ಫೋಟೋ ಕವನ ಸಂಚಿಕೆ ೨

ಹನಿಗಳು ಮತ್ತು ಹಾದಿಗಳು

ಕಾವ್ಯ ಕಟ್ಟುವ ಕೆಲಸ ಬಹಳ ಮೌಲಿಕವಾದದ್ದು. ಕವಿತೆಗಳು  ಏಕಾಂತದ ಕವಿತೆಗಳಾಗಿರಬಹುದು, ಲೋಕಾಂತದ ಕವಿತೆಗಳಾಗಿರಬಹುದು.  ಭಾವನಾತ್ಮಕ,  ಉತ್ಪ್ರೇಕ್ಷಿತ, ವೈಚಾರಿಕ, ವರ್ಣನಾತ್ಮಕ, ಪ್ರಾಮಾಣಿಕ ಯಾವುದೂ ಆಗಿರಬಹುದು. ಬಂಡಾಯ, ಖಂಡನೆ, ನೋವು, ವಿಡಂಬನೆ, ಹಾಸ್ಯ , ಶೃಂಗಾರ, ಪ್ರೀತಿ ವಿರಹ, ವಿದಾಯ, ವೇದನೆ, ಭಕ್ತಿ, ಬಿನ್ನಹದ ಕೇಂದ್ರಗಳನ್ನು ಹೊಂದಿರಬಹುದು. ಹೋಲಿಕೆ, ವೈರುಧ್ಯಗಳ ಹಾದಿಯನ್ನು ತುಳಿಯಬಹುದು. ಓದುಗರಿಗೆ ಲೌಕಿಕ, ಅಲೌಕಿದ ಅನುಭಗಳನ್ನು ನೀಡಬಲ್ಲದು.

ಕಾವ್ಯ ಓದುಗರನ್ನು ಮುದಗೊಳಿಸಬಲ್ಲವು. ಚಿಂತನೆಗೆ ತಳ್ಳಬಹುದು. ಭಾವ ಪರವಶತೆಯ ಅನುಭವ
ನೀಡಬಲ್ಲವು, ಸುಖಿಸುವಂತೆ ಮಾಡಬಲ್ಲವು, ನಗಿಸಬಲ್ಲವು, ಅಳಿಸಬಲ್ಲವು, ಅಚ್ಚರಿಗೆ ತಳ್ಳಬಹುದು, ಎಚ್ಚರಿಕೆಯನ್ನು ನೀಡಬಲ್ಲವು. ಜೀವನ ಪ್ರೀತಿಯನ್ನು ಹೆಚ್ಚಿಸಬಲ್ಲವು. ಕಾವ್ಯಕ್ಕೆ ಇರುವ ಹರವು ವಿಸ್ತಾರವಾದದ್ದು.ಅವುಗಳು ಹುಟ್ಟುವ ಸಮಯವನ್ನು ಕವಿ ಸಮಯ ಎನ್ನುತ್ತಾರೆ.

ವಾರದ ಛಾಯಾಗ್ರಾಹಕ ರಾಮಶರಣ ಲಕ್ಷ್ಮೀನಾರಾಯಣ ಮತ್ತು ಕವಿ ಕೇಶವ ಕುಲಕರ್ಣಿ. ಕವಿತ್ವವನ್ನು ಉದ್ದೀಪನಗೊಳಿಸಿ ಒರೆಗೆ ಹಚ್ಚಿರುವುದು  ರಾಮಶರಣರ  ಕ್ಯಾಮರಾ ಹಿಂದಿನ ಕಣ್ಣುಗಳು.  ಕಣ್ಣಿಗೆ ಕಂಡದ್ದನ್ನು ಹೀಗೇ ಸೆರೆಹಿಡಿಯಬೇಕೆನ್ನುವುದು. ಫೋಟಾಗ್ರಫಿ ಪ್ರಿಯರ ಆಸೆ.  ಅಂತಹ ಕ್ಷಣವನ್ನು ಸೆರೆಹಿಡಿದಾಗಿನ ಅದ್ಭುತ  ರೋಮಾಂಚನ ಅವರಿಗೆ ಕಾವ್ಯವನ್ನು ಬರೆದಷ್ಟೇ ಸಂತೋಷ ನೀಡಬಲ್ಲುದು.  ನೋಡಿದಾಗೆಲ್ಲ ಮತ್ತೆ,ಮತ್ತೆ ಅವರಲ್ಲಿ ಸಂತಸವನ್ನು ಹೆಚ್ಚಿಸಿ, ಹೆಮ್ಮೆಯ ಭಾವವನ್ನು ಮೂಡಿಸಬಲ್ಲವು.

