ಜಡೆಯಾಚೆಯ ತಾಯ ಮುಖ

ಡಾ ಜಿ ಎಸ್ ಶಿವಪ್ರಸಾದ್

ರೇಖಾಚಿತ್ರ: ಲಕ್ಷ್ಮೀನಾರಾಯಣ ಗುಡೂರ್.
ಶಿವಮೊಗ್ಗ ಜಿಲ್ಲೆಯ ಈಸೂರಿನ ಒಂದು ಬಾಡಿಗೆ ಮನೆಯಲ್ಲಿ ಒಂದು ಕೂಸು ತೊಟ್ಟಿಲಲ್ಲಿ ಮಲಗಿದೆ.  ತಾಯಿಯು, ಮಗು ಮಲಗಿದೆಯಲ್ಲ ಒಂದೆರಡು ನಿಮಿಷದಲ್ಲಿ ಬಂದರಾಯಿತು ಎಂದು ತಿಳಿದು ಮನೆಯ ಬಾಗಿಲನ್ನು ಎಳೆದುಕೊಂಡು ಹತ್ತಿರದ ಭಾವಿಗೆ ನೀರು ತರಲು ಹೋಗುತ್ತಾಳೆ.  ಆಗ ಇದ್ದಕ್ಕಿದ ಹಾಗೆ ಈ ಮನೆಯ ಪಕ್ಕದ ಹುಲ್ಲು ಜೋಪಡಿಗೆ ಬೆಂಕಿ ಹತ್ತಿಕೊಂಡು, ಅದು ಅಕ್ಕಪಕ್ಕದ ಮನೆಗಳಿಗೆ ಹಬ್ಬಿ ನಂತರದಲ್ಲಿ ಮಗು ಮಲಗಿದ್ದ ಮನೆಗೂ ಬೆಂಕಿ ಹತ್ತಿಕೊಳ್ಳುತ್ತದೆ.  ಜನರ ಗದ್ದಲ ಕೇಳಿ ನೀರಿಗೆ ಹೋಗಿದ್ದ ತಾಯಿ ಬಂದು ನೋಡುತ್ತಾಳೆ, ಮನೆಯ ಒಂದು ಭಾಗವನ್ನು ಬೆಂಕಿ ಮೇಯುತ್ತಿದೆ.  ಆ ಹೊಗೆ ಬೆಂಕಿಯ ನಡುವೆ ನುಗ್ಗಿ ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನೆತ್ತಿಕೊಂಡು, ಆಕೆ ಉರಿಯುವ ಮನೆಗಳ ನಡುವೆ ಹಾದು ಊರಾಚೆಯ ಬಯಲಿಗೆ ಬಂದು ಕೂರುತ್ತಾಳೆ.  ಬೆಂಕಿ ಹತ್ತಿದ ಸುದ್ದಿ ಕೇಳಿ ತತ್ತರಿಸಿಹೋಗಿದ್ದ ಸ್ಕೂಲ್ ಮೇಸ್ಟ್ರಾದ ಮಗುವಿನ ತಂದೆ ಬಂದು ನೋಡುತ್ತಾರೆ, ಮನೆಯಲ್ಲಿ ತಾಯಿ-ಮಗು ಇಲ್ಲ, ಮನೆ ಹೆಚ್ಚೂ ಕಡಿಮೆ ಸುಟ್ಟು ಹೋಗಿದೆ.  ಗಾಬರಿಗೊಂಡ ಅವರಿಗೆ ತಾಯಿ ಮಗು ಈ ಗಂಡಾಂತರದಿಂದ ಪಾರಾದ ವಿಚಾರವನ್ನು ಊರಿನ ಜನ ತಿಳಿಸುತ್ತಾರೆ.  ಊರ ಹೊರಗೆ ಮರದ ಕೆಳಗೆ ಸುರಕ್ಷಿತವಾಗಿ ಕೂತ ಹೆಂಡತಿ ಮತ್ತು ಮಗುವನ್ನು ನೋಡಿದ ಅವರಿಗೆ ಸಮಾಧಾನವಾಗುತ್ತದೆ. 

ಮುಂದಿನ ಎರಡು ವರ್ಷದ ತರುವಾಯ ಒಂದು ದಿನ ಮೇಸ್ಟ್ರು, ಅವರ ಹೆಂಡತಿ, ಮಗು ಸಮೇತವಾಗಿ ಶಿವಮೊಗ್ಗ ನಗರಕ್ಕೆ ಬಂದು ಥಳಥಳಿಸುವ ತುಂಗಾ ನದಿಯ ಮರಳು ಹಾಸಿನ ಮೇಲೆ ಕೂತು ತಾವು ತಂದ ಜೋಳದ ರೊಟ್ಟಿಯ ಗಂಟನ್ನು ಬಿಚ್ಚಿ ಸಂಜೆಯ ಉಪಾಹಾರದಲ್ಲಿ ಮಗ್ನರಾಗಿರುತ್ತಾರೆ. ಮಗುವಿಗೆ ಒಂದು ರೊಟ್ಟಿಯ ತುಣುಕನ್ನು ಕೊಟ್ಟಾಗ ಮಗು ರೊಟ್ಟಿಯನ್ನು ತಿನ್ನುತ್ತಾ ಅವರ ಬೆನ್ನ ಹಿಂದೆ ಅಡ್ಡಾಡಲು ಶುರುಮಾಡುತ್ತದೆ. ಸಂಜೆಯ ಬಿಸಿಲಿಗೆ ಬೆಳ್ಳಿಯಂತಿದ್ದ ನೀರು, ಅದರ ಜುಳು ಜುಳು ನಿನಾದ ಈ ಮಗುವನ್ನು ಬಾ ಬಾ ಎಂದು ಕರೆಯುತ್ತದೆ. ಎರಡು ವರ್ಷದ ಆ ಮಗು ತುಂಗಾನದಿಯ ಅಂಚಿಗೆ ಧಾವಿಸುತ್ತದೆ. ತಂದೆ-ತಾಯಿಯ ಬೆನ್ನ ಹಿಂದೆ "ಅಯ್ಯೋ ಅಯ್ಯೋ, ಅಲ್ನೋಡಿ ಆ ಮಗು ನೀರಿನಲ್ಲಿ ಬೀಳುತ್ತಿದೆ” ಎಂದು ಯಾರೋ ಕೂಗಿಕೊಳ್ಳುತ್ತಾರೆ. ತಾಯಿ, ತಿನ್ನುತ್ತಿದ್ದ ರೊಟ್ಟಿಯನ್ನು ತಟ್ಟನೆ ಕೆಳಗೆ ಹಾಕಿ ಓಡಿಹೋಗಿ ಅಷ್ಟು ಹೊತ್ತಿಗೆ ನೀರಿನಲ್ಲಿ ಮಗುಚಿ ಬಿದ್ದ ಮಗುವಿನ ತೋಳು ಹಿಡಿದು ಎತ್ತಿಕೊಂಡು ಹಿಂದಕ್ಕೆ ತರುತ್ತಾಳೆ.

ಈ ಮಗುವನ್ನು ನೀರು ಮತ್ತು ಬೆಂಕಿ ಅಪಾಯಗಳಿಂದ ಪಾರು ಮಾಡಿದ ತಾಯಿ, ಈ ಮಗುವಿಗೆ ಆರು ವರ್ಷ ತುಂಬಿದಾಗ ಅನಿರೀಕ್ಷಿತವಾಗಿ ತೀರಿಕೊಳ್ಳುತ್ತಾಳೆ. ಆಕೆಯ ಹೆಸರು ವೀರಮ್ಮ, ಮತ್ತವಳ ಈ ಮಗುವೇ ಜಿ ಎಸ್ ಶಿವರುದ್ರಪ್ಪ (ಡಾ ಜಿಎಸ್ಸೆಸ್); ಮೇಲೆ ಪ್ರಸ್ತಾಪಿಸಿರುವ ಮಗುವಿನ ತಂದೆ ಸ್ಕೂಲ್ ಮೇಸ್ಟ್ರು ಜಿ. ಶಾಂತವೀರಪ್ಪನವರು. ವೀರಮ್ಮನವರು ತೀರಿದ ಬಳಿಕ ಶಾಂತವೀರಪ್ಪನವರು ಮತ್ತೆ ಮದುವೆಯಾಗುತ್ತಾರೆ. ಅಲ್ಲಿಂದ ಮುಂದಕ್ಕೆ ಜಿಎಸ್ಸೆಸ್ ತಮ್ಮ ತಂದೆ ಶಾಂತವೀರಪ್ಪ ಮತ್ತು ಮಲತಾಯಿ ಶಾಂತಮ್ಮ ಅವರ ಆರೈಕೆಯಲ್ಲಿ ಬೆಳೆಯುತ್ತಾರೆ.

ಜಿಎಸ್ಸೆಸ್, ತೀರಿಕೊಂಡ ಅವರ ತಾಯಿಯನ್ನು ಕುರಿತು 'ಚತುರಂಗ' ಎಂಬ ತಮ್ಮ ಅಸಮಗ್ರ ಆತ್ಮ ಕಥನದಲ್ಲಿ ಹೀಗೆ ಬರೆಯುತ್ತಾರೆ; "ತಾಯಿಯ ಬಗ್ಗೆ ಅವಳ ಮುಖದ ಬಗ್ಗೆ ನನಗೆ ನಿಲ್ಲುವುದು ಒಂದು ಅಸ್ಪಷ್ಟವಾದ ನೆನಪು. ಮಮತೆ ತುಂಬಿದ ಮುಖ, ಹೊಳೆಯುವ ಎರಡು ಕಣ್ಣುಗಳು, ತಲೆಯ ತುಂಬಾ ಹೊದ್ದ ಹಸುರು ಸೆರಗು. ಆಕೆ ಮಧುರವಾಗಿ ಹಾಡುತ್ತಿದ್ದಳು. ಆಕೆ ತೀರಿದಾಗ ನನಗೆ ಆರು ವರ್ಷ ವಯಸ್ಸು. ನಾನು, ನನ್ನ ತಮ್ಮ ಆಕೆ ತೀರಿಕೊಂಡಾಗ ಹಾಯಾಗಿ ಆಟವಾಡುತ್ತಿದ್ದೆವು. ‘ನಿನ್ನ ಅಮ್ಮ ದೇವರ ಹತ್ತಿರ ಹೋಗಿದ್ದಾಳಪ್ಪ’ ಎಂದು ಅವರಿವರು ಹೇಳಿದ್ದನ್ನು ಕೇಳಿ ಮತ್ತೆ ಬರುತ್ತಾಳೆ ಎಂದು ನಂಬಿದ್ದೆ. ಆಮೇಲೆ, ಹಾಗೆ ಅವರು ಹೇಳಿದ್ದು ಸುಳ್ಳು ಎಂಬುದು ಅರ್ಥವಾಗಿ ಆಕೆ ಮತ್ತೆ ಬರುವುದೇ ಇಲ್ಲವೆಂದು ಖಚಿತವಾದಾಗ ನಿಜಕ್ಕೂ ಅಳು ಒತ್ತರಿಸಿಕೊಂಡು ಬಂತು. ಆಮೇಲೆ "ಕಂಡ ಕಂಡ ಹೆಣ್ಣ ಮೊಗದಿ ತಾಯಿ ಮುಖವನರಸಿದೆ". ಅನಂತರ ಇನ್ನೊಬ್ಬ ತಾಯಿ ಮನೆಯನ್ನು ತುಂಬಿದಳು"

ಹೀಗೆ ತಾಯಿಯನ್ನು ಕಳೆದುಕೊಂಡ ಕವಿಯ ದುಃಖ ಮುಂದಕ್ಕೆ ತಾಯಿಯನ್ನು, ಸ್ತ್ರೀಯರನ್ನು ಕುರಿತ ಅವರ ಅನೇಕ ಕವಿತೆಗಳಗೆ ವಸ್ತುವಿಷಯವಾಯಿತು. ಈ ಹಿನ್ನೆಲೆಯಲ್ಲಿ ಜಿಎಸ್ಸೆಸ್ ಅವರ ಕೆಲವು ಕವಿತೆಗಳನ್ನು ಗಮನಿಸೋಣ:
ಅನ್ವೇಷಣೆ 

ಕಂಡ ಕಂಡ ಹೆಣ್ಣ ಮೊಗದಿ
ನಿನ್ನ ಮೊಗವನರಸಿದೆ
ಏನಾದರೂ ಕಾಣಲಿಲ್ಲ
ನಿಡುಸುಯ್ಲೊಳು ಮುಳಿಗಿದೆ

ಎಳೆಯತನದಿ ಕಂಡ ನೆನಪು
ಮಸುಕು ಮಸುಕು ಮನದಲಿ
ಕರುಣೆಯಿಂದ ಕಂಡ ಕಣ್ಣು
ಮುತ್ತನಿಟ್ಟ ತುಟಿಯ ಚಿತ್ರ
ಇಷ್ಟು ಮಾತ್ರ ಉಳಿದಿರುವುದು
ಸವಿನೆನಪಿನ ಪುಟದಲಿ

ಒಬ್ಬಿಬ್ಬರ ಮೊಗದಿ ನಿನ್ನ
ಬಿಂಬ ಮೂಡಿದಂತೆ ಭಾಸ -
ವಾಯಿತೊಮ್ಮೆ ಅಂದು ನಾನು
ರೋಮಾಂಚನಗೊಳ್ಳಲು;
ಎಂತಿದ್ದೆಯೊ ತಾಯಿ ನೀನು
ನಾನು ಚಿತ್ರಗಾರನೇನು
ನಿನ್ನ ಚಿತ್ರ ಬರೆಯಲು?

