ಪ್ರೆಸ್ಟನ್ ಭಾರತೀಯ ನೃತ್ಯ ಪರಂಪರೆ: ಭರತನಾಟ್ಯ – ಶಿಲ್ಪಾ ಜಗದೀಶ್

ಸಹೃದಯಿ ಅನಿವಾಸಿ ಬಳಗಕ್ಕೆ ನಮಸ್ಕಾರ.  ಪ್ರೆಸ್ಟನ್ನಿನ ಕುಚಿಪುಡಿ ನೃತ್ಯಗಾತಿಯರ ಬಗ್ಗೆ ಮುಂಚೆಯೇ ಬರೆದಿದ್ದೆ. ಅದೇ ಥೀಮನ್ನು ಮುಂದುವರೆಸುತ್ತ, ಇಲ್ಲಿನ ಭರತನಾಟ್ಯದ ತರಗತಿಗಳನ್ನು ಪರಿಚಯಿಸುತ್ತಿರುವೆ, ಆದರೆ ಈ ಬಾರಿ ಸ್ವತಃ ಅಲ್ಲಿ ಉತ್ಸಾಹಿ ವಿದ್ಯಾರ್ಥಿನಿಯಾಗಿರುವ ಶಿಲ್ಪಾ ಜಗದೀಶ್ ಅವರ ಮೂಲಕ. ಎಂದಿನಂತೆ ಓದಿ, ಪ್ರತಿಕ್ರಯಿಸಿ; ಮೊದಲ ಬಾರಿಗೆ ಅನಿವಾಸಿಗೆ ಬರೆಯುತ್ತಿರುವ ಶಿಲ್ಪಾ ಅವರನ್ನು ಪ್ರೋತ್ಸಾಹಿಸಿರೆಂದು ಕೋರುವ - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).
*****************************************

ಮೈಸೂರಿನಲ್ಲಿ ಹುಟ್ಟಿ, ಮಂಗಳೂರಿನಲ್ಲಿ ಬೆಳೆದು, ಈಗ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಇಂಗ್ಲಂಡಿನಲ್ಲಿ ನೆಲೆಸಿರುವ ಶಿಲ್ಪಾ ಜಗದೀಶ್ ವೃತ್ತಿಯಿಂದ ಸಂಧಿವಾತಶಾಸ್ತ್ರ (Rheumatologist) ವೈದ್ಯೆ ಮತ್ತು ಪ್ರವೃತ್ತಿಯಿಂದ ಭರತನಾಟ್ಯ ವಿದ್ಯಾರ್ಥಿನಿ. ಓದುವ ಮತ್ತು ಆಗಾಗ ಬರೆಯುವ ಗೀಳು ತಂದೆಯಿಂದ ಬಂದದ್ದು ಎಂದು ಅವರ ನಂಬಿಕೆ.

*****************************************
ಪ್ರೆಸ್ಟನ್ ಭಾರತೀಯ ನೃತ್ಯ ಪರಂಪರೆ, ಭಾಗ ೨: ಭರತನಾಟ್ಯ 

ಭರತಮುನಿ ವಿರಚಿತ ನಾಟ್ಯಶಾಸ್ತ್ರ ಭಾರತೀಯ ಕಲೆಗಳ ಮೂಲಗ್ರಂಥ. ಅದನ್ನು ಆಧರಿಸಿ ಪ್ರಚಲಿತವಾಗಿರುವ ಭಾರತೀಯ ನೃತ್ಯಪರಂಪರೆಯಲ್ಲಿ ಭರತನಾಟ್ಯ ಒಂದು ಪ್ರಸಿದ್ಧ ಪ್ರಕಾರ.

ಭರತನಾಟ್ಯದ ನಾಲ್ಕು ಪ್ರಸಿದ್ಧ ಶೈಲಿಗಳಲ್ಲಿ ಮೈಸೂರು ಶೈಲಿಯೂ ಒಂದು. ಕಲಾಕ್ಷೇತ್ರ, ಪಂದನಲ್ಲೂರು ಮತ್ತು ತಂಜಾವೂರು ಶೈಲಿಗಳು ಭರತನಾಟ್ಯದ ಉಗಮ ಸ್ಥಾನವಾದ ತಮಿಳುನಾಡಿನಲ್ಲಿ ಉದಯಿಸಿದವು.

ಅಂದಿನ ಕಾಲದಲ್ಲಿ ರಾಜಾಶ್ರಯದಲ್ಲಿ ಏಳಿಗೆ ಪಡೆದ ಭರತನಾಟ್ಯ ಇಂದು ಆಸಕ್ತ ಗುರುಗಳಿಂದ ಅಭಿವೃದ್ಧಿ ಹೊಂದುತ್ತಿದೆ.

ಪ್ರೆಸ್ಟನ್ನಿನ ಗುಜರಾತ್ ಹಿಂದೂ ಸೊಸೈಟಿಯ ದೇವಸ್ಥಾನದಲ್ಲಿ ಭರತನಾಟ್ಯ ಕಲಿಸುತ್ತಿರುವ ಗುರು ಡಾ|| ಸ್ವಾತಿ ರಾವುತ್ ನನ್ನ ಗುರುಗಳು. ಬುಧವಾರ ಗೂಧೂಳಿಯ ಸಮಯದಲ್ಲಿ (ಸಾಯಂಕಾಲ) ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳ ಆಸಕ್ತಿ ಅರಿತು ಪೋಷಿಸುವುದಲ್ಲಿ ಅವರು ಕರಗತರು. ಪ್ರೆಸ್ಟನ್ ಅಲ್ಲದೆ ವಿಗನ್ ಮತ್ತು ಲಿವರ್ಪೂಲ್‍ನಲ್ಲಿಯೂ ಅವರು ಭರತನಾಟ್ಯ ಕಲಿಸುತ್ತಾರೆ. ಕಳೆದ ಎರಡು ದಶಕಗಳಿಂದ ಈ ನೃತ್ಯ ಪ್ರಕಾರದ ಏಳಿಗೆಗೆ ಅವಿರತ ಶ್ರಮಿಸಿದ್ದಾರೆ. ಸ್ವಾತಿ ಡಾನ್ಸ್ ಅಕಾಡೆಮಿ ಕಟ್ಟಿ ತಾರತಮ್ಯವಿಲ್ಲದೆ ಎಲ್ಲಾ ವಯಸ್ಸಿನ ಶಿಷ್ಯರಿಗೂ ನಾಟ್ಯಸುಧೆ ಉಣಿಸುತಿದ್ದಾರೆ. ಶಿಷ್ಯರ ಸರ್ವಾoಗೀಣ ವ್ಯಕ್ತಿತ್ವ ಅಭಿವೃದ್ಧಿಗೆ ಪೂರಕ ವಾತಾವರಣ ತರಗತಿಗಳಲ್ಲಿ ಇರುತ್ತದೆ.

