ವರಮನೋಹರೆ ಕೇಳು ಪಾರಿಜಾತವಿದು – ಯೋಗೀಂದ್ರ ಮರವಂತೆ

ಆಶ್ವೀಜ ಮಾಸದ ಸಂಜೆಯ ಹೊತ್ತಿಗೆ ಮರವಂತೆ ಮನೆಯ ಹೊರಗೆ ಯಾರದೋ  ಕಾಲ ಸದ್ದು ಕೇಳಿದರೂ ಇವರೇ ಬಂದರೇನೋ ಎಂದು ರೋಮಾಂಚನಗೊಳ್ಳುವುದು; ಬಗಲಿಗೆ ಮದ್ದಳೆ, ಹಾರ್ಮೋನಿಯಂ ಧರಿಸಿದ ಗುಂಪು , ಕೈಯಲ್ಲಿ ಅಲಂಕಾರಗೊಂಡ ಪುಟ್ಟ ಕೋಲನ್ನು ಹಿಡಿದ ಇಬ್ಬರು ಮಕ್ಕಳನ್ನು ಕೂಡಿಕೊಂಡು  ಮನೆಯ ಗೇಟು ದೂಡಿಕೊಂಡು ಯಾವಾಗ ಒಳಬರುತ್ತಾರೆ ಎಂದು ಕಾಯುವುದು. ನಮ್ಮಮನೆಗೆ ಬರುವ ಮೊದಲು ಮದ್ದಳೆಯ ‘ತೋಂ ತೋಂ’ ನೆರೆಮನೆಯಲ್ಲಿ ಕೇಳುವಾಗ, ಇನ್ನೊಂದು ಅರ್ಧ ಘಂಟೆಯಲ್ಲಿ ಇವರು ನಮ್ಮ ಮನೆಗೂ ಬರುತ್ತಾರಲ್ಲ ಎಂಬ ಖುಷಿಯಲ್ಲಿ ನಿಂತಲ್ಲಿ ನಿಲ್ಲಲಾಗದೆ , ಬಾಗಿಲ ಅಡ್ಡ ನಿಂತು ಎರಡು ತೈ ತೈ ಹೆಜ್ಜೆ ಹಾಕುವುದು.  ಕೇರಿಯ ಮಕ್ಕಳಿಗೆ ನವರಾತ್ರಿ ಎಂದರೆ  ಪ್ರತೀಕ್ಷೆಯಾದ ನನ್ನ ಬಾಲ್ಯ ಕಾಲದ  ನೆನಪುಗಳಿವು. ನರಸಿಂಹದಾಸರ ತಂಡದ ಹರಿದ ಚಪ್ಪಲಿಗಳ ಚರಪರ ಸದ್ದು, ಇನ್ನೊಂದು ಮನೆಯಲ್ಲಿ ಹಾಡಲು ಸಿದ್ಧ ಆಗುತ್ತಿರುವಾಗ ಅವರ ಹೊಟ್ಟೆಯಿಂದ ಗಂಟಲವರೆಗೆ ತುಂಬಿಕೊಂಡು ಹೊರಬರುವ ಕೆಮ್ಮು , ನಮ್ಮ ಮನೆಯ ಆವರಣದ  ಒಳಗೆ ಕೇಳಿಸಿತೆಂದರೆ ಮೈಯೆಲ್ಲಾ ಕಿವಿಯಾಗಿ , ಮನಸೆಲ್ಲ ಖಾಲಿಯಾಗಿ ನಾವು ತಯಾರು.

“ಗುರುದೈವ ಗಣಪತಿಗೆ ಶರಣು ಶರಣೆಂದು ” ಎನ್ನುತ್ತಾನೆ ಕುಳಿತ ಒಬ್ಬ ಹುಡುಗ
“ಲೇಸಾಗಿ ಹರಸಿದರು ಬಾಲಕರು ಬಂದು …” ಎಂದು ಮೊದಲಿನವನ ಎದುರು ಕುಳಿತ ಇನ್ನೊಬ್ಬ ಹುಡುಗ .

ಬಿಳಿ ಟೊಪ್ಪಿ, ಬಿಳಿ ವಸ್ತ್ರ  ಧರಿಸಿ, ಬೆಂಡು ಬಣ್ಣದ ಕಾಗದಗಳಿಂದ ಅಲಂಕಾರಗೊಂಡ ಹೂವಿನ ಕೋಲನ್ನು ಹಿಡಿದು ಎದುರು ಬದುರು ಕುಳಿತ ಮಕ್ಕಳಿಬ್ಬರು ಸವಾಲು ಜವಾಬುಗಳ ಧಾಟಿಯಲ್ಲಿ ಹೇಳುವ ಚೌಪದಿಯ  ಸಾಲುಗಳವು. ಅದು ಮುಗಿಯುವ ಹೊತ್ತಿಗೆ, ಮಕ್ಕಳ ಹತ್ತಿರದಲ್ಲಿ ಕುಳಿತ ನರಸಿಂಹದಾಸರು ಶ್ರುತಿ ಮೀಟುವವನ ಕಡೆಗೊಮ್ಮೆ , ಮದ್ದಲೆಗಾರನ ಕಡೆಗೊಮ್ಮೆ ಓರೆ ನೋಟ ಬೀರಿ , ಗತ್ತಿನಲ್ಲಿ ಹಾಡು ಆರಂಭಿಸುತ್ತಾರೆ ….

” ವಹ್ಹವ್ವಾರೆ ನೋಡಿರೋ ಈ ಕಡೆಯ
ಬಹ ನಾರಿ ಯಾರ್ ಇವಳು ನೀವ್ ಪೇಳಿರಯ್ಯ ,
ಉಡುಗಳ ಮಧ್ಯದಿ ಶಶಿಯಂತೆ
ಸ್ತ್ರೀಯರ ನಡುವೆ ದಂಡಿಗೆ ಏರಿ ಮಿಂಚಿನಂತೆ “

ಉದ್ಯಾನವದಲ್ಲಿ ಸಖಿಯರೊಂದಿಗೆ ತಿರುಗುತ್ತಿರುವ ಚಂದ್ರಾವಳಿಯನ್ನು ಮರೆಯಲ್ಲಿ ನಿಂತು ನೋಡಿದ ಕೃಷ್ಣ ,ಗೆಳೆಯರೊಂದಿಗೆ ಆಡುವ ಮಾತುಗಳಿವು. ಅವಳ ಸೌಂದರ್ಯಕ್ಕೆ ಸೋತವನು, ನಂತರ ಧೈರ್ಯ ಮಾಡಿ ಚಂದ್ರಾವಳಿಯ ಎದುರಿಗೇ ಬಂದು ನಿಂತು, ಅಳುಕು, ಭಂಡತನ, ಪ್ರೀತಿ, ಸೇರಿದ ಭಾವದಲ್ಲಿ ತನಗುಂಟಾಗಿರುವ ಪ್ರೇಮವನ್ನು ತಿಳಿಸುತ್ತಾನೆ. “ಭಳಿರೆ ಚಂದ್ರಾವಳಿ ನಿನ್ನನು ಕಾಣದೆ ಕಳವಳಿಸಿದೆ ಮನವು ….” ಎಂದು ಆ ಸಂದರ್ಭಕ್ಕೆ ಭಾಗವತರು ಹಾಡುತ್ತಾರೆ. ಕೃಷ್ಣ ಮತ್ತು ಚಂದ್ರಾವಳಿಯರ ಪಾತ್ರವಾಗಿರುವ ಮಕ್ಕಳು ಹಾಡುಗಳಿಗೆ ಅನುಗುಣವಾಗಿ  ಸಂಭಾಷಿಸುತ್ತಾರೆ.  ರಾಧೆಯ ತಂಗಿ ಚಂದ್ರಾವಳಿಯನ್ನು, ಕೃಷ್ಣನು ಕಾಡುವ ಶೃಂಗಾರಭರಿತ ಸನ್ನಿವೇಶ ಇರುವ  “ಚಂದ್ರಾವಳಿ ವಿಲಾಸ”  ಪ್ರಸಂಗದ ಕಥೆ ಹೀಗೆ “ಹೂವಿನ ಕೋಲು” ಎಂದು ಕರೆಯಲ್ಪಡುವ ಯಕ್ಷಗಾನದೊಳಗಿನ ಸಣ್ಣ ಪ್ರಕಾರದ ಮೂಲಕ ಮುಂದುವರಿಯುತ್ತದೆ. ಯಕ್ಷಗಾನ ತಾಳಮದ್ದಳೆಯಲ್ಲಿ ಕಾಣುವಂತಹ  ಕಥಾ ವಿಸ್ತಾರ, ಪಾತ್ರ ಚಿತ್ರಣ, ಪಾಂಡಿತ್ಯ, ಜಿಜ್ಞಾಸೆ, ವಿಮರ್ಶೆಗಳಿಗೆ  “ಹೂವಿನ ಕೋಲು” ಹೋಲಿಕೆ ಅಲ್ಲದಿದ್ದರೂ ವೇಷವನ್ನು ಧರಿಸದೇ ಎದುರು ಬದುರು ಕುಳಿತು, ಭಾಗವತರ ಹಾಡನ್ನು ಹೊಂದಿಕೊಂಡು ಪಾತ್ರಗಳಾಗಿ ಮಾತನಾಡುವ ಕಾರಣಕ್ಕೆ ತಾಳಮದ್ದಲೆಯನ್ನು ಈ ಪ್ರಕಾರ ನೆನಪಿಸುತ್ತದೆ.  “ಹೂವಿನ ಕೋಲು” ಸಂಪ್ರದಾಯದಲ್ಲಿ, ಯಕ್ಷಗಾನ ಪ್ರಸಂಗಗಳ ಸಣ್ಣ
ತುಣುಕುಗಳನ್ನು ಆಯ್ದು, ಚಿಕ್ಕ ಮಕ್ಕಳನ್ನು ತರಬೇತುಗೊಳಿಸುತ್ತಾರೆ. ಅವರನ್ನು ಕರೆದುಕೊಂಡು ನವರಾತ್ರಿಯ ಸಮಯದಲ್ಲಿ ಊರೆಲ್ಲ ತಿರುಗುತ್ತಾರೆ. ಪಾರಿತೋಷಕವಾಗಿ ಹಣ ತೆಂಗಿನಕಾಯಿ ಅಕ್ಕಿಯನ್ನು  ಪಡೆಯುತ್ತಾರೆ.

