ಜೀರಜಿಂಬೆ – ಸಿನಿಮಾ ನೋಡಿ …

ಕಳೆದ ಎರಡು-ಮೂರು ವಾರಗಳಿಂದ ಭಾರತಕ್ಕಿಂತ ಮುಂಚೆಯೇ ಯು.ಕೆ. ಕನ್ನಡಿಗರಿಗೆ ಸಾಮಾಜಿಕ ಕಳಕಳಿಯ ಚಲಚ್ಚಿತ್ರ “ಜೀರಜಿಂಬೆ” ನೋಡುವ ಸದವಕಾಶ ಸಿಕ್ಕಿತ್ತು. ಈ ಅವಕಾಶವನ್ನು ತಂದಿಟ್ಟವರು ಗಣಪತಿ ಭಟ್ಟರ ನೇತೃತ್ವದ “ಕನ್ನಡಿಗರು ಯು.ಕೆ” ತಂಡದವರು. ಜೀರಜಿಂಬೆಯ ಸಹನಿರ್ಮಾಪಕಿ  ಹಾಗೂ ಚಿತ್ರದಲ್ಲಿ ಬದಲಾವಣೆಯ ವೇಗವರ್ಧಕವಾಗಿ ನಟಿಸಿದ ಸುಮನ್ ನಗರ್ಕರ್ ಅವರ ಸಂದರ್ಶನವನ್ನು ನೀವು ಕಳೆದ ವಾರ ಓದಿದಿರಿ. ಚಿತ್ರ ಹೇಗೆ ನಮ್ಮೆಲ್ಲರ ಮನ ಕಲಕಿ-ತಟ್ಟಿತೆಂಬುದನ್ನು ಅನಿವಾಸಿಯ ಚಿರಪರಿಚಿತ ಸದಸ್ಯರಿಂದಲೇ ಕೇಳಿ… (ಸಂ)

ಬಳ್ಳಿಗೆ ಕಾಯಿ ಭಾರವೇ ? 

-ಡಾ. ಜಿ. ಎಸ್. ಶಿವಪ್ರಸಾದ್, ಶೆಫೀಲ್ಡ್, ಯು.ಕೆ

.

