ಎಚ್ಚೆಸ್ವಿ ಎಂಬ ಜೀವಪರತೆ..ಭಾವದೊರತೆ

ಎಚ್ಚೆಸ್ವಿ ಕೆಲವು ಆತ್ಮೀಯ ನೆನಪುಗಳು

ಎಚ್ಚೆಸ್ವಿ ಅವರು ನನ್ನ ತಂದೆ ಜಿ ಎಸ್ ಎಸ್ ಅವರ ಪ್ರತಿಭಾವಂತ ಮತ್ತು ಆಪ್ತ ಶಿಷ್ಯರು. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ   ಕನ್ನಡ ಎಂ.ಎ ವಿದ್ಯಾರ್ಥಿಯಾದ ಮೇಲೆ (1971-1973) ನಮ್ಮ ಕುಟುಂಬಕ್ಕೆ ಪರಿಚಿತರಾದರು. ಕುವೆಂಪು ಅವರಿಗೆ ವೆಂಕಣಯ್ಯ ನವರು ಹೇಗೋ, ಜಿ ಎಸ್ ಎಸ್ ಅವರಿಗೆ ಕುವೆಂಪು ಹೇಗೋ , ಹಾಗೆ ಎಚ್ಚೆಸ್ವಿ ಅವರಿಗೆ ಜಿ ಎಸ್ ಎಸ್ ಪೂಜ್ಯ ಗುರುಗಳು. ಅದು ಅನನ್ಯವಾದ ಗುರು ಶಿಷ್ಯ ಸಂಬಂಧ. ಅಲ್ಲಿ ಪರಸ್ಪರ ಪ್ರೀತಿ, ಗೌರವ, ಸಲಿಗೆ, ಗೆಳೆತನ ಒಂದು ಹದದಲ್ಲಿ  ಇರುವಂತಹ ಒಡನಾಟ. ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸುವುದಾದರೆ "ಅಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ. ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಹತ್ತಿರವಾದದ್ದು ಬರಿಯ ವಿದ್ಯಾರ್ಥಿ ದೆಸೆಯಿಂದಲ್ಲ, ಅದಕ್ಕೆ ಮುಖ್ಯಕಾರಣ ಎಚ್ಚೆಸ್ವಿ ಒಬ್ಬ ಸೃಜನಶೀಲ ಕವಿ, ಅವರು ಸ್ನೇಹಪರರು ಮತ್ತು ಮೃದು ಸ್ವಭಾವದವರು. ಗುರು ಶಿಷ್ಯರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಸಮ್ಮೇಳನಗಳಲ್ಲಿ ಒಟ್ಟಿಗೆ ಭಾಗವಹಿಸಿದವರು. ಒಬ್ಬರ ಕವಿತೆಯನ್ನು ಇನ್ನೊಬ್ಬರು ಮೆಚ್ಚಿಕೊಂಡವರು. ಕಾಲಕ್ರಮೇಣ ಎಚ್ಚೆಸ್ವಿ ಅವರು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಪಕರಾಗಿದ್ದಾಗ ನಾವು ವಾಸವಾಗಿದ್ದ ಬನಶಂಕರಿ ಎರಡನೆಹಂತದ ೧೮ನೇ ಮುಖ್ಯ ರಸ್ತೆಯಲ್ಲಿ, ಪಕ್ಕದಲ್ಲೇ ಅವರೂ, ಮಡದಿ ರಾಜಲಕ್ಷ್ಮಿ ಮತ್ತು ಮಕ್ಕಳ ಜೊತೆ ಒಂದು ಬಾಡಿಗೆ ಮನೆಯಲ್ಲಿ ಹಲವಾರು ವರ್ಷಗಳ ಅವಧಿಯಲ್ಲಿ ವಾಸವಾಗಿದ್ದರು. ಗುರು ಶಿಷ್ಯರು ಸಾಹಿತ್ಯ ಸಮ್ಮೇಳನಗಳ ನಡುವೆ ಹಲವಾರು ಪ್ರವಾಸವನ್ನು ಕೈಗೊಳ್ಳುತ್ತಿದ್ದರು, ಕೆಲವೊಮ್ಮೆ ಮಾರ್ನಿಂಗ್ ವಾಕ್ ಮಾಡುತ್ತಿದ್ದರು. ಸೂರ್ಯದಯವನ್ನು ಒಟ್ಟಿಗೆ ನಿಂತು ವೀಕ್ಷಿಸುತ್ತಿದ್ದರು. ಆ ವೇಳೆ ಎಚ್ಚೆಸ್ವಿ ಏನಾದರೂ ಹರಟೆಗೆ ತೊಡಗಿದರೆ, ಜಿ ಎಸ್ ಎಸ್ ಅವರು 'ಶುಶ್ ಸುಮ್ಮನಿರಿ ಸೂರ್ಯೋದಯವನ್ನು ನಿಶಬ್ದದಲ್ಲಿ ನೋಡೋಣ' ಎನ್ನುತ್ತಿದ್ದರಂತೆ! (ಇದರ ಬಗ್ಗೆ ಎಚ್ಚೆಸ್ವಿ ಅವರು ಒಂದು ಕಡೆ ಬರೆದಿದ್ದಾರೆ) ವಾಕಿಂಗ್ ಬಳಿಕ ಗುರು ಶಿಷ್ಯರು ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಅಲ್ಲಿ ಮಸಾಲೆ ದೋಸೆ ಕಾಫಿ ಸವಿದು ಬರುತ್ತಿದ್ದರು. ಜಿ ಎಸ್ ಎಸ್ ಅವರೇ ವಿದ್ಯಾರ್ಥಿಭವನದ ಬಿಲ್ಲು ಕಟ್ಟುತ್ತಿದ್ದರೆಂದು ಎಚ್ಚೆಸ್ವಿ "ಬಿಲ್ಲೋಜ ಜಿ ಎಸ್ ಎಸ್ " ಎಂಬ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ. ಸ್ವಾರಸ್ಯಕರವಾದ ಸಂಗತಿ ಎಂದರೆ ಗುರು ಶಿಷ್ಯರಿಬ್ಬರೂ ತಮ್ಮ ಪತ್ನಿಯರಿಗೆ ವಿದ್ಯಾರ್ಥಿ ಭವನಕ್ಕೆ ಹೋಗುತ್ತಿದ್ದೇವೆ ಎಂಬ ಸುಳಿವು ಕೊಡುತ್ತಿರಲಿಲ್ಲವಂತೆ. (ಹೋಟೆಲ್ಗೆ ಹೋಗಿ ಯಾಕೆ ತಿನ್ನ ಬೇಕು ಕೇಳಿದ್ದರೆ ಮನೆಯಲ್ಲೇ ಮಾಡಿಕೊಡುತ್ತಿದ್ದೆವಲ್ಲ ಎಂಬ ಮಡದಿಯ ಆಕ್ಷೇಪಣೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ) ನಮ್ಮ ಮನೆಯಲ್ಲಿ ಪ್ರತಿ ವರ್ಷ ಮೇ ತಿಂಗಳ ಕೊನೆಗೆ ಮಾವಿನ ಹಣ್ಣಿನ ಸೀಸನ್ ಮಧ್ಯದಲ್ಲಿ ಅಪ್ಪ, ಅವರ ಆತ್ಮೀಯ ಸಾಹಿತಿ ಮಿತ್ರರನ್ನು ಹೋಳಿಗೆ ಸೀಕರಣೆ ಊಟಕ್ಕೆ ಆಹ್ವಾನಿಸುತ್ತಿದ್ದರು, ಅದರಲ್ಲಿ ಎಚ್ಚೆಸ್ವಿ ಅವರು ಇದ್ದೇ ಇರುತ್ತಿದ್ದರು. ಅಪ್ಪ ಶುರುವಿನಲ್ಲಿ ಎಚ್ಚೆಸ್ವಿ ಅವರಿಗೆ ಹೇಗೆ ಹೋಳಿಗೆಗೆ ತುಪ್ಪಕಲೆಸಿ ನಂತರ ಸೀಕರಣೆಯನ್ನು ಕಿವುಚಿ ಒಂದು ಹದದಲ್ಲಿ ಮಿಕ್ಸ್ ಮಾಡಿ ತಿನ್ನಬೇಕು ಎಂಬುದನ್ನು ತಿಳಿಸಿಕೊಟ್ಟದ್ದನ್ನು ಎಚ್ಚೆಸ್ವಿ ತಮ್ಮ ಒಂದು ಬರಹದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಗುರು ಶಿಷ್ಯರಿಬ್ಬರು ತಮ್ಮ ಕೃತಿಗಳನ್ನು ಪರಸ್ಪರ ವಿಮರ್ಶೆ ಮಾಡಿದ್ದಾರೆ. ಎಚ್ಚೆಸ್ವಿ ಅವರು 'ಜಿ ಎಸ್ ಎಸ್ ಬದುಕು ಬರಹ' ಎಂಬ ವಿಮರ್ಶೆ ಕೃತಿಯನ್ನು ೨೦೧೨ರಲ್ಲಿ ಪ್ರಕಟಿಸಿದ್ದಾರೆ. 'ಎಚ್ಚೆಸ್ವಿ ಸಮಗ್ರ ಕವಿತೆಗಳು' ಎಂಬ ಬೃಹತ್ ಕೃತಿಯನ್ನು ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಅರ್ಪಣೆಮಾಡಿರುವುದು ಆ ಗುರು ಶಿಷ್ಯರ ಅನ್ಯೋನ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ಜಿ ಎಸ್ ಎಸ್ ಅವರೂ ಎಚ್ಚೆಸ್ವಿ ಅವರ ಕೃತಿಗಳನ್ನು ಕುರಿತು ಅನೇಕ ಬರಹಗಳನ್ನು ಬರೆದಿದ್ದಾರೆ.

