ಶ್ರೀವತ್ಸ ದೇಸಾಯಿ ಹರಟೆ: ತುರುಕು!

ಕ್ಷಮಿಸಿ, ಈ ತಲೆಬರಹ ನಿಮಗೆ ಸಂದಿಗ್ಧತೆಯನ್ನು ತಂದಿದ್ದರೆ! ನಾನು ಜಾತ್ಯಾತೀತನಾಗಿ ಬರೆಯುತ್ತಿದ್ದೇನೆ. ಇದು ಭಿನ್ನ ಮತೀಯವರ ಬಗೆಗೆ ಬರೆದುದ್ದಲ್ಲ!

ಎರಡು ದಿನಗಳ ಕೆಳಗೆ ತಾನೆ ಆರು ವಾರ ಭಾರತದಲ್ಲಿದ್ದು ಲಂಡನ್ನಿಗೆ ವಾಪಸ್ ಬಂದೆ. ಊರಿಗೆ ಹೋದ ಮೇಲೆ ಕೇಳಬೇಕೆ, ತರ ತರದ ತಿಂಡಿ, ಪಕ್ವಾನ್ನಗಳನ್ನು ಬಾಯಲ್ಲಿ ತುರುಕಿದ್ದಾಯಿತುಸೂಟಕೇಸಿನಲ್ಲೂ ತುರುಕಿದ್ದಾಯಿತು. ಇತ್ತೀಚೆಗೆ ಕೆಲವು  ಏರ್ಲೈನ್ ಕಂಪನಿಗಳು ಒಬ್ಬೊಬ್ಬರಿಗೆ 40 ಕೆಜಿ ಲಗ್ಗೇಜು ತರಲು ಬಿಡುತ್ತಾರೆ. ಮನುಷ್ಯನ ದುರಾಸೆಗೆ ಕೊನೆಯುಂಟೇ? ಮೊದಲು ಹೆಚ್ಚೆಂದರೆ 20 ಕೆ ಜಿಗೆ ಪರವಾನಗಿ ಇತ್ತು. ಮತ್ತೆ ಮತ್ತೆ ಮನೆಯಲ್ಲಿ ತೂಕ ನೋಡಿ ಹತ್ತೊಂಬತ್ತೂವರೆಗೆ ನಿಲ್ಲಿಸಿ ಬಿಡುತ್ತಿದ್ದೆ. ಈಗ ಎರಡು ಕೇಸುಗಳನ್ನು ಬಿಡುತ್ತಾರೆ. ಬೇಕೆಂದರೆ ಹೆಣ್ಣು ಮಕ್ಕಳಿಗೆ ವರ ಕೊಟ್ಟಂತೆ (ಅಹುದು, boon!)  ಹ್ಯಾಂಡ ಲಗ್ಗೇಜ್ನಲ್ಲಿ ಐದೋ ಏಳೋ ಕೆಜಿ ಅಲ್ಲೋವನ್ಸ್ ಉಂಟು. “ಆ ನೋ ಭದ್ರೋ ಕ್ರತವೋ ಯಂತು ವಿಶ್ವತಃ” ಕೇಳಿದ್ದೀರಿ. ಆ ನೋ ಭದ್ರೋ ಗ್ರಂಥೋ ವಿಶ್ವತಃ ಕೇಳಿರಲಿಕ್ಕಿಲ್ಲ! ನನ್ನಲ್ಲಿ ಒಂದು ಪುಸ್ತಕಗಳ ಸಂಗ್ರಹವೇ ಆಗಿತ್ತು. ನಾನು ಕೊಂಡಿದ್ದು ಕೆಲವು, ಬೇರೆಯವರು ಪುಕ್ಕಟೇ ಕೊಟ್ಟಿದ್ದು ಉಳಿದವು, ಅಜ್ಜನ ಇತ್ತೀಚೆಗೆ ಹಸ್ತಪ್ರತಿ ಸಿಕ್ಕು ಬೆಳಕಿಗೆ ಬಂದು ಛಾಪಿಸಿದ  ಹೊಸ ಪುಸ್ತಕಗಳ ಕಾಂಪ್ಲಿಮೆಂಟರಿ ಕಾಪಿಗಳು, ಅವರ ಮೇಲೆ ಬರೆದವರು ಕೊಟ್ಟವು,  ಕವಿಗಳು  ತಮ್ಮದೇ ಹೊಸ ಕವನ ಸಂಗ್ರಹಗಳಿಗೆ ಆಟೋಗ್ರಾಫ್ ಹಾಕಿಕೊಟ್ಟವು ಪ್ರತಿಗಳು ಕೆಲವು, ಗೆಳೆಯರು ತರಲು ಹೇಳಿದವು ಬೇರೆ! ಇವನ್ನೆಲ್ಲ ಹೊತ್ತ ಈ ಹೇಸರಗತ್ತೆಗೆ ನಾಚಿಕೆಯಿಲ್ಲ!

