ಎರಡು ಕವನಗಳು – ಮಳೆ,ಮಳೆ (ಸ್ಮಿತಾ ಕದಡಿ) ಮತ್ತು ಒಲವಿನ ಮಾತು (ವಿಜಯನರಸಿಂಹ)

ಈ ಬಾರಿಯ ಅನಿವಾಸಿಯಲ್ಲಿ ಎರಡು ಭಿನ್ನವಾದ ಕವನಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ – ಶ್ರೀಮತಿ ಸ್ಮಿತಾ ಕದಡಿಯವರ “ಮಳೆ, ಮಳೆ” ಮತ್ತು ಶ್ರೀ ವಿಜಯನರಸಿಂಹ ಅವರ “ಒಲವಿನ ಮಾತು”. ವಿಜಯನರಸಿಂಹ ಅವರು ಪ್ರೇಮವನ್ನು ಸುಪ್ತವಾಗಿ ಕಾವ್ಯರೂಪದಲ್ಲಿ ವ್ಯಕ್ತಪಡಿಸುತ್ತಾ, ಒಲವಿನ ಮಾತುಗಳನ್ನು ಹಾಡಾಗಿ ಬರೆದಿದ್ದಾರೆ. ಸ್ಮಿತಾರವರ ಕವನ ಮಳೆಯನ್ನು ತನ್ನ ಅನುಕೂಲಕ್ಕೆ ಒಪ್ಪವಾಗುವಂತೆ ಬಯಸುವ ಮುಗ್ಧ ಮನಸ್ಸಿನ ಬೇಡಿಕೆಯನ್ನು ಸುಂದರವಾಗಿ ಚಿತ್ರಿಸಿದೆ.
ಎಂದಿನಂತೆ ಓದಿ, ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವಿರೆಂಬ ನಂಬಿಕೆಯೊಂದಿಗೆ – ಸಂ.

ಶ್ರೀಮತಿ ಸ್ಮಿತಾ ಕದಡಿ ಅವರು ವೃತ್ತಿಯಲ್ಲಿ ಚಾರ್ಟೆಡ್ ಆಕೌಂಟೆಂಟ್. ರೆಡಿಂಗ್ ಬಳಿ ಕಳೆದ 16 ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲಸಿದ್ದಾರೆ. “ರೆಡಿಂಗ್ ಕನ್ನಡ ಮಿತ್ರರು“ ಎನ್ನುವ ಸಂಸ್ಥೆಯ ಸ್ಥಾಪಕರಲ್ಲಿ ಇವರೂ ಒಬ್ಬರು. ಮತ್ತು ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಅರ್ಲಿ ಎನ್ನುವ ಊರಲ್ಲಿ ’ಕಥಾಚಾವಡಿ‘ ಎನ್ನುವ ಕಲಿಕೆಯ ಕಾರ್ಯಕ್ರಮವನ್ನೂ ನೆಡೆಸಿಕೊಂಡು ಬಂದಿದ್ದಾರೆ. ಅದರಲ್ಲಿ ಕಥೆ ಮತ್ತು ಆಟಗಳಿಂದ ಮಕ್ಕಳಿಗೆ ಬೆಳವಣಿಗೆಗೆ ಸಹಾಯವಾಗುತ್ತದೆ ಎನ್ನುವದನ್ನು ಕಳೆದ ಎರಡೂವರೆ ವರ್ಷಗಳ ಅನುಭವದಲ್ಲಿ ಕಂಡುಕೊಂಡಿದ್ದಾಗಿ ಹೇಳುತ್ತಾರೆ. ಲಂಡನ್ ಮತ್ತು ಇಂಗ್ಲೆಂಡಿನ ಆಗ್ನೇಯ ಪ್ರದೇಶದಲ್ಲಿ ಕೆಲವು ಕನ್ನಡ ಕಾರ್ಯಕ್ರಮಗಳಿಗೆ ನಿರೂಪಣೆಯನ್ನೂ ಮಾಡಿದ್ದಾರೆ. ’ಮಳೆ, ಮಳೆ’ ಕವನ ಅನಿವಾಸಿಯಲ್ಲಿ ಇವರ ಮೊದಲ ಪ್ರಕಟಣೆ.(ಸಂ)

ಮಳೆ, ಮಳೆ

This image has an empty alt attribute; its file name is rain.-cour.jpg
ಚಿತ್ರ ಕೃಪೆ: ಅಂತರ್ಜಾಲ

ಮಳೆ, ಮಳೆ, ಮಳೆ
ಬೇಗ ಹೋಗೆ ಮಳೆ
ಹೊರಗೆ ಹೋಗಿ ಆಡಬೇಕು
ಈಗಿಂದೀಗಲೇ

ಹುಲ್ಲು ಹಸಿರೇ ಇದೆ
ಗಿಡವು ನಗುತಲಿದೆ
ನದಿಯು ತುಂಬಿ ಹರಿಯುತಿದೆ
ಸಂತಸದಿಂದಲೇ

ಮಲಗೊ ಮುನ್ನ ಕರೆವೆ
ಬೇಗ ಬಾರೇ ಮಳೆ
ಬೆಳಗಾಗೂ ತನಕ ಸುರಿದು
ಹೋಗು ಎಂದು, ನನ್ನ ಪುಟ್ಟ ಮೊರೆ

ಹಗಲಲ್ಲೂ, ಕೆಲವೊಮ್ಮೆ ಬಾರೇ
ಕಾಮನಬಿಲ್ಲು ತಾರೆ
ನಕ್ಕು ನಲಿದು ನಮ್ಮ ಕೂಡೆ
ಮರಳಿ ಹೋಗೆಲೆ

ಮಳೆ, ಮಳೆ, ಮಳೆ
ಬೇಗ ಹೋಗೆ ಮಳೆ
ಹೊರಗೆ ಹೋಗಿ ಆಡಬೇಕು
ಈಗಿಂದೀಗಲೇ

-ಶ್ರೀಮತಿ ಸ್ಮಿತಾ ಕದಡಿ

(ಈ ಕವಿತೆಯನ್ನು ರೆಡಿಂಗಿನ ಸುಮನಾ ಧ್ರುವ ಅವರ ಮಧುರ ಕಂಠದಲ್ಲಿ, ಅವರದೇ ಸಂಗೀತ ಸಂಯೋಜನೆಯಲ್ಲಿ ಕೇಳಲು ಈ ಪುಟದ ಕೆಳಗಿನ ಕೊಂಡಿಯನ್ನು ಒತ್ತಿ. )

ಒಲವಿನ ಮಾತು

ಚಿತ್ರಕಲೆ: ಲಕ್ಷ್ಮೀನಾರಾಯಣ ಗುಡೂರ್

ನನ್ನ ಬರಿ ಬೆನ್ನಿನ ಮೇಲಾಡುತಿರುವ ನಿನ್ನ ಕೈ ಬೆರಳುಗಳು
ನಿನ್ನ ಬರಿ ಬೆನ್ನಿನ ಮೇಲಾಡುತಿರುವ ನನ್ನ ಕೈ ಬೆರಳುಗಳು

ತಮ್ ತಾವೇ ಆಡುತಿವೆ ಗಮನಿಸು ನೂರು ಮಾತು
ತುಟಿ ತೆರೆಯದೇ ಇದ್ದ ಮಾತು, ಕಣ್ಗಳಾಡಬೇಕೆಂದಿದ್ದ ಮಾತು

ಮಾತಿಗೊಂದು ಮಾತು, ಪ್ರತಿ ಮಾತು, ಪ್ರತೀ ಮಾತು
ಮತಿಗಳೊಳಗಿನ ಮಾತು, ಮಥಿಸಿ ಮಥಿಸಿ ಆಡದುಳಿದ ಮಾತು

ಹೃನ್ಮನಗಳನೊಲೊಸಿ, ಬೆರೆಸಿ, ರತಿಸಿ, ರಚಿಸಲಾಗದ ಮಾತು
ನನ್ನ, ನಿನ್ನ, ಎಲ್ಲ ಅವ್ಯಕ್ತ, ವ್ಯಕ್ತ, ವ್ಯತಿರಿಕ್ತದ ಮಾತು

