ಒಂದು ಬಸ್ಸಿನ ಕಥೆ

ನಮಸ್ಕಾರ  ಅನಿವಾಸಿ ಬಳಗಕ್ಕೆ. ಎಲ್ಲರಿಗೂ ಹೊಸ ಸಂವತ್ಸರದ , ಚೈತ್ರಮಾಸದ ಹಾರ್ದಿಕ ಶುಭಾಶಯಗಳು. 
“ ದಿನಾ ಸಮಯಕ್ಕೆ ಬರುವ ಬಸ್ಸು ಹತ್ತು ನಿಮಿಷ ತಡ ಮಾಡಿದರೆ ಅಲ್ಲೊಂದು ಕಥೆ ಹುಟ್ಟುತ್ತದೆ” ಎನ್ನುತ್ತಾರೆ ನಮ್ಮ ನೆಚ್ಚಿನ ಕಥೆಗಾರ ಕಾಯ್ಕಿಣಿಯವರು. ಹೌದಲ್ಲವೇ ಕಥೆಯೊಂದು ಹುಟ್ಟಲು ಅದೆಷ್ಟು ಕಾರಣಗಳು?! ಅಂತೆಯೇ ನೀವೆಲ್ಲೋ ನೋಡಿದ, ಒಡನಾಡಿದ ಜೀವಗಳೂ ಅಚಾನಕ್ ಆಗಿ ಪಾತ್ರಗಳಾಗಿ ನಿಮ್ಮ ಕಥೆಯಲ್ಲಿ ನುಸುಳಿ ಸೋಜಿಗವನ್ನುಂಟು ಮಾಡುತ್ತವೆ ಎನ್ನುತ್ತಾರವರು.
ಅಂಥದೇ ಒಂದು ಹಳೆಯ ಕಥೆ ನಿಮ್ಮ ಓದಿಗಾಗಿ. ಓದಿ..ಹೇಗನ್ನಿಸಿತು ಹೇಳಿ.

~ ಸಂಪಾದಕಿ.

ಹಿರೇಕೆರೂರ ಬಸ್ಸು

ನಕಾಶೆಯಲ್ಲಿ ಹಗಲು ಹೊತ್ತಿನಲ್ಲಿ ದೀಪ ಹಚ್ಚಿಕೊಂಡು ಹುಡುಕಿದರೂ ಸಿಗದ ಒಂದು ಪುಟ್ಟ ಗ್ರಾಮ ಬಲಕುಂದಿ. ನಕಾಶೆಯಲ್ಲಿ ಅದರ ಅಸ್ತಿತ್ವ ಇರದಿದ್ದರೇನಂತೆ? ನಾರಣಪ್ಪ, ಹನುಮಪ್ಪ , ಈರಭದ್ರ, ದ್ಯಾಮವ್ವ-ದುರ್ಗವ್ವ ಇತ್ಯಾದಿ ದೇವ -ದೇವತೆಗಳ ಸಮೇತ ಬ್ರಾಂಬರು , ಶೆಟ್ಟರು, ಗೌಡರು, ಅಗಸರು , ಬ್ಯಾಗಾರು, ಮ್ಯಾಲಿನ ಓಣಿ, ಕೆಳಗಿನ ಓಣಿ , ಸಿನೀರ ಭಾವಿ, ಸಾದಾ ಭಾವಿ ,ಹಳ್ಳ , ದನಕರು, ಕೋಳಿ-ನಾಯಿ, ಜಗಳ-ಬಡಿದಾಟ, ಪ್ರೀತಿ-ಪ್ರೇಮ, ಹಾದರ…ಮಾನವ ಲೋಕದ ಸಕಲ ಸಲ್ಲಕ್ಷಣಗಳಿಂದ ಜೀವಂತವಿದ್ದ ಹಳ್ಳಿಯದು. 

ಅವತ್ತೊಂದು ದಿನ ರವಿವಾರ. ಎಂದಿನಂತೆ ಬಸ್ ಸ್ಟ್ಯಾಂಡಿನ ತನ್ನ ಗೂಡಂಗಡಿಯ  ಬಾಗಿಲು ತೆರದು, ಈಚಲು ಬಾರಿಗೆ ತಗೊಂಡು ಅಂಗಡಿ ಮುಂದ ಪರ ಪರ ಕಸ ಬಳಿದು, ನಾಲಕ್ಕು ತಂಬಿಗೆ ನೀರು ಹೊಡೆದು ಅಂಗಡಿ ಮೂಲ್ಯಾಗಿನ ಗ್ವಾಡಿಗೆ ಅಂಟಿಸಿದ್ದ ಬುತ್ತಿ ಬಸಪ್ಪನ ಫೋಟೊಕ್ಕೊಂದಿಷ್ಟು ಈಬತ್ತಿ ಬಳದು ‘ಸಿವ ಸಿವ’ ಅಂತ ಗುಬ್ಬವ್ವ ಕೈ ಮುಗಿತಿದ್ದಾಗ “ಹಿರೇಕೆರೂರ ಬಸ್ ಹೋತೇನ ಬೇ ಯತ್ತಿ” ಅಂತ ದನಿ ಕೇಳಿ ಈ ಕಡೆ ಹೊಳ್ಳಿ ನೋಡಿದಳು. ಆ ಪ್ರಶ್ನೆಗೆಉತ್ತರ  ಕೊಡೂದು ತನ್ನ  ಕೆಲಸವೇ ಅಲ್ಲ  ಅನ್ನೂಹಂಗ ‘ಅಯ್ಯ ಮುತ್ತಪ್ಪಾ ನೀನಾ? ಇವತ್ತ್ಯಾಕಲೇ ಮುಂಜಮುಂಜಾನೆ ಬ್ಯಾಗ್ ಹಾಕ್ಕೊಂಡ ತಯಾರಾಗಿಬಂದಿ? ಆಯಿತವಾರ ಸಾಲಿ-ಕಾಲೇಜು ಸೂಟಿ ಅಂತ ಮರತ ಹೋದ್ಯಾ ಏನು?’  ಅಂತ  ಕೇಳಿದಳು.  ‘ಏಯ್ ಅದ್ಹೆಂಗ ಮರೀತೈತಿ ಬೇ ,  ನೀ ಒಂದ s  ಇವತ್ತ ಬ್ಯಾಂಕಿನ exam ಐತೆ. ಅದಕ್ಕs ಹೊಂಟೀನಿ. 10:30 ಗೆ ಚಾಲೂ ಆಕ್ಕೈತಿ’ ಅಂದ.  ‘ಹೀಂಗs, ಹಂಗಾರ ಆಫೀಸರ್ ಆಗಾವಾ ಬಿಡಪಾ. ಒಂದೀಟುನಮಗೂ ಏನರೇ ಕಡಿಮಿ ಬಡ್ಡಿಗೆ ಸಾಲಾ-ಗೀಲಾ ಕೊಡಸೋ ಯಪ್ಪಾ. ದರಾ ಮಳಿಗಾಲದಾಗ ಮನಿ ಸೋರಿ ಮನ್ಯಾಗ ಇಟ್ಟ ಮಾಲು, ಕಾಳು-ಕಡಿ ಹಾಳಆಗಾಕ್ಹತ್ತಾವ. ನೀ ಏನರೇ ಹಂಗ ಸಾಲಾ ಕೊಡಿಸಿದೆಂದ್ರ ಸಿಮಿಟ್ ಗಾರೀನೇ ಹಾಕಸತೀನೋ ಯಪ್ಪಾ ನಿನ್ನ ಹೆಸರಲೇ’…. ಬಸ್ಸು ಹೋತೋ ಇಲ್ಲೋಹೇಳೂದ ಬಿಟ್ಟು ತನ್ನದೇ ಸಮಸ್ಯೆಗಳ ಸಾಗರದಾಗ ಮುಳುಗಿ ಹೋಗಿದ್ಲು ಅಕಿ. ‘ಬಸ್ ಹೋಗಿದ್ರ ನಡಕೊಂಡ ಹೊಂಟ ಬಿಡತೀನೀ ಬೇ ..ಇಲ್ಲಕಂದ್ರಒಳಗ ಬಿಡಂಗಿಲ್ಲ ಪೇಪರ್ ಬರಿಯಾಕ’  ಅಂದ ಮುತ್ತಪ್ಪನ ಮಾತಿಗೆ ‘ಅಯ್ಯ ಸಿವನ, ಈ ಹಿರೇಕೆರೂರ ಬಸ್ಸು ಎಂದರs  ಟೈಂ ಗೆ ಬಂದೈತೇನೋ ಯಪ್ಪಾ? 8 ರ  ಬಸ್ಸು ಹೆಸರಿಗಷ್ಟೇ. ಹತ್ತು  ವರಸ ಆತು,  ನಿಮ್ಮಾಂವ ಹೋದಾಗಿನಿಂದ ಈ ಅಂಗಡ್ಯಾಗ ಕುಂಡ್ರಾಕಂತು ..ಒಂದಿನಾ ಅರೇ 9 ಕ್ಕಿಂತ ಮದಲಹೋಗಿಲ್ಲ ತಗಿ ತಮ್ಮಾ’ ಅಂದು ತನ್ನ ಅಂಗಡಿಯ ಗುಟ್ಕಾ ಪ್ಯಾಕೆಟ್ ಗಳ ಸರವನ್ನು ತೂಗು ಹಾಕೂದರಾಗ, ಪಚ್ಚ ಬಾಳೆಹಣ್ಣುಗಳನ್ನು ಜೋಡಿಸಿಡೂದರಾಗಮಗ್ನ ಆದ್ಲು. ಇರುವ ಎರಡು ಗೇಣಿನ ಅವಳ ಅಂಗಡ್ಯಾಗ ಏನೇನಿಲ್ಲ? ಸುಂಠಿ ಪೆಪ್ಪರ್ ಮಿಂಟು, ಲಿಂಬಿಹುಳಿ, ಅಲೇಪಾಕು, ಸಿಹಿ ಬಿಸ್ಕೀಟು, ಖಾರಾಬಿಸ್ಕೀಟು, ಸಣ್ಣಸಣ್ಣ  ಸಿಹಿ ಬಡೇಸೋಪಿನ ಪ್ಯಾಕೆಟ್ ಗಳು, ಚಕ್ಕಲಿ,ಪಾಪಡಿ, ನಿಂಬು ಸೋಡಾ, ವೀಳ್ಯದೆಲಿ, ಅಡಿಕಿ, ಸುಣ್ಣ ಅಂತ ಪಾನಪಟ್ಟಿಗೆ ಬೇಕಾಗೂಸಾಮಾನುಗಳು, ತಂಬಾಕು, ಗಣೇಶ ಬೀಡಿ, ವ್ಹಿಲ್ಸ್ ಫ್ಲೇಕ್ ನಂಥ ಸಿಗರೇಟ್ ಪ್ಯಾಕ್ ಗಳು, ಕಡ್ಡಿಪೆಟ್ಟಿಗೆಗಳು,  ಹಿಂದಿನ ದಿನದ ವರ್ತಮಾನ ಪತ್ರಿಕೆ, ಒಂದೆರಡು ಹಳೆಯ ರಾಗಸಂಗಮಗಳು,  ಒಂದ್ನಾಕು ಥರದ ಸೀಟಿ-ಪೀಪೀಯಂಥ ಮಕ್ಕಳ ಆಟಿಕೆಗಳು, ಊದುಬತ್ತಿ, ಕಲ್ಲುಸಕ್ಕರೆ,  ಟೆಂಗಿನಕಾಯಿಗಳು..

ಅಲ್ಲಿರುವ ಮಸೀದಿಗೆ, ಹೊಸೂರಿನ ಹಣಮಪ್ಪಗ ಗುರುವಾರ, ಶನಿವಾರ ಸುತ್ತಮುತ್ತಲ  ಊರುಗಳಿಂದ ಬರುವ ಜನಕ್ಕೆಲ್ಲ ಈಕಿನೇ ಊದುಬತ್ತಿ-ಸಕ್ಕರೆ-ಕಾಯಿ ಸರಬರಾಜು ಮಾಡಾಕಿ.ಮೋಟರ್ ಸೈಕಲ್ ಮೇಲೆ ಫುರ್ ಅಂತ ಓಡಾಡೋ ಪಡ್ಡೆ ಹುಡುಗರಿಗೆ, ಕಾರು-ಜೀಪಿನಾಗ ಓಡಾಡೂ ದೊಡ್ಡಸಾಹೇಬರುಗಳಿಗೆ ಇವಳಂಗಡಿಯ ಪಾನಪಟ್ಟಿ, ಬೀಡಿ  ಸಿಗರೇಟ್ ಗಾಗಿ ಒಂದು ಬ್ರೇಕ್ ತಗೋನೇಬೇಕು.

 ಬಸ್ ನ ದಾರಿ ಕಾಯಕೋತ ಕೈಯಾಗಿನ ಪುಸ್ತಕ ತಗದು ಮ್ಯಾಲ ಕೆಳಗ ಏನೋ ಲೆಕ್ಕಾ ಮಾಡಕೋತ ಅಲ್ಲೇ ಇದ್ದ ಕಲ್ಲಬಂಡಿಮ್ಯಾಲ ಕೂತ ಮುತ್ತಪ್ಪ. ಬಡಿಗ್ಯಾರ ಈರಪ್ಪನ ಮಗನಾದ ಈ ಮುತ್ತ ಸಣ್ಣತನದಿಂದಲೂ ಓದಿನಾಗ ಮುಂದು. ಮನ್ಯಾಗೂ ಅಷ್ಟೇ ..ಜೋಡ ಕೊಡ ಹೊತ್ತು ನೀರು ತರುವಅವ್ವನಿಗೂ, ಬಡಿಗತನದ ಕೆಲಸದಲ್ಲಿ ಅಪ್ಪನಿಗೂ ತನ್ನಿಂದಾದಷ್ಟು ಸಹಾಯ ಕೇಳದೇ ಮಾಡುವವ. ಫಸ್ಟ್ ಕ್ಲಾಸಿನಾಗ ಮ್ಯಾಟ್ರಿಕ್ ಪರೀಕ್ಷಾ ಪಾಸ್ ಆಗಿ ವಿಜಯ ಮಹಾಂತೇಶ ಕಾಲೇಜಿನಾಗ ಕಾಮರ್ಸ್ ಗೆ ಎಡ್ಮಿಶನ್ ಮಾಡಿಸಿದ್ದ. ಹುಡುಗನ ಚುರುಕುತನ ಕಂಡ ಹೈಸ್ಕೂಲಿನ ಹಾದಿಮನಿ ಮಾಸ್ತರು ಹೆಂಗಓದಬೇಕು, ಫ್ರೀಶಿಪ್, ಸ್ಕಾಲರ್ ಶಿಪ್ ಗಳಿಗೆಲ್ಲ ಅರ್ಜಿ ಹೆಂಗ ತುಂಬಬೇಕು, B.com ಮಾಡಕೋತನs ಬ್ಯಾಂಕಿನ ಪರೀಕ್ಷಾಕ್ಕ ಹೆಂಗ ತಯಾರಿಮಾಡಕೋಬೇಕು ಇತ್ಯಾದಿಯಾಗಿ ಎಲ್ಲ ಸೂಕ್ತ ಮಾರ್ಗದರ್ಶನ, ಆಗಾಗ ಒಂದಿಷ್ಟು ರೊಕ್ಕದ ಸಹಾಯ ಎಲ್ಲ ಮಾಡುತ್ತಿದ್ದರು. ‘ಗುಣಕ್ಕೆ ಮತ್ಸರವೇ?’ ಅನ್ನೂಹಂಗ ಯೋಗ್ಯತೆಯಿದ್ದ ಎಲ್ಲ ಮಕ್ಕಳ ಬಗ್ಗೆಯೂ ಅವರಿಗೆ ಅಷ್ಟೇ ಕಾಳಜಿ. ‘ಹಿಂದಿನ ದಿನವೇ ಬೇಕಾರ ಇಲ್ಲೇ  ಬಂದು ಮನ್ಯಾಗಿರು..ಅಲ್ಲೆ ಹಳ್ಳ್ಯಾಗಲೈಟೇ ಇರಂಗಿಲ್ಲ  ಓದಾಕ’ ಅಂತ ಇಲಕಲ್ಲಿನಲ್ಲಿರುವ ತಮ್ಮ ಮನೆಗೆ ಬಂದು ಇರುವಂತೆ ಮುತ್ತಪ್ಪನನ್ನು ಕರೆದಿದ್ದರೂ ಹಾಗೆಲ್ಲ ಹೋಗಿ ಅವರಿಗೆ, ಅವರಮನೆಯವರಿಗೆ ಒಜ್ಜೆ ಆಗಬಾರದು ಅನ್ನೋದು ಮುತ್ತನ ಸಭ್ಯತೆ.

