ಹೊರಾಂಗಣದಲ್ಲಿ ಹೆಣ್ಣು – ಕರ್ನಾಟಕದ ನೊಮಿತೋ ಕಾಂದಾರ್ – ಡಾ. ವಿನತೆ ಶರ್ಮ

Nomito 1
ಮುಖಕ್ಕೆ ಬೂದಿ ಕಪ್ಪು, ಆರೋಗ್ಯಕ್ಕೆ ಬಹಳ ಒಪ್ಪು

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹೊರಾಂಗಣ ಕ್ರೀಡೆಗಳು, ಮನರಂಜನೆ ಮತ್ತು ಹೊರಾಂಗಣ ಕಲಿಕೆ ವಿಷಯಗಳ ಬಗ್ಗೆ ಹೆಚ್ಚೆಚ್ಚು ಆಸಕ್ತಿ ಮೂಡುತ್ತಿದೆ. ಈ ಹೊರಾಂಗಣ ಮನರಂಜನೆ ಮತ್ತು ಸಾಹಸ ಚಟುವಟಿಕೆಗಳು ಸಾಮಾನ್ಯ, ಮಧ್ಯಮವರ್ಗದ ಜನರಿಂದ ಹಿಡಿದು ಶ್ರೀಮಂತರಲ್ಲೂ ಸಾಕಷ್ಟು ಕುತೂಹಲವನ್ನು ಕೆರಳಿಸಿ ಅವರನ್ನು ಹೊರಾಂಗಣ ಮತ್ತು ಸಾಹಸ ಕ್ರೀಡೆಗಳತ್ತ ಆಕರ್ಷಿಸುತ್ತಿವೆ. ಸಾಹಸ ಮತ್ತು ಅತಿ ಸಾಹಸ ಕ್ರೀಡೆಗಳ ಬಗ್ಗೆ ನಾನು ಈ ಜಾಲ ಜಗುಲಿಯಲ್ಲಿ ಹಿಂದೆ ಬರೆದಿದ್ದೆ. ಈಗ ಬರೆಯುತ್ತಿರುವುದು ಹೊರಾಂಗಣ ಚಟುವಟಿಕೆಗಳು ಮತ್ತು ಪರಿಸರ ಕಲಿಕೆ ಜನಸಾಮಾನ್ಯರಲ್ಲಿ ಎಂತಹ ಬದಲಾವಣೆಯನ್ನು ಉಂಟು ಮಾಡಬಹುದು ಎಂದು. ಅದರಲ್ಲೂ, “ಹೆಣ್ಣು” ಎಂಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಣೆಪಟ್ಟಿಯನ್ನು ಪಕ್ಕಕ್ಕೆ ಸರಿಸಿ ಹೊರಾಂಗಣ ಕಲಿಕಾ, ಸಾಹಸ ಕ್ರೀಡೆಗಳ ಕ್ಷೇತ್ರದಲ್ಲಿ ಸಾವಿರಾರು ಹೆಣ್ಣು ಮಕ್ಕಳಿಗೆ, ತಾಯಂದಿರಿಗೆ, ಅಜ್ಜಿಯರಿಗೆ ಸ್ಪೂರ್ತಿಯಾಗಿರುವ ನೊಮಿತೊ ಕಾಂದಾರ್ ಅವರ ಬಗ್ಗೆ .

೧೯೯೦ ರ ದಶಕದಲ್ಲೇ ಬೆಂಗಳೂರಿನ ಎಸ್ ಎಲ್ ಎನ್ ಸ್ವಾಮಿ ತಮ್ಮ ದಿ ಅಡ್ವೆಂಚರರ್ಸ್ (The Adventurers, ೧೪೨, ೬೯ ನೇ ಕ್ರಾಸ್, ಐದನೇ ಬ್ಲಾಕ್, ರಾಜಾಜಿನಗರ) ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸಿ, ಅಂತಹ ಚಟುವಟಿಕೆಗಳನ್ನು ಮತ್ತು ಪರಿಸರ ಕಲಿಕೆಯನ್ನು ಕರ್ನಾಟಕದಲ್ಲಿ ಎಲ್ಲರ ಕೈಗೂ ಎಟುಕುವಂತೆ ಮಾಡಿದ ಮೊದಲಿಗರ ಪರಂಪರೆಗೆ ಸೇರಿದವರು. ನಂತರ ಅವರ ಜೊತೆ ಸೇರಿ ದಿ ಅಡ್ವೆಂಚರರ್ಸ್ ಸಂಸ್ಥೆಯನ್ನು ಬಲಪಡಿಸಿದ ನೊಮಿತೊ ಕಾಂದಾರ್ ಎಂಬ ಸಾಹಸಿ ಹೆಣ್ಣು ಸಂಸ್ಥೆಯ ಹೊರಾಂಗಣ ಚಟುವಟಿಕೆಗಳು ಮತ್ತು ಕಲಿಕೆಯ ಸಹ-ಮುಂದಾಳತ್ವವನ್ನು ವಹಿಸಿಕೊಂಡರು. ಹೋದ ತಿಂಗಳು ನಾನು ನೊಮಿತೊ ಜೊತೆ ದೂರವಾಣಿಯಲ್ಲಿ ಮಾತನಾಡಿ ಆಕೆಯ ಸಂದರ್ಶನವನ್ನು ಮಾಡಿದ್ದೆ. ಅದರಿಂದ ಹೊಮ್ಮಿರುವ ಲೇಖನ ಇಗೋ ನಿಮ್ಮ ಮುಂದಿದೆ.

೧೯೮೦-೯೦ ರ ದಶಕಗಳಲ್ಲಿ ಎಸ್ ಎಲ್ ಎನ್ ಸ್ವಾಮಿ ಅನುಭವ ಕಲಿಕೆ, ಪರಿಸರ ಶಿಕ್ಷಣ, ಹೊರಾಂಗಣ ಕಲಿಕೆ, ಪರಿಸರದಿಂದ ಮನುಷ್ಯ ಏನನ್ನು, ಯಾಕೆ ಕಲಿಯಬೇಕು ಎಂದೆಲ್ಲಾ ಮಾತನಾಡುತ್ತಾ, ಪಶ್ಚಿಮ ಘಟ್ಟಗಳನ್ನು ಸುತ್ತುತ್ತಾ, ಪರಿಸರ ಸಂಬಂಧಿತ ಚಟುವಟಿಕೆಗಳನ್ನು ಸಾಮಾನ್ಯ ಜನರಿಗೆ, ಶಾಲಾ ಮಕ್ಕಳಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದ ಕಾಲ. ನಗರ ಪ್ರದೇಶಗಳ ಮಕ್ಕಳು, ಅವರ ಕುಟುಂಬಗಳು ಪ್ರಕೃತಿಯಿಂದ, ಹೊರಾಂಗಣ ಪರಿಸರದಿಂದ ಕ್ರಮೇಣ ದೂರವಾಗುತ್ತಿದ್ದ ದಿನಗಳು ಅವು. ಮನುಷ್ಯ ಪರಿಸರಕ್ಕೆ ಇನ್ನೂ ಹತ್ತಿರವಾಗಬೇಕು, ದೂರವಲ್ಲ ಎಂದು ಸ್ವಾಮಿ ಆಗ ಮಲೆನಾಡಿನ ಹೊನ್ನೆ ಮರಡು (ಳು) ಎಂಬ ಸ್ಥಳದಲ್ಲಿ ಕಾರ್ಯಕ್ಷೇತ್ರವನ್ನು ಆರಂಭಿಸಿದ್ದರು. ಶಾಲಾ ಮಕ್ಕಳನ್ನು ಮತ್ತು ಯುವಜನತೆಯನ್ನು ಆ ಕಣ್ಮನ ಸೆಳೆಯುವ ಪ್ರಶಾಂತವಾದ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಪ್ರದೇಶಕ್ಕೆ ಕರೆತಂದು ಅವರಿಗೆ ಕಯಾಕಿಂಗ್, ತೆಪ್ಪದಾಟ, ಕೊರಕಲ್, ಈಜುವುದು, ಕಲ್ಲೇರು (rock climbing), ಬೆಟ್ಟ ಪರ್ವತಗಳ ಚಾರಣಗಳು ಮುಂತಾದ ಹೊರಾಂಗಣ ಮತ್ತು ಸಾಹಸ ಕ್ರೀಡೆಗಳನ್ನು ಪರಿಚಯಿಸಿದರು. ಈ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳು, ಉಡುಪು, ಮತ್ತಿತರ ಅಗತ್ಯ ಸಾಧನಗಳ ಬಗ್ಗೆ, ತಮ್ಮ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸುವ ದಾರಿಗಳ ಬಗ್ಗೆ ಶೋಧನೆ ನಡೆಸಿದ್ದರು. ಕಾರ್ಯಕ್ರಮ ಸಂಯೋಜಕಿಯಾಗಿ ಬಂದು ನಿಂತವರು ನೊಮಿತೊ. ಆಗ ಮನೆಯಲ್ಲಿ ತನ್ನ ಪರಿಸರ ಪ್ರೀತಿಯನ್ನು, ಅನುಭವ ಕಲಿಕೆಯನ್ನು, ವಿಭಿನ್ನ ಆಲೋಚನೆಗಳನ್ನು, ಜೀವನ ದೃಷ್ಟಿಯನ್ನು ಹೆತ್ತವರಿಗೆ, ಒಡಹುಟ್ಟಿದವರಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಅವರ ವಿರೋಧದಿಂದ ನನಗೂ ಕಷ್ಟವಾಗುತ್ತಿತ್ತು ಎನ್ನುವ ನೊಮಿತೊಗೆ ಬೇಕಿದ್ದ ನೆಲೆಯನ್ನು ಅಡ್ವೆಂಚರರ್ಸ್ ಸಂಸ್ಥೆ ಒದಗಿಸಿದ್ದು “ನನ್ನ ಅದೃಷ್ಟ” ಎಂದು ನೊಮಿತೊ ನೆನಪಿಸಿಕೊಳ್ಳುತ್ತಾರೆ.
ಮೂವತೈದು ವರ್ಷಗಳ ಹಿಂದೆ ಹೊರಾಂಗಣ ಮತ್ತು ಪರಿಸರ ಶಿಕ್ಷಣವನ್ನು ಕರ್ನಾಟಕದ ಮತ್ತು ಭಾರತದ ಜನಸಾಮಾನ್ಯರಿಗೆ ತಲುಪಿಸಬೇಕು ಎಂಬುದು The Adventurers ಸಂಸ್ಥೆಯ ಗುರಿಯಾಗಿತ್ತು. ಈಗಲೂ ನಮ್ಮ ಆ ಗುರಿಯನ್ನಿಟ್ಟುಕೊಂಡೇ ನಾವು ಕೆಲಸಮಾಡುತ್ತಿದ್ದೀವಿ ಎಂದು ಮಾತನ್ನಾರಂಭಿಸಿದ ನೊಮಿತೊ ಹೇಳಿದ್ದು “ಈಗ ವಿಶೇಷವೆಂದರೆ ನಮ್ಮಲ್ಲಿಗೆ ಬರುವವರಲ್ಲಿ ಶೇಕಡಾ ೬೫ ರಷ್ಟು ಮಹಿಳೆಯರು ಮತ್ತು ಹೆಣ್ಣು ಮಕ್ಕಳು.”

