ಹಿಂದಿನ ಲೇಖನದಲ್ಲಿ ಪೌರಾಣಿಕ ಕಥೆಗಳಲ್ಲಿ ಬರುವ “ಅಮರತ್ವ” ವನ್ನು ಇಂದಿನ “ಆವಿಷ್ಕಾರಗಳಿಂದ” ಪಡೆಯುವ ಪ್ರಯತ್ನದ ಬಗ್ಗೆ ಬರೆದಿದ್ದೆ. ಈ ವಿಷಯದ ಬಗ್ಗೆ ವಿಚಾರಗಳು ಇನ್ನೂ ತಲೆಯಲ್ಲಿ ಓಡುತ್ತಿತ್ತು, ತಲೆಯಲ್ಲಿ ಹರಡಿದ ವಿಚಾರಗಳನ್ನು ಹೆಣೆದು, ಒಂದು ಲೇಖನ ಮಾಡುವ ಪ್ರಯತ್ನ ಇದು.
ಶನಿ ಮಹಾತ್ಮೆ ಕಥೆಯ ಒಂದು ಭಾಗ; ಸೂರ್ಯನ ಎರಡನೆಯ ಪತ್ನಿ ಛಾಯಾದೇವಿ. ಯಮ ಮೊದಲ ಹೆಂಡತಿಯ ಮಗ, ಅವನು ತಾಯಿ ಛಾಯಾದೇವಿ ಮಾಡುವ ಬೇಧಭಾವ ಬಗ್ಗೆ ಮಾತನಾಡಿದಾಗ, ಛಾಯಾದೇವಿಯು ಯಮನಿಗೆ “ಪ್ರೇತನಾಗು” ಎಂದು ಶಾಪ ಕೊಡುತ್ತಾಳೆ. ಸೂರ್ಯದೇವ ಇದನ್ನು ವರವನ್ನಾಗಿ ಪರಿವರ್ತಿಸಿ, ಯಮನನ್ನು ಪ್ರೇತಗಳ ರಾಜ – ನರಕದ ಒಡೆಯನನ್ನಾಗಿ ಮಾಡುತ್ತಾನೆ. ಈ ಯಮಧರ್ಮ ಜಗತ್ತಿನ ಎಲ್ಲ ಜನರಿಗೆ ಕೊನೆಯ ವರದಾನ “ಸಾವನ್ನು” ಕೊಡುತ್ತಾರೆ, ಜೋಗಿ ತಮ್ಮ ಪುಸ್ತಕ “ಸಾವು” ನಲ್ಲಿ ಹೇಳುವದು “ಅವನು ಕೊನೆಗೆ ಬರುತ್ತಾನೆ. ಹೊರಡು ಅನ್ನುತ್ತಾನೆ. ನಾವೆಲ್ಲ ಎದ್ದು ಹೊರಡುತ್ತೇವೆ, ಅಲ್ಲಿಗೆ ಆಟ ಮುಗಿಯುತ್ತದೆ. ಮುಂದೇನು ಅನ್ನುವುದು ಯಾರಿಗೂ ಗೊತ್ತಿಲ್ಲ. ನಾವು ಭೇಟಿಯಾಗುವ ಕೊನೆಯ ಗಿರಾಕಿ ಸಾವು. ನಮ್ಮ ಹುಟ್ಟಿನೊಂದಿಗೆ ನಮ್ಮೊಳಗೇ ಹುಟ್ಟುವ ಆತ್ಮಬಂಧು”. ಇಲ್ಲಿ ಸಾವನ್ನು ಆತ್ಮಬಂಧು ಎಂದು ಯಾಕೆ ಕರೆದಿರಬಹುದು ಎಂಬುದು ಮುಂದೆ ಚರ್ಚಿಸೋಣ.
