ಚುನಾವಣೆ ಮತ್ತು ಪ್ರಜಾಪ್ರಭುತ್ವ; ಕೆಲವು ಅನಿಸಿಕೆಗಳು

ಡಾ ಜಿ .ಎಸ್. ಶಿವಪ್ರಸಾದ್

ಬ್ರಿಟನ್ ದೇಶವನ್ನು ಒಳಗೊಂಡು ಪ್ರಪಂಚದ ಹಲವಾರು ರಾಷ್ಟ್ರಗಳಲ್ಲಿ ಈ ವರ್ಷ ಚುನಾವಣೆ ನಡೆಯುತ್ತಿದೆ. ಚುನಾವಣೆಯ ಬಗ್ಗೆ ಎಂದಿಗಿಂತ ಇಂದು ಎಲ್ಲರಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂದು ತೋರುತ್ತದೆ. ಸುದ್ದಿ ಮಾಧ್ಯಮ, ಸೋಶಿಯಲ್ ಮೀಡಿಯಾಗಳಲ್ಲಿ ನಿರಂತರವಾಗಿ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂಗ್ಲೆಂಡಿನ ಡಿಸೆಂಬರ್ ತಿಂಗಳಲ್ಲಿ ಹೇಗೆ  ಕ್ರಿಸ್ಮಸ್ ಹಬ್ಬದ ಸಡಗರ  ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೆ ಈಗ ಚುನಾವಣೆ ಬಿಸಿಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಅನಿವಾಸಿ ತಾಣದಲ್ಲೂ ಅದರ ಬಿಸಿ ನಿಮಗೆ ನನ್ನ ಈ ಲೇಖನದ ಮೂಲಕ ತಾಗುತ್ತಿರಬಹುದು. ಚುನಾವಣೆ ಮತ್ತು ಪ್ರಜಾಪ್ರಭುತ್ವ ಈ ಎರಡೂ ವಿಷಯಗಳ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇಲ್ಲಿ ಬ್ರಿಟನ್ ಚುನಾವಣೆಯಲ್ಲದೆ ಒಂದು ಗ್ಲೋಬಲ್ ಪೆರ್ಸ್ಪೆಕ್ಟಿವ್ ಒದಗಿಸುವ ಪ್ರಯತ್ನ ಮಾಡಲಾಗಿದೆ. ಸ್ವಲ್ಪ ದೀರ್ಘವಾದ ಲೇಖನ, ಬಿಡುವಿನಲ್ಲಿ ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. 
-ಸಂ
2024, ಚುನಾವಣೆಗಳ ಹಿನ್ನೆಲೆಯಲ್ಲಿ ನೆನಪಿಡಬೇಕಾದ ಸಂವತ್ಸರ. ಈ ವರುಷ 64 ರಾಷ್ಟ್ರಗಳಲ್ಲಿ ಚುನಾವಣೆ
ನಡೆಯುತ್ತಿದೆ. ಒಟ್ಟಾರೆ ಪ್ರಪಂಚದ ಅರ್ಧ ಜನಸಂಖ್ಯೆ (49%) ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರೆ ಈ ಕಾಲಘಟ್ಟ ರಾಜಕೀಯವಾಗಿ ಮಹತ್ವವಾದದ್ದು. ರಷ್ಯಾ, ದಕ್ಷಿಣ ಆಫ್ರಿಕಾ, ಮೆಕ್ಸಿಕೋ, ಇಂಡಿಯಾ, ಬಾಂಗ್ಲಾದೇಶ, ಮತ್ತು ಪಾಕಿಸ್ತಾನದಲ್ಲಿ ಚುನಾವಣೆ ಮುಗಿದಿದೆ. ಬ್ರಿಟನ್ನಿನಲ್ಲಿ ಜುಲೈ ನಾಲ್ಕನೇ ತಾರೀಕು ಜನ ಮತ ನೀಡಲಿದ್ದಾರೆ. ಅಮೇರಿಕದಲ್ಲಿ ನವೆಂಬರ್ ಐದನೇ ತಾರೀಕು ಚುನಾವಣಾ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡೆ ಇನ್ನು ಕೆಲವೇ ವಾರಗಳಲ್ಲಿ ಶುರುವಾಗಬೇಕು ಈ ಮಧ್ಯೆ ಅಲ್ಲಿಯ ಅಧ್ಯಕ್ಷರಾದ ಮಕರೂನ್ ಅವರು ಹಠಾತ್ತನೆ ಎಲೆಕ್ಷನ್ ಘೋಷಿಸಿ ಜೂನ್ ಕೊನೆ ಮತ್ತು ಜುಲೈ ಶುರುವಿನಲ್ಲಿ ಚುನಾವಣೆಗೆ ಕರೆ ನೀಡಿದ್ದಾರೆ. 2024ರಲ್ಲಿ ಇಲ್ಲಿ ಪಟ್ಟಿಮಾಡಲಾಗದಷ್ಟು ರಾಷ್ಟ್ರಗಳು ಚುನಾವಣೆಯಲ್ಲಿ ಭಾಗವಹಿಸುತ್ತಿದೆ.

ಬ್ರಿಟನ್ನಿನ ಪ್ರಜಾಪ್ರಭುತ್ವ ಮತ್ತು ಪಾರ್ಲಿಮೆಂಟ್ ವ್ಯವಸ್ಥೆಯನ್ನು "ಮದರ್ ಆಫ್ ಪಾರ್ಲಿಮೆಂಟ್ಸ್” ಎಂದು ಭಾವಿಸಲಾಗಿದೆ. ಇದಕ್ಕೆ ಇಲ್ಲಿಯ ಕೆಲವು ಐತಿಹಾಸಿಕ ಹಿನ್ನೆಲೆಗಳು ಕಾರಣವಾಗಿದೆ. 1215ರಲ್ಲಿ ಮ್ಯಾಗ್ನಕಾರ್ಟ ಎಂಬ ದಾಖಲೆಯನ್ನು ಲಂಡನ್ ಸಮೀಪದ ರನ್ನಿಮೀಡ್ ಎಂಬ ಪ್ರದೇಶದಲ್ಲಿ ಮೊದಲು ಬರೆಯಲಾಯಿತು. ಎಲ್ಲರಿಗು ತಿಳಿದ ಮಟ್ಟಿಗೆ ಇದು ಪಾರ್ಲಿಮೆಂಟ್ ಮತ್ತು ಪ್ರಜಾಪ್ರಭುತ್ವದ ಮೊದಲ ಕಲ್ಪನೆ. ಅಂದಹಾಗೆ ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಹುಟ್ಟುಹಾಕಿದ ಅನುಭವ ಮಂಟಪ ಕೂಡ ಒಂದು ರೀತಿ ಪ್ರಜಾಪ್ರಭುತ್ವದ ಪರಿಕಲ್ಪನೆ ಎಂದು ಭಾವಿಸಲಾಗಿದೆ. ಇಂಗ್ಲೆಂಡಿನಲ್ಲಿ ಆಗಿನ ಕಾಲಕ್ಕೆ ರಾಜರು ಕೂಡ ನ್ಯಾಯಕ್ಕೆ ಬದ್ಧರಾಗಿರಬೇಕು, ಅದನ್ನು ಗೌರವಿಸಿ ಆಡಳಿತ ನಡೆಸಬೇಕು ಎಂಬ ವಿಚಾರವನ್ನು ಮ್ಯಾಗ್ನ ಕಾರ್ಟದಲ್ಲಿ ಪ್ರಸ್ತಾಪಿಸಲಾಗಿದೆ. 1264ರಲ್ಲಿ ಸೈಮನ್ ಡಿ ಮೊಂಟ್ಫಾರ್ಡ್ ಎಂಬ ರಾಜ ತನ್ನ ಆಳ್ವಿಕೆಯಲ್ಲಿ ಸರಿ-ತಪ್ಪುಗಳನ್ನು ಚರ್ಚಿಸಲು ಜನರ ಪ್ರತಿನಿಧಿಗಳನ್ನು ಆಹ್ವಾನಿಸಿದ್ದು ಈ ಮ್ಯಾಗ್ನ ಕಾರ್ಟ ಹಿನ್ನೆಲೆಯಲ್ಲೇ ಎಂದು ಇತಿಹಾಸ ಹೇಳುತ್ತದೆ. 18ನೇ ಶತಮಾನದಲ್ಲಿ ಬ್ರಿಟನ್ನಿನ ಪಾರ್ಲಿಮೆಂಟ್ ಸಾಕಷ್ಟು ಪರಿಶೀಲನೆಗೊಂಡಿತು. 1605ರಲ್ಲಿ ಮೊದಲನೇ ಜೇಮ್ಸ್ ದೊರೆ ಕ್ಯಾಥೋಲಿಕ್ ಕ್ರಿಶ್ಚಿಯನ್ ಗಳಿಗೆ ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ವೆಸ್ಟ್ ಮಿನಿಸ್ಟರ್ ಅರಮನೆಯಲ್ಲಿ ನಡೆಯಬೇಕಾಗಿದ್ದ ಪಾರ್ಲಿಮೆಂಟ್ ಸಭೆಯನ್ನು ಗನ್ ಪೌಡರ್ ಬಳಸಿ ಸ್ಫೋಟ ಗೊಳಿಸಿ ಕೊಲೆ ಮತ್ತು ಹಿಂಸೆಯ ಸಂಚನ್ನು ಕೆಲವು ಕ್ರಾಂತಿಕಾರರು ಹೂಡಿದ್ದರು. ಅದೃಷ್ಟವಶತ್ ಈ ಸುದ್ದಿ ಬಹಿರಂಗಗೊಂಡು ಈ ಭಯೋತ್ಪಾದಕರನ್ನು ಗುರುತಿಸಿ ಅದರ ನಾಯಕನಾದ ಗೈ ಫ್ಯಾಕ್ಸ್ ಎಂಬ ವ್ಯಕ್ತಿಗೆ ಗಲ್ಲು ಶಿಕ್ಷೆಯಾಯಿತು. ಪಾರ್ಲಿಮೆಂಟ್ ವ್ಯವಸ್ಥೆಯ ಉಳಿವನ್ನು ನವೆಂಬರ್ 5ನೇ ತಾರೀಕು ರಾಷ್ಟ್ರೀಯ ದಿನಾಚರಣೆಯಾಗಿ ಅಂದಿನಿಂದ ಇಂದಿನವರೆಗೂ ಆಚರಿಸಲಾಗುತ್ತದೆ.

ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯುತ್ತಿರುವ ಬ್ರಿಟನ್ನಿನಲ್ಲಿ ಸಡಗರ, ಸಂಭ್ರಮ, ಕಾತರತೆ ಹೆಚ್ಚಾಗಿದೆ. ಸುದ್ದಿಮಾಧ್ಯಮಗಳು ಎಲೆಕ್ಷನ್ ವಿಚಾರವನ್ನು ವಿಶ್ಲೇಷಿಸುವುದರಲ್ಲಿ ನಿರತವಾಗಿದೆ. 650 ಎಂಪಿಗಳ ಸ್ಥಾನಕ್ಕೆ ಸ್ಪರ್ಧೆ ನಡೆಯುತ್ತಿದೆ. ಕಳೆದ 2019 ಚುನಾವಣೆಯಲ್ಲಿ 47.5 ಮಿಲಿಯನ್ ಜನರು ಭಾಗವಹಿಸಿದ್ದರು. ಅದೇ ಭಾರತದಲ್ಲಿ 543 ಸ್ಥಾನಕ್ಕೆ ಸ್ಪರ್ಧೆ ನಡೆದು 968 ಮಿಲಿಯನ್ ಜನರು ಮತ ನೀಡಿದ್ದಾರೆ ಎಂಬುದನ್ನು ಇಲ್ಲಿ ಹೋಲಿಕೆಗಾಗಿ ಪ್ರಸ್ತಾಪಿಸಲಾಗಿದೆ. ಬ್ರಿಟನ್ನಿನಲ್ಲಿ ಕಳೆದ 14 ವರ್ಷಗಳಿಂದ ಕನ್ಸರ್ವೇಟಿವ್ ಪಕ್ಷ ಮೂರು ಚುನಾವಣೆಗಳನ್ನು ಗೆದ್ದು ಅಧಿಕಾರದಲ್ಲಿದೆ. ಈ ಒಂದು ಅವಧಿಯಲ್ಲಿ ಐದು ಪ್ರಧಾನಿಗಳನ್ನು ಕಂಡಿದೆ. ಇವರ ಆಡಳಿತದಲ್ಲಿ ಬ್ರೆಕ್ಸಿಟ್ ಸಂಭವಿಸಿದ್ದು ಇಲ್ಲಿಯ ಬಲಪಂಥ ರಾಷ್ಟ್ರವಾದಿಗಳಿಗೆ ಹೆಮ್ಮೆಯ ವಿಷಯವಾದರೂ ಬ್ರೆಕ್ಸಿಟ್ ತಂದಿಟ್ಟಿರುವ ಸಮಸ್ಯೆಗಳನ್ನು ಈಗ ಎದುರಿಸುತ್ತಿದ್ದೇವೆ. ಬ್ರೆಕ್ಸಿಟ್ ನಂತರದ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷ ಬಹುಮತದಿಂದ ಆಯ್ಕೆಯಾಗಿ ಬೋರಿಸ್ ಜಾನ್ಸನ್ ಪ್ರಬಲವಾದ ಪ್ರಧಾನಿಯಂತೆ ಕಂಡುಬಂದರು. 2020 ಸಂವತ್ಸರದ ಹೊತ್ತಿಗೆ ವಿಶ್ವವನ್ನೇ ವ್ಯಾಪಿಸಿದ ಕೋವಿಡ್ ಪಿಡುಗು ಬರಿಯ ಅರೋಗ್ಯ ಸಮಸ್ಯೆಯಾಗದೆ ಅದು ರಾಜಕೀಯ ಸಮಸ್ಯೆಯಾಗಿಯೂ ಪರಿಣಮಿಸಿತು. ಬೋರಿಸ್ ಜಾನ್ಸನ್ ಅವರೇ ಕೋವಿಡ್ ಖಾಯಿಲೆಯಿಂದ ಸಾವಿನ ಅಂಚಿಗೆ ಹೋಗಿ ಬರಬೇಕಾಯಿತು. ಕೋವಿಡ್ ಪಿಡುಗಿನ ಮಧ್ಯದಲ್ಲಿ ಬೋರಿಸ್ ತಮ್ಮ ಕಚೇರಿಯಲ್ಲಿ ಒಂದು ಸಣ್ಣ ಪಾರ್ಟಿ ಇಟ್ಟುಕೊಂಡು ವೈನ್ ಮತ್ತು ಚೀಸ್ ಸೇವಿಸಿದ್ದು ಅದು ಕೋವಿಡ್ ನಿರ್ಬಂಧದ ಉಲ್ಲಂಘನೆಯಾಗಿ ಈ "ಪಾರ್ಟಿಗೇಟ್" ಹಗರಣ ಒಂದು ದೊಡ್ಡ ಅಪರಾಧವಾಗಿ ಬೋರಿಸ್ ರಾಜೀನಾಮೆ ನೀಡಬೇಕಾಯಿತು. ಈ ಘಟನೆಯನ್ನು ಗಮನಿಸಿದಾಗ ಬೇರೆ ದೇಶಗಳಲ್ಲಿ ಸರ್ಕಾರ ಕೋವಿಡ್ ನಿರ್ಬಂಧನೆಗಳನ್ನು ಗಾಳಿಗೆ ತೂರಿರುವ ಪ್ರಸಂಗಗಳಿವೆ; ಭಾರತದಲ್ಲಿ ಕೋವಿಡ್ ಅತಿಯಾಗಿರುವ ಸಮಯದಲ್ಲಿ ಪ್ರಧಾನಿಯವರು ಸಹಸ್ರಾರು ಜನರು ಕುಂಭಮೇಳವನ್ನು ಆಚರಿಸಲು ಅನುಮತಿ ಕೊಟ್ಟರಲ್ಲವೇ? ಆ ಹಿನ್ನೆಲೆಯಲ್ಲಿ ಅವರು ರಾಜಿನಾಮೆ ನೀಡಬೇಕಾಗಿತ್ತಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಅಮೇರಿಕ ಅಧ್ಯಕ್ಷ ಟ್ರಂಪ್ ಕೂಡ ಕೋವಿಡ್ ನಿರ್ಬಂಧನೆಗಳನ್ನು ಉಲ್ಲಂಘಿಸಿರುವ ಸನ್ನಿವೇಶಗಳಿವೆ. ಒಂದೊಂದು ದೇಶದಲ್ಲಿ ಈ ನೈತಿಕ ಹೊಣೆಗಾರಿಕೆ ಮತ್ತು ರಾಜಕೀಯ ಮೌಲ್ಯಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಓದುಗರು ಗಮನಿಸಬಹುದು. ಬ್ರಿಟನ್ ಕೆಲವು ಆದರ್ಶಗಳನ್ನು ತಾನು ಅನುಸರಿಸುತ್ತಿದ್ದು ಇತರ ದೇಶಗಳಿಗೆ ಮಾದರಿಯಾಗಿದೆ. ಇದು ಶ್ಲಾಘನೀಯವಾದ ವಿಷಯ. ಕೋವಿಡ್ ತಂದ ಆರ್ಥಿಕ ತೊಂದರೆಗಳು ಮತ್ತು ರಷ್ಯಾ-ಯುಕ್ರೈನ್ ಯುದ್ಧ ಅನೇಕ ತೊಡಕುಗಳನ್ನು ತಂದು ಕನ್ಸರ್ವೇಟಿವ್ ಪಕ್ಷ ಬಲಹೀನವಾಯಿತು. ಇದರ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಕ್ಷದೊಳಗೆ ಬಿರುಕುಗಳು, ಒಳಜಗಳಗಳು ಶುರುವಾದವು. ಬ್ರಿಟನ್ನಿನಲ್ಲಿ ಹಣದುಬ್ಬರ 11% ವರೆಗೂ ಹೆಚ್ಚಿ ದಿನನಿತ್ಯ ಬದುಕು (ಕಾಸ್ಟ್ ಆಫ್ ಲಿವಿಂಗ್) ತೊಂದರೆಗಳು ಉಂಟಾದವು. ಅದನ್ನು ರಿಷಿ ಸುನಾಕ್ ಅವರು ಯಶಸ್ವಿಯಾಗಿ ನಿಭಾಯಿಸಿದರೂ ಬರಲಿರುವ ಚುನಾವಣೆಯಲ್ಲಿ ಅವರು ಗೆದ್ದು ಬರುವ ಸಾಧ್ಯತೆ ಕಡಿಮೆ ಎಂದು ಜನಾಭಿಪ್ರಾಯ ಸಮೀಕ್ಷೆ ವರದಿಮಾಡಿವೆ.

