’ಕಾಫಿ ವಿತ್ ಕಾಸರವಳ್ಳಿ ’- ಭಾಗ ೧- ಡಾ. ಶ್ರೀವತ್ಸ ದೇಸಾಯಿ ಮತ್ತು ಡಾ. ಪ್ರೇಮಲತ ಬಿ.

 

ಇದೇ ವರ್ಷ ಏಪ್ರಿಲ್ ನಲ್ಲಿ ಡಾಂಕಾಸ್ಟರಿನಲ್ಲಿ ನಡೆದ ಕನ್ನಡ ಬಳಗದ ಯುಗಾದಿ ಸಮಾರಂಭದಲ್ಲಿ   ’ ಅನಿವಾಸಿ ’ ತಂಡ ಡಾ.ಪ್ರಸಾದ್ ರ ನೇತೃತ್ವದಲ್ಲಿ  ’ ’ಕಾಫಿ ವಿತ್ ಕಾಸರವಳ್ಳಿ ’ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲರ ಸಮಕ್ಷಮದಲ್ಲಿ ನಡೆದ ಈ ಕಮ್ಮಟದಲ್ಲಿ  ಡಾ.ಗಿರೀಶ್ ಕಾಸರವಳ್ಳಿಯವರ ಆಯ್ದ ಸಿನಿಮಾಗಳ ಬಗ್ಗೆ ಹಲವರು ಮಾತನಾಡಿದರು. ಆಯಾ ಸಿನಿಮಾಗಳ  ಕೆಲವು ದೃಶ್ಯಾವಳಿಗಳನ್ನು ನೆರೆದ ಜನರಿಗೆ ತೋರಿಸಿದರು.ವಿಶೇಷ ಎಂದರೆ ಈ ಸಿನಿಮಾಗಳ ರೂವಾರಿ, ನಿರ್ದೇಶಕ, ಹಲವು ಚಿತ್ರಗಳ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದ ಖ್ಯಾತಿಯ, ಕಲಾತ್ಮಕ ಚಿತ್ರಗಳ ಗಾರುಡಿಗ, ಪ್ರಪಂಚದ ಒಬ್ಬ ಶ್ರೇಷ್ಠ ಸಿನಿಮಾ ನಿರ್ದೇಶಕರಾದ ಪದ್ಮಶ್ರೀ ವಿಜೇತ ಡಾ. ಗಿರೀಶ್ ಕಾಸರವಳ್ಳಿಯವರೂ ನಮ್ಮೊಡನಿದ್ದುದು ! ಅವರ ಸಮ್ಮುಖದಲ್ಲೇ ಅವರ ಚಿತ್ರಗಳ ಬಗ್ಗೆ ಮಾತನಾಡುವ ನಮ್ಮ ಪ್ರಯತ್ನದ ನಂತರ ಅವರೊಂದಿಗೆ ಆ ಚಿತ್ರದ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ಕೇಳುವ ಅವಕಾಶವೂ ಇತ್ತು.  ಈ ಕಾರ್ಯಕ್ರಮದಲ್ಲಿ ಅತ್ಯಂತ ಸಮಾಧಾನ  ಚಿತ್ತದೊಡನೆ ಕಾಸರವಳ್ಳಿಯವರು ಭಾಗವಹಿಸಿದ್ದಲ್ಲದೆ ಕೇಳಿದ ಪ್ರಶ್ನೆಗಳಿಗೆ ಪ್ರತಿಶತಃ ನೈಜ, ಸರಳ ಮತ್ತು ಪ್ರಬುದ್ಧ ಉತ್ತರಗಳನ್ನು ನೀಡಿ ಎಲ್ಲರ ಮನಗೆದ್ದರು. ಆ ದಿನದ ಕಾರ್ಯಕ್ರಮದಲ್ಲಿ  ಮೊಟ್ಟ ಮೊದಲಿಗೆ  ಮಾತನಾಡಿದವರು ನಮ್ಮೆಲ್ಲರ ಮಿತ್ರರಾದ ಡಾ. ಶ್ರೀವತ್ಸ ದೇಸಾಯಿಯವರು.  ಆ ನಂತರ  ಡಾ. ಪ್ರೇಮಲತ ಬಿ. ಗಿರೀಶ್ ಕಾಸರವಳ್ಳಿಯವರಿಗೆ  ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳ ಸುರಿಮಳೆಯನ್ನು  ನೀಡಿದ ಚಲನ ಚಿತ್ರ  ’ಗುಲಾಬಿ ಟಾಕೀಸಿ ’ ನ ಬಗ್ಗೆ ಮಾತನಾಡಿದರು.

ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಿನಿಮಾ ಮೆಲುಕುಗಳನ್ನು  ’ಅನಿವಾಸಿ್ ’ ನಿಮ್ಮೊಂದಿಗೆ  ಇಂದು ಮತ್ತು ಮುಂಬರುವ ವಾರಗಳಲ್ಲಿ ಹಂಚಿಕೊಳ್ಳುತ್ತದೆ-ಸಂ

 

”ಘಟಶ್ರಾದ್ಧ” ಎಂಬ ಕನ್ನಡ ಸ್ವರ್ಣ ಕಮಲ !

 

 

”ಘಟಶ್ರಾದ್ಧ”: ಗಿರೀಶ್ ಕಾಸರವಳ್ಳಿಯವರಿಗೆ ಮೊದಲ ’ಸ್ವರ್ಣ ಕಮ” ಪ್ರಶಸ್ತಿ ಕೊಟ್ಟ ಚಿತ್ರ.

ಯು. ಕೆ. ಕನ್ನಡ ಬಳಗದ ಯುಗಾದಿ (2019) ಸಮಾರಂಭ ಡೋಂಕಾಸ್ಟರಿನಲ್ಲಿ ನಡೆಯಿತು. ಆಗ ’ಕಾಫಿ ವಿತ್ ಕಾಸರವಳ್ಳಿ’ ಅನ್ನುವ ಗಿರೀಶ ಅವರ ಕೆಲವು ಸಿನಿಮಾಗಳ ಚರ್ಚೆ ಮತ್ತು ನಿರ್ದೇಶಕರೊಡನೆ ಪ್ರಶ್ನೋತ್ತರಗಳ ಕಾರ್ಯಕ್ರಮನ್ನು ಹಮ್ಮಿಕೊಂಡಾಗ ನಾನು ಅವರ ಮೊದಲ ಚಿತ್ರವಾದ ”ಘಟಶ್ರಾದ್ಧ”ವನ್ನು ಆರಿಸಿಕೊಂಡಿದ್ದೆ. ಚಿತ್ರದ ಕೊನೆಯ ದೃಶ್ಯವನ್ನು ಪರದೆಯ ಮೇಲೆ ಪ್ರದರ್ಶಿಸಿದ ನಂತರ ಸಂವಾದ-ಪ್ರಶ್ನೋತ್ತರ ನಡೆಯಿತು.ಈಗಾಗಲೆ ಅವರು ಕಥೆಗಳನ್ನು ಚಿತ್ರ ಮಾಧ್ಯಮಕ್ಕೆ ಅವರು ಅಳವಡಿಸುವ ರೀತಿಯ ಬಗ್ಗೆ ಮತ್ತು ’ಕಾಸರವಳ್ಳಿ ಕಥಾನಕದ ಸ್ಟೈಲ್ ” ಬಗ್ಗೆ ಬೇರೆಡೆಗೆ ಸಾಕಷ್ಟು ಚರ್ಚೆಯಾಗಿದೆ. ”ರೂಪಕಗಳ ಬ್ರಹ್ಮ” ಎಂದೆನಿಸಿಕೊಂಡ ಕಾಸರವಳ್ಳಿ ಅವರು ತಮ್ಮ ಸಿನಿಮಾಗಳಲ್ಲಿ ದೃಶ್ಯಗಳನ್ನು ಜೋಡಿಸುವ ರೀತಿ ವಿಡಿಯೋಗ್ರಫಿಯಲ್ಲಿ  ಆಸಕ್ತನಾದ ನನ್ನನ್ನೂ ಆಕರ್ಷಿಸಿದೆ.

ಪುಸ್ತಕದ ಕಥೆಯನ್ನು ತೆರೆಯಮೇಲೆ ತರುವಾಗ ಕೆಲವೊಮ್ಮೆ ಕಷ್ಟವೂ ಆಗಬಹುದು, ಕೆಲವೊಮ್ಮೆ ಹತ್ತಾರು ವಾಕ್ಯಗಳನ್ನು ಕೆಲವೇ ಸೆಕೆಂಡುಗಳಲ್ಲಿ ಚಿತ್ರದಲ್ಲಿ ತೋರಿಸ ಬಹುದು. ಇದು ಸಿನಿಮಾ ನಿರ್ದೇಶಕನ ನೈಪುಣ್ಯತೆ ಮೇಲೆ ಹೋಗುತ್ತದೆ.  ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿಯೇ ಅವರು ಹೊರತಂದ ಸಿನಿಮಾ ”ಘಟಶ್ರಾದ್ಧ”. ಇದು ’ಪರ್ಫೆಕ್ಟ್ ಪ್ರೋಡಕ್ಟ್’ ಅಲ್ಲವಾದರೂ ಸತ್ಯಜಿತ್ ರೇ ಅವರನ್ನೇ ಬೆರಗುಗೊಳಿಸಿದ ಚಿತ್ರ. ಆಗಾಗಲೇ ಅವರಿಗೆ ಸಿನಿಮಾ ಮಾಧ್ಯಮದ ಮೇಲೆ ಎಷ್ಟು ಹಿಡಿತ ಇತ್ತು ಎನ್ನುವುದನ್ನು ಇದರಲ್ಲಿ ಕಾಣುತ್ತೇವೆ.

Mise-en-scène

ಪ್ರತಿಯೊಂದು ದೃಶ್ಯವನ್ನೂ ಚಿತ್ರೀಕರಿಸುವಾಗ ಡೈರೆಕ್ಟರ್ ಕಣ್ಣ ಮುಂದಿನ ಚಿತ್ರದ ಚೌಕಟ್ಟಿನಲ್ಲಿ ನಿಂತ ಅಥವಾ ಚಲಿಸುವ ಮತ್ತು ಜೋಡಿಸಿದ ಎಲ್ಲ ’ವಸ್ತು’ಗಳ ಮೇಲೆ ಕಣ್ಣಿಟ್ಟಿರಬೇಕಾಗುತ್ತದೆ. ಈ ರಂಗಸಜ್ಜಿಕೆಗೆ Mise-en-scène (ಉಚ್ಚಾರ: ಮೀಸಾನ್ ಸೇನ್) ಎನ್ನುವ ಫ್ರೆಂಚ್ ಪದಗುಚ್ಚವನ್ನುಪಯೋಗಿಸುತ್ತಾರೆ. ಯಾಕಂದರೆ “everything in the frame can carry meaning.”  ಮನೆಯ ದೃಶ್ಯವಿದ್ದರೆ ಅಲ್ಲಿಯ ಕಂಬ, ಗೋಡೆ, ಅದರ ಮೇಲಿನ ಚಿತ್ರಗಳು, ನಟರು ನಿಲ್ಲುವ ಜಾಗ, ನಟರ ವಸ್ತ್ರ, ಆಭರಣ, ಬಣ್ಣ, ಮೇಕಪ್,  ವಿನ್ಯಾಸಗಳು, ಅವರಮೇಲೆ ಬೀಳುವ ಬೆಳಕು-ಕತ್ತಲೆ, ಎಲ್ಲವೂ ’ಮೀಸಾನ್ ಸೇನ್’ ದ ಅಂಗಗಳು. ಘಟಶ್ರಾದ್ಧ ಅವರ ಮೊದಲ ಚಿತ್ರವಾದರೂ ಅದರಲ್ಲಿ ಈ ರೂಪಕಗಳ ಸಾಲನ್ನೇ ನೋಡುತ್ತೇವೆ. ಈ ಸಿನಿಮಾ ಒಬ್ಬ ಬಾಲ ವಿಧವೆ ಯಮುನಕ್ಕನ ದಾರುಣ ಕಥೆ. ಆಕೆಯ ಹತ್ತಿರ ಬಂದ ನಾಣಿ (ಅಜಿತ್ ಕುಮಾರ್) ಎಂಬ ಬಾಲಕ ವೇದ ಪಾಠಶಾಲೆಯಾದ ಉಡುಪರ ಮನೆಯಲ್ಲಿದ್ದು  ಕಲಿಯಲು ಬಂದ ಆಗ ತಾನೆ ಉಪನಯನವಾದವನು. ಆಗ ಆಕೆ ತನ್ನ ಗರ್ಭವನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿರುತ್ತಾಳೆ. ಚಿತ್ರದ ಕೊನೆಯಲ್ಲಿ ಅಕ್ರಮ ಗರ್ಭಪಾತವಾದರೂ ಕುಲದಿಂದ ಬಹಿಷ್ಕಾರ ತಪ್ಪದೆ ಆಕೆಯ ಘಟಶ್ರಾದ್ಧವಾಗುತ್ತದೆ. ಮೊದಲಿನ ಹಲವಾರು ದೃಶ್ಯಗಳಲ್ಲಿ ವಿಶಾಲವಾದ ಮನೆಯ ಕಂಬದ ಅರೆಮರೆಯಾಗಿ ನಿಂತ ಯಮುನಕ್ಕ (ಮೀನಾ) ಕಾಣಿಸಿಕೊಳ್ಳುತ್ತಾಳೆ.  ಅಕೆ ಗರ್ಭ ಧರಿಸಿದ ಹೊಟ್ಟೆಯಮೇಲೆ ನಾಣಿ ಒದ್ದ ಮೇಲೆ ಗೋಡೆಗೊರಗಿದ ಕೊಡದ ಮೇಲಿನ ಚೆಂಬು ಉರುಳುವ ಘಟ್ಟ, ಆ ಮನೆಯೊಳಗೆ ಬಂದು ಹೋಗುವವರ ಪ್ರವೇಶ-ನಿರ್ಗಮನ ಇವೆಲ್ಲವನ್ನೂ ನಿರ್ಮಾಪಕರು ಅತ್ಯಂತ ಮುತವರ್ಜಿಯಿಂದ ರಚಿಸಿದ್ದು ಸ್ಪಷ್ಟವಾಗುತ್ತದೆ. ಆದರೆ ಸಿನಿಮಾದ ಒಳ ಮತ್ತು ಹೊರಾಂಗಣ ಚಿತ್ರೀಕರಣದಲ್ಲೂ ಗಿರೀಶ ಕಾಸರವಳ್ಳಿ ಅವರ ಕುಶಲತೆಯನ್ನು ನೋಡುತ್ತೇವೆ. ಕಥೆ ಮುಂದುವರೆಯಲು ಇವಷ್ಟೇ ಸಾಲದು. ನಟನೆ, ಸಂಭಾಷಣೆ, ಹಿನ್ನೆಲೆಯ ಶಬ್ದ, ಸಂಗೀತ ಸಂಯೋಜನೆ ಇವೆಲ್ಲವೂ ಬೇಕು, ಅವು ವೀಕ್ಷಕನ ಅನುಭವವನ್ನು ವಿಸ್ತರಿಸುತ್ತವೆ . ಅವುಗಳನ್ನು ಜೋಡಿಸಿದ ರೀತಿ ದೃಶ್ಯದ ಸಾಫಲ್ಯಕ್ಕೆ ಅಥವಾ ವಿಫಲತೆಗೆ ಕಾರಣವಾಗುತ್ತದೆ.