CC- Wiki

ಏರ್ಪೋರ್ಟ್ ಸೇರಿದೆ.

ಚೆಕ್ ಇನ್ ಕೌಂಟರಿನ ಆಸಾಮಿ, “ಮೂರು ನಾಲ್ಕು ಕೆಜಿ ತೂಕ ಹೆಚ್ಚಾಗಿದ್ದಂತೆ ಕಾಣುತ್ತದೆ!” ಅಂದ.

“ಊರಿಗೆ ಬಂದಾಗ ಎಲ್ಲರೂ ಕಂಠ ಮಟ ತಿನ್ನುವವರೇ ಅಲ್ಲವೆ, ಅಣ್ಣ! ಮನೆಗೆ ಮರಳಿ ಡಯಟಿಂಗ ಮಾಡುವದು ಖಂಡಿತ!” ಅಂದೆ.

“ಅಲ್ಲ, ನಿಮ್ಮ ಸೂಟ ಕೇಸು, excess charge ಕೊಡಬೇಕಾಗುತ್ತದೆ.”

ನನ್ನ ಬಹುದಿನಗಳ ಸಂಶಯಕ್ಕೆ ಇಂದು ಪುರಾವೆ ಸಿಕ್ಕಂತಾಯಿತು:  ವಿಮಾನ ನಿಲ್ದಾಣದಲ್ಲಿ ಮಶೀನುಗಳನ್ನು ಕೆಡಿಸಿಡುವ ಒಳಸಂಚು ನಡೆದಿರುತ್ತದೆ.  ತೂಕ ಇರುವದಕ್ಕಿಂತ ಹೆಚ್ಚು ತೋರಿಸುತ್ತದೆ ಅಂತ.

ಹಿಂದೆ ಮುಂದೆ ನೋಡುತ್ತ ಕೇಳಿದೆ: “ಎಷ್ಟು?”

“ಲಂಡನ್ ವರೆಗೆ ಅಂದರೆ ಒಂದು ಕೆಜಿಗೆ ಎರಡುಸಾವಿರ ರೂಪಾಯಿ, ಆಮೇಲೆ tax ಎಲ್ಲ ಕೂಡಿ ಹತ್ತು ಸಾವಿರದಷ್ಟಾಗ ಬಹುದು!”

ನನಗೆ ಗರ ಬಡಿಯಿತು. ಜೊತೆಗೆ ಯಾರೂ ಇಲ್ಲ, ಖಾಲಿ ಮಾಡಿ ಅವರ ಕೈಲಿ ಕೊಡಲು. ಇತ್ತಿತ್ತಲಾಗಿ ಬೇರೆಯವರನ್ನು ಒಳಗೆ ಬಿಡುವದೂ ಇಲ್ಲ. ಅಜ್ಜ ಸಾಲಿ ರಾಮಚಂದ್ರರಾಯರ ಅಪರೂಪದ ಮೇಘದೂತ ಪುಸ್ತಕದ prepublication ಪ್ರತಿಗಳೆ ಇರಲಿ, ಅಷ್ಟು ಬೆಲೆಬಾಳುವಂಥದೇನೂ ಅಲ್ಲ ಎಂದು ನಾನೇ ನಿರ್ಧರಿಸ ಬೇಕೆ? ಇಲ್ಲ ಕಷ್ಟ ಪಟ್ಟು ಸಂಗ್ರಹಿಸಿದ, ಬೇರೆಯವರು ಪ್ರೀತಿಯಿಂದ ಮಾಡಿ ಕೊಟ್ಟ ಭಕ್ಷಣಗಳನ್ನು ಸುತ್ತ ಮುತ್ತಲೂ ಕಾಯ್ದು ಕುಳಿತ ಹಸಿದ ಹದ್ದುಗಳಿಗೆ ವಿತರಣೆ ಮಾಡುವದೆ? ಇದಕ್ಕೇನಾ ಧರ್ಮ ಸಂಕಟ ಅನ್ನುವದು?