ಒಂದು ಚುನಾವಣೆಯಲ್ಲಿ ಜನರಿಗೆ ಯಾವ ಅಂಶಗಳು ಮುಖ್ಯವಾಗುತ್ತವೆ ಎನ್ನುವುದು ಸ್ವಾರಸ್ಯಕರವಾಗಿದೆ. ಜನರಿಗೆ ಒಂದು ಪಕ್ಷದ ಸಾಮಾಜಿಕ ಧೋರಣೆಗಳು ಮುಖ್ಯವೋ? ಪಕ್ಷದ ಮಹಾನ್ ನಾಯಕನ ವರ್ಚಸ್ಸು ಮುಖ್ಯವೋ? ಪ್ರಜಾ ಪ್ರಭುತ್ವ ಮೌಲ್ಯಗಳು ಮತ್ತು ಸಂವಿಧಾನ ರಕ್ಷಣೆ ಮುಖ್ಯವೋ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಇವೆಲ್ಲವನ್ನೂ ಮೀರಿ ಜನರು ತಮ್ಮ ದಿನ ನಿತ್ಯ ಬದುಕಿನ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬಲ್ಲ ರಾಜಕೀಯ ಪಕ್ಷಕ್ಕೆ ಮತ ನೀಡುವುದು ಸಹಜ. ಸಮಸ್ಯೆ ಎನ್ನುವುದು ವೈಯುಕ್ತಿಕ ಗ್ರಹಿಕೆ. ಬಡವರಿಗೆ ಹಸಿವು, ಮಾಳಿಗೆ, ಉದ್ಯೋಗ ಮತ್ತು ದಿನ ನಿತ್ಯ ಬದುಕೇ ಒಂದು ಸಮಸ್ಯೆಯಾದರೆ, ಹೊಟ್ಟೆ ತುಂಬಿದ ಮಧ್ಯಮ ವರ್ಗದವರ ಸಮಸ್ಯೆಯೇ ಬೇರೆ. ಶ್ರೀಮಂತರ ಸಮಸ್ಯೆ ಬೇರೆಯೇ ಆಗಿರುತ್ತದೆ. ಅದು ತೆರಿಗೆಗೆ ಸಂಬಂಧಿಸಿರುವ ವಿಷಯ ವಾಗಿರಬಹುದು. ವೈಯುಕ್ತಿಕ ನೆಲೆಯಲ್ಲಿ ಸಮಸ್ಯೆಗಳು ಒಂದು ರೀತಿಯದಾಗಿದ್ದರೆ ಸಾಮೂಹಿಕ ನೆಲೆಯಲ್ಲಿ; ಅಂತರಾಷ್ಟ್ರೀಯ ಘಟನೆಗಳು, ವಲಸೆ, ದೇಶದ ಗಡಿಗಳ ರಕ್ಷಣೆ, ಜಾಗತಿಕ ತಾಪಮಾನ ಸಮಸ್ಯೆಗಳಾಗಬಹುದು. ಜನರ ನಿರೀಕ್ಷೆ ಅಪೇಕ್ಷೆಗಳನ್ನು ಗುರುತಿಸಿ ಒಂದು ರಾಜಕೀಯ ಪಕ್ಷ ತನ್ನ ಆದ್ಯತೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಸೂಚಿಸಬೇಕು. ತಮ್ಮ ಪಕ್ಷ ಹೇಗೆ ಅದನ್ನು ನಿಭಾಯಿಸಲು ಅರ್ಹ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಬೇಕು. ಅಭ್ಯರ್ಥಿಗಳು ತಾವು ಹೇಗೆ ಇದಕ್ಕೆ ಪರಿಹಾರ ಕೊಡಬಹುದು ಎಂಬುದನ್ನು ಅವರು ಸಾಬೀತುಪಡಿಸಬೇಕು. ಇದಕ್ಕೆ ಪೂರಕವಾಗಿ ಚುನಾವಣಾ ಪ್ರಚಾರಕ್ಕೆ ಬೇಕಾದ ಸಮಯ ಮತ್ತು ಅವಕಾಶವನ್ನು ಆಡಳಿತವು ವ್ಯವಸ್ಥೆ ಮಾಡಿರುತ್ತದೆ. ಬ್ರಿಟನ್ ದೇಶವನ್ನು ಒಳಗೊಂಡು ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಟಿವಿ ಚುನಾವಣಾ ಚರ್ಚೆ ವ್ಯವಸ್ಥಿತವಾಗಿ ನಡೆಯುತ್ತದೆ. ಬ್ರಿಟನ್ನಿನಲ್ಲಿ ಈಗ ನಡೆಯುತ್ತಿರುವ ಟಿವಿ ಚರ್ಚೆ ಉತ್ತಮ ಗುಣಮಟ್ಟದ್ದಾಗಿದೆ. ಕನ್ಸರ್ವೇಟಿವ್ ಪಕ್ಷದ ಪ್ರಧಾನಿ ರಿಷಿ ಸುನಾಕ್ ಮತ್ತು ಲೇಬರ್ ಪಕ್ಷದ ಕಿಯರ್ ಸ್ಟಾರ್ಮರ್ ಅವರ ನಡುವಿನ ಚರ್ಚೆ ಸ್ವಾರಸ್ಯಕರವಾಗಿತ್ತು, ಬಹಳ ಸಭ್ಯವಾಗಿ ಘನವಾಗಿತ್ತು. ಈ ಚರ್ಚೆಗಳಲ್ಲಿ ಕೆಲವೊಮ್ಮೆ ಮಾತುಗಳ ಅತಿಕ್ರಮಣವಾದಾಗ, ಉದ್ವೇಗ ಹೆಚ್ಚಿದಾಗ ಅದನ್ನು ನಿಯಂತ್ರಿಸುವ ಹಿರಿಯ ಪತ್ರಕರ್ತರು ಅಭ್ಯರ್ಥಿಗಳಗೆ (ದೇಶದ ಪ್ರಧಾನಿಯಾದರೂ) ಎಚ್ಚರಿಕೆ ನೀಡುವಷ್ಟು ಪ್ರಬಲರಾಗಿರುತ್ತಾರೆ. ಅದೇ ಭಾರತದಲ್ಲಿ ಪ್ರಧಾನಿ ಎಂದಕೂಡಲೇ ಅವರನ್ನು ದೇವರಂತೆ ಕಾಣುತ್ತೇವೆ. ಅವರು ಪ್ರಶ್ನಾತೀತರು ಎಂಬ ಭಾವನೆಯಲ್ಲಿ ಸಂದರ್ಶನಗಳು ನಡೆಯುತ್ತವೆ. ಭಾರತದಲ್ಲಿ ಆಳುವ ಪಕ್ಷ, ವಿರೋಧ ಪಕ್ಷ ಮುಖಾ-ಮುಖಿ ಸಂವಾದದಲ್ಲಿ ತೊಡಗುವುದು ಬಹಳ ಕಷ್ಟ. ಅಲ್ಲಿ ಸ್ವಾಭಿಮಾನ ಮತ್ತು ಪ್ರತಿಷ್ಠೆಗಳ ಸಂಘರ್ಷಣೆಯಾಗಿ, ರಣ-ರಂಗವಾಗಿ ಮಾರ್ಪಾಡಾಗಬಹುದು. ಪರಸ್ಪರ ವಿಶ್ವಾಸ ಮತ್ತು ಗೌರವವನ್ನು ರಾಜಕಾರಣಿಗಳು ಉಳಿಸಿಕೊಂಡರೆ ಅಲ್ಲಿ ಒಂದು ಘನತೆ ಇರುತ್ತದೆ. ಭಾರತದಲ್ಲಿ ಎನ್ಡಿಟಿವಿ ನಡೆಸುವ ಚರ್ಚೆಗಳಲ್ಲಿ ಎರಡು ಪಕ್ಷಗಳ ವಕ್ತಾರರು ಭಾಗವಹಿಸಿದಾಗ ಅವರ ನಡುವಿನ ಕೂಗಾಟ, ಅಸಹನೆ, ಒಬ್ಬರು ಮಾತನಾಡುತ್ತಿದ್ದಾಗ ತಮ್ಮ ಸರದಿಗೆ ಕಾಯದೆ ಇನ್ನೊಬ್ಬರ ಮಾತಿನ ಮಧ್ಯೆ ಬಾಯಿಹಾಕುವುದು ನೋಡುಗರಿಗೆ ಮುಜುಗರವನ್ನು ನೀಡುವಂಥದ್ದು. ಬ್ರಿಟನ್ನಿನಲ್ಲಿ ಬಿಬಿಸಿ, ಸ್ಕೈ ಮತ್ತು ಐಟಿವಿ ನಡೆಸುವ ಚರ್ಚೆಗಳಲ್ಲಿ ಕೆಲವೊಮ್ಮೆ ಪಕ್ಷದ ಇತರ ಪ್ರತಿನಿಧಿಗಳು, ಮಂತ್ರಿಗಳು ಭಾಗವಹಿಸುತ್ತಾರೆ. ಇಲ್ಲಿ ನಡೆವ ಚರ್ಚೆಯಲ್ಲಿ ಹೆಚ್ಚು ಉದ್ವೇಗವಿಲ್ಲದೆ, ಒಬ್ಬರು ಇನ್ನೊಬ್ಬರನ್ನು ಹೀಯಾಳಿಸುವುದು ಒಂದು ಮಿತಿಯಲ್ಲಿ ನಡೆಯುತ್ತದೆ. ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಗೌರವ ವಿಶ್ವಾಸಗಳಿರುತ್ತವೆ. ಮುಖ್ಯವಾಗಿ ಆಹ್ವಾನಿತ ಜನ ಸಾಮಾನ್ಯರು ಪ್ರಧಾನಿಯನ್ನು ಒಳಗೊಂಡಂತೆ ಎಲ್ಲ ಹಿರಿಯ. ರಾಜಕಾರಣಿಗಳ ಜೊತೆ ಸಂವಾದಕ್ಕೆ ತೊಡಗಬಹುದು. ಪ್ರಶ್ನೆಗಳನ್ನು ಮುಂದಾಗಿ ಆಯ್ಕೆಮಾಡಿರುತ್ತಾರೆ. ಯು.ಕೆ ಯ ಚುನಾವಣೆ ಪ್ರಚಾರ ಕಾರ್ಯವು ಪಕ್ಷಪಾತ, ಹೆದರಿಕೆ, ಬೆದರಿಕೆ, ಗೂಂಡಾಗಿರಿ ಇವುಗಳಿಂದ ಮುಕ್ತವಾಗಿದೆ. ಯು.ಕೆಯಲ್ಲಿ ಧರ್ಮ ಮತ್ತು ರಾಜಕೀಯ ಇವು ಎರಡು ಬೇರೆ ವಿಚಾರವಾಗಿದ್ದಾರೂ ಇಲ್ಲಿಯ ಕೆಲವು ಪ್ರದೇಶದಲ್ಲಿ ಇಸ್ಲಾಮ್ ಧರ್ಮದವರು ದೂರದ ಪ್ಯಾಲೆಸ್ಟೈನ್ ಇಸ್ರೇಲ್ ಘರ್ಷಣೆಯನ್ನು ಬ್ರಿಟನ್ನಿನ ರಾಜಕಾರಣದೊಳಗೆ ಮತ್ತು ಚುನಾವಣೆಯ ಒಳಗೆ ತರುವ ಪ್ರಯತ್ನವನ್ನು ಮಾಡುತ್ತಿರುವುದು ಮತ್ತು ಕೆಲವು ಸಂಘಟನೆಗಳು ‘ಹಿಂದೂಸ್ ಫಾರ್ ಲೇಬರ್’ ಎಂದು ಪ್ರಚಾರ ಕೈಗೊಂಡಿರುವುದು ವಿಷಾದದ ಸಂಗತಿ. ಧರ್ಮವನ್ನು ರಾಜಕೀಯ ಮತ್ತು ಚುನಾವಣೆಯೊಂದಿಗೆ ತಳುಕು ಹಾಕುವುದು ಸರಿಯಲ್ಲ.


ಈ ಬಾರಿ ಬ್ರಿಟನ್ನಿನ ಚುನಾವಣೆಯಲ್ಲಿ ಯಾವ ರೀತಿಯ ವಿಷಯಗಳು ಜನರಿಗೆ ಪ್ರಸ್ತುತವಾಗಿದೆ ಎಂಬುದರ ಬಗ್ಗೆ ಗಮನ ಹರಿಸೋಣ. ಮೇಲೆ ಪ್ರಸ್ತಾಪಿಸಿದ ಹಾಗೆ ಕೋವಿಡ್ ಪಿಡುಗು ನಂತರದ ಸಮಯದಲ್ಲಿ ಹಣದ ಉಬ್ಬರ ಅತಿಯಾಗಿ ಯುಕ್ರೈನ್-ರಷ್ಯಾ ಯುದ್ಧವೂ ಈ ಹಣದುಬ್ಬರಕ್ಕೆ ಕಾರಣವಾಗಿದೆ. ಅನಿಲ ಮತ್ತು ತೈಲಗಳ ಬೆಲೆ ವಿಪರೀತ ಹೆಚ್ಚಾಗಿ ಸಾರಿಗೆ ವ್ಯವಸ್ಥೆ ದುಬಾರಿಯಾಗಿ ದಿನನಿತ್ಯ ಆಹಾರ ಮತ್ತು ಬಳಕೆ ವಸ್ತುಗಳ ಬೆಲೆ ಏರಿದೆ. ಈ ಹಣದ ಉಬ್ಬರಗಳ ನಡುವೆ ಮುಂದಕ್ಕೆ ಬರುವ ಪಕ್ಷ ತೆರಿಗೆಗಳನ್ನು ಜಾಸ್ತಿ ಮಾಡ ಬಹುದೇ ಎಂಬ ಆತಂಕವಿದೆ. ನಮ್ಮ ರಾಷ್ಟ್ರೀಯ ಅರೋಗ್ಯ ಸಂಸ್ಥೆಯಲ್ಲಿ ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳ ಕೊರತೆಯಿಂದ ರೋಗಿಗಳಿಗೆ ಹೆಚ್ಚಿನ ಅನಾನುಕೂಲಗಳ ಮತ್ತು ಕಷ್ಟ ನಷ್ಟಗಳು ಸಂಭವಿಸಿವೆ. ಹೀಗಾಗಿ ಇದು ಈಗಿನ ಚುನಾವಣೆಯಲ್ಲಿ ಬಹುದೊಡ್ಡದಾದ ವಿಷಯ. ಇದನ್ನು ಪುನರುತ್ಥಾನ ಗೊಳಿಸುವ ಆಶ್ವಾಸನೆಯನ್ನು ಎಲ್ಲ ಪಕ್ಷಗಳು ನೀಡುತ್ತಿವೆ. ಬ್ರೆಕ್ಸಿಟ್ ನಂತರದ ಸಮಯದಲ್ಲಿ ವೈದ್ಯರ ಮತ್ತು ನರ್ಸ್ ಗಳ ಕೊರತೆ ಉಂಟಾಗಿದೆ, ವೈದ್ಯರು ಹೆಚ್ಚಿನ ಸಂಬಳವನ್ನು ಬೇಡಿದ್ದಾರೆ. ಬ್ರಿಟನ್ ರಾಷ್ಟ್ರವನ್ನು ಕಾಡುತ್ತಿರುವ ಇನ್ನೊಂದು ಬೃಹತ್ ಸಮಸ್ಯೆ ಎಂದರೆ ವಲಸೆ. ಬಡ ದೇಶಗಳಿಂದ ದಂಡಿಯಾಗಿ ನಿರಾಶ್ರಿತರು ಬರುತ್ತಿದ್ದಾರೆ. ಅವರಲ್ಲಿ ಯಾರು ಪ್ರಾಮಾಣಿಕವಾಗಿ ನಿರಾಶ್ರಿತರು ಯಾರು ಅವಕಾಶ ಆಕಾಂಕ್ಷಿಗಳು ಎಂಬುದನ್ನು ನಿರ್ಧರಿಸವುದು ಸರ್ಕಾರಕ್ಕೆ ಕಷ್ಟದ ಕೆಲಸವಾಗಿದೆ. ಕ್ರಿಶ್ಚಿಯನ್ ಹಿನ್ನೆಲೆ ಇರುವ ಬ್ರಿಟನ್ನಿನಲ್ಲಿ ಧರ್ಮ ಎಂದೂ ರಾಜಕೀಯ ವಿಷಯದಲ್ಲಿ ತಲೆಹಾಕುವುದಿಲ್ಲ. ಆದರೆ ಇಲ್ಲಿ ಮೈನಾರಿಟಿ ವಿರುದ್ಧ ಜನಾಂಗ ಬೇಧ (ರೇಸಿಸಮ್) ವನ್ನು ಪ್ರಚೋದಿಸುವ, ಮತ್ತು ರೇಸಿಸ್ಟ್ ಹಿನ್ನೆಲೆಯಿರುವ ಬಲಪಂಥ ಪಕ್ಷವೊಂದು ರಿಫಾರ್ಮ್ ಯು.ಕೆ ಎನ್ನುವ ಶೀರ್ಷಿಕೆಯಲ್ಲಿ ಬ್ರೆಕ್ಸಿಟ್ಟಿಗೆ ಕಾರಣವಾದ ಮತ್ತು ಕೆಲವು ಮತೀಯರ ಬಗ್ಗೆ ಉಗ್ರವಾದ ನಿಲುವನ್ನು ಹೊಂದಿರುವ ನೈಜಲ್ ಫರಾಜ್ ಎಂಬ ರಾಜಕಾರಣಿ ಚುನಾವಣೆಯಲ್ಲಿ ನಿಂತಿರುವುದು ಉದಾರ ನಿಲುವುಗಳನ್ನು ಪ್ರತಿಪಾದಿಸುವ ಇತರ ಪಕ್ಷಗಳಿಗೆ ಆತಂಕವನ್ನು ತಂದಿದೆ. ಬ್ರಿಟನ್ನಿನ ಗ್ರೀನ್ ಪಾರ್ಟಿ ಪರಿಸರದ ಬಗ್ಗೆ ಜಾಗತಿಕ ತಾಪಮಾನದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರಿರುವ ರಾಜಕೀಯ ಪಕ್ಷವಾದ. ಯು.ಕೆಯ ಒಕ್ಕೂಟದ ಒಳಗಿನ ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡಿನಲ್ಲಿ ಅಲ್ಲಿಯ ಸ್ಥಳೀಯ ಸಮಸ್ಯೆಗಳು ಪ್ರಸ್ತುತವಾಗಿ ಅವು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುತ್ತವೆ.