‘ಒಂದೀಟು ಕೈ ಕೊಡ ಬೇ ಇಳಸಾಕ’  ವೀಳ್ಯದೆಲೆಯ ಬುಟ್ಟಿಯನ್ನು ಹೊರಲಾರದೇ ಹೊತಗೊಂಡು ಬಂದ ಪಾತಜ್ಜಿ ಗುಬ್ಬವ್ವನ್ನ ಕರದ್ಲು.’ಅಯ್ಯ, ಒಂದ್ನಾಕುಪಿಂಡಿ ಕಮ್ಮಿ ಹೊತಗೊಂಡ ಬರಬೇಕಿಲ್ಲs,  ಈ ವಯಸ್ಸನಾಗ ನಡ ಗಿಡ ಮುರದ್ರ ಯಾರ ದಿಕ್ಕ ಅದಾರ ನಿಂಗ? ಇದ್ದೊಬ್ಬ ಮಗಳನ್ನ ದೂರ ಕೊಟ್ಟ ಕುಂತಿ’ ಅಂತ ಬಯ್ಯಕೋತನ ಕಾಳಜಿ ತೋರಸಿ ಕೈ ಹಿಡದು ಬುಟ್ಟಿ ಇಳುಹಾಕ ನೆರವಾದ್ಲು. ‘ಅಂದ ಹಂಗ ಏಟರಾಗ ಗಿರಿಜಿಗೆ ಈಗ? ಆರಾಂ ಅದಾಳ ಅಕಿ? ಗಂಡ,ಅತ್ತಿ ಭೇಷ್ ನೋಡಕೋಂತಾರ?’ಎಂದು ಕೇಳಿ ‘ ಇಷ್ಟ ಯಾಕ  ಹೊತಗೊಂಡ ಹೊಂಟಿ? ಇವತ್ತೇನ ಸಂತಿನೂ ಇಲ್ಲ’  ಎಂದು ಕೇಳಿದಳು. ಜೋಶಿಗಲ್ಲಿ ಜಾಗೀರದಾರರ  ಮನ್ಯಾಗ ಲಗ್ನ ಐತಿ. ಅವರ ಎರಡೂ ಹೆಣ್ಣಮಕ್ಕಳದೂ ಒಮ್ಮೇ ಲಗ್ನ ಇಟಗೊಂಡಾರು. ಇವತ್ತ ದೇವರ ಕಾರ್ಯ ಐತಿ ಬೇ. ಎರಡ ಸಾವಿರ ಎಲಿ ಕೇಳ್ಯಾರು. ಅದಕ್ಕs  ಹೊಂಟೀನಿ. ಆ ಜಾಗೀರದಾರರು ದೊಡ್ಡ ಮನಷಾರು. ‘ತಾಜಾ ಹಸರ ಎಲಿ ತಂದುಕೊಡು. ಛಲೋ ಕಾರ್ಯ. ನಾ ಏನ ಚೌಕಾಸಿ ಮಾಡಂಗಿಲ್ಲ. ಹಂಗs ಬಳಿ ಇಟಗೊಂಡು, ಊಟಾ ಮಾಡಿ, ಸೀರಿ ಉಟಗೊಂಡು ಹೋಗು’ ಅಂದಾಳ ಯವ್ವಾ ಆ ಪುಸ್ಪಕ್ಕ. ‘ಆತಯವ್ವಾ ತರತೀನಿ.ಒಂದು ಮಾತು ಸೀರಿ ಜರದ ಅಂಚಿಂದು, ಹಸರದು ಕೊಟ್ರ..ನನ್ನ ಮಗಳು ಇನ್ನೊಂದು ತಿಂಗಳದಾಗ ಹಡ್ಯಾಕ ಬರಾಕ್ಹತ್ತಾಳು. ಅಕಿಗೆಅದನ್ನೇ ಉಡಿಅಕ್ಕಿ ಹಾಕತೀನಿ’ ಅಂದಿದ್ದಕ್ಕ , ನಕ್ಕೋತ ‘ಆಗಲೇಳು, ಛಲೋ ಸೀರಿನೇ ಕೊಡತೀನಿ ನಿನ್ನ ಮಗಳು ಉಡೋ ಅಂಥಾದ್ದು’ ಅಂದಾಳವ್ವ. ಅಕಿನ್ನ ಹೊಟ್ಟಿ ತಣ್ಣಗಿರಲಿ. ಬಸ್ಸೇನೂ ಹೋಗಿಲ್ಲ ಹೌದಿಲ್ಲ ಬೇ..’ ಅಂತ ಕೇಳಿದ್ಲು. ‘ ನಾ ಅಂಗಡಿ ಕದಾ ತಗದು ತಾಸೊಪ್ಪತ್ತು ಆದಮ್ಯಾಗs ಬರತೈತಿಅದು.ಆ ಮುತ್ತಪ್ಪನೂ ಇಲ್ಲೇ ಅಡ್ಡಾಡಕ್ಹತ್ತಾನು..ನೋಡಲ್ಲೆ.’ ಅಂದು ಎಲೆಗಳ ತುದಿ ಕತ್ತರಿಸಿ ನೀರು ತುಂಬಿದ ಪ್ಲಾಸ್ಟಿಕ್ ಬುಟ್ಟಿಯೊಳಗ ಇಟ್ಟು , ಅಡಕೊತ್ತಿನಿಂದ ಅಡಿಕೆ ಕತ್ತರಿಸತೊಡಗಿದಳು.

 ಮದುವೆಯಾಗಿ ಹದಿನೈದು ವರುಷವಾದರೂ ಮಕ್ಕಳಾಗದ ಪಾರೋತವ್ವ, ಪಾತಜ್ಜಿ  ಸಂತಾನಕ್ಕಾಗಿ ಹರಸಿಕೊಳ್ಳದ ದೈವಗಳಿರಲಿಲ್ಲ; ಮಾಡಲಾಗದನಾಟಿವೈದ್ಯವಿರಲಿಲ್ಲ. ಅಂತೂ ದೈವ ಕಣ್ತೆರೆದು ಅಕಿ ಬಸುರಿ ಅಂತ ತಿಳಿಯೂದರಾಗ ನಾಟಕದ ಖಯಾಲಿಯಿಂದ ಪಾತ್ರಕ್ಕಂತ ಊರೂರು ಅಲೆಯುತ್ತಿದ್ದಅವಳ ಗಂಡ ನಿಂಗಪ್ಪ ಏನಾಯ್ತೋ ಗೊತ್ತಿಲ್ಲ  ಊರಿಗೆ ಮರಳಲೇ ಇಲ್ಲ.  ಯಾರೋ ಪಾತರದವಳ ಬೆನ್ನು ಹತ್ತಿ ಹಾಳಾದ ಅಂತಲೂ, ಏನೋ ಬರಬಾರದರೋಗ ಬಂದು ಸತ್ತ ಅಂತಲೂ, ಮಕ್ಕಳಿಲ್ಲದ ಗೊಡ್ಡಿ ಅಂತ ಇಕಿನ್ನ ಬಿಟ್ಟು ಬೇರೊಂದು ಸಂಸಾರ ಕಟಗೊಂಡು ದೂರದೂರಿನಾಗ ಇದ್ದಾನೆಂತಲೂ.. ಜನತಲೆಗೊಂದರಂತೆ ಆಡಿ ಅಂತೂ ಕೊನೆಗೆ ಮೌನವಾದರು. ಹೀಗಾಗಿ ಪಾರೋತಿಗೆ ಮಗಳು ಗಿರಿಜೆಯೇ ಸರ್ವಸ್ವ. ಗುಣ, ರೂಪದಲ್ಲಿ ಅಪ್ಪಟಬಂಗಾರದಂತಿರುವ ಅಕಿಯನ್ನು ಮಹಾಂತೇಶ ತಾನಾಗಿಯೇ ಕೇಳಿಕೊಂಡು ಬಂದು ಮದುವೆಯಾದ. ದೂರದ ಗೋಕಾಕ್ ನ ಸಕ್ಕರೆ ಫ್ಯಾಕ್ಟರಿಯಲ್ಲಿ ಅವನಕೆಲಸ. ತನ್ನ ಮನೆಯ ಹಿತ್ತಲು, ಅಂಗಳದಲ್ಲೇ ವೀಳ್ಯದೆಲೆಯ ಬಳ್ಳಿಗಳನ್ನು ಹಬ್ಬಿಸಿರುವ ಪಾರೋತೆವ್ವ ಹಳ್ಳಿಯ ಯಾರ ಮನೆಯಲ್ಲೇಮಂಗಳಕಾರ್ಯಗಳಾಗಲಿ, ಬಾಣಂತನವಾಗಲಿ ಹೋಗಿ ಹಸಿರಾದ ನಳನಳಿಸೋ ವೀಳ್ಯದೆಲೆಗಳನ್ನು ಒಂದು ತುಂಡು ಅಡಿಕೆಯಿಟ್ಟು ಬಾಯಿ ತುಂಬ ಹರಸಿಕೊಟ್ಟು ಬರುತ್ತಾಳೆ. ಉಳಿದಂತೆ ಗುಬ್ಬವ್ವನಂಥಾ ಸಣ್ಣ ಗೂಡಂಗಡಿಗಳಿಗೆ, ಇಲಕಲ್, ಹನುಮಸಾಗರದ ಸಂತೆಗಳಿಗೆ ಹೋಗಿ ಮಾರಾಟ ಮಾಡಿ ಬರುತ್ತಾಳೆ. ಈಗ ಮಗಳ ಚೊಚ್ಚಲ ಬಾಣಂತನದ ಸಂಭ್ರಮದಲ್ಲಿದ್ದಾಳೆ.

‘ ಯಕ್ಕಾ, ಈ ಸೂಟಕೇಸ್ ನೋಡತಿರಬೇ..ಇನ್ನೂ ಎರಡು ಬ್ಯಾಗ್ ಅದಾವು ಗೌರಕ್ಕಂದು. ತಗೊಂಡ ಬರತೀನಿ’ ಅಂತ ಹೇಳಿದ ಮಾದಪ್ಪನ ಕಡೆ ನೋಡಿದಗುಬ್ಬವ್ವ ‘ಹೌದಾ? ಊರಿಗೆ ಹೊಂಟಾಳೇನ ಇವತ್ತ? ಭಾಳ ಸಾಮಾನು ಮಾಡಕೊಂಡಾಳಲ್ಲಾ? ಕೂಸಿನ ಕಟಗೊಂಡು ಹೆಂಗ ಒಯ್ತಾಳೋ?’ ಅಂತಸ್ವಗತದಲ್ಲೇ ಗೊಣಗುತ್ತ ಕಾಲಾಗಿನ ಸೂಟಕೇಸ್ ಸರಿಸಿ ಬಾಜೂಕಿಡೂದರಾಗ ಒಂದೂವರೆ ವರುಷದ ಮಗನ ಜೋಡಿ ಗೋಣಿಚೀಲದಂಥ ವ್ಯಾನಿಟಿಬ್ಯಾಗ್ ಹೊತಗೊಂಡು ಗೌರಿ ಅಲ್ಲಿಗೆ ಬಂದ್ಲು. ಜೋಡಿಗೆ ತಂಗ್ಯಂದ್ರು, ಅವ್ವ-ಅಪ್ಪನೂ ಇದ್ರು.  ‘ಅಯ್ಯ, ಇಷ್ಟ ಜಲ್ದಿ ಹೊಂಟ್ಯಾ? ಇನ್ನೊಂದ ನಾಕದಿನಾಇರಬೇಕ ಬ್ಯಾಡ’ ಅಂದ ಗುಬ್ಬವ್ವನಿಗೆ – ‘ಅಯ್ಯ, ಅಕಿನ್ನ ಗಂಡ ಇಷ್ಟ ದಿನಾ ಬಿಟ್ಟದ್ದs ಹೆಚ್ಚು. ದಿನಾ ಬೆಳಗಾದ್ರ ಫೋನ್ ಬರೂದು ಗೌಡ್ರ ಮನೀಗೆ’  ಉತ್ತರ ಕೊಟ್ಟ ದೇವಕ್ಕನ ದನಿಯಲ್ಲಿ ಮಗಳನ್ನು ಪ್ರೀತಿಸುವ ಅಳಿಯನ ಬಗ್ಗೆ ಅಭಿಮಾನ ಎದ್ದು ಕಾಣುತ್ತಿತ್ತು. ‘ಅಲ್ಲ ಯವ್ವಾ, ಇವತ್ತ ಆಯಿತವಾರ. ಇವತ್ತ್ಯಾಕ ಕಳಸಾಕತ್ತೀ ಗೌರಕ್ಕನ್ನ? ಆಯಿತವಾರ ತಾಯಿ-ಮಗಳು ಅಗಲಬಾರದು’ ಅಂದ್ಲು ಗುಬ್ಬವ್ವ.  ‘ಹೌದವಾ, ಆದ್ರ ಈಗಿನ ಕಾಲದ ಹುಡುಗೂರುಅದನ್ನೆಲ್ಲ ಎಲ್ಲಿ ನಂಬತಾರ? ಅಲ್ಲದ s   ನೌಕರದಾರ ಮಂದಿ ನೋಡು. ನಾಳೆ ಸ್ವಾಮವಾರದಿಂದ ಈಕಿನೂ ಕಾಲೇಜಿಗೆ ಹೋಗಬೇಕು ಕೆಲಸಕ್ಕ. ಇನ್ನಅಕಿನ್ನ ಗಂಡಗೂ ಆಯಿತವಾರ ಅಂದ್ರ ಆಫೀಸ್ ಇರಂಗಿಲ್ಲ. ಬಸ್ ಸ್ಟ್ಯಾಂಡಿಗೆ ಬಂದು ಕರಕೊಂಡು ಹೋಗಲಿಕ್ಕೆ ಅನುಕೂಲ ಆಗತದ ನೋಡು. ಅದಕ್ಕs  ಮೊನ್ನೆನೇ ಪ್ರಯಾಣಕ್ಕ ಛಲೋ ದಿವಸ ಅಂತ ಪ್ರಸ್ಥಾನಗಂಟು ತಗದು ತುಳಸಿಕಟ್ಟ್ಯಾಗ ಇಟ್ಟಿದ್ದೆ ನೋಡು.’ ಅಂದ ದೇವಕ್ಕ ಮಗಳೆಡೆ ತಿರುಗಿ, ಅಂದಹಂಗಆ ಪ್ರಸ್ಥಾನಗಂಟು ಇಟಗೊಂಡಿ ಇಲ್ಲೊ?  ಆ ಕೂಸಿನ half-sweater ಅಲ್ಲೇ ಶೇಂಗಾ ಚೀಲದ ಮ್ಯಾಲಿತ್ತು.ತಗೊಂಡ್ಯೋ ಇಲ್ಲೋ’ ಅಂತ ಕಾಳಜಿ ಶುರುಮಾಡಿದ್ಲು. ‘ ಸಣ್ಣ ಡಬ್ಬ್ಯಾಗ ಇಡ್ಲಿಗೆ ತುಪ್ಪ ಹಚ್ಚಿಟ್ಟೀನಿ ಆ ಕೂಸಿನ ಸಲುವಾಗಿ. ಪಾರ್ಲೆ ಜಿ ಬಿಸ್ಕೀಟೂ ಅವ. ನಿಂಗ ಅವಲಕ್ಕಿ, ಖೊಬ್ರಿವಡಿ ಹಾಕೀನಿ.ಬಸ್ನಾಗ ಮಂದಿ ಇರತಾರ ಹೆಂಗ ತಿನ್ನೂದಂತ  ಉಪವಾಸ ಕೂಡಬ್ಯಾಡ. ಹಸಿವಾದ್ರ ತಿನ್ನು..ಅದಕ್ಕೂ ತಿನಸು. ಅಮ್ಮ-ಅಪ್ಪ-ತಂಗ್ಯಂದಿರ ಅಂತ:ಕರಣಕ್ಕೆಮೂಕವಾಗಿದ್ದ ಗೌರಿಗೆ ತೌರ ಬಿಟ್ಟು ಹೊರಡುವ ದು:ಖ. ಕಣ್ಣಂಚಲ್ಲಿ ಇಳಿಯಲು ತಯಾರಾಗಿ ನಿಂತಿದ್ದ ಗಂಗಾ-ಭಾಗೀರಥಿ. “ಯವ್ವಾ ದೇವಕ್ಕಾ,  ಏಟಇದ್ರೂ ಹೆಣಮಕ್ಕಳು ಬ್ಯಾರೆಯವರ ಸ್ವತ್ತs  ನೋಡು. ಆ ಸಿವಾ ಒಂದು ಗಣಮಗಾ ಕೊಡಲಿಲ್ಲ ನೋಡು ನಿನಗ’ ಅಂದ ಗುಬ್ಬವ್ವ ಮತ್ತೆ ತನಗೆ ತಾನೇ ‘ ಇರಲಿ ತಗಿ, ಎದಿ ಸೀಳಿದ್ರ ಎರಡಕ್ಷರ ಇರಲಾರದ ಅಡ್ನಾಡಿ ಗಂಡಮಕ್ಕಳಿಗಿಂತ ಇದ್ಯಾ,ಬುದ್ಧಿ, ನಯಾ-ನಾಜೂಕು ಎಲ್ಲಾ ಇದ್ದ ಇಂಥಾ ಹೆಣಮಕ್ಕಳ ಎಷ್ಷೋಬೇಸಿ ಬೇ ಯವ್ವಾ’ ಅಂದು ‘ಅಂದ್ಹಂಗ ಈಕಿ ಸಾಲಿ ಕಲಸಾಕ ಹೋದ್ರ ಕೂಸಿನ್ನ ಯಾರು ನೋಡಕೊಂತಾರು?’ ಅಂತ ತೆಹಕೀಕಾತ್ ಶುರು ಮಾಡಿದ್ಲು. ‘ಅಕಿನ ಅತ್ತಿ ಅದಾರವ್ವಾ. ಮೊಮ್ಮಗ ಅಂದ್ರ ಜೀವಾ. ಅವರ ಮನ್ಯಾಗೂ ಮದಲನೇ ಕೂಸು ನೋಡು. ಅಂಗೈಯಾಗ ಇಟಗೊಂಡಾರ. ಈಕಿ ಸಾಲಿಗೆಹೋಗಿ ಬರೂತನಾ ಏನು ಬಂದ ಮ್ಯಾಲೂ ಅದರ ದೇಖರೇಕಿ ಎಲ್ಲಾ ಅವರ ಅಜ್ಜೀದೇ..’ಮಗಳು ಒಳ್ಳೆಯ ಮನೆಗೆ ಸೇರಿ ಒಳ್ಳೆಯ ಜನರ ನಡುವೆ ಇರುವಸಮಾಧಾನ ಆ ತಾಯಿಗೆ. 

