ನನ್ನೂರ ಹಾದಿ, ನನ್ನೂರ ಭೇಟಿ -ಡಾ. ರಾಜಶ್ರೀ ವೀ ಪಾಟೀಲ್

ಡಾ. ರಾಜಶ್ರೀ ವೀ ಪಾಟೀಲ್, ಸದ್ಯ ಲೆಸ್ಟರ್ ಗ್ಲೆನ್ ಫೀಲ್ಡ್ ಹಾಸ್ಪಿಟಲ್ ನಲ್ಲಿ ಕಾರ್ಡಿಯೋ ಥೋರಾಸಿಕ್ ರೇಡಿಯೊಲೊಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ . ‘ಅನಿವಾಸಿ’ಯಸಿಯಲ್ಲಿ ಒಂದಿಷ್ಟು ಜನಕ್ಕೆ ಪರಿಚಯವಿರುವ ಡಾ. ವೀರೇಶ್ ಪಾಟೀಲ ಅವರ ಪತ್ನಿ.  “ನಮಗಿಬ್ಬರು ಮುದ್ದಾದ ರಾಜಕುಮಾರಿಯರು ಖುಷಿ ಮತ್ತು ಇಂಚರ“ ಅನ್ನುತಾರೆ ಹೆಮ್ಮೆಯಿಂದ. ಅವರು ಸಹ ಅನಿವಾಸಿಗೆ ಹೊಸಬರಲ್ಲ. ಈ ಮೊದಲು ಸರಿಯಾಗಿ ಮೂರು ವರ್ಷಗಳ ಹಿಂದೆ ಅನಿವಾಸಿಯಲ್ಲಿ ಒಂದು ಲೇಖನವನ್ನು ಸಹ ಬರೆದಿದ್ದರು.(https://wp.me/p4jn5J-2OE) ಇತ್ತೀಚೆಗಷ್ಟೇ ಭಾರತಕ್ಕೆ ರಜೆಗೆಂದು ಮಕ್ಕಳೊಂದಿಗೆ ತಮ್ಮ ಊರಿಗೆ ಹೋಗಿ ಬಂದಿದ್ದಾರೆ. ಆ ಅನುಭವವನ್ನೇ ಇಲ್ಲಿ ಹಂಚಿ ಕೊಂಡಿದ್ದಾರೆ. ತಂದೆ -ತಾಯಿ, ಅತ್ತೆ-ಮಾವ ಅವರೊಡನೆ ಸಮಯ ಕಳೆದು ಹಬ್ಬ ಮಾಡಿ ಸವಿ ನೆನಪುಗಳನ್ನು ತರುವದನ್ನು ನಾವು ಸಹ ಮಾಡಿಲ್ಲವೆ?(ಮಕ್ಕಳು, ಮೊಮ್ಮಕ್ಕಳು ಬಂದದ್ದೇ ಹೆತ್ತವರಿಗೆ ಹಬ್ಬವಲ್ಲವೇ? ಆದರೂ …) ನಾವು ಶಾಲೆಯಲ್ಲಿ ಇಂಗ್ಲಿಷ್ ಟೆಕ್ಸ್ಟ್  ಪುಸ್ತಕದಲ್ಲಿ, ಕವಿತೆಗಳಲ್ಲಿ ಓದುತ್ತಿದ್ದ ವಿಕ್ಟೋರಿಯನ್ ‘Rural idyll’ ಇಂದಿನ ಇಂಗ್ಲೆಂಡಿನಲ್ಲಿ ಉಳಿದಿಲ್ಲ ಅಂತ ಬರೆದಿತ್ತು ಇತ್ತೀಚಿನ ಒಂದು ಗಾರ್ಡಿಯನ್ ಲೇಖನದಲ್ಲಿ. ಜಿ ವಿ ಅವರ ನಿಘಂಟು ಆ ಪದಕ್ಕೆ ಕೊಟ್ಟ ಅರ್ಥವಾದ ’ಹಳ್ಳಿ ಜೀವನದ ಮನೋಹರ ಜೀವನದ ವರ್ಣನೆ’ ಭಾರತದ ಹಳ್ಳಿಗಳಲ್ಲಿ ಇಂದಿಗೂ ನೋಡ ಬಹುದು. ರಾಜಶ್ರೀ ಅವರ ಶಿಗ್ಲಿಯ ಮನೆಯ ಮುಂದೆ ಕಾರಿರಬಹುದು. ಹೊಲದಲ್ಲಿ ಟ್ರಾಕ್ಟರ್ ಇರಬಹುದು. ಮನೆಯ ಹಿಂದಿನ ರೊಪ್ಪೆಯಲ್ಲಿ ಆಡುಗಳು ಮತ್ತು ’ನಮ್ಮೂರ ಹಾದಿ’ಯಲ್ಲಿ ಎಮ್ಮೆಗಳ ಹಿಂಡು, ಎತ್ತುಗಳು ಇನ್ನೂ ಇವೆ. ’ಮನೆಯ ಸುತ್ತ ಮಾನವೀಯತೆಯ ಸೆಲೆ’ಗೆ ಸಾಕ್ಷಿಯಾಗಿ ಶಾಲೆಯ ಗೆಳೆಯ ಕುಡಿಸಿದ ಜೀರಾ ಸೋಡಾ ಇದೆ ಪ್ರೀತಿ ಸವಿದು ನೀರಡಿಕೆ ತಣಿಸಲು! ಎಲ್ಲಿದೆ idyll? ನಂದನ ಇಲ್ಲಿದೆ! ಆದರೆ ಪ್ರತಿಯೊಬ್ಬರ ವಿಶಿಷ್ಟ ಅನುಭವವೂ ಭಿನ್ನ. ರಾಜಶ್ರೀ ಅವರ ಅನುಭವವನ್ನು ಅವರ ಬಾಯಲ್ಲೇ ಕೇಳುವಾ, ಓದುವಾ, ನೋಡುವಾ. ಲೇಖನ, ಕವನ ಮತ್ತು ಚಿತ್ರಗಳು ಸಹ ರಾಜಶ್ರೀ ಅವರ ಕೊಡುಗೆಯೇ! (ಸಂ)