ಕಳೆದ ವಾರಾಂತ್ಯ ಡೋಂಕಾಸ್ಟರ್ ಲಿಟ್ಲ್ ಥಿಯೇಟರ್ ನಲ್ಲಿ “ಜೀರ್ಜಿಂಬೆ” ಎನ್ನುವ ಕನ್ನಡ ಚಿತ್ರವನ್ನು ಅದರ ನಿರ್ಮಾಪಕ ಗುರು ಮತ್ತು ಅವರ ಪತ್ನಿ ಸುಮನ್ ( ಖ್ಯಾತ ಚಲನ ಚಿತ್ರ ತಾರೆ ಸುಮ್ಮನ್ ನಗರ್ಕರ್ ) ಹಾಗು ಯಾರ್ಕ್ ಶೈರ್ ಕನ್ನಡಿಗರೊಂದಿಗೆ ವೀಕ್ಷಿಸುವ ಸದಾವಕಾಶ ನನಗೆ ಒದಗಿಬಂದಿತು. ಈ ಚಿತ್ರದ ಹಿನ್ನೆಲೆಯ ಬಗ್ಗೆ ಕೆಲವು ಮಾಹಿತಿಯನ್ನು ಅರಿತಿದ್ದು ಅದು ಬಾಲ್ಯವಿವಾಹವನ್ನು ಕುರಿತಾದ ಚಿತ್ರ ಎಂದು ತಿಳಿದಾಗ ಯಾವುದೋ ಹಳೆಕಾಲದ ಸಾಮಾಜಿಕ ಪಿಡುಗು ಅದರ ಬಗ್ಗೆ ಸಿನಿಮಾ ಮಾಡುವ ಅವಶ್ಯಕತೆ ಏನಿದೆ ಎಂಬ ಭಾವನೆಯಿಂದ ವೀಕ್ಷಿಸಲು ತೆರಳಿದ ನನಗೆ ಚಿತ್ರ ನೋಡಿದ ಮೇಲೆ ನನ್ನ ಅನಿಸಿಕೆಗಳು ಬದಲಾದವು. ಮಕ್ಕಳ ತಜ್ಞನಾಗಿ ಕೆಲಸ ಮಾಡುತ್ತಿರುವ ನನಗೆ ಮಕ್ಕಳಿಗೆ ಸಂಬಂಧ ಪಟ್ಟ ಸಾಮಾಜಿಕ ವಿಚಾರಗಳ ಬಗ್ಗೆ ಕಾಳಜಿ ಇದೆ. ಪ್ರಪಂಚದ ವಿವಿಧ ದೇಶಗಳಲ್ಲಿ ವಿಭಿನ್ನವಾದ ಸಾಮಾಜಿಕ ಪಿಡುಗುಗಳು ಅಸ್ತಿತ್ವದಲ್ಲಿವೆ. ಜನ ಸಾಮಾನ್ಯರಲ್ಲಿ ಅದರ ಅರಿವು ಮೂಡಿಸುವುದು ಮಾಧ್ಯಮಗಳ ಹೊಣೆ. ಈ ಒಂದು ಹಿನ್ನೆಲೆಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ನನ್ನ ಅನಿಸಿಕೆ. ನಿರ್ದೇಶಕ ಕಾರ್ತಿಕ್ ಸರಗೂರ್ ಅವರು ನಿರ್ದೇಶಿಸಿದ ಜಿರ್ ಜಿಂಬೆ ಈಗಾಗಲೇ ಹಲವು ಚಿತ್ರೋತ್ಸವದಲ್ಲಿ  ಬಹುಮಾನಗಳನ್ನು ಪಡೆದಿದೆ. ಮಕ್ಕಳು ಬಹಳ ನಿಸ್ಸಂಕೋಚವಾಗಿ ಸಹಜವಾಗಿ ಅಭಿನಯಿಸಿದ್ದಾರೆ. ಹಲವಾರು ಹೊಸಮುಖಗಳನ್ನು ಒಳಗೊಂಡ ಈ ಚಿತ್ರದಲ್ಲಿ ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರ್ಕರ್ ಗುರುತಿಸಬಹುದಾದ ಚಹರೆ. ಕಮರ್ಷಿಯಲ್ ಸಿನೆಮಾ ಹಾದಿಯನ್ನು ಬಿಟ್ಟು ಸಾಮಾಜಿಕ ಸಮಸ್ಯೆಗಳ ಬಗ್ಗೆ ತಯಾರಿಸಿದ ಈ ಚಿತ್ರಕ್ಕೆ ಹಣಹೂಡುವ ನಿರ್ಮಾಪಕರು ವಿರಳ. ಇಂತಹ ಪರಿಸ್ಥಿತಿಯಲ್ಲಿ ಗುರುದೇವ್ ನಾಗರಾಜ್ ಮತ್ತು ಅವರ ಪತ್ನಿ ನಟಿ ಶ್ರೀಮತಿ ಸುಮನ್ ನಗರ್ಕರ್ ಕ್ರೌಡ್ ಫಂಡಿಂಗ್  ಮೂಲಕ ಚಿತ್ರಕ್ಕೆ ಹಣವನ್ನು ಹೂಡಲು ವ್ಯವಸ್ಥೆ ಮಾಡಿರುವುದು ಶ್ಲಾಘನೀಯ.ಈ  ಚಿತ್ರವನ್ನು ಹೊರದೇಶದಲ್ಲಿ ಪ್ರದರ್ಶಿಸಲು ಅವರು ಅನುವು ಮಾಡಿಕೊಟ್ಟಿದ್ದಾರೆ. ಕಾರ್ತಿಕ್ ಸರಗೂರ್ – ಬೀಹೈವ್ ಪ್ರೊಡಕ್ಷನ್ಸ್ ಮತ್ತು ಪುಷ್ಕರ್ ಫಿಲ್ಮ್ಸ್ ಸಹನಿರ್ಮಾಪಕರಾಗಿದ್ದರೆ. ಇನ್ನೊಂದು ವಿಶೇಷವೆಂದರೆ ಮೈಸೂರು ರಾಮಕೃಷ್ಣ ವಿದ್ಯಾಶಾಲೆಯ ಹಳೆ ವಿದ್ಯಾರ್ಥಿ ಸಂಘದವರು ಕಾರ್ತಿಕ್ ಅವರಿಗೆ ಪ್ರೋತ್ಸಾಹ ಹಾಗು ಸಹಾಯವನ್ನು ಒದಗಿಸಿದ್ದಾರೆ.