ನರಸಿಂಹದಾಸರು ಯಕ್ಷಗಾನ ಮೇಳಗಳಲ್ಲಿ ಹಾಡುವುದು ದುರಾದೃಷ್ಟವಶಾತ್ ನಿಲ್ಲಿಸಿದ ಮೇಲೆ, ನವರಾತ್ರಿಗೆ ಹೂವಿನಕೊಲಿನ ತಂಡ ಕಟ್ಟಿಕೊಂಡು ತಿರುಗುತ್ತಿದ್ದರು. ಹಾಗಾಗಿಯೇ ನರಸಿಂಹ ದಾಸರ ನೆನಪಾದಾಗಲೆಲ್ಲ ನವರಾತ್ರಿಯಲ್ಲಿ ಅವರು ಮನೆಗೆ ಬರುತ್ತಿದ್ದ ದಿನಗಳ
ನೆನಪಾಗುತ್ತದೆ.  ಒಂದು ಕಾಲಕ್ಕೆ ಯಕ್ಷಗಾನದ ತೆಂಕು ಬಡಗು ತಿಟ್ಟುಗಳ ಅಪೂರ್ವಸಿದ್ಧಿಯೊಂದಿಗೆ ಅಪ್ರತಿಮ ಭಾಗವತರೆನಿಸಿಕೊಂಡಿದ್ದ (ಯಕ್ಷಗಾನ ಹಾಡುಗಾರ ಮತ್ತು ಸೂತ್ರಧಾರ)  ನರಸಿಂಹದಾಸರು ಬದುಕಿನ ಕೊನೆಯ ಮೂವತ್ತು ವರ್ಷಗಳಲ್ಲಿ ಯಕ್ಷಗಾನದೊಟ್ಟಿಗೆ
ನಿರಂತರ ಸಂಬಂಧ ಇಟ್ಟುಕೊಂಡದ್ದು ನವರಾತ್ರಿಯ ಹೂವಿನಕೋಲಿನ ಮೂಲಕ ಮಾತ್ರ. ನರಸಿಂಹದಾಸರು ಕಲಾಸಂಪನ್ನತೆಯ  ಉತ್ತುಂಗದ ದಿನಗಳಲ್ಲಿ ಇರುವಾಗಲೇ ತಮ್ಮ ಅತ್ಯಮೂಲ್ಯವಾದ ಧ್ವನಿಯನ್ನು ಕಳೆದು ಕೊಂಡವರು. ಇಂದಿಗೆ ಸುಮಾರು 70 ವರ್ಷಗಳ ಹಿಂದೆ,
ಧ್ವನಿವರ್ಧಕಗಳು ಇಲ್ಲದ ಕಾಲದ ರಾತ್ರಿ ಬೆಳಗಿನವರೆಗೆ ಯಕ್ಷಗಾನ. ಇನ್ನು ಎರಡು ಮೇಳಗಳು ಜಿದ್ದಿನಲ್ಲಿ ಪ್ರದರ್ಶಿಸುವ ಜೋಡಾಟಗಳಲ್ಲಂತೂ ಎದುರಿನ ಮೇಳದ ಸದ್ದನ್ನು ಅಡಗಿಸಿ ದೂರದೂರದವರೆಗೆ ತನ್ನ ಕಂಠವನ್ನು ಮುಟ್ಟಿಸ ಬೇಕಾದ ಅನಿವಾರ್ಯತೆ, ಅವರ ಅತ್ಯಂತ ಬೇಡಿಕೆಯ ದಿನಗಳಾದ್ದರಿಂದ ಅವಿರತ ತಿರುಗಾಟ. ಮತ್ತೆ ಆಟ ಮುಗಿದ ಮೇಲೆ ಬೆಳಿಗ್ಗೆ ನಿದ್ರೆ ಮಾಡುವ ಗೋಜಿಗೆ ಹೋಗದೆ ಅನಾರೋಗ್ಯದ ದಿನಗಳನ್ನು ಹತ್ತಿರ ತರುವಂತಹ ಕಾಲಹರಣದ ಮಾಧ್ಯಮಗಳ ಸಹವಾಸ, ತನ್ನ ಪ್ರತಿಭೆಯ ಬಗ್ಗೆ ಅವರಿಗೇ  ಇದ್ದ ನಿರ್ಲಕ್ಷ್ಯ ಅಸಡ್ಡೆ … ಇಂತಹ ದಿನಚರಿ-ದುಡಿತದಲ್ಲಿ ನರಸಿಂಹದಾಸರ ಸುಸ್ವರ ಅನಿರೀಕ್ಷಿತವಾಗಿ ಬಿದ್ದುಹೋಯಿತು. ಮಾತನಾಡಿದರೂ ಕ್ಷೀಣವಾಗಿ ಕೇಳಿಸುವಂತಹ ಭಗ್ನ ಸ್ವರೂಪಕ್ಕೆ
ಮಾರ್ಪಾಟಾಯಿತು. ಇಂತಹ  ಆಕಸ್ಮಿಕ ಸನ್ನಿವೇಶದಲ್ಲಿ ಮೇಳಗಳ ತಿರುಗಾಟದಿಂದ ಅವರು ಹೊರಬರಬೇಕಾಯಿತು .

