‘ತೋಟಗಾರಿಕೆ ಮತ್ತು ಟ್ಯೂಲಿಪ್ ಚರಿತ್ರೆ’ – ರಾಮಮೂರ್ತಿ(ಬೆಸಿಂಗ್ ಸ್ಟೋಕ್) ಅವರ ಬರಹ

ಪೀಠಿಕೆ: ಮನೆಗೊಂದು ಕೈತೋಟವಿದ್ದು ಬಗೆ ಬಗೆಯ ಸುಂದರ ಹೂಗಳನ್ನು ಬೆಳೆಸಿ ಪ್ರತಿ ಮುಂಜಾನೆ, ಸಂಜೆಯಲ್ಲಿ ಅವುಗಳ ಅಂದವನ್ನು ಕಣ್ ತುಂಬಿಕೊಂಡು, ಮನಸಿಗೆ ಮುದ ನೀಡುವ ಸುಮಗಳನ್ನು ಮನೆಗೆ ಬಂದ ಅತಿಥಿಗಳಿಗೆ ತೋರಿಸಿ ಹೆಮ್ಮೆ ಪಡುವ ಒಂದು ಅನುಭವ ವಿಶೇಷವಾದದ್ದು. ಬರಿ ಪುಷ್ಪಗಳಲ್ಲದೆ ಕೆಲವು ಕಾಯಿಪಲ್ಲೆ (ತರಕಾರಿ)ಗಳನ್ನೂ ಬೆಳೆದು ಅದರಲ್ಲೇ ಅಡುಗೆ ಮಾಡಿ ಸವಿಯುವ ರುಚಿ ಹೊರಗೆ ಅಂಗಡಿಗಳಿಂದ ತಂದು ಮಾಡಿದ ಅಡುಗೆಯಲ್ಲಿ ಸಿಗುವುದಿಲ್ಲ. ಇನ್ನೂ ಕೆಲವರು ಮಕ್ಕಳನ್ನು ಬೆಳೆಸಿದ ಹಾಗೆ ಹೂಗಳನ್ನು ಬಹಳ ಮುತುವರ್ಜಿಯಿಂದ ಬೆಳೆಸುವುದನ್ನು ನೋಡಿದ್ದೇವೆ.ಅದು ಪ್ರಕೃತಿ-ಮನುಷ್ಯರೊಡನೆ ಇರುವ ಅವಿನಾಭಾವ ಸಂಬಂಧದ ಸಂಕೇತ.
ಬೆಸಿಂಗ್ ಸ್ಟೋಕ್ ನಿವಾಸಿಯಾದ ರಾಮಮೂರ್ತಿ ಮತ್ತು ಅವರ ಪತ್ನಿ ಸೀತಾ ಅವರ ತೋಟಗಾರಿಕೆಯ ಅನುಭವವನ್ನು ಒಂದು ಬರಹದಿಂದ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಟುಲಿಪ್ ಪುಷ್ಪದ ಚರಿತ್ರೆಯನ್ನು ತಿಳಿಸಿದ್ದಾರೆ. ನೀವೂ ಓದಿ, ನಿಮಗೂ ಕೈತೋಟ ಮಾಡುವ ಆಸೆ ಇದ್ದರೆ ಇಂದೇ ಆಗಲಿ.

 