ಚಿತ್ರದ ಪ್ರಾರಂಭದಲ್ಲಿ ಗ್ರಾಮೀಣ ಶಾಲಾ ಹೆಣ್ಣು ಮಕ್ಕಳಿಗೆ ಶಾಲೆಗೆ ಬರಲು ಉತ್ತೇಜಿಸುವ ಉದ್ದೇಶದಿಂದ ಉಚಿತ ಸೈಕಲನ್ನು ಸರ್ಕಾರ ಒದಗಿಸುತ್ತದೆ. ಈ ಚಿತ್ರದ ಮೊದಲರ್ಧ ಕಥೆ ಈ ಸೈಕಲ್ ಸುತ್ತ ಹಬ್ಬಿದೆ ಎನ್ನಬಹುದು. ಈ ಸೈಕಲ್ ಹೆಣ್ಣು ಮಕ್ಕಳ ಸ್ವಾವಲಂಬನೆ ಮತ್ತು ಸ್ವೇಚ್ಛೆಯ ಸಂಕೇತವಾಗಿ ತೋರುತ್ತದೆ. ಈ ಒಂದು ಉಡುಗೊರೆ ಶಾಲಾ ಮಕ್ಕಳ ನಡುವೆ ಹಾಗೆ ಹಳ್ಳಿಯ ಪರಿವಾರದ ಒಳಗೆ ಸಾಕಷ್ಟು ಬಿಕ್ಕಟ್ಟುಗಳನ್ನು ಒಡ್ಡುತ್ತದೆ. ಇದೆ ಸೈಕಲ್, ಚಿತ್ರದ ಕಥಾ ನಾಯಕಿ ರುದ್ರಿ ಎಳೆ ವಯಸ್ಸಿನಲ್ಲಿ
ಬಾಲ್ಯವಿವಾಹಕ್ಕೆ ಒಳಗಾಗಲು ಅವಳ ತಂದೆ-ತಾಯಿ ಒತ್ತಾಯಿಸಿದಾಗ ಹೇಗೊ ಪಲಾಯನ ಮಾಡಿ ಮುಖ್ಯ ಮಂತ್ರಿಗಳ ಸಹಾಯಕ್ಕಾಗಿ ಬೆಂಗಳೂರು ತಲುಪಲು ಸಹಾಯಕವಾಗುತ್ತದೆ.

ಬಾಲ್ಯವಿವಾಹ, ಸತಿ, ದೇವದಾಸಿ ಇವುಗಳು ನಮ್ಮ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಕೆಲವು ಸಾಮಾಜಿಕ ಪಿಡುಗುಗಳು. ಯುನಿಸೆಫ್ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಬಾಲ್ಯ ವಿವಾಹ 2006 ರಲ್ಲಿ 47% ಇದ್ದು 2016 ರಲ್ಲಿ 27% ಇದೆಯೆಂದು ವರದಿ ಖಾತರಿಪಡಿಸಿದೆ. ಹಲವಾರು ಸರ್ಕಾರಿ ಸಮಾಜ ಕಲ್ಯಾಣ ಯೋಜನೆಯಿಂದ ಹಾಗು ಅರಿವಿನಿಂದ ಬಾಲ್ಯವಿವಾಹ ಕಡಿಮೆಯಾಗಿದೆ. ಬಾಲ್ಯವಿವಾಹದಿಂದಾಗಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳ ಮೇಲೆ ತೀವ್ರ ಪರಿಣಾಮಗಳು ಉಂಟಾಗಬಹುದು. ಮನಸ್ಸಿನ ಉದ್ವಿಗ್ನತೆಯನ್ನು ಹತೋಟಿಯಲ್ಲಿಡಲು ಕಷ್ಟವಾಗಬಹುದು. ಬಾಲ್ಯವಿವಾಹದಿಂದ ಅಪ್ರಾಪ್ತವಯಸ್ಸಿನಲ್ಲಿ ಗರ್ಭಿಣಿಯಾಗುವ ಹೆಂಗಸಿಗೆ ಹೆರಿಗೆ ಸಮಯದಲ್ಲಿ ಹೆಚ್ಚಿನ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹಾಗೆಯೇ ನವಜಾತ ಶಿಶುವಿನ ಪಾಲನೆ ಈ ತಾಯಂದಿರಿಗೆ ನಿಭಾಯಿಸಲು ಕಷ್ಟವಾಗಬಹುದು. ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಿದರಷ್ಟೇ ಸಾಲದು. ಅದನ್ನು ಪೋಲೀಸರ ಗಮನಕ್ಕೆ ತರಬೇಕು. ಹೀಗೆ ಮಾಡುವಲ್ಲಿ ದೂರವಾಣಿ ಸಂಪರ್ಕದ ಅಗತ್ಯವಿದೆ. ಪೊಲೀಸರು ಪ್ರಾಮಾಣಿಕತೆಯಿಂದ ವಿಚಾರ ನಡೆಸಬೇಕು ಹಾಗೆ ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು. ಶಿಕ್ಷೆಯಿಂದ ತಪ್ಪಿತಸ್ಥನು ಪರಿವರ್ತನೆಗೊಳ್ಳಬೇಕು ಹಾಗೆ ಸಮಾಜದಲ್ಲಿ ಕೂಡ ಪರಿವರ್ತನೆ ಕಾಣಬೇಕು. ಆದರೆ ಇವನ್ನೆಲ್ಲಾ ಅನುಷ್ಟಾನಕ್ಕೆ ತರಲು ಹಲವಾರು ಅಡಚಣೆಗಳಿವೆ ಎಂಬ ವಿಚಾರ ಚಿತ್ರದಲ್ಲಿ ಕಂಡುಬರುತ್ತದೆ. ಹಾಗೆಯೇ ಇದಕ್ಕೆ ಸಂಬಂಧ ಪಟ್ಟ ಸನ್ನಿವೇಶಗಳು ಪರಿಣಾಮಕಾರಿಯಾಗಿವೆ. ಬಾಲ್ಯ ವಿವಾಹದ ಹಿನ್ನೆಲೆಯಲ್ಲಿ ತಪಿತಸ್ಥರು ಮಕ್ಕಳ ತಂದೆ ತಾಯಿ. ಅವರನ್ನು ಜೈಲಿಗೆ ತಳ್ಳುವುದರಿಂದ ಈ ಮಕ್ಕಳನ್ನು ನೋಡಿಕೊಳ್ಳುವ ಸಮಸ್ಯೆಯನ್ನು ಸಮಾಜ ಕಲ್ಯಾಣ ಇಲಾಖೆಯವರು ಅಥವಾ ಹತ್ತಿರದ ಸಂಬಂಧಿಕರು ನಿಭಾಯಿಸಬೇಕಾಗುತ್ತದೆ. ಈ ರೀತಿಯ ಸಮಸ್ಯೆಗಳಿಗೆ ನಮ್ಮ ಸಮಾಜ ಮತ್ತು ಸರ್ಕಾರ ಅಣಿಯಾಗಿಲ್ಲ ಎಂಬುದನ್ನು ಗಮನಿಸಬೇಕು.

