ಲ್ಯಾಂಕಶಾಯರಿನ ಭಾರತೀಯ ನೃತ್ಯ ಪರಂಪರೆ

ನಮ್ಮ ಕನಸನ್ನು ಮಕ್ಕಳ ಮೂಲಕ ನನಸಾಗಿಸುವುದು ಒಂದು ಪ್ರಶ್ನಾರ್ಹ ಪ್ರಯತ್ನ ಅನ್ನುತ್ತಾರೆ.  ಆದರೆ ಮಕ್ಕಳ ಶ್ರಮದ ಯಶಸ್ಸು ತಾಯ್ತಂದೆಯರಿಗೆ ಹೆಮ್ಮೆಯ ವಿಷಯ ಅನ್ನುವುದರಲ್ಲಿ ಎರಡು ಮಾತಿಲ್ಲ. 

ನಮಸ್ಕಾರ. ವಿಶ್ವಾವಸು ಸಂವತ್ಸರದ ಹೊಸವರ್ಷದ ಶುಭಾಶಯಗಳು. ಈ ಸಲದ ಆವೃತ್ತಿಯಲ್ಲಿ ನಮ್ಮ ಕೌಂಟಿಯ ನೃತ್ಯ ಶಾಲೆಗಳಲ್ಲಿ ಒಂದಾದ ಅಭಿನಂದನಾ ಡಾನ್ಸ್ ಅಕ್ಯಾಡೆಮಿಯ ಮತ್ತು ಅದರ ಸಂಚಾಲಕರಾದ ಶ್ರೀಮತಿ ಅಭಿನಂದನಾ ಕೋದಂಡ ಅವರ ಒಂದು ಕಿರು ಪರಿಚಯ – ವಿದ್ಯಾರ್ಥಿಯೊಬ್ಬಳ ಪಾಲಕರ ಅನುಭವದ ಸಹಿತ.  ಓದಿ ತಮ್ಮ ಅಭಿಪ್ರಾಯವನ್ನು ತಿಳಿಸುವುದು. ಧನ್ಯವಾದಗಳೊಂದಿಗೆ – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).
****************************
ಅಭಿನಂದನಾ ಡಾನ್ಸ್ ಅಕ್ಯಾಡೆಮಿ – ನಾಟ್ಯರಸ

*********************************

ಇಂಗ್ಲಂಡಿನಲ್ಲಿ ನನ್ನ ಕಲಿಕೆಯ ಸುತ್ತನ್ನು (training rotation) ಮುಗಿಸಿ ಪ್ರೆಸ್ಟನ್ನಿಗೆ ಬಂದು ಕನ್ಸಲ್ಟಂಟ್ ಆಗಿ ಸೇರಿದಾಗ ನಮ್ಮ ಮಗಳಿಗೆ ೩ ವರ್ಷ. ಎಲ್ಲಾ ಅನಿವಾಸಿ ಭಾರತೀಯರಂತೆ ನಾವೂ ನಮ್ಮೂರಿನಲ್ಲಿರುವ ಹಿಂದಿನ ಪೀಳಿಗೆಗೂ, ಇಲ್ಲಿ ಹುಟ್ಟಿರುವ ಮುಂದಿನ ಪೀಳಿಗೆಗೂ ಮಧ್ಯ ಪೂರ್ವ – ಪಶ್ಚಿಮಗಳಿಗೆ ಸೇತುವೆಯಾಗಿ ಬದುಕುವ ಜೀವನದ ಹಂತದಲ್ಲಿ ಇದ್ದೆವು ಅನ್ನಿ. ಆದಷ್ಟು ಭಾರತೀಯ ಪರಂಪರೆಯ ಕುರುಹುಗಳನ್ನು ಮಕ್ಕಳಿಗೆ ಪರಿಚಯಿಸಬೇಕೆಂಬ ಆಶಯವನ್ನು ನಮ್ಮ ಜೀವನದ ಓಟದ ಜೊತೆಗೇ ಹೊತ್ತುಕೊಂಡು ಓಡುತ್ತಿದ್ದೆವು.  ಮಕ್ಕಳು ಇಲ್ಲಿಯ ಸಂಗೀತ, ನೃತ್ಯ, ಸಂಸ್ಕೃತಿಯನ್ನು ಹೇಗೋ ಕಲಿತುಬಿಡುತ್ತವೆ.  ಭಾರತೀಯ ಸಂಗೀತ – ನೃತ್ಯದ ಹುಚ್ಚು ಹತ್ತಿಸಬೇಕೆಂದರೆ, ಮೊದಲು ನಮಗೆ ಆ ಹುಚ್ಚಿರಬೇಕು, ಹತ್ತಿರದಲ್ಲಿ ಎಲ್ಲಾದರೂ ಕಲಿಯುವ ಅವಕಾಶವಿರಬೇಕು ಮತ್ತು ಛಲ ಬಿಡದೆ ವಾರವೂ ಪ್ರತಿ ತರಗತಿಗೆ ಕರೆದೊಯ್ಯುವ ತಾಳ್ಮೆಯಿರಬೇಕು. ಇದು ಬೀಜ ಬಿತ್ತಿ, ನೀರು-ಗೊಬ್ಬರ ಹಾಕಿ ಸಸಿ ಏಳುವವರೆಗಿನ ಹಂತ ಅಷ್ಟೇ.  ಅಲ್ಲಿಂದ ಮುಂದೆ ಅದು ಬೆಳೆದು ಮರವೂ ಆಗಬಹುದು ಇಲ್ಲವೇ, ಮುರುಟಿ ಮಾಯವೂ ಆಗಬಹುದು.  ಆರಂಭದಲ್ಲಿ ಆಟ-ಸಂಗೀತ-ನೃತ್ಯ ಅಲ್ಲದೇ ಇನ್ನೂ ಇತರ ಪಠ್ಯೇತರ ತರಗತಿಗಳಿಗೆ ವಾರದಲ್ಲಿ ೮ ಬಾರಿ (ಶನಿವಾರ ಎರಡು!) ಕರೆದೊಯ್ದರೂ, ೧೦ನೆಯ ತರಗತಿಗೆ ಬರುವ ಹೊತ್ತಿಗೆ ಒಂದೆರಡು ಮಾತ್ರ ಉಳಿಯುತ್ತವೆ ಅನ್ನುವುದು ಸತ್ಯ; ಎಲ್ಲಾ ಅನಿವಾಸಿ ತಂದೆ-ತಾಯಂದಿರ ಅನುಭವವೂ ಹೆಚ್ಚು ಕಡಿಮೆ ಇದೇ ಇರಲಿಕ್ಕೆ ಸಾಕು. 

