ಬಾಲ್ಯದ ನೆನಪುಗಳು – ಉಮಾ ವೆಂಕಟೇಶ್ ಹಾಗೂ ಸವಿತಾ ಸುರೇಶ್

ನಮಸ್ಕಾರ. ಎರಡು ವಾರಗಳ ಹಿಂದೆ `ಬಾಲ್ಯದ ನೆನಪುಗಳು` ಸರಣಿಯ ಲೇಖನಗಳು ಪ್ರಕಟವಾದಾಗ ಇವು ಈ ಸರಣಿಯ ಕೊನೆಯ ಲೇಖನಗಳು ಅಂತ ನಾನು ಬರೆದಿದ್ದು ನಿಮಗೆ ನೆನಪಿರಬಹುದು. ಆಗ ಅದಕ್ಕೆ ಕಾರಣವೂ ಇತ್ತು – ಅದಕ್ಕಾಗಿ ಬಂದಿದ್ದ ಲೇಖನಗಳ ಕಂತೆ ಖಾಲಿಯಾಗಿತ್ತು! ಆದರೆ ಆ ಸರಣಿಯಲ್ಲಿ ಬಂದ ರಸಪೂರ್ಣ ಬರಹಗಳು ಇನ್ನಷ್ಟು ಆಸಕ್ತರಲ್ಲಿ ಬರೆಯುವ ಉತ್ಸಾಹವನ್ನು ಮೂಡಿಸಿ, ಸರಣಿಯನ್ನು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ಬರುವಂತೆ ಮಾಡಿವೆ. ಸಂಪಾದಕನಾಗಿ ನನಗೇನೋ ಸಂತೋಷವೇ, ಇನ್ನಷ್ಟು ಪ್ರಕಟಣಾ ಸಾಮಗ್ರಿ ದೊರೆಯಿತೆಂದು! ಇದೋ, ಇಲ್ಲಿವೆ ಇನ್ನೆರಡು ಬರಹಗಳು. ಉಮಾ ವೆಂಕಟೇಶ್ ನಮ್ಮನ್ನು ಮೈಸೂರಿನ ತಮ್ಮ ಶಾಲೆಗೆ ಕರೆದೊಯ್ದು ತಮ್ಮೊಬ್ಬ ತುಂಟ ಸಹಪಾಠಿಯ ಪರಿಚಯ ಮಾಡಿಸಿದರೆ, ಸವಿತಾ ಸುರೇಶ್ ಅವರು ತಮ್ಮ ಬಾಲ್ಯದ ಹವ್ಯಾಸವನ್ನು ನೆನೆಯುತ್ತಾರೆ. ಎಂದಿನಂತೆ ಓದಿರಿ, ಆನಂದಿಸಿರಿ, ಕಮೆಂಟಿಸಿರಿ ಮತ್ತೂ ನೀವೂ ಬರೆದು ನನಗೆ ಕಳುಹಿಸಿರಿ – ಎಲ್ಲೆನ್ ಗುಡೂರ್ (ಸಂ.)

