ಕನ್ನಡ ಭಾಷೆಯ ಮೇಲೆ ಒಂದಿಷ್ಟು ಆಲೋಚನೆಗಳು – ಕೇಶವ ಕುಲಕರ್ಣಿ

ನಾನು ಇಂಗ್ಲೆಂಡಿಗೆ ಬಂದ ಹೊಸತಿನಲ್ಲಿ ಕನ್ನಡವನ್ನು ಓದಬೇಕೆಂದರೆ ಭಾರತದಿಂದ ತಂದ ಪುಸ್ತಕಗಳು ಮಾತ್ರ ಆಸರೆಯಾಗಿದ್ದವು. ಆಗತಾನೆ ಕನ್ನಡದಲ್ಲಿ ಬ್ಲಾಗುಗಳು ಆರಂಭವಾಗುತ್ತಿದ್ದವು. ದಾಟ್ಸ್ ಕನ್ನಡ ಎನ್ನುವ ಜಾಲದಲ್ಲಿ ಕನ್ನಡದ ವಾರ್ತೆಗಳನ್ನು ಓದಲು ಸಿಗುತ್ತಿತ್ತು. ವರುಷಗಳು ಕಳೆದಂತೆ ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜಾಲದಲ್ಲಿ ಓದಲು ಸಿಗಹತ್ತಿದವು. ಸುಧಾ, ತರಂಗ, ಮಯೂರ, ತುಷಾರ, ರೂಪತಾರಾಗಳೂ ಓದಲು ಸಿಗತೊಡಗಿದವು. ಇತ್ತೀಚೆಗೆ ವಿವಿಡ್‍ಲಿಪಿ, ಮೈಲಾಂಗ್ ಎನ್ನುವ ಆ್ಯಪ್‍ಗಳು ಕನ್ನಡದ ಇ-ಪುಸ್ತಕಗಳನ್ನು ಫೋನಿಗೆ ತಂದು ಹಾಕುತ್ತಿವೆ. ಯುಟ್ಯೂಬಿನಲ್ಲಿ ಕನ್ನಡ ಸಾಹಿತಿಗಳ ಚರ್ಚೆ ಮತ್ತು ಸಂದರ್ಶನಗಳನ್ನು ನೋಡಲು ಸಿಗುತ್ತಿವೆ. ಅವಧಿ ಮತ್ತು ಕೆಂಡಸಂಪಿಗೆ ತರಹದ ಕನ್ನಡ ಸಾಹಿತ್ಯಕ್ಕೇ ಮೀಸಲಾದ ಜಾಲತಾಣಗಳಿವೆ. 

ಕನ್ನಡನಾಡಿನಿಂದ ದೂರ ಬಂದಿದ್ದರೂ ಕನ್ನಡದಲ್ಲಿ ವಾರ್ತೆಗಳನ್ನು, ಕನ್ನಡದ ಕತೆ-ಕಾದಂಬರಿಗಳನ್ನು, ಕವನಗಳನ್ನು ಓದುವುದು ನಿರಂತರವಾಗಿ ನಡೆಯುತ್ತಲೇ ಇದೆ. ನಾನು ಇಂಗ್ಲೆಂಡಿನಲ್ಲಿ ಕಳೆದ ಈ ಹತ್ತು ಹದಿನೈದು ವರ್ಷಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಅಗಾಧವಾದ ಬದಲಾವಣೆಗಳಾಗಿವೆ ಎಂದು ಅನಿಸುತ್ತದೆ. ಅಂಥ ಕೆಲವು ವಿಷಯಗಳನ್ನು ಈ ಅಂಕಣ ಬರಹದಲ್ಲಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ (ನಾನೇ ಮೊದಲನೇಯನಲ್ಲ ಎಂದು ಗೊತ್ತು). ನಾನು ಕನ್ನಡದ ಪಂಡಿತನೂ ಅಲ್ಲ ಮತ್ತು ಕನ್ನಡ ಭಾಷೆಯ ಇತಿಹಾಸವನ್ನು ಓದಿಕೊಂಡವನೂ ಅಲ್ಲ ಎಂದು ಮೊದಲು ತಪ್ಪೊಪ್ಪಿಕೊಂಡೇ (ಡಿಸ್‍ಕ್ಲೇಮರ್) ಇದನ್ನೆಲ್ಲ ನಿಮ್ಮ ಮುಂದಿಡುತ್ತಿದ್ದೇನೆ. 

ಸಾಯುತ್ತಲಿರುವ ಕನ್ನಡಪದಗಳು, ಹೆಚ್ಚುತ್ತಲಿರುವ ಇಂಗ್ಲೀಷ್ ಶಬ್ದಗಳು:

ದೊಡ್ಡಪಟ್ಟಣಗಳಲ್ಲಿ ನೆಲೆಸುವ ಕನ್ನಡಿಗರು ಕನ್ನಡದಲ್ಲಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಒಂದಾದರೂ ಇಂಗ್ಲೀಷ್ ಶಬ್ದವನ್ನು ಉಪಯೋಗಿಸುತ್ತಾರೆ ಎನ್ನುವುದು ನನ್ನ ಅನಿಸಿಕೆ. ಕೇವಲ ಒಂದು ಪೀಳಿಗೆಯ ಹಿಂದೆ ದಿನಬಳಕೆಯಲ್ಲಿದ್ದ ಎಷ್ಟೊಂದು ಕನ್ನಡದ ಶಬ್ದಗಳನ್ನು ಇಂಗ್ಲೀಷ್ ಶಬ್ದಗಳು ಕೊಂದು ಹಾಕಿರುವುದರೆ ನೇರ ಪರಿಣಾಮವಿದು  (ಪ್ರೊಫೇಸರ್ ಕೃಷ್ಣೇಗೌಡರು ‘ಕೋಡಗನ ಕೋಳಿ ನುಂಗಿತ್ತ‘ದ ಮಾದರಿಯಲ್ಲಿ ಇದರ ಬಗ್ಗೆ ಒಂದು ಹಾಡು ಮಾಡಿದ್ದಾರೆ ಕೂಡ). 

ಪಾನಕವನ್ನು ಜ್ಯೂಸ್, ಪಚಡಿಯನ್ನು ಸಲಾಡ್, ಅನ್ನವನ್ನು ರೈಸ್, ಮೊಸರನ್ನವನ್ನು ಕರ್ಡ್‌-ರೈಸ್, ಚಿತ್ರಾನ್ನವನ್ನು ಲೆಮನ್-ರೈಸ್ ಅನ್ನುತ್ತಿದ್ದೇವೆ. ಪಡಸಾಲೆಯನ್ನು ಡ್ರಾಯಿಂಗ್-ರೂಮ್, ಅಡುಗೆಮನೆಯನ್ನು ಕಿಚನ್, ಬಚ್ಚಲುಮನೆಯನ್ನು ಬಾತ್‌-ರೂಮ್ ಅನ್ನುತ್ತಿದ್ದೇವೆ. ಅಪ್ಪ ಡ್ಯಾಡಿಯಾಗಿ, ಅಮ್ಮ ಮಮ್ಮಿಯಾಗಿ ಆಗಲೇ ಒಂದು ಪೀಳಿಗೆಯೇ ಮುಗಿದಿದೆ. ಮಾಮಾ, ಕಾಕಾ, ಸೋದರಮಾವ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲ ಶಬ್ದಗಳೂ ‘ಅಂಕಲ್’ ಆಗಿಬಿಟ್ಟಿವೆ. ಮಾಮಿ, ಕಾಕು, ದೊಡ್ಡಮ್ಮ, ಚಿಕ್ಕಮ್ಮರೆಲ್ಲ ‘ಆಂಟಿ’ಗಳಾಗಿದ್ದಾರೆ. ಮೆಣಸು ಪೆಪ್ಪರ್ ಆಗಿದೆ, ಶುಂಠಿ ಜಿಂಜರ್ ಆಗಿದೆ, ಬೆಳ್ಳುಳ್ಳಿ ಗಾರ್ಲಿಕ್ ಆಗಿದೆ, ಅರಿಶಿಣ ಪುಡಿ ಟರ್ಮರಿಕ್ ಆಗಿದೆ. ವರ್ಷಗಳು ಉರುಳಿದಂತೆ ನಿಧನಿಧಾನವಾಗಿ ದಿನನಿತ್ಯ ಬಳಸುವ ಕನ್ನಡದ ಪದಗಳನ್ನು ಇಂಗ್ಲೀಷ್ ಪದಗಳು ಆಕ್ರಮಿಸುತ್ತಿವೆ.   

ತಂತ್ರಜ್ಙಾನದಿಂದ ಬಂದ ಹೊಸ ಅವಿಷ್ಕಾರಗಳಾದ ಫೋನು, ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಿಗೆ ದೂರವಾಣಿ, ಗಣಕಯಂತ್ರ, ಜಂಗಮವಾಣಿ ಎಂದೆಲ್ಲ ಹೊಸ ಶಬ್ದಗಳನ್ನು ತರುವ ಪ್ರಯತ್ನ ನಡೆಯಿತಾದರೂ ಕೊನೆಗೆ ಕನ್ನಡಿಗರ ಮಾತಿನಲ್ಲಿ ಉಳಿದದ್ದು ಮೂಲ ಇಂಗ್ಲೀಷ್ ಪದಗಳೇ. ಪೋಲೀಸರಿಗೆ ಆರಕ್ಷಕ, ಇಂಜಿನಿಯರನಿಗೆ ಅಭಿಯಂತರ, ಮ್ಯಾನೇಜರನಿಗೆ ವ್ಯವಸ್ಥಾಪಕ (ಕಾರ್ಯನಿರ್ವಾಹಕ) ಎಂದೆಲ್ಲ ಹೊಸ ಶಬ್ದಗಳ ಪ್ರಯೋಗ ಪತ್ರಿಕೆಗಳಿಗೆ ಸೀಮಿತವಾಗಿ, ಕೊನೆಗೆ ಪತ್ರಿಕೆಗಳೂ ಅವುಗಳ ಬಳಕೆಯನ್ನು ಬಿಟ್ಟಿಕೊಟ್ಟವು.

ಕನ್ನಡ ಭಾಷೆಯಲ್ಲಿ ಪಾರಿಭಾಷಿಕ ಪದಗಳನ್ನು ಸೃಷ್ಟಿಸುವ ಕೆಲಸದ ಹಿಂದಿರುವ ಪರಿಶ್ರಮವೆಲ್ಲ ನಷ್ಟವಾಗುತ್ತಲಿದೆ. ಇದೇ ಪ್ರವೃತ್ತಿ ಮುಂದುವರೆದರೆ ಹೊಸ ಕನ್ನಡ ಶಬ್ದಗಳನ್ನು ಹುಟ್ಟುಹಾಕುವ ಪ್ರಯತ್ನವನ್ನೇ ಪಂಡಿತರು ಬಿಟ್ಟುಬಿಡುತ್ತಾರೆ ಅನಿಸುತ್ತದೆ. 

