ಕನ್ನಡ ಬಳಗ ದೀಪಾವಳಿ/ರಾಜ್ಯೋತ್ಸವ ನವೆಂಬರ್ ೨೦೨೫: ಅನಿವಾಸಿಯಿಂದ ಭೈರಪ್ಪನವರಿಗೆ ಶ್ರದ್ಧಾಂಜಲಿ

ಕನ್ನಡ ಬಳಗ, ಮಿಲ್ಟನ್ ಕಿನ್ಸ್ ನ ಅನಿಕೇತನ ಸಂಸ್ಥೆಯ ಜೊತೆ ಕೈ ಗೂಡಿಸಿ, ನವೆಂಬರ್ ೮ ರಂದು ದೀಪಾವಳಿ ಹಾಗು ರಾಜ್ಯೋತ್ಸವಗಳನ್ನು ಆಚರಿಸಿತು. ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ‘ಅನಿವಾಸಿ’ ಯ ಸಮಾನಾಂತರ ಸಭೆ ಈಗ ಸಂಪ್ರದಾಯವೇ ಆಗಿದೆ. ಹೆಚ್ಚಾಗಿ, ಮುಖ್ಯ ಕಾರ್ಯಕ್ರಮದ ಉದ್ಘಾಟನೆ ಹಾಗೂ ಹಿತನುಡಿಗಳ ನಂತರದ ಸಮಯ ಇದಕ್ಕಾಗೇ ಮೀಸಲು. ಇತ್ತೀಚಿಗೆ ಕಾಣದ ಲೋಕಕ್ಕೆ ತೆರಳಿದ ಭೈರಪ್ಪನವರ ಅಗಲಿಕೆ ಕನ್ನಡಿಗರಿಗೆ ಅತೀವ ದುಃಖದಾಯಕ ಕಾರಣವಾಗಿದೆ. ಕನ್ನಡದ ಮಹಾನ್ ಕಾದಂಬರಿಕಾರರಲ್ಲಿ ಒಬ್ಬರಾದ ಭೈರಪ್ಪನವರಿಗೆ ಶ್ರದ್ಧಾಂಜಲಿ ಅರ್ಪಿಸುವುದೇ ಈ ಬಾರಿಯ ಅನಿವಾಸಿ ಕಾರ್ಯಕ್ರಮಕ್ಕೆ ತಕ್ಕುದಾದ ವಿಷಯವೆಂದು ಮೊದಲೇ ತೀರ್ಮಾನವಾಗಿತ್ತು. ಸದಸ್ಯರು ತಮಗೆ ಇಷ್ಟವಾದ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದು ಮೊದಲ ಭಾಗ. ಮುಖ್ಯ ಅತಿಥಿಯಾಗಿ ಬರುವ ಶ್ರೀ. ಮತ್ತೂರು ನಂದಕುಮಾರರಿಂದ ಅವರ- ಭೈರಪ್ಪನವರ ಒಡನಾಟದ ವಿಶಿಷ್ಟ ಅನುಭವಗಳ ಅವಲೋಕನೆ ಎರಡನೇ ಭಾಗದಲ್ಲಿ ಎಂದು ನಿಶ್ಚಯಿಸಿದ್ದೆವು. ಕಾರ್ಯಕ್ರಮದ ಮುಖ್ಯ ಸಂಘಟಕರಾದ ಆನಂದ್ ಕೇಶವಮೂರ್ತಿ ಹಾಗೂ ಅನ್ನಪೂರ್ಣ ಆನಂದ್, ಮುಖ್ಯ ಅತಿಥಿಯವರ ಅನುಮೋದನೆ ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಿದರು. ಈ ಸಂಚಿಕೆಯಲ್ಲಿ ಕಾದಂಬರಿಗಳ ವಿಶ್ಲೇಷಣೆ ಹಾಗೂ ಮತ್ತೂರರ ಭಾಷಣವದ ವಿವರಗಳಿವೆ. ಜೊತೆಯಲ್ಲೇ ಆತಿಥೇಯ ನಗರ ಮಿಲ್ಟನ್ ಕೀನ್ಸ್ ನವರೇ ಆದ ನಾಗರಾಜ ಬಸವರಾಜು ಅವರು ಬರೆದ ಇಡೀ ದಿನದ ಕಾರ್ಯಕ್ರಮಗಳ ವರದಿಯೂ ಇದೆ. ಕೊನೆಯಲ್ಲಿ ಡಾ . ಶ್ರೀವತ್ಸ ದೇಸಾಯಿ ಅವರು ಚಿತ್ರೀಕರಿಸಿದ ಕಾರ್ಯಕ್ರಮದ ಮುಖ್ಯಾಂಶಗಳ ಚಿಕ್ಕ ವಿಡಿಯೋವನ್ನು ನೋಡಲು ಮರೆಯದಿರಿ. -ರಾಮಶರಣ ಲಕ್ಷ್ಮೀನಾರಾಯಣ

ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮದ ಪರಿಚಯವನ್ನು ಆನಂದ್ ಮಾಡಿಕೊಟ್ಟರು. ಮುಖ್ಯ ಅತಿಥಿಗಳ ಪರಿಚಯವನ್ನು ಶ್ರೀವತ್ಸ ದೇಸಾಯಿಯವರು ನೆರವೇರಿಸಿದರು. ಕೊನೆಯಲ್ಲಿ ಜಿ.ಎಸ್.ಶಿವಪ್ರಸಾದ್ ಸಾಂಗವಾಗಿ ಆಭಾರ ಮನ್ನಿಸಿದರು. 

ಪರ್ವ: ಸಾರ್ವಕಾಲಿಕ ನೆಚ್ಚಿನ ಕಾದಂಬರಿ – ಅನ್ನಪೂರ್ಣ ಆನಂದ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಹೈಸ್ಕೂಲಿನಿಂದ ಕಾದಂಬರಿ ಓದುವ ಗೀಳು ಹತ್ತಿತ್ತು. ನನಗೆ ಮೊದಲು ಸಿಕ್ಕಿದ ಭೈರಪ್ಪನವರ ಕಾದಂಬರಿ ‘ವಂಶವೃಕ್ಷ’. ಅವರ ಬರಹದ ಶೈಲಿ, ಪಾತ್ರ ಪೋಷಣೆ, ಕಥೆಯ ಹಂದರ ನನ್ನ ಮನತಟ್ಟಿದವು. ‘ಧರ್ಮಶ್ರೀ’ ಹಾಗು ‘ದೂರಸರಿದರು’ ಗಳ ನಂತರ ಕೈಗೆಟುಕಿದ್ದು ‘ಪರ್ವ’. ಭಾರತೀಯ ಮಕ್ಕಳೆಲ್ಲ ಮಹಾಭಾರತದ ಕಥೆಗಳನ್ನು ಓದಿ, ಕೇಳಿಯೇ ಬೆಳೆಯುತ್ತಾರೆ. ಮಂತ್ರ ಪ್ರಭಾವದಿಂದ ಮಕ್ಕಳಾಗುವುದು, ಗಾಂಧಾರಿ ಹೊಟ್ಟೆ ಕಿವುಚಿಕೊಂಡು ನೂರು ಮಕ್ಕಳನ್ನು ಪಡೆಯುವುದು, ಕೃಷ್ಣನ ಚಮತ್ಕಾರಗಳು, ಇವೆಲ್ಲ ಕಲ್ಪನೆಗೆ ಮೀರಿದ ವಿಚಿತ್ರ ಭಾವನೆಗಳನ್ನು ಮೂಡಿಸುತ್ತಿದ್ದವು. ‘ಪರ್ವ’ ಮಹಾಭಾರತದ ಪಾತ್ರಗಳನ್ನೆಲ್ಲ ಮಾನವ ಸದೃಶಗೊಳಿಸುತ್ತವೆ. ಇಲ್ಲಿ ಚಮತ್ಕಾರಗಳಿಲ್ಲ. ಕೃಷ್ಣ, ಚಾಣಾಕ್ಷನೂ, ಮುತ್ಸದ್ದಿಯೂ ಆದ ವ್ಯಕ್ತಿ. ಕಥೆಯೂ  ಅಂತಃ ಸಂವಾದ, ಕೆದಕಿದ ನೆನಪು, ಪ್ರತಿಕ್ರಿಯೆಯ ರೂಪದಲ್ಲಿ ಸಾಗುವುದರಿಂದ, ಪುರಾಣವಾಗದೇ ಒಂದು ಐತಿಹಾಸಿಕ ಕಥೆಯಾಗಿ ಅನಾವರಣಗೊಳ್ಳುತ್ತದೆ. ಕುರುಕ್ಷೇತ್ರ ಯುದ್ಧ ವೈಭವೀಕರಣಗೊಳ್ಳದೇ ಕೊಳೆತು ನಾರುವ ಹೆಣದ ರಾಶಿ, ಯುದ್ಧ ತರುವ ಗೋಳು, ಹೊಲಸು ಇವನ್ನೆಲ್ಲ ತೋರುತ್ತ ಜಿಗುಪ್ಸೆ ಹುಟ್ಟುವಂತೆ ಮಾಡುತ್ತದೆ. ಸ್ತ್ರೀಪಾತ್ರಗಳಿಗೆ ಇಲ್ಲಿ ಪುರುಷ ಪಾತ್ರಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಇದೆ. ದ್ರೌಪದಿಯ ಪ್ರತೀಕಾರ, ಕುಂತಿಯ ಆಂತರಿಕ ತಲ್ಲಣ, ಗಾಂಧಾರಿಯ ಮಾತೃತ್ವದ ಬಂಧನ ಮನತಟ್ಟುತ್ತವೆ. ‘ಪರ್ವ’ ವನ್ನು ನಾನು ಹಲವು ಬರಿ ಓದಿದ್ದೇನೆ; ಪ್ರತಿಸಲವೂ ಹೊಸತನ್ನು ಕಂಡಿದ್ದೇನೆ. ಭೈರಪ್ಪನವರ ಕಾದಂಬರಿಗಳಲ್ಲೆಲ್ಲ ಇದು ನನ್ನ ಸಾರ್ವಕಾಲಿಕ ನೆಚ್ಚಿನ ಕೃತಿ.   

