ಶಾಲೆಗಳಲ್ಲಿ ನಮಗಿರುವ ಆಯ್ಕೆ – ವಿನತೆ ಶರ್ಮ ಬರೆದ ಲೇಖನ

 

ಮಕ್ಕಳ ಪರ/ಸ್ನೇಹಿ, ಪ್ರಗತಿಪರ, ಅನುಭವಕಲಿಕಾ ಪರ್ಯಾಯ ವಿಧಾನ ಶಿಕ್ಷಣ  ಒಂದು ನೋಟ

 

ನೀವೊಂದು ಮಧ್ಯಾನ್ಹದ ಕೊನೆ ಹೊತ್ತಿಗೆ ಈ ಶಾಲೆಯ ಆವರಣವನ್ನು ಹೊಕ್ಕಿದ್ದೀರಿ. ಗೇಟು ದಾಟುತ್ತಿದ್ದಂತೆ ನಿಮಗೆ ಕಾಣುವುದು ಪ್ರೈಮರಿ ಮಕ್ಕಳ ಚಿಕ್ಕ ಚಿಕ್ಕ ಗುಂಪುಗಳು. ಕೆಲವರು ಓಡಾಡಿ ಜೂಟಾಟ ಆಡುತ್ತಿದ್ದಾರೆ; ಕೆಲವರು ಆ ದೂರದಲ್ಲಿ ಸಾಂಘಿಕ, ಸಹಕಾರದ ಆಟಗಳನ್ನು ಆಡುತ್ತಿದ್ದಾರೆ. ಇನ್ನೂ ಕೆಲವು ಮಕ್ಕಳು ಅಲ್ಲಲ್ಲಿ ಚದುರಿದ್ದು ಬಣ್ಣ ಹಚ್ಚುವುದೋ, ಮರಳಿನ ಆಟವೋ, ಇಲ್ಲಾ ಅಲ್ಲೇ ಇರುವ ಮರದ ಮೇಲಿನ ಮನೆಯಲ್ಲಿ ಆಟವಾಡುತ್ತಿದ್ದಾರೆ. ಅಗೋ ಅಲ್ಲಿ ನೋಡಿ ಆ ಮರದ ಮೇಲೆ ಕೆಲವು ಮಕ್ಕಳು ಜೋತಾಡುತ್ತಿದ್ದಾರೆ. ಶಾಲೆಯ ಒಳಗಡೆ ದೃಷ್ಟಿ ಹರಿಸಿದರೆ ಅಲ್ಲಿ ಕೆಲ ಮಕ್ಕಳು ಆರಾಮಾಗಿ ನೆಲದ ಮೇಲೆ ಕೂತು, ಮರದ ಬ್ಲಾಕ್ ತುಂಡುಗಳನ್ನು ಜೋಡಿಸಿ ಏನನ್ನೋ ಕಟ್ಟುತ್ತಿದ್ದಾರೆ. ಹಾಗೆ ಅಲ್ಲಿ ಇಲ್ಲಿ ಕೆಲವು ತಂದೆ ತಾಯಿಯರು ಶಾಲೆಗೆ ಸಂಬಂಧ ಪಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಶಿಕ್ಷಕರು ತಮ್ಮ ತರಗತಿಯಲ್ಲಿನ ಕಲಿಕಾ ಸಾಮಗ್ರಿಗಳನ್ನು ಎತ್ತಿ ಜೋಡಿಸಿಡುತ್ತಿದ್ದಾರೆ. ನೀವು ಮಗು ಎಲ್ಲಿ ಎಂದು ಹುಡುಕಾಡುತ್ತಿರುವಾಗ ಓಡೋಡಿ ಬರುವ ಹುಡುಗಿಯೊಬ್ಬಳು “ನಿಮ್ಮ ಮಗ ಅಲ್ಲಿ ಆ ಮರದ ತುತ್ತತುದಿಯ ಕೊಂಬೆಯ ಮೇಲಿದ್ದಾನೆ” ಎಂದು ಎಂದೇ ಉಸಿರಿನಲ್ಲಿ ಪಟ್ಟನೆ ಹೇಳಿ ಮತ್ತೆ ಮರದ ಬಳಿಗೆ ಓಡುತ್ತಾಳೆ.  ನೀವು ನಸುನಗತ್ತಾ ಶಿಕ್ಷಕರ ಬಳಿ “ನಿಮ್ಮ ಈ ದಿನ ಹೇಗಿತ್ತು, ಏನೇನು ಚಟುವಟಿಕೆಗಳನ್ನು ನಡೆಸಿದಿರಿ?” ಎಂದು ಕೇಳಿ, ಆ ಶಿಕ್ಷಕರ ಬಳಿಯಿಂದ ಸಮಾಧಾನದ ಉತ್ತರವನ್ನು ಪಡೆಯುತ್ತೀರ. ನಂತರ ಮಗನನ್ನು ಕರೆಯಲು ಮರದ ಬಳಿ ಹೋದರೆ, ಮಗರಾಯ “ಉಹುಂ, ಇಷ್ಟು ಬೇಗ ಮನೆಗೆ ಹೋಗಲ್ಲ, ನಾನು ಇನ್ನೂ ಆಟವಾಡಬೇಕು” ಎನ್ನುತ್ತಾನೆ. ಮರುದಿನ ಶನಿವಾರವಾದರೂ ಸಹ ಮಕ್ಕಳು “ಇವತ್ತೂ ಕೂಡ ನಾವು ಶಾಲೆಗೆ ಹೋಗಬಹುದಾ?” ಎಂದು ಕೇಳುತ್ತಾರೆ.

ಇದೇನಪ್ಪಾ, ಅದು ಶಾಲೆಯಾ, ಇವರೆಂತಾ ಪೋಷಕರು, ಮಗು ಮರದ ಮೇಲಾ? ಈ ಶಾಲೆಯಲ್ಲಿ ಏನಾದರೂ ಪಾಠ ಹೇಳಿ ಕೊಡುತ್ತಾರೋ ಇಲ್ಲವೋ ಎಂದು ನೀವು ಕೇಳಿ ಹುಬ್ಬೇರಿಸಬಹುದು. ಹೌದು, ಅದು ನನ್ನ ಮಕ್ಕಳು ಹೋಗುತ್ತಿದ್ದ ಶಾಲೆಯ ಪ್ರತಿದಿನದ ದೃಶ್ಯ. ಅದೊಂದು ಡೆಮೊಕ್ರಾಟಿಕ್ ಎಜುಕೇಶನ್ (Democratic Education) ಅಥವಾ ಮಕ್ಕಳ-ಸ್ನೇಹಿ, ಪ್ರಜಾಸಮಾನತೆಯುಳ್ಳ ಶಿಕ್ಷಣ ವ್ಯವಸ್ಥೆಯ ಪರ್ಯಾಯ ಶಾಲೆ. ಹೆಚ್ಚು ಜನರಿಗೆ ಹೊತ್ತಿರುವ ಹಾಗೆ ಅದು ಆಲ್ಟರ್ನೇಟಿವ್ ಸ್ಕೂಲ್ (alternative school). ಅಥವಾ ಕೆಲವು ಶಾಲೆಗಳು ಅನುಭವ ಕಲಿಕೆ ಶಾಲೆಗಳು (Experiential) ಎಂದೂ ಕರೆಯಲ್ಪಡುತ್ತವೆ.

ಮುಖ್ಯವಾಹಿನಿ ಶಾಲೆಗಳಿಗಿಂತ ಭಿನ್ನವಾಗಿರುವ ಇಂತಹ ಮಕ್ಕಳ-ಸ್ನೇಹಿ (child-friendly), ಪ್ರಜಾತಂತ್ರ/ ಸಮಾನತೆಯ (democratic, equality, radical, progressive) ಮೌಲ್ಯವುಳ್ಳ ಪರ್ಯಾಯ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಬಹು ಮುಖ್ಯ ಅಂಶವೆಂದರೆ ಮಕ್ಕಳನ್ನೊಳಗೊಂಡ, ಮಕ್ಕಳ ಪರವಾಗಿ ಇರುವ, ಅನುಭವದಿಂದ ಶಿಕ್ಷಣವನ್ನು ಪಡೆಯುವ ಪರಿ.  ಯೂನಿಫಾರ್ಮ್ ಇಲ್ಲದ, ಮಕ್ಕಳು ತಮ್ಮ ದೈಹಿಕ/ಮಾನಸಿಕ ಶಕ್ತಿಗನುಸಾರವಾಗಿ, ತಮ್ಮದೇ ವೇಗದಲ್ಲಿ ಶಿಕ್ಷರರ ನೆರವಿಂದ ಇಚ್ಛಾಪೂರ್ವಕವಾಗಿ ವಿಷಯಗಳನ್ನು ಕಲಿಯುವ, ಅಗತ್ಯವಿದ್ದಲ್ಲಿ ಮಾತ್ರ ಪರೀಕ್ಷೆಗಳನ್ನು ಬರೆಯುವ ಶಾಲೆಗಳು ಇವು. ಮಕ್ಕಳು ಶಿಕ್ಷರನ್ನು ಅವರ ಮೊದಲ ಹೆಸರಿಟ್ಟು ಕರೆಯುತ್ತಾರೆ. ಪರಸ್ಪರ ಗೌರವ, ಸ್ನೇಹ, ಬಾಂಧವ್ಯ, ಕಾಳಜಿ, ಅನುಸರಣೆ ಇಲ್ಲಿ ಸಹಜ.

ಯಾವುದೇ ಪಂದ್ಯವಿಲ್ಲ, ಹೋರಾಟವಿಲ್ಲ –  ಬದಲಾಗಿ ಇಲ್ಲಿರುವುದು ಸಹಕಾರ. ನೀನು ಕಡಿಮೆ, ನಾನು ಹೆಚ್ಚು ಎಂಬ ಸ್ಪರ್ಧಾತ್ಮಕ ಮನೋಭಾವವನ್ನು ತಿರಸ್ಕರಿಸಿ ಎಲ್ಲರೂ ಸಮಾನ, ಎಲ್ಲರಿಗೂ ಅವರ ಇಷ್ಟದಂತೆ ಕಲಿಯುವ ಹಕ್ಕಿದೆ, ನಾವೆಲ್ಲರೂ ಒಟ್ಟಾಗಿ ಕಲಿಯೋಣ  ಎನ್ನುವುದು ಪ್ರಗತಿಪರ ಶಾಲೆಯ ತತ್ವ. ಹೊರಾಂಗಣದಲ್ಲಿ, ಅನೇಕ ಚಿಕ್ಕ-ಗುಂಪು ಸನ್ನಿವೇಶದಲ್ಲಿ, ಇಡೀ ಶಾಲೆಯಾಗಿ, ಕಲೆ/ಸಾಹಿತ್ಯ/ಕರಕುಶಲ ಕೈಗೆಲಸಗಳು/ ಮಗು ಆರಿಸಿಕೊಳ್ಳುವ ವಿಶೇಷ ವಿಷಯಗಳು … ಹೀಗೆ ಪ್ರತಿಯೊಂದು ಶಾಲೆಯಲ್ಲೂ ವಿಶಿಷ್ಟವಾದ ಅಂಶಗಳು, ಅಂಗಗಳಿರುತ್ತವೆ.

ಅನುಸಂಧಾನ, ಹಂಚಿಕೊಳ್ಳುವಿಕೆ, ಪರಸ್ಪರ ಬೆಂಬಲ ಹಾಗೂ ಪ್ರತಿಯೊಬ್ಬರನ್ನೂ ಅರ್ಥ ಮಾಡಿಕೊಳ್ಳುವ ಪರಿಸರ ಇದು. ಆದರೆ ಇಂತಹ ಶಾಲೆಗಳು ಸರಕಾರದಿಂದ ಹೆಚ್ಚು (ಅಥವಾ ಸೊನ್ನೆ ಸಹಾಯ) ಹಣಸಹಾಯವನ್ನು ಪಡೆಯದೇ ತಮ್ಮದೇ ಅನುಭವ-ಕಲಿಕಾ ಪೂರ್ವಕವಾದ ಪಾಟ ಪಟ್ಯಕ್ರಮವನ್ನು ಅಳವಡಿಸಿಕೊಂಡಿರುತ್ತವೆ. ಹಾಗಾಗಿ ಮಕ್ಕಳು ಕೊಡುವ ಶಾಲಾ ಫೀಸ್ ಜಾಸ್ತಿ. ಕೆಲ ಶಾಲೆಗಳು ಬಹಳಾ ದುಬಾರಿಯಾಗಿರಬಹುದು, ಮತ್ತೆ ಕೆಲವು ಸುಮಾರು ದುಬಾರಿಯಾಗಬಹುದು. ಅನೇಕ ಕುಟುಂಬಗಳಿಗೆ ಇಂತಹ ಶಾಲೆಗಳು ಕೈಗೆಟುಕಲಾರದ  ಹಣ್ಣು. ಇಂತಹ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಕಡಿಮೆ. ಶಿಕ್ಷರ ಸಂಖ್ಯೆ ಜಾಸ್ತಿ. ಕೆಲಬಾರಿ ಪೋಷಕರು ಕೂಡ ಮಕ್ಕಳ ಬಳಿ ತಮಗೆ ವಿಶೇಷವಾಗಿ ತಿಳಿದಿರುವ ವಿಷಯಗಳನ್ನು, ಕಲೆಗಳನ್ನು, ಸಾಮರ್ಥ್ಯಗಳನ್ನು ಹಂಚಿಕೊಳ್ಳುತ್ತಾರೆ. ಮಕ್ಕಳು/ ಪೋಷಕರು ಶಾಲಾ ಕಮಿಟಿಗಳಲ್ಲಿ, ಬೋರ್ಡ್ ಗಳಲ್ಲಿ ಸಕ್ರಿಯವಾಗಿ ಪಾತ್ರ ವಹಿಸಿ, ಶಾಲೆ ಸರಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ತೊಡಗಿರುತ್ತಾರೆ.  ಪ್ರತಿ ದಿನ ಶಾಲೆ ನಡೆಯುವತ್ತ ಬೇಕಿರುವ ಸಾಮಗ್ರಿಗಳನ್ನು, ಸಂಪನ್ಮೂಲಗಳನ್ನು, ಹಣ ಸಹಾಯ ಇತ್ಯಾದಿಗಳನ್ನು ಹುಡುಕಿ/ಪಡೆದು/ಹಂಚುವ/ಸಂಪಾದಿಸುವ ಕೆಲಸಗಳಲ್ಲಿ ಎಲ್ಲರೂ ಇರುತ್ತಾರೆ. ಎಲ್ಲರ ಒಗ್ಗಟ್ಟಿನ ಬಲದಿಂದ ಸಾಂಘಿಕವಾಗಿ  ಇಂತಹ ಶಾಲೆ ನಡೆಯುತ್ತದೆ.