ವಾರಾಂತ್ಯ ಹತ್ತುಗಂಟೆಯ ನಂತರ ಎಚ್ಚೆಸ್ವಿ ನಮ್ಮ ಮನೆ ಬಾಗಿಲು ಬಡಿದಾಗ ನಾನು ಅಥವಾ ಅಮ್ಮ ಬಾಗಿಲು ತೆರದ ಕೂಡಲೇ 'ಮೇಷ್ಟ್ರು ಇದಾರ' ಎಂದು ಮುಗುಳ್ನಗುತ್ತಿದ್ದರು, 'ಬನ್ನಿ ಒಳಗೆ' ಎಂದಾಗ ಅವರು ನೇರವಾಗಿ ಅಪ್ಪನ ಲೈಬ್ರರಿ/ಸ್ಟಡಿ ಕೋಣೆಯೊಳಗೆ ಕೂತು ಅಪ್ಪನನ್ನು ಭೇಟೆಯಾಗುತ್ತಿದ್ದರು. ಈ ಗುರು ಶಿಷ್ಯರು ಗಂಟೆಗಟ್ಟಲೆ ಸಾಹಿತ್ಯ ಸಂವಾದದಲ್ಲಿ ತೊಡಗುತ್ತಿದ್ದರು. ಕೆಲವೊಮ್ಮೆ ಇವರ ಜೊತೆ ಸಿ ಅಶ್ವಥ್, ಸುಮತೀನ್ದ್ರ ನಾಡಿಗ, ಎಚ್ ಎಸ್ ರಾಘವೇಂದ್ರ ರಾವ್ ಮತ್ತಿತರು ಬಂದು ಸೇರಿಕೊಳ್ಳುತ್ತಿದ್ದರು. ಸಂವಾದ ಮುಗಿದನಂತರ ನಾನು ವೆರಾಂಡದಲ್ಲಿ ಅಥವಾ ಅಂಗಳದ ಗೇಟು ಹಾಕಲು ಬಂದಾಗ ಡಾಕ್ಟ್ರೇ ಹೇಗಿದ್ದೀರಾ, ಕ್ಲಿನಿಕ್ ಹೇಗೆ ನಡೀತಾಯಿದೆ ಇತ್ಯಾದಿ ಸಾಹಿತ್ಯದ ಆಚೆಯ ಮಾತುಗಳನ್ನು ಆಡುತ್ತಿದ್ದರು. ಯೌವ್ವನದಲ್ಲಿ ನನ್ನ ವೈದ್ಯಕೀಯ ವೃತ್ತಿ ನನ್ನನ್ನು ಆವರಿಸಿಕೊಂಡಿದ್ದು ನನಗೆ ಸಾಹಿತ್ಯದ ಬಗ್ಗೆ ಗಮನ ಕೊಡಲು ಸಮಯದ ಅವಕಾಶವೇ ಇರಲಿಲ್ಲ, ಸಾಹಿತ್ಯಾಸಕ್ತಿ ಹಿಂದೆಯೇ ಉಳಿದಿದ್ದ ಕಾಲವದು. ನಾನು ಮತ್ತು ಎಚ್ಚೆಸ್ವಿ ಸಾಹಿತ್ಯ ಸಂವಾದಕ್ಕೆ ತೊಡಗಿದ್ದು ನಾನು ಇಂಗ್ಲೆಂಡಿಗೆ ಬಂದಮೇಲೆ ಎನ್ನ ಬಹುದು. ಆ ಕಾಲಕ್ಕೆ ನನಗೆ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿತ್ತು, ಓದಲು ಬರೆಯಲು ಸಮಯ ಮತ್ತು ಅವಕಾಶ ಎರಡು ದಕ್ಕಿದ್ದವು.

ಅಂದಹಾಗೆ ನನಗೆ ಎಚ್ಚೆಸ್ವಿ ಅವರ ಸಾಹಿತ್ಯ ಪರಿಚಯವಾದದ್ದು ಸುಗಮ ಸಂಗೀತದ ಮೂಲಕವೇ. ನನಗೆ ಅವರು ಹೆಚ್ಚು ಹತ್ತಿರವಾದದ್ದು ನಾನು ಕನ್ನಡದಲ್ಲಿ ಕವನಗಳನ್ನು ಪ್ರಬಂಧಗಳನ್ನು ರಚಿಸಲು ಶುರುವಾದಾಗ. ಈ ವೇಳೆಗೆ ಅಪ್ಪ ತೀರಿಕೊಂಡಿದ್ದರು. ಎಚ್ಚೆಸ್ವಿ ಅವರು ಇಂಗ್ಲೆಂಡಿಗೆ ಕನ್ನಡ ಬಳಗದ ಆಹ್ವಾನದ ಮೇರೆಗೆ ಇಲ್ಲಿ ಬಂದಾಗ ನಮ್ಮ ಬಾಂಧವ್ಯ ಹೆಚ್ಚಾಯಿತು. ನಾನು ಬೆಂಗಳೂರಿಗೆ ಹೋದಾಗ ಎಚ್ಚೆಸ್ವಿ, ಬಿ ಆರ್ ಲಕ್ಷ್ಮಣ ರಾವ್, ಡುಂಡಿರಾಜ್, ಜೋಗಿ ಇವರೊಡನೆ ಅನೇಕ ಕ್ಲಬ್ ಮತ್ತು ಹೋಟೆಲಿನಲ್ಲಿ ಭೋಜನ ಕೂಟಗಳಲ್ಲಿ ಒಡನಾಡುವ ಅವಕಾಶ ಒದಗಿ ಬಂತು. ವಿಸ್ಕಿ ಸೇವೆನಯಲ್ಲೂ ಎಚ್ಚೆಸ್ವಿ ಮಿತವಾಗಿ ಒಂದು ಪೆಗ್ ಸೇವಿಸಿ ನಂತರ ಎರಡನೇ ಪೆಗ್ಗಿಗೆ ಒತ್ತಾಯಿಸಿದಾಗ ಬೇಡವೆಂದು ‘ನನ್ನದು ಅದ್ವೈತ ಫಿಲಾಸಫಿ’ ಎಂದು ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದರು. ಎಚ್ಚೆಸ್ವಿ ಉತ್ತಮ ವಾಗ್ಮಿಗಳು, ಸಾಮಾನ್ಯವಾಗಿ ಅವರು ಸಭೆಗಳಲ್ಲಿ ಸುಮಾರು 15-20 ನಿಮಿಷಕ್ಕಿಂತ ಹೆಚ್ಚು ಮಾತನಾಡಿದ್ದನ್ನು ನಾನು ಕೇಳಿಲ್ಲ. ಆ ಮಿತವಾದ ಭಾಷಣದಲ್ಲಿ ಸರಳತೆ, ಸ್ಪಷ್ಟತೆ, ಪದಗಳ ಬಳಕೆ ಮತ್ತು ವಿಚಾರಗಳು ಸೊಗಸಾಗಿರುತ್ತಿತ್ತು. 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದ ಸಾಲುಗಳು ನೆನಪಿಗೆ ಬರುತ್ತಿತ್ತು.

ನಾನು ಬರೆಯಲು ಶುರುಮಾಡಿದಾಗ ನನ್ನ ಕೋರಿಕೆಯ ಮೇಲೆ ಎಚ್ಚೆಸ್ವಿ ನನ್ನ ಎಲ್ಲ ಬರಹಗಳನ್ನು ಓದಿ, ಸೂಕ್ತ ಸಲಹೆಗಳನ್ನು ನೀಡಿ, ಪ್ರಕಟಿಸಲು ಉತ್ತೇಜನ ನೀಡುತ್ತಿದ್ದರು. ನನ್ನ ಚೊಚ್ಚಲ ಕವನ ಸಂಕಲನ 'ಇಂಗ್ಲೆಂಡಿನಲ್ಲಿ ಕನ್ನಡಿಗ' ಕೃತಿಗೆ ಮುನ್ನುಡಿಯನ್ನು ಬರೆದು, ನನ್ನ ‘ಪಯಣ’ ಕಾದಂಬರಿಗೆ ಬೆನ್ನುಡಿಯನ್ನು ಕೂಡ ಬರೆದುಕೊಟ್ಟರು. ನಾನು ಒಂದು ರೀತಿ ಅವರ ಶಿಷ್ಯನೂ ಹೌದು. ಅವರಿಗೆ ಕಾಣಿಕೆಯಾಗಿ ನನ್ನ ಇತ್ತೀಚಿನ 'ಮೊನಾಲೀಸಾ' ಎಂಬ ಕವನ ಸಂಕಲನವನ್ನು ಅವರಿಗೆ ಅರ್ಪಿಸಿದ್ದೇನೆ. ಎಚ್ಚೆಸ್ವಿ ಅವರು ಶೆಫೀಲ್ಡ್ ನಗರಕ್ಕೆ ಆಗಮಿಸಿ ಯುಕೆ ಕನ್ನಡ ಬಳಗದ ಆಶ್ರಯದಲ್ಲಿ ನಡೆದ 2013 ದೀಪಾವಳಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅನಿವಾಸಿ ಸಾಹಿತ್ಯ ಅಂಗದ ಉದ್ಘಾಟನೆ ಮಾಡಿದ್ದನ್ನು ನಾನು ಸ್ಮರಿಸುತ್ತೇನೆ. ಈ ಸಾಹಿತ್ಯ ಅಂಗ ಈಗ ಎತ್ತರಕ್ಕೆ ಬೆಳದಿದೆ. ಆ ಸಂದರ್ಭದಲ್ಲಿ ಎಚ್ಚೆಸ್ವಿ ಅವರು ‘ಬೆಂಗಳೂರಿಗಿಂತ ಇಲ್ಲಿ ಹೆಚ್ಚು ಕನ್ನಡ ಕೇಳಿ ಬರುತ್ತಿದೆ’ ಎಂದು ಮಾತನಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ಆ ವಿಚಾರ ನಮ್ಮ ಯುಕೆ ಅನಿವಾಸಿ ಕನ್ನಡಿಗರಿಗೆ ಹೆಮ್ಮೆಯ ವಿಷಯ. ನನ್ನ ಮತ್ತು ಎಚ್ಚೆಸ್ವಿ ನಡುವಿನ ವಾಟ್ಸ್ ಆಪ್ ಸಂದೇಶಗಳನ್ನು ನೆನೆದು ಕೆಳಗೆ ಹಂಚಿಕೊಳ್ಳುತ್ತಿದ್ದೇನೆ. ಸಂದರ್ಭ; ನನ್ನ ‘ಪಯಣ’ ಎಂಬ ಕಾದಂಬರಿ ತಯಾರಾಗುತ್ತಿದ್ದ ಸಮಯ.

