ದೇವರೇ, ನೀನೆಲ್ಲಿರುವೆ? – ಶ್ರೇಯಾ ಅರಸ್ ಬರೆದ ಕವಿತೆ, ’ಅನ್ವೇಷಣೆ’ ಮತ್ತು ಅನುವಾದಗಳು

ಈ ವಾರದ ಸ್ಪೆಷಲ್ ಪ್ರಸ್ತುತಿ ೧೪ ವರ್ಷದ ಶೆಫೀಲ್ಡ್ ಟ್ಯಾಪ್ಟನ್ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ದೇವರನ್ನರಸುವ ಗಹನವಾದ ವಿಷಯದ ಬಗ್ಗೆ ಇಂಗ್ಲಿಷ್ದಲ್ಲಿ ಬರೆದ ಕವಿತೆ ಮತ್ತು ಅದರ ಕನ್ನಡ ಅನುವಾದ ! ಆಕೆಯ ಶಾಲೆಯಲ್ಲಿ ಕಡ್ಡಾಯವಾಗಿ ರಿಲಿಜಸ್ ಎಜುಕೇಷನ್ (RE) ಕಲಿಸಲಾಗುತ್ತದೆ. ಅದರ ಅಂಗವಾಗಿ Spirited Arts ಬಗ್ಗೆ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದಿತು. ಅವಳು ಈ ಕವನವನ್ನು ಬರೆಯಲು ಆಯ್ದು ಕೊಂಡಳು ”ಬೇಗನೆ ಬರೆದು ಮುಗಿಸಲು ಬರುತ್ತದೆ‘’ಅಂತ! ಡೆಡ್ ಲೈನ್ ಹಿಂದಿನ ರಾತ್ರಿ ಕೊನೆಯ ಗಳಿಗೆಯಲ್ಲಿ ಬರೆದು ಕೊಟ್ಟಳಂತೆ. ಜೀವನ ದ ಮೂರು ಹಂತಗಳಲ್ಲಿ – ಚಿಕ್ಕಂದಿನಿಂದ, ಪ್ರೌಢ ನಂತರ ’ಮುದಿ’ ವಯಸ್ಸಿನಲ್ಲಿ- ದೇವರ ಅನ್ವೇಷಣೆ ಹೇಗೆ ಬದಲಾಗುತ್ತ ಹೋಗುತ್ತದೆ, ಮತ್ತು ಕೊನೆಗೆ ಸಿಗುವ ಉತ್ತರ ಇದನ್ನು ಸುಂದರವಾಗಿ ನಿರೂಪಿಸಿದ್ದಾಳೆ ಶ್ರೇಯಾ. ಆಕೆ ಪ್ರತಿಭಾವಂತ ಬಾಲಕಿ. ಬ್ಯಾಡ್ಮಿಂಟನ್ ಪಟು. ಈ ನಾಡಿನ ನಾಲ್ಕು ’ದೇಶಗಳ’ನ್ಯಾಷನಲ್ ಕೆಟೆಗರಿಯಲ್ಲಿ ಸ್ಪರ್ಧಿಸಿ ಯಶಸ್ವಿಯಾಗಿದ್ದಾಳೆ. U15 ಸಿಂಗಲ್ಸ್ ವರ್ಗದಲ್ಲಿ ೧೦ನೆಯ ರಾಂಕ್ ಮತ್ತು ಮಿಕ್ಸ್ಡ್ ವರ್ಗದಲ್ಲಿ ಎರಡನೆಯ ಸ್ಥಾನ ಗಳಿಸಿದ ಶ್ರೇಯಸ್ಸು ಅವಳದು. ಇದಲ್ಲದೆ ಮೆಡಿಟೇಷನ್, ಡ್ಯಾನ್ಸಿಂಗ್, ಭಾಷಣ, ಓದುವುದು ಮತ್ತು ಚಿತ್ರಕಲೆಯಲ್ಲಿಯೂ ಅವಳಿಗೆ ಆಸಕ್ತಿ. ತಂದೆ- ತಾಯಂದಿರು ಇಬ್ಬರೂ ವೈದ್ಯರು ಮತ್ತೊಬ್ಬ ತಂಗಿಯೊಂದಿಗೆ ಶೆಫೀಲ್ಡ್ ದಲ್ಲಿ ವಾಸಿಸುತ್ತಿದ್ದಾಳೆ. ಶಾಲೆಯಿಂದ ಆಯ್ಕೆಯಾದ ಮೂರು ಕವನಗಳಲ್ಲಿ ಅವಳದೂ ಒಂದು. ಸ್ಫರ್ಧೆಯ ಕೊನೆಯ ಹಂತದಲ್ಲೂ ಆಕೆಗೆ ಜಯವಾಗಲೆಂದು ಆಶಿಸೋಣ.(ಸಂ)

GOD are you there ?

In a tender age, we always ask,
"where is GOD ?"
Small necks crane their heads way into the sky,
Looking for a spark of light, looking for a sign,
But in this unattainable quest, hope is lost,
Forgetting the crucial truth at all cost,

But while we grow we aimlessly look,
Temples, churches, synagogues everywhere we go,
To find the Supreme God we've never seen,
Hoping this is not just a simple dream,

But we hear "you cannot see me with your present eyes"
Echoing in ornate temple, a due on our everlasting, fatiguing path,
Reaching us to the ultimate truth, this guide to life,
This ongoing hourglass,

In a ripe , knowledgeable age, we still ponder,
"where is GOD"
Through prayers, through books , constantly we still look ,
When he says "Seek me with all your heart"
Resonating on the intricate stained windows of the church like a dart,

Into our hearts we go ,for we learnt what had been lost,
It didn't take our eyes, binoculars, never ending, never accepting questions ,
But faith in the truth we receive,
And finally, decades later, to have been achieved,

Frail skin, wide eyed, but still a tender heart,
We don't ask those questions anymore, for we know,
Within the oceans, within the skies,
GOD is simply wherever you lie.