ramamurthy7

ನಮ್ಮ ಸ್ನೇಹಿತರಿಗೆ ತಿಳಿದಹಾಗೆ ನನ್ನ ಪತ್ನಿ ಸೀತೆ ಯ ಅತ್ಯಂತ ಪ್ರೀತಿಯ ಹವ್ಯಾಸ ತೊಟಗಾರಿಕೆ. ಇಲ್ಲಿ ಅನೇಕ ತರಕಾರಿ ಮತ್ತು ಹೂವುಗಳ ವ್ಯವಸಾಯದಲ್ಲಿ ದಿನಕ್ಕೆ ಹಲವಾರು ಗಂಟೆ ನಮ್ಮ ತೋಟದಲ್ಲಿ ಕಾಲ ಕಳೆಯುವುದು ಅವಳ ವಾಡಿಕೆ. ಆಗಾಗ್ಗೆ green house ನಲ್ಲಿ ಗಿಡಗಳನ್ನು “ಮಾತನಾಡಿಸಿವುದನ್ನ” ನಾನು ಕಂಡಿದ್ದೇನೆ ಅಲ್ಲದೆ ನಾವು ಎರಡು ಮೂರು ದಿನ ಮನೆಯಲ್ಲಿ ಇಲ್ಲದೆ ಇದ್ದಾಗ ” ಅಯ್ಯೋ ಪಾಪ ಗಿಡಗಳಿಗೆ ನೀರು ಇಲ್ಲ” ಅಂತ ಸಂಕಟ ಪಡುವಳು . ಗಾರ್ಡನ್ ಸೆಂಟರ್ ಗೆ ಹೋದಾಗ ಮಕ್ಕಳು ಆಟದ ಸಾಮಾನುಗಳ ಅಂಗಡಿಗೆ ಹೋದಹಾಗೆ ಇರುವ ಎಲ್ಲಾ ಗಿಡಗಳನ್ನು ಖರೀದಿ ಮಾಡುವ ಅಸೆ. ಬೇಸಿಗೆಯಲ್ಲಿ ನಾವು ಬೆಳಯುವ ತರಕಾರಿಗಳು , ಕೊತ್ತಂಬರಿ ಸೊಪ್ಪು, ನವಿಲು ಕೋಸು, ಬದನೆಕಾಯಿ ಕುಂಬಳಕಾಯಿ ಇತ್ಯಾದಿ ಇಂದ ನಾವು self sufficient ಅಂತ ಹೇಳಬಹುದು.
ನನ್ನ ಕೆಲಸ ಏನು ಅಂತ ಕೇಳಿದಿರಾ ? ಮಾಲಿ ಅನ್ನುವ ಪದ ಕೇಳಿದ್ದೀರಾ ? ನೀವು ನಗರದಲ್ಲಿ ಬೆಳದಿದ್ದರೆ ನಿಮಗೆ ಈ ಪದ ಗೊತ್ತಿರುವುದಿಲ್ಲ. ಮಾಲಿ ಕೆಲಸ ಅಗೆಯುವುದು, ನೀರು ಹಾಕುವುದು lawn cut ಮಾಡುವುದು ಇತ್ಯಾದಿ labour intensive ಕೆಲಸಗಳು. ಇದು ನನ್ನ ಕೆಲಸ, Management ಕೆಲಸ ಅಲ್ಲ. ಕೆಲವರು ಹೇಳಿದರು ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿ ತರಕಾರಿ ಬೆಳೆಯುವುದಕ್ಕಿಂತ ಕೊಂಡು ಬರುವುದು ಚೀಪರ್, ಆದರೆ ಅವರಿಗೇನು ಗೊತ್ತು ಇದರ ಮಜಾ.

ramamurthy1
ಸೀತಾ ರಮಮೂರ್ತಿಯವರ ತೋಟಗಾರಿಕೆಯ ’ಫಲ’ ಈ ತರಕಾರಿ ಮತ್ತು ಹೂವುಗಳು

ramamurthy5

 

 