"ಪ್ರಿಯ ಡಾ.ಪ್ರಸಾದ್
ನಿಮ್ಮ ಕಾದಂಬರಿಯನ್ನು ಒಂದೇ ಪಟ್ಟಿನಲ್ಲಿ ಓದಿ ಆನಂದಿಸಿದೆ. ಇನ್ನು ನೀವು ವೈದ್ಯಕೀಯದೊಂದಿಗೆ ಸಾಹಿತ್ಯ ಕೃಷಿ ಯಲ್ಲೂ ತೊಡಗಬೇಕು. ಲೀಲಾ ಜಾಲವಾಗಿ, ಎಲ್ಲೂ ಓದುಗರ ಆಸಕ್ತಿ ಕುಂದದಂತೆ ಕಥೆಯನ್ನು ನಿರೂಪಿಸಿದ್ದೀರಿ. ನಾಯಿಯು ಇಲ್ಲಿ ನಮಗೆಲ್ಲ ಆಪ್ತವಾಗುತ್ತದೆ. ಅದರ ನೋವು ನಮ್ಮ ನೋವಾಗುತ್ತದೆ. ಮಕ್ಕಳಿಗೆ ನಾಯಿ ಯಾಕೆ ಪ್ರಿಯವಾಗುತ್ತದೆ ಎಂಬುದು ನನಗೆ ಈಗ ಮನದಟ್ಟಾಯಿತು. ಮುಗ್ಧತೆ ಮತ್ತು ಸಹಜ ಪ್ರೀತಿ ಎರಡು ಜೀವಕ್ಕೂ ಸಮಾನ. ಸಿನಿಮಾಕ್ಕೆ ಲಾಯಕ್ಕಾಗಿದೆ. ಸಿನಿಮೀಯ ಎನ್ನಿಸದು. ಇದೊಂದು ಲೋಕಪ್ರೀತಿಯ ಸಹಜ ಕಲಾಕೃತಿ"

"ಧನ್ಯವಾದಗಳು ಎಚ್ಚೆಸ್ವಿ ತುಂಬಾ ಖುಷಿಯಾಯಿತು. ಈ ಕೃತಿಗೆ ‘ಸಾರ್ಥಕ ಪಯಣ’ ಎಂಬ ಹೆಸರನ್ನು ಆಯ್ಕೆ ಮಾಡಿರುವೆ"

" ಹೆಸರು ತುಂಬಾ ಗದ್ಯಮಯ. ಯಾನ…ಅಷ್ಟೇ ಸಾಕು. ಅಥವಾ ಪಯಣ ಎಂದು ಇಡಬಹುದು"

“ಪಯಣ ಬಹುಶಃ ಸೂಕ್ತವಾಗಿರಬಹುದು. ‘ಯಾನ’ ಎನ್ನುವ ಹೆಸರಲ್ಲಿ ಭೈರಪ್ಪನವರ ಕಾದಂಬರಿ ಇದೆ. ನನ್ನ ಈ ಕಥೆ ಸರಳವಾಗಿರಬಹುದು"

"ಸರಳತೆ ಗುಣವೋ ದೋಷವೋ ಎಂಬ ವಾಗ್ವಾದ ಇನ್ನೂ ಬಗೆಹರಿದಿಲ್ಲ...!"


ಎಚ್ಚೆಸ್ವಿ ಅವರ ಹಲವಾರು ಬರಹಗಳಲ್ಲಿ, ಮಾತುಗಳಲ್ಲಿ ಸರಳತೆ ಇದ್ದುದನ್ನು ನಾವೆಲ್ಲಾ ಗಮನಿಸಿದ್ದೇವೆ. ಕಥೆ, ಕವನ ಸಂಕೀರ್ಣವಾಗಿರಬೇಕು, ಆಗ ಅದಕ್ಕೆ ಹೆಚ್ಚು ಬೆಲೆ, ಸರಳತೆ ಒಂದು ದೋಷ ಎಂಬ ನನ್ನಲ್ಲಿದ್ದ ಕಲ್ಪನೆಯ ಹಿನ್ನೆಲೆಯಲ್ಲಿ ಅವರ ಮಾತುಗಳು ಅರ್ಥಪೂರ್ಣವಾಗಿ ತೋರಿದವು. ಸರಳವಾಗಿ ಬರೆಯುವುದೂ ಒಂದು ಕಲೆ ಎಂಬ ಆಲೋಚನೆ ಮೂಡಿಬಂತು. ಎಚ್ಚೆಸ್ವಿ ಅವರು ಬಹಳ ಶ್ರದ್ಧಾವಂತರು. ಅವರು ಶೇಫಿಲ್ಡ್ ನಗರದ ನಮ್ಮ ಮನೆಯಲ್ಲಿ ಒಂದು ವಾರ ತಂಗಿದ್ದಾಗ ‘ಶೆಫೀಲ್ಡ್ ಕವಿತೆಗಳು’ ಎಂಬ ನೀಳ್ಗವನದ ರಚನೆಯಲ್ಲಿ ತೊಡಗಿದ್ದರು. ಅವರು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕುಳಿತು, ತೀಕ್ಷ್ಣ ಕವಿಸಮಯದಲ್ಲಿ ಮೂಡಿತ್ತಿದ್ದ ಸಾಲುಗಳನ್ನು ದಾಖಲಿಸುತ್ತಿದ್ದರು. ಮುಂದಕ್ಕೆ ‘ಶೆಫೀಲ್ಡ್ ಕವಿತೆಗಳು’ ಎಂಬ ಕೃತಿಯನ್ನು ಅವರು ಹೊರತಂದರು. ಆ ಕೃತಿಯನ್ನು ಕುರಿತು ‘ಎಚ್ಚೆಸ್ವಿ ಅವರ ಶೇಫಿಲ್ಡ್ ಕವಿತೆಗಳ ಬಗ್ಗೆ ಶೆಫೀಲ್ಡ್ ನಿವಾಸಿಯ ಅನಿಸಿಕೆಗಳು’ ಎಂಬ ಬರಹವನ್ನು ನಾನು ‘ಸಮಾಹಿತ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಎಚ್ಚೆಸ್ವಿ ಅವರು ಫೋನ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಆ ಕೃತಿಯನ್ನು ನನಗೆ ಮತ್ತು ನನ್ನ ಶ್ರೀಮತಿ ಪೂರ್ಣಿಮಾಗೆ ಅರ್ಪಣೆಮಾಡಿದ್ದು ಅದು ನನಗೆ ಅತ್ಯಂತ ಗೌರವದ ವಿಷಯ.
*
~ ಡಾ ಜಿ ಎಸ್ ಪ್ರಸಾದ್

ಎಚ್ಚೆಸ್ವಿಯವರ ಸಂದರ್ಶನ 

ಸಂದರ್ಶಕಿ – ಡಾ. ಪ್ರೇಮಲತಾ

‘ ಉರಿಯ ಉಯ್ಯಾಲೆ’ಯ  ಆಯ್ದ ಭಾಗಗಳು

~ ಚಿನ್ಮಯಿ

~ ಅಕ್ಷತಾ

ವಿದಾಯ ಹೇಳಬಹುದೇ ಇಷ್ಟು ಸುಲಭಕ್ಕೆ ನಿಮಗೆ? 