Shreya Arun Urs

The above is Shreya’s  own write up about how she structured the poem and the ideas that inspired her. 
ಇಂಗ್ಲೆಂಡಿನಲ್ಲೇ ಹುಟ್ಟಿ ಬೆಳೆಯುವ ನಮ್ಮ ಮಕ್ಕಳು ಪೂರ್ವ ಮತ್ತು ಪಶ್ಚಿಮದ ಸಂಸ್ಕೃತಿಗಳೆರಡನ್ನೂ ಅರಿತವರಾಗಿರುತ್ತಾರೆ ಮತ್ತು ಅವುಗಳಪ್ರಭಾವ ಅವರ ಮೇಲೆ ಆಗಿರುತ್ತದೆ ಎನ್ನುವದು ಮೇಲಿನ ಕವಿತೆಯಲ್ಲಿ ಮತ್ತು ಸ್ವತಃ ತನ್ನ ಕೈಬರಹದಲ್ಲಿ ಶ್ರೇಯಾ ಬರೆದ ವಿವರಣೆಯಿಂದ ಗೊತ್ತಾಗುತ್ತದೆ.  ಭಗವದ್ಗೀತೆಯ ಮತ್ತು ಬೈಬಲ್ಲಿನ ಜರೆಮಯ್ಯ ಅಧ್ಯಾಯದ ಉಲ್ಲೇಖನ ಸ್ಪಷ್ಟವಾಗಿಯೇ ಇದೆ. ಇಲ್ಲಿ ಬೆಳೆಯುವ ಮಕ್ಕಳು ಐದು ವರ್ಷದ ಭಕ್ತ ಧೃವ ಮತ್ತು ನಚಿಕೇತರ ಉಪನಿಷತ್ತಿನ ಕಥೆಗಳನ್ನು ಅವರು ಕೇಳಿರಬಹುದು.ವಿವೇಕಾನಂದರು ರಾಮಕೃಷ್ಣರನ್ನು ಕಂಡ ಕಥೆಯನ್ನೂ ಕೇಳಿ ಓದಿರ ಬಹುದು. ಇಂಗ್ಲಿಷ್ ವಿದ್ಯಾರ್ಥಿಯಾಗಿ ಅನ್ವೇಷಣೆಯಲ್ಲಿದ್ದ ಹದಿನೆಂಟು ವರ್ಷದ ಕಾಲೇಜು ಹುಡುಗ ನರೇಂದ್ರ ದತ್ತ (ವಿವೇಕಾನಂದರ ಮೊದಲನೆಯ ಹೆಸರು) ಒಮ್ಮೆ ಪ್ರೊಫೆಸರ್ ವಿಲಿಯಂ ಹೇಸ್ಟೀ ಅವರ ಉಪನ್ಯಾಸ ಕೇಳಲು ಹೋದಾಗ ವಿಲಿಯಮ್ ವರ್ಡ್ಸ್ವರ್ಥನ ’ದ ಎಕ್ಸ್ಕರ್ಷನ್’ (The Excursdion) ನೀಳ್ಗವಿತೆಯಲ್ಲಿ ಬರುವ ಟ್ರಾನ್ಸ್ (trance) ಶಬ್ದ ಅಂದರೇನು ಅಂತ ಕೇಳಿದಾಗ ಆತ ದಕ್ಷಿಣೇಶ್ವರದ ಸಾಧು ರಾಮಕೃಷ್ಣರ ಪರಮಹಂಸರನ್ನು ಭೇಟಿಯಾಗಲು ಕಳಿಸಿದರಂತೆ. ಅದು ಅವರ ಮೊದಲ ಭೇಟಿಯಾಗಿತ್ತು. ನಂತರ ಮೂರನೆಯ ಭೇಟಿಯಲ್ಲಿ ’ನೀವು ದೇವರನ್ನು ಕಂಡಿದ್ದೀರಾ?’ ಅಂತ ಅವರನ್ನು ಕೇಳಿದಾಗ ಅವರು ಹೌದು ಅಂದರಂತೆ. ೨೧ನೆಯ ಶತಮಾನದಲ್ಲಿ ಇಲ್ಲಿ ಶ್ರೇಯಾ ಸಹ ಅದೇ ತರಹದ ಪ್ರಶ್ನೆ ಕೇಳಿದ್ದರಲ್ಲಿ ಆಶ್ಚರ್ಯವಿಲ್ಲ. ಅದಕ್ಕನುಗುಣವಾಗಿಯೋ ಎನ್ನುವಂತೆ ನಮ್ಮ ಚಿತ್ರಕಾರರಾದ ಡಾ ಎಲ್ ಎನ್ ಗುಡೂರ್ ಅವರು ಆಧುನಿಕ ಯಂತ್ರಾಂಶದ ’ದಿವ್ಯ ಚಕ್ಷುವನ್ನು’ ಅರ್ಜುನನಿಗೆ ಕೊಡುತ್ತಿದ್ದಾರೆ! ಅವರಿಗೆ ಧನ್ಯವಾದಗಳು. ಕೆಳಗೆ ಕೊಟ್ಟ ಆ ಕವಿತೆಯ ಕನ್ನಡ ಅನುವಾದ ಒಂದು ಸಾಮೂಹಿಕ ಪ್ರಯತ್ನ. ಶ್ರೇಯಾನ ಕಟುಂಬದವರ ಪ್ರಯತ್ನವೂ ಅದರಲ್ಲಿದೆ. ಬೆಂಗಳೂರಿನಲ್ಲಿರುವ ಶಿಕ್ಷಕಿ ಆಕೆಯ ಅಜ್ಜಿ ಗದ್ಯದಲ್ಲಿ ಬರೆದ ಕನ್ನಡದ  ತರ್ಜುಮೆ, ಸೋದರ ಮಾವ AI (ಕೃತಕ ಬುದ್ಧಿಮತ್ತೆಯ) ಸಹಾಯದಿಂದ ಮಾಡಿದ ಅನುವಾದ ಎಲ್ಲ ಆ ಪರಿಷ್ಕರಣೆಯಲ್ಲಿ ಮೇಳೈಸಿವೆ. 