ಮೈಸೂರಿನ ವಾಣಿ ವಿದ್ಯಾಮಂದಿರಉಮಾ ವೆಂಕಟೇಶ್

ನೂರೊಂದು ನೆನಪು ಎದೆಯಾಳದಿಂದ, ಲೇಖನವಾಗಿ ಬಂತು ಆನಂದದಿಂದ: ಮೈಸೂರನ್ನು ನೆನೆದೊಡನೆ ಮುದಗೊಳ್ಳುವ ನನ್ನ ಮನದಲ್ಲಿ, ಬಾಲ್ಯದ ದಿನಗಳೊಂದಿಗೆ ಬೆಸದಿರುವ ನೆನಪುಗಳು ಸಾವಿರಾರು ತರಂಗಗಳಂತೆ ಹೊರಹೊಮ್ಮುತ್ತವೆ. ಈ ನೆನಪಿನ ತರಂಗಗಳಲ್ಲಿ ಮೈಸೂರಿನ ವಾಣಿ ವಿದ್ಯಾಮಂದಿರದ ಶಾಲೆಯಲ್ಲಿ ನಾನು ಕಳೆದ ೩ ವರ್ಷಗಳೂ ಸೇರಿವೆ. ನನ್ನ ತಂದೆ ಬಳ್ಳಾರಿಯಲ್ಲಿ ಭೂಗರ್ಭಶಾಸ್ತ್ರಜ್ಞರಾಗಿದ್ದರು. ಅಲ್ಲಿನ ಕೆಲಸ ಬಿಟ್ಟು ೧೯೬೯ರಲ್ಲಿ ನಮ್ಮ ತವರೂರಾದ ಮೈಸೂರಿಗೆ ಹಿಂತಿರುಗಿ ಬಂದಾಗ ನಾನಿನ್ನೂ ೫ನೆಯ ತರಗತಿಯಲ್ಲಿದ್ದೆ. ಅಕ್ಟೋಬರ್  ತಿಂಗಳಿನಲ್ಲಿ ವಾಪಸ್ ಬಂದಿದ್ದರಿಂದ ಅದು ಮಿಡ್ ಟರ್ಮ್ ಅವಧಿ. ಯಾವ ಶಾಲೆಗಳಲ್ಲೂ ಅಷ್ಟೊಂದು ಸುಲಭವಾಗಿ ಪ್ರವೇಶ ಸಿಗುತ್ತಿರಲಿಲ್ಲ. ನನ್ನ ಅಜ್ಜನಿಗೆ ವಾಣಿ ವಿದ್ಯಾಮಂದಿರದ ನಿರ್ವಾಹಕರಾಗಿದ್ದ ದಿ. ರಂಗಸ್ವಾಮಿ ಅಯ್ಯಂಗಾರ್ ಮತ್ತು ಅವರ ಸಹೋದರಿ ಪಂಕಜಮ್ಮ ಅವರ ಪರಿಚಯವಿತ್ತು. ರಂಗಸ್ವಾಮಿ ಅಯ್ಯಂಗಾರ್ ಅವರಿಗೆ ಕಾಲೇಜಿನಲ್ಲಿ ಸಹಪಾಠಿ ಆಗಿದ್ದರೆಂದು ಹೇಳುತ್ತಿದ್ದ ನೆನಪು. ಸರಿ, ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಮ್ಮ ಮನೆ ಇತ್ತು. ಈ ಶಾಲೆಯೂ ಅಲ್ಲೇ ಹತ್ತಿರದಲ್ಲಿ ಇದ್ದರಿಂದ ನಾವು ಮೂರು ಜನ ಮಕ್ಕಳಿಗೂ ಅದೇ ಶಾಲೆಯಲ್ಲಿ ಪ್ರವೇಶ ಸಿಕ್ಕಿತ್ತು. ಶಿಸ್ತು ಮತ್ತು ಉತ್ತಮ ಶಿಕ್ಷಕಿಯರಿದ್ದ ಆ ಶಾಲೆಯಲ್ಲಿ ವಿದ್ಯಾಭ್ಯಾಸದ ಮಟ್ಟ ಚೆನ್ನಾಗಿತ್ತೆಂದು ಎಲ್ಲರೂ ಹೇಳುತ್ತಿದ್ದ ಮಾತು ನಿಜವಾಗಿತ್ತು. ನನ್ನ ತರಗತಿಯಲ್ಲಿ ಸುಮಾರು ೪೦ ಜನ ಮಕ್ಕಳಿದ್ದ ನೆನಪು. ನನಗೆ ಎಲ್ಲರ ಹೆಸರೂ ನೆನಪಿಲ್ಲ. ಆದರೆ ತರಗತಿಯಲ್ಲಿ ತನ್ನ ತುಂಟತನ, ಪುಂಡಾಟಕ್ಕೆ ಹೆಸರಾಗಿದ್ದ ಚಂದ್ರಶೇಖರನ ಹೆಸರು ಮತ್ತು ಅವನು ನಡೆಸುತ್ತಿದ್ದ ಉಡಾಳತನ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಚಂದ್ರಶೇಖರ ಎಂದೂ ತರಗತಿಯಲ್ಲಿ ಪಾಠದ ಕಡೆಗೆ ಗಮನ ಕೊಟ್ಟವನಲ್ಲ. ಹೋಮ್ ವರ್ಕ್ ಮಾಡುವ ಜಾಯಮಾನವಂತೂ ಅವನದಾಗಿರಲಿಲ್ಲ. ಸದಾ ಜೊತೆಯಲ್ಲಿದ್ದ ಹುಡುಗ-ಹುಡುಗಿಯರನ್ನು ಕೀಟಲೆ ಮಾಡುತ್ತಾ, ಅವರ ಹೋಮ್ ವರ್ಕ್ ಮತ್ತು ಪಠ್ಯಪುಸ್ತಕಗಳ ಮೇಲೆ ಇಂಕ್ ಚೆಲ್ಲಿಯೋ, ಅವರನ್ನು ಚಿವುಟುತ್ತಲೋ ಗೋಳು ಹುಯ್ದುಕೊಳ್ಳುವ ಅವನ ನಡತೆ ಹಲವೊಮ್ಮೆ ನಮಗೆಲ್ಲಾ ಪ್ರಾಣಸಂಕಟವಾಗಿತ್ತು. ಆದರೆ ತರಗತಿಯಲ್ಲಿ ಟೀಚರ್ ಕೇಳುವ ಪ್ರಶ್ನೆಗಳಿಗೆ ಅವನು ನೀಡುತ್ತಿದ್ದ ಉತ್ತರದ ವೈಖರಿ ಹಲವು ಬಾರಿ ಇಡೀ ಕ್ಲಾಸಿನಲ್ಲಿ ನಗೆಯ ಬುಗ್ಗೆಯನ್ನೆಬ್ಬಿಸುತ್ತಿತ್ತು. ಒಮ್ಮೆ ನಮ್ಮ ಕನ್ನಡ ಟೀಚರ್ ಸುಬ್ಬುಲಕ್ಷ್ಮಿ, “ಲೋ ಚಂದ್ರಶೇಖರ, ಸಂಧಿ ಎಂದರೇನೋ?” ಎಂದು ಪ್ರಶ್ನಿಸಿದ್ದಾಗ, ಅವನು ಸಲೀಸಾಗಿ “ಟೀಚರ್, ನಮ್ಮ ಮನೆ ಮತ್ತು ಪಕ್ಕದ ಮನೆಯ ಕಾಂಪೋಂಡ್ ಮಧ್ಯೆ ಇರುವ ತೂತಿಗೆ ಸಂಧಿ ಎನ್ನುತ್ತಾರೆ” ಎಂದು ತನ್ನ ವಿದ್ವತ್ತನ್ನು ಮೆರೆದಿದ್ದ! ಯಾವ ವಿಷಯದ ಟೆಸ್ಟಿನಲ್ಲೂ ಅವನಿಗೆ ಒಂದಂಕಿಯಲ್ಲದೇ ಹೆಚ್ಚಿನ ಮಾರ್ಕ್ ದೊರಕುತ್ತಿರಲಿಲ್ಲ. ಇಷ್ಟಾದರೂ ಅವನೇನೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸದಾ ಹಸನ್ಮುಖಿಯಾಗೇ ತನ್ನ ದಿನನಿತ್ಯದ ತುಂಟಾಟಗಳನ್ನು ಮುಂದುವರೆಸುತ್ತಿದ್ದ ಅವನನ್ನು ಕಂಡು ಅನೇಕ ಬಾರಿ ಬೆರಗಾಗುತ್ತಿದ್ದೆವು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪಂಕಜಮ್ಮ ನಮ್ಮ ಇಂಗ್ಲೀಷ್ ಟೀಚರ್. ಬಹಳ ದರ್ಪ ಮತ್ತು ಶಿಸ್ತಿನ ಮಹಿಳೆ. ೬೦-೭೦ರ ದಶಕದಲ್ಲಿ, ಶಾಲೆಯ ಪುಸ್ತಕಗಳನ್ನು ಇಟ್ಟುಕೊಳ್ಳಲು ಹೊಸದಾಗಿ ಆಲುಮಿನಿಯಮ್ ಪೆಟ್ಟಿಗೆಗಳು ಮಾರುಕಟ್ಟೆಗೆ ಬಂದಿದ್ದವು. ಸರಿ ಮಧ್ಯಮ ವರ್ಗದ ಮನೆಯ ಮಕ್ಕಳ ಕೈಯಲ್ಲಿ ಈ ಆಲುಮಿನಿಯಮ್ ಪೆಟ್ಟಿಗೆಗಳು ರಾರಾಜಿಸಲಾರಂಭಿಸಿತ್ತು. ನಮ್ಮ ತಂದೆ ನಮ್ಮ ಮನೆಯಲ್ಲಿ ಮೂವರಿಗೂ, ನಮ್ಮ ಹೆಸರನ್ನು ಕೆತ್ತಿಸಿ ಮೂರು ಪೆಟ್ಟಿಗೆ ಖರೀದಿಸಿ ಕೊಟ್ಟಿದ್ದರು. ಅದನ್ನು ಶಾಲೆಗೆ ಒಯ್ಯುವುದೇ ನಮಗೆ ಒಂದು ಹೆಮ್ಮೆಯ ಕೆಲಸ. ಸರಿ ಹುಡುಗಿಯರು ಶಿಸ್ತಾಗಿ ಈ ಪೆಟ್ಟಿಗೆ ಹಿಡಿದು ಬರುತ್ತಿದ್ದದ್ದನ್ನು ಕಂಡ ಚಂದ್ರಶೇಖರನ ಕಣ್ಣುಗಳಿಗೆ ಇದು ಸಹನವಾಗಲಿಲ್ಲ. ನನ್ನ ಸಹಪಾಠಿ ಜಯಶ್ರೀಯ ಪೆಟ್ಟಿಗೆ ಅವನ ದಾಳಿಗೆ ತುತ್ತಾಯಿತು. ಅವಳ ಕೈಯಿಂದ ಪೆಟ್ಟಿಗೆ ಕಿತ್ತುಕೊಡದ್ದಲ್ಲದೇ, ಇದೇನು ಈ ಹಜಾಮನ ಪೆಟ್ಟಿಗೆ ತಂದಿದ್ದೀಯಾ ಎಂದು ಅಣಕಿಸಿದಾಗ, ಅವಳ ಕಣ್ಣಿನಲ್ಲಿ ಗಂಗಾ-ಕಾವೇರಿಯ ಧಾರೆಯೇ ಹರಿಯಿತು. ಸರಿ, ಪಂಕಜಮ್ಮ ಅವರಿಗೆ ದೂರು ತಲುಪಿತು. ಸಿಟ್ಟಿನಿಂದ ಕೆಂಡಾಮಂಡಲವಾದ ಆಕೆ, ಕೈಯ್ಯಲ್ಲಿ ದೊಡ್ಡ ರೂಲರ್ ಝಳಪಿಸುತ್ತಾ, ತಮ್ಮ ದೊಡ್ಡ ದರ್ಪದ ಧ್ವನಿಯಲ್ಲಿ, “ಭಡವಾ, ಸರಸ್ವತಿ ಇಟ್ಟು ತರುವ ಪೆಟ್ಟಿಗೆಯನ್ನು, ಹಜಾಮನ ಪೆಟ್ಟಿಗೆಗೆ ಹೋಲಿಸುತ್ತೀಯಾ” ಎಂದು ಘರ್ಜಿಸುತ್ತಾ, ಚಂದ್ರಶೇಖರನ್ನು ಬೆಂಚಿನ ಮೇಲೆ ನಿಲ್ಲಿಸಿದರು. ಅಲ್ಲೇ ಅಳುತ್ತಾ ನಿಂತಿದ್ದ ಜಯಶ್ರೀಯನ್ನು ಕರೆದು, ಅವನ ಎರಡೂ ಕೆನ್ನೆಗೆ ಹೊಡೆಯಲು ಆಣತಿ ಇತ್ತರು. ಮೊದಲು ಸ್ವಲ್ಪ ಹಿಮ್ಮೆಟ್ಟಿದ ಜಯಶ್ರೀ, ತನ್ನ ಪೆಟ್ಟಿಗೆಗಾದ ಅವಮಾನ ನೆನಪಾಗಿ ಧೈರ್ಯಮಾಡಿ ಅವನ ಕೆನ್ನೆಗೆ ಹೊಡೆದಾಗ ಅದನ್ನು ಸ್ವಲ್ಪ ಭಯದಿಂದಲೇ ನೋಡುತ್ತಿದ್ದ ನಮಗೆ, ಸರಿ ಇನ್ನು ಚಂದ್ರಶೇಖರನ ಪುಂಡಾಟ ಅವತ್ತಿಗೆ ಮುಗಿಯಿತು ಎಂದು ನಿಟ್ಟುಸಿರಿಟ್ಟೆವು.