ಮಕ್ಕಳ ಹಕ್ಕುಗಳಿಗೆ ಇಲ್ಲಿ ಪ್ರಾಧಾನ್ಯತೆ. ಮಕ್ಕಳಿಗೆ ಮತ್ತು ಶಿಕ್ಷರಿಗೆ ಸಮಾನ ಅಧಿಕಾರ. ಮಕ್ಕಳನ್ನು ದರ್ಪದಿಂದ, ಅಧಿಕಾರದ ದನಿಯಿಂದ ಮಾತನಾಡಿಸುವ ದೃಶ್ಯಗಳು ಕಾಣುವುದಿಲ್ಲ. ವರ್ತನ-ಸಂಬಂಧಪಟ್ಟ ವೈಪರೀತ್ಯಗಳಿರುವ ಮಕ್ಕಳು, ಕಲಿಕೆಗೆ ಸಂಬಂಧಿಸಿದ ವೈಪರೀತ್ಯಗಳಿರುವ ಮಕ್ಕಳು ಮತ್ತು ಅಂತಹ ಸಮಸ್ಯೆಗಳು/ವೈಪರೀತ್ಯಗಳು ಇಲ್ಲದ ಮಕ್ಕಳು ಎಲ್ಲರೂ ಒಟ್ಟಾಗಿ ಬೆರೆತು ಕಲಿಯುವ ವಾತಾವರಣ ಇಲ್ಲಿ ಕಾಣುವುದು ಸಾಮಾನ್ಯ. ಇಂತಹ ವಾತಾವರಣ ಪ್ರತಿಯೊಂದು  ಪ್ರಗತಿಪರ/ಪರ್ಯಾಯ ಶಾಲೆಯಲ್ಲಿ ಇರುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಹಾಗಾಗಿ ಎಷ್ಟೋ ವಿಷಯಗಳ ನಿರ್ಧಾರ ಆಯಾ ನಿರ್ದಿಷ್ಟ ಶಾಲೆಗೇ ಸೇರಿರುತ್ತದೆ. ಇಂತಹ ‘ಪ್ರತಿಯೊಂದು ಶಾಲೆಯೂ ಭಿನ್ನ’ ಎಂಬ ಸನ್ನಿವೇಶ ಮುಖ್ಯವಾಹಿನಿಗೆ ತದ್ವಿರುದ್ಧವಾದುದು.

ಅಂತಹ ಭಿನ್ನತೆಯೇ ಕೆಲ ಬಾರಿ ಶಾಲೆಗೆ ಶತ್ರುವಾಗಬಹುದು. ಶಾಲೆಯ ಕೆಲಮಂದಿ ಅಥವಾ ಶಾಲೆಯನ್ನು ಶುರುಮಾಡಿದ ಮಂದಿ ಸೇರಿಕೊಂಡು ಕಣ್ಣಿಗೆ ಕಾಣದ ರೀತಿ ಅಧಿಕಾರವನ್ನು ಚಲಾಯಿಸಬಹುದು, ಯಾವ ಮಗು/ಕುಟುಂಬ ಶಾಲೆಗೆ ಸೇರಬಹುದು ಎಂಬ ನಿರ್ಧಾರ ಕೂಡ ಆ ಕೆಲವರೇ ತೀರ್ಮಾನಿಸಬಹುದು. ಶಾಲೆಗೇ ಗೂಟ ಹೊಡೆದುಕೊಂಡು ವರ್ಷಗಳ ಕಾಲ ಕೂತ ಹಿರಿಯರು ಆ ಸ್ಥಾನದಿಂದ ಇಳಿಯದೆ ಕಿರಿಕಿರಿ ಮಾಡಿ, ಹೊಸ ನೀರು ಹರಿಯದಂತೆ ತಡೆಯಬಹುದು. ಅಥವಾ ಹೊಸದಾಗಿ ನೇಮಕಗೊಂಡ ಮುಖ್ಯಸ್ಥರು ಪ್ರಜಾತಂತ್ರ ವಿಧಾನಕ್ಕೆ, ಮಕ್ಕಳ/ಪೋಷಕರ ದನಿಗೆ ಬೆಲೆಕೊಡದೇ ಶಾಲೆಗೆ ಕೆಟ್ಟ ಹೆಸರನ್ನು ತರಬಹುದು. ಸರಕಾರದಿಂದ ಬರುವ ಅನೇಕಾನೇಕ ಕಿರಿಕಿರಿಯನ್ನು ತಾಳದೆ ಹೋಗಬಹುದು. ಇಂತಹ ಅನೇಕ ಸಂಧರ್ಭಗಳು ನಡೆದ ಉದಾಹರಣೆಗಳೂ ಇವೆ. ಶಾಲೆಗಳು ಮುಚ್ಚಿವೆ,  ಮರು ತೆರೆದಿವೆ; ಹೊಸ ರೂಪವನ್ನು ಪಡೆದಿವೆ, ಹೆಸರನ್ನು ಬದಲಾಯಿಸಿಕೊಂಡಿವೆ. ನೆಲ ಕಚ್ಚಿ ಹೋದರೂ ಪುನರ್ ಜನ್ಮ ಪಡೆದು ಹಕ್ಕಿಯಂತೆ ಹಾರಿವೆ. ಮಕ್ಕಳು/ಕುಟುಂಬಗಳು ತಂಡೋಪ ತಂಡವಾಗಿ ಬಿಟ್ಟುಹೋದ ಎಷ್ಟೋ ಸಂದರ್ಭಗಳು ಇವೆ. ಹಾಗಾಗಿ ಇಂತಹ ಶಾಲೆಗಳನ್ನು ನಡೆಸುವುದೇ ಬಹು ಕಷ್ಟ ಎನ್ನುವ ಮಾತೂ ಇದೆ.

ಇಂತಹ ಮಕ್ಕಳ-ಕೇಂದ್ರಿತ ಅನುಭವ-ಕಲಿಕಾ ಶಾಲೆಗಳನ್ನು ಹಲವೇ ಹಲವು ಪೋಷಕರು ಸೇರಿಕೊಂಡು ಕೆಲ ನಿರ್ದಿಷ್ಟ ಮೌಲ್ಯಗಳನ್ನು ಅನುಸರಿಸುತ್ತಾ ಅವನ್ನು ಹುಟ್ಟು ಹಾಕಿದ ಸಂದರ್ಭಗಳು ಇವೆ. ಉದಾಹರಣೆಗೆ ನಾನು ಮೇಲೆ ವಿವರಿಸಿದ ನಮ್ಮ ಮಕ್ಕಳು ಹೋಗುತ್ತಿದ್ದ ಆಸ್ಟ್ರೇಲಿಯಾದ  ಬ್ರಿಸ್ಬನ ನಗರದ ಪಯ್ನ್ ಕಮ್ಯೂನಿಟಿ ಶಾಲೆ. ಅಥವಾ ಒಬ್ಬ ವ್ಯಕ್ತಿ ತನ್ನ ಮೌಲ್ಯಗಳನ್ನು ನಂಬಿಕೆಗಳನ್ನು ಅನುಸರಿಸಿ ತಾನೇ ಶಾಲೆಯೊಂದನ್ನು ಆರಂಭಿಸಿದ ಉದಾಹರಣೆಯೂ ಇದೆ. ಉದಾಹರಣೆಗೆ ಇಂಗ್ಲೆಂಡಿನ ಸಮ್ಮರ್ ಹಿಲ್ ಶಾಲೆ (A.S.Neill’s Summerhill school)  ಮತ್ತು ಈಗಿರುವ ಸಾನ್ದ್ಸ್ ಸ್ಕೂಲ್ (Sands School).

ಇಂದು ಹಲವಾರು ಪಾಶ್ಚಾತ್ಯ ದೇಶಗಳಲ್ಲಿರುವ ಪರ್ಯಾಯ ಶಿಕ್ಷಣ /ಡೆಮೊಕ್ರಾಟಿಕ್ ಶಾಲೆಗಳ ಪಟ್ಟಿಯಲ್ಲಿ ಸಮ್ಮರ್ ಹಿಲ್ ಶಾಲೆ ಮಾದರಿ ಶಾಲೆ ಎಂದು ಗುರುತಿಸಲ್ಪಟ್ಟಿದೆ. ಎ. ಎಸ್. ನೀಲ್ ಎಂಬಾತ  1921 ರಲ್ಲಿ ಆರಂಭಿಸಿದ ಈ ಸಮ್ಮರ್ ಹಿಲ್ ಶಾಲೆ ಅತ್ಯಂತ ವಿದ್ಯಾರ್ಥಿ-ಸ್ನೇಹಿ, ಪ್ರಗತಿಪರ ಶಿಕ್ಷಣಕ್ಕೆ ಅತ್ಯುತ್ತಮ ಹೆಸರನ್ನು ಹೊಂದಿರುವ ಶಾಲೆ. ಬ್ರಿಟಿಷ್ ಸರಕಾರ ಈ ಶಾಲೆಯನ್ನು ಮುಚ್ಚಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಅನೇಕ ಸರಕಾರೀ ಮತ್ತು ಜನಸಾಮಾನ್ಯರ, ಪೋಷಕರ, ಪ್ರಗತಿಪರ ಚಿಂತಕರ ಬೆಂಬಲದಿಂದ ಶಾಲೆ ಮತ್ತೆ ಮತ್ತೆ ಪುಟಿದೆದ್ದು, ಈಗ ಪ್ರಪಂಚ ವಿಖ್ಯಾತವಾಗಿದೆ.

ಭಾರತದ ಮಟ್ಟಿಗೆ ಹೇಳುವುದಾದರೆ ನನ್ನ ಕಣ್ಣ ಮುಂದೆ ಬರುವುದು ರವೀಂದ್ರನಾಥ್ ಟಾಗೋರ್ ರ ಶಾಂತಿ ನಿಕೇತನ. ಅವರು ಶಿಕ್ಷಣದಲ್ಲಿ ಅಳವಡಿಸಿದ ಹೊರಾಂಗಣ ಪರಿಸರದಲ್ಲಿ ಪಾಟಕಲಿಕೆ, ನಾಟ್ಯ, ಸಂಗೀತ, ಕಲೆಗಳು, ಮರಕೆಲಸ, ಒಂದೇ ಎರಡೇ! ಹಿಂದೆ ಕರ್ನಾಟಕದಲ್ಲಿ ಶಿವರಾಮ ಕಾರಂತರು ಆರಂಭಿಸಿ ನಡೆಸಿದ  ಬಾಲವನ ಮತ್ತೊಂದು ಅತ್ಯುತ್ತಮ ಉದಾಹರಣೆ. ಮತ್ತೊಂದು ಉದಾಹರಣೆಯೆಂದರೆ ಇಂಗ್ಲೆಂಡಿನ ಪೈಲಟ್ ಡೇವಿಡ್ ಹೊರ್ಸಬುರ್ಗ್ಹ್ ಕೆಲಸ ಬಿಟ್ಟು, ಇಂಗ್ಲೆಂಡ್ ಬಿಟ್ಟು ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿ ಹಳ್ಳಿ ಮಕ್ಕಳಿಗೆಂದು ಆರಂಭಿಸಿದ ಪ್ರಾಯೋಗಿಕ ಶಿಕ್ಷಣ ಶಾಲೆ ನೀಲ್ ಭಾಗ್ . ಅವರ ಬಳಿ ಅವರ ಹೊಸ ಪ್ರಯೋಗ ಶಿಕ್ಷಣದ ರೀತಿಯನ್ನು ಕಲಿತು ಅರಿತು ಅವರ ಶಿಷ್ಯಂದಿರು ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಸಿದ ಶಿಕ್ಷಣ ಪ್ರಯೋಗಗಳು. ಇವುಗಳಲ್ಲಿ ಬೆಂಗಳೂರಿನ ಕನಕಪುರ ರಸ್ತೆಯ ಬದಿಯಿರುವ ಮಾಲತಿ ಅಕ್ಕನ ‘ವಿಕಸನ’ ಕೇಂದ್ರ ದೇಶ ವಿದೇಶಗಳಿಂದ ಪರ್ಯಾಯ ಶಿಕ್ಷಣದಲ್ಲಿ ಆಸಕ್ತಿಯಿರುವವರನ್ನು ಆಕರ್ಷಿಸುತ್ತದೆ.