ಮರವಂತೆ ನರಸಿಂಹದಾಸರು, ಯಕ್ಷಗಾನ ವಲಯದಲ್ಲಿ ಕರೆಯಲ್ಪಡುತ್ತಿದ್ದುದು ದಾಸ ಭಾಗವತರೆಂದು. 1955-70 ರ ನಡುವೆ ದಾಸಭಾಗವತರು ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ಯಕ್ಷಗಾನ ಮೇಳಗಳಲ್ಲಿ ಮುಖ್ಯ ಭಾಗವತರಾಗಿ
ಅಲ್ಲದಿದ್ದರೆ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಆಗ ದಾಸಭಾಗವತರ ಆಟ ಎಂದರೆ ಜನರು ದುಂಬಾಲು ಬೀಳುತ್ತಿದ್ದರಂತೆ. ಸಾರಿಗೆ ಸಂಪರ್ಕ ಸುಸೂತ್ರ ಇಲ್ಲದ ಕಾಲದಲ್ಲಿ, ಕಾರು ಮಾಡಿಕೊಂಡಾದರೂ ಅವರ ಆಟ ನೋಡಿ ಬರುತ್ತಿದ್ದವರ ದೊಡ್ಡ ಸಂಖ್ಯೆ ಇತ್ತಂತೆ. ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ಅದ್ಭುತವಾಗಿ ಹಾಡಬಲ್ಲವರಾಗಿದ್ದ ದಾಸಭಾಗವತರು, ಬಡಗು ತಿಟ್ಟಿನೊಳಗಿನ ವಿಶಿಷ್ಟ ಪ್ರಬೇಧಗಳಾದ ಬಡಾಬಡಗು  ಮತ್ತು ಕುಂದಾಪುರ ಮಟ್ಟು ಎರಡನ್ನೂ ಸಮವಾಗಿ ನಿರ್ವಹಿಸಬಲ್ಲವರಾಗಿದ್ದರು. ಮೂವತ್ತಕ್ಕಿಂತ ಹೆಚ್ಚು ಪ್ರಸಂಗಗಳ ಕಂಠಪಾಠ, ತಾವೇ ಬೆಳೆಸಿಕೊಂಡ ಯಕ್ಷಗಾನಕ್ಕೊಪ್ಪುವ ಆಕರ್ಷಕ ಹಾಡಿನ ಶೈಲಿ, ಸಮುದ್ರದ ಭೋರ್ಗರೆತಕ್ಕೆ ಹೋಲಿಸಲ್ಪಡುತ್ತಿದ್ದ ತುಂಬು ಸ್ವರ, ಅಪ್ರತಿಮ ಲಯ ಸಿದ್ಧಿ ಮತ್ತು
ರಂಗಸ್ಥಳದ ಮೇಲಿನ ಬಿಗಿ ಹಿಡಿತಗಳಿಂದ ಅಪಾರ ಯಕ್ಷಗಾನ ಪ್ರೇಮಿಗಳ ಮಾತ್ರವಲ್ಲದೇ ಯಕ್ಷಗಾನದ ಇತಿಹಾಸದಲ್ಲಿ ಅತ್ಯಂತ ಹೆಸರು ಗೌರವ ಪಡೆದ ಕಲಾವಿದರ ಮೆಚ್ಚಿನ ಭಾಗವತರು ಕೂಡ ಆಗಿದ್ದರು. ಆ ಸಮಯದಲ್ಲಿ ಮೋಡಿಯ ಕುಣಿತ, ಭಾವಪೂರ್ಣ ಅಭಿನಯಗಳಿಂದ ಪ್ರೇಕ್ಷಕರಿಗೆ ವಿದ್ಯುತ್ ಸಂಚಾರ ಮಾಡಿಸುತ್ತಿದ್ದ ಕೆರೆಮನೆ ಶಿವರಾಮ ಹೆಗಡೆ (ಬಡಾಬಡಗು ಶೈಲಿ ) ಮತ್ತು ಅದ್ಭುತ ಚಲನೆಯ ವಿಶಿಷ್ಟ ಕುಣಿತದ ಕಲಾವಿದ ಎನ್ನುವ ಕೀರ್ತಿ ಇದ್ದ ವೀರಭಧ್ರನಾಯ್ಕರನ್ನು (ಕುಂದಾಪುರದ ಮಟಪಾಡಿ ಮಟ್ಟು ) ದಾಸ ಭಾಗವತರು ಕುಣಿಸಿದವರು. ನರಸಿಂಹದಾಸರ ಭಾಗವತಿಕೆಗೆ ತಿಮ್ಮಪ್ಪ ನಾಯ್ಕರ ಮದ್ದಳೆ, ಯಕ್ಷಗಾನ ಹಿಮ್ಮೇಳದಲ್ಲಿ ಜನರು ಬಯಸುವ ಚಿರಂತನ ಜೋಡಿಯಾಗಿತ್ತು. ದಾಸಭಾಗವತರ ಕಲಾ ಜೀವನದ ಉಚ್ಚ್ರಾಯದ ಕಥೆಗಳನ್ನು ನಮ್ಮ ಹಿಂದಿನ ತಲೆಮಾರಿನ ಪ್ರೇಕ್ಷಕರಿಂದ, ಹಿರಿಯ ಕಲಾವಿದರಿಂದಲೇ ಕೇಳಬೇಕು. ನನ್ನ ಪೀಳಿಗೆಯವರಿಗೆ ದಾಸ ಭಾಗವತರ ಹಾಡುಗಾರಿಕೆ ಕೇಳಲು ಸಿಕ್ಕಿರುವ ಸಾಧ್ಯತೆಗಳು ಬಹಳ ಕಡಿಮೆ. 1992ರಲ್ಲಿ  ಮಂಗಳೂರಿನಲ್ಲಿ ನಡೆದ
“ಯಕ್ಷಧ್ವನಿ” ಎನ್ನುವ  ಶ್ರುತಿ ರಾಗ ಲಯ ತಾಳಗಳ ವಿಶಿಷ್ಟ ಕಾರ್ಯಕ್ರಮದಲ್ಲಿ ಇವರು ಹಾಡಿದ “ಶ್ರೀಕೃಷ್ಣ  ಪಾರಿಜಾತ” ಪ್ರಸಂಗದ ಹಾಡುಗಳ ವಿಡಿಯೋಗಳು ಈಗಲೂ ವಾಟ್ಸಾಪ್ ಮುಖಾಂತರ ಸುತ್ತು ಹೊಡೆಯುತ್ತವೆ.  ಕೃಷ್ಣ ಸತ್ಯಭಾಮೆಯರು  ಸುರಲೋಕಕ್ಕೆ ಹೋದಾಗ ಅಲ್ಲೆಲ್ಲ  ತುಂಬಿರುವ ಪರಿಮಳದ ಬಗ್ಗೆ ಸತ್ಯಭಾಮೆಗೆ ಮೂಡುವ ಕುತೂಹಲ, ಕೃಷ್ಣನು ಉತ್ತರಿಸುವ ಸಂದರ್ಭದ ಹಾಡುಗಳು ಅವು.  ದಾಸ ಭಾಗವತರ ಸ್ವರ ಮಾಧುರ್ಯ ಶಿಥಿಲಗೊಂಡಿದ್ದರೂ  ಅಂದಿನ  ಕಾರ್ಯಕ್ರಮದಲ್ಲಿ  ಹಾಡಿದ ಎಲ್ಲ ಹಾಡುಗಳೂ ಅವರ ಕಲಾ ಔನ್ನತ್ಯದ ಕಾಲವನ್ನು  ನೆನಪಿಸಿತ್ತು. “ವರಮನೋಹರೆ ಕೇಳು ಪಾರಿಜಾತವಿದು” ಎನ್ನುವ ಪದ್ಯ ಹಾಡುವಾಗ ಪುರಾಣ ಪ್ರಪಂಚಕ್ಕೆ ಎಳೆದೊಯ್ದು  ಶರಧಿ ಮಥನದಲ್ಲಿ
ಹುಟ್ಟಿದ ಅತ್ಯಂತ ಅಪೂರ್ವವಾದ  ಪಾರಿಜಾತ ವೃಕ್ಪದೆದುರು ನಮ್ಮನ್ನೂ ನಿಲ್ಲಿಸುವ ಪ್ರಯತ್ನ ನಡೆಯುತ್ತದೆ. ತೆಂಕು ಬಡಗು ತಿಟ್ಟುಗಳ ಹಿರಿಯ ಕಿರಿಯ ಭಾಗವತರ ಹಾಡುಗಾರಿಕೆಯ ಸಮ್ಮಿಲನದ ಆ ಕಾರ್ಯಕ್ರಮ ಯಕ್ಷಗಾನ ಲೋಕದಲ್ಲಿ ಲಭ್ಯ ಇರುವ ಒಂದು ಅಮೂಲ್ಯ ಅಪೂರ್ವ ದಾಖಲೀಕರಣವೂ ಹೌದದು. ಅಂದಿನ ಕಾರ್ಯಕ್ರಮದಲ್ಲಿ ನರಸಿಂಹ ದಾಸರನ್ನು ಪರಿಚಯಿಸುವಾಗ  ಹಿರಿಯ ಅರ್ಥಧಾರಿಗಳೂ ವಿದ್ವಾಂಸರೂ ಆದ ಪ್ರಭಾಕರ ಜೋಶಿಯವರು, ಅವರನ್ನು ಯಕ್ಷಗಾನ ಕಂಡ “ಸರ್ವಶ್ರೇಷ್ಠ ಭಾಗವತರು ಎಂದು ತರ್ಕಿಸಬಹುದು” ಎಂದಿದ್ದರು
(arguably the greatest ). ದಾಸ ಭಾಗವತರು ರಂಗಸ್ಥಳದಲ್ಲಿ ಸಾಮ್ರಾಟರಾಗಿ ಮೆರೆಯುತ್ತಿದ್ದ ಕಾಲದಲ್ಲಿ ಅವರ ಭಾಗವತಿಕೆ ಕೇಳಲೆಂದೇ ಪಾರಿಜಾತ ಪ್ರಸಂಗವನ್ನು ಆಡಿಸುತ್ತಿದ್ದರು ಎಂದಿದ್ದರು. ಯಕ್ಷಗಾನದ ವಿಮರ್ಶಕರು ಪತ್ರಕರ್ತರು ಆದ ರಾಘವನ್ ನಂಬಿಯಾರ್ ಮತ್ತು ಹೆಸರಾಂತ ಹಿರಿಯ ಮದ್ದಲೆಗಾರ ಹಿರಿಯಡ್ಕ ಗೋಪಾಲರಾಯರು ಕೂಡ, ದಾಸಭಾಗವತರ ಲಯಗಾರಿಕೆಗೆ ಯಕ್ಷಗಾನ ಲೋಕದಲ್ಲಿ ಸಾಟಿಯೇ ಇರಲಿಲ್ಲ ಎಂದು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿದ್ದಾರೆ ಬರೆದಿದ್ದಾರೆ .

ದಾಸ ಭಾಗವತರು ತಮ್ಮ ಭಗ್ನ  ಸ್ವರದಲ್ಲೂ ಅಂದಿನ ಕಾರ್ಯಕ್ರಮದಲ್ಲಿ ಹಾಡಿದ ಹಾಡುಗಳನ್ನು ನೇರವಾಗಿ ಕೇಳಿದ  ಪ್ರೇಕ್ಷಕರು ಈಗಲೂ ಆ ಕಾರ್ಯಕ್ರಮದ ರಸಘಳಿಗೆಗಳನ್ನು ಮೆಲುಕು ಹಾಕುತ್ತಾರೆ.  ಯೂಟ್ಯೂಬ್  ಮೂಲಕ ಮತ್ತೆ ಮತ್ತೆ ಅಂದಿನ ಕಾರ್ಯಕ್ರಮದ ಮರುವೀಕ್ಷಣೆ ಮಾಡುತ್ತಾರೆ. ಮಂಗಳೂರಿನಲ್ಲಿ “ಯಕ್ಷಧ್ವನಿ” ಕಾರ್ಯಕ್ರಮ ನಡೆದ ನಂತರ ಉಡುಪಿಯಲ್ಲಿ  ಹಳೆಯ ಹೊಸ ತಲೆಮಾರಿನ ಭಾಗವತರ ಕೂಟದಲ್ಲಿ ನಡೆದ ಗಾನ ವೈವಿಧ್ಯ ಕಾರ್ಯಕ್ರಮದಲ್ಲೂ ದಾಸಭಾಗವತರ   ಹಾಡುಗಾರಿಕೆ ಅತ್ಯಂತ ಪ್ರಶಂಸೆಯನ್ನು ಪಡೆದಿತ್ತು .
ಧ್ವನಿಮುದ್ರಣ ಕಂಡು ಅಂಗಡಿಯಲ್ಲಿ ಮಾರಾಟವಾದ ದಾಸ ಭಾಗವತರ ಏಕೈಕ ಅಥವಾ ಬೆರಳೆಣಿಕೆಯ ಆಡಿಯೋ ಕ್ಯಾಸೆಟ್ ಗಳಲ್ಲಿ  ಅದೂ ಒಂದು ಇರಬೇಕು. ಇನ್ನು ದಾಸ ಭಾಗವತರು ಆಕಾಶವಾಣಿಯಲ್ಲಿ ಅನೇಕ ಪ್ರಸಂಗಗಳನ್ನು ಹಾಡಿದ್ದರಾದರೂ  ಅವ್ಯಾವುವೂ  ಈ ಕಾಲದ
ಪ್ರೇಕ್ಷಕರನ್ನು ತಲುಪದಿದ್ದುದು ದಾಸಭಾಗವತರನ್ನು ಸುತ್ತುವರಿದಿದ್ದ ಹಲವು ದುರಂತಗಳಲ್ಲಿನ ಒಂದು ದುರಂತ ಮತ್ತೆ ಯಕ್ಷಗಾನ ಪ್ರೇಕ್ಷಕರ  ದೌರ್ಭಗ್ಯ.   ೯೦ರ ದಶಕದ ಆ ಎರಡು ದಾಖಲೀಕರಣಗಳ ಸಮಯದಲ್ಲಿ ತಮ್ಮ ಆಕರ್ಷಕವಾದ ಸ್ವರವನ್ನು ಕಳೆದುಕೊಂಡಿದ್ದರೂ, ದಾಸ ಭಾಗವತರ  ವರ್ಚಸ್ಸು ಲಯ ಹುಮ್ಮಸ್ಸು, ಸಿದ್ಧಿ, ಆತ್ಮ ವಿಶ್ವಾಸ  ಕುಂದಿರಲಿಲ್ಲ. ಅವರು  ಪ್ರತಿ ಹಾಡನ್ನು ನಿರ್ವಹಿಸಿದ ರೀತಿಯೂ ಯಕ್ಷಗಾನದ ಇತಿಹಾಸದಲ್ಲಿ ಎಲ್ಲೋ ಮರೆಯಾಗಿರುವ ಪುರಾತನ ಸುವರ್ಣ ಕಾಲವನ್ನು ನೆನಪಿಸುತ್ತಿತ್ತು.  ಹಾಡಿನ ನಡುವೆ, ಅತ್ಯಂತ ಸ್ಪಷ್ಟವಾಗಿ ಕೇಳಿಸುವ  ತಾಳದ ಪ್ರತಿ ಪೆಟ್ಟಿನ  ಸದ್ದು, ನಿಧಾನದಲ್ಲಿಯೂ ವೇಗದಲ್ಲಿಯೂ ನಿಖರವಾಗಿರುವ ತಾಳದ ಚಲನೆ, ಗತಿ ಅವರ ಲಯಗಾರಿಕೆಯ ಕಿರು ಝಲಕ್
ಒದಗಿಸುತ್ತಿದ್ದವು.  ಹಾಡುವಾಗ ಸುತ್ತಲಿನ ವಿದ್ಯಮಾನವನ್ನು ಕುತ್ತಿಗೆ ಕಣ್ಣುಗಳ ನಿಧಾನ  ಚಲನೆಯಲ್ಲಿ  ಗಮನಿಸುವ, ಯಾರಿಗೂ ಯಾವುದಕ್ಕೂ ಅಂಜದ ಅಳುಕದ ಆತ್ಮವಿಶ್ವಾಸ ಹೊತ್ತು  ಇಲ್ಲಿ ನಾನೇ  ಸೂತ್ರಧಾರ ಎನ್ನುವ ನಿಲುವಿನಲ್ಲಿ  ಅವರು ಭಾಗವತಿಕೆ ನಡೆಸುತ್ತಿದ್ದ ರೀತಿ  ಕಣ್ಣಿಗೆ ಕಟ್ಟುತ್ತಿತ್ತು. ಪದ್ಯ ಸಾಹಿತ್ಯದ ಸ್ಪಷ್ಟತೆಯ ಬಗ್ಗೆ ಶಬ್ದಗಳ ರೂಪದ ಕುರಿತು ಅವರಿಗಿದ್ದ ಎಚ್ಚರ ಕಾಳಜಿ ಆ ಪ್ರಸ್ತುತಿಗಳಲ್ಲೂ ಕಾಣಿಸುತ್ತಿತ್ತು.