ನೃತ್ಯಕ್ಷೇತ್ರದ ಹಲವು ಉಪಾಧಿಗಳು ಅವರನ್ನರಸಿ ಬಂದಿವೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆ ಅವರಿಗೆ ಅನ್ವರ್ಥ. ಪಂದನಲ್ಲೂರು ಬನಿಯೊಂದಿಗೆ ಕೊಂಚ ಕಲಾಕ್ಷೇತ್ರ ಮಿಳಿತವಾಗಿದೆ ನಮ್ಮ ಕಲಿಕೆಯಲ್ಲಿ. ಒಂದು ನೃತ್ಯ ಪ್ರಕಾರ ಕಲಿಯುವುದೇ ಜೀವಮಾನದ ಸಾಧನೆ ಎಂದು ತಿಳಿದಿದ್ದ ನನಗೆ ನಮ್ಮ ಗುರುಗಳು ಎರಡು ಭರತನಾಟ್ಯ ಶೈಲಿಗಳೊಂದಿಗೆ ಮೋಹಿನಿಯಾಟ್ಟಮ್ ಸಹ ಕಲಿತಿದ್ದಾರೆಂದು ತಿಳಿದಾಗ ಅಚ್ಚರಿಯಾಯಿತು ಹಾಗೆ ಗೌರವವು ದುಪ್ಪಟ್ಟಾಯಿತು. ನೃತ್ಯಕ್ಷೇತ್ರದಲ್ಲಿ ಗುರು ಪರಂಪರೆ ಇನ್ನೂ ಚಾಲ್ತಿಯಲ್ಲಿದೆ.

ನೃತ್ಯ ಕಲಿಕೆಗೆ ನನ್ನ ಪ್ರವೇಶ ಬಹಳ ತಡವಾಗಿಯೇ ಆಯಿತೆಂದು ಹೇಳಬಹುದು. ಒಂಬತ್ತನೆ ತರಗತಿಯ ಕೊನೆಯಲ್ಲಿ ಪುತ್ತೂರಿನ ನಮ್ಮ ಮನೆಯ ಬಳಿ ಹೊಸ ಭರತನಾಟ್ಯ ಶಾಲೆ ಶುರುವಾಯಿತು. ಕುಂಟೇಬಿಲ್ಲೆ, ಥ್ರೋ ಬಾಲ್ ಅಡಿ ಮಣ್ಣಿನ ಶಿಲ್ಪದಂತೆ ಮನೆಗೆ ಬರುವ ನಮ್ಮನ್ನು ಈ ಶಾಲೆಗೆ ಸೇರಿಸಿದರು.

ಎಂಟನೇ ಮತ್ತು ಒಂಬತ್ತನೇ ವರ್ಗದಲ್ಲಿ ಶಾಲಾ ನೃತ್ಯದಿಂದ ನಿನಗೆ ಬರುವುದಿಲ್ಲ ಎಂದು ಹೊರದೂಡಿಸಿಕೊಂಡಿದ್ದ ನನಗೆ, ಕಲಿಯೋಣ ಎಂಬ ಆಸಕ್ತಿ ಇದ್ದರೂ ಅನುಕೂಲ ಇರಲಿಲ್ಲ. ನೃತ್ಯ ಕಲಿಯುವ ಹುಮ್ಮಸ್ಸು ಬಹಳ ಇತ್ತು, ಈಗಲೂ ಇದೆ - ಎಂದಿಗೂ ಬತ್ತದಿರುವ ಒರತೆಯಂತೆ.
ವೈದ್ಯಳಾಗುವ ಹಂಬಲ ಮತ್ತು ಅದಕ್ಕೆ ಬೇಕಾಗುವ ತನ್ಮಯತೆಯಿಂದಾಗಿ ನೃತ್ಯ ಕಲಿಕೆ ಅರ್ಧಕ್ಕೆ ನಿಂತು ಹೋಯಿತು. ಮದುವೆಯಾಗಿ ಇಂಗ್ಲೆಂಡಿಗೆ ಬಂದಿಳಿದು, ಕೆಲಸಕ್ಕಾಗಿ ಊರೂರು ಅಲೆದು, ಎರಡು ಮಕ್ಕಳಾದ ಮೇಲೆಯೂ ನಾನಿರುವ ಊರಿನಲ್ಲಿ ಯಾರಾದರೂ ಗುರುಗಳು ಇದ್ದಾರಾ ಎಂದು ಹುಡುಕಾಡುತ್ತಿದ್ದೆ. ಗೆಳತಿಯೊಬ್ಬಳು ಸ್ವಾತಿ ಗುರುಗಳ ಚರದೂರವಾಣಿ ಸಂಖ್ಯೆ ಕೊಟ್ಟಾಗ ಸ್ವರ್ಗಕ್ಕೆ ಮೂರೇ ಗೇಣು ಎಂದೆನಿಸಿತು. ನೀನು ಎಳೆ ಹುಡುಗಿಯoತೆಯೇ ಕಾಣುತ್ತಿಯ, ಅವರೊಂದಿಗೆ ಸೇರಿ ಕಲಿ ಎಂದು ನಾನು ಎಲ್ಲಿಗೆ ಕಲಿಕೆ ನಿಲ್ಲಿಸಿದ್ದೆನೋ ಅದೇ ಸ್ತರಕ್ಕೇ ಸೇರಿಸಿಕೊಂಡರು.

ಕಲಿಕೆ ನಿಂತೇ ಇಲ್ಲವೇನೋ ಎಂಬಂತೆ ಮುಂದುವರೆಯಿತು. ಒಂದು ದಶಕದ ಕಂದಕ ಅಷ್ಟು ಬೇಗ ಕಾಣದಂತೆ ಮಾಯವಾದದ್ದು ನೋಡಿ ಅಚ್ಚರಿಯಾಯಿತು. ಬ್ಲಾಕ್‍ಪೂಲ್‍ನಲ್ಲಿ ದೀಪಾವಳಿ ಆಚರಣೆಗೆ ಭಾರತೀಯ ನೃತ್ಯ ತಂಡಗಳಿಗೆ ವಿಶೇಷ ಆಹ್ವಾನವಿತ್ತು. ಅಂದಿನ ದಿನ ಬ್ಲಾಕ್‍ಪೂಲ್ ಟವರ್ ಎದುರು ಹಾಕಿದ್ದ ರಂಗಮಂಚದಲ್ಲಿ ನೂರಾರು ಜನರೆದುರಲ್ಲಿ ತಿಲ್ಲಾನ ನೃತ್ಯ ಪ್ರಸ್ತುತಪಡಿಸಿದೆವು. ಭರತನಾಟ್ಯ ಮಾರ್ಗದ ಉತ್ತರಾರ್ಧದಲ್ಲಿ ತಿಲ್ಲಾನ ಸಂತೋಷ ವ್ಯಕ್ತಪಡಿಸುವ ನಾಟ್ಯ. ರಂಗಪ್ರವೇಶದಲ್ಲಿ ಪ್ರಸ್ತುತ ಪಡಿಸುವ ನೃತ್ಯಸರಣಿಗೆ ಮಾರ್ಗo ಎನ್ನುತ್ತಾರೆ. ತಾತ್ಕಾಲಿಕ ತೆರೆದ ವೇದಿಕೆ ಆದ್ದರಿಂದ ಹತ್ತಿರದಲ್ಲಿ ಯಾವ ಸೌಲಭ್ಯ ಇರಲಿಲ್ಲ. ದೂರದಲ್ಲಿ ಕಾರು ನಿಲ್ಲಿಸಿ ಪೂರ್ತಿ ಭರತನಾಟ್ಯ ವೇಷಭೂಷಣದಲ್ಲಿ ಬ್ಲಾಕ್‍ಪೂಲ್ ರಸ್ತೆಗಳಲ್ಲಿ ನಡೆದು ಬ್ಲಾಕ್‍ಪೂಲ್ ಟವರ್ ತಲುಪಿದ್ದಾಯಿತು, ಅಚ್ಚರಿ ತುಂಬಿದ ನೋಟಗಳ ನಡುವೆ. ನೂರಾರು ಸ್ಥಳೀಯರ ಸಮಕ್ಷಮದಲ್ಲಿ ಭಾರತೀಯ ನೃತ್ಯಗಳ ಪ್ರಸ್ತುತಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮವಾದ ಮೇಲೆ ಮೆರವಣಿಗೆಯಂತೆ ವಾಪಸ್ ಕಾರಿನೆಡೆಗೆ ಬರುವಾಗ ಬಹಳ ಜನ ನನ್ನ ಗುರುತು ಹಿಡಿದು ನಮ್ಮ ನೃತ್ಯ ಅದ್ಭುತವಾಗಿತ್ತು, ಪ್ರತಿವರ್ಷ ನೋಡಲು ಬರುತ್ತೇವೆ ಎಂದು ಕೊಂಡಾಡಿದಾಗ ನಮ್ಮ ಶ್ರಮ ಸಾರ್ಥಕವಾಯಿತು ಎಂದು ಆನಂದವಾಯಿತು.