ಮಾತನಾಡುವಾಗ ಇಲ್ಲದ ಮಡಿವಂತಿಕೆ ಬರೆಯುವಾಗ ಇರಬೇಕೇ?:

ಹೀಗೆ ಸಾವಿರಾರು ಇಂಗ್ಲೀಷ್ ಪದಗಳು ದಿನ ಬಳಕೆಯ ಕನ್ನಡದ ಬದುಕಲ್ಲಿ ಹಾಸುಹೊಕ್ಕಾಗಿ, ಕನ್ನಡದ ಪದಗಳೇ ಆಗಿ ಹೋಗಿದ್ದರೂ, ನಾನು ಇಂಗ್ಲೆಂಡಿಗೆ ಬಂದು ಇಷ್ಟು ವರ್ಷಗಳಾದರೂ, ದಿನನಿತ್ಯ ಬಳಸುವ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ನನ್ನ ಕೈ ಓಡುವುದಿಲ್ಲ, ಆ ಶಬ್ದಗಳಿಗೆ ಸರಿಸಮನಾದ ಕನ್ನಡ ಶಬ್ದವನ್ನೋ, ಕನ್ನಡ ಶಬ್ದ ಸಿಗದಿದ್ದಾಗ ಸಂಸ್ಕೃತ ಶಬ್ದವನ್ನೋ ಮೆದುಳು ಹುಡುಕುತ್ತದೆ. ಕನ್ನಡದಲ್ಲಿ ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಅಂತರ್ಧಾನ, ಸ್ವರೂಪ, ವ್ಯಾಧಿಗ್ರಸ್ತ, ಜಾಜ್ವಲ್ಯಮಾನ, ವಾಕ್ಚಾತುರ್ಯ ಇತ್ಯಾದಿ ಸಂಸ್ಕೃತದ ಶಬ್ದಗಳನ್ನು ಬರೆಯುವಾಗ ಇಲ್ಲದ ಮಡಿವಂತಿಕೆ, ದಿನಬಳಕೆಯ ಇಂಗ್ಲೀಷ್ ಶಬ್ದಗಳಾದ ಹಾಸ್ಪಿಟಲ್, ಕೀಬೋರ್ಡ್, ಮಾನಿಟರ್ ಎಂದೆಲ್ಲ ಬರೆಯುವಾಗ ಅಡ್ಡಬರುತ್ತದೆ. ನಾನು ಚಿಕ್ಕನಿದ್ದಾಗ ಆಗಲೇ ಕನ್ನಡೀಕರಣಗೊಂಡ ಬಸ್ಸು, ಕಾರು, ರೈಲು, ರೋಡು ಎಂದು ಬರೆಯುವಾಗ ಇಲ್ಲದ ಮುಜುಗರ, ಇತ್ತೀಚಿನ ವರ್ಷಗಳಲ್ಲಿ ಕನ್ನಡೀಕರಣಗೊಂಡ ಇಂಗ್ಲೀಷ್ ಶಬ್ದಗಳನ್ನು ಬರೆಯುವಾಗ ಆಗುತ್ತದೆ. ಪಾರ್ಸಿಯಿಂದ ಬಂದ `ಅರ್ಜಿ` ಎಂದು ಬರೆದಾಗ ಏನೂ ಅನಿಸುವುದಿಲ್ಲ, ಆದರೆ `ಅಪ್ಲಿಕೇಷನ್` ಎಂದು ಕನ್ನಡದ ಲಿಪಿಯಲ್ಲಿ ಬರೆಯುವಾಗ ಇರಿಸುಮುರುಸಾಗುತ್ತದೆ. ಈ ಗೊಂದಲ ಕನ್ನಡದ ಬೇರೆ ಲೇಖಕರನ್ನು ಎಷ್ಟರಮಟ್ಟಿಗೆ ಕಾಡುವುದೋ ನನಗೆ ಗೊತ್ತಿಲ್ಲ. ಪ್ರಶ್ನೆ ಇರುವುದು ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದಲ್ಲ, ಯಾವುದನ್ನು ಬರೆದರೆ ಕನ್ನಡದ ಓದುಗರನ್ನು ಸುಲಭವಾಗಿ ತಲುಪಬಹುದು ಎನ್ನುವುದು.

ವಿರಾಮಚಿಹ್ನೆಗಳ (ದುರು)ಪಯೋಗ: 

ನಾವು ಬರೆಯುವಾಗ ಬಹಳಷ್ಟು ವಿರಾಮಚಿಹ್ನೆಗಳನ್ನು (punctuation) ಬಳಸುತ್ತೇವೆ, ಪೂರ್ಣವಿರಾಮ, ಅಲ್ಪವಿರಾಮ, ಅರ್ಧವಿರಾಮ, ಪ್ರಶ್ನಾರ್ಥಕ,  ಉದ್ಗಾರವಾಚಕ ಇತ್ಯಾದಿ. ಇಷ್ಟೊಂದು ವಿರಾಮ ಚಿಹ್ನೆಗಳನ್ನು ಭಾರತೀಯ ಭಾಷೆಗಳು ಕಲಿತದ್ದು ಬಹುಷಃ ಇಂಗ್ಲೀಷಿನಿಂದಲೇ ಇರಬೇಕು. 

ಅವುಗಳಲ್ಲಿ ಒಂದು ಚಿಹ್ನೆಯನ್ನು ಕನ್ನಡ ಸಾಹಿತ್ಯದ ಓದುಗರೆಲ್ಲರೂ ಖಂಡಿತ ಓದಿರುತ್ತೀರಿ (ಅಥವಾ ನೋಡಿರುತ್ತೀರಿ), ಅದು ಮೂರು ಡಾಟ್‍ಗಳು (…), ಇಂಗ್ಲೀಷಿನಲ್ಲಿ ಅದಕ್ಕೆ ellipse (ಎಲಿಪ್ಸ್) ಎನ್ನುತ್ತಾರೆ. ಈ ಎಲಿಪ್ಸಿಗೆ ಕನ್ನಡ ವ್ಯಾಕರಣಕಾರರು ಯಾವ ಕನ್ನಡ/ಸಂಸ್ಕೃತ ಶಬ್ದವನ್ನು ಕೊಟ್ಟಿದ್ದಾರೋ ಗೊತಿಲ್ಲ. 

ವಾಕ್ಯದ ಕೊನೆಗೆ ಎಲಿಪ್ಸನ್ನು ಉಪಯೋಗಿಸಿದರೆ, ಇನ್ನೂ ಏನೋ ಮಾತು ಉಳಿದಿದೆ ಎಂದು ಅರ್ಥ. ಸಂಭಾಷಣೆಯ ರೂಪದಲ್ಲಿರುವ ವಾಕ್ಯದ ನಡುವೆ ಎಲಿಪ್ಸ್ ಬರೆದರೆ, ಮಾತನಾಡುವ ವ್ಯಕ್ತಿ ಮಾತನ್ನು ನುಂಗಿದ ಎಂದು ಅರ್ಥ. ಒಟ್ಟಿನಲ್ಲಿ ಎಲಿಪ್ಸನ್ನು ಬಳಸಿದರೆ ಎಲ್ಲೋ ಏನೋ ಬಿಟ್ಟುಹೋಗಿದೆ ಎಂದು ಅರ್ಥ. ಆದ್ದರಿಂದ ಈ ಎಲಿಪ್ಸನ್ನು ಎಷ್ಟು ಕಡಿಮೆಯಾಗುತ್ತೋ ಅಷ್ಟು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತದೆ ಇಂಗ್ಲೀಷ್ ವ್ಯಾಕರಣ. ಎಲಿಪ್ಸ್ ಚಿಹ್ನೆಯನ್ನು ಎಲ್ಲಿ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬಾರದು ಎನ್ನುವುದನ್ನು ತಿಳಿಯಲು ಇಂಗ್ಲೀಷ್ ಭಾಷೆಯಲ್ಲಿ ಸಾಕಷ್ಟು ಲೇಖನಗಳಿವೆ, ವ್ಯಾಕರಣ ಪುಸ್ತಕಗಳಲ್ಲಿ ಅಧ್ಯಾಯಗಳಿವೆ. 

ಈ ಎಲಿಪ್ಸ್ ಚಿಹ್ನೆಯು ಕನ್ನಡದ ಕತೆ ಮತ್ತು ಕವನಗಳಲ್ಲಿ ಲಂಗುಲಗಾಮಿಲ್ಲದೇ ಎಲ್ಲಿಬೇಕೆಂದರಲ್ಲಿ ಒಕ್ಕರಿಸಿಬಿಡುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ‘ಬಿಟ್ಟ ಸ್ಥಳ ತುಂಬಿ‘ ಎಂದು ಇರುತ್ತದಲ್ಲ, ಹಾಗೆ. ಕತೆ ಬರೆಯುವಾಗ ಪ್ಯಾರಾಗ್ರಾಫಿನ ಕೊನೆಯಲ್ಲಿ ‘…‘ ಬಂದುಬಿಡುತ್ತದೆ. ಓದುಗರೇ, ನೀವೇ ಈ ಕತೆಯನು ಮುಂದುವರೆಸಿ ಎನ್ನುವಂತೆ. ಕತೆ ಕಾದಂಬರಿಗಳಲ್ಲಿ ಸಂಭಾಷಣೆಗಳನ್ನು ಬರೆಯುವಾಗ ಕನ್ನಡದ ಪ್ರಸಿದ್ಧ ಲೇಖಕರೂ ಈ ಎಲಿಪ್ಸನ್ನು ಎಲ್ಲಿ ಬೇಕೆಂದರಲ್ಲಿ ಬಳಸುತ್ತಾರೆ. ಇನ್ನು ಕವನಗಳಲ್ಲಿ ಎಲಿಪ್ಸ್ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕವನದ ಶೀರ್ಷಿಕೆಯಲ್ಲೇ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸಾಲಿನ ಕೊನೆಗೆ ಬರುತ್ತದೆ, ಕೆಲವೊಮ್ಮೆ ಕವನದ ಕೊನೆಯಲ್ಲಿ. ಎಲಿಪ್ಸ್ ಬಳಸುವುದರಿಂದ ಆ ಕವನದ ಅರ್ಥಕ್ಕೆ ಯಾವ ಬದಲಾವಣೆಯೂ ಆಗುವುದಿಲ್ಲ. ಓದುವವರಿಗೆ ಮಾತ್ರ ಕವನ ಅಪೂರ್ಣ ಅನ್ನಿಸದೇ ಇರದು. ಹೆಸರಾಂತ ಪತ್ರಿಕೆಗಳೂ ಎಪಿಪ್ಸನ್ನು ತಿದ್ದಿವ ಗೋಜಿಗೆ ಹೋಗುವುದಿಲ್ಲ. ಕನ್ನಡದಲ್ಲಿ ವಿರಾಮಚಿಹ್ನೆಗಳ ಬಗ್ಗೆ, ಅದರಲ್ಲೂ ಎಲಿಪ್ಸ್ ಚಿಹ್ನೆಯ ಬಗ್ಗೆ ಒಂದು ತರಹದ ಅಸಡ್ಡೆ ಇದೆ ಅನಿಸುತ್ತದೆ.  

