ಪಶ್ಚಿಮಕ್ಕೊಂದು ಇಣುಕು : ಜಿ. ಎಸ್. ಜಯದೇವ್

ಅನಿವಾಸಿ ಕನ್ನಡಿಗರಿಗೆ ಜಯದೇವ್ ಅವರು ಈಗಾಗಲೇ ಚಿರಪರಿಚಿತರು. ಒಬ್ಬ ಸಮಾಜ ಸೇವಕನಾಗಿ, ದೀನಬಂಧುವಾಗಿ, ಪರಿಸರ ಪ್ರೇಮಿಯಾಯಾಗಿ, ಶಿಕ್ಷಣ ತಜ್ಞನಾಗಿ, ಲೇಖಕನಾಗಿ, ಅಂಕಣಕಾರನಾಗಿ ಅವರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ನಡೆಸಿದ್ದಾರೆ. ವೈಜ್ಞಾನಿಕ ಸತ್ಯ ಮತ್ತು ಅಧ್ಯಾತ್ಮ ಇವೆರಡನ್ನೂ ಒಂದೇ ದೃಷ್ಟಿಕೋನದಲ್ಲಿಟ್ಟುಕೊಂಡು ಇವೆರಡರ ನಡುವೆ ಇರುವ ಸಮಾನಾಂಶಗಳ ಬಗ್ಗೆ ಚಿಂತಿಸಿದ್ದಾರೆ. ಮೂಲದಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ, ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡ ಜಯದೇವ್ ಅವರು ಚಾಮರಾಜನಗರದ ಜೆ ಎಸ್ ಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸಮಾಡಿ, ಮುಂಚಿತವಾಗಿಯೇ ನಿವೃತ್ತಿ ಪಡೆದು ಬಿಳಿಗಿರಿ ರಂಗನ ಬೆಟ್ಟದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರದಲ್ಲಿ ಕಾರ್ಯಕರ್ತರಾಗಿ ದುಡಿದಿದ್ದಾರೆ. ಗಿರಿಜನರ ಸಂಪರ್ಕದಿಂದ ಒದಗಿದ ಅಮೂಲ್ಯವಾದ ಅನುಭವ ಅವರಿಗೆ ಪರಿಸರದ ಅಳಿವು ಉಳಿವಿನ ಬಗ್ಗೆ ಚಿಂತಿಸಲು ಅನುವುಮಾಡಿಕೊಟ್ಟಿತು. ಇಲ್ಲಿಂದ ಮುಂದೆ ಹಲವಾರು ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಅವರು ತೊಡಗಿಕೊಂಡರು. ಗಿರಿಜನರ ಸಂಪರ್ಕದಿಂದ ಒದಗಿದ ಹಲವಾರು ಅಮೂಲ್ಯ ಅನುಭವಗಳನ್ನು, ಪರಿಸರದ ಬಗ್ಗೆ ವಿಶೇಷ ಮಾಹಿತಿಗಳನ್ನು ಸಂಗ್ರಹಿಸಿ "ಸೋಲಿಗ ಚಿತ್ರಗಳು" ಎಂಬ ಕೃತಿಯನ್ನು ರಚಿಸಿದ್ದು ಅದು ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರ ಪ್ರಶಂಸೆಯನ್ನು ಪಡೆಯಿತು. 

ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಇರುವ ಜಯದೇವ್ ಅವರು ಅನಾಥ ಮಕ್ಕಳ ಬಗ್ಗೆ ತೀವ್ರವಾದ ಕಾಳಜಿಯಿಂದ ಮತ್ತು ಅನುಕಂಪೆಯಿಂದ ದೀನಬಂಧು ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಅಲ್ಲಿ ನೂರಾರು ಗಂಡು ಮತ್ತು ಹೆಣ್ಣು ಮಕ್ಕಳ ಆಶ್ರಯ, ವಿದ್ಯಾಭ್ಯಾಸ, ವ್ಯಕ್ತಿವಿಕಾಸ ಇವುಗಳಿಗೆ ಅನುವುಮಾಡಿಕೊಟ್ಟು ಈ ಮಕ್ಕಳ ಪೋಷಣೆ ನಿರಂತರವಾಗಿ ನಡೆದಿದೆ.  ನೊಂದ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಮನಶಾಸ್ತ್ರ ತಜ್ಞರ ಜೊತೆ ಸಮಾಲೋಚನೆ ನಡೆಸಿ ಮಾನಸಿಕವಾಗಿ ಘಾಸಿಗೊಂಡ ಮಕ್ಕಳನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಅವರಿಗೆ ಈ ದಿಕ್ಕಿನಲ್ಲಿ ದೊರೆತ ಅನುಭವವನ್ನು "ನಾವೇಕೆ ಹೀಗೆ?" ಎಂಬ  ಕೃತಿಯಲ್ಲಿ ದಾಖಲಿಸಿದ್ದಾರೆ. ಗಾಂಧಿ, ವಿವೇಕಾನಂದ, ರಾಮಕೃಷ್ಣ ಪರಮಹಂಸ, ಬುದ್ಧ, ಜೀಸಸ್ ಮುಂತಾದ  ಮಹಾತ್ಮರ ಬದುಕು ಬರಹವನ್ನು ದೀರ್ಘವಾಗಿ  ಅವಲೋಕಿಸಿ ತಮ್ಮ ಬದುಕಿನಲ್ಲಿ ಮತ್ತು ತಮ್ಮ ಆಶ್ರಮದಲ್ಲಿ ಈ ಮೌಲ್ಯಗಳನ್ನು ಅನುಷ್ಠಾತಾನಕ್ಕೆ ತಂದಿದ್ದಾರೆ. ಮೈಸೂರಿನ ಶಕ್ತಿ ಧಾಮ ಎಂಬ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅಸಹಾಯಕ ಶೋಷಿತ ಮಹಿಳೆಯರಿಗೆ ಪುನರ್ವಸತಿಯನ್ನು ನೀಡಿ ಅವರಿಗೆ ಆಶ್ರಯನೀಡಿದ್ದಾರೆ.  ಹೀಗೆ ಮಹಿಳೆಯರ ಅಭಿವೃದ್ಧಿ ಕಾರ್ಯದಲ್ಲೂ ತಮನ್ನು ತೊಡಗಿಕೊಂಡಿದ್ದಾರೆ.

ಅವರು ಮೈಸೂರಿನ ವಿಶ್ವ ವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಜಯದೇವ ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಯನ್ನು ನೀಡಿದೆ. ಹಲವಾರು ಸಂಘ ಸಂಸ್ಥೆಗಳು ಅವರಿಗೆ ಪ್ರತಿಷ್ಠಿತ ಪುರಸ್ಕಾರಗಳನ್ನು ನೀಡಿವೆ. ಅಮೇರಿಕ, ಯುರೋಪ್ ಮತ್ತು ಯುಕೆ ದೇಶಗಳಿಂದ ಅವರಿಗೆ ಆರ್ಥಿಕ ನೆರವು ಬಂದಿರುವುದಲ್ಲದೆ ಹಲವಾರು ವಿದೇಶಿಯರು ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಕೆಲಕಾಲ ಕೆಲಸ ಮಾಡಿದ್ದಾರೆ. ಜರ್ಮನಿಯ ಹಲವಾರು ವಿದ್ಯಾರ್ಥಿನಿಯರು ಕಳೆದ ಹಲವಾರು ವರ್ಷಗಳಿಂದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಲ್ಲಿ ದೀನಬಂಧುವಿನಲ್ಲಿ ಸೇವೆ ಸಲ್ಲಿಸಿದ್ದಾರೆ.  

ಜಯದೇವ್ ಅವರಿಗೆ ನಿವೃತ್ತಿ ಎನ್ನುವುದಿಲ್ಲ, ಅವರ ತಮ್ಮನಾಗಿ ನಾನು ಅವರನ್ನು ಇಂಗ್ಲೆಂಡಿಗೆ ಹಲವಾರು ಬಾರಿ ಆಹ್ವಾನಿಸಿದ್ದು,  ಕೊನೆಗೂ ಈ ಬೇಸಿಗೆಯಲ್ಲಿ ದೀನಬಂಧು ಸಂಸ್ಥೆ ಯಿಂದ  ತಾತ್ಕಾಲಿಕವಾಗಿ ಬಿಡುಗಡೆ ಪಡೆದು    ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಯುಕೆ ಮತ್ತು ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಬದುಕಿನಲ್ಲಿ ದಟ್ಟವಾದ ಅನುಭವವನ್ನು ಪಡೆದ ಜಯದೇವ್ ಅವರು ಯುಕೆ ಮತ್ತು ಯೂರೋಪಿನ ಬಗ್ಗೆ ಅವರ  ಮೊಟ್ಟ  ಮೊದಲ ಭೇಟಿಯ ಅನಿಸಿಕೆಗಳೇನು ಎಂದು ಹಲವಾರು ಅನಿವಾಸಿ ಮತ್ತು ವಿದೇಶಿ ಮಿತ್ರರು ಕೇಳಿದ್ದು ಜಯದೇವ್ ಅವರು ತಮ್ಮ ವಿಶೇಷ ಒಳನೋಟಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದನ್ನು ಒಂದು ಲೇಖನವಾಗಿ ಬರೆಯಬೇಕೆಂದು ನಾನು ಒತ್ತಾಯಿಸಿದರೆ ಫಲವಾಗಿ, ಈ ಹಿನ್ನೆಲೆಯಲ್ಲಿ ಅವರ ಕೆಳಗಿನ ಲೇಖನವನ್ನು ಪ್ರಕಟಿಸಿಲಾಗಿದೆ, ದಯವಿಟ್ಟು ಓದಿ ಮತ್ತು ಪ್ರತಿಕ್ರಿಯಿಸಿ.