ಛಾಯಾಚಿತ್ರ ತೆಗೆಯುವವರು ಒಂದು ಚಿತ್ರದ ಮೂಲಕ ಕೇವಲ ಒಂದು ದೃಶ್ಯವನ್ನು ಒದಗಿಸಿದರು,
ಅದನ್ನು ಕವಿಗಳ ಮುಂದೆ ಹಿಡಿದಾಗ ಕವಿಗೆ ಕಾಣುವ ನೋಟಗಳು ಅನೇಕ. ವಾರದ ವಿಶೇಷ ಕೂಡ
ಅದೇ.

 ರಾಮಶರಣರ ಅಚ್ಚರಿ ತರುವ ನಿಖರತೆ, ನಿಚ್ಚಳತೆ,  ತಾಂತ್ರಿಕತೆ, ಸೌಂದರ್ಯ ಮತ್ತು ಭಾವಗಳನ್ನು ತುಂಬಿದ  ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಅವೇ ಚಿತ್ರಗಳು ಕೇಶವರಿಗೆ ಕವಿ ಸಮಯವನ್ನು ಒದಗಿಸಿವೆ.  ಕೆಲವು ಚಿತ್ರಗಳಂತೂ ಕವಿ ಮನಸ್ಸಿನಲ್ಲಿ ಹಲವು ಭಾವಗಳನ್ನು ಹೊಮ್ಮಿಸಲು ಸಮರ್ಥವಾಗಿವೆ.

ರಾಮಶರಣ್‌ ಒಂದೇ ವಿಷಯಕ್ಕೆ ಸಂಬಂಧಿಸಿದಂತ ಹಲವು ಚಿತ್ರಗಳನ್ನು ಒದಗಿಸಿ ಸರಣಿಗೆ ಒಂದು
ಶೀರ್ಷಿಕೆಯನ್ನು ನೀಡಿದ್ದರು. ಅದನ್ನೇ ಇಲ್ಲಿ ನೀಡಿದ್ದೇನೆ. ಕೇಶವ್‌ ಸರಣಿಯ ಒಂದು ಅಥವಾ ಹಲವು ಚಿತ್ರಗಳನ್ನು ಆಯ್ದು ಕವನಗಳನ್ನು ರಚಿಸಿದ್ದಾರೆ. ಇನ್ನೂ ವಿಶೇಷವೆಂದರೆ ತಾವೇ ಪೀಠಿಕೆಯ ಕಿರು ಗವನಗಳನ್ನು ಬರೆಯುತ್ತ ಒಂದು ಚಿತ್ರ ಹೇಗಿರಬೇಕೆಂದು ಹೇಳುತ್ತ ಜೊತೆಗೆ ಚಿತ್ರಕ್ಕೆ ಬರೆದ ಕವನದಲ್ಲಿ ಏನಿರಬಾರದೆಂದೂ ವಿವರಿಸಿದ್ದಾರೆ. ಅದು ಅವರ ಕುಶಲಮತಿ ಪ್ರತಿಭೆಗೆ ಸಾಕ್ಷಿಯಾಗಿದೆ.

ಓದಿರಿ. ಚಿತ್ರಗಳನ್ನು ಕೂಲಂಕುಶವಾಗಿ ಅವಲೋಕಿಸಿ. ಮತ್ತೆ ಓದರಿ. ಮರೆಯದೆ ಕಮೆಂಟಿಸಿ- ಸಂ


ಪೀಠಿಕೆಯ ಕಿರುಗವನಗಳು:

ಒಂದು ಹೈಕುವನ್ನಾದರೂ

ಬರೆಸಿಕೊಳ್ಳದ ಫೋಟೊ

ಫೋಟೋನೇ ಅಲ್ಲ

ಈ ಫೋಟೋದ ಸಂಯೋಜನೆ ಹೇಗೆ

ಎಷ್ಟು ISO

ಎಷ್ಟು ದ್ಯುತಿರಂಧ್ರ

ಎಷ್ಟು ನಾಭಿದೂರ

ಎಷ್ಟು ಸಂಸ್ಕರಣ

ಎಂದು ವಿವರಣೆ ಕೇಳಿದ ದಿನ

ಫೋಟೋದೊಳಗಿನ ಕವಿತೆ

ಸತ್ತುಹೋಗುತ್ತದೆ

ʼಹನಿಗಳು ಸರ್‌ ಹನಿಗಳುʼ ಸರಣಿ: `ಇಬ್ಬನಿಗಳು`

ಜಗದ ಕೊಳೆಯ
ತೊಳೆಯೆ
ಇಳೆಗೆ ಬಂದೇ ಏನೇ
ಇಬ್ಬನಿ?
ರಾತ್ರಿಯೆಲ್ಲ ಬಿಕ್ಕಳಿಸಿ
ಜಾರದೇ ಉಳಿದ ಕಂಬನಿ
ಇಬ್ಬನಿ
ರಾತ್ರಿಯೆಲ್ಲ
ಅಪ್ಪಿತಬ್ಬಿ
ಅಪ್ಪಿತಪ್ಪಿ
ಉಳಿದ ಮುತ್ತಿನ ಹನಿ
ಇಬ್ಬನಿ
ಮುಂಜಾವಿನ ಕೊರಳಿಗೆ
ವಜ್ರದ ಹರಳು
ಇಬ್ಬನಿ
ನೇಸರನ ಸ್ವಾಗತಕೆ
ಥಳಿ ಹೊಡೆದ ನೀರು
ಇಬ್ಬನಿ

ರಾತ್ರಿಯ ಸೆಕೆಗೆ
ಮೂಡಿದ ಬೆವರು
ಇಬ್ಬನಿ
ಪ್ರೇಮಿಯ ಕೂದಲಿನ
ಅಂಚಿಗೆ ಉಳಿದ ಹನಿ
ಇಬ್ಬನಿ
ಕಣ್ಣು ಬಿಟ್ಟ ಮಗು
ಅಮ್ಮನನ್ನು ಕಂಡ ಖುಷಿಯಲ್ಲಿ
ಮೂಡಿದ ಕಣ್ಣಂಚಿನ ಪಸೆ
ಇಬ್ಬನಿ
ಮುಂಜಾವಿನೆದೆಯಿಂದ
    ದು
  ರಿ
ಬೀಳುವ ಹನಿ
ಇಬ್ಬನಿ
೧೦
ಮತ್ತೆ ಬೆಳಗಾಯಿತು
ಮತ್ತೆ ಹೊಸಜೀವ ಬಂದಿತು
ನಿಸರ್ಗದ ಆನಂದ ಬಾಷ್ಪ
ಇಬ್ಬನಿ

೧೧
ರಾತ್ರಿ ಹೊತ್ತು
ಯಾವುದೋ ಕೀಟ ಮಾಡಿದ ಗಾಯಕ್ಕೆ
ಎಲೆ ಮೇಲೆ ಮೂಡಿದ ಗುಳ್ಳೆ
ಇಬ್ಬನಿ
೧೨
ಅನಂತದಲಿ ಬಿಂದು
ಬಿಂದುವಿನಲಿ ಅನಂತ
ಒಂದು ಮಂಜಿನ ಹನಿ
ಯೊಳಗೊಂದು ಬ್ರಹ್ಮಾಂಡ
೧೩
ಎಲೆಯ ಮೇಲೆ
ಮುಂಜಾವಿನ
ಮುತ್ತಿನ ಗುರುತು
ಸ್ವಲ್ಪ ಹೊತ್ತು
ಹಾಗೇ ಇರಲಿ ಬಿಡು
೧೪
ಪದಗಳಲ್ಲಿ
ಹುಡುಕಿದರೂ ಸಿಗದ ಕವಿತೆ
ಪುಟ್ಟ ಹುಲ್ಲಿನೆಳೆಯ ಮೇಲೆ
ಮುಂಜಾವಿನ ಮಂಜಿನೊಳಗೆ
ನಗುತ್ತ ಕಣ್ಬಿಡುತ್ತಿತ್ತು

*****

ʼಹೋದಲೆಲ್ಲ ಹಾದಿ ʼ ಸರಣಿ: 