ಅಷ್ಟರಲ್ಲೇ ಎದುರಿಗಿನ ‘ ಸಂಗಮೇಶ್ವರ ಟೀ ಕ್ಲಬ್’ ನಿಂದ ಹೊರಬಂದ ನಾಲ್ಕು ಜನರ ಗುಂಪು ಕಂಡು ‘ ನೀವೆಲ್ಲ ಅತ್ತಾಗ ಸರೀರಿ ಬೇ. ಗೌರಕ್ಕ ಬೇಕಾರಕುಂದರಲಿ ಕೂಸಿನ್ನ ತಗೊಂಡು. ಗಿರಾಕಿ ಬರತಾವು’ ಅಂತ ಅಷ್ಟೊತ್ತು ಆಪ್ತವಾಗಿ ಮಾತಾಡುತ್ತಿದ್ದವಳು ಈಗ ಯಾವ ಮುಲಾಜಿಲ್ಲದೆಯೂ ಎಲ್ಲರನ್ನೂತನ್ನಂಗಡಿಯ ಕಟ್ಟೆಯ ಮೇಲಿಂದ ಎಬ್ಬಿಸಿದಳು.

ಹಂಗ ನೋಡಿದ್ರ ಬಸ್ಸು ನಿಲ್ಲತಾವು ಅಂತ ಬಸ್ ಸ್ಟ್ಯಾಂಡ್ ಅನ್ನಬೇಕೇ ಹೊರತು ಅಲ್ಲಿ ಮಾಮೂಲು ಬಸ್ ಸ್ಟ್ಯಾಂಡಿನ ಯಾವ ಕುರುಹುಗಳೂ ಇರಲಿಲ್ಲ. ಊದ್ದಕ್ಕೂ ಹಾಸಿದ ಡಾಂಬರ್ ರಸ್ತೆ, ರಸ್ತೆ ಆಚೆ ಬದಿ ‘ ಸಂಗಮೇಶ್ವರ ಟೀ ಕ್ಲಬ್ಬು’.. ‘ಏರಿ ಮೇಲೆ ಏರಿ ಮೇಲೆಕೆಳಗೆ ಹಾರಿ ಹಕ್ಕಿ ಬಂದು ಕುಂತೈತಲ್ಲೋ ಓಮಾವಾ’ ಅಂತ ಯಾವಾಗಲೂ ನಡೆಯುತ್ತಿದ್ದ ಜೋರಾದ  ಹಾಡಿನ ರೆಕಾರ್ಡು. ಅನತಿ ದೂರದಲ್ಲೇ ಸದಾ ನೆರಳು ಕೊಡುವ ಒಂದು ದೊಡ್ಡಅರಳೀಮರ.ಅದರ ಕೆಳಗಿನ ಕಟ್ಟೆಯಲ್ಲಿ ಹೆಗಲ ಮೇಲೆ  ಟವೆಲ್ಲು ಹಾಕಿಕೊಂಡು ಪ್ಯಾಟಿ ಧಾರಣಿ ಮಾತಾಡುತ್ತಲೋ, ಇಸ್ಪೀಟು ಆಡುತ್ತಲೋ ಕುಳಿತ,ಹಲಕೆಲವು ಜನರು..ರಸ್ತೆಯ,ಈ ಕಡೆ ಗುಬ್ಬವ್ವನ ಅಂಗಡಿ. ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ಓಡಾಡೋ ಬಸ್ಸುಗಳಿಗೆ ಬರವೇನಿರಲಿಲ್ಲ. ಆದರೆ ಎಲ್ಲಾ nonstop express ಬಸ್ಸುಗಳೇ. ಇಲ್ಲಿ, ಈ ಹಳ್ಳಿಯಲ್ಲಿ ನಿಲ್ಲಬೇಕಾದ ಕಿಂಚಿತ್ ಪ್ರಮೇಯವೂ ಅವುಗಳಿಗಿರಲಿಲ್ಲ. ಎಲ್ಲೋ ಹಿರೇಕೆರೂರು, ಅಕ್ಕಿಆಲೂರನಂಥಒಂದೆರಡು ಬಸ್ಸುಗಳು ಮಾತ್ರ ನಿಲ್ಲುತ್ತಿದ್ದವು. ಇಷ್ಟಕ್ಕೂ ಅವೂ ಕೂಡ ಬಸ್ಸಿನೊಳಗೆ ಜಾಗ ಇದ್ರ, ಕಂಡಕ್ಟರ್ ಗ ಸೀಟಿ ಊದಿ ಬಸ್ಸು ನಿಲ್ಲಿಸೋ ಮೂಡ್ಇದ್ರ, ಕೈ ಮಾಡುತ್ತಿದ್ದ ಯಾವುದೋ ಪ್ರಯಾಣಿಕರ ಆಸೆಕಂಗಳು ಡ್ರೈವರ್ ನಿಗೆ ಕರುಣೆ ಉಕ್ಕಿಸಿದ್ರ ನಿಲ್ಲತಿದ್ವು ಅನ್ನಿ. ಇಳಿವ ಒಬ್ಬಿಬ್ರು ಪ್ಯಾಸೆಂಜರಗಳನ್ನುಅರ್ಧ ಕಿಲೋ ಮೀಟರ್ ಹಿಂದೆ ಅಥವಾ ಮುಂದೆ ಇಳಿಸಿ ಪಿ.ಟಿ. ಉಷಾನಗತೆ ಓಡಿಹೋದ ಒಬ್ಬಿಬ್ಬರನ್ನು ಮಾತ್ರ ಹತ್ತಿಸಿಕೊಂಡು ಬುರ್ ಅಂತಧೂಳೆಬ್ಬಿಸಿಕೊಂಡು ಹೋಗಿಬಿಡೂದು ಅಂದ್ರ ಆ KSRTC ಬಸ್ ಗಳಿಗೆ ಆಟವಾಗಿತ್ತೇನೋ?! ಆದ್ರೂ ಕೆಲವು ಮಂದಿಗೆ ಅವುಗಳನ್ನು ನೆಚ್ಚದೇ ಬ್ಯಾರೆಹಾದಿಯಿದ್ದಿಲ್ಲ. ಹಂಗಂತ ಯಾರೂ ಅವುಗಳ ಬಗ್ಗೆ ಕಂಟ್ರೋಲರ್ ಮುಂದಾಗಲೀ, KSRTC ಗಾಗಲೀ ಕಂಪ್ಲೇಂಟ್ ಕೊಡಲೂಹೋಗುತ್ತಿರಲಿಲ್ಲ.ಯಾಕಂದ್ರ ಭಾಳಷ್ಟು ಊರಾಗಿನ ಮಂದಿಗೆ ಬಸ್ಸಿನ ದರಕಾರನೇ ಇದ್ದಿಲ್ಲ  ಗೌಡ್ರು, ಶೆಟ್ಟರಂಥ ದೊಡ್ಡ ಕುಳಗಳು ಹೊಂಡಾ, ರಾಜದೂತ್ನಂಥ ಮೋಟಾರುಬೈಕ್ ಗಳನ್ನೋ, ಒಂದಿಬ್ಬರು ಮಾರುತಿ 800 ನ್ನೋ ಇಟ್ಟುಕೊಂಡಿದ್ದರು. ಗ್ರೈನೆಟ್ ವ್ಯವಹಾರದ Gem ಕಂಪನಿ ಲಾರಿಗಳಂತೂತಾಸಿಗೊಮ್ಮೆ ಓಡಾಡೂವು. ಎಷ್ಟೋ ಜನ ಅವುಗಳನ್ನೇರಿ ಹೊರಟುಬಿಡುವರು. ಕೆಲವು ಶ್ರಮಜೀವಿಗಳು, ಬಿಸಿರಕ್ತದ ಉತ್ಸಾಹಿಗಳು ‘ಈ ಬಸ್ಸಿನ ಹೆಣಾಯಾರು ಕಾಯತಾರು? ದೊಡ್ಡದೊಡ್ಡ ಹೆಜ್ಜಿ ಇಟ್ರ ಬಾಯಾಗಿನ ಅಡಿಕಿ ಮುಗಿಯೂದ್ರಾಗ ಇಲಕಲ್ ಮುಟ್ಟತೀವಿ’ ಅಂತ ಒಳಹಾದಿ ಹಿಡಿದುನಡೆದುಬಿಡುವವರು.ಇನ್ನು ಟೆಂಪೊಗಳಂತೂ ಗಜೇಂದ್ರಗಡ, ಹನುಮಸಾಗರದಿಂದ ಇಲಕಲ್ ಗೆ ಸಾಕಷ್ಟು ಓಡಾಡತಿದ್ವು. ಆದ್ರ 15 ಸೀಟಿನ ಅದರೊಳಗಕ್ಲೀನರ್ರು ಕನಿಷ್ಠ 35 ಮಂದಿಯನ್ನಾದರೂ ತುರುಕುತ್ತಿದ್ದ. ಒಮ್ಮೊಮ್ಮೆ ಕೋಳಿ, ಕುರಿಗಳೂ ಇರತಿದ್ವು.

  ಹೊತ್ತು ಸರಿಯುತ್ತಿದ್ದಂತೆ ತಮ್ಮ ತಮ್ಮ ಗಮ್ಯಗಳತ್ತ ಹೊರಡಲು ತಯಾರಾಗಿ ನಿಂತಿದ್ದ ಮೂರೂ ಜನ ಪ್ರಯಾಣಿಕರಿಗೂ ಸ್ವಲ್ಪ ಸ್ವಲ್ಪವೇ ಆತಂಕ. ಮುತ್ತಪ್ಪನಿಗೆ ಪರೀಕ್ಷೆಯ ಸಮಯ ಮೀರಿದರೆ ಅಂತ ಚಡಪಡಿಕೆಯಾದರೆ, ‘ 10 ಗಂಟೆ ಒಳಗೆ ಎಲಿ ತಂದುಬಿಡು. ಬಳೆಗಾರ ಸಾಬನೂ ಅಪ್ಟೊತ್ತಿಗೆಬರತಾನು.ಹಂದರ ಪೂಜಾ,ಗಣಪತಿ ಪೂಜಾ, ಮುತ್ತೈದೆಯರಿಗೆ ಅರಿಶಿನ-ಕುಂಕುಮ ಕೊಡಲಿಕ್ಕೆ ..ಎಲ್ಲಾಕ್ಕೂ ಎಲಿ ಬೇಕಾಗತಾವ – ಅಂತ ಜಾಗೀರದಾರಅವ್ವ ಮದಲೇ ಹೇಳ್ಯಾಳು..ಹೊತ್ತಿಗೆ ಹೋಗದಿದ್ರ ಅವರೇನು ರೊಕ್ಕಸ್ತರು..ಒಂದಕ್ಕ ಎರಡು ಕೊಟ್ಟ ಯಾಕಾಗವಲ್ತು ಬ್ಯಾರೆ ಎಲ್ಲಿಂದರ ಪ್ಯಾಟಾಗಿಂದ ಎಲಿತರಸಗೊಂಡು ನಂಗ ‘ಬ್ಯಾಡ  ಯವ್ವಾ, ನೀ ಭಾಳ ತಡಮಾಡಿದಿ’ ಅಂತ ವಾಪಸ್ ಕಳಿಸಿಬಿಟ್ರ ಅನ್ನೂ ಆತಂಕ ಪಾತಜ್ಜಿಗೆ. ಹತ್ತು ಸಲ ಎದ್ದು ನಿಂತು ಕಣ್ಣಿಗೆಕೈ ಅಡ್ಡ ಹಿಡಿದು ದೂರದತನಕಾ ದಿಟ್ಟಿಸಿದರೂ ಬಸ್ಸಿನ ಸುಳಿವೇ ಇಲ್ಲ. ‘ತಡ ಆದಷ್ಟು ಬಸ್ಸು ಭಾಳ ರಶ್ ಆಗಿಬಿಡತದ ಸುಡ್ಲಿ. ನೀವು ಡೈರೆಕ್ಟ್ ಬಿಜಾಪೂರಸೀಟ್ ಅದ ಅಂತ ಆ ಕಂಡಕ್ಟರ್ ಗ ಹೇಳ್ರಿ’ ಅಂತ ತನ್ನ ಪತಿಯತ್ತ ಹೊರಳಿ ನಿರ್ದೇಶನ ಕೊಡಲಿಕ್ಹತ್ತಿದ್ಲು ದೇವಕ್ಕ. 

8:30 ಹೋಗಿ 9 ಆಗಿ 9:30 ಹೊಡಿಲಿಕ್ಕೆ ಬಂದ್ರೂ ಬಸ್ ಬರಲಿಲ್ಲ. ಆದ್ರ ಬಸ್ ಸ್ಟ್ಯಾಂಡ್ ಮಾತ್ರ ಗಿಜಿಗಿಜಿ ಅನತಿತ್ತು. ಹಂಗಂತ ಬಸ್ಸ್ಟ್ಯಾಂಡಿನಲ್ಲಿದ್ದವರೆಲ್ಲ ಬಸ್ ಹತ್ತಲಿಕ್ಕೇನೂ ಬಂದಿರಲಿಲ್ಲ. ಸಂಗಮೇಶ್ವರ ಟೀ ಕ್ಲ ಬ್ಬಿನ ಚಾ-ಮಿರ್ಚಿ, ಖಾರಾ-ಚುನಮುರಿಗಳ ಸಲುವಾಗಿ ಬಂದವರೆಷ್ಟೋ? ಗುಬ್ಬವ್ವ ನಂಗಡಿ ಗುಟಕಾದ ಸಲುವಾಗಿ ಬಂದವರೆಷ್ಟೋ? ಹಂಗs ಮುಂಜಾನೆದ್ದು ಒಂಚೂರು ಗಾಳಿ ಕುಡದು ಗಾಸಿಪ್ ಮಾಡಿ ತಾಜಾ ಆಗಲುಬಂದವರೆಷ್ಟೋ? ಬಯಲುಕಡೆ ಹೋಗಿ ಹಂಗs ಒಂದಿಷ್ಟು ಪಟ್ಟಾಂಗ ಹೊಡೀತಾ ನಿಂತವರೆಷ್ಟೋ? ಹೊತ್ತಾರೆ ಎದ್ದು ಬಿಸಿಲು ಮ್ಯಾಲೆ ಬರೂದರಾಗಕಟ್ಟಿಗೆ ಮಾಡಿಕೊಂಡು ದೊಡ್ಡ ಹೊರೆ ತಲೆಯಮೇಲಿಟ್ಟುಕೊಂಡು , ಸುಂದರ,  ಕಸೂತಿ-ಕನ್ನಡಿಗಳ ಬಣ್ಣ ಬಣ್ಣದ ಲಂಗಗಳನ್ನು ಧರಿಸಿ, ಸೊಗಸಾದಲಂಬಾಣಿ ಭಾಷೆಯಲ್ಲಿ ಹಾಡುತ್ತ ಕ್ಯಾಟ್ ವಾಕ್ ಮಾಠುತ್ತ ನಡೆವ  ಲಂಬಾಣಿ ಯುವತಿಯರನ್ನು ನೋಡಲೆಂದೇ ಬರುವರೆಷ್ಟು ಮಂದಿನೋ? ಅಂತೂಬಸ್ ಸ್ಟ್ಯಾಂಡ್ ಅಂತೂ ಗಿಜಿಗುಡುತ್ತಿತ್ತು.ಇನ್ನು ಇಷ್ಟು ಜನರನ್ನು ನೋಡಿ ಡ್ರೈವರ್ ಬಸ್ ನಿಲ್ಲಿಸಿಯಾನೇ ಎಂಬ ಚಿಂತೆ ಮೂವರನ್ನೂ ಕಾಡುತ್ತಿತ್ತು.