ಸಾವಿನ ವಿಷಯ ಬಂದಾಗ ನೆನಪಾಗುವುದು ನನ್ನ ಬಾಲ್ಯದ ಗೆಳೆಯ “ಚಂದ್ರು”. ನನ್ನೊಡನೆ ಶಾಲೆಯಲ್ಲಿ ಓದಿದವನು, ಜಾಣ ಹುಡುಗ. ನಾವೆಲ್ಲರೂ ಶಾಲೆ ಮುಗಿದಮೇಲೆ ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆ, ಬೇರೆ ಸ್ಥಳಕ್ಕೆ ಹೋದೆವು. ಚಂದ್ರು ಸುರತ್ಕಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜು ಸೇರಿಕೊಂಡು ಕೆಮಿಕಲ್ ಇಂಜಿನಿಯರಿಂಗ್ ಓದುತ್ತಿದ್ದ. ಅವನು “ಲೈಫ್ ಆಫ್ಟರ್ ಡೆತ್” ಪುಸ್ತಕ ಓದಿ, ಅದರಿಂದ ಪ್ರಭಾವಿತಗೊಂಡನು. ಒಂದು ದಿನ ವಿಷಯ ತಿಳಿಯಿತು, ಅವನು ಸಾವಿನ ನಂತರ ಏನಿದೆ ಎಂದು ನೋಡಲು ಹೋಗುತ್ತಿದ್ದೇನೆ ಎಂದು ಪತ್ರ ಬರೆದು ಇಟ್ಟು, ಸಾವನ್ನು ಅಪ್ಪಿಕೊಂಡಿದ್ದನು… ಈ ವಿಷಯ ಹಂಚಿಕೊಂಡ ಕಾರಣ, ಸಾವು ಕೆಲವರಿಗೆ ಹೆದರಿಕೆ ತಂದರೆ… ಕೆಲವರಿಗೆ ಕುತೂಹಲ ಮೂಡಿಸುತ್ತದೆ.
ಹಿಂದು ಧರ್ಮದಲ್ಲಿ ಸಾವು, ಅದರ ನಂತರದ ಬದುಕಿನ ಬಗ್ಗೆ ವಿಷಯಗಳು ಗರುಡ ಪುರಾಣದಲ್ಲಿ ಬರುತ್ತದೆ. ನಾವು ನಮ್ಮ ಕರ್ಮಗಳ ಅನುಸಾರವಾಗಿ ಸಾವಿನ ನಂತರದ ಬದುಕನ್ನು ಕಾಣುತ್ತೇವೆ. ಒಂದು ರೀತಿ ಅದು ನಿಜ, ಯಾಕೆಂದರೆ ನಾವು ಬದುಕಿದಾಗ ಮಾಡಿದ ಒಳ್ಳೆಯ ಕಾರ್ಯವನ್ನು ಜನ ನೆನಪಿಸಿಕೊಂಡು, ನಮ್ಮ ಸಾವಿನ ನಂತರವೂ ನಮ್ಮ ಉಳಿವು ಇಲ್ಲಿರುವಂತೆ ಮಾಡುತ್ತಾರೆ.
“ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ,
ಕೊನೆಗೆ ಉಳಿಯುವುದೇ ನಿನ್ನ ಒಳ್ಳೆತನ.