ಅಷ್ಟೇ ಅಲ್ಲ, ಇನ್ನೂ ಕೆಲವು ವಿರಾಮ ಚಿಹ್ನೆಗಳನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಯುತ್ತಾರೆ, ಅದನ್ನು ಪತ್ರಿಕೆಗಳು ಪ್ರಕಟಿಸುತ್ತಾರೆ ಕೂಡ. ಎರಡು, ಮೂರು ಅಥವಾ ನಾಲ್ಕೆ ಉದ್ಗಾರ ವಾಚಗಳನ್ನು ಒಟ್ಟಿಗೇ ಬಳಸುತ್ತಾರೆ. ಉದ್ಗಾರದ ನಂತರ ಪ್ರಶ್ನಾರ್ಥಕವನ್ನೂ, ಪ್ರಶ್ನಾರ್ಥಕವಾದ ಮೇಲೆ ಉದ್ಗಾರವಾಚಕವನ್ನೂ ವಿನಾಕಾರಣ ಬಳಸುತ್ತಾರೆ (ಇಂಗ್ಲೀಷಿನಲ್ಲಿ ಇದಕ್ಕೆ interrobang ಎನ್ನುತ್ತಾರೆ). ಕೆಲವರಂತೂ ಎಲಿಪ್ಸ್ ಆದ ಮೇಲೆ ಉದ್ಗಾರವಾಚಕವನ್ನು ಬಳಸುತ್ತಾರೆ. ಭಾಷೆಯನ್ನು ಕಲಿಯುವಾಗ ಪದಭಂಡಾರ ಮತ್ತು ಕಾಗುಣಿತ ಎಷ್ಟು ಮುಖ್ಯವೋ ವಿರಾಮ ಚಿಹ್ನೆಗಳನ್ನು ಸರಿಯಾಗಿ ಬಳಸುವುದೂ ತುಂಬ ಮುಖ್ಯವಾಗುತ್ತದೆ. 

ಹೆಸರುಗಳನ್ನು ಬರೆಯುವುದು:

ನಾವು ಚಿಕ್ಕವರಿದ್ದಾಗ ಹೆಂಗಸರ ಹೆಸರನ್ನು ಗೀತಾ, ಸವಿತಾ, ಮಾಲಾ, ಸೀತಾ ಎಂದು, ಗಂಡಸರ ಹೆಸರುಗಳನ್ನು ರಮೇಶ, ಗಣೇಶ, ಸಂತೋಷ, ರಾಜೇಶ ಎಂದು ಎಲ್ಲ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದರು, ನಮ್ಮ ಪೀಳಿಗೆಯವರೂ ಹಾಗೆಯೇ ಬರೆಯುತ್ತಿದ್ದೆವು. ಇತ್ತೀಚಿನ ಒಂದೆರೆಡು ದಶಕಗಳಿಂದ, ಅದರಲ್ಲೂ ಕನ್ನಡ ಟಿವಿ ವಾಹಿನಿಗಳ ಸಂಖ್ಯೆ ಹೆಚ್ಚಾದ ಮೇಲೆ, ಹೆಂಗಸರ ಹೆಸರುಗಳು ಗೀತ, ಸವಿತ, ಮಾಲ, ಸೀತ ಎಂದೂ, ಗಂಡಸರ ಹೆಸರುಗಳನ್ನು ರಮೇಶ್, ಗಣೇಶ್, ಸಂತೋಷ್, ರಾಜೇಶ್ ಎಂದೂ ಬರೆಯುತ್ತಾರೆ. ಅಂದರೆ ಇಂಗ್ಲೀಷ್ ಭಾಷೆಯಲ್ಲಿ ಮೊದಲು ಹೆಸರುಗಳನ್ನು ಬರೆದುಕೊಂಡು, ನಂತರ ಕನ್ನಡಕ್ಕೆ ಭಾಷಾಂತರ ಮಾಡಿದಂತೆ ಕಾಣಿಸುತ್ತವೆ, ಈ ಹೆಸರುಗಳು. ಇದು ಕನ್ನಡ ಭಾಷೆ ಬೆಳೆಯುತ್ತಿರುವ ಸಂಕೇತವೋ ಅಥವಾ ವಿನಾಶದತ್ತ ಹೊರಟಿರುವ ಸಂಕೇತವೋ ಎನ್ನುವುದನ್ನು ಕನ್ನಡ ಪಂಡಿತರೇ ಉತ್ತರಿಸಬೇಕು.  

ಕನ್ನಡದಲ್ಲಿ ಸ್ಪೆಲ್ಲಿಂಗ್:

ಇಂಗ್ಲೀಷಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗುವಂತೆ ಕನ್ನಡದಲ್ಲಿ ಕಾಗುಣಿತ ದೋಷಗಳು ಆಗುತ್ತವೆ. ಅದನ್ನು ಅಮೇರಿಕದಲ್ಲಿ ನೆಲೆಸಿರುವ ಕನ್ನಡದ ಹೆಸರಾಂತ ಅಂಕಣಕಾರರಾದ ಶ್ರೀವತ್ಸ ಜೋಶಿಯವರು ಪ್ರತಿ ವಾರ ತಪ್ಪದೇ ‘ಸ್ವಚ್ಛ ಭಾಷೆ ಅಭಿಯಾನ‘ದಲ್ಲಿ ಬರೆದು ವಾಟ್ಸ್ಯಾಪ್ ಮಾಡುತ್ತಾರೆ, ಫೇಸ್ಬುಕ್ಕಿನಲ್ಲಿ ಬರೆಯುತ್ತಾರೆ. ನಾನು ಈಗ ಬರೆಯುತ್ತಿರುವುದು ಕಾಗುಣಿತ ದೋಷದ ಬಗ್ಗೆ ಅಲ್ಲ. ಕನ್ನಡದಲ್ಲಿ ಪ್ರತಿ ಶಬ್ದಕ್ಕೂ ಇರುವ ನಿಖರವಾದ ಸ್ಪೆಲಿಂಗ್ ಇರುವ ಬಗ್ಗೆ. ಏನು ಎನ್ನುವುದನ್ನು ಸ್ವಲ್ಪ ವಿವರಿಸುತ್ತೇನೆ.

‘ಅಂಚೆ‘ಯನ್ನು ‘ಅಞ್ಚೆ‘ ಎಂದೂ ಬರೆಯಬಹುದು. ನಿಜವಾಗಿ ನೋಡಿದರೆ ನಾನು ‘ಅಂಚೆ‘ಯನ್ನು ಉಚ್ಚಾರ ಮಾಡುವುದು ‘ಅಞ್ಚೆ‘ ಎಂದೇ.  ‘ಮಂಗ‘ನನ್ನು ‘ಮಙ್ಗ‘ ಎಂದು ಉಚ್ಚಾರ ಮಾಡುತ್ತೇವೆ, ಆದರೆ ‘ಮಂಗ‘ ಎಂದು ಬರೆಯುತ್ತೇವೆ. ಆದರೆ ‘ಅಂಚೆ‘, ‘ಮಂಗ‘ ಎಂದು ಬರೆದರೆ ಮಾತ್ರ ಓದುವವರಿಗೆ ಅರ್ಥವಾಗುತ್ತದೆ.  ‘ಅಞ್ಚೆ‘ ಅಥವಾ ‘ಮಙ್ಗ‘ ಎಂದು ಬರೆದರೆ ಎಂಥ ಕನ್ನಡ ಓದುಗನೂ ತಬ್ಬಿಬ್ಬಾಗುವುದು ಸಹಜ. ‘ನಿನ್ನನ್ನು‘ ಎನ್ನುವುದನ್ನು ‘ನಿಂನಂನು‘ ಎಂದು ಕೂಡ ಬರೆಯಬಹುದು, ಓದುವುದರಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ, ಆದರೆ ಅದು ತಪ್ಪು ಸ್ಪೆಲ್ಲಿಂಗ್ ಆಗುತ್ತದೆ. ಏಕೆಂದರೆ ರೂಢಿಯಲ್ಲಿ ಇರುವುದು ‘ನಿನ್ನನ್ನು‘ ಎಂದು. ‘ವಿಪರ್ಯಾಸ‘ವನ್ನು ‘ವಿಪರ‍್ಯಾಸ‘ ಎಂದೂ ಬರೆಯಬಹುದು, ಆದರೆ ಅದು ರೂಢಿಯಲ್ಲಿ ಇಲ್ಲದಿರುವುದರಿಂದ ತಪ್ಪು ಸ್ಪೆಲಿಂಗ್ ಆಗುತ್ತದೆ. ಬೀಚಿಯವರು ‘ತಿಮ್ಮ‘ನನ್ನು ‘ತಿಂಮ‘ ಎಂದು ಬರೆಯುತ್ತಿದ್ದರು, ಈಗ ‘ತಿಮ್ಮ‘ ಅದರ ಸರಿಯಾದ ಸ್ಪೆಲಿಂಗ್ ಆಗಿದೆ. .  

ಒಂದೇ ಶಬ್ದವನ್ನು ಸರಿಯಾಗಿಯೇ ಬೇರೆ ಬೇರೆ ರೀತಿಯಲ್ಲಿ ಬರೆಯಲು ಸಾಧ್ಯವಿದ್ದರೂ, ನಮಗೆ ಗೊತ್ತಿಲ್ಲದಂತೆಯೇ ಕನ್ನಡದಲ್ಲಿ ಕನ್ನಡ ಶಬ್ದಗಳ ಸ್ಪೆಲಿಂಗ್ ಇದೆ. ‘ತಂದೆ‘ಯನ್ನು ‘ತನ್ದೆ‘ ಎಂದು ಬರೆದರೆ ಅದು ‘ತಂದೆ‘ಯ ತಪ್ಪು ಸ್ಪೆಲಿಂಗ್ ಆಗುತ್ತದೆ. 

ಇದನ್ನೆಲ್ಲ ಏಕೆ ಬರೆಯುತ್ತಿದ್ದೇನೆ ಎಂದರೆ, ನಾವು ಇತ್ತೀಚೆಗೆ ಬಹಳಷ್ಟು ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೇವಷ್ಟೇ. ಆದರೆ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ  ಎರಡು ಅಥವಾ ಮೂರು ಒತ್ತಕ್ಷರಗಳು ಬರುತ್ತವೆ, ಅದನ್ನು ಹಾಗೆಯೇ ಬರೆದರೆ ಓದುವವರಿಗೆ ಕಷ್ಟವಾಗುತ್ತದೆ, ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಏಕರೂಪವನ್ನು ತರುವ ಅವಶ್ಯಕತೆ ಇದೆ, ಇಲ್ಲದಿದ್ದರೆ ಒಬ್ಬಬ್ಬರೂ ಒಂದೊಂದು ರೀತಿ ಬರೆಯುತ್ತಾರೆ. 