ಇನ್ನು ಭಾರತದಲ್ಲಿ ನಡೆದ ಚುನಾವಣೆಯ ಬಗ್ಗೆ ಗಮನ ಹರಿಸೋಣ. ಪ್ರಪಂಚದಲ್ಲೇ ಅತ್ಯಂತ ಹಿರಿದಾದ ಪ್ರಜಾಪ್ರಭುತ್ವವೆಂದು ಹೆಸರಾದ ಭಾರತ ಈ ವರ್ಷ ಜೂನ್ ತಿಂಗಳಲ್ಲಿ ಚುನಾವಣೆ ನಡೆಸಿದೆ. ಸುಮಾರು 940 ಮಿಲಿಯನ್ ಜನರು ಮತ ನೀಡಿದ್ದು ಏಳು ಹಂತಗಳಲ್ಲಿ ಚುನಾವಣೆ ನಡಿಸಿದ ಭಾರತದ ಎಲೆಕ್ಷನ್ ಕಮಿಷನ್ ಮಾಡಿರುವ ಕಾರ್ಯ ಶ್ಲಾಘನೀಯವಾದದ್ದು. ಭಾರತದಲ್ಲಿ ಎಲೆಕ್ಷನ್ ವಿಷಯ ಬಂದಾಗ ಎಂದಿಗಿಂತ ಇಂದು ಧರ್ಮ, ಜಾತಿ ಮತ್ತು ದೇವಸ್ಥಾನ ಇತರ ಸಾಮಾಜಿಕ ಸಮಸ್ಯೆಗಳಷ್ಟೇ ಪ್ರಸ್ತುತವಾಗಿದೆ. ಒಂದು ಪಕ್ಷ ತನ್ನ ಆಡಳಿತದಲ್ಲಿ ದೇಶದ ರಸ್ತೆ, ರೈಲು, ವಿಮಾನ ನಿಲ್ದಾಣ, ನಗರಗಳ ಅಭಿವೃದ್ಧಿ, ಹೊಸ ಕಟ್ಟಡಗಳ ನಿರ್ಮಾಣ ಮುಂತಾದ ಸಾರ್ವಜನಿಕ ಸೌಕರ್ಯವನ್ನು ಮಾಡಿ ತಾವು ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಚುನಾವಣೆ ಪ್ರಚಾರ ಮಾಡಿದರೆ ಸಾಲದು. ಆ ಸರ್ಕಾರದ ಧೋರಣೆಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಇವೆಯೇ? ಸಂವಿಧಾನಕ್ಕೆ ಬದ್ಧವಾಗಿದೆಯೇ? ಎಂಬುದು ಮುಖ್ಯ. ಆರ್ಥಿಕ ಪ್ರಗತಿ ಬರಿಯ ಕೆಲವು ಬಿಲಿಯನೇರ್ ಗಳ ಜೇಬುಗಳನ್ನು ತುಂಬಿದರಷ್ಟೇ ಸಾಲದು. ಅದು ತಳ ಸಮುದಾಯದ ಸಮಾಜ ಕಲ್ಯಾಣ ಆಯೋಜನೆಯನ್ನು ತಲುಪುತ್ತಿದೆಯೇ ಅನ್ನುವುದು ಮುಖ್ಯ. ಅಂತಾರಾಷ್ಟ್ರೀಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಬಡತನ, ಹಸಿವು, ನಿರುದ್ಯೋಗ ಸಮಸ್ಯೆಗಳು ವ್ಯಾಪಕವಾಗಿವೆ. ಭಾರತದಲ್ಲಿ ಒಂದು ಹಿನ್ನೋಟದಲ್ಲಿ ಗಮನಿಸಿದಾಗ ಅಲ್ಲಿ ಎಲ್ಲಕಾಲಕ್ಕೂ ಜನ ನಾಯಕರ ವರ್ಚಸ್ಸು ಮುಖ್ಯವಾಗಿ ವ್ಯಕ್ತಿಪೂಜೆ ನಡೆಯುತ್ತಾ ಬಂದಿದೆ. ರಾಷ್ಟ ಮಟ್ಟದಲ್ಲಿ ಇಂದಿರಾಗಾಂಧಿ, ಮುಂದಕ್ಕೆ ಮೋದಿ, ರಾಜ್ಯಮಟ್ಟದಲ್ಲಿ ಎಂಜಿಆರ್, ಏನ್ ಟಿ ರಾಮರಾವ್, ಜಯಲಲಿತಾ ನೆನಪಿಗೆಬರುತ್ತಾರೆ. ವ್ಯಕ್ತಿಯ ವರ್ಚಸ್ಸಿಗಿಂತ ಪಕ್ಷದ ಧೋರಣೆಗಳು ಪ್ರಸ್ತುತವಾಗಿರಬೇಕು. ಇನ್ನೊಂದು ವಿಚಾರವೆಂದರೆ ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ ಸೋಷಿಯಲ್ ಮೀಡಿಯಾಗಳನ್ನು ಪಕ್ಷದ ಪ್ರಚಾರಕ್ಕೆ ಬಳಸಿ ವಿರೋಧಪಕ್ಷದವರನ್ನು ಇಲ್ಲ ಸಲ್ಲದ ನೆಪದಲ್ಲಿ ಅಪ್ರಾಮಾಣಿಕವಾಗಿ ಹೀಯಾಳಿಸಿ, ಮೂದಲಿಸಿ ಗೌಣ ಗೊಳಿಸಲಾಗಿದೆ. ವಿರೋಧಪಕ್ಷವನ್ನು ಬಲಹೀನ ಗೊಳಿಸುವ ಪ್ರಯತ್ನ ನಡೆದಿದೆ. ವಿರೋಧಪಕ್ಷವು ಬಲಹೀನಗೊಳ್ಳಲು ಆ ಪಕ್ಷದಲ್ಲಿ ಒಗ್ಗಟ್ಟು ಇಲ್ಲದಿರುವುದೂ ಕಾರಣವಾಗಿದೆ. ವಿರೋಧ ಪಕ್ಷದಲ್ಲಿ ಮುಂದಾಳುತ್ವವನ್ನು ವಹಿಸಿರುವ ಪಕ್ಷ ರಾಜಕಾರಣವನ್ನು ತನ್ನ ಮನತನದ ಸ್ವತ್ತಾಗಿ ಗುತ್ತಿಗೆ ಹಿಡಿದಂತಿದೆ. ಇಲ್ಲಿ ಹೊರಗಿನ ಪ್ರತಿಭೆಗಳಿಗೆ ಅವಕಾಶ ಇಲ್ಲದಂತಾಗಿದೆ. ಒಂದು ಪ್ರಜಾಪ್ರಭುತ್ವದಲ್ಲಿ ಬಲವಾದ ವಿರೋಧಪಕ್ಷ ಇಲ್ಲದಿದ್ದಲ್ಲಿ ಆ ಪ್ರಜಾಪ್ರಭುತ್ವ ಆರೋಗ್ಯವಾಗಿ ಮತ್ತು ಸಮತೋಲನದಲ್ಲಿ ಇರಲು ಸಾಧ್ಯವಿಲ್ಲ. ಇದು ಅಪಾಯಕಾರಿ ಬೆಳವಣಿಗೆ. ವಿರೋಧಪಕ್ಷವನ್ನು ಅತಿಯಾಗಿ ದುರ್ಬಲಗೊಳಿಸಿದಲ್ಲಿ ಅದು ಸರ್ವಾಧಿಕಾರಕ್ಕೆ ಪೂರಕವಾಗುವುದರಲ್ಲಿ ಸಂದೇಹವಿಲ್ಲ. 2024ರ ಚುನಾವಣೆಯಲ್ಲಿ ವಿರೋಧ ಪಕ್ಷವು ಸ್ವಲ್ಪಮಟ್ಟಿಗೆ ಚೇತರಿಸಿ ಕೊಂಡಿದೆ ಎನ್ನಬಹುದು. ಒಂದು ಪಕ್ಷ ಎಲೆಕ್ಟೊರಲ್ ಬಾಂಡ್ ಗಳ ಮುಖಾಂತರ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಸಾಮೂಹಿಕ ಸುದ್ದಿ ಮಾಧ್ಯಮಗಳು ಒಂದು ರಾಜಕೀಯ ಪಕ್ಷದ ಪರವಹಿಸಿದಾಗ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತದೆ. ಚುನಾವಣೆ ಎಂಬ ಸ್ಪರ್ಧೆಯ ಮೈದಾನದಲ್ಲಿ ಎಲ್ಲ ಸಮತಟ್ಟಾಗಿರಬೇಕು. ಇಲ್ಲದಿದ್ದಲ್ಲಿ ಅದು ನ್ಯಾಯ ಸಮ್ಮತವಾದ ಸ್ಪರ್ಧೆ ಅಲ್ಲ. ಅನಕ್ಷರತೆ, ಆರ್ಥಿಕ ಅಸಮತೆ ಮತ್ತು ಬಡತನ ಹೆಚ್ಚಾಗಿರುವ ದೇಶಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ಕಾಪಾಡ ಬಹುದು ಎಂಬುದರ ಬಗ್ಗೆ ಸಂದೇಹವಿದೆ. ಭಾರತದ ಮಧ್ಯಮವರ್ಗ ಕಳೆದ ಕೆಲವು ವರ್ಷಗಳಲ್ಲಿ ಹಿಗ್ಗಿದೆ. ಈ ‘ಹೊಸ ಮಧ್ಯಮ ವರ್ಗ’ ಅನುಕೂಲವಾಗಿ ಜೀವನ ನಡೆಸುತ್ತಿವೆ ಮತ್ತು ಈ ವರ್ಗ ಚುನಾವಣೆಯ ಫಲಿತಾಂಶವನ್ನು ಪರೋಕ್ಷವಾಗಿಯಾದರೂ ನಿರ್ಧರಿಸುತ್ತವೆ ಎನ್ನಬಹುದು. ಈ ವರ್ಗವು ಒಂದು ರಾಜಕೀಯ ಪಕ್ಷಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು, ನಿಷ್ಠೆಯನ್ನು ತೋರುತ್ತಾ ಬಂದಿರುವುದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಬಹುದು. ಹೀಗಾಗಿ ರಾಜಕೀಯ ಪಕ್ಷಗಳು ಈ ಮಧ್ಯಮವರ್ಗವನ್ನು ಓಲೈಸಲು ಹವಣಿಸುತ್ತವೆ. ಈ ಮಧ್ಯಮ ವರ್ಗದವರು ಬಹುಪಾಲು ಸುಶಿಕ್ಷಿತರು, ಮೇಲ್ಜಾತಿಯವರು, ಧರ್ಮ ಅಪೇಕ್ಷಿಗಳು, ಸಂಪ್ರದಾಯ ವಾದಿಗಳು ಮತ್ತು ನಗರ ನಿವಾಸಿಗಳು. ಈ ವರ್ಗದವರಿಗೆ ಗ್ರಾಮೀಣ ಪ್ರದೇಶದ ಮತ್ತು ಮೈನಾರಿಟಿ, ತಳ ಸಮುದಾಯದವರ ಸಮಸ್ಯೆಗಳ ಬಗ್ಗೆ ಅರಿವು ಕಡಿಮೆ ಮತ್ತು ಸಹಾನುಭೂತಿಯೂ ಕಡಿಮೆ ಎನ್ನಬಹುದು. ಕೆಲವರನ್ನು ಹೊರತು ಪಡಿಸಿ ಈ ವರ್ಗದಲ್ಲಿ ಅನೇಕರಿಗೆ ಅನ್ಯ ಧರ್ಮದವರ ಬಗ್ಗೆ ಅನುಮಾನ, ಸಂದೇಹ ಮತ್ತು ತಿರಸ್ಕಾರ ಭಾವನೆಗಳಿವೆ. ಒಂದು ವಾಟ್ಸ್ ಆಪಿನ ಗುಂಪಿನಲ್ಲಿ ಇವರು ಹಂಚಿಕೊಳ್ಳುವ ಸಂದೇಶಗಳು ಇದಕ್ಕೆ ಸಾಕ್ಷಿಯಾಗಿವೆ.

ಇನ್ನು ರಷ್ಯಾದ ರಾಜಕಾರಣ ಮತ್ತು ಚುನಾವಣೆಯನ್ನು ಗಮನಿಸಿದರೆ ಅಲ್ಲಿ ಪ್ಯೂಟಿನ್ ಸರ್ವಾಧಿಕಾರಿಯಾಗಿ ತನ್ನ ವಿರೋಧ ಪಕ್ಷದ ರಾಜಕಾರಣಿಗಳನ್ನು ಕ್ಷುಲ್ಲಕ ಕಾರಣಗಳಿಂದ ಜೈಲಿಗೆ ತಳ್ಳಿ, ಕೆಲವರನ್ನು ಮುಗಿಸಿ, ವಿರೋಧಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ಮಾಧ್ಯಮಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ಖಾಯಂ ಅಧ್ಯಕ್ಷನಾಗಿದ್ದಾನೆ. 1999ರಲ್ಲಿ ಪ್ಯೂಟಿನ್ ರಷ್ಯಾ ಅಧ್ಯಕ್ಷನಾಗಿ ಎರಡು ಟರ್ಮ್ ಅವಧಿಯನ್ನು 2008ರಲ್ಲಿ ಮುಗಿಸಿದ. ರಷ್ಯಾದ ಸಂವಿಧಾನದ ಪ್ರಕಾರ ಯಾವುದೇ ವ್ಯಕ್ತಿ ಎರಡು ಟರ್ಮ್ ಗಿಂತ ಹೆಚ್ಚಾಗಿ ಅಧ್ಯಕ್ಷನಾಗಿರಲು ಸಾಧ್ಯವಿಲ್ಲ. ಹೀಗಾಗಿ ಪ್ಯೂಟಿನ್ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಪ್ರಧಾನಿಯಾಗಿ ಒಂದು ಅವಧಿಯನ್ನು ಮುಗಿಸಿ ಮತ್ತೆ ಚುನಾಯಿತನಾಗಿ ಅಧ್ಯಕ್ಷನಾದ. ಅಷ್ಟೇ ಅಲ್ಲ ಅವನು ಈ ಬಾರಿ ಸಂವಿಧಾನವನ್ನೇ ಬದಲಿಸಿ ಖಾಯಂ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾನೆ. ಇಂತಹ ಸರ್ವಾಧಿಕಾರಿ ಚುನಾವಣೆಯಲ್ಲಿ ಭಾಗವಹಿಸಿ ಗೆದ್ದು ಬಂದಿದ್ದೇನೆ ಎಂದು ಹೇಳಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಹಾಸ್ಯಾಸ್ಪದವಾಗಿ ತೋರುತ್ತದೆ. ಕೆಲವು ದೇಶದ ರಾಜಕಾರಣದಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ಪ್ರಬಲವಾದ ಜನನಾಯಕರು ತಮ್ಮ ಬಲಾಢ್ಯವನ್ನು ಪ್ರದರ್ಶಿಸಲು ತಮ್ಮ ವೈಯುಕ್ತಿಕ ವರ್ಚಸ್ಸು ಮತ್ತು ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಪಕ್ಕದ ಚಿಕ್ಕ ಬಲಹೀನ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡಿ ತಾವು ಹೀರೋಗಳಾಗಿ ಮೇಲೇರುವುದ ಒಂದು ರೀತಿಯ ರಾಜಕೀಯ ಯುಕ್ತಿ ಎಂದು ಭಾವಿಸಬಹುದು. ರಷ್ಯಾ, ಯುಕ್ರೈನ್ ದೇಶದ ಮೇಲೆ ಮಾಡುತ್ತಿರುವ ಯುದ್ಧಕ್ಕ ಬೇರೆ ಕಾರಣಗಳು ಇರಬಹುದಾದರೂ ಅದನ್ನು ಚನಾವಣೆಯ ಪ್ರಚಾರವಾಗಿ ಕೂಡ ಬಳಸಲಾಯಿತು.