ಹೀಗಿರುವಾಗ, ಪ್ರೆಸ್ಟನ್ನಿನಲ್ಲಿ ಕೇಳಿಬಂದ ಹೆಸರು ಅಭಿನಂದನಾ. ಶ್ರೀಮತಿ ಅಭಿನಂದನಾ ಕೋದಂಡ ಅವರು ನಡೆಸುತ್ತಿದ್ದ ಕುಚಿಪುಡಿ ತರಗತಿಗಳಿಗೆ ನಮ್ಮ ಪರಿಚಯದ ಹಲವರ ಮಕ್ಕಳು ಹೋಗುತ್ತಿದ್ದದ್ದು ತಿಳಿದು, ನಮ್ಮ ಮಗಳನ್ನೂ ಸೇರಿಸಿದೆವು. ಅಭಿನಂದನಾ ಅವರು ಮಕ್ಕಳೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ, ಶಿಸ್ತು, ಕಲಿಸುವ ಶೈಲಿ ಇವೆಲ್ಲ ಕ್ರಮೇಣ ನಮಗೂ, ಮುಖ್ಯವಾಗಿ ಮಗಳಿಗೂ ಮೆಚ್ಚುಗೆಯಾಗಿ ಅವಳ ಕಲಿಕೆ ನಿಲ್ಲದೆ ಮುಂದುವರೆಯಿತು. ವರ್ಷದಲ್ಲಿ ಹಲವಾರು ಚಿಕ್ಕಪುಟ್ಟ ಪ್ರದರ್ಶನಗಳೊಂದಿಗೆ ಶುರುವಾಗಿದ್ದು ಅದೊಂದು ನಮ್ಮ ಜೀವನಕ್ರಮವೇ ಆಗಿಹೋಯಿತೆನ್ನಬಹುದು. ವಾರದ ತರಗತಿಗಳು ಅಷ್ಟೇ ಅಲ್ಲದೇ ಸಂಕ್ರಾಂತಿ, ೨೬ ಜನವರಿಯ ಗಣತಂತ್ರ ದಿವಸ, ಯುಗಾದಿ, ೧೫ ಆಗಸ್ಟ್, ದೀಪಾವಳಿ, ಹೊಸ ವರ್ಷ ಹೀಗೆ ಅನೇಕ ಕಾರ್ಯಕ್ರಮಗಳಿಗೆ ತಯಾರಿ ನಮ್ಮನ್ನೂ, ಮಕ್ಕಳನ್ನೂ ವಾರಾಂತ್ಯದಲ್ಲಿ ಸಮಯವೇ ಇಲ್ಲದಂತೆ ಇಟ್ಟವು. ಎಲ್ಲ ಪಾಲಕರಂತೆ ನಮ್ಮ ಜೀವನದ ಪರಿಕ್ರಮಣವೂ ಮಕ್ಕಳ ಚಟುವಟಿಕೆಗಳ ಸುತ್ತಲೇ ಸುತ್ತುವಂತಾಯಿತು. ಹೀಗಿದ್ದರೂ, ಪ್ರತಿಯೊಂದು ಕಾರ್ಯಕ್ರಮದ ಯಶಸ್ಸು ನಮ್ಮ ಹೆಮ್ಮೆಯನ್ನು ಹೆಚ್ಚಿಸಿತೆಂದೇ ಹೇಳಬಹುದು.

ಕುಚಿಪುಡಿಯ ನೃತ್ಯ ಪ್ರಕಾರದಲ್ಲಿ, ವಿದ್ಯಾರ್ಥಿಗೆ ಮೊದಲಿನಿಂದ ಕಾಲ್ಗೆಜ್ಜೆ ದೊರೆಯದು. ಅದನ್ನು ವಿದ್ಯಾರ್ಥಿ ಗಳಿಸಬೇಕು. ಅಂದರೆ, ಒಂದು ಹಂತ ತಲುಪಿದಾಗ ಮಕ್ಕಳಿಗೆ ಗುರುವಿನಿಂದ ಗೆಜ್ಜೆ ಕಟ್ಟಿಸಲಾಗುತ್ತದೆ, ನಟರಾಜನ ಪೂಜೆಯೊಂದಿಗೆ. ಇದುವರೆಗೆ ಗುಂಪಿನಲ್ಲಿ ನಾಟ್ಯಪ್ರದರ್ಶನ ಮಾಡಿದ್ದ ವಿದ್ಯಾರ್ಥಿ, ಮೊದಲ ಬಾರಿಗೆ ಸ್ಪಾಟ್‍ಲೈಟ್‍ನಲ್ಲಿ ಬರುತ್ತಾರೆ; ಸೋಲೋ ನೃತ್ಯ ಮಾಡುತ್ತಾರೆ; ಮಾಡಬಲ್ಲೆನೆಂಬ ಆತ್ಮಸ್ಥೈರ್ಯ ಗಳಿಸುತ್ತಾರೆ. ನಾನು ನೋಡಿದಂತೆ, ಮಕ್ಕಳು ನೃತ್ಯದ ಬಗ್ಗೆ ಹೆಚ್ಚು ಗಮನ ಕೊಡುವುದು ಅಲ್ಲಿಂದಲೇ. ಅಲ್ಲಿಂದ ಪ್ರತಿ ಹಾವ-ಭಾವದಲ್ಲಿ, ಪ್ರತಿಯೊಂದು ಪ್ರದರ್ಶನದಲ್ಲಿ ಮನಸುಕೊಟ್ಟು ಮಾಡಿದ ಪ್ರಯತ್ನದ ಫಲ ಕಾಣಲು ಶುರುವಾಗುತ್ತದೆ.

ಅಲ್ಲಿಂದ ಮುಂದಿನ ಹಂತ ರಂಗಪ್ರವೇಶದ್ದು. ಭರತನಾಟ್ಯದಿಂದಾಗಿ ಆರಂಗೇಟ್ರಮ್ ಎಂದು ಹೆಚ್ಚು ಪ್ರಚಲಿತವಾಗಿರುವ ಈ ಹಂತ, ವಿದ್ಯಾರ್ಥಿಯ ಕಲಿಕೆ ಪೂರ್ಣವಾಯಿತು ಅನ್ನುವುದಕ್ಕೆ ಸಮ. ಸುಮಾರು ೩ ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮ ವಿದ್ಯಾರ್ಥಿಯ ಪರಿಶ್ರಮವನ್ನು ಒರೆಗೆ ಹಚ್ಚುತ್ತದೆ. ಲೈವ್ ಹಾಡುಗಾರ ಮತ್ತು ಸಂಗೀತಗಾರರೊಂದಿಗೆ ನಡೆಯುವ ನೃತ್ಯ ವಿದ್ಯಾರ್ಥಿಯನ್ನು, ಅಲ್ಲಾಗಬಹುದಾದ ಹೆಚ್ಚು-ಕಡಿಮೆಗಳಿಗೆ ಹೊಂದಿಕೊಂಡು ಕಾರ್ಯಕ್ರಮವನ್ನು ಸರಿಯಾಗಿ ನಡೆಸಿ, ಮುಗಿಸುವ ಚಾಣಾಕ್ಷತೆಯನ್ನು ಕಲಿಸುತ್ತದೆ. ಕಾರ್ಯಕ್ರಮಕ್ಕೆ ಸುಮಾರು ೧೦-೧೨ ತಿಂಗಳ ಮುಂಚೆ ಆರಂಭವಾಗುವ ರಂಗಪ್ರವೇಶದ ತಯಾರಿ, ವಿದ್ಯಾರ್ಥಿ ಮತ್ತು ಗುರು ಇಬ್ಬರ ಸಮಯ, ಸಾಮರ್ಥ್ಯ ಎರಡರಲ್ಲೂ ಸಂಪೂರ್ಣ ಹೊಂದಾಣಿಕೆ, ತಾಳ್ಮೆ ಮತ್ತು ಸಮರ್ಪಣೆಯನ್ನು ನಿರೀಕ್ಷಿಸುತ್ತದೆ. ಪಾಲಕರಿಗೆ ಇದೊಂದು ಸಣ್ಣ ಪ್ರಮಾಣದಲ್ಲಿ ಮದುವೆಯನ್ನೇ ಮಾಡಿದ ಅನುಭವ – ತಯಾರಿ, ಖರೀದಿ ಎಲ್ಲದರಲ್ಲೂ. ಕೊನೆಯ ವಾರವಂತೂ, ದಿನಕ್ಕೆ ೮-೧೦ ಗಂಟೆಗಳ ಕಾಲ ಸಂಗೀತಗಾರರೊಂದಿಗೆ ನಡೆಯುವ ನೃತ್ಯದ ಅಭ್ಯಾಸ ನೋಡುವ ಪಾಲಕರಿಗೇ ಬೆವರಿಳಿಸುತ್ತದೆ! ಎಲ್ಲ ಯಶಸ್ವಿಯಾಗಿ ಮುಗಿದು, ನೆರೆದ ಪ್ರೇಕ್ಷಕವೃಂದದ ಚಪ್ಪಾಳೆಗಳನ್ನು ಕೇಳಿದಾಗ ಆಗುವ ಹೆಮ್ಮೆಯ ಅನುಭವ ಬರೆದು ಹೇಳಿ ವರ್ಣಿಸಲಾಗದು.

