ಮಹಾಧಿಕನಿಗೆ ಬಂದ ಫೋನ್ ಕಾಲ್ 

ಈ ವಾರ ನಿಮ್ಮೆದುರಿಗೆ ನನ್ನ ಇನ್ನೊಂದು ಕಥೆ. ಕಳೆದ ಸಲ ನೀವೆಲ್ಲ ಕೊಟ್ಟ ಪ್ರತಿಕ್ರಿಯೆಗಳ ಪರಿಣಾಮ ಆಗಿರಬಹುದು ನನ್ನ ಬರಹದ ಮೇಲೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ . ಸದಾ ಅಂಗೈಯಲ್ಲೇ ಇರುವ ಫೋನ್ ಹಲವು ಬಗೆಗಳಲ್ಲಿ ನಮ್ಮ ಜೀವನದ ದಿಕ್ಕನ್ನು ಬದಲಾಯಿಸಬಹುದು . ಈ ಕಥೆಯ ನಾಯಕ ಮಹಧಿಕನಿಗೆ ಏನಾಗಿರಬಹುದು ಈ ಕಥೆಯಲ್ಲಿ ?

ಗಂಭೀರ್ ಮಹಾಧಿಕ್ ಬುದ್ಧಿವಂತೇನೇನೋ ಸೈ. ಅದು ಅವನಿಗೂ ಗೊತ್ತು. ಚಿಕ್ಕಂದಿನಲ್ಲಿ ಅಧಿಕ ಪ್ರಸಂಗಿ ಎಂದು ಶಾಲೆಯಲ್ಲಿ ಕುಪ್ರಸಿದ್ಧನಾಗಿದ್ದ. ಈಗ ಇಂಗ್ಲೆಂಡಿನ ಪ್ರತಿಷ್ಠಿತ ಯುನಿವರ್ಸಿಟಿಯಲ್ಲಿ ಚಿಕ್ಕ ವಯಸ್ಸಿನಲ್ಲೇ ಪ್ರೊಫೆಸರ್ ಹುದ್ದೆಗೇರಿದ್ದ. ಇಲ್ಲಿನ ವರ್ಣಭೇದದ ಗಾಜಿನ ಛತ್ತನ್ನು ಒಡೆದ ಹೆಮ್ಮೆ ಅವನದ್ದು. ಬಿಳಿಯರ ನಾಡಿನಲ್ಲೇ, ಅವರ ಚಾಲಾಕಿತನವನ್ನು ಮೀರಿಸಿ, ವಿಭಾಗ ಪ್ರಮುಖನಾದ ತಾನು ಯಾರಿಂದಲೂ ಮೋಸ ಹೋಗೆನು ಎಂಬ ಧೃಡ ನಂಬಿಕೆ ಅವನದ್ದು. ಪಾಶ್ಚ್ಯಾತ್ಯರಂತೆ ಎಲ್ಲ ನಿಯಮಗಳಿಗೆ ಬದ್ಧನಾಗಿ ನಡೆಯುತ್ತೇನೆ, ಎಲ್ಲ ವಿಷಯಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿ ನಿರ್ಣಯ ತೆಗೆದುಕೊಳ್ಳುವ ವೈಜ್ಞಾನಿಕ ಮನೋಭಾವ ವಿಶೇಷವಾಗಿ ತನ್ನದು ಎಂದೆಲ್ಲ ಅಂದುಕೊಳ್ಳುತ್ತಿದ್ದ. ಕೆಲಸಕ್ಕೆ ಹೋಗುವಾಗ ಅಚ್ಚುಕಟ್ಟಾಗಿ ತಲೆ ಬಾಚಿ, ಸೂಟು ತೊಟ್ಟು, ಮಿರುಗುವ ಬೂಟು ಧರಿಸಿಯೇ ಹೋಗುತ್ತಿದ್ದ. ಇಂಥವನ ನಡೆವಳಿಕೆಯಲ್ಲಿ ಅಹಂಕಾರ ಹೊರಹೊಮ್ಮುತ್ತಿದ್ದುದು ಸಹಜವೇ. ಅವನ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಅವನ ಬೆನ್ನ ಹಿಂದೆ ಮಹಾಧಿಕನನ್ನು ಮಹಾ ಡಿಕ್ ಎಂದೇ ಕರೆಯುತ್ತಿದ್ದರೆ ಆಶ್ಚರ್ಯವಿರಲಿಲ್ಲ.

