(ಯು ಕೆ ಕನ್ನಡ ಬಳಗದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ (ಕ ಸಾ ಸಾಂ ವಿ ವಿ)ಯವರು ಇತ್ತೀಚೆಗೆ ಹೊರತಂದ ಧ್ವನಿ ಸುರುಳಿಯಲ್ಲಿಯ ಇನ್ನೊಂದು ರಚನೆಯನ್ನು ಈ ವಾರ ಪ್ರಕಟಿಸುತ್ತಿದ್ದೇವೆ. ಈ ಹಾಸ್ಯ-ವಿಡಂಬನೆ ಭರಿತ ಹಾಡಿಗೆ ವತ್ಸಲಾ ಅವರೇ ಈ ಕೆಳಗೆ ಹಿನ್ನೆಲೆ ಕೊಟ್ಟಿದ್ದಾರೆ. CD ಯಲ್ಲಿ ಇದನ್ನು ಕೇಳಿ ನೀವೆಲ್ಲ ಆನಂದಿಸಿ, ’ವಧು ಪರೀಕ್ಷೆ’ ಗೆಂದು ಬಂದ ಆನಂದನ ಪಾಡು ಏನೇ ಇರಲಿ!-ಸಂ)
ನಾವು ಆಗ ತಾನೆ ವ್ಯದ್ಯಕೀಯ ಪರೀಕ್ಷೆ ಮುಗಿಸಿ ಹಾಯಾಗಿ ಇದ್ದೆವು. ಆಗ ಶುರುವಾಯಿತು ಮದುವೆ ಕಾಟ . ನಾನಂತು ನನ್ನ ಅಪ್ಪನಿಗೆ ಹೇಳೇಬಿಟ್ಟೆ “ನೋಡು ನೀನು ತಿಪ್ಪರಲಾಗ ಹಾಕಿದರೂ ನಾನು ಅಮೆರಿಕಾದ ಹುಡುಗನ್ನ ಮದುವೆ ಆಗಲ್ಲ ” ಅಂತ . ಪಾಪ ನನ್ನ ಫ್ರೆಂಡ್ ರಮನಿಗೆ ಅಷ್ಟ್ಟು ಸ್ವಾತಂತ್ರ್ಯ ಮತ್ತು ಧೈರ್ಯ ಇರಲ್ಲಿಲ . ಅವಳು ನನ್ನ ಹತ್ತಿರ ಬಂದು ಗೋಳಾಡಿದಳು .”ನೋಡೇ ,ಯಾರೋ ತಲೆ ಮಾಸಿದವ ಅಮೇರಿಕನ್ನು ಬರುತ್ತಾನಂತ್ತೆ . ಅವನಿಗೆ ಹಳೆಕಾಲದ ಹುಡಿಗಿ ಬೇಕಂತ್ತೆ. ಸೀರೆ ಒಟ್ಟು ಕುಂಕುಮ ಅರಸಿನ ಹಚ್ಚಿ ಹೂವ ಮುಡಿದರಬೇಕೆಂತೆ . ನಾನೇನು ಹಸುವೇ ನೋಡಿ ಮೂಗುದಾರ ಹಾಕಿ ಎಳೆಯುವುದಕ್ಕೆ?,” ಅಂತ ಗೋಗರೆದಳು. ಆಗ ನಾವು ಒಂದು ನಾಟಕ ಆಡಿದೆವು . ಅದೇ ಅದರ ಹಿನ್ನಲೆ. –ವತ್ಸಲಾ ರಾಮಮೂರ್ತಿ
ಭಾಮೆಯ ನೋಡಲು ಬಂದ ನಮ್ಮ ಆನಂದ!!!!
ಭಾಮೆಯನು ನೋಡಲು ಬಂದ
ಕಚ್ಚೆ ಪಂಚೆ, ಶಾಲು ಹೊದ್ದು ಬಂದ ಆನಂದ
ಅಮೆರಿಕಾದಲ್ಲಿ ಅಧಿಕಾರಿ ಅವನಾಗಿದ್ದ
ಇಡ್ಲಿ, ದೋಸೆ, ರಾಗಿ ರೊಟ್ಟಿಯೆಂದರೆ ಪ್ರಾಣ ಬಿಡುತ್ತಿದ್ದ
ವಧುವನ್ನು ನೋಡಲು ಕಾತುರನಾಗಿದ್ದ
ಹೆಸರು ನಾಗವೇಣಿಯೆಂದ ಭಾವಮೈದುನ
ಪಟ್ಟೆ ಸೀರೆಯುಟ್ಟು ಮಲ್ಲಿಗೆ ಮುಡಿದು
ವಜ್ರದ ಓಲೆ, ಮೂಗು ಬಟ್ಟು ಹೊಳೆಸುತ್ತ ನಾಚುತ್ತಾಳೆಂದುಕೊಂಡ
ಅಂತಿಂತ ಹೆಣ್ಣಲ್ಲ ಅವಳು ಭಾಗ್ಯವತಿ ಎಂದು ಕನಸುಕಂಡ
ವಧು ಬಂದಳು ವರನ ಪರೀಕ್ಷೆಗೆ
ಕೆಂಪು, ಹಸಿರು ಬಣ್ಣ ಬಳಿದು ಕೇಶ ರಾಶಿಗೆ
ತುಟಿಯಲ್ಲಿ ಕೆಂಪು, ಕಣ್ಣಲ್ಲಿ ನೀಲಿ ಬಣ್ಣ
ಮೈಗೆಲ್ಲ ಚಿನ್ನದ ಬಣ್ಣದ ಪುಡಿಯ ಮಿಣ ಮಿಣಿಸುತ್ತ

ಕಾಲಲ್ಲಿ ಆರಿಂಚಿನ ಮೊಸಳೆ ಚರ್ಮದ ಮೆಟ್ಟು
ತಲೆ ಎತ್ತಿ ಧಿಮಕ್, ಧಿಮಕ್ ಧಾವಂತದಲ್ಲಿ
ಕೈಯಲ್ಲಿ ಮದ್ಯಪಾನದ ಬಟ್ಟಲು ಹಿಡಿದಿದ್ದಳು
ಹೈ ದೇರ್ !! ಹುಸಿನಗೆ ಬೀರುತ್ತ ಅಂದಳು
ಕಾದಿದ್ದನವ ರೇಶ್ಮೆ ಸೀರೆಯ ನಾಗವೇಣಿಗೆ
ಉಪ್ಪಿಟ್ಟು ಬೋಂಡ ಜಾಮೂನ್ ನಿಪ್ಪಟ್ಟಿಗೆ
ನಾಚುತ್ತ ಮಲ್ಲಿಗೆ ಮುಡಿದು ಬರುವ ಹೆಣ್ಣಿಗೆ
ಕೃಷ್ಣ ನೀ ಬೇಗನೆ ಬಾರೋ ಎನ್ನುವ ಹಾಡಿಗೆ
ಭಾಮೆಯ ನೋಡಲು ಬಂದ ನಮ್ಮ ಆನಂದ!!!!
— ಡಾ ವತ್ಸಲಾ ರಾಮಮೂರ್ತಿ
(ವ್ಯಂಗ ಚಿತ್ರ : ಡಾ. ಲಕ್ಷ್ಮಿನಾರಾಯಣ ಗುಡೂರ್)