ಸಂಕಟ (ಕಥೆ) – ಲಕ್ಷ್ಮೀನಾರಾಯಣ ಗುಡೂರ

ಅನಿವಾಸಿಯ ಬಂಧುಗಳಿಗೆ ನಮಸ್ಕಾರ. ಇಂದು ನನ್ನ ಹತ್ತಿರ ಬೇರೆ ಏನೂ ಸರಕು ಇರಲಿಲ್ಲವಾದ್ದರಿಂದ, ಈ ಹಿಂದೆ ನಾನೇ ಬರೆದ ಕಥೆಯೊಂದನ್ನು ಹಾಕುತ್ತಿರುವೆ. ನಾನು ಕಥೆಗಾರನಲ್ಲವೆಂದು ಗೊತ್ತಿದ್ದೂ ನನ್ನ ಒಂದು ಪ್ರಯತ್ನವನ್ನು ನಿಮ್ಮಂತಹ ಪ್ರಬುದ್ಧರ ಮುಂದೆ ಇಡುತ್ತಿರುವೆ. ದಯವಿಟ್ಟು ನಿಮ್ಮ ಅಭಿಪ್ರಾಯ, constructive criticism ತಿಳಿಸಿ, ಓದಿದ ನಂತರ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ)

28.06.2020

ಹೆಚ್ಚು ಕಡಿಮೆ ಆರು ತಿಂಗಳಾದ ಮೇಲೆ ಮತ್ತೆ ಇಲ್ಲಿ ಬರೆಯುತ್ತಿರುವೆ. ಬರೆಯುವ ವಿಷಯ ಬಹಳವಿದೆ – ಎಲ್ಲಿಂದ ಪ್ರಾರಂಭಿಸುವುದೋ ಗೊತ್ತಿಲ್ಲ. ಅದರ ಬಗ್ಗೆ ಚಿಂತಿಸುತ್ತ ಹತ್ತು ದಿನಗಳು ಹೋದವು. ಇವತ್ತೂ ಕೈಯಲ್ಲಿ ಐ-ಪ್ಯಾಡಿದೆ … ಆದರೆ ಬೆರಳುಗಳು ಓಡುತ್ತಿಲ್ಲ. ನನ್ನ ಯೂನಿವರ್ಸಿಟಿ ಅಪ್ಲಿಕೇಶನ್ನಿನಿಂದ ಶುರುವಾದದ್ದು, ಇಂಟರ್ವ್ಯೂ, ಏ-ಲೆವೆಲ್ ಮಾಕ್ ಪರೀಕ್ಷೆ, ಮುಂದಿನ ತಯಾರಿಗಳ ಮೂಲಕ ಹಾಯ್ದು ನಿನ್ನೆ ಫೈನಲ್ ಪರೀಕ್ಷೆಗಳು ಮುಗಿಯುವವರೆಗೆ ಸತತವಾಗಿ ಒಂದಾದ ಮೇಲೊಂದರಂತೆ ಬಂದು, ನನ್ನ ಸ್ಥಿತಿ ಆ ಬಿಬಿಸಿಯ ಅಟ್ಟೆನ್ಬರಾ ಅವರ ಬ್ಲೂ ಪ್ಲಾನೆಟ್ಟಿನ ತಿಮಿಂಗಿಲದ ಹಾಗಿತ್ತು – ಮಧ್ಯ ಮಧ್ಯ ಮೇಲೆ ಬಂದು ಉಸಿರೆಳೆದುಕೊಳ್ಳುವುದು ಮತ್ತೆ ಓದು / ಕೆಲಸದ ಜೀವನದಲ್ಲಿ ಮುಳುಗು ಹಾಕುವುದು. ಇವತ್ತು ಖಾಲಿ ಇದ್ದೇನೆ, ಬ್ಲಾಗಿನಲ್ಲೇನಾದರೂ ಬರೆಯೋಣ ಅನ್ನಿಸಿ ಎತ್ತಿಕೊಂಡೆ.

ಅಮ್ಮ ಕರೆಯುತ್ತಿದ್ದಾಳೆ ಕೆಳಗಿನಿಂದ. ನೋಡಿ ಬಂದು ಮತ್ತೆ ಬರೆಯುತ್ತೇನೆ.

ವೃತ್ತಿಯಲ್ಲಿ ವೈದ್ಯಳಾಗಿದ್ದ ಅಮ್ಮನಿಗೆ ಕೋವಿಡ್ ಆಗಿದ್ದು, ನಾಲ್ಕು ತಿಂಗಳ ಹಿಂದೆ ಫೆಬ್ರುವರಿಯಲ್ಲಿ. ನನ್ನ ಮಾಕ್ ಎಕ್ಸಾಮ್ ಮುಗಿದಂದು. ಪರೀಕ್ಷೆಯ ಕೊನೆಯ ದಿನ ಅವತ್ತು. ಬೆಳಗ್ಗೆ ನಾನು ಹೊರಡುವಾಗಲೇ ಅಮ್ಮ ತಲೆ ಹಿಡಿದುಕೊಂಡು ಕೂತಿದ್ದಳು. “ಯಾಕೋ ಸ್ವಲ್ಪ ತಲೆನೋವು ಕಣೆ, ಕೆಮ್ಮು, ಜ್ವರ ಯಾವ್ದೂ ಇಲ್ಲ ಪುಣ್ಯಕ್ಕೆ; ಇಲ್ಲಂದರೆ ಕೋವಿಡ್ಡೋ ಏನೋ ಅನ್ನೋ ಚಿಂತೆ ಮಾಡಬೇಕಾಗಿರ್ತಿತ್ತು. ಎಲ್ಲ ಕಡೆ ಅದೊಂದು ಶುರುವಾಗಿದೆಯಲ್ಲ, ನಮ್ಮ ಆಸ್ಪತ್ರೆಯಲ್ಲಿ ಸಾಕಷ್ಟು ಪೇಶಂಟ್ಗಳು ಬರುತ್ತಿದ್ದಾರೆ! ನಿನ್ ಪರೀಕ್ಷೆ ಬೇರೆ. ಕೊನೇ ದಿನ, ಮುಗಿಸಿ ಬಿಡು. ನೋಡೋಣ” ಅನ್ನುತ್ತ ಪ್ಯಾರಾಸೆಟಮಾಲ್ ನುಂಗಿ ನನಗೆ ಬೈ ಹೇಳಿದಳು. ಪಪ್ಪ ಆಗಲೇ ಕಾರು ಸ್ಟಾರ್ಟ್ ಮಾಡಿಯಾಗಿತ್ತು. ನಾನು ಬಾಗಿಲು ದಾಟುವಾಗಲೇ “ದೇವರಿಗೆ ಕೈ ಮುಗಿದು ಹೋಗು, ಗುಡ್ ಲಕ್” ಅಂತ ಅಮ್ಮನ ಕೂಗು ಕೇಳಿಸಿ, ಬಾಗಿಲ ಮೇಲಿದ್ದ ಗಣಪತಿಯ ಕಡೆ ನೋಡಿ ಒಮ್ಮೆ ಎದೆಗೆ, ಕಣ್ಣಿಗೆ ಕೈ ಮುಟ್ಟಿಸಿಕೊಂಡು “ಅಮ್ಮಾ, ಬಾಗಿಲು ಹಾಕ್ಕೋ; ಪಪ್ಪ ಆಗಲೇ ಕಾರಲ್ಲಿದಾನೆ” ಅಂದು ಬಾಗಿಲು ಮುಚ್ಚಿ ಹೊರಟೆ.

ಸಂಜೆ ಶಾಲೆಯಿಂದಲೇ ಗೆಳತಿಯರೊಂದಿಗೆ ಹೊರಗೆ ಊಟಕ್ಕೆ ಹೋಗುವ ಬಗ್ಗೆ ಅಮ್ಮನಿಗೆ ಗೊತ್ತಿದ್ದುದರಿಂದ, ಒಂದು ಮೆಸೇಜು ಕಳಿಸಿ ನಾವು ನಾಲ್ವರೂ ಇಟಾಲಿಯನ್ ರೆಸ್ಟಾರೆಂಟಿಗೆ ಹೋದೆವು. ಒಂಬತ್ತೂವರೆಗೆ ಪಪ್ಪನ ಮೆಸೇಜು ಬಂತು – “Waiting in the car outside”. ಗೆಳತಿಯರಿಗೆ ವಿದಾಯ ಹೇಳಿ ಬಂದು ಕಾರಲ್ಲಿ ಕೂತಾಗ ಒಂಬತ್ತು-ಮುಕ್ಕಾಲು. ಪಪ್ಪ ಯಾಕೋ ಚಿಂತೆಯಲ್ಲಿರುವಂತೆ ಅನ್ನಿಸಿತು. ಒಂದೆರಡು ಸಲ ಕೇಳಿದರೂ ಅದಕ್ಕುತ್ತರ ಬರಲಿಲ್ಲ; ನನ್ನ ಕಳೆದ ದಿನದ ಬಗ್ಗೆ ಮಾತಾಡುತ್ತ ಡ್ರೈವ್ ಮಾಡಿದ ಪಪ್ಪ.

ಮನೆಗೆ ಬಂದಾಗ ಅಮ್ಮ ಇರಲಿಲ್ಲ. ಆಗಲೇ ನನಗೆ ನೆನಪಾಗಿದ್ದು ಅಮ್ಮನ ಬೆಳಗಿನ ತಲೆನೋವು. “ಅಮ್ಮ ಎಲ್ಲಿ?” ಊಟದ ಟೇಬಲ್ಲಿನ ಮುಂದೆ ಕುಳಿತ ಪಪ್ಪನ ಮುಖ ನೋಡುತ್ತ ಕೇಳಿದೆ.