ಧರ್ಮಶ್ರೀ: ೬೦ರ ಭಾರತದ ಚಿತ್ರಣ – ಆನಂದ್ ಕೇಶವಮೂರ್ತಿ 

ನಾನು ‘ಧರ್ಮಶ್ರೀ’ಯನ್ನು ಮೊದಲ ಬಾರಿಗೆ ಓದಿದ್ದು ೩೫-೪೦ ವರ್ಷಗಳ ಹಿಂದೆ. ಕಳೆದ ವಾರ ಮತ್ತೊಮ್ಮೆ ಓದಿದಾಗ ಕಂಡದ್ದು ಹಲವು ಹೊಸ ವಿಷಯಗಳು. ೧೯೬೧ ರಲ್ಲಿ ಈ ಕೃತಿ ಬೆಳಕು ಕಂಡಿತು. ಹಾಗಾಗಿ ಇದನ್ನು ಭೈರಪ್ಪನವರು ೧೯೫೯ ಅಥವಾ ೧೯೬೦ರಲ್ಲಿ ಬರೆದಿರಬಹುದು. ಆಗ ಅವರಿಗೆ ೩೦ರ ಹರೆಯ. ಅಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಎಷ್ಟೊಂದು ಓದಿದ್ದರು, ಪ್ರೌಢಿಮೆ ಹೊಂದಿದ್ದರು ಎಂಬ ವಿಷಯ ಈ ಕಾದಂಬರಿಯನ್ನು ಓದಿದಾಗ ಅನಿಸುತ್ತದೆ. ೬೦ರ ದಶಕದ ಸಾಮಾಜಿಕ ಬದುಕು, ಕಿತ್ತು ತಿನ್ನುವ ಬಡತನ, ಹಿಂದೂ ಧರ್ಮದಲ್ಲಿ ತಂಡವವಾಡುತ್ತಿದ್ದ ಜಾತೀಯತೆ ಇವನ್ನೆಲ್ಲ ಧರ್ಮಶ್ರೀ ಪ್ರತಿಫಲಿಸುತ್ತದೆ. ಕಾದಂಬರಿಯ ಮೊದಲ ಪುಟಗಳು ಭೈರಪ್ಪನವರ ಮೈಸೂರಿಗೆ ವಿದ್ಯಾಭ್ಯಾಸಕ್ಕೆ ಬರುವವರೆಗಿನ ಆತ್ಮ ಕಥೆಯೇ ಎಂದು ತಮ್ಮ ‘ಭಿತ್ತಿ’ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಹಿಂದೂ ಕಥಾನಾಯಕ ಕ್ರಿಸ್ತ ಧರ್ಮಕ್ಕೆ ಮತಾಂತರ ಹೊಂದಿದ ಮೇಲೆ ಅವನಿಗಾಗುವ ತಳಮಳ, ಅದರ ಪರಿಣಾಮಗಳು ಇದರಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿವೆ. ರಾಷ್ಟೀಯ ಸ್ವಯಂ ಸೇವಕ ಸಂಘದ ಧ್ಯೇಯೋದ್ದೇಶ, ಸಂಘವನ್ನು ಹತ್ತಿಕ್ಕಲು ಅಂದಿನ ಸರಕಾರ ಮಾಡಿದ ಪ್ರಯತ್ನಗಳು ಇದರಲ್ಲಿವೆ. ಕ್ರಿಶ್ಚಿಯನ್ ಮಿಷನರಿಗಳು ಶೋಷಿತರನ್ನು ಗುರಿಯಾಗಿಸಿಕೊಂಡು, ಆಮಿಷಗಳನ್ನೊಡ್ಡಿ ಮತಾಂತರಗೊಳಿಸುತ್ತಿದ್ದ ಬಗೆ; ಸಮಾನ ಅಂತಸ್ತಿನ ಭರವಸೆ ನೀಡಿದರೂ ಶೋಷಿತರನ್ನು ಶೋಷಿಸುತ್ತಲೇ ಇದ್ದ ಸಂಗತಿಗಳನ್ನು ವಿವರಿಸುತ್ತಾರೆ. ದಿಸ್ತೀನ್ ಗೌಡನ ಪಾತ್ರದ ಮೂಲಕ ಧಾರ್ಮಿಕ ವ್ಯವಸ್ಥೆಯ ಕೊರತೆಗಳನ್ನು ಎತ್ತಿ ತೋರಿಸುತ್ತಾರೆ. ಈ ಕಾದಂಬರಿ ೬೦ರ ದಶಕದ ಸಮಾಜ ವ್ಯವಸ್ಥೆಯ ಅಧ್ಯಯನ, ಧಾರ್ಮಿಕ ಶೋಷಣೆಗೆ ಹಿಡಿಯುವ ಕೈಗನ್ನಡಿ ಎಂದು ಹೇಳಬಹುದು. 

ಮತದಾನ ಹಾಗೂ ಇತರ ಕಾದಂಬರಿಗಳು: ಹಾಜರಿ ಕಡಿಮೆಯಾಗಲು ಕಾರಣೀಭೂತ – ವಿನಯ್ ರಾಯಚೂರ್ 

ಭೈರಪ್ಪನವರ ಕಾದಂಬರಿಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೆಂದರೆ, ನಾನು ಕ್ಲಾಸಿಗೆ ಹೋಗದೇ ಪಟ್ಟಾಗಿ ಕುಳಿತು ಮುಗಿಸುತ್ತಿದ್ದೆ. ನನ್ನ ಹಾಜರಿ ಕಡಿಮೆಯಾಗಲು ಇವೇ ಮೂಲ ಕಾರಣ. ಅವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ. ‘ಮತದಾನ’ ಇಷ್ಟವಾಗುವುದಕ್ಕೆ ಮೂರೂ ಕಾರಣಗಳಿವೆ: ಚಿಕ್ಕದಾದರೂ ಚೊಕ್ಕದು ಈ ಕೃತಿ; ಆದರ್ಶಕ್ಕೆ ಜೋತು ಬಿದ್ದರೆ ಬದುಕು ಸಾಗದು; ರಾಜಕೀಯ ಎಂದಿಗೂ ಹೊಲಸೇ ಎನ್ನುವುದನ್ನು ಸಾಬೀತು ಮಾಡುತ್ತದೆ. ‘ಗೃಹಭಂಗ’ ದಲ್ಲಿ ಸಂಘರ್ಷದ ಬದುಕಿನ ಚಿತ್ರಣದ ಜೊತೆಗೆ, ಅಂತಹ ಅನುಭವಕ್ಕೆ ಒಳಗಾದವರಿಗೆ ಸಾಂತ್ವನ ಹೇಳುವ ಧ್ವನಿಯಿದೆ. ಭೈರಪ್ಪನವರ ಕಾದಂಬರಿಗಳಲ್ಲಿ ತತ್ವಶಾಸ್ತ್ರದ ಹೊಳವು ಸರ್ವೇ ಸಾಮಾನ್ಯ. ‘ಸಾಕ್ಷಿ’ ಹಾಗೂ ‘ನಾಯಿ ನೆರಳು’ ಇವೆರಡರಲ್ಲಿ ಆಧ್ಯಾತ್ಮಿಕತೆ, ತತ್ವಶಾಸ್ತ್ರಗಳ ಪ್ರಭಾವವನ್ನು ದಟ್ಟವಾಗಿ ಕಾಣಬಹುದು. ಪುನರ್ಜನ್ಮದ ಜಿಜ್ಞಾಸೆ ಕೂಡ ನಾಯಿನೆರಳಿನಲ್ಲಿ ತೀವ್ರವಾಗಿದೆ. ಅವರ ಯಾವುದೇ ಕಾದಂಬರಿಗಳಲ್ಲಿ ಅಂತಿಮ ನಿಷ್ಕರ್ಷ ಕಾಣ ಬರುವುದಿಲ್ಲ. ಓದುಗರ ಊಹೆಗೆ, ಚರ್ಚೆಗೆ ಅವು ತೆರೆದುಕೊಳ್ಳುತ್ತವೆ. ಅವರ ಕಾದಂಬರಿಗಳಿಂದ ಪ್ರೇರಿತನಾಗಿ, ನಾನು ತತ್ವಶಾಸ್ತ್ರ, ವೈಚಾರಿಕತೆ ಇವನ್ನೆಲ್ಲ ಇನ್ನು ಹೆಚ್ಚಾಗಿ ಅರಿಯುವ ಪ್ರಯತ್ನ ಮಾಡಿದ್ದೇನೆ. 

ಉತ್ತರಕಾಂಡ: ಭೈರಪ್ಪನವರ ಕೊನೆಯ ಕಾದಂಬರಿ – ಕೇಶವ ಕುಲಕರ್ಣಿ 

‘ಪರ್ವ’ದಲ್ಲಿ ಮಹಾಭಾರತವನ್ನು ಬರೆದ ಭೈರಪ್ಪನವರು, ‘ಉತ್ತರಕಾಂಡ’ದಲ್ಲಿ ರಾಮಾಯಣವನ್ನು ಬರೆದದ್ದು ೪೦ ವರ್ಷಗಳ ನಂತರ. ಭಾರತದ ಉದ್ದಗಲಕ್ಕೂ ಗದ್ಯ ಹಾಗೂ ಕಾವ್ಯದ ರೂಪದಲ್ಲಿ ನೂರಾರು ರಾಮಾಯಣಗಳ ಆವೃತ್ತಿಗಳನ್ನು ಕಾಣಬಹುದು. ಪಾಶ್ಚಾತ್ಯ ಶಿಕ್ಷಣದ ಪ್ರಭಾವ ಆಗುವವರೆಗೂ ರಾಮ ದೈವಾಂಶ ಸಂಭೂತನಾಗಿದ್ದ. ಆಧುನಿಕ ಕಾಲದಾರಂಭದಲ್ಲಿ ಪುರುಷೋತ್ತಮನಾದ. ವಿಚಾರವಾದ, ಹೊಸ ಸಿದ್ಧಾಂತಗಳ ಪ್ರಭಾವದಲ್ಲಿ ರಾಮಾಯಣವನ್ನು ವಿಭಿನ್ನ ದೃಷ್ಟಿಕೋನಗಳಿಂದ ನೋಡಲಾಗಿದೆ. ಪೌರಾಣಿಕ ನೋಟದಿಂದ ಹೊರತಾಗಿ, ಐತಿಹಾಸಿಕ ಅಥವಾ ಸಮಕಾಲೀನ ಕಥಾನಕದಂತೆ ಕಂಡವರಿದ್ದಾರೆ. ಕನ್ನಡದಲ್ಲೇ ಪೋಲಂಕಿ ರಾಮಮೂರ್ತಿಯವರು ‘ಸೀತಾಯಣ’ ಬರೆದು ಸಾಕಷ್ಟು ಚರ್ಚೆಗೊಳಗಾಗಿದ್ದರು. 