(ಮೇಲಿನ ಕವಿತೆಯ ಕನ್ನಡ ಅನುವಾದ)
ದೇವರೇ, ನೀನೆಲ್ಲಿರುವೆ?

ಚಿಕ್ಕ ವಯಸ್ಸಿನಲ್ಲಿ ನಾವು ಸದಾ ಕೇಳುತ್ತೇವೆ,
"ದೇವರು ಎಲ್ಲಿದ್ದಾರೆ?"
ಸಣ್ಣ ಕತ್ತುಗಳು ತಲೆಯನ್ನು ಆಕಾಶದತ್ತ ತಿರುಗಿಸುತ್ತವೆ,
ಬೆಳಕನ್ನು ಹುಡುಕುತ್ತಾ, ಒಂದು ಸೂಚನೆಯನ್ನು ನಿರೀಕ್ಷಿಸುತ್ತಾ,
ಆದರೆ ಈ ಅಸಾಧ್ಯ ಹುಡುಕಾಟದಲ್ಲಿ, ನಂಬಿಕೆ ಮಾಯವಾಗುತ್ತದೆ,
ಮೂಲಭೂತ ಸತ್ಯವನ್ನು ಸಂಪೂರ್ಣವಾಗಿ ಮರೆತುಬಿಡುತ್ತೇವೆ.

ಆದರೆ, ಬೆಳೆಯುತ್ತಾ ನಾವು ದಿಕ್ಕಿಲ್ಲದಂತೆ ತಿರುಗುತ್ತಾ ಹುಡುಕುತ್ತೇವೆ,
ದೇವಾಲಯಗಳಲ್ಲಿ, ಚರ್ಚುಗಳಲ್ಲಿ, ಸೈನಾಗೊಗುಗಳಲ್ಲಿ ಎಲ್ಲ ಕಡೆ ಹೋಗುತ್ತೇವೆ,
ಕಾಣದ ಪರಮಾತ್ಮನ ಹುಡುಕಲು,
ಇದು ಕೇವಲ ಕನಸು ಅಲ್ಲ ಎಂದು ಆಶಿಸುತ್ತಾ.

ಅಕೋ! ಅಲ್ಲೊಂದು ದನಿ ಕೇಳಿಸುತ್ತದೆ, “ನೀವು ನಿಮ್ಮ ಇಂದಿನ ಕಣ್ಣುಗಳಿಂದ ನನ್ನನ್ನು ಕಾಣಲಾಗುವುದಿಲ್ಲ'"
ದೇವಾಲಯದ ಸಂಕೀರ್ಣ ಆವರಣದಲ್ಲದು ಅನುರಣಿಸುತ್ತದೆ,
ನಮ್ಮ ಅವಿರತ ಪ್ರಯಾಣ, ದಣಿದ ದಾರಿ
ತಲುಪಿಸುವುದು
ಪರಮಸತ್ಯದತ್ತ ದಾರಿತೋರಿಸುವುದು ಜೀವನ ದರ್ಶನದ ಸೂಚಕವೇನೆಂದು
ಸಾರುವ ಈ ನಿರಂತರ ಕಾಲಚಕ್ರ

ಮಾಗಿದ, ಜ್ಞಾನೋದಯದ ವಯಸ್ಸಿನಲ್ಲಿ, ನಾವು ಇನ್ನೂ ಯೋಚಿಸುತ್ತೇವೆ,
"ದೇವರು ಎಲ್ಲಿದ್ದಾನೆ"
ಪ್ರಾರ್ಥನೆ, ಪುಸ್ತಕಗಳ ಮೂಲಕ, ನಾವು ಇನ್ನೂ ಹುಡುಕುತ್ತೇವೆ,
ಆತನ ಉತ್ತರ: "ನನ್ನನ್ನು ನಿಮ್ಮ ಪೂರ್ತಿ ಹೃದಯದಿಂದ ಹುಡುಕಿ"
ಚರ್ಚಿನ ಬಣ್ಣದ ಕಾಜಿನ ಕಿಟಕಿಗಳಿಂದ
ಪ್ರತಿಫಲಿತವಾದವು ಆ ಮಾತುಗಳು -
ತಿರುಗು ಬಾಣದಂತೆ

ನಮ್ಮ ಹೃದಯದೊಳಗೆ ನಾವೂ ಪ್ರವೇಶಿಸುತ್ತೇವೆ,
ಏಕೆಂದರೆ ನಾವು ಏನು ಕಳೆದುಕೊಂಡಿದ್ದೆವೋ ಅದನ್ನೀಗ ಅರಿತಿದ್ದೇವೆ,
ಇದಕ್ಕಾಗಿ ನಮಗೆ ಕಣ್ಣುಗಳು, ದೂರದರ್ಶಕಗಳು, ಅಥವಾ ಅಂತ್ಯವಿಲ್ಲದ ಪ್ರಶ್ನೆಗಳು ಬೇಡ,
ಆದರೆ ನಾವು ಕಾಣಲಿರುವ ಸತ್ಯದಲ್ಲಿ ನಂಬಿಕೆ ಇಟ್ಟುಕೊಳ್ಳುತ್ತೇವೆ,
ಅಂತೂ ದಶಕಗಳ ನಂತರ, ಒಂದು ಸಾಧನೆ