ನಾಚಿಕೊಳುವಂತೆ ಆಡಿ ಮನಗಾಣಿಸುತಿವೆ ಆ ಬೆರಗು ಮಾತು
ಮನಸಿನ ಮೂಲೆಯಲಿ ಸುಪ್ತದಲಡಗಿದ್ದ ಒಲವಿನ ಮಾತು

ವಿಜಯನರಸಿಂಹ

ಮಲ್ಲಿಗೆಯ ಮಾತುಗಳು…..- ವಿಜಯ ನರಸಿಂಹ

♥ ಅನಿವಾಸಿಗೆ ಐದು ವರ್ಷದ ಹರ್ಷ ♥

(ಅನಿವಾಸಿಗೆ ಕೆಲವು ಮಧುರವಾದ ಕವನಗಳನ್ನು ಬರೆದು ಅನಿವಾಸಿಯ ಅನಧಿಕೃತ ಕೆ.ಎಸ್.ಎನ್ ಎಂತಲೇ ಹೆಸರು ಪಡೆದವರು ವಿಜಯ ನರಸಿಂಹ. ಇತ್ತೀಚೆಗೆ ತಾನೇ ಬೆಂಗಳೂರಿನಲ್ಲಿ ಚಂದದ ಹೊಸ ಮನೆಯನ್ನು ಕಟ್ಟಿಸಿ ವಿನೂತನ ಎಂದು ನಾಮಕರಣ ಮಾಡಿದ್ದಾರೆ. ಇಲ್ಲಿ  ಹಳೇ ಮನೆಗಳ ಮಾರಾಟ- ಕೊಳ್ಳುವಿಕೆ ಮತ್ತು ಕಟ್ಟಿಸಿದ ಮನೆಗಳೇ ಜಾಸ್ತಿಯಾದ್ದರಿಂದ  ನಮ್ಮಿಷ್ಟದಂತೆ  ಮನೆ ಕಟ್ಟಿಸಿ ನೋಡುವ ಭಾಗ್ಯವನ್ನು ಪಡೆಯಲು  ಬಹಳಷ್ಟು ಜನ ಭಾರತಕ್ಕೇ ಹೋಗಬೇಕೇನೋ. ಆದರೆ ಕವನಗಳನ್ನು ಕಟ್ಟಲು ಯಾವ ನೆಲವಾದರೇನು?   ಮಲ್ಲಿಗೆಗಳಂತೆ ಅರಳಿ ಘಮ ಘಮಿಸಲು ಯಾರ ಹಂಗೇನು? ಅನಿವಾಸಿಯ ಕವಿಗಳ ನಿಲುವೇ ಅದು.

ಇದೀಗ ತಾನೇ “ಮನೆ ಕಟ್ಟಿಸಿ ನೋಡಿ…”  ಮರಳಿ ಬಂದಿರುವ ಕವಿ ಮನ ಮಾತ್ರ ಆ ಇಟ್ಟಿಗೆ, ಸಿಮೆಂಟುಗಳ ನಡುವೆಯೂ ನವಿರಾದ ಪದಗಳ ಮೋಡಿಯಲ್ಲೇ ಸುತ್ತುತ್ತಿತ್ತೇನೋ? ಅಲ್ಲಿಂದಲೇ ಅನಿವಾಸಿಗೆ ಕಳಿಸಿದ  ಅವರ ಈ ಕವನಗಳಲ್ಲಿ  ಮಲ್ಲಿಗೆಯ ನವಿರು ಮತ್ತು ಘಮಲಿದೆ. ಸೂಕ್ಷ್ಮವಾದ್ದೊಂದು  ಆಶಯ ಮತ್ತು ಅರಳಿ ಬಾಡುವ ನಿರಾಶೆಯೂ ಇದೆ. ಹಾಸ್ಯವೂ ಸೇರಿದೆ. ಅನಿವಾಸಿಗಾಗಿಯೇ ಕಟ್ಟಿಕೊಟ್ಟ  ಅಳತೆಯ ಮಿತಿಯಿರದ ಎರಡು ಮೊಳ ಮಲ್ಲಿಗೆಯಂತ ಕವನಗಳು ಈ ವಾರದ ಅನಿವಾಸಿ ಓದುಗರಿಗಾಗಿ-ಸಂ )

ಪರಿಚಯ

ವಿಜಯ ನರಸಿಂಹ ಅವರು ಮೂಲತಃ ತುಮಕೂರಿನವರು.B.E Mechanical Engineering ನಲ್ಲಿ ಪದವಿ ಪಡೆದಿರುವ ಇವರು QUEST ಸಂಸ್ಥೆಯಲ್ಲಿ Technical Manager ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಗಳಲ್ಲಿ ಸಾಹಿತ್ಯ ರಚನೆಯೂ ಒಂದು. ಸಾಹಿತ್ಯದಲ್ಲಿ  ಕಾವ್ಯ ಪ್ರಾಕಾರ ತುಂಬಾ ಇಷ್ಟ  ಎನ್ನುವ ಇವರು ಹಲವು ಕವನಗಳನ್ನು ಬರೆದ್ದಿದ್ದಾರೆ.

ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಸಂಘದ ಅನಿವಾಸಿ ವಿಭಾಗದಲ್ಲಿ ಎರಡು ಬಾರಿ  ಇವರ ಆಯ್ದ ಕವನಗಳಿಗೆ ಮನ್ನಣೆ ದೊರೆತಿದೆ.  ರಾಷ್ತ್ರಕವಿ ಕುವೆಂಪು ಮತ್ತು ಮೈಸೂರು ಅನಂತ ಸ್ವಾಮಿ ಪ್ರಶಸ್ತಿಗಳು ದೊರೆತಿವೆ. ಕಾವ್ಯದ ಒರೆಯ ಸೆಲೆತ ಜೋರಾಗಿದ್ದರೆ ಅದನ್ನು ತಡೆಯಲು ಸಮಯಾಭಾವದ ಸೋಗು ಸಾಲದು ಎನ್ನುವ ಇವರು ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಡಾರ್ಬಿಯಲ್ಲಿ ಸನ್ಮಿತ್ರರೊಡನೆ ಸೇರಿ 2014 ರಲ್ಲಿ ಶುರುಮಾಡಿದ ಜೈ ಕರ್ನಾಟಕ ಬಳಗದ ಸ್ಥಾಪನೆಯಲ್ಲಿ ಇವರ ಪಾತ್ರವಿದೆ. ಯು.ಕೆ.ಯ ಮ್ಯಾಂಚೆಸ್ಟರಿನ ಬಳಿ ಇವರ  ಪ್ರಸ್ತುತ ನಿವಾಸ .◊

ನಗೆ ಮಲ್ಲಿಗೆ

                                                                   ಸುಮಾರು ದಿನಗಳಾಗಿದ್ದವು

ಹೂ ಮಾರುವವಳ ಕಂಡು

ನಾನೂ ಹೋಗಿರಲಿಲ್ಲ

ಅವಳೂ ಈ ಕಡೆ ಸುಳಿದಿರಲಿಲ್ಲ

ಮಾರುಕಟ್ಟೆಯಲ್ಲಿ ಮಲ್ಲಿಗೆ ಸರಬರಾಜು ಕಡಿಮೆ ಎಂಬ ಸುದ್ದಿ

ಏನಾಯಿತೋ ಕಾಣೆ,

 ಅತಿಯಾದ ಮಳೆಯೊ?

ಇಳುವರಿ ಕಡಿಮೆಯೊ?

ಮಧ್ಯವರ್ತಿಗಳ ಕುತಂತ್ರವೊ?