ಅಮೇರಿಕದಲ್ಲಿ ಈ ವರ್ಷ ನವೆಂಬರ್ ತಿಂಗಳಲ್ಲಿ ನಡೆಯುತ್ತಿರುವ ಚುನಾವಣೆಯನ್ನು ಇಡೀ ಪ್ರಪಂಚವೇ ಕುತೂಹಲ ಮತ್ತು ಕಾಳಜಿಯಿಂದ ನೋಡುತ್ತಿದೆ. ಇದಕ್ಕೆ ಹಿಂದೆ ಟ್ರಂಪ್ ನ ಆಡಳಿತ ವೈಖರಿ ಮತ್ತು ಅವನ ವರ್ತನೆಯೂ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ತಾನು ಸೋತಾಗ ಆ ಚುನಾವಣೆ ಫಲಿತಾಂಶವನ್ನು ಯಾವ ಪುರಾವೆ ಸಾಕ್ಷಿಗಳಿಲ್ಲದಿದ್ದರೂ ಎಲೆಕ್ಷನ್ ಕಾರ್ಯದಲ್ಲಿ ವಂಚನೆ ನಡೆದಿದೆ ಎಂಬ ಸುಳ್ಳು ಆಪಾದನೆ ಮಾಡಿ ರಾದ್ಧಾಂತ ಎಬ್ಬಿಸಿದ. ಇವನ ಮೊಂಡಾಟ ಅಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದ ಜನರ ನಂಬಿಕೆಯನ್ನು ನಿರಾಸೆಗೊಳಿಸಿತು. ಅಷ್ಟೇ ಏಕೆ ಎಲೆಕ್ಷನ್ ನಂತರದ ಸಮಯದಲ್ಲಿ ತನ್ನ ಅನುಯಾಯಿಗಳನ್ನು ಪ್ರಚೋದಿಸಿ ಅವರು ಗುಂಡಾಗಳಂತೆ ಅಸ್ತ್ರಗಳನ್ನು ಹಿಡಿದು ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ಹಿಂಸೆ ಆಕ್ರೋಶಕ್ಕೆ ತೊಡಗಿದಾಗ ಡೆಮೋಕ್ರೆಟ್ ಸದಸ್ಯರು ಪ್ರಾಣ ಭಯದಿಂದ ಕುರ್ಚಿ ಬೆಂಚುಗಳಡಿಯಲ್ಲಿ ಅವಿತುಕೊಳ್ಳಬೇಕಾಯಿತು. ಪ್ರಪಂಚದ ಇತರ ಸಭ್ಯ ಜನತೆ ಅಮೇರಿಕ ಪ್ರಜಾಪ್ರಭುತ್ವದಲ್ಲಿ ಹೀಗೂ ಉಂಟೆ ಎಂದು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಾಯಿತು. ಟ್ರಂಪ್ ತನ್ನ ಬಲಪಂಥ ಧೋರಣೆಗಳಿಂದ ಅಲ್ಲಿಯವರೆಗೆ ನಾಗರೀಕರಾಗಿದ್ದ ಜನರನ್ನು ಧ್ರುವೀಕರಣಗೊಳಿಸಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಡೆಗಾಣಿಸಿದ ಎಂಬ ಅಪವಾದವಿದೆ. ಟ್ರಂಪ್ ಎಷ್ಟೇ ಒಳ್ಳೆ ಕೆಲಸಗಳನ್ನು ಮಾಡಿದ್ದರೂ ಈ ವಿಚಾರಗಳನ್ನು ಕಡೆಗಾಣಿಸಲು ಸಾಧ್ಯವಿಲ್ಲ.

ಟ್ರಂಪ್ ಅಮೇರಿಕಗೆ ವಲಸೆ ಬರುತ್ತಿರುವ ಜನರ ಬಗ್ಗೆ, ಇಸ್ಲಾಂ ಧರ್ಮದವರ ಬಗ್ಗೆ ಎರ್ರಾ ಬಿರ್ರಿ ಮಾತನಾಡಿ ಎಲ್ಲರನ್ನು ಚಕಿತಗೊಳಿಸಿದ. ಹಿಂದಿನ ಚುನಾವಣೆಯ ಪ್ರಚಾರದಲ್ಲಿ ತನ್ನ ವಿರೋಧಿ ಹಿಲರಿ ಕ್ಲಿಂಟನ್ ಕುರಿತು ಕೀಳಾಗಿ ವರ್ತಿಸಿ ಅವಳನ್ನು ಜೈಲಿನಲ್ಲಿ ಲಾಕ್ ಅಪ್ ಮಾಡಬೇಕೆಂದು ಭಾಷಣದಲ್ಲಿ ಕೂಗಾಡಿದ. ಫ್ಲೋರಿಡಾ ರಾಜ್ಯದ ನಿಕ್ಕಿ ಹೇಲಿ ಎಂಬ ಭಾರತೀಯ ಮೂಲದ ಅಭ್ಯರ್ಥಿ ರಿಪಬ್ಲಿಕ್ ಪಾರ್ಟಿ ಪ್ರತಿನಿಧಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಾರೆ ಎಂಬ ಸುದ್ದಿ ಮಧ್ಯದಲ್ಲಿ ಈ ಟ್ರಂಪ್ ಮಹಾಶಯ ಮತ್ತೆ ನುಸುಳಿಕೊಂಡು ಬಂದು ಈಗ ಅಧ್ಯಕ್ಷಸ್ಥಾನಕ್ಕೆ ಮತ್ತೆ ನಿಲ್ಲುತ್ತಿದ್ದಾನೆ. ಟ್ರಂಪ್ ಹಿಂದೆ ಪೋರ್ನ್ ಸ್ಟಾರ್ ಜೊತೆ ಸಂಬಂಧ ಇಟ್ಟುಕೊಂಡ್ಡಿದ್ದು ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಈ ಸಂಗತಿಯನ್ನು ಮುಚ್ಚಿಡಲು ಅವಳಿಗೆ ಹಣವನ್ನು ವಿತರಣೆ ಮಾಡುವಾಗ ಉಂಟಾದ ಅವ್ಯವಹಾರದಲ್ಲಿ ಸಿಕ್ಕಿಕೊಂಡು ಅವನನ್ನು ಕೋರ್ಟಿಗೆ ಎಳೆಯಲಾಯಿತು. ಟ್ರಂಪ್ ತಪ್ಪಿತಸ್ಥನೆಂದು ತೀರ್ಮಾನಿಸಲಾಗಿದೆ. ಜೈಲು ಶಿಕ್ಷೆಯ ಬದಲು ಅವನು ದಂಡವನ್ನು ತೆರಬೇಕಾಗುತ್ತದೆ. ಇಷ್ಟೆಲ್ಲ ಅಪಚಾರಗಳ ಹಿನ್ನೆಲೆಯಲ್ಲಿ ಮತ್ತೆ ಟ್ರಂಪ್ ಅಧ್ಯಕ್ಷಸ್ಥಾನಕ್ಕೆ ನಿಂತಿದ್ದಾನೆ. ಹಿಂದೆ ಒಬಾಮ, ಕ್ಲಿಂಟನ್ ಮುಂತಾದ ಹಿರಿಯ ವ್ಯಕ್ತಿತ್ವಗಳನ್ನು ಕಂಡ ಅಮೇರಿಕ ಈಗ ಮತ್ತೆ ಟ್ರಂಪ್ ಮೇಲೇರಿಬರಲು ಒಪ್ಪಿದೆ, ಅವನು ಆಯ್ಕೆಯಾಗಿ ಬರುವ ಸಾಧ್ಯತೆಗಳಿವೆ. ಅಮೇರಿಕದಂತಹ ಮುಂದುವರಿದ ಶ್ರೀಮಂತ ದೇಶದಲ್ಲಿ ಟ್ರಂಪ್ ತರಹದ ರಾಜಕಾರಣಿಗೆ ಮಿಲಿಯನ್ ಗಟ್ಟಲೆ ಜನ ಬೆಂಬಲ ನೀಡುತ್ತಿದ್ದಾರೆ ಎಂದರೆ ಜನರ ವಿವೇಚನಾ ಶಕ್ತಿಗೆ ಏನಾಗಿದೆ ಎಂಬ ಆತಂಕ ಮೂಡುತ್ತದೆ. 'ಅಮೇರಿಕ ಫಸ್ಟ್' ಎನ್ನುವ ರಾಷ್ಟ್ರವಾದ ಮತ್ತು ಸ್ವಾರ್ಥ ನಿಲುವನ್ನು ಟ್ರಂಪ್ ಎತ್ತಿಹಿಡಿದಿರುವುದು ಅವನ ಜನಪ್ರಿಯತೆಗೆ ಕಾರಣವಾಗಿರಬಹುದು. ಇಡೀ ಪ್ರಪಂಚವೇ ಬಲಪಂಥದ ಕಡೆ ವಾಲುತ್ತಿದೆ. ಎಲ್ಲೆಡೆ ಸಂಶಯಗಳು ಹುಟ್ಟಿಕೊಂಡು ಪರಕೀಯ ಪ್ರಜ್ಞೆ (Tribalism) ಜಾಗೃತವಾಗಿದೆ. ಇಲ್ಲ ಸಲ್ಲದ ಕಾಲ್ಪನಿಕ ಶತ್ರುಗಳನ್ನು ರಾಜಕಾರಣಿಗಳು ಹುಟ್ಟು ಹಾಕುತ್ತಿದ್ದಾರೆ. ಒಂದು ದೇಶದ ಜನರಲ್ಲಿ ಒಗ್ಗಟ್ಟನ್ನು, ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಮೂಡಿಸಲು ಇದು ಸುಲಭದ ತಂತ್ರ! ಇದರಿಂದಾಗಿ 'ನಾವು ಮತ್ತು ಅವರು' ಎಂಬ ಧ್ರುವೀಕರಣ ಉಂಟುಮಾಡುತ್ತಿದ್ದರೆ. ಟ್ರಂಪ್ ಶ್ರೀಮಂತ ಉದ್ಯಮಿಗಳ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಅವನಿಗೆ ವ್ಯಾಪಾರಿ ವರ್ಗದವರು ಬೆಂಬಲ ನೀಡಲು ತಯಾರಿದ್ದರೆ. ನನಗೆ ತಿಳಿದ ಅನೇಕ ಅಮೇರಿಕ ಶ್ರೀಮಂತ ಅನಿವಾಸಿ ಮಿತ್ರರು ಟ್ರಂಪ್ ಗೆ ಬೆಂಬಲ ನೀಡಲು ತಯಾರಿದ್ದಾರೆ. ಸ್ವಾರ್ಥ ಹೆಚ್ಚಾದಂತೆ ಬಹುಶಃ ನಾವು ನಮ್ಮ ವಿವೇಚನಾಶಕ್ತಿಯನ್ನು ಕಳೆದುಕೊಳ್ಳುತೇವೆ. ರಷ್ಯಾ ದೇಶವು ಟ್ರಂಪ್ ಹಿಂದೆ ಗೆದ್ದು ಬಂದ ಚುನಾವಣೆಯಲ್ಲಿ ಹಸ್ತಾಕ್ಷೇಪಮಾಡಿದೆ ಎನ್ನುವ ವದಂತಿ ಇದೆ, ಇದಕ್ಕೆ ಕೆಲವು ಸಾಕ್ಷಿಗಳಿವೆ ಎಂದು ತಿಳಿದುಬಂದಿದೆ. ಎಲೆಕ್ಟ್ರಾನಿಕ್ ವೋಟಿಂಗ್ ವ್ಯವಸ್ಥೆಯಲ್ಲಿ ಸೈಬರ್ ಸೆಕ್ಯೂರಿಟಿ ಒಡೆದು ವಂಚನೆ ಉಂಟುಮಾಡುವ ಸಾಧ್ಯತೆಗಳು ಇವೆ. ನಕಲಿ ಅಸ್ತಿತ್ವವನ್ನು ಸೃಷ್ಟಿಸಿ ಹೆಚ್ಚು ಮತಗಳನ್ನು ಪಡೆಯಬಹುದು. ಹೀಗೆ ತಾಂತ್ರಿಕತೆಯನ್ನು ಒಂದು ರಾಜಕೀಯ ಪಕ್ಷ ದುರುಪಯೋಗ ಪಡೆದುಕೊಳ್ಳಬಹುದು. ಚುನಾವಣೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕ ವ್ಯವಹಾರಗಳು ಮುಖ್ಯ.

ಕ್ರಿಕೆಟ್, ಫುಟ್ಬಾಲ್ ಪಂದ್ಯಗಳಂತೆ ಚುನಾವಣೆಯಲ್ಲಿ ಅನಿರೀಕ್ಷಿತ ತಿರುವುಗಳು ಸಾಧ್ಯ. ಸದರಿ ಅಧ್ಯಕ್ಷ ಬೈಡೆನ್ ಅವರ ಪುತ್ರ ಹಿಂದೆ ಮಾದಕವಸ್ತುಗಳನ್ನು ಬಳಸುತ್ತಿರುವಾಗ ಬಂದೂಕದ ಪರವಾನಗಿಯನ್ನು ಪಡೆದಿದ್ದ ಎನ್ನುವ ವಿಚಾರ ಬಹಿರಂಗಕ್ಕೆ ಬಂದು ಅದು ಚುನಾವಣೆ ಪ್ರಚಾರದಲ್ಲಿ ಒಂದು ವಿಷಯವಾಗಿದೆ. ಅಮೇರಿಕ ಸರ್ಕಾರವು ಇಸ್ರೇಲ್-ಪ್ಯಾಲೆಸ್ಟೈನ್ ಘರ್ಷಣೆಯಲ್ಲಿ ಇಸ್ರೇಲ್ ಪರ ವಹಿಸಿದ್ದು, ಅಮೇರಿಕದ ಹಲವಾರು ವಿಶ್ವ ವಿದ್ಯಾಲಯಗಳಲ್ಲಿ ಪ್ರತಿಭಟನೆಗಳಾಗಿ ಅದೂ ಈಗ ಚುನಾವಣೆಯ ಒಂದು ಮುಖ್ಯ ವಿಷಯವಾಗಿದೆ. ಅಂದಹಾಗೆ ಬ್ರಿಟನ್ನಿನ ಪ್ರಧಾನಿ ರಿಷಿ ಸುನಾಕ್ ಇತ್ತೀಚಿಗೆ ಯೂರೋಪಿನಲ್ಲಿ ನಡೆದ ಎರಡನೇ ಮಹಾಯುದ್ಧ ಶ್ರದ್ಧಾಂಜಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಸುನಾಕ್ ಅವರ ರೇಟಿಂಗ್ ಕುಸಿದಿದೆ.

ಭಾರತದ ಉಪ ಖಂಡ ದೇಶಗಳಲ್ಲಿ ಪ್ರಜಾಪ್ರಭುತ್ವ ನರಳಿದೆ. ಪಾಕಿಸ್ತಾನ ಮತ್ತು ಮಿಯಾನ್ಮಾರ್ ದೇಶಗಳಲ್ಲಿ ಮಿಲಿಟರಿಯ ಜನರಲ್ ಗಳು ಹಸ್ತಕ್ಷೇಪಮಾಡಿ ಸರ್ಕಾರವನ್ನು ಉರುಳಿಸಿರುವ ಅನೇಕ ಪ್ರಸಂಗಗಳಿವೆ. ಈ ವರ್ಷ ಫೆಬ್ರುವರಿಯಲ್ಲಿ ಪಾಕಿಸ್ತಾನ ಚುನಾವಣೆ ನಡೆಸಿತು. ಪ್ರಧಾನಿ ಇಮ್ರಾನ್ ಖಾನನ್ನು ಅವಿಶ್ವಾಸ ನಿರ್ಣಯದ ಮೇಲೆ ಕೆಳಗಿಳಿಸಿ ಭ್ರಷ್ಟಾಚಾರದ ಅಪಾದನೆಯನ್ನು ಹೊರಿಸಿ ಜೈಲಿಗೆ ತಳ್ಳಿದ್ದರೂ ಅವನ ಪಿಟಿಐ ಪಕ್ಷವು ಈ ಬಾರಿ ಗಮನಾರ್ಹ ಮತವನ್ನು ಗಳಿಸಿತು. ಆದರೆ ಸರ್ಕಾರವನ್ನು ರಚಿಸುವಷ್ಟು ಬಹುಮತ ಪಡೆಯಲಿಲ್ಲ. ಕೊನೆಗೆ ಪಾಕಿಸ್ತಾನದ ಮುಸ್ಲಿಂ ಲೀಗ್ ಮತ್ತು ಪೀಪಲ್ ಪಾರ್ಟಿ ಎರಡು ಸಹಮತದಿಂದ ಸರ್ಕಾರ ರಚಿಸಿ ಶಿಬಾಸ್ ಶರೀಫ್ ಪ್ರಧಾನಿಯಾಗಿದ್ದಾನೆ. ಇನ್ನು ಮೀಯನ್ಮಾರದಲ್ಲಿ ನೋಬಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಚಿ ಹಲವಾರು ದಶಕಗಳಿಂದ ಬಹುಮತ ಗಳಿಸಿ ನಾಯಕಿಯಾಗಿದ್ದರೂ ಅವಳ ಗಂಡ ಹೊರದೇಶದವನಾಗಿದ್ದರಿಂದ ಅವರ ಸಂವಿಧಾನದ ಪ್ರಕಾರ ಅವಳು ಅಲ್ಲಿಯ ಪ್ರಧಾನಿಯಾಗಲು ಸಾಧ್ಯವಿಲ್ಲ. ಆದರೂ ಸ್ಟೇಟ್ ಕೌನ್ಸಿಲ್ಲರ್ ಎಂಬ ಉನ್ನತ ಪಟ್ಟದಲ್ಲಿ ಅವಳು ಅತ್ಯಂತ ಜನಪ್ರೀಯ ಜನನಾಯಕಿಯಾಗಿ ಹಲವಾರು ಬಾರಿ ಬಹುಮತದಿಂದ ಗೆದ್ದು ಬಂದರೂ ಅಲ್ಲಿಯ ಮಿಲಿಟರಿ ಜನರಲ್ ಗಳು ಅವಳ ಮೇಲೆ ಕೆಲವು ಆರೋಪಗಳನ್ನು ಹೊರಿಸಿ ಅಪರಾಧಿ ಎಂದು ಅವಳನ್ನು 27 ವರ್ಷ ಜೈಲ್ ಶಿಕ್ಷೆಗೆ ಗುರಿಪಡಿಸಿದೆ! ಅವಳಿಗೆ ಈಗ 79 ವರ್ಷಗಳಾಗಿರುವುದರಿಂದ ಇದು ಒಂದು ರೀತಿ ಜೀವಾವಧಿ ಶಿಕ್ಷೆಯಾಗಿ ಪರಿಣಮಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈ ವಿಚಾರದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಅಂಗ್ ಸಾನ್ ಸೂಚಿಗೆ ಬೆಂಬಲ ನೀಡಿವೆ.

