ವಸುಧೇಂದ್ರ: ಕತೆಗಳಿಂದ ಕಾದಂಬರಿಗೆ

ಕತೆ

ನಾನು ಹತ್ತನೇ ಕ್ಲಾಸ್ ತನಕ ಕನ್ನಡ ಮಾಧ್ಯಮದಲ್ಲಿ ಓದಿದೆ. ನಮ್ಮೂರಲ್ಲಿ ಇಂಗ್ಲಿಷ್ ಮೀಡಿಯಂ ಕಾನ್ವೆಂಟ್ ಇತ್ತು, ಆದರೆ ಅಲ್ಲಿ ತಿಂಗಳಿಗೆ ಎಂಟು ರೂಪಾಯಿ ಫೀಸ್ ಇತ್ತು, ಅಷ್ಟು ಕೊಡಕ್ಕೆ ಆಗಲ್ಲ ಸರಕಾರಿ ಶಾಲೆಗೆ ಹೋಗು ಅಂತ ಕಳಿಸಿಬಿಟ್ರು. ಮಗು ಮುಂದೆ ಏನಾಗಬೇಕು ಏನು ಮಾಡಬೇಕು ಆ ಯೋಚನೆಗಳೇ ಇಲ್ಲ, ಸುಮ್ಮನೇ ಓದಬೇಕು, ಅಷ್ಟೇ.

ಮನೆಯಲ್ಲಿ ಸಾಹಿತ್ಯವನ್ನು ಓದುವಂತಹ ವಾತಾವರಣ, ನಮ್ಮ ತಾಯಿ ತುಂಬಾ ಓದೋರು, ಅವರು ಓದ್ತಾ ಇದ್ರೆ ನನಗೆ ಓದೋಕ್ಕೆ ಬಂತು. ನಮ್ಮ ಮನೆಯಲ್ಲಿ ದಿನಪತ್ರಿಕೆ ಕೂಡ ಸಾಧ್ಯವಿರಲಿಲ್ಲ, ಒಂಥರ ಬಡತನ. ಗ್ರಂಥಾಲಯದಿಂದ ತಂದು ಓದೋದು ಅಷ್ಟೇ.

ನಾನು ಲೇಖಕನಾಗುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ, ಸಾಫ್ಟ್ವೇರ್ನಲ್ಲಿ ಸೇರಿಕೊಂಡು ಮೂರು ವರ್ಷ ಆಗಿತ್ತು, ಏನು ಮಾಡ್ತಿಲ್ಲ, ಬರೀ ರೊಟೀನ್ ಮಾಡ್ತಾ ಇದ್ದೇನೆ ಅಂತ ಕಾಡೋಕೆ ಶುರುವಾಯಿತು. ಇದೇನು, ಬೆಳಿಗ್ಗೆ ಹೋಗೋದು, ರಾತ್ರಿ ಬರೋದು, ಹಿಂಗೆ ಆಗ್ತಿದೆಯಲ್ಲ, ನಂದೊಂದು ಐಡೆಂಟಿಟಿ ಬೇಕಲ್ಲ ಅಂತ ಹುಡುಕಾಟ ಶುರುವಾಯಿತು. ಐಡೆಂಟಿಟಿ ಕ್ರೈಸಿಸ್ ಅದು. ನನಗೆ ಏನ್ ಮಾಡಬಹುದು ನಾನು ಅಂದುಕೊಂಡಾಗ, ಬರೆಯಲು ಶುರು ಮಾಡಬೇಕು ಅನಿಸಿತು,

ಚಿಕ್ಕಂದಿನಲ್ಲಿ ಎಂಟೋ ಒಂಬತ್ತನೇ ಕ್ಲಾಸಲ್ಲಿ ಅಸೈನ್ಮೆಂಟ್-ಗೆ ಒಂದು ಕಥೆ ಬರೆದಿದ್ದೆ. ತುಂಬ ಚೆನ್ನಾಗಿದೆ ಎಂದು ಗುರುಗಳು ಹೇಳಿದ್ರು. ಅವಾಗ ಅದು ತರಂಗದಲ್ಲಿ ಪ್ರಕಟವಾಗಿತ್ತು. ಅದು ನನಗೆ ತಲೆಯಲ್ಲಿ ಇತ್ತು. ಕಥೆ ಬರೆಯೋಕೆ ಬರುತ್ತೆ, ಟ್ರೈ ಮಾಡೋಣ ಅಂತ ಮತ್ತೆ ಬರೆಯಲು ಶುರುಮಾಡಿದೆ.