ಮತ್ತೊಂದು ರೀತಿಯ ಪ್ರಾಯೋಗಿಕ, ಪ್ರಗತಿಪರ, ಭಿನ್ನತೆಯುಳ್ಳದ್ದು ಜಿದ್ದು ಕೃಷ್ಣಮೂರ್ತಿ ತತ್ವವನ್ನು ಅನುಸರಿಸುವ ವ್ಯಾಲಿ ಶಾಲೆಗಳು. ಹಿಂದೊಂದು ಕಾಲದಲ್ಲಿ ಬೆಂಗಳೂರಿನ ಹೊರಪ್ರದೇಶದ ವ್ಯಾಲಿ ಶಾಲೆಯೆಂದರೆ (The Valley School)  ನಮಗೆಲ್ಲಾ ಅದೊಂದು ತರಹದ ಮಾಂತ್ರಿಕ ಶಾಲೆ, ಉಳ್ಳವರಿಗೆ ಮಾತ್ರ ಲಭ್ಯ, ಸಮಾಜದ ಮೇಲ್ವರ್ಗದ ಜನರ ಮಕ್ಕಳು ಮಾತ್ರ ಹೋಗುವ ಶಾಲೆ, ಅಥವಾ ‘ನಮ್ಮಂತಿರದ’ ಬೇರೆ ಥರ ಬದುಕುವ ಜನರು ಮಾತ್ರ ಹೋಗುವ ಶಾಲೆ ಎಂಬ ಭಾವನೆ. ಇಂದಿರಾ ಗಾಂಧಿಯ ಮೊಮ್ಮಗ ವರುಣ್ ಗಾಂಧೀ ಆ ವ್ಯಾಲಿ ಶಾಲೆಯಲ್ಲಿ ಕಲಿಯುತ್ತಿದ್ದಾನೆ ಎನ್ನುವುದು ದೊಡ್ಡ ವಿಷಯವಾಗಿತ್ತು.

ನಾನು ಶಾಲೆಯಲ್ಲಿ ಓದುತ್ತಿದ್ದಾಗ ಪತ್ರಿಕೆಗಳಲ್ಲಿ ವ್ಯಾಲಿ ಸ್ಕೂಲ್ ಬಗ್ಗೆ ಓದಿದ್ದೆ. ನನಗೆ ಅಂತಹ ಶಾಲೆಗಳ ಬಗ್ಗೆ ಕುತೂಹಲದ ಜೊತೆಗೆ ಆಸಕ್ತಿ ಕೂಡ ಬೆಳೆಯಿತು. ಹಾಗಾಗಿ ಮಾಲತಿ ತಮ್ಮ ವಿಕಸನ ಕೇಂದ್ರವನ್ನು ಆರಂಭಿಸಿದ್ದ ಹೊಸತರಲ್ಲಿ ಒಮ್ಮೆ ಹೋಗಿ ನೋಡಿದೆ, ಪರ್ಯಾಯ/ಪ್ರಗತಿಪರ ಶಾಲೆಗಳ ಮೋಹಕ್ಕೆ ಬಿದ್ದೆ! ಕಲಿಕೆಯೆಂದರೆ ಹೀಗಿರಬೇಕು, ಯಾವುದೇ ನಿರ್ಬಂಧ, ಚೌಕಟ್ಟುಗಳಿಲ್ಲದೆ ಮಕ್ಕಳು ತಮ್ಮ ಕುತೂಹಲವನ್ನು ಅನುಸರಿಸಿ, ಮುಕ್ತ ವಾತಾವರಣದಲ್ಲಿ ಕಲಿಯುವ ಅಂತಹ ಶಾಲೆಗಳೆಂದರೆ ನನಗೆ ಬಹಳ ಅಚ್ಚುಮೆಚ್ಚು. ಅವುಗಳ ಹುಟ್ಟು, ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವುದೆಂದರೆ ನನಗೆ ಬಹಳಾ ಪ್ರೀತಿ. ಅವಕಾಶ ಸಿಕ್ಕಿದಾಗೆಲ್ಲಾ ಅಥವಾ ಅವಕಾಶ ಮಾಡಿಕೊಂಡು ಪ್ರಗತಿಪರ ಶಾಲೆಗಳಿಗೆ ಭೇಟಿ ಕೊಟ್ಟು ಅವುಗಳ ಬಗ್ಗೆ ಕಲಿಯುವುದು ನನಗಿರುವ ಒಂದು ರೀತಿಯ ಪರಿಪಾಠ.

ಈಗ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಅನೇಕ ಪ್ರಗತಿಪರ, ಪರ್ಯಾಯ ಶಾಲೆಗಳಿವೆ. ಉದಾಹರಣೆಗೆ ಮಾಗಡಿಯ ಹತ್ತಿರ ಇರುವ ಸೆಂಟರ್ ಫಾರ್ ಲರ್ನಿಂಗ್ (Centre for Learning) , ಕನಕಪುರ ರಸ್ತೆಯ ಶಿಬುಮಿ (Shibumi) ಶಾಲೆ. ಜಿದ್ದು ಕೃಷ್ಣಮೂರ್ತಿ ತತ್ವವನ್ನು ಅಲ್ಪ ಸ್ವಲ್ಪ ಬದಲಿಸಿಕೊಂಡು ಜನ್ಮ ತಳೆದ ಹೊಸ ಹೊಸ ಶಾಲೆಗಳು, ಪರಿಸರ ಪ್ರೇಮಿಗಳಿಗೆ ಬೇಕಾದ ಶಾಲೆ, ಆರ್ಟ್ಸ್ ವಿಷಯಗಳನ್ನು ಮುಖ್ಯವಾಗಿಟ್ಟುಕೊಂಡ ಶಾಲೆ, ಯಾವುದೇ ಯಾರದೇ ತತ್ವವನ್ನು ಅನುಸರಿಸದ ತೀರ ಪ್ರಾಯೋಗಿಕ ಫಿಲೋಸೋಫಿಯುಳ್ಳ ಶಾಲೆ, ಹೀಗೆ ಬೇಕಾದಷ್ಟು ಪ್ರಗತಿಪರ ಪರ್ಯಾಯ ಶಾಲೆಗಳಿವೆ. ಇವು ಹೆಚ್ಚು ಹೆಚ್ಚು ಮಕ್ಕಳ ಆಯ್ಕೆ/ನಿರ್ಧಾರ/ಭಾಗವಹಿಸುವಿಕೆಗಳನ್ನ ಅಳವಡಿಸಿಕೊಂಡು, ವಿದೇಶಗಳ ಇತರೆ ಪರ್ಯಾಯ ಮತ್ತು ಪ್ರಗತಿಪರ ಶಿಕ್ಷಣವನ್ನು ನೋಡಿ, ಗಮನಿಸಿ, ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡ ಶಾಲೆಗಳು.

ಪರ್ಯಾಯ ಶಿಕ್ಷಣದಲ್ಲಿ ಮಾಂಟೆಸರಿ ವಿಧಾನ (Montessori methodology), ಸ್ಟೈನರ್ ವಿಧಾನ (Steiner schools) ಮತ್ತು ರೆಜ್ಜಿಯೋ ಎಮಿಲಿಯಾ (Reggio Emilia methodology) ವಿಧಾನ ಅಳವಡಿಸಿಕೊಂಡಿರುವ ಶಾಲೆಗಳು ಕೂಡ ಬಹಳಷ್ಟು ಇವೆ. ಎಮಿಲಿಯಾ ವಿಧಾನವನ್ನು ಕೆಲವು ಪಾಶ್ಚಾತ್ಯ ದೇಶಗಳಲ್ಲಿ ಅನುಸರಿಸುತ್ತಿದ್ದಾರೆ. ಮಕ್ಕಳ ಜೊತೆ ಮಾತು ಕತೆ ಮೂಲಕ ಅವರ ವ್ಯಕ್ತಿ ಚಿತ್ರವನ್ನು ರಚಿಸುತ್ತಾರೆ. ಮಕ್ಕಳ ಡ್ರಾಯಿಂಗ್, ಕಲೆ, ಬಣ್ಣದ ಚಿತ್ರಗಳನ್ನು, ಮಕ್ಕಳ ಬರಹಗಳನ್ನು ಒಪ್ಪ ಮಾಡಿ ಅವುಗಳ ಮೂಲಕ ಮಕ್ಕಳ ಬೆಳವಣಿಗೆ, ಅವರ ಅಭಿರುಚಿಗಳು, ಅವರ ವ್ಯಕ್ತಿತ್ವ, ಆಸಕ್ತಿ ಮುಂತಾದುವುಗಳನ್ನ ತಿಳಿದುಕೊಳ್ಳುವ ವಿಧಾನ ಇದು.  ರುಡೊಲ್ಫ್ ಸ್ಟೈನರ್ ತಾವು ಹಿಂದೂ ಧರ್ಮದ ದಾರ್ಶನಿಕತೆಯಿಂದ ಪ್ರಭಾವಿತರಾಗಿ, ಮರುಚಿಂತನೆ ನಡೆಸಿ ಶುರುಮಾಡಿದ ಸ್ಟೈನರ್ ಶಿಕ್ಷಣ ವಿಧಾನ ಕೂಡ ಭಾರತದಲ್ಲಿ ಪ್ರಸಿದ್ಧಿ.

ಪಾಶ್ಚಾತ್ಯ ದೇಶಗಳಲ್ಲಿ ಮಾತ್ರ ಅಲ್ಲದೆ ನಮ್ಮ ಭಾರತದಲ್ಲೂ ಕೂಡ ಮಾಂಟೆಸರಿ ಶಿಕ್ಷಣ ವಿಧಾನ ಬಹಳಾ ಪ್ರಸಿದ್ಧಿ; ಹಾಗೂ ಅನೇಕರಿಗೆ ಲಭ್ಯ ಕೂಡ. ಬೆಂಗಳೂರಿನಲ್ಲಿರುವ ಭಾರತೀಯ ಮಾಂಟೆಸರಿ ಕೇಂದ್ರ ನಡೆಸುವ ತರಬೇತಿಗಳು, ಕೋರ್ಸ್ ಗಳು ಬಹಳ ಜನರನ್ನು ಮುಟ್ಟಿದೆ. ಮಾರಿಯಾ ಮಾಂಟೆಸರಿ ಭಾರತದಲ್ಲಿ ವಾಸವಿದ್ದುದರಿಂದ ಮತ್ತು ಅವರ ಶಿಕ್ಷಣ ವಿಧಾನವನ್ನು ಹೇಳಿಕೊಟ್ಟು ಅವರೇ ತರಬೇತಿ ಕೊಟ್ಟ ಅನೇಕ ಶಾಲೆಗಳು, ತರಬೇತಿ ಪಡೆದ ಅನೇಕ ಮಾಂಟೆಸರಿ ಹಿರಿಯರು ಆ ವಿಧಾನವನ್ನು ಜನಪ್ರಿಯಗೊಳಿಸಿದ್ದಾರೆ.

ಇದಲ್ಲದೆ, ಇತ್ತೀಚಿನ ಹದಿನೈದು ವರ್ಷಗಳಲ್ಲಿ ಬದಲಾವಣೆಯ ಗಾಳಿ ಎಲ್ಲಾ ಕಡೆ ಬೀಸಿದಂತೆ ಪ್ರಗತಿಪರ/ಪರ್ಯಾಯ ಶಿಕ್ಷಣ ಕ್ಷೇತ್ರದಲ್ಲೂ ಬೀಸಿ, ಅನೇಕ ಆಲ್ಟರ್ನೇಟಿವ್ ಶಾಲೆಗಳು ಹುಟ್ಟಿಕೊಂಡಿವೆ. ಬೆಂಗಳೂರಿನಲ್ಲಿ ಹೊಸ ಬಡಾವಣೆಗಳು ಹುಟ್ಟಿದಂತೆಲ್ಲಾ, ಹೊಸ ಪೀಳಿಗೆಯ ಹೆಚ್ಚು ಓದಿರುವ, ವಿದೇಶಗಳನ್ನು ಸುತ್ತಿರುವ, ಹಣವಿರುವ ಪೋಷಕರಿಗೆ ಬೇಕಾಗಿದ್ದ ಆ ಹೊಸ ಆಲ್ಟರ್ನೇಟಿವ್ ಶಾಲೆಗಳು ಅಂತಹ ಹೊಸ ಬಡಾವಣೆಗಳಲ್ಲಿ ಹೆಚ್ಚು ಕಾಣುತ್ತವೆ.