“ ಕಥೆ ಮುಗಿಯುವಾಗ ಚಡಪಡಿಕೆ ಪಾತ್ರಕ್ಕಷ್ಟೇ.
ಕೃತಿ ಮುಗಿದ ತೃಪ್ತಿ ಬರೆದವಗೆ.
ಇಷ್ಟು ದಿನ ಎಡೆಬಿಡದೇ ಬರೆದ ಬೆರಳಿಗೆ ಬಿಡುವು.
ಹೊರೆ ಇಳಿದ ಗೆಲುವು ಮುಖದೊಳಗೆ.”
( ಒಂದು ಕಥೆ – ಉತ್ತರಾಯಣ ಮತ್ತು...)
HSV ಹೋದರಂತೆ.. ಎಂಬ ಸುದ್ದಿ ಕೇಳಿದಾಗಿನಿಂದ ಅದೇನೋ ನನ್ನ ಮನದ ಭಾವಗಳೆಲ್ಲ ಹೆಪ್ಪುಗಟ್ಟಿದಂಥ ಅನುಭವ. ಎರಡಕ್ಷರದ ಶ್ರದ್ಧಾಂಜಲಿಯನ್ನೂ ಬರೆಯಲಾಗದ ಭಾವ ಜಡತೆ. ಬರೆದು ಮುಗಿಸಿಬಿಟ್ಟರೆ ಅದೆಲ್ಲಿ ಕವಿಯೊಡನೆಯ ಕೊನೆಯ ಋಣವೂ ಹರಿದುಕೊಂಡು ಬಿಡುತ್ತದೋ ಎನ್ನುವ ತಳಮಳ..ಆತಂಕ. ಬರೆಯದೇ ಹೋದರೆ ಅತೀ ಮಹತ್ವದ ಕಾರ್ಯವನ್ನೇನೋ ಬೇಕೆಂದೇ ಅಲಕ್ಷ್ಯ ಮಾಡುತ್ತಿರುವ ಚಡಪಡಿಕೆ..ಅಪರಾಧೀ ಭಾವ. ಅಂತೂ ಕೊನೆಗೂ ಪ್ರೀತಿಯ ಕಣ್ಣ ಕಂಬನಿಯಷ್ಟೇ ಅವರಿಗೆ ನಾವು ನೀಡಬಹುದಾದ ಕಾಣಿಕೆ.
ಜೀವ-ಜೀವನ ಪ್ರೀತಿ, ಜಗದ ಚೆಲುವು- ಒಲವು, ಅತೀ ಸೂಕ್ಷ್ಮ ಅಷ್ಟೇ ಬಲವತ್ತರವಾದ ಮಾನವ ಭಾವಲೋಕದ ಅನಾವರಣ, ತಾಳುವಿಕೆ, ಒಗ್ಗುವಿಕೆ ತನ್ಮೂಲಕ ಮಾಗುವಿಕೆ ಈ ಕವಿಯ ಸಾಹಿತ್ಯದ ಮುಖ್ಯ ಪ್ರತಿಪಾದನೆಗಳು. ಈ ಜೀವ ಜಗತ್ತಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಿಗೂ ಇವರು ಕಿವಿಯಾಗುತ್ತಾರೆ; ಕಣ್ಣಾಗುತ್ತಾರೆ; ದನಿಯಾಗುತ್ತಾರೆ; ಹಾಡಾಗುತ್ತಾರೆ. ‘ಶ್ರೀ ಸಂಸಾರಿ’ಯ ಶ್ರೀರಾಮಚಂದ್ರನನ್ನು, ‘ ಆಪ್ತ ಗೀತೆ’ ಯ ಶ್ರೀಕೃಷ್ಣನನ್ನು, ‘ ಬುದ್ಧ ಚರಣದ’ ತಥಾಗತನನ್ನು ಎಷ್ಟು ಮಣ್ಣಿನ ಮಕ್ಕಳನ್ನಾಗಿ ಮಾಡಿ ಮರ್ತ್ಯರಾದ ನಮಗೆ ಅವರೆಲ್ಲರನ್ನು ಅತ್ಯಾಪ್ತರಾಗಿಸುತ್ತಾರೆ.ಧನುರ್ಧಾರಿ ರಾಮನ ಹೆಗಲಮೇಲಿನ ಬಿಲ್ಲು-ಬಾಣ ಕೆಳಗಿಳಿಸಿ ಅಲ್ಲೊಂದು ಪುಟ್ಟ ಅಳಿಲನ್ನು ಕೂಡಿಸುತ್ತಾರೆ. ರಾಜಸೇವೆಗಷ್ಟೇ ಮಿಗಿಲಾದ ‘ ಪುಷ್ಪಕ’ ದಲ್ಲಿ ವಾನರ – ಭಲ್ಲೂಕಾದಿಗಳಿಗೂ ಸೀಟು ಕೊಡಿಸಿಬಿಡುತ್ತಾರೆ. ಗೊಲ್ಲರ ಹುಡುಗ ‘ ಯಾದವ’, ‘ಕಾದವ’, ‘ ಸೇವಕ’ , ಶ್ರಾವಕ’ ನಾದ ಕಥೆ ಬಣ್ಣಿಸುತ್ತಾರೆ. ಲೋಕದ ಕಣ್ಣಿಗೆ ಕೇವಲ ಹೆಣ್ಣಾದ ರಾಧೆಯನ್ನು ಕೃಷ್ಣನನ್ನು ಕಾಣಿಸುತ್ತಾರೆ. ದ್ರೌಪದಿ, ಪೃಥೆ, ಮಂಥರೆ, ಊರ್ಮಿಳೆಯರ ಎದೆಯಾಳಕ್ಕಿಳಿದು ಮಂಥನ ನಡೆಸುತ್ತಾರೆ; ಹೃದಯ ಸಮುದ್ರದ ಹಾಲಾಹಲ - ಸುಧಾರಸಗಳನ್ನು ಹೊರ ಚೆಲ್ಲುತ್ತಾರೆ. “ ಕೊಂದವನದಲ್ಲ ಕಾದವನದ್ದು ಹಕ್ಕಿಯ ಹಕ್ಕು” ಎಂದು ಹೇಳಿ ಬುದ್ಧನ ಶಾಂತಿ- ಕರುಣೆಗಳಲ್ಲಿ ಮನ ತೊಯ್ಯಿಸುತ್ತಾರೆ.
“ ತಾನು ಕರಗದೇ ಮಳೆ ಸುರಿಸುವುದೇ ಶ್ರಾವಣದ ಸಿರಿ ಮುಗಿಲು?”, ‘ ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ’, ‘ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ’, ‘ತಾನೇ ಕಡಲಾಗಲು ಹೊರಟ ಗಂಗೆಗೆ ಆಣೆಕಟ್ಟು ಕಟ್ಟುವರಾರು?’, ‘ ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೇ? ‘....ಎಂಥೆಂಥ ಅದ್ಭುತ ಸಾಲುಗಳನ್ನವರು ಕೊಟ್ಟಿದ್ದು..ಪಟ್ಟಿ ಮಾಡುತ್ತ ಹೋದರೆ ಬೆಳಗಾಗುತ್ತದೆ. ಅವರ ಜೀವನ ಹಾಗೂ ಕೃತಿಗಳ ಕಿರುಪರಿಚಯ ಇಂತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ 1944ರ ಜೂನ್‌ 23ರಂದು ಜನಿಸಿದರು. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ.
ಪ್ರಾಥಮಿಕ ಶಿಕ್ಷಣ ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗದಲ್ಲಿ ಮಾಡಿದರು. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್‌ ಆಗಿ ಉದ್ಯೋಗ ಆರಂಭಿಸಿದರು.
ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿ ಪದವಿ ಗಳಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಎಚ್ಚೆಸ್ವಿ ರಚಿಸಿದ ಮುಖ್ಯ ಕಾವ್ಯ ಕೃತಿಗಳು: ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ). ಮಹಾಕಾವ್ಯ: ಬುದ್ಧ ಚರಣ
ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ).
ಮಕ್ಕಳ ಸಾಹಿತ್ಯಕ್ಕೆ ಕೊಡುಗೆ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು).
ಕಾದಂಬರಿ: ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು.
ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕಿರುತೆರೆ–ಚಲನಚಿತ್ರ: ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ.‌‌ ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.
ಪ್ರಶಸ್ತಿಗಳು: 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಕವಿಯ ಭೌತಿಕ ಶರೀರಕ್ಕೆ ಮಾತ್ರ ಕೊನೆ ಯಶ: ಕಾಯಕ್ಕಲ್ಲ ಎನ್ನುವುದು ಸರ್ವವಿದಿತ . ಅಕ್ಷರಗಳ ಅಕ್ಷಯವಾದ ಅಪೂರ್ವ ನಿಧಿಯನ್ನು ನಮಗಾಗಿ ಬಿಟ್ಟು ಹೋದ ನೆಚ್ಚಿನ ಕವಿಗೆ ಅಶ್ರುಪೂರ್ಣ ಭಾವನಮನ.
“ ಮುಳುಗಿದರೆ ಮುಳುಗಬೇಕೀ ರೀತಿ
ಹತ್ತು ಜನ ನಿಂತು ನೋಡುವ ಹಾಗೆ..
ಗೌರವ ಬೆರೆತ ಬೆರಗಲ್ಲಿ.
ಸೂರ್ಯ ಮುಳುಗುವ ಮುನ್ನ,
ಓಡೋಡಿ ಬರುವ ಜನ ಕೈ ಮುಗಿವ ಹಾಗೆ
ಮುಳುಗಲ್ಲಿ ಮುಳುಗಿ”
( ಆಗುಂಬೆಯ ಸೂರ್ಯಾಸ್ತ ).
ಓಂ ಶಾಂತಿರಸ್ತು
~ ಗೌರಿಪ್ರಸನ್ನ

ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫ ಸಾಹೇಬರು – ಶ್ರೀವತ್ಸ ದೇಸಾಯಿ ಲೇಖನ

”ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ” ಸರಣಿಯಲ್ಲಿ ಭಾಗ - 4. ಯು.ಕೆ ಕನ್ನಡ ಬಳಗದ  ಯುಗಾದಿ ಹಬ್ಬದ ಸಂಭ್ರಮದಲ್ಲಿ (ಮೇ 3, 2025) ಅನಿವಾಸಿ ಸಾಹಿತ್ಯಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಈ ಸಾಹಿತ್ಯ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಶರಣರ, ದಾಸರ ಮತ್ತು ಸಂತರ ಕೊಡುಗೆ’ಯನ್ನು ಕುರಿತು ಕ್ಗಾಳ್ಲೆೆದ ಮೂರು ವಾರಗಳಲ್ಲಿ ಮೂರು ಸದಸ್ಯರು ತಮ್ಮ ಚರ್ಚೆಯನ್ನು ಮಂಡಿಸಿದರು. ಇದು ಕೊನೆಯ ಭಾಗ. ಇದರಲ್ಲಿ ತತ್ವಪದಕಾರ ಶಿಶುನಾಳ ಶರೀಫ್ ಸಾಹೇಬರ ಕೊಡುಗೆಯನ್ನು ಇಲ್ಲಿ ಚರ್ಚಿಸಲಾಗಿದೆ. ಆ ದಿನ ಮಂಡಿಸಿದ ಭಾಗದ ವಿಸ್ತೃತ ಆವೃತ್ತಿ ಇದು.