೧. ಬೆಂಚಿನ ಸ್ವಗತ

ಮುಂಜಾವಿನ ಬಾಗಿಲು ಅದೇ ತೆರೆದಿತ್ತು
ಅರ್ಲಿಮಾರ್ನಿಂಗ್ ವಾಕಿನ ಮಧ್ಯವಿರಾಮಕ್ಕೆ
ಬಂದು ನನ್ನ ಮೇಲೆ ಕೂತರು ಇಬ್ಬರು
ವಯಸ್ಸು ಎಪ್ಪತ್ತೋ ಎಂಬತ್ತೋ
ಒಬ್ಬರು ತಮ್ಮ ತೀರಿಹೋದ ಹೆಂಡತಿಯನ್ನು
ಪರದೇಶಕ್ಕೆ ಹೋದ ಮಕ್ಕಳನ್ನು ನೆನಯುತ್ತ
‘ನನ್ನ ಬದುಕು ಈ ಬೆಂಚಿನಂತೆ ಒಂಟಿ,’ ಎಂದು ಹಲುಬಿದರು.
ಇನ್ನೊಬ್ಬರು ಸಮಾಧಾನ ಮಾಡುತ್ತಿದ್ದರು
ಕಾಲೇಜಿಗೆ ಚಕ್ಕರ್
ನನ್ನ ಮೇಲೆ ಹಾಜರ್
ಕಿಲಿಕಿಲಿ ನಗು
ಚಿಲಿಪಿಲಿ ಮಾತು
ಕದ್ದು ಕದ್ದು ಮುತ್ತು
ಹುಸಿಮುನಿಸು
ಅಳುನಟನೆ
ತುಂಟನಗು
‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ?’ ಎಂದಳು
‘ಈ ಬೆಂಚು ಇಲ್ಲಿರುವವರೆಗೂ,’ ಎಂದ
ಅವನ ಕೆನ್ನೆಗೊಂದು ಮುತ್ತು ಸಿಕ್ಕಿತು
ಲಂಚ್ ಬ್ರೇಕಿನಲ್ಲಿ ಹತ್ತಿರದ ಆಫೀಸಿನಿಂದ ಬಂದು
ಡಬ್ಬಿ ಬಿಚ್ಚಿದರು; ಅವನ ಡಬ್ಬ ಇವನು
ಇವನ ಡಬ್ಬ ಅವಳು ಹಂಚಿಕೊಂಡರು
ಇವನ ಹೆಂಡತಿ ಕೊಡುವ ಕಾಟ ಅವಳು ಕೇಳಿಸಿಕೊಂಡಳು
ಅವಳ ಗಂಡ ಕೊಡುವ ಕಷ್ಟ ಇವನು ಕೇಳಿಸಿಕೊಂಡ
‘ನಮ್ಮ ಬದುಕು ಈ ಬೆಂಚಿನಂತೆ
ಎಲ್ಲೂ ಹೋಗುವುದಿಲ್ಲ, ಏನೂ ಆಗುವುದಿಲ್ಲ,’ ಎಂದರು
ಮತ್ತೆ ಆಫೀಸಿಗೆ ಹೋಗುವ ಸಮಯವಾಯಿತು
ಈಗ ರಾತ್ರಿಯ ನೀರವಮೌನದಲ್ಲಿ
ಬೀದಿದೀಪಗಳ ಮಬ್ಬುಬೆಳಕಲ್ಲಿ
ಒಂಟಿಯಾಗಿ
ದಿನದ ನೂರಾರು ಕತೆಗಳ ನೆನೆಯುತ್ತ
ದಿನದ ಸಾವಿರಾರು ಕವನಗಳ ಕನವರಿಸುತ್ತ
ನಿದ್ದೆ ಬರದೇ
ಕೂತೇ ಇದ್ದೇನೆ

೨. ಎಲ್ಲಿ ಹೋಗುವಿರಿ ಹೇಳಿ ಹಾದಿಗಳೇ

ಕಲ್ಲು ಮುಳ್ಳಿನ ಹಾದಿಯ
ನೆನಪುಗಳು ಕಳೆದಿಲ್ಲ
ಬಿದ್ದು ಕಲ್ಲಿನ ಮೇಲಾದ ಗಾಯದ ಗುರುತುಗಳು
ಚುಚ್ಚಿಸಿಕೊಂಡ ಅಪಮಾನಗಳು

ಇಲ್ಲಿ ಎಲ್ಲ ಒಳ್ಳೆಯವರು
ಎಂಬ ನಂಬಿಕೆಯಲ್ಲಿ
ಹಲ್ಲು ಕೊರೆದ ಹಾದಿಯಲ್ಲಿ
ಜೊತೆಗೆ ಬಂದವರು
ನನಗಿಂತ ಸ್ವಲ್ಪ ಹೆಚ್ಚೇ ನೋವುಂಡವರು

ಹೂವಿನ ದಾರಿಯ ಮೇಲೆ
ನಡೆಸುವೆ ಎಂದು ಭರವಸೆ ಕೊಟ್ಟವರು
ಹೂವಿನ ಜೊತೆ ಮುಳ್ಳೂ ಇರುತ್ತದೆ
ಎಂದು ಹೇಳುವುದನ್ನು ಮರೆತರು
ನನಗೆ ಅರಿವಾಗುವಷ್ಟರಲ್ಲಿ ಅವರಿದ್ದೂ ಇರಲಿಲ್ಲ