ಕೆಲವೇ ದೃಶ್ಯಗಳನ್ನು ಬಿಟ್ಟರೆ, (ಅವರ ನಂತರದ ಚಿತ್ರಗಳಲ್ಲಿ ಆದಂತೆ) ಈ ಚಿತ್ರಕಥೆ (script) ಲೇಖಕ ಯು.ಆರ್.  ಅನಂತಮೂರ್ತಿಯವರ ಮೂಲ ಕಥೆಯಿಂದ ದೂರ ಸರಿದಿಲ್ಲ, ಅದಕ್ಕೆ ನಿಷ್ಠವಾಗಿಯೇ ಇದ್ದಾರೆ. ಒಂದು ಮುಖ್ಯ ಬದಲಾವಣೆಯೆಂದರೆ, ಮೂಲ ಕಥೆಯಲ್ಲಿ ನಮ್ಮ ಕಣ್ಣಮುಂದೆ ಬರುವದು ಬಾಲ ವಿಧವೆ ಯಮುನಕ್ಕ ಸೆರಗು ಹೊದಿಸಿದ ಬೋಳುತಲೆಯೇ. ಆದರೆ ಸಿನಿಮಾದಲ್ಲಿ ಅದನ್ನು ನಾವು ಸ್ಪಷ್ಟವಾಗಿ ನೋಡುವುದು ಕೊನೆಯ ದೃಶ್ಯದಲ್ಲೇ. ಅದರ ಹಿಂದಿನ ದೃಶ್ಯದಲ್ಲಿ ಒಂದು ’ಕ್ಲೋಸ್ ಅಪ್’ ಇದೆ – ಅದು ಹೆಗಲವರೆಗೆ ಇಳಿಬಿಟ್ಟ ಯಮುನಕ್ಕನ ಕೇಶರಾಶಿ.

ಇನ್ನು ಕೊನೆಯ ದೃಶ್ಯಕ್ಕೆ ಬರೋಣ. ಈಗ ಉಡುಪರ ಸಂಸ್ಕೃತ ಪಾಠಶಾಲೆಯ ಋಣ ತೀರಿ ನಾಣಿ ತನ್ನ ತಂದೆಯೊಡನೆ ಕಾಲೆಳೆಯುತ್ತ ತನ್ನೂರಿಗೆ ಹೊರಟಿದ್ದಾನೆ. ಅವರು ಹಳ್ಳಿಯ ಗಡಿಯ ಹೊರಗಿರುವ ಒಂಟಿ ಅಶ್ವತ್ಥವೃಕ್ಷವನ್ನು ದಾಟುತ್ತಿರುವಾಗ ಅದರ ಕೆಳಗೆ ಆಕೆಯನ್ನು ಕಂಡು  ಬೆಚ್ಚಿ ಬಿದ್ದು ಆತ ”ಯಮುನಕ್ಕಾ!” ಎಂದು ಚೀರುತ್ತಾನೆ. ಬಿಕ್ಕಿ ಬಿಕ್ಕಿ ಅಳುತ್ತಿರುವ ಯಮುನಕ್ಕನ ತಲೆಯಮೇಲಿನ ಸೆರಗು ಸ್ವಲ್ಪವೇ ಸರಿದಿದ್ದು ಆಕೆಯ ಬೋಳುತಲೆ ಕಾಣಿಸುತ್ತದೆ. ಅದನ್ನು ನೋಡಿ ವೀಕ್ಷಕನಿಗೂ ಅಂಥದೇ ಅನುಭವವಾಗುತ್ತದೆ. ನಾಣಿ, ಯಮುನಕ್ಕ ಇಬ್ಬರಿಗೂ ಮಾತು ಹೊರಡುವದಿಲ್ಲ. ಕೆಲವೇ ನಿಮಿಷಗಳ ಆ ’ಸೀನ್’ ದಲ್ಲಿ ಅದೊಂದೇ ಮಾತನ್ನು ನಾವು ಕೇಳುತ್ತೇವೆ.  ’ಬ” ಎಂದು ಕರೆದಂತೆ ಆತನ ತಂದೆ ಮಗನ ಕೈ ಹಿಡಿದು ಮೆಲ್ಲಗೆ ಹೆಜ್ಜೆಯಿಡುತ್ತ ತಮ್ಮ ಊರಿನ ದಾರಿ ಹಿಡಿದು ಹೋಗುತ್ತಾರೆ. ಅವರು ಪರದೆಯಿಂದ ಮರೆಯಾಗುವ ವರೆಗೆ ತಂದೆ-ಮಕ್ಕಳನ್ನು ಲಾಂಗ್ ಶಾಟ್ ನಲ್ಲೇ ಕೆಲನಿಮಿಷಗಳ ವರೆಗೆ ಕ್ಯಾಮರಾ ಸೆರೆ ಹಿಡಿಯುತ್ತದೆ. ಇದೊಂದು ಅದ್ಭುತ ದೃಶ್ಯ ಅದು ನಿರ್ದೇಶಕನ ನಿಪುಣತೆಗೆ ಸಾಕ್ಷಿ. ”ನಾಣಿ’ಯಂಥ’ ಎಳೆಯ ಮಕ್ಕಳನ್ನು ನಿರ್ದೇಶಿಸುವದು ಎಷ್ಟು ಕಷ್ಟ ಎಂದು ಕೇಳಿದ ಪ್ರಶ್ನೆಗೆ ಅವರ ಉತ್ತರ ಅದು ಬಹು ಸುಲಭದ ಕೆಲಸ. ದೊಡ್ಡವರನ್ನು ನಿರ್ದೇಶಿಸುವದೇ ತೊಂದರೆ. ಅವರಿಗೆ ತಾವು ಹೇಗೆ ಕಾಣಿಸುತ್ತೇವೆ ಎಂಬ ಜಂಬ, self-consciousness ಇರುತ್ತದೆ ಎಂದರು. ಈ ಮೊದಲೇ ಅವರು ಫಿಲ್ಮ್ ಇನ್ಸ್ಟಿಟೂಟಿನಲ್ಲಿ ಕಲಿಯುತ್ತಿರುವಾಗ ಕೊನೆಯ ವರ್ಷದಲ್ಲಿ ಈ ಕಥೆಯನ್ನೇ ಆಧರಿಸಿ ಶ್ರಾದ್ಧವನ್ನೇ ಮುಖ್ಯವಸ್ತುವಾಗಿ ’ಅವಶೇಷ’ ಎಂಬ ಚಿತ್ರ ತಯಾರಿಸಿದ್ದು (ಅದಕ್ಕೂ ಶ್ರೇಷ್ಠ ಚಿತ್ರದ ಸ್ವರ್ಣ ಪದಕ) ಈ ಚಿತ್ರಕ್ಕೆ ನಾಂದಿಯಾಗಿರಬಹುದು. 1978ರಲ್ಲಿ ಇದಕ್ಕೆ ಭಾರತದ ರಾಷ್ಟ್ರಪತಿಗಳ ಸ್ವರ್ಣ ಕಮಲ ಪ್ರಶಸ್ತಿಯಲ್ಲದೆ ಅಂತಾರಾಷ್ಟ್ರೀಯ ಮತ್ತು ರಾಜ್ಯಪ್ರಶಸ್ತಿಗಳನ್ನೂ ಗಳಿಸಿದೆ. ಸಿನಿಮಾ, ಕಲಾಮಾಧ್ಯಮಗಳಲ್ಲಿ ಪದೆ  ಪದೇ ಇದರ ಉಲ್ಲೇಖ ಆಗುತ್ತಲೇ ಇರುತ್ತದೆ.

                                                                                                                                                                                                                                                ಶ್ರೀವತ್ಸ ದೇಸಾಯಿ

ಡೋಂಕಾಸ್ಟರ್

 ‘ ಕಪ್ಪು-ಬಿಳುಪು ’ ಗಳ  ವರ್ಣ ಚಿತ್ರ ಗುಲಾಬಿ ಟಾಕೀಸು !

 

ಜಗತ್ತಿನ ಮೇರು ನಿರ್ದೇಶಕ, ಅಪ್ಪಟ ಕನ್ನಡಿಗ, ನಮ್ಮ ನಾಡಿನ ಅಧ್ಬುತ ದೃಶ್ಯಮಾಧ್ಯಮದ ಗಾರುಡಿಗ, ಸೃಜನಶೀಲ ಕಲಾವಿದ, ಚಿಂತಕ ಡಾ. ಗಿರೀಶ್ ಕಾಸರವಳ್ಳಿಯವರು ಹಲವು ಅತ್ಯುತ್ತಮವಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರ ರಂಗವೊಂದರಲ್ಲೇ ಅಲ್ಲದೆ, ಇಡೀ ಭಾರತದಲ್ಲಿ ಸತ್ಯಜಿತ್ ರೇ ಯವರನ್ನು ಬಿಟ್ಟರೆ ಅತಿಹೆಚ್ಚಿನ  ರಾಷ್ಟ್ರಪತಿಗಳ ಸ್ವರ್ಣ ಮತ್ತು ರಜತ ಕಮಲ ಪ್ರಶಸ್ತಿಗಳನ್ನು ಚಿತ್ರ ನಿರ್ದೇಶನಕ್ಕಾಗಿ ಪಡೆದಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲೇ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂತಹ ನಿರ್ದೇಶಕರ  ಎದುರೇ ಅವರದೊಂದು ಚಿತ್ರದ ಬಗ್ಗೆ ಮಾತನಾಡಲು ಅವಕಾಶ ಸಿಕ್ಕಾಗ ಗುಲಾಬಿ ಟಾಕೀಸು ಎನ್ನುವ ಚಿತ್ರವನ್ನು ಆಯ್ದುಕೊಂಡದ್ದು ಒಂದೇ ಕಾರಣಕ್ಕೆ. ಈ ಚಿತ್ರದ ವಿಡೀಯೋ ಸಿ.ಡಿ. ಯನ್ನು  ಬೆಂಗಳೂರಿನ  ’ಟೋಟಲ್ ಕನ್ನಡ ’  ಎನ್ನುವ ಮಳಿಗೆಯಿಂದ ತಂದು ನೊಡಿದ್ದರಿಂದ ಮತ್ತು ಅದನ್ನು ಮತ್ತೆ ನೋಡಿ ನನ್ನ ಅಭಿಪ್ರಾಯಗಳನ್ನು ರೂಪಿಸಲು ಅನುಕೂಲವಿದ್ದುದರಿಂದ. ಯಾಕೆಂದರೆ ನಾನು ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಹಲವು ಚಿತ್ರಗಳನ್ನು ನೋಡಿದ್ದೇನೆ. ಎಲ್ಲವೂ ಒಂದಲ್ಲ ಒಂದು ರೀತಿ ನನ್ನನ್ನು ಸಮ್ಮೋಹನಗೊಳಿಸಿವೆ.