ಉತ್ತರಕಾಂಡದ ವೈಶಿಷ್ಟ್ಯತೆಯೆಂದರೆ, ಕಥೆ ಪ್ರಾರಂಭವಾಗುವುದೇ ಲವ-ಕುಶ ರ ಜನ್ಮವಾದನಂತರ. ರಾಮಾಯಣವು ಇಲ್ಲಿ ಸೀತೆಯ ಸ್ವಗತದಲ್ಲಿ rewind ಆಗುತ್ತದೆ. ‘ಪರ್ವ’ದಂತೆ ಇಲ್ಲಿನ ಪಾತ್ರಗಳೆಲ್ಲ ಮಾನವೀಕೃತಗೊಂಡಿವೆ. ಸೀತೆಯ ದೃಷ್ಟಿಕೋನದಿಂದ ಭೈರಪ್ಪ ರಾಮನನ್ನು ‘ಕಟ್ಟುತ್ತ’ ಹೋಗುತ್ತಾರೆ. ರಾಜನಾಗಿ ಗೆಲ್ಲುವ ರಾಮ, ಗಂಡನಾಗಿ ಸೋಲುತ್ತಾನೆ. ಅವರು ಈ ಕೃತಿಯಲ್ಲಿ ಸಾಕಷ್ಟು ಕಥೆಗಾರನ ಸ್ವಾತಂತ್ರ್ಯವನ್ನು ಬಳಸಿದ್ದಾರೆ. ಇದನ್ನು ಓದಿದಾಗ, ಭೈರಪ್ಪನವರು ಸಾಹಿತ್ಯ ಓದುಗರ ಕಟ್ಟುಪಾಡನ್ನು ಮೀರಿ ಒಳಗಾಗದೇ ಪಂಥ ಮೀರಿ ಬರೆದದ್ದನ್ನು ಗುರುತಿಸಬಹುದು. ಕೊನೆಯಲ್ಲಿ ವಾಲ್ಮೀಕಿ “ಈ ಕಥೆಗೆ ಸುಖಾಂತವನ್ನೊದಗಿಸಲೆಂದು ಅಯೋಧ್ಯೆಗೆ ಹೋಗಿ ಧರ್ಮಸಭೆ ಏರ್ಪಡಿಸಿದೆ. ಆದರೂ ಕಥೆಯ ದಿಕ್ಕನ್ನು ಬದಲಾಗಿಸಲಾಗಲಿಲ್ಲ” ಎಂದು ಸೋಲೊಪ್ಪಿಕೊಳ್ಳುತ್ತಾನೆ. 

ಈ ಕಾದಂಬರಿ, ಭೈರಪ್ಪನವರ ಒಳ್ಳೆಯ ಕಾದಂಬರಿ ಎಂದು ನನಗೆನ್ನಿಸುವುದಿಲ್ಲ; ಇದು ಅಷ್ಟಾಗಿ ಚರ್ಚೆಗೋ, ವಿಮರ್ಶೆಗೋ ಒಳಗೊಳ್ಳಲಿಲ್ಲ. 

ಮಂದ್ರ, ಹೆಸರೇ ಸೂಚಿಸುವಂತೆ ಸಂಗೀತದ ತಳಹದಿಯ ಮೇಲೆ ನಿಂತ ಕೃತಿ. ಮುಖ್ಯ ಪಾತ್ರದಾರಿ ಮೋಹನಲಾಲ, ಅಪ್ರತಿಮ ಪ್ರತಿಭೆಯ ಸಂಗೀತಗಾರ. ಹರಿದ್ವಾರ ಘಾಟಿಯಿಂದ ಮುಂಬಯಿಯ ಶಾಸ್ತ್ರೀಯ ಸಂಗೀತ ಲೋಕದ ಮಹಾನ್ ತಾರೆಯಾಗಿ ಬೆಳಗಿದವ. ಆತನ ಬೆಳವಣಿಗೆಯ ಮೂಲಕ ಭೈರಪ್ಪನವರು ಹಿಂದೂಸ್ತಾನಿ ಸಂಗೀತದ ಒಳ ನೋಟದ ಪರಿಚಯ ಮಾಡಿಕೊಡುತ್ತಾರೆ. ಇಲ್ಲಿ ಗುರು-ಶಿಷ್ಯ ಪರಂಪರೆಯ ಚಿತ್ರಣವಿದೆ; ಘರಾಣೆಗಳ ವಿವರವಿದೆ. ಹಲವು ರಾಗಗಳ ವಿವರ, ರಾಗಗಳ ರಸ, ಸಂಗೀತಗಾರ ಹೇಗೆ ಸ್ವರಗಳ ಹಂದರದಲ್ಲಿ ಸ್ವಯಂ ರಸಾಸ್ವಾಧನೆ ಮಾಡುತ್ತ, ಶ್ರೋತೃಗಳಿಗೂ ಉಣಬಡಿಸುತ್ತಾನೆ ಎಂದು ತೋರಿಸುತ್ತಾರೆ. ಜೊತೆಗೇ, ಕಲಾವಿದರ ನಡುವಿನ ಈರ್ಷ್ಯೆ, ಅನಾರೋಗ್ಯಕರ ಸ್ಪರ್ಧೆ ಇವನ್ನೆಲ್ಲ ಕಾಣಬಹುದು. 

ಮೋಹನಲಾಲನ ವಿಷಯ ಲಂಪಟತನ, ಅವಕಾಶವಾದಿ ಮನೋಭಾವ ಸಂಗೀತಕ್ಕಿಂತಲೂ ಮುಖ್ಯವಾದ ವಸ್ತುವಾಗಿ ಕಾಣಬಹುದು. ಆತ ಮಧು ಷಾ ಎಂಬ ಶಿಷ್ಯೆಯನ್ನು ತನ್ನ ಆಪ್ತ ಶಿಷ್ಯೆಯೆಂದು ಕರೆಯುತ್ತ, ಸಂಗೀತದ ಸಂಪೂರ್ಣ ಜ್ಞಾನವನ್ನು ಕೊಡುವ ನೆಪದಲ್ಲಿ ಶೋಷಿಸುವುದನ್ನು ಓದಿದಾಗ, ಇತ್ತೀಚಿಗೆ ಸುದ್ದಿಯಾದ ಸಂಗೀತ ಲೋಕದ ಲೈಂಗಿಕ ಶೋಷಣೆಯ ಕಥೆಗಳ ನೆನಪಾಗುವುದು ಸಹಜ. ಮೋಹನಲಾಲ ತನ್ನ ವೃತ್ತಿ ಜೀವನದ ಮಧ್ಯದಲ್ಲೇ ಮನೋಹರಿ ದಾಸ್ ಎಂಬ ನರ್ತಕಿಯ ಹಿಂದೆ ಓಡಿ  ಹೋಗುತ್ತಾನೆ. ಆಕೆ ತನ್ನ ವೃತ್ತಿಯಲ್ಲಿ ಮುಂದೆಬರಲು ಪಟ್ಟ ಕಷ್ಟಗಳು, ಶೋಷಣೆಗೆ ಒಳಗಾದ ಸಂಗತಿಗಳು; ತದನಂತರ ಆಕೆಯೇ ಸಹ ನರ್ತಕರನ್ನು ಶೋಷಿಸುವ ಪ್ರಸಂಗಗಳು ಕಥೆಯನ್ನು ನೈಜವಾಗಿಡಲು ಸಹಕರಿಸುತ್ತವೆ. 

ಈ ಕಾದಂಬರಿಯಲ್ಲೂ, ಭೈರಪ್ಪನವರ ಇತರ ಕಾದಂಬರಿಗಳಂತೇ ಹಿಂದಿರುವ ಸಂಶೋಧನೆಯ ಆಳ, ವಿಷಯದ ಮೇಲಿರುವ ಹಿಡಿತ, ಪಾತ್ರಗಳು ತಂದಿಡುವ ನೈತಿಕ ಸಂಧಿಗ್ತತೆ ಗಹನವಾಗಿವೆ. ಸಂಗೀತ ಪ್ರಿಯರೆಲ್ಲ ಓದಬೇಕಾದ ಕೃತಿಯೆಂದು ನನ್ನ ಅನಿಸಿಕೆ.  

ಭೈರಪ್ಪನವರೊಡನೆ ಸಹಚಾರ: ಡಾ.ಮತ್ತೂರು ನಂದಕುಮಾರ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಇಂದು ಅನಿವಾಸಿಯ ಸದಸ್ಯರು ಸುಂದರವಾಗಿ ಭೈರಪ್ಪನವರ ಕಾದಂಬರಿಗಳ ಬಗ್ಗೆ ವಿಶ್ಲೇಷಣೆ, ಅನಿಸಿಕೆಗಳನ್ನು ಹಂಚಿಕೊಂಡರು. ಭೈರಪ್ಪನವರು ನನಗೆ ಆತ್ಮೀಯರು. ಅವರು ಮಿತಭಾಷಿ. ಎಂದೂ ಜನರ ಗಮನದ ಕೇಂದ್ರದಿಂದ ದೂರವುಳಿಯುತ್ತಿದ್ದರು. ಅವರ ಪ್ರಥಮ ಭೆಟ್ಟಿ, ನಾನು ಮೈಸೂರಿನಲ್ಲಿ ವ್ಯಾಸಂಗಕ್ಕೆ ಅಣ್ಣನ ಮನೆಯಲ್ಲಿದ್ದಾಗ. ಅಲ್ಲಿ ನಡೆದ ಕಾರ್ಯಕ್ರಮಕ್ಕೆ ದಿನವೂ ಬಂದು ಕುಳಿತು, ಕೇಳಿ ಸದ್ದಿಲ್ಲದೇ ಮರೆಯಾಗುತ್ತಿದ್ದರು. ಎಲ್ಲವನ್ನೂ ಗಮನವಿಟ್ಟು ಕೇಳುತ್ತಿದ್ದರು, ನೋಡುತ್ತಿದ್ದರು. ಸ್ಪಂಜಿನಂತೆ ವಿಚಾರಗಳನ್ನು ಹೀರಿಕೊಳ್ಳುತ್ತಿದ್ದರು. ಸಾಮಾನ್ಯರೊಡನೆ ಸಾಮಾನ್ಯರಾಗಿ ಬೆರೆಯುತ್ತಿದ್ದರು. ಪ್ರವಾಸಕ್ಕೆ ಹೋದಾಗ ಸ್ಥಳಿಯರೊಂದಿಗೇ ಉಳಿದು, ಅಲ್ಲಿನ ಆಚಾರ, ವಿಚಾರ, ವೈಶಿಷ್ಟ್ಯತೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದರೇ ಹೊರತು, ಹೊಟೇಲುಗಳಲ್ಲಿ ತಂಗಿ ನೀರ ಮೇಲಿನ ಕಮಲದ ಎಲೆಯಂತಿರುತ್ತಿರಲಿಲ್ಲ. ಮತ್ತೂರಿಗೆ ಬಂದಾಗ, ನಮ್ಮ ಮನೆಯಲ್ಲೇ ಅವರ ವಾಸ್ತವ್ಯ. ದಿನವೂ ಬೆಳಗ್ಗೆ ನನ್ನೊಡನೆ ಊರಿನ ಕೆರೆಯ ಸುತ್ತ ವಾಕಿಂಗ್ ಹೋಗಲೇ ಬೇಕಿತ್ತು. ಆಗ ಎದುರಾಗುವ ಜನರೊಡನೆ ಕಳೆಯುತ್ತಿದ್ದರು; ವಯಸ್ಸಿನ ಭೇದವಿಲ್ಲದೇ ಚರ್ಚೆ ಮಾಡುತ್ತಿದ್ದರು. ಲಂಡನ್ನಿಗೆ ಬಂದಾಗ ಕೂಡ ನಮ್ಮ ಮನೆಯಲ್ಲೇ ತಂಗುತ್ತಿದ್ದರು. ಆಗ ಅವರು ನನ್ನೊಡನೆ ನೀರನ್ನು ಯಾಕೆ ಪೋಲು ಮಾಡಬಾರದು ಎಂಬ ವಿಷಯವನ್ನು ವರ್ಣಿಸಿದ ನೆನಪು ಮನದಲ್ಲಿ ತೇವವಾಗಿಯೇ ಇದೆ. ದಿನವೂ ವಾಕಿಂಗ್ ಹೋದಾಗ ಹಲವಾರು ವಿಷಯಗಳ ಚರ್ಚೆ ಆಗುತ್ತಿತ್ತು. ಅವರು ಮಂದ್ರ ಬರೆಯುವ ಮೊದಲು ಬೇಕಿದ್ದ ಸಾಮಗ್ರಿಯನ್ನು ಕಲೆ ಹಾಕಲು ನಾನು ಸ್ವಲ್ಪ ಸಹಾಯ ಮಾಡಿದ್ದನ್ನು ಅವರು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದು  ನನಗೆ ಹೆಮ್ಮೆಯ ಸಂಗತಿ – ಹೂವಿನೊಡನೆ ನಾರೂ ದೇವರ ಮುಡಿಗೇರಿದಂತೆ. ಅವರು ನಂಗೆ ತುಂಬಾ ಆತ್ಮೀಯರು. ಆತ್ಮೀಯರ ಬಗ್ಗೆ ಮಾತನಾಡುವಾಗ ಕಾಲ ಕಳೆದ ಅರಿವೇ ಇರುವುದಿಲ್ಲ.  ಇವತ್ತಿನ ಭೈರಪ್ಪನವರ ಸ್ಮರಣೆ ಅರ್ಥಪೂರ್ಣವಾಗಿದೆ. ಅವರನ್ನು ಓದಬೇಕು, ಓದಿ ಅವರ ನೆನಪನ್ನು ಹಸಿರಾಗಿಡಬೇಕು. 