ಸುಮಾ ಮಹಾಧಿಕನ ಅರ್ಧಾಂಗಿ. ಇವನ ಯಿಂಗ್ ಗೆ ಅವಳು ಯಾಂಗ್. ಮಹಾಧಿಕನ ಮೊಂಡುತನ, ಅಹಂಕಾರವನ್ನು ತಿದ್ದುವ ಪ್ರಯತ್ನಕ್ಕೆ ಯಾವಾಗಲೋ ಎಳ್ಳು ನೀರು ಬಿಟ್ಟಿದ್ದಳು. ಅವನ ಗುಣಗಳು ಮಕ್ಕಳಲ್ಲಿ ಒಸರದಿರಲೆಂಬ ದಿಶೆಯಲ್ಲಿ ತನ್ನ ಶಕ್ತಿಯನ್ನು ಕ್ರೋಢೀಕರಿಸಿದ್ದಳು. ಕಾನ್ಫರೆನ್ಸ್, ಮೀಟಿಂಗ್ ಎಂದು ಸದಾ ತಿರುಗುತ್ತಿದ್ದ ಮಹಾಧಿಕನ ಮನೆಯ ಎಲ್ಲ ವಹಿವಾಟು ನಡೆಸುತ್ತಿದ್ದುದು ಸುಮಾ. ಮಕ್ಕಳನ್ನು ಶಾಲೆಗೆ ಬಿಡುವುದು, ಅಡುಗೆ ಮಾಡುವುದು, ವಾರದ ಶಾಪಿಂಗ್, ಕೌನ್ಸಿಲ್ ಟ್ಯಾಕ್ಸ್ ಇತರೆ ಬಿಲ್ಲುಗಳನ್ನು ಕಟ್ಟುವುದು ಅವಳ ಜವಾಬ್ದಾರಿ. ಉತ್ತಮ ಶಿಕ್ಷಣ ಪಡೆದಿದ್ದ ಸುಮಾ ತನ್ನ ಇಚ್ಛೆಗೆ ಅನುಗುಣವಾಗಿ ಅರೆ ಕಾಲಿಕ ಶಾಲಾ ಶಿಕ್ಷಕಿಯಾಗಿದ್ದಳು. ಸ್ನೇಹಮಯಿಯಾದ ಆಕೆ ಎಲ್ಲರಿಗೂ ಬೇಕಾದವಳು. ಮಹಾಧಿಕನಿಗೆ ಅವಳು ಗೆಳತಿಯರೊಂದಿಗೆ ಫೋನಿನಲ್ಲಿ ಮಾತಾಡುವುದು, ಜನರನ್ನು ಹಚ್ಚಿಕೊಂಡು ಸಹಾಯ ಮಾಡುವುದು ಸರಿ ಹೋಗುತ್ತಿರಲಿಲ್ಲ. “ ಒಳ್ಳೆ ಪುಸ್ತಕ ಓದಿ ಬುದ್ಧಿ ಬೆಳೆಸೋದೋ, ಎಕ್ಸರ್ಸೈಸ್ ಮಾಡಿ ತೂಕ ಕಡಿಮೆ ಮಾಡೋದೋ ಬಿಟ್ಟು ಈ ರೀತಿ ಟೈಮ್ ವೇಸ್ಟ್ ಮಾಡ್ತಾ ಇದ್ದೀಯ. ನಿನ್ನ ದೇಹ ಮಾತ್ರ ಬೆಳೀತಾ ಇದೆ” ಎಂದು ಮೂದಲಿಸುತ್ತಿದ್ದ. ‘ಇಂಥ ಬ್ಲಡಿ ಯೂಸ್ ಲೆಸ್ಸನ್ನು ಯಾಕಾದ್ರೂ ಕಟ್ಟಿದ್ದಾರೋ, ಅಪ್ಪ, ಅಮ್ಮ; ಮಕ್ಕಳು ಗುಡ್ ಫ಼ಾರ್ ನಥಿಂಗ್ ಆಗಿಬಿಟ್ಟಾರು’ ಎಂದೆಲ್ಲ ಗೊಣಗಿಕೊಳ್ಳುತ್ತಿರುತ್ತಿದ್ದ.

ರಾತ್ರೆ ಮಲಗುವ ಕೋಣೆಯಲ್ಲಿ ವಿರಮಿಸುವಾಗ ಕೆ-ಡ್ರಾಮಾ ನೋಡುವುದು ಸುಮಾಗೆ ಅಚ್ಚುಮೆಚ್ಚು. ರಾತ್ರಿ ಹತ್ತು ಘಂಟೆಯ ಬಿಬಿಸಿ ನ್ಯೂಸ್ ನೋಡಿದ ಮೇಲೆ ತನ್ನ ಪರ್ಸನಲ್ ಈ-ಮೇಲ್ ನೋಡುವುದು ಮಹಾಧಿಕನ ಅಭ್ಯಾಸ. ಆಗಲೂ ಸುಮಾಳತ್ತ ತಾತ್ಸಾರದ ನೋಟ ಬೀರುತ್ತಿದ್ದ. ಅಂದೂ ಮಹಾಧಿಕ ತನ್ನ ಈ-ಮೇಲ್ ಗಳ ಮೇಲೆ ಕಣ್ಣು ಹಾಯಿಸುತ್ತಿದ್ದಾಗ, ಒಂದು ಅಧಿಕೃತ ಮೇಲ್ ಅವನ ಕಣ್ಣು ಸೆಳೆಯಿತು. ಟಿ.ವಿ ಲೈಸೆನ್ಸ್ ಆಫೀಸ್ ಈ ವರ್ಷ ಅವರು ಲೈಸೆನ್ಸ್ ಹಣ ಕಟ್ಟಿಲ್ಲವೆಂಬ ಎಚ್ಚರಿಕೆ ಕಳಿಸಿತ್ತು. ಮಹಾಧಿಕನ ಮೈಯೆಲ್ಲ ಉರಿದು ಹೋಯಿತು. ವಾರದಲ್ಲಿ ನಾಲ್ಕು ದಿವಸ ಮನೆಯಲ್ಲಿ ಎಮ್ಮೆಯಂತೆ ಮೆಂದು ಬಿದ್ದಿರುತ್ತಾಳೆ, ಸಮಯಕ್ಕೆ ಸರಿಯಾಗಿ ಬಿಲ್ ಕಟ್ಟುವುದಿಲ್ಲ, ಮಾಡಬೇಕಾದ ಕೆಲಸ ಮಾಡುವುದಿಲ್ಲ ಎಂದೆಲ್ಲ ಎಗರಾಡಿದ. ತಾನೂ ತಿರುಗಿ ಬಿದ್ದರೆ, ಗಲಾಟೆಯಾಗಿ, ಮಕ್ಕಳು ಎದ್ದು ರಂಪವಾಗುತ್ತೆ ಎಂದು, ಬಂದ ಸಿಟ್ಟನ್ನೆಲ್ಲ ಅದುಮಿಕೊಂಡು, “ತಪ್ಪಾಯ್ತು ಮಹಾರಾಯ, ಮುಂದಿನ ಸಲ ಮರೆಯದೇ ಕಟ್ಟುತ್ತೇನೆ. ಹೇಗಿದ್ದರೂ ಕಂಪ್ಯೂಟರ್ ಮುಂದೆ ಕೂತಿದ್ದೀಯ, ಆನ್ಲೈನ್ ಪೇ ಮಾಡಿಬಿಡು” ಎಂದು, ಟಿವಿ ಆರಿಸಿ, ಮುಸುಕು ಹಾಕಿ ಮಲಗಿಬಿಟ್ಟಳು ಸುಮಾ. ಎಲ್ಲದಕ್ಕೂ ನಾನೇ ಬೇಕು ಎಂದೆಲ್ಲ ಗೊಣಗುತ್ತ, ಆನ್ಲೈನ್ ನಲ್ಲೇ ಹಣ ಕಟ್ಟಿ ಮಹಾಧಿಕ್ ಉರುಳಿಕೊಂಡ.