ರಾಜಶ್ರೀ ಬರೆಯುತ್ತಾರೆ ...
ಎರಡು ವಾರದ ಹಿಂದೆ ಭಾರತಕ್ಕೆ, ಅಂದರೆ ನನ್ನೂರು ಗದಗ ಜಿಲ್ಲೆಯ, ಶಿರಹಟ್ಟಿ ತಾಲ್ಲೂಕಿನ, ಬಯಲುಸೀಮೆಯ ಸಣ್ಣ ಹಳ್ಳಿ ಶಿಗ್ಲಿಗೆ, ತಮ್ಮನ ಹೆಂಡತಿಯ ಶ್ರೀಮಂತಕೋಸ್ಕರ ಭೇಟಿ ನೀಡಿದ್ದೆವು. ಭಾರತದ ಪ್ರವಾಸದ ಬಗ್ಗೆ ಬರೆಯಲು ಹೊರಟರೆ ಪದಗಳು ಮತ್ತು ವೇಳೆ ಯಾವಾಗಲು ಅಭಾವವೇ. ನನ್ನ ಇತ್ತೀಚಿನ ಭೇಟಿಯ ಬಗ್ಗೆ ತಿಳಿದ ದೇಸಾಯಿಯವರ ಪ್ರೋತ್ಸಾಹ ದೊರಕಿದ್ದೇ ತಡ, ತಲೆಯಲ್ಲಿ ನೂರೆಂಟು ಯೋಚನೆಗಳು. ದಾವಣಗೇರೆ ಬೆಣ್ಣೆ ದೋಸೆ ಬಗ್ಗೆ ಬರೀಲಾ, ಅತ್ತೆ ಮಾವನವರ ಜೊತೆ ಭೇಟಿನೀಡಿದ ಮಲೇಬೆನ್ನೂರು ವೀರಭದ್ರೇಶ್ವರ ದೇವರ ಆಧುನಿಕ ಕಲ್ಲಿನ ಗುಡಿಯ ಬಗ್ಗೆ ಬರೀಲಾ, ಎಲ್ಲರು ಸೇರಿ ಹೋದ ನಾಕು ದಿನದ, ಸಂತಸದ ಬುಗ್ಗೆ ಹರಿಸಿದ ದಾಂಡೇಲಿಯ ಪ್ರವಾಸದ ಬಗ್ಗೆ ಬರೀಲಾ ಅಂತ ಯೋಚಿಸಿದಾಗ, ನನ್ನೂರಿಗೆ ಸರಿಸಾಟಿ ಇಲ್ಲವೆಂದೆನಿಸಿ ಬರೆದ ಈ ಚಿಕ್ಕ ಪ್ರಯತ್ನ.
ನನ್ನೂರ ಹಾದಿ , ನನ್ನೂರ ಭೇಟಿ 
ನನ್ನೂರ ಹಾದಿ , ನನ್ನೂರ ಭೇಟಿ 
ಹಸಿದವಳಿಗೆ ಹರಿವಾಣದಲ್ಲಿ ನೀಡಿದ ರೊಟ್ಟಿ ಬುತ್ತಿ 
ನನ್ನೂರ ಹಾದಿ,  ಈತ್ತೀಚಿನ ನನ್ನೂರ ಭೇಟಿ, 
ಬಾರಿ ಬಾರಿ ನಡೆದರೂ, ಬಾರಿ ಬಾರಿ ಮಾಡಿದರೂ ಇದಕಿಲ್ಲ ಸರಿಸಾಟಿ 