 ಒಮ್ಮೆ ಮೇರು ಕಲಾವಿದ, ಕುಣಿತದ ಗುರು ವೀರಭಧ್ರನಾಯ್ಕರಿಗೂ ಅವರನ್ನು ಕುಣಿಸುವ ದಾಸಭಾಗವತರಿಗೂ ಸ್ಪರ್ಧೆ ಬಿದ್ದಿದ್ದಂತೆ. ಅಂದಿನ ಯಕ್ಷಗಾನದಲ್ಲಿ ದಾಸ ಭಾಗವತರು ಮತ್ತು ಮದ್ದಲೆಗಾರ ತಿಮ್ಮಪ್ಪ ನಾಯ್ಕರು ಸೇರಿ ವೀರಭಧ್ರನಾಯ್ಕರ ಕುಣಿತದ ತಾಳ
ತಪ್ಪಿಸುತ್ತೆವೆಂದು ಪಂಥ ಹಾಕಿಕೊಂಡಿದ್ದರಂತೆ. ಭಾಗವತ ಮತ್ತು ಮದ್ದಲೆಗಾರರ ಸಾಮರ್ಥ್ಯ ಮತ್ತು  ನಾಜೂಕಿನ ಹೊಂದಾಣಿಕೆಯಲ್ಲಿ ಅಂದು ವೀರಭಧ್ರನಾಯ್ಕರು ತಾಳ ತಪ್ಪಿದರಂತೆ. ಅನಿರೀಕ್ಷಿತ ಮುಖಭಂಗದಿಂದ ಬೇಸರಗೊಂಡ ವೀರಭಧ್ರ ನಾಯ್ಕರು ದಾಸಭಾಗವತರಲ್ಲಿ ಮಾತು ಬಿಟ್ಟರಂತೆ. ಕೆಲವು ಸಮಯದ ನಂತರ ಮಾರಣಕಟ್ಟೆ ದೇವಸ್ಥಾನದ ಮೊಕ್ತೇಸರರ ಸಮಕ್ಷಮದಲ್ಲಿ ಮೇರು ಕಲಾವಿದರ ನಡುವೆ ರಾಜಿ ಆಯಿತಂತೆ. ಇನ್ನು ನಮ್ಮ ಕಾಲದ ಶ್ರೇಷ್ಠ ಭಾಗವತರಲ್ಲೊಬ್ಬರಾಗಿದ್ದ ಕಡತೋಕ ಮಂಜುನಾಥ ಭಾಗವತರಿಗೆ ದಾಸಭಾಗವತರು
ಪ್ರೇರಣೆ ಆಗಿದ್ದವರು. ಇಡುಗುಂಜಿ ಮೇಳದಲ್ಲಿ ಕೆರೆಮನೆಯ ನಾಲ್ಕು ತಲೆಮಾರುಗಳನ್ನು ಕುಣಿಸಿದ, ಇನ್ನೋರ್ವ ಅತ್ಯುತ್ತಮ  ಭಾಗವತ  ನೆಬ್ಬೂರು ನಾರಾಯಣ ಭಾಗವತರನ್ನು ಸಂದಶನವೊಂದರಲ್ಲಿ ನಿಮ್ಮ ನೆಚ್ಚಿನ ಭಾಗವತರು ಯಾರು ಎಂದು ಕೇಳಿದಾಗ, ಅವರು ಮೊದಲು
ಹೇಳಿದ್ದ  ಹೆಸರು ದಾಸಭಾಗವತರದು .ದಾಸ ಭಾಗವತರ ಭಾಗವತಿಕೆಯ ತಾಳಮದ್ದಲೆಯೊಂದರಲ್ಲಿ ಪ್ರಸಿದ್ಧ ಅರ್ಥದಾರಿಯಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರು ತಮ್ಮ ಒಂದು ಪದ್ಯಕ್ಕೆ ಸರಿಯಾದ ಅರ್ಥ ಹೇಳಲಿಲ್ಲ ಎನ್ನುವ ಕಾರಣಕ್ಕೆ, ಮುಂದಿನ ಪದವನ್ನು ಹಾಡದೇ, ಶೇಣಿಯವರಿಗೆ “ಈಗ ನನ್ನ ಪದಕ್ಕೊಂದು ಅರ್ಥ ಹೇಳಿ” ಎಂದು ಸೂಚಿಸಿದ ಘಟನೆಯನ್ನು ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರು ಒಮ್ಮೆ ನೆನಪು ಮಾಡಿಕೊಂಡಿದ್ದರು. ಅಪ್ರತಿಮ ಪ್ರತಿಭೆ, ಕಲಾ ಸಂಪನ್ನತೆ, ಸಿದ್ಧಿಯ ಔನ್ನತ್ಯ ಎಲ್ಲವೂ ಮೇಳೈಸಿದ ಪ್ರಸಂಗವನ್ನು ಬಿಗಿ ಕಳೆದುಕೊಳ್ಳದಂತೆ ಪ್ರಸ್ತುತ ಪಡಿಸುವ, ರಂಗದಲ್ಲಿ ಭಾಗವತನಾಗಿರುವ ತಾನೇ ನಿರ್ದೇಶಕ ಎಂದು ಆತ್ಮವಿಶ್ವಾಸದಲ್ಲಿ  ಸಾರಿಹೇಳುವ ಹಲವು ಘಟನೆಗಳು ಹುಡುಕುತ್ತ ಹೋದರೆ ಕಣ್ಣು ಮುಂದೆ ಬರುತ್ತವೆ. ದಾಸ ಭಾಗವತರ ನೇರ ಅನುಭವ ಭಾಗ್ಯ ಈ ಕಾಲದ ಯಕ್ಷಗಾನ ಆಸಕ್ತರಿಗೆ  ಇಲ್ಲದಿದ್ದರೂ, ಅವರನ್ನು ಗೌರವಿಸುತ್ತಿದ್ದ ಅವರ ಸಿದ್ಧಿ ಪ್ರಸಿದ್ಧಿಗಳನ್ನು ಹತ್ತಿರದಿಂದ ಕಂಡು ಆಕರ್ಷಿತರಾಗಿದ್ದ ಪ್ರಭಾವಿಸಲ್ಪಟ್ಟಿದ್ದ ಕೆಲವು ಹಿರಿಯ ಕಲಾವಿದರು, ಪ್ರೇಕ್ಷಕರ ಮೂಲಕವಷ್ಟೇ ದಾಸ ಭಾಗವತರು  ಸದ್ಯಕ್ಕೆ ಸಿಗುತ್ತಾರೆ. ಇಲ್ಲದಿದ್ದರೆ, ವೃದ್ಧಾಪ್ಯದ ಸಮಯದಲ್ಲಿ ದಾಖಲೀಕರಣಗೊಂಡ ಕೆಲವು ಹಾಡುಗಳ ಮೂಲಕ, ವೈಭವದಲ್ಲಿ ಹಿಂದೆಂದೋ ನಳನಳಿಸುತ್ತಿದ್ದ ಅರಮನೆಯೊಂದು ಅಕಸ್ಮಾತ್ ಕುಸಿದುಬಿದ್ದು ಅವಶೇಷವಾಗಿರುವುದನ್ನು ನೆನಪಿಸುತ್ತಾರೆ.