ಮುಂದಿನ ಎರಡು ದಿನ ಅಂತಾರಾಷ್ಟ್ರೀಯ ಕಾನ್ಫರೆನ್ಸಿನಲ್ಲಿ ಮಂಡಿಸಲಿರುವ ಪ್ರಬಂಧದ ತಯಾರಿಯಲ್ಲೇ ಮಹಾಧಿಕ ಮುಳುಗಿದ್ದ. ಅಲ್ಲಿಗೆ ಹೋದಾಗ ಖರ್ಚಿಗೆ ಬೇಕಾಗುವ ಹಣವನ್ನು ಫಾರಿನ್ ಕರೆನ್ಸಿ ಕಾರ್ಡಿಗೆ ಚಾರ್ಜ್ ಮಾಡಲು ಫೋನಿನಲ್ಲಿ ಬ್ಯಾಂಕಿನ ap ತೆಗೆದವನಿಗೆ ಮೊದಲಿನ ನಾಲ್ಕು ಟ್ರಾನ್ಸಾಕ್ಷನ್ ಅಪರಿಚಿತ ಎನಿಸಿತು. ಪಕ್ಕದ ಊರಿನಲ್ಲಿ ಆಪಲ್ ಪೇ ನಲ್ಲಿ ಹಣ ಉಪಯೋಗಿಸಿರುವ ಮಾಹಿತಿ ಇತ್ತು. ಏನೋ ಮೋಸ ಇದೆ ಎಂದು ಅರಿವಾದೊಡನೆ ಬ್ಯಾಂಕಿಗೆ ಕರೆ ಮಾಡಿದ. ಎಲ್ಲ ವಿವರಗಳನ್ನು ಪಡೆದ ಬ್ಯಾಂಕಿನವರು, ನಿನ್ನ ಈಗಿನ ಕಾರ್ಡನ್ನು ರದ್ದು ಮಾಡಿ, ಹೊಸದನ್ನು ಕಳಿಸುತ್ತೇವೆಂದು ತಿಳಿಸಿದರು. ಇದು ಮೊದಲನೇ ಬಾರಿ ನೀನು ಮೋಸಹೋಗುತ್ತಿದ್ದಿಯ, ಸ್ವಲ್ಪವೇ ಹಣ ಕದ್ದಿದ್ದಾರೆ ಹಾಗಾಗಿ ಆದ ನಷ್ಟವನ್ನು ನಾವೇ ಭರಿಸುತ್ತೇವೆ ಎಂದು ಸಾಂತ್ವನಿಸಿದ್ದಲ್ಲದೇ ಇನ್ನು ಮುಂದೆ ಜಾಗ್ರತೆಯಲ್ಲಿರು ಎಂದೂ ಎಚ್ಚರಿಸಿದರು. ನೀನು ಉಪಯೋಗಿಸಿದ ಟಿವಿ ಲೈಸೆನ್ಸ್ ಸೈಟ್ ಮೋಸದ ಜಾಲ, ಈ ಪ್ರಸಂಗವನ್ನು ಫ್ರಾಡ್ ವಿಭಾಗಕ್ಕೆ ತಿಳಿಸಬೇಕಾಗುತ್ತದೆ, ಅವರೇ ಹೆಚ್ಚಿನ ವಿವರಗಳಿಗಾಗಿ ನಿನಗೆ ಫೋನ್ ಕೂಡ ಮಾಡಬಹುದೆಂದು ಹೇಳಿದರು. ಸಧ್ಯ, ಸಣ್ಣದರಲ್ಲೇ ಪಾರಾಗಿಬಿಟ್ಟೆ, ಇದಕ್ಕೆಲ್ಲ ಸುಮಾನೇ ಕಾರಣ ಎಂದು ಸಮಾಧಾನಪಟ್ಟುಕೊಳ್ಳುತ್ತಲೇ ಉರಿದುಕೊಂಡ. ಮನೆಗೆ ಬಂದವನೇ, ಬಟ್ಟೆ ಬದಲಾಯಿಸದೇ ಸುಮಾನ ಮೇಲೆ ಹರಿಹಾಯ್ದ. ಸುಮಾ ಉತ್ತರಿಸುವ ಮೊದಲೇ ಮಹಾಧಿಕನ ಫೋನ್ ರಿಂಗಣಿಸಿತು.


