ಶ್ರೀನಿವಾಸ ಮಹೇಂದ್ರಕರ್ ಅವರ ಎರಡು ಕವಿತೆಗಳು

Shrinivas
ಲೇಖಕರು: ಶ್ರೀನಿವಾಸ ಮಹೇಂದ್ರಕರ್
(ಶ್ರೀನಿವಾಸ ಮಹೇಂದ್ರಕರ್, ಅನಿವಾಸಿ ಲೇಖಕರ ಬಳಗಕ್ಕೆ ಹೊಸ ಸೇರ್ಪಡೆ. ಶ್ರೀನಿವಾಸ ಅವರಿಗೆ ಸ್ವಾಗತ. ಅವರು ಮೂಲತಃ ಕರ್ನಾಟಕದ ಹೃದಯಭಾಗವಾದ ದಾವಣೆಗೆರೆ ಜಿಲ್ಲೆಯ ಹರಿಹರ ತಾಲೂಕಿನವರು. ಲಂಡನ್ನಿಗೆ ವಲಸೆಯಾಗಿ ಸುಮಾರು ಹತ್ತು ವರುಷಗಳಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಂಗಾತಿ ಕಸ್ತೂರಿ ಮತ್ತು ಇಬ್ಬರು ಮಕ್ಕಳು ಹೃಷೀಕ ಮತ್ತು ಉಜ್ವಲರೊಂದಿಗೆ ಇಂಗ್ಲಂಡಿನಲ್ಲಿ ನೆಲೆಸಿದ್ದಾರೆ. ಶಾಲೆಯ ಪ್ರಾಂಶುಪಾಲರ ಸಹವಾಸ ದೋಷದಿಂದ ಕವನಗಳನ್ನು ಓದುವುದು ಮತ್ತೆ ಬರೆಯುವುದು ಹವ್ಯಾಸವಾಯಿತು ಅನ್ನುತ್ತಾರೆ. ಆಗಲೊಮ್ಮೆ ಈಗಲೊಮ್ಮೆ ಈಗಲೂ ಕವನ ಬರೆಯುತ್ತಾರೆ. ಅವರು ಬರೆದ ಎರಡು ಕವನಗಳು ನಿಮ್ಮ ಮುಂದಿವೆ. ಓದಿ, ಆನಂದಿಸಿ, ಕೊಮೆಂಟಿಸಿ – ಸಂ)

ಕೇಳಿದ್ನಾ ನಿಂಗ್ ನಾ ಬಡ್ತಿ

ಬ್ಯಾಡ್ ಬ್ಯಾಡ್ ಅಂದ್ರೂ ಬಡ್ತಿ ಕೊಡ್ತಿ
ತಿಳಿಯೋದ್ ಹ್ಯಾಂಗ್ ನಿನ್ ಧಾಟಿ
ಏನ್ ಮಾಡ್ಲಿ ಬಿಡ್ಲಿ ಸತ್ತಂಗ್ ಮಲಗ್ಲಿ
ತಿರುಗಿಸ್ತಿ ನಿನ್ ರಾಟಿ

ಒಳಗಿದ್ದಾಗ್ ನಾನಿಂಗಿರ್ಲಿಲ್ಲ
ಲೋಕದ್ ಬ್ಯಾನಿ ತಿಳಿದಿರ್ಲಿಲ್ಲ
ನಂಪಾಡ್ಗ್ ನಾನ್ ಆಡ್ಕೊಂಡಿದ್ದೆ
ಬ್ಯಾಡ್ ಬ್ಯಾಡ್ ಅಂದ್ರು ಹಾಕ್ಕೊಂಡ್ ದಬ್ಡಿ
ಕೇಳಿದ್ನಾ ನಿಂಗ್ ನಾ ಬಡ್ತಿ
ಕೇಳಿದ್ನಾ ನಿಂಗ್ ನಾ ಬಡ್ತಿ

ನೀನ್ ಅಂದ್ಕೊಂಡ್ ಅಂದ್ಕೊಂಡ್ ಬಣ್ಣ ತೋರ್ಸಿ
ಅಂದ್ಕೊಂಡ್ ಜಾಗ್ದಾಗ್ ಬುದ್ದಿ ಬೆಳ್ಸಿ
ಒಳ್ಳೆವ್ರ್ ಕೆಟ್ಟೋವ್ರ್ ಮಾಡ್ತಿ
ಬ್ಯಾಡ್ ಬ್ಯಾಡ್ ಅಂದ್ರು ದೊಡ್ದೊನಾದ್ನಿ
ಕೇಳಿದ್ನಾ ನಿಂಗ್ ನಾ ಬಡ್ತಿ
ಕೇಳಿದ್ನಾ ನಿಂಗ್ ನಾ ಬಡ್ತಿ