ಸಮ್ಮರ್ ಹಿಲ್ ಶಾಲೆಯ ಮಾದರಿಯಲ್ಲಿ ಯೂರೋಪಿನಲ್ಲಿ, ಆಸ್ಟ್ರೇಲಿಯಾದಲ್ಲಿ (ಮೇಲ್ಬೋರ್ನ ನಗರದ ಪ್ರೆಶಿಲ್ ಶಾಲೆ, ದಿ ವಿಲೇಜ್ ಸ್ಕೂಲ್, ಸಿಡ್ನಿ ನಗರದ ಕುರುಮ್ಬೀನ ಶಾಲೆ, ಬ್ರಿಸ್ಬನ ನಗರದ ಬ್ರಿಸ್ಬನ ಇಂಡಿಪೆಂಡೆಂಟ್ ಶಾಲೆ), ಇತ್ತೀಚಿಗೆ ಬ್ರೆಜಿಲ್ ನಲ್ಲಿ, ಸ್ಪೇನ್ನಲ್ಲಿ, ಭಾರತ/ಬೆಂಗಳೂರಿನಲ್ಲಿ ಹೀಗೆ ಪ್ರಪಂಚದ ಬೇರೆ ಬೇರೆ ಕಡೆ ಪರ್ಯಾಯ ಪ್ರಗತಿಪರ ಶಿಕ್ಷಣ ಪ್ರಯತ್ನಗಳು ನಡೆಯುತ್ತಿವೆ. ಅತ್ತ ಅಮೆರಿಕೆಯಲ್ಲೂ ಸಹ ಸಡ್ಬರಿ (Sudbury) ಶಾಲೆಯಂತಹ ಅನೇಕ ಪ್ರಗತಿಪರ ಶಿಕ್ಷಣ ಪ್ರಯತ್ನಗಳು ಇವೆ. ಇಂತಹ ಶಾಲೆಗಳ ಬಗ್ಗೆ ಮತ್ತು ಅವರುಗಳು ನಡೆಸುವ ಪ್ರತಿ ವರ್ಷದ ಕಮ್ಮಟಗಳು, ಕಾನ್ಫರೆನ್ಸ್ ಗಳು, ಮೇಳಗಳ ಬಗ್ಗೆ, ಮತ್ತು ಪ್ರಗತಿಪರ ಶಿಕ್ಷಣದಲ್ಲಿ ಬಳಸುವ ಅನೇಕ ಸಂಪನ್ಮೂಲಗಳ ವಿವರಗಳು, ಪುಸ್ತಕಗಳ, ಬರಹಗಳ ಬಗ್ಗೆ ನಿಮಗೆ ಹೆಚ್ಚು ತಿಳಿದುಕೊಳ್ಳಬೇಕೆಂದರೆ ಈ ಅಂತರ್ಜಾಲ ಕೊಂಡಿಗಳನ್ನು ಒತ್ತಿರಿ:  http://www.idenetwork.org/ ; http://www.idec2015.org/#&panel1-2  ಮತ್ತು   http://www.educationrevolution.org

ಈಗ ಪರ್ಯಾಯ/ಪ್ರಗತಿ ಪರ ಶಾಲೆಗಳ ಸಂಖ್ಯೆ ಹೆಚ್ಚುತ್ತಿವೆ. ನಾನಾ ಕಾರಣಗಳಿಂದ ಎಷ್ಟೋ ಮಕ್ಕಳು ಮುಖ್ಯವಾಹಿನಿ ಶಿಕ್ಷಣ ವ್ಯವಸ್ಥೆಯಲ್ಲಿ ಇಷ್ಟವಿಲ್ಲದೆ ಸಿಕ್ಕಿಕೊಂಡು ನಲುಗಿದ ಪರಿಸ್ಥಿತಿಯಿದ್ದಾಗ, ಅದರಲ್ಲಿ ಕೆಲವರಿಗೆ ಇಂತಹ ಪ್ರಗತಿಪರ ಶಾಲೆಗಳು ಲಭ್ಯವಾಗಿ ವರದಾನವಾಗಿವೆ. ಹೆಚ್ಚು ಮಂದಿಗೆ ಇಂತಹ ಪ್ರಗತಿಪರ ಶಾಲೆಗಳು ಇಷ್ಟವಾಗುತ್ತಿದೆ.

ಎಷ್ಟೋ ಮಕ್ಕಳು “ಶಾಲೆಗೇ ಹೋಗಲು ಇಷ್ಟವಿಲ್ಲ” ಎನ್ನುವುದನ್ನು ನಾವು ಕೇಳುತ್ತೀವಿ. ಮುಖ್ಯವಾಗಿರುವ ಕಾರಣ ಈಗಿರುವ ಶಿಕ್ಷಣ ವ್ಯವಸ್ಥೆ ಮತ್ತು ವಿಧಾನ ವಯಸ್ಕರಿಂದ ವಯಸ್ಕರಿಗಾಗಿ ಹಿಂದೆ ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಕೆಲಸಗಾರರನ್ನು ತಯಾರಿಸಲು ರಚಿತವಾದದ್ದು. ಈಗಲೂ ಕೂಡ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬರೆಯುವುದು/ಓದುವುದು ಮತ್ತು ಗಣಿತಕ್ಕೆ ಹೆಚ್ಚು ಗಮನ. ಬೇರೆ ವಿಷಯಗಳಿಗೆ ಇಲ್ಲ. ಮಗು ಗಣಿತದಲ್ಲಿ ಕುಂಟಿದರೆ  ಒಂದು ಹಣೆಪಟ್ಟಿ, ಸರಿಯಾಗಿ ಓದುವುದಿಲ್ಲ/ಬರೆಯುವುದಿಲ್ಲ ಎಂದರೆ ಇನ್ನೊಂದು ತರಹದ ಹಣೆಪಟ್ಟಿ. ಮಗುವಿಗೆ ಸಂಗೀತದಲ್ಲಿ ಅಥವಾ ಕಲೆಗಳಲ್ಲಿ ಆಸಕ್ತಿಯಿದ್ದರೂ ಶಾಲೆಗಳಲ್ಲಿ ಆ ವಿಷಯಗಳು ಗೌಣ, ಅವುಗಳಿಗೆ ಪ್ರಾಧಾನ್ಯತೆಯಿಲ್ಲ. ಅನೇಕ ಮಕ್ಕಳು ಬೆಳೆಯುತ್ತಾ ತಮ್ಮ ಶಿಕ್ಷಣವನ್ನು ದ್ವೇಷಿಸುವ ಸಂದರ್ಭಗಳು ನಮ್ಮ ಕಣ್ಣ ಮುಂದಿವೆ. ಕಲಿಕೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ದಿನದಿನವೂ ಹೆಚ್ಚುತ್ತಿವೆ. ಸಹಿಸಲಾರದ ಪೈಪೋಟಿ, ಪಂದ್ಯ, ಗೆಲ್ಲುವುದೇ ಮುಖ್ಯ ಎನ್ನುವ ಈ ಕಾಲದಲ್ಲಿ ಶಿಕ್ಷಣದ ಅನುಭವವೂ ಕೂಡ ಪಂದ್ಯದಾಟ  ಆಗಿರುವುದು ಬಹಳ ದುರಾದೃಷ್ಟಕರ. ಮತ್ತು ಆತಂಕ ಪಡಬೇಕಾದ ವಿಷಯ.

ಪ್ರಗತಿಪರ/ಪರ್ಯಾಯ/ಪ್ರಜಾ ಪ್ರುಭುತ್ವದ ಶಾಲೆಗಳ ತತ್ವವನ್ನು ಸ್ವಲ್ಪ ಮಟ್ಟಿಗೆ ಮುಖ್ಯವಾಹಿನಿ ಶಾಲೆಗಳು ಅನುಸರಿಸಿದರೆ ಹೆಚ್ಚು ಹೆಚ್ಚು ಮಕ್ಕಳು ತಮ್ಮ ಶಿಕ್ಷಣವನ್ನು ಇಷ್ಟಪಡುವ ಹಾಗಾಗುತ್ತದೆ. ಮಕ್ಕಳ ಮಾತಿಗೆ, ದನಿಗೆ, ನಿರ್ಧಾರಗಳಿಗೆ ಮತ್ತು ಭಾಗವಹಿಸುವಿಕೆಗೆ ಮಾನ್ಯತೆ ಮತ್ತು ಮನ್ನಣೆ ಕೊಡುವ ವಾತಾವರಣ ಎಲ್ಲಾ ಶಾಲೆಗಳಲ್ಲೂ ನಿರ್ಮಾಣವಾದರೆ ಕಲಿಕೆಯ  ಅನುಭವಕ್ಕೆ ಹೆಚ್ಚಿನ ಅರ್ಥ ಸಿಗುತ್ತದೆ. ಮಕ್ಕಳು ಅನುಭವ ಕಲಿಕೆಯಿಂದ ಕಲಿತರೆ ಪ್ರತಿ ದಿನದ ಉಪಯೋಗದಲ್ಲೂ ನಮ್ಮ ಶಿಕ್ಷಣವನ್ನು ನಾವು ಕಾಣಬಹುದು. ಆನಂದಿಸಬಹುದು. ದೇಶದ ಆರ್ಥಿಕ ವ್ಯವಸ್ಥೆಯನ್ನು ಸಬಲಗೊಳಿಸಲು, ಸುಭದ್ರತೆಯನ್ನು ಹೆಚ್ಚಿಸಲು ಎಂಬಂತೆ ಇರುವ ಈಗಿನ ಶಿಕ್ಷಣ ವ್ಯವಸ್ಥೆಯನ್ನು ಸ್ವಲ್ಪ ಬದಲಿಸಿ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ, ಸಮಾಜದ, ಪರಿಸರದ, ಪ್ರಪಂಚದ ಏಳಿಗೆಗಾಗಿ ಪುಷ್ಟಿ ಕೊಡುವ, ಸಮಷ್ಟಿ ಸಾಮರ್ಥ್ಯವನ್ನು ನೀಡಬಲ್ಲ ರೀತಿ  ಬಲ ಪಡಿಸಿದರೆ ಸಂತುಷ್ಟ ಭವಿಷ್ಯಕ್ಕಾಗಿ ನಾವು ಎದುರು ನೋಡಬಹುದು.

ಸಾಹಸ (ಅತಿಸಾಹಸ) ಕ್ರೀಡೆಗಳ ಹೊರ ಮೈ, ಒಳಮನಸ್ಸು

ಇಂಗ್ಲೆಂಡ್ ಮತ್ತು ಯುರೋಪಿನಲ್ಲಿ ಈಗ ವಸಂತಮಾಸ ಶುರುವಾಗಿದೆ. ಹಿಮಕಾಲುಜಾರು (skiing), ಹಿಮಹಲಗೆಯ ಜಾರು Image result for extreme sports(snowboarding), ಹಿಮಬಂಡಿಜಾರು (sledging) ಮುಂತಾದ ಹಿಮಸಾಹಸ ಕ್ರೀಡೆಗಳ ಋತುವಿಗೆ ಪರದೆ ಬಿದ್ದಿದೆ. ಜನರು ಮತ್ತೊಂದು ರೀತಿಯ ಸಾಹಸ ಕ್ರೀಡೆಗಳಿಗೆ ಸಜ್ಜಾಗುತ್ತಿದ್ದಾರೆ. ಅವು ಪರ್ವತ ಕಾಲುಬಂಡಿ (mountain biking), ನದಿನೀರಿನ ಕಯಕಿಂಗ್ (whitewater kayaking), ತೆಪ್ಪದಾಟ (rafting), ಪರ್ವತದ ಮೇಲು ಮತ್ತು ಕೆಳ ಓಡುವಿಕೆ (mountain trail running), ಪರ್ವತ ಚಾರಣ (trekking) … ತರತರಹದ್ದು. ನಾವೂ ಕೂಡ ನಮ್ಮ ಹಿಮಸಾಹಸ ಕ್ರೀಡೆಗಳನ್ನು ಮುಗಿಸಿಕೊಂಡು ಬಂದು ಬರಲಿರುವ ಬೇಸಗೆಯ ರಜದಲ್ಲಿ ಮೇಲೆ ಹೇಳಿದ ಕೆಲ ಸಾಹಸಕ್ರೀಡೆಗಳಿಗೆ ತಯಾರು ಮಾಡಿಕೊಳ್ಳುತ್ತಿದ್ದೀವಿ. ನಿಮ್ಮ ಕುಟುಂಬದಲ್ಲೂ, ನೀವೂ ಕೂಡ ಸಾಹಸ ಕ್ರೀಡೆಗಳ ಪ್ರಿಯರಾಗಿರಬಹುದು.

 

ಏನೀ ಸಾಹಸ ಕ್ರೀಡೆ (adventure sports) ಗಳೆಂದರೆ? ಹಾಗೆ ಕೆಲವರು ಮಾತನಾಡುವ ಅತಿಸಾಹಸ ಕ್ರೀಡೆಗಳು (extreme sports) ಎಂದರೆ ಏನು?  ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.