ಶರಣರು ಮತ್ತು ದಾಸರ ನಂತರದ ಕಾಲ ಶಿಶುನಾಳ ಶರೀಫರದು. ಅವಾಗಾಗಲೇ ಬ್ರಿಟಿಷರು ಭಾರತದಲ್ಲಿ ತಳವೂರಿ ವಿಕ್ಟೊರಿಯಾ ಮಹಾರಾಣಿಯ ಆಡಳಿತ ಪ್ರಾರಂಭವಾಗಿತ್ತು. ಅವರ ಒಂದು ಕೃತಿಯಲ್ಲಿ (ತತ್ವಪದದಲ್ಲಿ) ಸಹ ಅದರ ಪರೋಕ್ಷ ಉಲ್ಲೇಖವನ್ನು ಗುರುತಿಸಲಾಗಿದೆ. ಅವರಿಗೆ ನೂರಾರು ‘ಗೀತೆ’ಗಳನ್ನು ರಚಿಸಿದ ವರಿಂದಕೀರ್ತಿ ಸಲ್ಲುತ್ತದೆ. ಕಂಬಾರ ಮುದುಕಪ್ಪನ ಮಗಳಾದ ಬಸಮ್ಮಳ ಸುಶ್ರಾವಕ ದನಿಯಲ್ಲಿ ಹಾಡಿಸಿದ್ದವುಗಳ ದಾಖಲೆ ಸಿಗುತ್ತವೆ. ಆದರೆ ಎಲ್ಲವನ್ನೂ ಯಾರೂ ಬರೆದಿಟ್ಟಿಲ್ಲವಾದ್ದರಿಂದ ನಿಖರವಾದ ಸಂಖ್ಯೆ ದೊರೆಯುವದಿಲ್ಲವಂತೆ.
ಮುಸಲ್ಮಾನ ಕುಟುಂಬದಲ್ಲಿ ಹುಟ್ಟಿದ್ದರೂ ಅವರ ತಂದೆ ‘ಹಿಂದುಗಳ ಮಂತ್ರ, ತಂತ್ರ ಶಾಸ್ತ್ರ, ಜ್ಯೋತಿಷ, ಪುರಾಣ ಇವೆಲ್ಲವಕ್ಕೂ ಮನಸ್ಸು ತೆತ್ತಿದ್ದರಿಂದ’ ಅವರ ಪ್ರಭಾವದಿಂದ ಶರೀಫರು ಎರಡೂ ಮತಗಳನ್ನು ಕಲೆಸಿ ಉಂಡಿದ್ದರು.’ ಅವರ ರಚನೆಗಳನ್ನು ತತ್ವಪದಗಳೆಂದು ಕರೆಯುವ ವಾಡಿಕೆ.

ಬೋಧ ಒಂದೇ ಬ್ರಹ್ಮನಾದ ಒಂದೇ
ಸಾಧನ ಮಾಡುವ ಹಾದಿ ಒಂದೇ
ಆದಿ ಪದ ಒಂದೇ …
ಶಿಶುನಾಳಧೀಶನ ಭಾಷೆ ಒಂದೇ

ಶಿಶುನಾಳ ಶರೀಫರು

ತತ್ವಪದಗಳೆಂದರೇನು?
ಈ ಪದಕ್ಕೆ ಅನೇಕ ವ್ಯಾಖ್ಯೆಗಳಿರಬಹುದು. ತತ್ವಪದಗಳು ನಮ್ಮ ಅಂತರಂಗವನ್ನು ದರ್ಶಿಸುವ ಮೂಲಕ ಅಸ್ಮಿತೆಯ ಅರಿವನ್ನುಂಟುಮಾಡುತ್ತವೆ. ಅವು ತಾತ್ವಿಕ ದೃಷ್ಟಿಯಿಂದಲೇ ಜೀವನದ ರಹಸ್ಯಗಳನ್ನು ಭೇದಿಸಲು ಪ್ರೇರಿಸುತ್ತವೆ. ದೇವರು, ಅನುಭವ, ಅನುಭಾವ, ಜ್ಞಾನ, ಮುಕ್ತಿ ಬಗ್ಗೆ ಹೇಳುತ್ತವೆ. ಆದರೆ ಇಲ್ಲಿ ತತ್ತ್ವಪದ ರಚಯಿತರಿಗೆ ಯಾರಿಗೂ ಅಂಕಿತ ಪ್ರದಾನ ವಗೈರೆ ಮಾಡದಿದ್ದರೂ ತಮ್ಮಿಂದ ತಾವೇ ತಮ್ಮ ಆರಾಧ್ಯ ದೈವದ ಹೆಸರಿನಲ್ಲಿ, ತಮ್ಮ ಗುರುಗಳ ಹೆಸರಿನಲ್ಲಿ ತತ್ವಪದಗಳನ್ನು ಬರೆದರು. ಇದು ಪ್ರಮುಖವಾಗಿ ಗುರು ಶಿಷ್ಯ ಪರಂಪರೆಯ ಪ್ರತಿಪಾದಕ ಪಂಥ ಅನಬಹುದು.ಕನ್ನಡದಲ್ಲಿ ತತ್ವಪದಕಾರರೇ ಬೇರೆ ಭಾಷೆಗಳಲ್ಲಿ ಬೇರೆ ಹೆಸರಿನಿಂದ ಕರೆಯಲ್ಪಟ್ಟರು. ಅವಧೂತರು, ಸಂತರು, ವಾರಕರಿ, ಸೂಫಿ ಇತ್ಯಾದಿ. ಕಬೀರರ ದೋಹಾ, ತುಕಾರಾಮನ ಅಭಂಗ, ಜ್ಞಾನದೇವ ಇವರೆಲ್ಲರವೂ ತತ್ವಪದಗಳೇ. ಇಲ್ಲಿ ಯಾವುದೇ ದೀಕ್ಷೆ, ವ್ರತದ ಹಂಗಿಲ್ಲ. ಕನಕದಾಸರೂ ಕೆಳವರ್ಗದವರೇ ಆದರೂ ವೈದಿಕ ಸಂಸ್ಕೃತಿಯ, ಮಧ್ವಮತದ ಹರಿಕಾರರೆನಿಸಿ ಹರಿದಾಸರಾದರು ಅವರು. ಆ ಮಟ್ಟದ ವೇದಾಧ್ಯಯನದಿಂದ ದೂರವಿದ್ದೂ ಚಿಂತನೆಯ ಆಯಾಮಗಳ ದಾಟುತ್ತ ಅನುಭಾವಿಕರೆನಿಸಿದವರ ಅಭಿವ್ಯಕ್ತಿಯ ಪದಗಳೇ ಈ ತತ್ವಪದಗಳು.

ಹುಟ್ಟು ಮತ್ತು ಬೆಳವಣಿಗೆ
ಆಗಿನ ಧಾರವಾಡ ಜಿಲ್ಲೆಯ (ಈಗ ಹಾವೇರಿ) ಶಿಗ್ಗಾವಿ ತಾಲೂಕಿನಲ್ಲಿ ಗುಡಿಗೇರಿ ರೇಲ್ವೆ ಸ್ಟೇಶನ್ನಿನಿಂದ ಮೂರು ಮೈಲಿ ದೂರದಲ್ಲಿರುವ ಚಿಕ್ಕ ಹಳ್ಳಿಯೇ ಶಿಶುನಾಳ. ಅಲ್ಲಿ ವಾಸಿಸುತ್ತಿದ್ದ ತಂದೆ ಇಮಾಮ ಸಾಹೇಬ ಮತ್ತು ತಾಯಿ ಹಜ್ಜುಮಾ ಅವರು ತಮ್ಮ ಪಾಲಿಗಿದ್ದ ಭೂಮಿಯ ಸಾಗುವಳಿಯಿಂದಲೇ ಬದುಕುತ್ತಿದ್ದರು. ಅವರಿಗೆ ಬಹುಕಾಲ ಮಕ್ಕಳಾಗಿರಲಿಲ್ಲ. ಇಮಾಮ ಸಾಹೇಬರು ಹುಲಗೂರ ಖಾದರ ಷಾವಲಿ ಸಂತರಲ್ಲಿ ಹರಕೆ ಹೊತ್ತರು. ಹಜರತ್ ಖಾದರಿಯವರು ಸಹ ಹಿಂದೊಮ್ಮೆ ಹಿಂದು ಮುಸ್ಲಿಮ್ ಧರ್ಮಗಳ ಸಂಗಮದ ಕನಸು ಕಂಡಿದ್ದರಂತೆ. ಒಮ್ಮೆ ಯಾರೋ ಛೇಡಿಸಿದ್ದಕ್ಕೆ ಬಯಸಿ ಬಂದವರಿಗೆ ಲಿಂಗ ದೀಕ್ಷೆ ಕೊಟ್ಟು ಖಾದರಲಿಂಗ ಅನ್ನಿಸಿಕೊಂಡರು ಮತ್ತು ಮುಂದೆ ಶಿಶುನಾಳರ ಹಾಡುಗಳಲ್ಲಿ ಅವರ ಉಲ್ಲೇಖ ಬರುತ್ತದೆ.
ಇಮಾಮ್ ಮತ್ತು ಹಜ್ಜುಮಾ ದಂಪತಿಗಳು ೧೮೧೯ರ ಮಾರ್ಚ ಏಳನೆಯ ತಾರೀಕಿಗೆ ಜನಿಸಿದ ತಮ್ಮ ಗಂಡು ಮಗುವಿಗೆ ಮೊಹಮ್ಮದ್ ಶರೀಫ್ ಎಂದು ಹೆಸರಿಟ್ಟರು. ಆತನೇ ಮುಂದೆ ಶಿಶುನಾಳ ಶರೀಫ್ ಎಂದು ಪ್ರಸಿದ್ಧರಾದರು. ಹುಡುಗನಾಗಿದ್ದಾಗಲೇ ಎರಡೂ ಮತಗಳ ಪ್ರಭಾವ ಆತನ ಮೇಲಿತ್ತು. ತಂದೆಯಿಂದ ರಾಮಾಯಣ, ಭಾರತ, ಪುರಾಣದ ಕತೆಗಳು ಮತ್ತು ಶಿವ ಶರಣರ ಜೀವನದ ಸಂಗತಿಗಳನ್ನು ಅರಿತು ಆ ಹುಡುಗ ’ತನಗರಿವಿಲ್ಲದೆಯೇ ಮತ ಮರುಳತನದಿಂದ ತನ್ನನ್ನು ಪಾರು ಮಾಡ ಬಲ್ಲ ನಿಜ ಧರ್ಮದ ರಕ್ಷಾವಸ್ತ್ರವನ್ನು ಸಿದ್ಧ ಮಾಡಿಕೊಂಡ’ ಎಂದು ಇತಿಹಾಸಕಾರರು ಹೇಳುತ್ತಾರೆ.