“ನೋಡಿ, ನನ್ನ ಹ್ಯಾಂಡ ಲಗ್ಗೇಜ ಅಂದರೆ ಖಾಲಿ ಕ್ಯಾಮರಾ ಬ್ಯಾಗು!” ಎಂದು ಪುಸಲಾಯಿಸಲು ನೋಡಿದೆ.

ಹೆಣ್ಣು ಮಗಳಾಗಿದ್ದರೆ ಬಿಡುತ್ತಿದ್ದನೇನೋ,ಅಂದರೆ ನೀವು ನನ್ನನ್ನು MCP ಅಂದು ಬಿಡುತ್ತೀರಿ. ಆ ವಿಚಾರವನ್ನೇ ಬದಿಗೊತ್ತಿದೆ. Think outside the box ಎಂದು ಯಾರೋ ಹೇಳಿದಂತಾಯಿತು. ಯೋಚಿಸುತ್ತಿದ್ದಂತೆಯೇ ಕನಿಕರ ಪಟ್ಟು ನನ್ನನ್ನು ಬದಿಗೆ ಸರಿಯಲು ಹೇಳಿದ. ನಿಮ್ಮ ಸರತಿಯನ್ನು ಕಾಯ್ದಿಡುವೆ ಎಂದು ಭರವಸೆ ಬೇರೆ ಕೊಟ್ಟ.  ಇಡೀ ಏರ್ಪೋರ್ಟಿನ ಸಾವಿರ ಕಣ್ಣುಗಳು ನನ್ನನ್ನು ಭೇದಿಸುತ್ತಿದ್ದಂತೆ ಭಾಸವಾಯಿತು. ಬದಿಗೆ ತೆಗೆದುಕೊಂಡು ಹೋಗಿ ಸೂಟ್ ಕೇಸುಗಳನ್ನು ನನ್ನ ಸರ್ಜನ್ ಮಿತ್ರ ಮಾಡುವಂತೆ ಹೊಟ್ಟೆ ಬಗಿದು (ಅವುಗಳ ಕೀಲಿ ಬಿಚ್ಚಿ ಮುಚ್ಚಳ ಪೂರ್ತಿ ತೆಗೆದು) ಹೂರಣವನ್ನು ಪರೀಕ್ಷೆ ಮಾಡಿದೆ. ಮೊಗ್ಗಿನ ಪಕಳೆಗಳರಳಿದಂತೆ ಹೊರಸೂಸಿದ ವಸ್ತುಗಳತ್ತ ಕಣ್ಣು ಹಾಯಿಸಿದೆ. “ಊಹ್ಞೂ”, ಇನ್ನೊಂದನ್ನು ನೋಡುವಾ.” ಈಗ ಎರಡೂ ಕುಸುಮಗಳು ಅರಳಿದವು. ನನಗೆ ಏನು ಹೊಳೆಯಿತೋ. ದೊಡ್ಡ ಪುಸ್ತಕಗಳನ್ನೆಲ್ಲ ಹೊರತೆಗೆದು ಕೆಲವೊಂದನ್ನು ಕ್ಯಾಮರಾ ಕೇಸಿನಲ್ಲಿ, ಕೆಲವೊಂದನ್ನು ಪ್ಲಾಸ್ಟಿಕ್ ಕ್ಯಾರಿಯರ್ ಬ್ಯಾಗಿನಲ್ಲಿ ತುರುಕಿದೆ.Hanging one’s dirty linen in public ಎಂದರು ಯಾರೋ.It’s full of junk. No, junk food! ಎಂತೆಲ್ಲ ಬಂದ ಉತ್ಪ್ರೇಕ್ಷೆಗಳನ್ನು ಸಹಿಸುತ್ತಿದ್ದಂತೆ ತಮಾಷೆ ನೋಡುತ್ತಿದ್ದ ಸೂಪರ್ವೈಸರ್ ಮಹಾಶಯ ಪುಸ್ತಕಗಳನ್ನು ಕೈಯಲ್ಲಿ ಇಟ್ಟುಕೊಂಡು ಹೋಗ ಬಹುದು, ಅಂದ.