ಸಾಲು ಸಾಲು ಹಬ್ಬಗಳು

ಬೆಲೆ ಏರೋದು ಸಹಜ

ಆದರೆ ಅವಳು ಗಟ್ಟಿಗಿತ್ತಿ

ತನ್ನ ಮನೆಗೆ ಊರುಗೋಲು

ಆ ಕಸುಬು ಬಿಟ್ಟರೆ ಬೇರೆ ಯಾವುದೂ ಗೊತ್ತಿಲ್ಲ

ಯಾವಾಗಲೂ ಮಲ್ಲಿಗೆಯನ್ನೇ ಕೊಂಡರೆ

ಅದು ಎಷ್ಟು ಸಮಂಜಸ ?

ದೇವರ ಪೂಜೆಯ ಹೆಸರಿನಲ್ಲಿ

ಅವಳಿಗೊಂದು ವ್ಯಾಪಾರ

ಕೊಟ್ಟರೆ ಅವಳಿಗೂ ಒಂದು ಖುಷಿಯಲ್ಲವೇ,

ಬೆಲೆಯ ಮಾತು ಇದ್ದದ್ದೇ ಸ್ವಲ್ಪ ಹೆಚ್ಚಾದರಾಗಲಿ ಎಂದು

ಮಾರುಕಟ್ಟೆಯಲ್ಲಿ ಅವಳ ಕಂಡೆ

‘ಸೇವಂತಿ ಎರಡು ಮೊಳ

ಬಟ್ಟಾನ್ಸು ಎರಡು ಮೊಳ

ಬಿಡಿ ಪತ್ರೆ ತಾರವ್ವ, ಬೆಲೆ ಎಷ್ಟು ಹೇಳು’ ಎಂದೆ

ಅದಕ್ಕವಳು ‘ಮನೆಯಲ್ಲಿ

ಜಗಳವೊ ಸ್ವಾಮಿ? ಇತ್ತೀಚೆಗೆ

ಇಲ್ಲಿ ಸುಳಿವಿಲ್ಲ, ಇಂದು ಮಲ್ಲಿಗೆಯ ಕೊಳ್ಳಲಿಲ್ಲ’ ಎಂದಳು

‘ಅಯ್ಯೊ ಹಾಗೇನೂ ಇಲ್ಲವ್ವ

ಸರಬರಾಜು ಕಡಿಮೆ ಮಲ್ಲಿಗೆ ಸಿಗುವುದು ಕಷ್ಟವೆಂದು

ಜನರ ಮಾತು ಹಾಗಾಗಿ ಬರಲಿಲ್ಲ’ ಎಂದೆ

‘ಅದು ಸರಿ ಸ್ವಾಮಿ ಹಾಗಂತ

ನಾನೇನು ಸುಮ್ಮನಿರೋ ಆಕಿ ಅಲ್ಲ ನಮ್ಮ ಮನೇಲ್ಲೆ ಎರಡು ಬಳ್ಳಿ

ಅಂದಿನಿಂದಲೂ ಬೆಳದೀನಿ ಅದರ ಹೂ ನಿಮಗಂತಲೇ ಇಟ್ಟೀನಿ’

ಅಂದಳು

‘ಓ ಹಾಗಾದರೆ ಎರಡು ಮೊಳ ಕಟ್ಟಿಬಿಡು ‘ ಎಂದಾಗ ಅವಳ ಬದುಕು

ಕಟ್ಟುವಂತೆ ಕಟ್ಟಿದ್ದ ಮಲ್ಲಿಗೆಯ ದಿಂಡು ನನ್ನ ಕೈಸೇರಿತ್ತು

ನನ್ನ ಹೆಂಡತಿ ರಜೆಯೆಂದು ಗೊತ್ತಿದ್ದರೂ ಮಲ್ಲಿಗೆ ಕೊಂಡದ್ದು

ಗಟ್ಟಿಗಿತ್ತಿಯ ಬಾಳ ಮಲ್ಲಿಗೆ  ನಗಲೆಂದು…

                                                                                                                  ✍ವಿಜಯನರಸಿಂಹ

 

 ಮಲ್ಲಿಗೆಯ ಮಾತುಗಳು..