ಗುಲಾಬಿ ಟಾಕೀಸು ಎನ್ನುವ ಚಿತ್ರವನ್ನು ವೈದೇಹಿಯವರ ಒಂದು ಸಣ್ಣ ಕಥೆಯನ್ನು ಆಧರಿಸಿ ಮಾಡಲಾಗಿದೆ. ಜಾನಕಿ ಶ್ರೀನಿವಾಸ ಮೂರ್ತಿ ಎನ್ನುವ ನಿಜ ನಾಮಧೇಯದ ಈ ಕಥೆಗಾರ್ತಿ ತಮ್ಮ ಕಥೆಗಳಲ್ಲಿ ಬಳಸುವ ಪ್ರಾಂತೀಯ ಭಾಷಾಸೊಗಡು ಮತ್ತು  ಅತಿಸಾಮಾನ್ಯರ ನಿರಾಡಂಬರ ಬದುಕಿನ ಚಿತ್ರಣಕ್ಕಾಗಿ ಹೆಸರುವಾಸಿ. ಜೊತೆಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕೂಡ ಗಳಿಸಿದಂತವರು.

ಒಬ್ಬ ಸೃಜನಶೀಲ ಬರಹಗಾರ್ತಿಯ ರಚನೆ ಮತ್ತೊಬ್ಬ ಸೃಜನಶೀಲನ ಕೈಗೆ ಸಿಲುಕಿದಾಗ ಏನಾಗಬಹುದು?

“ಗಂಟೆಯ ನೆಂಟನ ಓ ಗಡಿಯಾರ

ಬೆಳ್ಳಿಯ ಬಣ್ಣದ ಗೋಲಾಕಾರ

ಹೊತ್ತನು ತಿಳಿಯಲು ನೀನಾಧಾರ “…..

ಎನ್ನುವ ಜೀವಂತಿಕೆಯೇ ತುಂಬಿ ಟಿಕ.. ಟಿಕ… ನೆನ್ನುವ ದಿನಕರ ದೇಸಾಯಿಯವರ ಕವನವೊಂದು ಗಡಿಯಾರವನ್ನು ವರ್ಣಿಸಿ ನಮ್ಮಲ್ಲಿ ಸೋಜಿಗವನ್ನೂ, ಆನಂದವನ್ನೂ ತರದಿರಲು ಸಾಧ್ಯವೇ? ಇದೊಂದು ಕಾಲದಲ್ಲಿ ಮಕ್ಕಳ ಪಠ್ಯ ಪುಸ್ತಕದಲ್ಲಿ ಅಚ್ಚಾಗಿದ್ದ ಶಿಶುಗೀತೆ.  ಆದರೆ ಇದೇ ಗಡಿಯಾರ ಎನ್ನುವ ಪದ ಗಿರೀಶ್ ಕಾರ್ನಾಡರ ಕೈಯಲ್ಲಿ ವಿಭಿನ್ನ ಬಗೆಯ ಸಂಶೋಧನೆಗೆ ಪಾತ್ರವಾಗಬಲ್ಲುದು,  ’ಆಗೊಮ್ಮೆ-ಈಗೊಮ್ಮೆ ’ ಎನ್ನುವ ಅವರ ಲಲಿತ ಪ್ರಭಂದವೊಂದರಲ್ಲಿ  ಇದೇ ಗಡಿಯಾರದ, ಗೋಲಾಕಾರ, ಶೂನ್ಯ, ಬ್ರಂಹಾಂಡ, ಅಧ್ಯಾತ್ಮ, ಪರಾಭೌತ ಶಾಸ್ತ್ರ ಮತ್ತಿತರ ಹಲವು ಕೋನಗಳನ್ನು ಪಡೆದು ಓದುಗರನ್ನು ತಟ್ಟನೆ ಚಿಂತನೆಗೆ ತೊಡಗಿಸುತ್ತದೆ. ಇದೊಂದು ಸಣ್ಣ ಉದಾಹರಣೆ ಮಾತ್ರ.

ಇದೇ ರೀತಿಯಲ್ಲಿ ಸಣ್ಣ ಕಥೆಯಾಗಿದ್ದ ಗುಲಾಬಿ ಟಾಕೀಸು, ಕಾಸರವಳ್ಳಿಯವರ ಕೈಯಲ್ಲಿ ಹಲವು  ಮಟ್ಟಗಳಲ್ಲಿ, ಅಲಂಕಾರ,ರೂಪುಗಳನ್ನು ಪಡೆಯಿತು.  ಪ್ರಾಂತ್ಯ, ಭಾಷೆಯ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಹಲವು ಭಿನ್ನ ಮಜಲುಗಳಲ್ಲಿ ಅರಳಿತು. ಈ ಸಿನಿಮಾಕ್ಕೆ ಚಿತ್ರ ಕಥೆಯನ್ನು ಬರೆದವರು ಸ್ವತಃ ಗಿರೀಶ್ ಕಾಸರವಳ್ಳಿಯವರು. ತಮ್ಮ ಗುರುಗಳು, ಆದರ್ಶ ಪ್ರಾಯರು, ಶತ್ರುಗಳು, ಮಿತ್ರರು ಎಲ್ಲರ ನಿರೀಕ್ಷೆಗಳನ್ನು ಮೀರಿ ಎತ್ತರವಾಗಿ ಬೆಳೆದಂತ ಸಿನಿಮಾ ನಿರ್ದೇಶಕರು. ಅಡೆ ತಡೆಗಳನ್ನು ನುಂಗಿ ಅದೇ ಉತ್ಸಾಹ ಮತ್ತು ಪ್ರೇರಣೆಗಳಲ್ಲಿ, ಆದರ್ಶಗಳಲ್ಲಿ ಕೆಲಸ ಮಾಡಿದವರು.

2008 ರಲ್ಲಿ ಹೊರಬಂದ  ಗುಲಾಬಿ ಟಾಕೀಸು ಚಲನ ಚಿತ್ರ  ಸಿನಿಮಾಕ್ಷೇತ್ರದ ಎಲ್ಲ ಮಟ್ಟಗಳ ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡಿತು.

2008 ರಲ್ಲಿ  ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರ ಕಥೆ ಮತ್ತು ನಾಯಕಿ ಉಮಾಶ್ರೀಗೆ ಅತ್ಯುತ್ತಮ ನಟಿ  ಎಂದು ಮೂರು ವಿಭಾಗಗಳಲ್ಲಿ ಪ್ರಶಸ್ತಿ ದೊರಕಿತು. 57 ನೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ  ಅತ್ಯುತ್ತಮ ಕನ್ನಡ ಚಿತ್ರ ಎನ್ನುವ ರಾಷ್ಟ್ರ ಪ್ರಶಸ್ತಿ ದೊರಕಿತು. ಅಂತರ ರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ  ಭಾರತ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಮತ್ತು ನಟನೆಗಾಗಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಎನ್ನುವ ಪ್ರಶಸ್ತಿಗಳು ದೊರೆತವು. Ocean’s  cinefan festival of Asian and Arab cinema  .ಕಾರ್ಯಕ್ರಮದಲ್ಲಿ  ಮತ್ತೆ ನಿರ್ದೇಶನಕ್ಕಾಗಿ ಕಾಸರವಳ್ಳಿ ಮತ್ತು ನಟನೆಗಾಗಿ ಉಮಾಶ್ರೀ ಅವರಿಗೆ ಪ್ರಶಸ್ತಿಗಳು ದೊರೆತವು.

ಗುಲಾಬಿ ಟಾಕೀಸಿನಲ್ಲಿ  ಕುಂದಾಪುರದ ಹಳ್ಳಿಯ  ಮೀನುಗಾರರ ಬದುಕಿನ ಚಿತ್ರಣವಿದೆ. ಆರಕ್ಕೇರದ ಮೂರಕ್ಕೇರದ ಇವರ ಬದುಕಿನಲ್ಲಿ ಜಾಗತೀಕರಣ ತರುವ ಉಪದ್ರವಗಳ ಚಿತ್ರಣವಿದೆ. ಧರ್ಮವೊಂದರಲ್ಲಿ ಕಾಣಿಸುವ ಸಮಸ್ಯೆಗಳು, ಧಾರ್ಮಿಕ ತಿಕ್ಕಾಟಗಳು, ಹೊಟ್ಟೆ ಹೊರೆವ ಸರ್ಕಸ್ಸಿನ ನಡುವೆಯೇ ಹೆಡೆಯಾಡುವ ಶೋಷಣೆಗಳು, ಬಡವರ ಬದುಕಿನಲ್ಲಿ ಅರಳುವ ಕನಸುಗಳು, ಆ ಕಾಲದಲ್ಲಿ ಹೊಸದಾಗಿ ಬಂದಿದ್ದ ಟೆಲೆವಿಷನ್  ಬಿತ್ತಿದ ಕನಸುಗಳು, ಗಂಡಸು-ಹೆಂಗಸಿನ ನಡುವಿನ ಸಾಮಾಜಿಕ ತಾರತ್ಮಮ್ಯಗಳು, ಮನುಷ್ಯನನ್ನು ಕಾಡುವ ಬಯಕೆಗಳು, ನಿರಾಶೆಯಲ್ಲಿ  ಹೊತ್ತಿ ಉರಿಯುವ ಮತ್ತು ಅರಳುವ ಕನಸುಗಳು, ಈ ವಿರಾಟ್ ರೂಪಗಳ ನಡುವೆ ಮುಗ್ದ ಬದುಕುಗಳು ಮಾಡಿಕೊಳ್ಳುವ  ಸಂಧಾನಗಳು, ಅರ್ಥವಿಲ್ಲದ ಸಾಮಾಜಿಕ ಕಟ್ಟಲೆಗಳು, ಕೊನೆಗೆ ಎಲ್ಲವೂ ಅವರವರ ಅನುಕೂಲಗಳಿಗೆ ಎನ್ನುವುದೇ ಬದುಕಿನ ದೊಡ್ಡ ಆಟಗಳಾಗುವುದು ಹೀಗೆ ಹಲವು ಚಿತ್ರಣಗಳಿವೆ. ರಾಜಕೀಯ ತರುವ ಸಾಮಾಜಿಕ ಗೊಂದಲಗಳಿವೆ, ಮಹಿಳೆಯ ಮನಸ್ಸಿನ ಸಂಕಲ್ಪಗಳ ಆಶೋತ್ತರಗಳು ,  ‘ನನ್ನನ್ನು ಇಲ್ಲಿ ಕಳೆದರೆ ಅಲ್ಲಿ ಅರಳುವೆ ‘ ಎನ್ನುವ ಸಂದೇಶದ ಜೊತೆ ಬದುಕನ್ನು ನಡೆಸುವ ಭರವಸೆಗಳ ದೃಶ್ಯಗಳಿವೆ.

ಈ ಚಿತ್ರದ ನಿರ್ಮಾಪಕರು ಅಮೃತ ಮತ್ತು ಬಸಂತ ಕುಮಾರ್ ಪಾಟೀಲರು. ಸಿನಿಮಾಟೊಗ್ರಫಿ ಎಸ್. ರಾಮಚಂದ್ರ ಅವರದು. ಬದುಕಿನ ಅಪರಿಪೂರ್ಣತೆಯಲ್ಲಿಯೇ ಜೀವನದ ರೀತಿಗಳಿರುವುದು ಎನ್ನುವಂತೆ ಸಿನಿಮಾ ಚಿತ್ರಣದಲ್ಲಿ ಅತ್ಯಂತ ನೈಜವಾದ ಬೆಳಕು-ನೆರಳುಗಳನ್ನು ಬಳಸಲಾಗಿದೆ.