ಆಂಗ್ಲನಾಡಿನಲ್ಲಿ ಕರುನಾಡ ಸೊಗಡು: ದೀಪಾವಳಿ ಹಾಗೂ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ – ನಾಗರಾಜ ಬಸವರಾಜು

 ದೀಪಗಳ ಹಬ್ಬ ದೀಪಾವಳಿ ಮತ್ತು ನಮ್ಮೆಲ್ಲರ ಹೆಮ್ಮೆಯ ನಾಡಹಬ್ಬ ಕರ್ನಾಟಕ ರಾಜ್ಯೋತ್ಸವ — ಈ ಎರಡೂ ಹಬ್ಬಗಳು ಅನಿವಾಸಿ ಕನ್ನಡಿಗರಿಂದ ನವೆಂಬರ್ ೦೮, ೨೦೨೫ರಂದು ಮಿಲ್ಟನ್ ಕೀನ್ಸ್‌ನಲ್ಲಿ ಅದ್ಧೂರಿಯಾಗಿ ಆಚರಿಸಲ್ಪಟ್ಟವು. ದೂರದ ಬ್ರಿಟನ್ ನೆಲದಲ್ಲಿ, ಅನಿಕೇತನ ಮಿಲ್ಟನ್ ಕೀನ್ಸ್ (ಸ್ಥಳೀಯ ಸಮುದಾಯ ಸಂಸ್ಥೆ) ಮತ್ತು ೪೦ ವರ್ಷಗಳ ಸುದೀರ್ಘ ಇತಿಹಾಸವಿರುವ ಪ್ರತಿಷ್ಠಿತ ಕನ್ನಡ ಬಳಗ ಯು.ಕೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮವು ಕನ್ನಡಿಗರ, ಕರುನಾಡ ಕುಡಿಗಳ ಹೃದಯಗಳನ್ನು ಬೆಸೆದ ಬೃಹತ್ ಸಾಂಸ್ಕೃತಿಕ ಸೇತುವೆಯಾಗಿತ್ತು.

 ಆದಿಪೂಜಿತ ವಿನಾಯಕನ ಆರಾಧನೆಯೊಂದಿಗೆ, ಉಪಸ್ಥಿತರಿದ್ದ ಗೌರವಾನ್ವಿತ ಅತಿಥಿಗಳಾದ ಡಾ. ಎಂ. ಎನ್. ನಂದಕುಮಾರ್ ಹಾಗೂ ಗಾಯಕ ಶ್ರೀ ಸಂತೋಷ್ ವೆಂಕಿಯವರು ಎರಡೂ ಸಂಘ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ವಿದೇಶ ನೆಲದಲ್ಲಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ರೀತಿಯ ಆಚರಣೆಗಳು ಮೈಲಿಗಲ್ಲು. ಯುವ ಪೀಳಿಗೆಗೆ ನಮ್ಮ ನಾಡು-ನುಡಿಯ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾದ ಈ ಉತ್ಸವಕ್ಕೆ ಅಪಾರ ಸಂಖ್ಯೆಯ ಸ್ಥಳೀಯ ಕನ್ನಡಿಗರು ಹಾಗು ದೂರದೂರಿನ ಕನ್ನಡ ಬಳಗದ ಸದಸ್ಯರು ಕುಟುಂಬ ಸಮೇತ ಆಗಮಿಸಿ ಕರುನಾಡ ಸೊಗಡನ್ನು ಮೆರೆಸಿದರು. ಕಾರ್ಯಕ್ರಮದ ಗೌರವ ಅತಿಥಿ, ಡಾ. ಎಂ. ಎನ್. ನಂದಕುಮಾರ್ (ಕಾರ್ಯನಿರ್ವಾಹಕ ನಿರ್ದೇಶಕರು, ಭಾರತೀಯ ವಿಧ್ಯಾ ಭವನ, ಲಂಡನ್) ನೆರೆದವರನ್ನು ಉದ್ದೇಶಿಸುತ್ತ, ಈ ರೀತಿಯ ಕಾರ್ಯಕ್ರಮಗಳು ಮತ್ತು ಕನ್ನಡ/ಕರ್ನಾಟಕ ಕುರಿತಾದ ಕಾರ್ಯಕ್ರಮಗಳು ನಾಡಿನಿಂದ ದೂರದ ದೇಶದದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಸೇತುವೆಯಾಗಿ, ಕರ್ನಾಟಕ ಭಾಷೆಗಳ, ಕಲಾ ಸಂಸ್ಕೃತಿ ಪರಂಪರೆಗಳ ಪರಿಚಯವಾಗಿ, ಈ ಅಭಿರುಚಿಗಳ ಬೆಳವಣಿಗೆಗೆ ಪೂರಕವಾಗಿರಲಿ ಎಂದು ಆಶಿಸಿದರು.

 ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಹಲವಾರು ಕಲಾವಿದರ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು. ಮಕ್ಕಳು, ಯುವಕರು ಮತ್ತು ಹಿರಿಯರು ಜಾನಪದ, ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ನಾಟಕಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಛದ್ಮವೇಶ, ಜನಪದ ಹಾಗು ಸಿನಿಮಾ ನೃತ್ಯಗಳು, ವಯಸ್ಕರ ಗಾಯನ, ದಂಪತಿಗಳ ಜೋಡಿ ನೃತ್ಯ, ನವರಸ ರೂಪಕ, ರಾಮಾಯಣ ಸಂಗೀತ ನೃತ್ಯ ಹಾಗು ಕರುನಾಡ ವೈಭವ ಕುರಿತಾದ ಫಿನಾಲೆ ನೃತ್ಯ ಸಭಿಕರ ಮನ ಸೂರೆಗೊಂಡವು. ಪ್ರತಿಯೊಂದು ಪ್ರದರ್ಶನವೂ ಕನ್ನಡಿಗರ ಕಲಾಭಿರುಚಿ ಮತ್ತು ನಾಡಿನ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾದವು. ದೀಪಾವಳಿಯ ಬೆಳಕು ಮತ್ತು ರಾಜ್ಯೋತ್ಸವದ ಕೆಂಪು-ಹಳದಿ ವರ್ಣಗಳು, ಎಲ್ಲರ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳು ಹಾಗೂ ಅದಕ್ಕನುಗುಣವಾಗಿ ಒಳಾಂಗಣ ಅಲಂಕಾರಗಳು ಸಮಾರಂಭದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದವು.

ಸ್ಮರಣಾಂಜಲಿ: ಕನ್ನಡದ ದಿಗ್ಗಜರಿಗೆ ನಮನ

ಈ ವರ್ಷ ನಮ್ಮಿಂದ ದೂರವಾದ, ಈ ಹಿಂದೆ ಕನ್ನಡ ಬಳಗ ಯು ಕೆ ಗೆ ಆಹ್ವಾನಿತ ಅತಿಥಿಯಾಗಿ ಬಂದಿದ್ದ ನಾಡೋಜ ಡಾ. ಎಸ್. ಎಲ್. ಭೈರಪ್ಪ ಮತ್ತು ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಲ್ಲದೆ, ಕನ್ನಡ ಬಳಗ ಯು.ಕೆಯ ಬೆಳವಣಿಗೆಗೆ ಶ್ರಮಿಸಿ, ಇತ್ತೀಚೆಗೆ ಅಗಲಿದ ಹಿರಿಯ ಸದಸ್ಯರ ಆತ್ಮಗಳಿಗೆ ಒಂದು ನಿಮಿಷದ ಮೌನ ಮತ್ತು ನುಡಿನಮನದ ಮೂಲಕ ಗೌರವ ಸಲ್ಲಿಸಲಾಯಿತು. ತಮ್ಮ ನೆಚ್ಚಿನ ಹಿರಿಯರನ್ನು ನೆನೆದು ಅನೇಕರು ಭಾವುಕರಾದರು.