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ”
(“ಮಾಸ್ತಿ ಗುಡಿ” ಚಿತ್ರದ ಒಂದು ಹಾಡು)
ಸ್ವಾಮಿ ರಾಮ ಅವರ ಪುಸ್ತಕ “ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ” ಅವರು ವಿವಿಧ ಸಾಧಕರ ಪರಿಚಯ ಮಾಡಿಕೊಡುತ್ತಾರೆ. ಅದರಲ್ಲಿ ಸ್ವಾಮಿ ರಾಮ ತಮ್ಮ ಗುರುಗಳ ಶಿಷ್ಯಂದಿರಲ್ಲಿ ಒಬ್ಬರಾದ ಸಾಧಕರ ಬಗ್ಗೆ ಬರೆಯುತ್ತಾರೆ, ಆ ಸಾಧಕರನ್ನು ಭೇಟಿಯಾಗಲು ಗಂಗೋತ್ರಿ ಹತ್ತಿರದ ಒಂದು ಗವಿಗೆ ಹೋಗುತ್ತಾರೆ. ಆ ಸ್ವಾಮಿಗಳು ಸುಂದರವಾದ ದೃಢಕಾಯದವರು, ಅವರು ದೇಹದಿಂದ ತಮ್ಮನ್ನು ಬೇರ್ಪಡಿಸಿಕೊಂಡು ಹೋಗುವ ತಯಾರಿಯಲ್ಲಿ ಇದ್ದರು. ಅವರು ಹೇಳಿದ ದಿನ, ಕ್ಷಣ ತಮ್ಮ ದೇಹವನ್ನು ತ್ಯಾಗ ಮಾಡಿ ತಮ್ಮ ಆತ್ಮವನ್ನು ಬ್ರಹ್ಮರಂಧ್ರದಿಂದ ಬೇರ್ಪಡಿಸಿದರು. ಅವರ ಪ್ರಕಾರ ಇದು ಸಾವಲ್ಲ, ಅವರ ಆತ್ಮ ಅವರ ಹತೋಟಿಯಲ್ಲಿ ಇದೆ ಮತ್ತು ಅವರು ತಮ್ಮ ಇಚ್ಛಾನುಸಾರ ಅಮರರಾಗಿಯೇ ಉಳಿಯುತ್ತಾರೆ. ಇಲ್ಲಿ ನಾವು ಮೇಲೆ ನೋಡಿದ ಆತ್ಮಬಂಧು ಪದವನ್ನು ನೋಡೋಣ… ಆತ್ಮಬಂಧು, ಆತ್ಮಾಭಿಮಾನ, ಆತ್ಮನಿರ್ಭರತೆ, ಆತ್ಮಾವಲೋಕನ ಈ ಎಲ್ಲ ಪದಗಳಲ್ಲಿ ಆತ್ಮ ಎಂದು ಉಪಸರ್ಗ ಇದೆ. ಇಲ್ಲಿ ಅಥವಾ ಇಂತಹ ಸಂಬೋಧನೆಯಲ್ಲಿ ದೇಹ ಎಂದು ಇರುವದಿಲ್ಲ, ಯಾಕೆಂದರೆ ನಮ್ಮನ್ನು ಗುರುತಿಸುವುದು ಆತ್ಮ, ನಮ್ಮ ಆತ್ಮತೃಪ್ತಿಗಾಗಿ ಮಾಡುವ ಕಾರ್ಯಗಳೇ ನಮ್ಮನ್ನು ಇಲ್ಲಿ ಉಳಿಸುವುದು; ನಮ್ಮ ದೇಹವಲ್ಲ. ಮೇಲೆ ಕಂಡಂತಹ ಸಾಧಕರ ಪ್ರಕಾರ ದೇಹ ಬಾಹ್ಯ ವ್ಯಕ್ತಿತ್ವ.