ಈ ಸಿನಿಮಾದ ಕಥೆಯನ್ನು ಹೇಳುವುದು ಈ ಲೇಖನದ ಉದ್ದೇಶವಲ್ಲ. ಆದರೆ, ಈ ಸಿನಿಮಾವನ್ನು ನೀವೆಲ್ಲರು ಖಂಡಿತ ನೋಡಿ. ಕೊಂಡಾದರು, ಕಡ ತಗೊಂಡಾದರು ಅಥವಾ ಕದ್ದಾದರೂ ಸರಿಯೇ. ಅಂದ ಹಾಗೆ ಈ ಚಿತ್ರ ಯೂ ಟ್ಯೂಬಿನಲ್ಲಿಯೂ  ಲಭ್ಯವಿದೆ. ಅದರ ಲಿಂಕ್ ಕೆಳಗಿದೆ.

https://www.youtube.com/watch?v=XnCsEs7OOYk

 

———————ಡಾ. ಪ್ರೇಮಲತ ಬಿ.

 

ಶ್ರೀ ಚಕ್ರವರ್ತಿ ಸೂಲಿಬೆಲೆಯವರೊಡನೆ ಡಾ. ಪ್ರೇಮಲತ ಸಂವಾದ

ಲೇಖಕರು: ಡಾ. ಪ್ರೇಮಲತ ಬಿ

ನಾನು `ಅನಿವಾಸಿ` ಜಾಲದ ನಿರ್ವಹಣೆ ತೆಗೆದುಕೊಂಡ ಮೇಲೆ ಡಾ. ಪ್ರೇಮಲತಾ ಬರೆಯುತ್ತಿರುವ ಮೂರನೇ ಬರಹ ಇದು. `ಅನಿವಾಸಿ` ಗೆ ಸ್ವಪ್ರೇರಿತ ಬರಹಗಾರರ ಮತ್ತು ಬರಹಗಳ ಕೊರತೆ ಇರುವಾಗ, ಡಾ.ಪ್ರೇಮಲತ ವೃತ್ತಿಪರರಂತೆ ದೊಡ್ಡ ಲೇಖನಗಳನ್ನು ಬರೆದು `ಅನಿವಾಸಿ`ಯನ್ನು ತುಂಬಿದ್ದಾರೆ. ತಮ್ಮೆಲ್ಲ ವೃತ್ತಿ ಮತ್ತು ಮನೆ ಕೆಲಸಗಳ ಮಧ್ಯೆ ಬೇರೆ ಬೇರೆ ಕನ್ನಡ ಜಾಲಗಳಿಗೆ ಬರೆಯುವುದಲ್ಲದೇ, `ಅನಿವಾಸಿ` ಗಾಗಿಯೇ ಪರಿಶ್ರಮದ ಬರಹಗಳನ್ನು ಬರೆದು ಕಳಿಸಿದ್ದಾರೆ. ನಿರ್ವಾಹಕನಾಗಿ ನಾನು ಅವರಿಗೆ ಚಿರಋಣಿ.

`ಅನಿವಾಸಿ` (ಕೆ ಎಸ್ ಎಸ್ ವಿ ವಿ, ಯು ಕೆ) ಕನ್ನಡದ ಬಗ್ಗೆ ಆಸ್ಥೆ ಇರುವ ಯು.ಕೆ ಕನ್ನಡಿಗರ ಜಾಲಜಗುಲಿ. ಯು.ಕೆಯಲ್ಲಿ ನೆಲಸಿ ಕನ್ನಡದಲ್ಲಿ ಬರೆಯುವ ಮತ್ತು/ಅಥವಾ ಕನ್ನಡ ಪುಸ್ತಕಗಳನ್ನು ಇನ್ನೂ ಓದುವ ಮತ್ತು ಮೊದಲು ಯು.ಕೆಯಲ್ಲಿ ನೆಲೆಸಿ ಈಗ ಬೇರೆ ದೇಶಗಳಿಗೆ ವಲಸೆ ಹೋಗಿರುವವರನ್ನೂ ಒಳಗೊಂಡ ನೊಂದಾವಣೆಗೊಳ್ಳದ ಅನೌಪಚಾರಿಕವಾದ ಚಿಕ್ಕ ತಂಡ. ದೇಶಬಿಟ್ಟು ಬಂದ ಕನ್ನಡಿಗರು ಕನ್ನಡದಲ್ಲಿ ಓದುವುದು ಮತ್ತು ಬರೆಯುವುದು ತುಂಬ ಕಡಿಮೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ಅನಿವಾಸಿಯ ಮುಖ್ಯ ಕೆಲಸ ಯುಕೆಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಕನ್ನಡದಲ್ಲಿ ಬರೆಯಲು ಮತ್ತು ಓದಲು ಹುರಿದುಂಬಿಸುವುದು. ಯುಕೆಯಲ್ಲಿ ಕನ್ನಡದಲ್ಲಿ ಬರೆಯುವವರು ಸಿಗುವುದೇ ಕಷ್ಟ. ಬರಹವನ್ನು ಓದಿ ಆದ ಮೇಲೆ ಇಂಗ್ಲೀಷಿನಲ್ಲಾದರೂ ಸರಿ, ನಾಕು ಮಾತು ಬರೆದು ಬರಹಗಾರರನ್ನು ಹುರಿದುಂಬಿಸಿ. ಬರಹದ ಬಗ್ಗೆ ತಕರಾರಿದ್ದರೆ ರಚನಾತ್ಮಕವಾಗಿ ಸಕಾರಾತ್ಮಕ ವಿಮರ್ಶೆ ಮಾಡಿ, ಸಮುದಾಯ ಪ್ರಜ್ಞೆಯಲ್ಲಿ ಚರ್ಚೆ ಆರಂಭಿಸಿ, ವೈಯಕ್ತಿಕ ಮಟ್ಟಕ್ಕಿಳಿಯದ ವಾದ ಮಾಡಿ ಎನ್ನುವುದು ನನ್ನ ಕೋರಿಕೆ, ಬಿನ್ನಹ. ನನ್ನ ನಿರ್ವಹಣೆ ಈ ವಾರಕ್ಕೆ ಮುಗಿಯುತ್ತದೆ. ನಿರ್ವಹಣೆಯಲ್ಲಿ ಲೋಪ ದೋಷಗಳಾಗಿದ್ದರೆ ಕ್ಷಮಿಸಿ. ಮುಂದಿನ ವಾರದಿಂದ `ಅನಿವಾಸಿ` ಶ್ರೀ ಮುರಳಿ ಹತ್ವಾರ್ ಸಾರಥ್ಯದಲ್ಲಿ. ಅನಿವಾಸಿ ನಿರಂತರವಾಗಿ ನಿರಾತಂಕವಾಗಿ ಮುಂದುವರೆಯಲಿ, ಎಲ್ಲರಿಗೂ ಶುಭವಾಗಲಿ – ಕೇಶವ (ನಿರ್ವಾಹಕ)

ಸುಮನ ಗಿರೀಶ್ ಮತ್ತು ಗಿರೀಶ್ ವಶಿಷ್ಠ ಅವರ ಮನೆಯಲ್ಲಿ.

ಚಕ್ರವರ್ತಿ ಸೂಲಿಬೆಲೆಯವರು ಇಂಗ್ಲೆಂಡಿಗೆ ಬರುತ್ತಿದ್ದುದು ಸ್ವಾಮಿ ವಿವೇಕಾನಂದರು ಶಿಕಾಗೋ ನಲ್ಲಿ 1893 ರಲ್ಲಿ ಭಾಷಣ ಮಾಡಿದ 125 ನೇ ವಾರ್ಷಿಕೋತ್ಸವದ ಆಚರಣೆಯ ಸಲುವಾಗಿ. ಲಂಡನ್, ಎಡಿನ್ಬರೋ, ಮ್ಯಾಂಚೆಸ್ಟರ್, ನ್ಯೂಕ್ಯಾಸಲ್ ಮತ್ತು ಕೊನೆಯದಾಗಿ ಡಾನ್ಕ್ಯಾಸ್ಟರ್ ನಗರಗಳಿಗೆ ಇವರ ಪ್ರವಾಸದ ವೇಳಾಪಟ್ಟಿ ನಿಗಧಿಯಾಗಿತ್ತು. ಆಯಾ ಊರುಗಳ  ಹಿಂದೂಗಳನ್ನು, ಉದ್ದೇಶಿಸಿ ಮಾತನಾಡಿದ್ದ ಇವರನ್ನು ಭೇಟಿ ಮಾಡಿದ್ದು ಡಾನ್ಕ್ಯಾಸ್ಟರ್ ನ ಸುಮನ ಗಿರೀಶ್ ಮತ್ತು ಗಿರೀಶ್ ವಶಿಷ್ಠ ಅವರ ಮನೆಯಲ್ಲಿ.

ಹಿಂದುತ್ವ, ಹಿಂದೂತ್ವದ ಬಗ್ಗೆ ಇಂದಿನ ಭಾರತದಲ್ಲಿ ಶುರುವಾಗಿರುವ ಸಾಮಾಜಿಕ ಗೊಂದಲ ಮತ್ತು  ಇತ್ತೀಚೆಗೆ ಹೆಚ್ಚಾಗಿರುವ ಮತ ಧರ್ಮೀಯತೆ ಯಾಕೆ ಅನ್ನುವುದನ್ನು ಇವರ ಅಂಬೋಣಗಳ ಬೆಳಕಲ್ಲಿ ಹೊಸದಾಗಿ ನೋಡಬಹುದೇನೋ ಎಂದು ಚಕ್ರವರ್ತಿ ಸೂಲಿಬೆಲೆಯಾರನ್ನು ನಾನು ಭೇಟಿ ಮಾಡಿದ್ದು ಇದೇ ಡಿಸೆಂಬರ್ ಹತ್ತನೆಯ ತಾರೀಖು. ನನ್ನಂತೆಯೇ ಇವರನ್ನು ಭೆಟ್ಟಿಮಾಡಲು ಹಲವು ಹತ್ತು ಜನರು ಆ ದಿನ ಸುಮನರ ಮನೆಯಲ್ಲಿ ಕೂಡಿದ್ದರು. ಕೆಲಸದ ದಿನವಾದರೂ ದೂರದ ಊರುಗಳಿಂದ ಬಂದಿದ್ದ ಎಲ್ಲರಿಗೂ ಇವರ ಮಾತುಗಳನ್ನು ಕೇಳುವ  ಕುತೂಹಲ ಮತ್ತು ಸಂವಾದದಲ್ಲಿ ಭಾಗವಹಿಸುವ ಹಂಬಲವಿದ್ದಂತಿತ್ತು.

ಚಕ್ರವರ್ತಿ ಸೂಲಿಬೆಲೆಯವರು ಹುಟ್ಟಿದ್ದು 1980, ಹೊನ್ನಾವರ ತಾಲೂಕಿನಲ್ಲಿ.ಬೆಂಗಳೂರಿನ ಹೊಸಕೋಟೆಯ ಸಮೀಪದ ಸೂಲಿಬೆಲೆಯಲ್ಲಿ ಬೆಳೆದವರು. ಹಾಗಾಗಿ ಇವರ ಹೆಸರಿಗೆ  ಆ ಊರಿನ ನಂಟಿದೆ. ಭಟ್ಕಳದ ಅಂಜುಮಾನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವೀಧರರಾದ ಇವರು ದುಡಿಮೆಗಾಗಿ ಕೆಲಸ ಮಾಡಿದ್ದು ಕೇವಲ ಮೂರು ದಿನ!