ಉದಾಹರಣೆಗೆ, ‘ಸಾಫ್ಟ್ವೇರ್‘ ಎಂದು ಬರೆಯುವ ಬದಲು ‘ಸಾಫ್ಟ್‌ವೇರ್‘ ಎಂದು ಬರೆದರೆ ಓದುವುದು ಸುಲಭ.“ಹಾರ್ಡ್ವೇರ್‘ ಎಂದು ಬರೆಯುವ ಬದಲು ‘ಹಾರ್ಡ್‌ವೇರ್‘ ಎಂದು ಬರೆದರೆ ಆರ್ಥಮಾಡಿಕೊಳ್ಳುವುದು ಸುಲಭ. ನಾನು ಈಗ ನೆಲೆಸಿರುವ ‘ಬರ್ಮಿಂಗ್ಹ್ಯಾಮ್‘ ನಗರವನ್ನು ‘ಬರ್ಮಿಂಗ್‍ಹ್ಯಾಮ್‘ ಎಂದು ಬರೆದರೆ ಓದುವವರಿಗೆ ಸುಲಭ. ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಸ್ಟ್ಯಾಂಡರ್ಡಾಜೇಶನ್ (ಸ್ಟ್ಯಾಂಡರ್ಡೈಜೇಷನ್) ಮಾಡುವ ಅವಶ್ಯಕತೆ ಇದೆ. 

ಕನ್ನಡದ ಅಕ್ಷರಗಳು:

ನಾನು ಶಾಲೆಯಲ್ಲಿ ಓದುವಾಗ ಕನ್ನಡದ ಅಕ್ಷರಮಾಲೆಯಲ್ಲಿ ಒಂದು ಅಕ್ಷರವಿತ್ತು (ಈಗಲೂ ಇದೆಯೋ ಇಲ್ಲವೋ ಗೊತ್ತಿಲ್ಲ), ಆದರೆ ಅದನ್ನು ಇದುವರೆಗೂ ಉಪಯೋಗಿಸಿದ ನೆನಪೇ ಇಲ್ಲ. ಆ ಅಕ್ಷರವೇ ‘ೠ‘. ಅನುನಾಸಿಕಗಳಾದ ಙ ಮತ್ತು ಞ ಗಳ ಉಪಯೋಗಗಳೂ ವಿರಳವೇ ಆದರೂ ‘ಅಂಚೆ‘, ‘ಮಂಗ‘ ಶಬ್ದಗಳ ಉಚ್ಚಾರವನ್ನು ಹೇಳಿಕೊಡಲು ಉಪಯುಕ್ತವಾಗಿವೆ. ಕೆಲವು ಅಕ್ಷರಗಳು ಕನ್ನಡದಲ್ಲಿ ಇದ್ದವು, ಅವು ಪೂರ್ತಿ ಮರೆಯಾಗಿವೆ. ಉದಾಹರಣೆಗೆ: ಱ ಮತ್ತು ೞ. ಈ ಅಕ್ಷರಗಳನ್ನು ಉಪಯೋಗಿಸಿ ಕನ್ನಡದಲ್ಲಿ ಈಗ ಯಾವ ಶಬ್ದಗಳೂ ಉಳಿದಿಲ್ಲ, ಅವುಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಕೂಡ ಕನ್ನಡಿಗರು ಮರೆತಾಗಿದೆ. ಹೀಗೆ ಕೆಲವು ಅಕ್ಷರಗಳು ಮರೆಯಾಗಿವೆ, ಕೆಲವು ಅನುಪಯುಕ್ತವಾಗಿವೆ. 

ಈಗಿರುವ ಕನ್ನಡದ ಅಕ್ಷರಗಳಿಂದ ದಿನ ನಿತ್ಯ ಉಪಯೋಗಿಸುವ ಕೆಲವು ಶಬ್ದಗಳ ಉಚ್ಚಾರಗಳನ್ನು ತರುವುದು ಕಷ್ಟವಾಗುತ್ತದೆ. ಅದರಲ್ಲೂ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬಳಸುವಾಗ, ಕನ್ನಡದ ಅಕ್ಷರಗಳನ್ನು ಬಳಸಿ ಆ ಉಚ್ಚಾರಗಳನ್ನು ತರುವುದು ಸಾಧ್ಯವಾಗುವುವಿಲ್ಲ.

ಉದಾಹರಣೆಗೆ: ‘loss‘ ಶಬ್ದವನ್ನು ‘ಲಾಸ್‘ ಎಂದು ಬರೆದರೆ ಅದರ ಮೂಲ ಉಚ್ಚಾರ ಅದರಲ್ಲಿ ಬರುವುದಿಲ್ಲ. ನಾನು ಚಿಕ್ಕವನಿದ್ದಾಗ ‘ಲಾ‘ ದ ಮೇಲೆ ‘ಅರ್ಧ ಚಂದ್ರಾಕಾರ (U)‘ ಹಾಕಿ ‘loss’ನಲ್ಲಿರುವ ‘ಆ‘ ಉಚ್ಚಾರವನ್ನು ತರುತ್ತಿದ್ದೆವು. ಆದರೆ ಈ ಅರ್ಧಚಂದ್ರಾಕರಾದ ಪ್ರಯೋಗವನ್ನು ನಾನು ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ನೋಡಿದ ನೆನಪಿಲ್ಲ. 

ಹಾಗೆಯೇ ‘Apple‘ ಶಬ್ದವನ್ನು“ಆ್ಯಪಲ್‘ ಎಂದು ಬರೆದರೆ ಓದಲು ಸುಲಭ, ‘ಆಪಲ್‘ ಎಂದೋ ‘ಯಾಪಲ್‘ ಎಂದೋ ಬರೆದರೆ ‘Apple’ ಎಂದು ಉಚ್ಚಾರ ಮಾಡುವುದು ಕಷ್ಟ. ಆದರೆ ಈ ‘ಆ್ಯ‘ ಎನ್ನುವ ಶಬ್ದ ಕನ್ನಡದ ವ್ಯಾಕರಣದ ಮಟ್ಟಿಗೆ ನಿಷಿದ್ಧ. 

‘ಫ‘ ಮತ್ತು ‘ಜ‘ ಅಕ್ಷರಗಳನ್ನು ಸ್ವಲ್ಪ ಬದಲಾಯಿಸಿ ‘ಫ಼‘ ಮತ್ತು ‘ಜ಼‘ ಎಂದಾಗಿಸಿ ‘fool‘ ಮತ್ತು ‘zoom‘ ಗಳನ್ನು ಸರಿಯಾಗಿ ಕನ್ನಡದಲ್ಲಿ ಬರೆಯಬಹುದು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರುವ ವಿಚಾರವೇ. ಆದರೆ ಈ ಅಕ್ಷರಗಳ ಬಳಕೆಯನ್ನು ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ ನಾನು ನೋಡಿಲ್ಲ. 

ಱ ಮತ್ತು ೞ ಅಕ್ಷರಗಳನ್ನು ಕನ್ನಡದ ಅಕ್ಷರಮಾಲೆಯಿಂದ ಅಧೀಕೃತವಾಗಿ ಕೈಬಿಟ್ಟಂತೆ, ಫ಼ ಮತ್ತು ಜ಼ ಅಕ್ಷರಗಳನ್ನು ಅಧೀಕೃತವಾಗಿ ಸೇರಿಸಬೇಕಾದ ಅವಶ್ಯಕತೆ ಇದೆಯೇ ಅನ್ನುವುದನ್ನು ತಜ್ಞರು ನೋಡಬೇಕು. ಹಾಗೆಯೇ ‘ಆ್ಯ‘ ಉಪಯೋಗಕ್ಕೆ ಮನ್ನಣೆ ಕೊಡಬೇಕು. ಅಕ್ಷರಗಳ ಮೇಲೆ ಅರ್ಧ ಚಂದ್ರಾಕಾರ(U)ವನ್ನು ಅರೆಸ್ವರವಾಗಿ ಕನ್ನಡದಲ್ಲಿ ಸೇರಿಸಬೇಕು ಎನ್ನುವುದು ನನ್ನ ಅನಿಸಿಕೆ. . 

ಕನ್ನಡದ ಅಂಕಿಗಳು:

ಕನ್ನಡದ ಯಾವುದೇ ಪತ್ರಿಕೆ ತೆಗೆದುಕೊಂಡರೂ, ಯಾವುದೇ ಟಿವಿ ಚಾನೆಲ್ ತೆರೆದರೂ ಅಂಕಿಗಳನ್ನು ಕನ್ನಡದಲ್ಲಿ ಬರೆಯದೇ ಹಿಂದೂ-ಅರೇಬಿಕ್‍ನಲ್ಲಿ ಬರೆಯುತ್ತಾರೆ. ನಾನು ಚಿಕ್ಕವನಿದ್ದಾಗ ಎಲ್ಲ ಪತ್ರಿಕೆಗಳೂ ಕನ್ನಡದಲ್ಲೇ ಅಂಕಿಗಳನ್ನು ಪ್ರಕಟಿಸುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಈ ಬದಲಾವಣೆಯಾಗಿದೆ. ಬರೆಯುವಾಗ ಕನ್ನಡದ ಶಬ್ದಗಳಂತೆ ಚಂದವಾಗಿ ಕಾಣುತ್ತಿದ್ದ ಕನ್ನಡದ ಅಂಕಿಗಳು ಶಾಶ್ವತವಾಗಿ ಸತ್ತು ಹೋಗಿರುವುದನ್ನು ನೋಡಿದರೆ ನನ್ನ ಪೀಳಿಗೆಯವರಿಗಾದರೂ ನೋವಾಗದೇ ಇರದು. 

ಲ್ಯಾಟಿನ್ (ರೋಮನ್) ಲಿಪಿಯಲ್ಲಿ ಕನ್ನಡ:

ಕನ್ನಡದ ಅಂಕಿಗಳನ್ನು ಹಿಂದೂ-ಅರೇಬಿಕ್ ಅಂಕಿಗಳು ನಿರ್ನಾಮ ಮಾಡಿದಂತೆ, ಕನ್ನಡದ ಲಿಪಿಯನ್ನು ಲ್ಯಾಟಿನ್/ರೋಮನ್ ಲಿಪಿ ನಿರ್ನಾಮ ಮಾಡುವ ನಿಟ್ಟಿನಲ್ಲಿ ಅಂಬೆಗಾಲಿಡುತ್ತಿದೆ.   

ಇತ್ತೀಚಿನ ವರ್ಷಗಳಲ್ಲಿ ಯುಟ್ಯೂಬಿನಲ್ಲಿ ಹಾಡುಗಳ ‘ಲಿರಿಕಲ್ ವಿಡಿಯೋ‘ಗಳನ್ನು ಬಿಡುತ್ತಾರೆ. ಹೆಚ್ಚು ಕಡಿಮೆ ಎಲ್ಲ ಕನ್ನಡ ಹಾಡುಗಳ ಬರವಣಿಗೆ ಲ್ಯಾಟಿನ್ ಲಿಪಿಯಲ್ಲಿಯೇ ಇರುತ್ತವೆ. ಇದು ಬರೀ ಕನ್ನಡದಲ್ಲಿ ಆಗಿರುವ ಬದಲಾವಣೆಯಲ್ಲ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಹಾಡಿನ ಸಾಹಿತ್ಯವನ್ನು ಲ್ಯಾಟಿನ್ನಿನಲ್ಲೇ ಬರೆಯುತ್ತಾರೆ. ಹಾಗೆಯೇ ಬಹಳಷ್ಟು ಕನ್ನಡಿಗರು ವಾಟ್ಸ್ಯಾಪ್ ಮಾಡುವಾಗ, ಮೆಸೇಜುಗಳನ್ನು ಕಳಿಸುವಾಗ ಕನ್ನಡವನ್ನು ಕನ್ನಡದಲ್ಲಿ ಬರೆಯದೇ ಲ್ಯಾಟಿನ್ ಲಿಪಿಯಲ್ಲಿ ಬರೆಯುವುದೇ ಹೆಚ್ಚು. ಕನ್ನಡ ಭಾಷೆಯನ್ನು ಲ್ಯಾಟಿನ್ ಲಿಪಿಯಲ್ಲಿ ಬರೆದರೆ ಮಾತ್ರ ಓದಬಲ್ಲ ಕನ್ನಡಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರೆದರೆ ಕನ್ನಡದ ಲಿಪಿಯನ್ನು ಓದುವ ಮತ್ತು ಬರೆಯುವ ಜನರು ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುತ್ತಾರೆ ಅನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ.   