ನನ್ನಗೂ, ನನ್ನ ಅಣ್ಣನಿಗೂ ಕೆಲವು ತಿಂಗಳು ಇಂತಹ ಒಬ್ಬ ಸಾಧಕರ ಜೊತೆ ಇದ್ದು, ಅವರ ಸೇವೆ ಮಾಡುವ ಅವಕಾಶ ಸಿಕ್ಕಿತು. ಸಾಧಕರು ಇದ್ದ ಸ್ಥಳ ಸಿದ್ದಾಪುರದ ಹತ್ತಿರದ ಶಿರಳಗಿ ಎಂಬ ಸಣ್ಣ ಗ್ರಾಮದಲ್ಲಿ. ಅವರು ಶ್ರೀ ರಾಮ ದೇವರೊಡನೆ ಮಾತನಾಡುತ್ತಾರೆ, ಹನುಮಂತ ದೇವರ ದರ್ಶನ ಪಡೆದಿದ್ದಾರೆ ಎಂದು ಸುತ್ತಲಿನ ಜನ ಅವರ ಹತ್ತಿರ ತಮ್ಮ ಕಷ್ಟಗಳನ್ನು ಹಂಚಿಕೊಳ್ಳಲು ಬರುತ್ತಿದ್ದರು. ನಮಗೆ ಪ್ರತಿ ದಿನವೂ ಹೊಸ ಜನ, ಹೊಸ ವಿಷಯ ತಿಳಿಯುತ್ತಿತ್ತು, ಇನ್ನೊಂದು ಲೇಖನದಲ್ಲಿ ಅಲ್ಲಿ ಕಂಡ ವಿಷಯ, ಸಂಗತಿಗಳ ಬಗ್ಗೆ ಬರೆಯಲು ಪ್ರಯತ್ನಿಸುತ್ತೇನೆ. ಅವರ ಸರಳ ಜೀವನ, ಸದಾ ನಗು, ಯಾವುದೇ ಒಂದು ವಸ್ತು/ವಿಷಯದ ಮೇಲೆ ಅಸೆ ಇರದೇ ಜೀವಿಸುದು ನೋಡಿ ಒಂದು ದಿನ ತಡೆಯಲಾರದೆ ಕೇಳಿದೆ – “ನಿಮ್ಮ ಬಗ್ಗೆ, ನಿಮ್ಮ ವಿಚಾರ ಹೆಚ್ಚಿನ ಜನರಿಗೆ ತಲುಪಿಸಲು ನಿಮಗೆ ಇಚ್ಛೆ ಇಲ್ಲವೇ? ಆಶ್ರಮ ನೀವು ಇನ್ನೂ ಬೆಳಸಬಹುದಲ್ಲವೇ?”. ಅದಕ್ಕೆ ಅವರು ಅಂದದ್ದು, ನನಗೆ ಬಾಹ್ಯ ಜಗತ್ತು ಬೇಕಿಲ್ಲ, ನನ್ನ ಜಗತ್ತು ನನ್ನ ಅಂತರಾತ್ಮದಲ್ಲಿ ಇದೆ ಮತ್ತು ಅದರಲ್ಲಿ ನಾನು ಸಂತೋಷದಿಂದ ಇದ್ದೇನೆ. ನಿಜಕ್ಕೂ ಅವರಿಗೆ ಬಾಹ್ಯ ಕಾಣುತ್ತಿರಲಿಲ್ಲ, ಅಲ್ಲಿ ನನ್ನನ್ನು ಹೆದರಿಸುವ ಹಾವು, ಕತ್ತಲು, ನಿಶ್ಯಬ್ದ ಅವರಿಗೆ ಎಂದೂ ಕಾಣುತ್ತಿರಲಿಲ್ಲ.