ತನ್ನ ಪ್ರತಿಭೆ, ವರ್ಚಸ್ಸುಗಳಿಂದ ಚಿರಸ್ಮರಣೀಯ ಪ್ರದರ್ಶನಗಳನ್ನು ನೀಡುತ್ತಾ ಜನರಿಗೆ ಕಥೆ ಪಾತ್ರಗಳನ್ನು ಸಾಕ್ಷಾತ್ಕರಿಸುತ್ತಿದ್ದ ದಾಸ ಭಾಗವತರು ರಂಗದ ಮೇಲೆ ಸಾಮ್ರಾಟರಾಗಿದ್ದವರು. ದಂತಕತೆಯಾಗಿ ಯಕ್ಷಗಾನದ ಸೀಮೆಯಲ್ಲಿ ಹಬ್ಬಿಹರಡಿದವರು. ಇಂದಿಗೆ
60-70ವರ್ಷಗಳ ಹಿಂದೆ ಅಪಾರ ಜನಾಕರ್ಷಣೆ, ಮೇರು ತಾರಾಮೌಲ್ಯವನ್ನು ಪಡೆದಿದ್ದವರು. ಆದರೆ ರಂಗಸ್ಥಳದಿಂದ ಕೆಳಗೆ,ಚೌಕಿಯ ಹೊರಗೆ  ಬದುಕಿನ ಬಹುತೇಕ ಕಾಲವನ್ನು ಹುಲ್ಲಿನ ಸೋರುವ ಮಾಡು ಮುರುಕು ಮನೆಯಲ್ಲಿ ತೀವ್ರ ಬಡತನದಲ್ಲಿ ಕಳೆದವರು. ಬದುಕಿನ ಕೊನೆಯ
ಕಾಲದಲ್ಲಿ ಗ್ರಾಮಸ್ಥರು ಹಣ ಸಂಗ್ರಹಿಸಿ ಮತ್ತೆ ಸರಕಾರದಿಂದ ಸಹಾಯ ಪಡೆದು ಅವರಿಗೊಂದು ಮನೆ ಕಟ್ಟಿಸಿಕೊಟ್ಟರು. ರಂಗದ ಮೇಲೆ ಚಕ್ರವರ್ತಿಗಳಂತೆ ಮೆರೆಯುವ ಅಪ್ರತಿಮ ಪ್ರತಿಭಾನ್ವಿತರ ಬಣ್ಣದ ಹೊರಗಿನ ಬದುಕಿನಲ್ಲಿ ದಾರಿದ್ಯ್ರ ದುರಂತಗಳೇ ತುಂಬಿರುವ
ಉದಾಹರಣೆಗಳಲ್ಲಿ ದಾಸಭಾಗವತರೂ ಒಬ್ಬರು. ಏರು ತಗ್ಗಿನ ಬದುಕಿನ ನಡುವೆಯೇ ಕಲೆಯ ಒಟ್ಟಿಗೆ ಸಂಬಂಧವನ್ನು ಬದುಕಿದಷ್ಟು ಕಾಲ ಮುಂದುವರಿಸಿದರು. ಹೊಳೆಯುವ ಬೆಳಕಿನ ರಂಗಸ್ಥಳದ ವೈಭವದದಲ್ಲಿ, ಗುಂಗು ಹತ್ತಿಸಿಕೊಂಡು ಅವರನ್ನೇ ಹುಡುಕಿಕೊಂಡು ಬರುತ್ತಿದ್ದ
ಪ್ರೇಕ್ಷಕರ ಕರತಾಡನದ ನಡುವೆ, ಅಲ್ಲದಿದ್ದರೆ ನವರಾತ್ರಿಯ ಹೂವಿನಕೋಲು ತಿರುಗಾಟದಲ್ಲಿ. ದಾಸ ಭಾಗವತರಿಗೆ ಕಂಠಪಾಠವಾಗಿದ್ದ, ಅವರು ಇಷ್ಟಪಟ್ಟು ಆಡಿಸುತ್ತಿದ್ದ, ಪ್ರೇಕ್ಷಕರು ಅವರ ಭಾಗವತಿಕೆಗೋಸ್ಕರ ಮುಗಿಬಿದ್ದು  ನೋಡಬಯಸುತ್ತಿದ್ದ  ಅನೇಕ ಪ್ರಸಂಗಗಳು ಈಗಲೂ
ಬೇರೆಬೇರೆ ರಂಗಸ್ಥಳಗಳಲ್ಲಿ ಆಡಲ್ಪಡುತ್ತವೆ. ಚಂದ್ರಾವಳಿ ವಿಲಾಸ, ಪಾರಿಜಾತ ಪ್ರಸಂಗದ ಹಾಡುಗಳೂ ಕೇಳಿಸುತ್ತವೆ. ಮತ್ತೆ ನವರಾತ್ರಿಯೂ  ಈ ವರ್ಷ ಇನ್ನೇನು ಬರುವ ತಯಾರಿಯಲ್ಲಿದೆ; ಆದರೆ ದಾಸಭಾಗವತರು ಮರಳಿ ಬರಲಾರು, ಮುನಿಸಿಕೊಂಡು ಎಂದೋ ಬಿಟ್ಟು ಹೋದ ಅವರ ಸ್ವರದಂತೆ.

ದಾಸ ಭಾಗವತರ ಕೊನೆಯ ಕಾಲದ ಒಂದು ವಿಡಿಯೋ:

ಹೂವಿನ ಕೋಲು ಪ್ರಕಾರ:

ಬಾಬ್ ಎಂಬ  ಡೊಂಕು ಬಾಲದ ನಾಯಕರ ಕಥಾನಕ.

-ಅಮಿತ ರವಿಕಿರಣ್  

 

ಶಾಲೆಯಿಂದ ಮಗಳನ್ನು ಕರೆದುಕೊಂಡು ವಾಪಸ್ ಮನೆಗೆ ಬರುವಾಗ ದೂರದಿಂದಲೇ ಪ್ಯಾಟ್ರಿಕ್ ಮತ್ತು ಬಾಬ್ (BOB) ಕಾಣಿಸಿದರು. ಪ್ರತಿಸಲದಂತೆ ಮಗಳು ನನ್ನ ಕೈ ಬಿಡಿಸಿಕೊಂಡು ಅವರತ್ತ ಓಡಿ ಹೋದಳು. ಪ್ಯಾಟ್ರಿಕ್ ನನ್ನೆಡೆಗೆ ನೋಡುತ್ತಾ ನಿಮ್ಮನ್ನೇ ಕಾಯುತ್ತಿದ್ದೆ, ನೋಡಿ ನಿನ್ನೆ ರಾತ್ರಿಯಿಂದ ಇವ ಊಟವೇ ಮಾಡಿಲ್ಲ ಅನ್ನುತ್ತಾ ಕಿಸೆಯಿಂದ ತಿಂಡಿ ಪೊಟ್ಟಣ ತೆಗೆದು ನನ್ನ ಮಗಳ ಹತ್ತಿರ ಕೊಟ್ಟು "ನೀ ತಿನ್ನಿಸಿ ನೋಡ್ತೀಯ, ಆಡುವ ಗುಂಗಿನಲ್ಲಿ ಸ್ವಲ್ಪ ತಿಂದರೂ ತಿನ್ನಬಹುದು" ಅಂದ. ನನ್ನ ಮಗಳು ನಿಯತಿ ಮತ್ತು ಬಾಬ್ ಒಂದು ಒಣ ಕಟ್ಟಿಗೆಯ ತುಂಡನ್ನು ಹಿಡಿದು ಆಟ ಆಡುತ್ತ ಮಧ್ಯ ಮಧ್ಯ ನಿಯತಿ ಅವನಿಗೆ ತಿಂಡಿ ತಿನ್ನಿಸುತ್ತ ಹದಿನೈದು ನಿಮಿಷದಲ್ಲಿ ಬಾಬ್ ಪೂರ್ತಿ ಪೊಟ್ಟಣ ತಿಂದು ಮುಗಿಸಿದ್ದನ್ನ ನೋಡಿ ಪ್ಯಾಟ್ರಿಕ್ ಮುಖದಲ್ಲಿ ಸಮಾಧಾನದ ನಗು ಹರಡಿತ್ತು. 

ಬಾಬ್ ಮತ್ತು ಪ್ಯಾಟ್ರಿಕ್ ಪರಿಚಯವಾದದ್ದು ೨ ವರುಷಗಳ ಹಿಂದೆ. ಆಗ ನನ್ನ ಮಗಳು ನರ್ಸರಿಯಲ್ಲಿದ್ದಳು, ''ಅಮ್ಮ ನನಗೊಂದು pet ಬೇಕು" ಎಂದು ಗಂಟು ಬಿದ್ದಿದ್ದಳು. ಓಹ್ ಪೆಟ್ಟು ಬೇಕಾ, ಬಾ ನಾನಾ ಹತ್ತಿರ ಡಿಸೈನ್ ಡಿಸೈನ್ ಪೆಟ್ಟುಗಳ ಸಂಗ್ರಹ ಇದೆ, ನನ್ನ ಅಮ್ಮ ನನಗೆ ಕೊಟ್ಟಿದ್ದು, ನಾನು ಈ ವರೆಗೆ ಯಾರಿಗೂ ಕೊಡದೆ ನನ್ನಲ್ಲೇ ಎಲ್ಲಾ ಉಳಿದು ಹೋಗಿವೆ. ಬಾ ಪೆಟ್ಟು ಕೊಡುವೆ ಎಂದು ತಮಾಷೆ ಮಾಡಿ ಆ ಗಳಿಗೆ ನೂಕಿ ಬಿಡುತ್ತಿದ್ದೆ. ಊರಿನಲ್ಲಿ ಆಗಿದ್ದರೆ ಬೆಕ್ಕೋ, ಕೋಳಿಮರಿ, ನಾಯಿಮರಿ ತಂದು ಸಾಕಬಹುದಿತ್ತು. ಆದರೆ ಇಲ್ಲಿ? ನಾಯಿ ಸಾಕುತ್ತಿರುವವರ ಅನುಭವಗಳನ್ನ ಕೇಳಿಯೇ, ಅಯ್ಯೋ! ಇಷ್ಟೊಂದು ಕಷ್ಟವೇ? ಎಂದು ಎನ್ನಿಸಿ ಯಾವತ್ತೂ ಗೋಲ್ಡ್ ಫಿಶ್ ಗಿಂತ ಮೇಲಿನದನ್ನು ಯೋಚಿಸಲಾಗಿರಲಿಲ್ಲ. ಆದರೆ ಆಗಾಗ ಈ ವಿಷಯವಾಗಿ ನನಗೆ ಬೇಸರವೂ ಆಗ್ತಿತ್ತು. ಮಲೆನಾಡ ಸೆರಿಗಿನಲ್ಲಿರುವ ನನ್ನ ತವರಿನಲ್ಲಿ ಸಾಕು ಪ್ರಾಣಿಗಳು ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದ್ದವು, ನಾವು ಸಾಕಿದ ಪ್ರತೀ ನಾಯಿ, ಬೆಕ್ಕುಗಳ ಸುತ್ತ, ಆಕಳು, ಕರುಗಳ ಜೊತೆ ನಮ್ಮ ನೂರಾರು ನೆನಪುಗಳಿವೆ. ಅಂಥ ಅನುಭವಗಳನ್ನ ನನ್ನ ಮಕ್ಕಳಿಗೆ ಅವರು ಬಯಸಿದ್ದಾಗ್ಯೂ ಕೊಡಲಾಗುತ್ತಿಲ್ಲವಲ್ಲ ಎಂಬ ಸಣ್ಣ ನಿರಾಸೆ ನನಗೆ ಇದ್ದೇ ಇತ್ತು. 