ಒಟ್ಟಾರೆ ನೋಡಿದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ದೇಶದಲ್ಲಿ ಆಡಳಿತ ನಡೆಸಲು ಆದರ್ಶವಾದ ಮಾದರಿ. ಪ್ರಜಾಪ್ರಭುತ್ವ ಮತ್ತು ಚುನಾವಣೆ ಎಂಬ ಈ ಎರಡು ವಿಚಾರಗಳು ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ, ಅದು ಸಂಕೀರ್ಣವಾದದ್ದು. 'ಜನರಿಂದ ಜನರಿಗಾಗಿ' ಎಂಬ ಸಿದ್ಧಾಂತವನ್ನು ಆಧರಿಸಿದ್ದರೂ ಈ ವ್ಯವಸ್ಥೆಯಲ್ಲಿ ಹಲವಾರು ತೊಡಕುಗಳಿರುವುದನ್ನು ಮೇಲೆ ಪ್ರಸ್ತಾಪಮಾಡಿರುವ ನಿದರ್ಶನಗಳಲ್ಲಿ ಕಾಣಬಹುದು. ನಾವು ಯಾವುದೇ ದೇಶದವರಾಗಿದ್ದರೂ ನಮ್ಮ ಮಹತ್ವಾಕಾಂಶೆಗಳಲ್ಲಿ ವ್ಯತಾಸವಿದ್ದರೂ ಜನಸಾಮಾನ್ಯರ ಬದುಕಿನ ಮೂಲಭೂತ ಸಮಸ್ಯೆಗಳು ಒಂದೇ ಆಗಿರುತ್ತವೆ. ಈಗ ಜಾಗತೀಕರಣದ ಪರಿಣಾಮದಿಂದ ಇಡೀ ವಿಶ್ವವೇ ಒಂದು ಸಣ್ಣ ಕುಟುಂಬವಾಗಿದೆ. ಒಂದು ರಾಷ್ಟ್ರದ ಸಮಸ್ಯೆ ಬರಿ ಸ್ಥಳೀಯ ಸಮಸ್ಯೆಯಾಗದೆ ಅದು ವಿಶ್ವದ ಇನ್ನೊಂದು ಮೂಲೆಯಲ್ಲಿ ವಾಸಿಸುವರ ಸಮಸ್ಯೆಯೂ ಆಗಬಹುದು. ಕರೋನ ಪಿಡುಗು, ಗ್ಲೋಬಲ್ ವಾರ್ಮಿಂಗ್, ಯೂಕ್ರೈನ್ ಯುದ್ಧ, ಸಮುದಾಯದ ವಲಸೆ, ಸ್ಥಳಾಂತರ ಇವು ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಸಮಸ್ಯೆಕೂಡ. ಈ ಸಮಸ್ಯೆಗಳನ್ನು ಎದುರಿಸಲು ದೇಶಗಳ ನಡುವೆ ಸಹಕಾರ ಒಪ್ಪಂದ ಬೇಕಾಗುತ್ತದೆ. ಸರ್ವಾಧಿಕಾರಿಗಳಿಗೆ ಮತ್ತು ರಾಷ್ಟ್ರವಾದಿಗಳಿಗೆ ತಮ್ಮ ದೇಶದ ಹಿತಾಸಕ್ತಿ ಅಷ್ಟೇ ಅವರಿಗೆ ಮುಖ್ಯವಾಗುತ್ತದೆ. ಅಲ್ಲಿ ಒಂದು ಸ್ವಾರ್ಥ ನಿಲುವು ಇರುತ್ತದೆ. ಆದುದರಿಂದ ಅವರ ಸಹಕಾರ ಮತ್ತು ಸಮ್ಮತವನ್ನು ನಿರೀಕ್ಷಿಸಲು ಸಾಧ್ಯವಾಗದಿರಬಹುದು. ಈ ಒಂದು ಹಿನ್ನೆಲೆಯಲ್ಲಿ ಉದಾರವಾದ ಮತ್ತು ಪ್ರಜಾಪ್ರಭುತ್ವ ವಿಶೇಷ ಅಗತ್ಯವಾಗಿ ಎದ್ದು ನಿಲ್ಲುತ್ತದೆ. ಬಹುಮುಖಿ ಸಂಸ್ಕೃತಿ ಇರುವ ಒಂದು ದೇಶದ ಒಳಗೆ ಮತ್ತು ಹೊರಗೆ ಜನರನ್ನು ಒಂದು ಗೂಡಿಸಲು ಪ್ರಜಾಪ್ರಭುತ್ವ ಮೌಲ್ಯಗಳು ಬೇಕಾಗಿವೆ. ಒಂದು ಸರ್ಕಾರ ತನ್ನ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿದಾಗ ಆ ರಾಜಕೀಯ ಪಕ್ಷವನ್ನು ಹತೋಟಿಯಲ್ಲಿಡಲು ಮತದಾರರಿಗೆ ಶಕ್ತಿಯಿದೆ. ಚುನಾವಣೆ ಮುಗಿದಮೇಲೆ ಗೊಣಗಾಡಿ ಕೈ ಹಿಸುಕಿಕೊಳ್ಳುವ ಬದಲು ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದರಲ್ಲಿ ಹಿತವಿದೆ. ಪಟ್ಟಭದ್ರ ಹಿತಾಸಕ್ತರ ಸ್ವಾರ್ಥ, ಧರ್ಮದ ನೆಪದಲ್ಲಿ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರನ್ನು ಮತ್ತು ಬಹುಸಂಖ್ಯಾತರನ್ನು ಓಲೈಸುವುದು, ವ್ಯಕ್ತಿ ಪೂಜೆ ಮತ್ತು ಒಂದು ಐಡಿಯಾಲಜಿಯನ್ನು ಆರಾಧಿಸುವುದು, ಮತದಾರರಿಗೆ ಹಣ ಮತ್ತು ಇತರ ಆಮಿಷಗಳನ್ನು ನೀಡಿ ಮತ ಪಡೆಯುವುದು, ಸೋಷಿಯಲ್ ಮೀಡಿಯಾ ಮತ್ತು ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸುವುದು ಪ್ರಜಾಪ್ರಭುತ್ವದ ಮೂಲ ಉದ್ದೇಶಕ್ಕೆ ಧಕ್ಕೆಯನ್ನು ಉಂಟುಮಾಡುತ್ತದೆ.

ಪ್ರಜಾಪ್ರಭುತ್ವ ಮತ್ತು ಚುನಾವಣೆ ಹಿಂದೆ ಅಂತಾರಾಷ್ಟ್ರೀಯ, ಪಾಶ್ಚಿಮಾತ್ಯ ದೇಶಗಳ ಅಭಿಪ್ರಾಯಕ್ಕೆ, ನೈತಿಕ ಮಟ್ಟ ಎಂಬ ಅಳತೆಗೋಲಿಗೆ ಬದ್ದವಾಗಿ ಸ್ವವಿಮರ್ಶೆ ಮಾಡಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದವು. ಆದರೆ ಈಗ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದೇವೆ, ವಿಶ್ವ ಗುರುವಾಗಲು ನಾವು ಲಾಯಕ್ಕು, ನಾವು ಬಲಾಢ್ಯ ರಾಷ್ಟ್ರ ಆದುದರಿಂದ ನಾವೇಕೆ ಪಾಶ್ಚಿಮಾತ್ಯ ದೇಶಗಳಿಗೆ ಲೆಕ್ಕಿಸಬೇಕು ಎಂಬ ಗರ್ವ ಉಂಟಾಗಿದೆ. ಪಾಶ್ಚಿಮಾತ್ಯ ಸುದ್ದಿ ಮಾಧ್ಯಮ ಮತ್ತು ಮೀಡಿಯಾಗಳು, ಟೈಮ್ಸ್ ಮುಂತಾದ ಪತ್ರಿಕೆಗಳು ನಮ್ಮ ಹುಳುಕುಗಳನ್ನು ಎತ್ತಿ ತೋರಿಸಿದಾಗ ಇದು ನಮ್ಮ ಆಂತರಿಕ ವಿಷಯ, ನಮಗೆ ಬಿಟ್ಟಿದ್ದು, ಹೊರಗಿನವರು ಏಕೆ ಹಸ್ತಾಕ್ಷೇಪ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಸರ್ವಾಧಿಕಾರದ ಸರ್ಕಾರಗಳು ಯುನೈಟೆಡ್ ನೇಶನ್ಸ್ ಮತ್ತು ಇತರ ವಿಶ್ವ ಶಾಂತಿ ಸಂಸ್ಥೆಗೆ ಬದ್ಧರಾಗುತ್ತಿಲ್ಲ ಎಂಬುದು ಆತಂಕದ ವಿಷಯವಾಗಿದೆ. ಪ್ರಜಾ ಪ್ರಭುತ್ವದ ಪರಿಕಲ್ಪನೆ ಎಲ್ಲ ರಾಷ್ಟ್ರಗಳಿಗೆ ಹೊಂದುವಂತಹ, ಅನ್ವಯವಾಗುವಂತಹ ವ್ಯವಸ್ಥೆಯಲ್ಲ! ಮಯನ್ಮಾರ್, ರಷ್ಯಾ ಚೈನಾ, ಮಧ್ಯಪೂರ್ವ ಇಸ್ಲಾಂ ದೇಶಗಳನ್ನು, ಆಫ್ರಿಕಾದ ಕೆಲವು ರಾಷ್ಟ್ರಗಳನ್ನು ಗಮನಿಸಿದಾಗ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಅಗತ್ಯವಾಗಿ ಕಾಣದಿರುವುದು ಆಶ್ಚರ್ಯವೇನಲ್ಲ. ಪ್ರಜಾಪ್ರಭುತ್ವ ಅಂತಿಮ ಸ್ವಾತಂತ್ರ್ಯವನ್ನು ನೀಡುವುದಾದರೂ ಆ ಸ್ವಾತಂತ್ರ್ಯ ಕೆಲವರಿಗೆ ಬೇಕಿಲ್ಲ. ಈ ದೇಶಗಳಲ್ಲಿ ಇರುವ ಪರ್ಯಾಯ ಆಡಳಿತ ವ್ಯವಸ್ಥೆ ಅಲ್ಲಿನ ಪ್ರಜೆಗಳ ಬೌದ್ಧಿಕ ಮತ್ತು ಜೀವನ ಮಟ್ಟಕೆ ಸರಿಯಾಗಿರಬಹುದು. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ಒಂದು ಆದರ್ಶ ಮಾದರಿ ಅದನ್ನು ಎಲ್ಲರೂ ಸ್ವೀಕರಿಸಬೇಕು ಎಂದು ಭಾವಿಸಿ ಪ್ರಪಂಚದ ಎಲ್ಲ ಮೂಲೆ, ಮೂಲೆಗೆ ಅದನ್ನು ತಲುಪಿಸಲು ಹವಣಿಸುತ್ತಿರುವ ಅಮೇರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಮತ್ತೊಮ್ಮೆ ಆಲೋಚಿಸಬೇಕಾಗಿದೆ.
*



ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE) ಭಾಗ ೨
ಡಾ. ಜಿ. ಎಸ್. ಶಿವಪ್ರಸಾದ್





ಕಳೆದ ವಾರ ಪ್ರಕಟಿತವಾದ ‘ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು’ ಎಂಬ ಲೇಖನದ ಎರಡನೇ ಭಾಗವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಎರಡನೇ ಸಂಚಿಕೆಯಲ್ಲಿ ಅರಬ್ ಜನರ ಸಂಸ್ಕೃತಿಯ ಬಗ್ಗೆ , ಇಲ್ಲಿಯ ವಿಶಿಷ್ಟತೆಯ ಬಗ್ಗೆ, ಈ ರಾಷ್ಟ್ರದ ಹೆಮ್ಮೆಯ ಮಹಾನಗರವಾದ ದುಬೈ ಮತ್ತು ಅಲ್ಲಿಯ ಜನಜೀವನವನ್ನು ಕುರಿತಾಗಿ ಲೇಖಕರ ಅನಿಸಿಕೆಗಳಿವೆ. ದಯವಿಟ್ಟು ಓದಿ ಸ್ಪಂದಿಸಿ – ಸಂ

ಅಲೈನ್ ನಗರದ ಮಧ್ಯೆ ಇರುವ ಅಲೈನ್ ಓಯಸಿಸ್ ಒಂದು ಮುಖ್ಯ ಆಕರ್ಷಣೆ. ಮರಳುಗಾಡಿನ ಹಸಿರು ತಾಣಗಳ ಬಗ್ಗೆ ನನಗೆ ಹಿಂದಿನಿಂದ ಕುತೂಹಲ. ಬೆಟ್ಟದ ಆಸುಪಾಸಿನಲ್ಲಿರುವ ಈ ಓಯಸಿಸ್ ನೂರಾರು ಎಕರೆ ವಿಸ್ತಾರವಾಗಿದ್ದು ಇಲ್ಲಿ ಹಲವಾರು ಜಾತಿಯ ಹಸಿರುಮರಗಳಿದ್ದು ಡೇಟ್ಸ್ ಮರಗಳೇ ಹೆಚ್ಚು. ಬೆಟ್ಟದಿಂದ ಹರಿದುಬರುವ ನೀರನ್ನು ಪುರಾತನವಾದ 'ಫಲಾಜ್ ನೀರಾವರಿ ' ತಂತ್ರಜ್ಞಾನದಲ್ಲಿ ಇಲ್ಲಿ ನೀರನ್ನು ಹಾಯಿಸಿದ್ದಾರೆ. ಇಟಲಿ ಮತ್ತು ಇಂಗ್ಲೆಂಡಿನಲ್ಲಿ ರೋಮನ್ನರು ಕಟ್ಟಿದ್ದ ಅಕ್ವಾಡಕ್ಟ್ ಗಳನ್ನು ಹೋಲುವ ಈ ಮಾನವ ನಿರ್ಮಿತ ಕಾಲುವೆಗಳು ಒಳಚರಂಡಿಯಂತೆ ಮುಚ್ಚಿದ್ದು ಒಂದು ರೀತಿ ಗುಪ್ತಗಾಮಿನಿಗಳಾಗಿ ಹರಿಯುತ್ತವೆ. ಬಹುಶ ಓಪನ್ ವ್ಯವಸ್ಥೆಯಲ್ಲಿ ನೀರು ಸೆಖೆಗೆ ಆವಿಯಾಗಬಹುದು ಮತ್ತು ಮುಚ್ಚಿರುವ ಕಾಲುವೆಯಲ್ಲಿ ನೀರು ತಣ್ಣಗಿರುವ ಸಾಧ್ಯತೆ ಹೆಚ್ಚು. ಅಲ್ಲಲ್ಲೇ ಸಣ್ಣ ಸಣ್ಣ ಕಟ್ಟೆಗಳನ್ನು ಕಟ್ಟಿ ನೀರನ್ನು ಎಲ್ಲ ದಿಕ್ಕುಗಳಿಗೆ ಹಾಯಿಸಿದ್ದಾರೆ. ಇನ್ನೊಂದು ಸ್ವಾರಸ್ಯಕರವಾದ ಸಂಗತಿ ಎಂದರೆ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಡೇಟ್ಸ್ ಮರಗಳನ್ನು ಗಂಡು ಮತ್ತು ಹೆಣ್ಣು ಮರಗಳು ಎಂದು ವಿಂಗಡಿಸಿ ಗುರುತಿಸಬಹುದು. ಗಂಡು ಮರಗಳಲ್ಲಿ ಬಿಜೋತ್ಪತ್ತಿಯಾಗುತ್ತದೆ ಆದರೆ ಅವು ಫಲವನ್ನು ಕೊಡುವುದಿಲ್ಲ. ನಿಸರ್ಗದಲ್ಲಿ ಗಾಳಿಯು, ಗಂಡು ಮತ್ತು ಹೆಣ್ಣು ಮರಗಳ ನಡುವೆ ಪರಾಗ ಸ್ಪರ್ಶವನ್ನು ಮಾಡುತ್ತದೆ, ಆದರೆ ಅಧಿಕ ಸಂಖ್ಯೆಯಲ್ಲಿ ಸಮರ್ಥವಾಗಿ ಹಣ್ಣುಗಳನ್ನು ಪಡೆಯುವ ಉದ್ದೇಶದಿಂದ ಗಂಡು-ಹೆಣ್ಣು ಮರಗಳ ನಡುವೆ ಪರಾಗಸ್ಪರ್ಶವನ್ನು ಇಲ್ಲಿ ಮನುಷ್ಯ ಮಾಡುತ್ತಿದ್ದಾನೆ. ಇದಕ್ಕೆ ಬೇಕಾದ ಬೀಜಗಳು ಮಾರ್ಕೆಟ್ಟಿನಲ್ಲಿ ದೊರೆಯುತ್ತವೆ. ಹೀಗಾಗಿ ಹೆಣ್ಣು ಡೇಟ್ಸ್ ಮರಗಳನ್ನು ಕೃಷಿ ಮಾಡುವವರೇ ಜಾಸ್ತಿ. ಸಿಹಿಯಾದ ಡೇಟ್ಸ್ ಹಣ್ಣು ಬಿಡುವುದು ಮೇ ತಿಂಗಳಾದ ಮೇಲೆ. ನಾವು ಓಯಸಿಸ್ ಉದ್ದಗಲಕ್ಕೂ ವಿಹರಿಸಿದೆವು. ಇದು ಬಹಳ ಸುಂದರ, ಪ್ರಶಾಂತವಾದ ತಾಣ.  ನಾವು ಅಗ್ಗದ ದರದಲ್ಲಿ ಸಿಗುವ ಸಿಹಿಯಾದ ಡೇಟ್ಸ್ ಗಳನ್ನು ಕೊಂಡುಕೊಂಡೆವು.