ತಕ್ಷಣವೇ ನಾನು ಅದನ್ನು ಸ್ವಲ್ಪ ವಿವರಿಸಿ ಎಂದೆ. ನೊಮಿತೋರ ಪರಿಸರ ಕಲಿಕೆ, ಅನುಭಾವಿ ಕಥೆ ಅನೇಕ ಉಪಕಥೆಗಳ ಜೊತೆ ತೆಕ್ಕೆ ಹಾಕಿಕೊಂಡಿತು.

ನೊಮಿತೋ ಸಂಸ್ಥೆಗೆ ಬಂದ ಕಾಲದಲ್ಲಿ ಹೊನ್ನೆ ಮರಡುವಿನ ಕಾರ್ಯಕ್ಷೇತ್ರಕ್ಕೆ ಬರುವವರಲ್ಲಿ ಗಂಡಸರ, ಶಾಲಾ ಗಂಡು ಮಕ್ಕಳ ಗುಂಪುಗಳೇ ಹೆಚ್ಚಿದ್ದವು. ಆನಂತರದ ಎರಡು ದಶಕಗಳಲ್ಲಿ ಎಲ್ಲಾ ವಯಸ್ಸಿನ ಗಂಡು ಮತ್ತು ಹೆಣ್ಣು ಶಾಲಾ ಮಕ್ಕಳ ಗುಂಪುಗಳೂ ಬರಲಾರಂಭಿಸಿದವು. ೨೦೦೦ ರ ನಂತರ ಉಂಟಾದ ಜಾಗತಿಕ ಅಲೆಯಲ್ಲಿ ಹೊರಾಂಗಣ ಕಲಿಕಾಕ್ಷೇತ್ರವೂ ಸಾಕಷ್ಟು ಬೆಳಿಕಿಗೆ ಬಂತು. ಕಳೆದ ಒಂದು ದಶಕದಲ್ಲಿ ಪ್ರೌಢ ಮಹಿಳೆಯರು, ಮಧ್ಯ ವಯಸ್ಕ ಮತ್ತು ಹಿರಿ ವಯಸ್ಸಿನ ಮಹಿಳೆಯರು (೫೦-೬೦) ಬರುತ್ತಿದ್ದಾರೆ. ತಾಯಂದಿರು ಮತ್ತು ಅವರ ಮಕ್ಕಳ ಗುಂಪು, ಒಂದೇ ಕುಟುಂಬದ ಹಲವಾರು ಮಹಿಳಾ ಸದಸ್ಯರು, ಮಹಿಳಾ ಸ್ನೇಹಿತರ ಗುಂಪುಗಳು, ಒಂಬ್ಬಂಟಿ ಮಹಿಳೆಯರು ಬರುತ್ತಿದ್ದಾರೆ. ಹೊನ್ನೆ ಮರಡುವಿನ ನಮ್ಮ ಕಾರ್ಯಕ್ರಮಗಳಿಗೆ ಬಂದು ಹೋದ ಮಕ್ಕಳು ತಮ್ಮ ಹಿರಿಯರಿಗೆ ಕಟ್ಟಿಕೊಟ್ಟ ಅರ್ಥಪೂರ್ಣ ಅನುಭವಗಳನ್ನು ಕೇಳಿ ಸ್ವತಃ ತಾವೇ ಭಾಗವಹಿಸಲು ಬಂದ ತಂದೆ ತಾಯಿಯರೂ ಇದ್ದಾರೆ. ಹೆಚ್ಚಿನ ಮಟ್ಟಿಗೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಭಾಗವಹಿಸಲು ಮುಂದೆಬರುವ ಕಾರಣ ಹೆಣ್ಣೊಬ್ಬಳು ಕಾರ್ಯ ಕ್ಷೇತ್ರದಲ್ಲಿ ಸ್ವತಃ ಇದ್ದು, ಕಾರ್ಯಕ್ರಮದ ಮುಂಚೂಣಿಯನ್ನು ಹಿಡಿದು ಅವರ ಕ್ಷೇಮವನ್ನು, ಹಿತಾಸಕ್ತಿಯನ್ನು ಗಮನಿಸುವುದು. “ಅವರಿಗೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾದ ಕ್ಷೇಮಭಾವನೆ ಹುಟ್ಟುತ್ತದೆ. ಹೊರಾಂಗಣ ಮತ್ತು ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವ ಹುಮ್ಮಸ್ಸು ಹೆಚ್ಚುತ್ತದೆ. ನಾನು ನೋಡುತ್ತಿರುವ ಹಾಗೆ ಹೆಂಗಸರು ಈ ಚಟುವಟಿಕೆಗಳಿಂದ ಹೆಚ್ಚನ್ನು ಪಡೆಯುತ್ತಾರೆ. ತಮ್ಮ ಬಾಲ್ಯದಲ್ಲಿ ‘ನೀನು ಹೆಣ್ಣು’ ಎಂಬ ಕಾರಣದಿಂದ ಅಂತಹ ಅವಕಾಶಗಳಿಂದ ವಂಚಿತರಾದ ಹೆಂಗಸರಿಗೆ, ನನ್ನ ತರಹ ಲಿಂಗತಾರತಮ್ಯತೆಗಳನ್ನು ಅನುಭವಿಸಿದವರಿಗೆ ಹೊನ್ನೆ ಮರಡುವಿಗೆ ಬಂದು ಪಾಲ್ಗೊಳ್ಳುವುದು ಸುವರ್ಣಾವಕಾಶ. ಅವರ ಬಾಲ್ಯದ ಬುತ್ತಿಯನ್ನು ಬಿಚ್ಚುವುದಕ್ಕೆ, ಎಲ್ಲೋ ಅಡಗಿ ಕುಳಿತ, ತುಳಿದ ಭಾವನೆಗಳನ್ನು ಹೊರ ಹರಿಯಬಿಡುವುದಕ್ಕೆ, ಮತ್ತೆ ತನ್ನ ‘ತಾನು’ ಎಂಬುವುದನ್ನ ಕಂಡುಕೊಳ್ಳುವುದಕ್ಕೆ ನಮ್ಮ ಹೊರಾಂಗಣ ಚಟುವಟಿಕೆಗಳು, ಸಾಹಸಗಳು, ಚಾರಣಗಳು ಬಹಳ ಉಪಯೋಗಕ್ಕೆ ಬಂದಿವೆ. ಅದೊಂದು ಹೊರಾಂಗಣ, ಪರಿಸರ ಚಿಕಿತ್ಸೆ” ಎನ್ನುತ್ತಾರೆ ನೊಮಿತೋ.

ಸ್ವಲ್ಪ ಉದಾಹರಣೆಗಳನ್ನ ಕೊಡಿ ಎಂದು ನನ್ನ ಕೋರಿಕೆ.

“ನನ್ನ ಕುಟುಂಬವೇ ಬಹಳ ಸಾಂಪ್ರದಾಯಿಕವಾಗಿತ್ತು. ಹೊರಾಂಗಣ ಮತ್ತು ಪರಿಸರ ಚಟುವಟಿಕೆಗಳ ಬಗ್ಗೆ ಬಹಳ ಆಸಕ್ತಿಯಿದ್ದ ನನಗೆ ಅದರಿಂದ ಸಾಕಷ್ಟು ಘಾಸಿಯಾಗಿತ್ತು. ನಾ ಇಲ್ಲಿಗೆ ಬಂದಾಗ ನನಗೆ ಸ್ವಾತಂತ್ರ್ಯ ಸಿಕ್ಕಿದ ಹಾಗಾಗಿತ್ತು. ಪ್ರಕೃತಿಯೊಂದಿಗೆ ಸ್ಪಂದಿಸಿದಾಗ ಅದುಮಿಟ್ಟಿದ್ದ ನನ್ನ ಕೋಪ, ಅಸಹನೆ, ಹತಾಶೆಗಳು ತಣ್ಣಗಾದವು. ಮನಸ್ಸು, ಹೃದಯ ಶಾಂತವಾಯಿತು. ಆ ಶಾಂತತೆ ಹೊರಾಂಗಣ ಪರಿಸರದಲ್ಲಿ ಮಾತ್ರ ಸಿಕ್ಕುವಂಥದ್ದು ಮತ್ತು ಅತ್ಯಮೂಲ್ಯ. ನಮ್ಮದೊಂದು ಕಾರ್ಯಕ್ರಮಕ್ಕೆ ಬಂದ ೭೨ ವರ್ಷದ ಹಿರಿಯ ಹೆಂಗಸರೊಬ್ಬರು ಖಾಸಗಿ ತೇಲು ಎದೆಕವಚವನ್ನು (personal floatation device or PFD) ಧರಿಸಿ ಈಜಿದಾಗ ಅವರು ಹೇಳಿದ್ದು – “ನನ್ನ ಜೀವನದಲ್ಲಿ ಮೊದಲ ಬಾರಿಗೆ ಹೊರಾಂಗಣ ಪರಿಸರದಲ್ಲಿ ನಾನು ಈಜುತ್ತಿರುವುದು. ನಾನೀಗ ಸಂತೋಷದಿಂದ ಸಾಯಲು ಸಿದ್ಧ.”