ಕೈಚೀಲಗಳಲ್ಲಿ ತುರುಕಿದ್ದಷ್ಟು ಸಾಕೇನೋ ಎಂದು ಧೈರ್ಯ ಮಾಡಿ ಮತ್ತೆ ಕೌಂಟರಿಗೆ ಬಂದೆ. ಸ್ವಲ್ಪವಾದರೂ ತೆತ್ತಬೇಕೇನೊ, ಅಂದುಕೊಂಡೆ. ಲಗ್ಗೇಜ  ತೂಕವನ್ನು ಲಗೇಚ್ ಕಡಿಮೆ ಮಾಡಿಕೊಳ್ಳುವ ಬೇರೆ ಯವದೂ ಉಪಾಯವನ್ನು ಅದು ವರೆಗೆ  ಮಾಡುವ ಪ್ರಸಂಗವೇ ಬಂದಿರಲಿಲ್ಲ. “ಲಂಡನ್”ಗೆ ಹೋಗಿ ಉಲ್ಟಿ ಮಾಡಿದ್ದರೆ ಹೊಟ್ಟೆಯೇನೋ ಹಗುರಾಗುತ್ತಿತ್ತೇನೋ.  ಆದರೆ ಇದೊಂದೇ ಉಪಾಯದಿಂದ ಎರಡರ ತೂಕ ಈಗ ಮೂವತ್ತೊಂಬತೂವರೆ ಕೆಜಿಗೆ ಬಂದು ನಿಂತಿತ್ತು!

ಚಿಕ್ಕಂದಿನಲ್ಲಿ ಹೇಳಿ ನಗುತ್ತಿದ್ದ ಮಾತು ನಿಜ: Less luggage, more comfort. Make your London trip a pleasure!

ಮುಂದಿನ ಕೆಲಸ? ಅವುಗಳನ್ನೆಲ್ಲ ಓದಬೇಕಲ್ಲವೆ? ಬೇಂದ್ರೆ ಹೇಳಿದ ಕಥೆ ನೆನಪಾಗುತ್ತದೆ. ಲೈಬ್ರರಿಯಿಂದ ಪುಸ್ತಕ ಕಡ ತೊಗಂಡವನನ್ನು ಕೇಳಿದರಂತೆ: “ಪುಸ್ತಕ ಓದೀಯೇನೋ?” “ಓದೀನಿ, ಮಾಸ್ತರ.” “ಹಂಗಾದರ  ಅದರ ಮ್ಯಾಲೆ ಪ್ರಶ್ನೆ ಕೇಳಲೇನು?”  “ಓದಿಲ್ಲ, ಸರ್.” “ಈಗಿನ್ನೂ ಓದೀನಿ ಅಂದಿ?” “ಪುಸ್ತಕ ಓದೀನಿ (ಒಯ್ದಿದ್ದೇನೆ), ಸರ್, ಆದರ ಓದಿಲ್ಲ” ಅಂದನಂತೆ.

ನನ್ನದೂ ಅದೇ ಕಥೆ!