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗುಡೂರ್

ಆದರೆ, ಅಂದು ಶಾಲೆ ಮುಗಿಸುವವರೆಗೂ ಸ್ವಲ್ಪ ಮಂಕಾಗಿದ್ದ ಚಂದ್ರಶೇಖರ ಮನೆಗೆ ಹೊರಟಾಗ ಎಂದಿನಂತೆ ತನ್ನ ನಿತ್ಯಶೈಲಿಯಲ್ಲಿ ಇತರ ಹುಡುಗರನ್ನು ರಸ್ತೆಯಲ್ಲಿ ಗೋಳುಹುಯ್ದುಕೊಳ್ಳುತ್ತಿದ್ದ. ನಾನು, ನನ್ನ ಅಕ್ಕ ಅದನ್ನು ನೋಡಿದಾಗ, ಇದೇನು ಇವನಿಗೆ ಮನೆಯಲ್ಲಿ ತಂದೆ-ತಾಯಿ ಯಾವ ಕ್ರಮವನ್ನೂ ಕೈಗೊಳ್ಳದೆ ಒಳ್ಳೆ ಬೀದಿ ಬಸವನಂತೆ ಬಿಟ್ಟಿದ್ದಾರಲ್ಲ ಎಂದು ತಲೆಕೆಡಿಸಿಕೊಂಡಿದ್ದೆವು. ಹೀಗೆ ೩ ವರ್ಷ ಕಳೆದು ನಾವೆಲ್ಲಾ ೭ನೆಯ ತರಗತಿಗೆ ಕಾಲಿಟ್ಟೆವು. ಅದೇ ಕೊನೆಯ ವರ್ಷ. ಆಗೆಲ್ಲ ೭ನೆಯ ತರಗತಿಯ ಕೊನೆಯಲ್ಲಿ ಪಬ್ಲಿಕ್ ಪರೀಕ್ಷೆ ಇತ್ತು. ಅದು ನಮ್ಮ ಜೀವನದ ಮೊದಲ ದೊಡ್ಡ ಪರೀಕ್ಷೆ. ಹಾಗಾಗಿ ಮೊದಲಿನಿಂದಲೇ ಸ್ಪೆಶಲ್ ಕ್ಲಾಸಿನ ಕಾಟ. ಇದ್ದಕ್ಕಿದ್ದ ಹಾಗೆ ಚಂದ್ರಶೇಖರನ ನಡವಳಿಕೆಯಲ್ಲಿ ಬದಲಾವಣೆ ಕಾಣಿಸಲಾರಂಭಿಸಿತ್ತು. ಬಹುಶಃ ಪಂಕಜಮ್ಮ ಅವನ ತಂದೆ-ತಾಯಿಯರನ್ನು ಕರೆಸಿ, ಅವರಿಗೆ ultimate warning ಕೊಟ್ಟಿದ್ದರೇನೋ ಅನ್ನಿಸುತ್ತೆ. ಕ್ಲಾಸಿನಲ್ಲಿ ಗಂಭೀರವಾಗಿ ಕುಳಿತು ಪಾಠದ ಕಡೆಗೆ ಗಮನವೀಯುತ್ತಿದ್ದ ಚಂದ್ರಶೇಖರನಿಗೆ ಟೆಸ್ಟುಗಳಲ್ಲಿ ಸ್ವಲ್ಪ ಡೀಸೆಂಟ್ ಆಗಿ ಮಾರ್ಕುಗಳೂ ಬರಲಾರಂಭಿಸಿತ್ತು. ಅವನ ತುಂಟಾಟಗಳೂ ಹೆಚ್ಚುಕಡಿಮೆ ನಿಂತಿದ್ದವು. ಆದರೂ ಹಲವೊಮ್ಮೆ ಹುಡುಗಿಯರ ಜಡೆ ಎಳೆಯುವ ಚಟುವಟಿಕೆ ಮುಂದುವರೆದಿತ್ತು. ಶಾಲೆಯ ಕಡೆಯ ಟರ್ಮ್ ಶುರುವಾದಾಗ, ಸ್ಪೆಶಲ್ ಕ್ಲಾಸಿನ ಹಾವಳಿ ಹೆಚ್ಚಿ, ಅವನೂ ತಣ್ಣಗಾದ. ಪಬ್ಲಿಕ್ ಪರೀಕ್ಷೆಯಲ್ಲಿ ಅವನು ೪೦% ಮಾರ್ಕ್ ಬಂದು ಪಾಸಾಗಿದ್ದ ಎಂದು ತಿಳಿದಾಗ, ನಮಗೆಲ್ಲಾ ಸ್ವಲ್ಪ ಆಶ್ಚರ್ಯವಾಗಿತ್ತು. ಚಂದ್ರಶೇಖರನ ಯಶಸ್ಸಿಗೆ ನಮ್ಮ ಹಲವಾರು ನಮ್ಮ ಟೀಚರುಗಳ ಮುತುವರ್ಜಿ ಬಹುಶಃ ಕಾರಣವಾಗಿತ್ತು. ಶಾಲೆಯ ಕಡೆಯ ಸಮಾರಂಭ ಬೀಳ್ಕೊಡುಗೆಯ ದಿನ, ಅವನೂ ತನ್ನ ಆಟೋಗ್ರಾಫ್ ಎಲ್ಲರ ಮುಂದಿಟ್ಟಾಗ, ನಾವು ಅವನ ಹಿಂದಿನ ತುಂಟಾಟ ಪುಂಡಾಟವನ್ನು ಮರೆತು ಅದರಲ್ಲಿ Best Wishes ಬರೆದದ್ದು ಇಂದಿಗೂ ನನ್ನ ನೆನಪಿನಲ್ಲಿ ಹಸಿರಾಗಿದೆ. ವಾಣಿ ವಿದ್ಯಾ ಮಂದಿರ ಬಿಟ್ಟ ನಂತರ ನನ್ನ ಹೈಸ್ಕೂಲಿನ ದಿನಗಳಲ್ಲಿ ನಾನೆಂದೂ ಚಂದ್ರಶೇಖರನನ್ನು ನೋಡಲೇ ಇಲ್ಲಾ. ಅವನು ಎಲ್ಲಿ ತನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರೆಸಿದ ಎನ್ನುವ ಮಾಹಿತಿಯೂ ನನಗೆ ಸಿಗಲಿಲ್ಲ. ನನ್ನ ಶಾಲೆಯ ದಿನಗಳ ನೆನಪಾದಾಗಲೆಲ್ಲ, ಚಂದ್ರಶೇಖರ ಸುಳಿಯುತ್ತಿರುತ್ತಾನೆ. ಇತ್ತೀಚೆಗೆ ನನ್ನ ಅಕ್ಕನ ಕೈಯಲ್ಲಿ ಮಾತಾನಾಡುವಾಗ, ವಾಣಿ ವಿದ್ಯಾ ಮಂದಿರದ ಬಗ್ಗೆ ಮಾತನಾಡಿದ್ದೆವು. ಆಗಲೂ ಚಂದ್ರಶೇಖರ ನಮ್ಮ ಸಂಭಾಷಣೆಯಲ್ಲಿ ಸುಳಿದು ನಾವಿಬ್ಬರೂ ಅವನ ತುಂಟಾಟವನ್ನು ನೆನೆಸಿಕೊಂಡು ನಕ್ಕಿದ್ದೆವು. ಬಾಲ್ಯದ ಆಟ, ಆ ಹುಡುಗಾಟ ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ. ಇಂದು ಚಂದ್ರಶೇಖರ ನಮ್ಮಂತೆಯೇ ಸಂಸಾರಿಯಾಗಿ ಮಕ್ಕಳು-ಮೊಮ್ಮಕ್ಕಳೊಂದಿಗೆ ಜೀವನ ನಡೆಸುತ್ತಿರಬೇಕು.

– ಉಮಾ ವೆಂಕಟೇಶ್

***************************************************************

ನೆನಪಿನ ನೀರೆ – ಸವಿತ ಸುರೇಶ್

ಅಮ್ಮಮ್ಮ, ದೊಡ್ಡಮ್ಮ ಹಾಗು ಅಮ್ಮ ಹಾಕುತ್ತಿದ್ದ ಕಸೂತಿ ಕೆಲಸವನ್ನು ನೋಡುತ್ತಿದ್ದ ನನಗೆ ಕಸೂತಿ ಎಂದರೆ ಆಸಕ್ತಿ ಇತ್ತು. ಆದರೆ ಹಾಕಲು ಬಿಡುತ್ತಿರಲಿಲ್ಲ. ಏಕೆಂದರೆ ಸೂಜಿ ಕೈಗೆ ಬಹಳಷ್ಟು ಬಾರಿ ಚುಚ್ಚಿಕೊಂಡಿದ್ದೆ.

ಹಾಗಾಗಿ ೭ನೇ ತರಗತಿ ಯಲ್ಲಿ ಓದುತಿದ್ದಾಗ ನಮ್ಮ ಶಾಲೆಯಲ್ಲಿ ಕಸೂತಿ ಕಕ್ಷವಿತ್ತು. ಹೇಗಾದರೂ ಮಾಡಿ ಕಸೂತಿ ಹಾಕಲೇಬೇಕೆಂದು ನಿರ್ಧರಿಸಿ, ಅಮ್ಮನಿಗೆ ಗೊತ್ತಾಗದಂತೆ ಶಾಲೆಯಲ್ಲೇ ಕುಳಿತು ಹಾಕಿದಂತ ಕಸೂತಿ.ಬಹಳಷ್ಟು ಬಾಲ್ಯದ ಮುಗ್ಧ ನೆನಪಾಗುತ್ತದೆ.

ಕಸೂತಿ ಕಲಿಸುತ್ತಿದ್ದ ನಮ್ಮ Work Experience ಶಿಕ್ಷಕಿಯಾದ ಜಯಲಕ್ಷ್ಮಿ ಮಿಸ್. ನಾವು ಮಕ್ಕಳೆಲ್ಲ ಸೇರಿ ಆಡುತ್ತಿದ್ದ ಕೊಟ್ಟಡಿ; ನಾನು ‘ಕನ್ನಡ ಪ್ರಭ ‘ ದಿನಪತ್ರಿಕೆಯಿಂದ ಮುಖ್ಯಾಂಶಗಳನ್ನು ಆಯ್ದು  ಬರೆಯುತ್ತಿದ್ದ ಬೋರ್ಡ್; ಮಧ್ಯಾಹ್ನ ಊಟದ ಸಮಯದಲ್ಲಿ ನಾವು ಸ್ನೇಹಿತರೆಲ್ಲರೂ ಪರಸ್ಪರ ಡಬ್ಬಿಯ ಊಟವನ್ನು ಹಂಚಿಕೊಂಡು ಹರಟೆ ಹೊಡೆಯುತ್ತಿದ್ದ ಜಗುಲಿ; ಬೆಲ್ ಹೊಡೆದರೆ attender ಚಿಕ್ಕಣ್ಣ ನಮ್ಮನ್ನೆಲ್ಲಾ ಕೊಟ್ಟಡಿಗೆ ಓಡಿಸುತ್ತಿದ್ದ ಸನ್ನಿವೇಶ….. ಇನ್ನೂ ಅದೆಷ್ಟೋ!!!!!!.

ಒಂದು painting ತೆಗೆದುಕೊಂಡು ಹಾಕಿದ್ದ ಕಸೂತಿ ಇದು. ಜಯಲಕ್ಷ್ಮಿ ಮಿಸ್ ಯಿಂದ ‘ V Good’ ಎಂದು ಕೆಂಪು ಶಾಹಿಯಲ್ಲಿ ಬಿದ್ದ ಸಹಿ ಮನಸ್ಸಿಗೆ ಏನೋ ಸಾಧಿಸಿದ ಹಾಗೆ ಪರಮಾನಂದ.

ನಂತರ ಮನೆಗೆ ಬಂದು ಅಮ್ಮನಿಗೆ ತೋರಿಸಿ ಶಭಾಷ್ ಎಂದು ಪ್ರಶಂಸೆ ಪಡೆದ್ದದ್ದು. ಈ ಕಸೂತಿ ಹಾಕಿ  ೩೨ ವರ್ಷಗಳಾದರೂ, ಹಾಕಿದ ಸಂದರ್ಭ, ಛಲ, ಶ್ರದ್ಧೆ, ಬಾಲ್ಯದ ನೆನಪುಗಳು ಹಾಗೆ ಅಚ್ಚಹಸಿರಾಗಿಯೇ ಉಳಿದಿದೆ ಏಕೆಂದರೆ ಇದನ್ನು ನಾನು frame ಹಾಕಿ ನನ್ನ ಕೋಣೆಯಲ್ಲೇ ಇಟ್ಟಿದ್ದೇನೆ!!!!!!!!!!