ನಾವು ಪ್ರತಿವರ್ಷ ಎದುರು ನೋಡುವ ಸಂದರ್ಭ ನಮ್ಮ ಸ್ವಾತಿ ಡಾನ್ಸ್ ಕಂಪನಿ ನೃತ್ಯಶಾಲೆಯ ವಾರ್ಷಿಕ ಕಲಾಪ್ರದರ್ಶನ ‘ಸಮಯೋಗ’. ವರ್ಷದ ಕಲಿಕೆಯನ್ನು ನಮ್ಮ ಕುಟುಂಬ ಮತ್ತು ಅತಿಥಿಗಳೆದುರು ಪ್ರದರ್ಶಿಸುವ ಸದವಕಾಶವನ್ನು ಈ ಕಾರ್ಯಕ್ರಮ ಒದಗಿಸುತ್ತದೆ. ಇದನ್ನು ವಿಶ್ವ ನೃತ್ಯ ದಿನದ ಆಸುಪಾಸಿನಲ್ಲಿ ಸ್ವಾತಿ ಗುರುಗಳು ಆಯೋಜಿಸುತ್ತಾರೆ.

ಈ ವರ್ಷ ಭಾರತದಿಂದ ತಂದೆಯವರು ಬಂದು ವೀಕ್ಷಿಸಿದ್ದು ನನ್ನ ಭಾಗ್ಯ.

ನೃತ್ಯಾಸಕ್ತರಿಗೆಲ್ಲ ಪ್ರಣಾಮಗಳು. ನಿಮಗೂ ಕಲಿಯುವ ಆಸಕ್ತಿ ಇದ್ದರೆ ಕೆಳಗೆ ಕೆಲವು ವೆಬ್ ವಿಳಾಸಗಳನ್ನು ಉಪಯೋಗಿಸಿ ಸಮೀಪ ಇರುವ ಗುರುಗಳ ಮಾಹಿತಿ ಹುಡುಕಿ. ಕಲಾಸಕ್ತರು ಆಯೋಜನೆ ಮಾಡುವ ಕಾರ್ಯಕ್ರಮಗಳ ಮೂಲಕ ನಮ್ಮ ಪ್ರಾಚೀನ ಕಲೆ ಉಳಿಯಲಿ, ಬೆಳೆಯಲಿ ಎಂದು ಆಶಿಸುತ್ತೇನೆ.

ನಮ್ಮ ಶಾಲೆ - https://swatidance.com/
ಡಾನ್ಸ್ ಸ್ಕೂಲ್ ಡೈರೆಕ್ಟರಿ - https://www.akademi.co.uk/resources/dance-school-directory/
ಸಿoಫೊನಿ ಒಫ್ ಮೂವ್ಮೆಂಟ್ ಟ್ರೈಲರ್ - https://youtu.be/XWTo83YkQCE

************************************

ಕೃತಜ್ಞತೆಗಳು –
ನನ್ನ ತಂದೆ ಜಗದೀಶ್ ಅವರಿಗೆ, ಅತ್ಯಮೂಲ್ಯ ಸಲಹೆ ಸೂಚನೆ ನೀಡಿ ಈ ಬರಹ ತಿದ್ದಿದ್ದಕ್ಕಾಗಿ.
ಡಾ. ಗುಡೂರ್ ಅವರಿಗೆ, ಬರೆಯಲು ನಿರಂತರ ಪ್ರೋತ್ಸಾಹ ನೀಡಿದ್ದಕ್ಕೆ.
ಗುರು ಡಾ. ಸ್ವಾತಿ ರೌತ್ ಮತ್ತು ನನ್ನ ಸಹಪಾಠಿಗಳಿಗೆ - ಚಿತ್ರಗಳನ್ನ ಬಳಸಲು ಅನುಮತಿ ನೀಡಿದ್ದಕ್ಕಾಗಿ.

- ಶಿಲ್ಪಾ ಜಗದೀಶ್, ಪ್ರೆಸ್ಟನ್ ಯು ಕೆ.
ಗುರು ಡಾ. ಸ್ವಾತಿ ರಾವುತ್.
ಡಾ. ಸ್ವಾತಿ ರಾವುತ್ ಅವರ ವಿದ್ಯಾರ್ಥಿನಿಯರು.
*****************************************