“ಮಧ್ಯಾಹ್ನ ಜ್ವರ ಹೆಚ್ಚಾಗಿ, ಉಸಿರಾಟಕ್ಕೆ ತೊಂದರೆ ಅನ್ನಿಸಿದಾಗ ಅವಳನ್ನು ಆಸ್ಪತ್ರೆಗೆ ಕರಕೊಂಡು ಹೋಗಬೇಕಾಯ್ತು. ಆಕ್ಸಿಜೆನ್ ಸ್ಯಾಚುರೇಶನ್ ಕಡಿಮೆಯಾಗಿತ್ತು. ಎಕ್ಸ್-ರೇ, ಸಿಟಿ ಸ್ಕ್ಯಾನ್ ಮತ್ತು ಕೋವಿಡ್ ಟೆಸ್ತ್ ಮಾಡಿದ್ರು, ಮೊದಲಿನ ಎರಡರಲ್ಲೂ ಪಾಸಿಟಿವ್ ಅಂತ ಬಂದುದರಿಂದ ಅಲ್ಲೇ ಅಡ್ಮಿಟ್ ಮಾಡಿಕೊಂಡಿದ್ದಾರೆ. ಕೋವಿಡ್ ರಿಸಲ್ಟ್ ಬರಲಿಕ್ಕೆ ಎರಡು ದಿನ ಬೇಕಾಗಬಹುದಂತೆ. ನಿನ್ನ ಪರೀಕ್ಷೆ ಮುಗಿದು, ಊಟ ಮುಗಿಸಿಕೊಂಡು ಬರ್ತೀಯಲ್ಲ ಅಂತ ಮುಂಚೆ ಹೇಳ್ಳಿಲ್ಲ” ಅಂದ ಪಪ್ಪ.

ನನ್ನ ಎದೆ ಡವಡವ ಹೊಡೆದುಕೊಂಡರೂ, ತೋರಿಸಿಕೊಳ್ಳದೆ “ಹೇಗಿದ್ದಾಳೆ ಈಗ” ಅಂದೆ. “ಸ್ವಲ್ಪ ಹೊತ್ತಿನ ಮುನ್ನ ಫೋನು ಮಾಡಿದ್ಲು, ಆಮೇಲೆ ಮಾಡ್ತಾಳಂತೆ ಎದ್ದಿದ್ದರೆ” ಅನ್ನುವುದರಲ್ಲಿ ನನ್ನ ಫೋನು ಸದ್ದು ಮಾಡಿತು. ಸುಸ್ತಿನ ಧ್ವನಿಯಲ್ಲಿ ಮಾತಾಡಿದ ಅಮ್ಮ, ಎರಡು ನಿಮಿಷದಲ್ಲಿ ಒಂದಿಪ್ಪತ್ತು ಬಾರಿ ಕೆಮ್ಮಿದಳು.

“ಸರಿ, ಮಲಕ್ಕೊ. ಗುಡ್ ನೈಟ್” ಫೋನು ಕಟ್ ಮಾಡಿದೆ. ನಾನೂ ಮಲಗಲು ಹೋದೆ.

ಬೆಳಗ್ಗೆ ಎದ್ದಾಗ ಹನ್ನೆರಡು-ಇಪ್ಪತ್ತು. ಹೇಗೂ ವೀಕೆಂಡು ಅಲ್ಲಿಂದ ಹಾಫ್ ಟರ್ಮ್ ರಜೆ. “ಅಮ್ಮು, ನಾನು ರಾತ್ರಿಯಿಡೀ ಮಲಗಲಿಕ್ಕೇ ಆಗಿಲ್ಲ, ಒಂದೆರಡು ಗಂಟೆ ಮಲಗಿರ್ತೀನಿ” ಅಂತ ಬಾಗಿಲಲ್ಲೇ ಹೇಳಿ ಮಲಗಲು ಹೋದ ಪಪ್ಪ. ಇಡೀ ದಿನ ಮನೆಯೆಲ್ಲ ಭಣಭಣ, ಅತಿಯಾದ ನಿಶ್ಶಬ್ದ. ಅಮ್ಮನ ಮಾತಿಲ್ಲ, ಕೆಲಸಗಳಿಗೆ ಸಹಾಯ ಮಾಡುತ್ತ ಅವಳ ಹಿಂದೆಯೇ ಸುತ್ತುವ ಅಪ್ಪನ ಜೋಕುಗಳಿಲ್ಲ. ಅವತ್ತು ಶನಿವಾರ ಮಧ್ಯಾಹ್ನದ ರೂಟೀನ್ ಅಜ್ಜಿ-ತಾತನ ಜೊತೆಯ ಚಾಟಿಂಗಿಗೂ ನಾನೊಬ್ಬಳೇ ಇದ್ದೆ. ಅಜ್ಜಿ-ತಾತನಿಗೆ ಈಗಲೇ ಹೇಳಿ ಗಾಬರಿಮಾಡಬಾರದು ಎಂದು ಹಿಂದಿನ ರಾತ್ರಿಯೇ ಹೇಳಿದ್ದ ಪಪ್ಪ.

ಇನ್ನೆರಡು ದಿನ ಹೀಗೆಯೇ ಕಳೆಯಿತು. ಕೋವಿಡ್ ಸ್ವಾಬ್ ಪಾಸಿಟಿವ್ ಅಂತ ಬಂದಿತ್ತು. ಫೋನಿನ ಮೇಲೆಯೇ ಅಮ್ಮನೊಡನೆ ಮಾತು. ಇನ್ನೂ ಸುಸ್ತು, ಕೆಮ್ಮು ಹೆಚ್ಚಾದಂತೆಯೇ ಅನ್ನಿಸುತ್ತಿತ್ತು. ಮನೆಯಲ್ಲಿ ಸ್ಮಶಾನಮೌನ. ಫೋನಿನಲ್ಲಿ ಕೇಳಿಸುತ್ತಿದ್ದ ಅಮ್ಮನ ಕೆಮ್ಮು ಮಾತ್ರ ಮನೆಯಲ್ಲಿ ಕೇಳಿಸುವ ಸದ್ದಾಗಿತ್ತು.

ಏನಿದು ಕೋವಿಡ್, ಏನು ಅದಕ್ಕೆ ಉಪಾಯ ಅಂತ ಗೂಗಲ್ ಮಾಡಿ ನೋಡಿದರೆ, ಜಾಸ್ತಿ ಏನೂ ವಿಷಯ ಸಿಗುತ್ತಿರಲಿಲ್ಲ. ಅಮ್ಮ ಇದ್ದ ವಾರ್ಡಿನ ಡಾಕ್ಟರು ಆರನೆಯ ದಿನ ಬೆಳಿಗ್ಗೆ ಫೋನು ಮಾಡಿ, ಹೊಸ ಐ-ಪ್ಯಾಡುಗಳನ್ನು ಕೊಂಡಿರುವುದಾಗಿಯೂ, ಪೇಷಂಟುಗಳ ಜೊತೆಗೆ ಮನೆಯವರು ಫೇಸ್ ಟೈಮಿನಲ್ಲಿ ಮಾತಾಡಬಹುದೆಂದೂ ತಿಳಿಸಿದಾಗ ಒಂದು ದೊಡ್ಡ ಚಿಂತೆ ಕಳೆದಂತಾಗಿ ಪಪ್ಪನ ಕಣ್ಣಿನಲ್ಲಿ ಜೀವ ಮರಳಿ ಬಂದಂತೆನಿಸಿತು. ಅವತ್ತೆಲ್ಲ ಮಾತೂ ಜಾಸ್ತಿಯಾಗಿದೆ ಅನ್ನಿಸಿದ್ದೂ ನಿಜ. ಸಂಜೆ ಅಮ್ಮನನ್ನು ನೋಡಿದಾಗ ಪಪ್ಪ ಅತ್ತೇಬಿಡುತ್ತನೆನ್ನಿಸಿದರೂ, ಅದು ನನ್ನ ಕಣ್ಣೀರನಿಂದ ಮಂಜಾಗಿದ್ದ ದೃಷ್ಟಿಯ ದೋಷವಿರಬಹುದೇ ಅಂದುಕೊಂಡು ಸುಮ್ಮನಾಗಿದ್ದೆ.

ಹಾಫ್ ಟರ್ಮ್ ರಜೆ ಮುಗಿದು, ಶಾಲೆ ಶುರುವಾಗಿ ಎರಡು ದಿನ ಆಗಿತ್ತು. ಮಂಗಳವಾರ ಮಧ್ಯಾಹ್ನ ಮನೆಗೆ ಬಂದಾಗ ಪಪ್ಪ ತಲೆಯನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಸೋಫಾದ ಮುಂದೆ ನೆಲದ ಮೇಲೆ ಕೂತಿದ್ದ. ಒಂದು ಕ್ಷಣ ಎದೆ ಧಸ್ಸೆಂದರೂ, ಎಷ್ಟು ಸಾಧ್ಯವೋ ಅಷ್ಟು ನಾರ್ಮಲ್ ಧ್ವನಿಯಲ್ಲಿ “ಏನಾಯ್ತು ಪಪ್ಪಾ?” ಅಂದರೂ, ಆ ಧ್ವನಿ ನನ್ನದೇನಾ ಆನ್ನುವ ಅನುಮಾನ ಬರದೇ ಇರಲಿಲ್ಲ.