ಸಡಿಲಾದ ಸುಕ್ಕಿನ ಚರ್ಮ, ವಿಶಾಲ ಕಣ್ಗಳು ಆದರೆ ಮುಗ್ಧ ಹೃದಯ
ನಾವು ಆ ಪ್ರಶ್ನೆಗಳನ್ನಿನ್ನು ಕೇಳುವುದಿಲ್ಲ, ಏಕೆಂದರೆ ಈಗ ನಮಗೆ ಗೊತ್ತು ,
ಸಮುದ್ರದಲ್ಲಿ, ಭೂಮ್ಯಾಕಾಶದಲ್ಲಿ
“ನಾವೆಲ್ಲೇ ಇದ್ದರೂ, ದೇವರು ಅಲ್ಲಿಯೇ ಇರುತ್ತಾರೆ."

(ಮೂಲ: ಶ್ರೇಯಾ ಅರುಣ್ ಅರಸ್)
ಸಂಪಾದಕರ ಟಿಪ್ಪಣಿ:
ಶ್ರೇಯಾ ಅರಸ್ ಬರೆದ ಕವಿತೆಯ ಕೊನೆಯ ಸಾಲಿನಲ್ಲಿ ಪ್ರತಿಧ್ವನಿಸುವ ಆಶಯ ರಾಷ್ಟ್ರಕವಿ ಜಿ ಎಸ್ ಎಸ್ ಶಿವರುದ್ರಪ್ಪ ಅವರ ಕವನದಲ್ಲಿಯೂ ನಾವೆಲ್ಲ ಕಂಡಿದ್ದೇವೆ. ಎರಡನೆಯ ತಲೆಮಾರಿನವರಿಗೆ ಓದಿ ಅರ್ಥವಾಗಲು ಕಷ್ಟವಾದರೆ ಕೆಳಗೆ ಕೊಟ್ಟ ಸಂಪಾದಕನ ಆಂಗ್ಲ ಅನುವಾದ ಸಹಾಯವಾಗಬಹುದು.


’ಅನ್ವೇಷಣೆ’
ಎಲ್ಲೋ ಹುಡುಕಿದೆ ಇಲ್ಲದ ದೇವರ Looking for the missing God
ಕಲ್ಲು ಮಣ್ಣುಗಳ ಗುಡಿಯೊಳಗೆ In the empty temples of stone and earth
ಇಲ್ಲೇ ಇರುವ ಪ್ರೀತಿ ಸ್ನೇಹಗಳ I missed the love and friendship
ಗುರುತಿಸದಾದೆನು ನಮ್ಮೊಳಗೆ Ever present within us

ಎಲ್ಲಿದೆ ನಂದನ, ಎಲ್ಲಿದೆ ಬಂಧನ Whither Eden, whither bondage
ಎಲ್ಲಾ ಇವೆ ಈ ನಮ್ಮೊಳಗೆ We always had them, I know
ಒಳಗಿನ ತಿಳಿಯನು ಕಲಕದೆ ಇದ್ದರೆ Stir not the calm waters in haste
ಅಮೃತದ ಸವಿಯಿದೆ ನಾಲಿಗೆಗೆ Lest you miss out ambrosia's taste

ಹತ್ತಿರವಿದ್ದೂ ದೂರ ನಿಲ್ಲುವೆವು We're so near, yet apart we grow
ನಮ್ಮ ಅಹಮ್ಮಿನ ಕೋಟೆಯಲಿ Inside our self built fortress of ego
ಎಷ್ಟು ಕಷ್ಟವೋ ಹೊಂದಿಕೆಯೆಂಬುದು Is coexistence that intolerable
ನಾಲ್ಕುದಿನದ ಈ ಬದುಕಿನಲಿ In this life so interminable?

ಜಿ ಎಸ್ ಎಸ್ ಶಿವರುದ್ರಪ್ಪ


ಕವಿತೆ ಕೊಟ್ಟು ಸಹಕರಿಸಿದ ಶ್ರೇಯಾ ಅರಸ್, ಆಕೆಯ ಬ್ಯಾಡ್ಮಿಂಟನ್ನಿಗಾಗಿ ದೇಶವೆಲ್ಲ ಸುತ್ತುವ ತಂದೆ ತಾಯಿಗಳು ಮತ್ತು ಉಳಿದ ಕುಟುಂಬದವರು ಮತ್ತು ನಮ್ಮ ’ರೆಸಿಡೆಂಟ್’ ವ್ಯಂಗ್ಯ ಚಿತ್ರಕಾರ ಡಾ ಲಕ್ಷ್ಮಿನಾರಾಯಣ ಗುಡೂರ್ ಎಲ್ಲರಿಗೂ ಕೃತಜ್ಞತೆಗಳು. (ಸಂ)

