತ್ವ, ಕ್ರಾಂತಿಕಾರಿ ಧೋರಣೆ ಹಾಗೂ ಕಾವ್ಯಶಕ್ತಿಗಳಿಂದ ಮಹತ್ವದ ಸ್ಥಾನ ಪಡೆದವರು. ಒಗಟಿನಂತಿರುವ ’ಮುಂಡಿಗೆ’ ಎಂಬ ಹೊಸ ಕಾವ್ಯಪ್ರಕಾರವನ್ನು ದಾಸಸಾಹಿತ್ಯದಲ್ಲಿ ಸೇರಿಸಿದ್ದಲ್ಲದೇ, ಡೊಳ್ಳಿನ ಹಾಡು ಮತ್ತು ಕಣಪದಗಳ ರಚನೆಯಿಂದ ಜಾನಪದದ ಸೊಗಡನ್ನೂ ತಂದರು.

ವಿಜಯನಗರ ಸಾಮ್ರಾಜ್ಯದ ಪತನಾನಂತರ ದಾಸಸಾಹಿತ್ಯವು ತನ್ನ ಅವನತಿಯತ್ತ ಸಾಗಿತು. ಆ ಕಾಲದ ರಾಜಕೀಯ, ಸಾಮಾಜಿಕ ಅಸ್ಥಿರತೆಗಳ ಕಾವು ತಟ್ಟಿದರೂ, ಈ ಸಾಹಿತ್ಯವಾಹಿನಿಯು ಪೂರ್ತಿ ಬತ್ತದೇ ಹರಿಯುತ್ತಿತ್ತು ಅನ್ನುವುದಕ್ಕೆ ಬಿಜಾಪುರ (ಈಗಿನ ವಿಜಯಪುರ) ಪ್ರಾಂತದ ಕಾಖಂಡಕಿ ಮಹಿಪತಿರಾಯರು ಮತ್ತು ಅವರ ಮಗ ಕೃಷ್ಣರಾಯರಿಂದ ರಚಿತವಾದ ಅನೇಕ ಕೃತಿಗಳೇ ಸಾಕ್ಷಿ. ಕೋಲಾಟದ ಪದ, ಕೊರವಂಜಿಯ ಪದ, ಸುಗ್ಗಿಪದಗಳಂತಹ ಜಾನಪದ ಮಟ್ಟುಗಳು ಇವರ ರಚನೆಗಳಲ್ಲಿ ಕಂಡುಬರುತ್ತವೆ.

ಇಲ್ಲಿಂದ ಮುಂದೆ ಹರಿದಾಸಸಾಹಿತ್ಯಕ್ಕೆ ಮತ್ತೆ ಚಾಲನೆ ದೊರೆತದ್ದು ಮಂತ್ರಾಲಯದ ರಾಘವೇಂದ್ರರ (ಕೃಷ್ಣ) ಕಾಲದಲ್ಲಿ. ಹಂಪಿಯಲ್ಲಿ ಕೇಂದ್ರಿತವಾಗಿದ್ದ ಹರಿದಾಸಪಂಥದ ಕೇಂದ್ರ ಮಾನ್ವಿ, ಲಿಂಗಸೂಗೂರು, ಕಾಖಂಡಿಕಿ, ಮಳಖೇಡ ಮೊದಲಾದ ಊರುಗಳಿಗೆ ಹಬ್ಬಿ ಮತ್ತೆ ಬೆಳೆಯತೊಡಗಿತು. ಈ ಸಾಹಿತ್ಯಪ್ರಕಾರವನ್ನು ಮತ್ತೆ ವೈಭವಯುತವಾಗಿಸಿದ್ದು ರಾಯಚೂರು ಜಿಲ್ಲೆಯ ಚೀಕಲಪರವಿ ಗ್ರಾಮದ ವಿಜಯದಾಸರು (ವಿಜಯವಿಟ್ಠಲ). ಭಾವನಾಪ್ರಧಾನವಾಗಿದ್ದ ದಾಸಸಾಹಿತ್ಯ, ಇವರ ಕೃತಿಗಳಲ್ಲಿ ತತ್ವಪ್ರಧಾನವಾಗಿ ಕಂಡುಬರುತ್ತದೆ.