ಚರ್ಕವರ್ತಿ ಸೂಲಿಬೆಲೆ

ಸೂಲಿಬೆಲೆಯ ವಿವೇಕಾನಂದ ಹೈಸ್ಕೂಲಿನಲ್ಲಿ ಓದುವಾಗಲೇ ಉತ್ತಮ ಭಾಷಣಕಾರ ಎಂದು ಹೆಸರು ಪಡೆದಿದ್ದರು. ಇವರ ಮೇಲೆ ಹಲವರು ಹಿರಿಯರು ಪ್ರಭಾವ ಬೀರಿದರೆಂದು ಅವರು ಹೇಳಿಕೊಂಡಿದ್ದಾರೆ. ವಿದ್ಯಾನಂದ ಶೆಣೈ, ರಾಜೀವ ದೀಕ್ಷಿತರು ಮತ್ತು ಸ್ವಾತ್ಮಾನಂದ ಸ್ವಾಮೀಜಿ ಹೀಗೆ ಹಲವರನ್ನು ನೆನೆದಿರುವ ಚಕ್ರವರ್ತಿಯವರು  ಮುಖ್ಯವಾಗಿ ಸ್ವಾಮಿ ವಿವೇಕಾನಂದರ ಧ್ಯೇಯ ಮತ್ತು ಬದುಕಿನಿಂದ ಪ್ರಭಾವಿತರಾದವರು. ಕೆಲಸ , ಮದುವೆ ಇವನ್ನೆಲ್ಲ ನಿರಾಕರಿಸಿ ಹಣದ ಹಿಂದೆ ಹೋಗದೆ ಜನಜಾಗೃತಿ, ವಿವೇಕಾನಂದರ ಧ್ಯೇಯಗಳ ಪ್ರಚಾರದಲ್ಲಿ ತೊಡಗಿಕೊಂಡು ಸಮಾಜ ಸುಧಾರಣೆಯ ಕೆಲಸಗಳಲ್ಲಿ ತೊಡಗಿಕೊಂಡ ಇವರ ಬದುಕಿನ ದಿನವೊಂದರಲ್ಲಿ ಓದು, ಬರಹ, ಯೋಗ, ಧ್ಯಾನ, ಸುತ್ತಾಟ, ಜನ ಕಾಯಕ, ಮಾಧ್ಯಮಗಳ ಮೂಲಕ ಜನಜಾಗೃತಿ, ಭಾಷಣ ಎಲ್ಲವೂ  ಹಾಸು ಹೊಕ್ಕಾಗಿವೆ. ಮೊದ ಮೊದಲು ಬದುಕಿನಲ್ಲಿ ಎಲ್ಲರಂತಿರದೆ ಈ ಬಗೆಯ ತಿರುವು ತೆಗೆದುಕೊಂಡ ಮಗನ ಬಗ್ಗೆ ಎಲ್ಲ ತಂದೆ ತಾಯಿಯರಂತೆಯೇ ಕಳವಳ ವ್ಯಕ್ತಪಡಿಸಿದ ಇವರ ಪೋಷಕರು ಇದೀಗ ತಮ್ಮ ಮನೆಯನ್ನೇ ಒಂದು ಮಂದಿರವನ್ನಾಗಿ ಮಾಡಿ, ಧ್ಯಾನ, ಯೋಗಗಳಿಗೆ, ಉಪಚಾರಗಳಿಗೆ ಕೇಂದ್ರ ಮಾಡಿಕೊಂಡು ಮಗನ ಚಟುವಟಿಕೆಗಳಲ್ಲಿ ತಾವೂ ತೊಡಗಿಸಿಕೊಂಡು ಸಮಾಜದ ಏಕತಾನತೆಯಿಂದ ಹೊರಬಂದಿದ್ದಾರೆ. ಮಾತೃ ಭಾಷೆ ಕೊಂಕಣಿಯಾದರೂ ಕನ್ನಡ ಮಾಧ್ಯಮದಲ್ಲಿ ಓದಿದ ಇವರು ಕನ್ನಡ ಮತ್ತು ಹಿಂದಿ ಬಾಷೆಯಲ್ಲಿ ಹಲವು ಹತ್ತು ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಲೇ ಬಂದಿದ್ದಾರೆ. ದೂರದರ್ಶನದ ಹಲವು ಚಾನೆಲ್ ಗಳಿಗೆ, ರೇಡಿಯೋಗಳಿಗೆ  ಕಾರ್ಯಕ್ರಮ ನೀಡಿರುವ ಇವರು ಹಲವಾರು ದೇಶಗಳಿಗೆ ಹೋಗಿ ಮಾತಾಡಿದ್ದಾರೆ. ಭಾರತದ ಸೈನಿಕರಲ್ಲಿ ರಾಷ್ಟ್ರಪ್ರೇಮ, ಅತ್ಮಾಭಿಮಾನ ಮೂಡಿಸುವ ಕಾರ್ಯಗಳನ್ನು , ಭಾಷಣಗಳನ್ನು ಮಾಡಿರುವ ಇವರು ನೊಂದ ಹಲವರು ಸೈನಿಕರ ಕುಟುಂಬಗಳಿಗೆ ದಾನಿಗಳ ನಂಟು ಕೂಡಿಸಿಕೊಟ್ಟಿದ್ದಾರೆ. ಕಾರ್ಯಕ್ರಮಗಳಲ್ಲಿ ಸೈನಿಕರಿಗೆ ಮೊದಲು ಗೌರವ ಅರ್ಪಿಸುವ ಹೊಸ ಸಂಪ್ರದಾಯಕ್ಕೆ ಕರೆಕೊಟ್ಟು ಕೆಲಸ ಮಾಡಿದ್ದಾರೆ. ಸೈನ್ಯದಿಂದ ಹಲವು ವರ್ಷಗಳ ಹಿಂದೆಯೇ ಇಚ್ಛಾ ಪೂರ್ಣ ನಿವೃತ್ತಿ ಪಡೆದಿರುವ ನನ್ನ ಭಾವ ಇತ್ತೀಚೆಗಿನ ವರ್ಷಗಳಲ್ಲಿ ಸ್ವತಂತ್ರ ದಿನಾಚರಣೆ ಬಂದಿತೆಂದರೆ ಹತ್ತು ಹಲವು ಕಾರ್ಯ ಕ್ರಮಗಳಿಗೆ ವಿಶೇಷ ಅಹ್ವಾನಿತರಾಗಿ ಹೋಗಿ ಗೌರವ ಸ್ವೀಕರಿಸುವ ಪರಿಪಾಟವನ್ನು, ಶಾಲೆಗಳಲ್ಲಿ ಭಾಷಣ ಮಾಡುವುದನ್ನು ನೋಡುತ್ತಿರುವ ನನಗೆ ಇದನ್ನು ನಂಬುವುದು ಕಷ್ಟವೇನಾಗಲಿಲ್ಲ.

ಚಕ್ರವರ್ತಿ  ತಮ್ಮದೇ ಯುವಕರ ಪಡೆ  ’ಯುವ ಬ್ರಿಗೇಡ್’ ಮತ್ತು ಯುವತಿಯರಿಗಾಗಿ  ’ಸೋದರಿ ನಿವೇದಿತ ಪ್ರತಿಷ್ಟಾನ ’ವನ್ನು ಶುರುಮಾಡಿ ಸಾವಿರಾರು ತರುಣರಿಗೆ ತಮ್ಮ ದೇಶದ ಬಗ್ಗೆ ಮೊದಲು ಅಭಿಮಾನ ಬೆಳೆಸಿಕೊಳ್ಳಲು ಕರೆಕೊಟ್ಟಿದ್ದಾರೆ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಸಂದರ್ಶನದ ಚಿತ್ರ

ಇವೆಲ್ಲ ಕಾರಣಗಳಿಗೆ ಚಕ್ರವರ್ತಿ ಸೂಲಿಬೆಲೆ ಇವತ್ತು ಭಾಷಣಕಾರ, ಕಾರ್ಯಕರ್ತ ಮತ್ತು ಬರಹಗಾರರೆಂಬ ನಾಮ ವಿಶೇಷಣಗಳಿಂದ ಗುರುತಿಸಲ್ಪಡುತ್ತಾರೆ.  ಅತ್ತ ಸಂಪೂರ್ಣ ಸನ್ಯಾಸಿಯೂ ಅಲ್ಲದ, ಇತ್ತ ರಾಜಕಾರಣಿಯೂ ಅಲ್ಲದ, ತಾನೇನು ವಿದ್ವಾಂಸನಲ್ಲ ಎನ್ನುವ ಇವರೊಡನೆ ಸಡೆಸಿದ ಸಂದರ್ಶನದ ಸಾರಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

1) ಸ್ವಾಮಿ ವಿವೇಕಾನಂದರ ಭಾಷಣದ  125 ನೇ ವಾರ್ಷಿಕೋತ್ಸವದ ಸಲುವಾಗಿ ಯುಕೆಯ ಹಲವು ಜಾಗಗಳಿಗೆ ಭೇಟಿಕೊಟ್ಟು ವಿವೇಕಾನಂದರ  ಅಧ್ಯಾತ್ಮಿಕ ನಿಲುವುಗಳ ಬಗ್ಗೆ ಹಿಂದೂತ್ವದ ಬಗ್ಗೆ ಅರಿವು ಮೂಡಿಸೋ ಕೆಲಸ ಮಾಡಿದ್ದೀರ. ಇದು  ನಿಜಕ್ಕೂ ಅಭಿನಂದನೀಯ.ಈ ರೀತಿಯ ಒಂದು ಯಾತ್ರೆಯ ಅಗತ್ಯ ಇದೆ ಅಂತ ನಿಮಗೆ ಯಾಕೆ ಅನ್ನಿಸ್ತು? ಹಿನ್ನೆಲೆ ಏನು?

125 ವರ್ಷಗಳ ಹಿಂದೆ ವಿವೇಕಾನಂದರು ಶಿಕಾಗೋದಲ್ಲಿ  ಭಾಷಣ ಮಾಡಿ ಜಗತ್ತಿನ ಜನರು ಭಾರತವನ್ನು ನೋಡುವ ದೃಷಿಕೋನವನ್ನು ಬದಲು ಮಡಿದ್ರು. ಭಾತೀಯರು ಭಾರತವನ್ನು ನೋಡುವ ದೃಷ್ತಿಕೋನವನ್ನು ಬದಲಾಯಿಸಿದರು, ಉಳಿದೆಲ್ಲ ಧರ್ಮಗಳು ಹಿಂದೂ ಧರ್ಮವನ್ನು ನೊಡುವ ದೃಷ್ಟಿಕೋನವನ್ನು ಬದಲಾಯಿಸಿದ್ರು.ಹಿಂದೂಗಳೂ ತಮ್ಮನ್ನು ತಾವು ನೋಡಿಕೊಳ್ಳುವ ಬಗೆಯನ್ನೂ ಬದಲಾಯಿಸಿದ್ರು. ಇಂತಹ ಒಂದು ಲ್ಯಾಂಡ್ಮಾರ್ಕ್ ಭಾಷಣವನ್ನು ಸ್ಮರಿಸಿಕೊಳ್ಳುವ ಉದ್ದೇಶ . ಮತ್ತೆ ಭಾರತ  ಇವತ್ತು ಮತ್ತೆ ಪ್ರವರ್ಧಮಾನಕ್ಕೆ ಬರ್ತಾ ಇರೋ ಸಮಯದಲ್ಲಿ ನಾವೆಲ್ಲ ಇಂತಹ ಸಂಗತಿಗಳಿಂದ ಮತ್ತೆ ಪ್ರೇರಣೆ ಪಡೀಬೇಕು ಅಂತ ಕರ್ನಾಟಕದಲ್ಲಿ ಈ ಸಂಧರ್ಭಕ್ಕೆ ಒತ್ತು ಕೊಟ್ಟಿದ್ವಿ. ಜೊತೆಗೆ ಯು.ಕೆ.ಯವರು ಇದೇ ಕೆಲಸಕ್ಕೆ ಇಲ್ಲಿಗೆ ಬಂದು ಮಾತಾಡ್ಬೇಕು ಅಂದಾಗ ಸಹಜವಾಗೇ ಒಪ್ಕೊಂಡೆ . ಜೊತೆಗೆ ಪ್ರಪಂಚದ ಎಲ್ಲ ಹಿಂದೂ ಧರ್ಮೀಯರನ್ನು ಒಂದುಗೂಡಿಸಿ ರಾಷ್ಟ್ರದ ಕುರಿತಂತೆ ಪ್ರೇರಣೆ ಮಾಡೋ ಅವಕಾಶವನ್ನು ಬಿಟ್ಟುಕೊಡಬಾರದು ಅಂತ ಬಂದೆ. ಇದೇ ಸಮಯಕ್ಕೆ ಇಲ್ಲಿ

( KAHO ) ಕರುನಾಡ ಹಿಂದೂಗಳ ಅನಿವಾಸೀ ಒಕ್ಕೂಟ ಆರಂಭವಾಯ್ತು. ಅವರು ನನ್ನನ್ನು ಯುಕೆಗೆ ಮುಖ್ಯವಾಗಿ  ವಿವೇಕಾನಂದರ ಮತ್ತು ಹಿಂದೂತ್ವದ ಬಗ್ಗೆ ಮಾತಾಡಲು ಕರೆಸಿಕೊಂಡವರು. ಹಾಗಾಗಿ ಈ ಅವಕಾಶ ನನಗೆ ಸಿಕ್ತು.

2) ನೀವು ಡಿಸೆಂಬರ್ 1 ನೇ ತಾರೀಖಿನಿಂದ ಲಂಡನ್, ಎಡಿನ್ಬರೋ,ಮ್ಯಾಂಚೆಸ್ಟರ್ ಮತ್ತು ನ್ಯೂಕ್ಯಾಸೆಲ್ ಮತ್ತು ಡಾನ್ಕ್ಯಾಸ್ಟರ್ ನಗರಗಳಿಗೆ  ಭೇಟಿಕೊಟ್ಟಿದ್ದೀರಿ ಈ ಹತ್ತು ದಿನಗಳ ಅನುಭವದಲ್ಲಿ ವಿದೇಶದ ಹಿಂದೂ ಜನರಲ್ಲಿ ಈ ಬಗ್ಗೆ ಇರೋ ಜಾಗೃತಿಯ ಬಗ್ಗೆ ನಿಮಗೆ ಏನನ್ನಿಸ್ತು?