ಅಲ್ಲಿಯೂ ಸಲ್ಲಲಿಲ್ಲ
ಇಲ್ಲಿಗೂ ಒಗ್ಗಿಕೊಳ್ಳಲಿಲ್ಲ
ದೇಶಬಿಟ್ಟ ಪರದೇಸಿ
ಕಲ್ಲಿಗಿಂತ ಕಲ್ಲಾಗಿ
ಪರಸಿಕಲ್ಲಿನ ಹಾದಿಯ ಮೇಲೆ
ಅಂಗಡಿ ಅಂಗಡಿಗಳಲ್ಲಿ
ನಡೆವ ಜನರ ಮುಖಗಳಲ್ಲಿ
ಸುಖ ಸಂತೋಷ ಹುಡುಕುತ್ತೇನೆ
ಹಾದಿಹೋಕ ನಾನು
ಹಾದಿಹೋಕನಾಗಿಯೇ ಉಳಿದಿದ್ದೇನೆ

ವಾರಾಂತ್ಯಕ್ಕೆ ಬಿಡುವು ಹುಡುಕುತ್ತೇನೆ
ಹುಲ್ಲುಹಾಸಿನ ಹಾದಿಯ
ಫೋಟೋ ತೆಗೆದು
ಫೋನಿನ ವಾಲ್-ಪೇಪರ್ ಮಾಡಿಕೊಳ್ಳುತ್ತೇನೆ

ಹೈವೇಯ ಸೈನ್-ಬೋರ್ಡುಗಳು
ಈಗ ನನ್ನ ಮಿತ್ರರು
ನನ್ನ ಕಾರಿನ ದಾರಿ ಹೇಳಿಕೊಡುವವರು
ಹಗಲು ಸಂಜೆ ಅದೇ ಹಾದಿ
ಕಾರಿಗಿಂತ ಯಾಂತ್ರಿಕವಾಗಿ ಬದುಕು ನಡೆಸುತ್ತೇನೆ
*
ಕಾಲ ಮಾಗುತಿದೆ
ದಾರಿ ಸವೆಯುತಿದೆ
ತಾಣದ ಮರೀಚಿಕೆ
ಹಾಗೇ ಉಳಿದಿದೆ
ಹಾಗೇ ಉಳಿದರೇ ಬದುಕೆ?

2 thoughts on “ಫೋಟೋ ಕವನ ಸಂಚಿಕೆ ೨

  1. ಅನಿವಾಸಿ ಯು ಈ ಫೋಟೋ ಸಂಚಿಕೆ
    ರಸದೌತಣದಂತಿದೆ.
    ರಾಮಶರಣ್ ರ ಅದ್ಭುತ ಛಾಯಾಚಿತ್ರ ಗಳು ಕಣ್ಣಿಗೆ ಹಬ್ಬ ತಂದಿದೆ.
    ಅದರಿಂದಾಗಿ ಹರಿದಿರುವ ಕೇಶವ ಕುಲಕರ್ಣಿಯವರ ಹನಿ ಕವಿತೆಗಳು ಜೀವನ ಪ್ರೀತಿಯನ್ನು ಹೆಚ್ಚಿಸುವಂತಿವೆ.
    ಪುಟ್ಟ ಕವನಗಳಲ್ಲಿ ಬೆಟ್ಟದಷ್ಟು ಬೆರಗಿನ ಸೊಬಗಿದೆ.
    ಈ ಸಂಚಿಕೆ ಒಂದು ಗುಕ್ಕಿನ ಅತೃಪ್ತಿಯನ್ನು ಉಳಿಸದೆ, ಚಿತ್ರ -ಕಾವ್ಯ ರಸಧಾರೆಯ ಸವಿಯನ್ನು ಆಸ್ವಾದಿಸುತ್ತ, ಆಳ ರುಚಿಯನ್ನು ಅನುಭವಿಸಿ ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡಿದೆ.
    ‘ಆಹಾ…ಹೌದು,ಹೌದು’ ಎನಿಸುವ ತೃಪ್ತಿ ಮತ್ತು ಮೆಚ್ಚುಗೆಗಳನ್ನು ಮೂಡಿಸುತ್ತವೆ😊👌👌👏👏.