ಪ್ಯಾಕೇಜ ಪ್ರವಾಸದ ಮೂಲಪುರುಷ, ಥಾಮಸ್ ಕುಕ್ ಮತ್ತು ವಿಶ್ವ ಸಂಗೀತ ದಿನಾಚರಣೆ

1) ಕಳೆದ ತಿಂಗಳು ನಾನು ಬಹುಸಂಖ್ಯಾತ ಬ್ರಿಟಿಶ್ ಭಾರತೀಯ ಮೂಲದವರು ವಾಸಿಸುತ್ತಿರುವ ಲೆಸ್ಟರ್ ಶಹರಕ್ಕೆ ಹೋದಾಗ ಸ್ಟೇಶನ್ನಿನ ಹೊರಗಡೆಯಲ್ಲಿ ಕಟ್ಟೆಯ ಮೇಲೆ ನಿಂತ ಆರಡಿ ಎತ್ತರದ ಅರ್ಧ ಬೋಳು ತಲೆಯ ಈಗ ತಾನೆ ಪ್ರವಾಸಕ್ಕೆ ಹೊರಟವನಂತೆ ಕಾಣುತ್ತಿದ್ದವನ ಶಿಲ್ಪ ಕಣ್ಣಿಗೆ ಬಿತ್ತು. ಒಂದು ಕೈಯಲ್ಲಿ ಹಳೆಯ ಕಾಲದ (ಗಾಂಧಿ ತಾತನ ಹತ್ತಿರ ಇದ್ದಂಥ) ಪಾಕೆಟ್ ಗಡಿಯಾರ, ಇನ್ನೊಂದು ಕೈಯಲ್ಲಿ ಮಡಿಚಿಟ್ಟ ಕೊಡೆ, ಗ್ಲಾಡ್ಸ್ಟನ್ ಬ್ಯಾಗು, ಅದರಡಿ ಒಂದು ಚಿಕ್ಕ ಟೂರಿಂಗ್ ಸೂಟ್ ಕೇಸ್. ಅಪ್ಪಟ ಹಳೆಯಕಾಲದ ಇಂಗ್ಲಿಷ್ ’ಜಂಟಲ್ ಮನ್ ಟೂರಿಸ್ಟ್.’ ಯಾರೀತ? ಇವನೇ ಸುಮಾರು ಎರಡು ಶತಮಾನಗಳ ಹಿಂದೆ ತಾನು ನಿಂತಿದ್ದ ಜಾಗದ ಪಕ್ಕದಲ್ಲೇ ಇದ್ದ ಸ್ಟೇಶನ್ನಿನಿಂದ ೫೦೦ ಜನ ಯಾತ್ರಿಕರನ್ನು ಪ್ರವಾಸಕ್ಕೆ ಕರೆದೊಯ್ದು ಥಾಮಸ್ ಕುಕ್. ಇದೊಂದು ರೋಚಕ ಪ್ರವಾಸಿ ಕಥನ! ಇಂದು ಊರಿಂದೂರಿಗೆ ಮತ್ತು ದೇಶಾಂತರ ಪ್ರವಾಸಿಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಇಪ್ಪತ್ತನೆಯ ಶತಮಾನದ ಅರವತ್ತರ ಮತ್ತು ಎಪ್ಪತ್ತರ ದಶಕಗಳಲ್ಲಿ ಇಂಗ್ಲೆಂಡಿನಲ್ಲಿ ಸರ್ ಫ್ರೆಡ್ಡಿ ಲೇಕರ್ ಸ್ಲೈ ಟ್ರೇನ್ (Skytrain) ಎನ್ನುವ ಕಂಪನಿ ಶುರು ಮಾಡಿದ ನಂತರ ಪ್ಯಾಕೇಜ್ ಹಾಲಿಡೇಗಳು ಬೆಳೆಯುತ್ತ ಥಾಮಸ್ ಕುಕ್ ಕಂಪನಿ ೧೯೮೦ರ ದಶಕದಲ್ಲಿ ಅದನ್ನು ಉಚ್ಛ್ರಾಯ ಸ್ಥಿತಿಗೆ ಒಯ್ಯಿತು. ಆದರೆ ಅದು ಯಾವಾಗ ಪ್ರಾರಂಭವಾಯಿತು? ಇಲ್ಲಿಂದ ಶುರುವಾಗುತ್ತದೆ ಜರ್ನಿ!

ಕಾಲ್ನಡಿಗೆಯಲ್ಲಿ ಹೊರಟ ಪಾದ್ರಿ
ಥಾಮಸ್ ಕುಕ್ ಹುಟ್ಟಿದ್ದು ಡಾರ್ಬಿಶೈರಿನ ಮೆಲ್ ಬೋರ್ನ್ (ಆಸ್ಟ್ರೇಲಿಯದು ಅಲ್ಲ) ಎನ್ನುವ ಹಳ್ಳಿಯಲ್ಲಿ, ೧೮೦೮ರಲ್ಲಿ. ಹತ್ತು ವರ್ಷಕ್ಕೇ ಶಾಲೆ ಬಿಟ್ಟು ತನ್ನ ಸೋದರಮಾವನ ಕೆಳಗೆ ಬಡಿಗನಾಗಿ ಕೆಲಸಕ್ಕೆ ಸೇರಿಕೊಂಡ. ತಂದೆ ತಾಯಿಗಳ ಕಟ್ಟಾ ಬಾಪ್ಟಿಸ್ಟ್ ಕ್ರಿಶ್ಚಿಯನ್ ವಾತಾವರಣದಲ್ಲಿ ಬೆಳೆದವನು. ೧೮೨೮ರಲ್ಲಿ ಬೈಬಲ್ ರೀಡರ್ ಮತ್ತಿ ಮಿಷನರಿಯಾಗಿ ನೇಮಕಗೊಂಡನು. ಆ ಕೆಲಸಕ್ಕಾಗಿಯೇ ಮರುವರ್ಷ ೨೬೯೨ ಮೈಲಿಗಳ ಸಂಚಾರ; ಅದರಲ್ಲಿ ಎರಡುಸಾವಿರ ಮೈಲು ಬರೀ ಕಾಲ್ನಡಿಗೆಯಲ್ಲೇ ಸುತ್ತಾಡಿದ! ಮದ್ಯಪಾನವಿರೋಧಿ ಚಳುವಳಿಗಾಗಿ  ಮೀಟಿಂಗ್ ಮತ್ತು ಮೆರವಣಿಗೆಗಳನ್ನು ಯೋಜಿಸಿದ. ಇಸವಿ ಸನ್ ೧೮೪ರ ಜೂನ್ ೯ ರಂದು ಥಾಮಸ್ ತನ್ನ ಊರಾದ ಮಾರ್ಕೆಟ್ ಹಾರ್ಬರಾದಿಂದ ಕಾಲ್ನಡಿಗೆಯಲ್ಲಿ ೧೧ ಮೈಲು ದೂರದ ಲೆಸ್ಟರ್ ನಗರಕ್ಕೆ ಟೆಂಪರನ್ಸ್ (ಮದ್ಯಪಾನ ಸಂಯಮ ಸಂಘದ) ಮೀಟಿಂಗಿಗೆ ಹೊರಟಿದ್ದ. ಉದರ ನಿರ್ವಹಣೆಗಾಗಿ ಬಡಿಗನಾಗಿ ಕೆಲಸಮಾಡುತ್ತಿದ್ದರೂ ತನಗೆ ಅತೀವ ಶ್ರದ್ಧೆಯಿದ್ದ ಕ್ರಿಸ್ತಮತದ ಬಾಪ್ಟಿಸ್ಟ್ ಪ್ರವಾಚನಕಾರನೂ ಆಗಿದ್ದ ಆತನ ತಲೆಯಲ್ಲಿ ಫಕ್ಕನೆ ಸುಳಿಯಿತೊಂದು ವಿಚಾರ: ಇತ್ತೀಚಿಗೆ ಬೆಳೆಯುತ್ತಿರುವ ರೇಲ್ವೆಯ ಪ್ರಭಾವವನ್ನು ನಮ್ಮ ಬಡವರನ್ನು ಹೀನ ಸ್ಥಿತಿಗೆಳೆಯುತ್ತಿರುವ ಮದ್ಯಪಾನದಂಥ ದುರ್ವ್ಯಸನಗಳ ಸಂಯಮ ಚಳುವಳಿಗೇಕೆ  (Temperance Movement) ಉಪಯೋಗಿಸಿಕೊಳ್ಳಬಾರದು? ಅಂತ. ಈ ವಿಚಾರವನ್ನು ಅಂದು ಟೆಂಪರನ್ಸ್ ಸೊಸೈಟಿ ಸಭೆಯಲ್ಲಿ ಮಂಡಿಸಿ ಕಮಿಟಿಯಿಂದ ಆನುಮತಿ ಪಡೆದು ಕಾರ್ಯಪ್ರವೃತ್ತನಾದ. ಮುಂದಿನ ಜುಲೈ ೫, ೧೮೪೧ ಮಹತ್ವದ ದಿನ. ಮೊದಲ ಬಾರಿ ಇಂಗ್ಲೆಂಡಿನ ಲೆಸ್ಟರ್ ನಗರದಿಂದ ಲಫ್ ಬರಾ (Loughborough) ಎನ್ನುವ ಊರಿಗೆ ೪೮೫ ಜನರನ್ನು ಹದಿನೊಂದು ಮೈಲು ರೈಲು ಪ್ರವಾಸ ಮಾಡಿಸಿ ಥಾಮಸ್ ಕುಕ್  ಪಪ್ರಥಮ ದಾಖಲೆಯನ್ನೇ ಮಾಡಿದನು. ಆ ದಿನ ಅವರೆಲ್ಲ ಮರಳಿ ಲೆಸ್ಟರಿಗೆ ಬಂದಾಗ ರಾತ್ರಿ ೧೦ ೩೦ ಗಂಟೆ! ಅವರು ತೆತ್ತ ಶುಲ್ಕ ಬರೀ ಒಂದು ಶಿಲ್ಲಿಂಗ್. ಈಗಿನ ಲೆಕ್ಕದಲ್ಲಿ ಮೂರು ಪೌಂಡುಗಳು; ಅಂದು ಸಾಮಾನ್ಯ ಮನುಷ್ಯನ ಆಗಿನ ಕಾಲದ ಒಂದು ತಿಂಗಳ ಆದಾಯಕ್ಕೆ ಸಮವಾಗಿತ್ತು. ಅಂದೇ ಹುಟ್ಟಿತು ಪ್ಯಾಕೇಜ್ ಪ್ರವಾಸ. ಆತನೇ ಅದಕ್ಕೆ ಚಾಲನೆ ಕೊಟ್ಟವರಲ್ಲಿ ಮೊದಲಿಗನು. ಈ ಪ್ರವಾಸದ ಯಶಸ್ಸಿನಿಂದ ಪ್ರೇರಿತನಾಗಿ ೧೮೫೧ರ ಗ್ರೇಟ್ ಎಗ್ಸಿಬಿಷನ್ ಗೆ ಒಂದುಉವರೆ ಲಕ್ಷ ಜನರನ್ನು ಕೊಂಡೊಯ್ದ. ೧೮೫೫ ರ ಪ್ಯಾರಿಸ್ ಎಗ್ಸಿಬಿಷನ್ನಿಗೆ ಹೋಗಿಬಂದ ಲೆಸ್ಟರಿನ ಪ್ರಯಾನಿಕರು ತೆತ್ತ ಶುಲ್ಕ ಬರೀ ಒಂದೂ ವರೆ ಪೌಂಡುಗಳು! ಹೀಗೇ ’ಕುಕ್ ಟೂರಿಸ್ಟ್’ಗಳ ಸಂಖ್ಯೆ ಬೆಳೆದು ಪ್ರವಾಸಗಳು ಯೂರೋಪ್, ಅಮೇರಿಕಾ, ಸಿಂಗಾಪೂರ್, ಪ್ರಾಚ್ಯ ದೇಶಗಳಿಗೂ ವಿಸ್ತರರಿಸಿತು. ಅಲ್ಲಿ ವಾಸಕ್ಕೆಹೋಟೆಲ್ ಕೂಪನ್ನುಗಳು, ಹಣಕಾಸಿನ ವ್ಯವಸ್ಥೆಗೆ ಟ್ರಾವಲರ್ಸ್ ಚೆಕ್ ಹೀಗೇ ಬೆಳೆಯಿತು ಕುಕ್ ಎಂಪಾಯರ್! ಆತನ ನಂತರ ಆತನ ಮಗನು ಥಾಮಸ್ ಕುಕ್ ಕಂಪನಿಯನ್ನು ಮುನ್ನಡೆಸಿ ಇನ್ನಷ್ಟು ಬೆಳೆಸಿದನು. ಮುಂದೆ ಮೊಮ್ಮಕ್ಕಳೂ ಸೇರಿಕೊಂಡರು. ಅವರದೇ ಏರ್ ಲೈನ್ ಸಹ ಪ್ರಾರಂಭವಾಯಿತು
ಲಫ್ ಬರಾ ಸ್ಟೇಶನ್ನಿನಲ್ಲಿ ಆ ಪ್ರವಾಸದ ಸ್ಮಾರಕವಾಗಿ ಹಸಿರು ಫಲಕದ ಅನಾವರಣ (೨೦೨೩)
ಫ್ರೆಡ್ಡಿ ಲೇಕರ್ ಅವರ ಸ್ಕೈ ಟ್ರೇನ್ ಮತ್ತು ವಿದೇಶ ಪ್ರವಾಸದ ಬೆಳವಣಿಗೆ