 -ಸಂಪಾದಕ
      * * *
ಅಮೇರಿಕಾ ದೇಶಕ್ಕಿಂತಲೂ ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಯೂರೋಪ್ ದೇಶಗಳನ್ನು ನೋಡಬೇಕೆಂಬ ಬಯಕೆ ನನಗೆ ಆಗಾಗ ಮೂಡುತ್ತಿತ್ತು. ಆದರೆ ಸಾಧ್ಯವಾಗಿದ್ದು ಈಗ. ಕಳೆದ ಇಪ್ಪತೈದು ವರ್ಷಗಳಿಂದಲೂ ನನ್ನ ತಮ್ಮ, ಅವನ ಕುಟುಂಬದ ಎಲ್ಲರೂ ನನ್ನನ್ನು ಕರೆಯುತ್ತಲೇ ಇದ್ದಾರೆ. ದೀನಬಂಧು ಸಂಸ್ಥೆಯ ಜವಬ್ದಾರಿಯಿಂದ ಬಿಡಿಸಿಕೊಂಡು ನನ್ನ ತಂಗಿಯ ನೆರವಿನಿಂದ ಈಗ ಪ್ರಯಾಣ ಸಾಧ್ಯವಾಗಿದೆ. ಕಳೆದ ದಶಕಗಳಿಗೆ ಹೋಲಿಸಿದರೆ ಈಗ ಪ್ರಯಾಣ ಬಹಳ ಸುಲಭ. ಮೊಬೈಲ್-ಇಂಟರ್ ನೆಟ್ ಗಳಿಂದಾಗಿ ಪ್ರತಿ ಹೆಜ್ಜೆಯನ್ನು ಪ್ಲಾನ್ ಮಾಡಿ ಪ್ರಯಾಣ ಮಾಡಬಹುದು. 
ಹೊಸ ಸ್ಥಳಗಳನ್ನು ಅಲ್ಲಿಯ ಜನರನ್ನು ಅವರ ರೀತಿ ನೀತಿಗಳನ್ನು ನೋಡಿ ವಸ್ತು ನಿಷ್ಠವಾಗಿ ಗ್ರಹಿಸಬೇಕೆಂದರೆ ಅದಕ್ಕೆ ಹೊಸ ಕಣ್ಣುಗಳೇ ಬೇಕು. ಭಾರತೀಯ ಸಂಸ್ಕೃತಿ ಮತ್ತು ಅದರ ನೀತಿ ರೀತಿಗಳನ್ನೇ ಕಣ್ಣಿನ ತುಂಬಾ ತುಂಬಿಕೊಂಡಿದ್ದರೆ ನಾವು ಈ ಆಗಂತುಕ ಸಂಸ್ಕೃತಿಯ ಬಗ್ಗೆ ತೀರ್ಪು ನೀಡಲು ಪ್ರಾರಂಭಿಸುತ್ತೇವೆ. ಮೊದಲನೆಯದಾಗಿ ಯಾರೂ ನಮ್ಮನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿಲ್ಲ; ಎರಡನೆಯದಾಗಿ ಇಂತಹ ಪೂರ್ವಾಗ್ರಹಗಳಿಂದಾಗಿ ನಾವು ಹೊಸದನ್ನು ನೋಡುವ ಸುಂದರ ಅವಕಾಶವನ್ನೇ ಕಳೆದುಕೊಂಡುಬಿಡುತ್ತೇವೆ. ಇಂತಹ ಒಂದು ಮುಕ್ತಮನಸ್ಸು ನನಗಿದ್ದರೂ ಮೊದಲು ಕೆಲವು ದಿನ ನನಗೆ ಕಷ್ಟವಾಯಿತು. ಭಾರತೀಯ ದೃಶ್ಯಾವಳಿಗಳಿಗೆ ಬಂಧಿಯಾಗಿದ್ದ ನನ್ನ ನೋಟವನ್ನು ನನ್ನ ಗ್ರಹಿಕೆಯ ಕ್ರಮವನ್ನು, ಸರಿ-ತಪ್ಪುಗಳ ನಿಷ್ಕರ್ಷೆಯನ್ನು ಬಹಿಷ್ಕರಿಸಿ ಮುಕ್ತ ಮನಸ್ಸಿನಿಂದ ನೋಡಲು ಪ್ರಾರಂಭಿಸಿದೆ. ಆಗ ಆತಂಕಕ್ಕೆ ಕಾರಣವಿಲ್ಲದ, ಸುಂದರವಾದ ಇಂಗ್ಲೆಂಡ್-ಯೂರೋಪ್ ಗಳು ಗೋಚರಿಸಲು ಪ್ರಾರಂಭವಾಯಿತು. ಹಿಂದೆ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ಇತ್ಯಾದಿ ಇತ್ಯಾದಿ ವಿಚಾರಗಳು ಚರಿತ್ರೆಗೆ ಸಂಬಂಧಪಟ್ಟ ವಿಷಯಗಳು; ಚರಿತ್ರೆಯ ಪಾಠಗಳಾಗಿ ಇವನ್ನು ಬ್ರಿಟಿಷರು-ಭಾರತೀಯರು ಇಬ್ಬರೂ ತಿಳಿಯಬೇಕು. ಆದರೆ ವರ್ತಮಾನದ ಮನುಷ್ಯ ಸಂಬಂಧಗಳಲ್ಲಿ ಈ ವಿವರಗಳಿಗೆ ಯಾವ ಸ್ಥಾನವೂ ಇರಬೇಕಾಗಿಲ್ಲ  ಎಂಬ ವಿವೇಕ ನಮಗೆ ಹುಟ್ಟಬೇಕು. ಈ ನನ್ನ ಗಾಢವಾದ ನಂಬಿಕೆ ನನಗೆ ಮತ್ತಷ್ಟು ತೆರೆದ ಮನಸ್ಸನ್ನು ದಯಪಾಲಿಸಿದೆ. ಹಾಗಾಗಿ ಪ್ರವಾಸದ ತುಂಬ ಸುಂದರ ಚಿತ್ರಗಳೇ ಪ್ರಧಾನವಾಗಿವೆ. ಯಾವುದೇ ಸಮಾಜದ ಒಟ್ಟಾರೆ ಮಾನಸಿಕ  ಸ್ವಾಸ್ಥ್ಯವನ್ನು ಕಲುಕುವ ಆಚಾರ ವಿಚಾರಗಳ ಬಗ್ಗೆ ನನಗೆ ಕಳಕಳಿ ಇದೆ, ಮುಚ್ಚುಮರೆ ಇಲ್ಲದೆ ಇವುಗಳನ್ನು ವಿರೋಧಿಸುತ್ತೇನೆ. ಭಾರತದಲ್ಲಂತೂ ಇಂತವುಗಳನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಪಾಶ್ಚತ್ಯ ದೇಶಗಳಲ್ಲಿ ಕಂಡುಬಂದರೆ ಅವುಗಳನ್ನೂ ಸಹ ಪ್ರಶ್ನಿಸುತ್ತೇನೆ 

ಪಶ್ಚಿಮಕ್ಕೆ ಬಂದನಂತರ ಯೂರೋಪಿನ ಕಿರು ಪ್ರವಾಸ ಹೊರತುಪಡಿಸಿದರೆ ನಾನು ಹೆಚ್ಚಾಗಿ ಓಡಾಡಿದ್ದು ನನ್ನ ತಮ್ಮನ ಮನೆ ಇರುವ ಶಫೀಲ್ಡ್ ನಲ್ಲಿ. ಇದೊಂದು ಸುಂದರವಾದ ಹಸಿರಿನಿಂದ ಕಂಗೊಳಿಸುವ ಊರು. ಮತ್ತೊಂದು ವಿಶೇಷ ಎಂದರೆ ನಿಶ್ಶಬ್ದತೆ.. ಮನೆಯೊಳಗಿದ್ದಾಗಲಂತೂ ನಿರಂತರವಾದ ನಿಶ್ಶಬ್ದತೆಯನ್ನು ಅನುಭವಿಸಿ ಆನಂದಪಟ್ಟಿದ್ದೇನೆ. ಭಾರತದ ಉದ್ದಗಲಕ್ಕೂ ಅಸಹನೀಯವಾದ ಗದ್ದಲವನ್ನು ಅನುಭವಿಸಿದ ನನಗೆ ಇದೊಂದು ಆಪ್ಯಾಯ ಮಾನವಾದ ಅನುಭವ. ಬ್ರಿಟಿಷರು ಸ್ನೇಹಜೀವಿಗಳು ಎದುರಿಗೆ ಎಲ್ಲರಿಗೂ ನಗುಮುಖದಿಂದ ಹಲೋ ಹೇಳುತ್ತಾರೆ, ಸರಿದು ದಾರಿಬಿಡುತ್ತಾರೆ. ಪ್ರತಿಯೊಬ್ಬ ವಾಹನ ಚಾಲಕನೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾನೆ. ಇಕ್ಕಾಟ್ಟಾದ ರಸ್ತೆಗಳಲ್ಲಿ ಇದುರಿನಿಂದ ವಾಹನ ಬಂದಾಗ ನಿಲ್ಲಿಸಿ ಇತರರಿಗೆ ಅನುವು ಮಾಡಿ ಕೊಡುವ ಸಭ್ಯತೆಯ ಸಂಪ್ರದಾಯವಂತೂ ಅನುಕರಣಯೋಗ್ಯವಾದುದು. ಬ್ರಿಟಿಷರ ಈ ಶಿಸ್ತಿನ ಒಂದನೇ ಹತ್ತುಭಾಗವಾದರೂ ನಮ್ಮ ದೇಶದಲ್ಲಿ ಆಚರಣೆಗೆ ಬರುವುದಾದರೆ ನಮ್ಮ ದೇಶದ ಹಾರನ್ ಹೊಂಕಾರಗಳು ಸ್ವಲ್ಪವಾದರೂ ಕಡಿಮೆಯಾಗಬಹುದು. ನನ್ನ ಅನಿಸಿಕೆ ಏನೆಂದರೆ ನಿಶ್ಯಬ್ದತೆಯಿಂದ ಮನಃಶಾಂತಿ ಉಂಟಾಗುತ್ತದೆ. ಕರ್ಕಶವಾದ ಶಬ್ದಗಳ ನಡುವೆ ಬಹಳಕಾಲ ಸಂಚಾರ ಮಾಡಿದರೆ ಮನಶ್ಯಾಂತಿ ಹಾರಿಹೋಗುತ್ತದೆ, ಮತ್ತು ಮಾನಸಿಕ ಅನಾರೋಗ್ಯಕ್ಕೂ ಕಾರಣವಾಗಬಹುದು. 
ಇರಲಿ ಬ್ರಿಟಿಷರು ಸ್ನೇಹಜೀವಿಗಳು ಎಂದೆ. ನೆನ್ನೆಯ ದಿನ ಲಿನ್ ಮತ್ತು ಜೇನ್ ಇಬ್ಬರು ಧೀಮಂತ ಮಹಿಳೆಯರು ಸ್ಕಾಟ್ ಲ್ಯಾಂಡ್ ನಿಂದ ನೂರಾರು ಮೈಲು ಡ್ರೈವ್ ಮಾಡಿಕೊಂಡು ನನ್ನನ್ನು ನೋಡಲು ನನ್ನ ತಮ್ಮನ ಮನೆಗೆ ಬಂದಿದ್ದರು. ದೀನಬಂಧುವಿನಲ್ಲಿ ಕೆಲವು ತಿಂಗಳುಗಳ ಕಾಲ ವಾಲಂಟರಿ ಸರ್ವಿಸ್ ಮಾಡಿದ್ದ ಇವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಗಂಟೆಗಳನ್ನೇ ಕಳೆದರು. ಒಂದೂವರೆ ದಶಕದ ನಂತರವೂ ತಾವು ಒಡನಾಡಿದ  ಎಷ್ಟೊಂದು ಮಕ್ಕಳ, ಸಿಬ್ಬಂದಿಗಳ ಹೆಸರುಗಳನ್ನು ನೆನಪಿಟ್ಟುಕೊಂಡು ಅತ್ಯಂತ ಪ್ರೀತಿಯಿಂದ ನೆನೆದರು. ಇಲ್ಲಿಯ ಸರಾಸರಿ ಜೀವನವನ್ನು ನೋಡಿದಾಗ ಈ ಜನ ನೆರೆಹೊರೆಯವರನ್ನು ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ ಎಂದು ಅನ್ನಿಸುವುದುಂಟು. ಆದರೆ ಮತ್ತೊಬ್ಬರಿಗೆ ನೆರವಾಗುವ ಸಂದರ್ಭ ಒದಗಿಬಂದಾಗ ತಮ್ಮ ಶಿಷ್ಟಾಚಾರವನ್ನು ಬದಿಗೊತ್ತಿ ಮನುಷ್ಯ ಸಂಬಂಧಗಳಿಗೆ ಮಿಡಿಯುತ್ತಾರೆ. ಬೂಟಾಟಿಕೆ ಎಂಬುದು ಎಳ್ಳಷ್ಟು ಇರುವುದಿಲ್ಲ. ಕೆಲವೊಮ್ಮೆ ವ್ಯತಿರಿಕ್ತ ಪ್ರಕರಣಗಳೂ ಕಂಡುಬರಬಹುದು, ಆದರೆ ಅಪರೂಪ. 