ನನಗೆ ಯಾವ ಸಾಹಿತಿಗಳೂ ಗೊತ್ತಿರಲಿಲ್ಲ, ತರಂಗದಲ್ಲಿ ಅವಾಗ ಲೇಖಕರ ಅಡ್ರೆಸ್ ಹಾಕ್ತಾ ಇದ್ರು. ನನಗೆ ಯಾರು ಇಷ್ಟ ಆಗ್ತಾರೋ ಅವರಿಗೆ ಒಂದು ಲೆಟರ್ ಹಾಕಿ ನಾನು ಹಿಂಗೆ ಕಥೆ ಬರೆದಿದ್ದೀನಿ, ನೀವು ಓದ್ತೀರಾ, ಅಂದ್ರೆ, ಕಳಿಸಿಕೊಡಿ ಅಂದ್ರು, ಕಳಿಸಿಕೊಟ್ಟ ಮೇಲೆ, ಚೆನ್ನಾಗಿ ಬರೀತೀಯಾ, ಮುಂದುವರೆಸು ಅಂದರು. ಆ ಒಂದು ಭರವಸೆ ಸಿಕ್ಕ ತಕ್ಷಣ ನಾನು ಸಿಕ್ಕಾಪಟ್ಟೆ ಬರೆಯುತ್ತ ಹೋದೆ.

ಐಟಿನಲ್ಲಿ ೧೨ರಿಂದ ೧೪ ಗಂಟೆ ಕೆಲಸ ಮಾಡ್ತಿದ್ದರಿಂದ ಬರೆಯುವುದು ಕಷ್ಟ ಇತ್ತು. ನನಗೆ ಬರೆಯುವ ಸಮಯ ಸಿಕ್ಕಿದ್ದು ಇಂಗ್ಲೆಂಡ್ ನಲ್ಲಿ ಪೋಸ್ಟ್ ಮಾಡಿದಾಗ. ಇಂಗ್ಲಂಡಿನಲ್ಲಿ ಸರಿಯಾಗಿ ಐದುವರೆಗೆ ಕೆಲಸ ಮುಗಿಸಿಬಿಡ್ತಾರೆ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದು ಗಂಟೆ ಆದ್ರೆ ಮುಗಿದು ಹೋಗ್ಬಿಡ್ತು. ನನಗೆ ಎಷ್ಟು ಫ್ರೀ ಟೈಮ್ ಇರ್ತಿತ್ತು ಅಂತಂದ್ರೆ ನನ್ನ ಪ್ಯಾಶನ್ ಕಾಡೋಕೆ ಶುರುವಾಯಿತು. ಅವಾಗ ಅದೇ ಇಂಟರ್ನೆಟ್ ಬಂದಿತ್ತು ಇಲ್ಲಿಂದ ನಾನು ಬರೆದು ಕಳಿಸಿಕೊಡ್ತಾ ಇದ್ದೆ, ಆ ತರ ಶುರುವಾಯಿತು. ದೆನ್ ಐ ಬಿಕೇಮ್ ವೆರಿ ಸೀರಿಯಸ್. ನಾನು ಇಂಗ್ಲಂಡಿನಲ್ಲಿದ್ದ ಮೂರು ನಾಲ್ಕು ವರ್ಷ ತುಂಬಾ ಬರೆದುಬಿಟ್ಟೆ. ಸುಮಾರು ಒಂದು ಮೂರು ಪುಸ್ತಕ ಬರೆದುಬಿಟ್ಟೆ. ಭಾಷಾಂತರ ಮಾಡಿದೆ. ಕಾನ್ಫಿಡೆನ್ಸ್ ಬಂತು.