    Like

  2. ಐಸೊ(ISO), ಐ ಎಸ್ ಓ(ISO), ಐಸಾ
    ಫೋಟೋ ಕವನ ಸಂಚಿಕೆ ೨ ಎನ್ನುವ ಹೆಸರಿನಈ ಸಂಚಿಕೆ ಹಲವಾರು ಕಾರಣಗಳಿಂದ ಸಂಗ್ರಹಣೀಯ ’ಕಲೆಕ್ಟರ್ಸ್ ಐಟೆಮ್’ ಆಗಿದೆ.
    ಮೊದಲನೆಯದಾಗಿ ಪ್ರೇಮಲತಾ ಅವರು ಬರೆದ ಸಂಪಾದಕೀಯವೇ ಫೋಟೋ ಮತ್ತು ಕವನಗಳ ವ್ಯುತ್ಪತ್ತಿ, ಸಂಬಂಧಗಳ ಬಗ್ಗೆ ಒಂದು ನಿಬಂಧವನ್ನೇ ಬರೆದಿದ್ದಾರೆ. ಛಾಯಾಚಿತ್ರದಲ್ಲಿ ತಮಗೂ ಆಸ್ಥೆಯಿದ್ದು ಸ್ವತಃ ಒಳ್ಳೆಯ ಕವಯಿತ್ರಿಯೆಂದ ಮೇಲೆ ಅವರ ಮಾತುಗಳು ಘನವಾದವು. ಡಾ ಪ್ರಸಾದರು ಅನಾರೋಗ್ಯದಿಂದ ಎದ್ದು ಚೇತರಿಸಿಕೊಂಡು ಈ ಸಂಚಿಕೆಯ ಮೇಲೆ ಸುದೀರ್ಘ ಕಮೆಂಟ್ ಮಾಡಲು ಪ್ರೇರಿಸಿದೆಯೆಂದ ಮೇಲೆ ಕೇಳಬೇಕೆ?
    ಎರಡನೆಯದಾಗಿ, ಆಯ್ದ ಒಂದಕ್ಕಿಂತ ಒಂದು ಶ್ರೇಷ್ಠ ರಾಮ್ ಶರಣ್ ಅವರ ಫೋಟೋಗಳು ಮತ್ತು ಅವರೇ ನೀಡಿದ ಶೀರ್ಷಿಕೆ, ಮೊದಲ ಚಿತ್ರದಿಂದಲೇ ವಿಸ್ತರಿಸುವ ಹನಿಯ ತರಂಗಗಳನ್ನೆಬ್ಬಿಸಿವೆ. ಎಲ್ಲಿಂದ ಬಂತು ನೀರನ್ನು ಹೊತ್ತ ಆ ಕಪ್ಪು ಧಾರಕ? (ಬಚ್ಚಲು ಮನೆ, ಅಡಿಗೆ ಮನೆ, ಕೊಟ್ಟಿಲು? ಊಹಿಸಲಾರೆ). ಆದರೆ ಆ ಮ್ಯಾಕ್ರೋ ಫೋಟೋ ಚೆನ್ನಾಗಿ ಕೆಲಸ ಮಾಡಿದೆ. ಕೇಶವರ ಕಿರುಗವನಕ್ಕೆ ಒಳ್ಳೆಯ ಪೀಠಿಕೆ. ಅವರ ಮೊದಲ ಹನಿಗವನದಲ್ಲಿ ಹೇಳಿದ್ದನ್ನು ಇನ್ನೊಂದು ರೀತಿಯಲ್ಲಿ ಹೇಳುವದಾದರೆ:
    ಒಂದೊಂದು
    ಫೋಟೋದಲ್ಲೂ
    ಹೈಕು ಮಳೆ!
    ಫೊಟೋ ಮತ್ತು ಕವನ – ಎರಡರದೂ ಉಗಮ ಪ್ರೇಮಲತಾ ಅವರು ಹೇಳುವಂತೆ, -ಮತ್ತು ಹಿಂದೊಮ್ಮೆ ಮುರಳಿಯವರು ಸಹ ಕಮೆಂಟಿಸಿದಂತೆ- ಆ ’ಕವಿಸಮಯ’, ಕ್ಷಣಾರ್ಧದಲ್ಲಿ. ಅವರವರ ಪ್ರತಿಭೆ, ಅನುಭವಕ್ಕನುಗುಣವಾಗಿ ಕವನವೇ ಆಗಲಿ, ಚಿತ್ರವೇ ಆಗಲಿ ಅದನ್ನು ರೂಪಿಸಿ ಅಂತ್ಯ ರೂಪಕ್ಕೆ ತರುತ್ತವೆ. ಅದರಲ್ಲಿ ತಂತಮ್ಮ ಕಲಾರಸಸ್ವಾದವನ್ನು ಉಣಿಸುತ್ತಾರೆ. ಅವರ ತಲೆಯಲ್ಲಿ ಐಸೋ (ISO), ಅಪರ್ಚರ್, ಫೋಕಸ್ ಕುಣಿಯುತ್ತಿರುತ್ತವೆ. (ಇಂದು ಮೊದಲ ಸಲ ಆ ಸುಂದರ ಪದ ’ನಾಭಿದೂರ’ focal legth? ವನ್ನು ಕಲಿತೆ. ಅದನ್ನು ಹುಟ್ಟಿಸಿದವನಿಗೆ ಅನಂತ ಪ್ರಣಾಮಗಳು.) ಈ ಫೋಟೋ ಮತ್ತು ಕವನಗಳನ್ನು ಸಂಪಾದಕೀಯದಲ್ಲಿ ಹೇಳಿದಂತೆ ಕೂಲಂಕುಶವಾಗಿ ನೋಡಿದರೆ ಒಂದು ರೀತಿಯಿಂದ ಇವೆರಡೂ complementary. ಒಂದಿರದೆ ಇನ್ನೊಂದು ಅಪೂರ್ಣ ಅನ್ನುವಷ್ಟು! ಹನಿಗವನದ ಪಟು, ಸಾವಿರ ನೀಲುಗಳ ಬ್ರಹ್ಮ, ತಾವು ರಚಿಸಿದ ಹನಿಗವನಗಳ ನೂಲನ್ನು ತಮ್ಮ ನಾಭಿಯಿಂದ ಹೆಣೆದ ಕೇಶವ ಇಬ್ಬನಿಗೆ ಹದಿನಾಲ್ಕು definitions ಕೊಟ್ಟಿದ್ದೊಂದೇ ಈ ಸರಣಿಯ ಸಾರ್ಥ್ಯಕ್ಯಕ್ಕೆ ಸಾಕ್ಷಿ. ಅವರು ಬರೆದ ಎಂಟನೆಯ ಹನಿಯನ್ನು ಸ್ವಲ್ಪ ತಿರುಚಿ ಹೀಗೂ ಓದ ಬಹುದು:
    ”ಕಣ್ಣು ಬಿಟ್ಟ ಮಗುವನ್ನು
    ಅಮ್ಮ ಕಂಡ ಖುಷಿಯಲ್ಲಿ
    ಮೂಡಿದ ಕಣ್ಣಂಚಿನ ಪಸೆ
    ಇಬ್ಬನಿ”
    ಇವುಗಳನ್ನು ಓದುವಾಗ ಮತ್ತೆ ಮತ್ತೆ ಅವರ ನೀಲುಗಳು ನೆನಪಾದವು.
    ’ಹಾದ”ಗಳ ಮೇಲಿನ ಸರಣಿಗಳಲ್ಲಿ ಆ ಬೆಂಚಿನ ಚಿತ್ರ ಮತ್ತು ಕವಿತೆ ಎರಡೂ ಅಷ್ಟೇ ಶಕ್ತಿಶಾಲಿಯಾಗಿವೆ. ಹೊಳೆಯುವ ಬೆಂಚಿನ ಸುತ್ತ ನಿಂತ ದೀಪಗಳ composition ಅದ್ಭುತ. ಕಪ್ಪು-ಬಿಳುಪೇ ಇದಕ್ಕೆ ಸರಿಯಾದ ’ವರ್ಣ’. ಅದೇ ರೀತಿಯಲ್ಲಿ ಇನ್ನುಳಿದ ಹಾದಿಗಳ ಮತ್ತು ಎತ್ತರದ ಅಂಗಡಿಗಳ ನಡುವೆ ಫರಸಿಕಲ್ಲಿನ ಮೇಲೆ ನಡೆದಾಡುವ ಜನರ ಚಿತ್ರಗಳ ಸಂಯೋಜನೆಯಲ್ಲಿ (low angle composition) ನುರಿತ ಫೋಟೋಗ್ರಾಫರರ ಛಾಪು ಕಾಣಿಸುತ್ತದೆ. ಆ ಜನರು ಮ್ಯಾಂಚೆಸ್ಟರ್ ಬಳಿಯ ಚಿತ್ರಗಾರನಾಗಿದ್ದ ಎಲ್ ಎಸ್ ಲೌರಿಯ ’ಕಡ್ಡಿಪೆಟ್ಟಿಗೆ ಮನುಷ್ಯರಂತೆ’ ತೋರಿಸಿದ್ದು ಅವರ ಕೌಶಲ್ಯ. ಇನ್ನು ಕೊನೆಯದಾಗಿ ಆ ರಾತ್ರಿ ಟ್ರಾಫಿಕ್ ಚಿತ್ರಅ: Long exposure ಅಷ್ಟೇ ಅಲ್ಲ,”ಒನ್ ವೇ’ ರೀತಿಯಲ್ಲಿ ಚಲಿಸುವ ವಾಹನಗಳ ದೀಪಗಳನ್ನು ಸೆರೆಹಿಡಿದದ್ದೇ ಈ ಫೋಟೋದ ರಹಸ್ಯ. ಒಂದರ್ಧದಲ್ಲಿ ಮುಂದೆ ಹೊರಟ ಕೆಂಪು ಗೆರೆಗಳು (ಟೇಲ್ ಲೈಟ್ಸ್); ಇನ್ನೊಂದು ಕಡೆ ನಮ್ಮತ್ತ ಬರುವ ಹೆಡ್ ಲೈಟ್ಸ್! ರಸ್ತೆಯ ಮೇಲಿನ STOP sign ಮೇಲೆಯೇ ನಮ್ಮ ಕಣ್ಣುಗಳು ಸಹ ನೋಡುತ್ತ ನಿಂತು ಬಿಡುತ್ತವೆ!
    ನನ್ನ ವಿಶ್ಲೇಷಣೆ ಕೇಶವ ಅವರು ಪ್ರಾರಂಭದಲ್ಲಿ ಕೊಟ್ಟ ಎಚ್ಚರಿಕೆಯಂತೆ ಚಿತ್ರಕವನದೊಳಗಿನ ಕವಿತೆಯನ್ನು ಕೊಂದಿಲ್ಲ ಅಂತ ಅಂದುಕೊಳ್ಳುತ್ತೇನೆ.
    ಇನ್ನು ನನ್ನ ಶೀರ್ಷಿಕೆಯ ಔಚಿತ್ಯ:
    ಇತ್ತಿತ್ತಲಾಗಿ ನಾನು ವಿಡಿಯೋನೇ ಹೆಚ್ಚಾಗಿ ಮಾಡುವದರಿಂದ ಎಸ್ ಎಲ್ ಆರ್ ಕ್ಯಾಮರಾ ಬಿಟ್ಟು ಆಪ್ಪಲ್ ಫೋನಿನ ISO ವನ್ನೇ ಹೆಚ್ಚು ವಾಪರಿಸುತ್ತಿದ್ದೇನೆ.ನಮ್ಮ ಕ್ಯಾಮರಾ-ಕ್ಯಾಮ್ ಕಾರ್ಡರ್ ಕ್ಲಬ್ಬುಗಳಲ್ಲಿ ತಾಂತ್ರಿಕ ವಿಷಯಗಳ ಚರ್ಚೆಯೇ ಹೆಚ್ಚಾಗಿ ಕೇಳಿ ಬರುತ್ತವೆ. ನಮ್ಮ ಕ್ಲಬ್ಬಿನಲ್ಲಿ ಕವಿಗಳು ಒಬ್ಬರೋ ಇಬ್ಬರೋ. ಡಾಕ್ಯುಮೆಂಟರಿ ಮಾಡುವವರೇ ಹೆಚ್ಚು. ನಿಮಗೆ ಫೋಟೋ-ಕವನಗಳನ್ನು ನೋಡಬೇಕಾದರೆ ’ಅನಿವಾಸಿಯಲ್ಲ” ಕಂಡುಬರುವಂತೆ ”ಹೀಗಿರಬೇಕು” -ಜಯಂತ ಕಾಯ್ಕಿಣಿಯವರು ಹಿಂದೆ ವರ್ಣಿಸಿದಂತೆ ದೈಹಿಕ ಶ್ರಮ ಮಾಡುವ ಕೆಲಸಕಾರರು ಕೆಲಸ ಮಾಡುತ್ತ ’ಐಸಾ, ಐಸಾ’ ಅಂತ ಹಾಡಿದಂತೆ: ’ಐಸಾ’ –”ಹೀಗೆ, ಹೀಗೆ!’
    ಈ ಸಂಚಿಕೆ ರಸದೌತಣ, ನಮಗೆಲ್ಲ!
    ಶ್ರೀವತ್ಸ ದೇಸಾಯಿ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.