ramamurthy8

ನಮಗೆ ಬಹಳ ವರ್ಷದಿಂದ ಹಾಲೆಂಡ್ ನಲ್ಲಿ ನಡೆಯುವ ಟ್ಯೂಲಿಪ್ ಹಬ್ಬಕೆ ಹೋಗುವ ಅಸೆ ಇತ್ತು ಅದು ಈ ವರ್ಷ ಸಾಧ್ಯವಾಯಿತು. ಕುಕಿಂಹಾಫ್ (Keukenhof ) ಆಮ್ ಸ್ಟರ್ ಡ್ಯಾಮ್ ನಿಂದ ೫೦ ಕಿಮ್ ದೂರದಲ್ಲಿ ಇರುವ ಊರು ಲಿಸ್ಸ್ (Lisse ). ಈ ತೋಟದ ಅರ್ಥ Kitchen ಗಾರ್ಡನ್. ಕಾರಣ ಇದರ ಹತ್ತಿರುವ ದೊಡ್ಡ ಕೋಟೆಮನೆ (castle) ಗೆ ಬೇಕಾದ್ದ ಮೂಲಿಕೆಗಳು (herbs ) ಈ ತೋಟದಿಂದ ಬರುತಿತ್ತು . ೧೯೪೯ ರಲ್ಲಿ ಆ ಊರಿನ ಪುರಸಭಾಧ್ಯಕ್ಷ (ಮೇಯರ್) ತೋಟವನ್ನು ಶುರುಮಾಡಿ ಹೂವಿನ ಮಾರಾಟ ಆರಂಭ ವಾಯಿತು ನಂತರ ಬೇರೆ ದೇಶಗಳಿಗೆ ರಫ್ತು ಮಾಡಿ ಈ ದೇಶ ಪ್ರಪಂಚದಲ್ಲಿ ಆಗ್ರ ಸ್ಥಾನವನ್ನು ಪಡೆಯಿತು.
ಆದರೆ ಈ ಟ್ಯೂಲಿಪ್ ( Tulipa, botanical name ) ಹೂವು ಹಾಲೆಂಡ್ ದೇಶಕ್ಕೆ ಸೇರಿದ್ದಲ್ಲ. ಇದರ ಮೂಲ ಈಗಿನ ಟರ್ಕಿ, ಹಿಂದಿನ ಆಟೋಮನ್ ರಾಷ್ಟ್ರ ಟ್ಯೂಲಿಪ್ ಹೆಸರು ಪರ್ಷಿಯನ್ ಭಾಷೆಯ ಪೇಟ (ರುಮಾಲು ) ದಿಂದ ಬಂದಿದೆ ಅಂತ ಕೆಲವರ ಅಭಿಪ್ರಾಯ. ಹದಿನಾರನೇ ಶತಮಾನದಲ್ಲಿ ಇದರ ಗಡ್ಡೆಯನ್ನು ತಂದು ಹಾಲಂಡ್ ನಲ್ಲಿ ಬೆಳಸಿದರು ನಂತರ ೧೫೯೨ ರಲ್ಲಿ ಇದರ ಬಗ್ಗೆ ಒಂದು ಪುಸ್ತಕ ಪ್ರಕಟವಾದಾಗ ಈ ಹೂವು ಪ್ರಚಾರಕ್ಕೆ ಬಂತು. ಹದಿನೇಳನೆ ಶತಮಾನದಲ್ಲಿ ಟ್ಯೂಲಿಪ್ ಉನ್ಮಾದ ( Tulip mania) ಶುರುವಾಗಿ ಇದು ಚಲಾವಣೆಯ ನಾಣ್ಯವೂ ಆಗಿ ಈ ದೇಶದಲ್ಲಿ ಹಣಕಾಸಿನ ಪರಿಸ್ಥಿತಿ ಕೆಟ್ಟು ಒಂದು ಕ್ರಾಂತಿಯೇ ಆರಂಭವಾಯಿತು. ಇದಕ್ಕೆ ಕಾರಣ ಈ ಗಡ್ಡೆ ಗಳನ್ನು ಕೊಳ್ಳುವರು ಜಾಸ್ತಿ ಆಗಿ ಇದರ ಬೆಲೆಯೂ ಹೆಚ್ಚಾಯಿತು ೧೬೨೪ನಲ್ಲಿ ಕೆಂಪು ಮತ್ತು ಬಿಳಿ ಹೂವಿನ ಕೆಲವು ಗಡ್ಡೆಗಳ ಬೆಲೆ ೧೨೦೦ ಫ್ಲ್ಯಾರಿನ್ , ಇದು ಒಂದು ಗಡ್ಡೆಯ ಬೆಲೆ !! ಆಗ ವರ್ಷದ ವರಮಾನ ಒಬ್ಬನಿಗೆ ೧೫೦ ಫ್ಲ್ಯಾರಿನ್ ಮಾತ್ರ. ೧೬೩೭ ನಲ್ಲಿ ಸಿಕ್ಕಿದ ದಾಖಲೆ ಪ್ರಕಾರ ಒಂದು ಗಡ್ಡೆ ಮೌಲ್ಯಕ್ಕೆ ಒಂದು ಮನೆಯನ್ನೆ ಖರೀದಿ ಮಾಡಬಹುದಾಗಿತ್ತು ಈ ಪರಿಸ್ಥಿತಿಯಿಂದ ಕೊನೆಗೆ ಆರ್ಥಿಕ ಕುಸಿತವೂ ಆಯಿತು (Market crash ).
ಮೊಘಲ್ ಸಾಮ್ರಾಜ್ಯ ವನ್ನು ಸ್ಥಾಪಿಸಿದ ಬಾಬರ್ ಈ ಹೂವನ್ನು ಭಾರತಕ್ಕೆ ತಂದ ಅಂತ ದಾಖಲೆ ಇದೆ.