ಬಾಲ್ಯ ವಿವಾಹವನ್ನು ತಮ್ಮ ಅನುಕೂಲಕ್ಕೆ ಬಳೆಸಿಕೊಳ್ಳುವ ಅಪ್ಪ ಅಮ್ಮಂದಿರು, ಈ ಪಿಡುಗಿನ ಅಸ್ತಿತ್ವವನ್ನು ಅಲ್ಲಗೆಳೆಯುವ ಶಾಲೆಯ ಹೆಡ್ ಮಾಸ್ಟರ್, ಪೊಲೀಸರಿಗೆ ದೂರುಕೊಡಲು ಮತ್ತು ಸಹಾಯ ಸ್ವೀಕರಿಸಲು ಹೆದರಿ ಹಿಂಜರಿಯುವ ಹೆಣ್ಣು ಮಕ್ಕಳು, ಮತ್ತು ಇದೆಲ್ಲವನ್ನು ಸಹಿಸಿಕೊಳ್ಳುವ ಸಮಾಜದ ನಿರ್ಲಿಪ್ತತೆ ಇವುಗಳ ನಡುವೆ ತನ್ನ ಬಿಡುವಿನ ವೇಳೆಯಲ್ಲಿ ಸಮಾಜ ಸೇವೆಯನ್ನು
ಮಾಡಲು ಶಾಲೆಗೆ ಆಗಮಿಸುವ ಸಾಫ್ಟ್ ವೇರ್ ಎಂಜಿನಿಯರ್ ನಿವೇದಿತಾ(ಸುಮನ್ ನಗರ್ಕರ್) ಮಕ್ಕಳಿಗೆ ಧೈರ್ಯವನ್ನು ತುಂಬಿ, ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಸ್ಫೂರ್ತಿಯನ್ನು ನೀಡಿ ಮಕ್ಕಳಿಗೆ ಆಶ್ವಾಸನೆ ನೀಡುತ್ತಾಳೆ ಮತ್ತು ದಿಕ್ಕು ತೋಚದ ಮಕ್ಕಳಿಗೆ ಆದರ್ಶ ವ್ಯಕ್ತಿಯಾಗಿ ಭರವಸೆಯನ್ನು ನೀಡುತ್ತಾಳೆ. ಬಾಲಕಿ ರುದ್ರಿ ತನ್ನ ಗೆಳತಿ ಬಾಲ್ಯವಿವಾಹವಾಗುವ ಸಂದರ್ಭದಲ್ಲಿ
ತಾನು ದೂರವಾಣಿಯ ಮೂಲಕ ಪೊಲೀಸರನ್ನು ಎಚ್ಚರಿಸಿದರೂ ಪರಿಸ್ಥಿತಿಯ ಒತ್ತಡದಿಂದ ಮದುಮಗಳು ಅಸಹಾಯಕಳಾಗಿ ತನಿಖೆ ನಡೆಸುವ ಅಧಿಕಾರಿಗಳಿಗೆ ಸಾಕ್ಷಿ ನೀಡದೆ ರೋದಿಸುವ ಸಂದರ್ಭ ಹೃದಯಸ್ಪರ್ಶಿಯಾಗಿದೆ.