ಬಹುಭಾಷಾ ಗಾಯಕ ಶ್ರೀಯುತ ಸಂತೋಷ್ ವೆಂಕಿ ಅವರ ಸಂಗೀತ ರಸಸಂಜೆ ಮೂಲಕ ನೆರೆದಿದ್ದ ಚಿಣ್ಣರು, ಯುವಕರು ಹಾಗೂ ಹಿರಿಯರೆಲ್ಲ ಕುಣಿದು ಕುಪ್ಪಳಿಸುವಂತೆ ಮಾಡಿದರು. ಈ ಕಾರ್ಯಕ್ರಮ ಕೇವಲ ಹಬ್ಬದ ಆಚರಣೆಯಾಗಿರದೆ, ಹೊರನಾಡ ಕನ್ನಡಿಗರು ತಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಂಡು, ಹೊಸ ಪೀಳಿಗೆಗೆ ಕರುನಾಡ ವೈಭವಯುತ ಸಂಸ್ಕೃತಿಯ, ಪರಂಪರೆಯ ಮಹತ್ವವನ್ನು ತಿಳಿಸುವ ಶ್ಲಾಘನೀಯ ಪ್ರಯತ್ನವಾಯಿತು.

‘ಭೈರಪ್ಪನವರಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮಕ್ಕೆ ನೆರೆದ ಸಭಿಕರು – ಚಿತ್ರಕೃಪೆ ಆನಂದ ಕೇಶವಮೂರ್ತಿ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಎನಿತು ಇನಿದು ಈ ಕನ್ನಡ ನುಡಿಯು 

ಮನವನು ತಣಿಸಿದ ಮೋಹನ ಸುಧೆಯು

 ಗಾನವ ಬೆರೆಯಿಸಿ ವೀಣೆಯ ದನಿಯೊಳು

ವಾಣಿಯ ನೇಪುರ ನುಡಿಸುತೆ ಕುಣಿಯಲು

 ಮಾಣದೆ ಮೆರೆಯುವ ಮಂಜುಲ ರವವೋ

 ಎನಿತು ಇನಿದು ಈ ಕನ್ನಡ ನುಡಿಯು

 – ಆನಂದಕಂದ 
ಇಂಥ ಮಧುರವಾದ ಭಾಷೆಯನ್ನು ಬಳುವಳಿಯಾಗಿ ಪಡೆದ ನಾವೇ ಧನ್ಯರು! ಅನಿವಾಸಿಯಲ್ಲಿ ರಾಜ್ಯೋತ್ಸವ ವಿಶೇಷ ಸಂಚಿಕೆಗೆಂದು ಲೇಖನ, ಕವನ,ನಾಡಗೀತೆ,ಅನುಭವ ಕಥನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದೇ ಎಂದು ಕೇಳಿದಾಗ ಪ್ರೀತಿ ಅಭಿಮಾನದಿಂದ ಬರೆದು,ಹಾಡಿ ಕಳಿಸಿದ ಅನಿವಾಸಿ ಓದುಗರೆಲ್ಲರಿಗೂ ವಂದನೆಗಳು. 
ಈ ಸಂಚಿಕೆಯಲ್ಲಿ ಗೌರಿ ಪ್ರಸನ್ನ ಮತ್ತು ಗಿರೀಶ್ ಪ್ರಸಾದ್ ಅವರು ರಾಜ್ಯೋತ್ಸವದ ನವಿರು ನೆನಪುಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಡಾ ರಾಮಶರಣ್ ಅವರು ಬರೆದ ”ಕಂಡಲ್ಲಿ ಕನ್ನಡ”ಎಂಬ ಸುಂದರ ಕವನವಿದೆ. ಜೊತೆಗೆ ‘ಅನಿವಾಸಿ’ಗೆ ಇದೇ  ಮೊದಲ ಬಾರಿ ಬರೆಯುತ್ತಿರುವ ಡಾ ಶ್ರೀಕಾಂತ ಕೃಷ್ಣಮೂರ್ತಿ ಅವರು ತಾಯಿ ‘ಕಾವೇರಿ’ ಯನ್ನು ತ್ರಿಪದಿಯಲ್ಲಿ ಪೋಣಿಸಿ ತಂದಿದ್ದಾರೆ. ಇದಲ್ಲದೆ ಈ ಸಂಚಿಕೆಯಲ್ಲಿ ತಮ್ಮರಾಜ್ಯೋತ್ಸವದೆನಪುಗಳನ್ನು ಬರೆಯುತ್ತಾ ಕನ್ನಡದ ಹಿರಿಯ ಕವಿಗಳಾದ ಸಾಲಿ ರಾಮಚಂದ್ರ ರಾಯರ – ಕನ್ನಡದ ನೆಲದ ಪುಲ್ಲೆನಗೆ. ಈ ಗೀತೆಯ ಹಿನ್ನೆಲೆ, ಇತಿಹಾಸವನ್ನ ಕವಿಯ ಮೊಮ್ಮಗ ಡಾ ಶ್ರೀವತ್ಸ ದೇಸಾಯಿ ಅವರು ಬರೆದಿದ್ದಾರೆ. ಮತ್ತು ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪನವರು ಅನಿವಾಸಿ ಕನ್ನಡಿಗರಿಗೆಂದೆ ಬರೆದಿರುವ – ”ಕಡಲಾಚೆಯ ಕನ್ನಡಿಗರ ಸ್ವಗತ” ಎನ್ನುವ ಎರಡು ಕನ್ನಡ ಗೀತೆಗಳಿವೆ. ಇವೆರಡನ್ನೂ ಈ ಸಂಚಿಕೆಗಾಗಿಯೇ ಹಾಡಿದ ವಿಡಿಯೋಗಳನ್ನು ಕೊಂಡಿಯನ್ನೊತ್ತಿ ’ಅನಿವಾಹಿನಿ’ಯಲ್ಲಿ ಕೇಳಿರಿ.

ಅನಿವಾಸಿ ಓದುಗರಿಗೆ ೬೬ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 

ಈ ವಿಶೇಷ ಸಂಚಿಕೆಯ ಓದಿಗೆ ನಿಮಗಿದೋ ಸ್ವಾಗತ 

-ಸಂಪಾದಕಿ 

 

ನನ್ನ ರಾಜ್ಯೋತ್ಸವದ ನೆನಪುಗಳು ಮತ್ತು ‘ನಾಡಗೀತೆ’ಯ ಪೂರ್ವೇತಿಹಾಸ – ಡಾ ಶ್ರೀವತ್ಸ ದೇಸಾಯಿ

ಇವೆಲ್ಲ ಹಳೆಯ ಮಾತುಗಳಾದರೂ ಈ ಲೇಖನದಲ್ಲಿ ಕೆಲವು ಎಲ್ಲರಿಗೂ ಗೊತ್ತಿರದ ಒಂದೆರಡು ಹೊಸ ಮಾಹಿತಿಯಿದೆ.