ವಿಜಯದಾಸರ ಸಮಕಾಲೀನರಾದ ಕಾಖಂಡಿಕಿ ಪ್ರಸನ್ನವೆಂಕಟದಾಸರು (ಪ್ರಸನ್ನವೆಂಕಟ), ಶಿಷ್ಯರಾದ ಭಾಗಣ್ಣ (ಗೋಪಾಲವಿಟ್ಠಲ), ತಿಮ್ಮಣ್ಣ (ವೇಣುಗೋಪಾಲ), ಮೋಹನದಾಸರು (ಮೋಹನವಿಠಲ), ಮತ್ತು ಕಲ್ಲೂರು ಸುಬ್ಬಣ್ಣ (ವ್ಯಾಸವಿಠಲ) ಇವರೆಲ್ಲ ತಮ್ಮ ತಮ್ಮ ಕೊಡುಗೆಗಳಿಂದ ದಾಸಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಇವರಲ್ಲಿ ಗೋಪಾಲದಾಸರು (ಭಾಗಣ್ಣ) ವಿಜಯದಾಸರ ತಾತ್ವಿಕವಿಚಾರಧಾರೆಯನ್ನು ಮುಂದುವರಿಸಿದ್ದಲ್ಲದೇ ಸಂಗೀತ, ನರ್ತನ, ಚಿತ್ರಕಲೆಗಳನ್ನೂ ಬಳಸಿಕೊಂಡರು. ಗೋಪಾಲದಾಸರಿಂದ ಪ್ರಭಾವಿತರಾದ ಅವರ ತಮ್ಮಂದಿರಾದ ಸೀನಪ್ಪ (ವರದಗೋಪಾಲವಿಠಲ), ದಾಸಪ್ಪ (ಗುರುಗೋಪಾಲವಿಠಲ), ರಂಗಪ್ಪ (ತಂದೆಗೋಪಾಲವಿಠಲ) ಮತ್ತು ಶಿಷ್ಯ ಐಜಿ ವೆಂಕಟರಾಮಾಚಾರ್ಯ (ವಾಸುದೇವವಿಠಲ) ಅವರೂ ಸಹ ತಮ್ಮನ್ನು ಸಾಹಿತ್ಯಸೇವೆಯಲ್ಲಿ ತೊಡಗಿಸಿಕೊಂಡರು.

ಗೋಪಾಲದಾಸರ ಹೆಸರನ್ನು, ಪರಂಪರೆಯನ್ನು ಉಳಿಸಿದವರಲ್ಲಿ ಜಗನ್ನಾಥದಾಸರು (ಜಗನ್ನಾಥವಿಠಲ) ಪ್ರಮುಖರು. ದಾಸಸಾಹಿತ್ಯ ಪ್ರಕಾರಗಳನ್ನಲ್ಲದೆ ಕನ್ನಡದಲ್ಲಿ ದೊಡ್ಡ ಗ್ರಂಥಗಳನ್ನೂ ರಚಿಸಿದ್ದಾರೆ.