ಇಷ್ಟೊಂದು ವಿಷಯ ಸಾವಿನ ಬಗ್ಗೆ ಬರೆದ ಕಾರಣ ಜನಕ್ಕೆ ಸಾವಿಲ್ಲದೆ ಬದುಕುವ, ಸಾವನ್ನು ಗೆಲ್ಲುವ ಹುಚ್ಚು… ಅವರ ಬಾಹ್ಯ ದೇಹ, ಹೆಸರು ಇಲ್ಲಿ ಶಾಶ್ವತವಾಗಿ ಉಳಿಸಲು ನಡೆಸುವ ಪ್ರಯತ್ನವೇ ಅಮರತ್ವ ಸಾಧನೆ ಅನಿಸುತ್ತದೆ. ನಾಲ್ಕು ಯುಗಗಳ ಬದುಕಿನ ಕೊನೆಯ ಯುಗ “ಕಲಿ” ಯುಗದಲ್ಲಿ ಎಲ್ಲವೂ ನಾಶವಾಗುವದರ ಬಗ್ಗೆ ಭವಿಷ್ಯದ ಹೇಳಿಕೆಗಳ ನಡುವೆ ಚಿರಂಜೀವಿ ಆಗಿರಲು ಸಾಧ್ಯವೇ? ನಮ್ಮ ಜೀವನದ ಶಿಲ್ಪಿ ನಾವೇ. ಸಾವು ಮತ್ತು ಜನನವು ಜೀವನದ ಎರಡು ಘಟನೆಗಳು ಮಾತ್ರ. ಭಕ್ತ ಕಂಬಾರ ಚಿತ್ರದ ಒಂದು ಗೀತೆಯಲ್ಲಿ ಹೇಳಿದಂತೆ
“ಉಸಿರಾಡುವ ತನಕ, ನಾನು ನನ್ನದೆಂಬ ಮಮಕಾರ,
ನಿಂತ ಮರುಘಳಿಗೆ, ಮಸಣವೇ ಸಂಸ್ಕಾರ,
ಮಣ್ಣಲಿ ಬೆರೆತು, ಮೆಲ್ಲಗೆ ಕೊಳೆತು,
ಮುಗಿಯುವ ದೇಹಕೆ ವ್ಯಾಮೋಹವೇಕೆ…”
ದೇವರ ಆಟ ಬಲ್ಲವರಾರೂ, ಎಂಬಂತೆ ಸಾವಿನ ಆಟವೂ ವಿಚಿತ್ರ… ಅಭಿಮನ್ಯು ಮತ್ತು ಉತ್ತರೆಯ ಮಗ ಪರೀಕ್ಷಿತ ರಾಜನ ಕಥೆ ಎಲ್ಲರಿಗೂ ಗೊತ್ತಿರಬಹುದು. ಮಹಾಭಾರತದ ಯುದ್ಧದ ಕೊನೆಯಲ್ಲಿ ಅಶ್ವಥಾಮ ಬ್ರಹ್ಮಾಸ್ತ್ರ ಬಿಟ್ಟು ಉತ್ತರೆಯ ಗರ್ಭ ಭೇದಿಸಿ, ಪಾಂಡವರ ವಂಶ ನಾಶ ಮಾಡಲು ಪ್ರಯತ್ನಿಸುತ್ತಾನೆ. ಬ್ರಹ್ಮಾಸ್ತ್ರ ತಡೆದು ಗರ್ಭದಲ್ಲಿ ಬೆಳೆಯುತ್ತಿರುವ ಮಗುವನ್ನು ಶ್ರೀ ಕೃಷ್ಣ ಉಳಿಸುತ್ತಾನೆ… ಇಲ್ಲಿ ಪರೀಕ್ಷಿತ ಸಾವನ್ನು ಗೆಲ್ಲುತ್ತಾನೆ. ಮುಂದೆ ಋಷಿ ಶಮಿಕಾ ಅವರನ್ನು ಅವಮಾನಿಸಿ ಶಾಪಗ್ರಸ್ಥನಾಗುತ್ತಾನೆ, ಶಾಪದಿಂದ ತಪ್ಪಿಸಿಕೊಳ್ಳಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲ ಆಗುತ್ತದೆ, ಹಣ್ಣಿನ ನಡುವೆ ನುಸುಳಿ ಕುಳಿತ ತಕ್ಷಕ ಸರ್ಪ ಪರೀಕ್ಷಿತ ರಾಜನನ್ನು ಕಚ್ಚಿ ಅವನ ಸಾವಿಗೆ ಕಾರಣ ಆಗುತ್ತಾನೆ. ಹುಟ್ಟುವ ಮೊದಲು ಸಾವನ್ನು ಗೆದ್ದ ಪರೀಕ್ಷಿತ, ಮುಂದೆ ಪ್ರಯತ್ನ ಪಟ್ಟರೂ ಸಾವನ್ನು ಗೆಲ್ಲಲು ಸಾಧ್ಯ ಆಗುವದಿಲ್ಲ.