ಪ್ರಕಟ ಮಾಡಕ್ಕೆ ಯಾರು ಮುಂದೆ ಬರಲಿಲ್ವಲ್ಲ! ಇಂಗ್ಲಂಡಿಂದ ಹೋಗಿದ್ದೀನಿ, ಬೇಕಾದಷ್ಟು ಹಣ ಗಳಿಸಿದ್ದೆ, ಹಣಕ್ಕೆ ಸಮಸ್ಯೆನೇ ಇರಲಿಲ್ಲ. ನಾನೇ ಪ್ರಕಟಣೆ ಶುರು ಮಾಡ್ಕೊಂಡೆ. ಪ್ರಕಾಶನ ಗೊತ್ತಿರಲಿಲ್ಲ. ಪ್ರಕಾಶನ ಶುರು ಮಾಡ್ಕೊಂಡೆ. ಭಾರತಕ್ಕೆ ಹೋದ ಮೇಲೆ ತುಂಬಾ ಓದುಗರು ಇದ್ದಾರೆ ನನಗೆ ಅಂತ ಗೊತ್ತಾಯ್ತು. ನಾನು ಪ್ರಕಟ ಮಾಡಿದ ಪುಸ್ತಕಗಳು ಆರು ತಿಂಗಳಲ್ಲಿ ಮುಗಿದು ಹೋಗಿಬಿಡುತ್ತಿತ್ತು. ಅದು ತುಂಬಾ ಚೆನ್ನಾಗಿ ಕೆಲಸ ಮಾಡಿತು. ಆಮೇಲೆ ಬೇರೆಯವರದೆಲ್ಲ ಪ್ರಕಾಶನ ಮಾಡೋಕೆ ಶುರು ಮಾಡಿದೆ. ಪ್ರಕಾಶನದಿಂದ ಬದುಕಬಲ್ಲೆ ಅಂತ ಗೊತ್ತಾಯ್ತು. ಬುಕ್ ಅರ್ನಿಂಗ್ಸ್ ನನಗೆ ಬೇಕಾದಷ್ಟು ಆಗುತ್ತೆ.

ಈ ಕಾರ್ಪೊರೇಟ್ ಮೈಂಡ್ ಸೆಟ್ ಮತ್ತು ಈ ಕಥೆ ಬರೆಯುವ ಮೈಂಡ್ ಸೆಟ್ ಎರಡು ಬೇರೆ ವಿರುದ್ಧಗಳು. ಕಾರ್ಪೊರೇಟ್-ನಲ್ಲಿ ಹಣನೇ ಮುಖ್ಯ. ಸಾಹಿತ್ಯದಲ್ಲಿ ಹಣಕ್ಕೆ ಅಷ್ಟು ಬೆಲೆನೇ ಇರಲ್ಲ ಸಾಹಿತ್ಯದಲ್ಲಿ ನೈತಿಕತೆಯೇ ಬೇರೆ. ಎರಡೂ ಪ್ರಪಂಚಕ್ಕೆ ಕ್ಲಾಶ್ ಆಗ್ತಾ ಇದೆ ತುಂಬಾ ಅನಿಸ್ತು. ಕಳೆದ ೧೦ ವರ್ಷ ಪೂರ್ತಿ ಬರವಣಿಗೆ, ಓದು ಮತ್ತು ತಿರುಗಾಟ. ಬೇಕಾದಷ್ಟು ತಿರುಗುತ್ತೀನಿ.