ಭೈರಪ್ಪ ನಮನ


ಅನಿವಾಸಿ ಬಂಧುಗಳಿಗೆಲ್ಲ ನಮಸ್ಕಾರ. ಜೊತೆಗೇ ನಾಡಹಬ್ಬ ದಸರೆಯ ಹಾರ್ದಿಕ ಶುಭಾಶಯಗಳು. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನವದುರ್ಗೆಯರು ತಮ್ಮೆಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.
ಈ ನಾಡ ಹಬ್ಬದ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಸರಸ್ವತಿ ಸಮ್ಮಾನರಾದ ಸರಸ್ವತಿ ಪುತ್ರನನ್ನು ನಾಡು ಕಳೆದುಕೊಂಡ ವಿಷಾದವಿದೆಯಾದರೂ ಅಕ್ಷರಗಳಿಗೆಂದಿಗೂ ಸಾವಿಲ್ಲ, ಅಕ್ಷಯ ಆಯಸ್ಸು ಅವುಗಳಿಗೆ. ನಾಡಿನ ಹೆಮ್ಮೆಯ ಹೆಸರಾಂತ ಸಾಹಿತಿ ಭೈರಪ್ಪನವರು ಆ ಅಕ್ಷರ ರೂಪದಲ್ಲಿ ಕೀರ್ತಿ ಶರೀರದಲ್ಲಿ ಚಿರಕಾಲ ನಮ್ಮೊಡನೆ ಇರುತ್ತಾರೆ ಎಂಬುದು ಸಮಾಧಾನದ ವಿಷಯ.
ಒಂದು ರೀತಿಯಲ್ಲಿ ನನ್ನನ್ನು ಈ ಅನಿವಾಸಿ ಗುಂಪಿಗೆ ಸೇರಿಸಿದ ಶ್ರೇಯವೂ ಪರೋಕ್ಷವಾಗಿ ಭೈರಪ್ಪನವರಿಗೇ ಸೇರಬೇಕು ಎನ್ನಿ. 2019ರ ನಾಡಹಬ್ಬದ ಉದ್ಘಾಟನೆ ಮುಗಿಸಿದ ಭೈರಪ್ಪನವರು ಶತಾವಧಾನಿ ಗಣೇಶರೊಂದಿಗೆ ನೇರ ಲಂಡನ್ ಗೆ ಬಂದಿಳಿದಿದ್ದರು.ಆ ಕಾರ್ಯಕ್ರಮದಲ್ಲಿ ನಾನು ಮೊದಲ ಬಾರಿಗೆ ಅನಿವಾಸಿಯ ಘಟಾನುಘಟಿಗಳಾದ ಪ್ರೇಮಲತಾ ರಾಮ್ ಹಾಗೂ ಕೇಶವ್ ಅವರ ಸಂಪರ್ಕಕ್ಕೆ ಬಂದಿದ್ದು. ಈ ಅನಿವಾಸಿಯನ್ನು ನನ್ನದಾಗಿಸಿಕೊಂಡಿದ್ದು.
ಅವತ್ತಿನ ಆ ಕಾರ್ಯಕ್ರಮ ನನ್ನ ಜೀವಮಾನವಿಡೀ ನೆನಪಿಡುವಂತಹ ಅವಿಸ್ಮರಣೀಯ ಕಾರ್ಯಕ್ರಮ. ಶ್ರೀಯುತ ಎಸ್ ಎಲ್ ಭೈರಪ್ಪ ಮತ್ತು ಶತಾವಧಾನಿ ಗಣೇಶರಂಥ ನಡೆದಾಡುವ ವಿಶ್ವಕೋಶಗಳನ್ನು ಸ್ಟೇಜ್ ಮೇಲೆ ಏಕಕಾಲಕ್ಕೆ ನೋಡುವ ಅವರ ಮಾತು ಕೇಳುವ ಅವರ ಕೃತಿಗಳ ಬಗ್ಗೆ ತೊದಲ ನುಡಿ ಆಡುವ ಅವಕಾಶ ಸಿಕ್ಕಿತ್ತಂದು ಸಾಹಿತ್ಯದ ರಸಗಳ ಗುಣಪಡಿಸಿ ನಮ್ಮ ಆತ್ಮವನ್ನು ತೃಪ್ತಪಡಿಸುವ ಅವರಿಗೆ ಅಂದು ನಮ್ಮ ಮನೆಯಲ್ಲಿ ನಮ್ಮ ಕೈಯಾರೆ ಗುಣಪಡಿಸುವ ಭಾಗ್ಯವು ಸಿಕ್ಕಿತ್ತು ಅದೇ ನೆನೆಸಿಕೊಂಡರೆ ಈಗಲೂ ಹೃದಯ ಖುಷಿಯಿಂದ ಧನ್ಯತೆಯಿಂದ ಮೂಕವಾಗುತ್ತದೆ.
ಇಂದಿನ ಸಂಚಿಕೆಯಲ್ಲಿ ಅಂದಿನ ನನ್ನ ಮಾತುಗಳನ್ನೇ ಹಂಚಿಕೊಳ್ಳುತ್ತಿದ್ದೇನೆ.
ಅವರಿನ್ನಿಲ್ಲ ಎಂದರಿವಾದಾಗ ಮನಭಾರವಾಗುತ್ತದೆ.ಮಾತು ಮೂಕವಾಗುತ್ತದೆ. ಹೃದಯ ಒದ್ದೆಯಾಗುತ್ತದೆ. ಆದರೆ ಭೈರಪ್ಪನವರು ಹಚ್ಚಿದ ಅಕ್ಷರ ಜ್ಯೋತಿ ‘ ಮಾತು ಮನಂಗಳಿಂದ ಅತ್ತತ್ತ ಮೀರಿ, ನಿರುಪಾಧಿಕ ನಿರ್ಮಲವಾಗಿ ಬೆಳಗುತ್ತಲೇ ಇರುತ್ತದೆ.. ಬೆಳಕ ಹಬ್ಬಿಸುತ್ತಲೇ ಇರುತ್ತದೆ.

~ ಸಂಪಾದಕಿ

ಭೈರಪ್ಪನೆಂಬ ದೈತ್ಯ ಪ್ರತಿಭೆ

ಭೈರಪ್ಪನವರು ಒಂದು ಅಗಾಧಸಾಗರ. ಅದರ ಆಳ, ವಿಸ್ತಾರ, ಭೋರ್ಗರೆತ, ಅಲೆಗಳ ಕುಣಿತ ಅಂತರಾಳದಲ್ಲ ಡಗಿರುವ ಹವಳ ಮುತ್ತುಗಳು, ನೂರೆಂಟು ಬಗೆಯ ಸಸ್ಯರಾಜಿಗಳು, ಸಣ್ಣ ಮೀನಿನಿಂದ ಹಿಡಿದು ದೊಡ್ಡ ತಿಮಿಂಗಿಲಿನವರೆಗೆ ಸಾವಿರಾರು ಬಗೆಯ ಜೀವ ವೈವಿಧ್ಯಗಳು, ಅಷ್ಟೇ ಏಕೆ ಅಸ್ತಮಿಸುವ ಸೂರ್ಯ,  ಉದಯಿಸುತ್ತಿರುವ ಚಂದ್ರ ಇವರನ್ನೂ ತನ್ನಲ್ಲಿ ಒಳಗೊಂಡಿರುವಂಥದ್ದು. ಇನ್ನು ನಾನೋ ಸಮುದ್ರದ ದಡದಲ್ಲಿ ಕುಳಿತು ಅಟ್ಟಿ ಬರುವ ಅಲೆಗಳಿಂದ ಪಾದ ತೋಯಿಸಿಕೊಂಡು, ಉಸುಕಿನ ಪುಟ್ಟ ಗುಬ್ಬಿ ಮನೆ ಕಟ್ಟಿ, ದಡಕ್ಕೆ ಬಂದು ಬಿದ್ದ ಒಂದೆರಡು ಶಂಖ ಕಪ್ಪೆ ಚಿಪ್ಪುಗಳನ್ನು ಆರಿಸಿ “ಓಹೋ ಸಾಗರ ತಾನೇ?  ನಾ ಬಲ್ಲೆ” ಎಂದು ಹೇಳುವಂತಹ ದುಸ್ಸಾಹಸ.. ನಾನು ಇಲ್ಲಿ ಬಂದು ಇಂದು ಸಾಕ್ಷಾತ್ ಅವರ ಉಪಸ್ಥಿತಿಯಲ್ಲಿ ಅವರ ಕೃತಿಗಳ ಬಗ್ಗೆ ಮಾತನಾಡುವುದು ಎಂದರೆ. ಸಂಪೂರ್ಣ ವೇದ ವಾಗ್ಮಯದ ಕರ್ತೃವೇ ಆದ ಪರಮಾತ್ಮನೆದಿರು ಒಂದೆರಡು ಶಬ್ದಗಳಿಂದ ಹೆಣೆದ ಸ್ತೋತ್ರ ಒಂದನ್ನು ‘ನಾ ರಚಿಸಿದೆ’ ಎಂದು ಬೀಗುತ್ತಾ ಹಾಡುವ ಭಕ್ತನ ಪಾಡು ನನ್ನದು. ಅವರೊಂದು ಅಗಾಧ ಚೈತನ್ಯ. ಅದಕ್ಕೇ ನಾ ಮುಂಚೆಯೇ ಹೇಳುತ್ತಿರುವೆ. ಈಗ ನಾ ಮಾತಾಡುತ್ತಿರುವುದು ಭೈರಪ್ಪನವರ ಬಗ್ಗೆ ಅಲ್ಲ “ಭೈರಪ್ಪ ನನಗೆ ದಕ್ಕಿದಷ್ಟು” ಎಂಬುದರ ಬಗ್ಗೆ ‘ಬಾಲಕನ ಕಲಭಾಷೆ ಕೇಳಿ ಜನನಿ ಸುಖ ಪಡುವಂದದಿ’ ಎಂದು ದಾಸರು ಹಾಡುವಂತೆ ಅವರೂ ಕೂಡ ನನ್ನೀ ತೊದಲುಗಳನ್ನು ಸಾವಧಾನದಿಂದ ಕೇಳಿಯಾರು ಎಂಬ ವಿಶ್ವಾಸ ನನಗೆ. 