ಕೊನೆಗೆ ರುದ್ರಿಗೆ ತಾನೇ ಬಾಲ್ಯವಿವಾಹ ಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತದೆ. ಆಗ ತನ್ನೆಲ್ಲ ಸ್ಥೈರ್ಯವನ್ನು ಕೂಡಿಸಿಕೊಂಡು ತನ್ನ ಅಕ್ಕನ ಸಹಕಾರದಿಂದ ಒಬ್ಬಳೇ ಸೈಕಲ್ ತುಳಿದು ಬೆಂಗಳೂರಿಗೆ ರಾತ್ರೋರಾತ್ರಿ ತೆರಳಿ ಟಿವಿ ಮಾಧ್ಯಮ ಮತ್ತು ಮುಖ್ಯಮಂತ್ರಿಗಳ ಸಹಾಯದಿಂದ ತಾನು ಮುಕ್ತಳಾಗುತ್ತಾಳೆ. ಶಿಕ್ಷಣ, ಮೂಲಭೂತ ಸೌಕರ್ಯಗಳು, ಸಂರಕ್ಷಣೆ, ಮಾರ್ಗದರ್ಶನ ಮತ್ತು ಸ್ವಾತಂತ್ರ್ಯ ಇವು ಮಕ್ಕಳ ಮನೋವಿಕಾಸಕ್ಕೆ ಅಗತ್ಯ. ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ಇರುವ ಸಾಮಾಜಿಕ ನಿಲುವುಗಳು
ಬದಲಾಗಬೇಕು. ಜನಸಾಮಾನ್ಯರಿಗೆ ಅದರಲ್ಲೂ ಗ್ರಾಮೀಣ ಜನತೆಗೆ ಈ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಈ ಒಂದು ಪ್ರಯತ್ನದಲ್ಲಿ ಜಿರ್ ಜಿಂಬೆ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಕಮರ್ಷಿಯಲ್ ಸಿನಿಮಾಗಳ ಹಾವಳಿಯಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ನಿರ್ಮಿಸಿದ ಚಿತ್ರಗಳು ವಿರಳ. ಇವುಗಳ ಮಧ್ಯೆ ಜೀರ್ ಜಿಂಬೆ ಕಲಾತ್ಮಕ ಚಿತ್ರವಾಗಿ ಎದ್ದು ತೋರುತ್ತದೆ.

ಜೀರಜಿಂಬೆ

ಜೀರಜಿಂಬೆ – ನನ್ನ ನೋಟ 

– ಡಾ.ಅರವಿಂದ ಕುಲಕರ್ಣಿ

ರ್ರ್ಯಾಡ್ಲೆಟ್, ಯು ಕೆ.

ಇದೇ ರವಿವಾರ ಎಪ್ರಿಲ್ 15, 2018 ರಂದು ಯುಕೆ ಬ್ರಿಸ್ಟಲ್ ದ ಸ್ಕಾಟ್ ಸಿನಿಮಾದಲ್ಲಿ “ಜೀರಜಿಂಬೆ” ಚಿತ್ರ ನೋಡುವ ಅವಕಾಶ ಸಿಕ್ಕಿತ್ತು. ಚಿತ್ರವನ್ನು ನೋಡುವ ಮತ್ತು ಅದರಲ್ಲಿ ನಟಿಸಿದ ತಾರೆ ಸುಮನ್ ನಗರ್ಕರ್ ಮತ್ತವರ ಪತಿ ಗುರುದೇವ ಅವರನ್ನು ಭೇಟಿ ಮಾಡುವ ಸದವಕಾಶವನ್ನು ಉಪಯೋಗಿಸಿಕೊಳ್ಳಲು ಸುತ್ತ ಮುತ್ತಲಿನ ಮತ್ತು ದೂರ ದೂರದ ಪ್ರದೇಶಗಳಿಂದ ಸುಮಾರು 50ರಿಂದ 60 ಕನ್ನಡ ಅಭಿಮಾನಿಗಳು ಬ್ರಿಸ್ಟಲ್ ದಲ್ಲಿ ನೆರೆದಿದ್ದರು. ಇದು ಮಕ್ಕಳ ಚಿತ್ರ ಎಂದು ಕೇಳಿದ್ದರಿಂದಲೋ ಏನೋ ಹಲವರು ಮಕ್ಕಳೊಂದಿಗೆ ಬಂದಿದ್ದರು.