ಅದೇ ರೀತಿ ದೈಹಿಕ ಮತ್ತು ಮಾನಸಿಕ ವಿವಿಧ ಸಾಮರ್ಥ್ಯಗಳಿರುವ (differently abled) ಇರುವ ಕೆಲ ಮಕ್ಕಳ ತಾಯಂದಿರು ತಮ್ಮ ಮತ್ತು ತಮ್ಮ ಮಕ್ಕಳ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಬಂದಿರುವ ಒಳ್ಳೆಯ ಬದಲಾವಣೆಯ ಬಗ್ಗೆ ಹೇಳಿಕೊಳ್ಳುತ್ತಾರೆ.

ನಿಮ್ಮ ಮುಂದಾಳತ್ವದಲ್ಲಿ ಕಾರ್ಯಕ್ರಮಗಳನ್ನು ನಡೆಸುವಾಗ ಉಂಟಾಗುವ ಅಡೆತಡೆಗಳು, ಸವಾಲುಗಳು ಏನು ಎನ್ನುವುದು ನನಗೆ ತಿಳಿದುಕೊಳ್ಳಬೇಕಿತ್ತು. ನೊಮಿತೋ ಉತ್ತರಿಸಿದಂತೆ ಅವರಿಗೆ ಅಂತಹ ಅಡೆತಡೆಗಳು ಸವಾಲುಗಳು ಹೆಚ್ಚಿನ ಸಮಯ ಗಂಡಸರಿಂದ ಉಂಟಾಗುತ್ತವೆ. “ಹೆಂಗಸು ಹೊರಾಂಗಣದಲ್ಲಿ, ಕಾಡುಮೇಡು, ಗುಡ್ಡ ಪರ್ವತಗಳಲ್ಲಿ, ನದಿಗಳಲ್ಲಿ ಓಡಾಡುತ್ತಾ ತನ್ನ ಮುಂದಾಳತ್ವದಲ್ಲಿ ಗಂಡಸರನ್ನು ಮುನ್ನಡೆಸುವುದು ಅನೇಕ ಗಂಡಸರಿಗೆ ಒಪ್ಪಿಕೊಳ್ಳಲು ಕಷ್ಟ, ಅಸಾಧ್ಯ ಮತ್ತು ಕಿರಿಕಿರಿ. ನಾನು ನಮ್ಮ ಪರಿಸರ ಕಲಿಕೆ ಕಾರ್ಯಕ್ರಮಗಳಲ್ಲಿ, ಹೊರಾಂಗಣ ಚಟುವಟಿಕೆಗಳಲ್ಲಿ ಅಪಾಯ ನಿರ್ವಹಣಾ ಪ್ರಕ್ರಿಯೆಯನ್ನು, ಕ್ಷೇಮ ನಿರ್ವಹಣೆಯನ್ನು ಕಟ್ಟು ನಿಟ್ಟಾಗಿ ಹೇಳಿಕೊಡುತ್ತೀನಿ, ಎಲ್ಲರೂ ಅದನ್ನು ತಪ್ಪದೆ ಪಾಲಿಸಬೇಕೆಂದು ಹೇಳುತ್ತೀನಿ. ಇದು ಅನೇಕರಿಗೆ ಸಹಿಸಲಾಗುವುದಿಲ್ಲ. ಅವರಿಗೆ ಇಷ್ಟವಾಗುವುದಿಲ್ಲ. ಹೆಣ್ಣೊಬ್ಬಳು ತಮಗೆ ಸವಾಲೆಸಗುವಂತೆ ಅವರು ಅದನ್ನು ಸ್ವೀಕರಿಸುತ್ತಾರೆ. ಅವಳ ಮಾತನ್ನು ಯಾಕೆ ಕೇಳಬೇಕು ಎಂಬುದೇ ಅವರ ಗಮನ ಹೊರತು, ಯಾಕೆ ಅವರು ಆ ನಿಯಮಗಳನ್ನು ಪಾಲಿಸಬೇಕು ಎಂಬ ವಿವೇಚನೆ ಇರುವುದಿಲ್ಲ. ಕೊಳ್ಳುಬಾಕ ಸಂಸ್ಕೃತಿಯಿಂದ ಹೊರಾಂಗಣ ಚಟುವಟಿಕೆಗಳು ಬಹಳಷ್ಟು ಪೆಟ್ಟು ತಿನ್ನುತ್ತಿವೆ. ಪರಿಸರಸಂರಕ್ಷಣೆ ಎಂಬ ಪರಿಕಲ್ಪನೆಯನ್ನು ಮೂಡಿಸುವ ನನ್ನ/ನಮ್ಮ ಪ್ರಯತ್ನಕ್ಕೆ ಸಾಕಷ್ಟು ವಿರೋಧವನ್ನು ಒಡ್ಡುವ ಗಂಡಸರು ಅನೇಕರು. ಇದು ಧೂಮಪಾನರಹಿತ/ಮದ್ಯಪಾನ ನಿಷೇಧಿತ ಪ್ರದೇಶ, ಇಲ್ಲಿ ಕಸವನ್ನು ನಿರ್ದಿಷ್ಟ ಜಾಗದಲ್ಲಿ ಮಾತ್ರ ಚೆಲ್ಲಬೇಕು ಎನ್ನುವ ನಮ್ಮ ನಿಯಮಗಳಿಗೂ ಕೂಡ ಅವರು ತಡೆ ಒಡ್ಡಲು, ಕೀಟಲೆ ಮಾಡಲು, ದೂರು ಹೇಳಲು ಬರುತ್ತಾರೆ ಎನ್ನುವ ನೊಮಿತೋ ಮತ್ತೊಂದು ಘಟನೆಯನ್ನು ನನ್ನೊಂದಿಗೆ ಹಂಚಿಕೊಂಡರು.

Nomito 2
ಅಂಬಿಗಳು ನಾ ಎನ್ನುತ್ತಿರುವ ನೊಮಿತೋ

ಹಿಂದೊಮ್ಮೆ ಸುಮಾರು ೧೭-೧೮ ವಯಸ್ಸಿನ ೧೦ ಯುವಕರು ನಮ್ಮ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಎಲ್ಲರೂ ಯಾಣಕ್ಕೆ ಹೋಗುವ ಪ್ರಸಂಗ. ಅವರೆಲ್ಲರೂ ಅದೆಷ್ಟು ನಕಾರಾತ್ಮಕ (ನೆಗಿಟಿವ್) ಮನಸ್ಸನ್ನು, ಆಲೋಚನೆಯನ್ನು ತೋರಿದರು, ನನ್ನನ್ನು ಎಷ್ಟು ವಿರೋಧಿಸಿದರು ಎಂದರೆ ಆ ಕಾರ್ಯಕ್ರಮವನ್ನು ನಿರ್ವಹಿಸಲು ನನಗೆ ತುಂಬಾ ಕಷ್ಟವಾಯಿತು. ಕೇವಲ ನಾನು ಹೆಣ್ಣು ಎಂಬುದಕ್ಕೆ ಅವರು ಅಷ್ಟೊಂದು ಪ್ರತಿರೋಧವನ್ನು ಒಡ್ಡಿದರು. ಕಡೆಗೆ ನಾನು ನನ್ನ ಸಹಾಯಕರಿಗೆ ಅದನ್ನು ವಹಿಸಿಬೇಕಾಯಿತು. ಆ ಹುಡುಗರ ವರ್ತನೆಯಿಂದ ನನಗೆ ತುಂಬಾ ನೋವಾಯಿತು ಕೂಡ. ಕೆಲ ವರ್ಷಗಳ ನಂತರ ಅವರಲ್ಲಿ ಆರು ಮಂದಿ ಮತ್ತೆ ನಮ್ಮ ಕಾರ್ಯಕ್ರಮಕ್ಕೆ ಬಂದರು. ಆಗ ನಾನು ಒಬ್ಬೊಬ್ಬರ ಹತ್ತಿರವೂ ಪ್ರತ್ಯೇಕವಾಗಿ ಅವರು ಹಿಂದೊಮ್ಮೆ ಬಂದಿದ್ದಾಗ ಇದ್ದ ಅಥವಾ ಆದ ಸಮಸ್ಯೆಯಾದರೂ ಏನು, ಅವರು ಯಾಕಷ್ಟು ಸಮಸ್ಯೆ ಉಂಟು ಮಾಡಿದರು ಎಂದು ವಿಚಾರಿಸಿದೆ. ಆಗಲೂ ಹೊರಬಿದ್ದ ಸಂಗತಿಯೆಂದರೆ ಅವರಿಗೆ ಹೆಂಗಸೊಬ್ಬಳು ಅವರನ್ನು ಹೊರಾಂಗಣ ಪರಿಸರದಲ್ಲಿ, ಕಾಡು ಮೇಡುಗಳ ಚಾರಣದಲ್ಲಿ ಮುನ್ನಡೆಸುವುದು ಇಷ್ಟವಾಗಲಿಲ್ಲ, ಬೇಕಾಗಿಯೇ ಪ್ರತಿರೋಧ ಒಡ್ಡಿದರು ಎಂದು ಅವರೇ ಒಪ್ಪಿಕೊಂಡು ಹೇಳಿದರು.