ಹಾರ್ತೀನಂದ್ರೆ ಗಾಳಿ ಕೊಟ್ಟಿ
ಈಜ್ತೀನಂದ್ರೆ ನೀರ್ ಕೊಟ್ಟಿ
ಕಷ್ಟ ಸುಖದ್ ಜೀವನ್ದಾಗೆ
ಎಂಥೆಲ್ಲ ಸೊಗ್ಸ ನೀನಿಟ್ಟಿ
ಗಂಡ ಹೆಂಡ್ತಿ ಮಕ್ಕಳ್ ಮರಿ
ಸೊಗಸಾದ್ ಗಂಟನ್ ಕಟ್ಟಿ
ಸೊಗಸಾದ್ ಗಂಟನ್ ಕಟ್ಟಿ

ಬ್ಯಾಡ್ ಬ್ಯಾಡ್ ಅಂದ್ರು ಕಟ್ಬಿಚ್ತೀಯ
ಎಲ್ರು ಮನಸನ್ ನೋಯ್ಸಿ
ಕಾಣದ್ ಊರ್ಗೆ ವರ್ಗ ಮಾಡ್ತಿ
ಉಳಿದೋರ್ ಕಣ್ಗಳ್ ತೊಯ್ಸಿ
ಉಳಿದೋರ್ ಕಣ್ಗಳ್ ತೊಯ್ಸಿ

ಬ್ಯಾಡ್ ಬ್ಯಾಡ್ ಅಂದ್ರು ಬಡ್ತಿ ಕೊಡ್ತಿ
ತಿಳಿಯೋದ್ ಹ್ಯಾಂಗ್ ನಿನ್ ಧಾಟಿ
ಏನ್ ಮಾಡ್ಲಿ ಬಿಡ್ಲಿ ಸತ್ತಂಗ್ ಮಲಗ್ಲಿ
ತಿರುಗಿಸ್ತಿ ನಿನ್ ರಾಟಿ
———————————————————–

ದುಂಡುಹೊಟ್ಟೆ ತುಂಟ

ದುಂಡುಹೊಟ್ಟೆ ತುಂಟನದು
ಇಲಿಯ ಜಂಬೂಸವಾರಿ
ಮುರಿದ ಹಲ್ಲು ಆನೆ ಮುಖ
ಇವನ ಸ್ಟಂಟು ನೋಡಿರಿ

ವರ್ಷ ವರ್ಷ ಬರುವನಿವನ
ಭಿನ್ನ ಭಿನ್ನ ಮಾದರಿ
ಗಾಂಧಿ ಗಣಪ  ನೆಹರು ಗಣಪ
ಇಂದು ಮೋದಿಗೂನು ಸೊಂಡಲಿ

ಗೂಟ ನೆಟ್ಟು ಪೆಂಡಾಲಾಕಿ
ಕಟ್ಟೆಮೇಲೆ ಗಣಪನು
ನಲಿವ ಕುಣಿವ ಪಡ್ಡೆಗಳ
ರಾಜ್ಯಕಿವನೇ ರಾಜನು

ಕೆಂಪುಪಟ್ಟಿ ಹಣೆಯ ಮೇಲೆ
ಕಪ್ಪಾಯಿತು ಕುಣಿಯುತ
ಗಣೇಶಪಟ್ಟಿ ಜೇಬು ತುಂಬಿ
ಹೊಟ್ಟೆ ಪಾನಾವೃತ

ಮನೆಗಳಲ್ಲಿ ಪುಟ್ಟ ಗಣಪ
ಮಕ್ಕಳಿಗೆ “ಬಾಲಗಣೇಶ್”
ಎಲ್ಲರೊಡನೆ ಫೈಟು ಮಾಡಿ
ಗೆದ್ದು ಬರುವ ನಾಟಿ ಗಣೇಶ್

ಬಿದ್ದು ನಗಿಸಿ  ಎದ್ದು ನಗುವ
ಪಾರ್ವತಿಯ ಕಂದನು
ಮೂರೇ ಕ್ಷಣದಿ ಮೂರು ಲೋಕ
ಸುತ್ತುವ ಪ್ರಚಂಡನು

9 thoughts on “ಶ್ರೀನಿವಾಸ ಮಹೇಂದ್ರಕರ್ ಅವರ ಎರಡು ಕವಿತೆಗಳು

  1. ಶ್ರೀನಿವಾಸ್ ಅವರಿಗೆ ಸ್ವಾಗತ. ನಿಮ್ಮ ಈ ಎರಡು ಕವನಗಳು ನನಗೆ ತುಂಬ ಹಿಡಿಸಿದವು. ಆಡುಭಾಷೆ ನಿಮಗೆ ಚೆನ್ನಾಗಿ ಒಪ್ಪುತ್ತೆ. ಮೈಚಳಿ ಬಿಟ್ಟು, ಟೈಮಿಲ್ಲ ಎನ್ನುವ ನೆಪವನ್ನು ಬದಿಗಿಟ್ಟು ಇನ್ನಷ್ಟು ಬರೆಯಿರಿ. ಗದ್ಯವನ್ನೂ ಬರೆಯಲು ಆರಂಭಿಸಿ.