ಆ ದಿನ ಎಂದಿನಂತೆ ನರ್ಸರಿಯಿಂದ ವಾಪಸ್ ಬರುವ ಹೊತ್ತು. ಮೇಪಲ್ ಮರಗಳ ಕೆಳಗೆ ಕುಳಿತು ಅರಳುಗಣ್ಣುಗಳಿಂದ ಆಚೀಚೆ ಬರುವವರನ್ನು ನೋಡುತ್ತಾ ಅವರು ರಸ್ತೆಯ ತುದಿಯಲ್ಲಿ ತಿರುಗಿ ಮರೆಯಾಗುವ ತನಕ ಅವರತ್ತ ಕಣ್ಣು ನೆಟ್ಟು ಮತ್ತೆ ಇನ್ನ್ಯಾರೋ ಬಂದರೆನಿಸಿದರೆ ಪಟ್ಟನೆ ಕತ್ತು ಹೊರಳಿಸಿ ನೋಡುತ್ತಿದ್ದ ಕಪ್ಪು ಬಿಳುಪಿನ ಬಾಬ್ ಯಾಕೋ ನಮ್ಮ ಮನೆಯಲ್ಲಿದ್ದ 'ಬುಧ' ಎಂಬ ನಾಯಿಯನ್ನು ನೆನಪಿಸಿ ಬಿಟ್ಟಿದ್ದ.

 ಮೊದಲ ಭೇಟಿಯಲ್ಲೇ ಬಾಬ್ ನನ್ನ ಮಗಳಿಗೂ ತನ್ನ ಗುಂಗು ಹಿಡಿಸಿದ್ದ. ಮಾತೆತ್ತಿದರೆ ಬಾಬ್ ಅನ್ನುವಷ್ಟು ಸಲಿಗೆ. ಆಗ ಬಾಬ್ ನ ಬಲಗಾಲು ಮುರಿದಿತ್ತು. “ಗುಡ್ಡದಲ್ಲಿ ನಡೆದಾಡಲು ಕರೆದುಕೊಂಡು ಹೋಗಿದ್ದೆ, ಇವ ತನಗೆ ರೆಕ್ಕೆಯೂ ಇದೆ ಅಂದುಕೊಂಡು ಹಾರಾಡಲು ಹೋಗಿ ಬಿದ್ದು ಕಾಲು ಮುರಿದುಕೊಂಡ. ಈಗ ಪ್ಲಾಸ್ಟರ್ ಬಿಚ್ಚಿದ್ದಾರೆ ಆದರೆ ಇನ್ನು ಓಡಾಡಲು ಆಗುತ್ತಿಲ್ಲ. ಅದಕ್ಕೆ ತನ್ನ ಬಳಿ ಯಾರಾದರೂ ಆಡಲಿ, ಮಾತಾಡಲಿ ಅನ್ನುವ ಅತಿಯಾಸೆ ಇವನಿಗೆ, ಶಾಲೆ ಮಕ್ಕಳು ಬರುವ ಹೊತ್ತು ಹೇಗೆ ಗೊತ್ತಾಗುತ್ತದೋ ಗೊತ್ತಿಲ್ಲ, ಒದರಲು ಶುರು ಮಾಡುತ್ತಾನೆ, ಇನ್ನೆರಡು ಘಂಟೆ ಹೊರಗೆ ಇರಬೇಕು ನಾನು,” ಎಂದು ಪಾಟ್ರಿಕ್ ಒಂದೇ ಸಮನೆ ಮಾತಾಡಿದ. ನಾವು ಆ ನೆರಳಲ್ಲೇ ಬಾಬ್ ಪಕ್ಕದಲ್ಲೇ ಕುಳಿತು ಅವನ ಕತ್ತು ಸವರಿ ಮುದ್ದು ಮಾಡಿ ಬಂದಿದ್ದೆವು. ಹೀಗೆ ಆಗಿತ್ತು ನಮ್ಮ ಮೊದಲ ಭೇಟಿ.

ಆ ದಿನದಿಂದ, ಶಾಲೆಯಿಂದ ಬರುವಾಗ ಬಾಬ್ ನೊಂದಿಗೆ ೧೦ ನಿಮಿಷವಾದರೂ ಆಟ ಆಡಿ ಬರುವ ರೂಡಿ ಆಯಿತು. ಬಾಬ್ ಒಬ್ಬ ತುಂಟ ಪೋರನಂತೆ. ಆಟ ಆಡುತ್ತಲೇ ಇರಬೇಕು. ಕಣ್ಣುಗಳು ಸದಾ ನೂರು ವಾಲ್ಟಿನ ಬಲ್ಬಿನಂತೆ ಕುತೂಹಲದಿಂದ ಮಿನುಗುತ್ತಲೇ ಇರುತ್ತವೆ. ಅವನ ಹತ್ತಿರ ಒಂದು ರಬ್ಬರ್ ಚಂಡು, ದಪ್ಪ ಹಗ್ಗದ ತುಂಡು ಇದೆ ಅದವನ ಆಟಿಕೆಗಳು, ಆದರೆ ಅವನಿಗೆ ಈ ಮಕ್ಕಳು ಎಸೆಯುವ ಕಟ್ಟಿಗೆ ತುಂಡು, ಪೇಪರ್ ಚೂರುಗಳೆಂದರೆ ವೀಪರೀತ ಪ್ರೀತಿ. ಹಾಗೆ ದೂರ ಎಸೆದ ಕಟ್ಟಿಗೆಯನ್ನು ಆರಿಸಿ ತಂದು ಹಲ್ಲಿನಿಂದ ಕಚ್ಚಿ ಚೂರು ಚೂರು ಮಾಡಿ ಎಸೆದು ವಿಜಯದ ನಗೆ ಬೀರಿ ಮತ್ತೆ ಮಾಡು ಅಂತ ಪುಟ್ಟ ಮಕ್ಕಳಂತೆ ಗೋಗರೆಯುತ್ತ ನಿಲ್ಲುವ ಹೊತ್ತಿಗೆ ಇತ್ತ ಪ್ಯಾಟ್ರಿಕ್ ಹೆಮ್ಮೆಯಿಂದ ಬಾಬ್ ಬಗ್ಗೆ ಹೇಳಿಕೊಳ್ಳಲು ಶುರು ಮಾಡುತ್ತಾನೆ. ಈ ಜಾಣ ಮಕ್ಕಳ ಅಪ್ಪ ಅಮ್ಮಂದಿರು ಸ್ನೇಹಿತರು ಸಂಭಂದಿಕರೆದುರು ತಮ್ಮ ಮಕ್ಕಳನ್ನು ಹೊಗಳುತ್ತಾರಲ್ಲ ಹಾಗೆ. ಮಧ್ಯ ಮಧ್ಯ ತನ್ನ ಒಂಟಿತನ, ತನ್ನ ಆರೋಗ್ಯದ ಬಗ್ಗೆ ಹೇಳುತ್ತಾನೆ. ಕೆಲವೊಮ್ಮೆ ವಿಷಾದ ಆವರಿಸಿಕೊಳ್ಳುವುದು ನನ್ನ ಅರಿವಿಗೆ ಬರುತ್ತದೆ ಕೂಡ. ಮರು ನಿಮಿಷದಲ್ಲೇ ಬಾಬ್ ನ ಸುದ್ದಿ ಅವನ ಹೊಗಳಿಕೆ ಶುರುವಾಗುತ್ತದೆ. 

“ನನಗೆ ಹೋದವಾರ ಜ್ವರವಿತ್ತು, ಬಾಬ್ ನನ್ನ ಪಕ್ಕವೇ ಮಲಗಿದ್ದ, ನಾ ಕೆಮ್ಮಿದರೂ ಏಳುತ್ತಿದ್ದ ನನಗೆನನ್ನ ಮಕ್ಕಳು ಹತ್ತಿರವಿಲ್ಲದಿದ್ದರೆ ಏನಾಯಿತು ಇವನಿದ್ದಾನಲ್ಲ ನನ್ನ ಕಾಳಜಿ ಮಾಡಲು.” ಹಾಗೆಲ್ಲ ಹೇಳುವಾಗ ನನಗೆ ಪಿಚ್ಚೆನಿಸುತ್ತದೆ. ಮತ್ತೆ ಅವನು ಹೇಳುವುದು ಸುಳ್ಳಲ್ಲ ಎಂಬುದೂ ನನಗೇನು? ಆ ಏರಿಯಾದಲ್ಲಿರುವ ಎಲ್ಲರಿಗು ಗೊತ್ತು.

ನನ್ನ ಮನೆ ಹತ್ತಿರ ಒಂದು old age home ಇದೆ ಅಲ್ಲಿರುವ ಸುಮಾರು ಅಜ್ಜಿಯರಿಗೆ ಬಾಬ್ ಎಂದರೆ ಪ್ರಾಣ, ಅವನಿಗೆ ಒಳ್ಳೊಳ್ಳೆ ಬಿಸ್ಕೆಟ್,  ಕೇಕ್ ತಂದು ಕೊಡುತ್ತಾರೆ ಅದನ್ನು ನಾನೂ ನೋಡಿದ್ದೇನೆ. ಪಾಟ್ರಿಕ್ ಹೇಳುವಂತೆ, ಅಲ್ಲಿ ಒಂದು ಅಜ್ಜಿ ಗಟ್ಟಿಮುಟ್ಟಾಗಿದ್ದಾಳೆ ಬಾಬ್ ಸೀದಾ ಅವಳ ಮೇಲೆ ಮುದ್ದಿನಿಂದ ಜಿಗಿದು ಆಕೆಯ ಹೊಟ್ಟೆ ಮೇಲೆ ಕಾಲಿಟ್ಟು ನಿಂತು ಅವಳ ಹತ್ತಿರ ತಲೆ ನೇವರಿಸಿಕೊಳ್ಳುತ್ತಾನೆ, ವೀಲ್ಚೇರ್ ಮೇಲೆ ಇರುವ ಅಜ್ಜಿಯಾ ಹತ್ತಿರ ಸುಮ್ಮನೆ ನಡೆದು ಹೆಚ್ಚಿನ ಆರ್ಭಟ ವಿಲ್ಲದೆ ವಿಧೇಯ ಮಗುವಿನಂತೆ ಅಕ್ಕ ಪಕ್ಕ ಸುತ್ತುತ್ತಾನೆ. ಇನ್ನೊಬ್ಬರು ಅಜ್ಜಿ ಹಾಸಿಗೆ ಹಿಡಿದಿದ್ದಾರೆ ಅವರ ಹತ್ತಿರ ಹೋಗುವಾಗ ಸೀದಾ ಮಂಚದ ಮೇಲೆ ಕಾಲಿಟ್ಟು ನಿಂತು ಮುದ್ದು ಮಾಡಿಸಿಕೊಂಡು ಬರುತ್ತಾನೆ. ಅದಕ್ಕೆ ಅವರು ಅವನಿಗೆ ತಿಂಡಿ ತರುವುದು. ಇವನಿಗೂ ಇದು ಅಭ್ಯಾಸ ಆಗಿ ಹೋಗಿದೆ. ಯಾರು ಹೇಳಿದ್ದು ಪ್ರಾಣಿಗಳಿಗೆ ಸಭ್ಯತೆ ಇಲ್ಲ ಅಂತ! ನೋಡು ನನ್ನ ಹುಡುಗ ಎಷ್ಟು ಜಾಣ. ಎಂದು ಹೆಮ್ಮೆಯಿಂದ ಬಾಬ್ ಕಡೆಗೆ ನೋಡುತ್ತಾನೆ ಬಾಬ್ ಎಲ್ಲ ಅರ್ಥವಾದವರಂತೆ ಬಾಲ ಅಲ್ಲಾಡಿಸಿ ಕಣ್ಣರಳಿಸುತ್ತಾನೆ. 