1956 ರಲ್ಲಿ ರಾಜ್ಯ ಏಕೀಕರಣಗೊಂಡರೂ ಕನ್ನಡ ಮಾತಾಡುವ ಈ ನಾಡನ್ನು ಅಧಿಕೃತವಾಗಿ ’ಮೈಸೂರು ಪ್ರಾಂತ ’ ಎಂದೇ ನಾವು ಶಾಲೆಯಲ್ಲಿದ್ದಾಗ ಕರೆಯುತ್ತಿದ್ದೆವು. ಆಗ ಒಂದು ಅಧಿಕೃತ ನಾಡಗೀತೆಯಿರಲಿಲ್ಲ. ’ಹಳೆಯ ಮೈಸೂರಲ್ಲಿ’ ಕುವೆಂಪು ಅವರು ಬರೆದ ’ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಗೀತೆ ಪ್ರಚಲಿತವಿದ್ದರೆ ಬೇರೆ ಕೆಲವು ಕನ್ನಡದ ದೇಶಭಕ್ತಿಯ ಗೀತೆಗಳು ಸಹ ನಾಡಗೀತೆಯೆಂದು ಕೆಲವರಿಂದ ಕರೆಯಲಾಗುತ್ತಿದ್ದವು. ಉದಾಹರಣೆಗಾಗಿ “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ” ಎಂಬ ಮೊದಲ ರಾಷ್ಟ್ರಕವಿ ಗೋವಿಂದ ಪೈ ವಿರಚಿತ ಹಾಡು ನಿರಂತರವಾಗಿ ಕನ್ನಡಿಗರ ತನುಮನ ಗಳಲ್ಲಿ ಮಾರ್ದನಿಸುತ್ತಿದ್ದ ’ನಾಡ ಭಕ್ತಿಗೀತೆ’ಯಾಗಿತ್ತು.  ಆ ಮೊದಲು ಮುಂಬಯಿ ಕರ್ನಾಟಕದಲ್ಲಿ ಸೇರ್ಪಡೆಯಾಗಿದ್ದ ನಾಲ್ಕು ಜಿಲ್ಹೆಗಳಲ್ಲಿ ಹುಯಿಲಗೋಳು ನಾರಾಯಣರಾಯರು ರಚಿಸಿದ ”ಉದಯವಾಗಲಿ ನಮ್ಮ ಕನ್ನಡ ನಾಡು” ಗೀತೆಯನ್ನೇ ಆಗ ನಾಡಗೀತೆಯೆಂದು ಕರೆಯಲಾಗುತ್ತಿತ್ತು ಮತ್ತು ನಾವೆಲ್ಲ ಶಾಲೆಯಲ್ಲಿ ಅದನ್ನು ಉತ್ಸಾಹದಿಂದ ಹಾಡುತ್ತಿದ್ದ ನೆನಪು. ಎಲ್ಲ ಸಾರ್ವಜನಿಕ ಸಮಾರಂಭಗಳಲ್ಲಿಯೂ ಅದನ್ನೇ ಹಾಡಲಾಗುತ್ತಿತ್ತು.  ’ಕರ್ನಾಟಕದ ಗತ ವೈಭವ’ವನ್ನು ಬರೆದು ಉತ್ತರ ಕರ್ನಾಟಕದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ದುಡಿದು ಕರ್ನಾಟಕದ ಕುಲಪುರೋಹಿತರೆಂದೇ ಜನರು ಕರೆಯುತ್ತಿದ್ದ ಆಲೂರು ವೆಂಕಟರಾಯರು ಸಾಧನಕೇರಿಯಿಂದ ಬೆಳಿಗ್ಗೆ ವಾಕಿಂಗ್ಘೋಗುತ್ತಿರುವಾಗ ನಮ್ಮ ಕಣ್ಣಿಗೆ ಬೀಳುತ್ತಿದ್ದರು. ಅವರು ಯಾವಾಗಲೂ ಬಿಳಿ ಗಡ್ಡ, ಶುಭ್ರವಾದ ಬಿಳಿ ನಿಲುವಂಗಿ, ಬಿಳಿ ಧೋತರ ಉಟ್ಟು, ನೆಟ್ಟನೆ ಬೆನ್ನು, ಕೈಯಲ್ಲೊಂದು ಕೋಲು ಹಿಡಿದು ಹೊರತರೆ ಅದೇನು ಗಾಂಭೀರ್ಯ! ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದೆ. ಹುಯಿಲಗೋಳು ನಾರಾಯಣರಾಯರದೋ ತಲೆಗೆ ರುಮಾಲು, ಬಿಳಿ ಕೋಟು ಮತ್ತು ಧೋತರ ಉಟ್ಟು ಒಂದು ಸಮಾರಂಭಕ್ಕೆ ಬಂದಾಗ ನೋಡಿದ ನೆನಪು. ಅವರು ಬರೆದ ನಾಡಗೀತೆಯ ಮೊದಲ ಸಾಲು ’ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’. ಚಲುವ, ಚೆಲುವ ಎರಡೂ ಪದಗಳು ಚಾಲ್ತಿಯಲ್ಲಿದ್ದರೂ ಅವರು ಬರೆದದ್ದು ’ಚಲುವ’. ಅದನ್ನು ತಪ್ಪಾಗಿ ಚೆಲುವ ಅಂತ ಬರೆದವರೇ ಹೆಚ್ಚು. ಅದು ಮೊದಲ ಬಾರಿ ಸ್ವಾಗತಗೀತೆಯಾಗಿ  1924 ರಲ್ಲಿ ಬೆಳಗಾವಿಯಲ್ಲಿ ಜರುಗಿದ 43ನೆಯ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಅದರ ಉಗಮದ ಕಥೆ ಸ್ವಾರಸ್ಯಕರವಾಗಿದೆ. ಸ್ವಾಗತ ಕಮಿಟಿಯವರು ಒಂದು ಸ್ಪರ್ಧೆಯನ್ನಿಟ್ಟು ಹಾಡುಗಳನ್ನು ಆಹ್ವಾನಿಸಲಾಯಿತು. ಆಗ ನಾರಾಯಣರಾಯರು ಮಲೇರಿಯಾದಿಂದ ಹಾಸಿಗೆ ಹಿಡಿದಿದ್ದರು. ಅವರ ಮಿತ್ರರು ವೃತ್ತಪತ್ರಿಕೆಯನ್ನು ತೋರಿಸಿ ಅವರ ಗೆಳೆಯರು ’ನೀವು ಏಕೆ ಬರೆಯಬಾರದು’ ಎಂದು ಕೇಳಿಕೊಂಡರಂತೆ. ಅದೇ ಪ್ರೇರಣೆಯಾಗಿ ಅವರು ಬರೆದರು. ಅದು ಆಯ್ಕೆಯಾಯಿತು. ಅದನ್ನು ಅಲ್ಲಿ ಹಾಡಿದವರು ಧಾರವಾಡದ ಗವಯ್ಯಿ ಸುಬ್ಬರಾಯರು, ಸಾಮಾಜಿಕ ತಾಣಗಳಲ್ಲಿ, ವೃತ್ತ ಪತ್ರಿಕೆಗಳಲ್ಲಿ ಕಾಣ ಬರುವ ಹೆಸರು ’ಹನ್ನೊಂದು ವರ್ಷದ ಗಂಗೂ ಬಾಯಿ ಹಾನಗಲ್’ ಎನ್ನುವದು ತಪ್ಪು (ಆಧಾರ: ಡಾ ಜಿ ಡಿ ಜೋಶಿ ಬರೆದ ಪಿ ಹೆಚ್ ಡಿ ಗಾಗಿ ಬರೆದ ಪುಸ್ತಕ -ಮುಂಬಯಿ ವಿಶ್ವ ವಿದ್ಯಾಲಯ,1996). ಅದರಲ್ಲಿ ನಾರಯಣರಾಯರ ಸ್ವಹಸ್ತದಿಂದ ಬರೆದ ಆ ಗೀತೆ ಇದೆ. ಒಮ್ಮೆ ಎನ್ಕೆ ಕುಲಕರ್ಣಿಯವರು ಗಂಗೂಬಾಯಿಯವರ ಸಂದರ್ಶನದಲ್ಲಿ ಬರೆದ ಕೆಲ ಸಾಲುಗಳೆ ಆ ತಪ್ಪು ಗ್ರಹಿಕೆಗೆ ಮೂಲ ಎಂದು ನನಗೆ ತಿಳಿದು ಬಂದಿದೆ.

ಮೇಲೆ ಹೇಳಿದ ಆ 1924 ರ ಬೆಳಗಾವಿಯ ಅಧಿವೇಶನಕ್ಕೆ ಗಾಂಧೀಜಿಯವರು ಪ್ರಥಮ ಬಾರಿ ಕನ್ನಡ ನಾಡಿಗೆ ಬಂದಿದ್ದರು. ಅವರು ಹಿಂದಿಯಲ್ಲಿ ಮಾಡಿದ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ಹೆಮ್ಮೆ (ನನ್ನ ಅಜ್ಜ) ಸಾಲಿ ರಾಮಚಂದ್ರರಾಯರದಾಗಿತ್ತು (1888-1978) . ”ಅವರ ದೇಶಭಕ್ತಿ, ಗಾಂಧೀ ಪ್ರೀತಿ, ಭಾಷಾ ಪರಿಣತಿ ಮತ್ತು ಇತ್ತೀಚೆಗೆ ಸಾಧಿಸಿದ್ದ ಹಿಂದೀಭಾಷಾಜ್ಞಾನಕ್ಕಾಗಿ ಅವರನ್ನು ಆರಿಸಲಾಗಿತ್ತು”. (ಹೇಮಾ ಪಟ್ಟಣಶೆಟ್ಟಿ: ಸಾಲಿ ರಾಮಚಂದ್ರ ರಾಯ, ಸಾಹಿತ್ಯ ಅಕಾದೆಮಿ, 2012). ಅವರು 1939ರಲ್ಲಿ ವಾರ್ಧಕ ಷಟ್ಪದಿಯಲ್ಲಿ ರಚಿಸಿದ  ”ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ” ಎಂದು ಆರಂಭವಾಗುವ ಕವನವನ್ನು ಹಲವುಕಡೆ ’ನಾಡಗೀತೆ’ಯೆಂದು ಉಲ್ಲೇಖಿಸಲಾಗಿದೆ. ಅದಕ್ಕೆ ರಾಗಸಂಯೋಜನೆ ಮಾಡಿ ಅಮಿತಾ ರವಿಕಿರಣ ಅವರು ಹಾಡಿದ್ದಾರೆ. (ಕೊಂಡಿಯನ್ನು ಕೆಳಗೆ ಕೊಡಲಾಗಿದೆ -1) ಅವರ ಹಸ್ತಾಕ್ಷರದಲ್ಲಿಯೇ ಬರೆದ ಕವನವನ್ನೂ ಇಲ್ಲಿ ಕೊಟ್ಟಿದೆ.

  ಭಾಷಾವಾರು ಪ್ರಾಂತಗಳ ವಿಂಗಡನೆಯಾದ ನಂತರ ಹೊಸ ಹೆಸರಿಡುವ ಆಂದೋಲನ ಶುರುವಾಯಿತು. ವಿಧಾನ ಸಭೆಯಲ್ಲಿ ’ಕರ್ನಾಟಕ’ ಎಂದು ಹೆಸರಿಡುವ ಬಗ್ಗೆ ಚರ್ಚೆ ನಡೆದಾಗ ದಕ್ಷಿಣ ಭಾಗದ ಸದಸ್ಯರು ವಿರೋಧಿಸಿ ಮಾತಾಡಿದ್ದು ನೆನಪಿದೆ. ಒಬ್ಬರ ವಾದ ಈಗಲೂ ಹಾಸ್ಯಾಸ್ಪದವೆನಿಸುತ್ತದೆ: ’ತಮಿಳಿನಲ್ಲಿ ಕರ್ನಾಡಗಮ್ ಎಂದರೆ ಹಳ್ಳಿ ಗಮಾರ ಎಂದು ಅಭಿಪ್ರಾಯ” ಎನ್ನುವ ನೆಪ. ಕರ್ನಾಟಕ ಎನ್ನುವ ಹೆಸರು ಅಧಿಕೃತವಾಗಿ ಅಂಗೀಕಾರವಾದದ್ದು 1973 ರಲ್ಲಿ. 1971-72 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಅವರ ಗೀತೆಯನ್ನು ’ನಾಡಗೀತೆ’ ಎಂದು ಘೋಷಿಸಿಯಾಗಿತ್ತು. ಆದರೆ ಸರಕಾರ ಹಾಗೆ ಮಾಡಿದ್ದು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ 2004 ರಲ್ಲಿ. ಆನಂತರವೂ ಆಗಿಂದಾಗ ಚರ್ಚೆ ವಿವಾದ ನಡೆದಿವೆ. ಅದು ಈ ಕಿರುಲೇಖನದ ವಸ್ತು ಅಲ್ಲವೆಂದು ಕೈಬಿಟ್ಟಿದ್ದೇನೆ.