  ‘ಫಟ್ ಫಟ್ ಫಟ್’ ಸಪ್ಪಳ ಮಾಡುತ್ತ ತನ್ನ ಫಟಫಟಿಯನ್ನು ಒಂಟಿಗಾಲಿಯ ಮೇಲೆ ತಂದು ಸೀದಾ ಗೂಡಂಗಡಿಯ ಬಾಗಿಲಿಗೇ ಹಚ್ಚಿ ‘ಹೆಂಗದಿ ಬೇಯತ್ತಿ’ ಅಂದ ಲಮಾಣ್ಯಾರ ಪರಶ್ಯಾಗೆ ‘ಲೇ ಕುರಸ್ಯಾಲಾ, ಮೈಮ್ಯಾಗ ಖಬರ್ ಐತೆ ಇಲ್ಲೋ? ಹೀಂಗಾ ಗಾಡಿ ಹೊಡ್ಯೂದು..ಅದರ ಸಂಗಾಟs ನೀನೂಕುಣ್ಯಾಗ ಹೋಕ್ಕಿಯಲೇ ಒಂದಿನಾ’ ಎಂದು ಬಯ್ದಳು. ‘ಸಿನೆಮಾದಾಗ ಹೀಂಗs ಹೊಡಿತಾರಬೇ ಹಿರೋಗಳು..’  ಅಂದ ಅವನಿಗೆ, ‘ಅವರಿಗೇನಲೇಆಸ್ತಿ,ರೊಕ್ಕ ಅಳತಿರತೈತಿ ಹಿಂದ..ಆ ಯಮಧರ್ಮಗೂ ತಿನಿಸಿ ಬಚಾವ್ ಆಕ್ಕಾರು. ನಿಂದs ನೋಡಕೋಲೆ’  ಅಂದ ಅವಳ ಮಾತಲ್ಲಿ ಕಟುಸತ್ಯ ಅಡಗಿತ್ತು. ‘ಎನಗಿಂತ ಮಿಗಿಲಾದ ಯಮಧರ್ಮನವನಾರಿಹನು? ಹೇಳೈಎಲೆ ಬಾಲೆ’ ಎಂದು ಬಯಲಾಟದ ದಾಟಿಯಲ್ಲಿ ಹಾಡಿದ ಪರಶ್ಯಾಗೆ ‘ದೀಡ್ ಶ್ಯಾಣ್ಯಾ ಅದಿಬಿಡು. ರ ಅಂದ್ರ ಠ ಅನ್ನಾಕ ಬರದಿದ್ರೂ ಇಂಥದ್ದಕ್ಕೇನೂ  ಕಮ್ಮಿ ಇಲ್ಲ. ತಗೋ..ನಡಿ ಅತ್ತಾಗ..ಗಿರಾಕಿಗೆ ಜಾಗಾ ಬಿಡು.’ ಅಂತ ಹುಸಿಮುನಿಸಿನಿಂದಬಯ್ಯುತ್ತ ಗುಟಕಾ ಪ್ಯಾಕೆಟ್ ಗಳನ್ನು ಕೊಟ್ಟಳು. ಊರಿನ ಪಡ್ಡೆ ಹುಡುಗರಿಗೆಲ್ಲ ಈ ಗುಬ್ಬವ್ವ ಯತ್ತಿನೇ; ಯಾರಿಗೂ ಚಿಗವ್ವ,ದೊಡ್ಡವ್ವ ಅಲ್ಲ.  ಚೆಲುವೆಯರಾದ ಹದಿಹರೆಯಕ್ಕೆ ಕಾಲು ಇಡುತ್ತಿರುವ ಹೆಣ್ಣುಮಕ್ಕಳಿಬ್ಬರ ತಾಯಿ ಅಕಿ ಅಂತ ಬೇರೆ ಹೇಳಬೇಕಾಗಿಲ್ಲ.

‘ ಈ ಬಸ್ ಏನ ಇವತ್ತ ಬರಾಂಗ ಕಾಣಂಗಿಲ್ಲ. ನೀ ಇಲಕಲ್ ಗ ಹೊಂಟಿದ್ರ ನಾನೂ ನಿನ್ನ ಜತೀಲೇ ಬರತೀನಲೇ’ ಅಂದ ಮುತ್ತಪ್ಪನಿಗೆ ಪರಶ್ಯಾ ‘ಕುಂಡ್ರಹಂಗಾರ’ ಅಂತ ತನ್ನ ಹಿಂದಿನ ಸೀಟಿನಲ್ಲಿ ಕೂಡಿಸಿಕೊಂಡು ಭರ್ರನೇ ಗಾಡಿ ಚಾಲೂ ಮಾಡಿದ. ‘ಆ ಹುಡುಗಂದು ಪರೀಕ್ಸಾ ಐತಿ ಅಂತಲೇ. ಜ್ವಾಕ್ಯಾಗಿಕರಕೊಂಡ ಹೋಗಲೇ ಪರಶ್ಯಾ’ ಅಂತ ಅವನನ್ನು ಎಚ್ಚರಿಸಲು ಮರೆಯಲಿಲ್ಲ ಗುಬ್ಬವ್ವ.

 ಹತ್ತೂವರೆಯಾದರೂ ಬಸ್ಸು ಬರದಿದ್ದಾಗ ‘ಯವ್ವಾ, ಇವತ್ತೇನ ಆತs ಈ ಬಸ್ಸಿಗೆ’ ಅಂತ ಬಸ್ಸಿಗೂ, ತನ್ನ ಹಣೆಬರಹಕ್ಕೂ ಹಿಡಿಶಾಪ ಹಾಕುತ್ತ  ಒಮ್ಮೆ ಎದ್ದು, ಒಮ್ಮೆ ಕೂತು, ಮಗದೊಮ್ಮೆ ನಾಕ್ಹಜ್ಜೆ ಹಿಂದೆ ಮುಂದೆ ಓಡಾಡಿ ತನ್ನ ಆತಂಕವನ್ನು ಮರೆಸುತ್ತಿದ್ದಳು ಪಾತಜ್ಜಿ. ಬೆಳಗ್ಗೆ ಕುಡಿದ ಹಾಲು ಅರಗಿ ಪುಟ್ಟ ಪ್ರಣವ್ನೂ ಹಸಿವು-ನಿದ್ದೆಗಾಗಿ  ಕಿರಿಕಿರಿ-ಚಿರಿಪಿರಿ ಶುರು ಮಾಡಿದ.  ಬಿಸಿಲಿನ  ಝಳವೂ  ಏರಿದಂತೆ  ಹಂಗೇ ಒಟ್ಟಿಬಂದ ಕೆಲಸವನ್ನೆಲ್ಲ ನೆನೆದು ದೇವಕ್ಕನೂಚಡಪಡಿಸತೊಡಗಿದಳು. ಅಷ್ಟರಲ್ಲಾಗಲೇ 2-3 ಟೆಂಪೊಗಳು ತುಂಬಿ ತುಳುಕುತ್ತ ಬಂದು ನಿಂತವಾದರೂ ಅವು ಪಾತಜ್ಜಿಯನ್ನು ಹತ್ತಿಸಿಕೊಳ್ಳುವ ಸಾಹಸಮಾಡಲಿಲ್ಲ- ಅವಳ ದೊಡ್ಡ ಎಲೆಬುಟ್ಟಿಯನ್ನು ನೋಡಿ.’ತಮ್ಮಾ, ಒಂದೆರಡು ರೂಪಾಯಿ ಹೆಚ್ಚಿಗಿ ತಗೋಳೋ ಬುಟ್ಟೀದೂ’ ಅಂತ ಅಕಿಅಲವತ್ತುಕೊಂಡರೂ .. ‘ಏಯ್ ರೊಕ್ಕದ್ದಲ್ಲ ಬೇ, ಬುಟ್ಟಿ ಇಡಾಕ ಜಾಗಾ ಎಲ್ಲೈತಿ? ನೋಡಿದ್ಯೋ ಇಲ್ಲೋ ಟೆಂಪೋ ಮ್ಯಾಗನೂ ಹೆಂಗ ಕುಂತಾರ ಮಂದಿ’ ಅಂತ ಉತ್ತರ ಕೊಟ್ಟು ‘ರೈಟ್ ರೈಟ್’ ಅಂತ ಕೂಗಿ ಗಾಡಿ ಹೊರಡಿಸಿಯೇಬಿಟ್ಟರು ಆ ಕಿನ್ನರುಗಳು. ಗೌರಿಗಂತೂ ಡೈರೆಕ್ಟ್ ಬಿಜಾಪೂರಕ್ಕೇಹೋಗಬೇಕಾದ್ದರಿಂದ ಟೆಂಪೊ ಹತ್ತಿ ಇಲಕಲ್ಲದಲ್ಲಿಳಿವ ಮಾತೇ ಇರಲಿಲ್ಲ.ಹೀಗಾಗಿ ಪಾತಜ್ಜಿ- ಗೌರಿಯರಿಬ್ಬರಿಗೂ ಹಿರೇಕೆರೂರ ಬಸ್ಸನ್ನು ಧ್ಯಾನಿಸುತ್ತಕುಳಿತಿರಬೇಕಾಯಿತು. ಮಧ್ಯಾಹ್ನದ ಊಟಕ್ಕೆಂದು ಗುಬ್ಬವ್ವನೂ ಅಂಗಡಿ ಬಂದ್ ಮಾಡುವ ಗಡಿಬಿಡಿಯಲ್ಲಿ ‘ ಇವತ್ತೇನ ಬಸ್ ಬರಂಗಿಲ್ಲ ಬಿಡ ಯವ್ವಾ, ಮನಿಗಿ ಹೋಗಿ ಉಂಡ ಮಕ್ಕೊ. ನಾಳಿಗಿ ಹೋಗಾಕಂತಿ.’ಅಂದಳು ಗೌರಿಗೆ. ಗೌರಿ ಸಮ್ಮಿಶ್ರ  ಭಾವದಲ್ಲಿದ್ದಳು. ಒಂದೆಡೆ ಒಂದಿನ ಹೆಚ್ಚಿಗೆ ತೌರಲ್ಲಿ ಉಳಿವಸಂಭ್ರಮ ಮತ್ತೊಂದೆಡೆ ದಾರಿ ಕಾಯ್ದು ನಿರಾಶನಾಗುವ ಮನದನ್ನನ ಸಲುವಾಗಿ ಬೇಸರ. ಅಂತೂ ಬಂದ ದಾರಿಗೆ ಸುಂಕವಿಲ್ಲ ಎಂದು 12 ಗಂಟೆಯಹೊತ್ತಿಗೆ ಬಸ್ ಸ್ಟ್ಯಾಂಡ ಖಾಲಿ ಮಾಡಿದರು. ಬಿಸಿಲು ರಣರಣ ಅನತಿತ್ತು. ಪಾತಜ್ಜಿ ಮರುದಿನದ ಹನುಮಸಾಗರದ ಸಂತೀಗರೆ ಹೋಗಿ ಎಲೆ ಮಾರುವವಿಚಾರ ಮಾಡುತ್ತ ಸೋತ ಕಾಲುಗಳೊಂದಿಗೆ ವಾಪಸ್ ಹೊರಟಳು.

ಇಡೀ ದಿನ ರಣರಣ ಬಿಸಿಲು ಕಾಯ್ದು ಸಂಜೆ ಆಗುತ್ತಿದ್ದಂತೆಯೇ ಅಚಾನಕ್ ಆಕಾಶವೆಲ್ಲ ಕಪ್ಪು ಆವರಿಸಿ, ಮಂದಿಗೆ ಬೆಳಕಿಂಡಿ ಹಾಕಲಿಕ್ಕೂ ಪುರುಸೊತ್ತುಕೊಡದೇ ಧಪಾಧಪಾ ಅಂತ ಒಮ್ಮಿಂದೊಮ್ಮೆಲೇ  ಶುರುವಾದ ಮಳಿ ಎರಡು ದಿನ ಒಂದು ನಿಮಿಷನೂ ನಿಲ್ಲದs ಸುರದೇ ಸುರೀತು.  ಊರ ಮುಂದಿನಬೆಣ್ಣಿ ಹಳ್ಳ ಕಟ್ಟಿ ಬಸ್ಸು, ಟೆಂಪೊ ಎಲ್ಲಾ ಬಂದ್ ಆಗಿ, ಸೂರ್ಯನೂ ಇಲ್ಲದs, ಕರೆಂಟೂ ಇಲ್ಲದs ಇಡೀ ಹಳ್ಳಿ ಎರಡು ದಿನ ಪೂರಾ ‘ಗವ್’ ಅಂತ ಕತ್ತಲಾಗಇರೂ ಹಂಗ ಆಗಿ ಅಂತೂ ಬುಧವಾರದ ಹೊತ್ತಿಗೆ ಮಳಿಯ ಆರ್ಭಟ ಕಡಿಮೆಯಾಗಿ ಗುರುವಾರ ಮತ್ತ ಯಥಾಪ್ರಕಾರ ಸೂರ್ಯ ಹೊಳಕೋತ ಬಂದುಹಳ್ಳ ಇಳಿದು ಬಸ್ಸು ಗಿಸ್ಸು ಎಲ್ಲಾ ಚಾಲೂ ಆದ್ವು.

 ಇತ್ತ,ಪಾತಜ್ಜಿಯ ಎಲೆಗಳೆಲ್ಲ ಪಾಪ ಅಕಿನ ಕನಸಿನ ಹಂಗೆನೇ ಬುಟ್ಟ್ಯಾಗೇ ಅರ್ಧ ಕೊಳೆತು, ಅರ್ಧ ಹಳದಿಯಾಗಿ ಕೂತಿದ್ವು. ಒಮ್ಮಿಂದೊಮ್ಮೆ ಅಡ್ಡಮಳಿಶುರು ಆದಾಗ, ಮಗಳ ಬಾಣಂತನಕ್ಕ ಅಗ್ಗಿಷ್ಟಿಗಿಗೆ ಬೇಕಂತ ಆಯ್ದು ತಂದ ಕಾಕುಳ್ಳು,ಇದ್ಲಿಚೀಲ ಎಲ್ಲ ಒಳಗ ತರಬೇಕಂತ ಗಡಿಬಿಡಿನಾಗ ಮಳ್ಯಾಗಹಿತ್ತಲದಾಗ ಹೋಗಿ ಅವನ್ನ ಹೊತಗೊಂಡು ಅವಸರಲೇ ಒಳಗ  ಬರೂಮುಂದ ಕಾಲು ಜರದು ಬಿದ್ದು, ಕಾಲು ಉಳಕಿಸಿಕೊಂಡು ತಿಂಗಳುಗಟ್ಟಲೇಸರಿಯಾಗಿ ಅಡ್ಡಾಡಲಾಗದೇ ಪೂರಾ ಲುಕ್ಸಾನದಾಗ ಮುಳುಗಿಹೋದ್ಲು ಪಾತಜ್ಜಿ. ಮಗಳ ಕುಬಸದ ಕಾರ್ಯ,ಅಳ್ಯಾಗೊಂದು ಬಂಗಾರದ ಉಂಗುರ, ಮಗಳ ಸಿಜೇರಿಯನ್ ಹೆರಿಗೆ, ಕೂಸಿನ ತೊಟ್ಟಲಾ-ಬಟ್ಟಲಾ , ಕೂಸಿಗೊಂದು ಜರದಂಗಿ ಕುಂಚಗಿ, ಮುತ್ತಿನ ಜಬಲಾ, ಆಲದೆಲಿ ದುಬಟಿ,ಬೆಳ್ಳಿ ಗಿಲಕಿ, ಹಾಲ್ಗಡಗ.. ಅಂತೆಲ್ಲ ಸಿಕ್ಕಾಪಟ್ಟೆ ಖರ್ಚು ಬಂದು ಊರ ಸಾವಕಾರ ಈಶಪ್ಪನ ಹತ್ರ ಸಾಲ ಮಾಡಬೇಕಾತು. ಅದಕ್ಕಂತ ಇದ್ದೊಂದು ಮನೀದೂ ಪತ್ರ ಅಡಇಡಬೇಕಾತು.

  ಆ ಕಡೆ ಪರಶ್ಯಾನ ಗಾಡಿ ಮ್ಯಾಲೆ ಹೊಂಟಿದ್ದ ಮುತ್ತ, ‘ಲೇ ಸಾವಕಾಶಲೇ ಪರಶ್ಯಾ’ ಅಂತ ಹೇಳತಿದ್ರೂ ವೇಗ ತಗ್ಗಿಸದೇ ಇಲಕಲ್ ಕ್ರಾಸ್ ನ ಮಹಾಂತೇಶಟಾಕೀಜ್ ಹತ್ರ ತಿರುವು ತಗೋ ಮುಂದ ಒಮ್ಮಿಂದೊಮ್ಮೆಲೇ ಎದುರಾದ ಟ್ರ್ಯಾಕ್ಟರಿಗೆ ಢಿಕ್ಕಿ ಹೊಡದು ಗಾಡಿ ಉರುಳಿಬಿದ್ದು ಪಕ್ಕದಲ್ಲಿದ್ದ

ದೊಡ್ಡ ಕಲ್ಲುಬಂಡೆಗೆ ಮುತ್ತನ ಬಲಗೈ ಬಡಿದು ‘ಯವ್ವಾ’ ಅಂದವನೇ ಅಸಾಧ್ಯ ನೋವಿನಿಂದ ಒದ್ದಾಡಿದ. ಸಣ್ಣಪುಟ್ಟ ತರಚು ಗಾಯಗಳಾಗಿದ್ದ ಪರಶ್ಯಾಟಾಕೀಜಿನ ಕಾವಲುಗಾರನ ಸಹಾಯದಿಂದ ಗಾಡಿ ಎತ್ತಿ ನಿಲ್ಲಿಸಿ ಮುತ್ತನ್ನ ಮೆತ್ತಗ ನಡೆಸಿಕೊಂಡು ಗಾಡಿ ಮೇಲೆ ಕೂಡಿಸಿಕೊಂಡು ಅಲ್ಲೇ ಹತ್ರ ಇದ್ದಕಾಖಂಡಕಿ ಡಾಕ್ಟರ್ ಹತ್ರ ಕರಕೊಂಡು ಹೋದ. ಕೈಯ ಬಾವು,ನೋವು ಗಮನಿಸಿದ ಅವರು ‘ಕೈಗೆ ಫ್ರಾಕ್ಚರ್ ಆದ್ಹಂಗ ಕಾಣಸತದ. ದೊಡ್ಡಾಸ್ಪತ್ರೆಗೆಕರಕೊಂಡು ಹೋಗು.’ಅಂತ್ಹೇಳಿ ಮುತ್ತನಿಗೆ ನೀರು ಕುಡಿಸಿ, ಪ್ರಥಮೋಪಚಾರ ಮಾಡಿ ಕಳಿಸಿದ್ರು. ಪಾಪ! ಬ್ಯಾಂಕಿನ ಪರೀಕ್ಷೆ ಬರೀಬೇಕಾಗಿದ್ದ ಮುತ್ತ ಕೈಗೆಬ್ಯಾಂಡೇಜ್ ಸುತಕೊಂಡು ಸರಕಾರಿ ದವಾಖಾನಿ ಕಾಟ್ ಮ್ಯಾಲ ಮಕ್ಕೊಳ್ಳೂ ಹಂಗ ಆತು.

