ತೊಳಲಾಟ – ದಾಕ್ಷಾಯಿಣಿ ಬರೆದ ಕವಿತೆ

ವೃತ್ತಿಯಿಂದ ವೈದ್ಯರಾದ ದಾಕ್ಷಾಯಿಣಿಯವರು ಬಿಡುವು ಮಾಡಿಕೊಂಡು ಬರಹ, ಕವಿತೆಗಳಲ್ಲಿ ತೊಡಗಿರುತ್ತಾರೆ. ‘ಅನಿವಾಸಿ‘ಯಲ್ಲಿ  ಬರೆದ ಲೇಖಕರನ್ನು ಉತ್ತೇಜಿಸುವ ಕಮೆಂಟ್ಸ್ ಬರೆಯುತ್ತಿರುತ್ತಾರೆ. ತಾವು ನೆಲೆಸಿದ ಇಂಗ್ಲೆಂಡ್ನಲ್ಲಿ ಎಲ್ಲ ಅನಿವಾಸಿಗಳಂತೆ ಅವರದೂ  ಈ ತೊಳಲಾಟ ಇದ್ದೇ ಇದೆ.

ಇಂಡಿಯಾ ಅಥವಾ ಇಂಗ್ಲೆಂಡ್
ನಿರಂತರ ಹೋರಾಟ ಮನದಲ್ಲಿ,

ಹೃದಯಕ್ಕೆ ಬೇಕು ಇಂಗ್ಲೆಂಡಿನ ತಂಪು,
ಮನಸ್ಸಿಗೆ ಬೇಕು ತಾಯ್ನಾಡಿನ ಸೊಂಪು,

ಅಲ್ಲಿನ ಗಲಾಟೆ ಗದ್ದಲ ಕಿವಿಗೆ ಕರ್ಕಷ
ಇಲ್ಲಿನ ನಿಶಬ್ದವೂ ಬೇಸರ, ನೀರಸ

ಪ್ರಶಾಂತ ಜೀವನ, ಪರಿಣಿತಿಗೆ ಆಹ್ವಾನವಿಲ್ಲಿ,
ಕಲಕಲದ ಕಿತಾಪತಿಯೂ ಬೇಕು ಜೀವನದಲ್ಲಿ

ಬರ್ಗರ್, ಬನ್, ಬ್ರೆಡ್, ತಿಂದು ಬೋರು,
ಮಸಾಲೆದೋಸೆ ಜಾಸ್ತಿಯಾದರೂ ದೇಹಕ್ಕೆ ತಕರಾರು

ಎಲ್ಲವೂ ಬೇಕು ಅದರದೆ ಪರಿಮಿತಿಯಲ್ಲಿ,
ಈ ಸಮಸ್ಯೆಗೆ ಪರಿಹಾರವೆಲ್ಲಿ?

ತ್ರಿಶಂಕು ಸಹ ತರಲಾರ ಉತ್ತರ ನಮ್ಮ ಇಬ್ಬದಿಗೆ
ನಾವೆ ತರಬೇಕು ಶಾಂತಿ, ಸಂತೋಷ ನಮ್ಮ ಮನಸ್ಸಿಗೆ.

5 thoughts on “ತೊಳಲಾಟ – ದಾಕ್ಷಾಯಿಣಿ ಬರೆದ ಕವಿತೆ

  1. ಸರಳ ಶಬ್ದಗಳಲ್ಲಿ ನಮ್ಮಅನಿವಾಸೀ ಬದುಕನ್ನು ಚೆನ್ನಾಗಿ ಹಿಡಿದಿಟ್ಟಿದ್ದೀರಿ. ನಮ್ಮ ಜಾಲದ ಬಹಳಷ್ಟು ಕವಿತೆಗಳು ಈ ದ್ವಂದ್ವದಲ್ಲೇ ಮೂಡಿದವು. ತ್ರಿಶಂಕು, ಚಕ್ರವ್ಯೂಹ, ಅಭಿಮನ್ಯುಗಳ ಪ್ರತಿಮೆಗಳು ಮೇಲಿಂದ ಮೇಲೆ ನಮ್ಮಗಳ ಕವಿತೆಯಲ್ಲಿ ಮೂಡುವುದು ಇದೇ ಕಾರಣದಿಂದ. ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ…ಎಂದು ಯೋಚಿಸಿ ಬಂದವರೆಲ್ಲ ಮುಂದೆ ಅಂತರ್ಪಿಶಾಚಿಗಳಾಗಿ ತೊಳಲಾಡುತ್ತೇವೆ, ಅದೇ ಭಾವನೆಗಳಲ್ಲಿ ಇಂಥ ಕವಿತೆಗಳು ಮೂಡುತ್ತವೆ. ಅಲ್ಲಿತ್ತು ನಮ್ಮ ಮನೆ, ಇದೇ ಇನ್ನು ನಮ್ಮನೆ ಎಂದುಕೊಂಡವರಿಗೆ ಈ ದ್ವಂದ್ವವಿಲ್ಲ. ದ್ವಂದ್ವವಿಲ್ಲದೇ ಕವಿತೆ ಹುಟ್ಟುವುದಿಲ್ಲ.