ಬ್ರಿಟಿಷ್ ಜನ ಮಕ್ಕಳ ರಕ್ಷಣೆಗಾಗಿ ಅತಿಯಾದ ಕಾನೂನು, ಕಟ್ಟಳೆಗಳನ್ನು ಮಾಡಿಕೊಂಡಿದ್ದಾರೆ ಎಂದೆನಿಸುತ್ತದೆ. ಇದಕ್ಕೆ ಕಾರಣಗಳೂ ಇವೆ ಎಂಬುದು ಒಂದು ಸಮಜಾಯಿಷಿ. ಎಲ್ಲೆಲ್ಲೂ ಅಪಾಯಗಳನ್ನೇ ನೋಡುತ್ತ, ಸದಾಕಾಲವೂ ಗುರಾಣಿಯನ್ನು ಅಡ್ಡಹಿಡಿದೇ  ಬದುಕುವ  ಜೀವನ ವಿಧಾನ ಬದುಕಿನ ಪ್ರೀತಿಯನ್ನು ನಂಬಿಕೆಯನ್ನು ಗಟ್ಟಿಗೊಳಿಸುವ ಬದಲು ಸ್ವರಕ್ಷಣೆಯ ಗೀಳನ್ನು ಹೆಚ್ಚಿಸಬಹುದಲ್ಲವೆ? ನಂಬಿಕೆ ಮತ್ತು ಪರಸ್ಪರತೆಗಳಿಗೆ ಸ್ಥಳವಿಲ್ಲದೆ ಜೀವನ ಶುಷ್ಕವಾಗಿ ಬಿಡಬಹುದಲ್ಲವೆ? ನಂಬಿಕೆ ಭರವಸೆಗಳಿಲ್ಲದ ಜೀವನದಲ್ಲಿ ಪರಕೀಯತೆ (Alienation) ಹತಾಶೆಗಳು ಸುಪ್ತವಾಗಿ ಮನೆಮಾಡಿ ಆತ್ಮವನ್ನೇ ಕೊರೆಯಬಹುದೋ ಏನೋ? ಈ ಪ್ರಶ್ನೆಗೆ ನನಗೆ ಉತ್ತರ ದೊರೆತಿಲ್ಲ. 

ಪಾಶ್ಚಿತ್ಯ ಜಗತ್ತಿನ ಇಂದಿನ ವ್ಯವಸ್ಥೆ ಮತ್ತು ಸಂಸ್ಕೃತಿ ‘ಅನುಭಾವ’ ಎಂದು ನಾವು ಯಾವುದನ್ನು ಕರೆಯುತ್ತೇವೆಯೊ ಆ ಮನಸ್ಥಿತಿಯನ್ನು ಕೆಲವರಾದರೂ ಪಡೆಯಬಹುದಾದ ಸಾಧ್ಯತೆಯನ್ನು ದೂರ ಸರಿಸುತ್ತದೆ. ಬ್ರದರ್ ಲಾರೆನ್ಸ್ ಅಥವಾ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸ್ಸಿ ಅವರಂತಹ ಅನುಭಾವಿಗಳು ಪಶ್ಚಿಮದಲ್ಲೂ ಇದ್ದುದು ಉಂಟು. ಆದರೆ ಇಂದಿನ ವಾತಾವರಣದಲ್ಲಿ ಭೌತಿಕತೆಯೇ ಪ್ರಧಾನವಾಗಿದ್ದು ಅಂತರ್ಮುಖತೆ ಗೌಣವಾಗಿದೆ.  ಹಾಗಾಗಿ ಒಂದು ಮಿತಿಯೊಳಗೆ ಇವರು ಅಧ್ಯಾತ್ಮವನ್ನು ಮೆಚ್ಚುತ್ತಾರಾದರೂ ತಮ್ಮ ನಡುವೆಯೇ ಇರಬಹುದಾದ ರಮಣಮಹರ್ಷಿಯವರಂತಹ ಅನುಭಾವಿಯನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಬಹದೋ ಏನೋ! ಭಾರತೀಯ ಸಂಸ್ಕೃತಿಯಲ್ಲಿ ನೆಲೆಯೂರಿದ ನನ್ನಂತಹವರಿಗೆ ಇದೊಂದು ದೊಡ್ಡ ಕೊರತೆಯಾಗಿ ಕಾಣುತ್ತದೆ. ಬದುಕಿನ ನಿರರ್ಥಕತೆಯ ಅರಿವು ನಮ್ಮನ್ನು ಆಧ್ಯಾತ್ಮಿಕತೆಗೆ ಕೊಂಡೊಯ್ದರೆ ಆಲ್ಬರ್ಟ ಕಾಮು  ಅವರಂತಹ ಪಾಶ್ಚಾತ್ಯ ಚಿಂತಕರನ್ನು ಅಸಂಗತ (Absurd) ತತ್ತ್ವಕ್ಕೆ ಕೊಂಡೊಯ್ದು ಆತ್ಮಹತ್ಯೆಯ ಪ್ರಶ್ನೆಯನ್ನು ಎದುರಿಸಬೇಕಾದ ಅನಿವಾರ್ಯತೆಯನ್ನುಂಟು ಮಾಡುತ್ತದೆ. ಕರ್ಮ ಮಾಡುತ್ತಲೇ ನೂರು ವರ್ಷಕಾಲ ಬಾಳಬೇಕು ಎಂದು ಹೇಳುವ ನಮ್ಮ ಈಶೋಪನಿಷತ್ತಿನ ಮಂತ್ರಕ್ಕೂ ಬದುಕಿನ ನಿರರ್ಥಕತೆಯನ್ನು ಆತ್ಮಹತ್ಯೆಯ ಪ್ರಶ್ನೆಯಾಗಿ ಎದುರಿಸುವುದಕ್ಕೂ ಎಷ್ಟು ವೆತ್ಯಾಸವಿದೆ!

ಸರಾಸರಿಯಾಗಿ ಬ್ರಿಟಿಷ್ ಜನ ತಮ್ಮ ಪರಂಪರೆಯ ಬಗ್ಗೆ, ಗತಕಾಲದ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತಾರೆ. ಯಾವಾಗಲೂ ಗೆಲ್ಲುಗರಾಗಿಯೇ ಬೆಳೆದು ಬಂದ ಈ ಜನಾಂಗ ಹೆಮ್ಮೆ ಪಡುವುದರಲ್ಲಿ ಆಶ್ಚರ್ಯವಿಲ್ಲ. ಇಂದಿನ ಅವರ ವ್ಯವಸ್ಥೆಯ ಆದ್ಯತೆಗಳನ್ನು ಗಮನಿಸಿದರೆ ಇದು ಅರಿವಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಉಳಿಸಲು ಸ್ವಯಂಪ್ರೇರಣೆಯಿಂದ ಸಂಘಟಿತ ಪ್ರಯತ್ನಗಳೂ ನಡೆಯುವುದುಂಟು. ನ್ಯಾಷನಲ್ ಟ್ರಸ್ಟ್ ಇಂತಹ ಒಂದು ಸಾರ್ವಜನಿಕ ಸಂಸ್ಥೆ. ಹಳೆಯ ಕಾಲದ ಮನೆಯನ್ನು ಹಣದ ಮುಗ್ಗಟ್ಟು ಅಥವಾ ಇತರ ಕಾರಣಗಳಿಗಾಗಿ ಯಾರಾದರೂ ಮಾರಿಬಿಟ್ಟಿದ್ದರೆ ಅದನ್ನು ಟ್ರಸ್ಟ್ ಹೆಚ್ಚು ಹಣ ಕೊಟ್ಟು ಕೊಂಡು ಕೊಂಡು ಹಾಗೇಯೇ ಉಳಿಸುತ್ತದೆ. ಹಳೆಯ ಕಾಲದ ಮನೆಗಳನ್ನು ಹಾಗೆಯೇ ಉಳಿಸಿಕೊಂಡು ಮುಂದಿನ ಪೀಳಿಗೆಯವರಿಗೆ ಗತ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಈ ಟ್ರಸ್ಟ್ ನ ಉದ್ದೇಶ. ಈ ಮನೆಗಳ ಜೊತೆ ಹಿಂದೆ ಬಳಸುತ್ತಿದ್ದ “ಮಿಲ್ ಸ್ಟೋನ್” ಅಥವಾ ಹಿಟ್ಟು ಮಾಡುವ ಬೃಹತ್ ಬೀಸೆ ಕಲ್ಲುಗಳನ್ನು ಸಂರಕ್ಷಿಸಿದ್ದಾರೆ. ಇಷ್ಟೆ ಅಲ್ಲ ಹಿಂದೆ ಕುರಿಗಳನ್ನು ಕಟ್ಟುತ್ತಿದ್ದ ರೊಪ್ಪವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಜೊತೆಗೆ ಇವುಗಳ ಸಾಂಸ್ಕೃತಿಕ ಚರಿತ್ರೆಯನ್ನು ಹೇಳುವ ಚಿಕ್ಕ ಚಿಕ್ಕ ಫಲಕಗಳು, ಆಯಾ ಪ್ರದೇಶಗಳ ಚಿತ್ರ ಸಹಿತ ನಕ್ಷೆಗಳು ಎಲ್ಲೆಲ್ಲೂ ಕಾಣಸಿಗುತ್ತವೆ. ಜೊತೆಗೆ ಜೀವ ವೈವಿಧ್ಯದ ರಕ್ಷಣೆಗೂ ಬಹಳ ಮಹತ್ವ ನೀಡಿದ್ದಾರೆ. ನ್ಯಾಷನಲ್ ಟ್ರಸ್ಟ್ ವಿಶಾಲವಾದ ಭೂಮಿಯನ್ನು ಕೊಂಡುಕೊಂಡು ಇರುವ ನೈಸರ್ಗಿಕ ಸಂಪತ್ತನ್ನು ಕಾಪಾಡುತ್ತದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವುದನ್ನು ತಡೆದರೆ ಸಾಕು ಆ ಪ್ರದೇಶದ ಜೀವ ವೈವಿಧ್ಯ ಮತ್ತು ಪ್ರಕೃತಿ ಸಂಪತ್ತು ಉಳಿಯುತ್ತದೆ. ಭಾರತದಂತಹ ಅದ್ಭುತ ಜೀವವೈವಿಧ್ಯದ ತಾಣದಿಂದ ಬಂದ ನನ್ನಂತಹವರಿಗೆ ಇವರ ಜೀವ ವೈವಿಧ್ಯ ಸಂರಕ್ಷಣೆಯ ಕಾನೂನುಗಳು ಸ್ವಲ್ಪ ಅತಿ ಎನಿಸುವುದುಂಟು. ಆದರೆ ಪಶ್ಚಿಮ ಘಟ್ಟಗಳಂತಹ ಅಮೂಲ್ಯ ಜೀವ ವೈವಿಧ್ಯದ ಬಿಸಿ ತಾಣಗಳ (Hot spot) ಸಂರಕ್ಷಣೆಯ ಬಗ್ಗೆ ನಮ್ಮ ಸರ್ಕಾರಗಳೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು, ಶ್ರೀ ಸಾಮಾನ್ಯರು ಸ್ವಲ್ಪವೂ ಸಹಕರಿಸದಿರುವುದು ಅತ್ಯಂತ ಆತಂಕದ ಸಂಗತಿ. ಅಲ್ಲದೆ ಅನೇಕ ಶತಮಾನಗಳ ಸಾಂಸ್ಕೃತಿಕ ಚರಿತ್ರೆಯಿರುವ ನಮ್ಮ ಸಾವಿರಾರು ದೇವಸ್ಥಾನಗಳು, ಸಾಂಸ್ಕೃತಿಕ ತಾಣಗಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸದೇ ಇರುವುದು ವಿಷಾದನೀಯ. ಹೊರಗಿನಿಂದ ಬಂದ ದಾಳಿಕೋರರು ನಮ್ಮ ದೇಶದ ಸಾಂಸ್ಕೃತಿಕ ತಾಣಗಳನ್ನು ನಾಶಪಡಿಸಿದರೆಂದು ನಿರಂತರವಾಗಿ ದೂರುತ್ತಲೇ ಕುಳಿತುಕೊಳ್ಳುವುದಕ್ಕಿಂತ ಇರುವ ಸಾಂಸ್ಕೃತಿಕ ತಾಣಗಳ ರಕ್ಷಣಾ ಕಾರ್ಯವನ್ನು ಮುತುವರ್ಜಿಯಿಂದ ಮಾಡುವುದು ಹೆಚ್ಚು ಲಾಭದಾಯಕವಾದೀತು. 