 

ದೃಶ್ಯ ೧: ಬೆಂಗಳೂರಿನಿಂದ ಹೊರಟ ಆ ಆರು ಯುವಕರು/ಯುವತಿಯರು ವಾರಾಂತ್ಯದ ಜೊತೆಗೆ ಸಿಕ್ಕಿರುವ ಎರಡು ದಿನಗಳ ಹೆಚ್ಚುವರಿ ರಜೆಯನ್ನು ಸೇರಿಸಿ ನಾಲ್ಕು ದಿನಗಳ ಕಾಲ ಇಡಿಯಾಗಿ ಸಾಹಸ ಕ್ರೀಡೆಗಳಲ್ಲಿ (adventure sports) ತೊಡಗಿಸಿಕೊಳ್ಳುವ ಸೂಕ್ತ ಯೋಜನೆಯನ್ನೇ ಹೊಂದಿದ್ದರು. ದಾಂಡೇಲಿಯ ಕಾಳಿ ನದಿಯಲ್ಲಿ ಪ್ರವಾಹದ ಜೊತೆ ಬಳುಕಿ ಬಳುಕಿ ಜಾರುತ್ತಿರುವ ತೆಪ್ಪ. ನದಿಯ ನೀರಿಗುಂಟ ಸಾಗುತ್ತಿರುವ ಆರು ಸಾಹಸಿಗರು. ಜೊತೆಗೆ ಒಬ್ಬ ಮಾರ್ಗದರ್ಶಕ. ಎಲ್ಲರೂ ಜೀವರಕ್ಷಕ ಎದೆಕವಚವನ್ನು ಧರಿಸಿದ್ದಾರೆ. Image result for extreme sportsತೆಪ್ಪದ ಮೇಲೆ ಕಾಲಿಡುವ ಮುನ್ನ ಎಲ್ಲಾ ರೀತಿಯ ಸೂಚನೆಗಳನ್ನೂ ಪಡೆದು ನದಿ ತೆಪ್ಪ ಸಾಹಸ ಕ್ರೀಡೆ ಅಂದರೆ ಏನು, ಯಾವ ರೀತಿಯ ಅನುಭವವನ್ನು ಅದು ಕೊಡುತ್ತದೆ, ಯಾವ ಯಾವ ಗಂಡಾಂತರಗಳನ್ನು,  ಅಪಾಯಗಳನ್ನು ಒಳಗೊಂಡಿದೆ ಎಂದೆಲ್ಲ ತಾವೇ ಸ್ವತಹ ಸಾಕಷ್ಟು ವಿಷಯ ಸಂಗ್ರಹದಿಂದ ತಯಾರಾಗಿದ್ದು ಅಲ್ಲದೆ ತಾವು ಹಣ ಕೊಟ್ಟು ಆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಯೋಜಿಸಿರುವ ಸಂಸ್ಥೆಯಿಂದಲೂ ಸೂಕ್ತ ಮಾರ್ಗದರ್ಶನವನ್ನು ಪಡೆದಿದ್ದಾರೆ. ಸಾಗುತ್ತಾ ಜಾರುತ್ತಾ  ಆ ನದಿ ತೆಪ್ಪದಾಟದ ರೋಚಕ ಅನುಭವ ತೆಪ್ಪದ ಮೇಲಿರುವ ಆರು ಜನರಿಗೂ ಜೀವನದಲ್ಲಿ ಮರೆಯಲಾಗದಂಥದ್ದು. ನದಿ ತೆಪ್ಪದಾಟದ ನಂತರ ಉತ್ತರ ಕನ್ನಡ ಜಿಲ್ಲೆಯ ಮನಮೋಹಕ ಪಶ್ಚಿಮಘಟ್ಟಗಳ ಚಾರಣವನ್ನು ಕೈಗೊಳ್ಳುತ್ತಾರೆ. ಮಧ್ಯದಲ್ಲಿ ಅಲ್ಲೆಲ್ಲೋ ಕಿರುದೋಣಿ ಪ್ರವಾಸವನ್ನು (kayaking) ಕೈಗೊಳ್ಳುತ್ತಾರೆ. ಮತ್ತೊಂದು ಕಡೆ ನಿಂತು ಅವರಲ್ಲಿ ಮೂವರು ಪರ್ವತ ಕಾಲಬಂಡಿ (ಮೌಂಟನ್ ಬೈಕಿಂಗ್) ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಹೀಗೆ ಮನಸ್ಸು ತೃಪ್ತಿಯಾಗಿ, ಆತ್ಮಕ್ಕೆ ಸಂತೋಷವಾಗಿ, ಮೈಗೆ ಚೆನ್ನಾಗಿ ಕಸರತ್ತಾಗಿ ಮನೆಗೆ ಮರಳುತ್ತಾರೆ.

 

ದೃಶ್ಯ ೨: ವರ್ಷ 2014. ತಿಂಗಳು ಜನವರಿ. ಸ್ಥಳ ಸೇಲಂ, ತಮಿಳು ನಾಡು. ಹೆಸರು ರಮ್ಯ. ವಯಸ್ಸು ೨೬. ತನ್ನ ಬೋಧಕರು, ಸಹಪಾಠಿಗಳ ಜೊತೆ ಚಿಕ್ಕ ಸೆಸ್ನ ವಿಮಾನವೇರಿ ಆಕಾಶ ನೆಗೆತದಲ್ಲಿ ಪಾಲ್ಗೊಂಡ ಬೆಂಗಳೂರಿನ ರಮ್ಯ ೧೦,೦೦೦ ಅಡಿಯಿಂದ ಧುಮುಕಿ ಮಧ್ಯದಲ್ಲಿ ತನ್ನ ಗಾಳಿಕೊಡೆಯನ್ನು (ಪ್ಯಾರಚುಟ್) ಪೂರ್ತಿಯಾಗಿ ಬಿಚ್ಚಲಾಗದೆ, ಅದು ಸರಿಯಾದ ಸಮಯದಲ್ಲಿ ಬಿಚ್ಚಿಕೊಳ್ಳದೆ, ಭೂಮಿಗೆ ಬಿದ್ದು ಮೃತಪಟ್ಟರು. ಆ ಚಿಕ್ಕ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಗಂಡ ವಿನೋದ್ ತನ್ನ ಸರದಿಗೆ ಸಿದ್ಧರಾಗುತ್ತಿದ್ದರು. ಅವರ ಹಾಗೆ ಇನ್ನೂ ಹಲವಾರು ಮಂದಿ ದಿನದಿನವೂ ತಯಾರಿ ನಡೆಸಿ ಅವರ ಕನಸಿನ ಅತಿ(ತೀವ್ರ)/ಸಾಹಸ ಕ್ರೀಡೆಯ (extreme sports) ಅನುಭವವನ್ನು ಪಡೆಯಲು ಕಾತರಿಸುತ್ತಿದ್ದರು. ದುರಾದೃಷ್ಟವಶಾತ್, ವಿನೋದ್ ತಮ್ಮ ಹೆಂಡತಿ ಆಕಾಶದಿಂದ ನೆಗೆದು ನೆಲಕ್ಕೆ ತಲುಪುವ ಕೊಂಚ ಮುನ್ನವೇ ತಮ್ಮ ಸಾವಿನೆಡೆಗೆ ಬಿದ್ದದ್ದನ್ನು ಕಣ್ಣಾರೆ ನೋಡುವಂತಾಯಿತು.

 

Image result for extreme sportsಭಾರತದಲ್ಲಿ ಅಂತಹ ಅತಿ ಸಾಹಸ ಕ್ರೀಡೆಗಳ ಪರಿಸರ ಚೆನ್ನಾಗಿಲ್ಲಾ, ಬೇಕಾದ ತರಬೇತಿ ಕೊಡುವ ತರಬೇತಿದಾರರು ಮತ್ತು ಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿದಲ್ಲಿರುವ ಗುಣಮಟ್ಟವನ್ನು ಹೊಂದಿಲ್ಲ, ಕಡ್ಡಾಯವಾಗಿ ಪಡೆಯಬೇಕಾದ ತರಬೇತಿ ಅವಧಿಯಲ್ಲಿ ಮತ್ತು ಅರ್ಹತಾ ಪತ್ರ ಕೊಡುವ ಸಂಸ್ಥೆಗಳಲ್ಲಿ ಇರುವ ರಾಜಕೀಯ … ಹೀಗೆ ಏನೇನೋ ವಿವಾದಗಳು ಎದ್ದವು. ಅದಕ್ಕೆ ಉತ್ತರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಹೊಂದಿ, ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವ ಬೆಂಗಳೂರಿನ ಹಲವಾರು ಅತ್ಯುತ್ತಮ ಮತ್ತು ಉತ್ತಮ ತರಬೇತಿದಾರರು ಬನ್ನಿ, ನಮ್ಮ ತರಬೇತಿಯನ್ನು ನೋಡಿ, ನಾವು ಕೆಲಸ ಮಾಡುತ್ತಿರುವುದು ಅತ್ಯಂತ ಜವಾಬ್ದಾರಿಯಿಂದ ಮತ್ತು ಅತ್ಯುತ್ತಮ ಮಟ್ಟದಿಂದ, ಒಂದು ಅವಗಢದಿಂದ ಇಡಿ ಸಾಹಸ ಮತ್ತು ಅತಿಸಾಹಸ ಕ್ರೀಡೆಗಳ ರಂಗವನ್ನೇ ಬಯ್ಯಬೇಡಿ ಎಂದು ಆಕ್ಷೇಪಣಾದಾರರಿಗೆ ಚುರುಕು ಮುಟ್ಟಿಸಿದರು.

 

ದೃಶ್ಯ ೩: ನಾನು ಒಮ್ಮೆ ಇಂಗ್ಲೆಂಡಿನ ಲೇಕ್ ಡಿಸ್ಟ್ರಿಕ್ಟ್ ನಲ್ಲಿ (Lake District) ಇರುವ Tree Tops ಸಂಸ್ಥೆ ನಡೆಸುವ ಆಕಾಶದಲ್ಲಿನ ಹಗ್ಗಗಳ ಕಸರತ್ತನ್ನು (high ropes course) ಮಾಡಿ ಆನಂದಪಟ್ಟೆ. ನನಗೆ ಸಂತೋಷವಾಗಿದ್ದು ಆ ಸಂಸ್ಥೆ ನಮಗೆಲ್ಲಾ ಹೇಗೆ ಒಂದು ಅನುಭವದ ಬಗ್ಗೆ ಮಾಹಿತಿ ಕೊಟ್ಟರು, ತಯಾರು ಮಾಡಿದರು, ನಮ್ಮನಮ್ಮ ಕ್ಷೇಮವನ್ನು ಕುರಿತು, ಎತ್ತರದ ಬಗ್ಗೆ ಕೆಲವರಿಗೆ ಇರುವ ಭಯವನ್ನು ಹೇಗೆ ಹೋಗಲಾಡಿಸಿದರು ಮತ್ತು ನಮ್ಮ ಕ್ಷೇಮಕ್ಕೆಂದೇ ಇರುವ ಸಾಧನಗಳನ್ನು, ನಮ್ಮ ದೇಹವನ್ನು ಹೇಗೆ ಆ ಸಾಧನಗಳಿಂದ ಸುರಕ್ಷಿತವಾಗಿ ಇತರ ಸಾಧನಗಳಿಗೆ ಕೊಂಡಿ ಹಾಕಿರುತ್ತಾರೆ, ಆದ್ದರಿಂದ ನಾವು ಕೈ ಬಿಟ್ಟರೂ ಕೆಳಗೆ ಬೀಳುವುದು ಸಾಧ್ಯವೇ ಇಲ್ಲ ಎಂದು ಧೈರ್ಯ ತುಂಬಿ, ಪ್ರೋತ್ಸಾಹವನ್ನು ಕೊಡುತ್ತಾರೆ ಎನ್ನುವುದು. ಮಕ್ಕಳು, ಮಹಿಳೆಯರು, ಆ ಬಗ್ಗೆ ಸುಳಿವೇ ಇಲ್ಲದವರು, ಸ್ವಲ್ಪ ಗೊತ್ತಿದ್ದವರು ಎಂಬಂತೆ ಎಲ್ಲಾರೂ ಖುಷಿಪಟ್ಟೆವು.