ಮೇಲಿನ ಎರಡು ಹಂತಗಳಲ್ಲೂ ಒಬ್ಬೊಬ್ಬಳು ಮಗಳು ಇರುವ ನಮಗೆ, ಈಗ ಕುಚಿಪುಡಿಯಿಲ್ಲದ ವಾರ ಏನೆಂದೇ ನೆನಪಿಲ್ಲ. ಯೂನಿವರ್ಸಿಟಿಯಲ್ಲಿರುವ ದೊಡ್ಡ ಮಗಳು ಕಲಿತ ವಿದ್ಯೆಯನ್ನು ಉತ್ಸಾಹದಿಂದ ಅಲ್ಲೂ ಪ್ರದರ್ಶನ ಮಾಡುತ್ತಿದ್ದಾಳೆ. ಕುಚಿಪುಡಿ ಕಲಿಸಿದ ಶಿಸ್ತು, ಏಕಾಗ್ರತೆಯ ಅರಿವು ಜೀವನಕ್ಕೆ ಎಷ್ಟು ಉಪಯುಕ್ತ ಎನ್ನುವ ಅರಿವು ಅವಳಿಗಿದೆ. ಇದಕ್ಕೆ ಕಾರಣವಾದ ಗುರು ಶ್ರೀಮತಿ ಅಭಿನಂದನಾ ಕೋದಂಡ ಮತ್ತು ಅವರು ನಡೆಸುವ ಅಭಿನಂದನಾ ಡಾನ್ಸ್ ಅಕ್ಯಾಡೆಮಿಗೆ ನಮ್ಮ ಧನ್ಯವಾದಗಳು.

ಅಭಿನಂದನಾ ಡಾನ್ಸ್ ಅಕ್ಯಾಡೆಮಿ (ADA):
ಸಧ್ಯಕ್ಕೆ ಇಂಗ್ಲೆಂಡಿನಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಶಾಸ್ತ್ರೀಯ ನಾಟ್ಯ ಕಲಿಸುವ ಶಾಲೆಗಳಲ್ಲಿ ಒಂದು. ೨೦೦೭ರಲ್ಲಿ ಆರಂಭವಾದ ಈ ಶಾಲೆ ತನ್ನ ಶಿಸ್ತು ಮತ್ತು ಕಲಿಕೆಯ ವಿಧಾನದಿಂದಾಗಿ ಹಿರಿಮೆಯನ್ನು ಕಾಯ್ದುಕೊಂಡು ಬಂದಿದೆ. ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿ ತನ್ನ ಬೇರುಗಳನ್ನು ಹೊಂದಿರುವ ಕುಚಿಪುಡಿ ನೃತ್ಯವನ್ನು ಕಲಿಸುವ ಈ ಶಾಲೆ, ವಾಯವ್ಯ ಇಂಗ್ಲಂಡಿನ ಲ್ಯಾಂಕಶಾಯರ್‌ನ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳನ್ನು ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ದೇಶದಾದ್ಯಂತ ಹಲವಾರು ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶಿಸಿದ್ದಾರೆ – ಉದಾಹರಣೆಗೆ, ಲಂಡನ್ ಇಂಟರ್ನ್ಯಾಶನಲ್ ಆರ್ಟ್ಸ್ ಫೆಸ್ಟಿವಲ್, ಟೂರ್ ಡಿ ಫ್ರಾನ್ಸ್ ಫೆಸ್ಟಿವಲ್ (ಹ್ಯಾಲಿಫ್ಯಾಕ್ಸ್), ಬ್ಯಾರೊ ಫೆಸ್ಟಿವಲ್ ಆಫ್ ಕಲರ್ಸ್, ಲ್ಯಾಂಕಶಾಯರ್ ಎನ್ಕೌಂಟರ್, ಪ್ರೆಸ್ಟನ್ ಗಿಲ್ಡ್ ಮತ್ತು ಹೌಸ್ ಆಫ್ ಕಾಮನ್ಸ್ ದೀಪಾವಳಿ ಉತ್ಸವ.

ಅಭಿನಂದನಾ ಅಕ್ಯಾಡೆಮಿಯ ಮೂಲಮಂತ್ರ ಸಂಪ್ರದಾಯಬದ್ಧ ಕುಚಿಪುಡಿ ನಾಟ್ಯವನ್ನು ಕಲಿಸುವ, ಈ ನೆಲದಲ್ಲಿ ಬೆಳೆಸುವ ಅವಿಚ್ಚಿನ್ನ ಆಶಯ. ವಿದ್ಯಾರ್ಥಿಗಳನ್ನು ಥಿಯರಿ ಮತ್ತು ಪ್ರಾಕ್ಟಿಕಲ್‍ಗಳೆರಡರಲ್ಲೂ ಪ್ರವೀಣರನ್ನಾಗಿಸುವ ಅವಿರತ ಪ್ರಯತ್ನ. ೧೫ ವರ್ಷಗಳಿಂದ ಕಲಿಯುತ್ತಿರುವ ಮೊದಲೆರಡು ತರಗತಿಗಳ ವಿದ್ಯಾರ್ಥಿನಿಯರು ಕಳೆದ ಹಲ ವರ್ಷಗಳಲ್ಲಿ ತಮ್ಮ ರಂಗಪ್ರವೇಶವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಪ್ರತಿಯೊಂದು ರಂಗಪ್ರವೇಶದಲ್ಲೂ ಇದ್ದಂತಹ ಕಾಮನ್ ಫ್ಯಾಕ್ಟರ್ ಅಂದರೆ ಲಂಡನ್ನಿನಿಂದ ಬರುವ ಕರ್ನಾಟಿಕ್ ಸಂಗೀತಗಾರರು – ಹಾಡುಗಾರ ಶ್ರೀ ವಂಶೀಕೃಷ್ಣ ವಿಷ್ಣುದಾಸ್, ವೇಣುವಾದಕ ಶ್ರೀ ವಿಜಯ ವೆಂಕಟ ಮತ್ತು ಮೃದಂಗ ವಾದಕ ಶ್ರೀ ಪ್ರತಾಪ ರಾಮಚಂದ್ರ. ಈ ಮೂವರ ಸಂಗತಿ ರಂಗಪ್ರವೇಶದ ಕಾರ್ಯಕ್ರಮಕ್ಕೆ ಖಳೆ ತರುವುದರಲ್ಲಿ ಸಂದೇಹವೇ ಇಲ್ಲ.