ಬ್ರಿಟಿಷರಂತೆ ಯೂರೋಪಿನ ಇತರ ಕೆಲವು ದೇಶದ ಜನರು  ತಮ್ಮ ಪಾರಂಪರಿಕ ಕಟ್ಟಡಗಳನ್ನು ಬಹುವಾಗಿ ಪ್ರೀತಿಸುತ್ತಾರೆ. ನೆದರ್ಲ್ಯಾಂಡ್ ದೇಶದ ಆಮ್ ಸ್ಟರ್ ಡ್ಯಾಮ್ ನ ಕಟ್ಟಡಗಳಂತೂ ಇನ್ನೂರು-ಮುನ್ನೂರು ವರ್ಷ ಹಳೆಯವು. ಈ ಜನ ತಮ್ಮ ಹಳೆಯ ಮನೆಗಳನ್ನು ಅವು ಇದ್ದ ಹಾಗೆಯೇ ಕಾಪಾಡಿಕೊಂಡು ಬರಲು ಕಂಕಣ ಬದ್ಧರಾಗಿರುವಂತೆ ಕಂಡುಬರುತ್ತದೆ.  ಆಮ್ ಸ್ಟರ್ ಡ್ಯಾಮ್ ನ ಒಂದು ಕಡೆ ಒಂದರ ಪಕ್ಕ ಒಂದು ಇರುವ ಮೂರು ಮನೆಗಳು ವಾಲಿಕೊಂಡಿವೆ. ಇವುಗಳು ಬಹುಶಃ ಮುನ್ನೂರು ವರ್ಷ ಹಳೆಯ ಮನೆಗಳು. ಇವುಗಳನ್ನು “ಡ್ಯಾನ್ಸಿಂಗ್ ಹೌಸಸ್” ಎನ್ನುತ್ತಾರೆ. ಕೆಲವು ಕಡೆ ನಾಲ್ಕು ಮಹಡಿ ಏರಿ ಹೋಗಬೇಕು. ಆದರೆ ಅವರಿಗೆ ಲಿಫ್ಟ್ ಹಾಕಿಸಿಕೊಳ್ಳಲು ಸರ್ಕಾರ ಅನುಮತಿ ಕೊಡುವುದಿಲ್ಲ. ಏಕೆಂದರೆ ಇಂತಹ ಯಾವುದೇ ಪುನರ್ ನವೀಕರಣ ಕಾರ್ಯಕ್ಕೆ ಹಳೆಯ ರಚನೆಗಳನ್ನು ಒಡೆಯಬೇಕಲ್ಲ! ಹಾಗಾಗಿ ಈ ಇಕ್ಕಾಟ್ಟಾದ ಮೆಟ್ಟಿಲುಗಳನ್ನು ಹತ್ತಿಯೇ ಹೋಗಬೇಕು. ಫ್ರಾನ್ಸ್ ಆಧುನಿಕ ನಗರವಾದರೂ ಅಲ್ಲಿಯೂ ಸಹ ನೂರಾರು ಹಳೆಯ ಕಟ್ಟಡಗಳನ್ನು ಉಳಿಸಿಕೊಂಡಿದ್ದಾರೆ. ಯೂರೋಪಿನ ವಿಶೇಷವೆಂದರೆ ಆಧುನಿಕತೆ ಅವರ ಸಾಂಸ್ಕೃತಿಕ ಸ್ಮೃತಿಗಳಿಗೆ, ಸಾಂಸ್ಕೃತಿಕ ಅಸ್ಮಿತೆಗೆ ಮಾರಕವಾಗಿಲ್ಲ. ಆದರೆ ನಮ್ಮ ದೇಶದಲ್ಲ್ಲೋ ಆಧುನಿಕತೆ ಮತ್ತು ಸಾಂಸ್ಕೃತಿಕ ಅಸ್ಮಿತೆಗಳು ಒಂದಕ್ಕೊಂದು ವಿರುದ್ಧವೋ ಎಂಬಂತೆ ಭಾವಿಸುತ್ತೇವೆ. ಆಧುನಿಕತೆ ಎಂಬುದು ಹಳೆಯದೆಲ್ಲದರ ಮೇಲೆ ಕಟ್ಟಿದ ಗೋರಿಯೋ ಎಂಬಂತೆ ನಾವು ವರ್ತಿಸುತ್ತೇವೆ. 

ಭಾರತ ಬಹು ಸಂಸ್ಕೃತಿಗಳ ದೇಶ. ನಾಲ್ಕು ಪ್ರಮುಖ ಜಾಗತಿಕ ಧರ್ಮಗಳ ಉಗಮಸ್ಥಾನ. ವಿಭಿನ್ನ ಸಂಸ್ಕೃತಿಗಳು, ಉಪಸಂಸ್ಕೃತಿಗಳು, ನೂರಾರು ಆಚಾರ ವಿಚಾರಗಳು ಒಟ್ಟಿಗೆ ಸಾವಿರಾರು ವರ್ಷಗಳ ಪರ್ಯಂತ ಬೆಳೆದು ಬಂದ ದೇಶ. ಅನ್ಯ ವಿಚಾರಗಳು, ಅನ್ಯ ಸಂಸ್ಕೃತಿಯ ಪದ್ಧತಿ ಆಚರಣೆಗಳು ಈ ದೇಶದಲ್ಲಿ ಅಕ್ಕಪಕ್ಕದಲ್ಲೇ ಇರುವುದನ್ನು ನೋಡಬಹುದು. ಪ್ರತಿರೋಧಗಳು ಬಹಳ ಕಡಿಮೆ ಎಂದೇ ಹೇಳಬಹುದು. ಈ ಅನಿವಾರ್ಯವಾದ ಸಹ ಬಾಳ್ವೆ ಭಾರತೀಯರಿಗೆ ಅಪಾರವಾದ ತಾಳ್ಮೆ, ಸಹಿಷ್ಣುತೆಯ ಮನೋಧರ್ಮವನ್ನು ಕೊಟ್ಟಿದೆ. ಏಕರೂಪ ಸಂಸ್ಕೃತಿಯ ವಾತಾವರಣ ‘ಅನ್ಯ’ ರನ್ನು ಸಹಿಸುವ ಸಹಿಷ್ಣುತೆಯ ಮನೋಧರ್ಮವನ್ನು ನೀಡಲಾರದು. ಸಾವಿರಾರು ವರ್ಷಗಳ ಪರ್ಯಂತ ‘ಅನ್ಯ’ರಾರೂ ಇಲ್ಲದ, ನಮ್ಮವರಷ್ಟೇ ಇರುವ ವಾತಾವರಣದಲ್ಲಿ ಬೆಳೆದ ಮನೋಧರ್ಮ ‘ಅನ್ಯ’ ಎಂಬ ಎಲ್ಲವನ್ನೂ ಗುಮಾನಿಯಿಂದಲೇ ನೋಡುವುದನ್ನು ಅಭ್ಯಾಸಮಾಡಿಕೊಂಡಿರುತ್ತದೆ. ಭಾರತೀಯ ಪರಿಸರದ ಸಹಿಷ್ಣುತೆಯ ಮನೋಧರ್ಮವನ್ನು ಸ್ವಾಮಿ ವಿವೇಕಾನಂದರು ಸುಮಾರು ನೂರ ಮೂವತ್ತು ವರ್ಷದ ಹಿಂದೆಯೇ ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು. “I am proud to belong to religion which has taught the world both tolerance and universal acceptance. We believe not only in universal toleration but we accept all religions as true. I am proud to belong to a nation which has sheltered the persecuted and the refugees of all religions and all nations of the earth.

ಇಂದಿನ ಭಾರತದ ರಾಜಕೀಯ ಸಾಮಾಜಿಕ ಪರಿಸರದಲ್ಲಿ “ಅನ್ಯರು –ನಮ್ಮವರು ಎಂಬ ಭಿನ್ನತೆಯ ಮನೋಧರ್ಮವನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದೌರ್ಭಾಗ್ಯವೇ ಸರಿ. ಈ ಭಿನ್ನತೆಯ ಮನೋಧರ್ಮ ನಮ್ಮ ಸಹಜ ಧರ್ಮವಲ್ಲ ಎಂಬುದನ್ನು ಎಂಟನೆಯ ಶತಮಾನದ ಕವಿರಾಜ ಮಾರ್ಗದ ಈ ಸಾಲುಗಳನ್ನು ಗಮನಿಸಿದರೆ ತಿಳಿಯುತ್ತದೆ” “ಕಸವರಮೆಂಬುದು ನೆರೆಸೈರಿಸಲಾರ್ಪೊಡೆ ಪರವಿಚಾರಮುಮಂ, ಧರ್ಮಮುಮಂ” ಕಸವರ ಎಂದರೆ ಚಿನ್ನ ಅಥವಾ ಸಂಪತ್ತು. ಇದು ಯಾವುದು ಎಂದರೆ ಪರವಿಚಾರವನ್ನು, ಪರಧರ್ಮದ ಸಾನಿಧ್ಯವನ್ನು ಸಹಿಸಿಕೊಳ್ಳುವುದು ಅಥವಾ ಸಹಿಷ್ಣುತೆಯೇ ಆಗಿದೆ ಎಂಬುದು ಈ ಸಾಲುಗಳತಾತ್ಪರ್ಯ. ಇಂದು ಬ್ರಿಟನ್ ಮತ್ತು ಯೂರೋಪಿನ ಅನೇಕ ದೇಶಗಳು ವಲಸಿಗರನ್ನು ಉದಾರವಾಗಿ ಸ್ವೀಕರಿಸುತ್ತಿರುವುದು ಆದರಣೀಯ. ಯಾವುದೇ ಜನಾಂಗವಾಗಲಿ, ದೇಶವಾಗಲಿ ತನ್ನ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ, ದ್ವೀಪ ದೋಪಾದಿಯಲ್ಲಿ ತಾನಷ್ಟೇ ಸುಖ ಸಮೃದ್ಧಿಯಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲರನ್ನು, ಎಲ್ಲವನ್ನೂ ಒಳಗೊಳ್ಳುವುದೇ ಬದುಕು. ನಿಧಾನವಾಗಿಯಾದರೂ ಈ ಸತ್ಯಕ್ಕೆ ತೆರೆದುಕೊಳ್ಳುತ್ತಿರುವ ಪಾಶ್ಚಾತ್ಯ ಜಗತ್ತು ಸರಿಮಾರ್ಗದಲ್ಲೇ ಇದೆ ಎಂಬುದು ನನ್ನ ಅಭಿಪ್ರಾಯ. 