ಅಳು ತಡೆಯುತ್ತ ಗೊಗ್ಗರು ಧ್ವನಿಯಲ್ಲಿ “ಅಮ್ಮನಿಗೆ ಸೀರಿಯಸ್ಸು ಪುಟ್ಟಾ; ಇವತ್ತು ಬೆಳಿಗ್ಗೆ ಐಸಿಯುಗೆ ಶಿಫ್ಟ್ ಮಾಡಿದ್ದರು. ಈಗ ವೆಂಟಿಲೇಟರ್ ಮೇಲೆ ಹಾಕಬೇಕೇನೋ ಅನ್ನುವ ಮಾತಾಡಿದರು ಡಾಕ್ಟರು …” ಇಷ್ಟು ಹೇಳುವಲ್ಲಿಗೆ ಮುಗಿಯಿತು ಪಪ್ಪನ ಹಿಡಿತ, ಕಣ್ಣೀರಿನ ಕಟ್ಟೆ ಒಡೆಯಿತು, ತಲೆಯನ್ನು ಕೆಳಗೆ ಮಾಡಿ ಕುಳಿತ. ಸದ್ದಿಲ್ಲದೇ ಅಳುತ್ತಿದ್ದಾನೆ ಅನ್ನುವುದನ್ನು ಮುಚ್ಚಿಡಲಾರದೇ ಹೋದವು ಆಗಾಗ ಬರುತ್ತಿದ್ದ ಬಿಕ್ಕುಗಳು. ನಾನಂತೂ ಪಪ್ಪನ ಭುಜದ ಮೇಲೆ ತಲೆಯಿಟ್ಟು ಜೋರಾಗಿಯೇ ಅತ್ತೆ, ಅದುವರೆಗೆ ಹಿಡಿದಿಟ್ಟಿದ್ದ ದುಃಖವನ್ನೆಲ್ಲ ಹೊರಹಾಕಿದೆ.

ಅಲ್ಲಿಂದ ನಮ್ಮ ಜೀವನ ಯಾಂತ್ರಿಕವಾಯಿತು. ಅಳು ಕಡಿಮೆಯಾಗಿ, ಮೌನ ಹೆಚ್ಚಿತು. ಪಪ್ಪನ ಕೆಲಸ, ನನ್ನ ಶಾಲೆ, ಅಮ್ಮನ ಐಸಿಯು ಹೋರಾಟ ಮುಂದುವರೆದೆವು. ದಿನಕ್ಕೆರಡು ಬಾರಿ ಫೇಸ್ ಟೈಮಿನಲ್ಲಿ ಅಮ್ಮನನ್ನು ನೋಡುವುದು, ಬದುಕಿರುವಳೆನ್ನುವ ಸಮಾಧಾನಕ್ಕಿಂತ ಹತ್ತಾರು ಟ್ಯೂಬುಗಳನ್ನು ಚುಚ್ಚಿಸಿಕೊಂಡು ಸೊರಗಿ ಅಸ್ಥಿಪಂಜರದಂತಾಗಿರುವ ಅವಳನ್ನು ನೋಡುವ ಸಂಕಟವೇ ಹೆಚ್ಚಾಯಿತು. ಎಷ್ಟೋ ಸಲ ತಪ್ಪಿಸಿದರೆ ದುಃಖ ಕಡಿಮೆಯಾಗಬಹುದೇನೋ ಅನ್ನಿಸಿದರೂ, ಪಪ್ಪ ಒಬ್ಬನೇ ಆಗುತ್ತಾನಲ್ಲ ಅನ್ನುವ ಕಾರಣಕ್ಕೆ ನನ್ನನ್ನು ನಾನು ಎಳೆದುಕೊಂಡು ಹೋಗುತ್ತಿದ್ದೆ. ಉಳಿದೆಲ್ಲ ಹೊತ್ತು ಪಪ್ಪ ತನ್ನ ಕೆಲಸದಲ್ಲಿ ಕಳೆದರೆ, ಪರೀಕ್ಷೆ ಹತ್ತಿರ ಬಂದಂತೆ ನನ್ನ ಓದಿನ ಭರದಲ್ಲಿ ನಾನು ಮುಳುಗಿದೆ. ಆಗೀಗ ಅಡಿಗೆ ಮಾಡುವಾಗ, ಪ್ರತಿಸಲ ಊಟ ತಿಂಡಿ ಮಾಡುವಾಗ ಪಪ್ಪ ಮತ್ತು ನಾನು ಜೊತೆಯಾಗಿಯೇ ಮಾಡುವುದು. ಅಮ್ಮನ ನಗು, ಮಾತುಕತೆ, ಹಾಸ್ಯದ ಬಗ್ಗೆ ಮಾತಾಡುತ್ತಾ ಅವಳೊಂದಿಗೆ ಕಳೆದ ಒಳ್ಳೆಯ ದಿನಗಳ ನೆನಪನ್ನು ಹಸಿರಾಗಿಡುವ ಪ್ರಯತ್ನ ನಡೆಸುತ್ತಿದ್ದೆವು. ಅಜ್ಜಿ-ತಾತಗೂ ವಿಷಯ ಹೇಳಿಯಾಗಿತ್ತು; ಅವರೂ ಈ ನಡುವೆ ಪರಿಸ್ಥಿತಿಯೊಡನೆ ಹೊಂದಾಣಿಕೆ ಮಾಡಿಕೊಂಡು ದೂರದೇಶದಲ್ಲಿ ಇಬ್ಬರೇ ಇರುವ ನಮ್ಮ ಧೈರ್ಯಗೆಡದಂತೆ ನೋಡುವ ಯತ್ನದಲ್ಲೇ ಇರುತ್ತಿದ್ದರು.

ಈಸ್ಟರ್ ರಜೆ ಮುಗಿದು ಎರಡು ವಾರವಾಗಿತ್ತು. ಅಮ್ಮನಿಗೆ ಟ್ರೆಕಿಯಾಸ್ಟಮಿ (ಉಸಿರಾಟಕ್ಕೆ ಅನುಕೂಲವಾಗುವಂತೆ ಕತ್ತಿನಲ್ಲಿ ಮುಂದೆ ಗಾಯಮಾಡಿ ನೇರವಾಗಿ ವಿಂಡ್ ಪೈಪಿಗೆ ಆಕ್ಸಿಜೆನ್ ಕೊಳವೆ ಹಾಕುವುದೆಂದು ಗೂಗಲ್ ಮಾಡಿದಾಗ ಗೊತ್ತಾಗಿದ್ದು) ಮಾಡಿ ಮೂರು ದಿನಕ್ಕೆ, ಶುಕ್ರವಾರ ಮಧ್ಯಾಹ್ನ ಐಸಿಯು ಟೀಮಿನೊಂದಿಗೆ ನಮ್ಮ ಮಾತಿದೆ ಅಂತ ಪಪ್ಪ ಹೇಳಿದ್ದ. ಎಲ್ಲ ಫೋನು-ಕಂಪ್ಯೂಟೆರಿನ ಮೇಲೆಯೆ ಮಾತುಕತೆ. ಡಾಕ್ಟರರು ತಮ್ಮ ಪ್ರಯತ್ನ ತಾವು ಮುಂದುವರೆಸುವುದಾಗಿ ಭರವಸೆ ಕೊಡುತ್ತಲೇ, ಯಾವಾಗ ಬೇಕಾದರೂ ಜೀವ ಹೋಗಬಹುದೆಂದು ಹೇಳಿದಾಗ ಪಪ್ಪನ ಮುಖ ಕಲ್ಲಿನಂತಾಗಿದ್ದರೆ, ನನ್ನ ಹೊಟ್ಟೆಯಲ್ಲಿ ಯಾರೋ ಕೈ ಹಾಕಿ ಹಿಂಡಿದಂತಾಗಿತ್ತು.

ಮೇ ಎರಡನೆಯ ವಾರ, ನನ್ನ ಫೈನಲ್ ಪರೀಕ್ಷೆಗಳು ಶುರುವಾಗಲು ಐದು ದಿನವಿರಬೇಕಿತ್ತು. ಅಮ್ಮ ಇನ್ನೂ ಐಸಿಯುನಲ್ಲೇ ಇದ್ದಳು. ಅವತ್ತು ಬೆಳಿಗ್ಗೆ ಎದ್ದಾಗ, ಪಪ್ಪ ಯಾರೊಡನೆಯೋ ಜೋರಾಗಿ ಮಾತಾಡುತ್ತಿರುವುದು ಕೇಳಿಸಿತು. ಈ ನಡುವೆ ಕೇಳಿಲ್ಲದ ಆಶಾವಾದದ ಛಾಯೆ ಇದ್ದಂತನಿಸಿ, ಓಡಿ ಕೆಳಗಿಳಿದು ಬಂದೆ. ಐಸಿಯು ಡಾಕ್ಟರು ಹೊಸದೊಂದು ಟ್ರೀಟ್ಮೆಂಟ್ ಟ್ರಯಲ್ ಶುರುವಾಗಿದೆಯೆಂದೂ, ಅಮ್ಮನನ್ನು ಅದರಲ್ಲಿ ಸೇರಿಸಿದ್ದಾರೆಂದೂ ಹೇಳುತ್ತಿದ್ದರು. ಆ ಟ್ರಯಲ್ಲಿನ ಮೊದಮೊದಲಿನ ಫಲಿತಾಂಶಗಳು ಚೆನ್ನಾಗಿದ್ದುದು ಕಂಡುಬರುತ್ತಿದೆಯೆಂದೂ ಆದರೆ ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಹೇಗಾಗುವುದೋ ಕಾಯ್ದು ನೋಡಬೇಕೆಂದೂ ಒತ್ತಿ ಒತ್ತಿ ಹೇಳಿದರು. ನಮ್ಮಿಬ್ಬರಿಗಂತೂ ಕತ್ತಲೆಯ ಗುಹೆಯ ಕೊನೆಯಲ್ಲೊಂದು ಬೆಳಕಿನ ಕಿರಣ ಕಂಡಂತಾಗಿತ್ತು.