ಇಂತೂ ಕಾಲ ಕಳೆದುದಾಯ್ತು
ಎಲ್ಲ ಹೆಣ್ಣ ಮೊಗದಿ ನಿನ್ನ
ಬಿಂಬ ಕಾಣುವಾಸೆಯೊಂದು
ನನ್ನ ಸುತ್ತ ಮುತ್ತಿತ್ತು

ಮದುವೆಯಾಯ್ತು ಮಕ್ಕಳಾಯ್ತು
ಬಾಳ ನೂಲು ಬಿಗಿಯಿತು
ಕಡೆಗೆ ಇಲ್ಲಿ ನನ್ನ ಮಡದಿ
ಮಗುವಿಗೆ ಮುತ್ತಿಡುವ ಹೊತ್ತು
ನಿನ್ನ ಚಿತ್ರ ಮೂಡಿತು
ಬೆರಗು-ಹರ್ಷ ಕವಿಯಿತು!
ಅನ್ವೇಷಣೆ ಎಂಬ ಈ ಕವಿತೆಯಲ್ಲಿ ತಾಯಿಯನ್ನು ಎಳೆ ವಯಸ್ಸಿನಲ್ಲಿ ಕಳೆದುಕೊಂಡ ಕವಿಯು ತನ್ನ ತಾಯಿಯ ಮುಖವನ್ನು ಕಂಡ ಕಂಡ ಹೆಣ್ಣುಗಳಲ್ಲಿ ಅನ್ವೇಷಿಸುತ್ತಾರೆ. ಆದರೆ ಹಾಗೆ ಅನ್ವೇಷಿಸುವುದಕ್ಕೆ ಮುನ್ನ ತಾಯಿಯ ಭಾವ ಚಿತ್ರ ಕವಿಗೆ ದೊರೆತಿಲ್ಲ. ಅವಳು ಹೇಗಿದ್ದಾಳೆ ಎಂಬ ಕಲ್ಪನೆಯೇ ಇಲ್ಲ. ತಾಯಿಯ ಕರುಣೆ, ಮಮತೆ, ಮುತ್ತಿಟ್ಟ ನೆನಪಷ್ಟೇ ಕವಿಯ ಮನಸ್ಸಿನಲ್ಲಿ ಉಳಿದಿದೆ. ಹೀಗಿರುವಾಗ ಕವಿ ಕಂಡ ಕಂಡ ಹೆಣ್ಣುಗಳಲ್ಲಿ ತಾಯಿ ಮುಖ ಅರಸುವುದಾದರೂ ಹೇಗೆ? ನೆನಪಿನಲಿ ಉಳಿದುದ್ದನ್ನು ಹಾಳೆಯ ಮೇಲೆ ಮೂಡಿಸಲು ಕವಿ ಚಿತ್ರಕಾರನೂ ಅಲ್ಲ. ತಾಯಿಯ ಮುಖದ ಅಸ್ಪಷ್ಟತೆಯ ನಡುವೆ ಸ್ಪಷ್ಟವಾಗಿ ಉಳಿದದ್ದು ಆಕೆಯ ಮಮತೆಯಷ್ಟೇ. ಈ ಅನ್ವೇಷಣೆಗಳ ನಡುವೆ ಕವಿಯ ಬಾಳಿನ ನೂಲು ಬಲವಾಗುತ್ತದೆ, ಕವಿಗೆ ಮದುವೆಯಾಗುತ್ತದೆ, ಮಕ್ಕಳಾಗುತ್ತವೆ. ಈ ಅನ್ವೇಷಣೆಯಲ್ಲಿ ಕವಿಗೆ ಕೊನೆಗೂ ತಾಯಿಯ ಮುಖ ಕಂಡದ್ದು ಒಂದು ಸುಂದರ ಭಾವನೆಯಲ್ಲಿ; ತನ್ನ ಹೆಂಡತಿಯೇ ತನ್ನ ಮಗುವಿಗೆ ಮುತ್ತನಿಡುವ ಚಿತ್ರದಲ್ಲಿ ಕವಿಯ ಅನ್ವೇಷಣೆ ಮುಗಿಯುತ್ತದೆ. ತಾಯಿಯ ಪ್ರೀತಿ ಮತ್ತು ಅದರ ಸ್ವರೂಪ ಸ್ಪಷ್ಟವಾಗುತ್ತದೆ.
ಜಿಎಸ್ಸೆಸ್ 'ತಾಯಿಗೆ' ಎಂಬ ನೀಳ್ಗವನದಲ್ಲಿ ಬರೆದ ಸಾಲುಗಳು ಹೀಗಿವೆ: 

ಬೇರೆ ಬೇರೆ ತಾಯಂದಿರನು ನೀನೆಂದು ಭ್ರಮಿಸಿ
ಕೂಗಿ ನಿಷ್ಫಲನಾಗಿ ತಪಿಸಿ
ನೀ ತೋರದಿರಲಾಗಿ
ಕಣ್ಣೀರಿನಲಿ ಮಲಗಿ
ಕನಸಿನಲಿ ನಾನಿನ್ನ ಕಂಡುದುಂಟು
ಕನಸೊಡೆಯೆ ಕಾದಿತ್ತು ಜಗದ ನಂಟು

ಮನೆಯ ತುಂಬಿದಲಂದು ಮತ್ತೊಬ್ಬ ಮಾತೆ
ಮನವ ತುಂಬಲೆ ಇಲ್ಲ - ಅವಳನ್ನದಾತೆ!
ನೀನಿತ್ತ ಒಲವನ್ನು ಆ ದಿವ್ಯ ಸುಧೆಯನ್ನು
ಪರರಿಂದ ಕಡವಾಗಿ ಪಡೆಯ ಬಹುದೇ?
ದೊರೆಯದಿರೆ ಅದಕಾಗಿ ಕೊರಗಬಹುದೇ.

ಈ ಬಗೆಯ ನೋವಿನಲಿ ಏನೋ ಚೆಲುವುಂಟು
ಪರರ ನೋವಿನ ಬಗೆಗೆ ಅನುಕಂಪವುಂಟು
ನೋವಿನಲಿ ನಲಿವುಂಟು
ನಲಿವಿನಲಿ ನೋವುಂಟು
ಎಂಬ ಅನುಭವವಾಗಿ ಬೆಳಕು ಮೂಡುತಿದೆ
ನೋವು ಸೃಷ್ಟಿಯ ಮೂಲ ಎಂದು ತೋರುತಿದೆ
ತಾಯಿಯನ್ನು ಕಳೆದುಕೊಂಡ ನೋವು, ಮತ್ತು ಮುಂದಕ್ಕೆ ಹೆಚ್ಚಾದ ಬಡತನ ಕವಿಯನ್ನು ಬಹಳವಾಗಿ ಕಾಡಿದ ವಿಚಾರವಾಯಿತು. ಈ ನೋವಿನಿಂದ ಉಂಟಾದ ಇತರರ ಬಗೆಗಿನ ಅನುಕಂಪ ಜಿಎಸ್ಸೆಸ್ ಅವರ ಅನೇಕ ಕವಿತೆಗಳಲ್ಲಿ ಕಾಣಬಹುದು; "ದೀಪವಿರದ ದಾರಿಯಲ್ಲಿ ತಡವರಿಸುವ ನುಡಿಗಳೇ, ಕಂಬನಿಗಳ ತಲಾತಲದಿ ನಂದುತಿರುವ ಕಿಡಿಗಳೇ, ಉಸಿರನಿಡುವೆ ಹೆಸರ ಕೊಡುವೆ, ಬನ್ನಿ ನನ್ನ ಹೃದಯಕೆ" ಎಂಬ ಸಾಲುಗಳು ಅವರಲ್ಲಿದ್ದ ಅನುಕಂಪೆಗೆ ಸಾಕ್ಷಿಯಾಗಿದೆ.  ಮೇಲಿನ ಸಾಲುಗಳಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರ; ಕವಿ ನೋವಿನಲ್ಲೂ ಚೆಲುವನ್ನು ಕಾಣಬಯಸುತ್ತಿದ್ದಾರೆ.  ಬಹುಶಃ ಬದುಕಿನ ಬಗ್ಗೆ ಕಾಳಜಿ, ಪ್ರೀತಿ ಇರುವವರು ಮಾತ್ರ ಈ ರೀತಿ ಆಲೋಚಿಸಬಹುದು.  ನೋವಿನಲಿ ನಲಿವುಂಟು ಎಂಬುದು ಒಂದು ತೀರಾ ವ್ಯತಿರಿಕ್ತವಾದ ಚಿಂತನೆ.  ಆದರೆ ಆ ನೋವಿನಲ್ಲಿ ನಲಿವನ್ನು ಕಾಣುವವರು ಆಶಾವಾದಿಗಳು.  ನೋವಿನಿಂದ ತಪ್ಪಿಸಿಕೊಳ್ಳಲು ಆಶಯ, ಭರವಸೆ ಅತಿ ಮುಖ್ಯ ಎಂದು ಕವಿ ತನ್ನ ಸ್ವಂತ ಅನುಭವದಿಂದ ಕಂಡುಕೊಂಡಂತಿದೆ.  ಮನುಷ್ಯನಿಗೆ ಮತ್ತು ಪ್ರಾಣಿಗಳಿಗೆ ಬೇಕಾಗಿರುವ ಉಳಿವಿನ ಪ್ರಜ್ಞೆ (Survival Instincts) ಈ ಸೋಲು, ನೋವು ಇವುಗಳಿಂದ ಕಲಿತ ಅನುಭವ.  ಸುಟ್ಟ ಬೂದಿಯಿಂದ ಮೇಲೆರುವ ಕಾಲ್ಪನಿಕ ಫೀನಿಕ್ಸ್ ಪಕ್ಷಿ ‘ನೋವು ಸೃಷ್ಟಿಯ ಮೂಲ’ ಎಂಬುದಕ್ಕೆ ರೂಪಕವಾಗಿ ನಿಲ್ಲುತ್ತದೆ.  ತಾಯಿಯನ್ನು ಕಳೆದುಕೊಂಡ ಕವಿ, ಫೀನಿಕ್ಸ್ ರೀತಿಯಲ್ಲಿ ಮತ್ತೆ ತನ್ನ ಬದುಕನ್ನು ಕಟ್ಟಿಕೊಳ್ಳುವುದು ಈ ಮೇಲಿನ ಸಾಲುಗಳಲ್ಲಿ ಅಭಿವ್ಯಕ್ತಿಗೊಂಡಿದೆ.

ಜಿಎಸ್ಸೆಸ್ ಅವರ ‘ಜಡೆ’ ಎನ್ನುವ ಪ್ರಖ್ಯಾತ ಕವನದಲ್ಲಿ ಕವಿ ಒಮ್ಮೆ ನಡೆದು ಬರುತ್ತಿರುವಾಗ ಮುಂದೆ ಕಂಡ ಲಲನೆಯರ ಬೆನ್ನ ಹಿಂದೆ ಜೋಲುವ ಜಡೆ ಕವನಕ್ಕೆ ಸ್ಪೂರ್ತಿಯಾಗುತ್ತದೆ. ಆ ಕವಿತೆಯ ಕೆಲವು ಆಯ್ದ ಸಾಲುಗಳು ಹೀಗಿವೆ;
ಲಲನೆಯರ ಬೆನ್ನಿನೆಡೆ 
ಹಾವಿನೊಲು ಜೋಲ್ವ ಜಡೆ
ಅತ್ತಿತ್ತ ಹರಿದ ಜಡೆ
ಚೇಳ್ ಕೊಂಡಿಯಂಥ ಜಡೆ
ಮೋಟು ಜಡೆ, ಚೋಟು ಜಡೆ
ಗಂಟು ಜಡೆ, ಅಕ್ಕ ತಂಗಿಯ
ಮುಡಿಯ ಹಿಡಿದು ನಾನೆಳದ ಜಡೆ
ಮಲ್ಲಿಗೆಯ ಕಂಪು ಜಡೆ
ಮಮತಾವೃಕ್ಷ ಬಿಟ್ಟ ಬಿಳಲಿನಂತೆ
ಹರಡಿರುವ ತಾಯ ಜಡೆ!
ಓ ಓ ಈ ಜಡೆಗೆಲ್ಲಿ ಕಡೆ!