✍ಸವಿತ ಸುರೇಶ್

******************************************************************

ಇಂಗ್ಲಂಡ್ ಕನ್ನಡಿಗರ ಕವಿಗೋಷ್ಠಿ – ಕನ್ನಡಪ್ರೆಸ್ ರಾಜ್ಯೋತ್ಸವ ವಿಶೇಷ ೨೦೨೦

ಅನಿವಾಸಿಯ ವಾಟ್ಸಾಪ್ ಗುಂಪಿನಲ್ಲಿ ಪ್ರೇಮಲತ ಅವರು ಹಾಕಿದ ಅಹ್ವಾನವನ್ನು ಸ್ವೀಕರಿಸಿ ಮುಂದೆ ಬಂದ ನಮ್ಮ ಐವರು ಉತ್ಸಾಹಿ ಕವಿ / ಕವಯತ್ರಿಯರು ಬರೆದ ಕವಿತೆಗಳಿವು. ವಿಡಿಯೊದಲ್ಲಿ ಇರುವ ಕ್ರಮದಲ್ಲಿಯೇ ಇವೆ; ಕೆಲವಕ್ಕೆ ಅವರೇ ಬರೆದಿರುವ ಮುನ್ನುಡಿಗಳಿವೆ. ಅನಿವಾಸಿ ಕವಿಗಳ ಕನ್ನಡ ನಾಡು, ನುಡಿಯ ಪ್ರೇಮವನ್ನು ಮೆರೆಯುವ ಈ ರಚನೆಗಳನ್ನು ಓದಿ, ಕೇಳಿ (ಯೂಟ್ಯೂಬ್ ಲಿಂಕ್ ಕೊನೆಯಲ್ಲಿದೆ) ನೋಡಿ ಆನಂದಿಸಿ. – ಎಲ್ಲೆನ್ ಗುಡೂರ್ (ಸಂ.)

ಮುನ್ನುಡಿ:

ಈ ಬಾರಿಯ ಕನ್ನಡ ರಾಜ್ಯೋತ್ಸವ, ಕೆ.ಎಸ್.ಎಸ್.ವಿ.ವಿ. ಯ ಐವರು ಕವಿಗಳಿಗೆ ತಮ್ಮ ಸ್ವರಚಿತ ಕನನಗಳನ್ನು ವಾಚಿಸಲು ಒಂದು ವಿಶೇಷ  ಅವಕಾಶವನ್ನು ಹೊತ್ತು ತಂದಿತು.

ಈ ವರ್ಷದಲ್ಲೇ ಆರಂಭವಾದ ಕನ್ನಡಪ್ರೆಸ್.ಕಾಂ ಎನ್ನುವ ಅಂತರ್ಜಾಲಜಗಲಿಯ ಪ್ರಧಾನ ಸಂಪಾದಕರಾದ ಶ್ರೀವತ್ಸ ನಾಡಿಗರು ಇಂಗ್ಲೆಂಡಿನ ಅನಿವಾಸಿ ಕನ್ನಡ ಕವಿಗಳಿಂದ ಒಂದು ಕವಿಗೋಷ್ಠಿಯನ್ನು ಮಾಡಬಹುದಲ್ಲವೇ? – ಎಂಬ ಹೊಳಹನ್ನು ನೀಡಿದ್ದೇ ಇದಕ್ಕೆ ನಾಂದಿಯಾಯಿತು.

ಕವಿಗೋಷ್ಠಿಯನ್ನು ವರ್ಚುಯಲ್ ವೇದಿಕೆ-ವೀಡಿಯೋ ಪಾಡ್ ಕಾಸ್ಟ್ ಮೂಲಕ ಮಾಡಬಹುದೆಂದೂ, ಅವರವರ ಕವನವನ್ನು ವಾಚಿಸುವ ವೀಡೀಯೋಗಳನ್ನು ನೀಡಿದರೆ ಸಾಕೆಂದೂ ಅವರು ಹೇಳಿದರು. ಈ ಸಾಧ್ಯತೆಯನ್ನು ಅನಿವಾಸಿಯ ಕವಿಗಳ ಮುಂದಿಟ್ಟಾಗ ಸವಿತಾ ಸುರೇಶ್, ರಾಮ ಶರಣ್, ರಾಧಿಕ, ಕೇಶವ ಕುಲಕರ್ಣಿ ಮತ್ತು ಶ್ರೀವತ್ಸ ದೇಸಾಯಿಯವರು ಇದಕ್ಕೆ ಒಪ್ಪಿದರು. ಈ ಐಡಿಯಾವನ್ನು ಕವಿಗಳ ಮುಂದಿಟ್ಟಿದ್ದು 24 ಅಕ್ಟೋಬರಿನಂದು. 5000 ಮೈಲು ದೂರದ ಐವರು ಕವಿಗಳು ಕವನಗಳನ್ನು ಬರೆದು, ಓದಿ, ವಿಡೀಯೋ ಮಾಡಿ ಕಳಿಸಲು ತಗೊಂಡ ಕಾಲ ಕೇವಲ 3-4 ದಿನಗಳು ಮಾತ್ರ! ಅವುಗಳನ್ನು ನಿರೂಪಣೆಯನ್ನೂ ಸೇರಿಸಿ, ಒಂದಿಷ್ಟೂ ತಪ್ಪಿಲ್ಲದಂತೆ ಪ್ರಬುದ್ಧವಾದ ಕವಿಗೋಷ್ಠಿಯ ಹದಕ್ಕೆ ಜೋಡಿಸಿದ್ದು ಸುಧಾಕರ್ ದರ್ಬೆಯವರು. ಇವರು ಕನ್ನಡಪ್ರಭದ ಮುಖ್ಯ ಇಲ್ಲಸ್ಟ್ರೇಷನ್ ಕಲಾವಿದರು. ಮುನ್ನೂರಕ್ಕೂ ಹೆಚ್ಚು ಪುಸ್ತಕಗಳ ಮುಖ ಪುಟ ವಿನ್ಯಾಸ ಮಾಡಿದವರು. ಮುಖ್ಯ ಮಂತ್ರಿಗಳಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಇತ್ಯಾದಿ ಹಲವು ಪ್ರಶಸ್ತಿಗಳಿಗೆ ಭಾಜನರಾದವರು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ, ಕರ್ನಾಟಕಕ್ಕೂ – ಇಂಗ್ಲೆಂಡಿನ ಕನ್ನಡ ಕವಿಗಳಿಗೂ ಸಂಬಂಧಸೇತುವನ್ನು ನಿರ್ಮಿಸಿದ ಶ್ರೀವತ್ಸ ನಾಡಿಗರು ಎರಡೂ ಕಡೆಗಳಿಂದ ಓದುಗರ ಮತ್ತು ಕೇಳುಗರ ಮೆಚ್ಚುಗೆಗೆ ಪಾತ್ರರಾದರು. ಭಾಗವಹಿಸಿದ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ವಿಶೇಷ ಸಂಭ್ರಮವನ್ನು ತುಂಬಿದರು.

ಈ ಕವಿಗೋಷ್ಠಿಯ ಕಾರಣ  ಶ್ರೀವತ್ಸ ನಾಡಿಗರು ಮತ್ತು ಕೇಶವ ಕುಲಕರ್ಣಿಯವರು ದೂರದ ಸಂಬಂಧಿಗಳು ಎನ್ನುವ ವಿಚಾರವೂ ತಿಳಿದು ಬಂದಿದ್ದು ಮತ್ತೊಂದು ವಿಶೇಷಕ್ಕೂ ನಾಂದಿ ಹಾಡಿ ಎಲ್ಲರಿಗೂ ಮುದನೀಡಿದ ವಿಚಾರವಾಯಿತು.

– ಡಾ.ಪ್ರೇಮಲತ ಬಿ.