ಮಹಾಧಿಕ ಫೋನಿನಲ್ಲಿ ಬಂದ ನಂಬರ್ ಬ್ಯಾಂಕಿನದು ಎಂದು ತೋರುತ್ತಿದ್ದಂತೇ ಹಾರಿ ಬಿದ್ದು ಸ್ಟಡಿಗೆ ಓಡಿದ. ಅವನ ಊಹೆಯಂತೇ ಅದು ಬ್ಯಾಂಕಿನ ಫ್ರಾಡ್ ವಿಭಾಗದ್ದೆಂದು ಫೋನ್ ಮಾಡಿದಾತ ಖಚಿತ ಪಡಿಸಿ ತನ್ನ ಹೆಸರು ಟಿಮ್ ಎಂದು ಪರಿಚಯಿಸಿಕೊಂಡ. ಮೊದಲಿನಿಂದ ಕೊನೆಯವರೆಗೆ ವಿಶದವಾಗಿ ಮಹಾಧಿಕ ಹೇಳಿದ ವಿವರಗಳನ್ನೆಲ್ಲ ತೆಗೆದುಕೊಂಡ ಟಿಮ್, “ಇದು ಸಾಮಾನ್ಯದ ಸ್ಕ್ಯಾಮ್ ಅಲ್ಲ. ನಮಗೆ ಈ ಕೆಲವು ವಾರಗಳಲ್ಲಿ ಅನೇಕ ಗ್ರಾಹಕರು ಈ ಸ್ಕ್ಯಾಮ್ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾರ್ಡ್ ಬದಲಾಯಿಸಿದರೂ, ಖಾತೆಯ ಮಾಹಿತಿ ಪಡೆದ ಪುಂಡರು ಖಾತೆಯಿಂದ ಹಣ ಹೊಡೆಯುತ್ತಿದ್ದಾರೆ. ನೀನು ಬೇಗನೆ ಅಕ್ರಮ ಟ್ರಾನ್ಸಾಕ್ಷನ್ ಗಳನ್ನು ಪತ್ತೆ ಹಚ್ಚಿ ನಮಗೆ ತಿಳಿಸಿದ್ದು ಒಳ್ಳೆಯದಾಯಿತು. ಕೇವಲ ಕಾರ್ಡ್ ಬದಲಾಯಿಸಿದರೆ ಸಾಲದು, ನಿನ್ನ ಖಾತೆಯನ್ನೇ ಬದಲಾಯಿಸಬೇಕು ” ಎಂದು ವಿವರಿಸಿದಾಗ ಬೆವರುತ್ತಿದ್ದ ಮಹಾಧಿಕನಿಗೆ ಫ್ಯಾನಿನ ತಂಗಾಳಿ ಬಡಿದಂತಾಯ್ತು. ತಾನು ತೆಗೆದುಕೊಂಡ ಕ್ರಮ ಸರಿಯಾದದ್ದು ಎಂಬ ಶಿಫಾರಸ್ಸು ಸಿಕ್ಕಿದ್ದಕ್ಕೆ ಪುಳಕಿತಗೊಂಡ. ತಡ ಮಾಡದೇ ಟಿಮ್ ಹೇಳಿದಂತೆ ಫೋನಿನ apನಲ್ಲಿ ಆತ ಕೊಟ್ಟ ಖಾತೆಗೆ ತನ್ನ ಖಾತೆಯಲ್ಲಿದ್ದ ಹಣವನ್ನೆಲ್ಲ ap ಕೊಟ್ಟ ಎಚ್ಚರಿಕೆಗಳನ್ನೆಲ್ಲ ಧಿಕ್ಕರಿಸಿ ವರ್ಗಾಯಿಸಿದ. “ಹಣವೆಲ್ಲ ವರ್ಗಾವಣೆ ಆಯಿತಲ್ಲ, ಈಗ ಹೊಸ ಖಾತೆಯನ್ನು ತೆಗೆಯೋಣ” ಎಂದು ಟಿಮ್ ಹೇಳುತ್ತಿದ್ದಂತೇ ಫೋನ್ ಕಟ್ಟಾಯಿತು. ಅದೇ ನಂಬರಿಗೆ ಮತ್ತೆ ಮತ್ತೆ ಫೋನಾಯಿಸಿದರೂ ಎಂಗೇಜ್ ಟೋನ್ ಬಂತೇ ಹೊರತು ಟಿಮ್ ನ ದನಿ ಕೇಳ ಬರಲಿಲ್ಲ. ತಾನು ಖೆಡ್ಡಾಕ್ಕೆ ಬಿದ್ದೆ ಎಂದು ಮಹಾಧಿಕನಿಗೆ ಅರಿವಾಗತೊಡಗಿತು. ಬ್ಯಾಂಕ್ ap ಖಾತೆ ಬ್ಯಾಲೆನ್ಸ್ ಶೂನ್ಯ ಎಂದು ತೋರಿಸುತ್ತಿತ್ತು. ಹತಾಶೆ, ದುಃಖ, ಕೋಪಗಳೆಲ್ಲ ಮೇಳೈಸಿ ಮಹಾಧಿಕ ಕೂಗುತ್ತ, ಬೂಟು, ಟೈ, ಬಟ್ಟೆಗಳನ್ನು ಕಿತ್ತೆಸೆಯುತ್ತಿದ್ದ. ಅವನ ಕೂಗನ್ನು ಕೇಳಿ ಓಡಿ ಬಂದ ಸುಮಾ ಬಾಗಿಲ ಬಳಿ ಬೆಕ್ಕಸ ಬೆರಗಾಗಿ ನಿಂತಿದ್ದಳು.

-ರಾಂ

ಗೋಕುಲಾಷ್ಟಮಿ ನನ್ನ ನೆನಪುಗಳು , ಅನುಭವಗಳು

 

ಕೃಷ್ಣ ಭಾರತೀಯರಿಗೆ ಅಪ್ಯಾಯಮಾನವಾದ ಭಗವಂತ. ಆತನ ತುಂಟತನ, ಶೌರ್ಯ, ಅಸಹಾಯಕರ ಸಹಾಯಕ್ಕೆ ಮುನ್ನುಗ್ಗುವ ಛಾತಿ, ಸಂಗೀತೋಪಾಸನೆ, ಭ್ರಾತೃ- ಮಿತ್ರ ಪ್ರೇಮ, ಹೆಂಗಳೆಯರ ಮನ ಸೆಳೆಯುವ – ಮನದಲ್ಲಿಳಿಯುವ ಚಾಕಚಕ್ಯತೆ, ಒಲಿದು ಬಂದವರಿಗೆ ತೋರುವ ಅಮಿತ ಪ್ರೇಮ, ಸಾಮ -ದಾನ-ದಂಡ-ಭೇದಗಳನ್ನು ಸಮಯಕ್ಕೊಪ್ಪುವಂತೆ ಉಪಯೋಗಿಸಬಲ್ಲ ಚಾಣಾಕ್ಷತೆ ಚುಂಬಕದಂತೆ ನಮ್ಮನ್ನು ಆಕರ್ಷಿಸುತ್ತವೆ. ಕೃಷ್ಣ ಕಥೆಗಳನ್ನು ಓದಿ ಬೆಳೆದ ನಮಗೆ ಇಂದಿಗೂ ಅವು ಮನದಲ್ಲಿ ಅಚ್ಚೊತ್ತಿವೆಯಲ್ಲದೇ ಅವನ ಎಷ್ಟೋ ಗುಣಗಳು ಅರಿವಿಲ್ಲದೇ ಸಂಕಷ್ಟದಲ್ಲಿ ನಮಗೆ ದಾರಿದೀಪವೂ ಆಗಿವೆ. ಈ ಸೋಮವಾರ ಈ ಭೂಮಿಯ ಮೇಲೆ ಸಾವಿರಾರು ವರ್ಷಗಳ ಹಿಂದೆ ನಡೆದಿದ್ದ ಶ್ರೀ ಕೃಷ್ಣನ ಜನ್ಮದಿನವಾಗಿತ್ತು (ಕೃಷ್ಣನ ಅಸ್ತಿತ್ವದ ಬಗ್ಗೆ ಪುರಾತತ್ವ ಇಲಾಖೆ ಪುರಾವೆಗಳನ್ನೊದಗಿಸಿದೆ, ಅದರ ಸತ್ಯಾಸತ್ಯತೆ ಈ ಲೇಖನದ ವ್ಯಾಪ್ತಿಗೆ ಮೀರಿದ್ದು). ಕೃಷ್ಣನ ಅರವತ್ನಾಲ್ಕು ಗುಣಗಳನ್ನು ಪ್ರತಿಫಲಿಸುವಂತೆ ಅವನ ಜನ್ಮದಿನವನ್ನು ಹಲವು ಬಗೆಗಳಲ್ಲಿ ಭಾರತದಲ್ಲಿ ಆಚರಿಸಲಾಗುತ್ತದೆ. ಹಳೆಯ ನೆನಪುಗಳನ್ನು ಮೆಲಕು ಹಾಕುತ್ತ ನಾನು ಅನುಭವಿಸಿದ ಈ ವಿಶಿಷ್ಟ ದಿನದ ಆಚರಣೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. 