ಕಾದಂಬರಿ

ಹಿಂದೊಮ್ಮೆ ಹರಿಚಿತ್ತ ಸತ್ಯ ಅಂತ ಕಾದಂಬರಿಯನ್ನು ಬರೆದಿದ್ದೆ. ಅದು ಒಂದು ೧೬೦ ಪುಟದಷ್ಟು ಚಿಕ್ಕ ಕಾದಂಬರಿ. ವಿವೇಕ್ ಶಾನುಭಾಗ ಆಗ ದೇಶಕಾಲ ಅಂತ ಮ್ಯಾಗಸಿನ್ ತರ್ತಿದ್ದರು. ಒಂದು ಸ್ಪೆಷಲ್ ಎಡಿಷನ್-ಗೆ ನೀನು ಒಂದು ಕಾದಂಬರಿ ಬರ್ಕೊಡು ಅಂದರು. ನಾನು ಅಲ್ಲಿಯತನಕ ಕಾದಂಬರಿಯನ್ನು ಬರೆದಿರಲಿಲ್ಲ. ಆಗ ನಾನು ಕ್ಲಿನಿಕಲ್ ಡಿಪ್ರೆಶನ್-ನಲ್ಲಿದ್ದೆ. ಆ ಡಿಪ್ರೆಶನ್-ನಿಂದ ಹೊರಗೆ ಬರೋದಕ್ಕೆ ನೀವು ಒಂದು ಕಾದಂಬರಿ ಬರಿ, ಡಿಪ್ರೆಶನ್-ನಿಂದ ಹೊರಬರಲು ಸಹಾಯ ಮಾಡಬಹುದು ಅಂತ ಒಂಥರ ಬಲವಂತ ಮಾಡಿದರು. ಡಿಪ್ರೆಶನ್-ನಲ್ಲಿ ಏನು ಮಾಡೋಕೂ ಇಷ್ಟ ಆಗಲ್ಲ. ನಮ್ಮ ಅಕ್ಕ ಬಿಜಾಪುರದಲ್ಲಿ (ಈಗ ವಿಜಯಪುರ) ಇದ್ರು. ಬಿಜಾಪುರಕ್ಕೆ ಹೋಗಿ ಕೂತ್ಕೊಂಡು ಬರೆದೆ. ಜನಕ್ಕೆ ಇಷ್ಟ ಆಯಿತು.

ಅದು ನಮ್ಮ ತಂದೆ ತಾಯಿಯ ಕಥೆ. ಅವರದು ವಿಚಿತ್ರ ಕಥೆ.

ನನ್ನ ತಾಯಿ ಬಳ್ಳಾರಿಯಲ್ಲಿ ೧೦ನೇ ತರಗತಿಯವರೆಗೆ ಓದಿದ್ರು. ನಮ್ಮಪ್ಪ ಇದ್ದಿದ್ದು ಸೊಂಡೂರಲ್ಲಿ. ಸೊಂಡೂರು ಅಂದ್ರೆ ಹಳ್ಳಿ, ಬಳ್ಳಾರಿ ಪಟ್ಟಣ. ನನ್ನ ತಾಯಿಗೆ ಸೊಂಡೂರಿನಲ್ಲಿ ಜೀವನ ಮಾಡಲು ಇಷ್ಟ ಇರಲಿಲ್ಲ. ಅಷ್ಟೇ ಅಲ್ಲ, ನಮ್ಮ ತಂದೆಗೆ ಚಿಕ್ಕಂದಿನಿಂದ ತಲೆ ತುಂಬಾ ಬಿಳಿ ಕೂದಲು. ನಮ್ಮಮ್ಮ ನಮ್ಮಪ್ಪನನ್ನು ರಿಜೆಕ್ಟ್ ಮಾಡ್ಬಿಟ್ರು.

ನನ್ನ ಅಪ್ಪ ಬೇರೆ ಮದುವೆ ಮಾಡ್ಕೊಂಡ್ರು. ಅವರಿಗೆ ನಾಲ್ಕು ಮಕ್ಕಳಾದವು. ಒಂದ್ಸಲ ಇಡೀ ಕುಟುಂಬ ಇನ್ನಷ್ಟು ಕುಟುಂಬಗಳ ಜೊತೆ ಸೇರಿ ಹಂಪಿಗೆ ಹೋಗ್ತಾರೆ. ಅಲ್ಲಿ ತೆಪ್ಪದಲ್ಲಿ ಕೂತು ಹೋಗಬೇಕು. ಆಗ ಗಂಡಸರು ಏನು ಮಾಡಿದ್ರು ಅಂದ್ರೆ, ಹೆಂಗಸರು ಮಕ್ಕಳು ಮೊದಲು ಹೋಗ್ಬಿಡ್ಲಿ, ಆಮೇಲೆ ಗಂಡಸರು ಹೋಗೋಣ, ಅಂತ ಎಲ್ಲಾ ಹೆಂಗಸರು ಮಕ್ಕಳನ್ನ ಕಳಿಸಿಬಿಟ್ಟಿದ್ದಾರೆ.