  ಇತ್ತ ಗೌರಿ ಅಳುಕಿನಿಂದ ಗಂಡನ ಫೋನ್ ಕಾಯ್ದದ್ದೇ ಬಂತು.ಅವನು ಸಿಟ್ಟಿಗೆದ್ದು ಮಾಡಲಿಲ್ಲವೋ, ಮಳಿ ಸಲುವಾಗಿ ಲೈನ್ ಕಟ್ ಆಗಿ ಫೋನ್ಬರವಲ್ತೋ ತಿಳೀಲಾರದೇ ಚಡಪಡಿಸಿದಳು. ಎರಡು ದಿನ ಹೆಚ್ಚಿಗೆ ತೌರಿನಲ್ಲಿರುವ ಸುಖ ವರುಣರಾಯ ಕರುಣಿಸಿದ್ದರೂ ಅದನ್ನು ಅನುಭವಿಸಲಾಗದೇಒಳಗೊಳಗೇ ತಳಮಳಿಸುತ್ತಿದ್ದಳು. ಅಂತೂ ಗುರುವಾರ ಹಿರೇಕೆರೂರು ಬಸ್ಸು 9 ಕ್ಕೆಲ್ಲ ಬಂದು, ಸೀಟೂ ಸಿಕ್ಕು 12 ಅನ್ನೂದರಾಗ ಬಿಜಾಪೂರದ ಬಸ್ಸ್ಟ್ಯಾಂಡ್ ಮಟ್ಟಿಯೂ  ಆತು. ತಾನೇ ಬ್ಯಾಗು, ಕೂಸು ಎಲ್ಲ ಹೆಂಗೋ ಸಾವರಿಸಿಕೊಂಡು ಆಟೋ ಹತ್ತಿ ಮನೆಗೆ ಬಂದಿಳಿದಾಗ ಮನೆಯಲ್ಲಿಅತ್ತಿಯವರನ್ನು ಬಿಟ್ಟು ಯಾರೂ ಇರಲಿಲ್ಲ. ಅವರ ಗಂಟಿಕ್ಕಿದ ಮುಖದಿಂದಲೇ ಅವರ ಮನಸ್ಥಿತಿ ಅರಿಯಬಹುದಿತ್ತು. ‘ಬಂದ್ಯಾ ಕೂಸುಮರೀ, ಒಂದುಯುಗ ಆಗಿಹೋಗಿತ್ತಲ್ಲಾ ನಿನ್ನ ನೋಡದs?’ಅಂತ ಮೊಮ್ಮಗನನ್ನು ಎತ್ತಿ ಮಾತಾಡಿಸಿದ  ಅವರು ಸೊಸೆಯತ್ತ ತಿರುಗಿ ‘ಹೇಳಿದ ಸಮಯಕ್ಕ ಬರಬೇಕು. ಆಗದಿದ್ರ ಮದಲs  ಹೇಳಿಬಿಡಬೇಕು ಬರಂಗಿಲ್ಲ ಅಂತ..ಪ್ರಸನ್ನ ಎಷ್ಟ ಕಿರಿಕಿರಿ ಮಾಡಿಕೊಂಡಾನ ನಾಕ ದಿನದಿಂದ ಅನ್ನೂ ಅಂದಾಜರೇ ಅದನ ನಿನಗ?’ ಅಂತ ತುಸು ಬಿರುಸಾಗೇ ಅಂದು ಅವಳ ಉತ್ತರವನ್ನೂ ಕೇಳಲಿಷ್ಟವಿಲ್ಲದವರಂತೆ ಮಗುವನ್ನೆತ್ತಿಕೊಂಡು ತಮ್ಮ  ರೂಮಿಗೆ ನಡೆದರು. ಗೌರಿಗೆ ಯಾಕೋಎಲ್ಲಾ ಖಾಲಿಖಾಲಿ ಎನಿಸಿ ಅಳು ಬರುವಂತಾಯ್ತು. ಸಂಜೆ ಮನೆಗೆ ಬಂದ ಯಜಮಾನರು ‘ಅಂತೂ ಬರಬೇಕನ್ನಿಸಿತಾ ತೌರುಮನೆ ಬಿಟ್ಟು ..ನೆನಪಾತಾನಮ್ಮದು. ಥ್ಯಾಂಕ್ಸ್ ವಾ ಬಂದಿದ್ದಕ್ಕ’ ಎಂದು ಕಹಿಯಾಗೇ ನುಡಿದಾಗ ಗೌರಿಗೆ ನೋವಿನೊಡನೆ ಸಿಟ್ಟೂ ಬಂತು. ಬಸ್ಸೇ ಬರದಿದ್ದುದು, ಎರಡು ದಿನ ಮಳಿಹಚ್ಚಿಹೊಡದು ಹಳ್ಳ ಕಟ್ಟಿದ್ದು ತನ್ನ ತಪ್ಪೇ ಅಂತ ಚೀರಿ  ಹೇಳಬೇಕೆನ್ನಿಸಿತಾದರೂ ಮನೆತುಂಬ ಜನರಿರುವಾಗ ಹಾಗೆ ದನಿಯೇರಿಸಿ ಮಾತಾಡುವುದುಉಚಿತವಲ್ಲವೆನಿಸಿ ಏಕಾಂತದ ಗಳಿಗೆಗಾಗಿ ಕಾಯುತ್ತಿದ್ದಳು. ರಾತ್ರಿ ರೂಮಲ್ಲಿ, ತಾನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಸ್ಸಿಗಾಗಿ ಕಾಯ್ದ  ಬವಣೆಯನ್ನುಕಥಿ ಮಾಡಿ ಹೇಳುತ್ತಿದ್ದಾಗ – ‘ಇರಬೇಕು ಅನ್ನಿಸಿದ್ರ ಇದ್ದು ಬಾ ಗೌರಾ. ಆದ್ರ ಬಸ್ ಬಂದಿಲ್ಲ ಅಂತ ಸುಳ್ಳು ಹೇಳೂದು, ಅದೂ ನನ್ನ ಮುಂದ..ನಿನ್ನಕಡೆಯಿಂದ ಇದನ್ನ ನಿರೀಕ್ಷಿಸಿರಲಿಲ್ಲ.ಅವತ್ತ 11:30 ಅಂದ್ರ ಬಸ್ ಬಂದಿತ್ತು. ಕೊನೆಯ ವ್ಯಕ್ತಿ ಇಳದು ಕಂಡಕ್ಟರ್ ಬಾಗಿಲಾ ಬಂದ್ ಮಾಡೂತನಾ ಮೈಯೆಲ್ಲಕಣ್ಣಾಗಿ ಕಾಯತಿದ್ದೆ ನಿನ್ನ, ಪ್ರಣೂನ ಸಲೂವಾಗಿ.ಈಗ ನೋಡಿದ್ರ ನೀ ಹೀಂಗ ಹೇಳಲಿಕ್ಹತ್ತೀ.ನಮ್ಮ ನಡುವನೂ ಇಂಥ ಸುಳ್ಳುಗಳು ಬೇಕಾ? ಇಷ್ಟ ಏನನಮ್ಮ ಪ್ರೀತಿ ಅರ್ಥ?’ ಅಂತಂದು ಪ್ರಸನ್ನ ಹೊಳ್ಳಿ ಮುಸುಕು ಹಾಕಿಕೊಂಡಾಗ ಗೌರಿಗೆ ಎಲ್ಲ ಅಯೋಮಯ!! 4-6 ದಿನ ಇಬ್ಬರ ನಡುವೆಮಾತಿಲ್ಲ-ಕತೆಯಿಲ್ಲ. ನಡೆದದ್ದು ಬರೀ ಹಾಡು. ಅದೂ ಟೇಪ್ ರಿಕಾರ್ಡರಿನಲ್ಲಿ.. ‘ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ..ಕುರುಡು ಹಮ್ಮುಬೇಟೆಯಾಡಿ ಪ್ರೀತಿ ನರಳಿದೆ’ ಅಂತ ಅಶ್ವತ್ಥ ಹಗಲೂ ರಾತ್ರಿ ಹಾಡಿದ್ದೇ ಹಾಡಿದ್ದು.

ತಪ್ಪು ಇಲ್ಲಿ ಯಾರದ್ದೂ ಅಲ್ಲ. ನಡೆದದ್ದು ಇಷ್ಟೇ..ಒಂದಿನವೂ ಸರಿಯಾದ ಸಮಯಕ್ಕೆ ಬಾರದೇ ಇದ್ದ ಹಿರೇಕೆರೂರ  ಬಸ್ಸು ಅಂದು ಅದ್ಯಾವ ಹೊಸಕಂಡಕ್ಟರ್,ಡ್ರೈವರ್ ಇದ್ದರೋ ಗೊತ್ತಿಲ್ಲ  8 ಗಂಟೆಗೆ, ಸರಿಯಾದ ಸಮಯಕ್ಕೇ ಬಂದು ಎರಡು ನಿಮಿಷ ಬಸ್ ಸ್ಟ್ಯಾಂಡಿನಾಗ ನಿಂತು ಇಳಿವವರು, ಹತ್ತುವವರು ಯಾರೂ ಇಲ್ಲದೇ  ಬುರ್ ಅಂತ ಹೊರಟು ಹೋಗಿದೆ. ಪಾಪ! ಗುಬ್ಬವ್ವಗಾದರೂ ಹೆಂಗ ತಿಳದೀತು ಅದು! ದಿನಾ ತಡಾಮಾಡೂ ಆಹಿರೇಕೆರೂರ ಬಸ್ಸು ಒಂದಿನಾ ಸರಿಯಾದ ಸಮಯಕ್ಕೆ ಬಂದು ಮೂರೂ ಜನರ ಜೀವನದಾಗ ಏನೇನೋ ಆವಾಂತರ ಮಾಡಿ ಹೋತು ಅನ್ರಿ.

ಈಗ ಗುಬ್ಬವ್ವನ ಗೂಡಂಗಡಿ ಜಾಗದಲ್ಲಿ ಸಿಮೆಂಟಿನ ಕಟ್ಟಡ ಎದ್ದಿದೆ. ‘ಕಾಮಧೇನು ಹಾಲಿನ ಡೈರಿ’ಯಲ್ಲಿ ಗುಬ್ಬವ್ವನ ಅಳಿಯಂದಿರು ಹಾಲು-ಮೊಸರು, ಬ್ರೆಡ್ಡು-ಬನ್ನು, ಜಾಮ್-ಸಾಸ್ ಗಳ ಭರ್ಜರಿ ಮಾರಾಟ ನಡೆಸಿದ್ದಾರೆ. ಪಾತಜ್ಜಿಯ ಮೊಮ್ಮಗ  ಸುನೀಲ ಈಗ ಚಿಗುರು ಮೀಸೆಯ ಯುವಕ. ಧಾರವಾಡದಕೃಷಿವಿಶ್ವವಿದ್ಯಾಲಯದಲ್ಲಿ Bsc Agri ಮಾಡಿದ ಅವನು ತನ್ನ ಅಪ್ಪನ ನೆರವಿನಿಂದ ಗೌಡ ಈಶಪ್ಪನಿಂದ ಅಜ್ಜಿಯ ಮನೆ-ಎಲೆಯ ಪುಟ್ಟ ತೋಟಬಿಡಿಸಿಕೊಂಡದ್ದಲ್ಲದೇ ಅದನ್ನು ಎಕರೆಗಟ್ಟಲೆ ಬೆಳೆಸುವ ಹವಣಿಕೆಯಲ್ಲಿದ್ದಾನೆ. ಮರುವರುಷ ಬ್ಯಾಂಕ್ ಪರೀಕ್ಷೆ ಬರೆದು ಪಾಸಾದ ಮುತ್ತಪ್ಪ ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿ ಆಫೀಸರ್ ಆಗಿದ್ದಾನೆ. ಪುಟ್ಟ ಪ್ರಣವ್ ಈಗ ಸ್ನಾತಕೋತ್ತರ ಪದವೀಧರ. ಕಾಲೇಜುಓದುವ ಅಕ್ಕರೆಯ ಅವಳಿ-ಜವಳಿ ತಂಗ್ಯಂದಿರಿದ್ದಾರೆ. ಅವರ ಮನೆಯಲ್ಲೀಗ CD ಪ್ಲೇಯರ್ ‘ಒಲವೇ ಜೀವನ ಸಾಕ್ಷಾತ್ಕಾರ’ ಹಾಡುತ್ತಿದೆ.

  ಹೀಗೆ ಎಲ್ಲ ಬದಲಾಗಿದೆ ಈಗ. ಆದರೆ ಈಗಲೂ ಬದಲಾಗದೇ ಇದ್ದದ್ದು ಒಂದೇ ಒಂದು—ಸಮಯಕ್ಕೆ ಸರಿಯಾಗಿ ಬರದ ಆ ಬಸ್ಸು;ಅದೇ ಹಿರೇಕೆರೂರಬಸ್ಸು.

~ ಗೌರಿ ಪ್ರಸನ್ನ

ಅಂತಿಮ ತೀರ್ಪು

ಆತ್ಮೀಯ ಓದುಗರಿಗೆ
ಈ ಲೋಕ ಇರುವವರೆಗೂ ಹೆಣ್ಣಿನ ಮೇಲಿನ ದೌರ್ಜನ್ಯ ನಿಲ್ಲದು. ಗಂಡಸಿನ ಕ್ರೂರ ಕೃತ್ಯೆಗೆ ಬಲಿಯಾಗಿ, ಅತ್ಯಾಚಾರ ಮತ್ತು ಕೊಲೆಗೆ ಆಹುತಿಯಾಗಿ, ಅದೆಷ್ಟೋ ಮುಗ್ದ ಹೆಣ್ಣುಗಳ ಬಾಳ ಭವಿಷ್ಯ, ಅರಳುವ ಮುನ್ನವೇ ಕಮರಿ ಹೋಗುತ್ತಿರುವುದು ದಿನದ ಸಂಗತಿ. ಇಂತಹ ಎಷ್ಟೋ ಹೀನಾಯಮಾನವಾದ ಘಟನೆಗಳಿಗೆ ಸರಿಯಾದ ಸಾಕ್ಷಿಗಳು ಸಿಗದೆ, ಸಿಕ್ಕರೂ ಏನೇನೋ ಕಾರಣಗಳಿಂದ, ಅಪರಾಧಿಗಳು ಶಿಕ್ಷೆಯನ್ನು ತಪ್ಪಿಸಿಕೊಂಡು ಓಡಾಡುತ್ತಿರುವುದು ನಮಗೆಲ್ಲ ಗೊತ್ತಿರುವ ವಿಷಯ. ಇತ್ತೀಚಿಗೆ ಕೋಲ್ಕತ್ತಾದಲ್ಲಿ ನಡೆದ ಇಂತಹ ಕ್ರೂರ ಘಟನೆಯನ್ನು ಕುರಿತು ಕತೆಯನ್ನು ಬರೆಯಬೇಕೆನಿಸಿತು. ನ್ಯಾಯಾಲಯದ ತೀರ್ಪನ್ನು ಕಾಯುವಷ್ಟು ಸಹನೆ ಇಲ್ಲದೆ, ನನ್ನ ಅನಿಸಿಕೆಯ ಅಂತಿಮ ತೀರ್ಪನ್ನು ಈ ಕತೆಯಲ್ಲಿ ನೀಡಿರುವೆನು. ಸಾಧ್ಯವಾದರೆ ಓದಿ ತಮ್ಮ ಅಭಿಪ್ರಾಯ ತಿಳಿಸಿ