ಈ ಚಲನ ಚಿತ್ರ ಇನ್ನೂ ಭಾರತದಲ್ಲಿ ರಿಲೀಜ್ ಆಗಿಲ್ಲ, ಸದ್ಯದಲ್ಲೇ ಆಗಬಹುದೆಂದು ತಿಳಿದು ಬಂದಿತು. ಆದರೆ ಈಗಾಗಲೇ ಬೇರೆಡೆಗೆ ಇದರ ಪ್ರದರ್ಶನ ಆಗಿದೆ ಎಂತಲೂ ಇದು ಯುಕೆದಲ್ಲಿ ಮೂರನೆಯ ಪ್ರದರ್ಶನ ಎಂದು ತಿಳಿಸಲಾಯಿತು. ಈಗಾಗಲೇ ಹಲವಾರು ಕಡೆಯಿಂದ ಉತ್ತಮ ಶ್ಲಾಘನೀಯ ಪ್ರತಿಕ್ರಿಯೆಗಳು ಬಂದಿರುವವು. ಅಲ್ಲದೆ ಇದಕ್ಕೆ 4 ರಾಜ್ಯ ಪ್ರಶಸ್ತಿಗಳೂ ಸಿಕ್ಕಿವೆ.

ಮೊಟ್ಟ ಮೊದಲು ಬೆಂಗಳೂರಿನಿಂದ ಎಪ್ಪತ್ತು ಕಿ.ಮೀ ದೂರದಲ್ಲಿಯ ಒಂದು ಸಣ್ಣ ಹಳ್ಳಿಯ ಸನ್ನಿವೇಶದೊಂದಿಗೆ ಚಿತ್ರ ಪ್ರಾರಂಭವಾಯಿತು. ಅಲ್ಲಿಯ ಚಿಕ್ಕ ಮಕ್ಕಳ ವಿದ್ಯಾಭ್ಯಾಸ, ಮನೆಯಲ್ಲಿರುವ ತಂದೆ ತಾಯಂದಿರು ಮತ್ತು ಪರಿಸರದ ಹಳ್ಳಿಯ ಹಿರಿಯರು ಆಚರಿಸುತ್ತ ಬಂದಿರುವ ಮೂಢ ನಂಬಿಕೆಗಳನ್ನು ಚೆನ್ನಾಗಿ ಚಿತ್ರಿಸಲಾಗಿದೆ. ಮುಖ್ಯವಾಗಿ ಮಕ್ಕಳಲ್ಲಿ ಅಡಗಿರುವ ಮುಗ್ಧತೆ, ಸರಳತೆ, ಚೇಷ್ಟೆ, ಈರ್ಷ್ಯೆಗಳನ್ನು ಮನಮುಟ್ತುವ ರೀತಿಯಲ್ಲಿ ಪ್ರದರ್ಶಿಸಿ ಚಿತ್ರ ಮುಂದೆ ಸಾಗಿತು. ಈ ಚಿತ್ರದ ಮೂಲ ಉದ್ದೇಶ ’’ಬಾಲ್ಯ ವಿವಾಹ ಮತ್ತು ಅವರ ಮೇಲೆ ಅದರಿಂದಾಗುವ ಪರಿಣಾಮಗಳು.” ಆ ಹದಿಮೂರು ವರ್ಷದ ಹುಡುಗಿಯರನ್ನು ತಂದೆ ತಾಯಂದಿರು ಮದುವೆಗಾಗಿ ಬಲವಂತ ಮಾಡುವ ದೃಶ್ಯ ಎಲ್ಲ ಪ್ರೇಕ್ಷಕರ ಮನವನ್ನು ಕಲುಕಿತು. ನಂತರದ ಘಟನೆಗಳಲ್ಲಿ ಚಿತ್ರದಲ್ಲಿ ಮೂಲಪಾತ್ರದಲ್ಲಿ ನಟಿಸಿದ ಹದಿಮೂರು ವರ್ಷದ ಎಳೆಯಳ ಮನಸ್ಸು ಆ ಹಳ್ಳಿಗೆ ಟೆಂಪರರಿ ಶಿಕ್ಷಕಿಯಾಗಿ ಬಂದ ಮಹಿಳೆಯ (ಸುಮನ್ ನಗರ್ಕರ್) ಬೋಧನೆಗಳಿಂದ ಹೇಗೆ ಪರಿವರ್ತನೆಯಾಯಿತು ಮತ್ತು ಹೇಗೆ ಆಕೆ ದೃಢವಿಶ್ವಾಸದಿಂದ ತನ್ನ ಜೀವನದಲ್ಲೂ ಉದ್ಭವಿಸಿದ ಬಾಲ್ಯವಿವಾಹದ ಘಟನೆಯನ್ನು ಹೇಗೆ ಎದುರಿಸಿದಳು ಎಂಬುದನ್ನು ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಅವರಿಬ್ಬರ ಆಕ್ಟಿಂಗ್ ಬಲು ಚೆನ್ನಾಗಿ ಬಂದಿದೆ.