ಬಾಲ್ಯಕಳೆದ ಮನೆ, ಕನ್ನಡದೊಟ್ಟಿಗೆ ಬದುಕು ಕಲಿಸಿದ ಶಾಲೆ 
ಊರ ತುಂಬೆಲ್ಲ ಕಾಕಾ, ಚಿಗವ್ವಗಳು, 
ಅವರು ಕಲಿಸಿದ ಸಂಬಂಧಗಳ ಬೆಲೆ
ಮನೆಯ ಸುತ್ತ ಮಾನವೀಯತೆಯ ಸೆಲೆ,
ಶೇಂಗಾ, ಹತ್ತಿ ಹೊಲ, ಅದರಲ್ಲಿರೋ ದನಕರು, ಕುರಿಕೋಳಿಗಳು. 
ಮನತೃಪ್ತಿ ಯಾಗಲು ಇದಕ್ಕಿಂತ ಬೇಕೇ ಬೇರೆ ಚಂದದ ನೆಲೆ?

ಅಪ್ಪನೊಂದಿಗೆ ಊರ ತುಂಬೆಲ್ಲ ಟ್ರಾಕ್ಟರ್ ಸವಾರಿ,
ನನಗನ್ನಿಸಿತು ಬಾರಿ, ಬಾರಿ ನಾನೊಬ್ಬ ರಾಜಕುಮಾರಿ,
ಆದರೆ ಅವರಿಗೋ ಅನ್ನಿಸಿದ್ದು ತನ್ನದೊಂದು ಅಂಬಾರಿ,  
ಅದರಲ್ಲಿ ನನ್ನೊಂದಿಗೆ ಕುಳಿತ ಅವರ ಮೊಮ್ಮಗಳೊಬ್ಬ ವಿಶ್ವಸುಂದರಿ. 
ಸಿಕ್ಕವರಿಗೆಲ್ಲ ಪರಿಚಯಿಸಿ ಬಣ್ಣಿಸಿದ ವೈಖರಿ ಭಾರೀ. 