– — ಇಂತಿ ಸಂಪಾದಕ

——————————————————————————————————————–

“ಬೇಕೇ ಬೇಕು, ನ್ಯಾಯ ಬೇಕು” ಎಂದು ಆಸ್ಪತ್ರೆಯ ಹೊರಾಂಗಣದಿಂದ ಒಕ್ಕೋರಿಲಿನಿಂದ ಕೇಳಿ ಬರುತ್ತಿದ್ದ ಕಿರು ವೈದ್ಯರ ಧ್ವನಿ, ಆಸ್ಪತ್ರೆಯ ಮೂರನೆಯ ಮಹಡಿಯ ಮೂಲೆಯಲ್ಲಿದ್ದ ತೀವ್ರ ನಿಗಾ ಘಟಕದವರೆಗೂ ಪಸರಿಸಿತ್ತು. ಇದೇ ಆಸ್ಪತ್ರೆಯಲ್ಲಿ, ಕಾರ್ಯನಿರತವಾಗಿದ್ದ ಅಮಾಯಕ ವೈದ್ಯಳ ಮೇಲೆ, ಮನುಷ್ಯನೆಂಬ ರಾಕ್ಷಸನು ಹೀನಾಯಮಾನವಾಗಿ ಅತ್ಯಾಚಾರವೆಸಗಿ, ಬರ್ಬರವಾಗಿ ಅವಳ ಕೊಲೆ ಮಾಡಿದ್ದ. ಅವಳನ್ನು ಸುಟ್ಟ ಚಿತೆಯು ಆಗಲೇ ಆರಿಹೋಗಿದ್ದರೂ, ಎರಡು ವಾರಗಳ ಹಿಂದೆ ನಡೆದ ಈಅಮಾನವೀಯ ಘಟನೆಯ ಕುರಿತು ನಡೆದ ಪ್ರತಿರೋಧ, ಆಕ್ರೋಶ ಮತ್ತು ಅಸಹಾಯಕತೆ ಮಾತ್ರ ಇಲ್ಲಷ್ಟೇ ಅಲ್ಲ, ದೇಶದ ಮೂಲೆ ಮೂಲೆಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿ ಜನಮನದಲ್ಲಿ ಪ್ರತಿಧ್ವನಿಸುತ್ತಲಿತ್ತು. ಅನಿರತವಾಗಿ ರೋಗಿಗಳ ಚಿಕಿತ್ಸೆಯ ಕಾರ್ಯಾಚರಣೆಯಲ್ಲಿದ್ದ, ಡಾ ರಶ್ಮಿಯವರ ದೃಷ್ಟಿಯು ಹಾಗೆಯೇ ಒಂದು ಕ್ಷಣ ಐ ಸಿ ಯು ಘಟಕದ ಅರೆತೆರೆದ ಕಿಟಕಿಯಿಂದ
ಹೊರಗೆ ತೂರಿತು. ಜಿಟಿ ಜಿಟಿಯಾಗಿ ಚಿಮ್ಮುತ್ತಿದ್ದ ಮಳೆಯಲ್ಲಿಯೂ ಅವಳ ಭಾವ ಚಿತ್ರದೊಂದಿಗೆ, ಕದಲದೆ ಮುಂದುವರೆದಿತ್ತು ಅವರ ಮುಷ್ಕರ. ಡಾ ರಶ್ಮಿ ತಮ್ಮ ಮನಸ್ಸಿನಲ್ಲಿಯೇ ಗೊಣಗಿಕೊಂಡರು ‘ಇವರಿಗೆಲ್ಲ ನಿಜವಾಗಿಯೂ ನ್ಯಾಯ ಸಿಗುವುದೆ? ಆ ಪೈಶಾಚಿಕ ಘಟನೆಗೆ ಬಲಿಯಾದ ಅವಳ ಆತ್ಮಕ್ಕೆ ಶಾಂತಿ ಸಿಗುವುದೆ? ಆ ರಾಕ್ಷಸನಿಗೆ ತಕ್ಕ ಶಿಕ್ಷೆಯಾಗುವುದೆ? ಇವರೆಲ್ಲರ ಧ್ವನಿಯೊಂದಿಗೆ, ನನ್ನದೂ ಒಂದು ಧ್ವನಿ ಸೇರಿದ್ದರೆ ಎಷ್ಟೊಂದು ಚನ್ನಾಗಿರುತ್ತಿತ್ತಲ್ಲವೇ? ಎಂದು ಯೋಚಿಸುತ್ತಿರುವಾಗಲೇ, ಪಕ್ಕದ ಬೆಡ್ಡಿನಿಂದ ಕುಯ್ — ಕುಯ್ ಎಂದು ಕೇಳಿಬರತೊಡಿಗಿದ ಮಾನಿಟರಿನ ಸಪ್ಪಳವು, ಅವರನ್ನು ಅಲ್ಲಿಂದ ಕದಲುವಂತೆ ಮಾಡಿತು.
ಬೆಡ್ಡಿನ ಮೇಲಿದ್ದ ರೋಗಿಗೆ ಯಾವುದೇ ಹೊಸ ತೊಂದರೆಯಿಲ್ಲವೆಂದು ನರ್ಸಿನಿಂದ ಖಚಿತಪಡಿಸಿಕೊಂಡು ಸೆಂಟ್ರಲ್
ಮಾನಿಟರಿಂಗ್ ಡೆಸ್ಕಿನತ್ತ ನಡೆದರು ಡಾ. ರಶ್ಮಿ. ಅನತಿ ದೂರದಲ್ಲಿದ್ದ ಡೆಸ್ಕಿನ ಮೇಲೆ ಅವಳೇ ಕುಳಿತ್ತಿದ್ದಂತೆ ಅನಿಸಿತು ರಶ್ಮಿಯವರಿಗೆ. ಆದರೆ ಅದು ತನ್ನ ಕಲ್ಪನೆ ಮಾತ್ರ ಎಂದು ಅರಿಯುವುದರಲ್ಲಿ ಅವರಿಗೆ ತಡವೇನೂ ಆಗಲಿಲ್ಲ. ಕಳೆದೆರಡು ವಾರದಿಂದ ಮಾನಸಿಕ ತುಮುಲದಲ್ಲಿ ಒದ್ದಾಡುತ್ತಿದ್ದ ರಶ್ಮಿಯವರ ಮನಸಿನಲ್ಲಿ, ಸಮಯ ಸಿಕ್ಕಾಗಲೆಲ್ಲ ಮತ್ತೆ ಮತ್ತೆ ಅವಳ ಬಗೆಗಿನ ಯೋಚನೆಗಳೇ ಸುಳಿದಾಡುತ್ತಲಿದ್ದವು.
ಹೌದು — ಎರಡು ವಾರಗಳ ಹಿಂದೆ, ಇದೇ ವಾರ್ಡಿನಲ್ಲಿ ಅವಳು ಪಟ ಪಟನೆ ಓಡಾಡುತ್ತಿದ್ದಳಲ್ಲವೇ?… ಅವಳ ನಡುಗೆಯಲ್ಲಿ ಅದೆಷ್ಟು ವೇಗವಿತ್ತು? … ಅವಳ ಕಣ್ಣುಗಲ್ಲಿ ರೋಗಿಗಳ ಬಗ್ಗೆ ಅದೆಷ್ಟು ಕರುಣೆಯಿತ್ತು?… ಅವಳ ಕೈಗಳಲ್ಲಿ ಬೇರೆಯವರ ಬಗ್ಗೆ ಚಿಮ್ಮುವ ಅದೆಷ್ಟು ಸಹಾಯದ ಚಿಲುಮೆಯಿತ್ತು? … ಅವಳ ಬಾಳ ಭವಿಷ್ಯದಲ್ಲಿ ಅದೆಷ್ಟು ಕನಸುಗಳ ಹೂ ರಾಶಿಯಿತ್ತು? ಹಾಗಾದರೆ ಆ ಕಾಮುಕ ವ್ಯಾಘ್ರನ ಕಪಿ ಮುಷ್ಟಿಯಲ್ಲಿ ಅವಳ ಬಾಳು, ಭವಿಷ್ಯ ಯಾಕೆ ಕಮರಿ ಹೋಯಿತು? ಅವಳಿಗ್ಯಾಕೆ ಅಂತ ದುರ್ಮರಣ ಪ್ರಾಪ್ತವಾಯಿತು? ಅವಳದೇನು ತಪ್ಪಿತ್ತು?ಅವಳು ಹೆಣ್ಣಾಗಿ ಹುಟ್ಟಿದ್ದೇ? …ಅಬಲೆಯಾಗಿದ್ದೆ? ಸ್ಪುರದ್ರೂಪಿಯಾಗಿದ್ದೆ? ಹಗಳಿರಲು ಶ್ರಮಪಟ್ಟು ವೈದ್ಯೆಯಾಗಿದ್ದೆ? ಅದೆಷ್ಟೋ ರೋಗಿಗಳ ಸಾವಿನೊಡನೆ ಸೆಣಸಾಡಿ ಅವರ ಜೀವ ಉಳಿಸಿದ್ದೆ?…. ದೇವರೂ ಸಹ ಅವಳ ಪಾಡಿಗೆ ಕ್ರೂರಿಯಾಗಿಬಿಟ್ಟನಲ್ಲವೇ? ಎಂದು ಕಾಣದ ದೇವರನ್ನು ಹಳಿಯುತ್ತಿದ್ದಾಗಲೇ, ಅವರ ಮೊಬೈಲ್ ಫೋನು ರಿಂಗ್ ಆಗತೊಡಗಿತ್ತು. ಈ ನಡು ರಾತ್ರಿಯಲ್ಲಿ ಬರುವ ಕರೆ ಅಮ್ಮನದೇ ಇರಬಹುದೆಂಬ ಅವರ ಊಹೆ ನಿಜವಾಗಿತ್ತು. ಅಮ್ಮನ ಬಗ್ಗೆ ಪಾಪ! ಎನಿಸಿತು. ಕಳೆದ ಎರಡು ವಾರಗಳಿಂದ ತಾನು ರಾತ್ರಿ ಡ್ಯೂಟಿ ಮೇಲೆ ಇದ್ದರೆ ಅಮ್ಮನಿಗೆ ನಿದ್ರೆಯೇ ಇಲ್ಲದ್ದು ಸತ್ಯ, ಪ್ರತಿ ಗಂಟೆಗೊಮ್ಮೆ ಅವಳಿಂದ ಫೋನು ಬರುವುದು ವಾಡಿಕೆಯಾಗಿತ್ತು
“ಯಾಕಮ್ಮ, ಇನ್ನು ನಿದ್ರೆ ಬಂದಿಲ್ಲವೇ?”
“ಇಲ್ಲಮ್ಮಾ ಮಲಗಿದ್ದೆ, ಹಾಗೆಯೇ ಎಚ್ಚರವಾಯಿತು. ಹುಷಾರಾಗಿ ಇರು. ವಾರ್ಡ್ ಬಿಟ್ಟು ಒಬ್ಬಳೇ ಹೊರಗೆ ಹೋಗಬೇಡ”‘ಎಲ್ಲರ ಅಮ್ಮಂದಿರು ನನ್ನ ಹಾಗೆ ಕೆಲಸದ ಮೇಲೆ ಇದ್ದವರಿಗೆ ಈಗ ಇದೇ ತರಹದ ಎಚ್ಚರಿಕೆಯನ್ನು
ಕೊಡುತ್ತಿರಬಹುದಲ್ಲವೇನಮ್ಮಾ?
ಹುಷಾರಾಗಿ ಇರ್ತೀನಿ, ಎಲ್ಲರೂ ಹುಷಾರಾಗಿಯೇ ಇರ್ತಾರೆ …. ಅವಳೂ ಸಹ ಹುಷಾರಾಗಿಯೇ ಇದ್ದಳು!” ಎಂದು, ಒಂದು ಕ್ಷಣ ಮೌನವಾಗಿ, ಮಾತು ಮುಂದುವರೆಸಿದಳು,
“ವಾರ್ಡು ಬ್ಯುಸಿ ಇದೆ, ಕೆಲಸ ಜಾಸ್ತಿ ಇದೆಯಮ್ಮ, ಈಗ ಮಲಗಿ ಬಿಡು. ಬೆಳಿಗ್ಗೆ ಸೀದಾ ಮನೆಗೆ ಬಂದು ಬಿಡುತ್ತೇನೆ”
ಎಂತೆಂದು ಫೋನು ಕಟ್ಟು ಮಾಡಿದರು.
‘ಅವಳಮ್ಮನೂ ಹೀಗೆಯೇ ಫೋನು ಮಾಡುತ್ತಿದ್ದಿರಬಹುದಲ್ಲವೇ? ಗಂಟೆ ಗಂಟೆಗೂ … ಅವಳು ಆ ಕೊನೆಯ ನರಕಯಾತನೆಯನ್ನು ಅನುಭವಿಸುವದಕ್ಕಿಂತ ಮುಂಚೆಯೂ’ ಎಂಬ ಜ್ಞಾಪನೆಯೊಂದಿಗೆ, ಕಣ್ಣಂಚಿನಲ್ಲಿ ಮೂಡಿದ ಹನಿಯೊಂದನ್ನು ಯಾರಿಗೂ ಗೊತ್ತಾಗದ ಹಾಗೆ ಒರೆಸಿಕೊಂಡು, ಮಾನಿಟರ್ ಗಳತ್ತ
ದೃಷ್ಟಿ ಹಾಯಿಸಿದರು.
ಡಾ. ರಶ್ಮಿ ಒಬ್ಬಂಟಿ ಅಮ್ಮನ ಪ್ರೋತ್ಸಾಹದಿಂದ, ಸ್ನಾತಕೋತ್ತರ ವೈದ್ಯಕೀಯ ತರಬೇತಿಯನ್ನು ಮುಗಿಸಿ, ಕಾಲೇಜಿನಲ್ಲಿ ಲೆಕ್ಚರ್ಅಂ ತ ಸೇರಿ ಒಂದು ವರ್ಷ ಕಳೆದಿತ್ತು. ಕಾಲೇಜು ಸೇರಿದಾಗಿನಿಂದಲೂ, ಆ ನತದೃಷ್ಟ ಕಿರು ವೈದ್ಯೆಯ ತರಬೇತಿಗೆ ಮಾರ್ಗದರ್ಶಿಯಾಗಿ, ಅವಳ ಹೃದಯಕ್ಕೆ ಹತ್ತಿರವಾಗಿದ್ದರು. ಅವಳಮ್ಮನ ಜೊತೆಗೆ ಅದೆಷ್ಟೋ ಸಲ ಮನಬಿಚ್ಚಿ ಮಾತನಾಡಿದ್ದರು. ಅವಳ ಮದುವೆಯ ನಿಶ್ಚಿತಾರ್ಥ ತಿಳಿದು, ಶುಭ ಹಾರೈಸಿ ಸಂತೋಷಪಟ್ಟಿದ್ದರು. ಅವಳ ಭವಿಷ್ಯ ಜೀವನದ ಆಲೋಚನೆಗಳನ್ನು ಕೇಳಿ, ತುಂಬು ಹೃದಯದ ಮೆಚ್ಚಿಗೆಯನ್ನು ಸೂಸಿದ್ದರು. ಅವಳೂ ಸಹ ತನ್ನಂತೆ ಬಡ ಕುಟುಂಬದಿಂದ, ಶ್ರಮಪಟ್ಟು, ಸಾವಿರ ಕನಸುಗಳನ್ನು ಹೊತ್ತು ಜೀವನದಲ್ಲಿ ಮುಂದೆ ಬಂದವಳೆಂದು ತಿಳಿದು, ಅವಳ ಬಗ್ಗೆ ಬಹಳೇ ಅಭಿಮಾನವಿತ್ತು. ಅವಳಿಗಾದ ಪರಿಸ್ಥಿತಿಯಿಂದ ಅವರ ಹೃದಯ ನಡುಗಿ ಹೋಗಿ, ಮಾನಸಿಕ ವೇದನೆಯಿಂದ ಮನಸು ದಿನವಿಡೀ ಒದ್ದಾಡುತ್ತಲಿತ್ತು. ರಜೆ ಹಾಕಿ ಮನೆಯಲ್ಲಿ ಇದ್ದುಬಿಡಬೇಕೆಂದರೆ, ಕಿರು ವೈದ್ಯರ ಮುಸ್ಕರದಿಂದ ರಜೆ ಸಿಗುವಂತಿರಲಿಲ್ಲ. ರಾತ್ರಿ ಶಿಫ್ಟಗಳೆಲ್ಲ ಲೆಕ್ಚರ್ರಗಳ ಪಾಲಿಗೆ ಬಿದ್ದಿದ್ದವು. ಬೇಡವೆಂದರೂ ತೇಲಿ ಬಂದು ಆಗಾಗ್ಗೆ ಕಣ್ಣುಗಳನ್ನು ತೇವುಗೊಳಿಸುತ್ತಿದ್ದ ಅವಳ ನೆನಪುಗಳಲ್ಲಿ, ಬದುಕು ಸಾವುಗಳ ನಡುವೆ ಬಡಿದಾಡುತ್ತಿದ್ದ ರೋಗಿಗಳ ಸೇವೆ ಮತ್ತು ಪರಿಶೀಲನೆಯಲ್ಲಿ, ರಾತ್ರಿಯು ಮುಗಿದಿದ್ದು ರಶ್ಮಿಯವರಿಗೆ ಗೊತ್ತಾಗಲೇ ಇಲ್ಲ. ರೋಗಿಗಳ ವಿವರವನ್ನು ಬೆಳಗಿನ ಸರದಿಯ ವೈದ್ಯರಿಗೆ ಒಪ್ಪಿಸಿ, ಮನೆಯನ್ನು ಸೇರಿದಾಗ ಹತ್ತು ಗಂಟೆಯಾಗಿತ್ತು. ಘಮ್ಮೆನ್ನುವ ತಿಂಡಿಯನ್ನು ಮಾಡಿ, ಬಾಗಿಲಿನಲ್ಲಿಯೇ ಬರುವಿಗಾಗಿ ಕಾಯುತ್ತಲಿದ್ದ ಅಮ್ಮ ಅವಳ ದಣಿದ ಮುಖವನ್ನೇ ನೋಡುತ್ತಾ ಅಂದಳು,
“ಕೈ ತೊಳೆದುಕೊಂಡು ಬಂದು ಬಿಡು, ಊಟ ಮಾಡಿ ಮಲಗಿವಿಯಂತೆ”
“ಯಾಕೋ ಹಸಿವು ಇಲ್ಲಮ್ಮ”
“ನನಗೆ ಗೊತ್ತು ನಿನಗ್ಯಾಕೆ ಹಸಿವು ಇಲ್ಲವೆಂದು. ಇಂಥ ಮಾನಸಿಕ ವೇದನೆಯಲ್ಲಿ ನೀನು ಹೇಗೆ ಕೆಲಸ ಮಾಡುತ್ತಿರುವೆ ಎಂದು ನನಗೆ ತಿಳಿಯವಲ್ಲದು.”
ಕೊರಳಲ್ಲಿದ್ದ ಸ್ಟೆಥೋಸ್ಕೋಪನ್ನು ಟೇಬಲ್ಲಿನ ಮೇಲೆ ಇಡುತ್ತಾ ರಶ್ಮಿಯವರೆಂದರು,