ಕರ್ನಾಟಕದಲ್ಲಿ ಕಳೆದ ಇಪ್ಪತ್ತು/ಹದಿನೈದು ವರ್ಷಗಳಲ್ಲಿ ಸಾಹಸ ಕ್ರೀಡೆಗಳ ಗಮ್ಮತ್ತು ಏರಿದ್ದೇ ಏರಿದ್ದು. ಎಲ್ಲಿ ನೋಡಿದರೂ ಈಗ ನಾನಾ ತರಹದ ಸಾಹಸ ಕ್ರೀಡೆಗಳು, ಅವನ್ನು ನಡೆಸುವ ಸಂಸ್ಥೆಗಳು ಇವೆ. ಕರ್ನಾಟಕದ ಪಶ್ಚಿಮ ಘಟ್ಟಗಳು, ಮನ ಮೋಹಕ ನದಿಗಳು, ವಿಶಾಲ ಹೃದಯವುಳ್ಳ ಜನರು, ಪ್ರಾಪಂಚಿಕ ಮಟ್ಟದ ಬೆಂಗಳೂರು – ಈ ಎಲ್ಲ ಅಂಶಗಳು ಸಾಹಸ ಕ್ರೀಡೆಗಳನ್ನು ಹುಟ್ಟು ಹಾಕಿ, ಬೆಳೆಸಿವೆ. ಕಾವೇರಿಯಿಂದ ಹಿಡಿದು, ಕುದುರೆಮುಖ ಸರಹದ್ದಿನಿಂದ, ಮೇಕೆದಾಟು, ರಾಮನಗರ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಘಟ್ಟಗಳು … ಒಂದೇ ಎರಡೇ, ಎಲ್ಲವೂ ಸಾಹಸಕ್ಕೆಂದೇ ಇರುವ ಸ್ವರ್ಗಗಳು. ಸ್ನೇಹಿತರಾದ ಎಸ್ ಎಲ್ ಎನ್ ಸ್ವಾಮಿ ಮತ್ತು ನೋಮಿತೋ ಕಾಮ್ದಾರ್ ಸುಮಾರು ಇಪ್ಪತೈದು ವರ್ಷಗಳಿಂದಲೂ ಹೊನ್ನೇಮರಡುವಿನಲ್ಲಿ ನದಿನೀರಿನ ತೆಪ್ಪದಾಟ, ಕಯಕಿಂಗ್ ಮುಂತಾದ ಸಾಹಸ ಕ್ರೀಡೆಗಳನ್ನು ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಜನರಲ್ ತಿಮ್ಮಯ್ಯ ಅಡ್ವೆಂಚರ್ ಸ್ಪೋರ್ಟ್ಸ್ ಅಕಾಡೆಮಿ ಮೂರು ದಶಕಗಳಿಂದಲೂ ಕೆಲಸ ಮಾಡುತ್ತಿವೆ. ಹಿಂದೆ ನಾನು ಹೋಗುತ್ತಿದ್ದ ಸ್ಪಾರ್ಕ್ (SPAARK) ಸಂಸ್ಥೆ ಕೂಡ ಇತ್ತು. ಯುಕೆ ಮತ್ತು ಯುರೋಪಗಳ ಸಾಹಸಪಟುಗಳಿಗೆ ಭಾರತದ, ಹಿಮಾಲಯದ ನದಿಗಳು ಪರ್ವತಗಳು ಎಂದರೆ ಸಕ್ಕರೆಗೆ ಇರುವೆ ಹತ್ತಿದಂತೆ. ಹಾಗೆ ಅವರುಗಳು ಪರ್ವತ ಚಾರಣವನ್ನು ಮತ್ತು ಸಾಹಸ ಕ್ರೀಡೆಗಳನ್ನು ಭಾರತ ಮತ್ತು ಮತ್ತಿತರ ದೇಶಗಳಿಗೆ ಸಾಂಪ್ರದಾಯಕವಾಗಿ, ವೈಜ್ಞಾನಿಕವಾಗಿ ಪರಿಚಯಿಸಿದರು. ಉದಾಹರಣೆಗೆ, ೧೯೯೦ರ ದಶಕದಲ್ಲಿ ಇಂಗ್ಲೆಂಡಿನಿಂದ ಕರ್ನಾಟಕಕ್ಕೆ ಹೋದ ಜಾನ್ ಪೋಲ್ಲರ್ಡ್ ಎಂಬಾತ ದಾಂಡೇಲಿಯಲ್ಲಿ ನೆಲೆ ನಿಂತು, ಕಾಳಿ ನದಿಯನ್ನು ಮನೆ ಮಾಡಿಕೊಂಡು, ಜಂಗಲ್ ಲಾಜ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡು ವೈಟ್ ವಾಟರ್ ರಾಫ್ಟಿಂಗ್ ಪರಿಚಯಿಸಿದ. ಅಲ್ಲಿಂದ ಶುರುವಾದ ನೀರಿನ ಸಾಹಸಕ್ರೀಡೆಗಳು ದಿನದಿನಕ್ಕೂ ಹೆಚ್ಚಿವೆ. ಈಗ ಕರ್ನಾಟಕದ ಬೇರೆ ಬೇರೆ ಕಡೆ ಅಡ್ವೆಂಚರ್ ಸ್ಪೋರ್ಟ್ಸ್ ಸಂಸ್ಥೆಗಳಿವೆ, ಹಾಗೆ whitewater rafting/kayaking, paragliding, parasailing, rock climbing, parachute jumping, sky diving, angling, mountain biking, zorbing, base jumping, motorcross racing, BMX, hang gliding, ಮುಂತಾದ ಸಾಹಸಕ್ರೀಡೆಗಳ ತಾಣಗಳು, ಸಂಸ್ಥೆಗಳು ಇವೆ. ಆದರಿನ್ನೂ ಪಶ್ಚಿಮ ದೇಶಗಳಲ್ಲಿ ಇರುವಂತೆ ಸಮುದ್ರದಲ್ಲಿ ಸುರಕ್ಷಿತವಾಗಿ ಸರ್ಫಿಂಗ್ (surfing) ಮಾಡಲು ಅನುಕೂಲ/ಸಂದರ್ಭಗಳು ನನಗೆ ತಿಳಿದ ಮಟ್ಟಿಗೆ ಬಹಳಷ್ಟು ಇಲ್ಲ.

 

ಈಗ ಸುಮಾರು ಮಟ್ಟದ ಸಾಹಸ ಕ್ರೀಡೆಗಳು ಬಹಳಾ ಜನಪ್ರಿಯವಾಗಿ, ವಿವಿಧ ವಯಸ್ಸಿನ ಜನರು ಪಾಲ್ಗೊಳ್ಳುವಂಥದ್ದು. ನೂರರಿಂದ ಹಿಡಿದು ಸಾವಿರಾರು, ಅದು ಯಾಕೆ, ಲಕ್ಷಾಂತರ ರೂಪಾಯಿ ಕೊಟ್ಟು ಸಾಹಸದ ಅನುಭವ ಮತ್ತು ವೈಪುಣ್ಯವನ್ನು ಪಡೆಯುತ್ತಾರೆ. ಅನೇಕ ಯುವತಿ/ಯುವಕರು ಹಾತೊರೆದು ಪಾಲ್ಗೊಳ್ಳುವ ಈ ಕ್ರೀಡೆಗಳನ್ನು ನುರಿತ ಪಟುಗಳು ಮತ್ತು ತರಬೇತಿದಾರರು ಸಂಯೋಜಿಸುತ್ತಾರೆ. ಶಾಲಾಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಈಗ ಸಾಹಸಕ್ರೀಡೆಗಳು ಲಭ್ಯವಾಗಿವೆ, ಎಟುಕುವಂತಿದೆ, ಸುಲಭವಾಗಿದೆ, ಮತ್ತು ಎಂಜಾಯ್ ಮಾಡುವಂತಿದೆ. ಬೆಂಗಳೂರಿನ ಕೆಲ ಶಾಲೆಗಳಲ್ಲಿ ಹೊರಾಂಗಣ ಶಿಕ್ಷಣದ ಕುರಿತು ಈಗ ಪಾಠದ ಅಳವಡಿಕೆಯೂ ಆಗಿದೆ.

 

ಸಾಹಸ ಕ್ರೀಡೆಗಳ ಬಗ್ಗೆ ಸಾಮಾನ್ಯ ಜನರ ಗ್ರಹಿಕೆ, ಅರ್ಥವೆಂದರೆ ಥ್ರಿಲ್ಲೋ ಥ್ರಿಲ್ಲು. ಎಲ್ಲರಿಗೂ ಎದೆ ಬಡಿತ ಹೆಚ್ಚು; ಕೂಗಾಟ, ಕಿರುಚಾಟ ನಿಲ್ಲದೆ, ಎಡಬಿಡದ ಮನರಂಜನೆ ಪಡೆಯುವುದು ಸಾಹಸ ಕ್ರೀಡೆಗಳು ಎಂದು ಎಲ್ಲರ ಭಾವನೆ. ಮತ್ತೊಂದೆಡೆ ಸಾಹಸ ಕ್ರೀಡಾಳುಪಟುಗಳ ಬಗ್ಗೆ ಸಾಮಾನ್ಯ ಜನರಿಗೆ ತಿರಸ್ಕಾರವಿದೆ, ತಲೆ ಕೆಟ್ಟವರು ಎಂಬ ಭಾವನೆಯಿದೆ, ಹುಚ್ಚು ಅವರಿಗೆ ಎನ್ನುವ ನೋಟವಿದೆ, ಕೇಳಿ ಕೇಳಿ ದುಡ್ದು ಕೊಟ್ಟು ಹೋಗಿ ಸಾಯುತ್ತಾರೆ ಎನ್ನುವ ಅಭಿಪ್ರಾಯವೂ ಇದೆ. ಅಡ್ರಿನಲಿನ್ ರಶ್, ಥೂ ಎನ್ನುವ ಜನರೇ ಹೆಚ್ಚು.

 

ಇಲ್ಲಿ ಎಲ್ಲರಿಗೂ ನೆನಪಿರಲೇಬೇಕಾದ ವಿಷಯವೆಂದರೆ ಎಲ್ಲರೂ ಸಾಕಷ್ಟು ತರಬೇತಿ ಅಥವಾ ಮಾಹಿತಿ, ತಯ್ಯಾರಿ ಪಡೆದಿರಬೇಕು, ಇಲ್ಲವಾದರೆ ಅದು ಬರೀ ಹುಡುಗಾಟಿಕೆಯಾಗುತ್ತದೆ. ಅಪಾಯವುಂಟಾಗುತ್ತದೆ. “ಬರೀ ಥ್ರಿಲ್ಲಿಗಾಗಿ ಅಡ್ರಿನಲಿನ್ ರಶ್” ಎಂಬ ಕಣ್ಣ ಮುಂದಿನ ಪರದೆಯನ್ನು ನಾವು ಸರಿಸಿದಾಗ ಆ ಸಾಹಸ ಕ್ರೀಡಿಗಳ ಒಳಮನಸ್ಸು ನಮಗೆ ಅರ್ಥವಾಗುತ್ತದೆ.

 

ಉದಾಹರಣೆಗೆ, ಅತ್ತ ಕಡೆ ಇರುವ ಅತಿ ಸಾಹಸ ಕ್ರೀಡಿಗಳನ್ನ ಕೇಳಿ. “ಯಾಕ್ ಸ್ವಾಮಿ ದುರುಗುಟ್ ತೀರ? ಸಾಯೊ ಆಸೆ ಇದ್ರೆ ನಾವ್ಯಾಕೆ ಆ ಪಾಟಿ ದುಡ್ಡ ಸುರಿದು, ಎದ್ದು ಬಿದ್ದು ಕಷ್ಟದಿಂದ ಟ್ರೇನಿಂಗ ಮಾಡಿ, ಇನ್ನೂ ಅಷ್ಟು ದುಡ್ ಕೊಟ್ಟು ಆ ಪಾಟಿ ಪರಿಕರಗಳು, ಸಾಧನಗಳು, ಬಟ್ಟೆ ಬರಿ ಎಲ್ಲ ಹೊಂದಿಸ್ ಕೊಳ್ತೀವಿ? ಏನ ಹುಚ್ಚಾ ಬೆಪ್ಪಾ ನಮಗೆ! ನೋಡಿ ಸ್ವಾಮಿ, ನಾವಿರೋದೆ ಹೀಗೆ,” ಅಂತಾರೆ.

 

ಸಾಹಸ ಕ್ರೀಡೆಗಳು ಅಂದರೆ ಸಾಮಾನ್ಯಕ್ಕಿಂತಲೂ ಹೆಚ್ಚಿನ ತೀವ್ರತೆಯನ್ನು, ಎತ್ತರವನ್ನು, ತಯಾರಿಯನ್ನು, ವೇಗವನ್ನು, ಕುಶಲತೆಯನ್ನು, ತರಬೇತಿಯನ್ನು, ಮತ್ತು ದೈಹಿಕ ಕಸರತ್ತನ್ನು ಹೊಂದಿರುವ ಕ್ರೀಡೆಗಳು. ಅವು ಕ್ರೀಡಾಪಟುವಿಗೆ ಹೊಸ ಸವಾಲನ್ನು ಒಡ್ಡುತ್ತವೆ. ಬುಂಗೀ ಜಂಪಿಂಗ್ ಅಂತಹ ಹಳೆಯದಾದ ಅದರೂ ಅದನ್ನು ಇಷ್ಟಪಡುವ, ಹಕ್ಕಿಯಂತೆ ಪಕ್ಕಕ್ಕೆರಡು ರೆಕ್ಕೆಗಳನ್ನು ಜೋಡಿಸಿಕೊಂಡು ಅತಿ ಎತ್ತರದಿಂದ ಜೆಗಿದು ಹಾರಿ ಪ್ಯಾರಾಚುಟ್ ಬಿಚ್ಚಿ ಹೂವಂತೆ ನೆಲಕ್ಕಿಳಿಯುವ ಸಾಹಸಿಗಳಿದ್ದಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ Image result for extreme sportsಕ್ರೀಡಾಳು ಆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಅದಕ್ಕೆ ಬೇಕಾದ ವಿಶಿಷ್ಟ ಸಾಧನಗಳನ್ನು ಮತ್ತು ನಿರ್ದಿಷ್ಟ ಕುಶಲತೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಬಹಳ ಜವಾಬ್ದಾರಿಯಿಂದ ವರ್ತಿಸಬೇಕು. ಅವನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಿಸಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟದ್ದು ಅಲ್ಲವೇ. ಅಂತಹ ಸಾಹಸ ಕ್ರೀಡೆಯಲ್ಲಿ ಅದರ ಜೊತೆ ಇರುವ, ಬರುವ ಗಂಡಾಂತರವನ್ನು, ಅಪಾಯವನ್ನು, ಹಾನಿಯನ್ನು ಮತ್ತು ಕುತ್ತುಗಳನ್ನು ಕ್ರೀಡಾಳು ಕೂಲಂಕಶವಾಗಿ ಅಭ್ಯಸಿಸಿ, ಅವನ್ನು ಎದುರಿಸಲು ಮತ್ತು ಕ್ಷೇಮದಿಂದ ಆ ಸಾಹಸ ಕ್ರೀಡೆಯ ಅನುಭವವನ್ನು ಪಡೆದು, ಆನಂದವನ್ನು ಗಳಿಸಲು ಅದಕ್ಕೆ ಬೇಕಾದ ಸಮರ್ಪಕ ರೀತಿಯ ತಯಾರಿಯನ್ನೂ, ತರಬೇತಿಯನ್ನೂ ಪಡೆದಿರಬೇಕು.