ಪಂಚಮಿ ಮುಂಚೆಯೆ ಮೊಮ್ಮಕ್ಕಳಿಗಾಗಿ ಬಂದಿತ್ತು ಗಂಡಮ್ಮನ ಪಂಚಮಿ ಉಂಡಿ, 
ಗೌರವ್ವ ಕೆರೆ ಸೇರಿ ಮಾಸಗಳೇ ಕಳೆದರೂ ಹೆಣ್ಣಮ್ಮನಿಂದ ಬಂದಿತ್ತು ಸಕ್ಕರೆ ಗೊಂಬೆ, 
ಇದೆಲ್ಲ ನೋಡಿ ನೆನಪಾಗಿತ್ತು ನನ್ನ ಬಾಲ್ಯದ ಪಂಚಮಿ, ಗೌರಿ ಹುಣ್ಣಿವೆ . 
ಅದಕಾಗಿ ಆಡಿಯೂ ಆಯಿತು ಜೋಕಾಲಿ, ಹಾಡಿ ಕರೆದೂ ಆಯಿತು ಗೌರವ್ವನ. 

ತಮ್ಮನೊಂದಿಗೆ ಊರ ಸಂತೆಯಲಿ ಮಾಡಿದ ಚೌಕಾಸಿ 
ನೆನಪು ಮಾಡಿತ್ತು ಬಾಲ್ಯದ ನಾಕಾಣಿ, ಎಂಟಾಣಿಯಲಿ ಬಂದ ಖುಸಿ 
ಅದನ ನೆನೆಸಿಕೊಂಡು ಮುಂದೆ ನಡೆವಾಗ ಶಾಲೆಯ ಗೆಳೆಯ 
ಅಕ್ಕರೆಯಿಂದ ಕರೆದು ಕುಡಿಸಿದ ತನ್ನಂಗಡಿಯ ಜೀರಾ ಸೋಡಾ, 
ಅನ್ನಿಸುವಂತೆ ಮಾಡಿತ್ತು ಈ ಖುಷಿಗೆ ಸರಿಸಾಟಿ ಇಲ್ಲ ನೋಡಾ!

       ಡಾ. ರಾಜಶ್ರೀ ವೀ ಪಾಟೀಲ್

ಶ್ರೀಮತಿ ಮೈದಾಸ – ಗೌರಿ ಪ್ರಸನ್ನ

ಐನೂರು ಆವೃತ್ತಿ ದಾಟಿದ ಅನಿವಾಸಿಯ ಬ್ಲಾಗಿಗೆ ಮತ್ತೊಮ್ಮೆ ನಿಮಗೆಲ್ಲ ಸ್ವಾಗತ, ನಮಸ್ಕಾರಗಳೊಂದಿಗೆ. ಇವತ್ತಿನ ಅಂಚೆಯಲ್ಲಿ ಶ್ರೀಮತಿ ಗೌರಿ ಪ್ರಸನ್ನ ಬರೆದ “ಶ್ರೀಮತಿ ಮೈದಾಸ” ಅನ್ನುವ ಕವನವಿದೆ. ಅವರೇ ಹೇಳಿರುವಂತೆ, ಇದು ಇಂಗ್ಲೀಷಿನ “Carol Ann Duffy ಯವರ Mrs Maidas ನಿಂದ ಪ್ರೇರಿತ. ಅದರ ಭಾಷಾಂತರವೋ, ಭಾವಾನುವಾದವೋ ಖಂಡಿತ ಅಲ್ಲ. A level ನಲ್ಲಿ English literature ಕಲಿಯುತ್ತಿರುವ ಮಗಳು ಅಕ್ಷತಾ ಕೆಲ ದಿನಗಳ ಹಿಂದೆ ತನ್ನ syllabus ನಲ್ಲಿರುವ ಈ ಹಾಡಿನ ಬಗ್ಗೆ ಮಾತಾಡಿದ್ದೇ ತಡ. Mrs.Maidas ಮನದಲ್ಲಿ ಗಟ್ಟಿಯಾಗಿ ನಿಂದು ತಲೆ ತಿನ್ನಲಾರಂಭಿಸಿದ್ದೇ ಈ ಪ್ರಯತ್ನದ ನಾಂದಿ.” ವ್ಯಾಲೆಂಟೈನ್ ದಿವಸ ಹತ್ತಿರ ಬಂದಂತೆ, ಸ್ವಲ್ಪ ಪ್ರೇಮಿಗಳ / ಪ್ರೇಮಕಾವ್ಯಗಳ ಹಾವಳಿ ಸಹಜವಾಗಿಯೇ ಹೆಚ್ಚಾಗುತ್ತದೆ. ಆದರೆ ಇಲ್ಲಿ, ಮುಟ್ಟಿದ್ದೆಲ್ಲ ಬಂಗಾರ ಮಾಡುವ ಇನಿಯನ ಪ್ರಿಯೆಯ ಕಷ್ಟಗಳ ಅಳಲಿದೆ, ಹತ್ತಿರವಿದ್ದೂ ಕೈಹಿಡಿಯಲಾಗದ ಪರಿಸ್ಥಿತಿಯ ಸಂಕಟವಿದೆ. ಬನ್ನಿ, ಓದೋಣ, ಓದಿ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳೋಣ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).