ಚಿತ್ರದ ಕೊನೆಯ ಹಂತದಲ್ಲಿ ಚಿತ್ರದ ಕೇಂದ್ರವಸ್ತುವಾದ ಬಾಲ್ಯವಿವಾಹ ದ ಬಗ್ಗೆ ಹಲವಾರು ಅಂಕಿ ಅಂಶಗಳ ಸುರಿಮಳೆಯನ್ನೇ ಕಾಣುತ್ತೇವೆ, ಕಂಡು ಬೆರಗಾಗುತ್ತೇವೆ. ಈ ವಿಷಯದಲ್ಲಿ ಕರ್ನಾಟಕದ ಸ್ಥಾನ ಭಾರತದಲ್ಲೇ ಎರಡನೆಯದು ಎಂದು ತಿಳಿದು ವಿಷಾದ-ಮುಜುಗರ ಪಡುತ್ತೇವೆ.

ಚಿತ್ರ ಪ್ರದರ್ಶನದ ನಂತರ ನಿರ್ಮಾಪಕ ತಂಡದ ಆಹ್ವಾನದಂತೆ ಇದರ ಬಗ್ಗೆ ಚರ್ಚೆ, ಚಿತ್ರದ ಬಗ್ಗೆ ಹಿನ್ನುಣಿಕೆ ಇತ್ಯಾದಿ ನಡೆಯಿತು. ಇದರಲ್ಲಿ ಹಲವಾರು ಪ್ರೇಕ್ಷಕರು ಪಾಲುಗೊಂಡರು. ಅವರಲ್ಲಿ ಒಬ್ಬ ಮಹಿಳೆ ತನ್ನ ಸ್ವಾನುಭವದ ಕಥೆಯನ್ನು ಹೇಳಿ ಎಲ್ಲರನ್ನು ಚಕಿತಗೊಳಿಸಿದಳು. ತಾನೂ ಬಾಲ್ಯವಿವಾಹವಾಗಿ ಹೇಗೆ ದುರಂತ ಘಟನೆಗಳನ್ನು ಎದುರಿಸಿದೆ ಎಂಬ ವರ್ಣನೆಯಿಂದ ಸಭಿಕರನ್ನು ಮೂಕವಿಸ್ಮಿತರನ್ನಾಗಿಸಿದಳು. ಸಂಕ್ಷಿಪ್ತವಾಗಿ ಹೇಳುವದೆಂದರೆ ಆಕೆಯ ಕಥೆ ಹೀಗಿದೆ:

“ನನಗೂ ಚಿಕ್ಕ ವಯಸ್ಸಿನಲ್ಲೇ ನನ್ನ ತಂದೆ ತಾಯಿಗಳು ತಾವೇ ಆಯ್ದು ಸೂಕ್ತವರನೆಂದು ಪರದೇಶದಿಂದ ಬಂದಿದ್ದ ಒಬ್ಬ ಹುಡುಗನ ಜೊತೆಗೆ ನನ್ನ ಮದುವೆ ಮಾಡಿದರು. ಆದರೆ ಆತ ಮೊದಲೇ ಒಂದು ಲಗ್ನಮಾಡಿಕೊಂಡಿದ್ದ ಎಂಬ ಸತ್ಯ ನಂತರ ಬಯಲಿಗೆ ಬಂದಿತು. ಆಮೇಲೆ ಆತ ನನ್ನ ಕೈಬಿಟ್ಟ. ಈ ಮೋಸದಿಂದ ನನಗೆ ದಿಕ್ಕೇ ತೋಚದಂತಾಯಿತು. ಆದರೂ ಧೈರ್ಯಗೆಡದೆ ನಾನು ಪಕ್ಕದ ಮನೆಯ ಹೆಂಗಸಿನ ನೆರವಿನಿಂದ ಆಕೆಯ ಮನೆಯಲ್ಲಿದ್ದ ಟೈಪ್ ರೈಟರ್ದಿಂದ ಟೈಪಿಂಗ್ ಕಲಿತೆ. ಆಮೇಲೆ ಒಂದು ಡಿಗ್ರಿಯೂ ಆಯಿತು. ಮುಂದೆ ಬೆಂಗಳೂರು ವಿಧಾನ ಸೌಧದಲ್ಲೆ Gazetted officer (Class I) ಹುದ್ದೆಯನ್ನು ನಿಭಾಯಿಸಿದೆ. ಇಬ್ಬರು ಡಾಕ್ಟರು ಮಕ್ಕಳ ತಾಯಿಯಾಗಿರುವೆ.” ಆಕೆಯ ಭಾವಪೂರ್ಣ ಮಾತು ಮುಗಿದಾಗ ಎಲ್ಲರೂ ಎದ್ದು ನಿಂತು ಕರತಾಡನದ ಸುರಿಮಳೆಗೈದರು. ಸಿನಿಮಾದಲ್ಲಿಯ ಕಥೆಯನ್ನೇ ಪ್ರತ್ಯಕ್ಷವಾಗಿ ಕಂಡ ಅನುಭವವಾಯಿತು. ಪ್ರೊಜೆಕ್ಷನ್ ಪರದೆಯ ಹಿಂದೆಯೂ ಮುಂದೆಯೂ ಅದೇ ನೈಜ ನಾಟಕದ ಪ್ರದರ್ಶನ ನೋಡಿದಂತೆ ಭಾಸವಾಯಿತು.