ಕೆಳಗೆ ಕೊಟ್ಟಿರುವ ಹಲವು ಲಿಂಕುಗಳಲ್ಲಿ ವಿದ್ಯಾರ್ಥಿನಿಯರ ಇತ್ತೀಚಿನ ಕಾರ್ಯಕ್ರಮದ ಪಟಚಿತ್ರಗಳೂ, ಯುಟ್ಯೂಬ್ ಲಿಂಕ್ ಇವೆ. ಮಿತ್ರ ರಾಮಶರಣ ಬರೆದಿದ್ದ ನನ್ನ ಮಗಳು ಅದಿತಿಯ ರಂಗಪ್ರವೇಶದ ವಿವರಣೆಯನ್ನೂ ನೋಡಬಹುದು.

ಶೀಮತಿ ಅಭಿನಂದನಾ ಕೋದಂಡ:
ಆಭಿನಂದನಾ ಅವರೊಬ್ಬ ಅತ್ತ್ಯುತ್ತಮ ಕಲಾವಿದೆ, ನೃತ್ಯಸಂಯೋಜಕಿ ಮತ್ತು ಕಲಾನಿರ್ದೇಶಕಿ. ಭಾರತದಲ್ಲಿ ಹೆಸರಾಂತ ಗುರುಗಳಾದ ಶ್ರೀ ಪಸುಮರ್ತಿ ವೆಂಕಟೇಶ್ವರ ಶರ್ಮ, ಶ್ರೀ ವೇದಾಂತಂ ರಾಘವ ಮತ್ತು ಪದ್ಮಭೂಷಣ ಡಾ. ವೆಂಪಟಿ ಚಿನ್ನ ಸತ್ಯಮ್ ಅವರೊಂದಿಗೆ ಕಲಿತಿದ್ದಾರೆ, ಕೆಲಸ ಮಾಡಿದ್ದಾರೆ. ಎಂಟು ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಅವರದು. ದೂರದರ್ಶನ, ಈ-ಟಿವಿ, ಸ್ಟಾರ್ ಪ್ಲಸ್, ಜೆಮಿನಿ ಟಿವಿ ಮುಂತಾದ ಹಲವಾರು ಚಾನಲ್‍ಗಳಲ್ಲಿ ಇವರ ನೃತ್ಯಗಳು ಪ್ರದರ್ಶಿತವಾಗಿವೆ. ಭಾರತ, ಯುನೈಟೆಡ್ ಕಿಂಗ್‍ಡಮ್ ಮತ್ತು ಅಮೆರಿಕಗಳಲ್ಲಿ ಪ್ರದರ್ಶನ ಮತ್ತು ಕಮ್ಮಟಗಳನ್ನ ನಡೆಸಿಕೊಟ್ಟಿದ್ದಾರೆ. ತಮ್ಮ ಪ್ರತಿಭೆ ಮತ್ತು ಕೊಡುಗೆಗೆ ಹಲವಾರು ಬಾರಿ ಪ್ರಶಸ್ತಿ ಮತ್ತು ಬಿರುದು ಗಳಿಸಿದ್ದಾರೆ (Indian National Award for dance, Outstanding Young Person, Ugaadi puraskaar, Yuva Tarang puraskaar, Woman of the Future award to name a few). ದಿ. ಶ್ರೀ ಪಿ ವಿ ನರಸಿಂಹ ರಾವ್, ದಿ. ಶ್ರೀ ಅಬ್ದುಲ್ ಕಲಾಮ್ ಆಜಾದ್ ಮುಂತಾದವರಿಂದ ಸನ್ಮಾನಿತರಾಗಿದ್ದಾರೆ.

ಎಮ್ ಬಿ ಎ ಪದವೀಧರೆಯಾಗಿರುವ ಅಭಿನಂದನಾ ಪ್ರೆಸ್ಟನ್ನಿನ ಗುಜರಾತ್ ಹಿಂದು ಸೊಸೈಟಿಯ ಮಂದಿರದಲ್ಲಿ ಮುಖ್ಯಸ್ಥೆಯಾಗಿ ದಿನದ ಕೆಲಸ ಮಾಡುತ್ತಾರೆ. ಇವರ ಯಶಸ್ಸಿನ ಹಿಂದೆ ಪತಿ ಡಾ. ಪ್ರಫುಲ್ ಅವರ ಸಂಪೂರ್ಣ ಸಹಕಾರ ಇರುವುದು ವಿದಿತ.

ಕೈಬೆರಳಿಂದ ಎಣಿಸಬಹುದಾದಷ್ಟು ವಿದ್ಯಾರ್ಥಿಗಳೊಂದಿಗೆ ಅಭಿನಂದನಾ ಅವರ ಮನೆಯಲ್ಲಿ ಶುರುವಾದ ಈ ಶಾಲೆಯ ಸಸಿ ಈಗ ನೂರಕ್ಕೂ ಹೆಚ್ಚು ಮಕ್ಕಳೊಂದಿಗೆ ಬೆಳೆದು ಹೆಮ್ಮರವಾಗಿದೆ. ಹೊಸ ಪೀಳಿಗೆಯ ಯುವ ನಾಟ್ಯಗಾತಿಯರ ಪ್ರದರ್ಶನ ನೋಡಿದಾಗ ಪಾಲಕರ, ವಿದ್ಯಾರ್ಥಿಗಳ ಮತ್ತು ಗುರುವಿನ ಶ್ರಮ ಖಂಡಿತ ಫಲ ಕೊಡುತ್ತಿವೆ ಅನ್ನಿಸುತ್ತದೆ. ಕಾರಣಾಂತರಗಳಿಂದ ನಮಗಿರದ ಅವಕಾಶಗಳು ಮಕ್ಕಳಿಗೆ ದೊರೆತು, ಅವರ ಕನಸು ನನಸಾಗುವುದನ್ನು ನೋಡುವ ನಮ್ಮ ಆಸೆ ಪೂರೈಸುತ್ತಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಹಾರೈಸುವಾ.

- ಲಕ್ಷ್ಮೀನಾರಾಯಣ ಗುಡೂರ.

*********************************

ಗುರು ಶ್ರೀಮತಿ ಅಭಿನಂದನಾ ಕೋದಂಡ

********************************

ಶುಭ ಶುಕ್ರವಾರ (Good Friday) ಪ್ರಯುಕ್ತ ಪ್ರಸಾದ್ ನಂಜನಗೂಡು ಅವರು ರಚಿಸಿರುವ ಕವನ.