 

“ಆದರೆ, ನಮ್ಮ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಗಂಡಸರೂ ಹಾಗೇ ಇಲ್ಲ. ಒಂದು ದಿನ ಗುಂಪು ಹಂಚಿಕೆಯಲ್ಲಿ ಒಬ್ಬಾತ ತನ್ನ ಅಜ್ಜಿಯ ಬಗ್ಗೆ ಹೇಳಿದ ವಿಷಯ ಬಹಳ ಚೆನ್ನಾಗಿತ್ತು. ಅವನ ಅಜ್ಜಿ ಪ್ರತಿ ಬೇಸಗೆಯಲ್ಲೂ ತನ್ನ ಮೊಮ್ಮಕ್ಕಳಿಗೆ ಈಜು ಮತ್ತು ಸೈಕಲ್ ತುಳಿಯುವುದನ್ನು ಹೇಳಿಕೊಡಲು ಒಬ್ಬರನ್ನು ದುಡ್ಡು ಕೊಟ್ಟು ಗೊತ್ತು ಮಾಡಿದ್ದರು. ಆದ್ದರಿಂದ ನನಗೆ ಈಜು ಮತ್ತು ಸೈಕಲ್ ಸವಾರಿ ಕಲಿಯಲು ಆಯಿತು. ಆ ಅಜ್ಜಿಯ ಬಗ್ಗೆ ನನಗೆ ಬಹಳಾ ಹೆಮ್ಮೆ ಎಂದೂ ಆತ ಹೇಳಿದ.

ಮತ್ತೊಂದು ಕಾರ್ಯಕ್ರಮದಲ್ಲಿ ಮದುವೆಯಾದ ಹೆಣ್ಣೊಬ್ಬಳು ಬಂದಿದ್ದಳು. ಅವಳ ಗಂಡನಿಗೆ ದೈಹಿಕ ನ್ಯೂನತೆಯಿತ್ತು, ಕಾಲಿಗೆ ಎಂದು ನೆನಪು. ಅವಳು ನಮ್ಮ ಹೊರಾಂಗಣ ಚಟುವಟಿಕೆಗಳನ್ನು ಮುಗಿಸಿಕೊಂಡು ಹೊರಡುವಷ್ಟರಲ್ಲಿ ಬದಲಾದ ಹೆಣ್ಣಾಗಿದ್ದಳು. ಅವಳ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ, ತನ್ನ ಯೋಚನೆಗಳನ್ನು ಅಳುಕಿಲ್ಲದೆ ಹೇಳುವ ಧೈರ್ಯ, ಅವಳ ಹಿಗ್ಗಿದ ಮನೋವಿಶ್ವಾಸ – ಅವೆಲ್ಲವೂ ಅವಳ ಗಂಡನ ಗಮನಕ್ಕೂ ಬಂತು. ಅವನೇ ಹೇಳಿದಂತೆ “ಮನೆಯಲ್ಲಿ ನನಗೊಬ್ಬಳು ಹೆಂಡತಿಯಷ್ಟೇ ಅಲ್ಲ, ಒಂದು ಸಂಪನ್ಮೂಲವೇ ಇದೆ.”

ಇಂತಹ ಪ್ರಸಂಗಗಳು ನೊಮಿತೋರ ಖಜಾನೆಯಲ್ಲಿ ಬಹಳಷ್ಟು ಇವೆ. ಅವರ ಈಗಿನ ಮತ್ತು ಮುಂದಿನ ಕನಸುಗಳೇನು, ಅವರ ಕಾರ್ಯಕ್ರಮಗಳು ಹೇಗೆಲ್ಲಾ ಮುಂದುವರೆಯಬೇಕು ಎಂದು ಅವರು ಯೋಜಿಸಿದ್ದಾರೆ?

ಅವರ ಈಗಿನ ಯಶಸ್ವಿ ಕಾರ್ಯಕ್ರಮವೆಂದರೆ ತಾಯಂದಿರು ಮತ್ತು ಅವರ ಮಾನಸಿಕವಾಗಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳಿಗಾಗಿ ನಡೆಸುವ ಹೊರಾಂಗಣ ಚಟುವಟಿಕೆಗಳು ಮತ್ತು ಪರಿಸರ ಕಲಿಕೆ. ಅಲ್ಲದೆ ಮಧ್ಯ ವಯಸ್ಕ ಮಹಿಳೆಯರನ್ನು ಇನ್ನೂ ಹೆಚ್ಚಾಗಿ ಹೊರಾಂಗಣಕ್ಕೆ, ಪ್ರಕೃತಿಯ ಮಡಿಲಿಗೆ ತರುವುದು ಅವರ ನೆಚ್ಚಿನ ಕಾರ್ಯಕ್ರಮ. ಅಲ್ಲದೇ, ತಮ್ಮ ಜೀವನದಲ್ಲಿ ಲೈಂಗಿಕ ಶೋಷಣೆಗೊಳಗಾದ ಹೆಂಗಳೆಯರನ್ನು, ದೈಹಿಕ ಅಂಗವಿಕಲತೆಯಿರುವವರ ಒಳಗೊಂಡ ಕಾರ್ಯಕ್ರಮಗಳೂ ನಡೆಯುತ್ತಿವೆ. ಪ್ರಕೃತಿಯ ಮಡಿಲಲ್ಲಿ ಅವರು ತಮ್ಮ ಅನುಭವಗಳನ್ನು ಒರೆಗೆ ಹಚ್ಚಿ, ಆಳವಾಗಿ ಒಳಅಲೋಚನೆ ಮಾಡಿ ಹೊಸ ಮಾನಸಿಕ ಶಕ್ತಿ ಪಡೆಯುತ್ತಾರೆ.

ನಾನಾ ತರಹದ ಹಿನ್ನಲೆಯುಳ್ಳ ಎಲ್ಲರಿಗೂ ಹೊರಾಂಗಣ, ಸಾಹಸ ಮತ್ತು ಪರಿಸರ ಚಟುವಟಿಕೆಗಳು ಅವಶ್ಯಕ. ನಮ್ಮೆಲ್ಲರಲ್ಲೂ ನೈಸರ್ಗಿಕ ಪ್ರಪಂಚ ಉತ್ತಮ ಪರಿವರ್ತನೆಯನ್ನು ಉಂಟು ಮಾಡುತ್ತದೆ. ನೈಸರ್ಗಿಕ ಪ್ರಪಂಚಕ್ಕೆ ತನ್ನದೇ ಆದ ಗುಣಕಾರಿ ಸ್ವಭಾವವಿದೆ, ಇದು ಮಾನವನಿಗೆ ನೈಸರ್ಗಿಕದತ್ತ ವರ, ನಿಸರ್ಗದಿಂದ ನಾವು ಬಲ ಪಡೆದುಕೊಂಡು ಆರೋಗ್ಯವಂತರಾಗುತ್ತೀವಿ. ನಾವು ಮನುಷ್ಯರು ಎಲ್ಲದರಲ್ಲೂ, ಎಲ್ಲದರ ಮೇಲೂ ನಿಯಂತ್ರಣವನ್ನು ಹೊಂದಿಲ್ಲ, ನಾವು ನೈಸರ್ಗಿಕ ಪ್ರಪಂಚದ ಹುಲ್ಲು ಕಡ್ಡಿಯ ಭಾಗವಷ್ಟೇ ಎಂಬುದರ ಅರಿವನ್ನು ಹೊರಾಂಗಣ ಪ್ರಪಂಚ ನಮಗೆ ಮಾಡಿಸಿ ಕೊಡುತ್ತದೆ. ಆಗ ನಮ್ಮ ಚಿಪ್ಪಿನಿಂದ ಹೊರಬಂದು ನಾವು ಉತ್ತಮ ಮಟ್ಟದಲ್ಲಿ ಎಲ್ಲದರ ಜೊತೆ ಸಂಬಂಧವನ್ನು ಮತ್ತು ಸಂಪರ್ಕವನ್ನು ಪಡೆಯುತ್ತೀವಿ.

ಅದರಲ್ಲೂ ಮಹಿಳೆಯರು ಹೊರಾಂಗಣ ಚಟುವಟಿಕೆಗಳಿಂದ ತಮ್ಮ ಒಳಿತಿಗಾಗಿ ವ್ಯಕ್ತಿತ್ವವನ್ನೇ ಮಾರ್ಪಡಿಸಿಕೊಳ್ಳುವ ಅವಕಾಶಗಳು ಬೇಕಷ್ಟಿವೆ. ಇಂತಹ ಕಾರ್ಯಕ್ರಮಗಳನ್ನು ಸಾಂಸ್ಥಿಕವಾಗಿಸಬೇಕಿದೆ. ಶಾಲೆಗಳಷ್ಟೇ ಅಲ್ಲ, ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳು, ಸರ್ಕಾರಗಳು ಕೂಡ ಮಹಿಳೆಯರು ಹೆಚ್ಚಾಗಿ ಪರಿಸರ ಕಲಿಕೆ, ಹೊರಾಂಗಣ ಚಟುವಟಿಕೆಗಳು ಮತ್ತು ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು, ಅದಕ್ಕೆ ಬೇಕಾದಂತೆ ಅನುವು ಮಾಡಿ ಕೊಡಬೇಕು.

Nomito 3
ಹೊನ್ನೆ ಮರಡಿನ ಸುಂದರ ಖಾಸಗಿ ಕ್ಷಣದಲ್ಲಿ ತಲ್ಲೀನೆವಾಗಿರುವ ನೊಮಿತೊ

ಮಹಿಳೆಯರು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಅವರಿಗಷ್ಟೇ ಅಲ್ಲ, ಅವರ ಮಕ್ಕಳು, ಕುಟುಂಬಗಳೂ ಕೂಡ ಅದರಿಂದ ಲಾಭ ಪಡೆಯುತ್ತವೆ. ಹೆಣ್ಣಿನ ಮನೋದಾರ್ಢ್ಯ, ಆತ್ಮ ವಿಶ್ವಾಸ, ಧೈರ್ಯಗಳು ಕುಟುಂಬದ ಮೇಲೆ ಬಹಳಷ್ಟು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ನಮ್ಮ ಭಾರತೀಯ ಹೆಂಗಸರು ಅನೇಕ ವಿವಿಧ ಕೆಲಸಗಳನ್ನು ಒಂದೇ ಸಮಯಕ್ಕೆ ಮಾಡುತ್ತಿರುತ್ತಾರೆ. ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ದುಡಿದರೂ ಹೆಣ್ಣು ಎಂಬ ಪಡಿಯಚ್ಚಿನ ಆಘಾತದಲ್ಲಿರುತ್ತಾರೆ. ನಮ್ಮ ಹೆಂಗಸರಿಗೆ ಅವರದೇ ಆರೋಗ್ಯಕ್ಕೆ, ಯೋಗಕ್ಷೇಮಕ್ಕೆ ಇಂತಹ ಪರಿಸರ ಕಲಿಕೆ, ಹೊರಾಂಗಣ ಚಟುವಟಿಕೆಗಳು ಅತ್ಯಗತ್ಯ, ಎನ್ನುವುದು ನೊಮಿತೋ ರ ನಿಲುವು.

ಹೀಗೆ ತಮ್ಮ ಹೊರಾಂಗಣ, ಪರಿಸರ ಕಲಿಕೆ, ಸಾಹಸ ಕ್ರೀಡೆಗಳು, ಚಟುವಟಿಕೆಗಳಲ್ಲಿ ಭಾಗವಹಿಸುವವರು ತಮ್ಮ ದಿನನಿತ್ಯದ ಜೀವನದಲ್ಲಿ ನೈಸರ್ಗಿಕ ಪ್ರಪಂಚ ನಮಗೆ ಕೊಡುವ ಸಂದೇಶಗಳನ್ನು, ಪಾಠಗಳನ್ನು ಅಳವಡಿಸಿಕೊಂಡು ಶಾಂತಿಯಿಂದ ಸಹಬಾಳ್ವೆಯಿಂದ ಬದುಕಿದರೆ ಅದು ನನಗೆ, ನಮ್ಮ ಸಂಸ್ಥೆಗೆ ಅತ್ಯಂತ ಸಂತೋಷವನ್ನು, ತೃಪ್ತಿಯನ್ನು ಕೊಡುತ್ತದೆ, ಅನ್ನುತ್ತಾರೆ ನೊಮಿತೋ.

ನಮ್ಮ ವಿಶೇಷತೆಯೆಂದರೆ ನಗರಗಳಿಂದ ನಮ್ಮಲ್ಲಿಗೆ ಬರುವವರು ಈ ಮಲೆನಾಡು ಪ್ರದೇಶದ ಸ್ಥಳೀಯರೊಂದಿಗೆ, ಬುಡಕಟ್ಟು ಜನರ ಜೊತೆ ಮಿಳಿತು ಅವರ ಜೀವನ, ಸಂಸ್ಕೃತಿಗಳ ಪರಿಚಯ ಮತ್ತು ಸ್ಥಳೀಯ ನಿಸರ್ಗ-ಸಂಬಂಧಿತ ಜೀವನಕ್ರಮದ ಬಗ್ಗೆ ತಿಳಿದುಕೊಂಡು ಅವರೊಂದಿಗೆ ಬೆಸುಗೆ ಹಾಕಿಕೊಳ್ಳುತ್ತಾರೆ. ಹಾಗೆ, ಸ್ಥಳೀಯರಿಗೆ ನಾವು ನಾನಾ ತರಹದ ತರಬೇತಿಗಳನ್ನು ಕೊಟ್ಟು ಅವರು ಹೊರಾಂಗಣ ಮತ್ತು ಸಾಹಸ ಚಟುವಟಿಕೆಗಳ ಕ್ಷೇತ್ರದಲ್ಲಿ, ತಮ್ಮದೇ ಆದ ಸಾಂಸ್ಕೃತಿಕ ಕಲೆಗಳನ್ನು, ಕುಲ ಕಸುಬನ್ನು ಉಪಯೋಗಿಸಿಕೊಂಡು ಸ್ವಂತ ಉದ್ಯೋಗ, ಉದ್ದಿಮೆಗಳನ್ನು, ಕೆಲಸವನ್ನು ಪಡೆಯುವಂತೆ ಸಹಾಯ ಮಾಡಿದ್ದೀವಿ. ಅವರಲ್ಲಿ ದೈಹಿಕವಾಗಿ ವಿವಿಧ ಸಾಮರ್ಥ್ಯ ಪಡೆದವರ ಗುಂಪೂ ಸೇರಿದ್ದಾರೆ. ಎರಡೂ ನಿಟ್ಟಿನಲ್ಲಿ ನಗರದವರು ಮತ್ತು ಸ್ಥಳೀಯರು ಪ್ರಯೋಜನ ಪಡೆದಿದ್ದಾರೆ.

ಹಿಂದೆ ಅವರಲ್ಲಿಗೆ ಬರುತ್ತಿದ್ದ ಶಾಲಾ ಮಕ್ಕಳು ಈಗ ಬೆಳೆದು ದೊಡ್ಡವರಾಗಿ ಅವರೇ ಕೆಲವರು ತಮ್ಮದೇ ಹೊರಾಂಗಣ ಕಲಿಕಾ ಸಂಸ್ಥೆಗಳನ್ನು ಆರಂಭಿಸಿ ನಡೆಸುತ್ತಿದ್ದಾರೆ. ಆಗಿನ ಪುಟ್ಟ ಹೆಣ್ಣು ಮಕ್ಕಳಲ್ಲಿ ಕೆಲವರು ಈಗ ಭಾರತದ ಹೊರಾಂಗಣ ಕಲಿಕೆ ಮತ್ತು ಸಾಹಸ ಕ್ರೀಡೆಗಳ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ನಾನು ಕೆಲವರ ಹೆಸರುಗಳನ್ನು ಹೇಳಿದಾಗ ನೊಮಿತೋ “ಹೌದು ಹೌದು, ಅವರೆಲ್ಲಾ ನಮ್ಮ ಸಂಸ್ಥೆಯಿಂದಲೇ ತರಬೇತಿ ಹೊಂದಿದವರು, ನಾವಂತೂ ಗಟ್ಟಿಯಾಗಿ ಇಲ್ಲೇ ಇದ್ದೀವಿ,” ಎಂದು ನಗುತ್ತಾರೆ.

ಮುಂದಿನ ಬಾರಿ ಕನ್ನಡದ ಮಡಿಲಿಗೆ ಮರಳಿದಾಗ ಒಮ್ಮೆ ಹೊನ್ನೆ ಮರಡಿಗೆ ಹೋಗಿ ನೊಮಿತೋರನ್ನ ಮಾತನಾಡಿಸಿ ಬನ್ನಿ !

“ನೆಟ್ಟಿ”ಗೇರಿದ ಪಠ್ಯ @ ನೆತ್ತಿಗೇರುವುದೇ? ಅಂತರ್ಜಾಲದಲ್ಲಿ ಕನ್ನಡ ಮಾಧ್ಯಮ ಶಾಲಾ ಪಠ್ಯಗಳು – ಸುದರ್ಶನ ಗುರುರಾಜರಾವ್ ಲೇಖನ

ನಾವು ಶಾಲೆಯಲ್ಲಿ ಓದುತ್ತಿರುವಾಗ ಒಂದು ತರಗತಿಯಿಂದ  ಉತ್ತೀರ್ಣರಾಗಿ ಇನ್ನೊಂದು ತರಗತಿಗೆ ಹೋಗುವುದರ ಜೊತೆಗೆ ಮುಂದಿನ ತರಗತಿಯ ಪಠ್ಯ ಪುಸ್ತಕಗಳ ಬೇಟೆಯೂ ಶುರುವಾಗುತ್ತಿತ್ತು. ಏಪ್ರಿಲ್ ಹತ್ತನೇ ತಾರೀಖು ನಮ್ಮ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿ ಅಧಿಕೃತವಾಗಿ ಪಾಸಾಗಿದ್ದೇವೆಂದು ಘೋಷಣೆಯಾಗುತ್ತಿದ್ದಂತೆ ನಮಗಿಂತ  ಒಂದು ವರ್ಷ ಮುಂದಿನ ವಿದ್ಯಾರ್ಥಿಗಳೊಂದಿಗೆ ನಮ್ಮ ಮಾತುಕತೆ ಶಾಲಾ ಆವರಣದಲ್ಲೇ ಶುರುವಾಗುತ್ತಿತ್ತು. .