ತದನಂತರ, ಸಭಿಕರ ಎದುರು ಬಂದು ಈ ಚಿತ್ರವನ್ನು ಯುಕೆ ಗೆ ತಂದ ಗುರುದೇವ ಮತ್ತು ಸುಮನ್ ನಗರ್ಕರ್ ಅವರು ಈ ಚಿತ್ರಕ್ಕೆ ಜನರ ಪ್ರೋತ್ಸಾಹ ಮತ್ತು ಪ್ರಚಾರ ಕೊಡಿ ಎಂದು ಮನವಿ ಮಾಡಿದರು.

ನನ್ನ ವೈಯಕ್ತಿಕ ವಿಚಾರವೆಂದರೆ ಈ ಚಲನ ಚಿತ್ರವನ್ನು ಭಾರತದ ಪ್ರತಿಯೊಂದು ಶಾಲೆಯಲ್ಲಿ ಮತ್ತು ಸಾಂಸ್ಕೃತಿಕ ಘಟಕಗಳಲ್ಲಿ ಪುಕ್ಕಟೆಯಾಗಿ ಪ್ರದರ್ಶಿಸ ಬೇಕು. ಈ ಬಾಲ್ಯವಿವಾಹ ವೆನ್ನುವ ಜಟಿಲ ಸಮಸ್ಯೆಯನ್ನು ಬಿಡಿಸಿ, ಬೇರು ಸಹಿತ ಕಿತ್ತೆಸೆಯಬೇಕಾಗಿದೆ. ಮನಸ್ಸು ಮಾಡಿದರೆ ಅದು ಸಾಧ್ಯ. ಇದಕ್ಕೆ ಅಲ್ಲಿಯ ತಂದೆ-ತಾಯಿ-ಪಾಲಕರ ಬೆಂಬಲ, ಶಿಕ್ಷಕರ ಸಹಕಾರ (ಚಿತ್ರದಲ್ಲಿ ಅವರು ಕೈಕೊಡವಿ ಕುಳಿತಂತಿದೆ!) ಅಲ್ಲದೆ ರಾಜಕಾರಣಿಗಳ ಬೆಂಬಲದ ಅಗತ್ಯವಿದೆ. ಕಾಯದೆ ಪಾಸು ಮಾಡಿ, ಜಾರಿಗೆ ತಂದರೂ ಸಮಸ್ಯೆಗೆ ನಿಜವಾದ ಪರಿಹಾರ ಸಿಗುವದಿಲ್ಲ. ತಂದೆ ತಾಯಿಗಳನ್ನು ಜೇಲಿಗೆ ತಳ್ಳಿದರೆ ಅವರ ಮಕ್ಕಳ ಪಾಡೇನು? ಅವರ ವ್ಯವಸ್ಥೆಗೆ, ಪಾಲನೆಗೆ ಯಾರು ಜವಾಬ್ದಾರರು? ಇವೆಲ್ಲ ಪ್ರಶ್ನೆಗಳನ್ನು ಕೇಳುವ ಈ ಚಲನ ಚಿತ್ರ ಜನ ಜಾಗೃತಿಯನ್ನುಂಟು ಮಾಡುವದರಲ್ಲಿ ಸಫಲವಾಗಿದೆ. ಮುಂದಿನ ಘಟ್ಟ?

 

One thought on “ಜೀರಜಿಂಬೆ – ಸಿನಿಮಾ ನೋಡಿ …

  1. Missed the movie because of other commitments. Nice to read two reviews. Wish we could get to see all good Kannada movies and discuss them after the movie. – Keshav

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.