ಸಂಜೆಯಲಿ ಹಗಲು ಕೆದರುವ ಕತ್ತಲೆಯ
ಕಾಳ ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ
ಬೆಳಕು ಜಡೆ
ಬೆಳ್ಳಕ್ಕಿಗಳ ಜಡೆ, ಕೊಂಚೆಗಳ ಜಡೆ
ನಕ್ಷತ್ರಗಳ ಮುಡಿದ ನೆಟ್ಟಿರುಳ ನಭದ ಜಡೆ
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ
ಹರಡಿರುವ ಮಳೆಯ ಜಡೆ
ಚಂದ್ರಚೂಡನ, ವ್ಯೋಮಕೇಶನ
ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ
ಎಲ್ಲವೂ ರಮ್ಯವೆಲ್ಲ!
ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ
ಇಂದಿಗೂ ಕಾಣದಲ್ಲ!
ಜಡೆಯ ನಾನಾ ಆಕಾರಗಳ ಚಿತ್ರಣ ಕವಿಗೆ ಕಾಣಿಸಿಕೊಳ್ಳುತ್ತದೆ; ಅಲ್ಲಿ ಕೆಲವು ಉದ್ದ ಜಡೆ, ಮೋಟುಜಡೆ, ಗಂಟು ಜಡೆ ಇವುಗಳ ವರ್ಣನೆ ಇದೆ. ಸೀತೆಯ ಕಣ್ಣೀರಿನಲಿ ಮಿಂದ ಜಡೆ ಮತ್ತು ಪಾಂಚಾಲಿಯ ಜಡೆ ಇದೆ.  ಅಕ್ಕ ತಂಗಿಯರ ಜಡೆ ಇದೆ, ಮುಖ್ಯವಾಗಿ ‘ಮಾತೃ ಮಮತಾವೃಕ್ಷ ಬಿಟ್ಟ ಬಿಳಲಿನಂತೆ ಹರಡಿರುವ ಜಡೆ’ ಇದೆ.  ಪರ್ವತ ಶ್ರೇಣಿಗಳ, ಕಾನನದ, ಹೊಳೆಯ, ಪ್ರಕೃತಿಯ ಜಡೆ ಇದೆ. ಕವಿತೆ ಸಾಗಿದಂತೆ ಆ ಜಡೆ ನೆಲವನ್ನು ಬಿಟ್ಟು ಮೇಲಕ್ಕೆ ಹಾರುತ್ತದೆ.  ಅಲ್ಲಿ ಕತ್ತಲೆಯ ಕಾಳ ಜಡೆ ಇದೆ, ಬೆಳಕಿನ ಜಡೆ ಇದೆ, ಬೆಳ್ಳಕ್ಕಿಗಳ ಸಾಲುಗಳ ಜಡೆ ಇದೆ.  ಕವನ ಮುಂದಿನ ಹಂತದಲ್ಲಿ ಆಕಾಶವನ್ನೂ ಮೀರಿ ಅಧ್ಯಾತ್ಮಕ್ಕೆ ಜಿಗಿಯುತ್ತದೆ.  ಅಲ್ಲಿ ಚಂದ್ರ ಚೂಡನ, ವ್ಯೋಮಕೇಶನ ವಿಶ್ವವನೇ ವ್ಯಾಪಿಸುತ ತುಂಬಿರುವ ಜಡೆ ಇದೆ.  ಎಲ್ಲವೂ ರಮ್ಯವಾಗಿದ್ದರೂ ಕವಿಗೆ ಇಲ್ಲೊಂದು ಕೊರತೆಯಿದೆ.  ಇದು ಕವಿತೆಯ ಕೊನೆ ಸಾಲಿನಲ್ಲಿ ಹೀಗೆ ಅಭಿವ್ಯಕ್ತಗೊಂಡಿದೆ; "ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ ಕಾಣದಲ್ಲ".  ಈ ಕೊನೆಯ ಸಾಲುಗಳು ಕವಿಯ ಮಟ್ಟಿಗೆ ತೀರಾ ವೈಯಕ್ತಿಕವಾದ ಭಾವನೆಯಾದರೂ, ಇಲ್ಲಿ ಓದುಗರಿಗೂ ಒಂದು ರೀತಿ ಕೊರತೆ, ಕೊರಗು ಇದೆ.  ಪರಿಸರ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ನಮಗೂ ಈ ಭೂಮಿ ಇಷ್ಟು ರಮ್ಯವಾಗಿ ಕಾಣುತ್ತಿದ್ದರೂ ಅಲ್ಲಿ ತಾಯ ಮುಖ ಕಾಣದಾಗಿದೆ.  ಸ್ವಾರ್ಥದಲ್ಲಿ ಮುಳುಗಿ ಆ ತಾಯ ಮುಖ ಕಾಣಲಾರದಷ್ಟು ಕುರುಡರಾಗಿದ್ದೇವೆ.  ತಾಯ ಮುಖ ಕಾಣದಷ್ಟು ನಾವು ವಿಕಾರಗೊಳಿಸಿದ್ದೇವೆ.  ಈ ಕವಿತೆಯ ಇನ್ನೊಂದು ಲಕ್ಷಣ ಎಂದರೆ ಕವಿಗಿರುವ ವಿಸ್ಮಯ.  ಹಬ್ಬಿರುವ ಗಿರಿಪಂಕ್ತಿ, ನಕ್ಷತ್ರಗಳು ತುಂಬಿದ ಆಕಾಶ, ಹರಿಯುವ ನದಿ ಇವು ಜಡೆಯನ್ನು ಹೋಲುವುದೇ ಒಂದು ವಿಸ್ಮಯ.  ವಿಸ್ಮಯವಿಲ್ಲದ ಬದುಕು ರಸಹೀನವಾದದ್ದು.  ಆ ವಿಸ್ಮಯವೇ ನಮ್ಮ ಕಲೆಗೆ, ಸಾಹಿತ್ಯಕ್ಕೆ ಸ್ಪೂರ್ತಿ.  ವಿಸ್ಮಯವೇ ಕಲ್ಪನೆಗೆ ಪ್ರೇರಣೆ.  ಕಲ್ಪನೆಯಿಂದ ಕಲೆ ಮತ್ತು ಕವಿತೆ.  

ಈ ಘಟನೆ ನಡೆದದ್ದು ಸುಮಾರು 75 ವರುಷಗಳ ಹಿಂದೆ. ಜಿಎಸ್ಸೆಸ್ ಅವರಿಗೆ ಆಗ ಸುಮಾರು 25 ವರ್ಷ ವಯಸ್ಸು. ಆಗ ಬಿಎ ಓದಲು ಮೈಸೂರಿಗೆ ಬರುತ್ತಾರೆ. ಬಡತನದ ಕಾರಣದಿಂದ ಎಷ್ಟೋ ದಿನಗಳ ಉಪವಾಸ ಅನಿವಾರ್ಯವಾಗುತ್ತದೆ. ಅವರಿಗೆ ಹಾಸ್ಟಲ್ ಅಡ್ಮಿಷನ್ ದೊರೆತಿರಲಿಲ್ಲ. ಹೀಗಾಗಿ ಕಾಲ ಕಾಲಕ್ಕೆ ಊಟ ಸಿಗುತ್ತಿರಲಿಲ್ಲ. ಒಂದು ದಿನ ಅವರು ತಮ್ಮ ಗುರುಗಳಾದ ತ ಸು ಶ್ಯಾಮರಾಯರ ತರಗತಿಯಲ್ಲಿ ಪಾಠ ಕೇಳುತ್ತಿರುವಾಗ ತಲೆ ಸುತ್ತು ಬಂದು ಹಾಗೆ ಡೆಸ್ಕ್ ಮೇಲೆ ತಲೆಯಿಟ್ಟು ಕುಸಿಯುತ್ತಾರೆ. ಶ್ಯಾಮರಾಯರು ಜಿಎಸ್ಸೆಸ್ ಅವರ ಅಸಹಾಯಕತೆಯನ್ನು ಗಮನಿಸಿ ಮನೆಗೆ ಕರೆದೊಯ್ದು, ಜೊತೆಗೆ ಕೂರಿಸಿಕೊಂಡು ಊಟ ಮಾಡುವಂತೆ ಒತ್ತಾಯಿಸುತ್ತಾರೆ. ಅಷ್ಟೇ ಅಲ್ಲ ಈ ಶಿಷ್ಯನನ್ನು ಮುಂದಿನ ಕೆಲವು ದಿನಗಳಲ್ಲಿ ಜೆ.ಎಸ್.ಎಸ್. ಮಠದ ಸ್ವಾಮೀಜಿಯವರ ಬಳಿ ಕರೆದುಕೊಂಡು ಹೋಗಿ ತಮ್ಮ ಶಿಷ್ಯನಿಗೆ ಹಾಸ್ಟೆಲಿನಲ್ಲಿ ತಂಗುವ ವ್ಯವಸ್ಥೆ ಮಾಡಿಕೊಡಬೇಕೆಂದು ಕೇಳಿ ಕೊಳ್ಳುತ್ತಾರೆ. ಸ್ವಾಮೀಜಿ ಒಪ್ಪುತ್ತಾರೆ. ಇದಾದ ಕೆಲವು ದಿನಗಳ ನಂತರ ಜಿಎಸ್ಸೆಸ್ ಹಣದ ಕೊರತೆಯಿಂದಾಗಿ ಫೀಸು ಕಟ್ಟಲು ಸಾಧ್ಯವಾಗುವುದಿಲ್ಲ. ಆಗ ಕಾಲೇಜಿಗೆ ಚಕ್ಕರ್ ಕೊಟ್ಟು ಹಾಸ್ಟೆಲಿನ್ಲಲೇ ಕಾಲ ಕಳೆಯುತ್ತಾರೆ. ಶಿಷ್ಯನ ಗೈರುಹಾಜರಿಯನ್ನು ಗಮನಿಸಿದ ಶ್ಯಾಮರಾಯರು ಜಿಎಸ್ಸೆಸ್ ಗೆ ಕೂಡಲೇ ಬಂದು ತಮ್ಮನ್ನು ಕಾಣುವಂತೆ ಇನ್ನೊಬ್ಬ ಶಿಷ್ಯನ ಮೂಲಕ ಹೇಳಿ ಕರೆಸುತ್ತಾರೆ. ಜಿಎಸ್ಸೆಸ್ ಆಗ ತಮ್ಮ ಆರ್ಥಿಕ ಸಂಕಟವನ್ನು ಗುರುಗಳಲ್ಲಿ ತೋಡಿಕೊಳ್ಳುತ್ತಾರೆ. ಕೂಡಲೇ ಶ್ಯಾಮರಾಯರು ಆಡಳಿತ ಕಚೇರಿಗೆ ಹೋಗಿ ಜಿಎಸ್ಸೆಸ್ ಬೇಡವೆಂದರೂ ಶಿಷ್ಯನ ಪರವಾಗಿ ತಾವೇ ಹಣ ಕಟ್ಟಿ ಫೀಸ್ ತುಂಬುತ್ತಾರೆ. ’ನೋಡು ಶಿವರುದ್ರಪ್ಪ ನೀನು ಇದನ್ನು ಸಾಲವೆಂದು ಪರಿಗಣಿಸು, ಮುಂದಕ್ಕೆ ನಿನಗೆ ಕೆಲಸ ಸಿಕ್ಕಾಗ ಅದನ್ನು ಹಿಂದಕ್ಕೆ ಕೊಡು’ ಎಂದು ಹೇಳುತ್ತಾರೆ. ಮುಂದಿನ ಕೆಲವು ತಿಂಗಳಲ್ಲಿ ಪ್ರತಿಭಾವಂತರಾದ ಜಿಎಸ್ಸೆಸ್ ಸ್ಕಾಲರ್ಶಿಪ್ ಪಡೆದು ಫೀಸ್ ಹಣವನ್ನು ಶ್ಯಾಮರಾಯರಿಗೆ ಹಿಂದಿರುಗಿಸಲು ಹೋದಾಗ, ’ನೀನು ಕೆಲಸಕ್ಕೆ ಸೇರಿದಾಗ ಕೊಡು’ ಎಂದು ನಿರಾಕರಿಸುತ್ತಾರೆ. ಆಗಿನ ಕಾಲಕ್ಕೆ ತ ಸು ಶ್ಯಾಮರಾಯರು ಮತ್ತು ಅವರ ಅಣ್ಣ ವೆಂಕಣ್ಣಯ್ಯನವರು ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ವೆಂಕಣ್ಣಯ್ಯನವರು ಕುವೆಂಪು ಅವರ ಗುರುಗಳು! ಈ ಇಬ್ಬರೂ ಮಹನೀಯರು ಬಹಳ ಉದಾರಿಗಳು. ಕರುಣಾಮಯಿಗಳಾದ ಇವರು ತಮ್ಮ ಅನೇಕ ಶಿಷ್ಯರಿಗೆ ಈ ರೀತಿಯ ಆರ್ಥಿಕ ನೆರವು ನೀಡಿ ಕೈ ಹಿಡಿದು ನಡೆಸಿದ್ದಾರೆ. ತ ಸು ಶ್ಯಾಮರಾಯರ ಮತ್ತು ಜಿಎಸ್ಸೆಸ್ ಅವರ ಗುರು ಶಿಷ್ಯ ಸಂಬಂಧ ಆಪ್ತವಾದದ್ದು ಮತ್ತು ಅನನ್ಯವಾದದ್ದು. ಜಿಎಸ್ಸೆಸ್ ಉದಯೋನ್ಮುಖ ಕವಿಯಾಗಿ ಅನೇಕ ಕವಿತೆಗಳನ್ನು ಬರೆಯುತ್ತಾರೆ. ಆ ಕವಿತೆಯನ್ನು ಒಮ್ಮೆ ಓದುವಂತೆ ಮತ್ತು ಅಭಿಪ್ರಾಯಗಳನ್ನು ತಿಳಿಸುವಂತೆ ಶ್ಯಾಮರಾಯರನ್ನು ಕೇಳಿಕೊಳ್ಳುತ್ತಾರೆ. ಶ್ಯಾಮರಾಯರು ತಮ್ಮ ಶಿಷ್ಯನನ್ನು ಚಾಮುಂಡಿ ಬೆಟ್ಟದ ತಪ್ಪಲಿನ ಪ್ರಶಸ್ತವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಒಂದು ಬಂಡೆಯ ಮೇಲೆ ಆಸೀನರಾಗಿ, ಮೂಗಿಗೆ ನಶ್ಯ ಏರಿಸಿ ತಮ್ಮ ಶಿಷ್ಯನಿಗೆ ಕವನವನ್ನು ಪ್ರಸ್ತುತ ಪಡಿಸಬೇಕೆಂದು ಆದೇಶ ನೀಡುತ್ತಾರೆ. ಜಿಎಸ್ಸೆಸ್ ತಮ್ಮ ಅನೇಕ ಕವಿತೆಗಳನ್ನು ಗುರುಗಳ ಮುಂದೆ ಪ್ರಸ್ತುತಪಡಿಸುತ್ತಾರೆ. ಗುರುಗಳು ತಾಳ್ಮೆಯಿಂದ ಶಿಷ್ಯನ ಎಲ್ಲ ಕವನಗಳನ್ನು ಕೇಳಿಸಿಕೊಂಡು ಅದನ್ನು ಮೆಚ್ಚುತ್ತಾರೆ, ಇನ್ನೂ ಹೆಚ್ಚು ಬರೆಯಲು ಪ್ರೋತ್ಸಾಹ ನೀಡುತ್ತಾರೆ. ಶಿಷ್ಯನಿಗೆ ಗುರುಗಳ ಈ ಮಾರ್ಗದರ್ಶನ ಅಮೂಲ್ಯವಾಗುತ್ತದೆ. ಶಿಷ್ಯ, ಗುರುಗಳಿಗೆ ಕೃತಜ್ಞತೆಯನ್ನು "ತೃಪ್ತಿ" ಎಂಬ ಶೀರ್ಷಿಕೆ ಉಳ್ಳ ವಿಶೇಷ ಕವಿತೆಯ ಮೂಲಕ ಅರ್ಪಿಸುತ್ತಾನೆ. ಶಿಷ್ಯ ಎದೆತುಂಬಿ ಹಾಡುತ್ತಾನೆ, ಗುರುಗಳು ಮನವಿಟ್ಟು ಕೇಳುತ್ತಾರೆ. ಶಿಷ್ಯ ಹಾಡು ಹಕ್ಕಿಯಾಗುತ್ತಾನೆ, "ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು ಕೇಳುವಿರಿ ಸಾಕೆನಗೆ ಅದುವೇ ಬಹುಮಾನ, ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ, ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ" ಎಂಬ ನಿರ್ಲಿಪ್ತ ನಿಲುವನ್ನು ವ್ಯಕ್ತಪಡಿಸುತ್ತಾನೆ.