ಮೋಡ, ಮಂಜು ಕವಿದ ಬ್ರಿಟಿಶ್ ಆಕಾಶಕ್ಕೆ ಹೊಂದಿಕೊಂಡವರು ಮತ್ತು ಇಡೀ ವರ್ಷ ಸತತವಾಗಿಯಲ್ಲದಿದ್ದರೂ ತಿಂಗಳಲ್ಲೊಂದು ಬಾರಿಯಾದರೂ ಮಳೆಯಾಗುವ ಈ ಚಳಿನಾಡಿನಲ್ಲಿ ವಾಸಿಸುವ ಆಂಗ್ಲರ ಹವ್ಯಾಸಗಳಲ್ಲಿ ಒಂದು ಬಹುತೇಕ ಎಲ್ಲ ಕುಟುಂಬದವರು ’ಬೇಸಗೆಯಲ್ಲಿ’ ಒಂದು ಅಥವಾ ಎರಡು ವಾರಗಳು ಸಮುದ್ರತಟದ ಮೇಲೆ ಕಳೆಯುವ ಬೀಚ್ ಹಾಲಿಡೇ! ಚಿಕ್ಕಂದಿನಲ್ಲಿ ಈ ದೇಶದ ನೈಋತ್ಯದ ಡೆವನ್ ಮತ್ತು ಕಾರ್ನ್ ವಾಲ್ ಪ್ರದೇಶಗಳಿಗೆ ತಂಡೋಪ ತಂಡವಾಗಿ ಹೋಗುವ ರಿಚುಅಲ್ ಅವರದು. ಅದು ತಪ್ಪಿದರೆ ಉತ್ತರದ ಬ್ಲಾಕ್ ಪೂಲ್, ಅಥವಾ ಅಗ್ನೇಯದ ಗ್ರೇಟ್ ಯಾರ್ಮೌತ್ ಅಥವಾ ಸ್ಕಾಟ್ಲಂಡಿಗೆ ಕಾರಿಗೆ ಕಾರವಾನ್ ಲಗತ್ತಿಸಿ ಪಯಣ. ಇದು ತಲೆ ತಲಾಂತರಗಳಿಂದ ಅವರು ಮಾಡುತ್ತಿದ್ದರೆಂದು ವಿಕ್ಟೋರಿಯನ್ ಆಂಗ್ಲ ಸಾಹಿತಿ ಚಾರ್ಲ್ಸ್ ಡಿಕೆನ್ಸ್ನ ಓದುಗರಿಗೂ ವಿದಿತ. ಆಗ ಮಧ್ಯಮ ವರ್ಗದ ಕುಟುಂಬಗಳಿಗೆ ಏರೋಪ್ಲೇನಿನಲ್ಲಿ ಪರದೇಶಗಳಿಗೆ ಹೋಗುವ ಸಾಮರ್ಥ್ಯ ಇರಲಿಲ್ಲ. ಅದನ್ನು ಮುರಿದವನು ೧೯೭೭ರಲ್ಲಿ ಬರೀ ೧೧೮ ಸ್ಟರ್ಲಿಂಗ್ ಪೌಂಡುಗಳಿಗೆ ಅಮೇರಿಕೆಗೆ ಕೊಂಡೊಯ್ಯುವ ಸ್ಕೈಟ್ರೇನ್ ಪ್ರಾರಂಭ ಮಾಡಿದವನೇ ಮುಂದೆ ಸರ್ ಬಿರುದು ಪಡೆದು ಸರ್ ಫ್ರೆಡ್ಡಿ ಲೇಕರ್ ಆದವನು. ಆ ತಿಕೀಟು ಉಳಿದ ದೊಡ್ಡ ಏರ್ಲೈನ್ಗಳಿಗಿಂತ ಶೇಕಡಾ ೬೬ ಕಡಿಮೆ ದರದ್ದು ಎಂದ ಮೇಲೆ ಶ್ರೀಸಾಮಾನ್ಯನ  ಪರದೇಶ ಪ್ರವಾಸದ ಕನಸು ನನಸಾಯಿತು. ಹಲವೇ ವರ್ಷಗಳ ನಂತರ ೧೯೮೦ರ ದಶಕದಲ್ಲಿ ಹಣಕಾಸಿನ ಕುಸಿತ (ರಿಸೆಷನ್) ಮತ್ತು ಆತನ ಪ್ರತಿಸ್ಫರ್ದಿ ಏರ್ಲೈನ್ ಗಳ ಷಡ್ಯಂತ್ರ ಇವೆರಡರ ಕಾರಣದಿಂದ ಆತನ ಕಂಪನಿ ಮುಳುಗಿದರೂ ಜನರಿಗೆ ಯೂರೋಪ್ ಮತ್ತು ದೂರ ದೇಶಗಳಿಗೆ ಬಿಸಿಲನ್ನು ಬೆನ್ನು ಹತ್ತಿ ಪ್ರವಾಸ ಮಾಡುವ ಚಟ ಆಗಲೇ ಹತ್ತಿತ್ತು. ಚಳಿ-ಮಳೆಯಿಂದ ಬೇಸತ್ತು ಯುಕೆಯನ್ನು ಬಿಟ್ಟು ಎರಡೇ ತಾಸುಗಳೊಳಗೆ ದಕ್ಷಿಣ ಫ್ರಾನ್ಸ್ ಅಥವಾ ಅಗ್ಗ ದರದಲ್ಲಿ ಬೇಸಗೆಯಲ್ಲಿ ಬೇಯುವ ಸ್ಪೇನಿನ ಕಾಸ್ಟಾ ಡೆಲ್ ಬೀಚುಗಳಿಗೆ ಹೋಗುವ ಸಾಧ್ಯತೆ ಅವರ ಮಡಿಯಲ್ಲಿ ಬಂದು ಬಿದ್ದಾಗ ಯಾರಿಗೆ ಬೇಡ? ಒಂದು ಅಥವಾ ಎರಡು ವಾರಗಳ ನಂತರ ವಿಮಾನದಲ್ಲಿ ಮರಳುವಾಗ ಬೀಚಿನಲ್ಲಿ ಬೆಂದ ಕಂದು ಬಣ್ಣದ ಸನ್ ಟ್ಯಾನ್ ಮೈ ಬಿಟ್ಟು ಕೊಂಡು ಮೆರೆದವರೇ ಟೀಚರ್-ಲಾಯರ್ನಿಂದ ಹಿಡಿದು ಗಣಿ ಕೆಲಸಗಾರರು ಸಹ. ಇದರ ಲಾಭ ಪಡೆದ ಥಾಮಸ್ ಕುಕ್ ಕಂಪೆನಿ ಒಮ್ಮೆಲೆ ನೂರು ಟ್ರಾವಲ್ ಏಜಂಟ್ ಅಂಗಡಿಗಳನ್ನು ಊರೂರಿಗೆ ಹೋಗಿ ತೆರೆಯಿತು. ಅದರ ಹೆಸರು ಪ್ಯಾಕೇಜ್ ಹಾಲಿಡೇಗೆ ಮನೆಮಾತಾಯಿತು. ಅವುಗಳೂ ಏರಿಳಿತಗಳನ್ನು ಕಂಡ ಕಥೆಯನ್ನು ನಂತರ ನೋಡುವಾ.