ಬರೀ ಇಂಗ್ಲೆಂಡ್ ಮಾತ್ರ ಅಲ್ಲ , ಜಗತ್ತಿನ ಬಹುಭಾಗಗಳಲ್ಲಿ ತಿರುಗಿ ನೋಡ್ದಾಗ್ಲು ಅನ್ನಿಸಿದ್ದು ಭಾರತಿಯರಿಗೆ ಭಾರತವನ್ನು ಬಿಟ್ಟು ಹೋದಮೇಲೆ ಭಾರತದ ಮೇಲೆ ಪ್ರೀತಿ ಜಾಸ್ತಿ ಆಗುತ್ತೆ ಅಂತ. ಅದ್ರಲ್ಲೂ ತಾವು ಏನನ್ನು ಬಾಲ್ಯದಲ್ಲಿ ಅನುಭವಿಸಿದ್ವೋ ಅದು ತಮ್ಮ ಮಕ್ಕಳಿಗೆ ಎಲ್ಲಿ ಸಿಗಲ್ವೋ ಅನ್ನೋ ಟೆನ್ಶನ್ ಇಲ್ಲಿನ ಜನರಿಗೆ ಶುರುವಾಗುತ್ತೆ. ಅದ್ರಲ್ಲೂ ಹಿಂದೂಗಳಿಗೆ. ಹಾಗಾಗಿ  ಅವರು ತಮ್ಮ ಮಕ್ಕಳಿಗೆ ಹಿಂದೂ ಮೌಲ್ಯಗಳನ್ನು ಕೊಡೋ ಪ್ರಯತ್ನ, ಧರ್ಮದ ಸೂಕ್ಷಗಳನ್ನು, ಭಾರತೀಯ ಸಂಸ್ಕೃತಿಯನ್ನು ಕೊಡೋ ಪ್ರಯತ್ನ ಮಾಡ್ತಾರೆ , ಇದನು ನೋಡೋಕೆ ತುಂಬ ಸಂತೋಷ ಆಗುತ್ತೆ. ಇಂತಹ ’ಉಳಿಸೋ’ ಮತ್ತು ಮುಂದಿನ ಪೀಳಿಗೆಗಳಿಗೆ ’ಕಲಿಸೋ ’ ಪ್ರಯತ್ನ ಮಾಡೋ ಎಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸಬೇಕು ಅಂತ ನಾನು ಇಚ್ಛೆಪಡ್ತೇನೆ.

3) 1893 ರಲ್ಲಿ ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಹಿಂದೂ ಧರ್ಮದ ವೈಶಾಲ್ಯತೆಯ ಬಗ್ಗೆ ಮತ್ತು ವಿಶಿಷ್ಟತೆಯ ಬಗ್ಗೆ  ಮಾತಾಡಿ ಪ್ರಖ್ಯಾತರಾದ್ರು. ನಂತರದ 125 ವರ್ಷಗಳಲ್ಲಿ ಹಲವು ಸಮಾಜ ಸುಧಾರಕರು, ಧರ್ಮ ಸಂಸ್ಥೆಗಳು, ಮಠ-ಮಂದಿರಗಳು ಶಾಲಾ-ಕಾಲೇಜುಗಳು ,ಸರ್ಕಾರ ಎಲ್ಲರೂ ಹಿಂದೂತ್ವದ ಬಗ್ಗೆ ಜಾ ಗೃತಿ ಮೂಡಿಸ್ತಲೇ ಬಂದಿದ್ದಾರೆ. ಆದ್ರೆ ಹಿಂದೂತ್ವದ ಬಗ್ಗೆ ಮಾತಾಡಲು ಹಿಂದೂಗಳಲ್ಲಿ ಹಿಂಜರಿಕೆ ಇದೆ. ಈ ಬಗ್ಗೆ ಅರಿವು ಕಡಿಮೆ ಇದೆ. ಇದು ಯಾಕೆ ಅಂತ ನಿಮ್ಮ ಅಭಿಪ್ರಾಯ?

ಮೊದಲಿಗೆ ಹಿಂದೂ ಧರ್ಮ ಮಾತಾಡೋ ಅಂತದ್ದಲ್ಲ ಆದ್ರೆ ಬದುಕೋದು.  ಪುಸ್ತಕಗಳನ್ನು ಓದಿ ಬರುವಂತದ್ದೂ ಅಲ್ಲ. ಹಿಂದೂಗಳಿಗೆ ಕೂಗಾಡಿ ಕೆಲಸ ಮಾಡೋ ಅಭ್ಯಾಸ ಇಲ್ಲ.  ಹಿಂದೂ ಧರ್ಮ ಜಗತ್ತಿನ ಇತರೆ ಧರ್ಮಗಳಂತೆ ಪುಸ್ತಕ ಓದೋದ್ರಿಂದ, ಕೆಲವು ವ್ಯಕ್ತಿಗಳನ್ನು ಅನುಸರಿಸೋದ್ರಿಂದ ಬರುವಂತದ್ದಲ್ಲ. ಸುಮ್ಮನಿದ್ದಾರೆ ಅಂದ ಮಾತ್ರಕ್ಕೆ ಹಿಂದೂಗಳಿಗೆ ಧರ್ಮದ ಬಗ್ಗೆ ಕಾಳಜಿ ಇಲ್ಲ ಅಂತಲೂ ಅಲ್ಲ. ಕಾಲಾನುಕ್ರಮದಲ್ಲಿ ಹಿಂದೂ ಧರ್ಮ ವಿಶ್ವ ವ್ಯಾಪ್ತಿಯಾಗ್ಬೇಕು ಅಂದಾಗ ಅದು ತಂತಾನೇ ಸ್ಪೋಟಗುಳ್ಳುತ್ತದೆ ಅಂತ ನನ್ನ ನಂಬಿಕೆ.

4)  ನಾವೆಲ್ಲ ಬೆಳೆತಾ, ಒದ್ತಾ  ಇದ್ದ ಟೈಂ ನಲ್ಲಿ , ಹಿಂದೂ , ಮುಸ್ಲಿಮ, ಕ್ರಿಶ್ಚಿಯನ್ , ಮೇಲು , ಕೀಳು ಎಲ್ಲರೂ ಒಂದೇ ತರಗತೀಲಿ ಕೂರ್ತಾ ಇದ್ವಿ. ಹಾಸ್ಟೆಲ್ ಗಳಲ್ಲಿ ಒಂದೇ ಕೋಣೆನಲ್ಲಿ ಬದುಕಿ ಜೀವಿಸಿದವರು. ಆದ್ರೆ ನಮ್ಮಲ್ಲಿ ಯಾವ ಘರ್ಷಣೆಯೂ ಇರ್ಲಿಲ್ಲ, ಯಾರೊಬ್ಬರೂ ಅತಿಧರ್ಮೀಯತೆಯನ್ನು ಪಾಲಿಸ್ತಾ ಇರದೇ ಇದ್ದದ್ದು ಮತ್ತು  ಮುಕ್ತವಾಗಿ ಯೋಚನೆ ಮಾಡ್ತಾ ಇದ್ದುದ್ದು ಕಾರಣ. ಪ್ರತಿಯೊಬ್ಬ ಸಮಾಜ ಸುಧಾರಕರೂ ಚಿಂತಕರೂ ಇದನ್ನೇ ಹೇಳಿರೋದು. ಆದ್ರೆ ಇತ್ತೀಚೆಗಿನ ವರ್ಷಗಳಲ್ಲಿ ಜನರಿಗೆ ಈ ಬಗ್ಗೆ ಬಹಳ ಗೊಂದಲ ಇದ್ದಂತೆ ಇದೆ.ಯಾಕೆ ಹೀಗೆ?

ಮೊದಲನೇದಾಗಿ ಧರ್ಮ  ರಾಜಕೀಯ ವಿಚಾರ ಆಗೋದಿಕ್ಕೆ ಶುರುವಾದಾಗ್ಲಿಂದ ಹೀಗಾಯ್ತು ಅಂತ. ಕ್ರಿಸ್ಚಿಯನ್ನರಿಗೆ  ಜಗತ್ತೆಲ್ಲ ತಾನೇ ಆಗಬೇಕೇಂತ ಆಸೆ ಇದ್ದದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಕ್ರಿಸ್ಚಿಯನ್ನರು ಮತ್ತು ಮುಸ್ಲಿಮರಿಂದಲೇ ಈ ಹೋರಾಟ ಶುರುವಾದದ್ದು. ಇದು ಬಹಳ ಕೆಟ್ಟದ್ದು. ಸೃಷ್ಟಿ ಎಷ್ಟು ವೈವಿಧ್ಯಪೂರ್ಣವಾಗಿರುತ್ತೋ ಹಾಗೇ ಜಗತ್ತು! ಎಲ್ಲರೂ ತಮ್ಮ ದೇವರ ಅನುಯಾಯಿಗಳೇ ಆಗಬೇಕೆಂಬುದೇ ಕೆಟ್ಟ ವಿಚಾರ. ಹಿಂದೂಗಳು ಹೇಳೋದು ಯಾರು ಯಾವ ಧರ್ಮವನ್ನು ಅನುಸರಿಸ್ತಾರೋ ಅದೇ ಧರ್ಮದಲ್ಲಿ ನೀನು ಒಳ್ಳೆಯ ವ್ಯಕ್ತಿಯಾಗಿರು ಅಂತಲೇ. ಹಾಗೆಯೇ ನನ್ನನ್ನೂ ಹಿಂದೂವಾಗಿರಲು ಬಿಡು ಅನ್ನೋದು. ಆದ್ರೆ ಹೆಚ್ಚು ಜನರನ್ನು ಮತಾಂತರಿಸಿದರೆ ತಮ್ಮ ಸಾಮ್ರಾಜ್ಯ ವಿಸ್ತಾರ ಆಗುತ್ತೆ ಅನ್ನೋ ಅಜೆಂಡ ಮತ್ತು ರಾಜಕೀಯಗಳಿಂದ  ಮತ ಧರ್ಮ ಶುರುವಾದ್ದು. ಯಾರು ಇದನ್ನು ಮಾಡ್ತಾರೋ ಅವರು ಬೇರೆ ನಿಲ್ತಾರೆ. ಮಿಕ್ಕವರನ್ನು ಪ್ರತ್ಯೇಕರ ತರ ನೋಡೋಕೆ ಶುರು ಮಾಡ್ತಾರೆ. ಇದೇ ಸಮಸ್ಯೆ ಈಗ ಜಾಸ್ತಿಯಾಗ್ತಿದೆ. ಜಗತ್ತಿನ ಮೂಲೆ ಮೂಲೆನಲ್ಲೂ ಕಂಡು ಬರ್ತಾ ಇದೆ. ಸಂತೋಷದ ವಿಚಾರ ಅಂದ್ರೆ ಹಿಂದೂ ಬಹು ಸಂಖ್ಯಾತರಿರೋ ಭಾರತದಲ್ಲಿ , ಬೇರೆ ಮತಗಳನ್ನು ಸ್ವೀಕರಿಸಿರೋ ಜನ ಕೂಡ ಭಯೋತ್ಪಾದಕ ಐಸಿಸ್ ನಂತವಕ್ಕೆ ಹೆಚ್ಚು ಸೇರಲ್ಲ. ನನಗನಿಸುತ್ತೆ ಒಂದು ದಿನ ಭಾರತದ ಮುಸ್ಲಿಮರು, ಕ್ರಿಶ್ಚಿಯನ್ನರು ಜಗತ್ತಿಗೇ ಮಾದರಿಯಾಗಿ ನಿಲ್ಲಬಲ್ಲಂತವರಾಗ್ತಾರೆ ಅಂತ.

5)  ಹಿಂದೂತ್ವ ದಲ್ಲಿ ಯಾವುದಾದ್ರೂ ಕೆಟ್ಟ ವಿಚಾರಗಳಿವೆಯಾ? ಅಂದ್ರೆ ಮೂಲಭೂತವಾಗಿ ಅಥವಾ ಆಚರಣೆಯಲ್ಲಿ?