    Keshav

    Like

  2. ‘The grass is greener on the other side’
    ಬಹಳ ವರ್ಷಗಳ ಹಿಂದೆ ನಾನು ಬೆಂಗಳೊರಿನಲ್ಲಿ ವಾಸವಾಗಿದ್ದು ಜೀವನದಲ್ಲಿ ಎಲ್ಲ ಸಮತೋಲನ ವನ್ನು ಕಾಣುತ್ತಿ ದ್ದಾಗ ಅಮೇರಿಕಾ ಇಂಗ್ಲಂಡ್ ನಲ್ಲಿ ನೆಲೆಸಿದ್ದ ನನ್ನ ಅನಿವಾಸಿ ಬಂಧುಗಳು ಪಾಶ್ಚಿಮಾತ್ಯ ದೇಶಗಳ ಜೀವನ ಶೈಲಿಗಳನ್ನು ಬಣ್ಣಿಸಿ ನನ್ನಲ್ಲಿ ಒಂದು ಆಸೆ ಹಾಗು ಹುಚ್ಚನ್ನು ಮೂಡಿಸಿ ತೊಳಲಾಟದ ಖಾಯಿಲೆ ಯನ್ನು ಅಂಟಿಸಿದರು! (Highly contagious) ಅಲ್ಲಿ ಕೂತು ಇಂಗ್ಲಂಡ್ ನ ಕನಸು ಕಾಣುತ್ತ ಶುರುವಾದ ತೊಳಲಾಟ ಇನ್ನು ಮುಗಿದಿಲ್ಲ. ಅಡಿಗರು ಹೇಳಿದಂತೆ ‘ಇರುವುದೆಲ್ಲವ ಬಿಟ್ಟು ಇರದುದಕೆ ತುಡಿವುದೆ ಜೀವನ’
    Very reflective poem on a common NRI theme.

    Like

  3. ಅರುಣ ನಾಡಗೀರ್ ಅವರು,ತೊಳಲಾಟದಇನ್ನೊಂದು ಮುಖವನ್ನು ತೋರಿದ್ದಾರೆ. ಅನಿವಾಸಿಗಳ ತಂದೆ ತಾಯಿಗಳ ತುಡಿತವೂ ಗಮನಿಸ ಬೇಕಾದದ್ದೇ! ಎರಡೂ ಹೃದಯವನ್ನು ಹಿಂಡುತ್ತವೆ. ಧನ್ಯವಾದಗಳು.

    Like

  4. ಎಲ್ಲರಿಗೂ ಒಂದಿಲ್ಲ ಒಂದು ತರಹದ ತೊಲಲಾಟ ಇರುತ್ತದೆ. ದೇಶ ಬಿಟ್ಟು ಬಂದವರಿಗೆ ಒಂದು ತರಹದ ತೊಳಲಾಟ. ಇನ್ನು ದೇಶ ಬಿಟ್ಟು ಹೋದವರ ತಂದೆ ತಾಯಿಗಳಿಗೆ ಬೇರೆ ತರಹದ ತೊಳಲಾಟ. ತಾವು ಭಾರತದಲ್ಲಿಯೇ ಉಳಿಯಬೇಕೇ ಅಥವಾ ಮಕ್ಕಳ ಹತ್ತಿರ ಹೋಗಿ ಇರಬೇಕೆ? ಉತ್ತರ ಬಹಳ ಕಠಿಣ .
    ನಾಡಗೀರ

    Like

  5. ದಾಕ್ಷಾಯಣಿ ಅವರ ಮನದ ತೊಳಲಾಟ, ಬೇಗುದಿಯ ಸ್ಥಿತಿಯೇ ನಮ್ಮೆಲ್ಲರದೂ ಅಲ್ಲವೇ! ಅನಿವಾಸಿಗಳಿಗೆ ಜೀವನದುದ್ದಕ್ಕೂ ಇದು ಕಾಡುವ ಪ್ರಶ್ನೆಯೇ. ಜೀವನದಲ್ಲಿ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಇರುವ ಸ್ಥಳದಲ್ಲಿ ನಮ್ಮತನವನ್ನು ಉಳಿಸಿಕೊಂಡು ಹೋಗುವುದೊಂದೇ ಇದಕ್ಕಿರುವ ಪರಿಹಾರ. ಆಗಾಗ ತೌರೂರಿಗೆ ಭೇಟಿ ನೀಡಿ ಮನದ ತಾಕಲಾಟವನ್ನು ಕಡಿಮೆಗೊಳಿಸಿಕೊಳ್ಳುವ ಉಪಾಯವಿದೆ. ದಾಕ್ಷಾಯಣಿ ಅವರು ನಮ್ಮೆಲ್ಲರ ಮನದ ತಳಮಳವನ್ನು ಈ ಕವನದಲ್ಲಿ ವ್ಯಕ್ತಪಡಿಸಿದ್ದಾರೆ.
    ಒಳ್ಳೆಯ ಕವನ ದಾಕ್ಷಾಯಣಿ.
    ಉಮಾ ವೆಂಕಟೇಶ್

    Like

Leave a Reply to Arun Nadgir Cancel reply

Your email address will not be published. Required fields are marked *