“ವೀರ ವನಿತೆ” ಮತ್ತು “ಅಜ್ಜನ” ಕವಿತೆ

ಶೀರ್ಷಿಕೆ ನೋಡಿ ಇದು ಕತೆಯೋ ಅಥವಾ ಕವಿತೆಯೂ ಎಂದು ಗೊಂದಲಪಡಬೇಡಿ, ಇದು ಕವಿತೆಯಲ್ಲಿ ಕತೆಯೂ ಹೇಳುತ್ತದೆ ಮತ್ತು ಕವಿತೆಯ ಕಥೆಯನ್ನು ತಿಳಿಸುವ ಪ್ರಯತ್ನ ಮಾಡುತ್ತದೆ. ವೀರ ವನಿತೆ ಎಂದ ಕೂಡಲೇ ನಿಮಗೆ ಇದು ಯಾರ ವಿಷಯ ಎಂದು ತಿಳಿದಿರುತ್ತದೆ… ಹೌದು, ವೀರ ವನಿತೆ ಕಿತ್ತೂರು ಚೆನ್ನಮ್ಮನ ವಿಷಯ. ಇನ್ನೂ ಅಜ್ಜ ಎಂದಾಗ ಕೂಡ ನಿಮಗೆ ಹೊಳೆದಿರಬಹುದು… ಹೌದು, ಅವರೇ ಬೇಂದ್ರೆ ಅಜ್ಜ.

ಈ ಸಂಚಿಕೆಯಲ್ಲಿ ಯಾಕೆ ಈ ವಿಷಯ ಎಂಬ ಪ್ರಶ್ನೆಯೇ?
ನಾಲ್ಕೈದು ದಿನದಲ್ಲಿ ಚೆನ್ನಮ್ಮನ ಹುಟ್ಟಿದ ದಿನ, ಅದ ಕಾರಣ ಇಂದು ವಿವಿಡ್ಲಿಪಿ ಪ್ರಕಟಣೆಯ ಶ್ರೀ. ಸತ್ಯೇಶ್ ಬೆಳ್ಳೂರ್ ಅವರು ಬರೆದ “ಕನ್ನಡೋತ್ಸವ” ನೃತ್ಯ ನಾಟಕದ ಒಂದು ಲಾವಣಿ ಇಲ್ಲಿ ಹಂಚಿಕೊಂಡಿದ್ದೇನೆ. ಚೆನ್ನಮ್ಮನ ವೀರ ಕಥೆಯನು ಸತ್ಯೇಶ್ ಅವರು ಲಾವಣಿಯ ಸುಂದರ ಸಾಲುಗಳಲ್ಲಿ ವಿವರಿಸಿದ್ದಾರೆ, ಕನ್ನಡೋತ್ಸವ ಪುಸ್ತಕ ನೃತ್ಯ ನಾಟಕದ ರೂಪದಲ್ಲಿ ಬೆಂಗಳೂರಿನಲ್ಲಿ ಪ್ರದರ್ಶನ ಕೂಡ ಆಗಿದೆ.

ಎರಡನೆಯದು ಬೇಂದ್ರೆ ಅವರ ನಾಕು ತಂತಿ ಕವನ ಸಂಕಲನದ ವಿಷಯ. ಅವರ ಸಂಕಲನಕ್ಕೆ “ಜ್ಞಾನ ಪೀಠ ಪ್ರಶಸ್ತಿ” ಬಂದು ೫೦ ವರ್ಷ ಆಯಿತು, ಆದುದರಿಂದ ಈ ಸಂಚಿಕೆಯಲ್ಲಿ ಅದರ ವಿಷಯ ಹಂಚಿಕೊಳ್ಳಬಹುದು ಎನ್ನುವ ವಿಚಾರ ಮನಸ್ಸಿಗೆ ಬಂತು… ಹಂಚಿಕೊಂಡಿದ್ದೇನೆ. ನನ್ನ ಸಂಪಾದಕೀಯ ಕಳೆದ ಸಂಚಿಕೆಯಲ್ಲಿ ಬೇಂದ್ರೆ ಅವರ “ನರಬಲಿ” ಕವನದ ವಿಷಯ ಇತ್ತು, ಈ ಸಂಚಿಕೆಯಲ್ಲಿ “ನಾಕು ತಂತಿ” ವಿಚಾರ ಬಂದಿದ್ದು ಆಕಸ್ಮಿಕ, ನನ್ನ ಸಂಪಾದಕೀಯ ಬರುವ ಸಮಯಕ್ಕೆ ಇದೆ ವಿಷಯ ಸಿಕ್ಕಿದ್ದು ಕಾಕತಾಳೀಯ.

ವೀರ ವನಿತೆ ಚೆನ್ನಮ್ಮನ ಲಾವಣಿ (- ಸತ್ಯೇಶ್ ಬೆಳ್ಳೂರ್)

ಬನ್ನಿರಿ ಮಕ್ಕಳೇ ನೋಡುತ ಹಾಡುವ ಕನ್ನಡನಾಡಿನ ಕತೆಯೊಂದ
ಬೆಳಗಾವಿಯ ಅಭಿಮಾನವ ಬೆಳಗುವ ವೀರರಮಣೀಯ ಹಾಡೊಂದ|
ಪೇಶ್ವೆಯ ರಾಜ್ಯವ ನುಂಗಿದ ನಂತರ, ಆಂಗ್ಲರ ದೃಷ್ಟಿಯು ನೆಟ್ಟಿತ್ತು
ಕಿತ್ತೂರಿನ ಸಿರಿ ಧನವನು ದೋಚುವ, ದುಷ್ಟ ಯೋಜನೆಯು ಹೊಮ್ಮಿತ್ತು ||ಪ||