*******************************************************************

 ನಾನು ಮತ್ತು ನನ್ನ ಭಾಷೆ - ಕೇಶವ ಕುಲಕರ್ಣಿ

 ಇಂಗ್ಲಂಡಿನಲ್ಲಿರುವ ನಾನಿರುವ ಊರಿನ poetry clubನಲ್ಲಿ
 ನಾನು ಅನುವಾದಿಸಿ ಓದುವ ಕವಿತೆಯ ಭಾಷೆ 'ಕನ್ನಡ' ಎಂದೆ
 'I didn't know you are from Canada,' ಎಂದು ನಿರೂಪಕ
 ನನ್ನ ಕಂದು ಮೈಬಣ್ಣವನ್ನು ಓರೆಗಣ್ಣಿಂದ ನೋಡುತ್ತಾನೆ
 
 ನಾನು ಕೆಲಸ ಮಾಡುವ ಇಂಗ್ಲಂಡಿನ ಆಸ್ಪತ್ರೆಯಲ್ಲಿ
 ಭಾರತೀಯ ಮೂಲದ ವಯಸ್ಸಾದ ರೋಗಿಗಳಿಗೆ 
 'ನಿಮ್ಮ ಪಂಜಾಬಿ ಉರ್ದು ಹಿಂದಿ ನನಗೆ ಅರ್ಥವಾಗುವುದಿಲ್ಲ,' ಎಂದರೆ
 'ನೀನ್ಯಾವ ಸೀಮೆಯ ಭಾರತೀಯ!' ಎಂದು ಗೇಲಿ ಮಾಡುತ್ತಾರೆ
 
 ಇಂಗ್ಲಂಡಿನ ಅಖಿಲ ಭಾರತೀಯ ಸಮಾರಂಭವೊಂದರಲ್ಲಿ
 ಹಿಂದಿ ಪಂಜಾಬಿ‌ ಬೆಂಗಾಲಿ ಹಾಡುಗಾರರ ನಡುವೆ
 ನಾನೊಂದು ಕನ್ನಡದ ಭಾವಗೀತೆಯನ್ನು ಹಾಡುತ್ತೇನೆ
 'What a lovely Tamil song!' ಎಂದು‌ ಡಿಜೆ ಬೆನ್ನು ತಟ್ಟುತ್ತಾನೆ
 
 ಇಂಗ್ಲೀಷಿನಲ್ಲಿ ಬ್ಲಾಗಿಸುವ ನನ್ನ ಕಸಿನ್ ಮನೆಗೆ ಬೆಂಗಳೂರಿಗೆ ಹೋದಾಗ, 
 'ನೀನೇಕೆ ಕನ್ನಡದಲ್ಲೂ ಬರೆಯುವುದಿಲ್ಲ?' ಎಂದು ಕೇಳಿದರೆ ಆತ ನನ್ನನ್ನೇ ಕೇಳುತ್ತಾನೆ:
 ಇಂಗ್ಲಂಡಿನಲ್ಲಿದ್ದೂ ನೀನ್ಯಾಕೆ ಇನ್ನೂ ಕನ್ನಡದಲ್ಲಿ ಬರೆಯುತ್ತೀಯ?
 ನಿನ್ನ ಮಗಳಿಗಾಗಲಿ ನನ್ನ ಮಗನಿಗಾಗಲಿ ಕನ್ನಡ ಓದಲು ಬರುತ್ತದೆಯೆ?'
 
(ಇದೊಂದು ಗಪದ್ಯ)  
*******************************************************
ದುಂಡು ಮಲ್ಲಿಗೆ ಬರುವೆಯಾ ಇಲ್ಲಿಗೆ - ರಾಧಿಕಾ ಜೋಶಿ

ಮಲ್ಲಿಗೆಯ ಋತುವಿನಲ್ಲಿ ಹಾಗು ಹಬ್ಬಗಳ ಸಮಯದಲ್ಲಿ ಮಲ್ಲಿಗೆಯ ಊರು ಮೈಸೂರಿನವಳಾದ ನಾನು ಅದನ್ನು ಬಹಳ ಹಂಬಲಿಸುತ್ತೇನೆ. ಸುಮಾರು ೩ ವರ್ಷಗಳಿಂದ ಬೆಳೆಸಲು ಪ್ರಯತ್ನಿಸುತ್ತಿದ್ದೇನೆ. ನನ್ನ ದುರಾದೃಷ್ಟ, ಗಿಡ ಒಣಗಿ ಹೋಗುತ್ತಿದೆ. ನನ್ನ ತಂದೆ ತಾಯಿಯೊಡನೆ ದಿನ ಪೇಟೆಗೆ ಹೋಗಿ ಹೂವು ಹಣ್ಣು ಕಾಯಿಪಲ್ಯೆ ತರುವ ಆಚರಣೆ. ಒಬ್ಬ ಹೂವಾಡಗಿತ್ತಿ ನಮಗೆ ಮುಖ ಪರಿಚಯ. ಬಹಳ ಶಾಂತ ಹಾಗು ಹಸನ್ಮುಖಿ ಆಗಿದ್ದ ಅವರ ಮುಖ ಇನ್ನು ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಸರಸರನೆ ಮಲ್ಲಿಗೆ ಕಟ್ಟುವ ಅವರ ಕೈಚಾತುರ್ಯ ನನ್ನನ್ನು ಯಾವಾಗಲು ಮಂತ್ರಮುಗ್ಧಳನ್ನಾಗಿ ಮಾಡುತ್ತಿತ್ತು. ನನಗೆ ಯಾವಾಗಲು ಅಂಗೈ ಉದ್ದದ ಮಲ್ಲಿಗೆ ಮಾಲೆ ಉಚಿತವಾಗಿ ಕೊಡುತ್ತಿದ್ದರು,”ತೊಗೋ ಪುಟ್ಟಿ ಹೂ, ನಿನಗೇ” ಅಂತ ಹೇಳಿ ಮುಗುಳ್ನಗುವರು. ಏನೋ ಒಂದು ಖುಷಿ. ಆ ಹೂವನ್ನು ಅಮ್ಮನಿಗೆ ಕೊಡದೇ ನಾನೇ ಹಿಡಿದುಕೊಂಡು ಬರ್ತಿದ್ದೆ. ನನಗೆ ಗುಲಾಬಿ ಸೇವಂತಿಗೆ ಇಷ್ಟವಾಗುತ್ತಿತ್ತು, ಆದರೆ ನನ್ನ ಜಿಜ್ಞಾಸೆ ಎಲ್ಲರೂ ಮಲ್ಲಿಗೆಯ ಬೆಲೆಯನ್ನು ಕೇಳಿ, ಕೊಳ್ಳುತ್ತಿದ್ದರು..