“ಕರ್ತವ್ವ್ಯದ ಕರೆ ಮತ್ತು ಅನಿವಾರ್ಯತೆಯಮ್ಮ! ಸೇನೆಯನ್ನು ಸೇರಿದ ಯೋಧನು ಯುದ್ಧದ ಕರೆ ಬಂದಾಗ, ತನ್ನತನವನ್ನು ಲೆಕ್ಕಿಸದೆ ರಣಭೂಮಿಗೆ ನುಗ್ಗುವದಿಲ್ಲವೇನಮ್ಮಾ? ವೈದ್ಯರ ಜೀವನವೂ ಹಾಗೆಯೇ, ಅವಶ್ಯಕತೆಯಿದ್ದಾಗ ಹೋಗಲೇ ಬೇಕು … ತನ್ನತನವನ್ನು ಮರೆತು”
ಅವಳನ್ನೇ ನೋಡುತ್ತಾ ಪಿಸು ಧ್ವನಿಯಲ್ಲಿ ಅಮ್ಮನೆಂದಳು,
“ಅರ್ಥವಾಗುತ್ತಿದೆ … ಹಾಗೆಯೇ ಪಶ್ಚಾತಾಪವೂ ಆಗುತ್ತಿದೆ ನಿನ್ನನ್ನೇಕೆ ವೈದ್ಯಳನ್ನಾಗಿ ಮಾಡಿದೆನೆಂದು?”
“ನೀನೇಕೆ ಹೀಗೆ ಯೋಚಿಸುತ್ತಿರುವಿಯೆಂದು ನನಗೂ ಚನ್ನಾಗಿ ಅರ್ಥವಾಗುತ್ತಿದೆಯಮ್ಮ. ಆದರೆ, ವೈದ್ಯಕೀಯ ವೃತ್ತಿ, ಶ್ರೇಷ್ಠ ವೃತ್ತಿ. ನನಗಂತೂ ಯಾವ ಪಶ್ಚಾತಾಪವಿಲ್ಲ. ಓದಿಸಿದ್ದಕ್ಕೆ ನಿನ್ನ ಮೇಲೆ ತುಂಬಾ ಅಭಿಮಾನವಿದೆ. ನಿನ್ನ ಮಗಳು ವೈದ್ಯಳೆಂದು ಹೇಳಿಕೊಳ್ಳಲು ನನಗೆ ಬಹಳೇ ಹೆಮ್ಮೆ ಇದೆ. ಹಾಗೆಯೇ, ವೈದ್ಯರ ಮೇಲೆ ನಡೆಯುತ್ತಿರುವ ಇಂತ ದೌರ್ಜನ್ಯವನ್ನು ಕಂಡು ಮನಸಲ್ಲಿ ತುಂಬಾ ನೋವಿದೆ. ಏನು ಮಾಡುವದೀಗ? ಹಾದಿಯನ್ನು ತುಳಿದಿದ್ದಾಗಿದೆ, ಹಿಂಬರುವ ಪ್ರಶ್ನೆಯೇ ಇಲ್ಲ. ಧೈರ್ಯದಿಂದ ಮುಂದೆ ಸಾಗಲೇ ಬೇಕಲ್ಲಾ! ಇರಲಿ ಬಿಡು, ಒಳ್ಳೆಯ ಅಡಿಗೆಯನ್ನು ಮಾಡಿದ ಹಾಗೆ ಕಾಣಿಸುತ್ತೆ, ಟಿ ವಿ ಹಾಕು, ನೋಡುತ್ತಾ ಊಟ ಮಾಡೋಣವಂತೆ” ಅಮ್ಮನಿಗೆ ಬೇಜಾರು ಮಾಡಿಸಬಾರದೆಂಬಂತೆ ನುಡಿದರು ರಶ್ಮಿ.
“ಟಿ ವಿ ಯಲ್ಲಿ ಏನಿದೆ? ಎರಡು ವಾರಗಳಿಂದ ದಿನವಿಡೀ ಅದೇ ಬರ್ಬರ ಘಟನೆಯ ಬಗ್ಗೆನೇ ಚರ್ಚೆ, ನೋಡಲು ದುಃಖವಾಗುತ್ತೆ” ಎಂದು ಸಂಕಟ ವ್ಯಕ್ತಪಡಿಸಿದಳು ಅಮ್ಮಾ.
“ದಿನಕ್ಕೊಂದು ತಿರುವು ಕಂಡುಕೊಳ್ಳುತ್ತಿರುವ, ಬಿಸಿ ಬಿಸಿ ಸುದ್ದಿ ತಾನೆ? ಟಿ ವಿ ಯಲ್ಲಿಯೂ ಬರುತ್ತೆ… ಪತ್ರಿಕೆಗಳ ಮುಖ ಪುಟದಲ್ಲಿಯೂ ಬರುತ್ತೆ. ಇಂಥ ಎಷ್ಟೊಂದು ಹೀನಾಯ ಘಟನೆಗಳನ್ನು ನೀನು ಟಿ ವಿ ಯಲ್ಲಿ ನೋಡಿಲ್ಲ? ಪತ್ರಿಕೆಗಳಲ್ಲಿ ಓದಿಲ್ಲ ? ಕೊನೆಗೆ ಏನಾಯಿತೆಂದು ನಿನಗೇ ಗೊತ್ತಲ್ಲಮ್ಮ! … ಸ್ತ್ರೀ ಸ್ವಾತಂತ್ರದ ಸಂಘಟನೆಗಳು ಬಾವುಟ ಹಿಡಿದು ಮುಸ್ಕರ ನಡೆಸುತ್ತವೆ. ವಿರೋಧ ಪಕ್ಷದವರು ಆಡಳಿತ ಪಕ್ಷವನ್ನು ನಿಂದಿಸಿ, ಮೊಸಳೆ ಕಣ್ಣೀರು ಸುರಿಸುತ್ತಾರೆ … ಆಡಳಿತ ಪಕ್ಷದವರು ದೊಡ್ಡ ಭಾಷಣವನ್ನು ಬಿಗಿಯುತ್ತಾರೆ, ಪರಿಹಾರ ಧನದ ಘೋಷಣೆಯಾಗುತ್ತೆ … ದೊಡ್ಡ ದೊಡ್ಡ ವಕೀಲರು ಭಾಗಿಯಾಗುತ್ತಾರೆ … ವರ್ಷಾನೂ ಗಂಟಲೇ ಕೋರ್ಟಿನಲ್ಲಿ ವಾದ ಪ್ರತಿವಾದದ ನಾಟಕ ನಡೆಯುತ್ತೆ … ಗಟ್ಟಿಯಾದ ಸಾಕ್ಷಾಧಾರಗಳು ಇಲ್ಲವೆಂದು ಕೇಸು ಮಣ್ಣು ಪಾಲಾಗುತ್ತೆ… ಕನಿಕರ ಸುರಿಯುತ್ತಿದ್ದ ಜನರ ಮನಸಿನಿಂದ ಘಟನೆಯ ನೆನಪು ಅಳಿಸಿ ಹೋಗುತ್ತೆ… ಕೆಲವು ದಿನಗಳಾದ ಮೇಲೆ ಇನ್ನೊಂದು ಹೊಸ ಸುದ್ದಿ ಬರುತ್ತೆ …. ಹಳೆಯ ಸುದ್ಧಿ ಹಾಗೆಯೇ ತಣ್ಣಗಾಗಿ ಮೂಲೆ ಸೇರುತ್ತೆ … ಇಷ್ಟೇ ಅಲ್ಲವೇನಮ್ಮಾ ಈ ವ್ಯವಸ್ಥೆಯ
ಹಣೆಬರಹ!” ಎಂದು ದೊಡ್ಡದೊಂದು ನಿಷ್ಟುಸಿರನ್ನೆಳೆದು, ಕೈ ತೊಳೆಯಲೆಂದು ವಾಸಿಂಗ್ ಬೇಸಿನ್ನತ್ತ ನಡೆದರು ರಶ್ಮಿ. ಊಟ ಮುಗಿಯುತ್ತಿದ್ದಂತೆ ಅಮ್ಮ ಅಂದಳು,
“ದುರದೃಷ್ಟವಶಾತ್ ! ನಮಗೆ ಬೇರೆ ಆಯ್ಕೆಗಳು ಇಲ್ಲವಲ್ಲಮ್ಮ. ಇದ್ದ ವ್ಯವಸ್ಥೆಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ತಾನೇ? ದಣಿದು ಬಂದು ಊಟ ಮಾಡಿದ್ದೀಯಾ, ಚನ್ನಾಗಿ ನಿದ್ದೆ ಮಾಡು. ಮತ್ತೆ ಅದೇ ವಿಷಯದ ಬಗ್ಗೆನೇ ಚಿಂತಿಸಬೇಡ. ಕಾಲಬದಲಾಗುತ್ತಿದೆ, ಕಾನೂನು ಬದಲಾಗುತ್ತಿದೆ, ನನಗೇನೋ ಆ ಪಾಪಿಷ್ಠನಿಗೆ ತಕ್ಕ ಶಿಕ್ಷೆಯಾಗುತ್ತೆ ಎಂಬ ನಂಬಿಕೆಯಿದೆ.”
ಹಾಸಿಗೆಯ ಮೇಲೆ ಮೈ ಚಲ್ಲುತ್ತಲಿದ್ದ ರಶ್ಮಿಯವರೆಂದರು,
“ಇಂತ ಪಾಪಿಗೆ ಬರೀ ಗಲ್ಲು ಶಿಕ್ಷೆಯಾದರೆ ಸಾಲದು. ಅವನೂ ಸಹ ಅವಳಂತೆ ನರಕ ಯಾತನೆಯನ್ನು ಅನುಭವಿಸುತ್ತ ಸಾಯಬೇಕು. ಅವನಿಗೆ ಬದುಕಲು ಯಾವ ಹಕ್ಕೂ ಇಲ್ಲ. ಹೌದು , ಕಾನೂನು ಬದಲಾಗುತ್ತಿದೆ ಆದರೆ ಪಾಲಿಸುವವರು ಬೇಕಲ್ಲ? ಕಾಲ ಬದಲಾಗುತ್ತಿದೆ ಆದರೆ ಎತ್ತ ಕಡೆ?… ಯಾವ ದಿಕ್ಕಿನಲ್ಲಿ? … ಏನನ್ನೋ ಕನವರಿಸುತ್ತಾ ಹಾಗೆಯೇ ನಿದ್ದೆಗೆ ವಶವಾಗಿದ್ದರು ರಶ್ಮಿ. ಅಮ್ಮ ಅವಳ ಹಣೆಗೊಂದು ಮುತ್ತನ್ನಿಟ್ಟು ಕೋಣೆಯಿಂದ ಹೊರಗೆ ಬಂದಳು. ರಶ್ಮಿ ನಿದ್ದೆ ಮಾಡಿ ಎದ್ದಾಗ ಅಮ್ಮನು ಹಾಕಿದ್ದ ಟಿ ವಿ ಯಲ್ಲಿ ಇನ್ನೊಂದು ಹೊಸ ಸುದ್ದಿ ಜೋರಾಗಿ ಸದ್ದು ಮಾಡುತ್ತಲಿತ್ತು. ವರದಿಗಾರ ಸುದ್ದಿಯನ್ನು ಗಟ್ಟಿ ಧ್ವನಿಯಲ್ಲಿ ಓದುತ್ತಲಿದ್ದ.

‘ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇತ್ತೀಚಿಗಷ್ಟೇ ಬಂಧಿತನಾಗಿದ್ದ ವ್ಯಕ್ತಿಯ ಮೇಲೆ, ಕಾರ್ಯ ನಿರತವಾಗಿದ್ದ ಮಹಿಳಾ ಪೇದೆಯಿಂದಲೇ ಗುಂಡಿನ ದಾಳಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವನನ್ನು ಹತ್ತಿರದ ಸರ್ಕಾರಿ ವೈದ್ಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಅವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿ, ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿರುವ ಸುಮಾರು ಇಪ್ಪತ್ನಾಲ್ಕು ವರುಷದ ಮಹಿಳಾ ಪೇದೆಯನ್ನು ಬಂಧಿಸಲಾಗಿದೆ. ಮುಂದಿನ ವಿವರಗಳಿಗೆ ಕಾಯುತ್ತೀರಿ …’
“ಪಾಪಿಷ್ಟ! ಇನ್ನೂ ಬದುಕಿಕೊಂಡನೆ?” ಎಂದು ನಿಷ್ಟುಸಿರು ಹಾಕುತ್ತಿರುವಾಗಲೇ ಅಮ್ಮ ಕಾಫಿಯ ಲೋಟದೊಂದಿಗೆ ಹತ್ತಿರ ಬಂದಿದ್ದಳು.
“ರಶ್ಮಿ, ಇಂಥ ಚಂಡಾಲರಿಗೆ ಇನ್ನಷ್ಟು ಪಾಪ ಮಾಡಲೆಂದು ದೇವರು ಎಷ್ಟೊಂದು ಗಟ್ಟಿ ಹೃದಯವನ್ನು ಕೊಟ್ಟಿರುತ್ತಾನಲ್ಲವೇ? ಆದರೆ, ಒಬ್ಬ ಹೋದರೇನಮ್ಮಾ? ಇವನಂತ ಇನ್ನೂ ಹತ್ತು ಜನ ಸಮಾಜದಲ್ಲಿ ಮರು ಹುಟ್ಟುತ್ತಾರವಲ್ಲವೇ? ಪಾಪ! ಆ ಪೇದೆಯ ಗತಿ ಏನಾಗುತ್ತೋ ಕಾಣೆ?” ಎಂದು ಮರುಕಪಡುತ್ತಾ ಅಮ್ಮ ಕಾಫಿಯ ಗುಟುಕೊಂದನ್ನು ಹೀರಿದಳು.
ಅಷ್ಟರಲ್ಲಿಯೇ ರಶ್ಮಿಯವರ ಮೊಬೈಲ್ ಎಡಬಿಡದೆ ಸದ್ದು ಮಾಡತೊಡಗಿತ್ತು. ವಾಟ್ಸ್ ಯಾಪ್ ಗಳ ಗುಂಪುಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಅವನ ಮೇಲೆ ದಾಳಿಯನ್ನು ಮಾಡುವ ಕೆಲವೇ ಸಮಯದ ಮೊದಲು, ಮಹಿಳಾ ಪೇದೆಯು ಆನ್ ಲೈನ್ಮೂ ಲಕ ತನ್ನ ಗೆಳತಿಗೆ ಕಳುಹಿಸಿದ ಪತ್ರವು ಫಾರ್ವರ್ಡ್ ಆಗಿ, ಹಲವಾರು ಮೆಚ್ಚಿಗೆಗಳೊಂದಿಗೆ ಮೊಬೈಲ್ ಫೋನುಗಳಲ್ಲಿ ಹರಿದಾಡತೊಡಗಿತ್ತು.
‘ನಾನು ಮಾಡಲು ಹೊರಟಿರುವ ಕಾರ್ಯವನ್ನು ಬಹಳಷ್ಟು ಯೋಚಿಸಿ, ಯಾರದೇ ಪ್ರಭಾವವಿಲ್ಲದೆ, ನನ್ನ ಸ್ವಂತ ಇಚ್ಛೆಯಿಂದ ಮತ್ತು ದುಃಖತಪ್ತ ಹೃದಯದಿಂದ ಮಾಡಲು ಹೊರಟಿರುವೆನು. ಇದರಿಂದ ನನ್ನ ಬದುಕಿನ ಮೇಲೆ ಮತ್ತು ನನ್ನ ಭಾವೀ ಜೀವನದ ಕನಸನ್ನು ಕಾಣುತ್ತಿರುವ ನನ್ನ ಪರಿವಾರದ ಮೇಲೆ ಎಂತ ಪರಿಣಾಮವಾಗುತ್ತದೆ ಎಂಬುದರ ಸಂಪೂರ್ಣ ಕಲ್ಪನೆ ನನಗಿದೆ. ಎರಡು ವಾರಗಳಿಂದಲೂ ಮಾನಸಿಕ ತೊಂದರೆಯಲ್ಲಿ ಹೊಯ್ದಾಡುತ್ತಿರುವ ನನಗೆ, ಇವನು ಮಾಡಿದ ಬರ್ಬರ ಕೃತ್ಯವನ್ನು ಊಹೆ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ. ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿರುವ ನ್ಯಾಯದೇವತೆಯು, ತನ್ನ ಕಾಣದ ತಕ್ಕಡಿಯನ್ನು ತೂಗಿ ತೀರ್ಪು ಕೊಡಲು ಎಷ್ಟು ಸಮಯವಾಗುತ್ತೆ ಎಂದು ನನಗೆ ಗೊತ್ತಿಲ್ಲ. ಆದರೆ, ನನ್ನ ತೀರ್ಪಿಗೆ ಯಾವ ಸಾಕ್ಷಿಗಳೂ ಬೇಕಾಗಿಲ್ಲ. ನನ್ನ
ಆತ್ಮ ಸಾಕ್ಷಿ ಮಾತ್ರ ಸಾಕು. ಇವನಿಗೆ ಅಲ್ಲಿಯವರೆಗೂ ಬದುಕಲು ಹಕ್ಕಿಲ್ಲವೆಂದು ನನ್ನ ಅನಿಸಿಕೆ, ಅದಕ್ಕಾಗಿ, ನನ್ನ ಮನಸಿಗೆ ತೋಚಿದ ಅಂತಿಮ ತೀರ್ಪನ್ನು ತೆಗೆದುಕೊಂಡಿರುವೆ. ಇದರಿಂದ ನರಕಯಾತನೆ ಅನುಭವಿಸಿ ಇಹಲೋಕ ತ್ಯಜಿಸಿರುವ ಅವಳ ಆತ್ಮಕ್ಕೆ ಮತ್ತು ಹೆಣ್ಣು ಹೆತ್ತ ಎಲ್ಲ ತಾಯಂದಿರ ಮನಸಿಗೆ ನೆಮ್ಮದಿ ಸಿಗುತ್ತದೆ ಅಂತ ನನ್ನ ಭಲವಾದ ನಂಬಿಕೆ. ನನ್ನ ಈ ಕೃತ್ಯದಿಂದ ಯಾರಿಗಾದರೂ ಬೇಸರವಾಗಿದ್ದರೆ ಅವರಲ್ಲಿ ನನ್ನ ಕ್ಷಮೆ ಇರಲಿ. ಇಂತಿ ನಿಮ್ಮವಳು, ಚಾಮುಂಡಿ’