ಜೂನ್ ತಿಂಗಳ ಮೊದಲ ಮುಂಗಾರು ಮಳೆ.. 
ಬಿದ್ದ ತಟಪಟ ಹನಿಗೆ ತೊಯ್ದು ತುಟಿದೆರೆದ ಇಳೆ..
ಬೆಳ್ಳನೆ ತಟ್ಟೆ ಇಡ್ಲಿಯ ನಸು ಬೆಚ್ಚನೆಯ ಹಬೆ, ಚಟ್ನಿಗೆಂದು ಕಾಸಿದ ಇಂಗು-ಕರಿಬೇವಿನೊಗ್ಗರಣೆಯ ಘಮ,ಕುದಿಯುತ್ತಿರುವ ಚಹಾದ ತುಸು ಕಹಿ ಒಗರು..ತಾಟು, ಬಟ್ಟಲು, ಚಮಚೆ,ಲೋಟ,ಕಪ್ ಗಳ, ಹೆಚ್ಚಿಟ್ಟ ಅರ್ಧ ನಿಂಬೆ, ಕರಿಬೇವ ಕಡ್ಡಿಗಳ.. ಸಂತೆಯ ಮಾಳ ನನ್ನ ಅಡುಗೆ ಕಟ್ಟೆ..
ತುಂಬು ಸಜೀವತೆಯ ಪ್ರತೀಕ..
ಪ್ರೀತಿ - ರೀತಿಗಳ ನಿತ್ಯಸತ್ಯ ಲೋಕ

ಅಡರಿದ್ದ ಮಿಶ್ರ ಘಮಟು ಹೊರಹೋಗಲನುವಾಗಲೆಂದು
ತುಸುದೆರೆದ ಕಿಟಕಿಯ ಇನ್ನಷ್ಟು ತೆರೆದೆ..
ನಮ್ಮನೆ ಪುಟ್ಟ ಕೈ ತೋಟದಲಿ .. ಅದೋ .ನನ್ನ ಮೈದಾಸ,ಜೀವದ ಜೀವ.. ನನ್ನೊಲವು..
ನಾವೇ ನೆಟ್ಟ ಮಲ್ಲಿಗೆಯ ಬಳ್ಳಿಗೀಗ ಮೈತುಂಬ ಹೂವು..
ಟೊಂಗೆ ಟೊಂಗೆಯಲಿ ತೂಗುತಿದೆ ಗಿಣಿ ಕಡಿದ ಗಿಣಿಮೂತಿ ಮಾವು
ಗಿಡಗಂಟೆಗಳ ಕೊರಳಲ್ಲಿ ಗುಬ್ಬಚ್ಚಿ ಮರಿಯ ಚೀಂವ್ ಚೀಂವು..
ಅರೇ! ಇದೇನಿದು!!..