ಈ ಕವಿತೆ ಮುಂದಕ್ಕೆ "ಎದೆ ತುಂಬಿ ಹಾಡಿದೆನು" ಎಂಬ ಭಾವಗೀತೆಯಾಗಿ ಅತ್ಯಂತ ಜನಪ್ರಿಯವಾಗುತ್ತದೆ. ಈ ಕವಿತೆ ಹೀಗಿದೆ:
ತೃಪ್ತಿ

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ
ಈ ಕವಿತೆಗೆ ರಾಗ ಸಂಯೋಜನೆ ಮಾಡಿದವರು ಮೈಸೂರು ಅನಂತಸ್ವಾಮಿಯವರು.  ಜಿಎಸ್ಸೆಸ್ ಇದನ್ನು ಬರೆದು 75 ವರ್ಷಗಳಾಗಿದ್ದರೂ ಇಂದಿಗೂ ಈ ಗೀತೆ ಅತ್ಯಂತ ಜನಪ್ರಿಯವಾಗಿದೆ.  ಎರಡೇ ಪಂಕ್ತಿಯ, ಕೇವಲ 10 ಸಾಲುಗಳ ಕವಿತೆ ಸರಳವಾಗಿ ದಟ್ಟವಾಗಿದೆ.  ಕವಿ ಇಲ್ಲಿ ಎಲ್ಲ ಓದುಗರಿಗೂ ಮತ್ತು ಕೇಳುಗರಿಗೂ ಕೃತಜ್ಞರಾಗಿದ್ದಾರೆ.  ಇದರಲ್ಲಿ ಭಗವದ್ಗೀತೆಯ ಕೆಲವು ಸಾಲುಗಳ ಛಾಯೆಯನ್ನು ಗುರುತಿಸಬಹುದು.  ಜಿಎಸ್ಸೆಸ್ ಆ ವಯಸ್ಸಿನಲ್ಲಿ ತಮ್ಮ ಕಷ್ಟಗಳ ಮಧ್ಯೆ ಭಗವದ್ಗೀತೆಯನ್ನು ಓದಿ ತಿಳಿದಿರುವ ಮತ್ತು ಅದರ ಪ್ರಭಾವದಿಂದ ರಚಿಸಿರುವ ಸಾಧ್ಯತೆ ಕಡಿಮೆ.  ಹೀಗಾಗಿ ಇದು ಬದುಕಿನ ಅನುಭವದಿಂದ ಮೂಡಿಬಂದಿರುವ ಸಾಲುಗಳಿರಬಹುದು.  ಕರ್ಮ ಎಂಬುದನ್ನು ಇಲ್ಲಿ ಕಾಯಕವೆಂದು ಅರ್ಥಮಾಡಿಕೊಳ್ಳಬೇಕು.  ಕಾಯಕ ಅನಿವಾರ್ಯ, ಅದನ್ನು ನಿರಪೇಕ್ಷೆಯಿಂದ ಶ್ರದ್ಧೆಯಿಂದ ಮಾಡುವ ಆಶಯವನ್ನು ಕವಿ ವ್ಯಕ್ತಪಡಿಸಿದ್ದಾರೆ. ಎಷ್ಟೋ ಬಾರಿ ನಮ್ಮ ಬದುಕಿನ ಕಥೆ-ವ್ಯಥೆಗಳನ್ನು ತಾಳ್ಮೆಯಿಂದ ಕೇಳುವವರಿದ್ದರೆ ಸಾಕು ಎನಿಸುತ್ತದೆ.  ನಮ್ಮ ಅಳಲನ್ನು ತೋಡಿಕೊಂಡಾಗ ಹೃದಯ ಹಗುರವಾಗುವುದು ಸಹಜ.  ಒಬ್ಬ ಶಿಷ್ಯನಿಗೆ ತನ್ನ ಗುರುವಿನಿಂದ ಪ್ರಶಂಸೆ ದೊರಕಿದರೆ ಅಷ್ಟೇ ಸಾಕು ಅದಕ್ಕಿಂತ ಹೆಚ್ಚಿನ ಬಹುಮಾನ ಏನಿದೆ?  ಹಕ್ಕಿ ಇಲ್ಲಿ ಅತ್ಯಂತ ಪರಿಣಾಮಕಾರಿಯಾದ ರೂಪಕವಾಗಿ ನಿಲ್ಲುತ್ತದೆ.  ಆ 'ಹಕ್ಕಿ' ಒಬ್ಬ ವೈದ್ಯನಾಗಿರಬಹುದು, ಒಬ್ಬ ಸರ್ಕಾರಿ ಸಾಹೇಬನಾಗಿರಬಹುದು ಅಥವಾ ಒಬ್ಬ ಕಲಾವಿದನಾಗಿರಬಹುದು.  ಹಕ್ಕಿಗೆ ತನ್ನ ಅನಿವಾರ್ಯ ಕಾಯಕವನ್ನು ಮಾಡುವ ಈ ಸಂದರ್ಭದಲ್ಲಿ ಉಂಟಾಗುವ ಭಾವ ಎಲ್ಲರಿಗೂ ಅನ್ವಯವಾಗುತ್ತದೆ.  ಈ ಕವಿತೆ ವಿಶೇಷವಾಗಿ ಗಾಯಕ - ಗಾಯಕಿಯರಿಗೆ ಹೆಚ್ಚು ಪ್ರಸ್ತುತವಾಗಿದೆ.  'ಹಾಡು ಹಕ್ಕಿ' ಎನ್ನುವ ಇಲ್ಲಿಯ ಉಲ್ಲೇಖ ಅದಕ್ಕೆ ಕಾರಣವಾಗಿದೆ.  ಅನೇಕ ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ಈ ಭಾವಗೀತೆಯನ್ನು ಕೊನೆಯಲ್ಲಿ ಪ್ರಸ್ತುತಪಡಿಸುವ ಸಂಪ್ರದಾಯವನ್ನು ಕಲಾವಿದರು ರೂಢಿಮಾಡಿಕೊಂಡಿದ್ದಾರೆ. 

ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ 'ಕಂಡ ಕಂಡ ಹೆಣ್ಣ ಮೊಗದಿ ತಾಯಿಯನ್ನು ಅರಸುತ್ತ' ಕೊನೆಗೆ 'ಜಡೆಯಾಚೆ ತಿರುಗಿಸಿದ ತಾಯ ಮುಖ ಕಾಣದಲ್ಲ' ಎಂದು ಪರಿತಪಿಸಿದ ಯುವಕ ಜಿಎಸ್ಸೆಸ್ ಅವರಿಗೆ ತಾಯ್ತನದ, ಮಾತೃವಾತ್ಸಲ್ಯದ ಇನ್ನೊಂದು ಸ್ವರೂಪ ಕಂಡದ್ದು ಅವರ ಗುರುಗಳಾದ ತ ಸು ಶ್ಯಾಮರಾಯರಲ್ಲಿ! ಜಿಎಸ್ಸೆಸ್ ಅನೇಕ ಕಡೆ ಹೇಳಿರುವ ಹಾಗೆ ಅವರ ಕಾವ್ಯ ಪರಿಶ್ರಮಕ್ಕೆ "ಕುವೆಂಪು ಗಾಳಿ ಬೆಳಕಾಗಿದ್ದರೆ ಶ್ಯಾಮರಾಯರು ನೆಲ ಮತ್ತು ನೀರು".

ಮುಂದಕ್ಕೆ ಶ್ಯಾಮರಾಯರು ಬರೆದ 'ಮೂರು ತಲೆಮಾರು' ಎಂಬ ಕೃತಿಯ ಮರುಮುದ್ರಣಕ್ಕೆ ಮುನ್ನುಡಿ ಬರೆದವರು ಜಿಎಸ್ಸೆಸ್! ಇಷ್ಟು ಹೊತ್ತಿಗೆ ಖ್ಯಾತ ಕವಿಯಾಗಿ, ಪ್ರೌಢ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿದ್ದ ಜಿಎಸ್ಸೆಸ್ ಅವರು ಈ ಕೃತಿಯ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ; "ಶ್ರೀ ತ ಸು ಶ್ಯಾಮರಾಯರು ನನ್ನ ಪಾಲಿಗೆ ಕೇವಲ ಅಧ್ಯಾಪಕರಲ್ಲ; ನನ್ನ ಹಾಗು ನನ್ನಂಥ ಅನೇಕರ ವ್ಯಕ್ತಿತ್ವಕ್ಕೆ ನೀರೆರೆದು ಬೆಳಸಿದ ವಾತ್ಸಲ್ಯದ ಪ್ರತಿಮಾಸ್ವರೂಪರು"