 

ಸಾಹಸ ಕ್ರೀಡೆಗಳು ನಮ್ಮ ಜೀವನದಲ್ಲಿ, ಅಂದರೆ ಮಾನವರ ಜೀವನದಲ್ಲಿ ಬಹಳಷ್ಟು ಆದಿಯಿಂದಲೂ ಜೀವಂತವಾಗಿವೆ. ಬಹು ಹಿಂದಿನ ಕಾಲದಲ್ಲಿ ಜನರು ತೆಪ್ಪಗಳ ಮೇಲೆ ಕೂತು ನದಿಗಳ, ಸಮುದ್ರಗಳ ಸಂಚಾರವನ್ನು ಮಾಡುತ್ತಿದ್ದರು. ಎತ್ತರವಾದ ಪರ್ವತ ಪ್ರಾಂತ್ಯಗಳನ್ನು ಹತ್ತಿ, ನಡೆದು, ಆಳವಾದ ಗುಹೆಗಳನ್ನು ಕಂಡುಕೊಂಡು ಅವುಗಳಲ್ಲಿ ಜೀವನ ಮಾಡಿ ಕುರುಹುಗಳನ್ನೂ ಬಿಟ್ಟು ಹೋಗಿದ್ದಾರೆ. ನದಿಯಾಳದಲ್ಲಿ ಈಜಿದ್ದಾರೆ, ತೇಲಿದ್ದಾರೆ, ಎತ್ತರದ ಕಮರಿಗಳನ್ನು ಹತ್ತುವ, ಬೆಟ್ಟಗಳ ಮೈಯನ್ನು ಓತಿಕ್ಯಾತನಂತೆ ಹತ್ತುವ ಸಾಹಸಗಳನ್ನೂ ಮಾಡಿದ್ದಾರೆ. ಅದೇನೂ ಇತ್ತೀಚಿಗೆ ಜಾರಿಗೆ ಬಂದ ಹೊಸ ಅನುಭವವೇನೂ ಅಲ್ಲ.

 

ಆದರೆ, ೧೯೮೦ / ೧೯೯೦ರ ನಂತರ ಅಂತಹ ಸಾಹಸ ಕ್ರೀಡೆಗಳಲ್ಲಿ ಹೊಸ ಚಲನ ಉಂಟಾಗಿ, ಹೊಸ ಸಾಹಸ ಕ್ರೀಡೆಗಳು ಮತ್ತು ಸಾಧನಗಳು ಹುಟ್ಟಿಕೊಂಡು ಪ್ರಪಂಚದಾದ್ಯಂತಾ ಜನರು ಅಬ್ಬಾ ಇದೇನು ಸಾಹಸ ಎಂದು ನಿಬ್ಬೆರಗಾಗುವಂತೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಆಗಿದೆ. ಇದಕ್ಕೆ ನೂರಾರು ಟೆಲಿವಿಷನ್ ಚಾನೆಲ್ ಗಳು, ಸಾಹಸ ಕ್ರೀಡೆಗಳಿಗೆಂದೇ ಮೀಸಲಿರುವ ಗುಂಪುಗಳು, ಕ್ಲಬ್, ಪತ್ರಿಕೆಗಳು, ಮತ್ತು ಅಂತಹ ಗುಂಪುಗಳಿಗೆ, ಸಾಹಸ ಕ್ರೀಡಾ ಪಟುಗಳಿಗೆ ಉತ್ತೇಜನ ಕೊಡುವ ಮತ್ತು ಸಾಧನಗಳ ಆವಿಷ್ಕಾರಕ್ಕೆ, ಸಂಶೋಧನೆಗೆ, ಅವುಗಳ ಮಾರಾಟಕ್ಕೆ ಮುಂದೆ ಬಿದ್ದು ಹಣ ಸುರಿಯುತ್ತಿರುವ ನೂರಾರು ವ್ಯಾಪಾರೀ ಸಂಸ್ಥೆಗಳು. ೧೯೯೦ ರ ದಶಕದಲ್ಲಿ ಅಂತಹ ಹೊರಾಂಗಣ ಆಟಗಳ, ಚಟುವಟಿಕೆಗಳ ಮತ್ತು ಸಾಹಸ ಕ್ರೀಡೆಗಳಿಗೆ ಬೇಕಾದ ಸಾಧನಗಳನ್ನು ಮಾರುವ ವ್ಯಾಪಾರೀ ಸಂಸ್ಥೆಗಳು ಕೆಲವೇ ಇದ್ದವು. ಈಗ ಎಲ್ಲೆಲ್ಲೂ ಇವೆ.

 

ನಮ್ಮ ಈಗಿನ ಕಾಲದಲ್ಲಿ ಸಾಹಸ ಕ್ರೀಡೆಗಳ ತವರಾದ ಮತ್ತು ಎಲ್ಲರೂ ಹೋಗಿ ತರಬೇತಿ ಪಡೆಯುವ, ಹಾಗೂ ಅತ್ಯಂತ ಸುರಕ್ಷಿತವಾಗಿ ಅಂತಹ ಕ್ರೀಡೆಗಳನ್ನು ಸಂಯೋಜಿಸಿ, ಸಂಭಾಳಿಸುವ ಪಶ್ಚಿಮ ದೇಶಗಳಲ್ಲಿ ಕೆಲ ಸಾಹಸ ಕ್ರೀಡೆಗಳಿಗೆ ಮಾತ್ರ ಮಕ್ಕಳನ್ನು ಕಳಿಸಲು ಮತ್ತು ಅವರು ಕಲಿಯಲು ಅನುಮತಿ ಇದೆ.

 

ಅದೇ ಸಾಹಸ ಕ್ರೀಡೆಗಳ ಮತ್ತೊಂದು ಭಾಗವಾದ ಅತಿಸಾಹಸ ಕ್ರೀಡೆಗಳಿಗೆ ಮಕ್ಕಳ ಪ್ರವೇಶವಿಲ್ಲ. ಈ ಒಂದು ವಿಭಜನೆಯೇ ಆ ಎರಡೂ ಕ್ರೀಡೆಗಳ ಬಗ್ಗೆ ಸೂಚನೆ ನೀಡುತ್ತವೆ. ಒಂದು, ಸುಮಾರು ಮಟ್ಟದ ಅಪಾಯವನ್ನು, ಹಾನಿಯನ್ನು, ಗಂಡಾಂತರವನ್ನೂ ಸುಮಾರು ಮಟ್ಟದ ತರಬೇತಿ ಅಥವಾ ತಯಾರಿಯನ್ನು ಹೊಂದಿದ್ದರೆ (ಉದಾಹರಣೆಗೆ, ಸ್ಕೀಯಿಂಗ್); ಮತ್ತೊಂದು ಲೆಕ್ಕಾಚಾರ ತಪ್ಪದೆ, ತೀವ್ರವಾಗಿ ತರಬೇತಿ ಪಡೆದು ಮತ್ತು ಹುಡುಗಾಟ ಆಡದೆ ಬಹಳಾ ಜಾಗರೂಕತೆಯಿಂದ, ಕೆಲವರು ಮಾತ್ರ ತಮ್ಮ ನಿಪುಣ್ಯತೆಯಿಂದ, ಏಕಲವ್ಯನ ಧ್ಯಾನದಿಂದ, ಅತ್ಯಂತ ಜಾಗರೂಕರಾಗಿ ಕೈಗೊಳುವ ಕ್ರೀಡೆ. ಉದಾಹರಣೆಗೆ, ಸ್ಕೈ ಡೈವಿಂಗ್ (sky diving). ಬೋಧಕರು “ಪರವಾಗಿಲ್ಲ, ತಮ್ಮ ವಿದ್ಯಾರ್ಥಿ ಆಕಾಶದಿಂದ ನೆಗೆದು, ಹಾರಾಡಿ, ಗಾಳಿ ಕೊಡೆಯನ್ನು ಬಿಚ್ಚಿ ಸುಸೂತ್ರವಾಗಿ, ಕ್ಷೇಮವಾಗಿ ಭೂಮಿಯ ಮೇಲೆ ಕಾಲಿಟ್ಟು ತಲುಪುತ್ತಾರೆ, ಅಷ್ಟು ಆತ್ಮ ವಿಶ್ವಾಸ ಮತ್ತು ಅಂತಹ ಸಾಹಸಕ್ಕೆ ಬೇಕೇ ಬೇಕಾದ  ಸಂಪೂರ್ಣ ತರಬೇತಿಯನ್ನು  ಅವರು ಪೂರ್ತಿಯಾಗಿ ಪಡೆದಿದ್ದಾರೆ” ಎಂದು ಖಚಿತವಾಗಿ ಪ್ರಮಾಣಿಸುವ ತನಕ ವಿದ್ಯಾರ್ಥಿ ಆಕಾಶ ನೆಗೆತದಲ್ಲಿ ಪಾಲ್ಗೊಳ್ಳುವಂತಿಲ್ಲ.

 

ಅತಿ ಸಾಹಸ ಕ್ರೀಡೆಗಳಲ್ಲಿ (extreme sports) ಭಾಗವಹಿಸುವವರು ನಿರ್ದಿಷ್ಟ ಗುಂಪಿಗೆ ಸೇರಿದ ಜನ. ಸುಮ್ಮನೆ ಹುಚ್ಚು ಹುಚ್ಚಾಗಿ ಥ್ರಿಲ್ ಗೋಸ್ಕರ ಎಂದು ಹುಡುಗಾಟದಿಂದ ಜೀವಿಸುವ ಮಂದಿ ಅವರಲ್ಲ. ಅಪಾಯವನ್ನು ಜಾಗರೂಕತೆಯಿಂದ ಅಳೆಯುವ ಅವರುಗಳು ಹೇಳುವಂತೆ ಅತಿ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ಬಹಳಷ್ಟು ತರಬೇತಿಯ ಜೊತೆ ಮಾನಸಿಕ ಸಿದ್ದತೆಯೂ ಬೇಕು. ಮೊತ್ತಮೊದಲಾಗಿ ತಾನು ಏಕೆ ಈ ರೀತಿಯ ಸಾಹಸದಲ್ಲಿ ತೊಡಗಿದ್ದೀನಿ ಎಂಬುದರ ಬಗ್ಗೆ ನಿರ್ದಿಷ್ಟವಾದ, ಖಚಿತವಾದ ಅರ್ಥ (meaningfulness) ಸಿಕ್ಕಬೇಕು, ಅವರನ್ನು ಅವರು ಚೆನ್ನಾಗಿ ಬಹಳ ಚೆನ್ನಾಗಿ ಅರಿತಿರಬೇಕು (self-awareness). ಅವರುಗಳು, ತಾನು ಕೈಗೊಳ್ಳುವ ಈ ಸಾಹಸದಲ್ಲಿ ಏನೆಲ್ಲಾ ಅಡಗಿದೆ, ಅದಕ್ಕೆ ಜೊತೆಯಾಗುವ ನನ್ನ ಮನಸ್ಸು ಹೇಗಿದೆ, ನನ್ನ ಭಾವನೆಗಳು, Image result for yogaನಂಬಿಕೆಗಳು, ಜೀವನವನ್ನು ತಾನು ನೋಡುವ ದೃಷ್ಟಿ ಯಾವುದು ಎಂದೆಲ್ಲ ಮನಸ್ಸಿನ ಆಳವನ್ನು ಹೊಕ್ಕು ಪದರ ಪದರವಾಗಿ “ನಾನು” ಎನ್ನುವುದನ್ನು ಬಿಚ್ಚಿ ಆತ್ಮಾವಲೋಕನ (exploring the “I and Me”, introspection) ಮಾಡಿಕೊಳ್ಳುತ್ತಾರೆ. ಆ ಆತ್ಮಾವಲೋಕನದಲ್ಲಿ ಅವರಿಗೆ ಅನೇಕ ಉತ್ತರಗಳು ಸಿಕ್ಕುತ್ತವೆ. ವರ್ಷಗಳ ಕಾಲ ತಮ್ಮ ಸಾಹಸ ಕ್ರೀಡೆಯ ಬೆಗ್ಗೆ ದ್ಯಾನಿಸುವ, ಅವರು ಮಾಡುವ ಆ ತಪಸ್ಸಿನ ಘಟ್ಟಗಳಲ್ಲಿ ಅವರು ಯೋಗಿಗಳಾಗುತ್ತಾರೆ, ದುರ್ವ್ಯಸನಗಳನ್ನು ಬಿಡುತ್ತಾರೆ, ಯೋಗ, ಧ್ಯಾನ, ಮುಂತಾದುವುದರಲ್ಲಿ ಕಠಿಣವಾಗಿ ತೊಡಗುತ್ತಾರೆ. ಕಷ್ಟಪಟ್ಟು ದುಡಿದು ಹಣವನ್ನು ಸಂಗ್ರಹಿಸಿ ತಮ್ಮ ತರಬೇತಿಗೆ ಬಳಸುತ್ತಾರೆ. ತಪಸ್ಸು ಮಾಡುತ್ತಾ ತಮ್ಮ ಭಯವನ್ನು ಗೆಲ್ಲುತ್ತಾರೆ, ಗೆಲುವು ಸೋಲು ಶಾಶ್ವತವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸ್ವಶಿಸ್ತಿನಿಂದ, ಗಟ್ಟಿ ಮನಸ್ಕರಾಗುತ್ತಾರೆ. ಪೂರ್ಣ ಮನಸ್ಸಿನಿಂದ “ನಿನ್ನ ಕೆಲಸವನ್ನು, ನೀನು ನಂಬಿರುವುದನ್ನು, ನಿನ್ನ ಪೂರ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಡು” ಅನ್ನುವ ತತ್ವವನ್ನು ಜಾರಿಗೊಳಿಸುತ್ತಾರೆ. ತಾನು ಏನನ್ನೋ ಗೆಲ್ಲಲು ಹೊರಟಿಲ್ಲ; ಕಲಿಯಲು, ಪರಿಸರದೊಂದಿಗೆ ಒಮ್ಮತದಿಂದ ಜೀವಿಸಲು, ಈ ದೊಡ್ಡ ಜೀವ ಜಾಲದಲ್ಲಿ ನಾನು ತೃಣ ಮಾತ್ರ ಎನ್ನುವ ತತ್ವವನ್ನು ಅನುಭವದಿಂದ ಕಲಿಯುತ್ತಾರೆ. ವಿಶ್ವ ಪ್ರಕೃತಿಯ ಹಿರಿದಾದ ಚಿತ್ರದಲ್ಲಿ ತಾನು ಅಲ್ಪ ಮಾತ್ರ, ತನ್ನನ್ನು ಮೀರಿ ಮತ್ತೇನೋ ಶಕ್ತಿ ಇದೆ ಎಂದು ಅರಿಯುತ್ತಾರೆ.  ಒಂದು ರೀತಿಯಲ್ಲಿ ಅವರು ತತ್ವ ಜ್ಞಾನಿಗಳು, ಆಳವಾದ ಯೋಗಿಗಳು. ನಿಮಗೆ ಅಂತಹವರ ಬಗ್ಗೆ, ಅವರ ಅತಿ ಸಾಹಸ ಕ್ರೀಡೆಗಳ ಬಗ್ಗೆ, ಅಂತಹವರ ಒಳಮನಸ್ಸಿನ ಮನಃಶಾಸ್ತ್ರದ ತಿರುಳನ್ನು ತಿಳಿಯಬೇಕಾದರೆ “Transcendence” ಎಂಬ ಚಿಕ್ಕ ಒಂದು ಘಂಟೆ ಅವಧಿಯ ಡಾಕ್ಯುಮೆಂಟರಿಯನ್ನು ನೋಡಬಹುದು. (“Transcendence” ಕಿರು ಸಾಕ್ಷ್ಯಚಿತ್ರವನ್ನು ಯೂ ಟ್ಯೂಬ್ ನಲ್ಲಿ ನೋಡಲು ಈ ಕೊಂಡಿ ಬಳಸಿ: http://youtu.be/K9J0tgQ_dBQ , http://youtu.be/U_mvzaTbnqA) ಎರಿಕ್ ಬ್ರ್ಯಮೆರ್ ಅನ್ನುವವರು ತಮ್ಮ ಸಂಶೋಧನೆಯಲ್ಲಿ ವಿಶಿಷ್ಟ ಸಂಶೋಧನಾ ವಿಧಾನವನ್ನು ಅಳವಡಿಸಿ ಕೆಲ ಅತಿಸಾಹಸ ಕ್ರೀಡಾಳುಗಳನ್ನು ಮಾತನಾಡಿಸಿ ಮನೋಶಾಸ್ತ್ರದ ವಿಭಾಗದಲ್ಲಿ ಪ್ರಕಟಪಡಿಸಿರುವ ಸಂಶೋಧನೆಯನ್ನು ಆಧರಿಸಿದ ಆ ಡಾಕ್ಯುಮೆಂಟರಿಯನ್ನು ನ್ಯೂಸಿಲ್ಯಾಂಡ್ ನವರು ಸಿದ್ಧಪಡಿಸಿದ್ದಾರೆ. ಎರಿಕ್ ಅವರು ಪ್ರತಿಪಾದಿಸಿರುವಂತೆ ಮಾನವನ ಹೊರಗ್ರಹಿಕೆಗೆ ಮೀರಿದ ಕೆಲ ಅತ್ಯಂತ ಆಳ ಅನುಭವಗಳು ಕೇವಲ ಒಳಜಾಗೃತ ಮನಸ್ಸಿಗೆ ಮಾತ್ರ ತಟ್ಟಿ ಅವು ಅನುಭೂತಿಯ ಅಭೂತಪೂರ್ವ ಅನುಭವಗಳಾಗುತ್ತವೆ. ಅಂದರೆ ಒಂದು ರೀತಿಯ ಧ್ಯಾನ. ಹಾಗೆ ಅತಿಸಾಹಸ ಕ್ರೀಡಿಗಳ ಮನಸ್ಸು ಕೂಡ.