ಸಾವು ಜೀವನದ ಕೊನೆಯ ಆದೇಶ ಆದರೆ, ಚಿರಂಜೀವಿ ಪದಕ್ಕೆ ಅರ್ಥ ಇಲ್ಲವೇ?
ನಮ್ಮ ಪೌರಾಣಿಕ ವ್ಯಕ್ತಿಗಳಾದ ಅಶ್ವತ್ಥಾಮ, ಬಲಿ ಚಕ್ರವರ್ತಿ, ವೇದವ್ಯಾಸರು, ಹನುಮಾನ್, ವಿಭೀಷಣ, ಕೃಪಾಚಾರ್ಯರು, ಮಾರ್ಕಂಡೇಯ ಮತ್ತು ಪರಶುರಾಮ ಇವರನ್ನು ಅಷ್ಟ ಚಿರಂಜೀವಿಗಳು ಎಂದು ಕರೆಯುತ್ತಾರೆ. “Land of thousand names ” ಎಂದೇ ಪ್ರಸಿದ್ಧಿ ಪಡೆದ ಸ್ಥಳ ಶಂಬಾಲ , ಇದು ಹಿಮಾಲಯದಲ್ಲಿ ಇದೆ ಎಂದು ಹಿಂದು ಮತ್ತು ಬೌದ್ಧ ಧರ್ಮದ ನಂಬಿಕೆ. ಇದನ್ನು ಹುಡುಕಲು ವಿವಿಧ ದೇಶದ ಶೋಧಕರು ಪ್ರಯತ್ನ ಪಟ್ಟಿದ್ದಾರೆ. ನಮ್ಮ ಅಷ್ಟ ಚಿರಂಜೀವಿಗಳು ಶಂಬಾಲದಲ್ಲಿ ಇದ್ದಾರೆ ಮತ್ತು ವಿಷ್ಣುವಿನ ಹತ್ತನೇ ಅವತಾರ ಕಲ್ಕಿಯ ಆಗಮನಕ್ಕೆ ಕಾಯುತ್ತಿದ್ದಾರೆ ಎಂದು ಪ್ರತೀತಿ.
ಶಂಬಾಲ ಅಥವಾ ಸಹಸ್ರಾರ ಚಕ್ರ ಸಿದ್ದಿ ಸಾಧಕರು ಅನುಭವಿಸಬಲ್ಲರೇನೋ, ಅಂತಹ ಸಾಧಕರು ಚಿರಂಜೀವಿ ಆಗಬಹುದೇನೋ?
ಚಿರಂಜೀವಿ ಆಗಲು ಸಾಧ್ಯವಾಗದಿದ್ದರೆ; ಛಿ! ರಮ್ ಜೀವಿ ಆಗಬಹುದು…
ನನ್ನಂತಹ ಸಾಮಾನ್ಯರಿಗೆ ಸಾವನ್ನು ಸರಳವಾಗಿ ಹೇಳುವದಾದರೆ – “kicked the bucket “…ಪುರಂದರ ದಾಸರ ಕೀರ್ತನೆಯ ಸಾಲುಗಳೇ ಕೊನೆಯ ಅನುಭವ,
“ಒಂಬತ್ತು ಬಾಗಿಲ ಮನೆಯಲ್ಲಿ, ತುಂಬಿದ ಸಂದಣಿ ಇರಲು
ಕಂಬ ಮುರಿದು ಡಿಂಬ ಬಿದ್ದು, ಅಂಬರಕ್ಕೆ ಹಾರಿತಯ್ಯೋ
ರಾಮ, ರಾಮ
ಗಿಳಿಯು ಪಂಜರದೊಳಿಲ್ಲ”
Beautifully narrated and woven into…Good work Pramod.
LikeLike