ಬೆಳಕಿನರಮನೆಯಿಂದ ಎದೆ ತುಂಬಿ ಹಾಡಿ ಕಾಣದ ಕಡಲಿಗೆ ತೆರಳಿದ ರಾಷ್ಟ್ರಕವಿಗೆ ನಮನ – ಗಿರಿಧರ ಎಸ್ ಹಂಪಾಪುರ

CC- Wiki

ದಾರಿ ನೂರಾರಿವೆ ಬೆಳಕಿನರಮನೆಗೆ’! ‘ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ’! ‘ಒಂದೊಂದು ಹಂತ,ನೂರಾರು ಭಾವದ ಭಾವಿ ಎತ್ತಿಕೋ!ನಿನಗೆ ಬೇಕಾದಷ್ಟು ಸಿಹಿನೀರ,ಪಾತ್ರೆಯಾಕಾರಗಳ ಕುರಿತ ಏತಕೆ ಜಗಳ?ನಮಗೆ ಬೇಕಾದದ್ದು ದಾಹ ಪರಿಹಾರ’ ಆಹಾ! ಎಂಥ ಮಾತುಗಳು. ಇದನ್ನು ಬರೆದವರಾರು ಎಂದು ಚಿಂತಿಸುದ್ದೀರಾ ? ಇವರೇ ರಾಷ್ಟ್ರಕವಿ ಡಾ ಜಿ.ಎಸ್.ಶಿವರುದ್ರಪ್ಪ.ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಶಿಕ್ಷಕ ಹಾಗೂ ಒಳ್ಳೆಯ ಆಡಳಿತಗಾರ.

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ- ಶಾಂತವೀರಪ್ಪ ಹಾಗು ವೀರಮ್ಮನವರಿಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ,ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರುಗಳಲ್ಲಿ ಮಾಧ್ಯಮಿಕ ಶಿಕ್ಷಣವನ್ನು,ದಾವಣಗೆರೆ,ತುಮಕೂರುಗಳಲ್ಲಿ ಪ್ರೌಢಶಾಲಾ,ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು.ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ.ಆನರ್ಸ್ ಪದವಿ ಪಡೆದ ನಂತರ, ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು, ನಂತರ ಎಮ್.ಎ.ಮುಗಿಸಿದರು. ೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯವೇತನದ ಸಹಾಯದಿಂದ ಕುವೆಂಪುರವರ ನೇತೃತ್ವದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿಕೊಟ್ಟ ಇವರ ಪ್ರೌಢ ಪ್ರಬಂಧದ ವಿಷಯ – ಸೌಂದರ್ಯ ಸಮೀಕ್ಷೆ.

ಡಾ. ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜು, ಮೈಸೂರು ಮಹಾರಾಜಾ ಕಾಲೇಜಿನಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಸ್ತಪ್ರತಿಗಳ ಸಂಗ್ರಹಣೆ,ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ‘ಹಸ್ತಪ್ರತಿ ವಿಭಾಗ’ವನ್ನು ಪ್ರಾರಂಭಿಸಿದರು.ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ ೧೦೦೦ಕ್ಕೂ ಹೆಚ್ಚು ಕಾಗದದ ಹಸ್ತಪ್ರತಿಗಳ ಸಂಗ್ರಹಣೆಯಾಯಿತು.ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷ, ಮದರಾಸಿನ ಕನ್ನಡ ಸಮ್ಮೇಳನದ ಅಧ್ಯಕ್ಷ ಹಾಗೂ ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ.

ಕುವೆಂಪು ಶಿಷ್ಯ ಪರಂಪರೆಯನ್ನು ಉಳಿಸಿಕೊಂಡು ಬಂದವರು ಇವರು. ಯಾವಾಗಲು ಪಂಚೆ-ಶರ್ಟಿನ್ನೇ ಧರಿಸುತ್ತಿದ್ದ ಶಿವರುದ್ರಪ್ಪನವರು, ಮಾಸ್ಕೊ ನಗರಕ್ಕೆ ಹೋಗಬೇಕಾದರೆ ಮೊದಲ ಬಾರಿಗೆ ಪ್ಯಾಂಟ್ ಧರಿಸಿದೆ ಎಂದು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ‘ನೀನು ಮುಗಿಲು ನಾನು ನೆಲ’ ಎಂದು ಮರೀಚಿಕೆಯಲ್ಲಿ ಆಕಾಶ ಹಾಗು ಭೂಮಿ ಸೇರಿದಾಗ ಏನನ್ನು ಯೋಚಿಸಿಬಹುದು ಎಂಬುದನ್ನು ಅದ್ಭುತವಾಗಿ ಬರೆದಿದ್ದಾರೆ. ಸಿ.ಅಶ್ವತ್ ಜತೆ ಇವರ ಸಮ್ಮಿಲನ ಮುಗಿಲು-ನೆಲ ಸೇರಿದ ಉಲ್ಲಾಸಕ್ಕೆ ಸಂಕೇತ.