ಮುಂಚಿನ ಪರಿಚಯದ ಆಧಾರದ ಮೇಲೆ, ಪುಸ್ತಕಗಳನ್ನು ಜೋಪಾನವಾಗಿ ಬೈಂಡು  ಹಾಕಿ ಕಾಪಾಡಿಕೊಂಡಿದ್ದನೆಯೇ ಇಲ್ಲವೇ ಎಂಬ ಗಾಳಿಸುದ್ದಿಯ ಮೇಲೆ ಯಾರೊಂದಿಗೆ ವ್ಯವಹರಿಸುವುದೆಂಬ ಕಾರ್ಯಕಾರಿ ನಿರ್ಣಯ ಕೈಗೊಳ್ಳಲಾಗುತ್ತಿತ್ತು.  ಇನ್ನು ಮುಂದಿನ ಕ್ಲಾಸಿನ ವಿದ್ಯಾರ್ಥಿ ಹುಡುಗಿಯಾಗಿದ್ದರೆ ಅವರನ್ನು ನೇರವಾಗಿ ಮಾತುಕತೆಗೆ ಎಳೆಯಲು ಆಗದ ನಾವು ಅವರುಗಳ ಅಣ್ಣಂದಿರ ಮೂಲಕ ವ್ಯವಹಾರ ಕುದುರಿಸಿಕೊಳುತ್ತಿದ್ದೆವು.  ಪುಸ್ತಕ ಬೇಟೆಯ ದಂಡಿಗೆ img-5ಕೊರತೆಯಿಲ್ಲದಿದ್ದರೂ ಗಿರಾಕಿಗಳಿಗೂ ಒಂದು ಸ್ಥಾನ ಮಾನ ಇರುತ್ತಿತ್ತು. ಮಾತುಕತೆಗೆ ಮುಂಚೆಯೇ ಹಣ ತೋರಿಸಬಲ್ಲ , ಪುಸ್ತಕಕ್ಕೆ ತಕ್ಷಣ ಹಣ ಪಾವತಿಸಬಲ್ಲ, ಒಂದೆರೆಡು ದಿನಗಳಲ್ಲಿ ಕೊಡಬಲ್ಲ, ಒಂದೆರೆಡು ಕಂತುಗಳಲ್ಲಿ ಕೊಡಬಲ್ಲ, ಪುಸ್ತಕ ಕೊಂಡುಹೋಗಿ ಹಣ ಕೊಡಲಾಗದೆ ಪುನಃ ಜಪ್ತಿ ಮಾಡಿಸಿಕೊಂಡ ಇತಿಹಾಸವುಳ್ಳ ಇತ್ಯಾದಿ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಈ ಕೊಡು ಕೊಳ್ಳುವ ವ್ಯವಹಾರ ನಡೆಯುತ್ತಿತ್ತು. ಶಾಲೆಗಳು ಪ್ರಾರಂಭವಾಗಿ ೩-೪ ತಿಂಗಳು ಕಳೆದರೂ ಕೆಲವೊಮ್ಮೆ ಕೆಲವು ವಿಷಯಗಳ ಪಠ್ಯ  ಪುಸ್ತಕಗಳು ಸಿಗುತ್ತಲೇ ಇರಲಿಲ್ಲ !! ಬೆಂಗಳೂರಿನಿಂದ ಹರದಾರಿ ದೂರದ ಕೊಂಪೆಗಳಲ್ಲಿದ್ದ ನಮಗೆ ಎಷ್ಟೋ ಬಾರಿ ಪುಸ್ತಕಗಳು ಅಂಗಡಿಗಳಿಗೆ ಬಂದು ಖರ್ಚಾಗಿ ಹೋಗುತ್ತಿದ್ದುದೂ  ತಿಳಿಯುತ್ತಿರಲಿಲ್ಲ. ಈಗಿನಂತೆ ಜೆರಾಕ್ಸ್ ಸೌಲಭ್ಯವೂ ಸುಲಭವೂ, ಅಗ್ಗವೂ ಆಗಿ ದೊರಯದ ಕಾರಣ ಈ ಬಳಸಲ್ಪಟ್ಟ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಅಷ್ಟಕ್ಕೂ ಉತ್ತಮವಾಗಿ ಕಾಯ್ದುಕೊಂಡ ಅವೇ ಪುಸ್ತಕಗಳು ಕಡಿಮೆ ಬೆಲೆಗೆ ಸಿಕ್ಕಿ ಒಂದೆರೆಡು ರೂಪಾಯಿ ಉಳಿದರೆ ಅದೂ  ಸಂತೋಷಕರವೇ ! ಐದು ಹತ್ತು ಪೈಸೆಗಳಿಗೂ ತತ್ವಾರ ಆಗಿದ್ದ ಅ ದಿನಗಳಲ್ಲಿ Tesco  ದ ಧ್ಯೇಯವಾಕ್ಯವಾದ every little helps ಎಂಬುದು ನಮ್ಮ ಅಳಿವು ಉಳಿವಿನ ವೇದವಾಕ್ಯವಾಗಿತ್ತೆನ್ನಿ. ಇಷ್ಟಾಗಿಯೂ ಆರು- ಏಳನೇ ತರಗತಿಯಲ್ಲಿ ಸಮಾಜ ಮತ್ತು ಕನ್ನಡದ ಪಠ್ಯಗಳು ಸಿಗದೇ ೨೦೦ ಹಾಳೆಯ ಲೇಖಕ್ ಪುಸ್ತಕವೊಂದರಲ್ಲಿ ಅದರ ನಕಲು ಮಾಡಿಕೊಂಡಿದ್ದೆ.

ಇಂತಿಪ್ಪ, ಈ ಸೀನಿಯರ್ ವಿದ್ಯಾರ್ಥಿಗಳೊಂದಿಗಿನ ನಮ್ಮ ಈ  ಚೌಕಾಸಿಯೊಂದಿಗೆ  ಬೇಸಿಗೆ ರಜೆಯ ಆಚರಣೆಗೆ ಶ್ರೀಕಾರ ಹಾಡಲಾಗುತ್ತಿತ್ತು.

ನನ್ನ ಮುಂದಿನ ತರಗತಿಯಲ್ಲಿದ್ದ ವಿರುಪಿ, ಪಾಂಡಿ, ಸತೀಶ, ಹೋಟ್ಲು ಮಂಜ, ಉಜಿನಪ್ಪ, ಗೋವಿಂದ ,ಬಾಬು, ದೇವರಾಜಪ್ಪ, ತಿಪ್ಪೇಸ್ವಾಮಿಯೇ ಮೊದಲಾದವರ ಬಳಿ ಮಾತಾಡಿ ಅವರ ಮನೆಗಳಿಗೆ ಎಡತಾಕಿ, ಅಳೆದು ಸುರಿದು, ಹಗ್ಗ ಜಗ್ಗಾಟ ನಡೆಸಿ, ಅವರುಗಳಿಂದ ‘ ಕೊಡುವುದಿಲ್ಲ ಹೋಗೆಂ’ಬ ಧಮಕಿಗಳಿಗೆ ಒಳಗಾಗಿ ಕೆಲವೊಮ್ಮೆ ಗೆದ್ದು, ಕೆಲವೊಮ್ಮೆ ಸೋತು,ಅಷ್ಟಿಷ್ಟು  ಕೆಲವೊಮ್ಮೆ ಮೋಸಹೋಗಿ, ಮತ್ತೆ ಕೆಲವೊಮ್ಮೆ ಮರುಳು ಮಾಡಿ, ಬೇರೆ ಯಾವುದೋ ಆಸೆ ತೋರಿಸಿ ವ್ಯವಹಾರ ಮುಗಿಸಿ ಎಲ್ಲ ಪುಸ್ತಕಗಳೊಂದಿಗೆ ಮನೆ ಸೇರಿದರೆ ಅಲ್ಲಿಗೆ ಪಾಂಡವ ಅಶ್ವಮೇಧವೂ ನಮ್ಮ ವಿಜಯೋತ್ಸವಕ್ಕೆ ಸಮವಿರುತ್ತಿರಲಿಲ್ಲ. ವರುಷ ಪೂರ್ತಿ ನಾನು ಕೂಡಿಟ್ಟುಕೊಂಡ ಹಣಕ್ಕೆ ವರುಷದ ಕೊನೆಗೆ ನಮ್ಮ ತಾಯಿ ಕೊಡುತ್ತಿದ್ದ ೫ ರೂಪಾಯಿ ಸೇರಿ ಸ್ವಲ್ಪ ಬಂಡವಾಳ ಇಟ್ಟುಕೊಂಡು ಹೋಗುತ್ತಿದ್ದ ನನಗೆ ಸ್ವಲ್ಪ ಆದ್ಯತೆ ಇತ್ತು ಎಂದೇ ಹೇಳಬೇಕು. ಮಾರುವವರಿಗೂ ಹಣ ಸಿಕ್ಕರೆ ಅವರ ಪುಸ್ತಕಗಳಿಗೂ ದಾರಿಯಾದೀತೆಂಬ ಯೋಚನೆ ಅವರಿಗೆ!

ನಗರಗಳಲ್ಲಿದ್ದ ನಮ್ಮ ಕೆಲವು ನೆಂಟರ ಮಕ್ಕಳಿಗೆ ಈ ಗೋಜಲು-ಪರಿಪಾಟಲುಗಳು ಇರಲಿಲ್ಲ. ಖಾಸಗೀ ಶಾಲೆಯಾದ ಕಾರಣ ಅವರಿಗೆ ಹೇಗೋ ಪುಸ್ತಕಗಳು ಹೊಂದಿಕೆಯಾಗಿಬಿಡುತ್ತಿದ್ದವು. ಆಂಗ್ಲಮಾಧ್ಯಮವೂ ಸಹ! ನೋಟು ಪುಸ್ತಕಗಳು ಕೂಡಾ ಅವರಿಗೆ ಸಲೀಸಾಗಿ ಸಿಗುತ್ತಿದ್ದವು. ನಾವು ಅವರುಗಳ ಮನೆಗೆ ಹೋದಾಗ ಅವರ ಹಿಂದಿನ ಕ್ಲಾಸಿನ ಪುಸ್ತಕಗಳನ್ನು ಪಡೆದು ಬರೆಯದ ಹಾಳೆಗಳನ್ನು ಜೋಪಾನವಾಗಿ ಹರಿದು ಸೇರಿಸಿ ದಪ್ಪ ದಾರ ದಬ್ಬಳಗಳಿಂದ ಅವುಗಳನ್ನು ಹೊಲಿದು ತರುತ್ತಿದ್ದೆವು. ಅವರೂ ಅವುಗಳನ್ನು ಕೊಡುವಷ್ಟು ಧಾರಾಳಿಗಳಾಗಿದ್ದರು. ಈಗ ಕಾಲ ಬದಲಾಗಿದೆ. ಮೊದಲ ಹಂತವೆಂಬಂತೆ ಎಲ್ಲ ಸರಕಾರೀ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಕಾಲ ಕಾಲಕ್ಕೆ ತಲುಪದ ವಿಳಂಬ ನೀತಿ ಇಂದಿಗೂ ಒಂದು ಜಾಡ್ಯವೇ ಆದರೂ ಪುಸ್ತಕ ಸಿಗುವುದರ ಭರವಸೆಯಂತೂ ಇದೆ. ಆದರೆ ಹೊರಗಡೆಯ ಮಾರಾಟವನ್ನು ನಿಷೇಧಿಸಿರುವ ಕಾರಣ ಕಾಸುಕೊಟ್ಟರೂ ನಿಮಗೆ ಪುಸ್ತಕಗಳು ಸಿಗಲಾರವು.