ಇದಾಗಿ ಎರಡು ವಾರಕ್ಕೆಲ್ಲ ಅಮ್ಮನ ಪರಿಸ್ಥಿತಿ ಸುಧಾರಿಸಲಾರಂಭಿಸಿ, ಅಮ್ಮ ವೆಂಟಿಲೇಟರಿನಿಂದ ಹೊರಬಂದಳು. ಪಪ್ಪ ಮತ್ತೆ ಮಾತಾಡಲಾರಂಭಿಸಿದ. ದಿನಕ್ಕೆರಡು ಬಾರಿ “ಏನನ್ಕೊಂಡೀಯೇ ನಿಮ್ಮಮ್ಮನ್ನ? ಅವಳ ಜೀವನೋತ್ಸಾಹ ನೋಡಿನೇ ನಾನು ಮದುವೆಯಾಗಿದ್ದು” ಅನ್ನಲಾರಂಭಿಸಿದ. ನನಗೂ ಪರೀಕ್ಷೆಯಿಲ್ಲದೇ ಶಾಲೆಯ ಅಸೆಸ್ಮೆಂಟಿನ ಮೇಲೆಯೇ ನಿರ್ಧಾರವಾಗಲಿರುವ ಫಲಿತಾಂಶವನ್ನು ಎದುರಿಸುವ ಧೈರ್ಯ ಬಂತು ನಿಜವಾಗಿಯೂ. ನಿರೀಕ್ಷಿತ ಗ್ರೇಡುಗಳು ಬಂದದ್ದು ಸಮಾಧಾನವನ್ನೇ ತಂದಿತು ಕೂಡ.
ಅಮ್ಮ ವಾರ್ಡಿಗೆ ಹೋಗಿ, ಹತ್ತು ದಿನವಿದ್ದು, ಡಿಸ್ಚಾರ್ಜ್ ಆಗಿ ಮನೆಗೆ ಬಂದು ಒಂದು ವಾರವಾಯಿತು. ಇನ್ನೂ ಅಮ್ಮನಿಗೆ ಬಹಳವೇ ನಿಶ್ಶಕ್ತಿಯಿದೆಯಾದರೂ ನಮ್ಮಿಬ್ಬರಲ್ಲಿ ಬಲಬಂದಿದೆ. ನನ್ನ ಶೈಕ್ಷಣಿಕ ವರ್ಷ ಮುಗಿದಿರುವುದರಿಂದ ಮನೆಯಲ್ಲೇ ಉಳಿದು ಅಮ್ಮನ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿದೆ. ಅಮ್ಮನಿಗೆ ಮಾತಾಡಲೂ ಇನ್ನೂ ಸುಸ್ತಿದ್ದರೂ, ನಾನೇ ಇಬ್ಬರ ಪರವಾಗಿ, ತಿಂಗಳುಗಟ್ಟಲೆ ಆಡದೆ ಉಳಿದ ಮಾತುಗಳನ್ನು ಆಡಿ ಮುಗಿಸುತ್ತಿರುವೆ. ಅಮ್ಮನೂ ಕ್ಯಾಚಪ್ ಮಾಡುತ್ತಿದ್ದಾಳೆ. ಮನೆಯಲ್ಲಿ ಮತ್ತೆ ಗದ್ದಲವಿದೆ, ನನ್ನದು ಮತ್ತು ಪಪ್ಪನದು ಸಧ್ಯಕ್ಕೆ.

************************************************************
20.08.2020
ಬಿದ್ದು ಹೊರಳಾಡಿ ಅತ್ತುಬಿಡಬಬೇಕನ್ನಿಸುತ್ತದೆ, ಎಷ್ಟು ಬಾರಿ. ದುಃಖ ಉಮ್ಮಳಿಸಿ ಬಂದರೂ, ಕಣ್ಣಲ್ಲಿ ನೀರು ಬರುತ್ತಿಲ್ಲ. ಗುಂಡು ಬಡಿದು ಬಿದ್ದು ಬೇಟೆಗಾರನ ದಾರಿ ನೋಡುತ್ತಿರುವ ಜಿಂಕೆಗೂ ಹೀಗೇ ಅನ್ನಿಸುತ್ತಿರಬೇಕು. ಅಮ್ಮ ಹತ್ತಿರದವಳಾದರೂ, ನನ್ನ ಮನಸ್ಸಿಗೆ ಬೇಜಾರಾದರೆ ನಾನು ಓಡುತ್ತಿದ್ದುದು ಅಪ್ಪನ ಹತ್ತಿರವೇ. ಕಳೆದ ಆರು ವಾರಗಳಲ್ಲಿ ಎಷ್ಟು ಬಾರಿ ಪಪ್ಪಾ ಅಂದು ಅವರ ರೂಮಿನ ಕಡೆ ಹೋಗಿಯಾಗಿದೆ. ಉತ್ತರವಿಲ್ಲದೇ ವಾಪಸು ಬರುವಾಗ, ಅಮ್ಮನ ರೂಮಿನ ಕಡೆಗೆ ಹಾಯ್ದ ಕಣ್ಣುಗಳು ತುಂಬಿ ಬರುತ್ತವೆ. ಮೊದಮೊದಲು ಆ ಕಣ್ಣುಗಳು ತುಂಬಿ ಕೆನ್ನೆಯ ಮೇಲೆ ಇಳಿದ ಕಣ್ಣೀರಿನ ಗುರುತು ಮುಖ ತೊಳೆದರೂ ಹೋಗುವುದಿಲ್ಲ ಅನ್ನಿಸಿತ್ತು. ಆಮೇಲಾಮೇಲೆ, ಕಣ್ಣಲ್ಲಿ ದುಃಖ ಸಂಕಟ ಕಾಣುತ್ತವಷ್ಟೆ. ಫೈರ್ ಪ್ಲೇಸಿನ ಮೇಲಿರುವ ಹಿತ್ತಾಳೆಯ ಪಾಲಿಶ್ ಮಾಡಿದ ತಂಬಿಗೆಯಲ್ಲಿ ಕಾಣುವ ಕಣ್ಣುಗಳು ನನ್ನವೇನಾ ಅನ್ನುವಷ್ಟು ನಿಸ್ಸತ್ವವಾಗಿವೆ. ಈ ವರ್ಷದ ನವೆಂಬರಿಗೆ ಅಮ್ಮ-ಪಪ್ಪನ ಮದುವೆಯ ಸಿಲ್ವರ್ ಜುಬಿಲಿ ಆಗಬೇಕಿತ್ತು.

ಹೋದ ಸಲದ ಎಂಟ್ರಿಯಲ್ಲಿ ಅಮ್ಮ ಕರೆದಳೆಂದು ಹೋಗಿದ್ದೆ ಅಂದೆನಲ್ಲ, ಅದರ ಬಗ್ಗೆ ಹೇಳಬೇಕು; ಯಾಕೆಂದರೆ ಈಗ ಹಿಂದೆ ನೋಡಿದಾಗ ಅದೊಂದು ಟರ್ನಿಂಗ್ ಪಾಯಿಂಟ್ ಇನ್ ಟೈಮ್ ಅನ್ನಿಸುತ್ತಿದೆ.

ಅಮ್ಮ ಕರೆದದ್ದು, ಪಪ್ಪ ಟಾಯ್ಲೆಟ್ಟಿಗೆ ಹೋಗಿ ಸ್ವಲ್ಪ ಹೊತ್ತಾಯ್ತು, ಅಷ್ಟು ಹೊತ್ತು ಹೋಗೋದಿಲ್ಲ ಅವರು ಸಾಧಾರಣವಾಗಿ ಕರಿ ಒಂದ್ಸಲ ಅಂತ ಹೇಳ್ಳಿಕ್ಕೆ. ಗೆಸ್ಟ್ ರೂಮಿನ ಆನ್ ಸ್ವೀಟ್ ಬಾಗಿಲು ಬಡಿದು “ಪಪ್ಪ, ಆರ್ ಯೂ ಓಕೇ? ಅಮ್ಮ ಕೇಳಿದ್ಲು” ಅಂದೆ. “ಬಂದೆ, ಬಂದೆ; ಟೂ ಮಿನಿಟ್ಸ್” ಅಂದ ಪಪ್ಪ.

ಅಮ್ಮನ ಕಣ್ಣಿಗೆ ಪಪ್ಪ ಸೊರಗಿರುವುದು ಮನೆಗೆ ಬಂದ ಮೊದಲ ದಿನವೇ ಬಿದ್ದಿದ್ದು ನನಗೆ ಆಶ್ಚರ್ಯವೇನಾಗಿರಲಿಲ್ಲ. ಅಮ್ಮ ಅನ್ನುವುದಕ್ಕೆ ಮುನ್ನ ನನಗೆ ಹೊಳೆದಿರಲಿಲ್ಲವಾದರೂ, ಹೌದಲ್ಲ ಅನ್ನಿಸದೇ ಇರಲಿಲ್ಲ. ಆದರೆ, ಹಿಂದಿನ ಕೆಲ ತಿಂಗಳುಗಳ ಪರಿಸ್ಥಿತಿಯ ಅರಿವಿನಿಂದ, ಅದಕ್ಕೆ ಕಾರಣ ಹುಡುಕುವ ಅಗತ್ಯವಿರಲಿಲ್ಲ ಅಮ್ಮನಿಗೆ.