ಶುಭ ಶುಕ್ರವಾರ

ಮೇರಿ-ಜೋಸೆಫರ ಮುದ್ದು ಕುವರ
ಯೇಸು ಕ್ರಿಸ್ತ ನೀ ಅಜರಾಮರ

ಭುವಿಗೆ ಇಳಿದೆ ನೀ ಬೆತ್ಲೆಹೇಮಿನಲಿ
ನಡು ರಾತ್ರಿಯ ನೀರವದಿ
ಸತ್ಯವನರಸುತ ದೇಶವ ಸುತ್ತಿದೆ
ಸುವಾರ್ತೆ ನುಡಿದೆ ಸರಳದಲಿ

ತನ್ನಂತೆಯೇ ನೆರೆಯವರನ್ನು
ಪ್ರೀತಿಯಿಂದಲೇ ಕಾಣೆಂದೆ
ಒಂದು ಕೆನ್ನೆಗೆ ಹೊಡೆದವರಿಗೆ ನೀ
ಇನ್ನೊಂದು ಕೆನ್ನೆಯ ತೋರೆಂದೆ

ಶಿಲುಬೆಗೆ ಏರಿಸಿದವರಾ ಪಾಪವ
ಮನ್ನಿಸಿಬಿಡೆಂದ ಶಾಂತಿದೂತ
ಹಿಂಸಿಸಿದವರ ರೋಮ್ ನಗರವ
ಪುನೀತಗೊಳಿಸಿದ ಪವಾಡ ಪುರುಷ

ಕರ್ತನ ವಚನವ ಪಾಲನೆ ಮಾಡಲು
ಭಯ ಆಮಿಷಗಳು ಬೇಕಿಲ್ಲ
ಕ್ರಿಸ್ತನ ಪ್ರೀತಿ ಸಂದೇಶವ ಸಾರಲು
ವಿದ್ಯಾ-ವೈದ್ಯ ಸೇವೆಗಿಂತಿಲ್ಲಾ !

- ಪ್ರಸಾದ್ ನಂಜನಗೂಡು

*******************************

ಕನ್ನಡ ನಾಡು, ಭಾಷೆ, ಉತ್ಸವ, ಮತ್ತು ಹೊಸವರ್ಷ …..

ಅನಿವಾಸಿಯ ಬಳಗಕ್ಕೆ ನಮಸ್ಕಾರ. 2025ರ ಹೊಸವರ್ಷದಲ್ಲಿಯ ನನ್ನ ಮೊದಲ ಸಂಚಿಕೆಗೆ ನಿಮ್ಮೆಲ್ಲರ ಸ್ವಾಗತ.  ಅನಿವಾಸಿ ಬಳಗದ ಉತ್ಸಾಹ ಹೆಚ್ಚುತ್ತಿರುವುದಕ್ಕೆ ಇತ್ತೀಚೆಗೆ ನಡೆದ ದಶಮಾನೋತ್ಸವ, ಹೊಸ ಸದಸ್ಯರುಗಳ ಆಗಮನ, ಬರವಣಿಗೆ ಇತ್ತ್ಯಾದಿಗಳೇ ಸಾಕ್ಷಿ.  ಇದರ ಜೊತೆಯಲ್ಲೇ, ಕೆಲವೇ ವಾರಗಳ ಹಿಂದೆ (ಕಳೆದ ವರ್ಷ ಅನ್ನಬಹುದಿತ್ತೇನೋ, ಆದರೆ ಎಷ್ಟೋ ದಿನ ಆದಂತೆ ಅನ್ನಿಸುವುದರಿಂದ ಬೇಡ ಅಂದುಕೊಂಡೆ) ಸಕ್ಕರೆಯ ನಾಡು, ಮಂಡ್ಯದಲ್ಲಿ ಹಿರಿಯ ಸಾಹಿತಿ ಶ್ರೀ ಗೋ ರು ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಡೆದ 87ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲೆಂದೇ ನಮ್ಮ ಅನಿವಾಸಿ ಬಳಗದ ಪ್ರತಿನಿಧಿಯಾಗಿ ತೆರಳಿದ್ದರು ನಮ್ಮ ನವೀನ್.  ಅವರು ಬರೆದ ವರದಿ ಇಲ್ಲಿ ಕೆಳಗಿದೆ.  ಅವರೇ ತೆಗೆದ ಹಲವು ಚಿತ್ರಗಳೂ ಜೊತೆಯಲ್ಲಿವೆ - ಅದರಲ್ಲಿ ಪರಿಚಿತ ಮುಖಗಳಿವೆ, ನೋಡಿ.

ಜೊತೆಯಲ್ಲಿ ನಮ್ಮ ಗೋಪಾಲಕೃಷ್ಣ ಹೆಗಡೆಯವರ ಒಂದು ಕವನವಿದೆ, ಹೊಸವರ್ಷದ ಆಶಯಗಳೊಂದಿಗೆ. ಅವರದ್ದೇ ಮಾತಿನಲ್ಲಿ ಕವನದ ಹುಟ್ಟಿನ ಪರಿಚಯವೂ ಇದೆ.

ಕೊನೆಯ ಕೊಸರಿನಂತೆ, ಹೆಗ್ಡೆಯವರದೊಂದು ಚಿತ್ರಕ್ಕೆ ನನ್ನದೊಂದು ಕಿರು ಕವನವನ್ನೂ ಹಾಕಿಬಿಟ್ಟಿದ್ದೇನೆ, ತಡೆಯಲಾರದೆ. ಕ್ಷಮೆಯಿರಲಿ.

ಎಂದಿನಂತೆ ಓದಿ, ತಮ್ಮೆಲ್ಲರ ಮನೋಭಿಪ್ರಾಯವನ್ನು ತಿಳಿಸುವುದನ್ನು ಮುಂದುವರೆಸಿ. ಹೊಸವರ್ಷದ ಶುಭಾಶಯಗಳು.
- ಲಕ್ಷ್ಮೀನಾರಾಯಣ ಗುಡೂರ
*******************************************
೮೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೨೪, ಮಂಡ್ಯ