ನಮ್ಮ ಮನೆಯಲ್ಲಿ ಗೋಕುಲಾಷ್ಟಮಿ ಹಿಂದಿನಿಂದಲೂ ಬಲು ಸಂಭ್ರಮದಿಂದ ಆಚರಿಸುತ್ತಿದ್ದೆವು. ನನ್ನ ತಂದೆ-ತಾಯಿಯರಿಬ್ಬರೂ ಶಿಕ್ಷಗರಾಗಿ, ಅಂಕೋಲೆಯಲ್ಲಿದ್ದರು. ನಮ್ಮಪ್ಪನಿಗೆ ತುಂಬ ಗೆಳೆಯರು. ಅವರಲ್ಲಿ ಅತಿ ಹತ್ತಿರದವದೆಂದರೆ ಹೊನ್ನೆಗುಂಡಿ ಮಾಷ್ಟ್ರು. ಹಾಡುವುದರಲ್ಲಿ, ನೃತ್ಯದಲ್ಲಿ, ಕೊಳಲು-ತಬಲಾ ನುಡಿಸುವುದರಲ್ಲಿ ನಿಪುಣರು. ಅವರು ನನಗೆ ಸಂಜೆ ಕೊಳಲು ನುಡಿಸಲು ಕಲಿಸಿದರೆ, ಶಾಲೆಯಲ್ಲಿ ಹಿಂದಿ ಕಲಿಸುತ್ತಿದ್ದರು. ನಮಗಾಗ ಗೋಕುಲಾಷ್ಟಮಿಗೆ ರಜೆ ಇರುತ್ತಿರಲಿಲ್ಲ. ಹಾಗಾಗಿ ನಮ್ಮ ಮನೆಯಲ್ಲಿ ಅನುಕೂಲ ಸಿಂಧುವಾಗಿ ಕೃಷ್ಣನ ಜನ್ಮ ೮-೯ ಘಂಟೆಗೇ ಆಗುತ್ತಿತ್ತು. ಮಾಷ್ಟ್ರಿಲ್ಲದೇ ನಮ್ಮ ಮನೆಯಲ್ಲಿ ಕೃಷ್ಣನ ಪೂಜೆ ಆಗುತ್ತಿರಲಿಲ್ಲ. ಅವರು ದಾಸರ ಪದಗಳನ್ನು ಹಾಡಿ, ನನ್ನ ಕೈಯ್ಯಲ್ಲೂ ಒಂದೆರಡು ಹಾಡುಗಳನ್ನ ಹಾಡಿಸಿ, ಕೊಳಲಿನಲ್ಲಿ ನುಡಿಸುತ್ತಿದ್ದರು. ಈ ಸಂಗೀತ ಸಮಾರಾಧನೆಯಿಲ್ಲದೆ ದೇವಕಿಯ ಪ್ರಸವ ವೇದನೆಯೇ ಆರಂಭವಾಗುತ್ತಿರಲಿಲ್ಲ.  ನಮ್ಮಮ್ಮ, ಶಾಲೆಯಲ್ಲಿ ಗೇಯ್ದು ಬಂದ ಮೇಲೆ ತರಹೇವಾರಿ ತಿಂಡಿಗಳನ್ನು (ಇಡ್ಲಿ, ಪಾಯಸ, ಚಕ್ಕುಲಿ, ಯರಿಯಪ್ಪ, ಉಂಡೆ, ಅವಲಕ್ಕಿ, ಇತರೆ) ಪೂಜೆಗೆ ಸರಿಯಾದ ಸಮಯಕ್ಕೆ ತಯ್ಯಾರಿ ಮಾಡಿಡುತ್ತಿದ್ದರು. ಆಗೆಲ್ಲ, ಹಿಂದೆ ದ್ರೌಪದಿಯನ್ನು ಪರಮಾತ್ಮ ಕಾಪಾಡಿದಂತೆ, ಅಮ್ಮನ ಹಿಂದೆ ನಿಂತು ಆತ ಎಲ್ಲವನ್ನೂ ಸುಸೂತ್ರವಾಗಿ ಮಾಡಿಸಿಕೊಟ್ಟನೇ ಎಂದೆನಿಸಿದ್ದೂ ಉಂಟು. ನನ್ನಕ್ಕನೂ ಸಾಕಷ್ಟು ಸಹಾಯ ಮಾಡುತ್ತಿದ್ದಳು. ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಚಕ್ಕುಲಿ ಸುತ್ತು ಬರದೇ ಒದ್ದಾಡಿಸಿದಾಗ ಅಮ್ಮ ಸಹನೆ ಕಳೆದುಕೊಂಡದ್ದೂ ಇದೆ. ನನಗನಿಸುತ್ತೆ ಆ ದಿನ ಕೃಷ್ಣ ಇನ್ನ್ಯಾವುದೋ ಮನೆಯಲ್ಲಿ ಬ್ಯುಸಿ ಆಗಿದ್ದಿರಬಹುದು. ನಾವು ನಂತರ ದಾಂಡೇಲಿಗೆ ವರ್ಗವಾಗಿ ಹೋದಾಗ, ಸುದೈವದಿಂದ ಮಾಷ್ಟ್ರನ್ನೂ ಅಲ್ಲಿಗೆ ವರ್ಗ ಮಾಡಿದ್ದರು. ದಾಂಡೇಲಿಯಲ್ಲಿ ಮಾಷ್ಟ್ರು ತಮ್ಮೊಂದಿಗಿದ್ದ ಬಾಡಿಗೆ ಕೋಣೆಗಳ ಸಂಕೀರ್ಣದ ಗೆಳೆಯರನ್ನು ಸೇರಿಸಿ ಒಂದು ಸಂಗೀತ ಗುಂಪನ್ನು (ಇಲ್ಲಿಯ ಬ್ಯಾಂಡ್ ನಂತೆ) ಕಟ್ಟಿದರು. ಮಾಷ್ಟ್ರು ಪ್ರಮುಖ ಹಾಡುಗಾರ ಹಾಗೂ ಸವ್ಯಸಾಚಿ , ಚೇತನ್ ಮಾಮ್ ತಬಲಾ ವಾದಕ, ದತ್ ಮಾಮ್ ಹಾರ್ಮೋನಿಯಂ ಹಾಗೂ ನನ್ನದು ಕೊಳಲು. ಚೇತನ್ ಮಾಮ್ ಹಾಗೂ ದತ್ ಮಾಮ್ ಕೂಡ ಮಧುರವಾಗಿ ಹಾಡುತ್ತಿದ್ದರು. ನಮ್ಮ ಗೋಕುಲಾಷ್ಟಮಿಗೆ ಈಗ ಹೊಸ ಕಳೆ ಬಂದಿತ್ತು. ಒಮ್ಮೆ ಅವರ ಬಿಲ್ಡಿಂಗನಲ್ಲೇ ಇದ್ದ ಉತ್ತರ ಕರ್ನಾಟಕದವರೊಬ್ಬರು (ಅವರ ಹೆಸರು ಈಗ ಮರೆತು ಹೋಗಿದೆ) ಪೂಜೆಗೆ ಬಂದಿದ್ದರು. ಅವರು ಕಟ್ಟರ್ ಕೃಷ್ಣನ ಭಕ್ತ. ಅವರು ಶುರು ಮಾಡಿದ  ಭಜನೆ ಅಂದು ಮುಗಿಯಲೇ ಇಲ್ಲ. ಮಾರನೇ ದಿನ ಕೆಲಸಕ್ಕೆ ಹೋಗಬೇಕಾದವರೆಲ್ಲ ಕಂಗಾಲಾಗಿ ಹೋದರು. ಎಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು. ಅಂದು ನಮ್ಮ ಗಮನವೆಲ್ಲ ಗಡಿಯಾರದತ್ತ ಇತ್ತೇ ಹೊರತು ಅವರ ನಾನ್-ಸ್ಟಾಪ್ ಭಜನೆಗಳತ್ತಲ್ಲ! ಅಂದು ಮಾತ್ರ ಕೃಷ್ಣ ನಮ್ಮ ಮನೆಯಲ್ಲಿ ಮಧ್ಯ ರಾತ್ರಿಗೆ ಹುಟ್ಟಿದ್ದ. ಎಂದಿಗೂ ಲಘು ಪ್ರಸವದಿಂದ ಹೊರಬರುತ್ತಿದ್ದ ದೇವಕಿ, ಅಂದು ತುಂಬಾ ನೋವು ಉಂಡಿರಬೇಕು. ಕೃಷ್ಣ ಪರಮಾತ್ಮನೂ ತಣ್ಣಗಿನ ಅನ್ನ ಉಣ್ಣ ಬೇಕಾಯ್ತು. ಗೋಕುಲಾಷ್ಟಮಿ ಎಂದರೆ ನನ್ನ ಕಣ್ಣ ಮುಂದೆ ಬರುವುದು ಈ ಚಿತ್ರಗಳು. 