ಎರಡನೆ ಹಂತದಲ್ಲಿ ಈ ಪಠ್ಯಗಳನ್ನು ಅಂತರ್ಜಾಲದಲ್ಲಿ ಏರಿಸುತ್ತೇವೆಂದು ಕಳೆದ ಐದು ವರುಷಗಳಲ್ಲಿ ಹೇಳುತ್ತಾ ಮೂಗಿಗೆ ತುಪ್ಪ ಹಚ್ಚಿ ಕೂಡಿಸಿದ್ದ ಕರ್ನಾಟಕ  ಘನವೆತ್ತ ಸರಕಾರ ಕೊನೆಗೂ ಆ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಕಲಿಸಲ್ಪಡುವ ಎಲ್ಲ ಭಾಷಾ ಮಾಧ್ಯಮಗಳ ಎಲ್ಲ ವಿಷಯಗಳ ಪಠ್ಯ ಪುಸ್ತಕಗಳನ್ನು “ನೆಟ್ಟಿ” ಗೆ ಏರಿಸಿದೆ.  ಕನ್ನಡ ಮಾಧ್ಯಮದ ಪುಸ್ತಕಗಳು ಈಗ ಸಮಗ್ರವಾಗಿ ಒಂದು ಕಡೆ ಲಭ್ಯವಾಗಿವೆ. ಕನ್ನಡದ ಮಟ್ಟಿಗೆ ಇದೊಂದು ಸಕಾರಾತ್ಮಕವಾದ, ಧನಾತ್ಮಕವಾದ ಬೆಳವಣಿಗೆ. ಹಾಗೆಂದು ಕನ್ನಡ ಪಠ್ಯಗಳನ್ನು ಅಂತರ್ಜಾಲದಲ್ಲಿ ದೊರೆಯುವಂತೆ ಮಾಡುವ ಕೆಲವು ಪ್ರಯತ್ನಗಳು ಹಿಂದೆ ನಡೆದಿದ್ದವು. ಅಮೇರಿಕಾದ, ಕನ್ನಡಕ್ಕೆ ಮಿಡಿಯುವ ಕೆಲವು ಜೀವಗಳು ಸ್ಕ್ಯಾನ್ ಮಾಡಿದ ಕೆಲವು ಪುಸ್ತಕಗಳ,  ಬಿಡಿ ಹಾಳೆಗಳನ್ನು ಒಂದೆಡೆ ಸೇರಿಸಿ ಆಸಕ್ತರಿಗೆ ಕೊಡಮಾಡುವ ಕೆಲಸ ಮಾಡಿದ್ದರು. ಸರಳತೆಯ, ಸಮಗ್ರತೆಯ ನಿಟ್ಟಿನಿಂದ ಇವು ಹೆಚ್ಚು ಪ್ರಯೋಜನಕಾರಿಯಾಗುವಲ್ಲಿ ಸೋತವು. ನಾನು ಸಹಾ ಭಾರತದಲ್ಲಿ ಪುಸ್ತಕಗಳಿಗಾಗಿ ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದೆ . ಇನ್ನು ಆ ಚಿಂತೆ ಇಲ್ಲ!

Capture+_2016-06-04-21-44-33ತಮಿಳುನಾಡು ಸರಕಾರದ ಶಿಕ್ಷಣ ಪ್ರಾಧಿಕಾರವು ಕನ್ನಡ ಪುಸ್ತಕಗಳನ್ನುಅಂತರ್ಜಾಲದಲ್ಲಿ  ಮೊದಲು ಬಿಡುಗಡೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾದ  ಸಂಸ್ಥೆ. ಬಣ್ಣದ ಚಿತ್ರ, ಸರಳತೆ, ವಿಷಯ ವಿಸ್ತಾರ, ನಿರೂಪಣೆಯಿಂದ ಗುಣಮಟ್ಟದ ಪಠ್ಯಗಳನ್ನು ಕೊಡಮಾಡಿದೆ. ಒಂದನೇ ತರಗತಿಯಿಂದ ೧೨ ನೇ ತರಗತಿಯವರೆಗೆ ಎಲ್ಲಾ ವಿಷಯಗಳ ಪುಸ್ತಕಗಳು ಕನ್ನಡ, ತೆಲುಗು, ಮಲೆಯಾಳಂ ಹಾಗೂ ತಮಿಳು ಮಾಧ್ಯಮದಲ್ಲಿ ದೊರೆಯುತ್ತವೆ. ಮೊದಲು ವರ್ಷದ ಪೂರ್ಣ ಪಠ್ಯ ಲಭ್ಯವಿತ್ತು . ಈಗ ಸೆಮಿಸ್ಟರ್ ಪದ್ಧತಿಯಲ್ಲಿ ಎರೆದು ಮೂರು ಭಾಗಗಳಾಗಿ ವಿಂಗಡಿಸಿ ವಿಭಜಿಸಿದ ಕಾರಣ ಸ್ವಲ್ಪ ಅವ್ಯವಸ್ಥೆ ಅನಿಸುತ್ತದೆ.  ಮೊದಲು ಕನ್ನಡ ಭಾಷಾ ಭಾರತಿ ಪಠ್ಯ ವೂ ಇತ್ತು. ಈಗ ಭಾಷಾ ಭಾರತಿ ಆರನೆ ತರಗತಿಯಿಂದ ಮಾತ್ರ ಲಭ್ಯ. ಇದೂ ಸಹಾ ಒಂದು ಕೊರತೆ! ಆದಾಗ್ಯೂ ಇದೊಂದು ಬಲು ಉಪಯೋಗಿಯಾದ ಪ್ರಯತ್ನ. ನನ್ನ ಮಕ್ಕಳಿಗೆ ಕನ್ನಡವನ್ನು ಇದರ ಸಹಾಯದಿಂದ ಕಲಿಸುತ್ತಿದ್ದೇನೆ. ೧೨ನೇ ತರಗತಿಯ ಕನ್ನಡ ಪುಸ್ತಕದಲ್ಲಿ ಪೂರ್ಣಚಂದ್ರ ತೇಜಸ್ವಿಯವರ “ಕೃಷ್ಣೇಗೌಡನ ಆನೆ” ಕಥೆ ಇದೆ. ಧರೆಗಿಳಿಸಿಕೊಂಡು ಓದಿ.

NCERT ಅವರ ಜಾಲತಾಣದಲ್ಲಿಯೂ ಪಠ್ಯಗಳಿವೆ. ಹಿಂದೀ, ಇಂಗ್ಲೀಶು, ಉರ್ದು ಮಾಧ್ಯಮದ ಈ ಪಠ್ಯಗಳು ಕನ್ನಡ ಕಲಿಕೆಗೆ ಸಹಕಾರಿಯಾಗಿಲ್ಲ.  ೬-೮ ವರುಷಗಳಿಂದ ಇದು ಚಾಲ್ತಿಯಲ್ಲಿದ್ದರೂ ಪ್ರಾಂತೀಯ ಭಾಷೆಗಳನ್ನು ಕಡೆಗಣಿಸಲಾಗಿತ್ತು.  ಭಾರತದ ಅಧಿಕೃತ ಭಾಷೆಗಳಲ್ಲಿ ಕಲಿಕಾಸಾಮಗ್ರಿಗಳು ದೊರೆಯುವಂತೆ ಮಾಡಲು ಕೇಂದ್ರಸರಕಾರದ “ಭಾರತವಾಣಿ “ ಎಂಬ ಮಹತ್ವಾಕಾಂಕ್ಷಿ  ಯೋಜನೆಯ ಸಹಯೋಗದಲ್ಲಿ ಕನ್ನಡ ಪುಸ್ತಕಗಳು ಕರ್ನಾಟಕದಿಂದ ಕಡೆಗೂ  ಬೆಳಕು ಕಂಡಿವೆ ಹಾಗೂ ಇದನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಎಲ್ಲ ವಿಷಯದ ಪುಸ್ತಕಗಳು ಇವೆ. ಕನ್ನಡಿಗರಾದ ಬೇಳೂರು ಸುದರ್ಶನ ಅವರ ತಂಡವು ಶ್ರದ್ಧೆ ಪ್ರೀತಿಗಳಿಂದ ನಮಗೆ ಕೊಡಮಾಡಿದ್ದಾರೆ.

bharatavaniCapture+_2016-06-04-21-46-56ಇಲ್ಲಿ ಎಲ್ಲ ಪುಸ್ತಕಗಳನ್ನು PDF ಆವೃತ್ತಿಯಲ್ಲಿ ನೋಡಬಹುದು , electronic ಸ್ಲೇಟುಗಳಲ್ಲಿ, ಮಡಿಲಲ್ಲಿ ಮಗುವಾಗಿ ಮಡಿಸಿಕೊಂಡು ಮಲಗುವ, ಬಿಚ್ಚಿಕೊಂಡು ಆಡುವ ಗಣಕ ಯಂತ್ರಗಳಲ್ಲಿ ಧರೆಗಿಳೀಸಿಕೊಂಡು ಶೇಖರಿಸಿಡಬಹುದು, ಓದಬಹುದು, ಕಲಿಯಬಹುದು, ಕಲಿಸಬಹುದು!!