    Like

  2. Srinivasarige,
    Suswaagata.Yeradoo kavanagaLu swaarasyamayagaLinda tumbive.
    KB (U.K) da deepavaLi habbada kaaryakramakke Khandita bandalli
    Yella Kannadigarannu Bhettiyaagi geLetana saMBhruDDagoLisalu binnaha.

    Aravind Kulkarni.
    Radlett, Herts.
    Tel: 07968125839

    Like

  3. ಕೇಳಿದ್ ನಾ ನಿನ್ ಬಡ್ತಿ ಅಂದ್ರೆ ಅದ್ ಹೆಂಗ್ ಆದಾತು? ಕೇಳಿದ್ ಕೇಳ್ದೊರಿಗ್ ಕೊಡ್ತ ಹೋದ್ರೆ ಅವನ ಪರ್ ಪಂಚ್ ಎಕ್ ಹುಟ್ ಹೋದಾತು. ಯಾವಾಗ್ ಯಾರನ್ ಎಲ್ಲಿ ಕಳಸಾದು ಕರಸಾದು,ಯಾವ್ ಯಾವ್ ಮೋಹ ಗಂಟ್ ಹಾಕಾದು,ಯಾವಾಗ್ ಯಾರ್ ಯಾರ್ ಕಣ್ ತೊಯ್ ಸಾದು ಅಂತ ರಾಟಿ ತಿರ್ ಗಸೋದೇ ಅವನ್ ಕೆಲಸ.ಎಷ್ಟ ಛಂದ ಹೇಳ್ ಬಿಟ್ರಿ ದೊಡ್ ವೇದಾಂತಾನ !! ನಿಮ್ಮ ದುಂಡು ಹೊಟ್ಟೆ ಗಣಪ ನಿಮಗೆ ದಿನಾ ಒಂದು ಕವನ ಆದ್ ರೂ ಬರೀ ಹಾಂಗ್ ಹರಸಲಿ.ಅಭಿನಂದನೆಗಳು ಶ್ರೀನಿವಾಸ ಅವರೇ.
    ಸರೋಜಿನಿ ಪಡಸಲಗಿ

    Liked by 1 person

    • ಸರೋಜಿನಿ ರವರೆ , ತುಂಬಾ ಧನ್ಯವಾದ . ಒಮ್ಮೆಲೇ ರಾಟಿ ತಿರುಗಿಸುವವನ ಪರ ವಕಾಲತ್ತಿಗೆ ನಿಂತೇ ಬಿಟ್ಟಿರಲ್ಲ !! ನಿಮಗಿಂತಾ ಒಳ್ಳೆಯ ವಕೀಲ ಸಿಗಲಾರಳು ಅವನಿಗೆ 😉 ಗಣೇಶನಿಗೆ ನನ್ನ ಪರವಾಗಿ ಕೋರಿಕೆ ಸಲ್ಲಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದ 🙂

      Like

  4. 👏👏ಭಲೇ ಅಂದು ಸ್ವಾಗತಿಸುತ್ತೇವೆ ಶ್ರೀನಿವಾಸರನ್ನು!
    ಕೇಳಿದ್ನಾನಿನ್ ಕವಿತಾ ಶಕ್ತಿ
    ಕೇಳಿದ್ಕೂಡ್ಲೆ ಬರ್ದೆರಡು ಈಸರ್ತಿ!
    ಇನ್ಸತ್ತಂಗ ಸುಮ್ಗ ಮಲಗಂಗಿಲ್ಲ
    ನಿನ್ನೆಬ್ಸೋದ್ ‘ಅನಿವಾಸಿ’ ಬಿಡೋಂಗಿಲ್ಲ!
    ಶ್ರೀವತ್ಸ

    Like

    • ಅನಿವಾಸಿ ತಂಡವನ್ನ ಪರಿಚಯಿಸಿದ್ದಕ್ಕೆ ಮತ್ತು ನಿಮ್ಮ ಆತ್ಮೀಯ ಹಾಗೂ ಉತ್ತೇಜನಕಾರಿ ಮಾತುಗಳಿಗೆ ತುಂಬಾ ಧನ್ಯವಾದ ಶ್ರೀವತ್ಸ ಸರ್.

      Like

Leave a Reply to Prashanth Rao Cancel reply

Your email address will not be published. Required fields are marked *