ದಹಿ ಹಂಡಿ ಒಡೆಯಲು ಸಾಗುತ್ತಿರುವ ಗೋವಿಂದಗಳು

ಮುಂದೆ ನನ್ನ ಕರ್ಮ ಭೂಮಿ ಮುಂಬಯಿಗೆ ವರ್ಗಾಂತರವಾಯಿತು. ಇದೊಂದು ಬಹು ಸಂಸ್ಕೃತಿಗಳು ಒಂದಾಗುವ ಸಂಗಮ ಭೂಮಿ. ಇಲ್ಲಿಯ ದಹಿ ಹಂಡಿ (ಮೊಸರು ಕುಡಿಕೆ) ಸಂಪ್ರದಾಯ ಚಿರಪರಿಚಿತ. ಸ್ವತಃ ನೋಡದವರಿಗೂ ಇದರ ದರ್ಶನ ಹಿಂದಿ ಸಿನೆಮಾಗಳ ಮೂಲಕ ಆಗಿರುತ್ತದೆ. ಜಯಂತ್ ಕಾಯ್ಕಿಣಿಯವರು ತಮ್ಮ ಕಥೆಯಲ್ಲೂ ದಹಿ ಹಂಡಿ ಸಂಪ್ರದಾಯದ ಪ್ರಸ್ತಾವ ಮಾಡಿದ್ದಾರೆ. ದಹಿ ಹಂಡಿಯನ್ನು ಭಾರತದ ಇತರೆಡೆಗೂ ಆಚರಿಸುತ್ತಾರೆ, ಆದರೆ ಅವನ್ನು ನಾನು ನೋಡಿಲ್ಲ. ಹಾಗೆ ನೋಡಿದರೆ, ನನ್ನ ಈ ಸಲದ ಮುಂಬೈ ಪ್ರವಾಸದವರೆಗೂ ನಾನು ದಹಿ ಹಂಡಿ ನೋಡಿರಲಿಲ್ಲ. ತೀವ್ರ ಕೆಲಸದ ಒತ್ತಡದ ನಡುವೆ ಹೆಚ್ಚಿನ ಯಾವುದೇ ಹಬ್ಬ ಹರಿದಿನಗಳ ಆಚರಣೆಯಲ್ಲಿ ನಾವು ಪಾಲ್ಗೊಳ್ಳುತ್ತಿರಲಿಲ್ಲ; ಇದೊಂದು ನೆವವಾಗಿರಬಹುದು. ದಹಿ ಹಂಡಿ ಗೋಕುಲಾಷ್ಟಮಿಯ ಮಾರನೇ ದಿನ ಆಚರಿಸಲ್ಪಡುತ್ತದೆ. ಎತ್ತರದಲ್ಲಿ ಕಟ್ಟಿದ ಮೊಸರು ಕುಡಿಕೆಯನ್ನು ಮಾನವ ಶಿಖರವನ್ನು ಕಟ್ಟಿ ಗಡಿಗೆ ಒಡೆದವರಿಗೆ ಅದರೊಳಗಿನ ಇನಾಮು. ಈ ಸಾಹಸವನ್ನು ಮಾಡುವವರನ್ನು ಗೋವಿಂದ ಎಂದು ಕರೆಯುತ್ತಾರೆ. ನಗರದ ಮೂಲೆಮೂಲೆಗಳಿಂದ ಈ ಗೋವಿಂದ ಗುಂಪುಗಳು ತಾಲೀಮು ಮಾಡಿ ಸಿದ್ಧವಾಗಿ ಟ್ರಕ್ಕುಗಳಲ್ಲಿ, ಬೈಕುಗಳಲ್ಲಿ ತಂಡದ ಸಮವಸ್ತ್ರ ಧರಿಸಿ, ವಿವಿಧೆಡೆ ಕಟ್ಟಿದ ಮೊಸರು ಕುಡಿಕೆಗಳನ್ನು ಒಡೆಯುವ ಸವಾಲನ್ನು ಸ್ವೀಕರಿಸುತ್ತವೆ. ಕಟ್ಟುಮಸ್ತಾದ ಗಂಡಸರು ಶಿಖರದ ಅಡಿಪಾಯವಾಗಿದ್ದು, ಚುರುಕಾದ ತೆಳ್ಳಗಿನವನು ಶಿಖರದ ತುದಿ ಹತ್ತುವುದು ವಾಡಿಕೆ. ಈ ಕಾರ್ಯಕ್ರಮದ ವಾತಾವರಣಕ್ಕೆ ಬಣ್ಣ ಕಟ್ಟುವುದು ತಂಡದ ತಮಟೆ ಬಡಿತ (ಈಗ ಹೆಚ್ಚಾಗಿ ಸ್ನೇರ್ ಡ್ರಮ್), ಧ್ವನಿ ವರ್ಧಕದಲ್ಲಿ ಹರಿದು ಬರುವ ಸಂದರ್ಭೋಚಿತ ಹಾಡುಗಳು, ಕಿಕ್ಕಿರಿದು ನೆರೆಯುವ ಜನ ಸಮೂಹದ ಪ್ರೋತ್ಸಾಹದಾಯಕ ಉದ್ಗಾರಗಳು, ಶಿಳ್ಳೆಗಳು. ಮೊದಲು ಮುಂಬೈನ ಚಾಳುಗಳಲ್ಲಿ ನಡೆಯುತ್ತಿದ್ದ ಸ್ಪರ್ಧೆಗೆ ಈಗ ಹೊಸ ಆಯಾಮ ದೊರಕಿದೆ. ರಾಜಕಾರಣಿಗಳು ತಮ್ಮ ವಿಭಾಗದಲ್ಲಿ ಭಾರಿ ಮೊತ್ತದ ಬಹುಮಾನವನ್ನು ಕೊಡುತ್ತಾರೆ. ಮಡಿಕೆ ಮುಟ್ಟಲಾಗದಿದ್ದವರಿಗೂ ಬಹುಮಾನವಿದೆ. ಅಂಥವರು ಎಷ್ಟು ಮಜಲುಗಳನ್ನು ನಿರ್ಮಿಸಿದ್ದರು ಎಂಬುವುದರ ಮೇಲೆ ಬಹುಮಾನದ ಮೊತ್ತ ನಿರ್ಧರಿತವಾಗಿರುತ್ತದಂತೆ. ಸಿನೆಮಾಗಳಲ್ಲಿ ಚಾಳ್ ನಲ್ಲಿ ಎದುರು ಬದುರಿನ ಕಟ್ಟಡಗಳಿಗೆ ಮಡಿಕೆ ಕಟ್ಟಿದ್ದನ್ನು ಕಂಡು ಗೊತ್ತಿದ್ದ ನನಗೆ, ಈ ಸಲ ಕ್ರೇನಿಗೆ ಕಟ್ಟಿದ್ದ ಮಡಕೆ ನೋಡಿ ಆಶ್ಚರ್ಯವಾಯಿತು. ಇದು ದಹಿ ಹಂಡಿಗೆ ಆಗಿರುವ ಆಧುನಿಕತೆಯ ಒಂದು ಲೇಪ.  ಸುಮಾರು  ೩ ತಾಸುಗಳ ನಂತರವೂ ಯಾವ ತಂಡವೂ ಮಡಕೆ ಮುಟ್ಟಿದ್ದನ್ನು ಕಾಣದೆ ನಿರಾಸೆಯೂ ಆಯಿತು. ಮೋಜು, ಮಸ್ತಿ, ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತಿದ್ದ ದಹಿ ಹಂಡಿ ನವ್ಯತೆಯ ಮೆರುಗಿನಲ್ಲಿ ತನ್ನ ವಿಶಿಷ್ಟತೆಯನ್ನು ಕಳೆದುಕೊಳ್ಳುತ್ತಿದೆಯೇ ಎಂದು ಖೇದವೆನಿಸಿತು. ೧೫-೨೦ ಮಜಲುಗಳನ್ನು ಕಟ್ಟುವ ಭರದಲ್ಲಿ, ಗೋವಿಂದರು ಬಿದ್ದು ಗುರುತರ ಗಾಯಕ್ಕೀಡಾಗುವುದು ಇಂದು ಅಪರೂಪವಲ್ಲ. ಕಳೆದ ವರ್ಷ ಸುಮಾರು ೨೦೦ ಜನ ದಹಿ ಹಂಡಿ ಕಾರ್ಯಕ್ರಮದಲ್ಲಿ ಅಪಘಾತಕ್ಕೀಡಾಗಿದ್ದರಂತೆ. ತುದಿಯೇರಲು ಚಿಕ್ಕವರಿಗೆ ಜಾಸ್ತಿ ಬೇಡಿಕೆ ಇರುವುದರಿಂದ ಮಕ್ಕಳೂ  ಅಪಘಾತಕ್ಕೆ ತುತ್ತಾಗುತ್ತಿದ್ದರು. ಅದರಿಂದಲೇ ಈಗ ಹೈಕೋರ್ಟ್ ೧೮ಕ್ಕ್ಕಿಂತ ಚಿಕ್ಕವರು ದಹಿ ಹಂಡಿಯಲ್ಲಿ ಪಾಲ್ಗೊಳ್ಳಬಾರದು ಎಂದು ನಿರ್ಬಂಧಿಸಿದೆ. 