ಗಂಗಾನದಿ ಗಂಗೋತ್ರಿಯಲ್ಲಿ ಹುಟ್ಟಿ, ಕಲ್ಕತ್ತಾದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತೆ. ಗಂಗಾನದಿಯಲ್ಲಿ ಕೊಳಕಿಲ್ವಾ ಅಂದ್ರೆ ಖಂಡಿತ  ಇದೆ. ಅದನ್ನು ನಾವೇ ತುಂಬಿದ್ದೇವೆ, ಮೂಲ ಶುದ್ದವಾಗೇ ಇದೆ. ಹಾಗೇ ಹಿಂದೂ ಧರ್ಮದ ಚಿಂತನಾ ಪರಂಪರೆ ಹತ್ತಾರು ಸಾವಿರ ವರ್ಷಗಳಿಂದ ಬಂದಿರುವಂತದ್ದು. ಕಾಲದ ಗಣನೆಯನ್ನೂ ಮೀರಿದ ಸನಾತನ ಧರ್ಮದ ಪರಿಕಲ್ಪನೆ  ಹಿಂದೂಧರ್ಮದಲ್ಲಿ ಇದೆ. ಹಾಗಾಗಿ ಮೂಲದಲ್ಲಿ ಕೊಳಕಿಲ್ಲ. ಆದ್ರೆ ಆಚರಣೆಗಳಲ್ಲಿ ಕೊಳಕನ್ನು ನಾವೇ ತುಂಬಿದ್ದೀವಿ. ಆಗಾಗ ಮಹಾಪುರುರುಷರು ಹುಟ್ಟಿ ಬರ್ತಾರೆ ಮತ್ತು ಈ ಕೊಳಕನ್ನು ಕ್ಲೀನ್ ಮಾಡ್ತಾರೆ. ಬುದ್ಧ, ಶಂಕರ, ಮಾಧ್ವರು , ರಾಮಾನುಜರು ಹಾ ಗೆ ಅನೇಕ ದಾಸರು, ಶರಣರು ಬಂದ್ರು. ಉತ್ತರಭಾರತಕ್ಕೆ ಹೋದ್ರೆ ಚೈತನ್ಯಾದಿಗಳು ಬಂದ್ರು. ಇವರೆಲ್ಲ ನೀರನ್ನು ಕುಡಿಯಕ್ಕೆ ಯೋಗ್ಯ ಮಾಡಿದಂತೆ ಧರ್ಮವನ್ನು ಆಚರಣೆಗೆ ಯೋಗ್ಯವನ್ನಾಗಿ  ಮಾಡ್ತಲೇ ಬಂದಿದ್ದಾರೆ. ಇಂತಹ ಪ್ರಯತ್ನಗಳು ಈಗ್ಲೂ ನಡೀತಲೇ ಇವೆ ಅಂತ ನನಗನಿಸುತ್ತೆ.

ಉದಾಹರಣೆಗೆ, ಜಾತಿ ಕೊಳಕಲ್ಲ ಅದ್ರೆ ಜಾತೀಯತೆ ಕೊಳಕು ಮತ್ತು ಅದರ ಬಗೆಯ ದುರಭಿಮಾನ ಹೊಂದಿ ಇನ್ನೊಬ್ಬನ ಜಾತಿ ಕೆಟ್ಟದ್ದು ಅನ್ನೋದು ಇವೆಲ್ಲ ಅತಿ ಕೆಟ್ಟದ್ದು ಅಂತ ನನಗನಿಸುತ್ತೆ. ಸ್ತ್ರೀ ಯನ್ನು ಅತ್ಯಂತ ತುಚ್ಛವಾಗಿ ಕಾಣೋ ಅಂತ  ಇತ್ತೀಚೆಗಿನ ಆಕ್ರಮಣಕಾರೀ ಕೊಳಕುಗಳು ನಮ್ಮಲ್ಲಿ ಹಲವಾರಿವೆ ಅಂತ ನನಗನಿಸುತ್ತೆ.

6) ಯಾವುದು ನಿಜವಾದ ಹಿಂದುತ್ವ, ಹಿಂದೂಯಿಸಂ ಮತ್ತು ಹಿಂದೂ ಧರ್ಮ?

ಸ್ಪಿರುಚಿಯಾಲಿಟಿ ನನಗೆ ಅತ್ಯಂತ ಹತ್ತಿರವಾದ ಸಂಗತಿ. ಆದ್ಯಾತ್ಮಕ್ಕೆ ಸಂಬಂಧ ಪಟ್ಟಂತದ್ದು. ಯಾವುದಕ್ಕೆ ಅತ್ಮ ಸಾಕ್ಷಾತ್ಕಾರದ ಕಲ್ಪನೆಯ ಕಡೆಗೆ ಕೊಡೊಯ್ಯಬಲ್ಲ  ಶಕ್ತಿಯಿದೆಯೋ ಅದು ನನ್ನ ಹಿಂದೂ ಧರ್ಮ, ನನ್ನೊಳಗಿನ ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಡುವ ಧರ್ಮ ನನ್ನ ಪಾಲಿನ ಶ್ರೇಷ್ಠ ಹಿಂದೂ ಧರ್ಮ, ಜೊತೆಗೆ ಎಲ್ಲ  ಪಥಗಳನ್ನು ಸಮಾನವಾಗಿ ನೋಡಬಲ್ಲ ತಾತ್ವಿಕ ಚಿಂತನೆಯನ್ನು ನನಗೆ ಕೊಡೋದು ನನ್ನ ಧರ್ಮ. ಹೊರಗಿನಿಂದ ಭಗವಂತನನ್ನು ಸೇರಲು ಭಿನ್ನ ಭಿನ್ನ ಮಾರ್ಗಗಳನ್ನು ಕಲ್ಪಿಸಿ, ನನ್ನೊಳಗಿನ ಭಗವಂತನನ್ನು ಸಾಕ್ಷಾತ್ಕರಿಕೊಳ್ಳಲು ಅನುವು ಮಾಡಿಕೊಡುವುದು ನನ್ನ ಧರ್ಮ. ಇದಕ್ಕಿಂತ ಹೆಚ್ಚಿನದನ್ನು ಹೇಳುವ ಧರ್ಮ ನನ್ನದಲ್ಲ. ರಾಷ್ಟ್ರೀಯತೆಯೇ ಹಿಂದೂ ಅಂತಲೂ ನನ್ನ ಭಾವನೆ.

7) ಹಿಂದೂ ಧರ್ಮಕ್ಕೆ ಪವಿತ್ರ ಗ್ರಂಥ ಇಲ್ಲ. ಒಬ್ಬನೇ ದೇವರಿಲ್ಲ. ಹಿಂದೂತ್ವ ಅನ್ನೋದು  ಜೀವನ ವಿಧಾನ ಅನ್ನೋದಾದ್ರೆ –(ಸುಪ್ರೀಂ ಕೋರ್ಟ್ ಪ್ರಕಾರ) ಅದನ್ನು ಪ್ರತಿಯೊಬ್ಬರೂ ಒಂದೇ ರೀತಿ ಪಾಲೀಸೋದಾಗ್ಲೀ ಅಥವಾ ಮಕ್ಕಳಿಗೆ ಹೇಳಿಕೊಡೋದಾಗ್ಲಿ ಹೇಗೆ ಸಾದ್ಯ?

ಶುರುವಾಗ್ತಾ ಆಚರಣೆಯಿಂದಲೇ ಶುರುವಾಗುತ್ತೆ. ಬ್ರಿಟನ್ನಿನಲ್ಲಿ ಮಕ್ಕಳಿಗೆ ಎ ಅಂತ  ಹೇಳಿಕೊಡುವಾಗ ಫೋನೆಟಿಕ್ಸ್ ಮೂಲಕವೇ ಹೇಳಿಕೊಡ್ತಾರೆ. ಹಾಗೇ ಆರಂಭದಲ್ಲಿ ಒಂದಷ್ಟು ಶ್ಲೋಕಗಳನ್ನು, ಪೂಜೆಯನ್ನು, ಹಬ್ಬವನ್ನು ಆಚರಿಸುವುದನ್ನು ನಾವು ಹೇಳಿಕೊಡ್ತೀವಿ. ಇದು ಮೊದಲನೇ ಹೆಜ್ಜೆ. ವಿಸ್ತಾರವಾದ ಎಲ್ಲವೂ ಭಗವಂತನನ್ನು ಸೇರುವ ಪರಿಕಲ್ಪನೆಯಲ್ಲಿ ಕಾಣಲು ಜಾತಿ, ಮತ, ಪಂಥಗಳನ್ನುಅಪ್ಪಿಕೊಳ್ಳುವಂತ ಚಿಂತನೆಯನ್ನು ಮಕ್ಕಳಿಗೆ ಕೊಡೋದು ಕೂಡ ಹಿಂದೂತ್ವದ ತಳಹದಿ. ಮೂರನೆಯದು ಮಕ್ಕಳಿಗೆ ತಮ್ಮನ್ನು ತಾವು ಅರ್ಥ ಮಡಿಕೊಳ್ಳಲು ಸದಾಕಾಲ ಗೈಡನ್ಸ್ ಮಾಡೋದು. ಇದು ಹಿಂದುತ್ವ.

ಅತಿಧರ್ಮೀಯತೆ  ಅಂತ ಯಾವುದೂ ಇಲ್ಲ. ಮತಾಂಧತೆ ಮಾತ್ರ ಇದೆ. ಧರ್ಮ ಮತಕ್ಕಿಂತ ಬಹಳ ಭಿನ್ನ. ಒಬ್ಬ ತಾಯಿ  ಮಗನನು ಅತಿಯಾಗಿ ಪ್ರೀತಿಸಿದ್ರೆ ಆಕೆಯದು ಅತಿ ವ್ಯಾತ್ಸಲ್ಯ ಅಂತೇನೂ ಇಲ್ಲ. ಅತಿ ಅಂತ ಸೇರಿಸಕ್ಕೆ  ಬರಲ್ಲ. ಆದ್ರೆ ತನ್ನದು ಮಾತ್ರವೇ ದೊಡ್ಡದು ಅನ್ನೋದು ತಪ್ಪು.

8)  ಇತ್ತೀಚೆಗೆ  ಮತ ಧರ್ಮ ರಾಜಕಾರಣ ಶುರುವಾಗಿದೆ. ವೋಟಿಗಾಗಿ ನಡೆಯುವಂತದ್ದು. ಸಾಮಾಜಿಕವಾಗಿ ಜನರು ಇದನ್ನು ಒಪ್ಪೋದಿಲ್ಲ. ಇಂತಹ ರಾಜಕೀಯ ಕಪಿ ಮುಷ್ಟಿಯಲ್ಲಿ ಸಿಲುಕಿದವರು ಹೇಗೆ  ಪರಾಗಬಹುದು?

ಇಂತವರ ಹಿಡಿತಕ್ಕೆ ಸಿಕ್ಕಿಕೊಳ್ಳುವುದೇ ತಪ್ಪು. ನಿರಾಕರಿಸಿ. ಸಿಕ್ಕಿಹಾಕೊಂಡಲ್ಲಿ ಪಾರಾಗೋ ಅಗತ್ಯವೇ ಇಲ್ಲ.

ಸಮಸ್ಯೆಯೊಂದರ ಪರಿಹಾರಕ್ಕೆ ಕಾಲವೇ ಮಾರ್ಗ. ಸಮಯವೇ ಇದನ್ನು ಜನರಿಗೆ ಕಲಿಸುತ್ತೆ. ರಾಜಕಾರಣಿಗಳಿಗೆ ನಾವೇ ವಸ್ತು.ಅವರೂ ನಮ್ಮವರೇ. ಎಲ್ಲರೂ ಅವರವರ ತಾತ್ಕಾಲಿಕ ಸ್ವಾರ್ಥ ಮತ್ತು ಲಾಭಕ್ಕಾಗಿ ತಪ್ಪು ಮಾಡುತ್ತಾರೆ. ಇವರಿಗೆ ಧರ್ಮವೂ ದೊಡ್ಡದಾಗಿರುವುದಿಲ್ಲ. ಸ್ವಾರ್ಥದ ಸುಳಿಯಲ್ಲಿ ಸಿಲುಕಿಕೊಳ್ಳುವುದೇ ಎಲ್ಲ ಸಮಸ್ಯೆಗಳ ಬೇರು. ಸ್ವಲ್ಪ ಎಚ್ಚರಿಕೆ ಮತ್ತು ಜಾಗೃತಿಗಳಲ್ಲಿ ಬದುಕೋ ಅಗತ್ಯವಂತೂ ಇದೆ. ಇದಕ್ಕಾಗಿ ದೊಡ್ಡ ಹೋರಾಟವನ್ನೇ ನಾವು ಮಾಡಬೇಕಿದೆ. ಆದರೂ ಒಂದೆರಡು ತಲೆಮಾರುಗಳ ಕಾಲವಾದರು ಈ ಸಮಸ್ಯೆ ನಿವಾರಣೆಯಾಗಲು ಬೇಕು.