ಕರ್ನಾಟಕದ ಈ ಪುಸ್ತಕಗಳನ್ನು ಕರ್ನಾಟಕದ “ಕಣಜ” ದಲ್ಲೂ ಇವುಗಳನ್ನು ಪಡೆಯಬಹುದಾಗಿದೆ. ಆದರೆ, not for  copy  ಎಂಬ ನೀರಿನ ಕಲೆ ಕಡುಕಪ್ಪಾಗಿ ಕಾಣುವ ಕಾರಣದಿಂದ ಕಿರಿಕಿರಿ ಯಾಗುತ್ತದೆ. ಭಾರತವಾಣಿಯಲ್ಲಿ ಈ ತೊಂದರೆಯಿಲ್ಲ.  ಭಾರತವಾಣಿ ಎಂಬ ದೂರದೃಷ್ಟಿಪೂರ್ಣ, ಬಹುತ್ವಾಕಾಂಕ್ಷಿ  ಯೋಜನೆಯ ಒಳಹೊಕ್ಕು ಒಮ್ಮೆ ನೋದಿಬನ್ನಿ. Capture+_2016-06-04-21-48-03ಇಡೀ ಭಾರತದ ಭಾಷೆಗಳಲ್ಲಿರುವ ಜ್ಞಾನ ಗಂಗೆಯನ್ನು ಒಂದೆಡೆ ಸೇರಿಸುವ ಸಾಗರದೋಪಾದಿ ಯೋಜನೆ. ನಿಘಂಟು, ಪಠ್ಯಗಳು, Capture+1_2016-06-04-21-48-25ಜೊತೆಗೆ ಕನ್ನಡದ ವಿಶ್ವಕೋಶ ಸಹಾ ಇಲ್ಲಿ ಲಭ್ಯ! ಮಹಾರಾಷ್ಟ್ರ ಸರಕಾರದ ಕನ್ನಡದ ಪಠ್ಯಗಳು ಸಹ ಇಲ್ಲಿ ಲಭ್ಯ  ಇವೆ. ಎಲ್ಲ ತರಗತಿಯ ಎಲ್ಲ ಪುಸ್ತಕಗಳು ಇನ್ನೂ ಇಲ್ಲ. ಆದರೆ ಗುಣಮಟ್ಟದ ದೃಷ್ಟಿಯಿಂದ ತಮಿಳುನಾಡಿನ ಪುಸ್ತಕಗಳಿಗಿಂತ ಉತ್ತಮವಾದುವು. ಭಾರತವಾಣಿ ಬೆಳೆಯುತ್ತಾ ಹೋದಂತೆ ನಮ್ಮ ಆಯ್ಕೆಯ ಸಾಧ್ಯತೆಗಳು ವಿಸ್ತಾರವಾಗುತ್ತವೆ. ಬಹು ಮಾಧ್ಯಮ ಜ್ಞಾನವಾಹಿನಿಯೂ ಅಭಿವ್ರುದ್ಧಿಗೊಳ್ಳುತ್ತಿದೆ ಎಂದು ಕೇಳಿ ಬಲ್ಲೆ. ಕನ್ನಡದ ಉಳಿವು ಬೆಳವಣಿಗೆಗೆ ಆದ ಸಹಾ ಸಹಾಯಕವಾಗಬಹುದು; ಕಾಯಬೇಕು.

ಕನ್ನಡದ ಮೊದಲ ರಾಷ್ಟ್ರಕವಿ ಹಿರಿಮೆಯ ಶ್ರೀ ಗೋವಿಂದಪೈ ಅವರ  ‘ ತಾಯೆ ಬಾರಾ ಮೊಗವ ತೋರ ಕನ್ನಡಿಗರ ಮಾತೆಯೇ’ ಎಂಬ ಹಾಡಿನಲ್ಲಿ

 

ಎನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

ಮೃಗದ  ಸೇಡು  ನಮ್ಮ ಪಾಡು ಪರರ ನುಡಿಗೆ ಮಿಡುಕುವ

ಕನ್ನಡ ಕಸ್ತೂರಿಯನ್ನ ಹೊಸತು ಸಿರಿಂ ತೀಡದೆನ್ನ

ಸುರಭಿ ಎಲ್ಲಿ? ನಿನದನ್ನ ನವಶಕ್ತಿಯನೆಬ್ಬಿಸು

ಹೊಸ ಸುಗಂಧದೊಸಗೆಯಿಂದ  ಜಗದಿ ಹೆಸರ ಹಬ್ಬಿಸು

ಎನ್ನುವ  ಮಾತುಗಳಿವೆ.

ಸರಳ, ಸುಂದರ, ಸಶಕ್ತವಾದ ಕನ್ನಡ ಭಾಷೆ ತನ್ನ ಜನರಿಂದಲೇ ಅವಗಣನೆಗೆ ಒಳಗಾಗಿ ಅಳಿವು ಉಳಿವಿನ ಹೋರಾಟದಲ್ಲಿ ನಲುಗುತ್ತಿರುವಾಗ ಇದೊಂದು ಆಶಾದಾಯಕವಾದ  ಬೆಳವಣಿಗೆ. ತಾಂತ್ರಿಕ ಯುಗದ ಪಾಶ್ಚಾತ್ಯೀಕರಣದ ಹೊಡೆತಕ್ಕೆ ಸಿಕ್ಕಿ ಬಳಲಿರುವ ಭಾಷೆಗೆ ಇದು ಒಂದು ತಾತ್ಕಾಲಿಕವಾದ ಶಕ್ತಿ ನೀಡುವ ಸೂಜಿಮದ್ದು.

ಉಪಸಂಹಾರ:

Capture+_2016-06-04-21-43-29ಇಲ್ಲಿಗೆ ಎರಡು ವರುಷಗಳ ಹಿಂದೆ ನನ್ನ ಪ್ರೌಢಶಾಲಾ ಶಿಕ್ಷಕರೊಬ್ಬರ ಭೇಟಿ ಮಾಡಿದ್ದೆ. ನಾವು ಮಕ್ಕಳಾಗಿ, ವಿದ್ಯಾರ್ಥಿಗಳಾಗಿ ಅಂದು ನಾವು ಪಡುತ್ತಿದ್ದ ಪರಿಪಾಟಲುಗಳನ್ನು  ಅವರು ಮೆಲುಕುಹಾಕಿದರು.’’ ಅಂದು ನಿಮಗೆ ಕಲಿಯುವ ಆಸೆಯಿತ್ತು, ಜ್ಞಾನದ ಹಸಿವಿತ್ತು. ನಿಮ್ಮ ಆ ಅವಶ್ಯಕತೆಗಳನ್ನು ಪೂರೈಸುವ ಸೌಲಭ್ಯವಾಗಲಿ, ಆರ್ಥಿಕ ಶಕ್ತಿಯಾಗಲೀ ನಮಗಿರಲಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು, ಪೆನ್ಸಿಲ್ ಸೈಕಲ್ ,ಊಟ, ಬಟ್ಟೆ ಎಲ್ಲವೂ ಉಚಿತವಾಗಿ  ದೊರೆಯುತ್ತದೆ. ಆದರೆ ಕಲಿಯುವಂತ ಹಸಿವೆ ಅವರಲ್ಲಿ ನಮಗೆ ಕಾಣುವುದಿಲ್ಲ’’.  

ಅವರಾಗ ಹೇಳಿದ ಎರಡು ಮಾತುಗಳು ಆಗಾಗ  ನನ್ನ ಮನಃ ಪಟಲದಲ್ಲಿ ಹಾಯ್ದುಹೋಗುತ್ತಿರುತ್ತವೆ.  

ಕನ್ನಡಕ್ಕೆ ಕುರಿತಾದ ಈ ಹೊಸ ಬೆಳವಣಿಗೆಯೂ ಹಸಿವಿಲ್ಲದವನಿಗೆ ಬಡಿಸಿದ ಮೃಷ್ಠಾನ್ನವಾಗದಿದ್ದರೆ ಸಾಕು. ಅಂಗೈಯಲ್ಲಿ ಅರಮನೆಯಿದ್ದರೇನು ಭಾಗ್ಯ? ಕನ್ನಡದ ಮಕ್ಕಳು ಅನುಭವಿಸುವ ಅದೃಷ್ಟವಿಲ್ಲದ ”ಭೋಗ ಅಭಾಗ್ಯ”ರಾಗದಿದ್ದರೆ ಸಾಕು..

ನೇರವಾಗಿ ‘’ನೆಟ್ಟಿ’’ ಗೆ ಏರಿದ ಕನ್ನಡ , ತನ್ನ ಮಣ್ಣಿನ ಋಣವಿರುವ ಕನ್ನಡ ಕೂಸುಗಳ ನೆತ್ತಿಗೇರುವುದೇ ಎಂಬುದು ಯಕ್ಷ ಪ್ರಶ್ನೆ

 

ಗೋವಿಂದ ಪೈ ಗಳ ಈ ಸಾಲುಗಳೊಂದಿಗೆ ಕನ್ನಡದ ವೈಭವಕ್ಕೆ ಹಾತೊರೆಯುತ್ತಾ,,,

‘’ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ

ನೀಗದಂತೆ  ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ

ನಮ್ಮೆದೆಯಂ ತಾಯೆ ಬಲಿಸು

ಎಲ್ಲರ ಬಾಯಲ್ಲಿ ನೆಲೆಸು

ನಮ್ಮ ಮನನೊಂದೆ ಕಲಸು

ಇದನೊಂದನೆ ಕೋರುವೆ

ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ? ‘’

——————————————————–

‘’ನೆಟ್ಟಿ’’ಗೇರ್ದ ನುಡಿಯು ನೆತ್ತಿಗೇರಲದು ಅಸಾಧ್ಯವೇ ?