       -   ಜಿ. ಎಸ್. ಜಯದೇವ್ 

                     * * *


ಪುಸ್ತಕ ವಿಮರ್ಶೆ ಎಂಬ ತಕ್ಕಡಿ: ಡಾ ಜಿ.ಎಸ್. ಶಿವಪ್ರಸಾದ್

ಮತ್ತು ಒಂದು ಪುಸ್ತಕ ವಿಮರ್ಶೆ – ಟಿ. ಆರ್. ನಾರಾಯಣ್

ಈ ವಾರದ ಸಂಚಿಕೆಯಲ್ಲಿ ಒಂದಕ್ಕೊಂದು ಪೂರಕವಾಗುವ ಎರಡು ಬರಹಗಳಿವೆ. ನಾನು ‘ಪುಸ್ತಕ ವಿಮರ್ಶೆ ಎಂಬ ತಕ್ಕಡಿ’ ಎನ್ನುವ ಶೀರ್ಷಿಕೆಯಲ್ಲಿ ವಿಮರ್ಶೆಯ ಕುರಿತಾದ ನನ್ನ ಕೆಲವು ಅನಿಸಿಕೆಗಳನ್ನು ದಾಖಲಿಸಿದ್ದೇನೆ. ಪುಸ್ತಕ ವಿಮರ್ಶೆಯ ಕೆಲವು ಆಯಾಮಗಳನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ನನ್ನದಾಗಿದೆ. ನನ್ನ “ಅಪ್ಪ ನೆಟ್ಟ ಆಲದ ಮರ” ಬಿಡಿ ಬರಹಗಳ ಕೃತಿಯನ್ನು ಶ್ರೀಯುತ ನಾರಾಯಣ್ ಅವರು ವಿಶ್ಲೇಷಿಸಿ ಒಂದು ವಿಮರ್ಶೆಯನ್ನು ಒದಗಿಸಿದ್ದಾರೆ. ನಾರಾಯಣ್ ಅವರು ನಮ್ಮ ಕನ್ನಡ ಬಳಗದ ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿ ಮತ್ತು ಹೆಸರಾಂತ ನಾಟ್ಯ ಕಲಾವಿದೆ ಸುಮನಾ ನಾರಾಯಣ್ ಅವರ ತಂದೆ. ಅವರ ಈ ಒಂದು ಬರಹಕ್ಕೆ ನಾನು ಆಭಾರಿಯಾಗಿದ್ದೇನೆ. ಆ ವಿಮರ್ಶೆಯನ್ನು ಕೆಳಗೆ ಹಂಚಿಕೊಳ್ಳಲಾಗಿದೆ.
ದಯವಿಟ್ಟು ಓದಿ, ನಿಮ್ಮ ಅನಿಸಿಕೆಗಳನ್ನು (ಕಿರು ವಿಮರ್ಶೆಯನ್ನು !) ಒದಗಿಸಿ

  • ಸಂಪಾದಕ

ಫೋಟೋ ಗೂಗಲ್ ಕೃಪೆ

 ಪುಸ್ತಕ ವಿಮರ್ಶೆ ಎಂಬ ತಕ್ಕಡಿ: ಡಾ ಜಿ.ಎಸ್. ಶಿವಪ್ರಸಾದ್

ಒಂದು ಪುಸ್ತಕವನ್ನು ಓದಿದಾಗ ನಮ್ಮ ಗ್ರಹಿಕೆಗೆ ನಿಲುಕುವ ವಸ್ತು ವಿಷಯಗಳನ್ನು, ವಿಚಾರಗಳನ್ನು ಮೆಲುಕು ಹಾಕಿ ಅದನ್ನು ನಮ್ಮ ಬದುಕಿನ ಅನುಭವಗಳ ಜೊತೆ ನಿಲ್ಲಿಸಿ ಒಂದು ತುಲನಾತ್ಮಕ ಮತ್ತು ವಿಮರ್ಶಾತ್ಮಕ ಒಳನೋಟವನ್ನು ಕಂಡುಕೊಂಡು ಅದನ್ನು ಕ್ರಮಬದ್ಧವಾಗಿ ದಾಖಾಲಾಯಿಸುವುದೇ ವಿಮರ್ಶೆ ಎನ್ನ ಬಹುದು. ಒಂದು ಪುಸ್ತಕದ ಸಾರಾಂಶವನ್ನು ಗ್ರಹಿಸಿ ಆಳಕ್ಕೆ ಇಳಿಯದೆ, ವೈಯುಕ್ತಿಕ ದೃಷ್ಟಿಕೋನವನ್ನು ಹೊರಗಿಟ್ಟು, ಲೇಖಕರ ಆಶಯಗಳ್ನು ಯಥಾವತ್ತಾಗಿ ಬಿತ್ತರಿಸಿದರೆ ಅದು ಪುಸ್ತಕ ಪರಿಚಯವಾಗುತ್ತದೆ, ಒಂದು ವರದಿಯಾಗುತ್ತದೆ. ಒಬ್ಬ ಉತ್ತಮ ವಿಮರ್ಶಕನಿಗೆ ಸಾಹಿತ್ಯದ ಪರಿಚಯವಿರಬೇಕು, ಸಾಹಿತ್ಯ ಸಂವೇದನೆ ಇರಬೇಕು, ಪುಸ್ತಕದಲ್ಲಿನ ಸತ್ವ, ನಿಸ್ಸತ್ತ್ವಗಳನ್ನು ಗುರುತಿಸುವ ಸಾಮರ್ಥ್ಯವಿರಬೇಕು, ಅಲ್ಲೊಂದು ನಿಷ್ಪಕ್ಷಪಾತ ನಿಲುವಿರಬೇಕು ಮತ್ತು ಮುಖ್ಯವಾಗಿ ಪ್ರಾಮಾಣಿಕತೆ ಇರಬೇಕು. 

ಒಂದು ಪುಸ್ತಕವನ್ನು ವಿಮರ್ಶಿಸಲು ಹೊರಟ ವಿಮರ್ಶಕನ (ಓದುಗನ) ಸಾಮಾಜಿಕ -ರಾಜಕೀಯ ನಿಲುವುಗಳು, ಬದುಕಿನ ಅನುಭವ, ತಾನು ಕಂಡುಕೊಂಡ ಬದುಕಿನ ಮೌಲ್ಯಗಳು ಅವನು ಪುಸ್ತಕಕ್ಕೆ ಹೇಗೆ ಸ್ಪಂದಿಸುತ್ತಾನೆ ಎನ್ನುವುದನ್ನು ನಿರ್ಧರಿಸುತ್ತವೆ. ಒಬ್ಬ ಸಾಹಿತ್ಯ ವಿಮರ್ಶಕನಾಗಲು ವಿಶೇಷ ಸಾಹಿತ್ಯ ತರಬೇತು ಬೇಕಾಗಿಲ್ಲ ಮತ್ತು ಸಾಹಿತ್ಯ ವಿದ್ಯಾರ್ಥಿಯಾಗಿ ಅಕ್ಯಾಡೆಮಿಕ್ ಆಗಿರಲೇಬೇಕಿಲ್ಲ, ಒಂದು ವೇಳೆ ಆಗಿದ್ದರೆ ಅದು ಸಹಾಯಕವಾಗಬಹುದು.

ಒಂದು ಕೃತಿ ವಿಮರ್ಶೆಯ ಅಂತಿಮ ಗುರಿ ಎಂದರೆ ಒಂದು ಪುಸ್ತಕದ ಪರಿಚಯದ ಜೊತೆ ಉತ್ತಮ ಸಾಹಿತ್ಯವನ್ನು, ಲೇಖಕರ ವಿಚಾರ ಧಾರೆಯನ್ನು ಸಾಮೂಹಿಕ ಚರ್ಚೆಗೆ ಒಳಪಡಿಸುವುದು. ಕೆಲವು ಕೃತಿಗಳಲ್ಲಿ ಪ್ರಖರವಾದ ವಿಚಾರ ಚಿಂತನೆಗಳು ಇಲ್ಲದಿದ್ದರೂ ಆ ಬರಹಗಳಲ್ಲಿನ ಕಲಾತ್ಮಕತೆ, ಸೃಜನ ಶೀಲತೆ, ಕಥನ ಶೈಲಿ ಮತ್ತು ತಾಂತ್ರಿಕ ವಿಚಾರಗಳ ಬಗ್ಗೆ ವಿಶ್ಲೇಷಣೆ ಮಾಡಬಹುದು. ಸಾಮಾಜಿಕ ವಿಚಾರಗಳನ್ನು ಒಳಗೊಂಡ ಕಥೆ, ಕಾದಂಬರಿ ಕವಿತೆ, ಪ್ರಬಂಧಗಳು ಕೆಲವೊಮ್ಮೆ ಉಗ್ರ ಟೀಕೆಗಳಿಗೆ ಒಳಗಾಗಬಹುದು. ಒಬ್ಬ ಲೇಖಕ ತನ್ನ ಒಂದು ಸಾರ್ವತ್ರಿಕವಲ್ಲದ, ಸಂಕುಚಿತವಾದ, ಆಲೋಚನೆಗಳನ್ನು ಕೃತಿಯಲ್ಲಿ ತರಲು ಪ್ರಯತ್ನಿಸಿದಾಗ ನಮ್ಮ ಐಡಿಯಾಲಜಿಗಳ ಸಂಘರ್ಷಣೆ ಸಾಮಾನ್ಯ. ಚರಿತ್ರೆಯನ್ನು ಆಧರಿಸಿ ಬರೆದಂತಹ ಕೃತಿಗಳು ತೀಕ್ಷ್ಣ ವಿವಾದಕ್ಕೆ ಒಳಪಟ್ಟಿರುವುದನ್ನು ಕಂಡಿದ್ದೇವೆ.  ಚರಿತ್ರೆಯಲ್ಲಿ ದಾಖಲಿಸಿರುವ ವಿಚಾರಗಳು ಎಷ್ಟರ ಮಟ್ಟಿಗೆ ಸತ್ಯ ಎನ್ನುವ ಸಂದೇಹ ಮೂಡಿಬರುವುದು ಸಹಜ. ಹಳೆಯ ಅಪ್ರತಸ್ತುತ ವಿಚಾರಗಳನ್ನು ಆಧರಿಸಿ ಲೇಖಕ ತನ್ನ ಒಂದು ಉದ್ದೇಶಿತ ಆಲೋಚನೆಗಳನ್ನು ಹೇರಲು ಹೊರಟಾಗ ಅದನ್ನು ಓದುಗರು ಮತ್ತು ವಿಮರ್ಶಕರು ಪ್ರಶ್ನಿಸುವುದೂ ಸಹಜವೇ. ವೈಚಾರಿಕ ನಿಲುವಿರುವ, ನಮಗೆ ಪ್ರಸ್ತುತವಾಗುವ, ಸಮಾಜದ ವರ್ತಮಾನ ಸಮಸ್ಯೆಗಳ ಬಗ್ಗೆ ಉಲ್ಲೇಖವಿರುವ,  ಜನರ ನೋವು, ದುಃಖಗಳನ್ನು ಅನುಕಂಪೆಯಿಂದ ಕಾಣುವ, ಸಮಾನತೆ ಮತ್ತು ಇತರ ಮಾನವೀಯ ಮೌಲ್ಯಗಳನ್ನು ಒಳಗೊಳ್ಳುವ ಕೃತಿಗಳು ಸಾಮಾನ್ಯವಾಗಿ ವಿವಾದದಿಂದ ದೂರ ಉಳಿಯುತ್ತವೆ ಮತ್ತು ಹೆಚ್ಚು ಹೆಚ್ಚು ಓದುಗರಿಂದ ಸ್ವೀಕೃತವಾಗುತ್ತವೆ ಎನ್ನಬಹುದು. ವಿಮರ್ಶಕರು ಅದೆಷ್ಟೋ ಕೃತಿಗಳನ್ನು ನೈತ್ಯಾತ್ಮಕವಾಗಿ ವಿಮರ್ಶಿಸಿದ್ದರೂ ಒಂದು ಕೃತಿಗೆ ಪರ -ವಿರೋಧ ಅಭಿಪ್ರಾಯಗಳು ಉಂಟಾಗುವುದು ಸಹಜ. ಲೇಖಕನ ಮತ್ತು ಓದುಗರ ಸಾಮಾಜಿಕ-ರಾಜಕೀಯ, ಎಡಪಂಥ, ಬಲಪಂಥ ನಿಲುವುಗಳೇ ಇದಕ್ಕೆ ಕಾರಣವಾಗಿರುತ್ತದೆ. 