ಜುಲೈ 15, ಸೋಮವಾರ: ಸತತ ಒಂದುವಾರದಿಂದ ಮೋಡ, ಮಳೆಗಳಿದ್ದು ವಾತಾವರಣ ಕತ್ತಲು-ಕತ್ತಲಾಗಿದ್ದುದು, ಅವತ್ತು ಬೆಳಗ್ಗೆ ಬಿಸಿಲೊಡೆದಿತ್ತು. ಅಮ್ಮ ಬೆಳಗ್ಗೆ ಎದ್ದು ನಮ್ಮ ಫಸ್ಟ್ ಫ್ಲೋರಿನ ಲ್ಯಾಂಡಿಂಗಿನಲ್ಲಿರುವ ದೊಡ್ಡ ಕಿಟಕಿಯ ಪರದೆ ತೆಗೆದು, ಬಿಸಿಲಿನಲ್ಲಿ ಪುಸ್ತಕ, ಕಾಫಿ ಕಪ್ಪಿನೊಡನೆ ಕಾಲುಚಾಚಿಕೊಂಡು ಜೋಕಾಲಿಯಲ್ಲಿ ಕುಳಿತಿದ್ದಳು. ಪಪ್ಪ ಬಂದು ಎಂದಿನಂತೆ ಅವಳ ತೊಡೆಯ ಮೇಲೆ ತಲೆಯಿಟ್ಟು ಮಲಗಿ, ಮುಖಕ್ಕೆ ಬಿಸಿಲು ಬಿದ್ದು ಕಣ್ಣು ಮುಚ್ಚಿದ. ಒಂದು ಕ್ಷಣ ಮುಖ ನೋಡಿದ ಅಮ್ಮ ಪುಸ್ತಕ ಪಕ್ಕಕ್ಕಿಟ್ಟು “ಎಲ್ಲಿ ಕಣ್ ತೆಗೀರಿ” ಎದ್ದು ಹಲ್ಲುಜ್ಜುತ್ತಿದ್ದ ನನಗೂ ಕೇಳಿಸಿತು. ಟವೆಲಿನಿಂದ ಒರೆಸಿಕೊಳ್ಳುತ್ತ ಬಂದು ನೋಡಿದೆ – ಪಪ್ಪನ ಮುಖ-ಕಣ್ಣು ಹಳದಿಯಾಗಿದೆಯಲ್ಲ ಅನಿಸಿ, ಅಮ್ಮನ ಕಡೆ ನೋಡಿದೆ. ಅಮ್ಮ ತನ್ನ ವೃತ್ತಿಸಹಜ ಪ್ರತಿಕ್ರಿಯೆಯಂತೆ, ಅಲ್ಲೇ ಪಪ್ಪನ ದೈಹಿಕ ಪರೀಕ್ಷೆ ಶುರುಮಾಡಿಬಿಟ್ಟಿದ್ದಳು. ಗಂಟೆ ಎಂಟಾಗುತ್ತಲೇ ಅವಳೇ ಆಸ್ಪತ್ರೆಗೆ ಫೋನು ಮಾಡಿ, ಅಪಾಯಿಂಟ್ಮೆಂಟ್ ತೊಗೊಳ್ಳುವುದಲ್ಲದೆ, ಗುರುತಿನ ಗ್ಯಾಸ್ಟ್ರೋಎಂಟರಾಲಜಿಸ್ಟರೊಡನೆಯೂ, ರೇಡಿಯಾಲಜಿಸ್ಟ್ ಜೊತೆಗೂ ಮಾತನಾಡಿ ಅರ್ಜೆಂಟಾಗಿ ಸಿಟಿ ಸ್ಕ್ಯಾನ್ ಇತ್ಯಾದಿ ಪರೀಕ್ಷೆಗಳ ತಯಾರಿಯನ್ನೂ ಮಾಡಿದಳು.
ಅಲ್ಲಿಂದ ಎರಡು ವಾರದಲ್ಲಿ ಎಲ್ಲ ಮುಗಿದೇ ಹೋಯಿತು. ಪಪ್ಪನಿಗೆ ಗಾಲ್ ಬ್ಲಾಡರಿನ ನಳಿಗೆಯ (ಬೈಲ್ ಡಕ್ಟ್) ಕೊಲಾಂಜಿಯೋಕಾರ್ಸಿನೋಮಾ ಅನ್ನುವ ಕ್ಯಾನ್ಸರ್ ಆಗಿದೆ, ಅದು ತುಂಬಾ ಮುಂದುವರೆದು ಎಲ್ಲೆಡೆ ಹಬ್ಬಿದೆಯೆಂದೂ ಕೇಳಿ ಅರ್ಥಮಾಡಿಕೊಳ್ಳುವುದರಲ್ಲೇ ಅಪ್ಪ ಹೊರಟೇಬಿಟ್ಟ. ಆಸ್ಪತ್ರೆಗೆ ಸೇರಿದ ಅಪ್ಪನ ಮುಖವನ್ನು ನಾನು ಮತ್ತೆ ನೋಡಿದ್ದು ಫ್ಯುನರಲ್ ಪಾರ್ಲರಿನಲ್ಲಿಯೇ. ಅಮ್ಮ ಆಸ್ಪತ್ರೆಯಲ್ಲಿದ್ದಾಗ ನಾನು ಹಿಡಿದಿಟ್ಟಿದ್ದ ದುಃಖವೆಲ್ಲ ಉಮ್ಮಳಿಸಿ ಬಂದು, ಅವಳ ಭುಜದ ಮೇಲೆಯೇ ತಲೆಯಿಟ್ಟು ಬಿಕ್ಕಿಬಿಕ್ಕಿ ಅತ್ತುಬಿಟ್ಟೆ.

“ವೈ ಅಸ್, ಅಮ್ಮಾ, ವೈ ಅಸ್? ವಾಟ್ ಹಾವ್ ವಿ ಡನ್ ಟು ಡಿಸರ್ವ್ ದಿಸ್?”

*****************************************************
10.09.2020
ನನಗೆ ಮೆಡಿಕಲ್ ಸೀಟು ಸಿಕ್ಕಿದೆ. ಎಲ್ಲೇ ಇರಲಿ ಪಪ್ಪನಿಗೆ ಖುಶಿಯಿದೆ ಅಂತ ಖಂಡಿತ ಹೇಳಬಲ್ಲೆ. ಅಮ್ಮನಿಗೂ ಸಹ ಹಾಗೇ ಅನ್ನಿಸುತ್ತದೆಯಂತೆ, ಅವಳೇ ಎರಡು-ಮೂರು ಸಲ ಹೇಳಿದ್ದಾಳೆ. ಪಪ್ಪ ಇನ್ನೂ ಮನೆಯಲ್ಲೇ ಇದ್ದಾನೆ, ಫೈರ್ ಪ್ಲೇಸಿನ ತಂಬಿಗೆಯಲ್ಲಿ. ಮನದಲ್ಲಂತೂ ಸರಿಯೇ. ಈ ವರ್ಷದ ರೋಲರ್ ಕೋಸ್ಟರ್ ಘಟನೆಗಳಿಂದಾಗಿ ನಾನು ಡೆಫರ್ಮೆಂಟ್ ತೊಗೊಂಡು, ಮುಂದಿನ ವರ್ಷಕ್ಕೆ ಯುನಿವರ್ಸಿಟಿ ಸೇರಿಕೊಳ್ಳಲು ನಿರ್ಧರಿಸಿರುವೆ. ನಾನು ಅಮ್ಮ ಸೇರಿ ಎಲ್ಲೆಡೆ ಸುತ್ತಾಡುವ, ಪಪ್ಪನಿಗೆ ಇಷ್ಟವಾದದ್ದನ್ನು (ಅವನ ಬಕೆಟ್ ಲಿಸ್ಟ್ ಅಂತೆ) ನೋಡುವ ಪ್ಲಾನ್ ಹಾಕಿದ್ದೇವೆ. ನಮ್ಮ ಪಟ್ಟಿಯಲ್ಲಿ ನ್ಯೂ ಡೆಲ್ಲಿಗೆ ಹೋಗಿ ಅಲ್ಲಿ ರಸ್ತೆಬದಿಯ ಪಾನಿಪೂರಿ, ಮಸಾಲಪೂರಿ, ಮೊಮೊ ತಿನ್ನುವುದಿದೆ; ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ದೋಸೆ ಕಾಫಿ ಸವಿಯುವುದಿದೆ; ತ್ರೀ ಈಡಿಯಟ್ಸ್ ಸಿನಿಮಾದಲ್ಲಿ ತೋರಿಸುವ ಲದ್ದಾಖ್ ಸರೋವರದ ದಂಡೆಯ ಮೇಲೆ ಓಡುವುದಿದೆ; ಯಾಣಕ್ಕೆ, ಸೇಂಟ್ ಮೇರೀಸಿಗೆ ಹೋಗಿ, ಯಾರೂ ಇಲ್ಲದಿರುವಾಗ ಜೋರಾಗಿ ಕೂಗುವುದಿದೆ; ಅಜ್ಜಿ-ತಾತನ ಜೊತೆ ಅಡುಗೆಮನೆಯಲ್ಲಿ ನೆಲದ ಮೇಲೆ ಕೂತು ಊಟ ಮಾಡುತ್ತಾ ಗಂಟೆಗಟ್ಟಲೆ ಹರಟೆ ಹೊಡೆಯುವುದಿದೆ. ಆ ಪಟ್ಟಿ ನಾವು ಹೋಗುವವರೆಗೂ ಬೆಳೆಯುವ ಸಾಧ್ಯತೆಯಂತೂ ಖಂಡಿತ ಇದೆ. ಇದೆಲ್ಲವನ್ನೂ ಪಪ್ಪನ ಅಸ್ಥಿಯನ್ನ ಶ್ರೀರಂಗಪಟ್ಟಣದ ಕಾವೇರಿಯಲ್ಲಿ, ಅವನ ಇಷ್ಟದ ಗೋಸಾಯಿ ಘಾಟಿನ ನದಿಯಲ್ಲಿ ಹರಿಯಬಿಡುವ ಮುನ್ನ ಮಾಡಬೇಕಿದೆ.
ಅಮ್ಮ ಊಟಕ್ಕೆ ಕರೀತಿದ್ದಾಳೆ. ಮತ್ತೆ ಸಿಗೋಣ.