ತೆಪ್ಪದಲ್ಲಿ ಹೋಗಬೇಕಾದರೆ, ತೆಪ್ಪದಲ್ಲಿದ್ದ ಎಲ್ಲ ಹೆಂಗಸರೂ ಮಕ್ಕಳೂ ಮುಳುಗಿ ಹೋಗಿದ್ದಾರೆ. ಅದರಲ್ಲಿ ಮೂರು ಮಕ್ಕಳು ಮತ್ತು ಹೆಂಡತಿ ಇದ್ದರು. ಮುಳುಗಿದವರೆಲ್ಲರೂ ಹೋಗಿಬಿಟ್ರು. ಅಲ್ಲಿದ್ದ ಅಷ್ಟೂ ಕುಟುಂಬಗಳು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಸುಮಾರು ೨೫-೩೦ ಜನ ಹೋಗ್ಬಿಟ್ರು. ಇದು ನಡೆದದ್ದು ೧೯೬೫ರಲ್ಲಿ.

ಅಪ್ಪನ ಜೊತೆ ಇದ್ದ ಒಬ್ಬಳು ಮಗಳು ಮಾತ್ರ ಉಳಿದುಕೊಂಡಿದ್ದು. ಅದೇನೋ, ಆ ತನಕ ನಮ್ಮ ತಾಯಿ ಹಂಗೆ ಉಳಿದುಕೊಂಡಿದ್ರು, ಏನೋ ಕಾರಣಕ್ಕಾಗಿ ಮದುವೆನೇ ಆಗಿರಲಿಲ್ಲ. ಇಲ್ಲದಿದ್ರೆ ನಾನು ಹುಟ್ಟುತ್ತಾನೆ ಇರಲಿಲ್ಲ. ಎರಡನೇ ಮದುವೆ ಆದ್ಮೇಲೆ ಆಮೇಲೆ ನಾವೆಲ್ಲ ಹುಟ್ಟಿದ್ದು. ಇಬ್ಬರು ೨೫ ವರ್ಷಕ್ಕಿಂತ ಹೆಚ್ಚು ತುಂಬಾ ಚೆನ್ನಾಗಿ ಸಂಸಾರ ಮಾಡಿದ್ರು.

ನನಗೆ ಅದು ಒಂತರ ವಿಚಿತ್ರ ಕಥೆ ಅನ್ಸೋದು. ಅದನ್ನೆಲ್ಲ ಸೇರಿಸಿ ಒಂದಿಷ್ಟು ಫಿಕ್ಷನೈಸ್ ಮಾಡಿ ಆ ಕಾಲಘಟ್ಟ ತಗೊಂಡು ಬಂದು ಬರೆದೆ. ನಾನು ಆ ಕಾದಂಬರಿಯನ್ನು ಬರೆದಾಗ ನಮ್ಮ ತಂದೆ ಇರಲಿಲ್ಲ. ನಮ್ಮ ಅಕ್ಕಂದರಿಗೆಲ್ಲ ಗೊತ್ತು. ನಮ್ಮ ಇಡೀ ಕುಟುಂಬಕ್ಕೆ ಗೊತ್ತು. ಆ ತೆಪ್ಪದ ಅಫಘಾಥದಲ್ಲಿ ಇನ್ನೂ ಅಷ್ಟೊಂದು ಕುಟುಂಬಗಳೂ ಇದ್ದವು. ಆ ಕಾದಂಬರಿಯನ್ನು ಓದಿ ಆ ಅಪಘಾತದಲ್ಲಿ ಸಾಕ್ಷಿಯಾಗಿದ್ದವರು, ಅದರೊಳಗೆ ನಮ್ಮಮ್ಮನೂ ತೀರ್ಕೊಂಡ್ರು, ಅಂತೆಲ್ಲ ಅವರ ಕತೆಗಳನ್ನು ಹೇಳಿದರು. ಎಷ್ಟೊಂದು ಕುಟುಂಬಗಳಿಗೆ ನಾನು ಆ ಕಾದಂಬರಿಯಿಂದಾಗಿ ಹತ್ತಿರನಾದೆ. ಅದು ಒಂದು ಅನುಭವ!

One thought on “ವಸುಧೇಂದ್ರ: ಕತೆಗಳಿಂದ ಕಾದಂಬರಿಗೆ

Leave a Reply to April 2025 Newsletter – Keshav Kulkarni's Blog Cancel reply

Your email address will not be published. Required fields are marked *