ಭೈರಪ್ಪನವರು ಶತಾವಧಾನಿ ಗಣೇಶರೊಂದಿಗೆ

ಭೈರಪ್ಪನವರ ಕೃತಿಗಳ ಬಗ್ಗೆ ಹೇಳ ಹೊರಟಾಗ ಮೊದಲನೆಯದಾಗಿ ತಾವೇ ತಾವಾಗಿ ಓದಿಸಿಕೊಂಡು ಹೋಗುವ ಅವುಗಳ ಗುಣದ ಬಗ್ಗೆ ಬಹಳ ಅಚ್ಚರಿಯಾಗುತ್ತದೆ. ಕಾದಂಬರಿಯ ವಿಷಯ ವಸ್ತು- ಸಿದ್ಧಾಂತಗಳು ಏನೇ ಇರಲಿ, ಅವುಗಳನ್ನು ನೀವು ಒಪ್ಪಲಿ ಬಿಡಲಿ ಅದು ಬೇರೆ ವಿಷಯ. ಆದರೆ ಪುಸ್ತಕ ಹಿಡಿದರೆ ಸಾಕು ಮುಗಿಸುವ ತನಕ ಒಂದರೆಗಳಿಗೆ ಬಿಡದಂತೆ ನಮ್ಮನ್ನು ಅವಿಶ್ರಾಂತವಾಗಿಸಿ ಒಂದೇ ಗುಕ್ಕಿಗೆ ಓದಿಸಿಕೊಳ್ಳುವಂಥ ಅದ್ಭುತ ಶಕ್ತಿ ಅವುಗಳಿಗೆ. ನಾನಂತೂ ಇದುವರೆಗೂ ಅವರ ಕಾದಂಬರಿಗಳನ್ನು ಓದುತ್ತಾ ಒಲೆಯ ಮೇಲಿಟ್ಟ ಅದೆಷ್ಟು ಪಾತ್ರೆಗಳನ್ನು ಸುಟ್ಟು ಕರಕಲು ಮಾಡಿ ಎಸೆದೇಬಿಟ್ಟಿದ್ದೇನೋ ಲೆಕ್ಕವಿಲ್ಲ. ಅಂದರೆ ನಾನಿಲ್ಲಿ ಹೇಳಬಯಸುತ್ತಿರುವುದು ಇಷ್ಟೇ , ಓದಿಗೆ ಬೇಕಾದದ್ದು ಕಣ್ಣು, ತಲೆ, ಮನಸ್ಸುಗಳು.ಅವು ಮೂರು ತಲ್ಲೀನವಾಗಿದ್ದರೆ ಸಾಕಲ್ಲವೇ? ಆದರೆ ಇವರ ಕಾದಂಬರಿಗಳನ್ನು ಓದುತ್ತಿರುವಾಗ ಎಲ್ಲ ಜ್ಞಾನೇಂದ್ರಿಯಗಳೂ ಓದಿನ ಮೋಡಿಗೆ ಸಿಲುಕಿ ಬಿಡುತ್ತವೆ. ಮನೆಯಲ್ಲಿ ಯಾರೋ ಕೂಗಿದ್ದು, ಬೆಲ್ ಆಗಿದ್ದು,ಮಗು ಅತ್ತದ್ದು ಕಿವಿಗೆ ಕೇಳದು. ಸುಟ್ಟ ವಾಸನೆ ಮೂಗಿಗೆ ಅಡರದು. ಒಂಥರಾ ಧ್ಯಾನಸ್ಥ ಸ್ಥಿತಿ. ಧ್ಯಾನದಲ್ಲಿ ಹೊರ ಜಗತ್ತಿನ ಆಗುಹೋಗುಗಳ ಅರಿವಾಗುತ್ತಿದ್ದರೂ ಅಲ್ಲಿ ನಮ್ಮದು ಕೇವಲ ಸಾಕ್ಷಿ ಭಾವ. ಯಾವ ಕ್ರಿಯೆ-  ಪ್ರತಿಕ್ರಿಯೆಗಳೂ ಇಲ್ಲದಂತಹ ಸ್ಥಿತಿಯಲ್ಲಿರುತ್ತದೆ. ಅಂಥದೇ ಒಂದು ಸ್ಥಿತಿಯನ್ನು ಅವರ ಕಾದಂಬರಿಗಳು ಒದಗಿಸಲು ಸಶಕ್ತವಾದವುಗಳು. ಎರಡನೆಯದು ಅವರು ಬಳಸುವ ಭಾಷೆ. ಟಿಪಿಕಲ್ ಆದ ‘ಭೈರಪ್ಪ ಭಾಷೆ’ ಅಂತಲೇ ಅದನ್ನು ನಾವು ಕರೆಯಬಹುದು. ಅವರ ಕಾದಂಬರಿಗಳನ್ನು ಓದುವಾಗ ಮನೆ ಕೆಲಸ ಇತ್ಯಾದಿಗಳನ್ನು ಮಾಡುತ್ತಿರುವಾಗಲೂ ಅದೇ ಭಾಷೆ ನನ್ನ ತಲೆಯಲ್ಲಿ ಓಡುತ್ತಿರುತ್ತದೆ. ಉದಾಹರಣೆಗೆ.. ಅವಸರದಲ್ಲಿ ಹಾಲನ್ನು ಜೋರು ಉರಿಯಲ್ಲಿಟ್ಟು ಉಕ್ಕಿಸಿದರೆ “ಹಾಲನ್ನು ಅವಸರಿಸದೇ ಸಣ್ಣ ಉರಿಯಲ್ಲಿಟ್ಟು ಕಾಸಿದ್ದರೆ ಹದವಾದ ಕೆನೆಯೂ ದಕ್ಕುತ್ತಿತ್ತು.. ಗ್ಯಾಸನ್ನು ಸ್ವಚ್ಛಗೊಳಿಸುವ ಪ್ರಮೇಯವೂ ತಪ್ಪುತ್ತಿತ್ತು”ಎನ್ನುವ ವಿಚಾರ ಹೊಳೆಯಿತು, ಭಾವಸ್ಪರಿಸಿತು” ಇತ್ಯಾದಿಯಾಗಿ.ಈ ತೆರನಾಗಿ ನನಗೆ ಅರಿವಿಲ್ಲದೇ ಆ ಭಾಷಾ ಪ್ರಯೋಗ ನನ್ನಲ್ಲಿ ನಡೆದಿರುತ್ತದೆ. ಹೀಗೆ ವೈಚಾರಿಕ ನೆಲೆಯಿರಲಿ, ಭಾಷಾ ಪ್ರಯೋಗವಿರಲಿ, ಕಥಾಹಂದರವಿರಲಿ, ಪಾತ್ರ ಪ್ರಪಂಚವಿರಲಿ ಅವರ ಸಮ್ಮೋಹನಕ್ಕೆ ಒಳಗಾಗಿ ಬಿಟ್ಟಿರುತ್ತೇವೆ. ‘ಬೌದ್ಧಿಕ ಸಾಹಚರ್ಯ’ ಎನ್ನುವ ಪದವನ್ನು ನಾನು ಕಾಲೇಜಿನಲ್ಲಿದ್ದಾಗ ಮೊದಲ ಸಲ ಅವರ ಕಾದಂಬರಿಯಲ್ಲೋದಿ ರೋಮಾಂಚಿತಳಾಗಿದ್ದು ಈಗಲೂ ನೆನಪಿದೆ. ಹೀಗೆ ಸಂಪೂರ್ಣ ಭಿನ್ನವಾದ ಆಯಾಮಗಳನ್ನು ಒದಗಿಸುವುದೇ ಅವರ ಕಾದಂಬರಿಗಳ ವೈಶಿಷ್ಟ್ಯ. ಇನ್ನು  ಅವರು ಸೃಷ್ಟಿಸಿದ ಪಾತ್ರ ಪ್ರಪಂಚ.. ಗೃಹ ಭಂಗದ ಪಾತ್ರ ವೈವಿಧ್ಯಗಳಂತೂ ಅನುಪಮ. ಸೌಮ್ಯತೆಯ ಸಂಕೇತವಾದ ನಂಜಮ್ಮ, ಬಾಯ್ ತೆರೆದರೆ ಸಾಕು ಬೈಗುಳಗಳನ್ನು ಉದುರಿಸುವ ಗಂಗಮ್ಮ, ಬೇಜವಾಬ್ದಾರಿಯ ಚೆನ್ನಿಗರಾಯ, ಉಡಾಫೆಯ ಅಪ್ಪಣ್ಣ, ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಅಯ್ಯನವರು.. ಹೀಗೆ ಮಾನವ ಪ್ರಪಂಚದ ಎಲ್ಲ ಮುಖಗಳು, ಎಲ್ಲ ಭಾವ ರಸಗಳು ಇಡಿ ಇಡಿಯಾಗಿ ದೊರಕುವಂತಹ ಅಪರೂಪದ ಕಾದಂಬರಿ. ಅವರು ಸೃಷ್ಟಿಸಿದ ಸ್ತ್ರೀ ಪಾತ್ರಗಳೂ ಅಷ್ಟೇ.. ಸಮಕಾಲೀನ ಸಾಮಾಜಿಕ ವ್ಯವಸ್ಥೆ ಮೌಲ್ಯಗಳ ವಿರುದ್ಧ ಸಿಡಿದೆದ್ದ ‘ದಾಟು’ವಿನ ಸತ್ಯ ಇರಲಿ, ‘ಸಾರ್ಥ’ದ ಚಂದ್ರಿಕೆ ಇರಲಿ , ಉತ್ತರ ಕಾಂಡದ ಸೀತೆ ಇರಲಿ ಅಥವಾ ಆವರಣದ ರಜಿಯಾ ಆಗಿರಲಿ ಇವರೆಲ್ಲ ವಿಭಿನ್ನವಾಗಿ ಚಿಂತಿಸಿ, ವಿಭಿನ್ನವಾಗಿ ಬಾಳಿ, ಕೊನೆಯಲ್ಲಿ ಸೋತಂತೆ ಕಂಡರೂ ಸೋಲಲ್ಲೂ ಗೆಲುವನ್ನು ಕಂಡಂತಹವರು. ಸ್ವಲ್ಪ ಕಣ್ತೆರೆದರೆ ಸಾಕು ನಮ್ಮಲ್ಲೇ ನಮ್ಮ ಸುತ್ತಮುತ್ತಲಲ್ಲೇ ಅಂಥ ಹತ್ತು ಹಲವಾರು ಪಾತ್ರಗಳ ಅನಾವರಣವಾಗುತ್ತದೆ. ನಾನು ಮನೆಯಲ್ಲಿ ಎಷ್ಟೋ ಸಲ ಯಾವುದೋ ಕೆಲಸದ ಬಗ್ಗೆ ಬೇಜವಾಬ್ದಾರಿ ತೋರುವ ನಮ್ಮ ಯಜಮಾನರಿಗೆ ‘ಚೆನ್ನಿಗರಾಯನಂಗ ಮಾಡಬ್ಯಾಡ’ ಅಂತಲೂ,  ಮಕ್ಕಳ ಬಗ್ಗೆ ಗಮನಕೊಡದಿದ್ದಾಗ ‘ನೀ ಏನು ನಿರಾಕರಣದ ನರಹರಿನಾ?’ ಅಂತಲೂ  ಮೂದಲಿಸುವಷ್ಟು ಜೀವಂತ ಆ ಪಾತ್ರಗಳು. ಯಾವುದೇ ವಿಷಯದ ಬಗ್ಗೆ ಕಾದಂಬರಿ ಬರೆಯಲಿ ಬರೆಯುವುದಕ್ಕಿಂತ ಮುಂಚಿನ ಅವರ ಅಧ್ಯಯನದ ಶಿಸ್ತು, ಅಚ್ಚುಕಟ್ಟು ತನಗಳು, ಆ ವಿಷಯದ ಬಗೆಗಿನ ನಿಷ್ಠೆ ಅವುಗಳ ರೀತಿಯೇ ಬೇರೆ. ಭೀಮ ಕಾಯದ ಕುಸ್ತಿ ಇರಲಿ, ಮಂದ್ರದ ಸಂಗೀತ ನಾಟ್ಯಗಳಿರಲಿ, ಸಾರ್ಥದ ಇತಿಹಾಸ -ಪುರಾಣ -ಮೂರ್ತಿ ಶಿಲ್ಪ- ವೇದಾಂತ- ನಾಟಕಗಳಿರಲಿ, ಯಾನದ ಸ್ಪೇಸ್ ಟೆಕ್ನಾಲಜಿ ಇರಲಿ ಎಲ್ಲವೂ ಪೂರ್ಣ.. ಪರಿಪೂರ್ಣ. ಹೀಗಾಗಿ ಅವರ ಕಾದಂಬರಿಗಳನ್ನು ಓದುವಲ್ಲಿ ಓದುಗರಾದ ನಾವೂ ಸ್ವಲ್ಪ ಮಟ್ಟಿಗಿನ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವೇನೋ ? ಉದಾಹರಣೆಗೆ ಮಂದ್ರವನ್ನೇ ತೆಗೆದುಕೊಳ್ಳಿ. ಕೇವಲ ಸಾಹಿತ್ಯಸಕ್ತನಿಗಾಗಲಿ ಅಥವಾ ಕೇವಲ ಸಂಗೀತಗಾರನಿಗಾಗಲಿ ಸಂಪೂರ್ಣವಾಗಿ ದೊರಕದದು. ಸ್ವಲ್ಪ ಮಟ್ಟಿಗೆ ಎರಡರ ಜ್ಞಾನವಿದ್ದವನಿಗೆ ಅಷ್ಟೇ ದಕ್ಕಬಲ್ಲದು. ಇಲ್ಲದಿದ್ದರೆ ಹೆಣ್ಣಿನ ವ್ಯಾಮೋಹದ, ವಿಷಯ ಲಂಪಟ ಮೋಹನ ಲಾಲನನ್ನಲ್ಲದೇ ಬೇರೇನನ್ನೂ ನಾವು ಅದರಲ್ಲಿ ದಕ್ಕಿಸಿಕೊಳ್ಳಲಾರೆವು.