ಕ್ರೇನಿಗೆ ಕಟ್ಟಿರುವ ಮೊಸರು ಕುಡಿಕೆ

ನಾನು ನನ್ನ ಮಾವನ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆ. ಅವರ ಸೊಸೈಟಿಯಲ್ಲಿ ಸಾಕಷ್ಟು ಜನ ಗುಜರಾತಿಗಳು ನೆಲೆಸಿದ್ದಾರೆ. ಅವರಿಗೆ ಗೋಕುಲಾಷ್ಟಮಿ ದೊಡ್ಡ ಹಬ್ಬ. ಅವರ ಸಾಮೂಹಿಕ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವ ವಿಶೇಷ ಅನುಭವ ನನಗಾಯಿತು. ಸುಮಾರು ೧೦:೩೦ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ ಎಂದು ನನ್ನ ನಾದಿನಿ, ಅವಳ ಮಗಳೊಡನೆ ಕೆಳಗಿಳಿದೆ. ಕೆಲವು ಮಕ್ಕಳು ಕೃಷ್ಣ, ರಾಧೆಯ ದಿರಿಸಿನಲ್ಲಿ ಆಟವಾಡುತ್ತಿದ್ದು, ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಮಹಿಳೆಯರು ಮ್ಯೂಸಿಕ್ ಪ್ಲೇಯರ್ನಲ್ಲಿ ಹರಿಯುತ್ತಿದ್ದ ಭಕ್ತಿಗೀತೆಗಳಿಗೆ ವರ್ತುಲಾಕಾರವಾಗಿ ತಿರುಗುತ್ತ ಗರಭಾ ನೃತ್ಯ ಮಾಡಿದರು. ಪಕ್ಕದಲ್ಲೇ ಮಕ್ಕಳಿಗಾಗಿ ದಹಿ ಹಂಡಿಯನ್ನೂ ಕಟ್ಟಿದ್ದರು. ಹನ್ನೆರಡಾಗುತ್ತಿದ್ದಂತೆ, ಮೇಲಿನ ಮನೆಯಿಂದ ಕೃಷ್ಣನಂತೆ ಅಲಂಕರಿಸಿದ ಮುದ್ದಾದ ಮಗುವನ್ನು ಬುಟ್ಟಿಯಲ್ಲಿ ಮಲಗಿಸಿ ತಲೆಯ ಮೇಲೆ ‘ಅಂದು’ ವಸುದೇವ ಹೊತ್ತುಕೊಂಡು ಬಂದಂತೆ ತಂದರು. ಹೊರಗಡೆ ಮಳೆ ಸುರಿಯುತ್ತಿತ್ತು. ಒಂದರ್ಥದಲ್ಲಿ ಕೃಷ್ಣನ ಜನ್ಮವನ್ನು  ಹೂಬೇಹೂಬು ನಿರ್ಮಿಸಿದಂತಿತ್ತು. ಆದರೆ ಇಲ್ಲಿ ದೇವಕಿಯೇ ಮಗನನ್ನು ಹೊತ್ತಿದ್ದಳು. ಕೃಷ್ಣನನ್ನು ತೊಟ್ಟಿಲಿಗೆ ಹಾಕಿ ತೂಗಿ, ಪೂಜೆ ಮಾಡಿದಮೇಲೆ ದಹಿ ಹಂಡಿ ಕಾರ್ಯಕ್ರಮ ಶುರುವಾಯಿತು. ಒಂದಾಳು ಎತ್ತರದಲ್ಲಿದ್ದ ಮಡಕೆಯನ್ನು ಹೆಚ್ಚು ಶ್ರಮ ಪಡದೇ ಮಕ್ಕಳು ಒಡೆದರು. ಅವರ ಉತ್ಸಾಹ, ಒಡೆದಾಗ ಪಟ್ಟ ಸಂಭ್ರಮ ಯಾವುದೇ ಆಧುನಿಕ ದಹಿಹಂಡಿಗಿಂತ ಅರ್ಥಪೂರ್ಣವೂ, ಮನೋಹರವೂ ಆಗಿತ್ತೆನ್ನುವುದರಲ್ಲಿ ಸಂದೇಹವಿಲ್ಲ. ಮಡಕೆಯಲ್ಲಿದ್ದ ಚಾಕಲೇಟುಗಳನ್ನು ನಾದಿನಿ ಮಗಳು ಹೆಕ್ಕಿ ತಂದಿದ್ದಳು. ಅವನ್ನು ಮೆಲ್ಲುತ್ತ ಮೇಲೆ ಫ್ಲ್ಯಾಟಿಗೆ ಬಂದಾಗ ಗಂಟೆ ಒಂದಾಗಿತ್ತು. ಸಾಕಷ್ಟು ವರ್ಷಗಳ ಮೇಲೆ ಗೋಕುಲಾಷ್ಟಮಿಯನ್ನು ಭಾರತದಲ್ಲಿ ಆಚರಿಸಿ ಆನಂದಿಸಿದ ತೃಪ್ತಿ ಮನದಲ್ಲಿತ್ತು. ಇದು ಎರಡನೇ ಬಾರಿ ಮಧ್ಯರಾತ್ರಿಯಲ್ಲಿ ಜನ್ಮಾಷ್ಟಮಿಯನ್ನು ಆಚರಿಸಿದ್ದು ಎನ್ನುವುದೂ ನೆನಪಾಯಿತು. 

-ರಾಂ