 

ಎರಿಕ್ ಹೇಳುವಂತೆ ಸಾಹಸ ಮತ್ತು ಅತಿಸಾಹಸ ಕ್ರೀಡೆಗಳಲ್ಲಿ ಸಮರ್ಪಕವಾಗಿ ಭಾಗವಹಿಸುವವರಿಗೆ ಮಾನಸಿಕ ಒತ್ತಡ, ಆತಂಕ, ಭಯಗಳು, ಖಿನ್ನತೆ ಮುಂತಾದ ಮಾನಸಿಕ ಖಾಯಿಲೆಗಳ ಕಾಟ ಅಷ್ಟೊಂದು ಇಲ್ಲ, ಹಾಗೂ ದೈಹಿಕವಾಗಂತೂ ಅವರು ಸದಾ ವ್ಯಾಯಾಮ, ಕಸರತ್ತು ನಡೆಸಿ ಪೂರ್ಣಪ್ರಮಾಣದಲ್ಲಿ ಲಾಭ ಪಡೆಯುತ್ತಾರೆ.

 

ತಮ್ಮ ಒಳಮನಸ್ಸಿನ ಹೆದರಿಕೆಯನ್ನು, ಭಯವನ್ನು ಮೀರಿ ಅದನ್ನು ಗೆದ್ದು, ಅಪಾಯದ ಮಟ್ಟವನ್ನು, ತೀವ್ರ ಹಾನಿಯನ್ನೂ (ಜೀವ ಹೋಗುತ್ತದೆ) ಸಾಕಷ್ಟು ಅಳೆದು, ಅಂದಾಜು ಮಾಡಿ ನಿರ್ಭಯದಿಂದ ಅತಿ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವ ಕೆಲವೇ ಮಂದಿ ನಿಷ್ಣಾತರು ಅಂತಹ ತಮಗೆ ಪ್ರಿಯವಾದ ಸುಲಭವಾಗಿ ಕೈಗೆಟುಕದ ಆ ಕ್ರೀಡೆಗಳನ್ನು ಜೋಪಾನದಿಂದ ಕಾಪಾಡುತ್ತಿದ್ದಾರೆ, ಅವುಗಳ ಬಗ್ಗೆ ಮತ್ತು ಅವರ ಬಗ್ಗೆ ಇರುವ, ಬರುವ ನೂರಾರು ಸಂದೇಹಗಳನ್ನೂ, ಆಕ್ಷೇಪಣೆಗಳನ್ನು, ಬೆಟ್ಟು ಮಾಡುವ ಜನರನ್ನು ಅವರುಗಳು ಒಬ್ಬೊಬ್ಬರೇ ಎದುರಿಸಿ ನಿಂತು ಆ ಕ್ರೀಡೆಗಳನ್ನು ಪೋಷಿಸುತ್ತಿದ್ದಾರೆ. ಅವುಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಗೆ ಸಹಾಯ ಮಾಡುತ್ತಿದ್ದಾರೆ.

 

ಭಾರತದ ಕೆಲ ರಾಜ್ಯಗಳ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಈಗೀಗ ಕ್ರೀಡಾ ಮನಃಶಾಸ್ತ್ರ ವಿಭಾಗಗಳು ತಲೆಯೆತ್ತಿವೆ. ಕ್ರೀಡೆಗಳನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿ ಅವುಗಳ ಹಿರಿಮೆಯನ್ನು, ಆರೋಗ್ಯ ಲಾಭವನ್ನು, ಸಂಶೋಧನೆ ಮಾಡಲು ಇರುವ ಬೇಕಾದಷ್ಟು ವಿಚಾರಗಳನ್ನೂ ಈಗ ಮಾನ್ಯ ಮಾಡಲಾಗುತ್ತಿದೆ. ಅವುಗಳಲ್ಲಿ ಮೆಲ್ಲಮೆಲ್ಲನೆ ಸಾಹಸ ಕ್ರೀಡೆಗಳೂ ಸೇರಿಕೊಳ್ಳುತ್ತಿವೆ. ಅನೇಕ ಖಾಸಗಿ ಶಾಲೆಗಳಲ್ಲಿ ಹೊರಾಂಗಣ ಶಿಕ್ಷಣ ಮತ್ತು ಕ್ರೀಡೆಗಳನ್ನು ಈಗ ಬಹಳ ವೈಜ್ಞಾನಿಕವಾಗಿ ಸೇರಿಸಲ್ಪಟ್ಟಿವೆ. ದೈಹಿಕ ಶಿಕ್ಷಣವೆಂದರೆ ಹಿಂದೆ ನಮ್ಮ ಕಾಲದಲ್ಲಿ ಇದ್ದಂತೆ ಹೆಣ್ಣು ಮಕ್ಕಳು ಭಾಗವಹಿಸದ ವಾರಕ್ಕೊಂದು ಪಿ. ಟಿ. ಪಿರಿಯಡ್ ಅಲ್ಲ – ಅದಕ್ಕೊಂದು ಸರಿಯಾದ ಬೆಲೆ ಸಿಕ್ಕಿದೆ. ಒಳ್ಳೆಯ ದಿಕ್ಕಿನಲ್ಲಿ ಪಾಶ್ಚಾತ್ಯ ದೇಶಗಳ ಪ್ರಭಾವ ಸಾಕಷ್ಟು ಆಗಿದೆ.

 

ಇತ್ತ ಈಗಿನ ನಮ್ಮೂರು ಯುಕೆ ದೇಶದಲ್ಲಿ ಕೂಡ ಹಿಂದಿನಿಂದಲೂ ಸುಮಾರು ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಸಾಹಸ ಕ್ರೀಡೆಗಳ ವಿಷಯದಲ್ಲಿ ಡಿಪ್ಲೋಮಾ, ಡಿಗ್ರಿ, ಸಂಶೋಧನಾ ಡಿಗ್ರಿ ಮುಂತಾದವನ್ನು ಓದಲು ಅವಕಾಶ ಮಾಡಿಕೊಟ್ಟಿವೆ. ಪಕ್ಕದ ಯುರೋಪ್ ನಲ್ಲಿ ಇದನ್ನೂ ಮೀರಿ ಸಾಹಸ ಕ್ರೀಡೆಗಳ ಬಗೆಗಿನ ಸಂಶೋಧನೆಯನ್ನು ಮಾನವರ ತತ್ವ ಜ್ಞಾನಕ್ಕೆ, ಜಿಜ್ಞಾಸೆಗೆ, ನಿದ್ದೆಯ ಬಗ್ಗೆ ಸಂಶೋಧನೆಗೆ, ಪ್ರಕೃತಿಯ ಹಿರಿಮೆಗೆ ಮತ್ತಷ್ಟು ಆಳವಾಗಿ ಅಗೆದು, ಬಗೆದು, ಮಾನವರ ಮನಸ್ಸಿನಲ್ಲಿ ಮಿದುಳಿನಲ್ಲಿ ಸಾಹಸದ ಬಗ್ಗೆ ಏನೆಲ್ಲಾ ತುಂಬಿದೆ, ಎಂದೆಲ್ಲಾ ಏನೇನಕ್ಕೂ ಅಳವಡಿಸಿಕೊಂಡು ಎಲ್ಲರಿಗಿಂತಲೂ ಮುಂದೆ ಸಾಗಿದ್ದಾರೆ.

 

ಒಟ್ಟಿನಲ್ಲಿ ಸಾಹಸವೆಂದರೆ “ಅಡ್ರಿನಲಿನ್ ರಶ್” ಎಂದು ಥೂ ಅನಬೇಡಿ, ನಿಮ್ಮ ಮಕ್ಕಳು ಸಾಹಸ ಕ್ರೀಡೆಗೆ/ತರಬೇತಿಗೆ ಸೇರಿಸಮ್ಮಾ/ಅಪ್ಪಾ ಎಂದರೆ ಬೇಡವೇ/ಬೇಡವೋ ದಡ್ಡ ಎಂದು ಬೇಸರ ಪಡಬೇಡಿ, ಹುಚ್ಚು ಬೆಪ್ಪು ಎನ ಬೇಡಿ, ಹಣ ಕೊಟ್ಟು ಜೀವ ಕಳೆದುಕೊಳ್ಳಲು ಹೋಗುತ್ತಾರೆ ಎಂದು ದೂಷಿಸಬೇಡಿ, ಸರಿಯಾದ ಮಾಹಿತಿ ಪಡೆದು ಅವನ್ನು ಅರ್ಥ ಮಾಡಿಕೊಳ್ಳಿ, ಎಂದು ಆ ಸಂಸ್ಥೆಗಳು, ಸಾಹಸಿಗರು, ಕ್ರೀಡಾಪಟುಗಳು, ತರಬೇತಿದಾರರು ಎಲ್ಲರೂ ಹೇಳುತ್ತಿದ್ದಾರೆ. ಸಾಹಸ ಕ್ರೀಡೆಗಳಿಗೆ ನಾವಿನ್ನೂ ಮಾನ್ಯತೆ ಕೊಡಬೇಕಿದೆ, ಅವುಗಳಿಂದ ನಮಗಾಗುವ ಒಳ್ಳೆಯದನ್ನು ಕುರಿತು ಇನ್ನೂ ಹೆಚ್ಚು ಮಾತನಾಡಬೇಕಿದೆ. ಪೋಷಿಸಬೇಕಿದೆ. ಸಕಾರಾತ್ಮಕ ರೀತಿಯಲ್ಲಿ ಸಲಹಬೇಕಿದೆ.

-ವಿನತೆ ಶರ್ಮ