ಇತ್ತೀಚಿಗಷ್ಟೆ ೮೭ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಿತು. ಅದಕ್ಕಂತಲೇ ನಾನು ಭಾರತಕ್ಕೆ ಹೋಗಿದ್ದೆ. ಬಹಳ ವರ್ಷಗಳಿಂದಲೂ ಸಮ್ಮೇಳನದಲ್ಲಿ ಭಾಗಿಯಾಗುವ ತವಕವಿತ್ತು. ಆದರೆ ಆ ಸುಸಂದರ್ಭ ಈಗ ದೊರಕಿತು. ಬಹಳ ನಿರೀಕ್ಷಣೆಯಿಂದ ಸಿದ್ಧತೆ ಮಾಡಿಕೊಂಡಿದ್ದೆ. ಸಾಹಿತ್ಯ ಸಮಾರೋಪದಲ್ಲಿ ಸಾಕಷ್ಟು ಸಾಹಿತ್ಯದಬಗ್ಗೆ, ಕನ್ನಡ ಭಾಷೆ ಬಗ್ಗೆ ಕೇಳಿಬರುತ್ತದೆ, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವಸಾಹಿತಿ, ಕವಿ, ಬರಹಗಾರರ ನಡುವೆ ನಡೆದಾಡಿ, ಅವರನ್ನು ಆಲಿಸಿ ಅವರಿಂದ ಪ್ರೇರಣೆ ಪಡೆಯುವುದಲ್ಲದೆ, ಕನ್ನಡ ಭಾಷಾಕ್ಷೇತ್ರದಲ್ಲಿ ಎಂಥಹ ಬೆಳವಣಿಗೆ ರೂಪಗೊಂಡಿದೆ ಎಂದು ಕಾಣುವ ಹಂಬಲ ಬೆಳಸಿಕೊಂಡಿದ್ದೆ. ಇದಕ್ಕನುಗುಣವಾಗಿ ಲೀಡ್ಸ್ನಲ್ಲಿ ಮಾಡುತಿದ್ದ ಕೆಲಸವನ್ನು ಮೊಟಕುಗೊಳಿಸಿ ಹತ್ತಿದೆ, ಯುನೈಟೆಡ್ ಕಿಂಗ್ಡಮ್ನ ರಾಯಭಾರಿಯಂತೆ ಭಾವಿಸಿ. ಯಾಕಂದರೆ ನನಗೆ ತಿಳಿದಿರಲಿಲ್ಲ ಬೆರ್ಯಾರಾದರು ಇಲ್ಲಿಂದ ಹೋಗುವರೇನೋ ಅಂತ. ಆದರೆ ಅಲ್ಲಿಗೆ ಹೋದಮೇಲೆ ಲಂಡನಿನಿಂದ ಬಂದಿದ್ದ ಇನ್ನಿಬ್ಬರನ್ನು ಭೇಟಿಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿಯವರು ಕೆಲವೇ ದಿನಗಳ ಹಿಂದೆ ಬಂದು ನಮ್ಮೆಲ್ಲರಿಗೂ ಆಮಂತ್ರಣ ಕೊಟ್ಟಿದ್ದರು. ನಮ್ಮ ದೇಶವಲ್ಲದೆ ಕನ್ನಡಿಗರಿರುವ ಹತ್ತಾರು ರಾಷ್ಟ್ರಗಳಿಗೂ ಹೋಗಿ ವೈಯಕ್ತಿಕವಾಗಿ ಅಭಿಮಾನಿಗಳು ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸಾಹಿತ್ಯ ಸಮ್ಮೇಳನ ಬರೇ ಕರ್ನಾಟಕದ ಕನ್ನಡ ಜನರ ತಾಣವಲ್ಲ, ಅವು ಪ್ರಪಂಚದ ಎಲ್ಲೆಡೆ ನೆಲಸಿ ತಮ್ಮ ತಾಯ್ನಾಡನ್ನ ಮರೆಯದ ಜನಸಮುದಾಯದ ಸಂಸ್ಥೆಗಳು ಎಂದು ಸಾರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಾನು ಗುರುವಾರ ೧೯ನೆ ತಾರೀಖಿನಂದೇ ಮಂಡ್ಯಕ್ಕೆ ಹೊರಟೆ. ವಿದೇಶದಿಂದ ಬರುವ ಎಲ್ಲ ಪ್ರತಿನಿಧಿಗಳಿಗೆಂದೇ ವಿಶೇಷ ವ್ಯವಸ್ಥೆ ಬಹಳ ದಿನಗಳಿಂದಲೇ ರೂಪಗೊಂಡಿತ್ತು. ಮೈಸೂರಿನ ಸಂದೇಶ್ ಪ್ರಿನ್ಸ್ನಲ್ಲಿ ನಮಗೆ ಉಳಿದುಕೊಳ್ಳುವ, ಅಲ್ಲಿಂದ ಪ್ರತಿದಿನ ಸಮ್ಮೇಳನ ನಡೆಯುವ ಮಂಡ್ಯಕ್ಕೆ ಹೋಗಿಬರುವ ಸಾರಿಗೆ ಏರ್ಪಾಟು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ನಿವೇದಿತಾ ಹೊನ್ನತ್ತಿಯವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ಯೋಜಿಸಿ ಕಾರ್ಯಗತ ಮಾಡಲಾಗಿತ್ತು. ನನ್ನ ಭಾಷೆಯ ಸಮ್ಮೇಳನಕ್ಕೆ ನಾನೇ ಎಲ್ಲ ಖರ್ಚುಗಳನ್ನ ವಹಿಸಿಕೊಂಡು ಸರ್ಕಾರಕ್ಕಾಗಲಿ ಪರಿಷತ್ತಿಗಾಗಲಿ, ಸಮ್ಮೇಳನ ಸಂಚಾಲಕ ಇಲಾಖೆಗಾಗಲಿ ಋಣಿಯಾಗಬಾರದೆಂದಿದ್ದೆ. ಆದರೆ ನಮಗ್ಯಾವ ಕುಂದುಕೊರತೆಯಾಗದೆ, ಶುಲ್ಕವೂಯಿಲ್ಲದೆ ವಸತಿ, ಊಟ, ಜೊತೆಗೆ ಮನರಂಜನೆ, ಸಾಹಿತ್ಯ ರಸದೌತಣ ಉಣಿಸಿದ ಎಲ್ಲರಿಗೂ ನಾವು ಚಿರಋಣಿಯಾಗಿರಬೇಕು.

ಮಂಡ್ಯದಲ್ಲಿ ಅದೊಂದು ದೊಡ್ಡ ‘ಕುಂಭಮೇಳ’ ಅನ್ನಬೇಕು. ವಿಶಾಲ ಜಾಗ, ಲಕ್ಷಾಂತರ ಜನರು ಕೂರುವಂಥ ಸಭಾಂಗಣ, ಅದಕ್ಕೆ ತಕ್ಕಂಥ ಅದ್ದೂರಿ ಪ್ರವೇಶದ್ವಾರ, ದೃಷ್ಟಿಯಗಲಕ್ಕೂ ಮೀರಿದ ವೇದಿಕೆ, ಮಹಾಮಂಟಪ, ಅಲ್ಲಲ್ಲೇ ನೋಡಲನುಕೂಲವಾಗುವಂಥ ಕ್ಲೋಸ್ಡ್-ಸರ್ಕ್ಯೂಟ್ ಟಿವಿ, ಹೊರಗಿದ್ದರೂ ಕೇಳಿಸಿಕೊಳ್ಳುವಂಥ ಧ್ವನಿ ವ್ಯವಸ್ಥೆ, ಇವೆಲ್ಲ ದೊಡ್ಡ ಪ್ರಮಾಣದ ವಿನ್ಯಾಸವೆಂತಲೇ ಭಾವಿಸಬೇಕು.

ಸಮ್ಮೇಳನದ ವಿಶೇಷತೆ ಅದರ ಸಭಾಧ್ಯಕ್ಷರಾದ ನಾಡೋಜ ಗೊ ರು ಚನ್ನಬಸಪ್ಪನವರು. ೯೪ ವರ್ಷಗಳಾಗಿದ್ದರೂ ಅವರ ಮಾತಿನಲ್ಲಿದ್ದ ಸ್ಪಷ್ಟತೆ, ಶಬ್ದಭಂಡಾರ, ನಿರರ್ಗಳತೆ ಎಂತಹವರನ್ನೂ ಮೋಡಿ ಮಾಡುವಂಥದು. ನೇರವಾಗಿ ಸರ್ಕಾರಕ್ಕೆ ಮತ್ತು ವಾಣಿಜ್ಯ ಉದ್ಯಮಿಗಳಿಗೆ ಕರೆ ಕೊಟ್ಟರು. ಕನ್ನಡ ಭಾಷೆ ಉಳಿಯಲು ಬೆಳೆಸಲು ಅವರಿಂದ ಯಾವ ತರಹದ ಉತ್ತೇಜನ ದೊರಕಬೇಕು, ಅದರಲ್ಲೂ ಆರ್ಥಿಕ ಹೊಣೆ ವಹಿಸಿಕೊಳ್ಳಬೇಕೆಂದು. ಕನ್ನಡ ವಿಶ್ವವಿದ್ಯಾನಿಲಯ, ಕನ್ನಡ ಶಾಲೆಗಳು ಮುಚ್ಚುವಂಥ ಸ್ಥಿತಿಯನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಮೇಲಿದ್ದ ರಾಜಕೀಯ ಮುಖಂಡರಿಗೆ ಮನದಟ್ಟು ಮಾಡಿದರು. ಕನ್ನಡ ಪ್ರಾಚೀನ ಭಾಷೆಯಾಗಿದ್ದರೂ ಇಂದಿನ ತಂತ್ರಜ್ಞಾನ ಅಳವಡಿಸಿಕೊಂಡು, ಎಲ್ಲರಿಗೂ, ಅದರಲ್ಲೂ ಪ್ರಚಲಿತ ಯುವಪೀಳಿಗೆಗೆ ತಟ್ಟುವಂಥ ಮಾರ್ಪಾಟು ಮಾಡಿಕೊಳ್ಳಬೇಕು ಎಂದು ಕರೆಯಿತ್ತರು. ಇದರ ಜೊತೆಗೆ ಅವರು ಮತ್ತಿತರ ಮಹತ್ತರ ವಿಷಯಗಳನ್ನೂ ಚರ್ಚಿಸಿದರು. ಶಿಕ್ಷಣ ಮಾಧ್ಯಮ, ಅಂತರ-ರಾಜ್ಯ ಭಾಷಾವಿನಿಮಯ, ಕನ್ನಡ ಕಲಿಕಾ ಕೇಂದ್ರಗಳು, ಪರಿಸರ ಸಂರಕ್ಷಣೆ, ಧರ್ಮದ ದುರುಪಯೋಗ, ಮಹಿಳಾ ಸಮಾನತೆ ಹಾಗು ಸ್ವಾಯತ್ತತೆ, ಕನ್ನಡಿಗರ ಉದ್ಯೋಗ ಬದುಕು, ಪ್ರವಾಸೋದ್ಯಮ, ಮುಂತಾದ ವಿಚಾರಗಳನ್ನು ಎತ್ತಿ ತೋರಿಸಿ ಆ ದಿಕ್ಕಿನಲ್ಲಿ ಏನೆಲ್ಲಾ ಕೆಲಸಕಾರ್ಯಗಳು ನಡೆಯಬೇಕಾಗಿದೆ ಎಂದು ವಿವರಿಸಿದರು.