8) ಶತಮಾನದ ಹಿಂದೆ ವಿವೇ ಕಾನಂದರು ಹೇಳಿದ ಅವೇ ಸುಧಾರಣೆಗಳು ಇವತ್ತಿಗೂ ಆಗಬೇಕಾಗಿರೋದು ವಿಶಾದದ ಸಂಗತಿ. ಈ ಬಗ್ಗೆ ನಿಮ್ಮ ಸಂಸ್ಥೆ ಮತ್ತು ನೀವು ಕಟ್ಟಿರೋ ಯುವ ಬ್ರಿಗೇಡ್ ಬೇಕಾದಷ್ಟು ಒಳ್ಳೇ ಕೆಲಸಗಳನ್ನು ಮಾಡ್ತಿವೆ ಅಂತ ಕೇಳಿದ್ದೀವಿ. ಈ ಬಗ್ಗೆ ಹೇಳಿ.

ಯುವ ಬ್ರಿಗೇಡ್ ಮೂಲಕ ತರುಣರಲ್ಲಿ ಜಾಗೃತಿ ಮೂಡಿಸೋ ಕೆಲಸ ಮಾಡ್ತಿದ್ದೇವೆ. ಪ್ರಗ್ನೆಯನ್ನು ಬೆಳೆಸೋ ಪ್ರಯತ್ನ ಇದು. ಕಂಪ್ಲೇಂಟ್ ಮಾಡೋ ಸ್ವಭಾವವನ್ನು  ಸ್ವಲ್ಪ ಕಡಿಮೆ ಮಾಡಿ ರಾಷ್ಟ್ರಕ್ಕೋಸ್ಕರ ದುಡಿಯೋ ಮನೋಭಾವವನ್ನು ಬೆಳೆಸ್ತಾ ಇದ್ದೇವೆ. ಕಳೆದ 4.5 ವರ್ಷಗಳಲ್ಲಿ 175 ಕಲ್ಯಾಣಿಗಳನ್ನು ಕ್ಲೀನ್ ಮಾಡಿದ್ದೇವೆ. 6-8  ತಿಂಗಳಲ್ಲಿ 7 ನದಿಗಳನ್ನು ಸ್ವಚ್ಛ ಮಾಡಲು ಸಾಧ್ಯವಾಗಿದೆ. ಸೈನಿಕರಲ್ಲಿ ದೇಶಭಕ್ತಿ ಬರುವಂತೆ ಕೆಲಸ ಮಾಡ್ತಿದ್ದೇವೆ. ಮಕ್ಕಳಿಗೆ ಸಣ್ಣ ಸಣ್ಣ ವಿಡೀಯೋ ಮಾಡಿ ಕಳಿಸ್ತಿದ್ದೇವೆ. ವಿವೇಕಾನಂದರ  ಮತ್ತು ನಿವೇದಿತಾ ವಿಚಾರಕ್ಕೆ ರಥಯಾತ್ರೆ ಮತ್ತು ಸಾಹಿತ್ಯ ಸಮ್ಮೇಳನವನ್ನು ಮಾಡಿದ್ದೇವೆ. ತರುಣರಲ್ಲಿ ಕುಶಲ ಕಲೆಗಳು ಬೆಳೆಯುವಂತೆ ತರಭೇತಿ ಕೊಟ್ಟು ಬೇಗ ಕೆಲಸ ಸಿಗೋ ಅಂತೆ ಪ್ರಯತ್ನ ಮಾಡ್ತಿದ್ದೇವೆ. ಜಾತಿ ಮತ ಪಂಥಗಳನ್ನು ಮೀರಬೇಕು ಅನ್ನೋ ಪ್ರಯತ್ನ  ಮತ್ತು ಡಿಜಿಟಲ್ ಸಂಸ್ಕಾರದ ಮೂಲಕ ಚಿಂತನೆಗಳನ್ನು ಸಮರ್ಥವಾಗಿ ಹೆಚ್ಚು ಜನರಿಗೆ ಮುಟ್ಟಿಸೋ ಕೆಲಸವನ್ನು ಮಾಡ್ತಾ ಇದ್ದೇವೆ. ಹೆಣ್ಣು ಮಕ್ಕಳು ಕೂಡ ನಿವೇದಿತಾ ಸಂಸ್ಥೆಯ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

9) ನೀವು  ಸೈನಿಕರನ್ನು ಭೇಟಿ ಮಾಡಿ ಅವರಲ್ಲಿ ರಾಷ್ತ್ರಪ್ರೇಮವನ್ನು ಉಜ್ವಲಗೊಳಿಸೋ ಪ್ರಯತ್ನ ಮಾಡಿದ್ದೀರಿ. ಇಂತಹ ಅಗತ್ಯ ಇದೆ ಅಂತ ನಿಮಗೆ ಯಾಕೆ ಅನ್ನಿಸ್ತು?

ಆತ್ಮ ಸ್ಥೈರ್ಯ ! ತಮಸ್ಸಿನಲ್ಲಿರುವ ಜನರನ್ನು ರಜಸ್ಸಿಗೆ ತರೋದಿಕ್ಕೆ ಉತ್ತಮ ಮಾರ್ಗ ಅಂತ ಸ್ವಾಮಿ ವಿವೇಕಾನಂದರು ಹೇಳ್ತಾರೆ. ಕಾರ್ಗಿಲ್ ಯುದ್ದ, ಚೀನಾ ಯುದ್ದ,  1965 ರ ವಾರ್ ಆಫ್ ಟ್ಯಾಂಕ್ ನೆನಪಿಸಿಕೊಂಡು ಜನರಲ್ಲಿ ರಾಷ್ತ್ರಪ್ರೇಮ ಉದ್ದೀಪನ ಗೊಳಿಸೋ ಕೆಲಸವನ್ನು ಮಾಡ್ತಾ ಇದ್ದೀವಿ.

10) ನೀವು ಮಾದ್ಯಗಳಲ್ಲಿ ಬಹಳ ತೊಡಗಿಕೊಂಡಿರೋ ವ್ಯಕ್ತಿ. ಹಲವು ಹತ್ತು ಪುಸ್ತಕ ಬರೆದಿದ್ದೀರಿ. ರೇಡಿಯೋ, ಟೀವಿ, ಪತ್ರಿಕೆಗಳು, ದಿನಪತ್ರಿಕೆಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಬರೀತಿರ್ತೀರಿ. ವಿಜಯವಾಣಿಯಲ್ಲಿ ವಿಶ್ವಗುರು ಅನ್ನೊ ಹೆಸರಿನಲ್ಲಿ  ಅಂಕಣ ಬರೀತಿರೋ ಉದ್ದೇಶ ಏನು?

ನಾನು ನನ್ನ ಭಾರತ ಏನಾದ್ರು ಆಗಬೇಕು ಅಂತ ಕೇಳ್ಕೊಳ್ಳೊದಾದ್ರೆ, ಇಂಗ್ಲೆಂಡಿನಂತೆ ಜಗತ್ತನ್ನು ಆಳ್ಬೇಕು ಅಂತ ಯಾವತ್ತೂ ಕೇಳ್ಕೊಳ್ಳಲ್ಲ.  ಹಿಂದೆ ಭಾರತ ’ವಸುದೈವ ಕುಟುಂಬಕಂ ’ ಎನ್ನುವಷ್ಟು ಹಿರಿಮೆಯುಳ್ಳದ್ದಾಗಿತ್ತು. ನಳಂದ ತಕ್ಷ ಶಿಲ ಇವುಗಳಲ್ಲಿ ಶಿಕ್ಷಣ ಪಡೆಯಲು ಜಗತ್ತಿನ ಜನರು ಭಾರತಕ್ಕೆ ಬರ್ತಾ ಇದ್ರು. ಭಾರತ  ಯಾವತ್ತು ಬೆಳಕನ್ನು ಹುಡುಕ್ತಾ ಇದ್ದ ದೇಶ. ಮತ್ತೆ ಬಾರತ ಅದೇ ಪ್ರೌಡಿಮೆಯನ್ನು ತಲುಪಬೇಕು ಅಂತ. ನೋವು ಮತ್ತು ದುಃಖವನ್ನು ಮೀರುವಂತ ಗ್ನಾನವನ್ನು ಕೊಡುವಂತ ವಿಶ್ವಗುರುವಾಗಬೇಕು ಅಂತ . ಹಿಂದೆ ಆಗಿದ್ವಿ ಆದ್ರೆ ಇವತ್ತು ಆ ಪಟ್ಟವನ್ನು ಕಳಕೊಂಡಿದ್ದೀವಿ. ಮತ್ತೆ ಆ ಶಕ್ತಿ ನಮಗೆ ಸಿಗಲಿ ಅಂತ ಬಯಸಿಕೊಂಡು ಬರೀತಾ ಇದ್ದೀನಿ.

10) ಹಣ ಸಹಾಯ ಅಲ್ದೆ  ವಿದೇಶಿಯರಾದ ನಾವು ಇನ್ನೇನನ್ನು ಮಾಡಬಹುದು?

ವಿದೇಶದವರೆಲ್ಲ ಹಣವನ್ನು ಕೇಳಲಿಕ್ಕೇ ನಮ್ಮ ಬಳಿ ಬರ್ತಾರೆ ಅಂದ್ಕೊಂಡಿರ್ತಾರೆ. ನಮ್ಮ ಬಳಿ ಸಾಕಷ್ಟು ಹಣವಿದೆ.  ನಿಮ್ಮ ಹಣ ನಮಗೆ ಖಂಡಿತ ಬೇಡ.ಬದಲು ನೀವು ಭಾರತಕ್ಕೆ ಬಂದಾಗ ನೀವು ಓದಿದ ಶಾಲೆಗಳಿಗೆ, ಕನ್ನಡ ಮಾಧ್ಯಮದ ಸರ್ಕಾರೀ ಶಾಲೆಗಳಿಗೆ  ಭೇಟಿಕೊಟ್ಟು ಹಲವು ಹತ್ತು ಮಕ್ಕಳಲ್ಲಿ ನಾವೂ ನಿಮ್ಮಂತೆಯೇ ಓದಿ ಈಗ ಹೀಗಿದ್ದೀವಿ ಅಂತ ಹೇಳಿ ಆತ್ಮ ವಿಶ್ವಾಸ ತುಂಬಿ. ಯಾಕೆಂದರೆ ಸಾಧನೆ ಮಾಡೋ ಶಕ್ತಿ ನಮ್ಮ ಮಕ್ಕಳಲ್ಲಿದೆ. ಅವಕಾಶಗಳಿಲ್ಲ. ನಿಮ್ಮಿಂದ ಉತ್ತಮ ಪ್ರೇರಣೆ ಸಿಕ್ಕರೆ ಅಷ್ಟೇ ಸಾಕು. ಅವರಲ್ಲಿನ ಪ್ರತಿಭೆ  ಹೊರಕ್ಕೆ ಬರುವಂತ ಅವಕಾಶ ಮಾಡಿಕೊಡಿ, ಪ್ರೇರಣೆ, ಆತ್ಮವಿಶ್ವಾಸವನ್ನು ನೀಡಿ.

11)   ನಿಮ್ಮ ಮತ್ತು ನಿಮ್ಮ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಗಳೇನು?

ಡಿಸೆಂಬರ್ 22-23  ರಂದು ಸೇವಾಕುಂಭ ಮಾಡ್ತೀದ್ದೀವಿ.  ಯಾರು ತಮಗಲ್ಲದೆ ಬೇರೆಯವರಿಗಾಗಿ ಬದುಕ್ತಾರೋ ಅಂತಹ ನೂರೈವತ್ತು ಸಂಸ್ಥೆಯ 350 ಜನ್ರನ್ನು ಸೇರಿಸ್ತಿದ್ದೀವಿ. ಪ್ರಖರವಾಗಿ ಸೇವೆ ಮಾಡಿರೋ ಹದಿನೈದು ಜನರನ್ನು ಮಾತನಾಡಿಸ್ತಿದ್ದೀವಿ. ಇಂತವರ ನೆಟ್ವರ್ಕ್ ಸೃಷ್ಟಿಸುವ ಪ್ರಯತ್ನದಲ್ಲಿದ್ದೇವೆ.

ಶಾಲಾ ಕಾಲೇಜಿನ ಮಕ್ಕಳಲ್ಲಿ ತಮ್ಮ ದೇಶದ ಕೆಲಸವನ್ನು ಮಾಡುವ ಪರಿಕಲ್ಪನೆಯನ್ನು ಹುಟ್ಟುಹಾಕುವ ವಿಚಾರಗಳನ್ನು ಬಿತ್ತಬೇಕು ಅಂತ  ವಿಚಾರ ಮಾಡ್ತಿದ್ದೇವೆ. ಮುಂದಿನ 6 ತಿಂಗಳ ಕಾರ್ಯಕ್ರಮ ಪಟ್ಟಿ ತಯಾರಿದೆ.

ಸಂದರ್ಶನದ ವೀಡಿಯೋ:

ಸಂದರ್ಶನ: ಭಾಗ ೧
ಸಂದರ್ಶನ: ಭಾಗ ೨