ಪ್ರತಿದಿನ ಭೇಟಿ ಬಾಬ್ ನನ್ನು ಭೇಟಿ ಮಾಡುವುದು ಅಭ್ಯಾಸ ಆಗಿಬಿಟ್ಟಿತ್ತು, ಆ ದಿನ ನಿತ್ಯದ ೧೦ ಆಟ ಮುಗಿಸಿ ಇನ್ನೇನು ಹೋರಡಬೇಕು ಅನ್ನುವಷ್ಟರಲ್ಲಿ ಬಾಬ್ ಒಂಥರಾ ವಿಚಿತ್ರ ಧ್ವನಿ ತೆಗೆದು ಕುಸು ಕುಸು ಮಾಡತೊಡಗಿದ, “Oh he is crying…ಒಹ್ god!” ಅವನಿಗೆ ನೀವು ಹೋಗ್ತೇನೆ ಅಂದಿದ್ದು ಇಷ್ಟ ಆಗ್ತಿಲ್ಲ ಅಂದು ನಗಲು ಶುರು ಮಾಡಿದ. ನನಗು ಬಾಬ್ನ ನ ಈ ವಿಚಿತ್ರ ನಡುವಳಿಕೆ ನೋಡಿ ನಗು ಬಂದಿತ್ತು. ಮತ್ತೆ ಆ ದಿನ ಶುರುವಾದ ಈ ಅಳುವ ಕ್ರಮ ಈಗಲೂ ಜಾರಿಯಲ್ಲಿದೆ. 

  ಬಾಬ್ ಸ್ವಲ್ಪ ಚಟುವಟಿಕೆ ಕಡಿಮೆ ಮಾಡಿದರೂ ಸಾಕು, ಪ್ಯಾಟ್ರಿಕ್ ಅವನನ್ನು ಕರೆದುಕೊಂಡು ಟ್ರಿಪ್ ಹೊರಡುತ್ತಾನೆ. ಸಮುದ್ರ ತೀರದಲ್ಲಿ ಕ್ಯಾರಾವ್ಯಾನ್ ನಲ್ಲಿ ತಿಂಗಳುಗಟ್ಟಲೆ ಉಳಿದು ಬರುತ್ತಾರೆ. ಬಂದ ನಂತರ ಬಾಬ್ ನ ವೀರಗಾಥೆಗಳನ್ನು ಕಣ್ಣೆದುರೇ ನಡೆದಂತೆ ಬಣ್ಣಿಸುತ್ತಾನೆ. ಈ ಒಂದು ವರುಷದ lockdown ಸಮಯದಲ್ಲಿ ಇಬ್ಬರು ಅದೆಷ್ಟು ಹಳಹಳಿಸಿದ್ದಾರೋ. ಪ್ಯಾಟ್ರಿಕ್ ನ ಕಡುಹಸಿರು ಬಣ್ಣದ ಕಾರಿನ ಮುಂದಿನ ಸೀಟಿನಲ್ಲಿ ಬಾಬ್ ಗತ್ತು ಗಾಂಭೀರ್ಯದಿಂದ ಕುಳಿತುಕೊಳ್ಳುವುದನ್ನು ನೋಡಿದ್ರೆ ಅವನ ಮೇಲೆ ಮುದ್ದು ಉಕ್ಕುತ್ತದೆ. 

ಮೊನ್ನೆ ಒಂದು ದಿನ ಹೀಗೆ ಮಾತಾಡುತ್ತ “ನನ್ನ ಮಗಳು ನಿಯತಿ ಕೂಡ ಒಂದು ನಾಯಿ ಮರಿ ಬೇಕು ಅಂತಾಳೆ, ಆದ್ರೆ ನಮಗೆ ಧೈರ್ಯ ಇಲ್ಲ, ಅದನ್ನು ನೋಡಿಕೊಳ್ಳಬಲ್ಲೆವೇ? ಅಂತ ಅನಿಸುತ್ತೆ,” ಎಂದೆ. ಅದಕ್ಕೆ ಪಾಟ್ರಿಕ್ ಗಂಭೀರವಾಗಿ “ನಾವು ಮಕ್ಕಳನ್ನು ಬೆಳೆಸುತ್ತೇವೆ, ಕೇಳಿದ್ದೆಲ್ಲ ಕೊಡಿಸುತ್ತೇವೆ , ನಮಗಾದ ನೋವು ಅವರಿಗಾಗಬಾರದು ಅಂತ ದಿನ ರಾತ್ರಿ ಕಷ್ಟಪಟ್ಟು ಕೆಲಸ ಮಾಡ್ತೇವೆ ಒತ್ತಡದಲ್ಲಿ ಬದುಕುತ್ತೇವೆ , ಆದರೆ ಮಕ್ಕಳು ಏನು ಮಾಡ್ತಾರೆ ಹೇಳು ? ಒಂದೇ ನಮ್ಮನ್ನು ಒಂಟಿ ಯಾಗಿ ಬಿಟ್ಟು ತಮ್ಮ ಕನಸುಗಳನ್ನ ಅರಸಿ ಹೊರಡುತ್ತಾರೆ, ಅಥವಾ ಚಟಗಳಿಗೆ ಬಿದ್ದು ದಾರಿ ಹೆಣವಾಗಿ ಹೋಗ್ತಾರೆ.” 

ಬಾಬ್ ನೋಡು ನಾನು ಬರುವುದನ್ನ ಎದುರು ನೋಡ್ತಾನೆ. ಸದಾ ಹಿಂದೆ ಮುಂದೆ ಓಡಾಡ್ತಾನೆ. ಆದರೆ ಎಲ್ಲಿದ್ದಾರೆ ನಾ ಬೆಳೆಸಿದ ನನ್ನ ಮಕ್ಕಳು? ಎಂದು ಬೇಸರಿಸಿದ . 'Dog shelter home' ಗೆ ಹೋಗಿ ಒಂದು ಸಣ್ಣ ಮರಿಯನ್ನು ತಂದುಕೊಡಿ, ಅವಳ ಬಾಲ್ಯ ಇನ್ನು ಸುಂದರವಾಗುತ್ತದೆ ಎಂದು ಹೇಳಿ ಅವನೇನೋ ಸುಮ್ಮನಾದ. 

ಆದರೆ ನನ್ನ ತಲೆಯಲ್ಲಿ ಮಹಾಪೂರ ಹರಿಬಿಟ್ಟ ನಾನು ಬಿಟ್ಟು ಬಂದಿರುವ ನನ್ನ ಅಪ್ಪ ಅಮ್ಮ, ನನ್ನ ಮನೆ, ಮಗಳಾಗಿ ನನಗಿರುವ ಕರ್ತವ್ಯ. ಏನೇನೋ ತಲೆಯಲ್ಲಿ ಸುಳಿದಾಡಿತು. ನಮ್ಮ ತಂದೆ ತಾಯಿ ನಮ್ಮ ಬಗ್ಗೆ ಹೀಗೆ ಅಂದುಕೊಂಡರೆ? ನಾ ಅವರನ್ನು ಪ್ರೀತಿಸುವುದು ಸುಳ್ಳಲ್ಲ ಆದ್ರೆ ಜೊತೆಗಿರಲು ಆಗುವುದಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳಲು ಸ್ವಲ್ಪ ಹೊತ್ತು ಹಿಡಿಯಿತು.  

ಬಾಬ್ ಗೆ ಈಗ ಒಬ್ಬ girlfriend ಆಗಿದ್ದಾಳೆ ಆಕೆಯ ಹೆಸರು violet ಎಂದು. Weekend ಗಳಲ್ಲಿ ಪ್ಯಾಟ್ರಿಕ್ ಅವನನ್ನು ಹೊರಗೆ ಕರೆದುಕೊಂಡು ಹೋಗಿ ವೈಲೆಟ್ ಜೊತೆ ಪಾರ್ಕಿನಲ್ಲಿ ಆಟ ಆಡಲು ಬಿಡುತ್ತಾನೆ. 

ಪ್ಯಾಟ್ರಿಕ್ ಗೆ ಬಾಬ್ ಸಿಕ್ಕ ಘಟನೆಯು ತುಂಬಾ ಮಜವಾಗಿದೆ. ಇಲ್ಲಿ ಕುರಿ ಕಾಯುವ shephard ಗಳು ನಾಯಿಯನ್ನು ಸಾಕುತ್ತಾರೆ. ಆ ನಾಯಿಗಳ ಕೆಲಸ ಕುರಿಗಳನ್ನ ನರಿಗಳಿಂದ ರಕ್ಷಿಸುವುದು ಅವುಗಳು ಹಳ್ಳ ಕೊಳ್ಳಗಳಿಗೆ ಬೀಳದಂತೆ ಎಚ್ಚರಿಸಿ ಅವುಗಳನ್ನ ಒಂದೇ ಕಡೆ ಇರುವಂತೆ ನೋಡಿಕೊಳ್ಳುವುದು. ಈ ನಾಯಿಗಳು ಮರಿ ಹಾಕಿದಾಗ ಒಂದಿಷ್ಟು ವಾರಗಳ ನಂತರ ಅವುಗಳ ಪರೀಕ್ಷೆ ನಡೆಸಲಾಗುತ್ತದಂತೆ, ಮತ್ತು ಆ ದಿನದ ಫಲಿತಾಂಶವೇ ಆ ನಾಯಿಮರಿಯ ಮುಂದಿನ ಭವಿಷ್ಯ ನಿರ್ಧರಿಸುತ್ತದೆ.