 ಕುಕಿಂಹಾಫ್ ತೋಟದಲ್ಲಿ ಸುಮಾರು ೭ ಮಿಲಿಯಾನ್ ಗಡ್ಡೆ ಗಳನ್ನ ಆಕ್ಟೋಬರ್/ನವಂಬರ್ ತಿಂಗಳಲ್ಲಿ ನೆಲದಲ್ಲಿ ಹೂಳಿದರೆ  ಮಾರ್ಚ್ ತಿಂಗಳಿಗೆ ಹೂವು ಬಿಡುವುದಕ್ಕೆ ಶುರುವಾಗಿ ಮೇ ನಲ್ಲಿ ಚೆನ್ನಾಗಿ ಅರಳುತ್ತೆ, ಈ ತೋಟವನ್ನು ನೋಡುವ  ಸಮಯ ಏಪ್ರಿಲ್ ಕೊನೆ ಅಥವಾ ಮೇ ತಿಂಗಳ ಮೊದಲನೇ ವಾರ.  ಟ್ಯೂಲಿಪ್ ತೋಟ ಸುಮಾರು ೮೦ ಎಕ್ಕರೆ ವಿಸ್ತರಣ.  ಮಾರ್ಚ್ ನಿಂದ ಮೇ ತಿಂಗಳು ಇಲ್ಲಿ ಅರಳಿರುವ  ಟ್ಯೂಲಿಪ್ ನೋಡುವುದಕ್ಕೆ ಕೋಟ್ಯಂತರ ಜನಗಳು ಬರುತ್ತಾರೆ. ಈ ತೋಟದಲ್ಲಿ ಸುಮಾರು ೭೫ ವಿವಿಧ ಟ್ಯೂಲಿಪ್ ಗಳನ್ನು ಬೆಳಸುತ್ತಾರೆ

ನಿಮಗೆ ತೋಟಗಾರಿಕೆಯಲ್ಲಿ ಆಸಕ್ತಿ ಇದ್ದರೆ ಈ ವರ್ಷ ಅಕ್ಟೊಬರ್ ಅಥವಾ ನವೆಂಬರ್ ತಿಂಗಳಲ್ಲಿ ಗಡ್ಡೆಗಳನ್ನು  ತಂದು ನೆಡಿ ಮುಂದಿನ ವರ್ಷ ಮಾರ್ಚ್ ನಲ್ಲಿ ಸೊಗಸಾದ ಹೂವುಗಳನ್ನು ನೋಡಿ ಆನಂದ ಪಡಬಹುದು.

 

ಲೇಖನ:  ಬೇಸಿಂಗ್ ಸ್ಟೋಕ್  ರಾಮಮೂರ್ತಿ 

 

    ಚಿತ್ರಕೃಪೆ: ರಾಮಮೂರ್ತಿ(attributed) , ಗೂಗಲ್

‘ದಂಡೆ ದಾಟುವಾಗ’ ಆಲ್ಫ್ರೆಡ್ ಲಾರ್ಡ್ ಟೆನಿಸನ್ ಕವಿಯ ‘ಕ್ರಾಸಿಂಗ್ ದಿ ಬಾರ್’ ಕವನದ ಭಾವಾಂತರ ಅನುವಾದಿಸಿದವರು ಡಾ:ಕೇಶವ ಕುಲಕರ್ಣಿ

ಇತ್ತೀಚಿಗಷ್ಟೇ ನೊಬೆಲ್ ಪುರಸ್ಕೃತ ಕವಿ ಸರ್ ವಿ.ಎಸ್.ನೈಪೌಲ್ ನಿಧನರಾದ ಸುದ್ದಿ ಬಹಳಷ್ಟು ಮಂದಿಗೆ ಗೊತ್ತಿದೆ.
ಶ್ರೇಷ್ಠ ಬರಹಗಾರರಾಗಿದ್ದ ನೈಪೌಲ್ ಅವರು ಷೇಕ್ಸ್ಪಿಯರ್ ಮತ್ತು ಲಾರ್ಡ್ ಟೆನಿಸನ್ ಅವರ ಬರಹಗಳಿಂದ ಪ್ರಭಾವಿತರಾಗಿದ್ದರು.
ತಮ್ಮ ಕೊನೆಯ ಕ್ಷಣದಲ್ಲಿ ಲಾರ್ಡ್ ಟೆನಿಸನ್ ನ ಜನಪ್ರಿಯ ಕವನವಾದ ‘ಕ್ರಾಸಿಂಗ್ ದಿ ಬಾರ್’ ಅನ್ನು ಓದಬೇಕು ಅದನ್ನು ಕೇಳುತ್ತಾ ನಾನು ಪ್ರಾಣ ಬಿಡಬೇಕು ಎಂದು ಬಯಸಿದ್ದ ಅಂತೆಯೇ ಅವರ ಆಸೆ ನೆರವೇರಿತ್ತು.