“ವಸ್ತ್ರಕಾಣಿಕೆಯ ಕೊಡುವೆವು ನಾವು, ನಿಮ್ಮಯ ಪಾಡಿಗೆ ಇದ್ದುಬಿಡಿ
ನಿಮ್ಮಯ ರಕ್ಷಣೆ ಆಂಗ್ಲರ ಹೊಣೆಯು, ನಿಮ್ಮಯ ಸೇನೆಯ ಕೊಟ್ಟುಬಿಡಿ”|
ಆಂಗ್ಲರ ಮಾತಿಗೆ ವಿಧಿಯೇ ಇಲ್ಲದೆ ಸಮ್ಮತಿ ಕೊಟ್ಟರು ಒಳಒಳಗೆ
ಚೆನ್ನಮ್ಮಾಜಿಯು ಕುದಿಯುತಲಿದ್ದಳು ತೋರದೆ ಏನನು ಹೊರಹೊರಗೆ ||೧||

ದೇಸಾಯಿಯ ಆರೋಗ್ಯವು ಕೆಟ್ಟರೆ ರಾಜ್ಯವನುಳಿಸುವ ಸಲುವಾಗಿ
ತಾಯಿ ಚೆನ್ನಮ್ಮ ಕಚ್ಚೆಗಟ್ಟುತ್ತ ಖಡ್ಗವ ಹಿಡಿದಳು ಬಲವಾಗಿ|
ಅರಿಗು ತಿಳಿಯದ ಹಾಗೆ ಮತ್ತೊಮ್ಮೆ ಸೈನ್ಯವನೊಂದನು ಕಟ್ಟಿದಳು
ಶಸ್ತ್ರಾಸ್ತ್ರಗಳನು ಪೇರಿಸಿ ಇಡುತಲಿ ಕೋಟೆಯ ಗಟ್ಟಿ ಮಾಡಿದಳು ||೨||

ಸುಳುಹು ಸಿಗುತಲೇ ಆಂಗ್ಲರ ಸೈನ್ಯವು ಕೋಟೆಗೆ ಮುತ್ತಿಗೆ ಹಾಕಿತ್ತು
ಮದ್ದುಗುಂಡುಗಳ ತೋಪು ತುಪಾಕಿಯ ಕೋಟೆಯ ಹೊರಗಡೆ ನಿಲಿಸಿತ್ತು|
“ಅರ್ಧ ತಾಸಿನೊಳು ಕೋಟೆಯ ಬಾಗಿಲ ತೆರೆಯದೆ ಹೋದರೆ ಮುದದಿಂದ
ಬಾಗಿಲ ಸಿಡಿಸಿ ಒಳ ನುಗ್ಗುವೆವು” ಎಂದನು ಥ್ಯಾಕರೆ ಮದದಿಂದ ||೩||

ಅರ್ಧ ತಾಸಿಗೆ ಬಾಗಿಲು ತೆರೆಯಲು ನುಗ್ಗುತ ಬಂದಿತು ವೀರಪಡೆ
ಕುದರೆಯನೇರಿದ ಚೆನ್ನಮ್ಮಾಜಿಯೇ, ಮೊದಲ ಯೋಧಳು ಅವರ ಕಡೆ|
ಒಂಟೆ ಅಬಲೆ ಇವಳೇನು ಮಾಡುವಳು, ನಕ್ಕರು ಆಂಗ್ಲರು ಮೊದಲಲ್ಲಿ
ವೀರನಾರಿಯ ಖಡ್ಗಕೆ ಮಣಿದು, ಸೋಲನು ಉಂಡರು ಕೊನೆಯಲ್ಲಿ ||೪||

ತೋಪು ತುಪಾಕಿಯ ಪಡೆಯೇ ಆದರು, ಥ್ಯಾಕರೆ ಸತ್ತನು ಕೆಳಗುರಳಿ
ಎದೆಯಲಿ ಕೆಚ್ಚಿರೆ, ಮನದಲ್ಲಿ ನೆಚ್ಚಿರೆ, ಗೆಲವೇ ಬರುವುದು ಮರಮರಳಿ|
ಕನ್ನಡ ನಾಡಿನ ಕಥೆಯನು ಯಾರೇ ಹೇಳಲಿ ಕೇಳಲಿ ಯುಗಯುಗದಿ
ಕಿತ್ತೂರಿನ ಈ ರಾಣಿಯ ನೆನೆಯದೆ ಮುಗಿಯುವದೆಂತೋ ಈ ಜಗದೀ ||೫||

ಬನ್ನಿರಿ ಮಕ್ಕಳೆ ನಲಿಯುತ ಹಾಡುವ ಕನ್ನಡನಾಡಿನ ಕಥೆಯನ್ನು
ಕಿತ್ತೂರಿನ ಹೆಸರನು ಬೆಳಗಿಸಿದ ಚೆನ್ನಮ್ಮಾಜಿಯ ಹಾಡನ್ನು…
ವೀರರಮಣೀಯ ಹಾಡನ್ನು…

ದೇಶಪ್ರೇಮದ ಕಹಳೆಯ ಊದಿದ ಒಂದು ಹೆಣ್ಣಿನ ಕಥೆಯು ಇದು…
ಸ್ವಜನರ ದ್ರೋಹದ ಸಂಚಿಗೆ ಬಿದ್ದು ಜೀವವ ತೆತ್ತ ವ್ಯಥೆಯು ಇದು…
ವೀರವನಿತೆಯ ಕಥನವಿದು… ಚೆನ್ನಮಾಜಿಯ ಗಾಥೆ ಇದು…

“ನಾಕು ತಂತಿ”