 

                        ವಿಜಯ ನರಸಿಂಹ ದಂಪತಿಗಳು

 

‘ಸ್ನಾನವಾಯಿತು ತಿಂಡಿ ಆಯಿತಾ?’ ಎಂದು ನಾನು 

‘ಕುಕ್ಕರ್ ಕೂಗಿದೆ, ನೀವೂ ಮತ್ತು ಅದು ಎರಡೂ ತಣ್ಣಗಾಗಬೇಕು’ ಎಂದು ಅವಳು 

‘ಪಾಪೂ, ಸ್ಕೂಲ್ ಡೈರಿ ಇಟ್ಟುಕೊಂಡೆಯಾ?’ ಎಂದು ಮಗಳಿಗೆ ಅವಳು 

‘ಹೂಂ’ ಎಂದುದು ಪುಟ್ಟ ಬಾಯಿ 

‘ಮಗೂ ಟಾಟಾ’, 

‘ನಾನು ಬರ್ತೀನಿ ಕಣೇ ಆಫೀಸಿಗೆ ಟೈಮ್ ಆಯ್ತು

ಏನಾದರೂ ತರುವುದಿದ್ದರೆ 

ಫೋನಾಯಿಸು’ ಎಂದು ನಾನು 

ಸಂಜೆ ವೇಳೆಗೆ ಚಲನವಾಣಿ

‘ಬರ್ತಾ ಮಕ್ಕಳಿಗೆ ಹಣ್ಣು ತನ್ನಿ,

ಸಕ್ಕರೆ ಖಾಲಿಯಾಗಿದೆ ಅದನ್ನೂ ತನ್ನಿ’ ಎಂದುದು ಆಜ್ಞಾವಾಣಿ 

‘ಪುಟಾಣಿಗಳ ಊಟ ಆಯ್ತಾ?’

ಎನ್ನುವುದು ನನ್ನ ರೂಢಿವಾಣಿ

‘ಆಗಲೇ ಹೋಂವರ್ಕ್ ಕೂಡ ಆಯ್ತು’ ಎಂದುದು  ದೊಡ್ಡ ಮಗಳ  ಜವಾಬ್ದಾರಿ ವಾಣಿ

‘ಊಟ  ಆಯ್ತಲ್ಲ ಮಕ್ಕಳನ್ನು  ವಾಕಿಂಗ್  ಕರೆದುಕೊಂಡು ಹೋಗಿ’ ಎಂದುದು ಧಾರಾವಾಹಿಯತ್ತ ನೆಟ್ಟ ಕಣ್ಣುಗಳ, ಬುರುಡೆಗೆ ಹುಳ ಬಿಟ್ಕೊಂಡ ಖಾಲಿ ವಾಣಿ

ಸಣ್ಣ ವಾಕಿಂಗ್ ಮುಗಿಸಿ ಬಂದ ಮೇಲೆ

‘ಪಪ್ಪಾ ಇವತ್ತು two ಕತೆ ಹೇಳು’  ಎಂದು ದೊಡ್ಡವಳು,

‘ಹೂಂ ಹೂಂ’ ಎಂದು ಚಿಕ್ಕವಳು 

ಕತೆಗಳೆಲ್ಲಾ ಮುಗಿದಮೇಲೆ 

‘ಮಕ್ಕಳು ಮಲಗಿದ್ವು ಕಣೇ’ ಎಂದು ನನ್ನ  ಮೆಲು-ವಾಣಿ 

‘ಇನ್ನು ಮೂರ್-ನಾಲ್ಕು ದಿನ ರಜಾ’ ಎಂದುದು

ನನ್ನ ಕಿವಿ ಮೇಲೆ ಬಿದ್ದ ಘೋರವಾಣಿ…….

                                            ✍ವಿಜಯನರಸಿಂಹ

(ಮುಂದಿನ ವಾರ- ಸ್ಥಿತ್ಯಂತರ )