ಮಾವು ಕೀಳಲೆಂದು ಅವ ಬಗ್ಗಿಸಿದ ಟೊಂಗೆಯ ಎಲೆಯ ಹಸಿರೊಮ್ಮೆಗೇ ಪೀತ ವರ್ಣ.ಕಿತ್ತ ಬಿಳಿಯ ಮಲ್ಲಿಗೆಗೆ ಬಂಗಾರ ಬಣ್ಣ
‘ಸುವರ್ಣ ಪುಷ್ಪ ದಕ್ಷಿಣಾಂ ಸಮರ್ಪಯಾಮಿ’ ಮಂತ್ರದನುರಣ

ಅರೇ,ಇದೇನಿದು ಅಂಗೈಲ್ಹಿಡಿದ ಮಾವಿಗೂ ನೂರು ಕ್ಯಾಂಡಲ್ ಬಲ್ಬ್ ಪ್ರಭೆ..
ಅನತಿ ದೂರದಿಂದಲೂ ಕಂಡ ಅವನ ವಿಜಯದ ನಗೆಗೆ ನಾನು ಅಪ್ರತಿಭ
ಪುಟ್ಟ ತೋಟದ ಕಟ್ಟಿಗೆಯ ಗೇಟು ದೂಡಿದನಷ್ಟೇ..ಅದೂ ಚಿನ್ನದಂತೆ ಥಳಥಳ..

ದಣಿದ ದೇಹ ಚೆಲ್ಲಿ ಅವ ಕೂತ ಹಾಲ್ ನ ಹಳೆಯ ಕಂದು ಈಸಿ ಚೇರ್ ಬಟ್ಟೆ .. ಕ್ಷಣ ಮಾತ್ರದಲಿ ಹೊಂಬಣ್ಣದ ಪಟ್ಟೆ.

ಮೆತ್ತಗಿನ ಮೃದು ಇಡ್ಲಿಗೆ ಅವನ ಕೈ ಸೋಕಿತಷ್ಟೇ..ಅದುವೂ ಇದೀಗ ಹಳದಿ ಲೋಹದ ಮುದ್ದೆ.

‘ಓಹ್! ದೇವರೇ’ ನಿಡುಸುಯ್ದ ಅವನ ಮೊಗದ ತುಂಬ ಕಳವಳ
‘ಇದೇನಾಗುತಿದೆ?’ ನನ್ನೆದೆಯ ಗೂಡಲ್ಲೂ ಭಯ, ಆತಂಕ,ತಳಮಳ
ಅಳುಕುತ್ತಲೇ ಮುಟ್ಟಿದ ಚೀನೀಮಣ್ಣಿನ ಕಪ್ ನ ಚಹಾ ತಾನಾಯಿತು
ಕ್ಷಣಾರ್ಧದಲೇ ಕನಕ ಭೂಷಿತ ಹಿಡಿಯ ಕಪ್ಪಿನ ಹಳದಿದ್ರವ

‘ನಿಲ್ಲು, ಹಿಂದೆ ಸರಿ. ಮುಟ್ಟದಿರು ನನ್ನ’- ಚೀರಿದ.
ನನ್ನ ಕೈಕಾಲೆಲ್ಲ ನಡುಕ, ಕಣ್ಣು ಕತ್ತಲೆ.. ಕುಸಿದೆ
‘ಮ್ಯಾಂವ್ ಎಂದು ಒಡೆಯನ ತೊಡೆಯೇರ ಬಂದ ಟಾಮಿಯ ಕಂಡೆ..ಧಡಕ್ಕನೆದ್ದೆ – ಕೊಠಡಿಯಲಿ ಕೂಡಿ ಕೊಂಡಿ ಜಡಿದೆ.

ಕೊಪ್ಪರಿಗೆಯೋ, ಕೊಳಗವೋ, ಕ್ವಿಂಟಲ್ಲೋ ಬೇಡಿದರಾಗುತ್ತಿರಲಿಲ್ಲವೇ?
ಬೇಡುವವ ಮೂರ್ಖನಾದರೇನಂತೆ ನೀಡುವವಗಾದರೂ ಬುದ್ಧಿ ಬೇಡವೇ?
‘ಮುಟ್ಟಿದ್ದೆಲ್ಲ ಚಿನ್ನ’ವಾಗಿಸುವ ದುರಾಸೆ ಏಕೆ ಬೇಕಿತ್ತು?
ಗೆರೆ ದಾಟಿದ ಮೇಲಷ್ಟೇ ಅರಿವಾಗುವುದಲ್ಲವೇ ಆಪತ್ತು?