( Govind Pai’s handwritten poem : “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ”By Mysore University Declaration certificate.pdf – Mysore University Declaration certificate.pdf, CC BY-SA 3.0, https://commons.wikimedia.org/w/index.php?curid=33265882 below

ಕವಿಗಳ ಹಸ್ತಾಕ್ಷರಗಳಲ್ಲಿ

ಕಡಲಾಚೆಯ ಕನ್ನಡ ಕುಲ ನಾವು – ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ

ಎರಡು ವರ್ಷಗಳ ಹಿಂದೆ ಕುವೈತ್ ನಿಂದ ಸ್ನೇಹಿತೆಯೊಬ್ಬರು ನನಗೆ ರಾಗ ಸಂಯೋಜನೆ ಮಾಡಿಕೊಡಲಾದೀತೇ ಎಂದು ಒಂದು ಕವಿತೆಯನ್ನು ಕಳಿಸಿದ್ದರು.ಕಡಲಾಚೆಯ ಕನ್ನಡಿಗರ ಸ್ವಗತ ಎನ್ನುವ ಈ ಕವಿತೆಯನ್ನು ಮೊದಲಬಾರಿ ಓದಿದಾಗಲೇ ತುಂಬಾ ಇಷ್ಟವಾಗಿತ್ತು. ಅನಿವಾಸಿ ಕನ್ನ್ನಡಿಗರ ಮನಸ್ಥಿತಿ, ವ್ಯಾಕುಲತೆ, ದೂರವಿದ್ದು ನಾಡಿನ ಗುಂಗಿನಲ್ಲಿರುವ ನಮ್ಮೆಲ್ಲರ ಮನದ ಮಾತಿನಂತಿದೆ ಈ ಕವಿತೆ. ನನ್ನ ಸಂಯೋಜನೆಯನ್ನ ‘ಅನಿವಾಸಿ’ಯ ಹೊಸ ಸದಸ್ಯೆ ಲೇಖಕಿ – ಗಾಯಕಿ ಶ್ರೀರಂಜನೀ ಸಿಂಹ ಅವರು ಹಾಡಿದ್ದಾರೆ. (ಕೊಂಡಿಯನ್ನು ಕೆಳಗೆ ಕೊಡಲಾಗಿದೆ -2)

 -ಅಮಿತಾ ರವಿಕಿರಣ್ 

ರಾಜ್ಯೋತ್ಸವದ ಸವಿ ನೆನಪು – ಗೌರಿ ಪ್ರಸನ್ನ

ಮತ್ತೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ. ಹೊರನಾಡಿನ ಕನ್ನಡಿಗರು, ಕನ್ನಡ ಸಂಘಗಳು ನಾಡು-ನುಡಿಯ ಪ್ರೇಮದಲ್ಲಿ ಮತ್ತೆ ಮಿಂದೇಳುವ ಶುಭ ಸಮಯ. ಎಲ್ಲರಿಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

     ‘ಅ ಆ ಇ ಈ ಕನ್ನಡದ ಅಕ್ಷರಮಾಲೆ -ಅಮ್ಮಾ ಎನುವುದೇ ಕಂದನ ಕರುಳಿನ ಕರೆಯೋಲೆ’ ಎನ್ನುವ ಗೀತೆ ಕೇಳುತ್ತಲೇ ಬಾಲ್ಯ ಕಳೆದದ್ದು. ಸ್ವಲ್ಪ ಬುದ್ಧಿ ಬರುವ ಹೊತ್ತಿಗೆ‘ ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ’ ಹಾಡಿಗೆ ಮಾರುಹೋಗಿ ಏನೇ ಆದರೂ ಕನ್ನಡ ನಾಡಿನಿಂದ ಹೊರಗೆ ಹೋಗೆನೆಂಬ ಧೃಢಸಂಕಲ್ಪವನ್ನು ಮಾಡಿದ್ದೆಷ್ಟು ಬಾರಿಯೋ? ‘ಕೃಷ್ಣ  ಶರಾವತಿ ತುಂಗಾ ಕಾವೇರಿಯ ವರರಂಗಾ’ ಎಂದು ಮಧ್ಯಾಹ್ನ 11:00 ಗಂಟೆಗೆ ಶಾಲೆಯ ಪ್ರಾರ್ಥನೆಯಲ್ಲಿ  ನಾಡಗೀತೆಯನ್ನು ಹಾಡುತ್ತಿರುವಾಗ ಬಿಜಾಪೂರದ ಬಿರುಬಿಸಿಲಿನಲ್ಲೂ ಎದೆಯಲ್ಲಿ ತಣ್ಣನೆಯ ನದಿಯ ಪ್ರವಾಹವೊಂದು ಹರಿಯುತ್ತಿದ್ದುದು ಸುಳ್ಳಲ್ಲ. ನಿತ್ಯೋತ್ಸವದ ಕ್ಯಾಸೆಟ್ ‘ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ’ ಎಂದು ಹಾಡುತ್ತಿದ್ದರೆ ಮೈಯೆಲ್ಲ ಮುಳ್ಳೆದ್ದು ಹೃದಯದ ತುಂಬ ಹೆಮ್ಮೆಯ ಸಂಚಾರ.

  ಜೀವನದ ಮೊದಲ ಮೂರು ದಶಕಗಳಲ್ಲಿ ನಾಡು-ನುಡಿಗಳಿಂದ ದೂರವಾಗಬಹುದಾದ ಕಿಂಚಿತ್ ಕಲ್ಪನೆಯೂ ಇರಲಿಲ್ಲ. ಆದರೆ ನೆಲ-ನೀರು-ಅನ್ನದ ಋಣಗಳು ನಮ್ಮನ್ನು ಒಂದೆಡೆ ಇರಗೊಡುವುದಿಲ್ಲವೇನೋ? ನಾಡಿನಿಂದ ದೂರ ಬಹುದೂರವಿದ್ದರೂ ನುಡಿ ಮಾತ್ರ ಈಗಲೂ ಜೀವನಾಡಿ ಎಂಬುದೇ ಸಧ್ಯಕ್ಕಿರುವ ಸಮಾಧಾನ. ಕನ್ನಡದ ಹೊರತೆನಗೆ ಮತಿಯಿಲ್ಲ-ಗತಿಯಿಲ್ಲ.ನನ್ನ ಮಟ್ಟಿಗೆ ನನ್ನ ಇರವು,ಅರಿವು, ಖೂನು ಗುರುತು, ಮೂಲ ಬೇರು ಎಲ್ಲವೂ ಕನ್ನಡವೇ. ಕನ್ನಡದಿಂದ ಪ್ರತ್ಯೇಕಿಸಿಕೊಳ್ಳುವುದು ಸಾಧ್ಯವೇ ಇಲ್ಲವೇನೋ?

  ಕನ್ನಡವನ್ನು ನಾವು ಉಳಿಸಬೇಕು, ಬೆಳೆಸಬೇಕು ಅನ್ನುವುದು ಬಾಲಿಶವೆನಿಸುತ್ತದೆ ಒಮ್ಮೊಮ್ಮೆ. ನಮ್ಮನ್ನು ಉಳಿಸಿದ್ದು,ಬೆಳೆಸಿದ್ದು, ಬಾಳಿಸಿದ್ದೇ ಕನ್ನಡವೆನ್ನವುದು ಸೂಕ್ತವೆನ್ನಬಹುದೇನೋ?

 ಸಧ್ಯಕ್ಕೆ ನನ್ನಾಶೆ..’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..ಬದುಕಿದರೆ ಕನ್ನಡ ನೆಲದಲ್ಲೇ ಬದುಕಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. ಮತ್ತದೇ ಮಣ್ಣಲ್ಲಿ ಮಣ್ಣಾಗಬೇಕು.’

“ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ.”

*******************************************************************

ನನ್ನೂರಿನ ರಾಜ್ಯೋತ್ಸವದ ನೆನಪು ಗಳು – ಗಿರೀಶ ಪ್ರಸಾದ್

ನವೆಂಬರ್ ತಿಂಗಳಿಗೂ ನನಗೂ ಬಹಳ ವಿಶೇಷವಾದ ನಂಟು. ನಾನೊಬ್ಬ ಕನ್ನಡಿಗ ಎಂಬುದು ಒಂದು ಮುಖ್ಯ ಕಾರಣವಾದರೆ, ಆ ತಿಂಗಳಲ್ಲಿ ನನ್ನ ಹುಟ್ಟಿದ ದಿನ ಎಂಬುದು ಮತ್ತೊಂದು ಕಾರಣವಿರಬಹುದು. ರಾಜ್ಯೋತ್ಸವವೆಂದರೆ ನನಗೆ ಹುಟ್ಟಿದ ದಿನವಿದ್ದಂತೆ. ಹೇಗೆ ನಾವು ಕೇವಲ ಒಂದು ದಿನ ನಮ್ಮ ಹುಟ್ಟಿದ ದಿನ ಆಚರಿಸಿದರೂ ಪ್ರತಿ ನಿತ್ಯ ಜೀವನವನ್ನು ಸಂಭ್ರಮಿಸುತ್ತೇವೆಯೋ ಹಾಗೇ ರಾಜ್ಯೋತ್ಸವ ಕೂಡ. ಭಾಷೆಯನ್ನು ಸಂಭ್ರಮಿಸುವ, ಪ್ರೀತಿಸುವ , ಆಚರಿಸುವ ದಿನ. ನಾನು ಕಂಡಿರುವ ಸಂಭ್ರಮಿಸಿರುವ ರಾಜ್ಯೋತ್ಸವವೇ ಬೇರೆ ರೀತಿಯದು. “ನಾನು ನವೆಂಬರ್ ಕನ್ನಡಿಗನಲ್ಲ ” ಎಂದು ಹೇಳುವ ಪ್ರಮೇಯವೇ ಬರದಂಥ ಸ್ಥಳದಲ್ಲಿ ಹುಟ್ಟಿದವನು ನಾನು. ಅನೇಕ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು, ಒಂದೇ ಒಂದು ಆಂಗ್ಲ ಮಾಧ್ಯಮ ಶಾಲೆ ಇದ್ದ ಊರು ನನ್ನದು. ಸ್ವಾಭಾವಿಕವಾಗಿ ಕನ್ನಡವೇ ಪ್ರಧಾನ ವ್ಯವಹಾರ ಭಾಷೆ. ಯಾರಿಗೂ ಬೇರೆ ಭಾಷೆ ಕಲಿಯುವ ಧಾವಂತ ಇದ್ದಂತೆ ಕಾಣದ ಕಾಲವದು. ಇಂಥ ಒಂದು ಊರಲ್ಲಿ ಕನ್ನಡ ರಾಜ್ಯೋತ್ಸವ ಕೇವಲ ರಾಜ್ಯ ರಚನೆ ಆದ ದಿನ ಆಗದೆ, ನಮ್ಮತನವನ್ನ ಆಚರಿಸುವ ಹಬ್ಬದಂತಿರುತಿದ್ದುದು ವಿಶೇಷ. ಇಡೀ ಊರಿಗೇ ಊರೇ ಸೇರಿ ಆಚರಣೆಯಲ್ಲಿ ಭಾಗವಹಿಸುತ್ತಿದ್ದುದ್ದು , ಎಲ್ಲಾ ಬಸ್ ಮಾಲೀಕರು, ಆಟೋ ಚಾಲಕರು ತಮ್ಮ ವಾಹನಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಊರಲೆಲ್ಲಾ ಓಡಾಡುತ್ತಿದ್ದುದ್ದು ನನ್ನ ಮನಸಲ್ಲಿ ಅಚ್ಚಳಿಯದೆ ಉಳಿದಿದೆ.