“ನಾಕು ತಂತಿ” ನಲವತ್ತು ನಾಲ್ಕು ಕವನಗಳ ಸಂಗ್ರಹ, ಅವರ ಮೆಚ್ಚಿನ ಶ್ರಾವಣದ ಕುರಿತ ಕವನ ಮೊದಲನೆಯದು ಮತ್ತು ಶಿಶುಮಾರನ ಲಾಲಿ ನಲವತ್ತು ನಾಲ್ಕನೆಯ ಕವನ, ಪ್ರಕಟಿತ ಪುಸ್ತಕದ ನಾಲ್ಕನೆಯ ಕವನ “ನಾಕು ತಂತಿ”… ಇದು ನಾಲ್ಕನೆಯದು ಆಗುವದಕ್ಕೆ ನಾಕು ಸಂಖ್ಯೆ ಸಾಂಕೇತಿಕ ಇರಬಹುದೇನೋ (ಇದನ್ನು ಯಾರೂ, ಎಲ್ಲಿಯೂ ಉಲ್ಲೇಖಿಸಿಲ್ಲ, ಇದು ನನ್ನ ಅನಿಸಿಕೆ).

ನಾಕು ತಂತಿ ಕವನ ಸಂಕಲನದ ಬಗ್ಗೆ ಮಾತನಾಡುತ್ತ ಬೇಂದ್ರೆ ಅವರು ಹೇಳುತ್ತಾರೆ ” ಕವಿತೆಗಳಲ್ಲಿ ಭಾಷಾಂತರಕ್ಕೆ ಅನುಕೂಲವಾದ ಕವಿತೆಗಳು ಇರುತ್ತವೆ, ಭಾಷಾಂತರಕ್ಕೆ ಅಸಾಧ್ಯವಾದ ಕವಿತೆಗಳು ಇರುತ್ತವೆ. ಅದು ಭಾಷೆಯ ಜಾಯಮಾನಕ್ಕೆ ಕಟ್ಟಿದ್ದು… ನನ್ನ ನಾಕು ತಂತಿ ಕವನ ಯಾವ ಭಾಷೆಗೋ ವಯಲಿಕ್ಕೆ (ಭಾಷಾಂತರಕ್ಕೆ) ಬರಲ್ಲ…”,

ಅವರ ಕವನ ಓದುವಾಗ ಅನಿಸುತ್ತದೆ… ಕವನದ ಸೂಕ್ಷ್ಮ ಅರ್ಥ ತಿಳಿದುಕೊಳ್ಳುವದೇ ಕಷ್ಟ, ಯಾಕಂದರೆ ಕವನದ ಪದಗಳು, ಅಕ್ಷರಗಳು ಕನ್ನಡದಲ್ಲಿ ಕೊಡುವ ಅರ್ಥ ಇನ್ನೊಂದು ಭಾಷೆಯಲ್ಲಿ ಕೊಡಲಿಕ್ಕಿಲ್ಲ. ಡಾ|| ಗುರುರಾಜ ಕರಜಗಿ ಅವರು ಇದನ್ನು ಬೀಜಾಕ್ಷರ ರೂಪದ ಶ್ರುತಿ ಕಾವ್ಯ ಎಂದಿದ್ದಾರೆ. ನಿಜ, ಶಬ್ದ ಗಾರುಡಿಗ ಬೇಂದ್ರೆ ಅವರ ಪ್ರತಿಯೊಂದು ಅಕ್ಷರದಲ್ಲೂ ಅರ್ಥ ಇದೆ.

“ನಾಕು ತಂತಿ” ಯನ್ನು ಬೇಂದ್ರೆ ಅವರು ಬೆಂಗಳೂರಿನ ಆಲ್ ಇಂಡಿಯಾ ರೇಡಿಯೋ ಸಂದರ್ಶನದಲ್ಲಿ ಈ ರೀತಿ ವಿವರಿಸಿದ್ದಾರೆ ” ತನ್ನ ತನಾನೇ ಒಂದು ತಂತಿ, ಆ ತಂತಿ ಒಂದು ತುದಿ ನೀವು ನೋಡ್ತಿರ್ತೀರಿ ಅದಕ್ಕ ಅದು ನಿಮಗೆ ಪ್ರತ್ಯಕ್ಷ ಅಗುದಕ್ಕೆ ಅದಕ್ಕೆ “ನೀನು” ಅಂತೀನಿ, ಇನ್ನೊಂದು ನನಗ ಅದ ಅದಕ್ಕ “ನಾನು” ಅಂತೀನಿ. ಹೊರಗಿನ ಮಂದಿ “ನೀನು” ಅನೂದಕ್ಕೆ ನಾನು “ನಾನು” ಅಂತೀನಿ. ನನ್ನಷ್ಟಕ್ಕೆ ನಾನು ಇದ್ದಂಗೆ ನಾನು ಎಂಬುದು ಇದು “ತಾನು” ಇರ್ತೀನಿ, ಈ “ತಾನು” ಬಹಳ ಎಳೆದಾಡಿದರೆ ಸುಖ ಆಗೋದಿಲ್ಲ, ಅದಕ್ಕೆ “ಆನು” ಬೇಕಾಗುತ್ತದೆ… ಇದರ ಎಲ್ಲಾದರಲ್ಲೂ “ನು” ಏನಿದೆ ಅದು ಜೀವನದ ಮಹತ್ವದ ಭಾಗ.”

ಅದಕ್ಕೆ ಬೇಂದ್ರೆ ಅವರು ತಮ್ಮ ಕವನದಲ್ಲಿ ಅನುತ್ತಾರೆ
’ನಾನು’ ’ನೀನು’
’ಆನು’ ’ತಾನು’
ನಾಕೆ ನಾಕು ತಂತಿ,

ನಾಕೇ ತಂತಿ ಸಾಕು ಶ್ರುತಿ ಹಿಡಿಯಲಿಕ್ಕೆ, ಮಧುರವಾದ ಸಂಗೀತಕ್ಕೆ ಒಂದು ಚೌಕಟ್ಟು ಕೊಡಲಿಕ್ಕೆ. ಹಾಗೆ ’ನಾನು’, ’ನೀನು’, ’ಆನು’, ’ತಾನು’ – ನಾಕೇ ತಂತಿ ಸಾಕು ಜೀವನದ ಸಂಗೀತ ಮಧುರವಾಗಿಸಲಿಕ್ಕೆ.