ಇನ್ನು ಎಲ್ಲ ನಿನ್ನದೇ ಎಂದು ದೇವರಿಗೆ ಹೇಳಿದ ಕವನದಲ್ಲಿ- ‘ನಿನ್ನದೇ ನೆಲ ನಿನ್ನದೇ ಜಲ’ ವೆಂದರು. ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಇನ್ನೊಂದು ಅದ್ಭುತ ಗೀತೆ. ಇವರ ಕವನ ಸಂಕಲನಗಳಾದ ಸಾಮಗಾನ, ದೀಪದ ಹೆಜ್ಜೆ, ಪ್ರೀತಿ ಇಲ್ಲದ ಮೇಲೆ, ದೇವಶಿಲ್ಪ, ಕಾಡಿನ ಕತ್ತಲಲ್ಲಿ ಎಲ್ಲವನ್ನೂ ನೆನೆಯ ಬೇಕಾದದ್ದೆ. ಅಷ್ಟೇ ಅಲ್ಲ, ಇವರ ಪ್ರವಾಸವು ಇಂಗ್ಲೆಂಡಿನವರೆಗೂ ಕಾಲಿಟ್ಟಿದ್ದು ‘ಇಂಗ್ಲೆಂಡಿನಲ್ಲಿ ಚತುರ್ಮಾಸ’ ಎಂಬ ಪ್ರವಾಸ ಸಂಕಲನವನ್ನು ಬರೆದಿದ್ದಾರೆ. ಹಾಗೆಯೆ ಇವರ ‘ಎದೆ ತುಂಬಿ ಹಾಡುವೆನು’ ಎಲ್ಲ  ಕನ್ನಡ ಗಾಯಕರಿಗೂ ಒಂದು ಆಂಥಮ್ ತರಹ.

ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ ೧೯೮೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು.ಇದಲ್ಲದೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨), ರಾಜ್ಯೋತ್ಸವ ಪ್ರಶಸ್ತಿ, ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ (೧೯೭೩)ಸಹ ಶಿವರುದ್ರಪ್ಪನವರಿಗೆ ದೊರೆತಿವೆ. ೨೦೦೬ನೆಯ ಸಾಲಿನಲ್ಲಿ ಜರಗಿದ  ಸುವರ್ಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ಸರಕಾರವು ರಾಷ್ಟ್ರಕವಿ (೨೦೦೬) ಎನ್ನುವ ಗೌರವವನ್ನು ಪ್ರಧಾನಿಸಿದೆ. ಇವರು ಗೋವಿಂದ ಪೈ, ಮತ್ತು ಕುವೆಂಪು ನಂತರ ಈ  ಗೌರವಕ್ಕೆ ಪಾತ್ರರಾದ ಮೂರನೆಯ ರಾಷ್ಟ್ರಕವಿ.  ಇವರಿಗೆ ದೊರೆತ  ಇನ್ನಿತರ  ಪುರಸ್ಕಾರಗಳು: ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ.

ಈಗ ಇವರು ಅವರ ಮನ ಹಂಬಲಿಸಿದ ಹಾಗೆ ಕಾಣದ ಕಡಲಿಗೆ ತೆರೆಳಿದ್ದಾರೆ. ಲೌಕಿಕವಾಗಿ  ನಮ್ಮೊಡನೆ ಇರದಿದ್ದರೂ, ಅವರ ಗೀತೆಗಳ ಮುಖಾಂತರ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದ್ದಾರೆ.