 ದುಂಡು ಮಲ್ಲಿಗೆ ಬರುವೆಯಾ ಇಲ್ಲಿಗೆ 
  
 ಗುಲಾಬಿ ಸೇವಂತಿ ರಾಶಿಯ ನಡುವೆಯೂ ಕಂಗೊಳಿಸುವ ಮಲ್ಲೆ
 ದಿನನಿತ್ಯ ಪೇಟೆಗೆ ಹೋಗುವ ಪುಟ್ಟಿಯ ಪ್ರಶ್ನೆ 
 ಬಣ್ಣಬಣ್ಣದ ಹೂವಿನ ನಡುವೆ ಎಲ್ಲರನು ಆಕರ್ಷಿಸುವುದು ಏಕೆ ಮಲ್ಲಿಗೆ
 ಗುಲಾಬಿಯ ವಿವಿಧ ಬಣ್ಣ ಇದಕಿಲ್ಲ, ಸೇವಂತಿಗೆಯಂತೆ ತಾಜಾತನ ಉಳಿಯುವುದಿಲ್ಲ 
 ಸಂಪಿಗೆಯ ಪ್ರಖರವಾದ ಸುವಾಸನೆ ಇಲ್ಲ, ಮತ್ತೇಕೆ ಬೇಡಿಕೆ ಈ ಹೂವಿಗೆ 
 ಮುಂಜಾನೆ ಬಂದಿಳಿಯಿತು ಶುಭ್ರ ಶ್ವೇತ ಮಲ್ಲಿಗೆ ರಾಶಿ ಬುಟ್ಟಿ
 ಹೂಗಾರ ಒಂದೆರಡು ಮಾರನ್ನು ಕೆಸುವಿನ ಎಲೆಯಲ್ಲಿ ಕಟ್ಟಿ 
 ಆಹ್ಲಾದಕರ ಬಿಡಿ ಮಲ್ಲಿಗೆಯೋ ಸುಂದರ ಸುರುಳಿ ರಾಶಿ ಮುತ್ತಿನ ಹಾರವೋ  
 ಪೋಣಿಸಿದ ಮೊಗ್ಗು ಲಲನೆಯ ಮುಡಿಯ ಜಡೆ ಮಲ್ಲಿಗೆಯ ಅಲಂಕಾರವೋ 
 ಹಬ್ಬವೋ ಮಹೋತ್ಸವವೋ ಕಳೆ ಹೆಚ್ಚಿಸುವ ಮಲ್ಲೆಯ ಮಾಲೆಯೋ  
  
 ಮನೆಯ ತುಂಬಾ ಮಲ್ಲಿಗೆಯ ಪರಿಮಳ 
 ಚಿಕ್ಕ ಮಕ್ಕಳು ಮೊಗ್ಗಿನ ಜಡೆಯ ಸಂಭ್ರಮದಲ್ಲಿ ತಳಮಳ 
 ಕಾಲ ಬೆಳೆದಂತೆ ಮಲ್ಲಿಗೆಯ ಮೇಲಿನ ಪ್ರೀತಿಯು ಬೆಳೆಯಿತು 
 ನಮ್ಮ ಮನೆಯಲ್ಲಿರು ದೇವರ ಕೋಣೆಯ ಚಿತ್ರಪಟದ ಮೇಲೆ 
 ಅಂಬಾರಿಯ ಚಾಮುಂಡೇಶ್ವರಿಯ ಮೂರ್ತಿಯ ಮೇಲೆ
 ಕಂಗೊಳಿಸುವ ಈ ಸರಳ ಸೂಕ್ಷ್ಮ ಹೂ ಮುತ್ತು 
 ಸಾಮಾನ್ಯ ದಿನವನ್ನು ವಿಶೇಷ ಮಾಡಿತ್ತು  
 ದೇಶ ಬಿಟ್ಟು ವಿದೇಶದ ನೆಲದಲ್ಲಿ 
 ತಂದೆ ತಾಯಿಯನ್ನು ಹಂಬಲಿಸುವಂತೆ 
 ಈ ಮುಗ್ಧ ಸುಗಂಧಿತ ಸುಂದರ ಹೂವನ್ನು 
 ಸದಾ ಹಂಬಲಿಸುತ್ತಾ ಈ ಭೂಮಿಯಲ್ಲಿ 
 ಈ ಹೂವನ್ನು ಬೆಳೆಸಲು ಸತತ ಪ್ರಯತ್ನದಲ್ಲಿ 
 ಕನ್ನಡ ನಾಡಿನಲ್ಲಿ ಎಲ್ಲರಿಗೆ ಸರಳವಾಗಿ ಸಿಗುವ ಸ್ವತ್ತು  
 ಆದರೆ ಇಲ್ಲಿ ಬೇಕೆಂದರೂ ಸಿಗದ ವಸ್ತು

***************************************************** 
ರಾಜ್ಯೋತ್ಸವ: ಸ್ವಗತ, ಹಾರೈಕೆ - ರಾಮಶರಣ ಲಕ್ಷ್ಮೀನಾರಾಯಣ
  
 ಉದಯವಾಯಿತು ಅಂದು ಚೆಲುವ ಕನ್ನಡ ನಾಡು
 ಕುಟ್ಟಿ ಮಾಡಿದೆವಿಂದು ಗುಡ್ಡ ಬೆಟ್ಟಗಳ ತೌಡು
 ದುರಾಸೆಗೆ ಬರಿದಾಯ್ತು ಜೀವ ಪೊರೆದಿಹ ಕಾಡು
 ಪ್ರವಾಹ ಭೂಕುಸಿತದಲಿ ಬಿಕ್ಕಿದೆ ಕಣ್ಣೀರ ಹಾಡು
  
 ಬಡಿದೆಬ್ಬಿಸಲು ಬಾರಿಸಿದರು ಕನ್ನಡದ ಡಿಂಡಿಮ
 ಒಂದಿಷ್ಟೂ ಇಲ್ಲ ತಾಳಕ್ಕೆ ಕುಣಿವ ಆ ಸಂಭ್ರಮ
 ಪರಭಾಷೆ  ಪರದೇಶಗಳೆಂಬ ಮೋಹದ ಮೋಡಿ
 ಹಳೆಭಾಷೆ ಸಂಸ್ಕೃತಿಯ ಅವನತಿಗೆ ಇದು ಹಾದಿ
  
 ಕವಿ ಕಂಡ ಸರ್ವರಿಗೂ ಶಾಂತಿಯ ತೋಟ
 ಆಗಬೇಕೆ ಬರಿ ಪುಸ್ತಕದ ಒಳಗಿನ ಪಾಠ?
 ಜಾತಿ, ಮತ, ಪಂಥದಲಿ ಚಿಂದಿ ಜರತಾರಿ
 ಚರ್ಚೆಗೆಲ್ಲಿದೆ ಹಾದಿ ಕಂಠಶೋಷಣೆ ಹೆದ್ದಾರಿ
  
 ಬನ್ನಿ ಬೆಳೆಸುತಲಿರುವ ಪರಿಸರದ ಹೆಮ್ಮುಡಿ
 ಜಲ, ಜೀವ, ತರು, ಲತೆ, ಭವಿತವ್ಯಕೆ ಕುಡಿ.
 ಬನ್ನಿ ಹಚ್ಚುತಲಿರುವ ಭಾಷೆ, ಸಂಸ್ಕೃತಿಯ ಕಿಡಿ
 ಮೂಡಿಸಲು ಹೊಸ ಜೀವಗಳಲೆಮ್ಮ ನಲು ನುಡಿ
  
 ಬನ್ನಿ ಕಟ್ಟೋಣ ಶಾಂತಿ- ಸಮನ್ವಯಗಳ ಗುಡಿ
 ಅದುವೆ ಕನ್ನಡನಾಡು ಆದರ್ಶದ ಕೈಪಿಡಿ 

****************************************************

 ಹೊನ್ನುಡಿ  - ಸವಿತ ಸುರೇಶ್  
  
 ಪ್ರಜ್ವಲಿಸಲಿ  ಎಲ್ಲೆಲ್ಲೂ  ಕನ್ನಡದ  ಪ್ರಜ್ಯೋತಿ
 ತಾಯೊಲ್ಮೆಯ ಸಿರಿಸೊಡರಿಗೆ  ಅಭಿಮಾನವೇ  ಪ್ರಗತಿ
  