*******************************************************

ಅನಿವಾಸಿ ಭಾರತೀಯ ವೈದ್ಯ ಕವಿಗೋಷ್ಠಿ – ಭಾಗ 1; ಆಯ್ದ ಕವನಗಳು

ಪ್ರಿಯರೇ, ನಮಸ್ಕಾರ. ಹೊಸವರ್ಷದ ಶುಭಾಶಯಗಳು (ನನ್ನಿಂದ). ಹೋದ ವಾರ ಭಾರತೀಯ ವೈದ್ಯ ಸಂಘದ ಕರ್ನಾಟಕ ಶಾಖೆಯ ವತಿಯಿಂದ ಆಯೋಜಿತವಾದ ಅನಿವಾಸಿ ಭಾರತೀಯ ಕವಿಗೋಷ್ಠಿ ನಡೆಯಿತು. ಇದರಲ್ಲಿ ಹಲವಾರು ಭಾರತೀಯ ಮೂಲದ ಕವಿ-ಕವಯತ್ರಿಯರು ತಮ್ಮ ಕವನಗಳನ್ನು ಓದಿದರು.  ಅಮೇರಿಕಾ, ಇಂಗ್ಲಂಡ್ ಮತ್ತು ಕತಾರ್ ದೇಶವಾಸಿಗಳಾಗಿರುವ ಕವಿಗಳ ಕವನಗಳು ವಿವಿಧ ವಿಷಯಗಳ ಮೇಲಿದ್ದು,  ಅವುಗಳ ಕನ್ಸ್ಟ್ರಕ್ಷನ್, ಭಾಷೆ, ಪದಲಾಲಿತ್ಯ ಆಕರ್ಷಕವಾಗಿದ್ದವು. ಇಂಗ್ಲಂಡಿನ ಕವಿಗಳ ಪರಿಚಯ ಅನಿವಾಸಿ ಗುಂಪಿನ ಮೂಲಕ ನನಗೆ ಇದೆ, ಡಾ. ಜಯಕೀರ್ತಿ ರಂಗಯ್ಯ ಅವರನ್ನು ಹೊರತುಪಡಿಸಿ.  ಕೊನೆಯಲ್ಲಿ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಅಮೆರಿಕದ ಡಾ. ತ್ರಿವೇಣಿ ಶ್ರೀನಿವಾಸರಾವ್ ಅವರು, ಪ್ರತಿ ಕವನದ ವಿಮರ್ಶೆ ಮಾಡಿದರು. ಡಾ. ಗಡ್ಡಿ ದಿವಾಕರ್ ಅವರು ಕಾರ್ಯಕ್ರಮವನ್ನು ಸಮಯ ತಪ್ಪದಂತೆ, ಇನ್ನೊಬ್ಬ ವೈದ್ಯಕವಯಿತ್ರಿ ಡಾ. ವೀಣಾ ಎನ್ ಸುಳ್ಯ ಅವರ ಸಹಯೋಗದಲ್ಲಿ ನಡೆಸಿಕೊಟ್ಟರು.   ಅದರಲ್ಲಿನ ಆಯ್ದ ಕವನಗಳನ್ನು ಇಂದಿನ ಬ್ಲಾಗಿನಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ, ಆಯಾ ಕವಿಗಳ ಪರಿಚಯದೊಂದಿಗೆ. ಈ ಕಾರ್ಯಕ್ರಮದ ಹಿನ್ನೆಲೆಯನ್ನು ಬರೆದು ಕೊಟ್ಟ ಮಿತ್ರ ರಾಮಶರಣರಿಗೆ ವಂದನೆಗಳು. 
ಕವನಗಳನ್ನು ಎರಡು ಆವೃತ್ತಿಗಳಲ್ಲಿ ಭಾಗ ಮಾಡಿ ಹಾಕುತ್ತಿದ್ದೇನೆ. ಎಂದಿನಂತೆ ಓದಿ ನಿಮ್ಮ ಅನಿಸಿಕೆ ಬರೆಯುವುದು.
ಧನ್ಯವಾದಗಳೊಂದಿಗೆ – ಲಕ್ಷ್ಮಿನಾರಾಯಣ ಗುಡೂರ, ವಾರದ ಸಂಪಾದಕ.

**************************************************************

ಹಿನ್ನೆಲೆ: (ಕೃಪೆ: ಡಾ. ರಾಮಶರಣ ಲಕ್ಷ್ಮೀನಾರಾಯಣ) 
ಭಾರತೀಯ ವೈದ್ಯ ಸಂಘದ ಕರ್ನಾಟಕ ಘಟಕ ವೈದ್ಯ ಬರಹಗಾರರ ಸಮಿತಿಯನ್ನು ಸುಮಾರು ೫ ವರ್ಷಗಳ ಹಿಂದೆ ಪ್ರಾರಂಭಿಸಿತು. ಈ ಸಮಿತಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಕೋವಿಡ್ ಸಮಯದಲ್ಲಿ ವೈದ್ಯ ಕವಿ ಸಮ್ಮೇಳನವನ್ನೂ ನಡೆಸಿತ್ತು. ಎರಡು ವರ್ಷಗಳ ಹಿಂದೆ ವೈದ್ಯ ಸಂಪದ ಎಂಬ ದ್ವೈ ಮಾಸಿಕ ಪತ್ರಿಕೆಯನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಿದೆ. ಅನಿವಾಸಿಯಾ ಸದಸ್ಯರಾದ ಡಾ. ಕೇಶವ ಕುಲಕರ್ಣಿ ಈ ಸಂಚಿಕೆಯ ಮೊತ್ತ ಮೊದಲ ಅನಿವಾಸಿ ಭಾರತೀಯ ವಿಭಾಗದ ಸಂಪಾದಕರಾಗಿ ೨೦೨೨ರಲ್ಲಿ ಕಾರ್ಯನಿರ್ವಹಿಸಿದರು. ಆಗ ಅವರು ಈ ಪತ್ರಿಕೆಯ ಸಂಚಿಕೆಗಳನ್ನು ವಾಟ್ಸ್ಯಾಪ್ ಮೂಲಕ ನಮ್ಮೊಡನೆ ಹಂಚಿಕೊಂಡಿದ್ದು ನೆನಪಿರಬಹುದು. ಕನ್ನಡ ವೈದ್ಯ ಬರಹಗಾರರ ಸಮಿತಿಯ ಅಧ್ಯಕ್ಷೆ ಡಾ. ವೀಣಾ ಸುಳ್ಯ ಅನಿವಾಸಿ ವೈದ್ಯರನ್ನು ಒಟ್ಟುಗೂಡಿಸಿ ಕವಿ ಸಮ್ಮೇಳನವನ್ನು ಜಾಲ ತಾಣದಲ್ಲಿ ನಡೆಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಅವರೇ, ಡಾ. ಗಡ್ಡಿ ದಿವಾಕರ್ ಅವರನ್ನು ನಿರ್ವಾಹಕರನ್ನಾಗಿ ನಿಯೋಜಿಸಿದರು. ಈಗಿನ ವೈದ್ಯ ಸಂಪದದ ಅನಿವಾಸಿ ವಿಭಾಗದ ಸಂಪಾದಕರ ಹಾಗೂ ತಮ್ಮ ಸಂಪರ್ಕ ಜಾಲದ ಮೂಲಕ ವೈದ್ಯ ಬರಹಗಾರರನ್ನು ಕಲೆ ಹಾಕಿದರು. ಒಪ್ಪಿಕೊಂಡ ಕವಿಗಳಿಂದ ಕವನಗಳನ್ನು ಪಡೆದುಕೊಂಡು, ಅಧ್ಯಕ್ಷರಾದ ಅಮೆರಿಕೆಯಲ್ಲಿ ನೆಲೆಸಿರುವ ತ್ರಿವೇಣಿ ರಾವ್ ಅವರಿಗೆ ಅವನ್ನು ತಲುಪಿಸಲಾಗಿತ್ತು. ಮೊದಲೇ ನಿಗದಿ ಪಡಿಸಿದ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರವಿವಾರ ಮಧ್ಯಾಹ್ನ ೨:೩೦ಕ್ಕೆ ಪ್ರಾರಂಭವಾಯಿತು.

****************************

ಡಾ. ಮುರಳಿ ಹತ್ವಾರ ಅವರ ಮೂಲ ಕೋಟೇಶ್ವರ. ಬೆಳೆದ ಊರು ಬಳ್ಳಾರಿ. ಬೆಂಗಳೂರು, ಬಳ್ಳಾರಿಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಮುರಳಿ, ಈಗ ಲಂಡನ್ನಿನಲ್ಲಿ ಹಾರ್ಮೋನು ವೈದ್ಯರಾಗಿ ಕಾರ್ಯನಿರತರಾಗಿದ್ದಾರೆ. ಮುರಳಿ ನಮ್ಮ ಅನಿವಾಸಿ ಬ್ಲಾಗಿನ ಓದುಗರಿಗೆ, ತಮ್ಮ ಕವನ, ಹೈಕುಗಳ ಮೂಲಕ ಈಗಾಗಲೇ ಚಿರಪರಿಚಿತರಾಗಿದ್ದಾರೆ.

