ರಾಷ್ಟಕವಿ ಜಿ ಎಸ್ ಶಿವರುದ್ರಪ್ಪನವರು ಕಣ್ಮರೆಯಾಗಿ ಇಂದಿಗೆ ಸರಿಯಾಗಿ ಎರಡು ವರ್ಷಗಳಾದವು. ಈ ಸಂದರ್ಭದಲ್ಲಿ ಅವರ ಒಂದು ವಿಶಿಷ್ಟ ಕವನವನ್ನು ‘ಅನಿವಾಸಿ‘ ಪ್ರಕಟಿಸುತ್ತಿದೆ. ಎಷ್ಟೋ ತಂದೆಯರು ಮಕ್ಕಳಿಗೆ ಬಟ್ಟೆ ಹಣ ಇತ್ಯಾದಿ ಉಡುಗೊರೆ ಕೊಡುವದು ಸಾಮಾನ್ಯ. ಆದರೆ ಜಿಎಸ್ಸೆಸ್ ಅವರು ಮಗನಿಗೆ ಕೆಳಗಿನ ಕವನವನ್ನು ಸ್ಪೆಷೆಲ್ ಉಡುಗೊರೆಯಾಗಿ ಕೊಟ್ಟರು. ಕಳೆದ ಭಾನುವಾರದ ವರೆಗೆ ಇದು ಪ್ರಕಟವಾಗಿರಲಿಲ್ಲ.
(ಚಿತ್ರ: ಡಾ ಶಿವಪ್ರಸಾದ. ಹಕ್ಕುಗಳನ್ನು ಕಾದಿರಿಸಲಾಗಿದೆ)
(ಈ ಕವನವನ್ನು ಉಡುಗೊರೆಯಾಗಿ ಪಡೆದ ಮಗ ಶಿವಪ್ರಸಾದ ಹೇಳುತ್ತಾರೆ: ”ನಾನು ೨೦೦೯ ದೀಪಾವಳಿ ಸಮಯಕ್ಕೆ ಬೆಂಗಳೂರಿಗೆ ಭೇಟಿ ನೀಡೀದಾಗ ಅವರನ್ನು ಪರಿವಾರದೊಂದಿಗೆ ಬಂಡಿಪುರ ಹಾಗು ಉದಕಮಂಡಲ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದೆ. ಪ್ರವಾಸದಿಂದ ಬಂದ ನಂತರ ನಾನು ಇಂಗ್ಲಂಡಿಗೆ ಹೊರಡುವ ಮುನ್ನ ತಂದೆಯವರು ನನ್ನನ್ನು ಕೋಣೆಯೊಳಗೆ ಕರೆದು ತಾವು ಬರೆದ ’To Prasad ಸಫಾರಿ ನೆನಪಿಗೆ’ ಎಂಬ ಕವನವನ್ನು ನನಗೆ ಒಪ್ಪಿಸಿದರು. ಈ ಕವನಕ್ಕೆ ಒಂದು ಔಪಚಾರಿಕ (formal) ಶೀರ್ಷಿಕೆ ಇಲ್ಲವೆಂಬುದನ್ನು ಗಮನಿಸಬಹುದು. ಈ ಕವನ ಜಿಎಸ್ಸೆಸ್ ಅವರು ನನಗೆ ಕೊಟ್ಟ ವಿಶಿಷ್ಟವಾದ ಉಡುಗೊರೆ ಎಂದು ನಾನು ಭಾವಿಸಿದ್ದೇನೆ. GSS ಅವರ ಹಸ್ತಾಕ್ಷರಗಳನ್ನುಕೆಲವು ಆಪ್ತರು ಗುರುತಿಸಬಹುದು.)
* * * * * * *
ಶ್ರದ್ಧಾಂಜಲಿ
ದೀಪವಿರದ ದಾರಿಯಲ್ಲಿ
ಭರವಸೆಯ ದೀಪವಿರಿಸಿ
ಸೋತು ನಿಂತ ಹೆಜ್ಜೆಗಳಿಗೆ
ಹೆಸರನಿಟ್ಟು, ಉಸಿರಕೊಟ್ಟು
ವೈಚಾರಿಕತೆಯ ತೈಲವನಿರಿಸಿ
ಜ್ಞಾನವೆಂಬ ಹಣತೆ ಹಚ್ಚಿ
ಪ್ರೀತಿ ಕರುಣೆಯಂಬ ಶಿಲೆಗೆ
ಕಾವ್ಯವೆಂಬ ಹೂವ ಮುಡಿಸಿ
ಸಮಾನತೆಯ ಮಂತ್ರ ಹಿಡಿದು
ಜಾತಿಯೆಂಬ ಕಳೆಯ ತೆಗೆದು
ಹಮ್ಮು ಬಿಮ್ಮು ಕಿತ್ತು ಎಸೆದು
ಅನುಕಂಪೆಯ ಹೃದಯ ತೆರೆದು
ನೋವು ನಲಿವುಗಳ ಕಣಿವೆ ಹಾದು
ಕಾಣದ ಕಡಲಿಗೆ
ಹಂಬಲಿಸಿ ಹಾತೊರೆದು
ನೀಲಿಯಲಿ ಕರಗಿ ನಮ್ಮೆಲ್ಲ ತೊರೆದು
ಸಾಹಿತ್ಯದ ಸಂಪುಟಗಳಲಿ
ಕನ್ನಡಿಗರ ಹೃದಯದಲ್ಲಿ
ಮಧುರ ಗೀತೆ ಸ್ವರಗಳಲ್ಲಿ
ಅಮರರಾಗಿ ಉಳಿದಿರಿಲ್ಲಿ.
– ಡಾ. ಜಿ. ಎಸ್. ಶಿವಪ್ರಸಾದ್