ಮತ್ತೊಂದು ಕಡೆ ಬೇಂದ್ರೆ ಅವರು ಒಂದು ಇಂಗ್ಲಿಷ್ ಭಾಷಣದಲ್ಲಿ ನಾಕು ತಂತಿ ವಿವರಿಸಿದ್ದು ಹೀಗೆ, (ಕರಜಗಿ ಅವರ ಭಾಷಣದಲ್ಲಿ ಕೇಳಿದ್ದು)

Mans identity is four fold, it’s Naanu, Neenu, Taanu and Aanu. Nu is sensibility, Noovu is special form of sensibility turned into agony. I cannot see myself, not even my face, yet I love it. That is Naanu (I). You can see me as I am but cannot participate in my sensibility, that is Neenu (You). Taanu is the received self, Aanu is the receiving self the one that discovers self by surrender.

ಇನ್ನೂ ಕೆಲವರು ಇದನ್ನು ಅರ್ಥಿಸಿದ್ದು ಹೀಗೆ – “ನಾನು” ಪ್ರಕೃತಿ (ಹೆಣ್ಣಿಗೆ) ಹೋಲಿಸಿದ್ದಾರೆ, “ನೀನು” ಪುರುಷನಿಗೆ ಹೋಲಿಸಿದ್ದಾರೆ, ಇವರಿಬ್ಬರ ಸಮ್ಮಿಲನ “ತಾನು” ಅಂದರೆ ಒಂದು ಮಗು… “ಆನು” ಈ ಸೃಷ್ಟಿಯ ಸೃಷ್ಟಿಕರ್ತ, ಅಂದರೆ ದೇವರು,

ಈ ಕವನದ ನಾಲ್ಕು ಪದಗಳು ಪ್ರತಿ ಸಲ ಓದಿದಾಗಲೂ ಒಂದು ವಿಭಿನ್ನ ಅರ್ಥ ಕೊಡುತ್ತದೆ, ಬೇರೆ ಬೇರೆ ವಿಚಾರ ಮೂಡುತ್ತದೆ, ಹೊಸ ಅರ್ಥ ಹುಟ್ಟುತ್ತದೆ. ನಮ್ಮನ್ನು ನಾವು ಅರ್ಥ ಮಾಡಿಕೊಂಡಿದ್ದು “ನಾನು” ಅನ್ನಬಹುದು… ಬೇರೆಯವರು ನಮ್ಮನ್ನು ನೋಡಿ, ನಮ್ಮ ಬಗ್ಗೆ ತಿಳಿಸುವುದು “ನೀನು” ಅನ್ನಬಹುದು… ನಮ್ಮ ಅಹಂ ಅನ್ನು “ತಾನು” ಅನ್ನಬಹುದು… ಸಕಾರಾತ್ಮಕತೆ ವಿಚಾರಗಳನ್ನು “ಆನು” ಅನ್ನಬಹುದು… ಇವುಗಳನ್ನು ಸಮತೋಲನದಲ್ಲಿ ಇಟ್ಟರೆ ನಮ್ಮ ವ್ಯಕ್ತಿತ್ವ ಮಧುರ, ಇಲ್ಲದಿದ್ದರೆ ಕರ್ಕಶ… ಇದು ನನ್ನ ಮನಸಿನ್ನಲ್ಲಿ ಬಂದ ವಿಚಾರ.

ಅವರ ಇನ್ನೊಂದು ವಿಚಾರ ಇಲ್ಲಿ ಹಂಚಿಕೊಳ್ಳುವುದು ಸೂಕ್ತ ಅನಿಸುತ್ತದೆ, ಅವರು ಹೇಳುತ್ತಾರೆ “ಓದಿದ ಕೂಡಲೇ ಅರ್ಥ ಆಗೋದು ಕವಿತೆ ಉಚ್ಚ ಲಕ್ಷಣ ಅಲ್ಲವೇ ಅಲ್ಲ… ಪ್ರತಿಯೊಂದು ಸಲ ಓದಿದಾಗೂ ಹೊಸ ಅರ್ಥ ಆಗೋದು ಖರೆ ಕವಿತೆಯ ಲಕ್ಷಣ”.

ಇಲ್ಲಿಯವರೆಗೆ ನಾವು ನೋಡಿದ್ದು “ನಾಲ್ಕು ತಂತಿ” ಕವನದ ಮೂರು ಸಾಲು ಮಾತ್ರ, ಪೂರ್ತಿ ಕವನದಲ್ಲಿ ನಾನು ನೋಡಿದ್ದು/ ಓದಿದ್ದು ೬೮ ಸಾಲುಗಳು. ಇವನ್ನು ನನ್ನ ವಿಚಾರಧಾರೆಗೆ ಮತ್ತು ಮಿತಿಗೆ ತಕ್ಕಂತೆ ಅರ್ಥಮಾಡಿಕೊಳುತ್ತಿದ್ದೇನೆ, ಮತ್ತೊಮ್ಮೆ ಅವಕಾಶ ಸಿಕ್ಕರೆ ಉಳಿದ ಸಾಲುಗಳ ಬಗ್ಗೆ ಬರೆಯುವೆ.