ಟ್ರಾವಲರ್ಸ್ ಚೆಕ್
  ಕುಕ್ ’ಸಾಮ್ರಾಜ್ಯ’  ಅವನತಿ ಮತ್ತು ಹೊಸ ಅವತಾರ 
೧೭೮ ವರ್ಷಗಳ ನಿರಂತರ (ಮಹಾಯುದ್ಧದ ಸಮಯದಲ್ಲಿ ಸ್ವಲ್ಪ ಕಾಲ ರಾಷ್ಟ್ರೀಕರಣವಾದದ್ದನ್ನು ಬಿಟ್ಟು) ಸೂರ್ಯೋದಯ ಸೂರ್ಯಾಸ್ತಗಳನ್ನರಸಿ ಬಂದ ಲಕ್ಷಾಂತರ ಪ್ರಯಾಣಿಕರನ್ನು ದೇಶವಿದೇಶಗಳಿಗೆ ಕರೆದುಕೊಂಡು ಹೋದನಂತರ ಸೆಪ್ಟೆಂಬರ್, ೨೦೧೯ರಲ್ಲಿ ಅದರ ನೇಸರ ಅಸ್ತಂಗತವಾಯಿತು. ಏಕೆ? ಕಾಲ ಬದಲಾದಂತೆ, ಮತ್ತು ಅಗ್ಗದರದ ವಿಮಾನಯಾನದ ಕಂಪನಿಗಳಾದ ಈಸಿ ಜೆಟ್, ರೈಯಾನ್ ಏರ್, ಜೆಟ್-2, Airbnbಗಳ ಪೈಪೋಟಿ, ಕೋವಿಡ್ ಮಹಾ ಮಾರಿ ಜನರ ಓಡಾಟವನ್ನಿ ನಿಲ್ಲಿಸಿದ್ದು ಇವೆಲ್ಲ ಕೂಡಿ ಅದರ ಬೇಡಿಕೆ ಕಡಿಮೆಯಾಗಲಾರಂಭಿಸಿತು. ಜೊತೆಗೆ ೨೦೧೬ರಲ್ಲಿ ಯೂರೋಪಿಯನ್ನರ ಪ್ರಮುಖ ಹಾಲಿಡೇ ದೇಶವಾಗಿದ್ದ ಟರ್ಕಿಯಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ, ೨೦೧೮ ರಲ್ಲಿ ಹೀಟ್ ವೇವ್, ಇಂದಿನ ಯುವ ಪ್ರವಾಸಿಕರು ಇಂಟರ್ನೆಟ್ ನಲ್ಲಿ ತಮ್ಮ ವಿಮಾನ, ಹೋಟೆಲ್ ಹುಡಿಕಿಕೊಳ್ಳುವದು ಇವೆಲ್ಲ ಸೇರಿ ಒಂದು ಪ್ರಸಿದ್ಧ ಆಂಗ್ಲ ಪದಗುಚ್ಛದಂತೆ (To cook one's goose) ಥಾಮಸ್ ಕುಕ್ಕನ ‘ಬಾತನ್ನು ಬೇಯಿಸಿದಂತಾಯಿತು!‘ ೨೩, ಸೆಪ್ಟೆಂಬರ್ ೨೦೧೯ ರಂದು ಕಂಪನಿ ಮುಳುಗಿತು. ಆದರೆ ಫೀನಿಕ್ಸ್ ಪಕ್ಷಿಯಂತೆ ಅದು ಬರೀ ಆನ್ ಲೈನ್ ಟ್ರಾವಲ್ ಏಜಂಟ್ ರೂಪದಲ್ಲಿ ಚೀನದ ಫೋಸನ್ ಟೂರಿಸ್ಮ್ ಗ್ರುಪ್ ಹೆಸರಿನಲ್ಲಿ ಸನ್ನಿ ಹಾರ್ಟ್ ಲಾಂಛನದೊಂದಿಗೆ ಮತ್ತೆ ತಲೆಯಿತ್ತಿದೆ. ವಿಪರ್ಯಾಸವೆಂದರೆ ಅದರ ಧ್ಯೇಯವಾಕ್ಯ:  ಡೋಂಟ್ ಜಸ್ತ್ ಬುಕ್ ಇಟ್, ಥಾಮಸ್ ಕುಕ್ ಇಟ್! (Don't just book it, Thomas Cook it.)

ಶ್ರೀವತ್ಸ ದೇಸಾಯಿ

(ಉದಯವಾಣಿಯಲ್ಲಿ ಅವರೇ ಬರೆದ ಲೇಖನದ ಪರಿಷ್ಕೃತ, ವಿಸ್ತೃತ ಆವೃತ್ತಿ)
2)  ನಮ್ಮ ಮನೆಯಲ್ಲಿ ಆಚರಿಸಿದ ವಿಶ್ವ ಸಂಗೀತ ದಿನಾಚರಣೆ -ಪ್ರಮೋದ ಲಕ್ಕುಂಡಿ

’ಎತ್ತಣ ಥಾಮಸ್ ಕುಕ್, ಎತ್ತಣ ಸಂಗೀತ?’ ಅನ್ನಬಹುದು, ನೀವು. “We carried music with us, and music met us at Loughborough Station … and cheered us all along the line with the heartiest welcome … the whole affair being one which excited extraordinary interest, not only in the county of Leicester but throughout the whole country.” ಆ ದಿನ ಆತ ತನ್ನ ಡೈರಿಯಲ್ಲಿ ಬರೆದ ಮಾತುಗಳಿವು. ಸಂಗೀತಕ್ಕ ಕಾಲ, ದೇಶದ ಪರಿವೆಯಿಲ್ಲ. ೧೯೮೧ ರಲ್ಲಿ ಪ್ಯಾರಿಸ್ ನಲ್ಲಿ ಜಾಕ್ ಲ್ಯಾಂಗ್ ಮತ್ತು ಮೋರಿಸ್ ಫ್ಲೂರೆಟ್ ಎನ್ನುವ ಫ್ರೆಂಚ್ ಸಂಗೀತಗಾರ ಸೇರಿ ‘Fête de la Musique’ (“Make music.”) ಅಂತ ಕರೆ ಕೊಟ್ಟು ಈ ದಿನವನ್ನು ಸಂಗೀತಕ್ಕಾಗಿ ಮುಡುಪಿಡುವ ಯೋಜನೆ ಹಾಕಿ ಮರು ವರ್ಷ ಜೂನ್ ೨೧ರಂದು ಇದನ್ನು ವಿಶ್ವದಾದ್ಯಂತ ಆಚರಿಸುವ ಪ್ರಣಾಲಿ ಶುರುವಾಯಿತು (World Music Day). ಜಗತ್ತಿನಾದ್ಯಂತ ಜನರು ತಮ್ಮ ಮನೆಯಲ್ಲಿ, ಜಗುಲಿಯಲ್ಲೋ, ರಸ್ತೆಯಲ್ಲಿ, ಪಾರ್ಕ್, ಸಭೆಗಳಲ್ಲಿ ಸೇರಿ ಆಚರಿಸುತ್ತ ಈ ದಿನವನ್ನು ಸಂಗೀತಕ್ಕಾಗಿಯೇ ಮೀಸಲಿಟ್ಟಿರುತ್ತಾರೆ. ಅದರ ಪ್ರಕಾರ ತಮ್ಮ ಮನೆಯಲ್ಲಿ ಅದನ್ನು ಆಚರಿಸಿದ್ದನ್ನು ನಿಮ್ಮೊಡನೆ ಪ್ರಮೋದ ಅವರು ಹಂಚಿಕೊಂಡಿದ್ದಾರೆ. ಯುನೆಸ್ಕೋ ಅವರು ಅಕ್ಟೋಬರ್ ೧ ನ್ನು ಜಾಗತಿಕ ಸೌಹಾರ್ದತೆ ಮತ್ತು ಶಾಂತಿಗಾಗಿ ವಿಭಿನ್ನವಾಗಿ “ಇಂಟರ್ನ್ಯಾಷನಲ್ ಮ್ಯೂಸಿಕ್ ಡೇ“ ಅಂತ ಕರೆದರು. ಪ್ರಮೋದ ಅವರ ಮನೆಯಲ್ಲಿ ನಡೆದದ್ದು ಒಂದು ಸಿಂಫನಿಯೇ? ನೀವೇ ತೀರ್ಮಾನಿಸಿರಿ! (ಸಂ)
ಪ್ರಮೋದ ಬರೀತಾರೆ:
ಮುಂಜಾನಿ ದಿನಪತ್ರಿಕೆ ಹಿಡ್ಕೊಂಡು, ಚಹಾ ಕುಡ್ಕೋತ ಇಂದಿನ ಸಮಾಚಾರ ಓದೋಣ ಅಂತ ಆರಾಮ ಕುರ್ಚಿಯಲ್ಲಿ ಮೈ ಊರಿದೆ ... ಆರಾಮ ಕುರ್ಚಿಯಲ್ಲಿ ವಿರಮಿಸೋ ಮಜಾನೇ ಬೇರೆ

ಬಾನುಲಿಯಲ್ಲಿ ಸಣ್ಣಗೆ ಹೆಂಡ್ತಿ ಹಚ್ಚಿದ ಹಾಡು ಕೇಳಿಸ್ತಿತ್ತು...

ಹಾಡು ಹಳೆಯದಾದರೇನು ಭಾವ ನವನವೀನ

ಎದೆಯ ಭಾವ ಹೊಮ್ಮುಹುದಕೆ ಭಾಷೆ ಒರಟು ಯಾನ ||

ಡಾ. ಜಿ ಎಸ ಶಿವರುದ್ರಪ್ಪ ಅವರ ಸಾಹಿತ್ಯದ ಹಾಡು ಮನಸ್ಸಿಗೆ ಮುದ ಕೊಡುತ್ತದೆ. ಖುಷಿಯಲ್ಲಿ ಮೈಮರೆತಾಗ ಕೇಳಿಸಿತು ಗುಂಡನ ದನಿ. ಬಂದಪ ನಮ್ಮ ಹರಟೆ ಗುಂಡ ಅನ್ಕೋತ ಕರೆದೆ - "ಬಾರೋ ಗುಂಡಣ್ಣ, ಬಹಳ ದಿನ ಆಯಿತು ಭೇಟಿಯಾಗಿ"

ಗುಂಡ ಒಳಗೆ ಬಂದು ಕೂತು, ಸಮಾಚಾರ ಪತ್ರಿಕೆ ಪುರವಣಿ ಪತ್ರಿಕೆ ಓದುತ್ತ "ನನಗೂ ಚಾ ಕೊಡಿ ಅಕ್ಕ" ಅಂತ ಕೂಗಿದ. ಪತ್ರಿಕೆ ಓದುತ್ತ ಕೇಳಿದ "ಸತ್ಯಾ, ಏನೋ ಇದು ವಿಶ್ವ ಸಂಗೀತ ದಿನಾಚರಣೆ? ಸಂಗೀತ ಅಂದರೆ ಏನೂ ಅಂತ ಗೊತ್ತಿಲ್ಲದ ನನಗೆ ಬೇರೆ ಏನೂ ತಿಳಿಯೋದಿಲ್ಲ, ಸಂಗೀತ ಅಂದ್ರೆ ಖುಷಿ ಕೊಡೊ ಹಾಡು ಮಾತ್ರ"

ನನಗೂ ಖರೆ ಅನಿಸ್ತು, ಮನಸ್ನಾಗೆ ಅಂದ್ಕೊಂಡೆ ನನಗೆ ಸಂಗೀತ ಕಲ್ಲಿನ ಕಡಲೆ. ನಮ್ಮ ಅಮ್ಮ, ಅಜ್ಜಿ ಆಗಾಗ ಹಾಡುವದನ್ನು ಕೇಳಿದ್ದೇನೆ, ಅದನ್ನು ಬಿಟ್ಟರೆ ಶಾಲೆ ಸಮಯದಲ್ಲಿ ನಮ್ಮ ಫಿಲಿಪ್ಸ್ ಮ್ಯೂಸಿಕ್ ಸಿಸ್ಟಮ್ ಮತ್ತು ರಾಶಿ ಕ್ಯಾಸ್ಸೆಟ್ಸ್ ನಮ್ಮ ಸಂಗೀತ ಜಗತ್ತಾಗಿತ್ತು. ಹೈಸ್ಕೂಲ್ನಲ್ಲಿ ಇದ್ದಾಗ ಬಿಜಾಪುರ್ ತೀಟೆ ಸರ್ (ಇವರು ಬಿಜಾಪುರಿನ ಪ್ರಸಿದ್ಧ ಸಂಗೀತ ಗುರುಗಳು) ಹತ್ತಿರ ಒಂದು ಪ್ರಯತ್ನ ಸಂಗೀತ ಕಲಿಯೋದು ಆಗಿದೆ. ನಾನು, ನಮ್ಮಣ್ಣ ಮದುವೆಯಾದ ಮೇಲೆ ಹಾಡೋರೂ, ಬರೆಯೋರು ನಮ್ಮ ಮನೆಯ ಭಾಗ ಆದ್ರು.