 ಕನ್ನಡ  ನುಡಿಗೆ ಶಕ್ತಿ ನೀಡಲಿ ನಿಷ್ಠೆತೈಲ ಭತ್ತದಂತೆ
 ಝಗಝಗನೇ ಉರಿಯುತಿರಲಿ ಛಲದ ಬತ್ತಿ ಆರದಂತೆ
  
 ಮಿಡಿಯುತಿರಲಿ  ಕನ್ನಡಕ್ಕೆ ಕನ್ನಡಿಗರ ಹೃದಯ 
 ಕನ್ನಡ ನೆಲದಿ ಕನ್ನಡವೇ ಸದಾ ಅಗ್ರಮಾನ್ಯ
  
 ಕನ್ನಡಾಂಬೆಯ ಪಾದಕೆ ಹೊನ್ನುಡಿಯಾರ್ಚನೆ
 ನಿರಂತರ ಕನ್ನಡಿಸಲಿ ಕನ್ನಡ ನಿತ್ಯಾರಾಧನೆ
  
***************************************************

ಅಲ್ಲಿಯೂ ಸಲ್ಲುವುದು! – ಶ್ರೀವತ್ಸ ದೇಸಾಯಿ

ಕನ್ನಡ ಪ್ರೆಸ್ ನ ಶ್ರೀವತ್ಸ ನಾಡಿಗ್ ಅವರು ಯು ಕೆ ಕನ್ನಡಿಗರಿಗೆ ರಾಜ್ಯೋತ್ಸವಕ್ಕಾಗಿ ಕವನಗಳನ್ನು ಆಹ್ವಾನಿಸಿದಾಗ ಬಂದ ಯೋಚನೆಗಳಿವು. ಅನಿವಾಸಿಯಾಗಿ ಇಂಗ್ಲೆಂಡಿನಲ್ಲಿ ಕಳೆದ ಹೆಚ್ಚು ಕಡಿಮೆ ಅರ್ಧ ಶತಮಾನ ಬದುಕಿನ ಸಿಂಹಾವಲೋಕನ ಮಾಡುತ್ತ  ಒಬ್ಬ ಕನ್ನಡಿಗನಾಗಿ ನನ್ನ ಅಸ್ಮಿತೆ ಮತ್ತು ಅಸ್ತಿತ್ವದ ಬಗ್ಗೆ (identity) ಯೋಚಿಸುತ್ತ ಬರೆದ ಸಾಲುಗಳಿವು. ಹುಟ್ಟಿದಾಗಿನಿಂದ ಬದುಕಿರುವ ತನಕ ಕನ್ನಡ ಕೈಹಿಡಿದಂತೆ ನಂತರವೂ ಕೈಬಿಡಲಾರದೆಂಬ ಆಶಯ, ಹಂಬಲ! ಇಲ್ಲಿ ಸಲ್ಲಿದ ಭಾಷೆ ಅಲ್ಲಿಯೂ ಸಲ್ಲುವುದೇ? – ಶ್ರೀ ದೇ. (ಕವಿತೆಯನ್ನು ಓದಿ, ಪರಿಷ್ಕರಿಸಿದ ಕೇಶವ ಕುಲ್ಕರ್ಣಿಯವರಿಗೆ ವಂದನೆಗಳನ್ನು ಅರ್ಪಿಸುತ್ತ…)

 ಅಲ್ಲಿಯೂ ಸಲ್ಲುವುದು! 
  
 ನಾನು ಅನಿವಾಸಿಯಾದರೇನು
 ನನ್ನ ಉಸಿರು ಕನ್ನಡ ಎಂಬ ಮಾತು ಹುಸಿಯೇ?
 ಮೊಲೆಹಾಲಿನೊಡನೆ ಕುಡಿದದ್ದು ಕನ್ನಡ
 ನನ್ನೆದೆಯ ಮಿಡಿತವೂ ನನ್ನ ನಾಡಿಯ ತುಡಿತವೂ
 ಕನ್ನಡ ಕನ್ನಡ ಎಂಬ ಅನುಭವ ಸುಳ್ಳೇ?
 
 ಇಲ್ಲಿ ಲೇಕ್ ಡಿಸ್ಟ್ರಿಕ್ಟ್ ನ ವಿಂಡಮಿಯರಿನ ಕೆರೆಯ ಸುಳಿಗಾಳಿಯಲ್ಲಿ
 ನನ್ನ ಕಿವಿಯಲ್ಲಿ ಅದೇ ಗುಂಜನ 
 ಯಾರೋ ಕರೆದಂತೆ, `ಬಾರೋ ಸಾಧನಕೇರಿಗೆ!`
 ಪೀಕ್ ಡಿಸ್ಟ್ರಿಕ್ಕಿನ ಗುಡ್ಡ ಕಣಿವೆಗಳಲ್ಲಿ ಕೇಳುತಿದೆ
 ಅತ್ತಿಕೊಳ್ಳದ ಶಾಲ್ಮಲೆಯ ಮಂಜುಳ ಜುಳು ಜುಳು ನಗೆ!
 
 ಯಾರ್ಕ್ ಶೈರಿನ ಅತಿವೃಷ್ಟಿಯ ಮಹಾಪೂರ
 ಕೊಂಡೊಯ್ತು ನಾ ಹುಟ್ಟಿದ ಮನೆಯ ಸಪ್ತಾಪುರಕ್ಕೆ
 ನಮ್ಮ ಮನೆಯ ಜಾಗದಲ್ಲಿರುವುದೀಗ ಡೂಪ್ಲೆಕ್ಸ್ ಕಾಂಪ್ಲೆಕ್ಸುಗಳು
 ಹೊಸ ಮಾಲಕರು ಕರೆದು ತೋರಿಸಿದರು ಡೌಲಾಗಿ
 ತಮ್ಮ “ಪೋಶ್” ಮಾರ್ಬಲ್ ಸ್ಟಡಿಯನ್ನು
 ನನಗೆ ಕಂಡುದು ನಾ ಹುಟ್ಟಿದ ಬಾಣಂತಿ ಖೋಲಿ
 ಅವ್ವನ ತೊಡೆಯಮೇಲೆ ಪವಡಿಸಿದ ನವಜಾತ ಶಿಶು – ನಾನು!
 
 ಲಗ್ನವಾದೊಡನೆ ಈ ಚಳಿನಾಡಿಗೆ ವಲಸೆ ಬಂದಾಗ
 ಬೆಚ್ಚಗಿರಲು ನಾ ಹೊದ್ದುಕೊಂಡು ಬಂದುದು ಮಾತೃಭಾಷೆ ಮಾತ್ರ
 ಅದನ್ನು ಕಳೆದರೆ ನಾನು ನಗ್ನ!
 ಈಗ ವಯಸ್ಸಾಗುತ್ತಿದೆ--
 'ಬಾಹತ್ತರ` ದಾಟಿದ ಮೇಲೆ ಸ್ವರ್ಗ ಹತ್ತಿರವಲ್ಲವೆ?
 ’ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’
 ಅದಕ್ಕೆ ಇನ್ನೊಂದು ಪದ ಜೋಡಿಸುವೆ `ಮಾತೃಭಾಷಾ ಚ`!
 ಸತ್ತ ಮೇಲೆ ಸ್ವರ್ಗವೋ ನರಕವೋ
 ಅಲ್ಲಿಯ ಭಾಷೆ ಕನ್ನಡವಾದರೆ ಸಾಕು
 ಭಾಷೆ ಕನ್ನಡವಾದರೆ ನರಕವೂ ಸ್ವರ್ಗ! 

************************************************