ಓಡುವ ಕುರಿ ಮಂದೆಯ ಹಿಂದೆ ಈ ಪುಟ್ಟ ನಾಯಿ ಮರಿಗಳನ್ನು ಓಡಿಸಲಾಗುತ್ತದೆ. ಕೆಲವು ನಾಯಿ ಮರಿಗಳು ಗುಂಪಿನಲ್ಲಿರುವ ದೊಡ್ಡ ನಾಯಿಗಳನ್ನು ಅನುಕರಿಸಿ ಕುರಿಮಂದೆಯ ಹಿಂದೆಯೇ ಜೋರಾಗಿ ಓಡಿ ಬೊಗಳುತ್ತಾ ಸಾಗುತ್ತವೆ ಆದರೆ ಕೆಲವೊಂದು ನಾಯಿಮರಿಗಳು ಮನೆ ಕಡೆಗೆ ಓಡಿ ಬರುತ್ತವಂತೆ. ಹಾಗೆ ಮನೆ ಕಡೆಗೆ ಓಡಿ ಬಂದ ನಾಯಿ ಮರಿಗಳನ್ನು ಶಫರ್ಡ್ ಗಳು ತಮ್ಮ ಜೊತೆಗೆ ಇಟ್ಟುಕೊಳ್ಳುವುದಿಲ್ಲ. ಅವುಗಳನ್ನ ಬೇಗ ಆದಷ್ಟು ಬೇಗ ಸಾಗಿ ಹಾಕಿಬಿಡುತ್ತಾರೆ. ಹಾಗೆ ಕುರಿಗಳ ಹಿಂದೆ ಹೋಗದೆ ಕೂಗುತ್ತಾ ಹೆದರಿ ಮನೆಗೆ ಬಂದು ಮುದುಡಿ ಮಲಗಿದ ಮುದ್ದು ನಾಯಿ ಮರಿ ನಮ್ಮ ಈ ಬಾಬ್ ಅಂದು ಕುರಿಗಳನ್ನು ನೋಡಿಕೊಳ್ಳಕಾಗ್ದಿದ್ರು ಇವತ್ತು ಕ್ಯಾನ್ಸರ್ ಸರ್ವೈವರ್ ಪ್ಯಾಟ್ರಿಕ್ ನ  ಸಂಪೂರ್ಣ ಜವಾಬ್ದಾರಿ ಹೊತ್ತು ಅವನೊಂದಿಗೆ ಸರಿಸಮವಾಗಿ ನಡೆಯುತ್ತಿದ್ದಾನೆ. ಅದಕ್ಕೆ 10 ಪಟ್ಟು ಹೆಚ್ಚು ಪ್ರೀತಿಯೂ ಗಳಿಸುತ್ತಿದ್ದಾನೆ.

ಬಾಬ್ ಈಗಲೂ ನಮಗಾಗಿ ಕಾಯುತ್ತಾನೆ , ನಾವು ಅವನಿಗೆ ಕೊಡುವ ಬರೀ ಕೆಲ ನಿಮಿಷದ ಬದಲು, ಬದುಕಿನ ಅತಿ ಸುಂದರ ಪಾಠ ಹೇಳಿಕೊಟ್ಟ ಜೀವಿ ಬಾಬ್. ಈಗ ಒಂದೈದಾರು ತಿಂಗಳ ಹಿಂದೆ ಮನೆ ಮುಂದೆ ಸಿಕ್ಕ ಬಾಬ್ ಕಣ್ಣುಗಳು ಗಾಜಿನ ಗೋಲಿಯಂತೆ ಹೊಳೆಯುತ್ತಿದ್ದ ಕಣ್ಣುಗಳು, ಖಾಲಿ  ಖಾಲಿ ಅನ್ನಿಸಿದವು. ಹುಷಾರಿಲ್ವಾ? ಬಾಬ್ ಸಪ್ಪಗಿದ್ದಾನೆ ಅಲ್ಲ? ಎಂದು ಕೇಳಿದ್ದೆ ತಡ 'ಬಾಬ್ ಗೆ ಕುರುಡು ಆವರಿಸುತ್ತಿದೆ. ಸ್ವಲ್ಪ ದಿನಗಳಲ್ಲಿ ಅವನಿಗೆ ಏನೇನೂ ಕಾಣುವುದಿಲ್ಲ’  ಎಂದು ಹೇಳಿದ ಮರುಗಳಿಗೆಯೇ, ನಾನಿದ್ದೇನಲ್ಲ ಅವನ ಕಣ್ಣಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ ಪ್ಯಾಟ್ರಿಕ್ ದನಿಯಲ್ಲಿ ಮಮಕಾರ ಉಕ್ಕುತ್ತಿತ್ತು. 

ಈಗ ಬಾಬ್ ಪೂರ್ತಿ ದೃಷ್ಟಿ ಕಳೆದುಕೊಂಡಿದ್ದಾನೆ. ಆದರೆ ಪ್ಯಾಟ್ರಿಕ್ ಮಾತ್ರ ಅವನನ್ನು ನಿತ್ಯದಂತೆ ವಾಕಿಂಗ್ ಕರೆದುಕೊಂಡು ಹೋಗುತ್ತಾನೆ. ಆದರೆ ಕಣ್ಣು ಕಾಣದ ಅವನಿಗೆ ಮೂಗು, ಕಿವಿಗಳೇ ದಾರಿದೀಪ. ಎಲ್ಲವನ್ನು ಮೂಸುತ್ತ ಮೂಸುತ್ತ, ಏನಾದರೂ ಸದ್ದು ಕೇಳಿದ ಕೂಡಲೇ ಅವ ಪ್ರತಿಕ್ರಿಯಿಸುತ್ತಾನೆ ಈ ಕಾರಣದಿಂದಲೇ ಅವರ    ವಾಕುಗಳು ಬೇಗನೆ ಮುಗಿಯುವುದೇ ಇಲ್ಲ.

ಎಷ್ಟೋ ಸಲ ಅವನನ್ನು ಮನೆಗೆ ಕರೆದುಕೊಂಡು ಹೋಗುವುದೇ ಪ್ಯಾಟ್ರಿಕ್ ಗೆ ದೊಡ್ಡ ಸವಾಲು.
ತುಂಬ ಕಷ್ಟವೆನಿಸಿದರೆ ಪ್ಯಾಟ್ರಿಕ್ ತನ್ನ ಕ್ಯಾರವಾನ್ ಗೆ ಮರಳಿ ಬಿಡುತ್ತಾನೆ. ವಾಹನಗಳು ಇರದ, ಜನ ಸಂಚಾರವೇ ಇಲ್ಲದ  ಹೊಲಗಳಲ್ಲಿ ಬಾಬ್ ಸ್ವಚ್ಛಂದವಾಗಿ ವಿಹರಿಸಲು ಕಣ್ಣುಗಳು ಬೇಕೆಂದೇನೂ ಇಲ್ಲವಂತೆ. ಇದೆಲ್ಲ ಕೇಳುವಾಗ ನನ್ನ ಕಣ್ಣು ಒದ್ದೆಯಾಗುತ್ತವೆ. ಬಾಬ್ ಮಾತ್ರ ಆ ಕುತೂಹಲದ ನಗು ಇನ್ನೂ ಉಳಿಸಿಕೊಂಡಿದ್ದಾನೆ. ಬಾಬ್ ನನ್ನ ಮತ್ತು ಮಗಳ best friend.

ಆ ನಾಯಿಗೆ ನನ್ನ ದೇಶ, ಭಾಷೆ, ಚರ್ಮದ ಬಣ್ಣ, ನಮ್ಮ ಧಿರಿಸು ಯಾವುದೂ ಮುಖ್ಯವಲ್ಲ. ನಾವು ಅದಕ್ಕೆ ಕೊಡುವ ಪ್ರೀತಿಯಷ್ಟೇ ಬೇಕು. ಅಷ್ಟೇ! ಇನ್ನ್ಯಾವ ನಿರೀಕ್ಷೆಯೂ ಇಲ್ಲ. ಒಮ್ಮೆಯೂ ಅವನಿಗೆ ನಾ ತಿಂಡಿಯನ್ನ ಹಾಕಿಲ್ಲ, ಆಟಿಕೆಯ ಉಡುಗೊರೆಯನ್ನೂ ಕೊಟ್ಟಿಲ್ಲ. ಆದರೂ ಅವ ನಮಗಾಗಿ ಕಾಯುತ್ತಾನೆ, ಆ ಹತ್ತು ನಿಮಿಷ ನಮ್ಮೊಂದಿಗೆ ಕಳೆಯಲು. ಅವನ ಇಚ್ಛೆಯಂತೆ ಪ್ಯಾಟ್ರಿಕ್ ಚಳಿ ಗಾಳಿ ಮಳೆ ಎನ್ನದೆ ಶಾಲೆ ಬಿಡುವ ಹೊತ್ತಿನಲ್ಲಿ ಹೊರಗೆ ಬಂದು ನಿಲ್ಲುತ್ತಾನೆ. ಬಾಬ್ ಪರಿಚಯವಾಗಿ ಈಗ 6 ವರ್ಷಗಳಾದವು.

ಬಾಬ್ ನ ಅಭಿಮಾನಿ ಬಳಗ ತುಂಬಾ ದೊಡ್ಡದು. ದೇಶ ಬಿಟ್ಟು ದೇಶ ಕ್ಕೆ ಬಂದಿರುವ ನನಗೆ ಬರೀ ಮನುಷ್ಯ ಬಾಂಧವ್ಯಗಳಷ್ಟೇ ಅಲ್ಲ. ಕಾಲ ಕಾಲಕ್ಕೆ ಅರಳುವ ಹೂ, ಚಿಗುರಿ ಬರಿದಾಗಿ ಮತ್ತೆ ಹಸಿರಾಗುವ ಮರಗಿಡಗಳು, ಹಕ್ಕಿ ಚಿಟ್ಟೆ ಮಾತು ಬಾರದ ಈ ಪ್ರಾಣಿಗಳೂ, ನನ್ನ ಮನಸ್ಸನ್ನು, ಬದುಕನ್ನೂ ಬೆಚ್ಚಗಿಟ್ಟಿವೆ.