ಕೆಲವರ ಭಾಷಣಗಳು ತೀರ್ವವಾಗಿದ್ದವು. ಮುಖ್ಯಮಂತ್ರಿ ಚಂದ್ರುರವರು ಸಭಾಧ್ಯಕ್ಷರು ಉಲ್ಲೇಖಿಸಿದ ವಿಷಯಗಳಲ್ಲಿ ಸರ್ಕಾರ ವರ್ಷದಿಂದ ವರ್ಷಕ್ಕೆ ಅನುಸರಿಸುತ್ತಿರುವ ನಿರ್ಲಕ್ಷರೀತ್ಯಕ್ರಮವನ್ನು ಕಟುವಾಗಿ ರಾಜಕೀಯ ಮುಖಂಡರ ಮುಂದೆಯೇ ಟೀಕಿಸಿದರು. ಪ್ರತಿ ಸಮ್ಮೇಳನದಲ್ಲೂ ದೊಡ್ಡ ದೊಡ್ಡ ಭಾಷಣಗಳು ಆಗುತ್ತವೆ, ಮುಂದೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ನಿರ್ಣಯವೂ ಆಗುತ್ತೆ, ಆದರೆ ಸಮ್ಮೇಳನ ತದನಂತರ ಅವೆಲ್ಲ ಒಣಆಶ್ವಾಸನೆಗಳಾಗೆ ಉಳಿಯುತ್ತವೆ ಎಂದು ಆಕ್ಷೇಪಿಸಿದರು.

ಅನೇಕ ಕವಿಗೋಷ್ಠಿಗಳು, ಉಪನ್ಯಾಸಗಳು, ಸಮಾಲೋಚನೆಗಳು ಮೂರು ದಿನಗಳಲ್ಲೂ ಹಬ್ಬಿಕೊಂಡು ಕಿಕ್ಕಿರಿದು ತುಂಬಿದ ಮಂಡ್ಯ ಜನಸಮೂಹಕ್ಕೆ ಒಂದು ರೀತಿಯ ಜ್ಞಾನೋದಯ ಉಂಟುಮಾಡಿತು. ಬೆಳಿಗ್ಗೆಯಿಂದ ಸಂಜೆವರೆಗೂ ಈ ಕಾರ್ಯಕ್ರಮಗಳಾದ ಮೇಲೆ ಮನರಂಜನೆ ಸಾಗುತಿತ್ತು. ಒಂದು ದಿನ ಸಾಧು ಕೋಕಿಲ, ಮತ್ತೊಂದು ಸಂಜೆ ಅರ್ಜುನ ಜನ್ಯ ನೆರೆದಿದ್ದ ಯುವಕ ಯುವತಿಯರನ್ನು ಕುರ್ಚಿ ಮೇಲೆಯೇ ನಿಂತು ಕುಣಿದಾಡುವಂತೆ ಮಾಡಿದರು.

ಪುಸ್ತಕ ಮಳಿಗೆಗಳು ಮತ್ತೊಂದು ವೈಶಿಷ್ಟತೆ. ಕೊಂಡುಕೊಳ್ಳುವರಿಗಂತೂ ಅದೊಂದುಹಬ್ಬವೇ. ಬಹುಷಃ ಇಲ್ಲಿವರೆಗೆ ಪ್ರಕಟವಾಗಿರುವ ಎಲ್ಲ ಕಾದಂಬರಿಗಳು ನಾಟಕಗಳುಕಾವ್ಯಗಳು, ಇತರೆ ಅನೇಕ ಬರವಣಿಗಗಳು ಮಳಿಗೆಗಳಲ್ಲಿ ರಾರಾಜಿಸುತ್ತಿದ್ದವು. ಪ್ರಕಾಶಕರುಅಲ್ಲಿ ತಮ್ಮ ತಮ್ಮ ಪ್ರಕಟಣೆಗಳನ್ನು ಸಾಲು ಸಾಲು ಅಂಗಡಿಗಳಲ್ಲಿ ಬಿತ್ತರಿಸಿ ೫೦%ಗೂ ಮಿಗಿಲಾಗಿ ರಿಯಾಯಿತಿ ಕೊಟ್ಟು ಓದುಗರನ್ನು ಪ್ರೇರೇಪಿಸುತ್ತಿದ್ದರು. ಅಷ್ಟೊಂದು ಪುಸ್ತಕಗಳು ಒಂದೇ ಜಾಗದಲ್ಲಿ ಪ್ರದರ್ಶನವಾದದನ್ನು ಬಹುಷಃ ನಾನು ನೋಡಿರಲಿಲ್ಲ.