’ದೊರಕಿದ, ಗುರು ದೊರಕಿದಾ ’
ಶರೀಫನಿಗೆ ಒಬ್ಬ ಗುರುವಿನ ತಲಾಷ್ ಇತ್ತು. ಆತನ ಮನಸ್ಸಿನಲ್ಲಿ ಫಲವತ್ತಾದ ಭೂಮಿ ತಯಾರಾಗಿತ್ತು. ಅದರಲ್ಲಿ ಬೀಜ ಬಿತ್ತ ಬೇಕಾಗಿತ್ತು. ಅದೃಷ್ಟವಶಾತ್ ಈ ಹುಡುಗನ ಊರಿಗೆ ಪಕ್ಕದ ಊರಿನಿಂದ ಒಬ್ಬ ಬ್ರಾಹ್ಮಣ ಬಂದನು. ಆತ ಜಾತಿ ಮತಗಳ ಕಟ್ಟುಪಾಡುಗಳಿಗೆ ಸೊಪ್ಪು ಹಾಕದ ಮತ್ತು ವೇದ ಶಾಸ್ತ್ರಗಳನ್ನೆಲ್ಲ ಅರೆದು ಕುಡಿದ ಸ್ಮಾರ್ತ ಬ್ರಾಹ್ಮಣ; ದೇವಿ ಉಪಾಸಕ. ಆತನೇ ಬಹು ಮಹಿಮಾವಂತ ಎಂದು ಹೆಸರು ಗಳಿಸಿದ ಗೋವಿಂದ ಭಟ್ಟ. ಆತ ಕಟ್ಟುಪಾಡುಗಳಿಗೆ ಹೊರತಾಗಿದ್ದ. ಕೆಲವರು ಹಬ್ಬಿಸಿದ ವದಂತಿ ’ಸೆರೆ ಕುಡೀತಾನೆ, ಗಾಂಜಾ ಸೇದತಾನೆ, ಯಾರಂದರೆ ಅವರಿಂದ ಮುಟ್ಟಿಸಿಗೋತಾನ,’ ಅಂತ. ಆದರೂ ಜನರಿಗೆ ಆತನ ವಿದ್ವತ್ತಿನ ಬಗ್ಗೆ ಗೌರವ. ಅಂತೆಯೇ ಆತನ ತಂದೆ ಶರೀಫನನ್ನು ಅವರ ಹತ್ತಿರ ಕರೆದು ಕೊಂಡು ಹೋದನು. ಮೊದಲ ಭೇಟಿಯಲ್ಲೇ ಹುಡುಗನ ವೇದಾಂತ ನೆಲೆಯನ್ನು ಕಂಡು ಭಟ್ಟರಿಗೆ ಅಚ್ಚರಿ. ತನ್ನಲ್ಲಿ ಅನುಗ್ರಹ ಬೇಡಿ ಬಂದ ಇಮಾಮ ಸಾಹೇಬನನ್ನು ’ಈ ಹುಡುಗನ್ನ ನನ್ನ ಉಡಿಗೆ ಹಾಕಿ ಬಿಡು’ ಅಂತ ಗೋವಿಂದ ಭಟ್ಟ ಕೇಳಿದೊಡನೆ ತಂದೆ ಒಪ್ಪಿಬಿಟ್ಟನು. ಶರೀಫನೋ ಆತನನ್ನು ಗುರುವೆಂದು ಕೂಡಲೇ ಒಪ್ಪಿದನಂತೆ. ಅವರ ಬಗ್ಗೆ ಒಂದು ಪದ್ಯದಲ್ಲಿ ಹೀಗೆ ಹಾಡಿದನು :
”ದೊರಕಿದ ಗುರು ದೊರಕಿದಾ
ಪರಮಾನಂದ ಬೋಧ ಅರುವಿನೊಳಗೆ ಬಂದು
ದೊರಕಿದಾ ಗುರು ದೊರಕಿದಾ
ಕರಪಾತ್ರೆ ಹಿಡಿದು ಈ ನರ ಶರೀರದಿ ತನ್ನ
ಅರುವ ತನಗೆ ತೋರಿ ಪರಮ ನಂಬುಗೆಯಲಿದೆ”ಯೆಂದು. ಗುರು ಶಿಷ್ಯರು ಹತ್ತಿರವಾದರು.
ಸ್ವಲ್ಪ ಕಾಲದ ನಂತರ ಗುರು ಆತನ ಕೊರಳಿಗೆ ತಮ್ಮ ಮೈಮೇಲಿದ್ದ ಜನಿವಾರವನ್ನು ಹಾಕಿ ಬಿಟ್ಟರು! ಈ ಸಾಂಕೇತಿಕ ಉಪನಯನದಿಂದ ಭಾವ ಪರವಶನಾಗಿ ಗುರುವಿಗೆ ಉದ್ದಂಡ ನಮಸ್ಕಾರ ಹಾಕಿಬಿಟ್ಟ ಶರೀಫ ಉದ್ಗಾರ ತೆಗೆದು ಕವನ ರಚಿಸಿದ:
”ಹಾಕಿದ ಜನಿವಾರವ ಸದ್ಗುರುನಾಥ
ಹಾಕಿದ ಜನಿವಾರವ ನೂಕಿದ ಭವ ಭಾರವ
ಲೋಕದಿ ಬ್ರಹ್ಮಜ್ಞಾನ ನೀ ಪಡೆಯೆಂದು.”
ಅವರೀರ್ವರ ಸಂಬಂಧ ಗಾಢವಾಗಿ ಕೊನೆಯ ವರೆಗೆ ಉಳಿಯಿತು.

ಆಧ್ಯಾತ್ಮದ ಕಡೆಗೇ ಒಲವು ಇದ್ದ ಶರೀಫರು ಊರೂರು ತಿರುಗುತ್ತಿದ್ದರು. ತಂದೆ ತಾಯಿಗಳು ಚಿಂತೆಗೀಡಾಗಿ ಕುಂದುಗೋಳದ ಫಕೀರಸಾಹೇಬರ ಮಗಳು ಫಾತಿಮಾಳೊಂದಿಗೆ ಮದುವೆ ಮಾಡಿದರು. ಸ್ವಲ್ಪ ಸಮಯದ ನಂತರ ಲತ್ತುಮಾ ಎಂಬ ಮಗಳೂ ಹುಟ್ಟಿದಳು. ಆದರೆ ಅನತಿ ಕಾಲದಲ್ಲೆ ಇಬ್ಬರೂ ಮರಣ ಹೊಂದಿದರು. ಹೆಂಡತಿ ಸತ್ತಾಗಲೂ ಶರೀಫರು ದುಃಖಿಸಲಿಲ್ಲ:
’ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ’
ಎಂದು ಹಾಡಿದರು.
ಕಾಲರಾದಿಂದ ಮಗಳ ಮರಣದ ನಂತರವೂ ನಿರ್ಲಿಪ್ತತೆ! ಸಂಸಾರ ಬಂಧನದಿಂದ ಮುಕ್ತನಾದೆನೆಂದು ಉರ್ದುದಲ್ಲಿ ಆಶು ಕವನ ರಚಿಸಿದರು:
’ದುಃಖಮೆ ಪಡಾ ಮನ್ ಸುಖ ನಹಿ ಮಾಯಾ
ಟಕತಿ ಮರನ ರಖವಾಲರೆ’ (ದುಃಖ ಸಾಗರದಲ್ಲಿ ಬಿದ್ದಿದೆ ಮನಸ್ಸು; ಮರಣ ತುಂಬಿದ ಮಾಯಾಮಯ ಸಂಸಾರದಲ್ಲಿ ಸುಖವೇ ಇಲ್ಲ,ಪರಮಾತ್ಮನೇ!) ಕುಡಿಯುವುದು, ತಿನ್ನುವುದು ಇದರಲ್ಲೆ ಕಾಲ ಹರಣ ಮಾಡಿದರೆ ಮರಣ ಸದಾ ನಮ್ಮನ್ನು ದೃಷ್ಟಿಸುವಾಗ ಭಗವಂತನರಿಯುವುದು ಯಾವಾಗ ಎಂದರು.
ಶರೀಫ ಸಹೇಬರು ನವಲಗುಂದದ ನಾಗಲಿಂಗ ಶಿವಯೋಗಿಗಳು ಮತ್ತು ಗರಗದ ಮಡಿವಾಳೇಶ್ವರರ ಜೊತೆ ತ್ರಿಮೂರ್ತಿಗಳಂತೆ ಊರೂರು ತಿರುಗಿದರು. ಗುರುವಿನ ಸಂಬಂಧವೂ ಇತ್ತು.”ಗುರುವೆಂದರೆ ನಿಜಕೆ ಈತನೇ, ದೊರೆಯೆಂದರು ನಿಜಕೆ ಈತನೇ, ಕಟಕಿ ನುಡಿಗೆ ಬಾಗದಿರುವನು–ಏನು ದಿಟ್ಟ!” ಎಂದು ಹಾಡಿದರು.
ಗೋವಿಂದ ಭಟ್ಟ ಗುರುಗಳನ್ನು ಅವರು ಸಾಯುವ ವರೆಗೆ ಸೇವೆ ಮಾಡಿದರು. ನೂರಾರು ಕವಿತೆಗಳನ್ನು ರಚಿಸಿದರು.