ಅಲ್ಲಿಂದ ಮುಂದೆ, ಹರಿದಾಸಪರಂಪರೆ ಸಾಗಿಬಂದ ದಾಸಪರಂಪರೆಯಲ್ಲಿ ಅನೇಕರು ತಮ್ಮ ಸೇವೆ ಸಲ್ಲಿಸಿದ್ದಾರೆ, ಅವರಲ್ಲಿ ಪ್ರಾಣೇಶದಾಸರು (ಪ್ರಾಣೇಶವಿಠಲ) ಮತ್ತು ಅವರ ಶಿಷ್ಯರ ಪರಂಪರೆಯನ್ನು ಜೀವಂತವಾಗಿಟ್ಟಿರುವ ಅನೇಕ ಹರಿದಾಸರಿದ್ದಾರೆ - ಎಮ್ ಆರ್ ಗೋವಿಂದರಾವ್ (ಗುರುಗವಿಂದವಿಠಲ), ಆರ್ ರಾಮಚಂದ್ರರಾಯರು (ತಂದೆವೆಂಕಟೇಶವಿಠಲ), ಕೋಸಗಿ ಸ್ವಾಮಿರಾಮಾಚಾರ್ಯ (ಶ್ರೀಗುರುಜಗನ್ನಾಥವಿಠಲ), ವಕೀಲ ಸ್ವಾಮಿರಾಯರು (ವರದೇಶವಿಠಲ), ಜೋಳದಹೆಡಗಿ ಶೇಖ್ ಬಡೇಸಾಬ್ (ರಾಮದಾಸ), ವಕೀಲ ಜಿ ಮಧ್ವರಾವ್ (ಮಧ್ವಮುನಿ), ಹೇರೂರು ರಾಮರಾಯರು (ಮೂಲರಾಮ), ಗುರುರಾಜ ಬೆಣಕಲ್ (ನರಹರಿ) ಮತ್ತಿನ್ನೂ ಅನೇಕರನ್ನು ನಾವು ನೆನೆಯಬಹುದು.
ದಾಸಸಾಹಿತ್ಯದಲ್ಲಿ ಮಹಿಳೆಯರು:
ದೈನಂದಿನ ಕಾರ್ಯಕಲಾಪದೊಂದಿಗೆ ದಾಸರ ರಚನೆಗಳನ್ನು ಹಾಡಿಕೊಂಡು ಉಳಿಸಿಕೊಂಡು ಬಂದಿರುವಂತೆಯೇ, ದಾಸಸಾಹಿತ್ಯದ ರಚನೆಯಲ್ಲೂ ಮಹಿಳೆಯರ ಗಮನಾರ್ಹ ಪಾತ್ರವಿದೆ.
ಮೊದಲ ಘಟ್ಟದಲ್ಲಿ ಪುರಂದರ ದಾಸರ ಹೆಂಡತಿ ಸರಸ್ವತೀಬಾಯಿ (ಸಿರಿಪುರಂದರವಿಠಲ) ಮತ್ತು ಮಗಳು ರುಕ್ಮಿಣೀಬಾಯಿ (ತಂದೆಪುರಂದರವಿಠಲ) ಕೃತಿರಚನೆ ಮಾಡಿದ್ದರೆನ್ನಲಾಗಿದ್ದರೂ, ಅವರ ಕೃತಿಗಳು ಈಗ ಉಪಲಬ್ಧವಿಲ್ಲ.

ದ್ವಿತೀಯ ಘಟ್ಟದಲ್ಲಿ ಶ್ರೀರಾಮೇಶ ಅಂಕಿತದೊಂದಿಗೆ ಮುಯ್ಯದ ಪದಗಳು, ಬೀಗರಹಾಡು, ಮೋರೆಗೆ ನೀರು ತಂದ ಹಾಡು ಇತ್ಯಾದಿ ಗಲಗಲಿ ಅವ್ವನವರ ಕೊಡುಗೆ. ಅವರ ಶಿಷ್ಯೆಯಾದ ಭಾಗಮ್ಮ ಅಥವಾ ಪ್ರಯಾಗವ್ವ ಕನ್ನಡದಲ್ಲಿ ಭಾಗವತದ 3ನೆಯ ಸ್ಕಂದ ಬರೆದರು.

ದಾಸಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ಮಹಿಳೆಯರನ್ನು ನೆನೆಯುವಾಗ, ಹೆಳವನಕಟ್ಟೆ ರಂಗ ಅನ್ನುವ ಅಂಕಿತದಲ್ಲಿ ವಿಪುಲವಾಗಿ ಸಾಹಿತ್ಯಸೃಷ್ಟಿ ಮಾಡಿದ ಗೋಪಾಲದಾಸರ ಶಿಷ್ಯೆಯಾದ ಹೆಳವನಕಟ್ಟೆ ಗಿರಿಯಮ್ಮನವರನ್ನು ಮರೆಯುವ ಹಾಗೆಯೇ ಇಲ್ಲ.

ಭೀಮೇಶಕೃಷ್ಣ ಅಂಕಿತದೊಂದಿಗೆ ಅನೇಕ ರಚನೆಗಳನ್ನು ಮಾಡಿದ ಹರಪನಹಳ್ಳಿ ಭೀಮವ್ವನ ಸರಳ ಶೈಲಿಯ ಜನಪ್ರಿಯ. ಅನೇಕ ಪೌರಾಣಿಕ ಕಥೆಗಳನ್ನು ಸರಳಕನ್ನಡದ ಹಾಡುಗಳಾಗಿ ಪರಿವರ್ತಿಸಿದ ಕೀರ್ತಿ ಭೀಮವ್ವನಿಗೆ ಸಲ್ಲುತ್ತದೆ. ಶ್ರಾವಣ ಶುಕ್ರವಾರದ ಹಾಡು, ಶನಿವಾರದ ಹಾಡು ಇತ್ಯಾದಿ ಭೀಮವ್ವನ ಕೃತಿಗಳು ಶ್ರಾವಣಮಾಸದಲ್ಲಿ ಇಂದಿಗೂ ಹಾಡಲ್ಪಡುತ್ತವೆ.

ಈ ಪಟ್ಟಿಗೆ, ಚೆಲ್ಲಮ್ಮ, ಗಣಪಕ್ಕ, ಸುಂದರಾಬಾಯಿ, ಪನ್ನಿ ಲಕ್ಷ್ಮೀಬಾಯಿ, ಲಕ್ಷ್ಮೀದೇವಮ್ಮ ಮುಂತಾದವರೂ ಸೇರುತ್ತಾರೆ. ತಡವಾಗಿಯಾದರೂ ಸ್ವತಃ ಕೃತಿರಚನೆಗೆ ಕೈಹಾಕಿದ ಮಹಿಳೆಯರ ಕೊಡುಗೆಯಿಂದ ದಾಸಸಾಹಿತ್ಯದ ಹರವು, ಆಳ ಹೆಚ್ಚಿದವು ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.

********************************

ಒಟ್ಟಿನಲ್ಲಿ ಕನ್ನಡ ಹರಿದಾಸ ಸಾಹಿತ್ಯವು ವಿಷಯ, ರೂಪ, ಭಾಷೆ, ಪರಿಣಾಮಗಳೆಲ್ಲದರಲ್ಲೂ ವೈಶಿಷ್ಟ್ಯತೆಯನ್ನು ಸಾಧಿಸಿ ಇಂದಿಗೂ ಜೀವಂತವಾಗಿದೆ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ. ಕರ್ನಾಟಕದ ಎಲ್ಲ ಭಾಗಗಳ ಮಹನೀಯರ ಕೊಡುಗೆ ಇದೆಯೆನ್ನುವುದು ಎಷ್ಟು ಸತ್ಯವೋ, ಅದರ ಸಿಂಹಪಾಲು ಕೃಷ್ಣೆ-ತುಂಗೆಯರ ತೀರದ ಪ್ರದೇಶಗಳದ್ದು ಅನ್ನುವುದೂ ಅಷ್ಟೇ ದಿಟ.

ಮೂಲ ಕೃತಿಯ ಲೇಖಕಿ: ಶ್ರೀಮತಿ ಸೀತಾ ಗುಡೂರ್-ಕುಲಕರ್ಣಿ
ಸಾರ ಇಳಿಸಿದವರು: ಲಕ್ಷ್ಮೀನಾರಾಯಣ ಗುಡೂರ್

********************************