ಈ ಕವನ ಟೆನಿಸನ್ ಅವರ ಕೊನೆಯ ಕವಿತೆಯಾಗಿರದಿದ್ದರೂ ತಮ್ಮ ಕವನ ಸಂಕಲನದ ಕೊನೆಯಲ್ಲಿ ಅದನ್ನು  ಮುದ್ರಿಸಬೇಕೆಂದು ಕರಾರು ಹಾಕಿದ್ದರಂತೆ. ಅಂತಹ ಮಹತ್ತರವಾದ ಕವನವನ್ನು ಡಾ:ಕೇಶವ ಕುಲಕರ್ಣಿ ಅವರು ಕನ್ನಡಕ್ಕೆ ಭಾವಾಂತರಿಸಿದ್ದಾರೆ, ಓದಿ ಅನುಭವಿಸಿ.

ಈ ಕವನ ಓದುವಾಗ ಕನ್ನಡದ ಶ್ರೇಷ್ಠ ಕವಿಗಳಾದ ಡಾ:ಜಿ.ಎಸ್.ಎಸ್ ಅವರ ಜನಪ್ರಿಯ ಭಾವಗೀತೆ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ದ ಸಾಲುಗಳು ಕಾಡುತ್ತವೆ.

sand bar

ದಂಡೆ ದಾಟುವಾಗ

ಇಳಿಸಂಜೆ ಮತ್ತು ಬೆಳ್ಳಿಚುಕ್ಕೆ

ಸ್ಪಷ್ಟ ಕರೆಯೊಂದು ನನಗಾಗ!

ಮತ್ತಾಗ ನರಳಿಕೆ ಇರದಿರಲಿ ಮರಳುದಿಬ್ಬಕೆ,

ಕಡಲೊಳು ನಾನು ಹೊರಟಾಗ,

 

ಆದರಂಥ ತೆರೆಯೂ ಅಲೆದಿದೆ ನಿದ್ರೆವೊಲು,

ಮೊರೆ-ನೊರೆಯಲಾಗದಷ್ಟು ತುಂಬಿಕೊಂಡು,

ಅಪರಿಮಿತದಾಳದಿಂದ ಸೆಳೆದಾಗಲೂ

ಮನೆಗೆ ಹೊರಟಾಗ ತಿರುಗಿಕೊಂಡು.

 

ಮಬ್ಬೆಳಕು ಮತ್ತೆ ಕೊನೆಗಂಟೆ,

ತದನಂತರ ಕಗ್ಗತ್ತಲಾದಾಗ!

ವಿದಾಯದ ವಿಷಾದವಿಲ್ಲದಿರಲಿ, ಒಂಟಿ

ನಾ ಯಾತ್ರೆಗೆ ಹತ್ತಿದಾಗ;

 

ನಮ್ಮ ಕಾಲದ ನೆಲೆಯ ಇತಿಮಿತಿಯೊಳಗೆ

ದೂರದವರೆಗೂ ಸೈರಿಸಲಿ ಪ್ರವಾಹವು ನನ್ನನು,

ನನ್ನ ನಾವಿಕನನ್ನು ನೋಡುವ ನಿರೀಕ್ಷೆಯೊಳಗೆ

ನಾನು ದಾಟಿದಾಗ ದಂಡೆಯನು.

                                                      -ಕೇಶವ ಕುಲಕರ್ಣಿ

ಓದುಗರ ಆಸಕ್ತಿಗಾಗಿ ಮೂಲ ಕವನ

 Crossing the bar

Alfred Lord Tennyson 1809 – 1892

Sunset and evening star,

And one clear call for me!

And may there be no moaning of the bar,

When I put out to sea,

 

But such a tide as moving seems asleep,

Too full for sound and foam,

When that which drew from out the boundless deep

Turns again home.

 

Twilight and evening bell,

And after that the dark!

And may there be no sadness of farewell,

When I embark;

 

For tho’ from out our bourne of Time and Place

The flood may bear me far,

I hope to see my Pilot face to face

When I have cross’d the bar

-Alfred Lord Tenyson