+++
ಶರೀಫರ ಅನೇಕ ಕವಿತೆಗಳು ಅವರ ಬಾಳಿನ ಘಟನೆಗಳ ಕಾರಣವಾಗಿ ಹುಟ್ಟಿದವು ( topical) ಎಂಬ ಮಾತಿದೆ. ಘಟನೆಗಳನ್ನು ಆಧರಿಸಿ ಪದ್ಯಗಳು ಹುಟ್ಟಿದವೋ ಅಥವಾ ಪದ್ಯವನ್ನು ನೋಡಿ ಜನ ಕಥೆ ಕಟ್ಟಿದರೋ ಹೇಳುವಂತಿಲ್ಲ. ನಂತರದ ಅನೇಕ ಪದ್ಯಗಳನ್ನೋದಿದಾಗ ಈ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಅವರ ಅನೇಕ ಪದ್ಯಗಳು ಆಶು ಕವನಗಳು ಎನ್ನುವದರಲ್ಲಿ ಸಂದೇಹವಿಲ್ಲ. ಉದಾಹರಣೆಯಾಗಿ ಈ ಮೊದಲೇ ಉಲ್ಲೇಖಿಸಿದ ಉರ್ದು ಕವನಗಳು ಅಂಥವೇ.
ಇನ್ನೊಂದು ಪದ್ಯ. ಶರೀಫರನ್ನು ಮೆಚ್ಚಿಕೊಂಡ ಚೆಲುವೆಯೊಬ್ಬಳು ಅವರು ಕಾರಡಿಗೆಯ ಶಾಲೆಯಿಂದ ಎಂದಿನಂತೆ ಊರಿಗೆ ಮರಳುವಾಗ ಒಂದು ರಾತ್ರಿ ಕತ್ತಲೆಯಲ್ಲಿ ಎದುರಾಗಿ ತನ್ನ ಮನಸ್ಸಿನ ಮಾತು ಹೇಳಿಕೊಂಡಾಗ ಬರೆದ ಕವಿತೆಯೇ ’ಹಾವು ತುಳಿದೆನೇ ಮಾನಿನಿ’ ಎನ್ನುವ ರಚನೆ.
”ಹಾವು ತುಳಿದೆನೇ/ ಹಾವು ತುಳಿದು ಹಾರಿನಿಂತೆ/ ಜೀವ ಕಳವಳಿಸಿತೇ ಗೆಳತಿ” ಎಂದು ಪ್ರಾರಂಭ ಮಾಡುತ್ತಾರೆ ಆ ಕವಿತೆಯಲ್ಲಿ. ಆಕೆಗೆ ಸಾಂತ್ವನ ಹೇಳಿ ನುಂಗ ಬಂದಿದ್ದ ಮೋಹದಿಂದ ಪಾರಾದೆ ಅಂತ ಕೊನೆಯಲ್ಲಿ ಹೇಳುತ್ತಾರೆ:
”ದೇವಾ ನೀನೇ ಗತಿಯೋ ಎಂದೆ … ಹಾವಿನ
’ಶಿರವ ಮೆಟ್ಟಿದೆ ಶಿವನ ದಯದಿ.”
ಇದೇ ತರಹದ ಅನೇಕ ಪ್ರಾಣಿ ಪ್ರತೀಕಗಳು ಅವರ ಕವನಗಳಲ್ಲಿ ಸಿಗುತ್ತವೆ. ಚೋಳು (ಚೇಳು), ಕುದುರೆ, ನರಿ, ನಾಯಿ ಎಲ್ಲವೂ ರೂಪಕಗಳಾಗುತ್ತವೆ. ಶರೀಫರು ಅನುಭಾವಿ ಕವಿ. ಲೌಕಿಕದ ಎಲ್ಲ ಬೆಡಗು ಬಿನ್ನಾಳಗಳನ್ನುಬಲ್ಲವರಾಗಿದ್ದರು. ತಮ್ಮ ಲೌಕಿಕ ಅನುಭವಗಳ ಸಾರವನ್ನು ತತ್ವಪದಗಳಲ್ಲಿ ಎರಕ ಹೊಯ್ದು ಹಾದಿ ಜನರಿಗೆ ತಲುಪಿಸಿದರು. ಎಲ್ಲ ಮತಗಳಬಗ್ಗೆ ಸಮನ್ವಯ ದೃಶ್ಟಿಯಿಂದ ನೋಡಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿ ಅಳಿಲು ಸೇವೆಯನ್ನು ಮಾಡಿದರು. ಉಳಿದ ಕವಿವರ್ಯರಂತೆ ಅವರನ್ನು ಹಿಂಬಾಲಿಸುವ ಅನುಯಾಯಿಗಳಿರಲಿಲ್ಲವೆಂತಲೇ ಪರಂಪರೆಯಾಗಲು ಸಾಧ್ಯವಿರಲಿಲ್ಲ. ಅದಲ್ಲದೆ ಅವರು ಬದುಕಿದ ಕಾಲವೂ ಪ್ರತಿಕೂಲವಾಗಿರಬೇಕು,ಎನ್ನುವುದು ಇನ್ನೊಂದು ಕಾರಣವಿರಬೇಕು.

ಶಿಶುನಾಳರ ಕವನಗಳ ಆಕರ್ಷಣೆ
ಬರಕೋ ಪದ ಬರಕೋ -ಜತೆಗೆ
ಅದರನ್ವಯ ತಿಳಕೋ;

ಗುರು ಗೋವಿಂದನ ಸ್ತುತಿ ಬರಕೋ
ಧರೆಯೊಳು ಶಿಶುನಾಳಾಧೀಶನ ಪಾದಕೆ
ಕರಕೊಂಡು ಹೋಗೋ ವರ ಪಡಕೋ.

ಅವರ ಕವನಗಳು ಬಾಯಿಂದ ಬಾಯಿಗೆ ಹರಿದು ಜನರನ್ನು ತಲುಪಿ ಪ್ರಸಿದ್ಧಿ ಪಡೆದವು. ಅವುಗಳನ್ನು ಅವರಂತೂ ಬರೆದಿಡಲಿಲ್ಲ. ಕುಂಬಾರ ಮುದುಕಪ್ಪ ಮತ್ತು ಆತನ ಮಗಳು ಬಸಮ್ಮ ಹಾಡಿದ ನಂತರ ಎಚ್ ಟಿ ಮಹಾಂತೇಶ ಶಾಸ್ತ್ರಿಗಳು ಸಂಗ್ರಹಿಸಿದ್ದನ್ನು ಗದುಗಿನ ಶಾಬಾದಿಮಠ ಬುಕ್ ಡಿಪೋ ಮುದ್ರಿಸಿ, ಮರುಮುದ್ರಣಮಾಡುತ್ತ ಬಂದುದು ತಿಳಿದು ಬರುತ್ತದೆ. ಕವಿಯ ಉತ್ತರ ಕರ್ನಾಟಕ ಭಾಷೆಯನ್ನು ಮತ್ತು ಅವರು ಉಪಯೋಗಿಸುವ ಅಸಾಮಾನ್ಯ ರೂಪಕಗಳನ್ನು ಅರ್ಥಮಾಡಿಕೊಳ್ಳಲು ಸಮಾನ್ಯ ಓದುಗನಿಗೆ ಬಹುಕಾಲ ಕಷ್ಟವಾಗಿರಬೇಕು. ಉದಾಹರಣೆಗಾಗಿ ’ಕೋಡಗನ ಕೋಳಿ ನುಂಗಿತ್ತ” ಕವನ. ಇಲ್ಲಿ ಕೋಡಗ ಎಂದರೆ ಚಂಚಲ ಮನಸ್ಸನ್ನು ಸೂಚಿಸುವ, ಟೊಂಗೆಯಿಂದ ಟೊಂಗೆಗೆ ಹಾರುವ ಮರ್ಕಟ. ಕೋಳಿಯೆಂದರೆ ಸೂರ್ಯೋದಯಕ್ಕೆ ಕೂಗುವ ಕೋಳಿ ಅಂದರೆ ಕತ್ತಲೆಯೆಂಬ ಅಜ್ಞಾನವನ್ನು ನುಂಗಿ ತಿಳುವಳಿಕೆಯನ್ನು ಬೆಳಗುವುದು. ಮುಂದಿನ ಚರಣದಲ್ಲಿ ನರ್ತಕಿಯ (ಪಾತರದವಳು) ಗತಿಗೆಡಿಸುವ ಶಕ್ತಿ ಮದ್ದಲಿಯಲ್ಲಿದೆ. ಲೌಕಿಕದಲ್ಲಿ ಎಷ್ಟೇ ದೊಡ್ಡ ವ್ಯಕ್ತಿತ್ವವನ್ನುಳ್ಳವನಾಗಿದ್ದರೂ ಶಿಷ್ಯನ ಮೋಹ ಅಥವಾ ಅಹಂಭಾವವನ್ನು ಗುರುವಿನ ಪಾದದ ಮಹಿಮೆ ನುಂಗಿಹಾಕುತ್ತದೆ ಎನ್ನುವ ತಾತ್ಪರ್ಯ! ಅದೇ ಅರ್ಥ ಉಳಿದ ರೂಪಕಗಳಾದ ಒನಕೆ-ಒರಳು, ಬೀಸುವ ಕಲ್ಲು-ಗೂಟಗಳಲ್ಲಿಯೂ ಇದೆ.
ಅವರ ಅನೇಕ ಪದ್ಯಗಳಲ್ಲಿ ಮೇಲಿಂದ ಮೇಲೆ ಸಂಖ್ಯೆಗಳು ಆರು (ಅರಿಷಡ್ವರ್ಗಗಳು), ಎಂಟು (ಮದಗಳು), ಮೂರು (ತ್ರಿಕರಣಗಳು, ದೇಹಗಳು) ಬರುತ್ತವೆ. ಮಾನವನಿಗೆ ಇಂದ್ರಿಯ ನಿಗ್ರಹ ಎಷ್ಟು ಮುಖ್ಯ, ಅದಿಲ್ಲದಿದ್ದರೆ ಕಾಮ ಆತನನ್ನು ಅವನತಿಗಿಳಿಸುತ್ತದೆ ಎನ್ನುವ ಸೂಚನೆಯನ್ನು ’ಕುಕ್ಷಿಯ ಕೆಳಗಿನ ಇಕ್ಷುವೆ ತಾನಾದ’ ಮಂಗವನ್ನು ಒಂದು ಕವಿತೆಯಲ್ಲಿ ವರ್ಣಿಸಿದರೆ ಇನ್ನೊಂದರಲ್ಲಿ ’ಶಿವನ ತೊಡೆಯ ಕೆಳಗಿರುವಂಥ ಕಪ್ಪೆ’ಯ ಪ್ರತಿಮೆಯಲ್ಲಿ ಅದನ್ನೇ ಸಂಕೇತಿಸುತ್ತಾರೆ. ಹುಚ್ಚು ನಾಯಿಯ ಪ್ರತಿಮೆಯಲ್ಲೂ ಅದೇ ವಸ್ತು ’ಇಳೆಯೊಳೆಲ್ಲರ ತೊಡೆ ಹಿಡಿಯುತ ಹಲ್ಲೊಳು ತಳಮಳಗೊಳಿಸಿತು ಹುಚ್ಚಿಡಿಸಿ’ ಎಂದು.