ಶ್ಯಾಮರಾಯರು ಮತ್ತು ಜಿಎಸ್ಸೆಸ್ ನೆನಪಿನಲ್ಲಿ ಉಳಿಯುವ ಆದರ್ಶ ಗುರು-ಶಿಷ್ಯರು. ಅವರ ಬದುಕು ನಮಗೆ ಆದರ್ಶವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಜಿಎಸ್ಸೆಸ್ ಶತಮಾನೋತ್ಸವ (7ನೆ ಫೆಬ್ರುವರಿ, 2026) ಇರುವುದರ ಹಿನ್ನೆಲೆಯಲ್ಲಿ ನಾನು ಮೇಲಿನ ವಿಚಾರಗಳನ್ನು ದಾಖಲಿಸಿದ್ದೇನೆ. ಜಿಎಸ್ಸೆಸ್ ಅವರ ಮಗನಾಗಿ ನಾನು ಈ ಬರಹವನ್ನು ಲೇಖನಿಯಿಂದ ಪುಟಗಳಲ್ಲಿ ಮೂಡಿಸುತ್ತಿರುವಾಗ ಅಪ್ಪನ ಬಗ್ಗೆ ಮಗನೇ ಬರೆಯುವುದು ಎಷ್ಟು ಸಮಂಜಸ ಎಂಬ ಭಾವನೆ ಮೂಡಿ ಬಂತು. ಅಲ್ಲಿ ಮುಜುಗರ ಉಂಟಾದರೂ ನನ್ನ ಒಳ ಮನಸ್ಸು, ನಾನು ಅವರ ಮಗನಾಗಿರುವುದು ನನ್ನ ಹುಟ್ಟಿನ ಆಕಸ್ಮಿಕವೆಂದೂ, ಅದಕ್ಕಿಂತ ಹೆಚ್ಚಾಗಿ ನಾನು ಅವರ ಅಭಿಮಾನಿಯೆಂದೂ, ಸಾಹಿತ್ಯಸಕ್ತನೆಂದೂ ಅವರ ಬರಹದಿಂದ ಪ್ರಭಾವಿತನಾದ ಒಬ್ಬ ಸಾಮಾನ್ಯನೆಂದೂ ಸಮರ್ಥನೆ ನೀಡಿತು. ನನ್ನ ಬಾಂಧವ್ಯದ ಚೌಕಟ್ಟಿನ ಹೊರಗೆ ನಿಂತು ಜಿಎಸ್ಸೆಸ್ ಅಭಿಮಾನಿಯಾಗಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಬದುಕಿನ ಕೆಲವು ವೈಯುಕ್ತಿಕ ವಿಚಾರಗಳನ್ನು, ಅದಕ್ಕೆ ಸಂಬಂಧಪಟ್ಟ ಕೆಲವು ಕವಿತೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಈ ರೀತಿಯ ಒಳನೋಟಗಳು ಪರಿವಾರದವರಿಂದ ಬಂದಾಗ ಅದು ಮೌಲಿಕವಾಗಿರುತ್ತದೆ ಎಂಬ ವಿಚಾರ ಕೂಡ ಈ ಬರವಣಿಗೆಗೆ ಪ್ರೇರಣೆ ನೀಡಿದೆ.

***
ಗಮನಿಸಿ:
ಜಡೆ ಕವನದ ಪೂರ್ಣ ಆವೃತ್ತಿ ಮತ್ತು ಅದನ್ನು ವಾಚನ ಮಾಡಿರುವ ಅನಿವಾಸಿ ಬಳಗದ ಅಮಿತಾ ರವಿಕಿರಣ್ ಅವರ ವೀಡಿಯೊ ಲಿಂಕ್ ಕೆಳಗಿದೆ, ಅದನ್ನು ಒತ್ತಿ ಕೇಳಬಹುದು. ವೀಡಿಯೊ ಸಹಕಾರಕ್ಕಾಗಿ ಅಮಿತಾ ಮತ್ತು ಡಾ ದೇಸಾಯಿಯವರಿಗೆ ಕೃತಜ್ಞತೆಗಳು. ಅದನ್ನು ಪ್ರಕಟಿಸಿದ ಡಾ ಗುಡೂರ್ ಅವರಿಗೂ ಧನ್ಯವಾದಗಳು.
ಈ ಬರಹಕ್ಕೆ ಒಪ್ಪುವಂತಹ ರೇಖಾ ಚಿತ್ರವನ್ನು ಬರೆದು ಕೊಟ್ಟ ಡಾ ಲಕ್ಷ್ಮೀನಾರಾಯಣ ಗುಡೂರ್ ಅವರಿಗೆ ಕೃತಜ್ಞತೆಗಳು.
ಉಲ್ಲೇಖನಕ್ಕೆ ಬಳಸಿಕೊಂಡ ಕೃತಿಗಳು; ಜಿ ಎಸ್ ಎಸ್ ಅವರ 'ಚತುರಂಗ' (ಅಸಮಗ್ರ ಆತ್ಮಕಥನ) ಮತ್ತು ಸಮಗ್ರಕಾವ್ಯ.

*****************************************************************

ಹಣತೆ ಮತ್ತು ಬೆಳಕು  

ಡಾ ಜಿ ಎಸ್ ಶಿವಪ್ರಸಾದ್

ಈ ವಾರದ ಸಂಚಿಕೆಯಲ್ಲಿ ಹಣತೆ ಮತ್ತು ಬೆಳಕು ಎಂಬ ಬರಹವನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಹಣತೆ ಮತ್ತು ಬೆಳಕು ಪ್ರಪಂಚದ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಪ್ರತಿಮೆ, ಉಪಮೆ ಮತ್ತು ರೂಪಕವಾಗಿ ವಿಜೃಂಭಿಸಿದೆ. ಕನ್ನಡ ಸಾಹಿತ್ಯದಲ್ಲಿ ಶತಮಾನಗಳಿಂದಲೂ ಈ ಬೆಳಕು, ಹಣತೆ ಎಂಬ ಪ್ರತಿಮೆಯನ್ನು (ದೀಪ, ದೀವಿಗೆ, ಪ್ರಣತಿ ಜ್ಯೋತಿ ಇತ್ಯಾದಿ ಹೆಸರಿನಲ್ಲೂ) ಬಳಸಲಾಗಿದೆ. ಈ ಒಂದು ಹಿನ್ನೆಲೆಯಲ್ಲಿ ಈ ಬರಹ ಮೂಡಿಬಂದಿದೆ. ಈಗ ತಾನೇ ದೀಪಾವಳಿ ಮುಗಿದಿದೆ, ನೀವು ನಿಮ್ಮ ಹಣತೆಯನ್ನು ಉಜ್ಜಿ ತೊಳೆದು ಎತ್ತಿಡುತ್ತಿರುವ ಸಂದರ್ಭದಲ್ಲಿ ಈ ಬರಹವನ್ನು ನಿಮ್ಮ ಮುಂದಿಡುತ್ತಿದ್ದೇನೆ. ನೀವು ಎಲ್- ಈ- ಡಿ ಲೈಟುಗಳನ್ನು ಬಳಸಿದ್ದರೂ ಚಿಂತೆಯಲ್ಲ. ಈ ಹಣತೆಗಾಗಿ ಸ್ವಲ್ಪ ಸಮಯ ಮಾಡಿಕೊಳ್ಳಿ. ಈ ಹಣತೆಯಲ್ಲಿ ನೀವು ಬೆಳಕನ್ನು ಕಂಡಿದ್ದರೆ ಹಣತೆ ಹಚ್ಚಿದ ನಾನು ತೃಪ್ತ. ನಿಮ್ಮ ಬೆಳಕನ್ನೂ ಹಂಚಿಕೊಳ್ಳಿ. 

-ಸಂ

ಕನ್ನಡ ಸಾಹಿತ್ಯದಲ್ಲಿ ಹಣತೆ, ಬೆಳಕು ಎಂಬ ವಿಷಯವಸ್ತುವನ್ನು, ಕಲ್ಪನೆಯನ್ನು ನೂರಾರು ವರ್ಷಗಳಿಂದ ಕವಿ ಮತ್ತು ಕಥೆಗಾರರು ಬಳಸುತ್ತ ಬಂದಿದ್ದಾರೆ. ಅನಾದಿಕಾಲದಿಂದಲೂ ಬೆಂಕಿ ಮತ್ತು ಅದು ಹೊರ ಹೊಮ್ಮುವ ಬೆಳಕು ನಮ್ಮ ಆಸಕ್ತಿಯನ್ನು ಕೆರಳಿಸಿದೆ. ಅಲ್ಲಿ ಒಂದು ಆಕರ್ಷಣೆಯಿದೆ, ಸೆಳೆತವಿದೆ. ಅದರ ಬಗ್ಗೆ ಭಯ ಗೌರವಗಳಿವೆ. ಇವು ಮನುಷ್ಯವರ್ಗವಲ್ಲದೆ ಇತರ ಜೀವಿಗಳಲ್ಲೂ ಇದೆ. ‘ಬೆಳಕು’ ಎಂಬ ಶಬ್ದ ಹಲವಾರು ಭಾವನೆಗಳನ್ನು ಉಂಟುಮಾಡುತ್ತದೆ. ಕತ್ತಲು ಮತ್ತು ಬೆಳಕಿನ ನಡುವೆ ಒಂದು ವೈರುಧ್ಯವಿದೆ.  'ಬೆಂಕಿಯಲ್ಲಿ ಅರಳಿದ ಹೂ' ಎನ್ನುವ ಅಭಿವ್ಯಕ್ತಿಯಲ್ಲೇ ಅದೆಷ್ಟೋ ಭಾವನೆಗಳನ್ನು, ವೈರುಧ್ಯವನ್ನು ಕಾಣಬಹುದು. ನಮ್ಮ ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಇವುಗಳ ನಮ್ಮ ಕಾವ್ಯ ಕಲ್ಪನೆಗಳಲ್ಲಿ ವಿಜೃಂಭಿಸಿವೆ. ಪ್ರಪಂಚದ ನಾನಾ ಭಾಷೆಗಳ ಸಾಹಿತ್ಯದಲ್ಲಿ ಹಣತೆ ಅಥವಾ ದೀಪವನ್ನು ಒಂದು ಪ್ರತಿಮೆ, ಉಪಮೆ ಮತ್ತು ರೂಪಕವಾಗಿ ಬಳಸಿಕೊಂಡು ಬೆಳಕಿನ ಬೆಲೆಯನ್ನು ಅದರ ಹಿರಿಮೆಯನ್ನು ಕುರಿತು ಕವಿ ಕಥೆಗಾರರು ಬರೆದಿದ್ದಾರೆ. 

ಹಣತೆ ಬೆಳಕಿನ ಸಂಕೇತ ಅಷ್ಟೇ ಅಲ್ಲ ಅದು ಅರಿವಿನ ಪ್ರತಿಮೆಯಾಗಿಯೇ ಹೆಚ್ಚುನಿಲ್ಲುವುದು. ಆ ಬೆಳಕಿನಲ್ಲಿ ಒಂದು ಶಕ್ತಿ ಇದೆ, ಆದುದರಿಂದಲೇ ಅದನ್ನು ನಾವು ದೇವ, ದೇವತೆಗಳಿಗೆ, ಅಳಿದವರಿಗೆ ನೆನಪಿನ ಗೌರವದ ಸೂಚಕವಾಗಿ ಬೆಳಗುತ್ತೇವೆ. ದೀಪವನ್ನು ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ಶುರುಮಾಡುತ್ತೇವೆ. ಆ ಜ್ಯೋತಿಯಲ್ಲಿ ಪವಿತ್ರತೆಯನ್ನು ಕಂಡು ಮಂಗಳಾರತಿಯಾಗಿ ಸ್ವೀಕರಿಸುತ್ತೇವೆ. ಚರ್ಚುಗಳಲ್ಲಿ ಮೇಣದ ಬತ್ತಿಯನ್ನು ಹಚ್ಚುತ್ತೇವೆ. ಕಡ್ಡಿ ಗೀಚಿದ ಕೂಡಲೇ ಶೂನ್ಯದಿಂದ ಹಠಾತ್ತನೆ ಮೂಡುವ ಬೆಂಕಿ, ಜ್ಯೋತಿ, ಬೆಳಕು ನಿಗೂಢವಾದದ್ದು ಮತ್ತು ಅತ್ಯಂತ ವಿಸ್ಮಯಕಾರಿ. ಒಂದು ಹಣತೆಯಿಂದ ಇನ್ನೊಂದು ಹಣತೆಗೆ ಹಬ್ಬುತ್ತಾ ಹೆಚ್ಚಾಗುವ ಬೆಳಕಿನ ಗುಣ ಮೆಚ್ಚುವಂತಹುದು. ಈ ಹಣತೆಯಲ್ಲಿ ನಮ್ಮ ನಿಮ್ಮ ಬದುಕಿನಂತೆ ಕೊಂಡಿಗಳಿರುತ್ತವೆ. ಒಂದು ಇನ್ನೊಂದನ್ನು ಅವಲಂಬಿಸಿರುತ್ತದೆ. ಹಣತೆಯಲ್ಲಿ ತೈಲವಿರಬೇಕು, ಆ ತೈಲದಲ್ಲಿ ಬತ್ತಿ ಕುಳಿತಿರಬೇಕು, ತೈಲವಿರುವವರೆಗೂ ಆ ಬತ್ತಿ ಉರಿಯುವುದು. ವಚನ ಸಾಹಿತ್ಯದಲ್ಲಿ ಅಲ್ಲಮ ಪ್ರಭುಗಳು ತಮ್ಮ ವಚನಗಳಲ್ಲಿ ಅನೇಕ ಉತ್ಕೃಷ್ಟ ಉಪಮೆಗಳನ್ನು ಬಳಸಿದ್ದಾರೆ. ಅವರು ಹಣತೆಯನ್ನು ಪ್ರಣತಿ ಎಂದು ಕರೆದಿದ್ದು, ತೈಲ ಎಣ್ಣೆ ಬತ್ತಿಯ ಸಂಬಂಧವನ್ನು ತಮ್ಮ ಒಂದು ವಚನದಲ್ಲಿ ಬಳಸಿದ್ದಾರೆ, ಅದು ಹೀಗಿದೆ;

ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯು ಬೆಳಗುವೆಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ?