ಪತ್ರವನ್ನು ಓದಿ, ನೀನು ನಿಜವಾಗಿಯೂ ಚಾಮುಂಡಿಯ ಅವತಾರವೆೇ ಎಂದು ಮನಸ್ಸಿನಲ್ಲಿಯೇ ಮೆಲಕು ಹಾಕಿ, ರಾತ್ರಿಯ ಶಿಫ್ಟಿಗೆ ತಯಾರಾಗತೊಡಗಿದರು ರಶ್ಮಿ. ವಾರ್ಡ ಮುಟ್ಟಿದ ಮೇಲೆ ಗೊತ್ತಾಯಿತು, ಆ ಕಿರಾತಕನನ್ನು ಆಪರೇಷನ್ ಮುಗಿದ ಮೇಲೆ ಐ ಸಿ ಯು ಗೆ ಶಿಫ್ಟ್ ಮಾಡಿದ್ದಾರೆಂದು. ಅಲ್ಲಿಯವರೆಗೂ ಅವನ ಆರೈಕೆಯನ್ನು ನೋಡಿಕೊಳ್ಳುತ್ತಲಿದ್ದ ಪ್ರೊಫೆಸರ್ ಜಗನ್ ಇವರತ್ತ ಬಂದು,
“ಗುಂಡಿನೇಟಿನಿಂದ ತುಂಬಾ ರಕ್ತ ಸ್ರಾವವಾಗಿದೆ. ಪರಿಸ್ಥಿತಿ ಅಷ್ಟೊಂದು ಚನ್ನಾಗಿಲ್ಲ. ಸಾಕಷ್ಟು ರಕ್ತವನ್ನು ಕೊಟ್ಟಿದ್ದಾಗಿದೆ. ಇನ್ನೂ ಬಿ.ಪಿ ಹೆಚ್ಚು ಕಡಿಮೆ ಆಗ್ತಾ ಇದೆ. ಅವನಿಗೆ ನಿಕಟ ಮೇಲ್ವಿಚಾರಣೆಯ ಅಗತ್ಯವಿದೆ. ಆರೈಕೆಯ ಯೋಜನೆಯನ್ನು ಬರೆದಿಟ್ಟಿದ್ದೇನೆ. ನಿನ್ನ ಹಿರಿಯ ಸಹದ್ಯೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಇರಲು ಸಹ ಹೇಳಿದ್ದೇನೆ. ರಾತ್ರಿಯ ಯಾವ ಸಮಯದಲ್ಲಾಗಲಿ ಏನಾದರು ಸಹಾಯ ಬೇಕಿದ್ದರೆ ಸಂಕೋಚವಿಲ್ಲದೆ ನನಗೆ ಫೋನು ಮಾಡು. ಅವನ ಪರಿಸ್ಥಿತಿ ಸ್ಥಿರವಾದ ಮೇಲೆ, ದೆಹಲಿಯ ಏಮ್ಸ್ ಆಸ್ಪತ್ರೆಗೆ ಹಸ್ತಾಂತರಿಸುವ ಯೋಚನೆ ಇದೆ. ಟೇಕ್ ಕೇರ್” ಎಂದು ಹೇಳಿ ಹೋದರು. ಅವರ ಮಾತಿಗೆಲ್ಲ ತಲೆ ಅಲ್ಲಾಡಿಸಿದ ರಶ್ಮಿಯವರು ತಪಾಸಣೆಗೆಂದು ಅವನಿದ್ದ ಕಡೆಗೆ ನಡೆದರು.
ಅವನಿಗಾಗಿ ಸ್ಪೆಷಲ್ ರೂಮು, ಕಾವಲಿಗಾಗಿ ಬಾಗಿಲಿನಲ್ಲಿ ಇಬ್ಬರು ಪೊಲೀಸರು, ಆರೈಕೆಗೆ ಇಬ್ಬರು ನರ್ಸಗಳು.
ಮನಸ್ಸಿನಲ್ಲಿಯೇ ರಶ್ಮಿ ಅಂದುಕೊಂಡರು ‘ಅವನಿಗೆ ಒದಗಿಸಿರುವ ಈ ವ್ಯವಸ್ಥಿತ ಕಾಳಜಿಯಲ್ಲಿನ ಒಂದು ಸಣ್ಣ
ಭಾಗವನ್ನಾದರೂ,ಕೆಲಸದ ಮೇಲೆ ಇರುತ್ತಿದ್ದ ಕಿರು ವೈದ್ಯರಿಗೆ ದಯಪಾಲಿಸಿದ್ದಿದ್ದರೆ, ಬಹುಶ ಅವಳು
ಜೀವಂತವಾಗಿರುತ್ತಿದ್ದಳಲ್ಲವೇ? ಇಂದಿನ ಈ ಪರಿಸ್ಥಿತಿ ಬರುತ್ತಿರಲಿಲ್ಲವೆೇ?’ ಎಂದೆಂದುಕೊಂಡು, ಒಂದು ಕ್ಷಣ ಅವನ ಕಡೆಗೆ ದೃಷ್ಟಿ ಹಾಯಿಸಿದರು. ಪಾಪದ ಪಿಂಡವೇ ಬೆಡ್ಡಿನ ಮೇಲೆ ಬಿದ್ದಿರುವ ಹಾಗಿತ್ತು. ಅವಳ ಕತ್ತು ಹಿಚುಕಿದ ಅವನ ಕೈಗಳಲ್ಲಿ ರಕ್ತ ಕೊಡುತ್ತಿರುವ ಸೂಜಿಗಳಿದ್ದವು, ಅವುಗಳ ಮುಖಾಂತರ ಯಾರೋ ಪುಣ್ಯಾತ್ಮರು ದಾನವೆರೆದ ಪವಿತ್ರವಾದ ರಕ್ತವು ಆ ಪಾಪಿಷ್ಠ ದೇಹವನ್ನು ಸೇರುತ್ತಲಿತ್ತು. ಅವಳ ದೇಹವನ್ನು ಕಚ್ಚಿದ ಆ ಬಾಯಿಯಲ್ಲಿ ಪ್ರಾಣವಾಯುವನ್ನು ಕೊಡುತ್ತಿರುವ ನಳಿಕೆಯಿತ್ತು, ಅವಳ ಪಾವಿತ್ರ್ಯತೆಯನ್ನು ಹರಿದು ಹಾಕಿದ ಅವನ ಗುಪ್ತಾಂಗದಿಂದ ಕಶ್ಮಲ ಮೂತ್ರವನ್ನು ಹರಿಸುತ್ತಿದ್ದ ಪೈಪು ಇಳಿ ಬಿದ್ದಿತ್ತು. ಅಪರಾದದ ಮೂಟೆಯನ್ನೇ ಬಚ್ಚಿಟ್ಟುಕೊಂಡಿದ್ದ ಅವನ ಎದೆಯ ಮೇಲೆ ಮಾನಿಟರಿನ ತಂತಿಗಳು ಬಳ್ಳಿಯಂತೆ ಹಬ್ಬಿಕೊಂಡಿದ್ದವು. ‘ಅನಿಷ್ಟ’
ಎಂದು ಉದ್ಘಾರವೆತ್ತಿದ ಅವರು,’ ಈ ರಾತ್ರಿಯು ತನ್ನ ವೈದ್ಯ ಜೀವನದ ಅಗ್ನಿ ಪರೀಕ್ಷೆ’ ಎಂದು, ತಮ್ಮಷ್ಟಕ್ಕೆ ತಾವೇ
ವಟಗುಟ್ಟಿಕೊಂಡರು. ಮಾನಿಟರಿನ ರೀಡಿಂಗನ್ನು ಓದಿ, ಏನಾದರು ತೊಂದರೆ ಇದ್ದರೆ ತಕ್ಷಣವೇ ನನಗೆ ತಿಳಿಸು ಎಂದು ನರ್ಸಗೆ ಹೇಳಿ, ಕೋಣೆಯಿಂದ ಹೊರಬಂದು,ವಾರ್ಡಿನಲ್ಲಿದ್ದ ಬೇರೆ ರೋಗಿಗಳ ವಿಚಾರಣೆಯಲ್ಲಿ ತೊಡಗಿದರು. ಕೆಲವೇ ಸಮಯದ ನಂತರ ಆತನನ್ನು ನೋಡಿಕೊಳ್ಳುತ್ತಲಿದ್ದ ನರ್ಸು ಏದುಸಿರು ಬಿಡುತ್ತಾ ಇವರ ಹತ್ತಿರ ಬಂದು,
“ಡಾಕ್ಟರ್! ಆತನ ಬಿ.ಪಿ ಡ್ರಾಪ್ ಆಗ್ತಾ ಇದೆ ಬೇಗನೇ ಬನ್ನಿ” ಎಂದು ಉಸಿರಿದಳು.
ಆತನ ಕೋಣೆಯ ಕಡೆಗೆ ಧಾವಿಸತೊಡಗಿದ ರಶ್ಮಿಯವರ ಕಂಗಳಿಗೆ ದೂರದಲ್ಲಿ ಚಾಮುಂಡಿ ನಿಂತು ಕಿರುಚುತ್ತಿರುವಂತೆ ಅನಿಸಿತು,
‘ಡಾಕ್ಟರ್ ನಿಲ್ಲಿ! ನಾನು ಮಾಡಿದ ಅರ್ಧ ಕೆಲಸವನ್ನು ಪೂರ್ತಿಗೊಳಿಸಿ, ಆತನಿಗೆ ಬದುಕಲು ಹಕ್ಕಿಲ್ಲ … ಹಕ್ಕಿಲ್ಲ’. ಇನ್ನೊಂದೆಡೆ ಅವರ ಕಿವಿಗಳಲ್ಲಿ ಆ ನತದೃಷ್ಟ ಕಿರು ವೈದ್ಯೆಯದಾಗಿರಬಹುದಾದ ಅಂತಿಮ ಆರ್ತನಾದ ಪ್ರತಿಧ್ವನಿಸತೊಡಗಿತು, ನನ್ನನ್ನು ಬಿಟ್ಟು ಬಿಡು … ನನ್ನನ್ನು ಬಿಟ್ಟು ಬಿಡು’ ಎಂದು. ಈ ಎಲ್ಲ ವಿಚಿತ್ರ ಪರಿಕಲ್ಪನೆಗಳಿಂದಾಗಿ ರಶ್ಮಿಯವರ ಕಾಲುಗಳು ನಡುಗತೊಡಗಿದ್ದವು, ಮೈಯೆಲ್ಲಾ ಬೆವರಿ ಕೈಗಳು ಅದುರತೊಡಗಿದ್ದವು. ಹೇಗೋ ಸಾವರಿಸಿಕೊಂಡು ಆತನ ಕೋಣೆಯನ್ನು ತಲುಪಿ, ಜೋರಾಗಿ ಶಬ್ದ
ಮಾಡುತ್ತಲಿದ್ದ ಮಾನಿಟರಿನತ್ತ ನೋಡಿದರು. ಅವನ ಹೃದಯ ಬಡಿತವು ಲಯವನ್ನು ತಪ್ಪಿ ಎತ್ತೆತ್ತಲೋ ಹೊಡೆದುಕೊಳ್ಳುತ್ತಲಿತ್ತು, ಬಿ.ಪಿ ಮತ್ತು ಪ್ರಾಣವಾಯುವಿನ ಪ್ರಮಾಣ ಕಡಿಮೆಯಾಗತೊಡಗಿತ್ತು. ಕೂಡಲೇ ರಶ್ಮಿಯವರಲ್ಲಿಯ ಅಂತರಾತ್ಮದ ಧ್ವನಿ ನುಡಿಯಿತು, ನೀನು ವೈದ್ಯೆ … ನಿನ್ನ ವೃತ್ತಿ ಪವಿತ್ರ … ವೈದ್ಯ ಶಪಥವನ್ನು ಮಾಡಿದ್ದೀಯಾ … ವೈರಿಯಾದರೇನು? ದ್ವೇಷಿಯಾದರೇನು? … ಯಾವ ಬೇಧವಿಲ್ಲದೇ ನರಳುತ್ತಿರುವ ಜೀವವನ್ನು ಕಾಪಾಡುವುದು ನಿನ್ನ ಕರ್ತವ್ವ್ಯ … ಡು ನೋ ಹಾರ್ಮ.
ಅಷ್ಟರಲ್ಲಿಯೇ, ಅವನ ಹೃದಯ ಬಡಿತ ನಿಂತಂತಾಯಿತು. ರಶ್ಮಿಯ ಶರೀರದಲ್ಲಿ ಅಡ್ರಿನ್ಯಾಲಿನ್ ಚಿಮ್ಮಿತು.
ತಕ್ಷಣವೇ ಅವರು ಚೀರತೊಡಗಿದರು,
“ನರ್ಸ್! ಕಾರ್ಡಿಯಾಕ್ ಅರೆಸ್ಟ್ ( ಹೃದಯ ಸ್ತoಭಣ)
ಹೆಲ್ಪ್ , ಹೆಲ್ಪ್, ಹೆಲ್ಪ್
ಬೇಗ ಡಿಫೈಬ್ರಿಲ್ಲೇಟರ್ ಆನ್ ಮಾಡಿ”
ಆ ಕ್ಷಣದಲ್ಲಿ ಅವರಿಗೆ ಅವನೊಬ್ಬ ರೋಗಿಯಾಗಿ ಮಾತ್ರ ಕಾಣತೊಡಗಿದ್ದನು. ಅವನ ಪ್ರಾಣ ಪಕ್ಷಿಯನ್ನು ಹಾರಲು ಬಿಡಬಾರದೆಂಬ ಶಪಥದಿಂದ ಕಾರ್ಡಿಯಾಕ್ ಮಸಾಜನ್ನು ರಶ್ಮಿ ತ್ವರಿತಗೊಳಿಸಿದ್ದರು. ಒಂದು ಹೆಣ್ಣಾಗಿ ಅಲ್ಲ, ಆದರೆ ಒಬ್ಬಳು ವೈದ್ಯಳಾಗಿ ಅವರು ಆ ತೀರ್ಪನ್ನು ತೆಗೆದುಕೊಂಡಿದ್ದರು. ಅವನ ಎದೆಯ ಮೇಲೆ ತಮ್ಮೆರಡು ಕೈಗಳನ್ನಿಟ್ಟು ಒತ್ತಿ ಒತ್ತಿ, ಅವನ ಹೃದಯಕ್ಕೆ ಚಾಲನೆ ಕೊಡಲು ಒಂದೇ ಸಮನೆ ಶ್ರಮಿಸುತ್ತಲಿದ್ದರು. ಹಿರಿಯ ಸಹದ್ಯೋಗಿಗಳು ಬರುವಷ್ಟರಲ್ಲಿಯೇ ಅವರು ತಮ್ಮ ಹೋರಾಟದಲ್ಲಿ ವಿಫಲರಾಗಿದ್ದರು. ಅವನ ಪ್ರಾಣ ಪಕ್ಷಿ ಅವರ ಕೈಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಶ್ವಿಯಾಗಿತ್ತು. ಕಾರ್ಡಿಯಾಕ್ ಮಸಾಜಿನಿಂದ ಸೋತು ಹೋಗಿ, ಏದುಸಿರು ಬಿಡುತ್ತಿದ್ದ ರಶ್ಮಿ ,ತಂಪು ಗಾಳಿಯ ಅನ್ವೇಷಣೆಯಲ್ಲಿ ಕೋಣೆಯ ಕಿಟಕಿಯನ್ನು ತೆರೆದು, ಆಕಾಶದತ್ತ ನೋಡಿದರು. ಮಿನುಗುತ್ತಿದ್ದ ತಾರೆಗಳ ಮಧ್ಯೆ ನಿಂತು, ಹಸನ್ಮುಖದಿಂದ ಆ ನತದೃಷ್ಟ ಕಿರು ವೈದ್ಯೆ ನಗುತ್ತಿರುವಂತೆ ಭಾಸವಾಯಿತು. ಅವಳನ್ನೇ ನೋಡುತ್ತಾ ರಶ್ಮಿಯವರೆಂದರು,
“ನಿನ್ನ ಆತ್ಮಕ್ಕೆ ಶಾಂತಿ ಇರಲಿ.” ಅವರಾಡಿದ ಆ ನುಡಿಯು ಬೀಸುತ್ತಿದ್ದ ತಂಗಾಳಿಯಲ್ಲಿ ಅಲೆ ಅಲೆಯಾಗಿ, ದೂರ ದೂರಕ್ಕೆ ಹರಿದು ಹೋಯಿತು.

—– ಶಿವಶಂಕರ ಮೇಟಿ