ಹೆಜ್ಜೆಗಳು:

ನಿನ್ನೆ ನಡೆದ ಹೆಜ್ಜೆಗಳ ಗುರುತು
ಹಿಡಿಯಲು ಮತ್ತೆ ಮರಳುವಾಸೆ
ಅಳಿಸಿದ ಅಲೆಗಳಲ್ಲಿ ಅದನ್ನು
ಹುಡುಕುವದು ಹೇಗೆ?

ಹೆಜ್ಜೆಗಳ ದಾರಿ ಎಳೆದ ಮೋಡಗಳೆಲ್ಲ
ಮಳೆಯಾಗಿ ಮರೆಯಾಗಿವೆ
ಸುಡುವ ಬಿಸಿಲಿನ ಸೂರ್ಯ
ಸರಿದಂತೆ ಹೊರಳುವ ನೆರಳಿನ ದಿಕ್ಕು,
ನಕ್ಷತ್ರಗಳ ಬೆಳಕು ಹೇಳುವ ದಾರಿ
ತಿಳಿಯುವುದು ಹೇಗೆ?

ಎಷ್ಟು ಸದ್ದಿನ ಹೆಜ್ಜೆಗಳು!
ಒಂದು ಊರುವದರಲ್ಲಿ ಮತ್ತೊಂದು
ಬೇಗ! ಬೇಗ! ಬೇಗ!
ಮುಂದೆ ಹೋದಷ್ಟೂ ಅವಸರ,
ದಾರಿಯ ಹೂಗಳ ಪರಿಮಳವೂ ತಿಳಿಯದಷ್ಟು.
ಬೇಲಿಯ ಮುಳ್ಳುಗಳ ಕಲೆ ಮೈತುಂಬಾ.

ಯಾವ ಹೆಜ್ಜೆಯ ಜಾಡು, ಯಾವ ನೆರಳಿನ ಛಾಯೆ?
ನಿನ್ನೆಯೋ? ನಾಳೆಯೋ?
ನಂಬಿಕೆಯ ದೀವಿಗೆಯೊ? ಕಲ್ಪನೆಯ ಮಾಯೆಯೋ? ಎಲ್ಲ ಬೆಳಕೀಗ ಶೂನ್ಯ; ಮನಸು ಮುಳುಗಿದ ಗುಡ್ಡೆ.
ಹೊಸ ಉಸಿರಿನ ಹುಡುಕಾಟ
ನೀರ ದಾಟಿಸುವ ಸೇತುವೆಯ ಕಟ್ಟ ಬೇಕಿನ್ನೂ

ಕಾಲಿನಡಿ ಸರಿದ ನೀರು, ತೊಯ್ದ ಮಣ್ಣಿನ ಸ್ಪರ್ಶ
ಮೈ ಸೋಕಿದ ತಂಗಾಳಿ, ಕಣ್ತೆರೆಯೆ ಆಗಸದ ಕೆಂಪು
ಸುತ್ತ ತರತರದ ಕಂಪಿನ ಹೂಗಳು
ಉಸಿರೆಳೆದು ನಿಂತ ಮನದೊಳಗೆ ಹೊಸ ರೆಕ್ಕೆಗಳು

ಕಾಲು ಮುಟ್ಟಿದ ಅಲೆ ಕರೆದು ಹೇಳಿತು:
ಈ ಹೆಜ್ಜೆಯ ಗುರುತು ನೀನೆ ಇಟ್ಟುಕೋ.

- ಡಾ. ಮುರಳಿ ಹತ್ವಾರ್

**************************************

ಡಾ. ಜಯಕೀರ್ತಿ ರಂಗಯ್ಯ: ಹುಟ್ಟಿದ್ದು, ಬೆಳೆದಿದ್ದು: ಚಿಕ್ಕನಾಯಕನ ಹಳ್ಳಿ, ತುಮಕೂರು ಜಿಲ್ಲೆ. ಓದಿದ್ದು: ಎಂ.ಬಿ.ಬಿ.ಎಸ್ (ಬಿ.ಎಂ.ಸಿ) ಎಂ.ಡಿ. ಮೈಕ್ರೋಬಯಾಲಜಿ (ಜಿಪ್ಮರ್, ಪಾಂಡಿಚೆರಿ), ಎಫ್.ಆರ್.ಸಿ.ಪ್ಯಾಥ್ (ಯು.ಕೆ) ಕರ್ಮಸ್ಥಳ: ಎಪ್ಸಂ & ಸೇಂಟ್ ಹೆಲಿಯರ್ ಆಸ್ಪತ್ರೆ. ಲಂಡನ್

ವೀರಸನ್ಯಾಸಿಗೂಂದು ನುಡಿನಮನ

ಎಂಥ ಕಾಂತಿ, ಏನು ಶಾಂತಿ
ನಿಮ್ಮ ಕಣ್ಣ ನೋಟದಲಿ

ಕೋಟಿ ಸೂರ್ಯ ಸಮಪ್ರಭೆ
ಸಪ್ತ ಋಷಿಯ ಮೊಗದಲಿ

ಎಂಥ ಕೆಚ್ಚು, ಏನು ಶೌರ್ಯ
ನಿಮ್ಮ ಪ್ರತೀ ಮಾತಲಿ

ತಾಯಿ-ತಂದೆ, ಬಂಧ ಹರಿದೆ
ಸುಖದ ಬಾಳು, ಸಂಸಾರ ತೂರೆದೆ

ಗುರುವ ಪಡೆದು, ಕಾವಿ ತೂಟ್ಟೆ
ಜನರ ಪೂರೆವ, ಶಪಥವಿಟ್ಟೆ

ದೇಶ ಪೂರ ನಿಮ್ಮ ಹೆಜ್ಜೆ
ದೇಶದೊರಗೂ ಅದರ ಸದ್ದು

ಲೋಲುಪತೆಯ ಪರದೇಶದಲ್ಲೂ
ನಾಡ ಜನರ ಚಿಂತೆ ನಿಮಗೆ

ಅನ್ನ-ನೀರು,ನಿದ್ರೆ-ಭೋಗ ಎಲ್ಲ ತೃಣ
ಜೀವಾತ್ಮನ ಸೇವೆಯಲಿ

ಪತಂಜಲಿಯ ಮರೆತ ಮಣ್ಣಿನಲ್ಲಿ
ಯೋಗಸೂತ್ರದೊಸಬೆಳೆ

ಭಕ್ತಿ-ಕರ್ಮ, ಜ್ಞಾನಯೋಗ
ಶಕ್ತಿಯಿರೆ, ರಾಜಯೋಗ

ತಾಳ್ಮೆ, ತುಡಿತ, ಅಖಂಡ ಪ್ರೀತಿ
ನೀವು ಕೊಟ್ಟ ಮಹಾಮಂತ್ರ

ಕೀರ್ತಿ, ಕನಕ ಮೋಹ-ದಾಹ
ಜಯಿಸೊ ವಿವೇಕ ನೀಡು ತಂದೆ,
ಯುಗಪುರುಷನ ಕಂದನೇ!

- ಡಾ। ಜಯಕೀರ್ತಿ ರಂಗಯ್ಯ , ಯು.ಕೆ.

*************************************

ಡಾ. ಸವಿತಾ ಕಲ್ಯಾ: ಹುಟ್ಟಿದ್ದು, ಬೆಳೆದಿದ್ದು ಮೈಸೂರಿನಲ್ಲಿ. ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ / ಜೆಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಪದವಿ. ರೈಟ್ ರಾಜ್ಯ ವಿಶ್ವವಿದ್ಯಾಲಯ, ಡೇಟನ್, ಒಹಾಯೊದಲ್ಲಿ  ಆಂತರಿಕ ವೈದ್ಯಕೀಯದಲ್ಲಿ ರೆಸಿಡೆನ್ಸಿ: ಸಂಧಿವಾತಶಾಸ್ತ್ರದಲ್ಲಿ ಫೆಲೋಶಿಪ್: ವಿಸ್ಕಾನ್ಸಿನ್ ವೈದ್ಯಕೀಯ ಕಾಲೇಜು, ಮಿಲ್ವಾಕೀ . ಅರಿಜೋನಾದ ಫೀನಿಕ್ಸ್‌ನಲ್ಲಿರುವ ಕ್ರೈಟನ್ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ವ್ಯಾಲಿ ವೈಸ್ ಹೆಲ್ತ್‌ಕೇರ್ ಸೆಂಟರ್‌ನಲ್ಲಿ ಸಿಬ್ಬಂದಿ ಸಂಧಿವಾತಶಾಸ್ತ್ರಜ್ಞರಾಗಿದ್ದಾರೆ. ಹವ್ಯಾಸಗಳಲ್ಲಿ ಪ್ರದರ್ಶನ, ವಿಶೇಷವಾಗಿ ಕನ್ನಡದಲ್ಲಿ ಬರೆಯುವುದು ಸೇರಿವೆ. ಯೂಟ್ಯೂಬ್‌ನಲ್ಲಿ ಇವರು ಬರೆದು,ನಟಿಸಿದ  ” NRI, non respected Indian ” ಹಾಗು ಅಕ್ಕ ನಾಟಕ ಹೆಚ್ಚು ಗುರುತಿಸಲ್ಪಟ್ಟಿವೆ.