ಸತ್ಯಾ: (ಸತ್ಯಪ್ರಮೋದ, ಲೇಖಕ) ಗುಂಡಾ... ಹಾಡು ಅಂದಕೂಡಲೇ ನಮ್ಮಣ್ಣನ ಒಂದು ಸಾಹಸ ನೆನಪಾಗ್ತದೆ, ಹೇಳ್ತಿನ್ ಕೇಳು,

ನಾವು ಹೈಸ್ಕೂಲ್ನಲ್ಲಿ ಇದ್ದಾಗ ಪ್ರತಿದಿನ ಸರಿಯಾಗಿ ಮಧ್ಯಾಹ್ನ ಬಿ ಆರ್ ಲಕ್ಷ್ಮಣರಾವ್ ಅವರ ಕೆಳಗಿನ ಹಾಡು ನಮಣ್ಣ ಜೋರಾಗಿ ಕೇಳಿಸ್ತಿದ್ದ

’"ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ

ಮಧುರವಾದ ವೇಣುನಾದ

ನನ್ನ ಪ್ರೇಯಸಿ..."

ನಾನು ಮತ್ತು ಅಮ್ಮ ಪ್ರತಿದಿನ ವಿಚಾರ ಮಾಡುತ್ತಿದ್ದೆವು, ಇದೆ ಹಾಡು ಪ್ರತಿದಿನ ಇದೆ ಸಮಯಕ್ಕೆ ಯಾಕೆ ಕೇಳಿಸ್ತಾನೆ? ಆಮೇಲೆ ಗೊತ್ತಾಯಿತು ನಮ್ಮ ಮನೆಯ ಎದರು ಒಂದು ಸುಂದರ ಕೆಂಗುಲಾಬಿ ಹುಡುಗಿ ಶಾಲೆಯಿಂದ ಮನೆಗೆ ಹೋಗುತ್ತಿದ್ದಳು, ಅವ್ಳು ಈ ಹಾಡು ಕೇಳಿ ಏನಾದ್ರು ಅವನ ಕಡೆ ನೋಡ್ತಾಳೇನು ಎಂದು ಹರಸಾಹಸ ಪ್ರಯತ್ನ ಮಾಡ್ತಿದ್ದ"

ಗುಂಡಾ: ನಗುತ್ತ "ಜಾಲಿ ಬಾರಿನಲ್ಲಿ ಪೋಲಿ ಹುಡುಗರು ಹಾಡನ್ನು ಪ್ರಯತ್ನ ಮಾಡಿಲ್ಲ ತಾನೇ?"

ಚಾ ಕೈಯಲ್ಲಿ ಹಿಡ್ಕೊಂಡು ಬಂದ ನನ್ನ ಹೆಂಡ್ತಿ "ಉಡಾಳ್ತನ ಬಿಟ್ಟು ಬೇರೆ ಯೇನಾದ್ರು ಮಾಡಿರೇನು ನೀವ್ ಅಣ್ಣ, ತಮ್ಮ?"

ಸತ್ಯಾ: "ಹಾಡು ಕಾಡತೈತಿ, ಕಾಡು ಹಾಡಿತೈತಿ (ಇಲ್ಲಿ ಕಾಡು - ಕಾಡುವ ಮನ ಎನ್ನುವದರ ಸಂಕ್ಷಿಪ್ತ).

ಕೆಲವು ಹಾಡು ನಮಗೆ ಬಹಳ ಕಾಡ್ತವಾ, ನನ್ನ ಪ್ರಕಾರ ಎಲ್ಲರಿಗೂ ಕೆಲವು ಅವರದೇ ಪ್ರೀತಿಯ ಹಾಡುಗಳು ಇರ್ತಾವ, ಅವರ ಮನಸ್ಸಿನ ಭಾವದ ಪ್ರಕಾರ ಅವರ ಮನದಲ್ಲಿ ಅವು ಮೂಡ್ತಾವ... ನಂಗಂತ್ತೂ ಇದು ಖರೆ ನೋಡಪ್ಪ"

"ಗುಂಡಣ್ಣ ನಿಮಗೆ ಇವರ ಒಂದು ಗುಟ್ಟು ಹೇಳ್ತಿನಿ ಕೇಳ್ರಿ...

ಇವರು ಅವರ ಅಣ್ಣ ನೌಕ್ರಿಗೆ ಊರ ಬಿಟ್ಟು ಬೇರೆ ಕಡೆ ಹೋದಾಗ ಇವರು ಕೇಳ್ತಿದಿದ್ದು ಹಾಡು ಯಾವ್ದು ಗೊತ್ತಾ?

ನಾಮ್ ಸಿನೆಮಾದ "ತೂ ಕಲ್ ಚಲಜಾಯೆಗಾ ತೋ ಮೈ  ಕ್ಯಾ ಕರೂಂಗ, ತೂ ಯಾದ್ ಬಹುತ್ ಆಯೇಗಾ ತೋ ಮೈ ಕ್ಯಾ ಕರೂಂಗsss"

ಉಡಾಳ್ತನ ಅಷ್ಟೇ ಅಲ್ಲ ಭಾವುಕ ಕೂಡ ಇದ್ರು ಇವರಿಬ್ಬರು"

ನಾನು ಸಣ್ಣಗೆ ಇಬ್ಬರಿಗೂ ಕೇಳಿಸೋ ಹಂಗೆ ಹಾಡಿದೆ (ಒಂದು ಸಾಲು ಹೆಚ್ಚಿಗೆ ಸೇರಿಸಿ)

"ನನ್ನ ಹಾಡು ನನ್ನದು,

ನನ್ನ ಭಾವ ನನ್ನದು,

ನನ್ನ ರಾಗ ನನ್ನದು

ನನ್ನ ತಾಳ ನನ್ನದು

ನನ್ನ ಹಾಡು ನನ್ನದು"

ಗುಂಡ: ಈ ಮಾತಿಗೆ ನನಗೆ ಒಂದ್ ಹಾಡು ನೆನಪಾಯಿತು

"ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ,

ಕರೆಯುವೆ ಕೈ ಬೀಸಿ,

ಬತ್ತಿದೆದೆಯಲ್ಲಿ ಬೆಳಿಯಿರಿ ಹಸಿರನು,

ಪ್ರೀತಿಯ ಮಳೆ ಸುರಿಸಿ"

ಭಟ್ಟರು ಈ ಹಾಡಿನಲ್ಲಿ ಎಷ್ಟು ಚೆನ್ನಾಗಿ ಭಾವನೆಗಳ ಮಳೆ ಸುರಿಸಿದ್ದಾರೆ, ಅರ್ಥಕ್ಕೆ ಒತ್ತು ಕೊಡಬ್ಯಾಡ್ರಿ, ನೀವು ಹಾಡಿನ ಭಾವ ಕೇಳಿ ಆನಂದ್ ಪಡೀರಿ.

ಸತ್ಯಾ: ಹಾಡಿನ ಅರ್ಥ ಅಂದ ಕೂಡ್ಲೇ ಒಂದ್ ಸಾಲು ನೆನಪಾಯ್ತು ನೋಡಪ್ಪ...

"ಮಾತು ಮಾತು ಮಥಿಸಿ ಬಂದ ನಾದದ ನವನೀತಾ

ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ

ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ"

ಬೇಂದ್ರೆ ಅಜ್ಜಾ ಹೇಳುವಂಗೆ ಮಾತು ಮಾತು ಮಥಿಸಿ ಹುಟ್ಟುವ ನಾದದ ನವನೀತವೇ ಕಾವ್ಯ, ಅದರಲ್ಲಿ ಅರ್ಥ ಅನ್ನೂದು ಗೌಣ... ಮತ್ತ ಗೌಣ ಅಂತ ಅದನ್ನ ಕಡೆಗಾಣಿಸೋದಲ್ಲ... ಅದು ಭಾವಕ್ಕೆ ಬಿಟ್ಟದ್ದು

ಮಾತು ಹಿಂಗಾ ಓಡ್ತಿತ್ತು, ಮಗರಾಯ ಒಳಗೆ ಬಂದ

ಮಗ: ಅಪ್ಪಾ... ಬಾಜೂ ಮನೆ ಮಾಳಗಿ ಸೋರಕತ್ತಾದ, ಅದಕ್ಕೆ ನಾವೆಲ್ಲ ಹುಡುಗರು "ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ" ಅಂತ ಕೂಗಿ ಹಾಡಿದೆವು

ಸತ್ಯಾ: ಕೇಳ್ರಪ್ಪ, ಇವ ಹಾಡಿನ ಭಾವನೆ ಬಿಟ್ಟು ಅರ್ಥ ಹುಡುಕ್ಯಾನ...

ಮಗನೆ sss ಕೇಳಪ್ಪ.  "ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ" ಅಂದರೆ ಬಾಜೂಕಿನ ಮನಿಯವರ ಅಜ್ಞಾನದಿಂದ ಮನಿ ಸೋರುದು ಅಲ್ಲ... ಮನಗಂಡ ಮಳಿ ಕಾರಣ ಸೋರಕತ್ತಾದ.

ಗುಂಡಣ್ಣ ಬಾರಪ್ಪ... ನಾವು ಹೋಗಿ ಸಹಾಯ ಮಾಡೋಣ...

ಬಾನುಲಿ ಹಾಡತೊಡಗಿತು

ಬಾ ಮಳೆಯೇ ಬಾ

ಬಾ ಮಳೆಯೇ ಬಾ

ಅಷ್ಟು ಬಿರುಸಾಗಿ ಬಾರದಿರು...

ಸತ್ಯಪ್ರಮೋದ ಲಕ್ಕುಂಡಿ, ಸ್ಲೌ,,  ಯು ಕೆ