ನಾವು ಅರಬ್ಬರನ್ನು ಹತ್ತಿರದಿಂದ ಕಂಡದ್ದು ಅಲೈನ್ ನಗರದ ಪ್ರತಿಷ್ಠಿತ 'ಲಾ ಬ್ರಯೋಷ್' ಎಂಬ ಫ್ರೆಂಚ್ ಕೆಫೆಯಲ್ಲಿ. ಇಲ್ಲಿ ಗಂಡಸರು ಅಡಿಯಿಂದ ಮುಡಿಯವರೆಗೆ ಶುಭ್ರವಾದ ನೀಟಾಗಿ ಇಸ್ತ್ರಿ ಮಾಡಿದ ಬಿಳಿ ನಿಲುವಂಗಿಯನ್ನು ತೊಟ್ಟು ತಲೆಗೆ ಒಂದು ಬಿಳಿ ವಸ್ತ್ರವನ್ನು ಇಳಿಬಿಟ್ಟು ಅದನ್ನು ತಲೆಸುತ್ತಳತೆಗೆ ಹೊಂದುವಂತಹ ಕರಿಪಟ್ಟಿಯಲ್ಲಿ ನೀಟಾಗಿ ತಲೆಯಮೇಲೆ ನಿಲ್ಲುವಂತೆ ಕಟ್ಟಿರುತ್ತಾರೆ. ತಮ್ಮ ಗಡ್ಡಗಳನ್ನು ಟ್ರಿಮ್ ಮಾಡಿ, ದೃಢಕಾಯರಾಗಿ, ಕೂಲಿಂಗ್ ಗ್ಲಾಸ್ ಏರಿಸಿ, ಘಮ ಘಮಿಸುವ ಪರ್ಫ್ಯೂಮ್ ಧರಿಸಿ ನೋಡಲು ಸ್ಮಾರ್ಟ್ ಆಗಿರುತ್ತಾರೆ. ಗಂಡಸರು ತೊಡುವ ಈ ನಿಲುವಂಗಿಗೆ ಕಂದೂರವೆಂದು ಕರೆಯಲಾಗುತ್ತದೆ. ಇಲ್ಲಿ ಬಹಳಷ್ಟು ಜನ ಶ್ರೀಮಂತರಾಗಿ, ಶಿಕ್ಷಿತರಾಗಿರುವಂತೆ ಕಂಡರು. ಇಲ್ಲಿ ಜೋರಾಗಿ ಮಾತನಾಡುವ, ಕ್ಯಾಕರಿಸಿ ಉಗಿಯುವ, ಗುಡುಗುಡಿ ಸೇದುವ ಜನರು ಕಾಣಲಿಲ್ಲ. ಹೆಂಗಸರು ತೆಳ್ಳಗೆ ಬೆಳ್ಳಗೆ ಇದ್ದು, ಮುಖಕ್ಕೆ ಮೇಕಪ್, ಲಿಪ್ಸ್ಟಿಕ್ ಹಾಕಿಕೊಂಡು ಅಬಯ್ ಎಂಬ ಕರಿ ನಿಲುವಂಗಿಯನ್ನು ತೊಟ್ಟು ತಲೆಗೆ ಹಿಜಾಬ್ ಧರಿಸಿರುತ್ತಾರೆ. ಇಲ್ಲಿಯ ಜನರು ಬೇರೆಯವರ ಜೊತೆ ದೃಷ್ಠಿ ಹಾಯಿಸಿ ‘ಹಾಯ್’ ಎನ್ನುವವರಲ್ಲ. ಕಿರುನಗೆಯನ್ನು ಬಿರುವವರಲ್ಲ, ಹೊರಗಿನವರ ಬಗ್ಗೆ ಅವರಿಗೆ ಆಸಕ್ತಿ ಇರುವಂತೆ ಕಾಣಲಿಲ್ಲ. ಇದು ಸರಿ ತಪ್ಪುಗಳ ವಿಮರ್ಶೆಯಲ್ಲ, ಅವರವರ ಸಂಸ್ಕೃತಿಗೆ ಸಂಬಂಧ ಪಟ್ಟ ವಿಚಾರವಷ್ಟೇ. ಸ್ಥಳೀಯರು ಅವರಪಾಡಿಗೆ ಅವರಿದ್ದು ಇಲ್ಲವೇ ಅವರ ಜನರ ಜೊತೆ ಬೆರೆತು ಮಾತನಾಡುತ್ತಾರೆ. ಹೆಂಗಸರ ಬಗ್ಗೆ ವಿಶೇಷವಾದ ಗೌರವ ಮತ್ತು ಮಡಿವಂತಿಕೆ ಇದೆ. ಅರಬ್ಬರಿಗೆ ಸಂಜೆಯಾದ ಮೇಲೆ ಅಥವಾ ವಾರಾಂತ್ಯದಲ್ಲಿ ನಗರದ ಪಾರ್ಕುಗಳಲ್ಲಿ, ಸಮುದ್ರ ತೀರಗಳಲ್ಲಿ ಕಾಲಕಳೆಯುವುದೆಂದರೆ ಬಲು ಖುಷಿ. ಇವರ ಜೀವನ ಪ್ರೀತಿ ಅದಮ್ಯವಾದದ್ದು. ಅವರ ಸಂಸಾರ ಕೂಡ ದೊಡ್ಡದು. ಕುಟುಂಬದ ಹಿರಿಯ ಕಿರಿಯ ಗಂಡಸರು ಹೆಂಗಸರು ಸದಸ್ಯರು ದೊಡ್ಡ ದೊಡ್ಡ ಕಾರುಗಳಲ್ಲಿ ಬಂದು ಪಿಕ್ನಿಕ್ ಮಾಡುತ್ತಾರೆ. ಹೊರಾಂಗಣದಲ್ಲಿ ತಿನ್ನುವುದು ಇಲ್ಲಿ ಸಾಮಾನ್ಯ. ಎಲ್ಲಿಯೂ ಒಂದಿಷ್ಟು ಕಸವನ್ನು ಎಸೆಯದೆ ಎಲ್ಲಿಯೂ ಗಲೀಜು ಮಾಡದ ಹಾಗೆ ಎಚ್ಚರಿಕೆ ವಹಿಸುತ್ತಾರೆ. ಒಂದು ಸಂಜೆ ಸೂರ್ಯಾಸ್ತವನ್ನು ನೋಡಿ ನಂತರ ಝಬೀಲ್ ಹಫೀತ್ ಬೆಟ್ಟದ ಬುಡದಲ್ಲಿರುವ ಸಂತೆಯಲ್ಲಿ ಚಾ ಮತ್ತು ಜಾಮೂನಿನಂತೆ ಕಾಣುವ ಲಗೈಮತ್ ಎಂಬ ಸಿಹಿ ಖಾದ್ಯವನ್ನು, ಬಿಸಿಬಿಸಿಯಾದ ಫಲಾಫಲ್ ಎಂಬ ಚೆನ್ನಾಕಾಳಿನ ಮಸಾಲೆ ಉಂಡೆಗಳನ್ನು ಸೇವಿಸಿದೆವು. ಇವರಿಗೆ ಮೀನು, ಲ್ಯಾಮ್ಬ್ ಮತ್ತು ಬಿರಿಯಾನಿ ಅನ್ನವೆಂದರೆ ಇಷ್ಟವೆಂದು, ಅದು ಇಲ್ಲಿಯ ಆಹಾರವೆಂದು ಕೇಳಿದೆ.

ಮೇಲೆ ಪ್ರಸ್ತಾಪಿಸಿದ ಬದಿಕಿನ ಚಿತ್ರಣ ಅರಬ್ ದೇಶದ ಒಳನಾಡಿನದ್ದಾದರೆ, ಇಲ್ಲಿಯ ಮಹಾ ನಗರಗಳಾದ ದುಬೈ ಅಬುದಾಬಿಯಲ್ಲಿನ ಜೀವನ ಸ್ವಲ್ಪ ಭಿನ್ನ ವಾಗಿದೆ. ಇವುಗಳನ್ನು ಪಾಶ್ಚಿಮಾತ್ಯ ನಗರಗಳಾದ ಲಂಡನ್ ಅಥವಾ ನ್ಯೂಯಾರ್ಕ್ ನಗರಗಳಿಗೆ ಹೋಲಿಸಬಹುದು. ಇಲ್ಲಿ ಸ್ಥಳೀಯ ಎಮಿರಾಟಿ ಗಳು ಯಾರು? ಹೊರಗಿನಿಂದ ವಲಸೆ ಬಂದವರು ಯಾರು? ಪ್ರವಾಸಿಗರು ಯಾರು? ಎಂದು ಗುರುತಿಸುವುದು ಕಷ್ಟ. ಈ ನಗರದಲ್ಲಿ ೩.6 ಮಿಲಿಯನ್ ಜನರು ವಾಸವಾಗಿದ್ದಾರೆ. ಯಾರು ಕಾರ್ಮಿಕ ವರ್ಗದವರು, ಯಾರು ವೈಟ್ ಕಾಲರ್ ಹುದ್ದೆಗಳಲ್ಲಿರುವವರು ಎಂದು ಸುಲಭವಾಗಿ ಗುರುತಿಸಬಹುದು. ಇಲ್ಲಿ ಹಲವಾರು ದೇಶಗಳಿಂದ ವಲಸೆ ಬಂದ ಜನರಿದ್ದಾರೆ. ಇದು ಬಹುಮುಖಿ ಸಂಸ್ಕೃತಿಯ ನಗರ. ತೀವ್ರಗತಿಯಲ್ಲಿ ನಗರ ಬೆಳೆಯುತ್ತಿದೆ. ಇಲ್ಲಿಯ ಜನಗಣತಿ
(ಡೆಮೊಗ್ರಾಫಿ) ಮಾಹಿತಿಗಳು ಸ್ವಾರಸ್ಯಕರವಾಗಿದೆ. ಇಲ್ಲಿ ಸುಮಾರು ೬೦% ದಕ್ಷಿಣ ಏಷ್ಯಾ ಮೂಲದವರು; ಭಾರತೀಯರು ೪೦%, ಪಾಕಿಸ್ತಾನಗಳು ೧೦%, ಬಾಂಗ್ಲಾದೇಶದವರು ೧೦%, ಈಜಿಪ್ಟಿನವರು ೧೦%, ಫಿಲಿಫೈನ್ಸ್ ೬%, ಪಶಿಮತ್ಯ ಮತ್ತು ಇತರರು ೧೩%. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸ್ಥಳೀಯ ಎಮಿರಾಟಿಗಳು ೧೨% ಅಷ್ಟೇ! ಒಟ್ಟಾರೆ ನೋಡಿದಾಗ ಹೊರಗಿನಿಂದ ವಲಸೆ ಬಂದವರು ೮೮%, ಮತ್ತು ಸ್ಥಳೀಯರು ಕೇವಲ ೧೨%. ಅಂದರೆ ಸಂಖ್ಯೆ ಲೆಕ್ಕದಲ್ಲಿ ಇಲ್ಲಿ ಎಮಿರಾಟಿಗಳೇ ಅಲ್ಪಸಂಖ್ಯಾತರು! ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಬರುವವರ ಬಗ್ಗೆ ಅಂಜಿಕೆ ಇರುವವವರು ಈ ಡೆಮೊಗ್ರಾಫಿಯನ್ನು ಗಮನಿಸಬೇಕು. ವಲಸೆ ಬಂದವರು ಒಂದು ದೇಶಕ್ಕೆ ಹೊರೆಯಾಗದೇ ಅದರ ಆರ್ಥಿಕ ಉನ್ನತಿಗೆ ಕಾರಣರಾಗಬಹುದು ಎಂಬ ವಿಚಾರವನ್ನು ಈ ಅರಬ್
ರಾಷ್ಟ್ರದ ಮಾದರಿಯ ಹಿನ್ನೆಲೆಯಲ್ಲಿ ಕಲಿಯಬೇಕು. ಸಂಯುಕ್ತ ಅರಬ್ ಸಂಸ್ಥಾನಗಳ ಈ ದೇಶದ ಮತ್ತು ಪಾಶ್ಚಿಮಾತ್ಯದೇಶಗಳ ಹೋಮ್ ಆಫೀಸ್ ಮತ್ತು ವೀಸಾ ನಿಯಮಗಳನ್ನು, ಅರ್ಹತೆ ಮತ್ತು ಹಕ್ಕುಗಳನ್ನು ಹೋಲಿಸಲು ಸಾಧ್ಯವಿಲ್ಲವಾದರೂ ಈ ಮಾಹಿತಿಗಳು ಗಮನಾರ್ಹ. ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಎಂಬುದುನ್ನು ನೇತ್ಯಾತ್ಮಕವಾಗಿ ಕಾಣಲಾಗುತ್ತಿದೆ ಮತ್ತು ಅಲ್ಲಿನ ಬಿಳಿಯರು ವಲಸಿಗರನ್ನು ಅನ್ಯರೆಂಬ ಭಾವನೆಯಲ್ಲಿ ಕಂಡು ಅವರು ತಮ್ಮ ದೇಶದ ಸಂಪನ್ಮೂಲಗಳನ್ನು ಕಬಳಿಸುತ್ತಾರೆ, ತಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಾರೆ ಎಂಬ ಊಹೆಯಲ್ಲಿ ಆತಂಕಗೊಂಡಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಎಂಬುದು ಜನಾಂಗಭೇಧ (ರೇಸಿಸಂ) ಭಾವನೆಗಳನ್ನು ಮೂಡಿಸಿ ಘರ್ಷಣೆಗೆ ಕಾರಣವಾಗಿದೆ. ಯು.ಕೆ ಯಲ್ಲಿ ಮಧ್ಯ ಪೂರ್ವ ರಾಷ್ಟ್ರಗಳ ಮತ್ತು ಆಫ್ರಿಕಾ ದೇಶಗಳ ಬಡ ನಿರಾಶ್ರಿತರು ಮಿತಿಮೀರಿದ ಸಂಖ್ಯೆಯಲ್ಲಿ ವಲಸೆ ಬಂದಾಗ ಎಲ್ಲರನ್ನೂ ಒಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಬ್ರಿಟನ್ನಿನ ಆತಂಕ ಅರ್ಥವಾಗುವಂತಹುದು. ಆದರೆ ಕಳೆದ ಕೆಲವು ವರ್ಷಗಳ ಹಿಂದೆ ತಮ್ಮದೇ ಸಂಸ್ಕೃತಿಯ, ತಮ್ಮದೇ ಧರ್ಮದ, ತಮ್ಮದೇ ಬಣ್ಣದ ಯೂರೋಪಿನ್ ವಲಸಿಗರ ಯು.ಕೆಗೆ ಉದ್ಯೋಗವನ್ನು ಅರಸಿ ಬರುತ್ತಿರುವಾಗ ಅವರ ಬಗ್ಗೆ ಸಂಶಯಾಸ್ಪದಗಳು ಮೂಡಿ ಅದು ಬ್ರೆಕ್ಸಿಟ್ಟಿಗೆ ಕಾರಣವಾಯಿತು. ಬಹುಶ ಇಂಡಿಯಾ ಮತ್ತು ಇತರ ಉಪ ರಾಷ್ಟ್ರಗಳಿಂದ ಉದ್ಯೋಗ ಅರಸಿ ದುಬೈಗೆ ಬರುವ ವಲಸಿಗರ ಬಗ್ಗೆ ಅರಬ್ಬರಿಗೆ ಸಧ್ಯಕ್ಕೆ ಆ ಆತಂಕವಿಲ್ಲವೆನ್ನಬಹುದು. ಈ ರಾಷ್ಟ್ರಗಳು ಇನ್ನು ಅಭಿವೃದ್ಧಿಗೊಳ್ಳುತ್ತಿವೆ, ಉದ್ಯೋಗ ಅವಕಾಶ ಇನ್ನೂ ಇದೆ, ಮುಂದೆ ಇವರ ನಿಲುವು ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.