ವಿದೇಶಿ ಕನ್ನಡಿಗರ ಸಂಘಟನೆ ಈ ಸಮ್ಮೇಳನದ ಮತ್ತೊಂದು ವೈಶಿಷ್ಟ್ಯಪೂರ್ಣಕಾರ್ಯಕ್ರಮ. ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ದೇಶಗಳ ಜೊತೆಗೆ ಅನೇಕ ಏಷ್ಯಾರಾಷ್ಟ್ರಗಳ ಕನ್ನಡಿಗರು ನೆರೆದಿದ್ದರು. ಅವರೊಡನಾದ ಸ್ನೇಹ-ಪರಿಚಯ ಪರಸ್ಪರಕ್ರಿಯೆ ಬಹಳ ಕಾಲ ಉಳಿಯುವಂಥದು. ನಾನು ಬಹಳಷ್ಟು ವಿದೇಶಿ ಕನ್ನಡಿಗರನ್ನು ಪರಿಚಯಿಸಿಕೊಂಡು ಅವರ ದೇಶಗಳಲ್ಲಿ ಜರುಗುತ್ತಿರುವ ಕನ್ನಡ ಕಲಿಸುವಂಥ ಶಾಲೆಗಳ ಬಗ್ಗೆ, ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡೆ. ನಾವು ರಾಜ್ಯ ದೇಶ ಬಿಟ್ಟುಹೋಗಿದ್ದರೂ, ನಮ್ಮ ಕನ್ನಡ ನಮ್ಮೆಲ್ಲರನ್ನೂ ಒಂದುಗೂಡಿಸುತ್ತಿರುವ ಪರಿ ಎಲ್ಲರಿಗೂ ಅಗಾಧ ಸಂತಸ ತಂದಿರುವುದನ್ನ ಎಲ್ಲರಲ್ಲೂ ಕಂಡೆ. ಮುಂದೆ ನಾವೆಲ್ಲ ಸೇರಿ ಯಾವ ರೀತಿಯ ಕೊಡುಗೆ ಕೊಡಲು ಸಾಧ್ಯ ಅನ್ನುವುದನ್ನು ಕೂಲಂಕಶವಾಗಿ ಚರ್ಚಿಸಿ ಕಾರ್ಯಗತ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ ಕನ್ನಡ ಸಾಹಿತ್ಯ ಸಮ್ಮೇಳನ.

ಒಟ್ಟಿನಲ್ಲಿ ಈ ಸಮ್ಮೇಳನ ನನಗೊಂದು ಅಪೂರ್ವ ಅನುಭವ!

- ನವೀನ
*******************************************
ಆಕಾಶದ  ಆಶೆ -ಹೊಸ ವರುಷಕೆ!

(ಮುನ್ನುಡಿ: ಹೊಸವರ್ಷವೆಂದರೆ ನನಗೆ ಅದರಲ್ಲಿ ಕಂಡಿದ್ದು ಬರೇ ಅಂದಿನ ಮೈಮರೆತಂತ ಗಳಿಗೆಗಳಲ್ಲ; ಆದರೆ ಹಿಂದಿನ ದಿನಗಳ ನೋವು, ಮುಂದಿರುವ ಅನಿರ್ದಿಷ್ಟದ ಚಿಂತೆ. ಹಾಗೆಯೇ ಸಮತೋಲನದಲ್ಲಿ ಅವಲೋಕಿಸಿದಾಗ, ನನ್ನ ಮನಸ್ಸಿನಲ್ಲಿ ಆನಂದದಕ್ಕಾಗಿ ಆಕಾಶ ಬಯಸಿದ್ದೇನಿರಬಹುದೆಂಬ ಆ ಅವಲೋಕನದ ಚಿತ್ರಣ ಇಲ್ಲಿರಬಹುದು, ನೋಡಿ ತಿಳಿಸಿ; ಆದಿ-ಅಂತ್ಯಗಳ ನಡುವೆ ತುಂಬಿ ಸಂಬಂಧ ಕಲ್ಪಿಸಿದ್ದು ಅಂತರಂಗದ ಗಂಗೆ ಹರಿದು ಮಂದಹಾಸದಲ್ಲಿ ಮನೆಮಾಡಿದಂತಿತ್ತು, ಎನ್ನುವ ಭಾವವನ್ನು ಹಿಡಿಯಲು ಮಾಡಿದ ನನ್ನ ಕಿರು ಪ್ರಯತ್ನ, ನಿಮಗೆ ಹೇಗನ್ನಿಸಿತೋ ಕೇಳುವ ಕುತೂಹಲ! ಸಹನೆಯಿಂದ ಓದಿ ಪ್ರತಿಕ್ರಿಯಿಸುವಿರೆಂದು ನಂಬಿದ್ದೇನೆ – ಗೋಪಾಲಕೃಷ್ಣ ಹೆಗ್ಡೆ)

*****************************

ನೋವಿನಲ್ಲಿ ಕೂಡಿತ್ತೆ ೨೪ರ ಇತಿಹಾಸ?
ಮತ್ತೆ
ನಾಡೆಲ್ಲ ನೋಡಲಿಕ್ಕಿದೆ ೨೫ರ ಪರದೆ-
೨೬ಕ್ಕೆ ಮೊದಲು ಪರದಾಟ,
ನಂಬಲಾರದ ಸತ್ಯ
ಗೊತ್ತಿದ್ದರೂ
ಮೊದಲ ದಿವಸವೇ ಹೊಸವರುಷವನ್ನೆಲ್ಲ
ಬೊಗಸೆಯಲ್ಲಿ ಬಿಗಿದಿಟ್ಟ- ಒಂದನೇ ( ಒಂದೇ)
ದಿನದ ಇದು ಎಂಥಾ ವಿಪರ್ಯಾಸ-ಆಭಾಸ
ಸುಗ್ಗಿ ಕೋಲಾಟ !

ಯಾಕೋ ಈ ಮೌನದಲಿ
ಮೂಡಿದೆ ಮಂದಹಾಸ
- ಹಾರಿರುವೆ ಗರಿಬಿಚ್ಚಿ ಅರಳಿದ
ನೀ,
ನನ್ನ ನೀಲಿ ಆಕಾಶದ ಆಶೆ
ತೋರಿಸಿದೆ ದಿಗಂತ- ಅವಕಾಶ
ಮತ್ತೆ- ಮತ್ತೆ
ಹೀಗೆ
ಆಶಿಸಿಸಿದೆ ನೀಲಿತುಂಬಿರಲಿ - ಶುಭ್ರ
ಅಂತರಂಗ ಅದು
ನಿತ್ಯಾನಂದ, ಕಾವ್ಯಾನಂದದಂತಿರಲಿ
ಸದಾ ಈ ಬ್ರಹ್ಮಾಂಡ ಗುಂಡಿ
ಬಂಡಿ -
ಉಕ್ಕುತ್ತಿರಲಿ
ಸದಾ ಚೆಂದ ತಂದ ಅದು
ಬ್ರಹ್ಮಾನಂದ ಆಗಲಿ,
ಆದಿ - ಅಂತ್ಯಗಳ
ನಡುವೆ
ತುಂಬಿ ಈ,
ಅಂತರಂಗ - ಗಂಗೆ
ಹರಿಯಲಿ ಹರಿದ್ವಾರ
ವರ್ಷತುಂಬ 🙏💐🎊

- ಗೋಪಾಲಕೃಷ್ಣ ಹೆಗ್ಡೆ
*******************************************
ದೇವ - ದಾನವರಿಲ್ಲ, ಸಮುದ್ರಮಥನವೂ ಇಲ್ಲ;
ಹಾಲಾಹಲವಂತೂ ಮೊದಲೇ ಇಲ್ಲ.
ಲಕ್ಷ್ಮೀ ಚಂದ್ರರು ಇಲ್ಲ,
ಧನ್ವಂತರಿಯ ಸುಳಿವಿಲ್ಲ;
ಅಮೃತ ಕಲಶವದೊಂದೇ ಇರುವುದಲ್ಲ!
ಕೇಳು ಜನಮೇಜಯ, ಒಳ್ಳೆಯದ ಹೊರತರಲು ಉಳಿದೆಲ್ಲ ಬೇಕಿಲ್ಲ,
ಮನವದೊಂದಿದ್ದರೆ ಸಾಕಲ್ಲ!

- ಲಕ್ಷ್ಮೀನಾರಾಯಣ ಗುಡೂರ.
*******************************************