ಬರೀ ಪಾಣಿಪತ್ ಕದನ ರಕ್ಕಸತಂಗಡಗಿ ಕದನಗಳ ಇಸ್ವಿಗಳಿಗಷ್ಟೇ ಸೀಮಿತವಾಗಿದ್ದ ನಮ್ಮ ಇತಿಹಾಸದ ಜ್ಞಾನಕ್ಕೆ ಐತಿಹಾಸಿಕ ಪ್ರಜ್ಞೆಗಳನ್ನು ಅನಾವರಣಗೊಳಿಸಿದ್ದು,ಅವುಗಳಿಗೆ ಒಂದು ಹೊಸದಾದ ಆಯಾಮ ದೊರಕಿಸಿದ್ದೇ ಸಾರ್ಥ, ಆವರಣದಂತಹ ಐತಿಹಾಸಿಕ ನೆಲೆಯಲ್ಲಿರುವ ಅವರ ಕಾದಂಬರಿಗಳು. ಮೊದಲ ಸಲ ಸಾರ್ಥ ಓದಿದಾಗ ದಂಗಾಗಿ ಬಿಟ್ಟಿದ್ದೆ. ‘ಸಾರ್ಥ’ ಎಂದರೆ ಅಲ್ಲಿಂದಿಲ್ಲಿಗೆ ಸಂಚರಿಸುವ ವ್ಯಾಪಾರಿಗಳ ಗುಂಪು ಎಂದಷ್ಟೇ ಗೊತ್ತಿದ್ದ ನನಗೆ ಸಾರ್ಥದಲ್ಲಿ ಏನೆಲ್ಲಾ ಉಂಟು? ಬಡಗಿ,ಅಡುಗೆ ಮಾಡುವವನು, ಡೇರೆ ಹಾಕುವವನು, ವೈದ್ಯ, ಪಶುವೈದ್ಯ, ಕಮ್ಮಾರರು, ಜನ ಹಾಗೂ ಪದಾರ್ಥಗಳನ್ನು ಹೊರಲು ಆನೆ, ಕುದುರೆ, ಕತ್ತೆ ಗಳು, ಕುದುರೆ ಗಾಡಿಗಳು, ವಿದ್ಯಾರ್ಥಿಗಳು, ಪ್ರವಾಸಿಗಳು, ಸನ್ಯಾಸಿಗಳು, ಧರ್ಮ ಪ್ರಚಾರಕರು.. ಇಡಿಯ ಪ್ರಪಂಚದ ಒಂದು ಸಣ್ಣ ತುಂಡು - ಮಿನಿ ಪ್ರಪಂಚವೇ ಸಾರ್ಥದಲ್ಲಿರುತ್ತದೆ ಎಂದು ಓದಿದಾಗ ಅರೆ ಹೌದಲ್ಲ ಎನ್ನಿಸಿದ್ದುಂಟು. ಸಾರ್ಥ ನನ್ನ ಮೆಚ್ಚಿನ ಕಾದಂಬರಿ. ಅದರಲ್ಲೂ ಶಂಕರ, ಮಂಡನ ಮಿಶ್ರ, ಭಾರತಿ, ಕುಮಾರಿಲ ಭಟ್ಟ ಇತ್ಯಾದಿ ವೃತ್ತಾಂತಗಳು ಬಹಳವೇ ಇಷ್ಟ. 98 ರಲ್ಲಿ ಆ ಕಾದಂಬರಿ ಬಂದಾಗ ಕಸ್ತೂರಿಯಲ್ಲಿ ಕುಮಾರಿಲ ಭಟ್ಟರು ಪ್ರಾಯಶ್ಚಿತ್ತ ರೂಪವಾಗಿ ಹೊಟ್ಟಿನ ಬೆಂಕಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗದ ವಿವರಣೆ ಇತ್ತು ಪುಸ್ತಕ ಪರಿಚಯ ಕಾಲಮ್‌ನಲ್ಲಿ. ಸುಮಾರು ದಿನಗಳವರೆಗೆ ಸಂಕಟಪಟ್ಟಿದ್ದೆ ನಾನೇ ಆ ಹೊಟ್ಟಿನ ಶಾಖದಲ್ಲಿ ಬೆಂದಂತೆ. ನಾನಾಗ ಅಮ್ಮನ ಮನೆಯೆಂದು ಇಲ್ಕಲ್ ಬಳಿ ಹಳ್ಳಿಗೆ ಹೋಗಿದ್ದೆ. ಅಲ್ಲಿ ಇಲಕಲ್ಲಿನಲ್ಲಿ ಇದ್ದದ್ದೇ ಒಂದು ಬುಕ್ ಸ್ಟಾಲ್. ಬಸವರಾಜ್ ಬುಕ್ ಡಿಪೋ ಅಂತ. ಅವನ ಅಂಗಡಿಗೆ ಹೋಗಿ ಸಾರ್ಥ ಕೇಳಿದೆ . “ಅಕ್ಕೋರ, ಇಲ್ಲಿ ಯಾರು ಓದ್ತಾರ್ರಿ ಅವನ್ನೆಲ್ಲ? ಮತ್ತ ಭಾಳ ಬಿರಿ ಪುಸ್ತಕರೀ..ಮಾರಾಟ ಆಗಂಗಿಲ್ರಿ. ಅದಕ್ಕೇ ತರಸಂಗಿಲ್ರೀ” ಅಂದುಬಿಟ್ಟ. ಬಿಜಾಪುರಕ್ಕೆ ವಾಪಸ್ ಹೋಗಲು ಇನ್ನೂ ವಾರವಿತ್ತು. ವಾರಗಟ್ಟಲೆ ಅದನ್ನು ಓದದೇ ಇರುವುದು ಹೇಗೆ? ಅಂಗಡಿಯವನಿಗೆ ದುಂಬಾಲು ಬಿದ್ದು ಸ್ಪೀಡ್ ಪೋಸ್ಟ್ ನ ಎಕ್ಸ್ಟ್ರಾ ದುಡ್ಡು ಕೊಟ್ಟು ಆ ಪುಸ್ತಕವನ್ನು ತರಿಸಿಯಾಯಿತು. ಅಂಥ ಹಳ್ಳಿಯಲ್ಲಿ ರಾತ್ರಿಯೆಲ್ಲ ಕರೆಂಟ್ ಇರುತ್ತಿರಲಿಲ್ಲ. ಚಿಮಣಿ, ಕಂದೀಲುಗಳ ಬೆಳಕಲ್ಲಿ ಎರಡು ರಾತ್ರಿ ಹಗಲುಗಳಲ್ಲಿ ಅದನ್ನ ಗಬಾ ಗಬ ಓದಿಯಾಯಿತು. ಹೀಗೆ ಬೆಂಬಿಡದೆ ಕಾಡಿ ಓದಿಸಿಕೊಳ್ಳುವ ತಾಕತ್ತು ಬರೀ ಭೈರಪ್ಪನವರ ಪುಸ್ತಕಗಳಿಗೆ ಮಾತ್ರ. ಸಾರ್ಥ ಹಿಂದು - ಬೌದ್ಧ ಧರ್ಮಗಳ ಸಂಘರ್ಷದ ಕಾಲಘಟ್ಟದ ಕಥೆ ಹೇಳಿದರೆ ಆವರಣ ಹಿಂದೂ - ಮುಸ್ಲಿಂ ಕಾಲಘಟ್ಟದ ಕಥೆ ಹೇಳುತ್ತದೆ ಹಂಪಿಯ , ಕಾಶಿಯ ವಿಶ್ವನಾಥನನ್ನು ಜೊತೆ ಜೊತೆಯಾಗಿ ಕಣ್ಣೆದುರಿಗೆ ತಂದುಬಿಡುತ್ತಾರೆ ಭೈರಪ್ಪ ಇದರಲ್ಲಿ. ಭೀಭತ್ಸರಸವನ್ನು ಓದಿಯೂ ಅನುಭವಿಸಬಹುದು ಎನ್ನುವುದು ಅರ್ಥವಾದದ್ದೇ ಆವರಣದ ಕೆಲವೊಂದು ವಿವರಗಳನ್ನು ಓದುವಾಗ. ಅದರ ಮುನ್ನುಡಿಯಲ್ಲಿ ಅವರು “ಸತ್ಯಶೋಧನೆಯಲ್ಲಿ ಓದುಗನು ಲೇಖಕನಷ್ಟೇ ಪಾಲುದಾರ ಪಾತ್ರಗಳನ್ನಾಗಲಿ ಸನ್ನಿವೇಶಗಳನ್ನಾಗಲಿ ಸತ್ಯದ, ಕಲಾ ಸತ್ಯದ ವಸ್ತು ನಿಷ್ಠೆಯಿಂದ ಗ್ರಹಿಸಿ ಅವುಗಳ ಭಾವವನ್ನು ಆಸ್ವಾದಿಸಬೇಕೇ ಹೊರತು ವೈಯಕ್ತಿಕ ರಾಗ ದ್ವೇಷಗಳಿಂದ ಉದ್ರೇಕಗೊಳ್ಳಬಾರದು ಎಂದು ಹೇಳಿರುವುದು ಅಕ್ಷರ ಸತ್ಯ. ಅದರಲ್ಲಿ ಶಕ್ತಿಯೇ ಧರ್ಮ,ಶಕ್ತ ವಲ್ಲದ್ದು ಧರ್ಮ ಹೇಗಾದೀತು ಎಂಬ ತರ್ಕ ಸ್ಫುಟವಾಯಿತು ಅನ್ನುವ ಮಾತೊಂದು ಬರುತ್ತದೆ ಯಾವಾಗಲೂ ಇದುವೇ ಐತಿಹಾಸಿಕ ಸತ್ಯವೇನೋ ಅನಿಸುತ್ತದೆ ಶಕ್ತವಾದದ್ದು ದುರ್ಬಲವಾದದನ್ನು ತನ್ನೊಳಗೆ ಎಳೆದುಕೊಂಡು ಬಿಟ್ಟಿದೆ ಅಂತ. ಡಾರ್ವಿನ್ ನ ವಿಕಾಸವಾದ ನೆನಪಾಗುತ್ತದೆ.
“ ಒಳಗಿನದನ್ನೆಲ್ಲ ಸುರಿದುಕೊಂಡರೂ ನಮ್ಮನ್ನು ತಕ್ಕಡಿಗೆ ಹಾಕುವುದಿಲ್ಲವೆಂಬಂಥ ಒಬ್ಬ ಆತ್ಮೀಯ ಸ್ನೇಹಿತನಿದ್ದರೆ….ಎಲ್ಲ ಜೀವಿಗಳ ಹಂಬಲದ ಪ್ರತೀಕವೆನಿಸುತ್ತದೆ ಈ ಮಾತು. ನಾವೆಷ್ಟೇ ಹೋರಾಡಿದರೂ ನಾವು ನಮ್ಮ ಸಂಸ್ಕಾರದ ಅಡಿಯಾಳುಗಳು, ವ್ಯವಸ್ಥೆ ಯ ಒಂದು ಅಂಗಗಳಷ್ಟೇ ಎಂಬುದು ಲಕ್ಷ್ಮಿ ಮತ್ತು ಪ್ರೊಫೆಸರ್ ಪಾತ್ರಗಳು ಮಾಡುತ್ತವೆ. ಒಟ್ಟಿನಲ್ಲಿ ಭೈರಪ್ಪನವರ ಕೃತಿಗಳ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆ. ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗೆ ಹೋಲಿಕೆಯೇ ಇಲ್ಲ ನಿಜವಾದ ಲೇಖಕನಿಗೆ ಪ್ರಶಸ್ತಿ ಸನ್ಮಾನಗಳೆಲ್ಲ ಬರೀ ನಿಮಿತ್ತ. ಅವನ ಶ್ರಮ ಸಾರ್ಥಕವಾಗುವುದು ಅವನ ಕೃತಿಗಳನ್ನು ಓದುವ, ಅರ್ಥೈಸಿಕೊಳ್ಳುವ ಓದುಗರು ದೊರೆತಾಗ ಮಾತ್ರ. ಅಂತಹ ಅಗಣಿತ ಓದುಗರು ಭೈರಪ್ಪನವರಿಗಿದ್ದಾರೆಂಬುದು ನಿರ್ವಿವಾದ. ಕನ್ನಡ ಸಾಹಿತ್ಯ ಲೋಕದಲ್ಲಿ ಅವರು ಪಡೆದ ವಿಶಿಷ್ಟವಾದ ಸ್ಥಾನಮಾನಕ್ಕೆ ಪರ್ಯಾಯ ಎನ್ನುವುದಿಲ್ಲ.