ದುಬೈ ಮತ್ತು ಇತರ ನಗರಗಳ ಬಹು ಅಂತಸ್ತಿನ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವವರು ಬಹುಪಾಲು ದಕ್ಷಿಣ ಏಷ್ಯಾದಿಂದ ಬಂದ ಬಡ ವಲಸಿಗರು. ಅದರಲ್ಲೂ ಕೇರಳದಿಂದ ಬಂದ ಜನರು ಅಧಿಕ. ಕೇರಳದಲ್ಲಿ ಟ್ರೇಡ್ ಯೂನಿಯನ್ ಗಳು ಬಲವಾಗಿದ್ದು ಅಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಚಲಾಯಿಸಿ ಹೆಜ್ಜೆ ಹೆಜ್ಜೆಗೂ ಹರತಾಳವನ್ನು ಕೈಗೊಳ್ಳುತ್ತಾರೆ ಎಂದು ತಿಳಿದಿದ್ದೇನೆ. ಅರಬ್ ರಾಷ್ಟ್ರಗಳಲ್ಲಿ ಈ ಕಾರ್ಮಿಕರಿಗೆ ಯಾವ ಟ್ರೇಡ್ ಯೂನಿಯನ್ ಗಳನ್ನೂ ಕಟ್ಟಿಕೊಳ್ಳುವ ಹಕ್ಕಿಲ್ಲ. ಇವರಲ್ಲಿ ಕೆಲವರು ಶೋಷಣೆಗೆ ಒಳಗಾಗಿದ್ದಾರೆ ಎಂದು ಕೆಲವು ಮಾನವೀಯ ಹಕ್ಕುಗಳ ಸಂಘ ಸಂಸ್ಥೆಗಳು ಅಸಮಾಧಾನವನ್ನು ವ್ಯಕ್ತಪಡಿಸಿವೆ. ಅವರ ಕ್ಷೇಮಾಭಿವೃದ್ಧಿಯನ್ನು ಗಮನಿಸ ಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇಲ್ಲಿ ಹರತಾಳ ಮಾಡುವ ಕಾರ್ಮಿಕರನ್ನು ಡಿಪೊರ್ಟ್ ಮಾಡಲಾಗುತ್ತದೆ. ನನ್ನ ಮಿತವಾದ ಅರಿವಿನಲ್ಲಿ, ಇಲ್ಲಿಯ ಭಾರತೀಯ ಮೂಲದವರೊಡನೆ ಮಾತನಾಡಿದ ಬಳಿಕ ಇಲ್ಲಿ ವಲಸೆ ಬಂದ ಉದ್ದಿಮೆದಾರರು, ವೃತ್ತಿಪರರು, ಕೆಳವರ್ಗದ ಕಾರ್ಮಿಕರು ಎಲ್ಲರೂ ಖುಷಿಯಿಂದ ಇದ್ದಾರೆ ಎಂದೆನಿಸಿತು. ಅವರವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಇಲ್ಲಿ ಊಟ, ತಿಂಡಿ, ಮನೋರಂಜನೆ ಬಟ್ಟೆ ಬರೆ ದೊರೆಯುತ್ತದೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳು ಇನ್ನು ಉತ್ತಮವಾಗಬಹುದು. ದುಬೈ ಮೆಟ್ರೋವನ್ನು ಎಲ್ಲರೂ ಬಳಸುತ್ತಿದ್ದಾರೆ. ದುಬೈ, ಅಬುದಾಬಿ ಮತ್ತು ಇತರ ನಗರಗಳಲ್ಲಿ ಪ್ರಪಂಚದ ಎಲ್ಲರೀತಿ ಊಟ ತಿಂಡಿ ದೊರೆಯುತ್ತದೆ. ಹಲವು ಸಂಸ್ಕೃತಿಗಳು ಕರಗುವ ಕಡಾಯಿ ಅಮೇರಿಕ ಮತ್ತು ಯುರೋಪ್ ನಗರಗಳಷ್ಟೇ ಅಲ್ಲ, ದುಬೈ ಕೂಡ ಅದರಲ್ಲಿ ಒಂದು ಎಂದು ಪರಿಗಣಿಸಬಹುದು. ದುಬೈ ಕ್ರೀಕ್ ಪಕ್ಕದಲ್ಲೇ ಇರುವ ಹಳೇ ಬರ್ ದುಬೈ ಪ್ರದೇಶದಲ್ಲಿರುವ ಮೀನಾ ಬಜಾರನ್ನು ನಾವು ಪ್ರವೇಶಿಸಿದಾಗ ಅಲ್ಲಿ ಕಾಣುವುದು ನಮ್ಮ ಭಾರತದ ಉಡುಪು, ತಿಂಡಿ, ಚಿನ್ನ, ಆಭರಣ, ದಿನ ನಿತ್ಯ ಬಳಕೆ ವಸ್ತು ಇವುಗಳನ್ನು ಮಾರುವ ನೂರಾರು ಅಂಗಡಿಗಳು! ಗ್ರಾಹಕರನ್ನು ಹಲವಾರು ಭಾರತೀಯ ಭಾಷೆಗಳಲ್ಲಿ 'ಬನ್ನಿ ಸಾರ್, ಬನ್ನಿ ಮೇಡಂ; ಪರ್ಸ್ ನೋಡಿ, ವಾಚ್ ನೋಡಿ' ಎಂದು ದುಂಬಾಲು ಬೀಳುವ ವ್ಯಾಪಾರಿಗಳನ್ನು, ಅವರ ಸೇಲ್ಸ್ ಏಜೆಂಟುಗಳನ್ನು ಗಮನಿಸಿದಾಗ ನಾವು ಬೆಂಗಳೂರಿನ ಚಿಕ್ಕಪೇಟೆಯಲ್ಲೋ ಅಥವಾ ಚೆನ್ನಾಯಿನ ಮಾರ್ಕೆಟ್ಟಿನಲ್ಲೊ ಇದ್ದಂತೆ ಅನಿಸುತ್ತದೆ. ಇವುಗಳ ನಡುವೆ ನಮಗೆ ದೊರಕಿದ ಹಲ್ದಿರಾಮ್, ಪೂರಣಮಲ್, ಕೊನೆಗೆ ನಮ್ಮ ದಕ್ಷಿಣ ಭಾರತದ ಸರ್ವಾಣ ಭವನ್ ಖುಷಿ ತಂದಿತು. ಈ ಪ್ರದೇಶವನ್ನು ಬಿಟ್ಟು ಮೆಟ್ರೋ ಹತ್ತಿ ದುಬೈ ಮಾಲ್ ಆಸುಪಾಸನ್ನು ತಲುಪಿದರೆ ಅಲ್ಲಿ ಲೆಕ್ಕವಿಲ್ಲದ ನೂತನ ವಿನ್ಯಾಸದ ಕಟ್ಟಡಗಳು, ನಗರ ಮಧ್ಯದ ಕಾಲುವೆಗಳು, ಕಾರಂಜಿಗಳು, ಥಳ ಥಳಿಸುವ ದೀಪಾಲಂಕಾರಗಳು, ದುಬಾರಿ ಬೆಲೆ ವಸ್ತುಗಳನ್ನು ಮಾರುವ ಹೈ ಎಂಡ್ ಶೋ ರೂಂಗಳು ಕಾಣುತ್ತವೆ. ಇಲ್ಲಿ ಪಾಶ್ಚಿಮಾತ್ಯರು ಅಧಿಕ ಸಂಖ್ಯೆಯಲ್ಲಿ ಕಾಣುತ್ತಾರೆ. ಇವೆಲ್ಲಾ ನೋಡಿದಾಗ ನಾವು ಯೂರೋಪಿನಲ್ಲೋ ಅಥವಾ ಅಮೆರಿಕದಲ್ಲೋ ಇರುವ ಭಾವನೆ ಉಂಟಾಗುತ್ತದೆ. ಹೀಗೆ ದುಬೈ ಏಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ಸೇತುವೆಯಾಗಿ ನಿಂತಿದೆ. ಇಲ್ಲಿ ನೆಲೆಸಿರುವ ಪ್ರಪಂಚದ ಎಲ್ಲ ಜನರು ತಮ್ಮ ತಮ್ಮ ಸಾಂಸ್ಕೃತಿಕ ಪ್ರಜ್ಞೆಗೆ ನಿಲುಕುವ ಈ ನಗರವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಲ್ಲಿಯ ಎಮಿರಾಟಿಗಳು ಸ್ಥಳೀಯರಾಗಿದ್ದು ಜನಸಂಖ್ಯೆಯಲ್ಲಿ ಅವರೇ ಮೈನಾರಿಟಿಗಳಾಗಿದ್ದರೂ ಸರ್ಕಾರದ ಮತ್ತು ಆಡಳಿತದ ಸ್ಥಾನ ಅವರಿಗಷ್ಟೇ ಮೀಸಲಾಗಿದೆ. ವಲಸೆ ಬಂದವರಿಗೆ ಕೆಲಸಕ್ಕೆ ಹೊಂದುವಂತಹ ವೀಸಾ ಕೊಡಲಾಗುತ್ತದೆ. ವೀಸಾ ಪಡೆದನಂತರ ಸ್ಥಳೀಯ ನೌಕರಿ ನೀಡಿದ್ದ ಸಂಸ್ಥೆ ಒಂದರಿಂದ ಮೂರು ವರ್ಷದ ವರೆಗೆ ರೆಸಿಡೆನ್ಸ್ ಸ್ಟೇಟಸ್ ನೀಡುತ್ತದೆ. ಅದನ್ನು ಮತ್ತೆ ಮತ್ತೆ ವಿಸ್ತರಿಸಬೇಕಾಗುತ್ತದೆ. ಇಲ್ಲಿ ಖಾಯಂ ಆಗಿ ನೆಲೆಸಲು ಸಾಧ್ಯವಿಲ್ಲ. ಬಹುಶ ಈ ಕಾರಣಕ್ಕಾಗಿ ಹೆಚ್ಚಿನ ಜನ ಈ ದೇಶಗಳಿಗೆ ನಿರಾಶ್ರಿತರಾಗಿ ಬರುವುದಿಲ್ಲ. ವಿಶೇಷ ತಜ್ಞರಿಗೆ ೧೦ ವರ್ಷಗಳ ಮಟ್ಟಿಗೆ ರೆಸಿಡೆನ್ಸಿ ದೊರಕಬಹುದು. ನಿವೃತ್ತಿ ನಂತರ ಉದ್ಯೋಗಿಗಳು ತಮ್ಮ ದೇಶಕ್ಕೆ ಮರಳಬೇಕಾಗುತ್ತದೆ. ಇಲ್ಲಿ ಕೆಲವು ಹೊರತುಗಳು ಇರಬಹುದು. ಸ್ಥಳೀಯ ಎಮಿರಾಟಿಗಳಿಗೆ ವಿಶೇಷ ಸೌಲಭ್ಯಗಳಿವೆ. ಹೀಗಾಗಿ ಅರಬ್ಬರು “ಹುಟ್ಟಿದರೇ….ಎಮಿರಾಟಿಗಳಾಗಿ ಹುಟ್ಟಬೇಕು"! ಎಂದು ಹಾಡಬಹುದು.

ಈ ಒಂದು ಹಿನ್ನೆಲೆಯಲ್ಲಿ ಒಂದು ಲಘು ಹಾಸ್ಯ ಪ್ರಸಂಗವನ್ನು ಹಂಚಿಕೊಳ್ಳುತ್ತಿದ್ದನೇ. ನಾವು, ರಮೇಶ್ ಮತ್ತು ಅವರ ಮಿತ್ರರಾದ ಪ್ರತಾಪ್ ಮತ್ತು ವಿಜಯ ಅವರ ಅಬುದಾಬಿ ಮನೆಯಲ್ಲಿ ತಂಗಿದ್ದೆವು. ಒಂದು ಬೆಳಗ್ಗೆ ಉಪಹಾರದ ವೇಳೆಯಲ್ಲಿ ನಾನು ರೆಡಿಯಾಗಿ ಗರಿ ಗರಿಯಾಗಿ ಇಸ್ತ್ರಿಮಾಡಿದ್ದ ಪ್ಯಾಂಟ್, ಶರ್ಟ್ ಮತ್ತು ಥಳ ಥಳಿಸುವ ಶೂ ಕಟ್ಟಿ ಕೆಳಗೆ ಬಂದೆ. ನನ್ನನ್ನು ಗಮನಿಸಿದ ಪ್ರತಾಪ್ ಕೂಡಲೇ "ನೋಡಿ ಪೂರ್ಣಿಮಾ, ಪ್ರಸಾದ್ ಅವರು ಯಂಗ್ ಆಗಿ, ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ, ಅವರಿಗೆ ಇನ್ನೊಂದು ಮಾಡುವೆ ಮಾಡಿಬಿಡಬಹುದು" ಎಂದು ಕೀಟಲೆಯ ಮಾತುಗಳನ್ನಾಡಿದರು. ನಾನು ಕೂಡಲೇ "ಪ್ರತಾಪ್ ನನಗೊಂದು ಎಮಿರಾಟಿ ಹೆಣ್ಣನ್ನು ನೋಡಿ, ನಾನು ಮದುವೆಯಾಗಿ ಅಬುದಾಬಿಯಲ್ಲಿ ಶೇಕ್ ಆಗಿ, ನಿಶ್ಚಿಂತೆಯಾಗಿ, ಖಾಯಂ ಆಗಿ ಇದ್ದು ಬಿಡುತ್ತೇನೆ" ಎಂದೆ. ಅಂದಹಾಗೆ ಎಮಿರಾಟಿ ಹೆಂಗಸರು ಹೊರಗಿನವರನ್ನು ಮದುವೆಯಾಗುವುದು ನಿಷಿದ್ಧ. ಕಾನೂನು ಬಾಹಿರವಾದದ್ದು.

ಇಲ್ಲಿ ಎಮಿರಾಟಿಗಳೇ ಆಗಿರಲಿ ಅಥವಾ ಹೊರಗಿನವರೇ ಆಗಿರಲಿ ಗಂಡು ಹೆಣ್ಣುಗಳು ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಇತ್ತೀಚಿಗೆ ಕಾನೂನು ಸ್ವಲ್ಪ ಸಡಿಲಗೊಂಡು ಕೈ ಕೈ ಹಿಡಿಯಬಹುದು. ಹಿಂದೆ ಇಲ್ಲಿ ಬಹಿರಂಗವಾಗಿ ಚುಂಬನದಲ್ಲಿ ತೊಡಗಿದ್ದ ಪಾಶ್ಚಿಮಾತ್ಯ ಗಂಡು ಹೆಣ್ಣು ಜೋಡಿಯನ್ನು ಅಪರಾಧಿಗಳೆಂದು ಪರಿಗಣಿಸಲಾಗಿತ್ತು. ದುಬೈ, ಅಬುದಾಬಿಗೆ ಬರುವ ಪ್ರವಾಸಿಗಳು ಇಲ್ಲಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ನಿಯಮಗಳನ್ನು ಅರಿತುಕೊಳ್ಳುವುದು ಒಳಿತು. ಧಾರ್ಮಿಕ ಸ್ಥಳಗಳನ್ನು ಹೊರತಾಗಿ ಇಸ್ಲಾಂ ಧರ್ಮದ ಹೊರಗಿನ ಗಂಡಸರ ಮತ್ತು ಹೆಂಗಸರ ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚಿನ ನಿರ್ಬಂಧೆಗಳು ಇಲ್ಲ. ಆದರೂ ಹೆಂಗಸರು ತಮ್ಮ ಉಡುಗೆಯ ಬಗ್ಗೆ, ಸಭ್ಯತೆಯ ಬಗ್ಗೆ, ಗಮನ ನೀಡುವುದು ಒಳಿತು. ಇಲ್ಲಿಯ ನ್ಯಾಯಾಂಗದಲ್ಲಿ ಇಸ್ಲಾಂ ಧರ್ಮದವರಿಗೆ ಮದುವೆ, ವಿವಾಹ ವಿಚ್ಛೇದನೆ, ಅಸ್ತಿ ವಿಸರ್ಜನೆ ಈ ವಿಷಯಗಳಲ್ಲಿ ಷರಿಯಾ ಕಾನೂನು ಅನ್ವಯವಾಗುತ್ತದೆ. ಅನ್ಯ ಧರ್ಮಿಗಳಿಗೆ ಸಿವಿಲ್ ಕಾನೂನು ಅನ್ವಯವಾಗುತ್ತದೆ. ಹಿಂದೆ ಇದ್ದ ಭಯಂಕರ ಉಗ್ರ ಶಿಕ್ಷೆಗಳಾದ ಕೈ ಕಡಿಯುವುದು, ಚಾಟಿ ಏಟು ಮುಂತಾದ ಹಿಂಸಾತ್ಮಕ ಶಿಕ್ಷೆಗಳನ್ನು ರದ್ದುಮಾಡಲಾಗಿದೆ. ನಾಸ್ತಿಕ ವಾದ ಮತ್ತು ಧರ್ಮ ನಿರಪೇಕ್ಷೆ ಒಂದು ಆಯ್ಕೆ ಅಲ್ಲ. ಇಲ್ಲಿ ಅದು ಅಪರಾಧ. ಇಲ್ಲಿ ಹೊರಗಿನವರು ಪರ್ಮಿಟ್ ಇರುವ ನಿಗದಿತ ಬಾರುಗಳಲ್ಲಿ, ಹೋಟೆಲಿನಲ್ಲಿ, ಮನೆಗಳಲ್ಲಿ ಮದ್ಯಪಾನ ಮಾಡಬಹುದು. ಇಲ್ಲಿ ಎಲ್ಲ ದೇಶಗಳ ವಿಸ್ಕಿ, ವೈನ್ ಇತ್ಯಾದಿ ದೊರೆಯುವ ಅಂಗಡಿಗಳು ತೆರೆಯಲ್ಪಟ್ಟಿವೆ. ಇಲ್ಲಿ ವಾರಾಂತ್ಯವನ್ನು ಶುಕ್ರವಾರದ ಬದಲಿಗೆ ಪ್ರಪಂಚದ ಇತರ ದೇಶಗಳ ಅಂತರರಾಷ್ಟ್ರೀಯ ಕೆಲಸ ಕಾರ್ಯಗಳಿಗೆ ಹೊಂದುವಂತೆ ಶನಿವಾರ ಮತ್ತು ಭಾನುವಾರ ರಜಾದಿನಗಳಾಗಿ ಬದಲಾಯಿಸಲಾಗಿದೆ. ಇಸ್ಲಾಂ ಧರ್ಮಾದವರಿಗೆ ಶುಕ್ರವಾರ ಪ್ರಾರ್ಥನೆ ಮಾಡಲು ಅನುವು ಮಾಡಿಕೊಡಲಾಗಿದೆ. ನಿಧಾನವಾಗಿ ಹೊರಗಿನ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಾ ಒಂದು ಹದವಾದ ಹತೋಟಿಯಲ್ಲಿ ಈ ರಾಷ್ಟ್ರ ಬದಲಾಗುತ್ತಿದೆ.