ಓದುಗರು ಕೃತಿಯನ್ನು ಓದಿದ ಮೇಲೆ ವಿಮರ್ಶೆಯನ್ನು ಗಮನಿಸುವುದು ಒಳಿತು. ಇಲ್ಲದಿದ್ದಲ್ಲಿ ನಮ್ಮ ಸ್ವಂತ ಚಿಂತನೆಗಳು ಮೊಳಕೆಯೊಡೆಯುವ ಮೊದಲೇ ವಿಮರ್ಶಕನ ಚಿಂತನೆಗಳು ನಮ್ಮ ಮೇಲೆ ಪರಿಣಾಮಗಳನ್ನು ಬೀರಿ ನಾವು ನಮ್ಮ ಸ್ವತಂತ್ರ ಆಲೋಚನೆಗಳನ್ನು ಕಳೆದುಕೊಳ್ಳಬಹುದು. ವಿಮರ್ಶಕ ಒಂದು ಕೃತಿಯನ್ನು ತನ್ನ ಅಳತೆ ಮಾಪನದಲ್ಲಿ ತೂಗಿ ಇದು ಸರಿ ಇದು ತಪ್ಪು ಎಂದು ಹೇಳಬಹುದು ಆದರೆ ಅದನ್ನು ಒಪ್ಪಿಕೊಳ್ಳಲೇ ಬೇಕಿಲ್ಲ. ಏಕೆಂದರೆ ಅದು ಅವನ ದೃಷ್ಟಿಕೋನ, ಅವನ ಗ್ರಹಿಕೆ.  ಆದರೂ ಒಬ್ಬ ಸೃಜನ ಶೀಲ ಲೇಖಕನಿಗೆ ಒಬ್ಬ ಉತ್ತಮ ವಿಮರ್ಶಕನ ಅಭಿಪ್ರಾಯವನ್ನು ಸ್ವೀಕರಿಸುವ  ಔದಾರ್ಯ ಮತ್ತು ಹೃದಯ ವೈಶಾಲ್ಯವಿರಬೇಕು. ವಿಮರ್ಶಕರು ಗುರುತಿಸಿದ ದೋಷಗಳನ್ನು ತನ್ನ ಮುಂದಿನ ಕೃತಿಯಲ್ಲಿ ಸರಿಪಡಿಸುವ ಮುಕ್ತ ಮನಸ್ಸಿರಬೇಕು. ಒಂದು ಕೃತಿ ಬರೆದ ಕೂಡಲೇ ಅದರ ವಿಮರ್ಶೆ ಕೆಲವೇ ದಿನಗಳಲ್ಲಿ ನಡೆಯಬೇಕು ಎಂಬ ನಿರೀಕ್ಷೆ ಇದ್ದರೂ ಅದಕ್ಕೆ ಕಾಲದ ಮಿತಿಯಿಲ್ಲ. ಶೇಕ್ಸ್ಪಿಯರ್, ಕುವೆಂಪು ಬರೆದ ಕಾವ್ಯ ನಾಟಕಗಳನ್ನು ಇಂದು ವಿಮರ್ಶಿಸಿ ಹೊಸ ಹೊಳಹುಗಳನ್ನು ಕಂಡುಕೊಳ್ಳ ಬಹುದು. ಉದಾಹರಣೆಗೆ ‘ತಬ್ಬಲಿಯು ನೀನಾದೆ ಮಗನೆ’ ಎಂಬ ಭೈರಪ್ಪನವರ ೫೦ ವರ್ಷಗಳ ಹಿಂದಿನ ಕೃತಿಯನ್ನು ನಾನು ಕಳೆದ ಕೆಲವು ವರ್ಷಗಳಲ್ಲಿ ಪುನರವಲೋಕಿಸುವ ಪ್ರಯತ್ನ ಮಾಡಿದೆ. (ಇದು ಅನಿವಾಸಿ ಜಾಲತಾಣದಲ್ಲಿ ಹಿಂದೆ ಪ್ರಕಟಗೊಂಡಿತ್ತು) ಕೆಲವು ಕಾಲಾತೀತವಾದ ಬರಹಗಳು ಬದಲಾಗುತ್ತಿರುವ ಸಮಾಜದ ಹಿನ್ನೆಲೆಯಲ್ಲಿ ಮತ್ತೆ ಪುನರ್ವಿಮರ್ಶೆಗೆ ದಕ್ಕುತ್ತವೆ. ಒಂದು ಕಾಲ ಘಟ್ಟದ ಕೃತಿ ಇನ್ನೊಂದು ಕಾಲಘಟ್ಟದಲ್ಲಿ, ಬೇರೆ ಹಿನ್ನೆಲೆಯಲ್ಲಿ ವಿಮರ್ಶೆಗೆ ಗುರಿಯಾಗಬಹುದು.

ಒಬ್ಬ ವಿಮರ್ಶಕ ಬರೆದ ವಿಮರ್ಶೆಯನ್ನು ಬಹಿರಂಗವಾಗಿ ಹಂಚಿಕೊಳ್ಳಬೇಕು. ಕೆಲವು ಗಮನಾರ್ಹ ಕೃತಿಗಳ ವಿಮರ್ಶೆಗಳು ದಿನ ಪತ್ರಿಕೆಗಳಲ್ಲಿ, ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗುತ್ತವೆ.  ಕೆಲವು ಪ್ರಬುದ್ಧ ಪಾಂಡಿತ್ಯಪೂರ್ಣ ವಿಮರ್ಶೆ/ ಚರ್ಚೆಗಳು ಸಾಹಿತ್ಯಕ್ಕೆ ಮೀಸಲಾದ ಸಾಹಿತ್ಯ ಪತ್ರಿಕೆಗಳಲ್ಲಿ ಸಂಭವಿಸುತ್ತವೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದ ವಾಟ್ಸ್ ಆಪ್ ಮತ್ತು ಫೇಸ್ಬುಕ್ ತಾಣಗಳಲ್ಲಿ ಕಿರು ವಿಮರ್ಶೆಗಳನ್ನು ಯಥೇಚ್ಛವಾಗಿ ಕಾಣಬಹುದು. ಒಂದು ಕೃತಿ ವಿಮರ್ಶೆಗೆ ಒಳಗಾದರೆ ಅದು ಒಂದು ಪ್ರಚಾರವಾಗಿ ಪರಿಣಮಿಸಿ ಲೇಖಕ ನಿರೀಕ್ಷಿಸದಿದ್ದರೂ ತನಗೆ ತಾನೇ ಸಲ್ಲುವ ಒಂದು ಲಾಭ ಎನ್ನಬಹುದು.

ಒಂದು ರೀತಿ ನಾವೆಲ್ಲರೂ ವಿಮರ್ಶಕರೆಂದು ಭಾವಿಸಬಹುದು. ನಮ್ಮ ದಿನ ನಿತ್ಯ ಬದುಕಿನ ಆಗುಹೋಗುಗಳಲ್ಲಿ ಸಂಭವಿಸುವ ಸಂಗತಿಗಳನ್ನು ನಮ್ಮ ಮನಸ್ಸು ವಿಮರ್ಶಿಸುತ್ತಿರುತ್ತದೆ. ಒಂದು ಒಳ್ಳೆಯ ಟಿವಿ ಸೀರಿಯಲ್ ನೋಡಿದಾಗ, ಒಂದು ಸಿನಮಾಗೆ ಹೋಗಿ ಬಂದಾಗ ನಾವು ಅದರ ವಿಮರ್ಶೆಗೆ ತೊಡಗುವುದು ಸಾಮಾನ್ಯ. 
ನನಗೆ ತಿಳಿದಂತೆ ನನ್ನ ಪತ್ನಿ ಮತ್ತು ಅವಳ ಕೆಲವು ಗೆಳತಿಯರು ಒಂದು ಲೇಡಿಸ್ ಬುಕ್ ಕ್ಲಬ್ ಮಾಡಿಕೊಂಡು ಬುಕರ್ ಪ್ರೈಜ್ ಪಡೆದ ಮತ್ತು ಇತರ ಜನಪ್ರಿಯ ಇಂಗ್ಲಿಷ್ ಕೃತಿಗಳನ್ನು ತಿಂಗಳಿಗೊಮ್ಮೆ ಚರ್ಚಿಸುತ್ತಾರೆ. ಅದೂ ಕೂಡ ಒಂದು ವಿಮರ್ಶೆಯ ಅಂಗವೇ ಎನ್ನ ಬಹುದು. ನಮ್ಮ ಅನಿವಾಸಿ ಬ್ಲಾಗಿನಲ್ಲಿ ಪ್ರಕಟಗೊಳ್ಳುವ ಬರಹಕ್ಕೆ ಬರುವ ಕಾಮೆಂಟುಗಳು ಒಂದು ರೀತಿ ವಿಮರ್ಶೆ ಎನ್ನಬಹುದು. ಒಂದು ಪುಸ್ತಕಕ್ಕೆ ಬರೆದು ಕೊಟ್ಟ ಮುನ್ನುಡಿ ಪ್ರವೇಶ ಪರಿಚಯದ ಜೊತೆಗೆ ಒಂದು ವಿಮರ್ಶೆಕೂಡ ಎನ್ನಬಹುದು. 


ವಿಮರ್ಶೆಯು ಒಂದು ಕಲೆ ಮತ್ತು ಅದು ಪ್ರತಿಭೆಯನ್ನು ಬೇಡುತ್ತದೆ. ವಿಮರ್ಶಕರು ಸಾಹಿತ್ಯವನ್ನು ಸೃಷ್ಠಿಸುವ ಲೇಖಕರಷ್ಟೇ ಮುಖ್ಯ. ಅವರಿಗೂ ಮಾನ್ಯತೆ ಮತ್ತು ಪುರಸ್ಕಾರಗಳ ಅವಶ್ಯಕತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಡಾ.ಜಿ.ಎಸ್.ಎಸ್ ಅವರು ವಿಶ್ವಸ್ಥಮಂಡಳಿ ಎಂಬ ಒಂದು ದತ್ತಿ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದ ಹತ್ತಾರು ವರ್ಷಗಳಲ್ಲಿ ಪ್ರತಿ ವರ್ಷ ಉತ್ತಮ ವಿಮರ್ಶಕರಿಗೆ ಜಿ. ಎಸ್. ಎಸ್ ಪುರಸ್ಕಾರ ನೀಡಲಾಗುತ್ತಿದೆ. ಈ ಪುರಸ್ಕಾರ ಉತ್ತಮ ಕವಿತೆ ಅಥವಾ ಕಾದಂಬರಿಗಲ್ಲ! ಬದಲಾಗಿ ವಿಮರ್ಶಕರಿಗೆ ಮಾತ್ರ ಮೀಸಲಾಗಿದೆ ಎಂಬ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ.

ಒಂದು ಭಾಷೆಯ, ಸಂಸ್ಕೃತಿಯ ಮತ್ತು ಸಾಹಿತ್ಯದ ಆರೋಗ್ಯಕರ ಬೆಳವಣಿಗೆಗೆ ವಿಮರ್ಶೆ ಅತ್ಯಗತ್ಯ. ಓದುಗರ ಮೆಚ್ಚುಗೆ ಮತ್ತು ಉಪಯುಕ್ತ ಸಲಹೆಗಳು ಸಾಹಿತ್ಯದ ಬೆಳವಣಿಗೆಯನ್ನು ರೂಪಿಸುತ್ತವೆ.  ಯಾರೇ ಒಬ್ಬ ಲೇಖಕನಿಗೆ ಓದುಗರ ಅನಿಸಿಕಗಳು ಮೌಲಿಕವಾಗುತ್ತವೆ ಮತ್ತು ಮಾರ್ಗದರ್ಶನ ನೀಡುತ್ತವೆ.  ಒಂದು ಸಮುದಾಯದಲ್ಲಿ ಉತ್ತಮ ಸಾಹಿತ್ಯ ಅಭಿರುಚಿಯನ್ನು ಬೆಳೆಸುವುದರಲ್ಲಿ ವಿಮರ್ಶೆ ಮಹತ್ವವಾದ ಜವಾಬ್ದಾರಿಯನ್ನು ವಹಿಸಿರುತ್ತದೆ.