ಎಣ್ಣೆ, ಬತ್ತಿ, ಮತ್ತು ಹಣತೆಯ ಬಗ್ಗೆ ಸಿನಿಮಾ ಸಾಹಿತ್ಯದಲ್ಲಿ ಮೂಡಿಬಂದ ಒಂದೆರಡು ಸಾಲು ಸೊಗಸಾಗಿದೆ. 'ಕನ್ನಡ ಕುಲದೇವಿ ಕಾಪಾಡು ತಾಯಿ' ಎಂದು ಶುರುವಾಗುವ ಸ್ಕೂಲ್ ಮಾಸ್ಟರ್ ಗೀತೆಯಲ್ಲಿ ವಿಜಯ ಭಾಸ್ಕರ್ ಬರೆದ ಸಾಲುಗಳು ಹೀಗೆದೆ;

"ಯಾವ ಎಣ್ಣೆಯಾದರೂ ಬೆಳಗುವುದು ಗುರಿಯೆಂಬ
ತತ್ವವನು ನೀನೆತ್ತಿ ತೋರು ಬಾ ತಾಯೆ"
ನಮ್ಮ ಅನಿವಾಸಿ ಬಳಗದ ಲೇಖಕ ಕವಿ ಡಾ ಕೇಶವ್ ಕುಲಕರ್ಣಿಯವರು ದೀಪಾವಳಿಯಂದು ಹಂಚಿಕೊಂಡ ಕವಿತೆಯೊಂದು ಹೀಗಿದೆ;
ಜಗಮಗಿಸುವ 
ಕಣ್ಣುಕುಕ್ಕುವ
ನೂರಾರು ಬಣ್ಣ ಬದಲಿಸುವ
ಈ ಸಾಲು ಸಾಲು
ಎಲ್-ಈ-ಡಿ ಲೈಟುಗಳ ನಡುವೆ
ನನ್ನ ಹಣತೆ ಯಾರಿಗೂ ಕಾಣುವುದಿಲ್ಲ
ಎಂದು ನನಗೆ ಚೆನ್ನಾಗಿ ಗೊತ್ತು

ಆದರೂ

ತವರಿನಿಂದ ತಂದ ಬತ್ತಿಗೆ
ಊರಿಂದ ತಂದ ತುಪ್ಪ ಹಾಕಿ
ಅಜ್ಜಿಯಿಂದ ಬಳುವಳಿಯಾದ ಹಣತೆಗೆ
ಮಗನಿಂದ ದೀಪ ಹಚ್ಚಿಸಿ
ದೀಪಾವಳಿ ಆಚರಿಸುತ್ತೇನೆ

ಇಲ್ಲಿ ಆಧುನಿಕ ಎಲ್-ಈ-ಡಿ ದೀಪಗಳನ್ನು ಮತ್ತು ಹಳೆಯ ಹಣತೆಯನ್ನು ಜೊತೆಗಿಟ್ಟು ಹಳತು ಮತ್ತು ಹೊಸತರ ನಡುವಿನ ಸಂಬಂಧವನ್ನು ಕವಿ ಕೇಶವ್ ಅನ್ವೇಷಿಸಿದ್ದಾರೆ. ಎಲ್ -ಈ -ಡಿ ಲೈಟುಗಳಿಗೆ ಬಣ್ಣ ಬದಲಿಸುವ ಗುಣವಿದೆ, ಅಲ್ಲಿ ತೋರ್ಪಡಿಕೆ ಇದೆ. ಅಲ್ಲಿ ಬಹಿರಂಗ ಪ್ರದರ್ಶನಕ್ಕೆ ಹೆಚ್ಚು ಅವಕಾಶವಿದೆ. ಇವುಗಳನ್ನು ಹತ್ತಿರ ಹೋಗಿ ಸ್ಪರ್ಶಸಿದಾಗ ಮಾತ್ರ ಇವು ತಣ್ಣಗೆ ಉರಿಯುವ ಲೈಟುಗಳೇ ಹೊರತು ಇಲ್ಲಿ ಬೆಚ್ಚನೆಯ ಅನುಭವವಿಲ್ಲ ಎಂಬುದು ತಿಳಿಯುತ್ತದೆ.  ಎಣ್ಣೆ ಬತ್ತಿ ಇರುವ ಹಳೆ ಹಣತೆಗೆ ಘನತೆ, ಬಾಂಧವ್ಯ, ಪರಂಪರೆ, ಒಂದಿಷ್ಟು ಇತಿಹಾಸ, ಅನುಭವ, ಮತ್ತು ಬಣ್ಣ ಬದಲಿಸಿದಂತೆ ಒಂದೇ ರೀತಿಯ ಬೆಳಕನ್ನು ನೀಡುವ ಸಾಮರ್ಥ್ಯವಿದೆ. ಎಣ್ಣೆ ಇರುವವರೆಗೂ ಶ್ರದ್ಧೆಯಿಂದ ಉರಿಯುವ ಮತ್ತು ಸುಡುವ ಶಕ್ತಿ ಇದೆ. ಅದರ ಹಿಂದೆ ಅನೇಕ ಕಥೆ, ಕವನಗಳಿವೆ. ಈ ಬಣ್ಣ ಬದಲಿಸುವ, ಬೂಟಾಟಿಕೆ ಪ್ರಪಂಚದಲ್ಲಿ ಅಬ್ಬರಗಳ ನಡುವೆ ಹಣತೆ ಕಾಣದಾಗಿದೆ ಎಂಬುದು ವಿಷಾದದ ಸಂಗತಿ. ಈ ಕವನ ನಮ್ಮ ವಾಸ್ತವ ಬದುಕಿಗೆ ಕನ್ನಡಿ ಹಿಡಿದಿದೆ.
ಬಿ ಎಂ ಶ್ರೀ ಅವರು 'ಕರುಣಾಳು ಬಾ ಬೆಳಕೇ' ಎಂಬ ಅನುವಾದಿತ ಕವಿತೆಯಲ್ಲಿ ಮುಸಿಕಿದ ಮಬ್ಬಿನಲ್ಲಿ ಕೈ ಹಿಡಿದು ನಡೆಸುವಂತೆ ಬೆಳಕನ್ನು ಬೇಡಿಕೊಳ್ಳುವ ಪ್ರಾರ್ಥನೆಯಿದೆ. ಈ ಮೂಲ ಕವಿತೆಯನ್ನು ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಪಾದ್ರಿ ಮತ್ತು ಕವಿ ಜಾನ್ ಹೆನ್ರಿ ನ್ಯೂಮನ್ Lead, Kindly Light ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾನೆ. ಈ ಕವಿತೆಯನ್ನು ಬರೆದ ಹಿನ್ನೆಲೆ ಎಂದರೆ 1833 ಯಲ್ಲಿ ನ್ಯೂ ಮ್ಯಾನ್ ಇಟಲಿಯ ಪಲೆರ್ಮೊ ಎಂಬ ನಗರದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದು ಆತ ಇಂಗ್ಲೆಂಡಿಗೆ ತುರ್ತಾಗಿ ಮರಳಬೇಕಾಗಿರುತ್ತದೆ. ಅವನು ಹಿಂದಿರುಗುವಾಗ ಸಮುದ್ರಮಾರ್ಗದಲ್ಲಿ ಮಬ್ಬು ಕವಿದು ಗಾಳಿ ಸ್ಥಬ್ದವಾಗಿ ಹಡಗು ಚಲಿಸಲಾರದೆ ನಿಂತುಕೊಂಡು ಬಿಡುತ್ತದೆ. ಆ ಒಂದು ಅನಿಶ್ಚಿತ ಸನ್ನಿವೇಶದಲ್ಲಿ ನ್ಯೂಮನ್ ಈ ಕವಿತೆಯನ್ನು ರಚಿಸಿದ್ದಾನೆ. ಅದರ ಅನುವಾದ ಹೀಗಿದೆ; 
ಕರುಣಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ 
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯಾ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿ ಇಡಿಸು ಬಲು ದೂರ ನೋಟವನು
ಕೇಳಿದೊಡನೆಯೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯೂ ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯ?
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ
ಈ ಕವಿತೆಯನ್ನು ಮುಂದಕ್ಕೆ ವಿಸ್ತರಿಸಿನೋಡುವುದಾದರೆ, ಈ ಕವಿತೆಯಲ್ಲಿ ನ್ಯೂಮನ್ ತನ್ನ ನಂಬಿಕೆಗಳನ್ನು ಮತ್ತೆ ಅವಲೋಕಿಸುತ್ತಾನೆ. ಕರುಣಾಳು ಬೆಳಕು ಇಲ್ಲಿ ಅದ್ವಿತೀಯವಾದ, ಅಗೋಚರವಾದ  ಶಕ್ತಿ ಅಥವಾ ದೈವತ್ವದ  ಕಲ್ಪನೆ.

ಇದು ಒಂದು ಅಂತರಂಗದ ಅನ್ವೇಷಣೆಯೂ ಆಗಿದೆ. ನನ್ನಲ್ಲಿ ದೂರದೃಷ್ಟಿಯನ್ನಿಡಿಸು ಆದರೆ ನನಗೆ ಈಗ ಬೇಕಾಗಿರುವುದು ಸಣ್ಣ ಹೆಜ್ಜೆ, ನನಗೆ ಅದೇ ಸಾಕು ಎನ್ನುವ ಸಾಲುಗಳು ನಮ್ಮ ಮನುಷ್ಯ ಪ್ರಯತ್ನದ ಇತಿಮಿತಿಗಳನ್ನು ಇಲ್ಲಿ ನೆನಪಿಸುತ್ತದೆ. ದೂರದ ತಾರೆಗಳನ್ನು ಹಿಡಿಯುವುದಕ್ಕೆ ಮುನ್ನ ಕೈಯಲ್ಲಿರುವ ಹಣತೆಗೆ ಬತ್ತಿ, ಎಣ್ಣೆಯನ್ನು ಹುಡುಕುವುದು ಸರಿಯಾದ ವಿಚಾರವೆಂದು ಇನ್ನೊಬ್ಬ ಕವಿ ಹೇಳುತ್ತಾರೆ. ಹಿಂದೆ ನಾನು ನಿನ್ನನ್ನು ಬೇಡದೆ ಹೋದೆ, ಇದುವರೆವಿಗೂ ನನ್ನ ದಾರಿಯನ್ನು ನಾನೇ ಕಂಡುಕೊಳ್ಳಲು ಪ್ರಯತ್ನಿಸಿದೆ ಎನ್ನುವ ಸಾಲುಗಳು ಸ್ವಪ್ರಯತ್ನದ ಅನಿವಾರ್ಯತೆ ಮತ್ತು ಅವಶ್ಯಕತೆಯನ್ನು ಎತ್ತಿಹಿಡಿಯುತ್ತದೆ. ಎಲ್ಲ ಸಮಸ್ಯೆಗಳಿಗೆ ನಂಬಿಕೆ ಅಷ್ಟೇ ಸಾಲದು, ನಮ್ಮ ಬದುಕನ್ನು ನಾವೇ ನಡೆಸಬೇಕು ಎಂಬುದು ನಿಜ. ನಮ್ಮಲ್ಲಿರುವ ಗರ್ವ ಅಹಂಕಾರ ಮೂರ್ಖತನ ನಮ್ಮ ಆತ್ಮವಿಶ್ವಾಸಗಳನ್ನು ಹಿಡಿದಿಟ್ಟಿರುತ್ತವೆ ಆದರೆ ಯಾವುದೋ ಒಂದು ಆತಂಕದ ಘಳಿಗೆಯಲ್ಲಿ ಅದು ಸಾಲದೇ ಹೋಗಬಹುದು. ಇಂತಹ ಒಂದು ಸನ್ನಿವೇಶದಲ್ಲಿ ಆ ಕರುಣಾಳು ಆ ಬೆಳಕು ನಮ್ಮನ್ನು ಕಷ್ಟಗಳೆಂಬ ಅಡವಿ, ಬೆಟ್ಟ ಮತ್ತು ಹೊಳೆಗಳನ್ನು ದಾಟಿಸಿ ಕೈ ಹಿಡಿದು ನಡೆಸಬೇಕಾಗುತ್ತದೆ. ಇರುಳು ಕಳೆದು ಆ ದೈವತ್ವದ ಚಹರೆಗಳು ಕೊನೆಗೂ ಕಾಣಿಸಿಕೊಂಡವು ಎಂಬ ಹಾರೈಕೆಯಲ್ಲಿ ಈ ಕವನ ಮುಕ್ತಾಯಗೊಳ್ಳುತ್ತದೆ. ಈ ಕವಿತೆ ಆಂಗ್ಲ ಭಾಷೆಯ ಸ್ತುತಿ ಗೀತೆಯಾಗಿ ಜನಪ್ರೀಯವಾಗಿದೆ. ಈ ಕವಿತೆಯನ್ನು ಇಂಗ್ಲೆಂಡಿನಲ್ಲಿ ಕಲ್ಲಿದ್ದಲು ಗಣಿ ಕುಸಿದಾಗ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಗಣಿ ಕೆಲಸಗಾರರು ಈ ಗೀತೆಯನ್ನು ಹಾಡಿದ್ದರು. ಟೈಟಾನಿಕ್ ಎಂಬ ಹಡಗು ಅಟ್ಲಾಂಟಿಕ್ ಸಮುದ್ರದ ನಡುವೆ ಮುಳುಗಡೆಯಾಗುವ ಸಮಯದಲ್ಲಿ ಇನ್ನೊಂದು ದೊಡ್ಡ ರೆಸ್ಕ್ಯೂ ಹಡಗಿನ ನಿರೀಕ್ಷೆಯಲ್ಲಿ ಚಿಕ್ಕ ರೆಸ್ಕ್ಯೂ ದೋಣಿಯಲ್ಲಿ ನಡುರಾತ್ರಿ ಕಳೆದ ಪಯಣಿಗರು ಈ ಸ್ತುತಿ ಗೀತೆಯನ್ನು ಹಾಡುತ್ತ ಇರುಳನ್ನು ನೂಕಿದರು. ನಮ್ಮ ಭಾರತದ ಹಲವಾರು ಶಾಲಾ ಕಾಲೇಜುಗಳಲ್ಲಿ ಈ ಸ್ತುತಿಗೀತೆಯನ್ನು ದೈನಂದಿಕ ಪ್ರಾರ್ಥನೆಯಾಗಿ ಅಳವಡಿಸಿಕೊಳ್ಳಲಾಗಿದೆ. ಇದು ಕನ್ನಡ ಭಾವಗೀತೆಯಾಗಿಯೂ ಜನಪ್ರೀಯವಾಗಿದೆ.

ಬೆಳಕು ಆರಿದಾಗ ಆವರಿಸುವ ಅಂಧಕಾರ ತಲ್ಲಣವನ್ನು ಉಂಟುಮಾಡುವಂತಹುದು. ಬೆಳಕು ಆರುವುದನ್ನು ಸಾವಿನೊಂದಿಗೆ ರೂಪಕವಾಗಿ ಸಾಹಿತ್ಯದಲ್ಲಿ ಮತ್ತು ಚಿತ್ರರಂಗದಲ್ಲಿ ಬಳಸಲಾಗುತ್ತಿದೆ. ಅದು ಮತ್ತೆ ಆವರಿಸುವ ಅಜ್ಞಾನದ ಸಂಕೇತವೂ ಆಗಿರಬಹುದು. ಖ್ಯಾತ ಕವಿ ಕೆ ಎಸ್ ನರಸಿಂಹಸ್ವಾಮಿ ಅವರ ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು ಎಂಬ ಪ್ರಖ್ಯಾತ ಕವಿತೆಯ ಈ ಹಿನ್ನೆಲೆಯಲ್ಲಿ ಈ ಕೆಳಗಿನ ಸಾಲುಗಳನ್ನು ಇಲ್ಲಿ ಗಮನಿಸುವುದು ಸೂಕ್ತ:

ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ ಮುಳುಗದಿರಲಿ ಬದುಕು

ಕೆ ಎಸ್ ಎನ್ ಅವರ ಕವಿತೆಗಳ ತುಂಬಾ ಜೀವನೋತ್ಸಾಹ, ಜೀವನ ಪ್ರೀತಿ ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ಆ ಹಿನ್ನೆಲೆಯಲ್ಲೂ ಈ ಸಾಲುಗಳನ್ನು ನಾವು ಅರ್ಥೈಸಿಕೊಳ್ಳ ಬಹುದು. ಈ ಕವಿತೆ ಹಲವಾರು ಆಶಯಗಳಿಂದ ತುಂಬಿದೆ.

ಪುರುಷ ಪ್ರಧಾನವಾದ ಸಮಾಜದಲ್ಲಿ, ಶೋಷಣೆಗೆ ಒಳಗಾಗಿ, ಎಲ್ಲರಿಂದ ತಿರಸ್ಕೃತಳಾಗಿ ಪ್ರೀತಿಯನ್ನು ಕಳೆದುಕೊಂಡು ತನ್ನಲ್ಲಿನ ಆತ್ಮವಿಶ್ವಾಸವೆಂಬ ಎದೆಯ ಹಣತೆ ಸಂಪೂರ್ಣವಾಗಿ ಬತ್ತಿಹೋಗಿ ಬದುಕಿನಲ್ಲಿ ಕವಿಯುವ ಅಂಧಕಾರವನ್ನು ನಿಭಾಯಿಸಲಾಗದ ದಾರುಣ ಕಥೆಯಲ್ಲಿ ಲೇಖಕಿ ಬಾನು ಮುಷ್ತಾಕ್ ಹಣತೆ, ಎದೆಯ ಹಣತೆ ಎಂಬ ರೂಪಕವನ್ನು ಬಳಸಿದ್ದಾರೆ. ಅದು ಕಥೆಯ ಶೀರ್ಷಿಕೆಯೂ ಆಗಿದೆ. ಬದಲಾಗುವ ಸನ್ನಿವೇಶದಲ್ಲಿ ಛಲವನ್ನು ಮತ್ತೆ ರೂಢಿಸಿಕೊಂಡು ಎದ್ದುನಿಲ್ಲುವ ನಾಯಕಿಯೊಳಗಿನ ಎದೆಯ ಹಣತೆ ಮತ್ತೆ ಹತ್ತಿ ಉರಿಯಿತೇ ಎನ್ನುವುದನ್ನು ಓದುಗರಿಗೆ ಬಾನು ಬಿಟ್ಟಿರುತ್ತಾರೆ. ಇದೇ ಕೃತಿಯನ್ನು ದೀಪಾ ಬಾಷ್ಟಿ ಅವರು ಇಂಗ್ಲಿಷಿಗೆ ಅನುವಾದಿಸಿ 'ಹಾರ್ಟ್ ಲ್ಯಾಂಪ್' ಎಂಬ ಕೃತಿಗೆ ಬುಕ್ಕರ್ ಪ್ರಶಸ್ತಿ ದೊರಕಿದೆ.

ಕನ್ನಡ ಕವಿ ಸೇಡಿಯಾಪು ಕೃಷ್ಣಭಟ್ಟರು ಒಂದು ಹೊರಗಿನ ಸಾಂಸ್ಕೃತಿಕ ಧಾಳಿಯ ಬಗ್ಗೆ ತಮ್ಮವರನ್ನು ಎಚ್ಚರಿಸಲು ದೀಪವನ್ನು ರೂಪಕವಾಗಿಟ್ಟುಕೊಂಡು ಎಣ್ಣೆ ಹುಯ್ಯುವ ದೀಪಕ್ಕೆ ಎನ್ನುತ್ತಾರೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಸನ್ನಿವೇಶದಲ್ಲಿ ಹಲವಾರು ಕಡೆ ಪಂಜಿನ ಮೆರವಣಿಗೆ ನಡೆದಿರುವುದನ್ನು ನೆನೆಯಬಹುದು. ಅದು ಒಗ್ಗಟಿನ ಸಂಕೇತವಾಗಿಯೂ ನಿಲ್ಲುತ್ತದೆ. ಕೃಷ್ಣ ಭಟ್ಟರ ಕವನದಲ್ಲಿ 'ಎಣ್ಣೆ ಹೊಯ್ಯುವ ದೀಪಕ್ಕೆ' ಎನ್ನುವುದು ಜಾಗೃತಿಯನ್ನು ಮೂಡಿಸುವ ಕರೆಯಾಗಿ ಕೇಳಿ ಬರುತ್ತದೆ. ಹೊರಗಿನ ಸಾಂಸ್ಕೃತಿಕ ಆಕ್ರಮಣವು ಬಿರುಗಾಳಿಯಾಗಿ ಗಿಡ ಮರ ಕೊಂಬೆಗಳನ್ನು ಬಡಿದಾಡಿಸುತ್ತಾ ಬಂದು ಆ ಬಿರುಗಾಳಿಯಲ್ಲಿ ಕಾರ್ಮೋಡಗಳು ಗಿರಿಯ ಅಂಚಿಗೆ ಮೆಟ್ಟಿ ಮಿಂಚಿನಂತೆ ಗಹಗಹಿಸುತ್ತದೆ. ನಮ್ಮಲ್ಲೇ ಇರುವ ಪ್ರೌಢ ಸಾಹಿತ್ಯವನ್ನು (ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವನ್ನು) ಮುಂದಿನ ಪೀಳಿಗೆ ಕಡೆಗಣಿಸಿ ಮುಗ್ಗುರಿಸುತ್ತಿದೆ ಎನ್ನುವ ಬಗ್ಗೆ ಕವಿಗೆ ವಿಷಾದವಿದೆ. ಈ ಎಲ್ಲಾ ತಲ್ಲಣಗಳ ಹಿನ್ನೆಲೆಯಲ್ಲಿ ನಂದುತ್ತಿರುವ ದೀಪಕ್ಕೆ ಎಣ್ಣೆ ಹುಯ್ಯುವ ಎಂಬ ಆಶಯ ಮನೋಜ್ಞವಾಗಿ ಮೂಡಿಬಂದಿದೆ, ಆ ಕವಿತೆಯ ಸಾಲುಗಳು ಹೀಗಿವೆ;
ಹೊರಗಲ್ಲಿ ಗಿಡಮರಗಳ ಕೊಂಬೆರಂಬೆಗಳ್ 
ಬಡಿದಾಡಿಕೊಂಡು ಭೋರಿಡುತಲಿವೆ
ಪಡುಬಾನ ಕಾರ್ಮುಗಿಲು ಅರಿಲೊಂದೊಂದನೇ ಮೆಟ್ಟಿ
ಕಾಡುಮಿಂಚಿನಲಿ ಗಹ ಗಹಗಹಿಸುತಿದೆ
ಎಣ್ಣೆ ಹುಯ್ಯುವ ದೀಪಕ್ಕೆ!

ಹಸಿದ ಮಕ್ಕಳು ಬಟ್ಟಲೆನ್ನದು
ತನ್ನದೆಂದೆಳದಾಡಿಕೊಂಡು ಗುದ್ದಾಡುತ್ತಿವೆ
ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವ
ಕಡಗಾಲೊಳೆಡವಿ ಚೆಲ್ಲಾಡುತ್ತಿವೆ
ಎಣ್ಣೆ ಹುಯ್ಯುವ ದೀಪಕ್ಕೆ!
ಜಿ ಎಸ್ ಎಸ್ ಅವರ ‘ನನ್ನ ಹಣತೆ’ ಕನ್ನಡ ಕಾವ್ಯಲೋಕದಲ್ಲಿನ ಗಮನಾರ್ಹವಾದ ಕವಿತೆ. ಅದನ್ನು ಪ್ರಾಜ್ಞರು ಅನೇಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಜಿ ಎಸ್ ಎಸ್ ಅವರ ಬಹುಪಾಲು ಕವಿತೆಗಳು ಸರಳವಾಗಿದ್ದು ಸಂಗೀತಕ್ಕೂ ಒದಗಿಕೊಂಡು ಜನಪ್ರೀಯ ಭಾವಗೀತೆಗಳಾಗಿವೆ. ಆದರೆ ‘ನನ್ನ ಹಣತೆ’ ಎಂಬುದು ಪ್ರಸಿದ್ಧ ಕವಿತೆಯಾಗಿಯೇ ಉಳಿದು ಸಾಹಿತ್ಯಾಸಕ್ತರ ಮೆಚ್ಚುಗೆಯನ್ನು ಪಡೆದುಕೊಂಡು ದೀಪಾವಳಿಯ ಆಸುಪಾಸಿನಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಂಕೀರ್ಣವಾಗಿರುವ ಕವಿತೆಯ ಹಲವಾರು ಸಾಲುಗಳಲ್ಲಿ ದೀಪಾವಳಿಯ, ಪಟಾಕಿಯ ಉಲ್ಲೇಖವಿದ್ದರೂ ಅದು ದೀಪಾವಳಿಯನ್ನು ಕುರಿತಾದ ಕವನವಲ್ಲ! ದೀಪಾವಳಿ ಹಬ್ಬವನ್ನು ಮತ್ತು ಅಲ್ಲಿಯ ಸಂಭ್ರಮಗಳನ್ನು ಕುರಿತಾದ ಬೇರೆ ಕವಿತೆಗಳನ್ನು ಜಿ ಎಸ್ ಎಸ್ ರಚಿಸಿದ್ದಾರೆ.  ಆದುದರಿಂದ ಈ ಕವನವನ್ನು ಮೊದಲು ಗಮನಿಸಿ ನಂತರ ಅದರ ಬಗ್ಗೆ ಚರ್ಚೆ ಮಾಡೋಣ. 
ನನ್ನ ಹಣತೆ 

ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ

ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಿಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
"ತಮಸೋ ಮಾ ಜ್ಯೋತಿರ್ಗಮಯ" ಎನ್ನುತ್ತಾ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ
ಎಷ್ಟೊಂದು ಬೆಳಕನ್ನು ಇದು ಉಟ್ಟರೂ ತೊಟ್ಟರೂ
ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.

ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ ಮತ್ತೆ
ನಾನು ಯಾರೋ.
ಈ ಕವಿತೆಯಲ್ಲಿ ಎರಡು ಮೂರು ವಿಚಾರಗಳು ಅಡಗಿವೆ. ಇಲ್ಲಿ ಕತ್ತಲೆ, ಅಜ್ಞಾನದ ಸಂಕೇತ. ಹಣತೆ ಮತ್ತು ಬೆಳಕು, ಜ್ಞಾನದ ಸಂಕೇತ. ಇಲ್ಲಿ ವಾಸ್ತವ ಪ್ರಜ್ಞೆ, ಜೀವನ ಪ್ರೀತಿ ಮತ್ತು ವ್ಯವಹಾರಿಕವಾದ ಚಿಂತನೆಗಳಿವೆ. ಒಟ್ಟಾರೆ ಮನುಷ್ಯ ಅನಾದಿಕಾಲದಿಂದಲೂ ಅಜ್ಞಾನದ ಜೊತೆ ಹೋರಾಡಿಕೊಂಡು, ಹಣತೆಯನ್ನು ಹಚ್ಚುತ್ತಾ ಬಂದಿದ್ದಾನೆ. ಈ ಹೋರಾಟವನ್ನು ಜಯಿಸಲು ಸಾಧ್ಯವೇ ಎನ್ನುವುದು ಮುಖ್ಯವಾದ ವಿಚಾರ. ಕವಿ ತಾನೂ ಹಣತೆ ಹಚ್ಚುವ, ಅಜ್ಞಾನವನ್ನು ತೊಲಗಿಸುವ ಪ್ರಯತ್ನವನ್ನು ಮಾಡುತ್ತಾರೆ. "ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ" ಎನ್ನುವ ಮೂಲಕ ಮನುಷ್ಯ ಪ್ರಯತ್ನಕ್ಕೆ ಮಿತಿ ಇದೆ ಅನ್ನುವುದನ್ನು ಕವಿ ಇಲ್ಲಿ ಒಪ್ಪಿಕೊಳ್ಳುತ್ತಾರೆ. ಹಿಂದೆ ಈ ಪ್ರಯತ್ನವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದ್ದು (ದೀಪಾವಳಿಯ ಹಡಗುಗಳು ಮುಳುಗಿದ್ದು) ಅದೂ ಕೂಡ ವಿಫಲವಾಗಿದೆ ಎನ್ನುವುದನ್ನು ನೆನಪಿಸುತ್ತಾರೆ.  ಮುಂದಿನ ಪಂಕ್ತಿಯಲ್ಲಿ ಕವಿ, ಮನುಷ್ಯ ಈ ಅಜ್ಞಾನವನ್ನು ತೊಲಗಿಸಲು ಇಲ್ಲಿಯವರೆಗೆ ಏನೆಲ್ಲ ಪ್ರಯತ್ನಗಳನ್ನು ಕೈಗೊಂಡಿದ್ದಾನೆ ಎಂಬ ಪ್ರಶ್ನೆಯನ್ನು ಓದುಗರ ಮುಂದೆ ನಿಲ್ಲಿಸಿ, ನಾವು ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನ ಇವುಗಳನ್ನೆಲ್ಲಾ ಕೆದಕಿದ್ದೇವೆ, ಉತ್ತರವಂತೂ ಸಿಕ್ಕಿಲ್ಲ ಬದಲಾಗಿ 'ಬರೀ ಬೂದಿಯನ್ನೇ ಕಂಡಿದ್ದೇವೆ' ಎನ್ನುತ್ತಾರೆ. ಇಲ್ಲಿ ಕವಿ ಬದುಕಿನ ಒಳಾರ್ಥ, ಜೀವನದ ಮಹದೋದ್ದೇಶ ಇವುಗಳನ್ನು ಕುರಿತು ಚಿಂತಿಸುತ್ತಿರಬಹುದು. 'ಕತ್ತಲಿಗೆ ಕೊನೆಯಿಲ್ಲದ ಬಾಯಾರಿಕೆ' ಎಂದು ಹೇಳುವುದರ ಮೂಲಕ ನಮ್ಮ ಕಲ್ಪನೆಗೂ ಮೀರಿದ ಕತ್ತಲೊಂದಿದೆ ಅದು ಸರ್ವವ್ಯಾಪಿ 'ತಿಂದರೂ ಕುಡಿದರೂ, ಉಟ್ಟರೂ, ತೊಟ್ಟರು ಇದಕ್ಕೆ ಇನ್ನೂ ಬೇಕು, ಇನ್ನು ಬೇಕು ಎನ್ನುವ ಬಯಕೆ' ಎಂದು ಕವಿ ಹೇಳುತ್ತಿದ್ದಾರೆ. ಇಲ್ಲಿ, ವೈಜ್ಞಾನಿಕ ಪರಿಭಾಷೆಯಲ್ಲಿ ನೋಡುವುದಾದರೆ ಕಾಸ್ಮಿಕ್ ಬ್ಲಾಕ್ ಹೋಲ್ ಇಮೇಜ್ ನಮ್ಮ ಮುಂದೆ ಬಂದು ನಿಲ್ಲುತ್ತದೆ.  ಹೀಗಿದ್ದರೂ ಕವಿ ಹಣತೆ ಏಕೆ ಹಚ್ಚಬೇಕು? ಕವಿ ಹೇಳುತ್ತಾರೆ; "ಆದರೂ ಹಣತೆ ಹಚ್ಚುತ್ತೇನೆ ನಾನು; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ"ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ" ಕವಿ ಇಲ್ಲಿ ವಾಸ್ತವ ಪ್ರಜ್ಞೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ನಮ್ಮ ಬದುಕಿನಲಿ ಇರುವಷ್ಟು ಹೊತ್ತು ನಾನು-ನೀನು (ನಾವು-ನೀವು) ಮುಖ ಕೆಡಸಿಕೊಳ್ಳದೆ, ಒಬ್ಬರು ಇನ್ನೊಬ್ಬರನ್ನು ಮುಖ ಮುಖಿಯಾಗಿ ನೋಡುವಷ್ಟು ಪ್ರೀತಿ ವಿಶ್ವಾಸಗಳನ್ನು, ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳೋಣ. ಏಕೆಂದರೆ ಅಳಿದ ಮೇಲೆ (ಹಣತೆ ಆರಿದ ಮೇಲೆ) ನೀನು ಯಾರೂ ಮತ್ತು ನಾನು ಯಾರೋ! ಮುಂದಕ್ಕೆ ಇನ್ನು ಯಾರೋ ಬಂದು ಅವರೂ ಹಣತೆ ಹಚ್ಚುತ್ತಾರೆ. ಹೀಗೆ ಮನುಷ್ಯ ಪ್ರಯತ್ನ ನಿರಂತರವಾಗಿ ಸಾಗುತ್ತದೆ.  

ಇದು 'ನನ್ನ ಹಣತೆಯ'ಯನ್ನು ಕುರಿತಾದ ನನ್ನ ಒಂದು ವಿಶ್ಲೇಷಣೆ. ಜಿ ಎಸ್ ಎಸ್ ಅವರ ಕವಿತೆಯ ವಿಶೇಷವೆಂದರೆ ಅದು ಹಲವಾರು ದೃಷ್ಟಿ ಕೋನಗಳನ್ನು ತೆರೆದಿಡುತ್ತದೆ. ಆದುದರಿಂದ ಓದುಗರು ತಮ್ಮ ಕಲ್ಪನೆಗೆ ಒದಗುವ ವಿಶ್ಲೇಷಣೆಯನ್ನೂ ಕಟ್ಟಿಕೊಳ್ಳಬಹುದು.

ಕೊನೆಯದಾಗಿ 'ದೀಪಾವಳಿಯ ಹಣತೆ' ಎಂಬ ನನ್ನ ಕವನದೊಂದಿಗೆ ಈ ಬರಹವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಅದೆಷ್ಟೋ ವೈಜ್ಞಾನಿಕ ಸತ್ಯಗಳು ಸಾಧು ಸಂತರು ಮಹಾಪುರುಷರು ಬಿಟ್ಟುಹೋದ ಬೆಳಕಿನ ರೂಪಕವಾಗಿ ನಿಂತಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಅದೆಷ್ಟೋ ವಿಚಾರಗಳು ಮೇಲ್ನೋಟಕ್ಕೆ ಭ್ರಮೆಯಾದರೂ ಅದು ನಿಖರವಾದ ಸತ್ಯ. ಎಲ್ಲರೊಳಗೊಂದು ದೀಪ ಉರಿಯುತ್ತಲೇ ಇರುತ್ತದೆ. ಆದರೆ ಆ ಅಂತರಂಗದ ಬೆಳಕನ್ನು ಕಾಣಲು ವಿಶೇಷ ಒಳನೋಟಗಳು ಬೇಕು. ಆ ಬೆಳಕನ್ನು ಇತರರೊಡನೆ ಹಂಚಿಕೊಳ್ಳಬೇಕು ಎನ್ನುವುದು ಈ ಕವಿತೆಯ ಮತ್ತು ಈ ಬರಹದ ಒಟ್ಟಾರೆ ಆಶಯ.
ದೀಪಾವಳಿಯ ಹಣತೆ  

ಕಾರ್ತಿಕದ ಕಗ್ಗತ್ತಲಲ್ಲಿ
ಮುಗಿಲ ತುಂಬೆಲ್ಲಾ
ಮಿಣಕುವ ಬೆಳ್ಳಿ ನಕ್ಷತ್ರಗಳು
ಅಲ್ಲೊಂದು ಕಣ್ತಣಿಸುವ
ನೀರವ ದೀಪಾವಳಿ

ವಿಜ್ಞಾನಿಗಳು ಹೇಳುತ್ತಾರೆ;
“ಆ ನಕ್ಷತ್ರಗಳು ಉರಿದು ಬೂದಿಯಾಗಿವೆ
ನೀವೀಗ ಕಾಣುತ್ತಿರುವುದು
ಅದು ಹೊಮ್ಮಿಸಿದ ಬೆಳಕನ್ನಷ್ಟೆ"
ದೀಪ ಉರಿದಿದ್ದು ಅಂದು
ಬೆಳಕು ಕಾಣುತ್ತಿರುವುದು ಇಂದು!
ಇದು ಭ್ರಮೆಯಲ್ಲ, ನಿಖರ ಸತ್ಯ

ಕವಿಗಳು, ವಿಜ್ಞಾನಿಗಳು, ಸಂತರು
ಹಣತೆಯನ್ನು ಹಚ್ಚಿದ್ದಾರೆ
ಆ ಹಣತೆ ಆರಿಹೋಗಿದ್ದರೂ
ಅದರ ಬೆಳಕು ಇಂದಿಗೂ ಕಾಣುತ್ತಿದೆ,
ನಕ್ಷತ್ರದ ಬೆಳಕಿನಂತೆ.
ಇದು ಭ್ರಮೆಯಲ್ಲ, ನಿಖರ ಸತ್ಯ

ಜಡಗಟ್ಟಿದ ಚಿತ್ತದಲ್ಲಿ
ಅಂಧಕಾರದ ಆಳದಲ್ಲಿ
ನಾವು ಹಚ್ಚಿಕೊಂಡ ಒಳಗಿನ ದೀಪ
ನಮಗೇ ಕಾಣಿಸಲು ಸಮಯಬೇಕು

ನಾವು ಹಚ್ಚುವ ದೀಪ ನಮಗಷ್ಟೇ ಅಲ್ಲ,
ಮುಂದೊಮ್ಮೆ ಇತರರಿಗೂ
ಕಾಣಿಸಬಹುದೆಂಬ ಭರವಸೆಯಿಂದ
ಬನ್ನಿ ಹಚ್ಚೋಣ ದೀಪಾವಳಿಯ ಹಣತೆ


ಜಿ ಎಸ್ ಎಸ್ ಅವರ 'ನನ್ನ ಹಣತೆಯ'ಕೆಲವು ಆಯ್ದ ಸಾಲುಗಳ ಭಾವಾನುವಾದವನ್ನು ಕವಿ ಡಾ ಶ್ರೀವತ್ಸ ದೇಸಾಯಿ ಅವರು ಕೈಗೊಂಡಿದ್ದು ಅದು ಹೀಗಿದೆ;
I know, this darkness has such endless thirst
That no one can quench!
No matter what amount of light it is draped in or is fed or it devoured
Still wants more and more!
But yet, I light a clay lamp, Me too,
Not that I will transcend the darkness,
As long as we are together
I can see your face
And so can you mine, that is the sole desire
After the lamp breathes its last
We remain as just strangers
Unknown to each other!
ಫೋಟೋ ಕೃಪೆ:  ಡಾ ಶ್ರೀವತ್ಸ  ದೇಸಾಯಿ