ನಾನು ಪ್ರವಾಸ ಮಾಡುವ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಆಗಮಿಸಿ ಅಬುದಾಬಿಯ ಹಿಂದೂ ದೇವಾಲಯದ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದರು ಎಂದು ಸುದ್ದಿವಾಹಿನಿಯಿಂದ ತಿಳಿದೆ. ಇಸ್ಲಾಂ ಧರ್ಮದ ಕಟ್ಟು ನಿಟ್ಟುಗಳ ಮಧ್ಯೆ ಸಂಯುಕ್ತ ಅರಬ್ ರಾಷ್ಟ್ರದಲ್ಲಿ (UAE) ಪ್ರಸಕ್ತ ಭಾರತಕ್ಕಿಂತ ಹೆಚ್ಚು ಧಾರ್ಮಿಕ ಸಹಿಷ್ಣುತೆ ಇದೆಯೆಂದು ಅರಿತ್ತಿದ್ದೇನೆ. ಇಲ್ಲಿ ಮಸೀದಿ, ಮಂದಿರ ಮತ್ತು ಚರ್ಚುಗಳು ಒಂದರ ಪಕ್ಕ ಇನ್ನೊಂದಿದ್ದು ಜನ ಧಾರ್ಮಿಕ ಸೌಹಾರ್ದತೆಯನ್ನು ಉಳಿಸಿಕೊಂಡಿದ್ದಾರೆ, ಎಲ್ಲರಿಗೂ ಅವರವರ ಧಾರ್ಮಿಕ ನಂಬಿಕೆಗಳ ಜೊತೆ ಅನ್ಯ ಧರ್ಮದವರ ಬಗ್ಗೆ ಗೌರವವಿದೆ ಎಂದು ನಮನ್ನು ದುಬೈ ನಗರದಿಂದ ಅಲೈನ್ ನಗರಕ್ಕೆ ಕರೆತಂದ ಪಾಕಿಸ್ತಾನದ ಪೇಶಾವರ್ ಮೂಲದ ಪಠಾಣ್ ಖಾನ್ ಎಂಬ ಟ್ಯಾಕ್ಸಿ ಡ್ರೈವರ್ ಮೂಲಕ ತಿಳಿಯಿತು. ಈತನಿಗೆ ಭಾರತೀಯ ಮೂಲದ ಜನರ ಬಗ್ಗೆ ಸ್ನೇಹ ವಿಶ್ವಾಸ ಗೌರವಗಳಿರುವುದನ್ನು ಕಂಡು ಸಂತೋಷವಾಯಿತು. ಇಂದಿನ ಭಾರತದಲ್ಲಿ ಧರ್ಮವೆಂಬ ಅಮಲಿನಲ್ಲಿ ನಾವು ಹಿಂದೂ ಅಲ್ಲದವರನ್ನು, ಅದರಲ್ಲೂ ಇಸ್ಲಾಂ ಧರ್ಮದವರನ್ನು ಹೀಯಾಳಿಸಿ ಎರಡನೇದರ್ಜೆ ಪ್ರಜೆಗಳಂತೆ ಕಾಣುತ್ತಿರುವ ಪರಿಸ್ಥಿತಿಯಲ್ಲಿ ಪಠಾಣ್ ಖಾನ್ ಒಬ್ಬ ಆಪ್ತನಾಗಿ ಕಂಡುಬಂದ. ಅವನು ತನ್ನ ಪಾಕಿಸ್ತಾನದ ರಾಜಕೀಯ ಹುಳುಕುಗಳನ್ನು, ಅಲ್ಲಿಯ ಅಸಮರ್ಥ ಆಡಳಿತವನ್ನು ಮತ್ತು ತನ್ನ ಸ್ವಂತ ಕಷ್ಟಗಳನ್ನು ನಮ್ಮೊಂದಿಗೆ ಹಂಚಿಕೊಂಡ. “ಹಿಂದೊಮ್ಮೆ ನಾವು ಒಂದೇ ಅವಿಭಾಜ್ಯ ದೇಶದ ಪ್ರಜೆಗಳಾಗಿದ್ದೆವು, ವೈಯುಕ್ತಿಕ ನೆಲೆಯಲ್ಲಿ ನಾವೆಲ್ಲಾ ಮಿತ್ರರೇ ಆಗಿದ್ದರೂ, ಎರಡೂ ದೇಶಗಳ ರಾಜಕಾರಣ ನಮ್ಮನ್ನು ದೂರವಾಗಿಸಿದೆ” ಎಂದು ವ್ಯಥೆ ಪಟ್ಟ. ಅವನ ಪ್ರಾಮಾಣಿಕ ಅನಿಸಿಕೆಗಳನ್ನು ನಾವು ಒಪ್ಪಿಕೊಂಡೆವು. ಒಂದು ದೇಶದ ಒಳಗೇ ಬದುಕುತ್ತಿರುವಾಗ ಒಂದು ಸಂಕುಚಿತ ಐಡಿಯಾಲಾಜಿಗೆ ಬದ್ಧರಾಗಿ, ನಮ್ಮ ಆಲೋಚನಾಕ್ರಮಗಳ ಆಚೆಗೆ ನಾವು ವಿಚಾರ ಮಾಡುವುದಿಲ್ಲ. ನಮಗೆ ತಿಳಿದದ್ದೇ ಸರಿ, ಎಲ್ಲರು ಹೇಳುತ್ತಿರುವುದು ಸರಿ ಎಂದು ಕುರಿಯ ಮಂದೆಯ ಹಾಗೆ ಪರಿಣಾಮಗಳನ್ನು ಚಿಂತಿಸದೆ ಅನುಸರಿಸುತ್ತೇವೆ. ದೇಶ, ಗಡಿ ಸಂಸ್ಕೃತಿಗಳನ್ನು ದಾಟಿ ಹೊಸ ದಿಂಗಂತದಲ್ಲಿ ಕಾಲಿಟ್ಟಾಗ ಹಳೇ ಬ್ಯಾಗೇಜುಗಳಾದ ದೇಶಭಕ್ತಿ, ದೇಶಪ್ರೇಮಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡು ಅಲ್ಲಿ ವಿಶ್ವ ಮಾನವ ಪ್ರಜ್ಞೆ ಉಂಟಾಗುತ್ತದೆ. ಈ ವಿಚಾರವನ್ನು ಅರಿಯಲು ದೇಶದ ಹೊರಗೇನು ಕಾಲಿಡಬೇಕಾಗಿಲ್ಲ. ಒಂದು ಬಹುಮುಖಿ ಸಂಸ್ಕೃತಿಯಲ್ಲಿ ಬದುಕುವವರಿಗೆ ಹೊಳೆಯಬೇಕು. ಕೆಲವರಿಗೆ ಈ ವಿಚಾರಗಳು ಸುಲಭದಲ್ಲಿ ಹೊಳೆಯುತ್ತವೆ, ಕೆಲವರಿಗೆ ಹೊಳೆಯುವುದಿಲ್ಲ. ಮುಸ್ಲಿಂ ಧರ್ಮಾಂದತೆ, ಐಸಿಸ್ ಭಯೋತ್ಪಾದನೆ, ಹಿಂದೂಗಳ ಹಿಂದುತ್ವ ವಾದ, ಜಾತಿವಾದ, ಬಿಳಿಯರ ರೇಸಿಸಂ ಹೀಗೆ ಒಂದೊಂದು ಐಡಿಯಾಲಜಿಯ ಆಳಕ್ಕೆ ಇಳಿದವರನ್ನು ಕಂಡಾಗ ಒಂದು ಉಕ್ತಿ ನೆನಪಾಗುತ್ತದೆ ಅದು ಹೀಗಿದೆ; "ಭಾವಿಯ ಒಳಗೇ ಇರುವ ಕಪ್ಪೆಗಳಿಗೆ ಸಾಗರದ ವಿಸ್ತಾರವನ್ನು ತೋರಿಸುವುದಾದರೂ ಹೇಗೆ?"

ಅಂದಹಾಗೆ ಅರಬ್ ಸಂಯುಕ್ತ ರಾಷ್ಟ್ರವು ವಾಸಿಸಲು ಯೋಗ್ಯಸ್ಥಳವಾಗಿ ಇಲ್ಲಿ ಹಲವಾರು ಉದ್ಯೋಗ ಅವಕಾಶಗಳು ಇರುವಾಗ ಮಧ್ಯಪೂರ್ವ ದೇಶಗಳಾದ ಸಿರಿಯಾ, ಲಿಬಿಯಾ, ಇರಾಕ್ ಮುಂತಾದ ದೇಶಗಳಲ್ಲಿ ಯುದ್ಧಗಳಾಗಿ ಸ್ಥಳಾಂತರಗೊಂಡ ನಿರಾಶ್ರಿತರಿಗೆ ಈ ಶ್ರೀಮಂತ ಅರಬ್ ರಾಷ್ಟ್ರಗಳು ಏಕೆ ಆಶ್ರಯ ನೀಡುತ್ತಿಲ್ಲ? ಅವರು ಇಸ್ಲಾಂ ಧರ್ಮದವರಲ್ಲವೇ? ದೂರದಲ್ಲಿರುವ ಮತ್ತು ಭಿನ್ನ ಸಂಸ್ಕೃತಿಯುಳ್ಳ ಅಮೇರಿಕ, ಯು.ಕೆ, ಯುರೋಪ್ ದೇಶಗಳಿಗೆ ಏಕೆ ಈ ನಿರಾಶ್ರಿತರು ಲಗ್ಗೆ ಇಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅರಬ್ ರಾಷ್ಟ್ರಗಳಿಗೂ ಸಾಮಾಜಿಕ ಜವಾಬ್ದಾರಿಗಳು ಇರಬೇಕಲ್ಲವೇ?

ಸಂಯುಕ್ತ ಅರಬ್ ಸಂಸ್ಥಾನಗಳ ಈ ರಾಷ್ಟ್ರವು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಅಧಿಕವಾದ ಅನಿಲ ಮತ್ತು ತೈಲ ಸಂಪನ್ಮೂಲಗಳನ್ನು ಒಳಗೊಂಡು ಅದನ್ನು ಸರಿಯಾಗಿ ವ್ಯವಸ್ಥಿತವಾಗಿ ಬಳಸಿ, ದಕ್ಷ ಆಡಳಿತವನ್ನು ನೀಡುತ್ತಾ ಬಂದಿದೆ. ಈ ಸಂಯುಕ್ತ ಅರಬ್ ರಾಷ್ಟ ಇಷ್ಟರ ಮಟ್ಟಿಗೆ ಬೆಳೆಯಲು ನೈಸರ್ಗಿಕ ಸಂಪನ್ಮೂಲಗಳಷ್ಟೇ ಕಾರಣವಲ್ಲ. ಇಲ್ಲಿ ಸ್ಥಿರವಾದ ರಾಜಕಾರಣವಿದೆ, ನಾಯಕತ್ವವಿದೆ. ಅಬುದಾಬಿಯ ರಾಜರು ಈ ಸಂಯುಕ್ತ ದೇಶದ ಅಧ್ಯಕ್ಷರು. ದುಬೈ ರಾಜ ಇಲ್ಲಿಯ ಪ್ರಧಾನಿ. ಅಬುದಾಬಿ ಈ ರಾಷ್ಟ್ರದ ರಾಜಧಾನಿ. ಇಲ್ಲಿಯಾ ಫೆಡರಲ್ ನ್ಯಾಷನಲ್ ಕೌನ್ಸಿಲ್ ಆಡಳಿತ ನಡೆಸುತ್ತದೆ. ೫೦% ಸದಸ್ಯರನ್ನು ನೇಮಕ ಮಾಡಲಾಗುತ್ತದೆ, ಉಳಿದರ್ಧ ಸದಸ್ಯರನ್ನು ಚುನಾಯಿಸಲಾಗುತ್ತದೆ. ಕೆಲವು ಮಧ್ಯಪೂರ್ವ ರಾಷ್ಟ್ರಗಳಲ್ಲಿ ಅರಬ್ ಸ್ಪ್ರಿಂಗ್ ಎಂಬ ಸರಕಾರದ ವಿರುದ್ಧ ನಡೆದ ಚಳುವಳಿ ಮತ್ತು ಪ್ರತಿಭಟನೆ ಈ ಅರಬ್ ಸಂಯುಕ್ತ ರಾಷ್ಟ್ರದಲ್ಲಿ ನಡೆದಿಲ್ಲ ಎಂಬುದನ್ನು ಗಮನಿಸಬೇಕು. ಇದಕ್ಕೆ ಕಾರಣವೆಂದರೆ ಇಲ್ಲಿರುವ ಹೆಚ್ಚಿನ ನಿವಾಸಿಗಳಲ್ಲಾ ಹೊರಗಿನವರೇ, ಅವರಿಗೆ ಪ್ರತಿಭಟಿಸುವ ಹಕ್ಕಿಲ್ಲ. ಪ್ರತಿಭಟಿಸಿದರೆ ಎಮಿರಾಟಿಗಳೇ ಪ್ರತಿಭಟಿಸಬೇಕು. ಎಮಿರಾಟಿ ಸಮುದಾಯದ ಕೆಲವರು ಪ್ರಭುತ್ವವನ್ನು ಪ್ರಶ್ನಿಸಿರುವ ಪ್ರಸಂಗಗಳಿವೆ, ಅದನ್ನು ಹತ್ತಿಕ್ಕಿ ಹತೋಟಿಯಲ್ಲಿಡಲಾಗಿದೆ. ಅನಿಲ ಮತ್ತು ತೈಲ ಸಂಪನ್ಮೂಲಗಳು ಶಾಶ್ವತವಲ್ಲ. ಮೇಲಾಗಿ ವಿಶ್ವದಲ್ಲೇ ಫಾಸ್ಸಿಲ್ ಇಂಧನ ಬಳಕೆ ಕಡಿಮೆ ಮಾಡಿ ಜಾಗತಿಕ ತಾಪಮಾನವನ್ನು ಹತೋಟಿಯಲ್ಲಿ ಇಡಲು ನಿರ್ಬಂಧನೆಗಳು ಮೂಡುತ್ತಿವೆ. ಈ ಹಿನ್ನಲೆಯಲ್ಲಿ ಅರಬ್ ಸಂಯುಕ್ತ ರಾಷ್ಟ್ರವು ಪ್ರವಾಸೋದ್ಯಮ, ವಿಮಾನ ಸಾರಿಗೆ, ಟೆಕ್ ಕಂಪನಿಗಳ ಉದ್ಯಮ, ಕೃಷಿ ಮತ್ತು ಇನ್ನಿತರ ಆದಾಯಗಳ ಕಡೆ ಗಮನ ಹರಿಸಬೇಕಾಗಿದೆ. ಹೊಸ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾಗಿದೆ, ಇವುಗಳ ನಡುವೆ ಮಾನವೀಯ ಹಕ್ಕುಗಳನ್ನು, ಇಸ್ಲಾಂ ಧರ್ಮದ ಕಟ್ಟು ನಿಟ್ಟುಗಳನ್ನು, ಜಾಗತೀಕರಣ ತರುವ ಬದಲಾವಣೆಗಳನ್ನು, ಮತ್ತು ಇತರ ಸವಲಗಳನ್ನು ಎದುರಿಸಬೇಕಾಗಿದೆ. ಉದಾರವಾದ ನೀತಿಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. 'ಪರಿವರ್ತನೆ ಜಗದ ನಿಯಮ' ಎಂಬ ವಿಚಾರ ಅರಬ್ಬರನ್ನೂ ತಟ್ಟುತ್ತಿದೆ.

***