ದೇಹವೆನ್ನುವ ದೇವಾಲಯ
ಗುಡಿಯ ನೋಡಿರಣ್ಣಾ-ದೇಹದ
ಗುಡಿಯ ನೋಡಿರಣ್ಣಾ…
ಧೀರ ನಿರ್ಗುಣನ ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರಾಗಿರುತಿಹ
ಗುಡಿಯ ನೋಡಿರಣ್ಣಾ
ಎನ್ನುವಲ್ಲಿ ಬಸವಣ್ಣನವರ ’ಉಳ್ಳವರು ಶಿವಾಲಯವ ಮಾಡಿಹರು/ ನಾನೇನು ಮಾಡುವೆ ಬಡವನಯ್ಯಾ/ ಎನ್ನ ಕಾಲೇ ಕಂಬ ದೇಹವವೇ ದೇಗುಲ’ ಎನ್ನುವ ಭಾವವನ್ನು ಕಾಣುತ್ತೇವೆ. ’ಧರಣಿ ವಿಸ್ತಾರ ನೋಡಮ್ಮ’ ಎನ್ನುವ ಪದ್ಯದಲ್ಲಿ ಬರುವ ಸಾಲುಗಳಿವು: ”ಧರಣೀಶ ರಾಣಿ ಕರುಣದಿ ರಾಜ್ಯಕ/ ತರಿಸಿದ ಘನಚೋದ್ಯವೋ, ಚೀನಾದ ವಿದ್ಯವೋ’ ಇವು ಬ್ರಿಟಿಶ್ ರಾಣಿಕಕಾಲದಲ್ಲಿ ಬರೆದುದು. ಗಿರಣಿ ಶರೀರದ ವರ್ಣನೆಯೊಂದಿಗೆ ಯೋಗ ಸಾಧನೆಯ ಅಂಶಗಳನ್ನೂ ನುಡಿಯುತ್ತದೆ ಎನ್ನುತ್ತಾರೆ ವಿಮರ್ಶಕರು. ಶಿಶುನಾಳ ಋಷಿಯನ್ನು ಅದರಲ್ಲಿ ನೇಯ್ಗೆಗಾರನೆಂದು ಅರ್ಥೈಸುತ್ತಾರೆ.

ಅವಸಾನ – ’ಶರಣರ ಬದುಕನ್ನು ಮರಣದಲ್ಲಿ ನೋಡು’
೧೮೮೯ರಲ್ಲಿ ಅವಸಾನದ ಗಳಿಗೆ ಬಂದಾಗ ವಿಭೂತಿ ವೀಳ್ಯ ಆಚರಿಸಿ ದೇಹತ್ಯಾಗ ಮಾಡಲು ಬಯಸಿದರು. ಶರೀಫರಂಥ ದೊಡ್ಡವರಿಂದ ಪೂಜಿಸಿಕೊಳ್ಳಲು, ಅವರತಲೆಯನ್ನು ಕಾಲ ಮೇಲೆ ಇರಿಸಿಕೊಳ್ಳಲುಯಾವ ಜಂಗಮರೂ ಒಪ್ಪಲಿಲ್ಲ. ಕಡೆಗೆ ಅವರ ಮಾತು ಮೀರಲಾರದೆ ಹಿರೆಮಠ ಕರಿಬಸಯ್ಯನವರು ಹಿಂಜರಿಯುತ್ತ ಒಪ್ಪಿದರಂತೆ. ಅವರ ಇಚ್ಛೆಯ ಪ್ರಕಾರ ಅವರತಲೆಯ ಮೇಲೆ ಪಾದವಿಟ್ಟರಂತೆ. ಅಂತ್ಯಕ್ರಿಯೆ ಎರಡೂ ಮತಗಳ ವಿಧಿಯ ಪ್ರಕಾರ ಆಯಿತಂತೆ. ಈಗ ಶರೀಫರ ಗದ್ದುಗೆಯ ಎಡಭಾಗದಲ್ಲಿ ಮುಸಲ್ಮಾನರು ಕುರಾನದಿಂದ ಕಲಮಾ ಓದಿ ಸಕ್ಕರೆ ಓದಿಸಿ ಹಂಚುತ್ತಾರೆ; ಬಲಬದಿಗೆ ಹಿಂದುಗಳು ಹಣ್ಣು ಕಾಯಿ ಹೂ ಅರ್ಪಿಸಿ ಪೂಜಿಸುತ್ತಾರೆ. ಶಿಶುನಾಳ ಊರಲ್ಲಿ ಕಟ್ಟಿದ ಭವ್ಯ ಸಮಾಧಿಯ ಹತ್ತಿರ ಮುಸಲ್ಮಾನ ಮತ್ತು ಹಿಂದುಗಳು ಜೊತೆಯಾಗಿಯೇ ಶಿವರಾತ್ರಿಯ ಹುಣ್ಣಿವೆಯ ಆಸು ಪಾಸು ಮೂರು ದಿನಗಳ ಜಾತ್ರೆ ಆಚರಿಸುತ್ತಾರೆ. ಭಿನ್ನ ಮತೀಯರು ಕಲೆತು ಕೂಡುವದು ಈ ಆದಿ ’ಸಮನ್ವಯ ಕವಿಗೆ’ ಗೌರವ ಅರ್ಪಿಸಿದಂತೆಯೂ ಆಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಸಿ. ಅಶ್ವಥ್ ಅವರ ರಾಗ ಸಂಯೊಜನೆಯಿಂದ ಶರೀಫರ ಆಡಿಯೋ ಕೆಸೆಟ್ಟುಗಳಿಂದ ಶರೀಫರನ್ನು ಜನರು ಗುರುತಿಸುತ್ತಿದ್ದಾರೆ. ಅವರ ಜೀವನ ಚರಿತ್ರೆ ಹೇಳುವ ಸಿನಿಮಾ ಸಹ ಆಗಿದೆ.
ಶರೀಫರ ಜೀವನ ಮತ್ತು ’ಗೀತೆ’ಗಳ ಆಳ ಅಭ್ಯಾಸ ಮಾಡಿದ ಡಾ ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟರು ಹೇಳುವ ಪ್ರಕಾರ: ”ನೀತಿಬೋಧೆ ಮಾಡುತ್ತಲೇ ತಮ್ಮ ಪದಗಳಿಗೆ ಕಾವ್ಯದ ಹೊಳಪನ್ನು ನೀಡಿದ ಶರೀಫರ ಕೃತಿಗಳನ್ನು ಪುರಂದರ, ಕನಕರಂಥ ಹಿರಿಯ ಕೀರ್ತನಕಾರರ ಕೃತಿಗಳ ಜೊತೆ ಅಭ್ಯಾಸಮಾದುವ ಅಗತ್ಯವಿದೆ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅವರಿಗೆ ಸಲ್ಲಬೇಕಾದ ಸ್ಥಾನವನ್ನು ನಾವು ಸಮರ್ಪಕವಾಗಿ ಗೊತ್ತು ಮಾಡಬೇಕಾಗಿದೆ.”

ಲೇಖನ: ಶ್ರೀವತ್ಸ ದೇಸಾಯಿ

ಈ ಲೇಖನಕ್ಕೆ ಸಹಾಯ ಮಾಡಿದ ಪುಸ್ತಕಗಳನ್ನು ಮತ್ತು ಅಮೂಲ್ಯ ಒದಗಿಸಿದ ಡಾ ಶಿವಪ್ರಸಾದ್, ಸರೋಜಿನಿ ಪಡಸಲಗಿ ಮತ್ತು ಡಾ C ನವೀನ್ ಅವರಿಗೆ ಋಣಿ.