ಒಂದು ತಿಂಗಳಿಂದಲೇ ಎಲ್ಲಾ ೧೫ ಶಾಲೆಗಳಲ್ಲೂ ಕವಾಯಿತು , ವಿಶೇಷ ವೇಷ ಭೂಷಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ದತೆಗಳು ಜೋರಾಗಿರುತ್ತಿದ್ದವು. ಹಬ್ಬದ ದಿನ ಬೆಳಿಗ್ಗೆ ೭ ಗಂಟೆಗೆ ಎಲ್ಲಾ ಶಾಲೆಗಲ್ಲಿ ಧ್ವಜಾರೋಹಣದ ನಂತರ ಸಾಲಾಗಿ ಊರಿನ ಕೋಟೆ ಮೈದಾನದಲ್ಲಿ ಒಟ್ಟಿಗೆ ಸೇರಿ ಮತ್ತೊಮ್ಮೆ ಅಲ್ಲಿ ಧ್ವಜಾರೋಹಣದ ನಂತರ ಊರಿನ ಎಲ್ಲಾ ರಾಜಬೀದಿಗಳಲ್ಲಿ ಕವಾಯಿತು ನಡೆಸುವ ಸಂಭ್ರಮ ನೋಡಿಯೇ ತಿಳಿಯಬೇಕು. ಶಾಲಾ ಮಕ್ಕಳ ಕವಾಯಿತಿನ ಜೊತೆಗೆ ಅನೇಕ ಜಾನಪದ ಕಲೆ ಪ್ರಕಾರಗಳು ಅನಾವರಣ ಗೊಳ್ಳುತ್ತಿದ್ದ ರೀತಿ ಬಹಳ ವಿಸ್ಮಯಕಾರಿಯಾಗಿರುತಿತ್ತು .
ಒಂದು ವರ್ಷದ ವೇಷಭೂಷಣ ಸ್ಪರ್ಧೆಯಲ್ಲಿ ನನ್ನ ಕೃಷ್ಣ ದೇವರಾಯ ವೇಷಕ್ಕೆ ಬಹುಮಾನ ವಿಜೇತನಾಗಿದ್ದಲ್ಲದೆ ನನ್ನ ವೇಷದ ವೈಖರಿಗೆ ಮನಸೋತ ಆಯೋಜಕರು ನಮ್ಮ ಇಡೀ ಊರಿನಲ್ಲಿ ಆನೆಯ ಮೇಲೆ ನನ್ನ ಮೆರವಣಿಗೆ ನಡೆಸಿದ್ದು ಮನಸ್ಸಲ್ಲಿ ಅಚ್ಚ ಹಸಿರಾಗಿ ಉಳಿದಿರುವ ರಾಜ್ಯೋತ್ಸವ ನೆನಪುಗಳಲ್ಲೊಂದು .
ಬಹುಷಃ ಕಳೆದ 20 ವರ್ಷಗಳಲ್ಲಿ ನನ್ನೂರು ಬದಲಾಗಿರಬಹುದು .ಅಲ್ಲಿನ ಆಚರಣೆಗಳು ಬದಲಾಗಿರಬಹುದು, ಆದರೆ ಊರಿನ ಜನರ ಮನದಲ್ಲಿ ಈಗಲೂ ಭಾಷೆಯ ಬಗ್ಗೆ ಇರುವ ಒಲವು ಕಡಿಮೆ ಆಗಿಲ್ಲ.

ಈಗೀಗ ನನ್ನ ನಿರೂಪಣೆಯನ್ನು ನೋಡಿ, ಕೇಳಿ ಯಾರಾದರೂ ಬಂದು, ನಿಮ್ಮ ಕನ್ನಡ ಬಹಳ ಚೆನ್ನಾಗಿದೆ, ಭಾಷೆಯನ್ನ ಕಾಪಾಡಿಕೊಂಡಿದ್ದೀರಿ ಎಂದರೆ, ಹೆಮ್ಮೆ ಹಾಗೂ ಬೇಸರ ಎರಡೂ ಒಟ್ಟಿಗೆ ಆಗುತ್ತೆ. ಭಾಷೆಯ ಬಗ್ಗೆ ಹೆಮ್ಮೆ ಎನಿಸಿದರೆ, ಎಲ್ಲರ ಮನಸಲ್ಲಿ, ಮನೆಯಲ್ಲಿ ಮುಕ್ತವಾಗಿ, ಸುಲಲಿತವಾಗಿ ಹರಿದಾಡ ಬೇಕಿರುವ ಭಾಷೆಯನ್ನು ಕಾಪಾಡಿಕೊಳ್ಳುವ ಪ್ರಮೇಯ ಬಂದಿದೆಯಲ್ಲ ಎನ್ನುವುದು. ಅದೇನೇ ಇರಲಿ ಭಾಷೆಯ ಬಳಕೆ ನಿತ್ಯ ಮಂತ್ರವಾಗಿ ಮನ ಮನಗಳಲ್ಲಿ ಕನ್ನಡದ ಬೆಳಕು ಪಸರಿಸಲಿ .

ಜೈ ಕನ್ನಡಿಗ

ಕಂಡಲ್ಲಿ ಕನ್ನಡ – ಡಾ ರಾಮ್ ಶರಣ್

ದೂರದೂರಿನಲಿ ಮಿಡಿಯುತಿದೆ ಮನ
ಬೇಕೆಲ್ಲೆಲ್ಲೂ ಕನ್ನಡ ಪ್ರತಿದಿನ
ಕನ್ನಡಿಯಲ್ಲೇ ಕನ್ನಡ ಪ್ರತಿಫಲನ?
ಬಂದಿರುವುದೇಕೆಂಬುದೇ ನಿತ್ಯ ಮಥನ


ಮಂಜು ಹಾಕಿದ ಮುಸುಕಿನಲಿ
ಬಾಗಿ ಮರಗಳ ಸಾಲಿನಲಿ
ಚೆಲ್ಲಿ ಹರಡಿದ ಎಲೆಗಳಲಿ
ನಾಡ ಬಣ್ಣಗಳು ಕಂಡವಲ್ಲಿ


ಹಗುರು ಬಿಸಿಲಿನ ಕಾವಿನಲಿ
ರೆನ್, ರಾಬಿನ್ನುಗಳ ಇಂಚರದಿ
ವೀಕೆಂಡ್ ಕನ್ನಡ ಸಾಲೆಯಲಿ
ಚಿಣ್ಣರ ಕನ್ನಡ ಕಂಠದಲಿ


ದೂರದೂರಿನಲಿ ಮಿಡಿಯುತಿದೆ ಮನ
ದಿಟ್ಟಿಸಿದಲ್ಲಿಹುದು ಕನ್ನಡತನ
ಇರುವಲ್ಲಿ ಬಿತ್ತಿ ಬೆಳೆಯುವೆ ಅಣ್ಣ
ಕಂಡಲ್ಲಿ ಕನ್ನಡದ ಬಣ್ಣ
-ರಾಂ

( ಚಿತ್ರ ; ಡಾ ರಾಮ್ ಶರಣ್ )

*********************************************************************************

ಶ್ರೀಕಾಂತ್ ಕೃಷ್ಣಮೂರ್ತಿ ಅವರು ಬರ್ಮಿಂಗಹ್ಯಾಮ್ನಲ್ಲಿ consultant psychiatrist ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಂಗೀತದ ವಾಗ್ಗೇಯಕಾರರಾಗಿರುವ ಶ್ರೀಕಾಂತ್ ಅವರು ಕನ್ನಡ, ತಮಿಳು, ಸಂಕೇತಿ ಭಾಷೆಗಳಲ್ಲಿ ಹಾಡುಗಳನ್ನು ಬರೆದು ಸಂಯೋಜಿಸಿದ್ದಾರೆ. ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನ ಸಂಕೇತಿ ಅನುವಾದ ಮಾಡಿದ್ದಾರೆ. ಹೈಕು ಕವಿಗಳಾಗಿರುವ ಇವರು ಎರಡುವರ್ಷಗಳ ಕಾಲ British Haiku Society ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.”ephemere” ಎಂಬ ಹೈಕು ಪತ್ರಿಕೆಯನ್ನು ಕೂಡ ಪ್ರಕಟಿಸಿದ್ದಾರೆ.-ಸಂ

ಕಾಯೇ ಕಾವೇರೀ! – ಡಾ ಶ್ರೀಕಾಂತ್ ಕೃಷ್ಣಮೂರ್ತಿ

ಕುಣಿಯುತ್ತ ಸಾಗಿದ ಫಣಿವೇಣಿ ಹೆಣ್ಣಿಗೆ
ಮಣಿದು ತಾ ಬಂದು ಮಳೆರಾಯ ಕೂಡಿದ
ಅಣಿಯಾಗಾಷಾಡ ಮಾಸದಿ

ಅಮ್ಮ ನೀನೀವಾಗ ಬಿಮ್ಮನಸೆಯು ಜೋಕೆ
ಧುಮ್ಮಿಕ್ಕುವಾಗ ದುಡುಕೇಕೆ ದಯೆಮಾಡೆ
ನಮ್ಮಯ ಬಾಳು ನಲಿಯೋಕೆ

ಜಂಬವ ಬಿಟ್ಟೀಗ ತುಂಬಿದ ಬಸುರಿ ನೀ
ಅಂಬೋಧಿ ಕಡೆಗೆ ಹಾಯಾಗಿ ಎಲ್ಲರಿ-
ಗುಂಬುದಕಿತ್ತು ಹೊರಟೆಯಾ

ತಡೆದುಕೋ ದಮ್ಮಯ್ಯ ಮಿಡುಕದಿರಮ್ಮಯ್ಯ
ಹಡೆವಾಗ ನಮ್ಮ ಭಾಗ್ಯವನಾಚೀಚೆ
ದಡಗಳನೊಡೆದು ದಾಟೀಯ

ಹಸುಗೂಸು ಹುಟ್ಟಿದೆ ಹಸುರನು ತೊಟ್ಟಿದೆ
ತುಸು ಈಗ ತಲೆಯನೆತ್ತಿದೆ ತೊಡೆಮೇಲೆ
ಸಿಸುವಿಟ್ಟು ಉಣಿಸಿ ಹರಸಮ್ಮ

ಹೆಚ್ಚಿಗೆ ಕೊಟ್ಟೀಯ ಉಚ್ಚಿಕೊಂಡಾಮೇಲೆ
ಕೊಚ್ಚಿ ಹೋದೀತು ಕೂಸೆಮ್ಮ ಭಾಗ್ಯಕೆ
ಕಿಚ್ಚಿಡ ಬೇಡ ಕಾವೇರಿ

*********************************************************************

ಕೃಪೆ: ಹುಯಿಲಗೋಳ ನಾರಾಯಣರಾಯರ ಕವಿತೆಯ ಫೋಟೋ ಮತ್ತು ಮಾಹಿತಿ: ಹರ್ಷ ಡಂಬಳ್ ಅವರಿಂದ

1. ’ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ ’ -ಅಮಿತಾ ರವಿಕಿರಣ ಅವರು ಹಾಡಿದ್ದಾರೆ

2 ‘ಕಡಲಾಚೆಯ ಕನ್ನಡಿಗರ ಸ್ವಗತ” – ಶ್ರೀರಂಜನೀ ಸಿಂಹ ಅವರು ಹಾಡಿದ್ದಾರೆ