‘ಅತ್ಯಾಸೆ ಗತಿಗೇಡೆಂದು ದೃಷ್ಟಾಂತ ಕೊಡುತ್ತದೆ ಜಗತ್ತು
ಇರಲಿಲ್ಲವೇನು ಹಲಕೆಲವು ಅನಿವಾರ್ಯತೆ – ಜರೂರತ್ತು
ಬಣ್ಣ ಬೇಡುವ ಗೋಡೆ, ಬಳಕೆಗೊಂದು ಗಾಡಿ, ದುರಸ್ತಿಗೆ ಬಂದ ಛತ್ತು
‘ನನ್ನದೇನೂ ತಪ್ಪಿಲ್ಲ’ – ಅನ್ನಲಾರೆ ಖಂಡಿತ.ಮದುವೆ ಛತ್ರದಲ್ಲೋ, ಹಬ್ಬ ಸಮಾರಂಭದಲೋ ಕಂಡು ಓರಗೆಯವರ ಸೀರೆ,ಒಡವೆ, ದೌಲತ್ತು..
ನಾನೂ ರಗಳೆ ಮಾಡಿ ಮಾಡಿ ಅವನ ಕಂಗೆಡಿಸಿದ್ದಿದೆ ಕಿಂಚಿತ್ತು

ಅವನಿಗೀಗ ಚಿನ್ನದ್ಹಾಸಿಗೆಯಲಿ ನಿದ್ದೆಯಿಲ್ಲದ ಹೊರಳಾಟ
ಇನಿಯನಪ್ಪುಗೆಯಿಲ್ಲದ ಸುಪ್ಪತ್ತಿಗೆಯಲ್ಲಿ ನನ್ನ ಗೋಳಾಟ
ನಲ್ಲನಪ್ಪುಗೆಗೆ ಕಾಡುವ ದೇಹ-ಮನ-ಆತ್ಮಗಳ ಸಂಭಾಳಿಸಲಾಗದೇ ಒದ್ದಾಡುತ್ತಿದ್ದೇನೆ.
ಶಾಪ, ಅಭಿಶಾಪಗಳಂತಿರಲಿ.. ವರವೂ ಹೀಗೆ ಶಾಪವಾಗುವ ಪರಿಗೆ ಕಂಗಾಲಾಗಿದ್ದೇನೆ.

ಬಲುಬಾರಿ ಅನ್ನಿಸುವುದುಂಟು.. ಏನಾದರಾಗಲಿ, ಒಮ್ಮೆ ಅವನ ಬಿಗಿದಪ್ಪಿ ಪುತ್ಥಳಿಯಾಗಿ ಕುಳಿತುಬಿಡಲೇ ಪಕ್ಕದಲೆ
ಎಲ್ಲ ತೊಳಲಾಟ, ನರಳಾಟ, ನೋವು, ಹಿಂಸೆಗಳಿಗೆ ಮಂಗಳ ಹಾಡಿಬಿಡಲೇ?

ಛೇ!ಛೇ!! ಈ ಆಪತ್ತಿನ ಸಮಯದಲಿ ಇಂಥ ಸ್ವಾರ್ಥಿಯಾಗಲಾರೆ.
ನಮ್ಮೊಲವ ಸಾಂಗತ್ಯ, ಸಿಹಿಕಹಿ ದಾಂಪತ್ಯ ತೊರೆಯಲಾರೆ
ಕಣ್ಣಿನಲೇ ಅವನ ಮುಟ್ಟಿ, ಮೈದಡವಿ ಸಂತೈಸದಿರಲಾರೆ
ಧರ್ಮೇಚ-ಅರ್ಥೇಚ-ಕಾಮೇಚ.. ಕೊಟ್ಟ ವಚನ ನಿಭಾಯಿಸದಿರಲಾರೆ.


- ಗೌರಿ ಪ್ರಸನ್ನ

*************************************