ಡಾ ಜಿ ಎಸ್ ಶಿವಪ್ರಸಾದ್


* * *   

ಒಂದು ಪುಸ್ತಕ ವಿಮರ್ಶೆ – ಟಿ.ಆರ್. ನಾರಾಯಣ್

(ಅಪ್ಪ ನೆಟ್ಟ ಆಲದ ಮರ ಕೃತಿಯ ವಿಮರ್ಶೆ)  

ಶ್ರೀ  ಟಿ. ಆರ್. ನಾರಾಯಣ್ ರವರ ಕಿರು ಪರಿಚಯ:

ಶ್ರೀ ಟಿ. ಆರ್. ನಾರಾಯಣ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ( ಈಗ ರಾಮನಗರ ಜಿಲ್ಲೆ)ಯ ಮಾಗಡಿ ತಾಲ್ಲೋಕಿನ ತಿಪ್ಪಸಂದ್ರ ಎಂಬ ಗ್ರಾಮದವರು. ಇವರ ಬಾಲ್ಯ ಮತ್ತು ವಿದ್ಯಾಭ್ಯಾಸಗಳನ್ನು ಹೆಚ್ಚಿನಂಶ ಬೆಂಗಳೂರಿನ ಬಸವನಗುಡಿಯ (ಬುಲ್ ಟೆಂಪಲ್ ರಸ್ತೆ) ಪರಿಸರದಲ್ಲಿ ಕಳೆದು ಬಿ. ಎಂ. ಎಸ್. ಇಂಜನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಇಂಜನಿಯರಿಂಗ್ ಪದವಿಯನ್ನು ಗಳಿಸಿದರು. ನಂತರ ಕರ್ನಾಟಕ ವಿದ್ಯುತ್ಛಕ್ತಿ ಮಂಡಲಿಯಲ್ಲಿ (K E B) ಇಂಜನಿಯರ್ ಆಗಿ ಸುಮರು 26 ವರ್ಷಗಳ ಕಾಲ ಅನುಭವಗಳಿಸಿ (Electrical Systems Planning, Maintenance and Development of Application Software), ಸ್ವಯಂ ನಿವೃತ್ತಿ ಪಡೆದು, ನಂತರ ಟಾಟ ಎನರ್ಜಿ ರಿಸರ್ಚ ಇನ್ಸ್ಟಿಟ್ಯೂಟ್ (Tata Enegy Research Institute) ನಲ್ಲಿ ಸಿನಿಯರ್ ಕನ್ಸಲಟಿಂಗ್ ಇಂಜನಿಯರ್/ಫೆಲೊ ಅಗಿ ಅನುಭವ ಗಳಿಸಿದರು (Energy Systems, Design, Planning and Conservation).

ಹೈಸ್ಕೂಲಿನ ವಿಧ್ಯಾರ್ಥಿ ಜೀವನದಿಂದ ಪ್ರಾರಂಭಿಸಿದ ಸಾಹಿತ್ಯ ಕೃತಿಗಳನ್ನು ಓದುವ ಅಭ್ಯಾಸವನ್ನು   ಸಮಾಯಾವಕಾಶವಾದಾಗ ಮುಂದುವರೆಸಿ ಹೊಸ ಪುಸ್ತಕಗಳನ್ನು ಓದಿ ಸಾಹಿತ್ಯ ಲೋಕಕ್ಕೆ ಪ್ರವೇಶಾನುಭವ ಗಳಿಸಿದರು. ಪ್ರಸಕ್ತ ಬೆಂಗಳೂರು ಹನುಮಂತನಗರದ ನಿವಾಸಿಯಾಗಿ ವಿಶ್ರಾಂತ ಜೀವನದಲ್ಲಿ ಸಾಹಿತ್ಯಾಸಕ್ತರಾಗಿ ಗ್ರಂಥಗಳ ಅಧ್ಯಯನ, ಸಾಹಿತ್ಯ ಚಿಂತನ ಮತ್ತು ಕನ್ನಡದಲ್ಲಿ ಕವನ/ಚುಟುಕ ಗಳ ರಚನೆ ಇತ್ಯಾದಿ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವರ್ಷಕ್ಕೊಮ್ಮೆ ಇಂಗ್ಲೆಂಡಿನ ನಾಟಿಂಗ್ ಹ್ಯಾಮ್ ನಲ್ಲಿರುವ ತಮ್ಮ ಮಗಳ ಮನೆಯಲ್ಲಿ ಕೆಲವು ಕಾಲ ವಾಸಿಸುತ್ತಾರೆ.

* * *

ಡಾ. ಶಿವ ಪ್ರಸಾದ್ ರವರ ಪ್ರಬಂಧ ಸಂಕಲನ, 'ಅಪ್ಪ ನೆಟ್ಟ ಆಲದ ಮರ' ವೈವಿಧ್ಯಮಯ ವಸ್ತುನಿಷ್ಠ ಬರಹಗಳೊಂದಿಗೆ ಮನೋಜ್ಞವಾಗಿ ಮೂಡಿಬಂದಿದೆ, ಜೊತೆಗೆ ಭಾವನಾತ್ಮಕ ಹಾಗೂ ತುಲನಾತ್ಮಕ ವಿಶ್ಲೇಷಣೆಗಳು ಸಹೃದಯ ಓದುಗರನ್ನು ಸಕಾರಾತ್ಮಕ ಚಿಂತನೆಗಳಿಗೀಡು ಮಾಡುವುದರಲ್ಲಿ ಸಫಲವಾಗಿವೆ.

ಈ ಸಂಕಲನದಲ್ಲಿ ಒಟ್ಟು 31 ಪ್ರಬಂಧಗಳಿದ್ದು, ಪ್ರತಿಯೊಂದೂ ತನ್ನ ವಿಶಿಷ್ಟ ಛಾಪಿನಿಂದ ಮುಖ್ಯವೆನಿಸಿ ಮನಸೆಳೆಯುತ್ತದೆ. ಕೆಲವು ಪ್ರಬಂಧಗಳಂತೂ ಓದುಗರ ಮನಸ್ಸಿನಲ್ಲಿ ಗಾಢವಾಗಿ ನೆಲೆಯೂರಿ ವಿಚಾರಾತ್ಮಕ ಪ್ರಜ್ಞೆಯನ್ನು ಪ್ರಚೋದಿಸುವಲ್ಲಿ ಸಫಲವಾಗಿವೆ. ಇಲ್ಲಿನ ಕೆಲವು ಪ್ರಬಂಧಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. 

ಹಿರಿಯರೂ, ಪೂಜ್ಯರೂ ಆದ ಕವಿ ನಾಡೋಜ ಶ್ರೀ ಜಿ. ಎಸ್. ಶಿವರುದ್ರಪ್ಪನವರ ನೆನಪಿನ ಕೆಲವು ಪ್ರಬಂಧಗಳು ಅವರ ವಿಶಾಲ ದೃಷ್ಟಿ, ಸಮನ್ವಯ ಭಾವ, ಮತ್ತು ಅವರ ಕವನ/ಕಾವ್ಯಗಳಲ್ಲಿನ ಪ್ರಬುದ್ಧ ಪರಿಪಕ್ವತೆ ಎಲ್ಲವೂ ಮನೋಜ್ಞವಾಗಿ, ಹಾಸುಹೊಕ್ಕಾಗಿ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುತ್ತವೆ. ಈ ವಿಚಾರಗಳನ್ನು ಲೇಖಕರು ಪೂರ್ವಾಗ್ರಹರಹಿತ ಪ್ರಬುದ್ಧತೆಯಿಂದ ಮಂಡಿಸಿದ್ದಾರೆ. 

ಕವಿ ಕವಿತೆ ಮತ್ತು ಭಾವಗೀತೆ ಎನ್ನುವ ಪ್ರಬಂಧದಲ್ಲಿ, ಕವಿತೆ ಎಂದರೇನು? ಎಂಬ ಪ್ರಶ್ನೆಗೆ ಉತ್ತರವನ್ನು ಸ್ಪಷ್ಟ ವಾಗಿಯೂ, ನಿರ್ದಿಷ್ಟವಾಗಿಯೂ, ಮನದಟ್ಟಾಗುವಂತೆ, ಅಕರ ಗ್ರಂಥ, ಕವನ/ಕಾವ್ಯಗಳಿಂದ ಪ್ರಬುದ್ಧ ಸಾಲುಗಳನ್ನುದ್ಧರಿಸಿ ವಿಶ್ಲೇಷಿಸಲಾಗಿದೆ. ಡಾ. ಜಿ. ಎಸ್. ಶಿವರುದ್ರಪ್ಪನವರ ಪ್ರೌಢ  ಗ್ರಂಥ ' ಕಾವ್ಯರ್ಥ ಚಿಂತನ' ದಿಂದ ಪ್ರಾರಂಭಿಸಿ ಇಂಗ್ಲೀಷ್ ಕವಿ ಕೋಲ್ರಿಡ್ಜ್, ಶೇಕ್ಸಪಿಯರ್, ಕನ್ನಡದ ರಸಕವಿ ಕುವೆಂಪು, ಮುಂತಾದವರ ಅನುಭವದ ಮೂಸೆಯಲ್ಲಿ ಪಕ್ವಗೊಂಡ ಭಾವ ಸಮ್ಮಿಳನ, ಕವಿ ಮನಸ್ಸಿನ ಒಳತೋಟಿ, ಕಾವ್ಯರಚನೆಗೊದಗುವ ಪ್ರಕೃತಿ ಸೌಂದರ್ಯೋಪಾಸನೆ, ವಸ್ತು ವಿಶೇಷ, ಕಾವ್ಯದಲ್ಲಿ ಅಲಂಕಾರ, ರೂಪಕಗಳ/ಪ್ರತಿಮೆಗಳ ಉಪಯೋಗ ಮುಂತಾದವುಗಳನ್ನು ವಿಸ್ತಾರವಾಗಿ ಚರ್ಚಿಸಲಾಗಿದೆ. ಇವೆಲ್ಲವುಗಳ ಜೊತೆಗೆ ಅಧುನಿಕ ಭಾವಗೀತೆಗಳುದಯ, ಅವುಗಳು ಹಂತ ಹಂತವಾಗಿ ಮಹಾಕಾವ್ಯವಾದ ವಿಸ್ತಾರವನ್ನು ಪಡೆಯಬಹುದಾದ ಸಾಧ್ಯತೆ ಇತ್ಯಾದಿ ವಿವರಗಳನ್ನು ಡಾ. ಪ್ರಭುಶಂಕರ ರವರ ಉದ್ಗ್ರಂಥ 'ಕನ್ನಡದಲ್ಲಿ ಭಾವಗೀತೆ' ಯಿಂದ ಆಯ್ದ ಸಾಲುಗಳ ಸಹಾಯದಿಂದ ವಿಶದೀಕರಿಸಲಾಗಿದೆ.

ವೃತ್ತಿಯಲ್ಲಿ ವೈದ್ಯರಾದ (ಮಕ್ಕಳ ತಜ್ಞರು) ಲೇಖಕರು, ತಮ್ಮ ವಿಶೇಷ ಪರಿಣಿತಿ ಮತ್ತು ಅನುಭವದಿಂದ ಮಕ್ಕಳ ನಟ್ಸ್ ಅಲರ್ಜಿ ಬಗ್ಗೆ ಬರೆದ ಪ್ರಬಂಧ ('ಹಲ್ಲಿದ್ದವರಿಗೆ ಕಡಲೆ ಇಲ್ಲ...') ವೈದ್ಯಕೀಯ ವಿಷಯಗಳನ್ನು ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾಗುವರೀತಿ ವಿವರಿಸಿದ್ದಾರೆ. 