ಅರ್ಹತೆಗೆ ಪಟ್ಟ

ಜೀವನ ಚದುರಂಗದಾಟ
ರಾಜನಿಗೆ ಒಂದೇ ಚೌಕದೋಟ
ರಕ್ಷಿಸುವಳು ರಾಣಿ ಆಡಿ ಪರದಾಟ
ಆದರೂ ಕಟ್ಟುವೆವು ರಾಜನಿಗೆ ಪಟ್ಟ

ಪುಟ್ಟಿ ಹುಟ್ಟಿದರೆ ಬೇಡುವೆವು ಪುಟ್ಟ
ಪುಟ್ಟಿಗೆ ಮನೆ ತವರೆಂದು ಮಾಡುವೆವು ಮನದಟ್ಟ
ಹೊರುವಳು ಆಮನೆ ಈಮನೆ ಭಾರದ ಬೆಟ್ಟ
ಆದರೂ ಕುಲೋದ್ಧಾರಕನೆಂಬ ಬಿರುದ ಪುಟ್ಟನೇತೊಟ್ಟ

ಪುಟ್ಟಿ ಮಾತನಾಡಿದರೆ ವಾಯಾಡಿ, ನಲಿದರೆ ವಯ್ಯಾರಿ
ಕೋಪ ತೋರಿದರೆ ಬಜಾರಿ , ಬಾಯಿ ಮುಚ್ಚೆ ರಾಜಕುಮಾರಿ
ಕೆಂಡ ಕಾರಿದರೆ ಕಾಳಿ, ಅನ್ಯಾಯ ವಿರೋಧಿಸಿದರೆ ಮನೆಹಾಳಿ
ಸಹಸ್ರನಾಮದ ನಡುವೆ ಮನಬಿಚ್ಚಿ ಹೇಗೆ ಬಾಳಿಯಾಳು ಹೇಳಿ

ಪುಟ್ಟ ಹುಟ್ಟಿದ್ದಕ್ಕೆ ಜಾಣ, ಅಪ್ಪ ಅಮ್ಮಗೆ ಆಭರಣ
ಮನೆತನದ ಹೆಸರು ಮುಂದುವರೆಸುವ ರಾಮಬಾಣ
ಮಗನ ಹೆರದಿದ್ದರೆ ಕೊರಗುವರು ಇಡೀ ಕುಲವೇ ಭಣಭಣ
ಕಾಲಾನುಕಾಲದಿಂದ ಭೇದಬಗೆಯುತಿದೆ ಸಮಾಜದ ಕಣಕಣ

ಪುಟ್ಟನಂತೆಯೇ ಪುಟ್ಟಿಯೂ ದೇವರ ವರ
ಎತ್ತಾಡಿಸಿ ಪ್ರೋತ್ಸಾಹಿಸಿ ಒಂದೇ ತರ
ಇಡೀ ಕುಲಕೆ ಪುಟ್ಟಿ ನೆರಳನೀಡುವ ಮರ
ಹೊಸ ಜೀವವ ಪೋಣಿಸುವ ಮುತ್ತಿನ ಸರ

ಕಣ್ಣು ತೆರೆದು ತೀರಿಸೋಣ ಪುಟ್ಟಿಯರಿಗೆ ಮಾಡಿದ ನಷ್ಟ
ಭೇದ ತಿಳಿಯದೇ ಮಾಡಿದರು ಸಹಿಸುವುದು ಕಷ್ಟ
ಆರತಿಯೋ ಕೀರುತಿಯೋ ಅವರವರ ಇಷ್ಟ
ಇದ ಮುಂದಿನ ಪೀಳಿಗೆಗೆ ಮಾಡೋಣ ಸ್ಪಷ್ಟ

ಸಮಾನರು ಪುಟ್ಟಿ ಪುಟ್ಟ
ಕಟ್ಟೋಣ ಅರ್ಹತೆಗೆ ಪಟ್ಟ

- ಡಾ। ಸವಿತಾ ಕಲ್ಯಾ, ಯು.ಎಸ್.ಎ

***********************************

ಡಾ. ಮೀನಾ ಸುಬ್ಬರಾವ್: ಮೂಲತಃ ಕಡೂರಿನವರು. ಹುಟ್ಟಿ, ಬೆಳೆದುದೆಲ್ಲಾ  ಕಡೂರು, ನಂತರ ನ್ಯಾಶನಲ್ ಕಾಲೇಜ್ ಬೆಂಗಳೂರು ಮತ್ತು ಮೈಸೂರು ವೈದ್ಯಕೀಯ ವಿದ್ಯಾಲಯಗಳಲಿ ವ್ಯಾಸಂಗ. ಅಮೇರಿಕಾದ ಲಾಸ್ ಆಂಜಲೀಸ್ನಲ್ಲಿ ಮಕ್ಕಳ ಆರೋಗ್ಯ ಶಾಸ್ತ್ರದಲ್ಲಿ ( ಪೀಡಿಯಾಟ್ರಿಕ್ಸ್) ರೆಸಿಡೆನ್ಸಿ ಮುಗಿಸಿ ಸುಂದರವಾದ ಕ್ಯಾಲಿಫೋರ್ನಿಯಾದ ಮಧ್ಯ ಕರಾವಳಿ/ ಸ್ಟೈನ್ಬೆಕ್ ದೇಶ ಎಂದೇ ಹೆಸರಾಗಿರುವ ಮಾಂಟೆರೆ ಪ್ರದೇಶದಲ್ಲಿ ವಾಸ ಮತ್ತು ಮಕ್ಕಳ ತಜ್ಞೆಯಾಗಿ ಸೇವೆ ಸಲ್ಲಿಸುತಿದ್ದಾರೆ. ಕನ್ನಡದಲಿ ಕಥೆ, ಕವನ, ಪ್ರಬಂಧ, ಹಾಸ್ಯ ಮುಂತಾದ ರೂಪಕಗಳ ಬರೆದು ಸಂಪದ, ದಟ್ಸಕನ್ನಡ, ತನುಮನ ಬ್ಲಾಗ್ ಮುಂತಾದ ಜಾಲತಾಣಗಳಲಿ ಪ್ರಕಟಿಸಿದ್ದಾರೆ. ಸುಮಾರು ಭಕ್ತಿಗೀತೆಗಳ ರಚನೆ ಮಾಡಿ ಮೊದಲ 9 – ಹಾಡುಗಳ ಒಂದು ಆಲ್ಬಮ್ ಪುತ್ತೂರು ನರಸಿಂಹ ನಾಯಕರ ಸಂಗೀತ ಸಂಯೋಜನೆ, ಗಾಯನದಲ್ಲಿ ಧ್ವನಿ ಮುಗ್ರಿತವಾಗಿ ಪ್ರಕಟವಾಗಿದೆ. ಕನ್ನಡ ಕೂಟದ ಸಂಚಿಕೆಗಳು, ಕನ್ನಡ ಸಾಹಿತ್ಯ ರಂಗದ ( ಅಮೇರಿಕಾ) ಪುಸ್ತಕಗಳಲ್ಲೂ ಲೇಖನ, ಕಥೆಗಳು ಮತ್ತು ಇತರೆ ಬರಹಗಳು ಪ್ರಕಟವಾಗಿವೆ.

ಒಲವು!! (ದಿವ್ಯ ಅನುರಾಗ)

ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ
ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ!

ಸವಿನೆನಪು ಸಾಕೊಂದು ಬಾಳಿನಾ ಅರ್ಥಕೆ
ಸವಿಯುತಿರೆ ಸಾಗಿಹುದು ಬದುಕಿನಾ ಪತಾಕೆ!

ಆ ಮಧುರ ಅನುಭವವು ಅಮರವಾಗಿದೆ ಮನಕೆ
ಆ ಅಧರ ಅದರುವಿಕೆ ಅರಸುತಿದೆ ಜೀವಕೆ!

ಬರದಿರಳು ನಿದಿರೆಯು ನಿನ್ನಂದ ನೆನೆಯದೆ
ಹಗಲಿರುಳು ಸಾಗದು ಮಕರಂದ ಸವಿಯದೆ!

ಎಲ್ಲಿ ನೋಡಿದರಲ್ಲಿ ನೀ ನನ್ನ ನೋಟವಾಗಿರುವೆ
ಏನು ಮಾಡಿದರೂ ನೀ ನನ್ನ ಆಟವಾಗಿರುವೆ!

ನೀ ನಡೆಸುತಿರುವೆ ಬದುಕನು ಬರಡಾಗಿಸದೆ
ನೀ ಬಡಿಸುತಿರುವೆ ಅರಿವನು ಬರಿದಾಗಿಸದೆ!

ಮತ್ತೊಮ್ಮೆ ಬಾ ನೀನು ಭವ್ಯ ಭಾವಗಳ ಹೊತ್ತು
ಇನ್ನೊಮ್ಮೆ ಕೊಡು ನೀನು ದಿವ್ಯ ಅನುರಾಗದ ತುತ್ತು!

ನಗುತಿರು ಎಂದೆಂದೂ, ಬರಲಿ ಏನೊಂದು
ಸಾಗುತಿರು ಬಾಳಿನಲಿ ಬರಲಿ ನೂರೊಂದು

ನುಡಿದೆ ಈ ದಿವ್ಯ ವಾಣಿಯ ನೀನಂದು ಬಿಡಿಸಿ ಮನದಾಳದ ಚಂಚಲತೆಯ ಚೆಂಡು

- ಡಾ. ಮೀನಾ ಸುಬ್ಬರಾವ್.

***********************************************