'ನಾಗರಿಕ ಸಮಾಜದ ಕರಾಳ ಚಹರೆ' ಎಂಬ ಪ್ರಬಂಧದಲ್ಲಿ ಮಕ್ಕಳ ಶೋಷಣೆ (ಚೈಲ್ಡ್ ಅಬ್ಯುಸ್) ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ವಿಷಯ ಪರಿಣಿತರಿಗೆ ಮಾಹಿತಿ ಮತ್ತು ನಿರೂಪಣೆ ಸುಲಭ. ಪರಿಣತರಲ್ಲದವರಿಗೆ ವಿಷಯ ಸಂಗ್ರಹಣೆ ಮತ್ತು ನಿರೂಪಣೆ ಕಷ್ಟ ಸಾಧ್ಯವೆನಿಸಬಹುದು. ಈ ರೀತಿಯ ವಿಷಯ ಪರಿಣಿತ ಲೇಖಕರು ನಮ್ಮಲ್ಲಿ ವಿರಳ. ಇಂಥಹ ಲೇಖಕರ ಸಂಖ್ಯೆ ಬೆಳೆಯಬೇಕು.

ಧರ್ಮ ನಿರಪೇಕ್ಷತೆಯ (Secularism) ಬಗೆಗಿನ ಪ್ರಬಂಧಗಳಾದ 'ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆ', 'ಇಂಗ್ಲೆಂಡ್ ಜನತೆಯ ಧರ್ಮ ನಿರಾಸಕ್ತಿ...' ಮುಂತಾದವುಗಳಲ್ಲಿ ಮತ/ಧರ್ಮಗಳಾಚರಣೆ ನಂಬಿಕೆಗಳು ವೈಯುಕ್ತಿಕ ವಾಗಿರಬೇಕೆಂದೂ,  ನಿತ್ಯದ ವ್ಯವಹಾರಗಳಲ್ಲಿ ಬೆರಸಿ ಪಕ್ಷಪಾತ ಭಾವನೆ ಸಲ್ಲದೆಂಬ ವಾದವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಲಾಗಿದೆ.  'ನಮ್ಮ ನಿಮ್ಮ ಪ್ರೊಫೆಸರ್ ನಿಸಾರ್ ಅಹಮದ್' ಎಂಬ ಲೇಖನದಲ್ಲಿ ಪ್ರತಿಭಾವಂತ ಕವಿಯೊಬ್ಬರ ಪರಕೀಯ ಭಾವ ಹಾಗೂ ಅನಾಥ ಪ್ರಜ್ಞೆಯ ಲಕ್ಷಣಗಳನ್ನು ಗುರುತಿಸಿ, ವಲಸಿಗರೂ ಕೂಡ ಇಂತಹಾ ಮನಸ್ಥಿತಿ/ಭಾವನೆಗಳಿಂದ ತೊಳಲಾಡುವ ಪರಿಸ್ಥಿತಿಯನ್ನು ಮನೋಜ್ಞವಾಗಿ ವರ್ಣಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಹಾರೋಪಾಯವಾಗಿ ಬಸವತತ್ವಗಳನುಷ್ಠಾನ ಸಮಯೋಚಿತವಾಗಿರುವುದನ್ನು ಅವರ ಕೆಲವು ವಚನಗಳ ಆಧಾರದಿಂದ ಸ್ಪಷ್ಟವಾಗಿ ಮೂಡಿಸಲಾಗಿದೆ ('ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ' ಎಂಬ ಪ್ರಬಂಧ).

'ವಲಸೆ ಎಂಬ ಕನಸಿನಲ್ಲಿನ ನೋವು ನಲಿವುಗಳು' - ಈ ಪ್ರಬಂಧದಲ್ಲಿ ವಲಸೆಗಾರರ ಒಳತೋಟಿ, ಆಳವಾಗಿ ಬೇರೂರಿದ ಸ್ವದೇಶಪ್ರೇಮ, ಹೊಸ ಪರಿಸರದಲ್ಲಿ ಹೊಂದಾಣಿಕೆಯ ಕಷ್ಟ, ಅನಿವಾಸಿಗಳ ದ್ವಂದ್ವ ಮನೋವಿನ್ಯಾಸದ ಹೊಳಹು ಇತ್ಯಾದಿ ವಿಷಯಗಳನ್ನು ಕೂಲಂಕುಶವಾಗಿ ಚರ್ಚಿಸಿ, ದೇಶ ವಿದೇಶಗಳ ಗಡಿತೊಡೆದು 'ವಿಶ್ವಮಾನವ ಸಂಸ್ಕೃತಿ' ಮತ್ತು ಭಾವನೆಗಳನ್ನು ಬೆಳಸಿಕೊಳ್ಳಬೇಕಾಗಿರುವುದನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.

ಪ್ರವಾಸ ಕಥನ ಮತ್ತದರ ಮೇಲಿನ ಸೃಜನಾತ್ಮಕ ವಿಮರ್ಶೆಗಳ ಬಗ್ಗೆ ಬರೆದಿರುವ ಲೇಖನಗಳು, ' ಲೇಕ್ ಡಿಸ್ಟ್ರಿಕ್ಟಿನ ಶಿಖರಗಳಲ್ಲಿ ' ಮತ್ತು ' ನೋಟಗಳ ನಡುವಿನ ನಿರ್ದಿಷ್ಟ ನಿಲುವುಗಳು '. ಮೊದಲ ಪ್ರಬಂಧದಲ್ಲಿ ಲೇಖಕ ದಂಪತಿಗಳ ಪ್ರಕೃತಿ ಸೌಂದರ್ಯೋಪಸನಾ ಪ್ರಜ್ಞೆ  ಮತ್ತು  ಪ್ರವಾಸಪ್ರಿಯತೆಗಳಿಗೆ ಕೈಗನ್ನಡಿಯಂತಿದೆ. ಇಂಗ್ಲೆಂಡ್ ನಲ್ಲಿಯ ಲೇಕ್ ಡಿಸ್ಟ್ರಿಕ್ಟ್ ನ ಸುಂದರ ಪರಿಸರ, ಮೇರು ಪರ್ವತ ಶ್ರೇಣಿ ಲ್ಯಾಂಗ್ ಡೇಲ್ ಪೈಕ್, ಸ್ಕೆಲ್ವಿಥ್ ಫೋರ್ಸ್ (ಜಲಪಾತ), ಚೇತೋಹಾರಿ ವಿಂಡರ್ ಮಿಯರ್  ಬಟರ್ ಮಿಯರ್ ಮತ್ತು ಮನೋಹರ ತಾಣ ಎಲ್ಟರ್ ವಾಟರ್ ಸರೋವರಗಳು, ಮತ್ತಿತರ ಸ್ಥಳಗಳ ವರ್ಣನೆ ಕಣ್ಣಿಗೆ ಕಟ್ಟಿದಂತಿದೆ. ಎರಡನೆಯ ಪ್ರಬಂಧದಲ್ಲಿ ಡಾ॥ ಕೆ. ಮರುಳ ಸಿದ್ದಪ್ಪ (ಕೆ. ಎಂ. ಎಸ್.) ಅವರ ಪ್ರವಾಸ ಕಥನದ ಪುಸ್ತಕದ ಬಗೆಗಿನ ಲೇಖರ ಅನಿಸಿಕೆಗಳನ್ನು ದಾಖಲಿಸುತ್ತಾ, ಶ್ರೀ ಜಿ. ಎಸ್. ಎಸ್. ಅವರ 'ಇಂಗ್ಲೆಂಡಿನಲ್ಲಿ ಚತುರ್ಮಾಸ' ಎಂಬ ಪ್ರವಾಸ ಕಥನದ ಪುಸ್ತಕದ ಬಗ್ಗೆ ಹೇಳುತ್ತಾ, ಇಳಿ ವಯಸ್ಸಿನಲ್ಲೂ ಪ್ರವಾಸ ಪ್ರಿಯರಾಗಿದ್ದುದು ಮತ್ತವರ ಪ್ರವಾಸ ಪ್ರಿಯರಲ್ಲದವರ ನಿರುತ್ಸಾಹ ' ವಿನಾಯಕ ಪ್ರಜ್ಞೆ ' ಎಂಬ ಉಲ್ಲೇಖ  ನೆನಪಿಸಿಕೊಂಡು ಹೊಸ ಭಾಷಾವೈಶಿಷ್ಟ ವೊಂದನ್ನು ಛಾಪಿಸಿದ್ದಾರೆ.

ವ್ಯಕ್ತಿ ಚಿತ್ರ (ಪರಿಚಯಾತ್ಮಕ) ಲೇಖನಗಳಾದ  'ನನ್ನ ನೆನಪಿನಲ್ಲಿ ಮಾಸ್ಟರ್ ಹಿರಣ್ಣಯ್ಯ' ಮತ್ತು ' ಪ್ರಧಾನಿ ರಿಷಿ ಸುನಾಕ್ - ಬ್ರಿಟನ್ ಕಂಡ ಅಪೂರ್ವ ಪ್ರತಿಭೆ', ಸುಂದರವಾಗಿ ಮೂಡಿ ಬಂದಿವೆ. ಮೊದಲ ಪ್ರಬಂಧದಲ್ಲಿ ಕೊನೆಯಲ್ಲಿ ಉದ್ಧರಿತ ಮಾಸ್ಟರ್ ಹಿರಣ್ಣಯ್ಯನವರ ಉಲ್ಲೇಖ ಅವರ ಸರಳ ವ್ಯಕ್ತಿತ್ವಕ್ಕೆ ಸಂದರ್ಭೋಚಿತವಾಗಿ ಹೊಂದಿಕೊಂಡಿದೆ. ಎರಡನೆಯ ಪ್ರಬಂಧದಲ್ಲಿ ಆಂಗ್ಲ ಜನಾಂಗದ ಹೊರಗಿನ ಭಾರತೀಯ ಮೂಲದ ಒಬ್ಬ ವ್ಯಕ್ತಿ ಬ್ರಿಟನ್ನಿನ ಪ್ರಧಾನಿ ಪಟ್ಟಕ್ಕೇರಿರುವುದು, ಆ ದೇಶದಲ್ಲಿನ ಜನರ ವಿಶಾಲ ಮನೋಭಾವ, ಅಲ್ಲಿ ವ್ಯಕ್ತಿಗತ  ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಸಿಗುವ ಮಹತ್ವಗಳನ್ನು ಬಿಂಬಿಸುತ್ತವೆ. ಲೇಖಕರು ಜಗತ್ತಿನ ಇಂತಹ ಇನ್ನಿತರ ರಾಜಕೀಯ ನಾಯಕರ ಉದಾಹರಣೆ ನೀಡುತ್ತಾ ಮತ್ತೊಮ್ಮೆ  'ವಿಶ್ವ ಮಾನವ ಸಂಸ್ಕೃತಿ'ಯನ್ನು ವಿಶ್ಲೇಷಿಸುತ್ತಾರೆ.

 ವಿಮರ್ಶಾತ್ಮಕ ಲೇಖನಗಳಾದ 'ಬಳ್ಳಿಗೆ ಕಾಯಿ ಭಾರವೆ' ಮತ್ತು 'ಬಾಂಬೆ ಬೇಗಂ' ಕ್ರಮವಾಗಿ ಚಲನಚಿತ್ರ ಹಾಗೂ ದೂರದರ್ಶನದ ಧಾರಾವಾಹಿಗಳ ಸೃಜನಶೀಲವಾದ ಬರಹಗಳಾಗಿವೆ. ಲೇಖಕರ ಮಾನವೀಯ ಕಾಳಜಿಗಳ ಅನಾವರಣವಾಗಿವೆ.

ಇನ್ನಳಿದ ಪ್ರಬಂಧಗಳೆಲ್ಲವೂ ಆಸಕ್ತಿದಾಯಕವಾಗಿದ್ದು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಈ ಪ್ರಬಂಧಗಳಲ್ಲಿ ಎಲ್ಲೆಲ್ಲೂ ಲೇಖಕರ ಕನ್ನಡ ಪ್ರೇಮ ಹಾಸುಹೊಕ್ಕಾಗಿ ಸೇರಿದೆ.

ವಿವಿಧ ವಸ್ತು ವಿಷಯಗಳನ್ನೊಳಗೊಂಡಿರುವ ಈ ಪ್ರಬಂಧಗಳು ಲೇಖಕರ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಸಫಲವಾಗಿವೆ.

***